ತಮ್ಮ ಸಹಜ ನಟನೆಯ ಮೂಲಕ ಮನೆ ಮಾತಾಗಿರುವ ಶರಣ್ ನಾಯಕರಾಗಿ ನಟಿಸಿರುವ ” ಛೂ ಮಂತರ್” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಕುತೂಹಲ ಮೂಡಿಸಿರುವ ಈ ಚಿತ್ರದ ಮೋಷನ್ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.
![](https://cinilahari.in/wp-content/uploads/2023/01/IMG_20230103_203907-1024x597.jpg)
ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಸಿನಿಮಾ. ನಾನು ಹಾಗೂ ಮಾನಸ ತರುಣ್ ಈ ಚಿತ್ರದ ನಿರ್ಮಾಪಕರು. ನಿರ್ದೇಶಕ ನವನೀತ್ ಹಾಗೂ ನಾನು, ಉಪೇಂದ್ರ ಅವರ ಸಿನಿಮಾ ಮಾಡಬೇಕಿತ್ತು. ಕಾರಣಾಂತರದಿಂದ ಆ ಚಿತ್ರ ಸ್ವಲ್ಪ ಮುಂದೆ ಹೋಯಿತು. ಅಷ್ಟರಲ್ಲಿ ನವನೀತ್ ಹಾರರ್ ಜಾನರ್ ನ ಈ ಚಿತ್ರದ ಕಥೆ ಸಿದ್ದಮಾಡಿಕೊಂಡಿದ್ದರು. ಶರಣ್ ಹಾಗೂ ತರುಣ್ ಸುಧೀರ್ ಅವರ ಬಳಿ ಕಥೆ ಹೇಳಿದ್ದರು. ಇಬ್ಬರಿಗೂ ಕಥೆ ಹಿಡಿಸಿತು. ಚಿತ್ರ ಆರಂಭವಾಯಿತು. ಬೆಂಗಳೂರು, ಮೈಸೂರು, ಉತ್ತರಕಾಂಡದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಶರಣ್ ಅವರೊಟ್ಟಿಗೆ ಚಿಕ್ಕಣ್ಣ, ಅದಿತಿ, ಪ್ರಭುದೇವ, ಪ್ರಭು ಮುಂಡ್ಕರ್, ಮೇಘನಾ ಗಾಂವ್ಕರ್, ಧರ್ಮ, ರಜನಿ ಭಾರದ್ವಾಜ್ ಮುಂತಾದವರು ಅಭಿನಯಿಸಿದ್ದಾರೆ. ಅವಿನಾಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ ಎಂದು ನಿರ್ಮಾಪಕ ತರುಣ್ ಶಿವಪ್ಪ ತಿಳಿಸಿದರು.
![](https://cinilahari.in/wp-content/uploads/2023/01/IMG_20230103_203829-747x1024.jpg)
ಶರಣ್ ಸರ್ ಜೊತೆ ಕೆಲಸ ಮಾಡಿದ್ದು ಖುಷಿಯಿದೆ. “ಛೂ ಮಂತರ್” ಎಂದರೆ ಫ್ಯಾನ್ಸಿ ವರ್ಡ್. ಈ ಪದ ತುಂಬಾ ಕಡೆ ಬಳಸುತ್ತಾರೆ. ಚಿತ್ರದಲ್ಲಿ ಮೂರು ಕಥೆಗಳಿರುತ್ತದೆ. ಎಲ್ಲಾ ಕಥೆಗಳಿಗೂ ಮೂಲ ನಾಯಕ ಆಗಿರುತ್ತಾರೆ. ನನ್ನ ಕಥೆ ಕೇಳಿ ಶರಣ್ ಹಾಗೂ ತರುಣ್ ಸುಧೀರ್ ಇಷ್ಟಪಟ್ಟರು. ಕಂಪ್ಲೀಟ್ ಹಾರರ್ ಸಿನಿಮಾದಲ್ಲಿ ಶರಣ್ ಅವರು ಅಭಿನಯಿಸಿರಲಿಲ್ಲ. ಇದೇ ಮೊದಲು ಎನ್ನಬಹುದು. ನಮ್ಮ ಚಿತ್ರದಲ್ಲಿ ಹಾರಾರ್ ಜೊತೆ ಕಾಮಿಡಿ ಹಾಗೂ ಥ್ರಿಲ್ಲರ್ ಕೂಡ ಇದೆ ಎಂದರು “ಕರ್ವ” ಖ್ಯಾತಿಯ ನಿರ್ದೇಶಕ ನವನೀತ್.
![](https://cinilahari.in/wp-content/uploads/2023/01/IMG_20230103_203841-1024x502.jpg)
ನಾನು ಚಿಕ್ಕವಯಸ್ಸಿನಿಂದಲೂ ಹಾರಾರ್ ಚಿತ್ರಗಳ ಅಭಿಮಾನಿ. ಸಾಕಷ್ಟು ಹಾರಾರ್ ಚಿತ್ರ ನೋಡಿದ್ದೇನೆ. ಈ ಚಿತ್ರದ ಕಥೆಯನ್ನು ನವನೀತ್ ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿರುವುದು ಸಂತೋಷವಾಗಿದೆ. ನನ್ನ ಮಿತ್ರ ತರುಣ್ ಸುಧೀರ್ ಈ ಚಿತ್ರದ ಕಥೆ ಕೇಳಿ ಮೆಚ್ಚುಗೆ ಸೂಚಿಸಿದ್ದಾರೆ. ನನ್ನ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಎಂದರೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ಈ ಚಿತ್ರದಲ್ಲೂ ನಮ್ಮ ಜೋಡಿ ಮೋಡಿ ಮಾಡಲಿದೆ. ಈ ಚಿತ್ರದ ಮತ್ತೊಂದು ಹೈಲೆಟ್ ಎಂದರೆ ಅನೂಪ್ ಅವರ ಛಾಯಾಗ್ರಹಣ ಎನ್ನುತ್ತಾರೆ ಶರಣ್.
![](https://cinilahari.in/wp-content/uploads/2023/01/IMG_20230103_203853-1024x469.jpg)
ತರುಣ್ ಶಿವಪ್ಪ ನಿರ್ಮಾಣದ ಹಿಂದಿನ ಚಿತ್ರದಲ್ಲೇ ಅಭಿನಯಿಸಬೇಕಿತ್ತು ಆಗಿರಲಿಲ್ಲ. ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ಪಾತ್ರ ಚೆನ್ನಾಗಿದೆ ಎಂದರು ಮೇಘನಾ ಗಾಂವ್ಕರ್.
ನನಗೂ ಹಾರಾರ್ ಚಿತ್ರಗಳೆಂದರೆ ಪ್ರಾಣ. ನವನೀತ್ ಅವರ “ಕರ್ವ” ಚಿತ್ರವನ್ನು ಸಾಕಷ್ಟು ಸಲ ನೋಡಿದ್ದೇನೆ. ಶರಣ್ ಸರ್ ಜೊತೆ ನಟಿಸಿರುವ ಸಂತಸವಿದೆ. ಒಳ್ಳೆಯ ಪಾತ್ರ ನೀಡಿರುವ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ಅದಿತಿ ಪ್ರಭುದೇವ.
![](https://cinilahari.in/wp-content/uploads/2023/01/IMG_20230103_203757-780x1024.jpg)
ಫಾರಿನ್ ರಿಟರ್ನ್ ಪಾತ್ರದಲ್ಲಿ ಅಭಿನಯಿಸಿರುವುದಾಗಿ ಪ್ರಭು ಮುಂಡ್ಕರ್, ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಧರ್ಮ ಹೇಳಿದರು. ರಜನಿ ಭಾರದ್ವಾಜ್ ಸಹ “ಛೂ ಮಂತರ್” ಬಗ್ಗೆ ಮಾತನಾಡಿದರು.