Categories
ಸಿನಿ ಸುದ್ದಿ

ಚಿರು ಮತ್ತು ಮೇಘನಾ ಮುದ್ದು ಪುತ್ರನ ಹೆಸರು ಇನ್ಮೇಲೆ ರಾಯನ್ ರಾಜ್ ಸರ್ಜಾ !

ಚಿರು ಅಗಲಿಕೆಯಿಂದ ನೋವಲ್ಲಿದ್ದ ಇಡೀ ನಮ್ಮ ಕುಟುಂಬಕ್ಕೆ ಸ್ವರ್ಗದ ಬಾಗಿಲು ತೆರೆಸಿದ್ದು ನಮ್ಮ ಮರಿ ಚಿರಂಜೀವಿ. ಕತ್ತಲೆ ಕವಿದಿದ್ದ ಬಾಳಿಗೆ ಬೆಳಕಾಗಿದ್ದಾನೆ. ಅಂದ್ಹಾಗೆ, ನಮ್ಮ ಕಂದಮ್ಮನಿಗೆ “ಯುವರಾಜ” ಅಂತ ಹೆಸರಿಡಬೇಕು ಎನ್ನುವುದ ನನ್ನ ಕನಸಾಗಿತ್ತು. ನನ್ನ ಮನದ ಆಸೆಯಂತೆ ನಮ್ಮ ಮುದ್ದು ಮಗನಿಗೆ ಯುವರಾಜನ ಅರ್ಥಕೊಡುವ “ರಾಯನ್‌” ಎಂಬ ಹೆಸರಿಡಲಾಗಿದೆ…

ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ ದಿವಂಗತ ಚಿರಂಜೀವಿ ಸರ್ಜಾ ಹಾಗೂ ಮೇಘನರಾಜ್ ಪುತ್ರನಿಗೆ ಏನೆಂದು ಹೆಸರಿಡಬಹುದು ಎನ್ನುವ ಅಭಿಮಾನಿಗಳ ಕೂತೂಹಲಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಜೂನಿಯರ್ ಚಿರಂಜೀವಿಗೆ ರಾಯನ್ ರಾಜ್ ಸರ್ಜಾ' ಎಂದು ಹೆಸರಿಡಲಾಗಿದೆ. ರಾಯನ್ ಅಂದ್ರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥವಂತೆ. ಹೀಗಾಗಿ, ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬಸ್ಥರು ಖುಷಿಯಿಂದ ಒಪ್ಪಿಕೊಂಡುರಾಯನ್ ರಾಜ್ ಸರ್ಜಾ’ ಹೆಸರನ್ನ ಇಟ್ಟಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಮರಿ ಯುವಸಾಮ್ರಾಟನ ನಾಮಕರಣ ಸಮಾರಂಭ ನೆರವೇರಿದೆ. ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ಮುಂದೆ ನಿಂತುಕೊಂಡು ಸಹೋದರನ ಮಗನ ನೇಮಿಂಗ್ ಸೆರಮನಿಯನ್ನ ಸಖತ್ ಗ್ರ್ಯಾಂಡ್ ಆಗಿಯೇ ಮಾಡಿಕೊಟ್ಟಿದ್ದಾರೆ.

ಅಣ್ಣನ ಮಗನ ತೊಟ್ಟಿಲು ಸಮಾರಂಭಕ್ಕೆ ಧ್ರುವ ಬೆಳ್ಳಿತೊಟ್ಟಿಲು ಗಿಫ್ಟ್ ಮಾಡಿದರು. ಚಿಕ್ಕಪ್ಪ ಧ್ರುವ ಕಡೆಯಿಂದ ಉಡುಗೊರೆಯಾಗಿ ಸಿಕ್ಕಿರುವ ಲಕ್ಷಾಂತರ ಮೌಲ್ಯದ ಬೆಳ್ಳಿ ತೊಟ್ಟಿಲಲ್ಲಿ ಇವತ್ತು ಚಿರು-ಮೇಘನಾ ಮಗನ ನಾಮಕರಣ ಶಾಸ್ತ್ರ ನೆರವೇರಿದೆ. ಮೇಘನಾ ಜೊತೆಗೆ ಚಿರಂಜೀವಿ ಸರ್ಜಾ ಪೋಷಕರು ಹಾಗೂ ಮೇಘನಾ ಪೋಷಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶಾಸ್ತ್ರ- ಸಂಪ್ರದಾಯದಂತೆ ಪೂಜೆ-ಪುನಸ್ಕಾರ ನೆರವೇರಿಸದ ಎರಡು ಕುಟುಂಬ, ರಾಯನ್ ರಾಜ್ ಸರ್ಜಾ' ಎಂದು ಹೆಸರಿಟ್ಟು ಖುಷಿಪಟ್ಟರು. ಅರ್ಜುನ್ ಸರ್ಜಾ ವಿಡಿಯೋ ಕಾಲ್ ಮೂಲಕಲಿಟಲ್ ಪ್ರಿನ್ಸ್ ನೇಮಿಂಗ್ ಸೆರಮನಿ’ ಯನ್ನ ವೀಕ್ಷಿಸಿದರು. ಪನ್ನಗಾಭರಣ ಕುಟುಂಬ, ಪ್ರಜ್ವಲ್ ದೇವರಾಜ್ ಕುಟುಂಬ ಸೇರಿದಂತೆ ಚಿರಂಜೀವಿ ಸರ್ಜಾ ಆಪ್ತ ಸ್ನೇಹಿತರೆಲ್ಲರೂ ಕೂಡ ಸ್ನೇಹಜೀವಿ ಚಿರಂಜೀವಿಯ ಮಗನ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ.

ಚಿರು ಅಗಲಿಕೆಯ ನಂತರ ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬದಲ್ಲಿ ಕತ್ತಲೆ ಕವಿದಿತ್ತು. ಮನೆ ಹಾಗೂ ಮನದ ಸಂತೋಷ-ಸಂಭ್ರಮ ದೂರವಾಗಿತ್ತು. ಯಾವಾಗ ಮರಿ ಚಿರಂಜೀವಿಯ ಆಗಮನವಾಯ್ತೋ, ಆ ಕ್ಷಣದಿಂದಲೇ ಎರಡು ಕುಟುಂಬದಲ್ಲೂ ಬೆಳಕು ಮೂಡಿತ್ತು. ಮರೆಯಾದ ಸಂತೋಷ-ಸಡಗರ ಮರಳಿ ಬಂದಿತ್ತು. ಇದೀಗ ನಾಮಕರಣದಿಂದ ನಯಾ ಕಳೆ ಬಂದಿದೆ. ಕಳೆದ ಹೋದ ಖುಷಿಯ ಕ್ಷಣಗಳನ್ನ ಹೊತ್ತು ಬಂದಿರುವ ಜೂನಿಯರ್ ಸಿಂಬ `ಯುವರಾಜ’ ಎನಿಸಿಕೊಂಡಿದ್ದಾನೆ. ಯುವ ಸಾಮ್ರಾಟನ ಛಾಯೆ ಹೊತ್ತುಬಂದು ಎರಡು ಕುಟುಂಬವನ್ನು ಆನಂದಸಾಗರದಲ್ಲಿ ತೇಲಿಸುತ್ತಿದ್ದಾನೆ.

ಮುದ್ದಿನ ಮಗನ ನಾಮಕರಣದ ನಂತರ ಮಾತನಾಡಿದ ಮೇಘನಾ, ಚಿರು ಅಗಲಿಕೆಯಿಂದ ನೋವಲ್ಲಿದ್ದ ಇಡೀ ನಮ್ಮ ಕುಟುಂಬಕ್ಕೆ ಸ್ವರ್ಗದ ಬಾಗಿಲು ತೆರೆಸಿದ್ದು, ನಮ್ಮ ಮರಿ ಚಿರಂಜೀವಿ. ಅಂದ್ಹಾಗೆ, ನಮ್ಮ ಕಂದಮ್ಮನಿಗೆ ಯುವರಾಜ ಎಂಬ ಹೆಸರಿಡಬೇಕು ಎನ್ನುವುದು ನನ್ನ ಕನಸಾಗಿತ್ತು. ನನ್ನ ಮನದ ಆಸೆಯಂತೆ ನಮ್ಮ ಮುದ್ದು ಮಗನಿಗೆ ಯುವರಾಜನ ಅರ್ಥ ಕೊಡುವ “ರಾಯನ್”‌ ಎಂಬ ಹೆಸರಿಟ್ಟಿದ್ದೇನೆ ಎಂದು ಹೇಳಿಕೊಂಡರು.

ಈ ವೇಳೆ ಮೇಘನಾ ತಂದೆ ಮಾತನಾಡುತ್ತ, ಭಾವುಕರಾದರು. ತಂದೆಯ ಕಣ್ಣಚಲಿ ನೀರು ನೋಡಿ ಮೇಘನಾ ಕೂಡ ದುಃಖಿತರಾದರು. ಇದು ಕಣ್ಣೀರು ಹಾಕುವ ಸಮಯವಲ್ಲ. ಸಂಭ್ರಮಿಸೋಣವೆಂದು ಹೆತ್ತವರಿಗೆ ಹೇಳುತ್ತಾ ಮಗನ ನಾಮಕರಣದ ಕ್ಷಣಗಳನ್ನು ಸಂಭ್ರಮಿಸಿದರು. ಆಕ್ಷನ್‌ ಪ್ರಿನ್ಸ್‌ ಧ್ರುವ ಮಾತನಾಡಿ, ಅಣ್ಣನ ಮಗ ರಾಯನ್‌ ಮೇಲೆ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು. ಪ್ರೇರಣಾ ಸರ್ಜಾ “ರಾಯನ್‌” ನಗುವಿನಲ್ಲಿ ನಾವು ಚಿರಂಜೀವಿ ಸರ್ಜಾರನ್ನ ಕಾಣುತ್ತಿದ್ದೇವೆ ಎಂದರು. ಹೀಗೆ ಎರಡು ಫ್ಯಾಮಿಲಿಯವರು ರಾಯನ್ ರಾಜ್ ಸರ್ಜಾ’ ನಾಮಕರಣವನ್ನ ಖುಷಿಖುಷಿಯಾಗಿ ಸೆಲಬ್ರೇಟ್ ಮಾಡಿದರು.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಿಚ್ಚನ ಮೇಲಿನ ಪ್ರೀತಿಗೆ ಕೋಣ ಬಲಿ! ಬರ್ತ್‌ ಡೇ ನೆಪದಲ್ಲಿ ಮೂಕ ಪ್ರಾಣಿ ಬಲಿ ಕೊಟ್ಟ ಸುದೀಪ್‌ ಫ್ಯಾನ್ಸ್‌ !! ಎಲ್ಲೆಡೆ ವಿರೋಧ

ಅಭಿಮಾನಿಗಳು ತಮ್ಮ ಹೀರೋಗಳನ್ನು ಆರಾಧಿಸುವುದು ತಪ್ಪಲ್ಲ. ಹಾಲಿನ ಅಭಿಷೇಕ, ಹೂವಿನ ಅಲಂಕಾರ ಇತ್ಯಾದಿ ವಿಶೇಷ ಪೂಜೆಗಳನ್ನು ಮಾಡಲಿ. ಆದರೆ, ಹುಟ್ಟುಹಬ್ಬದ ನೆಪದಲ್ಲಿ ಈ ರೀತಿ ಮೂಕ ಪ್ರಾಣಿಗಳ ಬಲಿ ಕೊಡುವುದು ಅದರಲ್ಲೂ ಸಾರ್ವಜನಿಕವಾಗಿಯೇ ಅದನ್ನು ಚಿತ್ರೀಕರಿಸಿರುವುದು ದೊಡ್ಡ ಅಪರಾಧವಂತೂ ಹೌದು.

ಸಿನಿಮಾ ಅಂದರೆ, ಅದೊಂಥರಾ ಊರ ಹಬ್ಬ. ಅದರಲ್ಲೂ ಅಭಿಮಾನಿಗಳಿಂತೂ ಎಲ್ಲಿಲ್ಲದ ಸಡಗರ. ತಮ್ಮ ಪ್ರೀತಿಯ ನಾಯಕರನ್ನಂತೂ ಆರಾಧಿಸುವ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ತಮ್ಮ ನೆಚ್ಚಿನ ಹೀರೋ ಸಿನಿಮಾ ರಿಲೀಸ್‌ ಆಗುತ್ತೆ ಅಂದರೆ ಸಾಕು, ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ದೊಡ್ಡ ದೊಡ್ಡ ಹೂವಿನ ಹಾರಗಳ ಅಲಂಕಾರ ಮಾಡಿ ಸಂಭ್ರಮಿಸುವ ಅಭಿಮಾನಿಗಳಿಗೇನೂ ಕೊರತೆ ಇಲ್ಲ. ಇನ್ನು, ಸ್ಟಾರ್‌ ನಟರ ಹುಟ್ಟುಹಬ್ಬ ಬಂದರಂತೂ ಅಭಿಮಾನಿಗಳ ಖುಷಿಗೆ ಪಾರವೇ ಇರೋದಿಲ್ಲ. ಅದೆಷ್ಟೋ ಅಭಿಮಾನಿಗಳು ತಾವು ಇದ್ದಲ್ಲೇ ತಮ್ಮ ಸ್ಟಾರ್‌ ನಟರುಗಳ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುವುದು ವಾಡಿಕೆ. ಇದು ತಲತಲಾಂತರದಿಂದಲೂ ಬಂದಂತಹ ಪದ್ಧತಿ. ಈಗ ಹೊಸ ಸುದ್ದಿ ಅಂದರೆ, ಕಿಚ್ಚ ಸುದೀಪ್‌ ಅವರ ಬಳ್ಳಾರಿಯ ಸಂಡೂರು ಸಮೀಪದ ಬಂಡ್ರಿ ಗ್ರಾಮದ ಅಭಿಮಾನಿಗಳು ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಕೋಣ ಬಲಿ ನೀಡಿ ಅತಿರೇಕ ಮೆರೆದಿದ್ದಾರೆ. ಅಷ್ಟೇ ಅಲ್ಲ, ಸುದೀಪ್‌ ಅವರ ಪೋಸ್ಟರ್‌ ಮುಂದೆಯೇ ಕೋಣನ ಬಲಿ ನೀಡಿರುವ ವಿಡಿಯೊ ಕೂಡ ಮಾಡಲಾಗಿದೆ. ಆದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಅಲ್ಲಿ ಸೇರಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕಿಚ್ಚ ಸುದೀಪ್‌ ಅವರು ಕೋವಿಡ್ ಇರುವ ಕಾರಣ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ. ಯಾರೂ ಕೂಡ ಗುಂಪು ಸೇರಿ ಆಚರಿಸಬೇಡಿ. ತಾವು ಇದ್ದಲ್ಲೇ ಶುಭಾಶಯ ತಿಳಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಆದರೆ, ಅವರ ಕೆಲವು ಅಭಿಮಾನಿಗಳು ಅಭಿಮಾನವನ್ನು ಅತಿರೇಕಗೊಳಿಸಿದ್ದಾರೆ.
ಸುದೀಪ್ ಅಭಿಮಾನಿಗಳು ಕೋಣ ಬಲಿ ನೀಡಿ ಹುಟ್ಟುಹಬ್ಬ ಆಚರಿಸಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವಿರೋಧ ಕೇಳಿ ಬರುತ್ತಿದೆ. ಕೋಣ ಬಲಿ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ ಈ ಕೃತ್ಯ ಎಸಗಿದವರ ಮೇಲೆ ದೂರು ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆಯೂ ಸಹ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರ “ದಿ ವಿಲನ್” ಚಿತ್ರದ ಸಕ್ಸಸ್‌ಗೆ ಹಾರೈಸಿ ಕೋಣ ಬಲಿ ಕೊಡಲಾಗಿತ್ತು.

ಆಗ ಕೂಡ ಎಲ್ಲೆಡೆಯಿಂದಲೂ ವಿರೋಧ ವ್ಯಕ್ತವಾಗಿತ್ತು. ಅದೇನೆ ಇರಲಿ, ಅಭಿಮಾನಿಗಳು ತಮ್ಮ ಹೀರೋಗಳನ್ನು ಆರಾಧಿಸುವುದು ತಪ್ಪಲ್ಲ. ಹಾಲಿನ ಅಭಿಷೇಕ, ಹೂವಿನ ಅಲಂಕಾರ ಇತ್ಯಾದಿ ವಿಶೇಷ ಪೂಜೆಗಳನ್ನು ಮಾಡಲಿ. ಆದರೆ, ಹುಟ್ಟುಹಬ್ಬದ ನೆಪದಲ್ಲಿ ಈ ರೀತಿ ಮೂಕ ಪ್ರಾಣಿಗಳ ಬಲಿ ಕೊಡುವುದು ಅದರಲ್ಲೂ ಸಾರ್ವಜನಿಕವಾಗಿಯೇ ಅದನ್ನು ಚಿತ್ರೀಕರಿಸಿರುವುದು ದೊಡ್ಡ ಅಪರಾಧವಂತೂ ಹೌದು. ಸದ್ಯ, ಆ ಘಟನೆಗೆ ಖಂಡನೆ ಆಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಸ್ಟಾರ್‌ಗಳು ತಮ್ಮ ಅಭಿಮಾನಿಗಳಿಗೆ ಈ ರೀತಿಯ ಆಚರಣೆ ಬೇಡ ಎಂಬ ಮನವಿ ಮಾಡಿದ್ದರೂ ಕೂಡ ಪದೇ ಪದೇ ಇಂತಹ ತಪ್ಪುಗಳು ಆಗುತ್ತಲೇ ಇವೆ. ಇಂತಹ ತಪ್ಪು ತಿದ್ದಿಕೊಳ್ಳುವುದು ಯಾವಾಗ ಅನ್ನುವುದೇ ಯಕ್ಷ ಪ್ರಶ್ನೆ.

Categories
ಸಿನಿ ಸುದ್ದಿ

ಜೂನಿಯರ್ ಚಿರು ನೇಮಿಂಗ್ ಸೆರಮನಿ; ಮರಿ ಯುವಸಾಮ್ರಾಟನ ನಾಮಕರಣಕ್ಕೆ ಸಕಲ ಸಿದ್ದತೆ !

ಸರ್ಜಾ ಕುಟುಂಬದ ಕುಡಿ, ಯುವಸಾಮ್ರಾಟ ದಿವಗಂತ ಚಿರಂಜೀವಿ ಸರ್ಜಾರ ಪುತ್ರ, ಮೇಘನಾರ ಮುದ್ದಿನ ಮಗನ ನಾಮಕರಣಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ಸರ್ಜಾ ಕುಟುಂಬದಲ್ಲಿ ಹಾಗೂ ಮೇಘನಾ ಮನೆಯಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ. ವರ್ಷಗಳು ಕಳೆದ ಮೇಲೆ ಶುಭಕಾರ್ಯ ನಡೆಯುತ್ತಿದ್ದು, ಸೂತಕದ ಛಾಯೆ ಸರಿದು ಸಂತೋಷದ ದಿವ್ಯಕ್ಷಣಗಳು ಮರುಕಳಿಸುತ್ತಿವೆ. ನಾಳೆ ದಿವ್ಯಮುಹೂರ್ತದಲ್ಲಿ ಜೂನಿಯರ್ ಚಿರು ನೇಮಿಂಗ್ ಸೆರಮನಿ ಅದ್ಧೂರಿಯಾಗಿಯೇ ನಡೆಯಲಿದೆ.

ಇಲ್ಲಿವರೆಗೂ ಜೂನಿಯರ್ ಚಿರು, ಜೂನಿಯರ್ ಸಿಂಬ, ಚಿಂಟು, ಬರ್ಫಿ, ಮರಿ ಸಿಂಗ. ಪಾಪಕುಟ್ಟಿ, ಹೀಗೆ ವೆರೈಟಿ ಪೆಟ್ ನೇಮ್‌ಗಳಿಂದ ಕರೆಯುತ್ತಿದ್ದರು. ನಾಳೆಯಿಂದ ಈ ಪೆಟ್ ನೇಮ್ ಜೊತೆ ರಿಯಲ್ ನೇಮ್ ಸೇರಿಕೊಳ್ತಿದೆ.
ಚಿರು-ಮೇಘನಾರ ಮುದ್ದಿನ ಮಗನಿಗೆ ಏನೆಂದು ಹೆಸರಿಡಬಹುದು ಎನ್ನುವ ಕಾತುರಕ್ಕೆ ಬಿಗ್ ಬ್ರೇಕ್ ಬೀಳಲಿದೆ.

ಮರಿ ಯುವಸಾಮ್ರಾಟ್ ಚಿರುಗೆ ಹತ್ತು ತಿಂಗಳು ತುಂಬಿದೆ. ಮೇಘನಾ ಮಡಲಲ್ಲಿ ಆಡುತ್ತಾ, ಮಲಗುತ್ತಾ, ನಗುತ್ತಾ, ಅಳುತ್ತಾ, ಕುಣಿಯುತ್ತಾ
ಅಮ್ಮನಿಗೆ ಸಂತೋಷ ನೀಡುತ್ತಿರುವ ಮರಿ ಸಿಂಬ, ಅಮ್ಮನ‌ ಅಜ್ಜ ಅಜ್ಜಿಯ ಮನೆಯಲ್ಲಿ ಬೆಳೆದು ದೊಡ್ಡವನಾಗ್ತಿದ್ದಾನೆ. ಸರ್ಜಾ ಕುಟುಂಬದಲ್ಲಿ ಬೆಳಕು ಮೂಡಿಸಿದ್ದಾನೆ.

ಇಂತಹ ಮುದ್ದುಮಗನ ನಾಮಕರಣಕ್ಕೆ ಎರಡು ಕುಟುಂಬ ಸಕಲ ತಯ್ಯಾರಿ ಮಾಡಿಕೊಂಡಿದೆ. ಕುಟುಂಬಸ್ಥರು ಆಪ್ತರ ಸಮ್ಮುಖದಲ್ಲಿ ನೇಮಿಂಗ್ ಸೆರಮನಿ ನಡೆಯಲಿದೆ. ಈ‌ ವಿಚಾರವನ್ನ ಮೇಘನಾ, ಧ್ರುವ, ಅರ್ಜುನ್ ಸರ್ಜಾ ಸೇರಿದಂತೆ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ. ಹೇಗಿರಲಿದೆ? ಏನಿರಲಿದೆ ಸರ್ಜಾ ಕುಟುಂಬ ಕುಡಿಯ ಹೆಸರು ವೇಯ್ಟ್ ಅಂಡ್ ಸೀ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ಫಸ್ಟ್ ಗ್ಲಿಂಪ್ಸ್: ದಿ ಡೆಡ್ ಮಾನ್ಸ್ ಆಂಥಮ್’ನಲ್ಲಿ ‌ಕಿಚ್ಚನ ಸಖತ್‌ ಖದರ್!

ಕಿಚ್ಚ ಸುದೀಪ್ ನಟಿಸಿರುವ “ವಿಕ್ರಾಂತ್ ರೋಣ”‌ ಚಿತ್ರ ಕೋವಿಡ್ ಹಾವಳಿ ಕಡಿಮೆಯಾದ ನಂತರ ಶುರುವಾದ ಮೊದಲ ಮೆಗಾ-ಬಜೆಟ್‌ ಸಿನಿಮಾ. ಆರಂಭದಿಂದಲೂ ಜೋರು ಸುದ್ದಿ ಮಾಡಿಕೊಂಡು ಬರುತ್ತಿದ್ದ “ವಿಕ್ರಾಂತ್‌ ರೋಣ” ಈಗ ಮತ್ತೊಂದು ದೊಡ್ಡ ಕುತೂಹಲ ಮೂಡಿಸಿದೆ. ಹೌದು, ಸುದೀಪ್‌ ಅವರ ಹುಟ್ಟು ಹಬ್ಬಕ್ಕೆ ಚಿತ್ರ ತಂಡವು ಅತ್ಯಾಕರ್ಷಕ ಎನಿಸುವ ಫಸ್ಟ್‌ಲುಕ್‌ ಬಿಡುಗಡೆ ಮಾಡಿದೆ. ಫಸ್ಟ್‌ ಲುಕ್‌ ನೋಡಿದವರಿಗೆ ಸುದೀಪ್‌ ಅವರ ಮಾಸ್‌ ಫೀಲ್‌ ಇಷ್ಟವಾಗದೇ ಇರದು. ರೈನ್‌ ಕೋಟು, ಹ್ಯಾಟು, ಕೈಯಲ್ಲೊಂದು ಲೋಡೆಡ್‌ ಗನ್ನು ಹಿಡಿದಿರುವ ಫೋಟೋ ಸಖತ್‌ ಮೆಚ್ಚುಗೆ ಪಡೆಯುತ್ತಿದೆ.


‘ದಿ ಡೆಡ್ ಮಾನ್ಸ್ ಆಂಥಮ್’, ನಿರೂಪಕನ ಧ್ವನಿಯನ್ನು ಹಿಂಬಾಲಿಸುತ್ತ ಕಗ್ಗತ್ತಲೆಯ ಲೋಕದ ಒಡೆಯ ಸುದೀಪ್ ಅವರು, ಶತ್ರುಗಳಿಗೆ ಭಯ ಹುಟ್ಟಿಸುವ ಸನ್ನಿವೇಷದೊಂದಿಗೆ ಶುರುವಾಗುತ್ತದೆ. ಗಮನ ಸೆಳೆಯುವ ದೃಶ್ಯಗಳು, ವಿಸ್ಮಯಗೊಳಿಸುವ ಹಿನ್ನಲೆ ಸಂಗೀತ, ಸುದೀಪ್ ರವರ ಖದರ್‌ಗೆ ಪೂರಕವಾಗಿವೆ. ಈ ಎಲ್ಲಾ ಅಂಶಗಳಿಂದಾಗಿ, ಸೂಕ್ತ ಶೀರ್ಷಿಕೆಯೊಂದಿಗೆ ಅವರ ಹುಟ್ಟು ಹಬ್ಬದಂದು ರಿಲೀಸ್ ಆಗಿರುವ “ದಿ ಡೆಡ್ ಮಾನ್ಸ್ ಆಂಥಮ್” ವೀಕ್ಷಕರಿಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

“ದಿ ಡೆಡ್ ಮಾನ್ಸ್ ಆಂಥಮ್” ಸುದೀಪ್ ಅವರ ಹುಟ್ಟು ಹಬ್ಬದ ದಿನ ರಿಲೀಸ್ ಆಗುತ್ತಿರುವುದು ನನಗೆ ಬಹಳ ಖುಷಿಯಾಗಿದೆ. “ವಿಕ್ರಾಂತ್ ರೋಣ” ಪಾತ್ರದ ನಿಗೂಢತೆಯನ್ನು ಫಸ್ಟ್ ಗ್ಲಿಂಪ್ಸ್ ಅದ್ಭುತವಾಗಿ ಸೆರೆ ಹಿಡಿದಿದೆ. ಚಿತ್ರೀಕರಣದ ಸಮಯದಲ್ಲೇ ನನಗೆ ಇದರ ಮೇಲೆ ಅಪಾರ ನಿರೀಕ್ಷೆ ಇತ್ತು. ಆದರೆ, ಸುದೀಪ್ ಅವರು ಈ ಪಾತ್ರವನ್ನು ಸಾಕಾರಗೊಳಿಸುತ್ತಿರುವುದು, ನನ್ನ ನಿರೀಕ್ಷಣೆಯನ್ನು ಇನ್ನೂ ಹೆಚ್ಚಾಗಿಸಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುʼ ಎಂದು ನಿರ್ದೇಶಕ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.

ಇನ್ನು, ನಿರ್ಮಾಪಕರಾದ ಜಾಕ್ ಮಂಜುನಾಥ್ ರವರು, “ಸುದೀಪ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು, “ವಿಕ್ರಾಂತ್ ರೋಣ” ಚಿತ್ರದ ಫಸ್ಟ್ ಗ್ಲಿಂಪ್ಸ್ ನೊಂದಿಗೆ ವ್ಯಕ್ತ ಪಡಿಸುತ್ತಿದ್ದೇವೆ. ಎಲ್ಲರ ಕೈ ಕಟ್ಟುವಂತಹ ಸಂದರ್ಭದಲ್ಲಿ ನಾವು ಇಷ್ಟು ಸಕಾರಾತ್ಮಕವಾಗಿ ಮುನ್ನಡೆಯುತ್ತಿರುವುದೇ ಸಂತೋಷದ ವಿಷಯ. ಅವರ ಹುರುಪು, ಉತ್ಸಾಹ ಮತ್ತು ಸಿನಿಮಾ ಮಾಡುವ ಛಲಕ್ಕೆ ಯಾವುದೇ ಸಮಯದ ಪರೀಕ್ಷೆಯನ್ನು ತಡೆಯುವ ಶಕ್ತಿಯಿದೆ. ಇದೇ “ವಿಕ್ರಾಂತ್ ರೋಣ” ಚಿತ್ರವನ್ನು ವಿಶೇಷವಾಗಿಸುತ್ತದೆ,” ಎಂದಿದ್ದಾರೆ ಜಾಕ್‌ ಮಂಜು.

ವಿಕ್ರಾಂತ್ ರೋಣ, ಒಂದು ಬಹುಭಾಷಾ ಆಕ್ಷನ್ ಅಡ್ವೆಂಚರ್ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3-D ಯಲ್ಲಿ ಬಿಡುಗಡೆಯಾಗಲಿದೆ. ಅನೂಪ್ ಭಂಡಾರಿ ನಿರ್ದೇಶನದ ಚಿತ್ರಕ್ಕೆ ಜಾಕ್ ಮಂಜುನಾಥ್ ಹಾಗು ಶಾಲಿನಿ ಮಂಜುನಾಥ್ ನಿರ್ಮಾಪಕರು. ಅಲಂಕಾರ್ ಪಾಂಡಿಯನ್ ಸಹ ನಿರ್ಮಾಪಕರು. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ನೀಡಿದ್ದಾರೆ. ಶಿವಕುಮಾರ್‌ ಅವರ ಕಲಾ ನಿರ್ದೇಶನ ವಿಲಿಯಮ್ ಡೇವಿಡ್ ಕ್ಯಾಮೆರಾ ಕೆಲಸ ಚಿತ್ರದಲ್ಲಿದೆ. ಸುದೀಪ್‌ ಅವರ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಜ್ಯಾಕಲೀನ್ ಫರ್ನಾಂಡೀಸ್ ಸೇರಿದಂತೆ ಹಲವರು ಇದ್ದಾರೆ.

Categories
ಸಿನಿ ಸುದ್ದಿ

ಇದು ಕಣ್ರೀ ಬರ್ತ್ ಡೇ ಗಿಫ್ಟ್ ಅಂದ್ರೆ; ಅಭಿನಯ ಚಕ್ರವರ್ತಿಗೆ ಚಕ್ರವರ್ತಿ ಚಂದ್ರಚೂಡ್ ಮರೆಯಲಾಗದ ಉಡುಗೊರೆ !

ಬಿಗ್ ಬಾಸ್ ಮನೆಯಲ್ಲಿದ್ದಾಗ ಕಿಚ್ಚನಿಂದ ಸ್ಪೆಷಲ್ ಕ್ಲಾಸ್ ಪಡೆಯುತ್ತಿದ್ದ ಡಿ.ಜೆ. ಚಕ್ರವರ್ತಿ ಚಂದ್ರಚೂಡ್ ಇವತ್ತು ಬಾದ್ ಷಾ ಬರ್ತ್ ಡೇಗೆ ಸ್ಪೆಷಲ್ ಸಾಂಗ್ ನ ಕಾಣಿಕೆಯಾಗಿ ಕೊಟ್ಟಿದ್ದಾರೆ. ಅಭಿನಯ ಚಕ್ರವರ್ತಿಗೆ ಚಕ್ರವರ್ತಿಯ ಉಡುಗೊರೆ ಬಗ್ಗೆ ಮಾತನಾಡಲೆಬೇಕು. ಅದಕ್ಕೂ ಮುನ್ನ ಬರ್ತ್ ಡೇ ಸಂಭ್ರಮ ನೋಡೋಣ

1971 ಸೆಪ್ಟೆಂಬರ್ 2 ರಂದು ಕಿಚ್ಚ ಭೂಮಿಗೆ ಬಂದಾಗ ಬರೀ ಕುಟುಂಬದವರು ಮಾತ್ರ ಸಂಭ್ರಮಿಸಿದ್ದರು.ಆದರೆ ಇವತ್ತು ಕೋಟ್ಯಾಂತರ ಮಂದಿ ಮಾಣಿಕ್ಯನ ಬರ್ತ್ ಡೇನಾ ಹಬ್ಬ… ಹಬ್ಬ …ಮಾಡಿ ಸಂತೋಷ ಪಡುತ್ತಾರೆ. ಅದಕ್ಕೆ ಕಾರಣ ಕಿಚ್ಚನ ಸಾಧನೆ ಮಾತ್ರವಲ್ಲ ಹೃದಯಶ್ರೀಮಂತಿಕೆಯಲ್ಲಿ ಕಿಚ್ಚ ಕೋಟಿಗೊಬ್ಬನಾಗಿದ್ದೇ ಇವತ್ತಿನ ಅದ್ದೂರಿ ಹುಟ್ಟುಹಬ್ಬಕ್ಕೆ ಸಾಕ್ಷಿ.

ಹೌದು, ಕೋಟಿಗೊಬ್ಬ ಕಿಚ್ಚ ಸುದೀಪ್ ಇವತ್ತು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 50ನೇ ವಸಂತಕ್ಕೆ ಕಾಲಿಟ್ಟಿರೋ ಮಾಣಿಕ್ಯನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸುದೀಪಿಯನ್ಸ್ ಸೋಷಿಯಲ್ ಮೀಡಿಯಾದಲ್ಲಿ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದಾರೆ. ಬಾದ್ ಷಾ ಬರ್ತ್ ಡೇಗೆ ವಿಶೇಷವಾಗಿ ವಿಕ್ರಾಂತ್ ರೋಣ ಚಿತ್ರತಂಡ ‘ಡೆಡ್ ಮ್ಯಾನ್ಸ್ ಆಂಥಮ್’ ಸಾಂಗ್ ರಿಲೀಸ್ ಮಾಡಿದೆ. ಕೈಗೆ ಕಬ್ಬಿಣದ ಸರಪಳಿ ಸುತ್ತಿಕೊಂಡು, ಮಚ್ಚೆಳೆಯೋ ಸೀನ್ ಜೊತೆಗೆ ಧಗಧಗಿಸೋ ಮನೆಗೆ ಎಂಟ್ರಿಕೊಟ್ಟು ವಿಕ್ರಾಂತ್ ರೋಣ ಬ್ಯಾಂಗ್ ಮಾಡೋದನ್ನ ಕಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

ಸುದೀಪ್ ಹುಟ್ಟುಹಬ್ಬದಂದು ಸುದೀಪಿಯನ್ಸ್ ಹೃದಯ ಗೆಲ್ಲುವಲ್ಲಿ ಚಕ್ರವರ್ತಿ ಚಂದ್ರಚೂಡ್ ಯಶಸ್ವಿಯಾಗಿದ್ದಾರೆ. ಸುದೀಪಿಯನ್ಸ್ ಹೆಸರಲ್ಲೇ ಆಲ್ಬಂ ಸಾಂಗ್ ನ ರಿಲೀಸ್ ಮಾಡುವ ಮೂಲಕ ಮಾಣಿಕ್ಯನ ಗೋಲ್ಡನ್ ಜ್ಯೂಬಿಲಿ ಸಂಭ್ರಮಕ್ಕೆ ಕಳೆತಂದಿದ್ದಾರೆ. ಕಿಚ್ಚನ ಹೆತ್ತವರು ಮಾತ್ರವಲ್ಲ ಕೋಟ್ಯಾಂತರ ಭಕ್ತರು ಉಘೇ ಉಘೇ ಎನ್ನುವಂತಹ ಹಾಡೊಂದನ್ನ ಕಟ್ಟಿಕೊಟ್ಟಿದ್ದಾರೆ.

ನಿಮ್ಮ ಬರಣಿಗೆಗೆ ನಾನು ಅಭಿಮಾನಿ ಅಂತ ಬಿಗ್ಬಾಸ್ ವೇದಿಕೆಯಲ್ಲೇ ಕಿಚ್ಚ ಅನೌನ್ಸ್ ಮಾಡಿದ್ದರು. ಆ ಅಭಿಮಾನಕ್ಕೆ ಏನಾದರೂ ಕೊಡುಗೆ ಕೊಡಬೇಕು ಅಂತ ನಿರ್ಧರಿಸಿದ್ದ ಚಕ್ರವರ್ತಿ ಚಂದ್ರಚೂಡ್, ಶಾಂತಿನಿವಾಸದ ನಂದಾದೀಪ ಇಡೀ ಕರುನಾಡಿಗೆ ಬೆಳಕಾಗಿದ್ದರ ಬಗ್ಗೆ, ಕಲಿಯುಗದ ಕರ್ಣನಾಗಿ ಮಿನುಗುತ್ತಿರುವ
ಬಗ್ಗೆ ಪದಗಳನ್ನ ಪೋಣಿಸಿ ಅಕ್ಷರಗಳ ಹೂಮಾಲೆಯನ್ನ ಅರ್ಪಿಸಿದ್ದಾರೆ.

ಎಂಥಾ ಮಗನ ಹೆತ್ತೀರಿ ಸಂಜೀವಪ್ಪ. ಕರುನಾಡಿಗೆ ಸಂಜೀವಿನಿ ಈ ಜೀವ ನೋಡ್ರಪ್ಪ .. ಭೂಮಿ ತೂಕವನ್ನೇ ಹೋಲುವ ಚಕ್ರವರ್ತಿಯವರ ಸಾಹಿತ್ಯಕ್ಕೆ, ವೀರ್ ಸಮರ್ಥ್ ರಾಗ ಸಂಯೋಜನೆ ಮಾಡಿದ್ದಾರೆ. ಅಶ್ವಿನ್ ಶರ್ಮಾ ಕಂಠದಾನ ಮಾಡಿದ್ದಾರೆ. ಅಶ್ವಿನಿ ರೆಕಾರ್ಡಿಂಗ್ ಕಂಪೆನಿ ಕಡೆಯಿಂದ ‘ ಸುದೀಪಿಯನ್ಸ್’ ಆಲ್ಬಂ ಸಾಂಗ್ ಹೊರಬಂದಿದೆ. ಕಿಚ್ಚನ ಭಕ್ತರ ಕಾಲರ್ ಪಟ್ಟಿ ಎಗರಿಸುವಂತೆ ಮಾಡಿದೆ. ಯೂಟ್ಯೂಬ್ ಕೂಡ ಖುಷಿಪಟ್ಟಿದೆ. ಲೈಕ್ಸ್, ಕಾಮೆಂಟ್ ಗಳ ಮೂಲಕ ಶೇಕ್ ಆಗೋದಷ್ಟೇ ಬಾಕಿಯಿದೆ. ಆಗುತ್ತೆ ನೋ ಡೌಟ್ ಅಬೌಟ್ ಇಟ್ .

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಿಚ್ಚನ ಬರ್ತ್ಡೇಗೆ ನೀರಜ್ ಚೋಪ್ರಾ ಸಪ್ರೈಸ್; ಚಿನ್ನದ ಸಹೋದರನ ಬಗ್ಗೆ ಸುದೀಪ್ ಹೀಗಂದ್ರು!

ಸ್ಯಾಂಡಲ್‌ವುಡ್ ಬಾದ್‌ಷಾ, ಅಭಿಮಾನಿಗಳ ಪಾಲಿನ ಮಾಣಿಕ್ಯ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಅದ್ಧೂರಿ ಹುಟ್ಟು ಹಬ್ಬಕ್ಕೆ ಬ್ರೇಕ್ ಬಿದ್ದಿರುವುದರಿಂದ ಅಭಿಮಾನಿ ದೇವರುಗಳು ತಾವಿದ್ದಲ್ಲಿಂದಲೇ ಶುಭಾಷಯ ಕೋರುವುದಕ್ಕೆ ಕಾತುರರಾಗಿದ್ದಾರೆ. ಕೋಟಿಗೊಬ್ಬನ ಗೋಲ್ಡನ್ ಜ್ಯೂಬಿಲಿಯನ್ನ ಗ್ರ್ಯಾಂಡ್ ಆಗಿಯೇ ಆಚರಣೆ ಮಾಡೋದಕ್ಕೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಮನ್ ಡಿಪಿ ಹಾಕಿಕೊಂಡು ಭರ್ಜರಿಯಾಗಿ ಸೆಲಬ್ರೇಟ್ ಮಾಡುತ್ತಿರುವ ಫ್ಯಾನ್ಸ್, ಕಿಚ್ಚನಿಗೆ ಅಡ್ವಾನ್ಸ್ ಹ್ಯಾಪಿ ಬರ್ತ್ ಡೇ ತಿಳಿಸುತ್ತಿದ್ದಾರೆ.

ಇಂಟ್ರೆಸ್ಟಿಂಗ್ ಅಂದರೆ ಚಿನ್ನದ ಹುಡುಗ ನೀರಜ್ ಚೋಪ್ರಾ ಅಭಿನಯ ಚಕ್ರವರ್ತಿಗೆ ಶುಭಾಷಯ ಕೋರಿರುವುದು. ಹೌದು, ತವರು ನಾಡು ಹರಿಯಾಣದಲ್ಲಿರುವ ನೀರಜ್, `ವಿಶ್ ಯೂ ಹ್ಯಾಪಿ ಬರ್ತ್ ಡೇ ಸುದೀಪ್‌ ಜೀ’. ಆಲ್‌ಓವರ್ ಇಂಡ್ಯಾ ಸೆನ್ಸೇಷನ್ ಸೃಷ್ಟಿಸಿರುವ ವಿಕ್ರಾಂತ್ ರೋಣ ಚಿತ್ರಕ್ಕೆ ಆಲ್ ದಿ ಬೆಸ್ಟ್. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ. ಚಿನ್ನದ ಹುಡುಗನ ಶುಭ ಹಾರೈಕೆಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ಧನ್ಯವಾದಗಳು ಸಹೋದರ… ಗುರಿಯ ಬೆನ್ನತ್ತಿರುವ ನಿಮಗೆ ನನ್ನ ಶುಭಾಷಯಗಳು ಎಂದಿದ್ದಾರೆ. ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡವರು. ಭಾರತದ ಕೀರ್ತಿ ಪತಾಕೆಯನ್ನ ಎತ್ತಿ ಹಿಡಿಯೋದಲ್ಲದೇ ಹಿಂದ್ಯಾರು ಕೆತ್ತದ ಇತಿಹಾಸ ಕೆತ್ತಿ ಮುನ್ನುಗುತ್ತಿದ್ದಾರೆ. ಇಡೀ ದೇಶಕ್ಕೆ ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ ಯಶೋಗಾಥೆ ಹೀಗೆಯೇ ಮುಂದುವರೆಯಲಿ. ಆಲ್‌ ಇಂಡಿಯಾ ಕಟೌಟ್ ಕಿಚ್ಚನ ಕೀರ್ತಿ ಪತಾಕೆ ದೇಶದ ತುಂಬೆಲ್ಲಾ ಹಬ್ಬಲಿ.

Categories
ಸಿನಿ ಸುದ್ದಿ

ಯೋಗಿ, ಡಾಲಿ ಡೆಡ್ಲಿ ಕಾಂಬೋ-ವಿಜಯ್‌ ಪ್ರಸಾದ್‌ ಸಿಡಿಸ್ತಾರಾ ಹೊಸ ಬಾಂಬ್‌ !

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಚಾತಿ ನಿರ್ದೇಶಕ ವಿಜಯ್‌ ಪ್ರಸಾದ್‌ ಅವರದ್ದು. ಅದರರ್ಥ, ಒಂದೇ ಶೆಡ್ಯೂಲ್‌ ನಲ್ಲಿಯೇ ಎರಡು ಸಿನಿಮಾ ಚಿತ್ರೀಕರಿಸಿಕೊಂಡು ಬರೋದು ಅಂತ. ಸದ್ಯಕ್ಕೀಗ ರಿಲೀಸ್‌ ಗೆ ರೆಡಿಯಾಗಿರುವ ʼತೋತಾಪುರಿʼ ಹಾಗೆ ಅಲ್ವಾ ಆಗಿದ್ದು? ಈಗದು ಎರಡು ಕಂತಗಳಲ್ಲಿ ತೆರೆಗೆ ಬರುತ್ತಿದೆ. ಮೊದಲ ಭಾಗದ ಚಿತ್ರೀಕರಣದ ಜತೆಗೆಯೇ ಸಿಕ್ವೇಲ್‌ ಕೂಡ ಶೂಟಿಂಗ್‌ ಮುಗಿಸಿದೆ. ಚಿತ್ರೀಕರಣದ ಒಂದೇ ಶೆಡ್ಯೂಲ್‌ ನಲ್ಲಿ ಎರಡು ಚಾಪ್ಟರ್‌ ಗಳ ಶೂಟಿಂಗ್‌ ಮುಗಿಸಿಕೊಂಡು ಬಂದಿದ್ದಾರೆ. ಈಗ ಎರಡು ಚಾಪ್ಟರ್‌ ಕೂಡ ರಿಲೀಸ್‌ ಗೆ ರೆಡಿ ಇವೆ. ಸದ್ಯಕ್ಕೆ ಅದರ ಪ್ರಚಾರದ ಹಂತದಲ್ಲಿ ಬ್ಯುಸಿ ಆಗಿರುವ ನಿರ್ದೇಶಕ ವಿಜಯ್‌ ಪ್ರಸಾದ್‌ ಈಗ ಒಂದೇ ದಿನ ಇಬ್ಬರು ಸ್ಟಾರ್‌ ಗಳನ್ನು ಪ್ರತ್ಯೇಕ ಜಾಗಗಳಲ್ಲಿ ಒಂದೇ ಉದ್ದೇಶಕ್ಕೆ ಭೇಟಿ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಇಬ್ಬರು ಸ್ಟಾರ್‌ ಭೇಟಿ ಮಾಡಿದ ಖುಷಿಯನ್ನು ಅವರೊಂದಿಗೆ ಕ್ಲಿಕ್ಕಿಸಿಕೊಂಡ ಸೆಲ್ಪಿಯನ್ನು ಸೋಷಲ್‌ ಮೀಡಿಯಾದಲ್ಲಿ ಹಾಕ್ಕೊಂಡು, ಅದಕ್ಕೆ ಕ್ಯಾಪ್ಸನ್‌ ಕೊಟ್ಟ ರೀತಿಯೇ ಮಜವಾಗಿದೆ.

ʼವಾಯು ವಿಹಾರದಲ್ಲಿ ಸಿದ್ಲಿಂಗು, ವಿಹಾರದಲ್ಲಿ ನಾರಾಯಣ್‌ ಪಿಳ್ಳೆ , ಒಂದೇ ದಿನ ಎರಡು ಭೇಟಿʼ ಅಂತ ಕಾಮೆಂಟ್‌ ಹಾಕಿದ್ದು ಮಾತ್ರವಲ್ಲ, ಅದರ ಜತೆಗೆ ಇದೊಂದು ʼಹೊಸ ಪ್ರಯಾಣʼ ಅಂತಲೂ ಹೇಳಿದ್ದಾರೆ. ಸಿನಿಮಾ ಮಂದಿ ಒಟ್ಟಿಗೆ ಸೇರ್ಕೊಂಡ್‌ ಹೊಸ ಪ್ರಯಾಣ ಅಂತ ಹಾಕಿದರೆ, ಇನ್ನೆಲ್ಲಿಗೋ ಪ್ರವಾಸ ಹೊರಟರು ಅಂತಲ್ಲ, ಇನ್ನಾವುದೋ ಹೊಸ ಪ್ರಾಜೆಕ್ಟ್‌ ಶುರು ಮಾಡ್ತಿದ್ದಾರೆ ಅಂತ ಅದೆಷ್ಟು ಮಂದಿ ತೋರಿಸಿಕೊಟ್ಟಿಲ್ಲಾ? ಬಹುಶಃ ಈ ಭೇಟಿಯ ಉದ್ದೇಶ ಕೂಡ ಹಾಗೆಯೇ ಇರಬೇಕು? ಸದ್ದಿಲ್ಲದೆ ಸುದ್ದಿ ಮಾಡದೆ ನಿರ್ದೇಶಕ ವಿಜಯ್‌ ಪ್ರಸಾದ್‌ ಇವರಿಬ್ಬರು ಸ್ಟಾರ್‌ ಇಟ್ಕೊಂಡೇ ಒಂದು ಹ್ಯೂಮಸರ್‌ ಕಥೆ ಮಾಡ್ಕೊಂಡು ಇಂದು ಅವರಿಬ್ಬರನ್ನು ವಾಯು ವಿಹಾರ ಮತ್ತು ವಿಹಾರದಲ್ಲಿ ಭೇಟಿ ಮಾಡಿದ ಹಾಗಿದೆ.
ಅಂದ ಹಾಗೆ ನಿರ್ದೇಶಕ ವಿಜಯ್‌ ಪ್ರಸಾದ್‌, ಇವತ್ತು ಅಂದ್ರೆ ಬುಧವಾರ ಭೇಟಿ ಮಾಡಿದ ಸ್ಟಾರ್‌ ಗಳಂದ್ರೆ ಲೂಸ್‌ ಮಾದ ಖ್ಯಾತಿಯ ಯೋಗೇಶ್‌ , ಹಾಗೂ ಡಾಲಿ ಖ್ಯಾತಿಯ ಧನಂಜಯ್.‌ ನಿರ್ದೇಶಕ ವಿಜಯ್‌ ಪ್ರಸಾದ್‌ ಈಗ ಇಬ್ಬರಿಗೂ ಆಕ್ಷನ್‌ ಕಟ್‌ ಹೇಳಿದ್ದಾರೆ. ಸಿದ್ಲಿಂಗು ಚಿತ್ರದಲ್ಲಿ ಲೂಸ್‌ ಮಾದ ಯೋಗಿ ಜತೆಗೆ ಕೆಲಸ ಮಾಡಿರುವ ವಿಜಯ್‌ ಪ್ರಸಾದ್‌, ತೋತಾಪುರಿ ಚಿತ್ರದಲ್ಲಿನ ಸ್ಪೆಷಲ್‌ ಕ್ಯಾರೆಕ್ಟರ್ ವೊಂದಕ್ಕೆ ಡಾಲಿ ಧನಂಜಯ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ಡಾಲಿ ಮೂರು ಶೇಡ್ಸ್‌ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಅವರ ಕ್ಯಾರೆಕ್ಟರ್‌ ಹೆಸರು ನಾರಾಯಣ್‌ ಪಿಳ್ಳೆ.

Categories
ಸಿನಿ ಸುದ್ದಿ

ಲುಕ್ಕಲ್ಲೇ ಲಾಕ್ ಮಾಡಿದರು ಪ್ರಸನ್ನ ; ಭಜರಂಗಿ ಸಾರಥಿಗೆ ಉಘೇ ಉಘೇ ಎನ್ನಿರಣ್ಣ !

ಎದೆಮಟ್ಟಕ್ಕಿರುವ ಬಿಳಿ-ಕಪ್ಪು ಗಡ್ಡ, ದಪ್ಪನೆಯ ಮೀಸೆ, ಬೆಕ್ಕಿನ ಕಣ್ಣುಗುಡ್ಡೆ, ತಲೆಮೇಲೆ ಕಂಚುಮಿಶ್ರಿತ ಎರಡು ಕೋಡು, ತೋಳಿಗೆ ಕಪ್ಪು ಪಟ್ಟಿ, ಕಟ್ಟುಮಸ್ತಾದ ದೇಹಕ್ಕೆ ಕಂಬಳಿಯಂತಹ ಉಡುಪು, ಗುರಾಯಿಸಿದ್ರೆ ಗುಮ್ಮೆಬಿಡ್ತೀನಿ ಎನ್ನುವಂತಹ ನೋಟ ನೋಡುಗರ ಬೆವರಿಳಿಸುತ್ತಿದೆ. ಯಾರೀ ಈ ಪಾತ್ರ ಕೆತ್ತಿದ್ದು ಅಂತ, ಯಾವಾಗ ಹುಟ್ಟಿದ್ದು ಅಂತ ನಿಮ್ಗೂ ಅನ್ನಿಸಿದ್ರೆ, ಈ ಸ್ಟೋರಿ ನೋಡಿ…

ಅಶ್ವಮೇಧ ಕುದುರೆಯನ್ನ ಬೇಕಾದರೆ ಒಂದೇ ಏಟಿಗೆ ಕಟ್ಟಿಹಾಕ್ಬೋದು, ಆದರೆ ಸಿನಿಮಾಪ್ರೇಮಿಗಳನ್ನ ಒಂದೇ ಏಟಿಗೆ ಕಟ್ಟಿಹಾಕೋದಕ್ಕೆ ತೋಳಲ್ಲಿ ತಾಕತ್ತಿದ್ದರೆ ಸಾಲದು ಕಣ್ಣಲ್ಲಿ ಕಿಚ್ಚು ಇರಬೇಕು. ಆ ಕಿಚ್ಚಿಗೆ ಕಿಕ್‌ಸ್ಟಾರ್ಟ್ ಕೊಡುವುದಕ್ಕೆ ಒಬ್ಬ ಸಾರಥಿ ಬೇಕು. ಒಮ್ಮೆ ಸ್ಪಾರ್ಕ್ ಹೊತ್ತಿಸಿದ್ರೆ ಫಿನೀಶ್ ಅಂತ ಹೇಳೋದಕ್ಕೆ ಆಗಲ್ಲ. ಆದರೆ, ಬ್ರಹ್ಮನಿಗೆ ಸೆಡ್ಡುಹೊಡೆಯುವಷ್ಟು ಕ್ಯಾಪಾಸಿಟಿ ಇರುವ ಚಿತ್ರಬ್ರಹ್ಮ, ಮನಸ್ಸು ಮಾಡಿದರೆ ಕಲಾವಿದನ ಹಣೆಬರಹವೇ ಬದಲಾಗುತ್ತೆ. ಕಲ್ಲು ಶಿಲೆಯಾಗಿ ನಿಲ್ಲುತ್ತೆ. ಆ ಶಿಲೆಗೆ ಪೂಜೆ-ಪುನಸ್ಕಾರ ನಡೆಯುತ್ತೆ. ಅಷ್ಟೇ ಯಾಕೇ, ಬ್ರಹ್ಮ ಸೃಷ್ಟಿಮಾಡಲಿಕ್ಕೆ ಆಗದ ಮಾಸ್ಟರ್‌ಪೀಸ್‌ಗಳು, ಚಿತ್ರಬ್ರಹ್ಮನ ಕಲ್ಪನೆಯಲ್ಲಿ ಸೃಷ್ಟಿಯಾಗಿ ಇತಿಹಾಸ ಪುಟಗಳಲ್ಲಿ ಸೇರಿಸಿಬಿಡುತ್ತವೆ. ಇಷ್ಟೆಲಾ, ಮಾಡುವ ತಾಕತ್ತಿರೋ ಸಿನಿಮಾಲೋಕದ ಕ್ಯಾಪ್ಟನ್ ಆಫ್ ದಿ ಶಿಪ್ ಉರುಫ್ ಡೈರೆಕ್ಟರ್‌ ಗಳಿಗೆ ಸಲಾಂ ಹೇಳುತ್ತಾ… `ಭಜರಂಗಿ’ ಚಿತ್ರಸಾರಥಿಯ ಕಲ್ಪನೆಯಲ್ಲಿ ಅರಳಿ ಮೊದಲ ನೋಟದಲ್ಲೇ ಪ್ರೇಕ್ಷಕ ಮಹಾಶಯರನ್ನ ತಿರುತಿರುಗಿ ನೋಡುವಂತೆ ಮಾಡಿರುವ ಕಲಾವಿದನ ಕಿರುಪರಿಚಯ.

ಲುಕ್ಕಲ್ಲೇ ಲಾಕ್ ಮಾಡೋದು ಸುಲಭದ ಮಾತಲ್ಲ ಎಂಬುದು ನಿಮ್ಮೆಲ್ಲರಿಗೂ ಗೊತ್ತಾಗಿದೆ. ಹೀಗಿರುವಾಗ, ಭಜರಂಗಿ-2' ಚಿತ್ರದ ಕಲಾವಿದ ಪ್ರಸನ್ನ ಸಿಂಗಲ್ ಲುಕ್‌ನಿಂದ ಪ್ರೇಕ್ಷಕ ಮಹಾಶಯರ ಗಮನ ಸೆಳೆಯುವುದಲ್ಲದೇ, ಸಿನಿರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಪ್ರಸನ್ನ ಹೆಸರು ಕೇಳಿದಾಕ್ಷಣ ಅವರು ಏಕ್ದಮ್ ಕಣ್ಮುಂದೆ ಬಂದು ನಿಲ್ಲಲ್ಲ. ಅದಕ್ಕೆ ಮೊದಲ ಕಾರಣಭಜರಂಗಿ-2′ ಚಿತ್ರ ಬಿಡುಗಡೆಯಾಗದಿರುವುದು ಭಜರಂಗಿಗೂ ಮೊದಲು ಖಡಕ್ ಪಾತ್ರಕ್ಕೆ ಪ್ರಸನ್ನ ಬಣ್ಣ ಹಚ್ಚದೇ ಇರುವುದು ಮಗದೊಂದು ಕಾರಣ ಇರಬಹುದು. ಆದೇನೆ ಇರಲಿ, ಟ್ರೇಲರ್‌ನಿಂದಲೇ ನೋಡುಗರ ಎದೆಯಲ್ಲಿ ಸಣ್ಣಗೆ ನಡುಕ ಹುಟ್ಟಿಸಿರುವ ಪ್ರಸನ್ನ, `ಭಜರಂಗಿ-2′ ಚಿತ್ರದ ಮೂಲಕ ಬೆಳ್ಳಿತೆರೆಮೇಲೆ ಧಗಧಗಿಸಿದ ಮೇಲೆ ಭಜರಂಗಿ ಪ್ರಸನ್ನ ಎಂದೇ ಖ್ಯಾತಿ ಪಡೆಯುತ್ತಾರೆನ್ನುವ ನಿರೀಕ್ಷೆ ಪ್ರಸನ್ನರ ಲುಕ್-ಗೆಟ್ಟಪ್ಪು ನೋಡಿದ್ರೇನೇ ಗೊತ್ತಾಗುತ್ತೆ. ಆದರೆ, ನಟ ಸೌರವ್ ಲೋಕಿ ಭಜರಂಗಿ ಲೋಕಿಯೆಂದು ಪ್ರಖ್ಯಾತಿಹೊಂದಿದಂತೆ, ಪ್ರಸನ್ನ ಹೆಸರು ಮಾಡ್ತಾರಾ? ಜನ ಒಪ್ಪಿಕೊಳ್ತಾರಾ ಕಾದುನೋಡಬೇಕು.

ಎದೆಮಟ್ಟಕ್ಕಿರುವ ಬಿಳಿ-ಕಪ್ಪು ಗಡ್ಡ, ದಪ್ಪನೆಯ ಮೀಸೆ, ಬೆಕ್ಕಿನ ಕಣ್ಣುಗುಡ್ಡೆ, ತಲೆಮೇಲೆ ಕಂಚುಮಿಶ್ರಿತ ಎರಡು ಕೋಡು, ತೋಳಿಗೆ ಕಪ್ಪು ಪಟ್ಟಿ, ಕಟ್ಟುಮಸ್ತಾದ ದೇಹಕ್ಕೆ ಕಂಬಳಿಯಂತಹ ಉಡುಪು, ಗುರಾಯಿಸಿದ್ರೆ ಗುಮ್ಮೆಬಿಡ್ತೀನಿ ಎನ್ನುವಂತಹ ನೋಟ ನೋಡುಗರ ಬೆವರಿಳಿಸುತ್ತಿದೆ. ಅಟ್ ದಿ ಸೇಮ್ ಟೈಮ್, ಆನೆಯಂತಹ ಕಿವಿ, ಕಿವಿಗೆ ಓಲೆ, ಹೊಟ್ಟೆ ಹಾಗೂ ಹಣೆ ಮೇಲೆ ಕೆತ್ತಿರುವ ಟ್ಯಾಟೂ, ಸೊಂಟಕ್ಕೆ ಸಿಗಿಸಿಕೊಂಡಿರುವ ಕತ್ತಿ, ಡಿಫರೆಂಟ್ ಹೇರ್ ಸ್ಟೈಲ್ ಜೊತೆಗೆ ಕೈಯಲ್ಲಿ ಬಾರಿಕೋಲು ಹಿಡಿದು ಜೀಪ್ ಮೇಲೆ ಹತ್ತಿ ಎದುರಾಳಿ ಮೇಲೆ ಎಗರುತ್ತಿರುವ ಮತ್ತೊಂದು ಲುಕ್ ಪ್ರೇಕ್ಷಕರ ಗುಂಡಿಯನ್ನ ಶೇಕ್ ಮಾಡಿಬಿಟ್ಟಿದೆ. ಪಾತ್ರದ ಮೇಲೆ ನಿರೀಕ್ಷೆ ಹೆಚ್ಚುತ್ತಿದೆ. ಯಾರು ಈ ಪಾತ್ರಧಾರಿ ಎನ್ನುವ ಹುಡುಕಾಟ ಶುರುವಾಗಿದೆ. ನಿರ್ದೇಶಕ ಎ. ಹರ್ಷ ಈ ಪಾತ್ರಧಾರಿ ಅದೆಲ್ಲಿಂದ ಹೆಕ್ಕಿ ತಂದರು ಎನ್ನುವ ಪ್ರಶ್ನೆಯ ಜೊತೆಜೊತೆಗೆ ಪಾತ್ರದ ಸೃಷ್ಟಿ, ಪಾತ್ರಕ್ಕಾಗಿ ನಡೆದ ತಯ್ಯಾರಿ, ಮೇಕಪ್ಪು, ಕಾಸ್ಟ್ಯೂಮ್, ಆರ್ಟ್ ಡೈರೆಕ್ಷನ್ ಹೀಗೆ ಎಲ್ಲದರ ಕುರಿತಾಗಿ ಚರ್ಚೆ ನಡೆಯುತ್ತಿದೆ.

ಭಜರಂಗಿ-2' ಟ್ರೇಲರ್‌ನಲ್ಲಿರುವುದು ಹೊರತುಪಡಿಸಿ ಪ್ರಸನ್ನ ಪಾತ್ರದ ಬಗ್ಗೆ ಹೆಚ್ಚಿನ ಡೀಟೈಲ್ಸ್ ಲಭ್ಯವಾಗಿಲ್ಲ. ಪ್ರಸನ್ನ ಪಾತ್ರದ ಹೆಸರೇನು? ಪಾತ್ರಕ್ಕೋಸ್ಕರ ಮಾಡಿಕೊಂಡ ತಯ್ಯಾರಿ ಹೇಗಿತ್ತು? ಪ್ರಸನ್ನ ಹಿನ್ನಲೆಯೇನು? ಇದೆಲ್ಲದರ ಸಂಪೂರ್ಣ ಮಾಹಿತಿ ತಿಳಿಯಬೇಕಿದೆ. ಈ ಮಧ್ಯೆ ನಿರ್ದೇಶಕರ ಕಲ್ಪನೆಯಲ್ಲಿಭಜರಂಗಿ-2′ ಪಾತ್ರವರ್ಗದ ಸೃಷ್ಟಿಯ ಬಗ್ಗೆ ಕೇಳಿದಾಗ ಅವರು ಹೇಳಿದಿಷ್ಟು. ಭಜರಂಗಿಯಲ್ಲಿ ಪ್ರತಿಪಾತ್ರಕ್ಕೂ ಅದರದ್ದೇ ಆದ ತೂಕಯಿದೆ. ಕಥೆ ಬರೆಯೋಕೆ ಕುಳಿತಾಗಲೇ ಪ್ರತಿ ಕ್ಯಾರೆಕ್ಟರ್ ಡಿಸೈನ್ ಮಾಡಿದ್ದೆ. ಈ ಪಾತ್ರ ಹೀಗೆ ಇರಬೇಕು, ಈ ಪಾತ್ರ ಹೀಗೆಯೇ ತೆರೆಮೇಲೆ ಕಾಣಬೇಕು ಅಂತ ಡಿಸೈಡ್ ಮಾಡಿದ್ದೆ. ಅದರಂತೇ ಮೂಡಿಬಂದಿದೆ ತನ್ನ ಕಲ್ಪನೆಯ ಶಿಲೆಗೆ ಜೀವಬಂದಿದೆ. ಅದಕ್ಕಾಗಿ, ಪಾತ್ರಧಾರಿಗಳು ಬೆವರು ಸುರಿಸಿ ರಕ್ತಬಸಿದರೆ, ಆರ್ಟ್ ಡೈರೆಕ್ಟರ್ ರವಿಯವರ ತಂಡ, ಮೇಕಪ್ ಮ್ಯಾನ್ ಪ್ರಕಾಶ್, ಯೋಗಿ ಅಂಡ್ ಗಣೇಶ್ ಅವರ ಕಾಸ್ಟ್ಯೂಮ್ ತಂಡ ಕೈಚಳಕ ತೋರಿದೆ. ಒಬ್ಬೊಬ್ಬ ಕಲಾವಿದರಿಗೆ ಮೇಕಪ್ ಹಚ್ಚಲಿಕ್ಕೆ ಮೂರು ಮೂರು ಗಂಟೆ ಹಿಡಿದರೂ ಕೂಡ ನೀರಾಯಾಸವಾಗಿ ಕೆಲಸ ಮಾಡಿದೆ. ಇವತ್ತು ಭಜರಂಗಿಗೋಸ್ಕರ ಇಡೀ ಕರುನಾಡು ಕಾಯ್ತಿದೆ ಅಂದರೆ ಅದಕ್ಕೆ ಇಡೀ ಭಜರಂಗಿ ಬಳಗದ ಬೆವರು ಸಾಕ್ಷಿ.

ಲೋಡೆಡ್ ಗನ್ನಿನಂತಿರುವ ಶಿವಣ್ಣ ಕಣ್ಣಲ್ಲೇ ಎನ್‌ಕೌಂಟರ್ ಮಾಡಿ `ಭಜರಂಗಿ’ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ. ಇವರೊಟ್ಟಿಗೆ ಕೈಲಿ ಸಿಗಾರ್ ಹಿಡಿದು ಕಿಕ್ಕೇರಿಸಿರುವ ಶ್ರುತಿ ಕೂಡ ಪ್ರೇಕ್ಷಕರಿಂದ ಧಮ್ ಅಂದ್ರೆ ಇದು ಕಣ್ರೋ ಎನಿಸಿಕೊಂಡಿದ್ದಾರೆ. ಕಾಟನ್ ಸೀರೆಯುಟ್ಟುಕೊಂಡು, ಕೂದಲು ಬಿಟ್ಟುಕೊಂಡು, ಹಣೆಗೆ ದೊಡ್ಡದಾಗಿ ಕುಂಕುಮ ಇಟ್ಟುಕೊಂಡು ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್ ಪೇಟೆ ಜೊತೆ ಎಂಟ್ರಿಕೊಡ್ತಿರುವ ಭಾವನಾ ಕೂಡ ಬೆರಗುಗೊಳಿಸಿದ್ದಾರೆ. ವೈಟ್ ಅಂಡ್ ವೈಟ್ ಕಚ್ಚೆ ಪಂಜೆ ತೊಟ್ಟು, ಕೊರಳಿಗೆ ಕಪ್ಪು ಕವಚ ಧರಿಸಿ, ಬೋಳುತಲೆ ಹಿಂದಗಡೆ ಚೂರೇ ಚೂರು ಕೂದಲು ಬಿಟ್ಟು ಭಜರಂಗಿ ಲೋಕಿ ಕೂತೂಹಲ ಕೆರಳಿಸಿದ್ದಾರೆ. ಹೀಗೆ, ಪ್ರತಿಯೊಂದು ಪಾತ್ರವೂ ನಿರೀಕ್ಷೆ ಎನ್ನುವ ಬೆಟ್ಟವನ್ನ ಏರುವಂತೆ ಮಾಡಿದೆ. ಆದರೆ, ಕೊರೊನಾದಿಂದ ಭಜರಂಗಿಯ ದರ್ಶನಕ್ಕೆ ಮತ್ತೆ ಅಡ್ಡಿಯಾಗಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸೆಪ್ಟೆಂಬರ್ 10 ರಂದು ಭಜರಂಗಿ-2 ಚಿತ್ರದ ಭರಾಟೆ ಶುರುವಾಗ್ಬೇಕಿತ್ತು. ಗೌರಿ-ಗಣೇಶ ಹಬ್ಬಕ್ಕೆ ಸ್ಪೆಷಲ್ಲಾಗಿ ಭಜರಂಗಿ ದರ್ಶನ ಕೊಡಬೇಕಿತ್ತು, ಬಿಗ್‌ಸ್ಕ್ರೀನ್‌ನಲ್ಲಿ ಹ್ಯಾಟ್ರಿಕ್ ಹೀರೋ ಧಗಧಗಿಸಬೇಕಿತ್ತು. ಆದರೆ ಕೊರೊನಾ ಮೂರನೇ ಅಲೆಯಿಂದ ವೀಕೆಂಡ್ ಲಾಕ್‌ಡೌನ್ ಹಾಗೂ ನೈಟ್‌ಕರ್ಫ್ಯೂ ಜಾರಿಗೊಳಿಸೋದಕ್ಕೆ ಸರ್ಕಾರ ಮುಂದಾಗಿರೋದ್ರಿಂದ ಭಜರಂಗಿ-2 ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಟ್ರೈಲರ್ ಬಿಡುಗಡೆ ಕೂಡ ಪೋಸ್ಟ್‌ ಪೋನ್ಡ್‌ ಆಗಿದೆ. ಇದ್ರಿಂದ ಚಿತ್ರಪ್ರೇಮಿಗಳಿಗೆ ಕೊಂಚ ನಿರಾಸೆಯಾಗರ‍್ಬೋದು ಆದರೆ ಅನ್ನದಾತ ಉಳಿಬೇಕು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೋಟಿ ಸುರಿಬೇಕು ಅಂದ್ರೆ ಚಿತ್ರಮಂದಿರ ಹೌಸ್‌ಫುಲ್ ಆಗ್ಬೇಕು. ಥಿಯೇಟರ್ ತುಂಬಬೇಕು ಅಂದರೆ ಸರ್ಕಾರ 100 ಪರ್ಸೆಂಟ್ ಅನುಮತಿ ಕೊಡ್ಬೇಕು. ಸದ್ಯಕ್ಕೆ ಇದನ್ನೆಲ್ಲಾ ನಿರೀಕ್ಷೆ ಮಾಡುವಂಗಿಲ್ಲ ಹೀಗಾಗಿ, ಜಯ್ಯಣ್ಣ-ಕಂಬೈನ್ಸ್ ನಿರ್ಮಾಣದ ಭಜರಂಗಿ-2 ಚಿತ್ರ ಯಾವಾಗ ಬರುತ್ತೋ ಬರಲಿ ಅಲ್ಲಿವರೆಗೂ ಒಂಟಿಕಾಲಿನಲ್ಲಿ ನಿಂತು ಕಾಯೋಣ ಅಲ್ಲವೇ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಶುಗರ್ ಫ್ಯಾಕ್ಟರಿಯಲ್ಲಿ ಬಾಬಾ ಸೆಹಗಲ್ ಹ್ಯಾಂಗೋವರ್ !

ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ , ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ.

ಸೆಪ್ಟೆಂಬರ್ 10 ಗಣೇಶ ಚತುರ್ಥಿಯ ಸಂಭ್ರಮ. ಆ ಶುಭದಿನದಂದು “ಶುಗರ್ ಫ್ಯಾಕ್ಟರಿ” ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್ ಟೀಸರ್‌ ಬರಲಿದೆ.

ಬಹದ್ದೂರ್ ಚೇತನ್ ಅವರು ಬರೆದಿರುವ ಈ ಹಾಡಿಗೆ ಖ್ಯಾತ ಗಾಯಕ ಬಾಬಾ ಸೆಹಗಲ್ ಧ್ವನಿಯಾಗಿದ್ದಾರೆ. ಕಫಿರ್ ರಫಿ ಸಂಗೀತ ನೀಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರೊಡನೆ ಈ‌ ಹಾಡಿಗೆ ಸೋನಾಲ್ ಮಾಂಟೆರೊ ಹೆಜ್ಜೆ ಹಾಕಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಗೋವಾದಲ್ಲಿ ಈ ಹಾಡನ್ನು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಸೆರೆ ಹಿಡಿದಿದ್ದಾರೆ.

ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಗಿರೀಶ್ ಆರ್. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌

ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಅಂತೂ ಫಸ್ಟ್ ಶೆಡ್ಯೂಲ್ ಮುಗಿಸಿದ ಭಗವಾನ್ ಶ್ರೀ ಕೃಷ್ಣ ಪರಮಾತ್ಮ!

ಇತ್ತೀಚೆಗೆ ಶ್ರೀ ಕೃಷ್ಣ ಜೋರು ಸದ್ದು ಮಾಡಿದ್ದು ಗೊತ್ತೇ ಇದೆ. ಈಗ ಆ ಕೃಷ್ಣ ಪರಮಾತ್ಮಮತ್ತೆ ಸುದ್ದಿಯಲ್ಲಿದ್ದಾನೆ.
ಹೌದು, ಕೃಷ್ಣ ಜನ್ಮಾಷ್ಟಮಿ ಬೆನ್ನಲ್ಲೇ “ಭಗವಾನ್ ಶ್ರೀ ಕೃಷ್ಣ ಪರಮಾತ್ಮ” ಕೂಡ ಸದ್ದು ಮಾಡುತ್ತಿದ್ದಾನೆ. ಈ ಸಿನಿಮಾ ಈಗ ಮೊದಲ ಹಂತದ
ಚಿತ್ರೀಕರಣ ಸದ್ದಿಲ್ಲದೆ ಮುಗಿಸಿದೆ ಅನ್ನೋದೇ ಈ ಹೊತ್ತಿನ ಸುದ್ದಿ.

ಬಹುತೇಕ ಈ ಚಿತ್ರ ಬೆಂಗಳೂರಿನಲ್ಲೇ ಚಿತ್ರೀಕರಣವಾಗಿದೆ.
ಶೀರ್ಷಿಕೆ ಕೇಳಿದ ತಕ್ಷಣ ಇದೊಂದು ಪೌರಾಣಿಕ ಸಿನಿಮಾ ಅಂದುಕೊಳ್ಳುವುದು‌ ಸಹಜ. ಆದರೆ, ಇದೊಂದು ಪಕ್ಕಾ ಮಾಸ್ ಸಿನಿಮಾ ಅನ್ನುತ್ತಾರೆ ನಿರ್ದೇಶಕ ಅನೂಪ್ ಆಂಟೋನಿ.

ಈ ಶೀರ್ಷಿಕೆ ಯಾಕೆ ಇಡಲಾಗಿದೆ ಎಂಬುದಕ್ಕೆ ಸಿನಿಮಾ ನೋಡಿದ ಬಳಿಕ ಉತ್ತರ ಸಿಗಲಿದೆ ಎಂಬುದು ನಿರ್ದೇಶಕರ ಮಾತು.
ಭರತ್ ಸಿನಿ ಕ್ರಿಯೇಷನ್ಸ್ ಬ್ತಾನರ್ ನಲ್ಲಿ ಭರತ್ ವಿಷ್ಣುಕಾಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ನಿರ್ಸೆಡಶಕ ಅನೂಪ್ ಆಂಟೋನಿ ಈ ಹಿಂದೆ ‘ಕಥಾ ವಿಚಿತ್ರ’ ಹಾಗೂ ‘ಮೆಹಬೂಬ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರಿಗೆ ಇದು ಮೂರನೇ ಚಿತ್ರ. ಕಥೆ, ಚಿತ್ರಕಥೆ ಕೂಡ ನಿರ್ದೇಶಕರದೆ.
ಬಹದ್ದೂರ್ ಚೇತನ್ ಮಾತುಗಳನ್ನು ಪೋಣಿಸಿದ್ದಾರೆ.

ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಮನುಗೌಡ ಅವರ ಸಂಕಲನ ಚಿತ್ರಕ್ಕಿದೆ.

ಧ್ರುವನ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿ. ಯಶ್ ಶೆಟ್ಟಿ, ಯಶಸ್ ಸೂರ್ಯ, ಕಾಮಿಡಿ ಕಿಲಾಡಿಗಳು ಸೂರಜ್, ಶೋಭ್ ರಾಜ್, ಬಲರಾಜವಾಡಿ, ಸ್ವಾತಿ ಇತರರು ಇದ್ದಾರೆ.

error: Content is protected !!