ಅವಕಾಶಗಳಿಗೆ ಹುಡುಕಿಕೊಂಡು ಹೋಗುವ ಸಂದರ್ಭ ಬಂದಿಲ್ವಂತೆ ಈ ನಟಿಗೆ…..!
ಗಾನವಿ ಲಕ್ಷ್ಮಣ್, ಕನ್ನಡದ ಕಿರುತೆರೆ ಲೋಕದಲ್ಲಿ ಮನೆಮಾತಾದ ಹೆಸರು. ಟಿ.ಎನ್. ಸೀತಾರಾಂ ನಿರ್ದೇಶನದ “ಮಗಳು ಜಾನಕಿʼ ಧಾರಾವಾಹಿ ನೋಡಿದವರಿಗೆಲ್ಲ ಅಚ್ಚು ಮೆಚ್ಚಿನ ನಟಿ ಇವರು. ನಟಿ ಎನ್ನುವುದಕ್ಕಿಂತ ಮಗಳು ಜಾನಕಿ. ಅದೇ ಜನಪ್ರಿಯತೆಯ ಮೂಲಕ ಅವರೀಗ ಸಿನಿಮಾ ಜಗತ್ತಿಗೂ ಕಾಲಿಟ್ಟಿದ್ದಾರೆ. ರಿಷಬ್ ಶೆಟ್ಟಿ ನಿರ್ಮಾಣ ಹಾಗೂ ಅಭಿನಯದ ʼಹೀರೋʼ ಚಿತ್ರದ ನಾಯಕಿ ಇವರೇ. ಈ ಚಿತ್ರವೀಗ ಚಿತ್ರೀಕರಣ ಮುಗಿಸಿ, ರಿಲೀಸ್ ಗೆ ರೆಡಿ ಆಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಸದ್ದು ಮಾಡಲು ಶುರು ಮಾಡಿದೆ. ಅದರ ಮೊದಲ ಹಂತದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಟ್ರೈಲರ್ ಹೊರ ಬಂದಿದೆ. ಟ್ರೈಲರ್ ಲಾಂಚ್ ಗೂ ಮುನ್ನ ದಿನ ಚಿತ್ರ ತಂಡ ಮಾಧ್ಯಮ ಮುಂದೆ ಹಾಜಾರಾಗಿತ್ತು. ಅಲ್ಲಿ ಚಿತ್ರದ ನಾಯಕಿ, “ಮಗಳು ಜಾನಕಿʼ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್, ಬಣ್ಣದ ಜಗತ್ತಿನ ಬಗೆಗಿನ ತಮ್ಮ ಕಲ್ಪನೆ, ಆನಂತರ ಅಲ್ಲಿಗೆ ಬಂದ ನಂತರದ ಜರ್ನಿ, ಹೀರೋ ಜತೆಗಿನ ಒಡನಾಟ, ಮುಂದಿನ ಪಯಣವೂ ಸೇರಿ ಒಂದಷ್ಟು ಸ್ವಾರಸ್ಯಕರ ಸಂಗತಿ ಹೇಳಿಕೊಂಡರು. ಅವೆಲ್ಲ ಇಲ್ಲಿವೆ. ಒವರ್ ಟು ಗಾನವಿ ಲಕ್ಷ್ಮಣ್…
ದೇವರೇ ಸೃಷ್ಟಿಸಿದ ಹೀರೋ..
” ಕಲಾವಿದರು ಕಲೆಯನ್ನು ಒಂದೊಂದು ದೃಷ್ಟಿಯಲ್ಲಿ ನೋಡ್ತಾರೆ, ಅನುಭವಿಸುತ್ತಾರೆ. ನಾನು ಕೂಡ ಕಲೆಯನ್ನು ನನ್ನದೇ ದೃಷ್ಟಿಯಲ್ಲಿ ನೋಡಿದೆ, ಅನುಭವಿಸಿದೆ. ಅದೊಂದು ಅಧ್ಯಾತ್ಮದ ಬಗೆಯಲ್ಲಿ. ನಾನು ಯಾವಾಗ ಕಲಾ ಲೋಕಕ್ಕೆ ಶರಣಾದೆನೋ ಅವತ್ತಿನಿಂದ ದೇವರು ಒಂದೊಂದು ವೇದಿಕೆಯನ್ನು ನನಗಾಗಿಯೇ ಸೃಷ್ಟಿಸುತ್ತಾ ಬಂದ. ಪ್ರತಿಯೊಂದು ಹೆಜ್ಜೆಯಲ್ಲೂ ಪಾಠ ಕಲಿಯುತ್ತಾ ಬಂದೆ. ಕಲೆಯನ್ನು ಹೇಗೆ ಗೌರವಿಸಬೇಕು, ಇಲ್ಲಿ ಹೇಗಿರಬೇಕು, ಹೇಗಿರಬಾರದು ಅಂತೆಲ್ಲ ಅದು ನನಗೆ ಕಲಿಸಿಕೊಟ್ಟಿದೆ. ಅದೇ ಜರ್ನಿಯಲ್ಲಿ ಮುಂದೇನು ಅಂತ ಯೋಚಿಸುತ್ತಿದ್ದಾ ದೇವರು, ನಂಗೊಂದು ಅದ್ಭುತವಾದ ವೇದಿಕೆ ಸೃಷ್ಟಿ ಮಾಡಿಟ್ಟಿದ್ದ. ಅದೇ “ಹೀರೋʼ ಚಿತ್ರ”
ನನ್ನನ್ನು ನಾನು ಕಂಡುಕೊಂಡೆ…
ಹೀರೋ ಅನ್ನೋದು ಅದ್ಭುತ ಲೋಕ. ನಾನಲ್ಲಿಗೆ ಪ್ರವೇಶಿಸುವ ಹೊತ್ತಿಗೆ ದೇವರು ಅಲ್ಲಿ ೨೩ ಚಂದದ ಸೋಲೋಗಳನ್ನಿಟ್ಟಿದ್ದ. ಅವೆಲ್ಲವೂ ನನ್ನನ್ನು ಅರ್ಥ ಮಾಡಿಕೊಳ್ಳಬಲ್ಲ ಪರಿಶುದ್ದ ಮನಸುಗಳು. ನನ್ನದೇ ಮನೆ ಎನ್ನುವ ವಾತಾವರಣ. ಅದೆಲ್ಲ ನೋಡಿದಾಗ ಮನಸ್ಸು ತುಂಬಿ ಬಂತು. ಇಷ್ಟು ದಿನ ನನ್ನದೇ ಕೆಲಸ. ಇನ್ನವುದೋ ಒತ್ತಡ ಅಂತೆಲ್ಲ ಕಳೆದು ಹೋಗಿದ್ದವಳು, ಒಂದು ಕ್ಷಣ ನನ್ನನ್ನು ನಾನು ಕಂಡುಕೊಳ್ಳುವಂತೆ ಆ ದೇವರೇ ಮಾಡಿದ.ಮಗುವನ್ನು ಕಳೆದುಕೊಂಡ ಒಬ್ಬ ತಾಯಿ, ಮತ್ತೆ ವಾಪಾಸ್ ಮಗು ಸಿಕ್ಕಾಗ ಆಗುವ ಸಂತೋಷ ಇರುತ್ತಾಲ್ವಾ ಅಂತ ಸಂತೋಷ ಕಂಡ ಕ್ಷಣ ಅದು.
ಕಲ್ಪನೆ ಅಲ್ಲ, ಅದು ವಾಸ್ತವ…
ಚಿಕ್ಕ ವಯಸ್ಸಿನಲ್ಲಿ ನಂಗೊಂದು ಅಚ್ಚರಿ ಇತ್ತು. ಟಿವಿ ನೋಡುವಾಗ ಈ ಕಲಾವಿದರೆಲ್ಲ ಹೇಗೆ ತಮ್ಮೆದುರಿನ ವೀಕ್ಷಕರ ಮನಸ್ಸು ತಟ್ಟುವಂತೆ ನಟಿಸುತ್ತಾರೆ? ಅಷ್ಟೊಂದು ಶ್ರದ್ಧೆ ಅವರಿಗೆ ಹೇಗೆ ಬರುತ್ತೆ? ಅವರನ್ನು ತೆರೆ ಮೇಲೆ ತೋರಿಸಲು ಪ್ರಯತ್ನಿಸುವ ತೆರೆಯ ಹಿಂದಿನ ಜನರ ಶ್ರಮ ಹೇಗಿರುತ್ತೆ ? ಅಂತೆಲ್ಲ ಯೋಚಿಸುತ್ತಿದ್ದೆ. ಆ ಬಗ್ಗೆ ನನ್ನದೇ ಒಂದು ಕಲ್ಪನೆ ಕಟ್ಟಿಕೊಂಡಿದ್ದೆ. ಜಸ್ಟ್ ಲೈಕ್, ನಾವೆಲ್ಲ ದೇವಾಲಯಕ್ಕೆ ಹೋಗುವಾಗ ಇರುವ ಶ್ರದ್ಧೆ, ಸೈಲೆನ್ಸ್ ಹೇಗಿರುತ್ತೋ ಹಾಗೆಯೇ ಒಂದು ಸಿನಿಮಾ ಅಥವಾ ಸೀರಿಯಲ್ ಚಿತ್ರೀಕರಣದ ಸೆಟ್ ನಲ್ಲೂ ಇರುತ್ತೆ ಅಂದುಕೊಂಡಿದ್ದೆ. ನಿಜಕ್ಕೂ ಅದು ವಾಸ್ತವವೇ ಎನಿಸಿದ್ದು ಹೀರೋ ಸೆಟ್ ಗೆ ಕಾಲಿಟ್ಟಾಗ. ದೇವರು ನಂಗಲ್ಲಿ ಅದನ್ನೇ ಸೃಷ್ಟಿಸಿದ್ದ, ನಾನು ಕಂಡಿದ್ದು ಕಲ್ಪನೆಯಲ್ಲ, ವಾಸ್ತವವೇ ಅಂತ ನನಗೆ ನಾನೇ ಅಚ್ಚರಿ ಪಟ್ಟೆ.
ಗಿವ್ ಆಂಡ್ ಟೇಕ್ ಇಂಪಾರ್ಟೆಂಟ್…
ಕಲಾವಿದರು ಎಷ್ಟೇ ಅನುಭವಿಗಳಾದರೂ ಒಂದು ಪಾತ್ರಕ್ಕೆ ಜೀವಂತಿಕೆ ಬರೋದು ನಿರ್ದೇಶಕರ ದೃಷ್ಟಿಯಿಂದ. ಹಾಗೆಯೇ ಛಾಯಾಗ್ರಾಹಕರ ಕಣ್ಣಿನಿಂದ. ಯಾಕಂದ್ರೆ ಕಲಾವಿದರಾಗಿ ನಾವು ಕ್ಯಾಮೆರಾ ಮುಂದೆ ನಿಂತಾಗ ನಮ್ಮೆದುರು ಕಾಣೋದು ಇಬ್ಬರೇ. ನಿರ್ದೆಶಕರು ಹಾಗೂ ಛಾಯಾಗ್ರಾಹಕರು . ಒಂದು ಕತೆಗೆ ಅಥವಾ ಪಾತ್ರಕ್ಕೆ ಏನೆಲ್ಲ ಬೇಕು ಅನ್ನೋದು ಅವರಿಗೆ ಗೊತ್ತಿರುತ್ತದೆ. ಅವರ ತುಡಿತ, ಏನರ್ಜಿ ನಮ್ಮೊಳಗೆ ಪಾಸ್ ಆದಾಗಲೇ , ಒಂದೊಳ್ಳೆಯ ಅಭಿನಯ ಬರಲು ಸಾಧ್ಯ. ಹಾಗಾಗಿ ನಿರ್ದೇಶಕರು , ಛಾಯಾಗ್ರಾಹಕರು ಮತ್ತು ಕಲಾವಿದರ ನಡುವೆ ಗಿವ್ ಆಂಡ್ ಟೇಕ್ ತುಂಬಾ ಇಂಪಾರ್ಟೆಂಟ್ . ಬೈ ಲಕ್ , ನಂಗೆ ಈ ತಂಡದಲ್ಲಿ ಅಂತಹ ಕೊಡುಕೊಳ್ಳುವಿಕೆ ಹೇರಳವಾಗಿ ಸಿಕ್ಕಿದೆ.
ಅಂತಹ ಸಂದರ್ಭ ನಂಗಿನ್ನು ಬಂದಿಲ್ಲ...
ಕಲಾಲೋಕಕ್ಕೆ ನನ್ನನ್ನು ನಾನು ಶರಣಾಗಿಸಿಕೊಂಡ ದಿನದಿಂದ ದೇವರೇ ಒಂದೊಂದು ವೇದಿಕೆ ಸೃಷ್ಟಿಸುತ್ತಾ ಬಂದ.’ ಮಗಳು ಜಾನಕಿ’ ನಂತರ ಮುಂದೇನು ಅಂದಾಗ ಹೀರೋ ದಂತಹ ಅದ್ಭುತ ವೇದಿಕೆ ಸಿಗುತ್ತೆ ಅಂತ ನಾನಂದುಕೊಂಡಿರಲಿಲ್ಲ. ಆದರೇ ಅದು ದೇವರ ಸೃಷ್ಟಿ. ಮುಂದೆ ಹೇಗೋ ನಂಗೆ ಗೊತ್ತಿಲ್ಲ. ಆದರೆ ಅವಕಾಶಗಳಿಗೆ ಹುಡುಕಿಕೊಂಡು ಹೋಗುವಂತಹ ಸಂದರ್ಭವನ್ನು ದೇವರು ನಂಗಿನ್ನುಕೊಟ್ಟಿಲ್ಲ. ಅವಕಾಶಗಳಿಗೆ ನಾನು ಕಾಯಬೇಕು ಎನ್ನುವುದಕ್ಕಿಂತ ಅಂತಹ ಅವಕಾಶ ದೇವರೇ ಸೃಷ್ಟಿಸುತ್ತಿದ್ದಾನೆ. ಹಾಗಾಗಿ ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
….. ಇದಿಷ್ಟು’ ಮಗಳು ಜಾನಕಿ’ ಮಾತು. ‘ಹೀರೋ’ ಮೂಲಕ ಇದೇ ಮೊದಲು ಮಾಧ್ಯಮದಮುಂದೆ ಬಂದಿದ್ದ ನಟಿ ಗಾನವಿ ಲಕ್ಣ್ಮಣ್ ಸುದೀರ್ಘವಾಗಿ ಹೀಗೆ ಮಾತನಾಡಿದರು.ಮೊದಲ ಮಾತು ಅಲ್ವಾ, ಸಿನಿಮಾ, ಪಾತ್ರ ಎನ್ನುವುದಕ್ಕಿಂತ ಅಧ್ಯಾತ್ಮದೊಳಗಿನ ಕಲಾ ಸರಸ್ವತಿಯ ಬಗ್ಗೆ ಹೇಳಿಕೊಂಡರು. ಇದೇ ಮಾತುಗಳು ಮುಂದಿನ ಸಲವೂ ಪುನಾರವರ್ತನೆಯಾದರೆ, ಕೇಳುಗರಿಗೂ ಬೋರ್ ಆದೀತು. ಆದರೆ ಟಿ.ಎನ್. ಸೀತಾರಾಂ ಗರಡಿಯಲ್ಲಿ ಪಳಗಿರುವ ಗಾನವಿ ಅವರಿಗೆ ಅದೆಲ್ಲ ಸೆನ್ಸ್ ಇದ್ದೇ ಇದೆ ಎನ್ನುವುದು ಕೂಡ ಅಷ್ಟೇ ಸತ್ಯ.
ಸಿನಿಮಾ ಅನ್ನೋದು ಒಂದು ತಪಸ್ಸು. ಇಲ್ಲಿ ಅದೆಷ್ಟೇ ತಪಸ್ಸು ಮಾಡಿದರೂ ಯಶಸ್ಸು ಅನ್ನೋದು ತುಸು ಕಷ್ಟವೇ. ತಪಸ್ಸಿನ ಜೊತೆ ಇಲ್ಲಿ ಪ್ರತಿಭೆ, ಅದೃಷ್ಟ ಇರಲೇಬೇಕು. ಹಣವಿದ್ದಾಕ್ಷಣ, ಸಾಧಿಸಬಹುದು ಅನ್ನುವುದು ಕೇವಲ ಭ್ರಮೆ. ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ, ಭಕ್ತಿ ಮತ್ತು ಕಲೆಯ ಮೇಲೆ ಅತೀವ ಗೌರವ ಇದ್ದವರಿಗೆ ಮಾತ್ರ ಕಲಾದೇವಿ ಒಲಿಯುತ್ತಾಳೆ. ಬಣ್ಣದ ಲೋಕದಲ್ಲಿ ಮಿಂದೇಳುವುದು ಸುಲಭದ ಮಾತಲ್ಲ. ಕಲಾದೇವಿ ಎಲ್ಲರಿಗೂ ಒಲಿಯೋದಿಲ್ಲ. ಅಪಾರ ಪರಿಶ್ರಮ ಕೂಡ ಬೇಕು. ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ, ಭಕ್ತಿ ಮತ್ತು ಗೌರವ ಇಟ್ಟುಕೊಂಡಿದ್ದರಿಂದಲೇ ಇಂದು ನಟ, ನಿರ್ಮಾಪಕ ಕಮ್ ನಿರ್ದೇಶಕ ಶಶಿಧರ್ ಕೆ.ಎಂ. ಸ್ಯಾಂಡಲ್ವುಡ್ನಲ್ಲೊಂದು ಛಾಪು ಮೂಡಿಸಲು ಸಾಧ್ಯವಾಗಿದೆ.
ಇಷ್ಟಕ್ಕೂ ಶಶಿಧರ್ ಕೆ.ಎಂ. ಅಂದಾಕ್ಷಣ ಬಹಳಷ್ಟು ಮಂದಿಗೆ ಕೊಂಚ ಗೊಂದಲವಾಗಬಹುದು. ಅದೇ, “ಡಾಟರ್ ಆಫ್ ಪಾರ್ವತಮ್ಮ” ಸಿನಿಮಾದ ನಿರ್ಮಾಪಕ, “ವೀರಂ” ಚಿತ್ರದ ಮೇನ್ ಸ್ಟ್ರೆಂಥ್, “ಶುಗರ್ಲೆಸ್” ಚಿತ್ರದ ನಿರ್ದೇಶಕ ಅಂದಾಗ ಮಾತ್ರ, ಶಶಿಧರ್ ಥಟ್ಟನೆ ನೆನಪಾಗುತ್ತಾರೆ. ಹೌದು, ಅದೇ ಶಶಿಧರ್ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ. ಇಷ್ಟಕ್ಕೂ ಶಶಿಧರ್ ಕುರಿತು ಇಲ್ಲೇಕೆ ಇಷ್ಟೊಂದು ಪೀಠಿಕೆ ಅಂದರೆ, ಶಶಿಧರ್ ಇಂಡಸ್ಟ್ರಿಗೆ ಬಂದಿದ್ದು, ತಾನೊಬ್ಬ ಕಲಾವಿದ ಎನಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ. ಆದರೆ, ಅವರು ಕಲಾವಿದನಾಗುವುದರ ಜೊತೆಗೆ ತಾನೊಬ್ಬ ನಿರ್ಮಾಪಕರಾಗಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಾಗಿದೆ.
ನಿರ್ಮಾಣ, ನಿರ್ದೇಶನದಲ್ಲೂ ಸೈ
ನಿಜ, ಶಶಿಧರ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಕೇವಲ ಮೂರು ವರ್ಷಗಳಷ್ಟೇ ಕಳೆದಿವೆ. ಅವರು ಇಲ್ಲಿಗೆ ಬಂದಿದ್ದೇ, ತಾನೊಬ್ಬ ಕಲಾವಿದ ಆಗಬೇಕು ಅಂತ. ಈವರೆಗೆ ಅವರು ಸುಮಾರು ಹದಿನೈದು ಚಿತ್ರಗಳಲ್ಲಿ ತರಹೇವಾರಿ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಬೆಳ್ಳಿತೆರೆಯ ಜೊತೆ ಜೊತೆಯಲ್ಲಿ ಕಿರುತೆರೆಯನ್ನೂ ಸ್ಪರ್ಶಿಸಿದ್ದಾರೆ. ಕಿರುತೆರೆಯಲ್ಲೂ ಆರು ಧಾರಾವಾಹಿಗಳಲಿ ಬಣ್ಣ ಹಚ್ಚಿಕೊಂಡಿದ್ದುಂಟು. ಅದರಾಚೆಗೆ ಶಶಿಧರ್ ಧೈರ್ಯ ಮಾಡಿ, ನಿರ್ಮಾಣಕ್ಕೂ ಜೈ ಅಂದರು. ತಮ್ಮ ದಿಶಾ ಎಂಟರ್ಟೈನರ್ಸ್ ಬ್ಯಾನರ್ನಲ್ಲಿ ಮೊದಲು ಹರಿಪ್ರಿಯಾ ಅಭಿನಯದ “ಡಾಟರ್ ಆಫ್ ಪಾರ್ವತಮ್ಮ” ಸಿನಿಮಾ ನಿರ್ಮಾಣ ಮಾಡಿದರು. ಇವರೊಂದಿಗೆ ಹಲವು ಗೆಳೆಯರು ಕೈ ಜೋಡಿಸಿದರು.
ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಕೂಡ ನಟಿಸಿದ್ದು ವಿಶೇಷ. ಚೊಚ್ಚಲ ನಿರ್ಮಾಣ ಸಿನಿಮಾ ಮೂಲಕ ಶಶಿಧರ್ ಗಾಂಧಿನಗರಿಗರ ಕಣ್ಣಿಗೆ ಬಿದ್ದದ್ದು ನಿಜ. ಅಲ್ಲಿಂದ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟ ಶಶಿಧರ್, ನಿರ್ದೇಶನಕ್ಕೂ ಅಣಿಯಾದರು. “ಶುಗರ್ಲೆಸ್” ಎಂಬ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ತಾನೊಬ್ಬ ನಿರ್ದೇಶಕ ಅನ್ನುವುದನ್ನೂ ಸಾಬೀತುಪಡಿಸಿದರು. ಇದರ ಜೊತೆ ಜೊತೆಯಲ್ಲೇ ಅವರು ಪ್ರಜ್ವಲ್ ದೇವರಾಜ್ ಹಾಗೂ ರಚಿತಾರಾಮ್ ಅಭಿನಯದ “ವೀರಂ” ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಅದ್ಧೂರಿ ಬಜೆಟ್ ಚಿತ್ರವಾಗಿದ್ದು, ಸದ್ಯ ಚಿತ್ರೀಕರಣದಲ್ಲಿದೆ.
ಸಿನ್ಮಾ ಪ್ರೀತಿಯೇ ಇದಕ್ಕೆಲ್ಲಾ ಕಾರಣ…
ಒಬ್ಬ ಕಲಾವಿದ ನಿರ್ಮಾಣ ಮಾಡುವುದು ಅಂದರೆ ಅದು ಸುಲಭದ ಮಾತಲ್ಲ. ಇಲ್ಲಿ ಧೈರ್ಯ ಇರಬೇಕು, ಜೊತೆಗೆ ನಾನು ಮಾಡಬಲ್ಲೆ ಎಂಬ ಭರವಸೆ ಹೊಂದಿರಬೇಕು. ಇವೆರೆಡು ಇದ್ದುದರಿಂದಲೇ ಶಶಿಧರ್ ಇಂದು ಎರಡು ಸಿನಿಮಾ ನಿರ್ಮಾಣ ಮಾಡಿ, ಒಂದು ಚಿತ್ರ ನಿರ್ದೇಶನ ಮಾಡಿರೋದು. ಕನ್ನಡ ಸಿನಿಮಾರಂಗ ಈಗ ಇನ್ನಷ್ಟು ಶೈನ್ ಆಗುತ್ತಿದೆ. ಕೊರೊನಾ ಸಮಯದಲ್ಲೂ ಅದೇ ಧೈರ್ಯ ಇಟ್ಟುಕೊಂಡು ನಿರ್ಮಾಣ ಮಾಡುವುದೆಂದರೆ ನಿಜಕ್ಕೂ ಅದು ಸಿನಿಮಾ ಮೇಲಿರುವ ಕಾಳಜಿ, ಪ್ರೀತಿಯನ್ನು ಎತ್ತಿತೋರಿಸುತ್ತದೆ. ಶಶಿಧರ್ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಇದನ್ನೆಲ್ಲಾ ಎಷ್ಟೇ ಕಷ್ಟ ಬಂದರೂ ಮಾಡಲೇಬೇಕು ಎನ್ನುವಷ್ಟರ ಮಟ್ಟಿಗೆ ಸಜ್ಜಾಗಿ, ಪ್ರೊಫೆಷನಲ್ ಆಗಿಯೇ ಮಾಡುತ್ತಿದ್ದಾರೆ.
ಒಳ್ಳೇ ಸಿನ್ಮಾ ಕೊಡುವ ಗುರಿ
ತಮ್ಮ ಸಿನಿ ಜರ್ನಿ ಕುರಿತು ಹೇಳುವ ಶಶೀಧರ್, “ನಾನು ಇಲ್ಲಿಗೆ ಬಂದದ್ದು ಆಕಸ್ಮಿಕ. ನಟನಾಗಬೇಕು ಅಂತ ಬಂದೆ. ನಿರ್ಮಾಪಕನಾದೆ, ನಿರ್ದೇಶಕನೂ ಆಗಿದ್ದೇನೆ. ಅದರಲ್ಲೂ ನಾನು ದೊಡ್ಡ ನಿರ್ಮಾಪಕ ಆಗಬೇಕು ಅಂತಾಗಲಿ, ನಿರ್ದೇಶಕ ಎನಿಸಿಕೊಳ್ಳಬೇಕು ಅಂತಾಗಲಿ ಇಲ್ಲ. ಕನ್ನಡಕ್ಕೆ ಸದಭಿರುಚಿಯ ಚಿತ್ರಗಳನ್ನು ಕೊಡಬೇಕು. ಕನ್ನಡ ಚಿತ್ರರಂಗಕ್ಕೆ ನಮ್ಮ ದಿಶಾ ಎಂಟರ್ಟೈನರ್ಸ್ ಬ್ಯಾನರ್ ಒಳ್ಳೆಯ ಕೊಡುಗೆ ಕೊಡಬೇಕು ಅನ್ನುವುದಷ್ಟೇ ನನ್ನ ಉದ್ದೇಶ. ಆ ನಿಟ್ಟಿನಲ್ಲಿ ಮೊದಲು ಮಹಿಳಾ ಪ್ರಧಾನವುಳ್ಳ “ಡಾಟರ್ ಆಫ್ ಪಾರ್ವತಮ್ಮ” ಸಿನಿಮಾ ಮಾಡಿದೆ. ಆ ನಂತರ ಸಾಮಾಜಿಕ ಕಳಕಳಿ ಇರುವ, ಒಳ್ಳೆಯ ಸಂದೇಶ ಸಾರುವ “ಶುಗರ್ಲೆಸ್” ಸಿನಿಮಾ ನಿರ್ದೇಶಿಸಿದೆ. ಈಗ “ವೀರಂ” ಎಂಬ ಪಕ್ಕಾ ಮಾಸ್ ಚಿತ್ರ ಮಾಡುತ್ತಿದ್ದೇನೆ.
ಇಷ್ಟೆಲ್ಲಾ ಸಾಧ್ಯವಾಗಿರೋದು, ಸಿನಿಮಾ ಮೇಲಿರುವ ಪ್ರೀತಿಗಾಗಿ. “ವೀರಂ” ದೊಡ್ಡ ಸ್ಕೇಲ್ನಲ್ಲಿ ತಯಾರಾಗುತ್ತಿದೆ. ದಿಶಾ ಎಂಟರ್ಟೈನರ್ಸ್ ಬ್ಯಾನರ್ ಮೂಲಕ ಯಾವುದೇ ಚಿತ್ರ ಹೊರಬಂದರೂ ಗುಣಮಟ್ಟದಲ್ಲಿ ರಾಜಿ ಆಗುವುದಿಲ್ಲ. ಒಳ್ಳೆಯ ಸಿನಿಮಾಗಳೇ ಮೂಡಿಬರಲಿವೆ. ಸದ್ಯಕ್ಕೆ “ಶುಗರ್ಲೆಸ್” ಮೇಲೆ ಅತಿಯಾದ ಭರವಸೆ ಇದೆ. ನಾನು ನಿರ್ದೇಶನ ಮಾಡಿದ್ದೇನೆ ಎಂಬ ಕಾರಣಕ್ಕೆ ಅಲ್ಲ. ಅದೊಂದು ಒಳ್ಳೆಯ ಕಂಟೆಂಟ್ ಇರುವ ಚಿತ್ರ. ಈ ಸಿನಿಮಾವನ್ನು ನಾನು ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದೇನೆ. ಈ ಮೂಲಕ ಡಯಾಬಿಟಿಸ್ ಕುರಿತ ಕಥೆ ಹೇಳಿದ್ದೇನೆ.
ಕಥೆ ಜೊತೆ ಒಂದು ಬ್ಲಾಕ್ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಮುಂದಾಗಿದ್ದೇನೆ. ಇಂದು ಡಯಾಬಿಟಿಕ್ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ ಎಂಬ ವಿಷಯ ಇಲ್ಲಿ ಹೈಲೈಟ್”. ಯಾವ ಭಾಷೆಯಲ್ಲೂ ಈ ರೀತಿಯ ಕಂಟೆಂಟ್ ಇರದ ಕಾರಣ, ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದೇನೆ” ಎನ್ನುತ್ತಾರೆ ಶಶಿಧರ್.
ಸದ್ಯಕ್ಕೆ ಶಶಿಧರ್ ಅವರೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಸ್ಟಾರ್ ಒಬ್ಬರಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದಾಗಲೇ ಆ ಸ್ಟಾರ್ ನಟರಿಗೆ ಅಡ್ವಾನ್ಸ್ ಕೂಡ ಕೊಟ್ಟಿದ್ದಾರಂತೆ. “ವೀರಂ” ಚಿತ್ರ ಮುಕ್ತಾಯಗೊಂಡ ನಂತರ ಆ ಸ್ಟಾರ್ ನಟರ ಜೊತೆಗಿನ ಚಿತ್ರವನ್ನು ಅನೌನ್ಸ್ ಮಾಡುವ ಉದ್ದೇಶ ಶಶಿಧರ್ ಅವರಿಗಿದೆ. ಇನ್ನೊಂದು ಖುಷಿಯ ವಿಷಯವೆಂದರೆ, ಅವರ ನಿರ್ಮಾಣದ “ವೀರಂ” ಚಿತ್ರಕ್ಕೆ ವಾಹಿನಿಯೊಂದರಿಂದ ಸ್ಯಾಟಲೆಟ್ ಬೇಡಿಕೆ ಬಂದಿದ್ದು, ಆ ಕುರಿತಂತೆ ಮಾತುಕತೆ ನಡೆಯುತ್ತಿದೆಯಂತೆ.
ಕನ್ನಡ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ” ಕೆಜಿಎಫ್ 2 ‘ ಚಿತ್ರದ ಟೀಸರ್ ಜಾಗತಿಕ ಮಟ್ಟದಲ್ಲೇ ದೊಡ್ಡ ಹವಾ ಸೃಷ್ಟಿಸುತ್ತಿದೆ. ಟೀಸರ್ ಲಾಂಚ್ ಇಲ್ಲಿಗೆ ಒಂದು ವಾರ ಕಳೆದಿದೆ. ಈ ಹೊತ್ತಿಗೆ ಸೋಷಲ್ ಮೀಡಿಯಾದಲ್ಲಿ ಟೀಸರ್ ವೀಕ್ಷಿಸಿದವರ ಸಂಖ್ಯೆ 15 ಕೋಟಿ ಗೂ ಹೆಚ್ಚಿದೆ. ಅತೀ ಕಡಿಮೆ ಅವದಿಯಲ್ಲಿ ಇಷ್ಟು ಪ್ರಮಾಣದಲ್ಲಿ ವೀಕ್ಷಣೆ ಮಾಡಿದ ದಾಖಲೆ ಯಾವುದೇ ಚಿತ್ರಕ್ಕಿಲ್ಲ. ಅದೀಗ ಕೆಜಿಎಫ್ 2 ಚಿತ್ರಕ್ಕೆ ದಕ್ಕಿದೆ. ಈಗಾಗಲೇ ಇದ್ದ ಹಲವು ದಾಖಲೆಗಳನ್ನು ಅದು ಬ್ರೇಕ್ ಮಾಡಿದ್ದು, ಚಿತ್ರ ರಂಗದ ಗಣ್ಯರಿಂದ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಶುಕ್ರವಾರ ʼಕೆಜಿಎಫ್ ೨ʼ ಚಿತ್ರದ ಟೀಸರ್ ಮೆಚ್ಚಿಕೊಂಡು ಭಾರತೀಯ ಚಿತ್ರ ರಂಗ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಪಡೆದ ರಾಮ್ ಗೋಪಾಲ್ ವರ್ಮ್ ಕೂಡ ಟ್ವಿಟ್ ಮಾಡಿದ್ದಾರೆ.
ವರ್ಮ ಟ್ವಿಟ್ ಮಾಡಿರುವ ರೀತಿಯೇ ವಿಚಿತ್ರವಾಗಿದೆ. ಯಾರನ್ನು ಹೊಗಳುವ ನೆಪದಲ್ಲಿ ಇನ್ನಾರನ್ನೋ ತೆಗಳಿದರೂ ಎನ್ನುವ ಹಾಗೆ ಆರ್ಜಿವಿ ಟ್ವಿಟ್ ಮಾಡಿದ್ದಾರೆ. ” ಬಾಹುಬಲಿ 2 ‘ ಚಿತ್ರದ ಟ್ರೈಲರ್ 11 ಕೋಟಿ ವೀಕ್ಷಣೆ ರೀಚ್ ಆಗುವುದಕ್ಕೆ ಮೂರು ವರ್ಷ ತೆಗೆದುಕೊಂಡಿತು. ಆರ್ ಆರ್ ಆರ್ ಚಿತ್ರದ ಟೀಸರ್ 3.5 ಕೋಟಿ ವೀಕ್ಷಣೆ ಪಡೆಯುವುದಕ್ಕೆ ಮೂರು ತಿಂಗಳು ಬೇಕಾಯಿತು. ಆದರೆ ‘ಕೆಜಿಎಫ್ 2 ‘ ಚಿತ್ರದ ಟೀಸರ್ ಮೂರು ದಿವಸದಲ್ಲಿ 14 ಕೋಟಿ ವೀಕ್ಷಣೆ ಪಡೆದಿದೆ. ಎಲ್ಲಾ ಕನ್ನಡಿಗರ ಪರವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇತರೆ ಭಾಷೆಯ ಚಿತ್ರರಂಗಕ್ಕೆ ಕೊಟ್ಟ ಸ್ಟಮಕ್ ಪಂಚ್ ಇದುʼ ಅಂತ ವರ್ಮ ಟ್ವಿಟ್ ಮಾಡಿದ್ದಾರೆ.
ʼಮುಂಗಾರು ಮಳೆʼ ಚಿತ್ರದ ಮೂಲಕ ಯೋಗರಾಜ್ ಭಟ್ ದೊಡ್ಡ ಸಕ್ಸಸ್ ಕಂಡ ನಂತರ ಅವರ ಶಿಷ್ಯಂದಿರು ಒಬ್ಬೊಬ್ಬರಾಗಿಯೇ ಸ್ವತಂತ್ರವಾಗಿ ನಿರ್ದೇಶನಕ್ಕಿಳಿದಿದ್ದು ಹಳೇ ಸುದ್ದಿ. ಹಾಗೆ ಭಟ್ಟರ ಬಳಗದಿಂದ ಬಂದವರು ಚಿತ್ರೋದ್ಯಮದಲ್ಲಿ ಸಾಕಷ್ಟು ಜನರಿದ್ದಾರೆ. ಅದೇ ರೀತಿ ಈಗ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ ತಂಡದಲ್ಲೀಗ ಅಂತಹ ಬಿರುಗಾಳಿ ಎದ್ದಿದೆ. ಅಲ್ಲಿರುವವರ ಪೈಕಿ ಈಗ ಒಬ್ಬೊಬ್ಬರಾಗಿಯೇ ನಿರ್ದೇಶನದ ಸಾಹಸಕ್ಕಿಳಿಯುತ್ತಿದ್ದಾರೆ. ಈಗ ಅಂತಹ ಸಾಹಸದಲ್ಲೀಗ ಸುದ್ದಿಯಲ್ಲಿದ್ದವರು ರಾಘವೇಂದ್ರ ವಿ. ಇಳಿಗಾರ್. ಸದ್ಯಕ್ಕೆ ಟೈಟಲ್ ಫೈನಲ್ ಆಗದ ಚಿತ್ರವೊಂದಕ್ಕೆ ರಾಘವೇಂದ್ರ ವಿ. ಇಳಿಗಾರ್ ನಿರ್ದೇಶಕ. ಸಂಕ್ರಾಂತಿ ಹಬ್ಬಕ್ಕೆ ಅದರ ಮೊದಲ ಪೋಸ್ಟರ್ ಲಾಂಚ್ ಆಗಿದೆ. ” ಪ್ರೊಡಕ್ಷನ್ ೨ʼ ಹೆಸರಲ್ಲಿ ಪೋಸ್ಟರ್ ಹೊರ ಬಂದಿದೆ.
ಬುದ್ಧನ ಮರಣ ನಂತರ ಅವರ ಪರಿಶ್ರಮ ಯಾವ ರೀತಿ ಅನುಕರಣೆಗೆ ಬಂದ ಬಗೆಯನ್ನು ಪೋಸ್ಟರ್ ನಲ್ಲಿ ತೋರಿಸುವ ಪ್ರಯತ್ನ ನಡೆದಿದೆ. ಮಧ್ಯದಲ್ಲಿ ಬುದ್ಧನ ಮುಖ, ತುತ್ತತುದಿಯಲ್ಲಿ ಹರಿದಿರುವ ವಿಚಿತ್ರ ಧ್ವಜ, ಅಕ್ಕಪಕ್ಕದಲ್ಲಿ ಎರಡು ಮಿಲಿಟರಿ ಹೆಲಿಕಾಫ್ಟರ್ಗಳು ಹಾರಾಡುತ್ತಿರುವುದು, ಕೆಳಗಡೆ ಒಂದು ಕಡೆಯಲ್ಲಿ ಜೀಪುಗಳು, ಮತ್ತೊಂದು ಭಾಗದಲ್ಲಿ ವ್ಯಕ್ತಿಯೊಬ್ಬ ಕುದುರೆ ಮೇಲೆ ಕೂತಿದ್ದೇನೆ. ಪಕ್ಕದಲ್ಲೆ ಬಾಂಬ್ ಸಿಡಿಸಲು ಟ್ಯಾಂಕ್ವೊಂದು ಸಜ್ಜಾಗಿದೆ. ಶಾಂತಿ ಮತ್ತು ಹಿಂಸೆ ಒಟ್ಟಿಗೆ ನಿರ್ಗಮನ. ಇವೆಲ್ಲವೂ ಪೋಸ್ಟರ್ದಲ್ಲಿ ಕಂಡುಬಂದಿದೆ. ಇದೊಂದು ಪೌರಾಣಿಕ ಹಾಗೂ ಫ್ಯಾಂಟಸಿ ಸಾಹಸದ ಸನ್ನಿವೇಶಗಳನ್ನು ಹೊಂದಿದ್ದು, ಚಿತ್ರ ಹೊಸ ತೆರೆನಾದ ಕತೆಯನ್ನು ತೋರಿಸಲು ಹೊರಟಿದೆಯಂತೆ. ಸದ್ಯಕ್ಕೆ ಚಿತ್ರದ ಛಾಯಾಗ್ರಾಹಕರಾಗಿ ಅರ್ಜುನ್ ಕೋಟ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ಕಲಾವಿದರು ಹಾಗೂ ತಂತ್ರಜ್ಣರ ಆಯ್ಕೆ ಬಾಕಿ ಇದೆ. ಇಷ್ಟರಲ್ಲಿಯೇ ಇವೆಲ್ಲ ಪ್ರಕ್ರಿಯೆ ಮುಗಿಯಲಿದೆಯಂತೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಪೋಸ್ಟರ್ ಲಾಂಚ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಹಾಗೆಯೇ ತಮ್ಮ ಶಿಷ್ಯ ರಾಘವೇಂದ್ರ ಅವರ ಸಿನಿ ಬದುಕಿಗೆ ಹರಸಿದ್ದಾರೆ. ರಾಘವೇಂದ್ರ ಅವರಿಗೆ ಇದು ಚೊಚ್ಚಲ ಸಿನಿಮಾವಾದರೂ, ಸಿನಿಮಾ ಜಗತ್ತು ಅವರಿಗೆ ಹೊಸದಲ್ಲ. ರಿಷಬ್ ಶೆಟ್ಟಿ ಅವರ ಬಳಿಯೇ ಸಾಕಷ್ಟು ವರ್ಷ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರಂತೆ. ಸೈಕಾಲಜಿ ಓದಿ, ಜೀವನದಲ್ಲಿ ಇನ್ನೇನೋ ಆಗುವ ಕನಸು ಕಂಡಿದ್ದ ರಾಘವೇಂದ್ರ ಅವರು, ಸಿನಿಮಾ ಮೇಲಿನ ಆಸಕ್ತಿಯಿಂದ ಬಣ್ಣದ ಜಗತ್ತಿಗೆ ಬಂದರಂತೆ. ವಿಶೇಷ ಅಂದ್ರೆ ಹತ್ತೋಂಬತ್ತನೇ ವಯಸ್ಸಿನಲ್ಲೇ ಕಿರುಚಿತ್ರ ನಿರ್ದೇಶಿಸಿ ಪ್ರಶಂಸೆ ಗಳಿಸಿದ್ದು, ಅವರೊಳಗಿನ ನಿರ್ದೇಶಕನಾಗುವ ಕನಸಿಗೆ ಮತ್ತಷ್ಟು ರೆಕ್ಕೆ ಬರುವಂತೆ ಮಾಡಿತು ಎನ್ನುವುದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ ರಾಘವೇಂದ್ರ ವಿ. ಇಳಿಗಾರ್. ಇಷ್ಟರಲ್ಲಿಯೇ ಟೈಟಲ್ ಲಾಂಚ್ ಮಾಡುವುದಾಗಿ ಹೇಳಿರುವ ಚಿತ್ರ ತಂಡ, ಸದ್ಯಕ್ಕೆ ’ಪ್ರೊಡಕ್ಷನ್ ನಂ.2’ ಹೆಸರಿನಲ್ಲಿ ಪ್ರಿಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಸ್ಕಾಯರ್ ಕಾನ್ಸೆಫ್ಟ್ಸ್ ಅಡಿಯಲ್ಲಿ ಜ್ನಾನ್ ಶೇಖರ್ ಸಿದ್ದಯ್ಯ, ರವಿಕುಮಾರ್, ಸುನಿಲ್ಗಾಟ್ಗೆ ಹಾಗೂ ರಾಘವೇಂದ್ರ.ಜಿ.ಆರ್ ಜಂಟಿಯಾಗಿ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಅಭಿಷೇಕ್ ಅಂಬರೀಶ್ “ಅಮರ್” ಚಿತ್ರದ ಬಳಿಕ ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅವರು ಯಾವಾಗ, “ದುನಿಯಾ” ಸೂರಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೊಟ್ಟಾಗ, ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು.
ನಂತರದ ದಿನಗಳಲ್ಲಿ ಯಾವ ಸಿನಿಮಾ, ಚಿತ್ರದ ಟೈಟಲ್ ಏನು ಎಂಬ ಪ್ರಶ್ನೆಗಳಿಗೂ ಕಾಲ ಕ್ರಮೇಣ ಉತ್ತರವೂ ಸಿಕ್ಕಿತು. ಹೌದು, “”ಬ್ಯಾಡ್ ಮ್ಯಾನರ್ಸ್” ಶೀರ್ಷಿಕೆ ಹೊರಬೀಳುತ್ತಿದ್ದಂತೆಯೇ ಸಾಕಷ್ಟು ನಿರೀಕ್ಷೆಯೂ ಹುಟ್ಟಿಸಿತು.
ಸಂಕ್ರಾಂತಿ ದಿನದಂದ ಅದಕ್ಕೀಗ ಮುಹೂರ್ತವೂ ನೆರವೇರಿದೆ. ಹೌದು, ಬಹು ನಿರೀಕ್ಷಿತ “ದುನಿಯಾ” ಸೂರಿ ನಿರ್ದೇಶನದ ಔಟ್ ಅಂಟ್ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಚಿತ್ರ “ಬ್ಯಾಡ್ ಮ್ಯಾನರ್ಸ್”ಗೆ ಜನವರಿ ೧೫ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಹೂರ್ತ ನೆರವೇರಿದೆ.
ಈ ವೇಳೆ ಅಭಿಷೇಕ್ ಅಂಬರೀಶ್, ಸಂಸದೆ ಸುಮಲತಾ ಅಂಬರೀಶ್, ನಿರ್ದೇಶಕ ಸೂರಿ, ನಿರ್ಮಾಪಕ ಕೆ.ಎಂ ಸುಧೀರ್, ಛಾಯಾಗ್ರಹಕ ಶೇಖರ್, ಸಂಭಾಷಣೆಕಾರ ಮಾಸ್ತಿ ಮಂಜು ಇತರರು ಉಪಸ್ಥಿತರಿದ್ದರು. ಮಗನ ಎರಡನೇ ಚಿತ್ರಕ್ಕೆ ಸುಮಲತಾ ಅವರು ಕ್ಲಾಪ್ ಮಾಡಿ ಶುಭಹಾರೈಸಿದರು. ಈ ವೇಳೆ ದರ್ಶನ್ ಕೂಡ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಕೆ.ಪಿ.ಶ್ರೀಕಾಂತ್, ನಿರ್ದೇಶಕ ವಿಜಯ್ ಪ್ರಕಾಶ್ ಇತರರು ಉಪಸ್ಥಿತರಿದ್ದರು. ಈಗಾಗಲೇ ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಲಾಗಿರುವ ರಗಡ್ ಸೆಟ್ ನಲ್ಲಿ “ಬ್ಯಾಡ್ ಮ್ಯಾನರ್ಸ್”ಗೆ ಚಿತ್ರದ ಚಿತ್ರೀಕರಣ ಶುರುವಾಗಿದೆ.
ತೆಲುಗಿನ ಖ್ಯಾತ ನಟ ಪ್ರಭಾಸ್ ಹಾಗೂ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿಯ “ಸಲಾರ್” ಚಿತ್ರಕ್ಕೆ ಶುಕ್ರವಾರ (ಜನವರಿ ೧೫) ಮುಹೂರ್ತ ನೆರವೇರಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ “ಸಲಾರ್” ಚಿತ್ರಕ್ಕೆ ಹೈದರಾಬಾದ್ ನಲ್ಲಿ ಜೋರಾಗಿಯೇ ಮುಹೂರ್ತ ನೆರವೇರಿದೆ. ಮುಹೂರ್ತದಲ್ಲಿ ಪ್ರಭಾಸ್, ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕರಾದ ವಿಜಯ್ ಕಿರಗಂದೂರು ಹಾಜರಿದ್ದು, ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು. ಆರಂಭದಲ್ಲಿ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆಯೇ, ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು.
ಈಗ ಚಿತ್ರತಂಡ ಶೂಟಿಂಗ್ ಹೋಗಲು ಸಜ್ಜಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ “ಸಲಾರ್” ಇಂಡಿಯನ್ ಸಿನಿಮಾ ಎಂದು ಚಿತ್ರ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಅದರಂತೆ ಇದೀಗ ಚಿತ್ರದ ಮುಹೂರ್ತಕ್ಕೆ ತಂಡ ತಯಾರಿ ನಡೆಸಿದ್ದು, ಶುಕ್ರವಾರ ಹೈದರಾಬಾದ್ ನಲ್ಲಿ ಬೆಳಗ್ಗೆ 11 ಗಂಟೆಗೆ ಪೂಜೆ ನೆರವೇರಿಸಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.
ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ “ಸಲಾರ್” ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ ಲುಕ್ ಸಹ ಅಷ್ಟೇ ಕುತೂಹಲ ಕೆರಳಿಸಿದೆ. ಇದೀಗ ತಮ್ಮ ಲುಕ್ ಬಗ್ಗೆಯೂ ಪ್ರಭಾಸ್ ಮಾತನಾಡಿದ್ದಾರೆ. ‘ಈ ಸಿನಿಮಾದ ಮುಹೂರ್ತ ಮತ್ತು ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಕ್ಕೆ ನಾನು ತುಂಬ ಕೌತುಕನಾಗಿದ್ದೇನೆ. ನನ್ನ ಲುಕ್ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಲು ಅಷ್ಟೇ ಉತ್ಸುಕನಾಗಿದ್ದೇನೆ ಎಂದು ಈ ಹಿಂದೆಯೇ ಪ್ರಭಾಸ್ ಹೇಳಿಕೊಂಡಿದ್ದರು.
ಸದ್ಯಕ್ಕೆ ಚಿತ್ರತಂಡ ಮುಹೂರ್ತ ಮುಗಿಸಿದೆ. ಇದೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದೆ. ಚಿತ್ರದಲ್ಲಿ ಇನ್ನು ಯಾರೆಲ್ಲಾ ಕಲಾವಿದರು ಇರಲಿದ್ದಾರೆ ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಹಿರಂಗ ಪಡಿಸಲಿದೆ.
ಮಕರ ಸಂಕ್ರಮಣದ ನಂತರ ಕನ್ನಡ ಚಿತ್ರರಂಗಕ್ಕೆ ಮತ್ತು ಭಾರತೀಯ ಚಿತ್ರಪ್ರೇಮಿಗಳಿಗೆ ಭರ್ಜರಿ ಸುದ್ದಿ ನೀಡಿರುವ ʼಸಲಾರ್ʼ ಚಿತ್ರತಂಡದ ಸಂಭ್ರಮದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸಿದ್ದರು. ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮುಹೂರ್ತದ ಪೂಜೆ ನೆರವೇರಿತು. ಚಿತ್ರದ ಹೀರೋ ಪ್ರಭಾಸ್, ತೆಲುಗು ಮತ್ತು ಕನ್ನಡ ಚಿತ್ರರಂಗಗಳ ಅನೇಕ ಗಣ್ಯರು, ತಾರೆಯರು ಪಾಲ್ಗೊಂಡು ಶುಭ ಹಾರೈಸಿದರು. ʼಸಲಾರ್ʼ ಚಿತ್ರದ ಮುಹೂರ್ತದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ಹೊರಹೊಮ್ಮಿದೆ.
ಡಿಸಿಎಂ ಶುಭ ಹಾರೈಕೆ
ಉಪ ಮುಖ್ಯಮಂತ್ರಿ ಡಾ.ಸಿಎ.ಎನ್.ಅಶ್ವತ್ಥನಾರಾಯಣ ಮಾತನಾಡಿ, “ಕನ್ನಡದಲ್ಲಿ ತಮ್ಮ ಹೊಂಬಾಳೆ ಫಿಲ್ಮ್ಸ್ ವತಿಯಿಂದ ʼಕೆಜಿಎಫ್ ಚಾಪ್ಟರ್-1ʼ, ʼಕೆಜಿಎಫ್ ಚಾಪ್ಟರ್-2ʼ ಅದಕ್ಕೂ ಹಿಂದೆ ಇನ್ನು ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಜಯ್ ಕಿರಗಂದೂರು, “ಸಲಾರ್” ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಹಾಗೆಯೇ ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಪ್ರಶಾಂತ್ ನೀಲ್ ಅವರು ʼಸಲಾರ್ʼ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲೂ ಪ್ರಭಾಸ್ ಅವರ ಈ ಚಿತ್ರ ಮಾಡುತ್ತಿರುವುದು ತುಂಬಾ ಸಂತೋಷ ಉಂಟು ಮಾಡಿದೆ.
ಈ ಮೂಲಕ ಭಾಷೆ, ಗಡಿಗಳನ್ನು ಮೀರಿ ಕನ್ನಡ-ತೆಲುಗು ಚಿತ್ರರಂಗಗಳು ಒಂದಾಗಿ ಮುಂದೆ ಹೋಗುತ್ತಿರುವುದಕ್ಕೆ ಆನಂದವಾಗಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ. ʼಬಾಹುಬಲಿʼ ಚಿತ್ರದಿಂದ ಕನ್ನಡದ ಅಭಿಮಾನಿಗಳ ಮನಗೆದ್ದಿರುವ ಪ್ರಭಾಸ್ ಅವರು ʼಸಲಾರ್ʼ ಚಿತ್ರದಿಂದ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ” ಎಂದರು.
ಪ್ರಭಾಸ್ ಜತೆಯ ಕೆಲಸ ಖುಷಿ ಷಿ ಸಂಗತಿ
“ನಾನು ʼಬಾಹುಬಲಿʼ ಚಿತ್ರವನ್ನು ನೋಡಿ ಪ್ರಭಾಸ್ ಅವರಿಗೆ ಫಿದಾ ಆಗಿದ್ದೆ. ಈಗ ಅವರ ಜತೆಯಲ್ಲೇ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ. ಈ ಮೂಲಕ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ “ಸಲಾರ್”ʼ ಚಿತ್ರವನ್ನು ತಯಾರು ಮಾಡುತ್ತಿದ್ದೇವೆ. ನಮ್ಮ “ಕೆಜಿಎಫ್” ಚಿತ್ರವನ್ನು ಡೈರೈಕ್ಟ್ ಮಾಡಿರುವ ಪ್ರಶಾಂತ್ ನೀಲ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ” ಎಂಬದು ನಿರ್ಮಾಪಕ ವಿಜಯ್ ಕಿರಗಂದೂರು ಮಾತು.
“ಸಲಾರ್” ಚಿತ್ರಕ್ಕೆ ಪ್ರಭಾಸ್ ಅವರ ಹೊರತಾಗಿ ನಾಯಕ ನಟಿ, ಇನ್ನಿತರೆ ತಾರಾಬಳಗ ಆಯ್ಕೆಯಾಗಿಲ್ಲ. ಚಿತ್ರವನ್ನು ಅನೌನ್ಸ್ ಮಾಡಿದಾಗ ಹೊರಬಿದ್ದ ಸಲಾರ್ ಫಸ್ಟ್ಲುಕ್ ದೇಶದೆಲ್ಲೆಡೆ ವೈರಲ್ ಆಗಿತ್ತು. ಪ್ರಭಾಸ್ ಈಗಾಗಲೇ ʼರಾಧೆ ಶ್ಯಾಂʼ ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣ ಕೊನೆ ಹಂತದಲ್ಲಿದೆ. ʼಆದಿಪುರುಷ್ʼ ಚಿತ್ರದ ಶೂಟಿಂಗ್ ಇನ್ನೇನು ಆರಂಭವಾಗಬೇಕಿದೆ. ಇದರ ಜತೆಯಲ್ಲೇ ಈಗ ʼಸಲಾರ್ʼ ಚಿತ್ರವೂ ಟೇಕಾಫ್ ಆಗಿದೆ. ನಟ ಯಶ್, ರವಿ ಬಸ್ರೂರ್, ಭುವನ್ ಗೌಡ ಸೇರಿದಂತೆ ಕೆಜಿಎಫ್ ಚಿತ್ರತಂಡದ ಅನೇಕರು ಪಾಲ್ಗೊಂಡಿದ್ದರು. ಅದರಲ್ಲೂ ಯಶ್ ಪ್ರಮುಖ ಆಕರ್ಷಣೆಯಾಗಿದ್ದರು.
ʼಈಶ್ವರ್ʼ ಚಿತ್ರದಿಂದ ಮೊದಲುಗೊಂಡು ʼಸಾಹೋʼ ತನಕ ಪ್ರಭಾಸ್ ನಟಿಸಿದ ಒಟ್ಟು 19 ಚಿತ್ರಗಳು ರಿಲೀಸ್ ಆಗಿವೆ. ಈ ಪೈಕಿ ʼಬಾಹುಬಲಿ-ದಿ ಬಿಗಿನಿಂಗ್ʼ ಹಾಗೂ ʼಬಾಹುಬಲಿ-ಕನ್ಕ್ಲೂಶನ್ʼ ಭಾರತ ಮಾತ್ರವಲ್ಲದೆ ಜಾಗತಿಕವಾಗಿಯೂ ಸದ್ದು ಮಾಡಿದ್ದವು. ಇದೀಗ ಅವರು ನಟಿಸುತ್ತಿರುವ ʼಸಲಾರ್ʼ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರೀ ಕ್ರೇಜ್ ಸೃಷ್ಟಿ ಮಾಡಿದೆ.
ಸಂಕ್ರಾಂತಿಯ ಸಂಭ್ರಮ ಈ ವರ್ಷ ತುಸು ಜೋರಾಗಿಯೇ ಇದೆ. ಹಲವು ಸಿನಿಮಾಗಳು ಸಂಕ್ರಮಣದಂದು ಸೆಟ್ಟೇರಿವೆ. ಕೆಲವು ಚಿತ್ರಗಳು ಚಿತ್ರೀಕರಣ ಶುರುಮಾಡಿವೆ. ಆ ನಿಟ್ಟಿನಲ್ಲಿ ವಿನೋದ್ ಪ್ರಭಾಕರ್ ಅವರ ಅಭಿನಯದ “ಲಂಕಾಸುರ” ಸಿನಿಮಾಗೂ ಕೂಡ ಚಾಲನೆ ಸಿಕ್ಕಿದೆ. ಸುಗ್ಗಿ ಹಬ್ಬದಂದು “ಲಂಕಾಸುರ” ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ದೊಡ್ದ ಬಸ್ತಿಯ ಶ್ರೀಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಚಾಲನೆ ಸಿಕ್ಕಿದೆ. ಈ ಚಿತ್ರದಲ್ಲಿ ವಿನೋದ್ಪ್ರಭಾಕರ್ ಅವರೊಂದಿಗೆ “ಲೂಸ್ ಮಾದ” ಯೋಗೀಶ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಎ.ಎಂ.ಎಸ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ ಚಿತ್ರಕ್ಕೆ ನಿರ್ಮಾಪಕರ ಪುತ್ರರಾದ ಮಾ. ಮಾನಸ್ ಪ್ರಜ್ವಲ್ ಹಾಗೂ ಶ್ರೇಯಸ್ ಪ್ರಜ್ವಲ್ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕರ ಪುತ್ರ ಮಾ.ಯೋಜಿತ್ ಕ್ಲಾಪ್ ಮಾಡಿದರು. ಸಂಕ್ರಾಂತಿ ದಿನದಂದು ಶುರುವಾದ ಈ ಚಿತ್ರದ ಚಿತ್ರೀಕರಣ, ಫೆಬ್ರವರಿ 15 ರವರೆಗೂ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಪಾರ್ವತಿ ಅರುಣ್, ಸಹಾನಾ ಗೌಡ ಇತರರು ನಟಿಸಿದ್ದಾರೆ. “ದುನಿಯಾ” ನಿರ್ಮಾಪಕರಾದ ಸಿದ್ದರಾಜು, ವಿನೋದ್ ಮಾಸ್ಟರ್ ಇತರರು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಂದಹಾಗೆ, ಹಿಂದೆ “ಮೂರ್ಕಲ್ ಎಸ್ಟೇಟ್” ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ “ಲಂಕಾಸುರ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣವಿದೆ. ಚೇತನ್ ಡಿಸೋಜ, ದೀಪು ಎಸ್ ಕುಮಾರ್ ಸಂಕಲನವಿದೆ. ಮೋಹನ್ ನೃತ್ಯ ನಿರ್ದೇಶನವಿದೆ.
ಲಂಕೆಯಲ್ಲಿ ರೌಡಿಸಂ ಅಂತೆ, ಅದು ಹೇಗೆ ? ರಾಮಾಯಣ ಬಲ್ಲವರಿಗೆ ಇದು ಅಚ್ಚರಿ. ಯಾಕಂದ್ರೆ ಅಲ್ಲಿ ಆಗಿದ್ದು ರಾಮ- ರಾವಣರ ಯುದ್ದ. ಬದಲಿಗೆ ಅಲ್ಲೂ ರೌಡಿಸಂ ಇತ್ತು ಅನ್ನೋದನ್ನು ಯಾರು ಕೇಳಿ ತಿಳಿದಿಲ್ಲ. ಆದ್ರೆ, ಇಲ್ಲಿ ಸೃಷ್ಟಿಸಿರುವವರ ‘ಲಂಕೆ’ಯಲ್ಲಿ ರೌಡಿಸಂ ಇದೆ. ಇಲ್ಲಿ ನಟ ಲೂಸ್ ಮಾದ ಯೋಗೇಶ್ ಅವರದೇ ಗೂಂಡಾಗಿರಿ.ಯಾಕಂದ್ರೆ ಅವರೇ ಈ ‘ಲಂಕೆ’ ಯ ರೌಡಿ !ಇ
ದು ಆಧುನಿಕ ರಾಮಾಯಣದ ಲಂಕೆ. ದಿ ಗ್ರೇಟ್ ಎಂಟರ್ಟೈನರ್ಸ್ ಲಾಂಛನದಲ್ಲಿ ಸಿದ್ಧವಾದ ಚಿತ್ರ . ರಾಮ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಈ ಚಿತ್ರ ಬಿಡುಗಡೆ ಆಗಿರತಿತ್ತು. ಕೊರೋನಾ ಕಾರಣ ಇದೀಗ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ರಿಲೀಸ್ ಸಿದ್ಧತೆಯಲ್ಲಿರುವ ಚಿತ್ರ ತಂಡ, ಈಗ ಟೈಟಲ್ ಲಾಂಚ್ ಮಾಡಿಕೊಂಡು, ಪ್ರಚಾರಕ್ಕೆ ಚಾಲನೆ ಕೊಟ್ಟಿದೆ.
ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಚಿತ್ರ ತಂಡ ಭರ್ಜರಿಯಾಗಿಯೇ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸರಿಯಾದ ವ್ಯವಸ್ಥೆ ಇಲ್ಲದೆ ಕೊಂಚ ಸಭಿಕರಿಗೆ ಕಿರಿ ಕಿರಿ ಉಂಟಾಯಿತು. ಕೊನೆಗೂ ಕಾರ್ಯಕ್ರಮ ಶುರುವಾಯಿತು.
ಮೊದಲಿಗೆ ಮಾತನಾಡಿದ ನಿರ್ದೇಶಕ ರಾಮ್ ಪ್ರಸಾದ್, ಕಥೆ ಬರೆಯುತ್ತಿದ್ದಂತೆ ರಾಮಾಯಣದ ತಿರುಳಿರುವ ಹಿನ್ನೆಲೆಯಲ್ಲಿ ಲಂಕೆ ಎಂದೇ ಶೀರ್ಷಿಕೆ ಫಿಕ್ಸ್ ಆಯ್ತು. ಚಿತ್ರೀಕರಣ ಶುರುವಾಗಿ , ಇದೀಗ ಸಿನಿಮಾ ಚಿತ್ರ ಬಿಡುಗಡೆ ಹಂತದಲ್ಲಿದೆ ಎಂದರು ನಿರ್ದೇಶಕರು. ಚಿತ್ರದ ನಾಯಕಿಯರಾದ ಕೃಷಿ ತಾಪಂಡ ಹಾಗೂ ಕಾವ್ಯಾ ಶೆಟ್ಟಿ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.
ನಟ ಸಂಚಾರಿ ವಿಜಯ್ ಈ ಚಿತ್ರದಮತ್ತೋರ್ವ ಪ್ರಮುಖ ಪಾತ್ರಧಾರಿ.’ ನನ್ನ ಮತ್ತು ಯೋಗಿ ಅವರ ಮೊದಲ ಸಿನಿಮಾ ಇದು. ಇಬ್ಬರಿಗೂ ಕಾಂಬಿನೇಷನ್ ಇಲ್ಲ. ಫ್ಲ್ಯಾಶ್ಬ್ಯಾಕ್ನಲ್ಲಿ ನಡೆಯುವ ಕಥೆಯಲ್ಲಿ ಎಸ್ತರ್ ನರೋನಾ ನನಗೆ ಜೋಡಿಯಾಗಿದ್ದಾರೆ. ಮಂಡ್ಯದಲ್ಲಿ ನಡೆದ ನೈ ಘಟನೆಯನ್ನೇ ವಿಶೇಷವಾಗಿ ತೋರಿಸಿದ್ದಾರೆ ನಿರ್ದೇಶಕರು ಎಂದರು ನಟ ವಿಜಯ್.
ಹೆಚ್ಚೇನೂ ಮಾತನಾಡದ ಲೂಸ್ ಮಾದ ಯೋಗಿ,ರೌಡಿಸಂ ಹಿನ್ನೆಲೆಯ ಕಥೆ. ಸಂಚಾರಿ ವಿಜಯ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ ಎಂದರು. ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್, ಶ್ರೀಮತಿ ಸುರೇಖಾ ರಾಮ್ ಪ್ರಸಾದ್ ಮಾತನಾಡಿ, ಒಂದೊಳ್ಳೆಯ ಸಿನಿಮಾಮಾಡಿದ ಅನುಭವ ಹೇಳಿಕೊಂಡರು. ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದರು. ಇದೇ ವೇಳೆ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ, ಜನ್ಮದಿನದ ನಿಮಿತ್ತ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿತು ಚಿತ್ರತಂಡ.
ಕನ್ಮಡದ ಸಿನಿಮಾ ಪ್ರೇಕ್ಷಕರ ಮುಂದೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ !
ಹಾಸನ ಮೂಲದ ಮೈಲಾರಿ ಗ್ರೂಪ್ ಆಫ್ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಸಂಸ್ಥೆಯ ಮಾಲೀಕರಾದ ಮೈಲಾರಿ ಮಹೇಶ್ ಸಿನಿಮಾ ನಿರ್ಮಾಣಕ್ಕೆ ವಿಶೇಷ ಆಸಕ್ತಿ ತೋರಿದ್ದಾರೆ. ಶೀಘ್ರದಲ್ಲೇ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗುವುದಾಗಿ ಅನೌನ್ಸ್ ಮಾಡಿದ್ದಾರೆ. ಕನ್ನಡ ಚಿತ್ರ ರಂಗಕ್ಕೆ ಇದು ಮೈಲಾರಿ ಗ್ರೂಪ್ ಆಫ್ ಸಂಸ್ಥೆಯ ಮೊದಲ ಕೊಡುಗೆ.
ಕನ್ನಡದ ಹೆಸರಾಂತ ನಿರ್ದೇಶಕ, ಕಲಾ ಸಾಮ್ರಾಟ್ ಎಸ್.ನಾರಾಯಣ್ ಬಳಿ ಕೆಲಸ ಯುವ ನಿರ್ದೇಶಕ ರಾಜ ಚೈತನ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿ ದ್ದಾರೆ.ಈಗಾಗಲೇ ಅವರು, ‘ಅಮೃತ ವರ್ಷಿಣಿ’, ‘ಕೃಷ್ಣ ರುಕ್ಕು’, ‘ಲಕ್ಷ್ಮೀ ಬಾರಮ್ಮ’, ‘ಜೊತೆಜೊತೆಯಲಿ’ ಧಾರಾವಾಗಳಿಗೆ ಸಹ ನಿರ್ದೇಶನ ಮಾಡಿರುವ ಅನುಭವಿ.ಆ ಮೂಲಕವೇ ಈಗ ತಾವೇ ಕಥೆ, ಚಿತ್ರಕಥೆ ಬರೆದು, ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ ಗುರುರಾಜ್ ಎಂ ದೇಸಾಯಿ ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ತಾರಾಗಣದ ವಿವರ ಲಭ್ಯವಾಗಿಲ್ಲ. ಆದರೆ ಚಿತ್ರ ತಂಡ ಅನುಭವಿ ತಂತ್ರಜ್ಞರನ್ನೇ ಆಯ್ಕೆ ಮಾಡಿಕೊಂಡಿದೆ.
ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ರಾಜ ಚೈತನ್ಯ ಹಾಡುಗಳನ್ನು ಬರೆಯುತ್ತಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರಂತೆ. ಹಾಗೆಯೇ, ಜಾನಿ, ಮುರಳಿ, ಚಿನ್ನಿಪ್ರಕಾಶ್, ಇಮ್ರಾನ್ ಸರ್ದಾರಿಯ ನೃತ್ಯ ನಿರ್ದೇಶನ, ರವಿವರ್ಮ, ವಿನೋದ್ ಹಾಗೂ ವಿಕ್ರಂ ಮೋರ್ (ಕೆ ಜಿ ಎಫ್) ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.ಮಹೇಶ್ ತಲಕಾಡು ಛಾಯಾಗ್ರಾಹಕರಾಗಿ, ಜೋನಿ ಹರ್ಷ ಸಂಕಲನಕಾ ರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹದೊಂದು ದೊಡ್ಡ ತಂಡವನ್ನೇ ಸೃಷ್ಟಿಸಿಕೊಂಡಿರುವ ಮೈಲಾರಿಗ್ರೂಪ್
ಬಿಗ್ ಬಜೆಟ್ ಸಿನಿಮಾ ಮಾಡುವುದು ಗ್ಯಾರಂಟಿ ಆಗಿದೆ. ಹಾಗೆಯೇ ದೊಡ್ಡ ಸ್ಟಾರ್ ಈಸಿನಿಮಾದಲ್ಲಿರುವುದು ಕೂಡ ಗ್ಯಾರಂಟಿಯಂತೆ.ಅದೆಲ್ಲವೂ ಮುಂದೆ ರಿವೀಲ್ ಆಗಲಿದೆಯಂತೆ.
80 ರ ದಶಕದ ಕತೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಮಧು ವೈ.ಜಿ. ಹಳ್ಳಿ
ಬಣ್ಣದ ಲೋಕದಲ್ಲಿ ‘ಚಂದಮಾಮ’ ಅಂದ್ರೆ ಕ್ರೇಜಿಸ್ಟಾರ್ ರವಿಚಂದ್ರನ್ ನೆನಪಾಗ್ತಾರೆ. ಯಾಕಂದ್ರೆ, ಹಿಂದೊಮ್ಮೆ ಅವರು ಅದೇ ಹೆಸರಲ್ಲೊಂದು ಸಿನಿಮಾ ಶುರು ಮಾಡಿದ್ದರು. ಅದ್ಯಾಕೋ ಅದು ಅರ್ಧದಲ್ಲೆ ನಿಂತು ಹೊಯಿತು . ಆದರೇನಂತೆ, ಈಗ ಹೊಸಬರ ತಂಡವೊಂದು ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರಿಗೆ ‘ಚಂದ ಮಾಮ’ ನನ್ನು ತೋರಿಸಲು ಕೈ ಹಾಕಿದೆ. ಅವರ ಪ್ರಯತ್ನ ವೇ ‘ಚಂದಮಾಮ’ ಚಿತ್ರ.
ಮಧು ವೈ.ಜಿ. ಹಳ್ಳಿ ನಿರ್ದೇಶನದ ಚಿತ್ರವಿದು. ಶ್ರೀ ಸಾಯಿ ಭೂಮಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಯೋಚಿತಾ ಫಿಲ್ಮ್ ಪ್ರೊಡಕ್ಷನ್ ಸಾತ್ ನೀಡಿದೆ. ಚಿಕ್ಕಮಗಳೂರು ಮೂಲದ ತ್ರಿವೇಣಿ ಗಾಂಧಿ, ಹುಬ್ಬಳ್ಳಿ ಯ ಅಸ್ಲಾಂ ಖಾನ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸತೀಶ್ ( ಎಚ್ ಎಮ್ ಮಾರ್ಕೆಟ್) ಬಂಡವಾಳ ಹಾಕಿ ‘ಚಂದ ಮಾಮ’ ನನ್ನು ಸೃಷ್ಟಿಸುತ್ತಿದ್ದಾರೆ. ಸದ್ದಿಲ್ಲದೆ ಸೆಟ್ಟೇರಿರುವ ಈ ಚಿತ್ರಕ್ಕೀಗ ಅರ್ಧದಷ್ಟು ಚಿತ್ರೀಕರಣವೂ ಮುಗಿದಿದೆ. ಇನ್ನೇನೂ ಪ್ರಚಾರ ಆರಂಭಿಸುವ ಅದರ ಮೊದಲ ಹಂತವಾಗಿ ‘ ಸಂಕ್ರಾಂತಿ ‘ ಹಬ್ಬಕ್ಕೆ ಚಿತ್ರ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದೆ. ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಹಾಗೂ ನಟ ಮನು ರಂಜನ್ ಪೋಸ್ಟರ್ ಲಾಂಚ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ಚಿತ್ರ ತಂಡ ಪೋಸ್ಟರ್ ಲಾಂಚ್ ಗೆ ನಟ ರವಿಚಂದ್ರನ್ ಅವರ ಪುತ್ರನನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ , ನಿರ್ದೇಶಕ ಮಧು ವೈ .ಜಿ ಹಳ್ಳಿ ಅವರು ರವಿಚಂದ್ರನ್ ಅವರ ಪಕ್ಕಾ ಆಭಿಮಾನಿ ಆಗಿದ್ದು. ಅದೇ ಕಾರಣ ಕ್ಕಾಗಿಯೇ ಚಂದ ಮಾಮ ಸಿನಿಮಾ ಕೂಡ ಶುರು ವಾಗಿದ್ದಂತೆ. ಹಾಗಂತ ಹೇಳುತ್ತಾರೆ ನಿರ್ದೇಶಕ ಮಧು. ‘ ನನಗಿದು ಚೊಚ್ಚಲ ಸಿನಿಮಾ. ಆದರೂ ಚಿತ್ರೋದ್ಯ ಮದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ ಅನುಭವ ಇದೆ. ಆ ಮೂಲಕವೇ ಸ್ವತಂತ್ರ ವಾಗಿ ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದಾಗ ನನಗೆ ಹೊಳೆದ ಮೊದಲ ಶೀರ್ಷಿಕೆ ಯೇ ಚಂದ ಮಾಮ.ಅದಕ್ಕೆ ಕಾರಣ ರವಿ ಚಂದ್ರನ್ ಸರ್. ಅವರು ಶುರು ಮಾಡಿ, ಅರ್ಧದಲ್ಲೇ ಕೈ ಬಿಟ್ಟಿದ್ದ ಪ್ರಾಜೆಕ್ಟ್ ಅದು.ಅದನ್ನೇ ಮುಂದುವರೆಸೋಣ ಅಂತ ಅದೇ ಹೆಸರಲ್ಲಿ ಈ ಸಿನಿಮಾ ಮಾಡುತ್ತಿದ್ದೇನೆ’ ಎನ್ಜುತ್ತಾರೆ ನಿರ್ದೇಶಕ ಮಧು ವೈ.ಜಿ. ಹಳ್ಳಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನವರಾದ ಮಧು ವೈ. ಜಿ. ಹಳ್ಳಿ ಕಿರುತೆರ ಹಾಗೂ ಹಿರಿತೆರೆ ಎರಡರಲ್ಲೂ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಕೆಲಸ ಮಾಡಿದ್ದಾರಂತೆ. ಧಾರಾವಾಹಿ ನಿರ್ದೇಶನ ಮಾಡಿದ ಅನುಭವ ಕೂಡ ಇದೆಯಂತೆ. ಅದೇ ಅನುಭವದಲ್ಲಿ ತಾವೇ ಒಂದುಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಸಿನಿಮಾ ನಿರ್ದೇಶನಕ್ಕೆ ಮುಂದಾದಾಗ, ನಿರ್ಮಾಪಕರಾದ ತ್ರಿವೇಣಿ ಗಾಂಧಿ, ಅಸ್ಲಾಂ ಖಾನ್ ಹಾಗೂ ಸತೀಶ್ ಬೆಂಬಲದಿಂದ ಸಿನಿಮಾ ಸೆಟ್ಟೇರಿ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ ಆಂತಾರೆ ನಿರ್ದೇಶಕ ಮಧು.
ನಿರ್ಮಾಪಕರು, ನಿರ್ದೇಶಕರ ಹಾಗೆಯೇ ಚಿತ್ರದ ತಾರಾಗಣದಲ್ಲೂ ಬಹುತೇಕ ಹೊಸಬರೇ ಇದ್ದಾರೆ. ರಂಗಭೂಮಿ ಕಲಾವಿದರಾದ ಹುಬ್ಬಳ್ಳಿ ಹುಡುಗ ಆಕಾಶ್ ನಾಯಕರಾಗಿ ಕಾಣಿಸಿಕೊಂಡರೆ, ಮಲಯಾಳಂ ನಟಿ ದೀಪಾ ನಾಯರ್ ಈ ಚಿತ್ರದ ನಾಯಕಿ. ಅವರೊಂದಿಗೆ ಪತ್ರಕರ್ತ ಅಪ್ಜಲ್ ಸೇರಿದಂತೆ ದೊಡ್ಡ ತಂಡವೇ ಚಿತ್ರದಲ್ಲಿದೆ. ಹಾಗೆಯೇ ಶ್ರೀಪುರಾಣಿಕ್ ಕುಂದಾಪುರ ಛಾಯಾಗ್ರಹಣ, ಕೀರ್ತಿ ಚಂದ್ರ ವರ್ಮ ಅವರ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಸುತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರ ತಂಡ, ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣ ಶುರು ಮಾಡಲಿದೆಯಂತೆ.