Categories
ಸಿನಿ ಸುದ್ದಿ

ವುಲ್ಫ್ ಶೂಟಿಂಗ್ ಮುಕ್ತಾಯ: ಇದು ಪ್ರಭುದೇವ ಚಿತ್ರ…

ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಬ್ಯಾನರ್ ನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್(ಎಂ.ಎಲ್.ಸಿ) ನಿರ್ಮಿಸಿರುವ, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ನಾಯಕರಾಗಿ ನಟಿಸಿರುವ “wolf” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪಾಂಡಿಚೇರಿ, ಚೆನೈ, ಬೆಂಗಳೂರು, ಅಂಡಮಾನ್, ನಿಕೋಬಾರ್ ಮುಂತಾದ ಕಡೆ 65 ದಿನಗಳ ಚಿತ್ರೀಕರಣ ನಡೆದಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿನು ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮೀ ರೈ, ಅನಸೂಯ(ಪುಷ್ಪ ಖ್ಯಾತಿ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅಂಬರೀಶ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅರುಳ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. ಲಾರೆನ್ಸ್ ಕಿಶೋರ್ ಸಂಕಲನ, ಪ್ರದೀಪ್ ದಿನೇಶ್ ಸಾಹಸ ನಿರ್ದೇಶನ, ಮಣಿ ಮೌಳಿ ಕಲಾ ನಿರ್ದೇಶನ ಹಾಗೂ ಗಣೇಶ್, ಶ್ರೀಧರ್, ಭೂಪತಿ ರಾಜ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಪ್ತಸಾದ್ ನಿರ್ಮಾಣ ಮೇಲ್ವಿಚಾರಣೆ ಹಾಗೂ ಶಂಕರ್ ಲಿಂಗಂ, ಮೈಸೂರು ಸುರೇಶ್ ನಿರ್ಮಾಣ ನಿರ್ವಹಣೆ ಇದೆ.

Categories
ಸಿನಿ ಸುದ್ದಿ

ಪದವಿ ಪೂರ್ವ ಹುಡುಗರಿಗೆ ಅಭಿಷೇಕ್ ಸಾಥ್: ಟ್ರೇಲರ್ ರಿಲೀಸ್…

ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿರುವ ಹೊಸ ಪ್ರತಿಭೆಗಳ “ಪದವಿಪೂರ್ವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ “ಪದವಿಪೂರ್ವ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಉತ್ಸಾಹ ನೋಡಿದರೆ ಖುಷಿಯಾಗುತ್ತಿದೆ. ಟ್ರೇಲರ್ ಚೆನ್ನಾಗಿದೆ. ಅರ್ಜುನ್ ಜನ್ಯ‌ ಅವರ ಸಂಗೀತ ನಿರ್ದೇಶನ ಹಾಗೂ ‌ರೀರೆಕಾರ್ಡಿಂಗ್ ಅದ್ಭುತವಾಗಿದೆ. ಎಲ್ಲಾ ಕಲಾವಿದರ ಅಭಿನಯ ಅಮೋಘವಾಗಿದೆ. ನಿರ್ದೇಶಕ ಹರಿಪ್ರಸಾದ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದರು ಅಭಿಷೇಕ್ ಅಂಬರೀಶ್.

ಈ ಚಿತ್ರದ ಟ್ರೇಲರ್ ಅಭಿಷೇಕ್ ಅವರಿಂದ ಬಿಡುಗಡೆ ಮಾಡಿಸಬೇಕೆಂಬುದು ನಾನು ಸೇರಿದಂತೆ ನಮ್ಮ ಚಿತ್ರತಂಡದ ಆಸೆಯಾಗಿತ್ತು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಅಭಿಷೇಕ್ ಅವರಿಗೆ ಧನ್ಯವಾದ. ಈ ಹೊಸತಂಡ, ಹೊಸತರಹದ ಪ್ರಮೋಷನ್ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಡಿಸೆಂಬರ್ 30 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು ಯೋಗರಾಜ್ ಭಟ್.

ಅಭಿಷೇಕ್ ಅಂಬರೀಶ್ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದು ತುಂಬಾ ಸಂತೋಷವಾಗಿದೆ. ಪ್ರಮೋಷನ್ ಗಾಗಿ ರಾಜ್ಯದ ಬೇರೆಬೇರೆ ಊರುಗಳಿಗೆ ಹೋಗುತ್ತಿದ್ದೇವೆ. ಹೋದ ಕಡೆ ಎಲ್ಲಾ ನಮ್ಮನ್ನು ಗುರುತಿಸಿ, ಚಿತ್ರದ ಹಾಡುಗಳು ಹಾಗೂ ಟೀಸರ್ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಎಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಾಯಕ ಪೃಥ್ವಿ ಶಾಮನೂರು.

ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಹೇಳಿದ್ದೇನೆ. ಇದೇ ಮೂವತ್ತರಂದು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ. ನಮ್ಮ ಚಿತ್ರವನ್ನು ಎಲ್ಲರು ನೋಡಿ ಎಂದರು ನಿರ್ದೇಶಕ ಹರಿಪ್ರಸಾದ್ ಜಯಣ್ಣ.

ನಾಯಕಿ ಅಂಜಲಿ ಅನೀಶ್, ಯಶಾ ಶಿವಕುಮಾರ್, ಛಾಯಾಗ್ರಾಹಕ ಸಂತೋಷ ರೈ ಪಾತಾಜೆ, ನೃತ್ಯ ನಿರ್ದೇಶಕ ಧನಂಜಯ್ ಹಾಗೂ ನಿರ್ಮಾಪಕ ರವಿ ಶಾಮನೂರು “ಪದವಿಪೂರ್ವ” ದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಕ್ಲೈಮ್ಯಾಕ್ಸ್ ಹಂತದಲ್ಲಿ ಅನ್ ಲಾಕ್ ರಾಘವ!

ಈಗಾಗಲೇ ತನ್ನ ವಿಭಿನ್ನವಾದ ಟೈಟಲ್ ನಿಂದ ಗಮನ ಸೆಳೆದಿರುವ ‘ಅನ್ ಲಾಕ್ ರಾಘವ’ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಜೋರಾಗಿ ಸಾಗಿದೆ. ಸತ್ಯ ಮತ್ತು ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಕ್ಲೈಮಾಕ್ಸ್ ಹಾಸ್ಯ ಲೇಪನದೊಂದಿಗೆ ಸಾಕಷ್ಟು ಅಚ್ಚರಿ ಮೂಡಿಸಲಿದೆ ಎನ್ನುತ್ತಿದೆ ಚಿತ್ರತಂಡ.

ದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮಿಲಿಂದ್ ನಾಯಕ ನಟನಾಗಿ ನಟಿಸುತ್ತಿದ್ದು, ನಾಯಕಿಯಾಗಿ ರೇಚಲ್ ಡೇವಿಡ್ ನಟಿಸುತ್ತಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಾಯಕ, ನಾಯಕಿ ಒಳಗೊಂಡಂತೆ ಸಾಧುಕೋಕಿಲ, ಸುಂದರ್, ವೀಣಾ ಸುಂದರ್, ಶೋಭರಾಜ್, ಅವಿನಾಶ್ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದು, ಇದೇ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ಅನ್ ಲಾಕ್ ರಾಘವ ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡಿ “ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಎಂಟು ದಿನಗಳ ಕಾಲ ಕ್ಲೈಮಾಕ್ಸ್ ಚಿತ್ರೀಕರಣ ಯೋಜಿಸಿದ್ದು, ಇನ್ನು ಮೂರು ದಿನದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿಯಲಿದೆ. ಎರಡು ಸಾಂಗ್ ಹಾಗೂ ಟಾಕಿ ಪೋಷನ್ ಮುಗಿಸಿದ್ರೆ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗುತ್ತದೆ. ಒಟ್ಟು 50 ರಿಂದ 55 ದಿನ ಚಿತ್ರೀಕರಣ ಮಾಡಿದ್ದೇವೆ. ಎಲ್ಲಾ ಕಲಾವಿದರ ಕಾಂಬಿನೇಶನ್ ನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಿಸುತ್ತಿದ್ದೇವೆ. ವಿನೋದ್ ಮಾಸ್ಟರ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ರೀತಿಯ ಪ್ರಯತ್ನ ಸಿನಿಮಾದಲ್ಲಿದೆ. ಆಕ್ಷನ್ ಜೊತೆಗೆ ಹ್ಯೂಮರ್ ಕೂಡ ಇಡೀ ಸಿನಿಮಾದಲ್ಲಿ ಜೊತೆಯಾಗಿ ಟ್ರಾವೆಲ್ ಆಗಲಿದೆ. ಸಿನಿಮಾಗೆ ಏನೂ ಕೊರತೆ ಆಗದ ಹಾಗೆ ನಿರ್ಮಾಪಕರು ನೋಡಿಕೊಂಡಿದ್ದಾರೆ” ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಚಿತ್ರದ ನಿರ್ಮಾಪಕ ಮಂಜುನಾಥ್.ಡಿ ಮಾತನಾಡಿ “ಒಳ್ಳೆಯ ಕಂಟೆಂಟ್ ಕೊಟ್ರೆ ಖಂಡಿತಾ ಜನ ಸಿನಿಮಾವನ್ನು ನೋಡ್ತಾರೆ, ಗೆಲ್ಲಿಸ್ತಾರೆ. ಈ ಸಿನಿಮಾದ ಕಂಟೆಂಟ್ ತುಂಬಾ ಚೆನ್ನಾಗಿದೆ, ಒಳ್ಳೆಯ ಕಲಾವಿದರು ಇದ್ದಾರೆ. ಗೆಲ್ತೀವಿ ಎನ್ನುವ ಕಾನ್ಫಿಡೆನ್ಸ್ ನಿಂದ ಹೆಜ್ಜೆ ಇಟ್ಟಿದ್ದೇವೆ. ಏಪ್ರಿಲ್ ನಂತರದಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಡಿ.ಸತ್ಯಪ್ರಕಾಶ್ ಅವರು ಮಾತನಾಡಿ “ಖಂಡಿತವಾಗಿಯೂ, ಇಡೀ ಸಿನಿಮಾವನ್ನು ನಗ್ತಾ ನಗ್ತಾ ಸಿನಿಮಾ ನೋಡ್ತೀರ. ಸಬ್ಜೆಕ್ಟ್ ಬಹಳ ವಿಭಿನ್ನವಾಗಿದೆ. ದೊಡ್ಡ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಸಾಧುಕೋಕಿಲ ಸರ್ ಪೂರ್ತಿ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ. ಇನ್ನು ಸುಂದರ್ ಸರ್ ಬಹಳ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಅವರ ಪಾತ್ರದ ವೈಶಿಷ್ಟ್ಯವನ್ನು ಫಿಲಂ ನೋಡಿನೇ ತಿಳ್ಕೋಬೇಕು. ವಿಶೇಷ ಅಂದರೆ ಎಲ್ಲ ಪಾತ್ರಗಳಿಗೂ ಅದರದ್ದೇ ಆದ ವಿಶೇಷತೆಗಳಿವೆ. ಇಡೀ ಫ್ಯಾಮಿಲಿ ಒಟ್ಟಾಗಿ ಕುಳಿತು ನೋಡುವ ಸಿನಿಮಾವಿದು. ಒಂದೊಳ್ಳೆ ಮೆಸೇಜ್ ಚಿತ್ರದಲ್ಲಿದೆ. ಇನ್ನು ನನ್ನ ದೀಪಕ್ ಅವರ ಸ್ನೇಹ 15 ವರ್ಷದ್ದು. ನಾನು ಕಥೆಯಲ್ಲಿ ಬರೆದಿರೋ ಹ್ಯೂಮರನ್ನು ದೀಪಕ್ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಇಡೀ ಸಿನಿಮಾ ಕಟ್ಟುವಾಗ ನಮ್ಮ ಜೊತೆ ಸಪೋರ್ಟಿವ್ ಆಗಿ ನಿಂತು ನಿರ್ಮಾಪಕರಾದ ಮಂಜುನಾಥ್ ಅವರು ಸಹಕಾರ ನೀಡಿದ್ದಾರೆ” ಎಂದು ಮಾಹಿತಿ ಹಂಚಿಕೊಂಡರು.

ನಾಯಕ ನಟ ಮಿಲಿಂದ್ ಮಾತನಾಡಿ “ಒಬ್ಬ ಹೀರೋ ಆಗಿ ನನಗೆ ಬಹಳ ಮುಖ್ಯವಾದ ಸಿನಿಮಾವಿದು. ಅದ್ಭುತವಾದ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ಈ ಸಿನಿಮಾದ ಶಕ್ತಿ ಎಂದರೆ ಸತ್ಯ ಸರ್ ಬರವಣಿಗೆ. ಕಮರ್ಶಿಯಲ್ ಸಿನಿಮಾವಾದ್ರು ಕೂಡ ಜಾಸ್ತಿ ಹೊಡೆದಾಟ ಬಡಿದಾಟಕ್ಕೆ ಹೋಗಿಲ್ಲ. ಬದಲಾಗಿ ರೋಮ್ಯಾನ್ಸ್ ಮತ್ತು ಕಾಮಿಡಿ ಜಾನರ್ ಸಿನಿಮಾವಿದು ಅದಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಮೊದಲ ಸಿನಿಮಾದಲ್ಲಿ ಪೆಟ್ಟು ತಿಂದಿದ್ದರಿಂದ, ಈ ಸಿನಿಮಾ ಮಾಡುವಾಗ ಒಂದು ಫಿಯರ್ ಇತ್ತು. ನಿರ್ದೇಶಕ ದೀಪಕ್ ಸರ್ ಅದನ್ನೆಲ್ಲ ಹೋಗಲಾಡಿಸಿ, ಸಾಕಷ್ಟು ತಿದ್ದಿದ್ದಾರೆ. ನಾನು ಈ ಸಿನಿಮಾ ಮಾಡೋದಕ್ಕೆ ಮುಖ್ಯ ಕಾರಣ ಅಂದ್ರೆ ನಮ್ಮ ತಂದೆ. ಅವರಿಗೆ ಸಿನಿಮಾ ಅಂದ್ರೆ ಪ್ಯಾಶನ್, ನಾನು ನಟನಾಗಬೇಕು ಎಂಬುದು ಅವರ ಆಸೆ. ಈ ಸಿನಿಮಾ ಜರ್ನಿಯಲ್ಲಿ ಪ್ರತಿ ಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಈ ಸಿನಿಮಾ ಗೆಲ್ಲುತ್ತೆ ಎನ್ನುವ ಕಾನ್ಫಿಡೆನ್ಸ್ ಇದೆ“ ಎಂದರು.

ನಾಯಕ ನಟಿ, ರೇಚಲ್ ಡೇವಿಡ್ ಮಾತನಾಡಿ “ವಿಶೇಷವಾದಂತಹ ಪಾತ್ರ ನನ್ನದು. ಈಗ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಇಲ್ಲಿವರೆಗೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಿರಿಯ ನಟರೊಂದಿಗೆ ನಟಿಸಿದ್ದು ಒಳ್ಳೆ ಅನುಭವ ನೀಡಿದೆ. ಚಿತ್ರದಲ್ಲಿ ಜಾನಕಿ ಹೆಸರಲ್ಲಿ ಆರ್ಕಿಯೋಲಜಿಸ್ಟ್ ಪಾತ್ರ ನಿರ್ವಹಿಸಿದ್ದೇನೆ” ಎಂದು ತಿಳಿಸಿದರು.

ಹಿರಿಯ ನಟ ಅವಿನಾಶ್ ಮಾತನಾಡಿ “ಇದು ಬಹಳ ಒಳ್ಳೆಯ ಕಥಾಹಂದರ ಇರುವ ಸಿನಿಮಾ. ಹಲವು ಕಲಾವಿದರು ಈ ಚಿತ್ರದಲ್ಲಿದ್ದೇವೆ. ಬೇರೆ ರೀತಿಯ ಕಥೆ ಮಾಡಿಕೊಂಡಿದ್ದಾರೆ. ಥ್ರಿಲ್ ಇದೆ, ಹ್ಯೂಮರ್ ಇದೆ, ವಿಡಂಬನಾತ್ಮಕವಾಗಿ ಸಿನಿಮಾ ಹೋಗುತ್ತೆ. ನಿರ್ದೇಶಕ ದೀಪಕ್ ಸಿನಿಮಾವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ನನಗೆ ಒಳ್ಳೆಯ ಅನುಭವ ನೀಡಿದೆ” ಎಂದು ತಿಳಿಸಿದರು.

‘ಅನ್ ಲಾಕ್ ರಾಘವ’ ಚಿತ್ರವನ್ನು ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್. ಡಿ, ಡಿ ಸತ್ಯಪ್ರಕಾಶ್ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ. ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಸಾಧುಕೋಕಿಲ, ಅವಿನಾಶ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Categories
ಸಿನಿ ಸುದ್ದಿ

ಬೆಂಗಳೂರು ವಿಶ್ವವಿದ್ಯಾಲಯ ಪಠ್ಯದಲ್ಲಿ ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಅಪ್ಪು ಅಭಿಮಾನಿ ಸಂಘಗಳು ಸರಕಾರಕ್ಕೂ ಪತ್ರ ಬರೆದಿದ್ದವು. ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದವು. ಅಭಿಮಾನಿಗಳಿಗೆ ಸಿಹಿ ಸುದ್ದಿ ಅಂದರೆ, ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಬಿಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ ‘ವಾಣಿಜ್ಯ ಕನ್ನಡ 3’ ನಲ್ಲಿ ಪುನೀತ್ ಅವರ ಜೀವನದ ಆಯ್ದ ಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಂಡಿದೆ.

ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ, ಸಾವಣ್ಣ ಪ್ರಕಾಶನ ಹೊರ ತಂದಿರುವ ‘ನೀನೇ ರಾಜಕುಮಾರ’ ಕೃತಿಯ ಒಂದು ಅಧ್ಯಾಯವಾದ ‘ಲೋಹಿತ್ ಎಂಬ ಮರಿಮುದ್ದ’ ಭಾಗವನ್ನು ಪಠ್ಯದಲ್ಲಿ ಬಳಸಿಕೊಂಡಿದೆ ಬೆಂಗಳೂರು ವಿಶ್ವವಿದ್ಯಾಲಯ. ಡಾ.ಮುನಿಯಪ್ಪ ಈ ಪಠ್ಯಪುಸ್ತಕದ ಪ್ರಧಾನ ಸಂಪಾದಕರಾಗಿದ್ದಾರೆ.

ಡಾ.ಅಮರೇಂದ್ರ ಶೆಟ್ಟಿ ಆರ್, ಡಾ.ಕ.ನಿಂ. ಹೊಯ್ಸಳಾದಿತ್ಯ, ಡಾ.ಶಿವರಾಜ ಬಿ.ಇ ಹಾಗೂ ಡಾ.ರಘುನಂದನ್ ಬಿ.ಆರ್ ಅವರು ಪಠ್ಯದ ಸಂಪಾದಕರಾಗಿದ್ದಾರೆ. ಈ ವರ್ಷದ ಬಿ.ಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್ ಅವರ ಬಾಲ್ಯವನ್ನು ಅಳವಡಿಸಲಾಗಿದೆ.

ಮೊನ್ನೆಯಷ್ಟೇ ‘ನೀನೇ ರಾಜಕುಮಾರ’ ಪುಸ್ತಕದ ನಾಲ್ಕನೇ ಆವೃತ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಈ ವರ್ಷದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಮಾರಾಟ ಕಂಡ ಬಯೋಗ್ರಫಿ ಎನ್ನುವ ದಾಖಲೆಗೂ ಈ ಪುಸ್ತಕ ಪಾತ್ರವಾಗಿತ್ತು. ಸತತವಾಗಿ ಹಲವು ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್ ಲೈನ್ ನಲ್ಲಿ ಟಾಪ್ ಪಟ್ಟಿಯಲ್ಲಿತ್ತು. ಇದೀಗ ಪಠ್ಯಕ್ಕೂ ಕೃತಿಯ ಭಾಗವನ್ನು ಅಳವಡಿಸಿಕೊಳ್ಳಲಾಗಿದೆ.

Categories
ಸಿನಿ ಸುದ್ದಿ

ರಾಜೀವ್ ಸಿನಿಮಾಗೆ ಉಸಿರಾದ ಕಿಚ್ಚ! ಉಸಿರೇ ಉಸಿರೇ ಚಿತ್ರಕ್ಕೆ ಕಿಚ್ಚ ಪ್ರಮುಖ ಪಾತ್ರದಲ್ಲಿ‌ ಎಂಟ್ರಿ

ಉಸಿರೇ ಉಸಿರೇ ನೀ ಉಸಿರ ಕೊಲ್ಲಬೇಡ… ಇದು ಕಿಚ್ಚ ಸುದೀಪ್ ಸಿನಿಮಾದ ಫೇಮಸ್ ಹಾಡು. ಈ ಹಾಡು ಕೇಳದವರೇ ಇಲ್ಲ. ಈಗ ಈ‌ಹಾಡಿಗೂ ಸಂಬಂಧ ಹೇಗಿದೆಯೋ ಈಗ ಹೇಳುತ್ತಿರುವ ಹೊಸ ಸಿನಿಮಾಗೂ ಸುದೀಪ್ ಅವರಿಗೂ ಸಂಬಂಧವಿದೆ.

ಹೌದು, ಹೊಸ ಸಿನಿಮಾಗೆ ಸುದೀಪ್ ಸಾಥ್ ಕೊಡುತ್ತಿದ್ದಾರೆ. ಅದು ಅವರ ಆಪ್ತ ರಾಜೀವ್ ಸಿನಿಮಾ‌ಮೂಲಕ. ಎನ್. ಗೊಂಬೆ ಬ್ಯಾನರ್ ನಲ್ಕಿ ಪ್ರದೀಪ್ ಯಾದವ್ ನಿರ್ಮಿಸುತಗತಿರು ಉಸಿರೇ ಉಸಿರೇ ಸಿನಿಮಾಗೆ ಸಿ ಎಂ ವಿಜಯ್ ನಿರ್ದೇಶನವಿದೆ. ಈ “ಉಸಿರೇ ಉಸಿರೇ” ಚಿತ್ರಕ್ಕೆ ಕಿಚ್ಚ ಸುದೀಪ್ ಎಂಟ್ರಿಯಾಗುತ್ತಿದ್ದಾರೆ ಅನ್ನೋದೇ ವಿಶೇಷ.


ಸದ್ಯ ಈಗಾಗಲೇ “ಉಸಿರೇ ಉಸಿರೇ” ಚಿತ್ರವು ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಇಷ್ಟರಲ್ಲೇ ಅವರು ಚಿತ್ರತಂಡದಲ್ಲಿ ಪಾಲ್ಗೊಳ್ಳ ಲಿದ್ದಾರೆ. ಈಗಾಗಲೇ ಚಿತ್ರತಂಡ ಅಭಿನಯ ಚಕ್ರವರ್ತಿ ಯನ್ನು ಭೇಟಿಯಾಗಿದ್ದು ಕಿಚ್ಚ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

“ಬಿಗ್ ಬಾಸ್” ಖ್ಯಾತಿಯ ರಾಜೀವ್ ಈ ಚಿತ್ರದ ನಾಯಕರಾಗಿದ್ದು, ಶ್ರೀಜಿತ ನಾಯಕಿಯಾಗಿದ್ದಾರೆ. ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ,ಬ್ರಹ್ಮಾನಂದಮ್,ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಇತರರು ಚಿತ್ರದಲ್ಲಿದ್ದಾರೆ.

ಸಿ.ಎಂ.ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಮನು ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ ವಿವೇಕ್ ಚಕ್ರವರ್ತಿಯ ಸಂಗೀತವಿದೆ.

Categories
ಸಿನಿ ಸುದ್ದಿ

ಇಷ್ಟರಲ್ಲೇ ದೊಡ್ಡಹಟ್ಟಿ ಬೋರೇಗೌಡರು ಸೌಂಡ್ ಮಾಡ್ತಾರೆ! ಈ ಗೌಡ್ರುಗೆ ಪ್ರಶಸ್ತಿಯೂ ಬಂದಿದೆ…

ಇದೊಂದು ವಿಭಿನ್ನ ಕಥೆಯ ಚಿತ್ರ. ಈ ಚಿತ್ರಕ್ಕೆ 2021 ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.

“ತರ್ಲೆವಿಲೇಜ್”, “ಪರಸಂಗ”, ಚಿತ್ರಗಳ ನಿರ್ದೇಶಕ ಕೆ ಎಂ ರಘು ನಿರ್ದೇಶಿಸಿರುವ ” ದೊಡ್ಡಹಟ್ಟಿ ಬೋರೇಗೌಡ” ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ರಾಜರಾಜೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ “ದೊಡ್ಡಹಟ್ಟಿ ಬೋರೇಗೌಡ” ಚಿತ್ರ 2021ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಪ್ರಥಮ ಅತ್ಯುತ್ತಮ ಚಲನಚಿತ್ರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸನ್ಮಾನ್ಯ ರಾಜ್ಯಪಾಲರು ಪ್ರಶಸ್ತಿ ನೀಡಿದ್ದರು.

ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ಹಳ್ಳಿಗಳಲ್ಲಿ ಬಡವರಿಗೆ ಸರ್ಕಾರದಿಂದ ಆಶ್ರಯ ಮನೆ ನೀಡುತ್ತಾರೆ. ಆ ಮಂಜೂರಾದ ಮನೆ ಪಡೆಯಲು ಒಬ್ಬ ವ್ಯಕ್ತಿ ಎಷ್ಟೆಲ್ಲಾ ಕಷ್ಟ ಪಡುತ್ತಾನೆ ಎಂಬುದು ಚಿತ್ರದ ಪ್ರಮುಖ ಕಥಸಾರಾಂಶ.

ಚಿತ್ರದಲ್ಲಿ ಸಂಪೂರ್ಣ ಗ್ರಾಮೀಣ ಪ್ರತಿಭೆಗಳೇ ನಟಿಸಿದ್ದಾರೆ. ಎಲ್ಲಾ ಕಲಾವಿದರಿಗೂ ಮೂರು ತಿಂಗಳ ಅಭಿನಯ ತರಭೇತಿ ನೀಡಿ ನಂತರ ಚಿತ್ರೀಕರಣ ಮಾಡಲಾಯಿತು. ಇದೊಂದು ಹಾಸ್ಯದ ಮೂಲಕ ಜನರನ್ನು ತಲುಪುವ ಉತ್ತಮ ಚಿತ್ರವಾಗಲಿದೆ.


ಈಗ ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ನಂತರ ಚಿತ್ರದ ಮೂರು ಹಾಡುಗಳನ್ನು ಒಂದಾದ ಮೇಲೆ ಒಂದರಂತೆ ಬಿಡುಗಡೆ ಮಾಡುತ್ತೇವೆ. ಆನಂತರ ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ನಿರ್ದೇಶಕ ರಘು ತಿಳಿಸಿದ್ದಾರೆ.

ಶಿವಣ್ಣ ಬೀರುಹುಂಡಿ, ಗೀತಾ, ಸಂಪತ್, ಪ್ರಕಾಶ್ ಶೆಣೈ, ಲಾವಣ್ಯ, ಅಭಿಜ್ವಲ್, ಕಲಾರತಿ ಮಹದೇವ್,
ದಯಾನಂದ್ ಕಟ್ಟೆ ಹೀಗೆ ಹೊಸಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಶಶಿಕುಮಾರ್ ಬಿ ಸಿ ಮತ್ತು ಕೆ ಎಂ ಲೋಕೇಶ್ ಬಂಡವಾಳ ಹೂಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ ಹಾಗೂ ನಾಗರಾಜ್ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಹುಣಸೂರು ತಾಲೂಕಿನ ಗದ್ದಿಗೆಯಲ್ಲಿ ಹಾಗು ಎಚ್.ಡಿ. ಕೋಟೆ ತಾಲೂಕಿನಲ್ಲಿ ಚಿತ್ರೀಕರಣ ನಡೆದಿದೆ,

Categories
ಸಿನಿ ಸುದ್ದಿ

ಚಂದನ್ ಕೈ ಹಿಡಿದ ಸಂಜನಾ ಆನಂದ್! ಇದು ಸೂತ್ರಧಾರಿ ವಿಷಯ ಕಣ್ರೀ…


ಕನ್ನಡದಲ್ಲಿ ಚಂದನ್ ಶೆಟ್ಟಿ ಅಂದ್ರೆ ಎಲ್ಲರಿಗೂ ಗೊತ್ತು. ಚಂದನ್ ಶೆಟ್ಟಿ ಅವರ ಹಾಡುಗಳನ್ನ ಕೇಳದ ಜನರಿಲ್ಲಾ, ಪಡ್ಡೆ ಹುಡುಗರ ಮತ್ತು ಹುಡುಗಿಯರ ಮನಗೆದ್ದ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಹಾಗೂ ಮೈ ಮೂವಿ ಬಜಾರ್ ಖ್ಯಾತಿ ನವರಸನ್ ಅವರ ನಿರ್ಮಾಣದ ಚಿತ್ರ “ಸೂತ್ರಧಾರಿ”. ಈಗಾಗಲೇ ಶೇ. 90ರಷ್ಟು ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ.

ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಇನೋವೇಟೀವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ಸೆಟ್ಟೇರಿದೆ. ಈ ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗ್ ಆಗಿದ್ದು ಸಂಗೀತ ನಿರ್ದೇಶಕ ಮತ್ತು ಗಾಯಕನಾಗಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಈ ಹಾಡಿನಲ್ಲಿ ಮೊದಲಬಾರಿಗೆ ಚಂದನ್ ಶೆಟ್ಟಿ ಜೋಡಿಯಾಗಿ ಸಲಗ ಖ್ಯಾತಿಯ ಸಂಜನಾ ಆನಂದ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಾಡು ಇದೇ ಡಿಸೆಂಬರ್ 27ರಂದು ಬೆಳಗ್ಗೆ 10.35ಕ್ಕೆ ಬಿಡುಗಡೆಯಾಗಲಿದೆಎಂಬುದು ವಿಶೇಷ.
ಈ ಹಾಡು ಹೊಸ ವರ್ಷದ ಸಂಭ್ರಮಾಚರಣೆಗೆ ವಿಶೇಷತೆಗಳಲ್ಲೊಂದು.

Categories
ಸಿನಿ ಸುದ್ದಿ

ಶಿವಣ್ಣ ಹೇಳಿದ್ದೇ ವೇದ ವಾಕ್ಯ! ವಿಭಿನ್ನ ಪಾತ್ರದಲ್ಲಿ ಸೆಂಚುರಿ ಸ್ಟಾರ್: ಇದು ಹ್ಯಾಟ್ರಿಕ್ ಹೀರೋನ 125 ನೇ ಸಿನಿಮಾ…

ಗಿತಾ ಶಿವರಾಜಕುಮಾರ್ ಹಾಗೂ ಜೀ ಸ್ಟುಡಿಯೋಸ್ ನಿರ್ಮಿಸಿರುವ, ಎ.ಹರ್ಷ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು‌ ನಿರೀಕ್ಷಿತ “ವೇದ” ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. “ವೇದ” ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಿರುವ 125 ನೇ ಚಿತ್ರ .

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ರವಿವರ್ಮ, ವಿಕ್ರಮ್ ಮೋರ್, ಚೇತನ್ ಡಿಸೋಜ ‌‌, ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ. ರವಿ ಸಂತೆಹಕ್ಲು ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ಶಿವರಾಜಕುಮಾರ್ ಜೊತೆ ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ಶ್ವೇತ ಚಂಗಪ್ಪ, ಚೆಲುವರಾಜು, ರಾಘು ಶಿವಮೊಗ್ಗ, ವಿನಯ್ ಬಿದ್ದಪ್ಪ, ಪ್ರಸನ್ನ ಇದ್ದಾರೆ.

ಇವರ ಜೊತೆಯಲ್ಲಿ ಕುರಿ ಪ್ರತಾಪ್, ಲಾಸ್ಯ ನಾಗರಾಜ್, ಭರತ್ ಸಾಗರ್, ಸಂಜೀವ್, ಚಾರ್ವಿ ಗೌಡ, ಜಗಪ್ಪ, ಚೇತನ ಹರಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

Categories
ಸಿನಿ ಸುದ್ದಿ

ಧರ್ಮ ಕೀರ್ತಿರಾಜನ ಹೊಸ ಬುಲೆಟ್! ಸಸ್ಪೆನ್ಸ್ ಸಿನಿಮಾದಲ್ಲಿ ಕ್ಯಾಡ್ ಬರೀಸ್…

ಧರ್ಮ ಕೀರ್ತಿರಾಜ್ ಅವರು ನಾಯಕನಾಗಿ ನಟಿಸುತ್ತಿರುವ “ಬುಲೆಟ್” ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ತುಮಕೂರು ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆದಿದೆ. ಎರಡನೇ ಹಂತದ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಹೆಚ್ ಎಸ್ ಆರ್ ಲೇಔಟ್ ನ ಬಂಗಲೆಯೊಂದರಲ್ಲಿ ಹಿರಿಯ ನಟಿ ಭವ್ಯ, ನಟ ಧರ್ಮ ಕೀರ್ತಿರಾಜ್ ಹಾಗೂ ಬೇಬಿ ಸಿದ್ ಟೈನ್ ಅಭಿನಯಿಸುತ್ತಿರುವ ಹಾಡೊಂದರ ಚಿತ್ರೀಕರಣ ನಡೆಯುತ್ತಿದೆ. ಮೂರು ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಸತ್ಯಜಿತ್‌, “ಬುಲೆಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲೂ ಸತ್ಯಜಿತ್ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಅವರಿಗೆ ಮೊದಲ ಚಿತ್ರ. ಇಸಾಕ್ ಕಾಜಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಧರ್ಮ ಕೀರ್ತಿರಾಜ್ ಅವರಿಗೆ ನಾಯಕಿಯಾಗಿ
ಶ್ರೀಯಾ ಶುಕ್ಲ ಅಭಿನಯಿಸುತ್ತಿದ್ದಾರೆ. ಅಜಿತಾ ಜಾ ದ್ವಿತೀಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟಿ ಭವ್ಯ ಸಹ ಮುಖ್ಯಪಾತ್ರದಲ್ಲಿದ್ದಾರೆ. ಬಾಲಿವುಡ್ ನ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಅಮೀರ್ ಖಾನ್ ಮುಂತಾದವರ ಚಿತ್ರಗಳಲ್ಲಿ ನಟಿಸಿರುವ ಶಿವ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ.


ಇಸಾಕ್ ಕಾಜಿ, ಸತ್ಯಜಿತ್, ಬೇಬಿ ಸಿದ್ ಟೈನ್, ಶಿವ, ರಾಜ ದೀಪ್, ಕಿಲ್ಲರ್ ವೆಂಕಟೇಶ್, ಶೋಭ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣವಿದೆ. ಮೂರು ಹಾಡುಗಳಿದ್ದು ರಾಜ್ ಭಾಸ್ಕರ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ಸಂಕಲನ ಹಾಗೂ ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

“ಬುಲೆಟ್” ಚಿತ್ರದ ಚಿತ್ರೀಕರಣ ಗೋವಾದ ಬೀಚ್ ವೊಂದರಲ್ಲಿ ನಡೆಯುತ್ತಿದ್ದಾಗ ನಾಯಕಿ ಶ್ರೀಯಾ ಶುಕ್ಲ ಅವರ ಕಾಲಿಗೆ ಪೆಟ್ಡು ಬಿತ್ತು. ನಂತರ ನೆರೆಯ ವೈದ್ಯರ ಸಹಕಾರದಿಂದ ಚಿಕಿತ್ಸೆ ನೀಡಲಾಯಿತು. ಬೇಗ ಗುಣಮುಖರಾದರು ಎಂಬ ವಿಷಯವನ್ನು ಸಹ ನಿರ್ದೇಶಕ ಇಸಾಕ್ ಕಾಜಿ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಕಂಬ್ಳಿ ಹುಳ ಹುಡುಗನ ಹೊಸ ಸಿನಿಮಾ: ಕಿರುತೆರೆ ನಿರ್ದೇಶಕ ಹಯವದನ ಆ್ಯಕ್ಷನ್-ಕಟ್….

ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿ ಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳ ನಿರ್ದೇಶಕ ಹಯವದನ ಸಿನಿಮಾ ನಿರ್ದೇಶನಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಕಿರುತೆರೆಯಲ್ಲಿ ಸಕ್ರಿಯರಾಗಿರುವ ಹಯವದನ ಅವರ ಮೊದಲ ಸಿನಿಮಾ ಸ್ಕ್ರಿಪ್ಟ್ ಪೂಜೆ ನಡೆದಿದ್ದು ನಾಯಕ ನಟನಾಗಿ ‘ಕಂಬ್ಳಿಹುಳ’ ಹೀರೋ ಅಂಜನ್ ನಾಗೇಂದ್ರ ಆಯ್ಕೆಯಾಗಿದ್ದಾರೆ.

ಕಿರುತೆರೆಯಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಹಯವದನ ಅವರು ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಸಕ್ರಿಯನಾಗಿದ್ದೇನೆ. ಹಲವು ಸೂಪರ್ ಹಿಟ್ ಸೀರಿಯಲ್ ಗಳನ್ನು ನಿರ್ದೇಶನ ಮಾಡಿದ್ದೇನೆ. ಸಿನಿಮಾ ನಿರ್ದೇಶನ ಇದೇ ಮೊದಲು. ಇದೊಂದು ಸೋಶಿಯಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಜರ್ನಿ ಸಿನಿಮಾ. ಅಪ್ಪ ಮಗನ ಸೆಂಟಿಮೆಂಟ್ ಚಿತ್ರದ ಮೈನ್ ಹೈಲೈಟ್. ಸಾಮಾಜಿಕ ಜಾಲತಾಣಕ್ಕೆ ಅಡಿಕ್ಟ್ ಆಗಿರುವ ಮಕ್ಕಳು ಮತ್ತು ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡಿರುವ ಪೋಷಕರ ನಡುವಿನ ಜನರೇಶನ್ ಗ್ಯಾಪ್ ನ್ನು ಚಿತ್ರದಲ್ಲಿ ಹೇಳಲಿದ್ದೇವೆ.

ಲವ್ ಟ್ರ್ಯಾಕ್ ಚಿತ್ರದಲ್ಲಿದ್ದು, ಯುವಕರಿಗೆ ಸ್ಪಂದಿಸೋ ಸ್ಪೂರ್ತಿಯಾಗೋ ಕಥೆ ಕೂಡ ಇದೆ. ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದ್ದು ಜನವರಿ 15ಕ್ಕೆ ಸಿನಿಮಾ ಸೆಟ್ಟೇರಲಿದೆ. ಅಂಜನ್ ನಾಗೇಂದ್ರ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಲಿದ್ದೇವೆ ಎಂದು ನಿರ್ದೇಶಕ ಹಯವದನ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್, ರವಿಚಂದ್ರನ್ ಸಂಕಲನ ಚಿತ್ರಕ್ಕಿರಲಿದೆ. ನಾಯಕಿ, ತಾರಾಬಳಗದ ಆಯ್ಕೆ ಕೊನೆಯ ಹಂತದಲ್ಲಿದ್ದು ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳೋದಾಗಿ ಹಯವದನ ತಿಳಿಸಿದ್ದಾರೆ.

error: Content is protected !!