ಲಾಕ್ ಡೌನ್ ಹಿನ್ನೆಲೆಯಲ್ಲಿ ಮೇ 10 ರಿಂದಲೇ ಕನ್ನಡ ಕಿರುತೆರೆಯ ಎಲ್ಲಾ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಲು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ತೀರ್ಮಾನ ಕೈಗೊಂಡಿದೆ. ಸರ್ಕಾರ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮೇ 10 ರಿಂದ ಮೇ 24 ರವರೆಗೂ ಚಿತ್ರೀಕರಣ ಬಂದ್ ಆಗಲಿದೆ ಅಂತ ಅಸೋಷಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ತಿಳಿಸಿದ್ದಾರೆ.
ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟುವ ಸಂಬಂಧ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಇದಕ್ಕೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಎಲ್ಲಾ ರೀತಿಯ ಬೆಂಬಲ ನೀಡಲು ಒಮ್ಮತದ ತೀರ್ಮಾನ ತೆಗೆದುಕೊಂಡಿದೆ. ಅಂತೆಯೇ ಮೇ 10 ರಿಂದ ಮೇ 24 ರವರೆಗೆ ಕನ್ನಡದ ಎಲ್ಲಾ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಗಳ ಚಿತ್ರೀಕರಣ ಸ್ಥಗಿತಗೊಳ್ಳಲಿದೆ. ಸರ್ಕಾರದ ಮಾರ್ಗಸೂಚಿ ಅನುಸಾರ ರೆಸಾರ್ಟ್, ಪ್ರವಾಸಿ ತಾಣ, ಬೆಂಗಳೂರಿನ ಹೊರವಲಯ ಅಥವಾ ಮನೆ ಇಲ್ಲೇಯೇ ಚಿತ್ರೀಕರಣ ನಡೆಯುವಂತಿಲ್ಲ ಎಂದು ಶಿವಕುಮಾರ್ ತಿಳಿಸಿದ್ದಾರೆ. ಹಾಗೊಂದು ವೇಳೆ ಸರ್ಕಾರದ ಕೋವಿಡ್ ನಿಯಮ ಮೀರಿಯೂ ಯಾರಾದರೂ ಚಿತ್ರೀಕರಣ ಮಾಡಿದ್ದಲ್ಲಿ ಅವರ ವಿರುದ್ಧ ಕಠಿಣ ಶಿಕ್ಷೆ ಆಗಲಿದೆ. ಮುಂದೆ ಆಗುವ ಅನಾಹುತಗಳಿಗೆ ತಾವು ಜವಾಬ್ದಾರಿ ಆಗುವುದಿಲ್ಲ ಅಂತಲೂ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಿಮಗೆಲ್ಲ ಗೊತ್ತೇ ಇದೆ. ಲಾಕ್ಡೌನ್ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ. ಚಿತ್ರೋದ್ಯಮವೂ ಅದರಿಂದ ಹೊರತಾಗುಳಿದಿಲ್ಲ. ರಾಜ್ಯದಲ್ಲಿ ಜನತಾ ಕರ್ಪ್ಯೋ ಜಾರಿ ಆದ ದಿನದಿಂದಲೇ ಶೂಟಿಂಗ್ ಸೇರಿದಂತೆ ಸಿನಿಮಾ ಚಟುವಟಿಕೆಗಳೆಲ್ಲವೂ ಬಂದ್ ಆಗಿವೆ. ಇಷ್ಟಾಗಿಯೂ ಸೀರಿಯಲ್ ಹಾಗೂ ರಿಯಾಲಿಟಿ ಶೋ ಗಳ ಚಿತ್ರೀಕರಣ ಮಾತ್ರ ನಿಂತಿಲ್ಲ. ಲಾಕ್ ಡೌನ್ ಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಸೀರಿಯಲ್ ಚಿತ್ರೀಕರಣಗಳು ಶೂಟಿಂಗ್ ಮನೆಗಳಲ್ಲಿ ಸದ್ದಿಲ್ಲದೆ ನಡೆಯುತ್ತಿರುವುದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರೀಕರಣ ನಡೆಯುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿಲ್ಲವಾದರೂ, ಅಲ್ಲಿ ಚಿತ್ರೀಕರಣದಲ್ಲಿ ಭಾಗಿಯಾದವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಉಳಿದವರೆಲ್ಲರೂ ಭಯದಲ್ಲಿದ್ದರೂ, ಚಾನೆಲ್ ನವರು ಮಾತ್ರ ಇದ್ಯಾವುದನ್ನು ಲೆಕ್ಕಿಸದೇ ಚಿತ್ರೀಕರಣ ಮಾಡುತ್ತಿರುದ್ದಾರೆನ್ನುವ ಆರೋಪಗಳು ಕೇಳಿಬಂದಿವೆ. ಅದಕ್ಕೆ ಕೆಲವು ಕಹಿ ಘಟನೆಗಳು ಸಾಕ್ಷಿ ಆಗಿವೆ.
ಕನ್ನಡದ ಖಾಸಗಿ ಟಿವಿಯೊಂದರಲ್ಲಿ ಪ್ರಸಾರವಾಗುವ “ಸುಂದರಿʼ ಸೀರಿಯಲ್ ಚಿತ್ರೀಕರಣ ನಗರದ ರೆಸಾರ್ಟ್ ವೊಂದರಲ್ಲಿ ನಡೆಯುತ್ತಿದ್ದು, ಅಲ್ಲಿನ ಕಲಾವಿದರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಕಲಾವಿದರು ಭಯದಿಂದಲೇ ಅದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಾಗಿ ಬಂದಿದೆ. ಇದೊಂಥರ ತಮ್ಮಲ್ಲಿ ಭಯ ಹುಟ್ಟಿಸಿದೆ ಅಂತ ಕಲಾವಿದರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹಾಗೆಯೇ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಂಟೆಂಸ್ಟ್ ವೊಬ್ಬರು ಅನಾರೋಗ್ಯಕ್ಕೆ ಒಳಗಾಗಿರುವುದು ತೀವ್ರ ಆತಂಕಕ್ಕೆ ದೂಡಿದೆ. ಇಷ್ಟಾಗಿಯೂ ಕನ್ನಡದ ಅನೇಕ ಧಾರಾವಾಹಿಗಳಿಗೆ ಈಗಲೂ ಕದ್ದು ಮುಚ್ಚಿ ಚಿತ್ರೀಕರಣ ನಡೆಯುತ್ತಲೇ ಇದ್ದು, ಮನರಂಜನಾ ವಾಹಿನಿಗಳ ಜನರ ಸಾವು-ನೋವುಗಳ ನಡುವೆಯೂ ಹಣ ಮಾಡುವ ದಂಧೆಗೆ ನಿಂತಿವೆ ಅಂತಲೂ ಪ್ರೇಕ್ಷಕರೊಬ್ಬರು ದೂರಿದ್ದಾರೆ.
ಅಷ್ಟೇ ಅಲ್ಲ, ಈ ಮನರಂಜನಾ ವಾಹಿನಿಗಳಿಗೆ ಜನರ ಬಗ್ಗೆ ಕಿಂಚತ್ತು ಕಾಳಜಿಯೇ ಇಲ್ಲ. ಈಗ ನ್ಯೂಸ್ ಚಾನೆಲ್ ನೋಡುವುದಕ್ಕಿಂತ ಹೆಚ್ಚಾಗಿ ಜನರು ಮನರಂಜನಾ ವಾಹಿನಗಳನ್ನೇ ಹೆಚ್ಚಾಗಿ ನೋಡುತ್ತಿದ್ದಾರೆ. ಸೀರಿಯಲ್, ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಗೆ ಜನರು ಕಾಯುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಮನರಂಜನಾ ವಾಹಿನಿಗಳು ತಮ್ಮ ಕಾರ್ಯಕ್ರಮ ಪ್ರಸಾರ ಮಾಡುವ ಸಂದರ್ಭದಲ್ಲೇ ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಸಣ್ಣ ಪುಟ್ಟ ಕಿರುಚಿತ್ರಗಳನ್ನು, ಇಲ್ಲವೇ ಸೆಲಿಬ್ರಿಟಿಗಳ ಹೇಳಿಕೆಗಳನ್ನು ಪ್ರಸಾರ ಮಾಡಬಹುದು. ಇಲ್ಲಿ ತನಕ ಒಂದೇ ಒಂದು ಮನರಂಜನೆ ಚಾನೆಲ್ ಕೂಡ ಈ ಕೆಲಸ ಮಾಡಿಲ್ಲ.
ಬದಲಿಗೆ ಜನರನ್ನು ಕಿತ್ತುಹೋದ ಅರ್ಥ ಹೀನ ಮನೆಹಾಳು ಕತೆಗಳ ಧಾರಾವಾಹಿಗಳ ಮೂಲಕ ಜನರನ್ನು ಹಾಳು ಮಾಡುವುದರ ಜತೆಗೆ ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳುವುದಕ್ಕಷ್ಟೇ ತಮ್ಮನ್ನು ತಾವು ಮೀಸಲಿರಿಸಿಕೊಂಡಿದ್ದಾರೆ. ಸರ್ಕಾರ ಇವುಗಳಿಗೂ ಕಡಿವಾಣ ಹಾಕಬೇಕಿದೆ ಅಂತ ವೀಕ್ಷಕರೇ ಆಗ್ರಹಿಸಿದ್ದಾರೆ.
ಕನ್ನಡದ ಜನಪ್ರಿಯ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರ ವಾಗುವ “ಸುಂದರಿ” ಸೀರಿಯಲ್ ಕಲಾವಿದನಿಗೆ ಕೊರೊನಾ ಪಾಸಿಟಿವ್ ದೃಡಪಟ್ಟಿದ್ದು, ಆದರೂ ಶನಿವಾರ ಶಕ್ತಿ ರೆಸಾರ್ಟ್ ನಲ್ಲಿ ಶೂಟಿಂಗ್ ನಡೆಯುತ್ತಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಧಾರಾವಾಹಿಯ ಮೂಲಗಳೇ ಈ ಬಗ್ಗೆ ಮಾಹಿತಿ ರವಾನಿಸಿದ್ದು, ಕಲಾವಿದರ ಬಗ್ಗೆ ಸೀರಿಯಲ್ ನಿರ್ಮಾಣ ಸಂಸ್ಥೆ ಹಾಗೂ ಖಾಸಗಿ ಮನರಂಜನಾ ವಾಹಿನಿಗೆ ಕಾಳಜಿಯೇ ಇಲ್ಲ ಎಂದು ದೂರಿದ್ದಾರೆ.
ಸರ್ಕಾರ ಮಾರ್ಗ ಸೂಚಿ ಅನುಸಾರ ಈಗ ಒಂದು ಶೂಟಿಂಗ್ ಅಥವಾ ಡಬ್ಬಿಂಗ್ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಜನರು ಸೇರುವಂತಿಲ್ಲ. ಕೊರೊನಾ ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದು, ಜನ ಸೇರುವುದರಿಂದ ಹೆಚ್ಚು ಅಪಾಯ ಇದೆ. ಹಾಗಾಗಿ ಎಲ್ಲಿಯೂ ಗುಂಪು ಸೇರುವುದರ ಮೇಲೆ ಸರ್ಕಾರ ನಿರ್ಬಂಧ ಹೇರಿದೆ. ಅದೇ ಕಾರಣಕ್ಕೆ ಈಗ ಸಿನಿಮಾ ಹಾಗೂ ಸೀರಿಯಲ್ ಔಡ್ ಡೋರ್ ಚಿತ್ರೀಕರಣ ಗಳು ಬಂದ್ ಆಗಿವೆ. ಆದರೂ ಕನ್ನಡದ ಮನರಂಜನಾ ವಾಹಿನಿಗಳು ಮಾತ್ರ ಕದ್ದು ಮುಚ್ಚಿ ಚಿತ್ರೀಕರಣ ಮಾಡುತ್ತಿದ್ದು, ಈಗ ಅಲ್ಲಿ ಆಪಾಯಗಳು ಘಟಿಸುತ್ತಿಗೆ ಎನ್ನುವುದಕ್ಕೆ ಕೆಲವು ರಿಯಾಲಿಟಿ ಶೋಗಳು ಸಾಕ್ಷಿ ಆಗಿದ್ದವು. ಈಗ ಅಂತಹದೇ ಘಟನೆ ಸೀರಿಯಲ್ ಯೂನಿಟ್ ನಲ್ಲೂ ಅಗಿದೆ ಎನ್ನುವುದಕ್ಕೆ ಸುಂದರಿ ಸೀರಿಯಲ್ ಪ್ರಕರಣ ಸಾಕ್ಷಿ ಆಗಿದೆ. ಚಾನೆಲ್ ನ ಪ್ರೋಗ್ರಾಮ್ ಹೆಡ್ ಶಿಲ್ಪಾ ಎನ್ನುವವರೇ ಮುಂದೆ ನಿಂತು ಈ ಚಿತ್ರೀಕರಣ ಮಾಡಿಸುತ್ತಿದ್ದಾರಂತೆ. ಕಲಾವಿದರು ಭಯ ಪಟ್ಟರೂ ಕೂಡ , ಚಿತ್ರೀಕರಣ ಅನಿವಾರ್ಯ, ಆಗಲೇ ಬೇಕು, ನಿಮಗೆ ಸೂಕ್ತ ರಕ್ಷಣೆ ಕೊಡುತ್ತೇವೆ ಎಂದು ಹೇಳಿ ಕರೆಸಿಕೊಂಡು ಚಿತ್ರೀಕರಣ ಮಾಡುವಾಗ ಇದೆಲ್ಲ ಬೆಳಕಿಗೆ ಬಂದಿದೆ. ಈಗ ಸೀರಿಯಲ್ ನಲ್ಲಿರುವ ಎಲ್ಲರಗೂ ಜೀವ ಭಯ ಶುರುವಾಗಿದೆ ಎನ್ನುವ ಮಾತನ್ನು ಧಾರಾವಾಹಿ ಕಡೆಯವರೇ ಬಹಿರಂಗ ಪಡಿಸಿದ್ದಾರೆ ಎನ್ನುವ ಮಾತುಗಳನ್ನು ಮೂಲಗಳು ತಿಳಿಸಿವೆ. ಆದರೆ, ಇದು ನಿಜಾನಾ ಅಥವಾ ಇಲ್ಲವೋ ಎಂಬುದನ್ನು ಸಂಬಂಧಿಸಿದವರು ಸ್ಪಷ್ಟಪಡಿಸಬೇಕಿದೆ.
“ಬೆಟ್ಟದ ಹೂವು” ಖ್ಯಾತಿಯ ನಟ “ಶಂಖನಾದ” ಅರವಿಂದ್ ನಿಧನರಾಗಿದ್ದಾರೆ. ಕೊರೊನಾ ಸೋಂಕು ತಗುಲಿ, ಕಳೆದ ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ( ಮೇ.7) ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಕೊನೆಯುಸಿರೆಳೆದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಶಂಖನಾದ ಅರವಿಂದ್
ಅವರಿಗೆ 70 ವರ್ಷ ವಯಸ್ಸು ಆಗಿತ್ತು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಆಗಲಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಇವರ ಮಡದಿ ರಮಾ ಅರವಿಂದ್ ಅವರೂ ಅನಾರೋಗ್ಯದಿಂದ ವಿಧಿವಶರಾಗಿದ್ದರು. ರಮಾ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು.
ಸುಮಾರು 250ಕ್ಕೂ ಹೆಚ್ಚು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ “ಶಂಖನಾದ” ಅರವಿಂದ್ ನಟಿಸಿದ್ದರು. 70-80ರ ದಶಕದಲ್ಲಿ ಅರವಿಂದ್ ಬಹು ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು ಅವರು, ಕಾಶಿನಾಥ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಚಿರಪರಿಚಿತರಾಗಿದ್ದರು. ಇತ್ತೀಚಿಗೆ ಕನ್ನಡದ ಕೆಲವೊಂದು ಧಾರಾವಾಹಿಗಳಲ್ಲಿಯೂ ಅವರು ಅಭಿನಯಿಸಿದ್ದರು.
“ಶಂಖನಾದ” ಅರವಿಂದ್ ಅವರ ಬಗ್ಗೆ ಬಹುತೇಕ ಗೊತ್ತಿರುವುದು ಒಬ್ಬ ಹಾಸ್ಯ ನಟನಾಗಿ. ಆದರೆ ಅವರು ಚಿತ್ರರಂಗಕ್ಕೆ ಬಂದಿದ್ದು ಒಬ್ಬ ಹೀರೊ ಆಗಿ. ಅದಕ್ಕೆ ಸಾಕ್ಷಿಯೇ “ಶಂಖನಾದ” ಚಿತ್ರ. ಮೊದಲ ಬಾರಿಗೆ ಅರವಿಂದ್ ಅವರು, ಹೀರೋ ಆಗಿ ಅಭಿನಯಿಸಿದ ಚಿತ್ರವದು. “ಶಂಖನಾದ” ಚಿತ್ರವನ್ನು ಸಂಪಿಗೆ ಹಳ್ಳಿಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆ ಚಿತ್ರದಲ್ಲಿ ಅವರೇ ಹೈಲೈಟ್. ಆ ಕಾಲದಲ್ಲಿ ಅದು ಜನಪ್ರಿಯವಾದ ಚಿತ್ರ ವದು. ಆರಂಭದಲ್ಲಿ ಈ ಚಿತ್ರಕ್ಕೆ ಅಷ್ಟಾಗಿ ಜನ ಮನ್ನಣೆ ಸಿಗಲಿಲ್ಲ. ಆನಂತರ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು.ಅಲ್ಲಿಂದ ಅವರ ಹೆಸರಿಗೆ “ಶಂಖನಾದ” ಎಂಬ ಹೆಸರೂ ಸೇರಿಕೊಂಡಿತು.
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವು ವಿಶೇಷತೆಗಳಿವೆ. ಅಂತಹ ವಿಶೇಷತೆಗಳಲ್ಲಿ ಡಾ.ರಾಜ್ಕುಮಾರ್ ಅಭಿನಯದ ಮೊದಲ ಸಿನಿಮಾ “ಬೇಡರ ಕಣ್ಣಪ್ಪ” ಚಿತ್ರವೂ ಒಂದು. ಆ ಚಿತ್ರದ ಬಗ್ಗೆ ಈಗ ಇಲ್ಲೇಕೆ ಪ್ರಸ್ತಾಪ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ, ಮೇ. 7. ಹೌದು, ಈ ದಿನ ಡಾ.ರಾಜ್ ಅಭಿನಯದ ಮೊದಲ ಸಿನಿಮಾ “ಬೇಡರ ಕಣ್ಣಪ್ಪ” ಬಿಡುಗಡೆಯಾದ ದಿನ. ಮೇ.7, 1954ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಈಗ 67 ವರ್ಷ.
ಕನ್ನಡ ಚಿತ್ರರಂಗಕ್ಕೆ ರಾಜ್ಕುಮಾರ್ ಅವರ “ಬೇಡರ ಕಣ್ಣಪ್ಪ” ಅಮೂಲ್ಯ ಕೊಡುಗೆ. ಆಗಷ್ಟೇ ಕನ್ನಡ ಚಿತ್ರರಂಗ ಮೆಲ್ಲನೆ ಗರಿಗೆದರುತ್ತಿದ್ದ ಸಂದರ್ಭ. ಅದಾಗಲೇ ಒಂದಷ್ಟು ಕಲಾವಿದರು ಬೆಳ್ಳಿತೆರೆಗೆ ಅಪ್ಪಳಿಸಿದ್ದರು. ಅಷ್ಟೇ ಅಲ್ಲ, ಭಕ್ತಿ ಪ್ರಧಾನ ಸಿನಿಮಾಗಳು, ಸಾಮಾಜಿಕ ಚಿತ್ರಗಳು, ಐತಿಹಾಸಿಕ ಚಿತ್ರಗಳು ಆಗಷ್ಟೇ ಬರುತ್ತಿದ್ದ ಕಾಲಘಟ್ಟವದು.
ಅಂತಹ ಸಮಯದಲ್ಲೇ “ಬೇಡರ ಕಣ್ಣಪ್ಪ” ಚಿತ್ರವೂ ಬಿಡುಗಡೆಯಾಗಿತ್ತು. ಈ ಮೊದಲ ಸಾಮಾಜಿಕ ಚಿತ್ರವನ್ನು ತೆರೆಗೆ ಪರಿಚಯಿಸಿದ್ದು, ಕನ್ನಡ ರಂಗಭೂಮಿಯ ಪಿತಾಮಹರಲ್ಲಿ ಒಬ್ಬರಾದ ಗುಬ್ಬಿ ವೀರಣ್ಣ. ಹೌದು, ಈ ಚಿತ್ರ ಅವರ ನಿರ್ಮಾಣ ಸಂಸ್ಥೆಯಿಂದ ಮೂಡಿಬಂದಿದ್ದು. ಗುಬ್ಬಿ ವೀರಣ್ಣ ಕರ್ನಾಟಕ ಪ್ರೊಡಕ್ಷನ್ಸ್ ನಲ್ಲಿ ತಯಾರಾದ ಚಿತ್ರವದು. ಅಷ್ಟೇ ಅಲ್ಲ, ಅದು ಅವರದೇ ಸಾಗರ್ ಚಿತ್ರಮಂದಿರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಎಚ್.ಎಲ್.ಎನ್. ಸಿಂಹ ನಿರ್ದೇಶಿಸಿದ್ದಾರೆ. ಹಾಡುಗಳಿಗೆ ಲಾವಣಿ ವಿಧ್ವಾನ್ ಎಸ್.ನಂಜಪ್ಪ ಅವರ ಸಾಹಿತ್ಯವಿದೆ. ಚಿದಂಬರಂ ಎಸ್.ಜಯರಾಮನ್ , ಎಂ.ಎಲ್.ವಸಂತ ಕುಮಾರಿ, ಟಿ.ಎಸ್.ಭಗವತಿ ಮೋತಿ ಅವರ ಧ್ವನಿ ಹಾಡುಗಳಿಗಿದೆ. ಎಸ್.ಮಾರುತಿರಾವ್ ಅವರ ಛಾಯಾಗ್ರಹಣವಿದೆ. ಆರ್.ಸುದರ್ಶನಂ ಸಂಗೀತ ನೀಡಿದ್ದಾರೆ.
ಚಿತ್ರದಲ್ಲಿ ಹಾಡೊಂದರ ಬಗ್ಗೆ ಇಲ್ಲಿ ಹೇಳಲೇಬೇಕು. “ನಲಿಯುವ ಬಾ ಇನಿಯ” ಎನ್ನುವ ಹಾಡು ಡಾ.ರಾಜಕುಮಾರ್ ಹಾಗೂ ನಟಿ ಪಂಡರಿಬಾಯಿ ಅವರ ಮೊದಲ ಗೀತೆ ಅನ್ನೋದು ವಿಶೇಷ. ಈ ಚಿತ್ರದ ಮೊದಲ ದೃಶ್ಯದಲ್ಲಿ ರಾಜ್ ಕುಮಾರ್ ರವರ ಎಂಟ್ರಿಯಾಗುತ್ತೆ. ಇನ್ನು, ಕಥೆ ಬಗ್ಗೆ ಹೇಳೋದಾದರೆ, ಗಂಧರ್ವರ ಲೋಕದ ಮಣಿಮಂತ ಹಾಗೂ ಶರ್ಮಿಷ್ಠಾ ಜೋಡಿಯಿಂದ ಆಗುವ ಒಂದು ಅಚಾನಕ್ ತಪ್ಪಿನ ಸಲುವಾಗಿ ಶಪಿತಗೊಂಡ ಮಣಿಮಂತ ಮತ್ತು ಶರ್ಮಿಷ್ಠಾ ದುಃಖಿಸುತ್ತಿರುವಾಗ ಪರಮೇಶ್ವರ ಹೇಳುವ ಸಂಭಾಷಣೆ ಹೀಗಿದೆ.
“ಅದೊಂದು ಕೆಟ್ಟ ಘಳಿಗೆ ಎಂದು ವ್ಯಥೆ ಪಡದೆ, ಅದೊಂದು ಮಹಾ ಘಳಿಗೆ ಎಂದು ನೀನೇಕೆ ಸಂತೋಷ ಚಿತ್ತನಾಗಿರಬಾರದು” ಇಂತಹ ಅರ್ಥಗರ್ಭಿತ ಸಂಭಾಷಣೆ ಜೊತೆ ಕನ್ನಡದ ಹೆಮ್ಮೆಯ ಕಲಾವಿದ ಬೆಳ್ಳಿ ತೆರೆಯನ್ನು ಬೆಳಗಲು ಆರಂಭಿಸಿದ ಮಹಾನ್ ಘಳಿಗೆ ಅದಾಗಿತ್ತು ಅನ್ನೋದೇ ವಿಶೇಷ.
ಮುಂಬರುವ ದಿನಗಳಲ್ಲಿ ಈ ಚಿತ್ರ ತೆಲುಗಿನಲ್ಲಿಯೂ ತೆರೆಗೆ ಬರುತ್ತೆ. ಅಲ್ಲಿ “ಕಾಳಹಸ್ತಿ ಮಹಿಮೆ” ಹೆಸರಲ್ಲಿ ಸಿನಿಮಾ ರೆಡಿಯಾಗುತ್ತೆ. ಅಲ್ಲೂ ರಾಜ್ ಕುಮಾರ್ ಅಭಿನಯಿಸಿದರು. ವಿಶೇಷವೆಂದರೆ, ರಾಜಕುಮಾರ್ ಅವರೇ ಪಾತ್ರಕ್ಕೆ ತೆಲುಗಲ್ಲಿ ಡಬ್ ಮಾಡುತ್ತಾರೆ. ನಂತರದ ದಿನಗಳಲ್ಲಿ ಈ ಸಿನಿಮಾ ಹಿಂದಿಯಲ್ಲೂ ತೆರೆಕಾಣುತ್ತೆ. ವಿಶೇಷವೆಂದರೆ, ಮತ್ತೆ ಮೂರು ದಶಕಗಳ ಬಳಿಕ ಶಿವರಾಜ್ ಕುಮಾರ್ ಅಭಿನಯದಲ್ಲಿ”ಶಿವ ಮೆಚ್ಚಿದ ಕಣ್ಣಪ್ಪ” ಸಿನಿಮಾ ಕೂಡ ಬಂತು.
ಈ ಸಿನಿಮಾ ಕೂಡ ರಾಜ್ ಸಂಸ್ಥೆಯಿಂದ ನಿರ್ಮಾಣವಾಯ್ತು. ಈ ಸಿನಿಮಾ ಮಾಡುವ ಮೊದಲು, “ಬೇಡರ ಕಣ್ಣಪ್ಪ” ಸಿನಿಮಾ ಹೆಸರಿಟ್ಟುಕೊಂಡೇ ನಟ,ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಅವರು ಮಾಡಲು ತೀರ್ಮಾನಿಸಿದ್ದರು. ಅವರು “ಕೃಷ್ಣ ನೀ ಕುಣಿದಾಗ” ಸಿನಿಮಾ ಬಿಝಿಯಲ್ಲಿದ್ದರು. ಅಷ್ಟೊತ್ತಿಗೆ ರಾಜ್ ಸಂಸ್ಥೆಯಿಂದ “ಶಿವ ಮೆಚ್ಚಿದ ಕಣ್ಣಪ್ಪ” ಸಿನಿಮಾ ರೆಡಿಯಾಗಿ ಬಿಡುಗಡೆಯಾಗುತ್ತೆ.
ಅದೇನೆ ಇರಲಿ, ರಾಜಕುಮಾರ್ ಅಭಿನಯದ ಮೊದಲ ಚಿತ್ರ ಬೇಡರ ಕಣ್ಣಪ್ಪ ಚಿತ್ರ ಬಿಡುಗಡೆಯಾಗಿ ಇಂದಿಗೆ 67 ವರ್ಷಗಳು ಅನ್ನೋದೇ ಈ ಹೊತ್ತಿನ ವಿಶೇಷ.
ಸದ್ಯ ಬೆಂಗಳೂರಿನ ಪರಿಸ್ಥಿತಿ ನೋಡಿದಾಗ ಭಯವಾಗುತ್ತಿದೆ. ಎಷ್ಟೋ ಜನ ಆಕ್ಸಿಜನ್, ಬೆಡ್ ಇಲ್ಲದೆ ನರಳುತ್ತಿದ್ದಾರೆ. ಹೀಗಾಗಿ ನಾನು ನನ್ನ ಶೂಟಿಂಗ್ ಹೌಸ್ ವೊಂದನ್ನು ಕೋವಿಡ್ ರೋಗಿಗಳ ಸೇವೆಗೆ ನೀಡಲು ಬಯಸಿದ್ದೇನೆ. ಈ ಮೂಲಕ ಜಾಗದ ಅಭಾವ ಕಡಿಮೆ ಮಾಡುವ ಸಣ್ಣ ಪ್ರಯತ್ನ ನನ್ನದು
ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಲೆಕ್ಕವಿಲ್ಲದಷ್ಟು ಮಂದಿ ಜೀವ ಬಿಡುತ್ತಿದ್ದಾರೆ. ಸರ್ಕಾರ ಮಾಡುವಷ್ಟು ಮಾಡಿದರೂ ಕೊರೊನಾ ಹಾವಳಿ ನಿಂತಿಲ್ಲ. ಸಮರೋಪಾದಿಯಲ್ಲಿ ಸೇವೆಗಳು ನಿರಂತರವಾಗಿದ್ದರೂ ನಿಯಂತ್ರಣಕ್ಕೆ ಬರದೆ, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಇಲ್ಲಿ ಪರ, ವಿರೋಧಗಳ ಚರ್ಚೆಯೂ ನಡೆಯುತ್ತಿದೆ. ಈಗ ಆ ಬಗ್ಗೆ ಮಾತನಾಡುವ ಸಂದರ್ಭವಲ್ಲ. ಮನುಷ್ಯತ್ವ ರೂಪಿಸಿಕೊಂಡಿರುವ ಮಂದಿ ತಮ್ಮ ಕೈಲಾದ ಸೇವೆಗೆ ಮುಂದಾಗಿದ್ದಾರೆ.
ಇದಕ್ಕೆ ಸಿನಿಮಾ ರಂಗದ ಹಲವರೂ ಕೈ ಜೋಡಿಸಿದ್ದಾರೆ. ಈಗಾಗಲೇ ನಟ ಸುದೀಪ್ ಅವರು, ಆಕ್ಸಿಜನ್ ಕೊರತೆ ನೀಗಿಸಲು ಮುಂದಾಗಿದ್ದು ಗೊತ್ತೇ ಇದೆ. ಹಾಗೆಯೇ, ಗೀತ ಸಾಹಿತಿ ಕವಿರಾಜ್ ಕೂಡ ಒಂದು ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಕೊರೊನಾ ಸೋಂಕಿತರ ನೆರವಿಗೆ ಧಾವಿಸಲು ರೂಪುರೇಷೆ ನಡೆಸುತ್ತಿದ್ದಾರೆ. ಅದಕ್ಕೆ ಸಿನಿಮಾದ ಒಂದಷ್ಟು ಜನ ಸಾಥ್ ಕೊಡುವ ಭರವಸೆಯನ್ನೂ ನೀಡಿದ್ದಾರೆ. ಇಲ್ಲೀಗ ಆಕ್ಸಿಜನ್ ಸಮಸ್ಯೆ ತಲೆದೋರಿದೆ. ಬೆಡ್ ವ್ಯವಸ್ಥೆ ಇಲ್ಲದೆಯೂ ಜನರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮದೂ ಒಂದು ಸಣ್ಣ ಸೇವೆ ಅಂದುಕೊಂಡು ಮುಂದೆ ಬಂದಿರುವ ಯುವ ನಟಿ ಸಾತ್ವಿಕ ಅವರು ತಮ್ಮ ಶೂಟಿಂಗ್ ಹೌಸ್ ಅನ್ನು ಕೋವಿಡ್ ಸೆಂಟರ್ ಆಗಿ ರೂಪಿಸಿ, ಕೊರೊನಾ ಸೋಂಕಿತರಿಗೆ ನೆರವಾಗಲು ತೀರ್ಮಾನಿಸಿದ್ದಾರೆ.
ಹೌದು, ನಟಿ ಸಾತ್ವಿಕ ಅವರು ಹಲವು ವರ್ಷಗಳಿಂದ ನಟನೆಯ ಜೊತೆಗೆ ಧಾರಾವಾಹಿ, ಸಿನಿಮಾಗಳ ಚಿತ್ರೀಕರಣಕ್ಕಾಗಿ ಶೂಟಿಂಗ್ ಹೌಸ್ ಅನ್ನು ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಮೂರು ಬಂಗಲೆಗಳನ್ನು ಶೂಟಿಂಗ್ ಬಾಡಿಗೆಗೆ ನೀಡುತ್ತಿದ್ದಾರೆ. ಇದರ ಜೊತೆಯಲ್ಲಿ ಸಾಮಾಜಿಕ ಕೆಲಸಗಳಲ್ಲೂ ತೊಡಗಿರುವ ಸಾತ್ವಿಕ, ಕೊರೊನಾ ಹಾವಳಿಗೆ ತತ್ತರಿಸುತ್ತಿರುವ ಜನರಿಗೆ ಸಿಗದ ಆಕ್ಸಿಜನ್, ಬೆಡ್ ಸಮಸ್ಯೆ ಅರಿತು ತಮ್ಮ ಶೂಟಿಂಗ್ ಹೌಸ್ ಅನ್ನು ಸೋಂಕಿತರ ಸೇವೆಗೆ ನೀಡಲು ಬಯಸಿದ್ದಾರೆ.
ಈ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ನಟಿ ಸಾತ್ವಿಕ, ” ನಾನು ಹಲವು ವರ್ಷಗಳಿಂದ ಬೆಂಗಳೂರಲ್ಲಿ ಮೂರು ವಿಶಾಲವಾದ ಬಂಗಲೆಗಳನ್ನು ಸಿನಿಮಾ,ಧಾರಾವಾಹಿ ಶೂಟಿಂಗ್ ಗಾಗಿ ಬಾಡಿಗೆ ನೀಡುತ್ತ ಬಂದಿದ್ದೇನೆ. ಈಗ ಕೊರೊನಾ ಹಾವಳಿ ಇದ್ದುದರಿಂದ ಸರ್ಕಾರ ಬ್ರೇಕ್ ಹಾಕಿದೆ. ಹಾಗಾಗಿ ಶೂಟಿಂಗ್ ನಡೆಯುತ್ತಿಲ್ಲ. ಸದ್ಯ ಬೆಂಗಳೂರಿನ ಪರಿಸ್ಥಿತಿ ನೋಡಿದಾಗ ಭಯವಾಗುತ್ತಿದೆ. ಎಷ್ಟೋ ಜನ ಆಕ್ಸಿಜನ್, ಬೆಡ್ ಇಲ್ಲದೆ ನರಳುತ್ತಿದ್ದಾರೆ. ಹೀಗಾಗಿ ನಾನು ನನ್ನ ಶೂಟಿಂಗ್ ಹೌಸ್ ವೊಂದನ್ನು ಕೋವಿಡ್ ರೋಗಿಗಳ ಸೇವೆಗೆ ನೀಡಲು ಬಯಸಿದ್ದೇನೆ. ಈ ಮೂಲಕ ಜಾಗದ ಅಭಾವ ಕಡಿಮೆ ಮಾಡುವ ಸಣ್ಣ ಪ್ರಯತ್ನ ನನ್ನದು. ಅಂದಹಾಗೆ, ಕೆಂಗೇರಿ ಬಸ್ ಸ್ಟಾಪ್ ಬಳಿ ವಿಶಾಲವಾದ ಹೌಸ್ ಅನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲು ತೀರ್ಮಾನಿಸಿದ್ದು, ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ನನ್ನ ಈ ಹೌಸ್ ಪಡೆದು ಕೋವಿಡ್ ಸೆಂಟರ್ ಆಗಿ ರೂಪಿಸಲಿ. ನಾನು ನನ್ನ ಮನೆಯ ಜೊತೆಗೆ ನೀರು, ವಿದ್ಯುತ್ ಬಿಲ್ ವ್ಯವಸ್ಥೆ ಮಾಡುತ್ತೇನೆ. ಉಳಿದಂತೆ ಸರ್ಕಾರ ಆಕ್ಸಿಜನ್, ಬೆಡ್, ವೈದ್ಯ, ಸಿಬ್ಬಂದಿ ಸೇರಿದಂತೆ ರೋಗಿಗಳ ಸೇವೆಗಡ ಅಗತ್ಯ ವಸ್ತುಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಿ” ಎಂದು ಸಾತ್ವಿಕ ಹೇಳಿದ್ದಾರೆ.
ಸಾತ್ವಿಕ , ನಟಿ
ಇನ್ನು ಮನೆ 60*80 ವಿಸ್ತೀರ್ಣ ಹೊಂದಿದ್ದು, ಮೂರು ಬೆಡ್ ರೂಮ್ ಗಳ ಎರಡು ಫ್ಲೋರ್ ಇದೆ. ಬೇಸ್ ಮೆಂಟ್ ಕೂಡ ಇದೆ. ಕ್ಲೋಸ್ಡ್ ಟೆರೇಸ್ ಕೂಡ ಇದೆ. ಸದ್ಯಬೀ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ಸಾತ್ವಿಕ, ಕೂಡಲೇ ಸರ್ಕಾರದ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಈ ಅನುಕೂಲ ಸದ್ಬಳಕೆ ಮಾಡಿಕೊಳ್ಳಲಿ ಎಂದಿರುವ ಸಾತ್ವಿಕ, ಕೊರೊನಾ ಸೋಂಕಿತರಿಗೆ ಈ ವ್ಯವಸ್ಥೆ ಮಾಡಲು ಮುಂದಾಗಲು ಬಯಸಿದರೆ ನನ್ನ ಮೊಬೈಲ್ ಸಂಖ್ಯೆ 99008 71777 ಕರೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಅದೇನೆ ಇರಲಿ, ಒಬ್ಬ ನಟಿಯಾಗಿ ಕೊರೊನಾ ಸೋಂಕಿತರಿಗೆ ನೆರವಾಗಲು ಬಯಸಿರುವ ಸಾತ್ವಿಕ ಅವರ ಈ ಪ್ರಯತ್ನದಿಂದ ಒಂದಷ್ಟು ಮಂದಿಗೆ ಸಹಾಯವಾದರೆ ಅಷ್ಟೇ ಸಾಕು. ಸರ್ಕಾರ ಈ ಬಗ್ಗೆ ಗಮನ ಹರಿಸಿ, ಆ ಭಾಗದ ಸೋಂಕಿತರಿಗಾದರೂ ನೆರವಾಗಲಿ.
ಕೊರೋನಾ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವಾಗ ಕೆಲವರು ಬಿಗ್ ಬಾಸ್ ಮನೆಯೇ ಸುರಕ್ಷಿತ ತಾಣ ಅಂದುಕೊಂಡಿದ್ದು ಹೌದು. ಆದರೆ ಆ ಮನೆಯ ಬಗ್ಗೆಯೂ ಈಗ ಅನುಮಾನ ಶುರುವಾಗಿದೆ. ಯಾಕಂದ್ರೆ, ಕಲರ್ಸ್ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಗೂ ಅನಾರೋಗ್ಯದ ಕಂಟಕ ಎದುರಾಗಿದೆ. ಇದರ ಸ್ಟಾರ್ ನಿರೂಪಕರಾದ ನಟ ಸುದೀಪ್ ಅನಾರೋಗ್ಯದ ಕಾರಣ ಶೋ ನಿರೂಪಣೆಗೆ ಗೈರಾದ ಬೆನ್ನಲೇ, ಶೋ ನ ಕಂಟೆಂಸ್ಟ್ನಲ್ಲಿ ಒಬ್ಬರಾಗಿದ್ದ ಮಲೆನಾಡ ಚೆಲುವೆ ದಿವ್ಯಾ ಉರುಡುಗ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಬಿಗ್ ಬಾಸ್ ಮನೆಯಿಂದ ಹೊರ ಕರೆದುಕೊಂಡು ಬರಲಾಗಿದೆ ಎನ್ನುವ ಸುದ್ದಿ ಇದೆ.
ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಅವರ ಅನಾರೋಗ್ಯಕ್ಕೆ ನಿಖರವಾದ ಕಾರಣ ಏನೆಂಬುದು ಇನ್ನು ಗೊತ್ತಾಗಿಲ್ಲ. ಆದರೆ ಕೊರೋನಾ ಕಂಟಕ ಮನೆ ಹೊರಗಡೆ ತಿರುಗಾಡಿದವರನ್ನು ಕಾಡುವ ಹಾಗೆ ಮನೆಯೊಳಗಡೆ ಅಡಗಿ ಕುಳಿತವರನ್ನೂ ಬಿಟ್ಟಿಲ್ಲ ಎನ್ನುವುದು ನಿಮಗೂ ಗೊತ್ತು. ಹಾಗಾಗಿಯೇ ಕೊರೋನಾ ಕಂಟಕ ಬಿಗ್ ಬಾಸ್ ಮನೆಗೂ ಎದುರಾಯಿತಾ ಎನ್ನುವ ಆತಂಕ ಶುರುವಾಗಿದೆ. ಹೌದು. ಹಾಗಂತ ನಟಿ ದಿವ್ಯಾ ಅವರಿಗೆ ಕೊರೋನಾವೇ ಅಂತ ಭಾವಿಸಬೇಕಿಲ್ಲ. ಅವರಿಗೆ ಸಹಜವಾದ ಅನಾರೋಗ್ಯದ ಸಮಸ್ಯೆಯಂತೆ. ಹಾಗಾಗಿಯೇ ಅವರನ್ನು ಆಸ್ಪತ್ರೆಗೆ ಸೇರಿಸಲು ಬಿಗ್ ಬಾಸ್ ಮನೆಯಿಂದ ಹೊರಗೆ ಕರೆತರಲಾಗಿದೆ ಎನ್ನುವ ಮಾತುಗಳಿವೆ.
ಬಿಗ್ ಬಾಸ್ ಮನೆಯೊಳಗಿರುವ ಕಂಟೆಂಸ್ಟ್ ಗಳ ಪೈಕಿ ಸದಾ ಲವಲವಿಕೆಯಿಂದ ಇರುವ ಕಂಟೆಂಸ್ಟ್ ಅಂದ್ರೆ ದಿವ್ಯಾ ಉರುಡುಗ. ಆದರೆ ಕೆಲವು ದಿನಗಳಿಂದ ಅವರು ಇದಕ್ಕಿದ್ದಂತೆ ಮಂಕಾಗಿ ಬಿಟ್ಟಿದ್ದರು. ಇದು ವೀಕ್ಷಕರಿಗೆ ಮಾತ್ರವಲ್ಲ, ಅಲ್ಲಿದ್ದವರಿಗೂ ಅನುಮಾನ ತರಿಸಿತ್ತು. ಹೀಗೆಯೇ ಮೊನ್ನೆ ಬಿಗ್ ಬಾಸ್ ಮನೆಯೊಳಗಿನ ಅವರ ಸಹ ಸ್ಪರ್ಧಿಗಳು ವಿಚಾರಿಸಿದಾಗ ದಿವ್ಯಾ ಒಂದು ವಿಚಾರ ಹೇಳಿಕೊಂಡಿದ್ದರು. ಇದಾದ ಬಳಿಕ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತು. ಸದ್ಯಕ್ಕೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಅನ್ನೋದಷ್ಟೇ ಮಾಹಿತಿಇದೆ.
ಬೆಂಗಳೂರು ನಗರದ ಯಾವ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆನ್ನುವುದು ನಿಗೂಢವಾಗಿದೆ. ಏನೇ ಇರಲಿ, ಆದಷ್ಟು ಬೇಗ ಗುಣಮುಖರಾಗಲಿ. ಅದರಾಚೆ ಕುತೂಹಲ ಇರೋದು ಅಂದ್ರೆ, ಮತ್ತೆ ಅವರು ವಾಪಾಸ್ಬಿಗ್ ಬಾಸ್ ಮನೆಗೆ ಎಂಟ್ರಿಯಾಗ್ತಾರಾ ಅಂತ. ಯಾಕಂದ್ರೆ ಈಗ ಕೊರೋನಾ ಎಲ್ಲಾ ಕಡೆಗೂ ವ್ಯಾಪಿಸಿಕೊಂಡಿದೆ. ಆರೋಗ್ಯವಾಗಿದ್ದವರೂ ಕೂಡ ಎಷ್ಟು ಸೇಫ್ ಅನ್ನೋದು ಖಾತರಿ ಇಲ್ಲ. ಪ್ರತಿ ಮನೆಯಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್ ಕಟ್ಟಿಟ್ಟ ಬುತ್ತಿ ಅಂತಲೇ ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ಬಂದು ಹೋದ ನಂತರ ದಿವ್ಯಾ ಅವರಿಗೆ ಕೊರೋನಾ ಬರೋದಿಲ್ಲ ಅನ್ನೋದಕ್ಕೆ ಗ್ಯಾರಂಟಿ ಏನು? ಅದೇ ಕಾರಣಕ್ಕೆ ದಿವ್ಯಾ ಅವರನ್ನು ಮತ್ತೆ ಬಿಗ್ಬಾಸ್ ಮನೆಗೆ ಕಳುಹಿಸುವುದು ಬಹುತೇಕ ಡೌಟ್. ಆದರೂ ಕಲರ್ಸ್ ಕನ್ನಡ ಏನೆಲ್ಲ ಮುಂಜಾಗ್ರತೆ ವಹಿಸಿದೆ ಅನ್ನೋದು ಗೊತ್ತಿಲ್ಲ.
ಕನ್ನಡ ಚಿತ್ರರಂಗದಲ್ಲಿ “ಕವಿರತ್ನ ಕಾಳಿದಾಸ”, “ಅಂಜದ ಗಂಡು”, “ಕಿಂದರಿ ಜೋಗಿ” ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನರಾಗಿದ್ದಾರೆ.
81 ವರ್ಷದವರಾಗಿದ್ದ ರೇಣುಕಾ ಶರ್ಮಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಕಳೆದ ಕೆಲವು ದಿನಗಳಿಂದ ಗಿರಿನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿಮೋನಿಯಾ ಖಾಯಿಲೆ ಇದ್ದ ಕಾರಣ ನಿರ್ದೇಶಕ ರೇಣುಕಾ ಶರ್ಮಾ, ನಿನ್ನೆ ರಾತ್ರಿ ಕೊರೋನಾ ಸೋಂಕಿನಿಂದಾಗಿ ವಿಧಿವಶರಾಗಿದ್ದಾರೆ.
1981ರಲ್ಲಿ “ಅನುಪಮ” ಚಿತ್ರದ ಮೂಲಕ ನಿರ್ದೇಶಕರಾದ ರೇಣುಕಾ ಶರ್ಮಾ,” ಕವಿರತ್ನ ಕಾಳಿದಾಸ” “ಶಹಬ್ಬಾಸ್ ವಿಕ್ರಮ್”, “ಸತ್ಕಾರ” ಹಾಗೂ “ನಮ್ಮ ಊರು ದೇವತೆ”, “ಅಂಜದ ಗಂಡು”, “ಕಿಂದರಿ ಜೋಗಿ”,”ಶಬರಿ ಮಲೆ ಶ್ರೀ ಅಯ್ಯಪ್ಪ”, “ಭರ್ಜರಿ ಗಂಡು” ಹಾಗೂ “ಹಠಮಾರಿ ಹೆಣ್ಣು ಕಿಲಾಡಿ ಗಂಡು”, “ಕೊಲ್ಲೂರು ಶ್ರೀ ಮೂಕಾಂಬಿಕೆ’ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ರೇಣುಕಾ ಶರ್ಮಾ ಪತ್ನಿ ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ವರ್ಗ ತೀರ್ಮಾನಿಸಿದೆ.
ಕೊರೊನಾ ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ಮನೆಯಲ್ಲೇ ಇರುವಂತೆ ಮಾಡಿರುವ ಕೊರೊನಾ ಒಂದು ರೀತಿ ಹಳೆಯ ನೆನಪುಗಳಿಗೂ ಜಾರುವಂತೆ ಮಾಡಿದೆ. ಸುಮ್ಮನೆ ಕೂರದ ಹಾಗೆ ಕೆಲಸ ಮಾಡುವುದಕ್ಕೂ ಕಾರಣವಾಗಿದೆ.
ಎರಡನೇ ಅಲೆಯಿಂದ ಎಲ್ಲರೂ ನರಳುವಂತಾಗಿದೆ. ಈ ಬಾರಿಯ ಕೊರೊನಾ ಹಾವಳಿ ಜೋರಾಗಿಯೇ ಇದೆ. ವರ್ಷಾನುಗಟ್ಟಲೆಯಿಂದ ಕಂಡು ಕಾಣದ ಒಂದು ಸಣ್ಣ ವೈರಾಣು ಲಕ್ಷಾಂತರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ.
ಇದಕ್ಕೆ ಸ್ಯಾಂಡಲ್ ವುಡ್ ಕೂಡ ನಲುಗಿ ಹೋಗಿದೆ. ಇಂತಹ ಸಮಯದಲ್ಲಿ ಕನ್ನಡ ಸಿನಿ ತಾರೆಯರು ಕೊರೊನಾ ವಾರಿಯರ್ಸ್ ಆಗಿಯೂ ನಿಂತಿದ್ದಾರೆ. ಸಾರ್ವಜನಿಕವಾಗಿ ಬೀದಿಗಿಳಿದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ, ಕೆಲವರು ತಮ್ಮ ತಮ್ಮ ಊರುಗಳಿಗೆ ತೆರಳಿ, ತೋಟದ ಕೆಲಸ ಮಾಡಿಕೊಂಡು ಸಮಯ ಕಳೆಯುತ್ತಿದ್ದಾರೆ.
ಇನ್ನೂ ಕೆಲವರು ರೆಸಾರ್ಟ್, ಫಾರ್ಮ್ ಹೌಸ್ ಸೇರಿದಂತೆ ಇತರೆಡೆ ಬೀಡು ಬಿಟ್ಟಿದ್ದಾರೆ. ಈ ಪೈಕಿ ಹಾಸ್ಯ ನಟ ಚಿಕ್ಕಣ್ಣ ಕೊಂಚ ಭಿನ್ನವಾಗಿದ್ದಾರೆ.
ಹೌದು, ಸ್ಯಾಂಡಲ್ವುಡ್ ಕಾಮಿಡಿ ಸ್ಟಾರ್ ಚಿಕ್ಕಣ್ಣ ಈ ಹಿಂದೆ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ, ಗಾರೆ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹಾಸ್ಯದ ಮೂಲಕ ಛಾಪು ಮೂಡಿಸಿದ ಹಾಸ್ಯದಿಂದ ಚಿಕ್ಕಣ್ಣ , ತಮ್ಮ ತೋಟದ ಮನೆಯಲ್ಲಿ ಗಾರೆ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಸದ್ಯ ಸಿನಿಮಾ ಶೂಟಿಂಗ್ ಸ್ಥಗಿತವಾಗಿದೆ. ಹೀಗಾಗಿ ಅವರು ತಮ್ಮ ತೋಟದಲ್ಲಿದ್ದಾರೆ. ಅಲ್ಲೊಂದು ಮನೆ ಕಟ್ಟುತ್ತಿದ್ದು, ಆ ಮನೆಯ ಗಾರೆ ಕೆಲಸದಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶಿವರಾಜ ಕುಮಾರ್ ಅವರ ಹಾಡೊಂದನ್ನು ಆರ್ ಸಿ ಬಿ ತಂಡದ ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್ ವೆಲ್ ಹಾಡಿದ್ದಾರೆ! ಅರೇ, ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಮ್ಯಾಕ್ಸ್ ವೆಲ್ ಶಿವರಾಜ ಕುಮಾರ್ ಸಿನಿಮಾದ ಹಾಡು ಹಾಡಿದ್ದು ಯಾಕೆ? ಈ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಈ ಸುದ್ದಿ ನೋಡಿ.
ಕೊರೊನಾ ಹಾವಳಿ ಹೆಚ್ಚಾದ ಕಾರಣಕ್ಕೆ ಈ ಬಾರಿ ಐಪಿಎಲ್ ಅರ್ಧದಲ್ಲೇ ರದ್ದಾಗಿದೆ. ಆರ್ಸಿಬಿ ತಂಡ ಈ ಸಲ ಸಖತ್ ಆಗಿಯೇ ಆಡುತ್ತಿತ್ತು. ಅವರ ಆಟ ನೋಡಿದರೆ ಕಪ್ ಗೆಲ್ಲುತ್ತದೆಂಬ ನಿರೀಕ್ಷೆ ಇತ್ತು. ಆದರೆ ಐಪಿಎಲ್ ರದ್ದಾಯ್ತು. ಹೀಗಾಗಿ ಕಪ್ ಆಸೆಯೂ ಕಮರಿತು.
ಆರ್ಸಿಬಿ ಪರವಾಗಿ ಈ ಬಾರಿ ಕಣಕ್ಕೆ ಇಳಿದಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಆಟದಲ್ಲಿ ಮುಂಚೂಣಿಯಲ್ಲಿದ್ದರು. ಆದರೆ, ಐಪಿಎಲ್ ರದ್ದಾಗಿ ಆ ಕನಸು ಹಾಗೆಯೇ ಉಳಿದಿದೆ. ಆದರೆ ಗ್ಲೆನ್ ಮ್ಯಾಕ್ಸ್ವೆಲ್ ಈ ವೇಳೆ ನೀಡಿದ ಒಂದು ಇಂಟರ್ ವ್ಯೂ ಸದ್ಯಕ್ಕೆ ಕನ್ನಡಿಗರಿಗೆ ಮತ್ತು ಶಿವರಾಜಕುಮಾರ್ ಫ್ಯಾನ್ಸ್ ಗೆ ಖುಷಿ ಕೊಟ್ಟಿದೆ.
ಅಷ್ಟಕ್ಕೂ ಆ ಖುಷಿಯ ವಿಷಯವೇನು ಗೊತ್ತಾ? ಆರ್ಸಿಬಿ ತಂಡದ ಜೊತೆಗಿದ್ದು, ಸಂದರ್ಶನ, ನಿರೂಪಣೆ ಮಾಡುತ್ತಿರುವ ಮಿಸ್ಟರ್ ನ್ಯಾಗ್ಸ್ ಅಲಿಯಾಸ್ ದಾನಿಶ್ ಸೇಠ್ ಅವರು ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಸ್ವಿಮ್ಮಿಂಗ್ ಪೂಲ್ ನಲ್ಲಿ ಸಂದರ್ಶನ ಮಾಡಿದ್ದಾರೆ. ಅಲ್ಲಿ ಮ್ಯಾಕ್ಸ್ವೆಲ್ ಅವರು ಶಿವರಾಜ್ ಕುಮಾರ್ ಅವರ ಚಿತ್ರದ ಹಾಡೊಂದನ್ನು ಗುನುಗಿದ್ದಾರೆ.
ಸಂದರ್ಶನದಲ್ಲಿ ದಾನೀಶ್ ಸೇಠ್ ಅವರು ಮ್ಯಾಕ್ಸ್ವೆಲ್ಗೆ ‘ಹೊಡಿ ಮಗ, ಹೊಡಿ ಮಗ’ ಅಂತ ಹಾಡು ಹೇಳಿಕೊಡುತ್ತಾರೆ. ಆ ಹಾಡನ್ನು ಹಾಗೆಯೇ ಗ್ಲೆನ್ ಮ್ಯಾಕ್ಸ್ವೆಲ್ ಹಾಡುತ್ತಾರೆ. ಬಳಿಕ ಈ ಹಾಡು ಯಾರದ್ದು ?’ ಎಂದು ದಾನೀಶ್ ಪ್ರಶ್ನಿಸುತ್ತಾರೆ. ಆಗ ಗ್ಲೆನ್ ಮ್ಯಾಕ್ಸ್ವೆಲ್, ಇದು ಶಿವಣ್ಣ ಅಂತ ಹೇಳ್ತಾರೆ. ಸದ್ಯ ಮ್ಯಾಕ್ಸ್ವೆಲ್ ಸಂದರ್ಶನದ ಈ ವಿಡಿಯೋ ವೈರಲ್ ಆಗಿದೆ.
ಇನ್ನು ಆ ಸಂದರ್ಶನದಲ್ಲಿ ಮ್ಯಾಕ್ಸ್ ವೆಲ್ ಕನ್ನಡದ ಕೆಲ ಪದಗಳನ್ನೂ ಹೇಳುತ್ತಾರೆ. ಅದೇನೆ ಇರಲಿ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಕನ್ನಡ ಹಾಡು ಹಾಡಿದ್ದು ಜೋರು ಸುದ್ದಿಯಾಗಿರೋದಂತೂ ನಿಜ.
ಬೆಂಗಳೂರಿನ ಬಗ್ಗೆ, ಕೊಹ್ಲಿ, ಎಬಿಡಿ ಬಗ್ಗೆಯೂ ಮ್ಯಾಕ್ಸ್ವೆಲ್ ಮಾತನಾಡುತ್ತಾರೆ. ಸಚಿನ್ ಹಾಗೂ ರಿಕಿ ಪಾಂಟಿಂಗ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದಾಗ ರಿಕಿ ಪಾಂಟಿಂಗ್ ಅನ್ನು ಆರಿಸುತ್ತಾರೆ ಮ್ಯಾಕ್ಸ್ವೆಲ್.