Categories
ಸಿನಿ ಸುದ್ದಿ

ಸಹಾಯಧನದಲ್ಲೂ ತಾರತಮ್ಯ ಬೇಡ : ಸರ್ಕಾರಕ್ಕೆ ಹಿರಿಯ ರಂಗ ಕಲಾವಿದ ಸಿಧ್ದರಾಜು ಮನವಿ

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸರ್ಕಾರ ರಂಗ ಕಲಾವಿದರಿಗೆ ಘೋಷಿಸಿರುವ ಸಹಾಯಧನಕ್ಕೆ ವಯೋಮಿತಿ ಫಿಕ್ಸ್‌ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ನಾಡಿನ ವಿವಿಧಡೆಗಳ ಅನೇಕ ಮಂದಿ ಹಿರಿಯ ರಂಗ ಕಲಾವಿದರು ಸರ್ಕಾರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಿರಿಯ ಕಲಾವಿದರಿಗೆ ಸಿಗದ ಸಹಾಯ ಧನ, ತಮಗ್ಯಾಕೆ ಬೇಕು ಅಂತ ದಾವಣಗೆರೆಯ ಹಿರಿಯ ರಂಗ ಕಲಾವಿದ ಸಿದ್ದರಾಜು, ಶಿವಮೊಗ್ಗ ಸತೀಶ್‌ ಸೇರಿದಂತೆ ಅನೇಕ ಮಂದಿ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಕಿರಿಯರಿಗೆ ಸಿಗದ ಸಹಾಯಧನ ತಮಗೆ ಬೇಡ ಎಂದಿದ್ದಾರೆ.

ರಂಗಭೂಮಿಯಲ್ಲಿ ಕೆಲಸ ಮಾಡುವವರ ನಡುವೆ ವಯಸ್ಸಿನ ಮಿತಿಯಿಲ್ಲ.ಆದರೂ ಸರ್ಕಾರ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಘೋಷಣೆ ಮಾಡಿರುವ ಸಹಾಯಧನಕ್ಕೆ 35 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅಂತ ವಯೋಮಿತಿ ನಿಗದಿ ಮಾಡಿದೆ. ಆದರೆ, ರಂಗದಲ್ಲಿ ಅವರಷ್ಟೇ ಇಲ್ಲ. ಇಲ್ಲಿ ಹಿರಿಯರ ಹಾಗೆ ಕಿರಿಯರು ಇದ್ದಾರೆ. ಈಗಲೂ ನನ್ನ ಜತೆಗೆ ಸುಮಾರು 29 ವರ್ಷ ವಯಸ್ಸಿನ ಯುವಕರು ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸಹಾಯಧನ ನೀಡುವ ಅಗತ್ಯವಿದೆ.

ನಮ್ಮ ಹಾಗೆಯೇ ಅವರು ಕೂಡ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯಧನ ನೀಡುವ ಅಗತ್ಯವಿದೆ. ಹಾಗಾಗಿ ಅವರಿಗಿಲ್ಲದ ಸಹಾಯಧನ ನಮಗೆ ಬೇಡ ʼ ಅಂತ ಕಿರಿಯರ ಪರವಾಗಿ ಮಾತನಾಡಿರುವ ರಂಗ ಕರ್ಮಿ ಸಿದ್ದರಾಜು ಅವರು, ಸರ್ಕಾರ ಈ ಬಗ್ಗೆ ಆಲೋಚನೆ ನಡೆಸಬೇಕಿದೆ.

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಘೋಷಣೆ ಮಾಡಿರುವ ಸಹಾಯಧನಕ್ಕೆ ನಿಗದಿ ಮಾಡಿರುವ ನಿರ್ಬಂಧ ತೆಗೆದು ಹಾಕಿ ರಂಗಭೂಮಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಹಾಯಧನ ನೀಡಲಿ. ಹಾಗೊಂದು ವೇಳೆ ಸರ್ಕಾರ ಅದೇ ಅಂತಿಮ ಅಂತಂದುಕೊಂಡರೆ, ಕಿರಿಯರಿಗೆ ಇಲ್ಲದ ಸಹಾಯಧನ ತಮಗೂ ಬೇಡ ಎಂದು ಅವರು ಮನವಿ ಮಾಡಿದ್ದಾರೆ.

ಸರ್ಕಾರದ ಧೋರಣೆ ನೋಡಿದರೆ ಮೂವತ್ತೈದು ವರ್ಷ ಕೆಳಗಿರುವ ಕಲಾವಿದರಿಗೆ ಹೊಟ್ಟೆಯಿಲ್ಲ, ಹಸಿವಿಲ್ಲ, ಹೆಂಡತಿ ಮಕ್ಕಳಿಲ್ಲ ಎನ್ನುವ ಹಾಗಿದೆ. ಈ ಐಡಿಯಾವನ್ನು ಸರ್ಕಾರಕ್ಕೆ ಯಾರು ಕೊಟ್ಟರೋ ಗೊತ್ತಿಲ್ಲ. ಇದೊಂದು ಅಸಂಬದ್ದ ವಿಚಾರ ಎಂದು ರಂಗಕರ್ಮಿ ಸತೀಶ್‌ ಹೇಳುತ್ತಾರೆ. ಹಾಗೆಯೇ ಕಿರಿಯರಿಲ್ಲದೆ ರಂಗ ಚಟುವಟಿಕೆಗಳೇ ಇಲ್ಲ ಅಂತಲೂ ಅವರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ಇದು ಸ್ವಾತಂತ್ರ್ಯ ಪೂರ್ವದ, ಕ್ರಾಂತಿಯ “ಭುಗಿಲು”- ಸಿನಿಮಾ‌ ಆಯ್ತು ‘ಕಾಡ ಸೆರಗಿನ ಸೂಡಿ’ ಕಾದಂಬರಿ!

ಹಿರಿಯ ಪತ್ರಕರ್ತರಾದ ಮಂಜುನಾಥ್ ಚಾಂದ್ ಬರೆದಿರುವ “ಕಾಡ ಸೆರಗಿನ ಸೂಡಿ” ಕಾದಂಬರಿ ಆಧರಿಸಿ “ಧನ್ಯೋಸ್ಮೀ ಫಿಲಂಸ್” ಬ್ಯಾನರಿನಡಿ “ಭುಗಿಲು” ಎಂಬ ಕುಂದಾಪುರ ಭಾಷಾ ಶೈಲಿಯ ಸಿನಿಮಾ ನಿರ್ಮಾಣವಾಗಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂವತೈದು ವರ್ಷ ಡಬ್ಬಿಂಗ್ ಕಲಾವಿದರಾಗಿ, ನಟರಾಗಿ ಹಿರಿಯ ಅನುಭವ ಹೊಂದಿರುವ ಚಂದ್ರಕಾಂತ್ ಕೊಡಪಾಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಅಂದಹಾಗೆ, ಈ “ಕಾಡ ಸೆರಗಿನ ಸೂಡಿ” ಕಾದಂಬರಿಯು, ವಿಶೇಷವಾಗಿ ಸ್ವತಂತ್ರ ಪೂರ್ವದ, 1934ನೇ ಇಸವಿಯಲ್ಲಿ ಗಾಂಧೀಜೀ ಕುಂದಾಪುರಕ್ಕೆ ಬಂದಿದ್ದ ಸಮಯದ ಆಸುಪಾಸಿನ ಕಾಲದಲ್ಲಿ ನಡೆದ ಘಟನಾವಳಿಗಳ ಸುತ್ತ ಕಥೆ ಹೆಣೆಯಲಾಗಿದೆ. ಆ ಕಾಲದ ಜನರ ಕಟ್ಟುಪಾಡುಗಳು ಮತ್ತು ದುರಾಡಳಿತ‌ ನಡೆಸುತ್ತಿದ್ದ ಬ್ರಿಟಿಷರ ಕಪಿಮುಷ್ಟಿಯಿಂದ ಸ್ವತಂತ್ರರಾಗುವ ನಿಟ್ಟಲ್ಲಿ, ಹಳ್ಳಿಯ ಪ್ರಮುಖರು ನಡೆಸಿದ ಹಿಂಬಾಗಿಲಿನ ಕಾರ್ಯಾಚರಣೆಗಳ ಮೇಲೆ ಈ ಕಾದಂಬರಿ ಬೆಳಕು ಚೆಲ್ಲಿದೆ. ವಿಶೇಷವಾಗಿ ತನಿಯ ಎಂಬ ದಲಿತನೊಬ್ಬನ ಮೇಲೆ ಇಡೀ ಕಥೆ ಚಾಚಿಕೊಳ್ಳುತ್ತದೆ.

ಇಂತಹದೊಂದು ಗಟ್ಟಿ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಚಂದ್ರಕಾಂತ್ ಸಿನಿಮೀಯ ರೀತಿಯಲ್ಲಿ ಅದನ್ನು ಕೊಂಚ ಬದಲಿಸಿಕೊಂಡು ಕುಂದಾಪುರ ಭಾಷಾ ಶೈಲಿಯಲ್ಲಿ ಚಿತ್ರ ತಯಾರಿಸಿದ್ದಾರೆ. ಕರಾವಳಿ ಕುಂದಾಪುರದ ಅರೆಹೊಳೆ ಮತ್ತು ವಂಡ್ಸೆ ಎಂಬ ಎರಡು ಸುಂದರ ಊರುಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ನಿರ್ದೇಶನದ ಜೊತೆ ಚಂದ್ರಕಾಂತ್ ‘ತನಿಯ’ ಎಂಬ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಜೊತೆಯಲ್ಲಿ ಹಿರಿಯ ನಟ ರಮೇಶ್ ಭಟ್, ನಮಿತಾ ದೇಸಾಯಿ, ರಾಜೀವ್ ಕೊಠಾರಿ, ಗಿರೀಶ್ ಬೈಂದೂರ್, ನಾಗರಾಜ್ ಗಾಣಿಗ ಬೈಂದೂರ್, ಚಂದ್ರಕಲಾ ರಾವ್, ನಾಗರಾಜ್ ಗಾಣಿಗ ಗುಜ್ಜಾಡಿ, ಪ್ರದೀಪ್ ಚಂದ್ರ ಕುತ್ಪಾಡಿ. ಶ್ರೀಪಾದ ಉಡುಪಿ, ಲಕ್ಷ್ಮಣ ಕೊರಗ, ಸತೀಶ್ ಕಂಚಕೋಡು, ಶ್ರೀನಿವಾಸ ಗಂಗೊಳ್ಳಿ ಸೇರಿದಂತೆ ರಂಗಭೂಮಿ ಕಲಾವಿದರೇ ಹೆಚ್ಚಾಗಿ ತೆರೆಹಂಚಿಕೊಂಡಿದ್ದಾರೆ.

ವಿಶೇಷವಾಗಿ ಚಿತ್ರದಲ್ಲಿ ಪೀಟರ್ ಎಂಬ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ‘ಪೀಟರ್ ಗ್ರಾವಿಸ್ಕಿ’ ಎನ್ನುವ ಹಾಲೆಂಡಿನ ವಿದೇಶಿಗ ಬಣ್ಣ ಹಚ್ಚಿದ್ದಾರೆ. ಇನ್ನು ರಾಜತಂತ್ರ ಅಮ್ಮನ ಮನೆ ಖ್ಯಾತಿಯ ಪಿವಿಆರ್ ಸ್ವಾಮಿ ಛಾಯಾಗ್ರಹಣ ಮಾಡಿದ್ದು, ಕಾಶೀನಾಥ್, ಉಪೇಂದ್ರ ಒಡನಾಡಿಯಾದ ನಿರ್ದೇಶಕ ರಾಜೀವ್ ಕೊಠಾರಿ (ಶ್ರೀರಾಜ್) ಸ್ನೇಹಪೂರ್ವಕವಾಗಿ ಈ ಚಿತ್ರದ ನಿರ್ಮಾಣ-ನಿರ್ವಹಣೆಯ ಜವಾಬ್ದಾರಿ ನಿರ್ವಹಿಸಿದ್ದಾರೆ.

ಚಿತ್ರಸಾಹಿತಿ, ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ, ರಾಧಾಕೃಷ್ಣ ಬಸ್ರೂರ್ ಸಂಗೀತ ಸಂಯೋಜನೆ, ಗುರುದತ್ ಸಾವುಕಾರ್ ಹಿನ್ನೆಲೆ ಸಂಗೀತ ಮತ್ತು ಸಂಕಲನ ಚಿತ್ರಕ್ಕೆ ಶಕ್ತಿ ತುಂಬಿದೆ. ಅಂದುಕೊಂಡಂತೆ ಎಲ್ಲವನ್ನು ಅಚ್ಚುಕಟ್ಟಾಗಿ ಮುಗಿಸಿರುವ ಚಿತ್ರತಂಡ ಚಿತ್ರೋತ್ಸವಗಳಿಗೆ ಲಗ್ಗೆ ಇಡುವ ಯೋಚನೆಯಲ್ಲಿದ್ದಾಗಲೇ ಕೊರೊನಾ ಹಾವಳಿಯಿಟ್ಟು ಕೈ ಕಟ್ಟಿ ಹಾಕಿದೆ. ಆದರೇನಂತೆ, ಈಗ ರಾಷ್ಟ್ರೀಯ ಚಲನಚಿತ್ರೋತ್ಸವದತ್ತ ಚಿತ್ರ ತಂಡ ಮುಖ ಮಾಡಿರುವ ಮಾಹಿತಿ ಹೊರ ಬಿದ್ದಿದೆ.
ಇಂಥದ್ದೊಂದು ಒಳ್ಳೆಯ ಕಥಾಹಂದರ ಇರುವ ಚಿತ್ರಕ್ಕೆ ಪ್ರಶಸ್ತಿಗಳು ಲಭಿಸಲಿ ಅನ್ನೋದು ‘ಸಿನಿಲಹರಿ’ ಆಶಯ.

Categories
ಸಿನಿ ಸುದ್ದಿ

ಶರಣು ಹುಲ್ಲೂರು ಬರೆದ ಪುಸ್ತಕಕ್ಕೆ ರಾಘು ಶಿವಮೊಗ್ಗ ಧ್ವನಿ! ಅಂಬರೀಶ್ ಬಯೋಗ್ರಫಿಗೆ ಈಗ ಆಡಿಯೋ ರೂಪ

ಪತ್ರಕರ್ತ ಹಾಗು ಲೇಖಕ ಡಾ.ಶರಣು ಹುಲ್ಲೂರು ಬರೆದಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ “ಅಂಬರೀಶ್ ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು” ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಬಂದಿದ್ದು ಗೊತ್ತೇ ಇದೆ. ಆ ಪುಸ್ತಕ ಓದಿದ ಬಹುತೇಕರು ಮೆಚ್ಚುಗೆ ಸೂಚಿಸಿದ್ದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ “ಅಂಬರೀಶ್ ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು” ಪುಸ್ತಕ ಈಗ ಆಡಿಯೋ ರೂಪ ಪಡೆದಿದೆ. ಇದೇ ಮೊದಲ ಸಲ ನಿರ್ದೇಶಕ, ನಟ ರಾಘು ಶಿವಮೊಗ್ಗ ಅವರು, ಅಂಬರೀಶ್ ಅವರ ಬಯೋಗ್ರಫಿಗೆ ಧ್ವನಿ ನೀಡಿದ್ದಾರೆ. ಆ ಕುರಿತು ಅವರೇ ಒಂದಷ್ಟು ಮಾತು ಹಂಚಿಕೊಂಡಿದ್ದಾರೆ.

ಓವರ್ ಟು ರಾಘು ಶಿವಮೊಗ್ಗ

‘ಮಾಧ್ಯಮದ ಬಂಧುಗಳೆ
ಕೋವಿಡ್ 19 ನಮ್ಮೆಲ್ಲರ ಬದುಕನ್ನು ಅತಂತ್ರವಾಗಿಸಿಬಿಟ್ಟಿದೆ. ನೀವೆಲ್ಲರೂ ಕ್ಷೇಮ ಎಂದು ಭಾವಿಸಿರುವೆ. ಈ ಸಂದರ್ಭದಲ್ಲಿ ನನ್ನದೊಂದು ಖುಷಿ ಸಂಗತಿಯನ್ನು ಹಂಚಿಕೊಳ್ಳುತ್ತಿರುವೆ.
ನಾಡಿನ ಸುಪ್ರಸಿದ್ಧ ನಟರು, ನಮ್ಮೆಲ್ಲರ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ “ಅಂಬರೀಶ್ ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು” ಈ ಪುಸ್ತಕವು ಆಡಿಯೋ ರೂಪ ಪಡೆದುಕೊಂಡಿದೆ.

2018 ರಲ್ಲಿ ಡಾ. ಶರಣು ಹುಲ್ಲೂರು ಅವರು ಬರೆದ ಈ ಪುಸ್ತಕ ಈ ವರ್ಷ ಎರಡನೇ ಮುದ್ರಣ ಕಂಡಿದೆ ಮತ್ತು ಸ್ಟೋರಿ ಟೆಲ್ ಈ ಪುಸ್ತಕವನ್ನು ಆಡಿಯೋ ರೂಪದಲ್ಲಿ ಹೊರತಂದಿದೆ. ಈ ಆಡಿಯೋಗೆ ನಾನು ಧ್ವನಿ ನೀಡಿದ್ದೇನೆ ಎನ್ನುವುದು ಸಂಭ್ರಮದ ಸಂಗತಿ.
ಕಿರುತೆರೆ, ಹಿರಿತೆರೆಯಲ್ಲಿ ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿರುವ ನಾನು, ಇದೇ ಮೊದಲ ಬಾರಿಗೆ ಆಡಿಯೋ ಬಯೋಗ್ರಫಿಗೆ ಧ್ವನಿ ನೀಡಿದ್ದು ವಿಶೇಷ. ನಾಡಿನ ಹೆಸರಾಂತ ಸಾಹಿತಿಗಳಾದ ಚಂದ್ರಶೇಖರ್ ಕಂಬಾರ್, ಗಿರೀಶ್ ಕಾರ್ನಾಡ್ ಸೇರಿದಂತೆ ಹಲವು ದಿಗ್ಗಜರ ಪುಸ್ತಕಗಳನ್ನು ಆಡಿಯೋ ರೂಪದಲ್ಲಿ ಹೊರತಂದಿರುವ ಸ್ಟೋರಿ ಟೆಲ್ ಸಂಸ್ಥೆ ನನಗೆ ಇಂಥದ್ದೊಂದು ಅವಕಾಶ ನೀಡಿದೆ.

‘ಚೌಕಬಾರ’ ನನ್ನ ಕಿರುಚಿತ್ರಕ್ಕೆ ಸರ್ಕಾರವೂ ರಾಜ್ಯ ಪ್ರಶಸ್ತಿ ನೀಡಿತ್ತು. ಅಂಬರೀಶ್ ಅವರ ಪುಸ್ತಕವೂ ರಾಜ್ಯ ಪ್ರಶಸ್ತಿ ಪಡೆದಿದೆ. ಹಾಗಾಗಿ ನನಗೆ ಡಬಲ್ ಸಂತಸ ತಂದಿದೆ.
ಅಂಬರೀಶ್ ಅವರ ಬದುಕಿನ ಪುಟಗಳನ್ನು ಓದಿದಾಗ ಥ್ರಿಲ್ ಆಗಿದ್ದೇನೆ. ನನ್ನದೇ ಆದ ಶೈಲಿಯಲ್ಲಿ ಅದನ್ನು ನಿರೂಪಿಸುತ್ತಾ ನಿಮ್ಮೊಳಗೆ ಅಂಬರೀಶ್ ಅವರನ್ನು ದಾಟಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಧ್ವನಿ ತಮಗೆಲ್ಲ ಇಷ್ಟ ಆಗಬಹುದು ಎನ್ನುವ ನಂಬಿಕೆ ನನ್ನದು.
ಸದ್ಯ ‘ಪೆಂಟಗನ್’ ಸಿನಿಮಾದ ಒಂದು ಕಥೆಯನ್ನು ನಿರ್ದೇಶಿಸಿ, ಹಲವು ಚಿತ್ರಗಳಲ್ಲ ನಟಿಸುತ್ತಾ ಇಂಥದ್ದೊಂದು ಕೆಲಸ ಮಾಡಲು ಸಾಧ್ಯವಾಗಿದ್ದು ತಮ್ಮೆಲ್ಲರ ಪ್ರೋತ್ಸಾಹದಿಂದಾಗಿ. ಈ ಹೊಸ ಕಾರ್ಯಕ್ಕೂ ತಮ್ಮ ಬೆಂಬಲವಿರಲಿ’ ಎಂದಿದ್ದಾರೆ ನಿರ್ದೇಶಕ, ಹಾಗು ನಟ ರಾಘು ಶಿವಮೊಗ್ಗ.

Categories
ಸಿನಿ ಸುದ್ದಿ

ಲಾಕ್ ಡೌನ್ ಮಧ್ಯೆ ನಟಿ ಪ್ರಣೀತಾ ಮದ್ವೆ…! ಉದ್ಯಮಿ ಕೈ ಹಿಡಿದ ಬೆಡಗಿ

ಸದ್ದಿಲ್ಲದೆ ಸಪ್ತಪದಿ ತುಳಿದಿದ್ದಾರೆ ನಟಿ ಪ್ರಣಿತಾ ಸುಭಾಷ್..! ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್ ಅವರನ್ನು ಪ್ರಣೀತಾ ವಿವಾಹವಾಗಿದ್ದಾರೆ.


ಕನ್ನಡ ಸೇರಿದಂತೆ ಪರಿಭಾಷೆಯಲ್ಲೂ ಮಿಂಚಿರುವ ಪ್ರಣೀತಾ ಈಗ ಬಾಲಿವುಡ್ ಅಂಗಳದಲ್ಲೂ ಜಿಗಿದಿದ್ದಾರೆ…

Categories
ಸಿನಿ ಸುದ್ದಿ

ದಾರಿ ಯಾವುದಯ್ಯಾ ವೈಕುಂಠಕೆ ಸಿನಿಮಾಗೆ ಸಾಲು ಸಾಲು ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿಗಳ ಸುರಿಮಳೆ! ಖುಷಿಯ ಅಲೆಯಲ್ಲಿ ತಂಡ

ಕನ್ನಡದ ಅನೇಕ ಸಿನಿಮಾಗಳಿಗೆ ಈಗಾಗಲೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳು ಲಭಿಸಿವೆ. ಆದರೆ, ಸಾಲು ಸಾಲು ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿಗಳಿಗೆ ಭಾಜನವಾಗೋದು ವಿಶೇಷ. ಅಂತಹ‌ ವಿಶೇಷತೆಯನ್ನ ಕನ್ನಡದ ‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರ ಪಡೆದುಕೊಂಡಿದೆ.

ಈಗ ‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ಚಿತ್ರದ ನಾಯಕ ವರ್ಧನ್ ಅವರ ಉತ್ತಮ ನಟನಾಗಿ 3ನೇ ಪ್ರಶಸ್ತಿ ಸಂದಿದೆ.
2021ನೇ ಸಾಲಿನಲ್ಲಿ ವರ್ಗಿನ್ ಸ್ಪ್ರಿಂಗ್ ಸ್ಪರ್ಧೆಯಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದ ಮೇಲೆ ಲಂಡನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅಲ್ಲಿಯೂ ಸಹ ಉತ್ತಮ ನಟ ಪ್ರಶಸ್ತಿ ಪಡೆದಿದ್ದರು. ಈಗ ಏಷಿಯನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಸಹ ಉತ್ತಮ ನಟ ಪ್ರಶಸ್ತಿ ದೊರಕಿದೆ. ಸಹಜವಾಗಿಯೇ ಚಿತ್ರತಂಡಕ್ಕೆ ಇದು ಸಂತಸ ತಂದಿದೆ.

ಹೌದು, ಈಗಾಗಲೇ ಮಹಾರಾಷ್ಟ್ರದ “ಪುಣೆ”ಯಲ್ಲಿ ನಡೆದ “ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರಕಥೆಗಾಗಿ “ಬೆಸ್ಟ್ ಸ್ಕ್ರೀನ್ ಪ್ಲೇ” ಅವಾರ್ಡ್ ಬಂದಿದೆ.
ಇದರ ಜೊತೆಗೆ “ಸ್ಪೇನ್” ನಲ್ಲಿ ನಡೆಯುವ ಬರ್ಸಿಲೊನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಬಂದಿದೆ.


ಇಷ್ಟೇ ಅಲ್ಲ, ನಾವಡ ಅಂತಾರಾಷ್ಟ್ರೀಯ
ಚಿತ್ರೋತ್ಸವದಲ್ಲೂ 1600 ಸಿನಿಮಾಗಳ ಪೈಕಿ ಈ ಚಿತ್ರದ ನಿರ್ದೇಶಕರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿದ್ದು ವಿಶೇಷ. ಹಾಗೆಯೇ ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಬೆಸ್ಟ್ ಆ್ಯಕ್ಟರ್ ಹಾಗು ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಬಂದಿದೆ.

ರೇ( ಸತ್ಯಜಿತ್‌ ರೇ) ಸಿನಿಮೋತ್ಸವದಲ್ಲೂ ಬೆಸಗಸಟ್ ಫ್ಯೂಚರ್ ಫಿಲ್ಮ್ ಮತ್ತುಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಿಕ್ಕಿದೆ. ಮುಂಬೈ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ರೈಟರ್
ಅವಾರ್ಡ್ ಬಂದಿದ್ದು, . ಮೊದಲನೇ ವರ್ಷದ ಕಾಶಿ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯತ್ತಮ ಚಿತ್ರಕಥೆ ಮತ್ತು ಸಂಭಾಷಣೆಗೆ ಪ್ರಶಸ್ತಿ ಲಭಿಸಿದೆ.
ಏಷ್ಯನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಾಯಕ ವರ್ಧನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿರುವುದು ವಿಶೇಷ.
ಈಗಾಗಲೇ ಇದರ ಜೊತೆಗೆ ಸಾಕಷ್ಟು ವಿದೇಶಿ ಚಿತ್ರೋತ್ಸವದಲ್ಲಿ ಸಿನಿಮಾಗೆ ಪ್ರಶಸ್ತಿ ಸಂದಿದೆ ಎಂಬುದು ವಿಶೇಷ

ಇನ್ನೊಂದು ವಿಶೇಷವೆಂದರೆ, ನಿರ್ದೇಶಕ ಸೇರಿದಂತೆ ಹೀರೋ ವರ್ಧನ್, ಬಲ ರಾಜ್ವಾಡಿ, ಶೀಬಾ ಮೂರ್ತಿ,ಸಿದ್ದು ಪೂರ್ಣಚಂದ್ರ ಅವರಿಗೂ ಪ್ರಶಸ್ತಿಗಳು ಸಂದಿವೆ. ಇನ್ನು ಸ್ವಲ್ಪ ದಿನಗಳಲ್ಲಿ ಈ ಚಿತ್ರ ಪ್ರಶಸ್ತಿಗಳಲ್ಲಿ ನೂರರ ಗಡಿ ದಾಟಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು.

Categories
ಸಿನಿ ಸುದ್ದಿ

ಅಂತೂ ಇಂತೂ ಸಿನಿಮಾ ಮಂದಿಗೂ ಸಿಗಲಿದೆ ವ್ಯಾಕ್ಸಿನ್! ಮೇ 31ರಿಂದ ಚಿತ್ರರಂಗದವರಿಗಾಗಿ ವ್ಯಾಕ್ಸಿನ್ ಡ್ರೈವ್ ಶುರು…

ಒಂದು ಕಡೆ ಕೊರೊನಾ ಕಾಟ, ಇನ್ನೊಂದು ಕಡೆ ವ್ಯಾಕ್ಸಿನ್ ಗಾಗಿ ಪರದಾಟ…
ಇದು ಸದ್ಯದ ಪರಿಸ್ಥಿತಿ. ಹೌದು, ಈಗ ವ್ಯಾಕ್ಸಿನ್ ಕೊರತೆ ಹೆಚ್ಚಿದೆ. ಕೆಲವರಿಗೆ ಸಿಕ್ಕರೆ, ಇನ್ನೂ ಕೆಲವರಿಗೆ ಸಿಗುತ್ತಿಲ್ಲ. ಇದಕ್ಕೆ ಸಿನಿಮಾ ಮಂದಿಯೂ ಹೊರತಲ್ಲ. ಸರ್ಕಾರ ಎಲ್ಲರಿಗೂ ವ್ಯಾಕ್ಸಿನ್ ತಲುಪಿಸಲು ಹರಸಾಹಸ ಮಾಡುತ್ತಲೇ ಇದೆ. ಒಂದೊಂದು ಕ್ಷೇತ್ರದವರು ಸ್ವತಃ ಸರ್ಕಾರಕ್ಕೆ ಮನವಿ ಮಾಡಿ‌ ವ್ಯಾಕ್ಸಿನ್ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಈಗ ಕನ್ನಡ ಚಿತ್ರರಂಗ ಕೂಡ ಸರ್ಕಾರದ ಗಮನ ಸೆಳೆದಿದ್ದು, ಸಿನಿಮಾದ ಎಲ್ಲಾ ಕಲಾವಿದರಿಗೂ ವ್ಯಾಕ್ಸಿನ್ ವ್ಯವಸ್ಥೆ ಮಾಡಿದೆ.

ಮೇ 31, ಮತ್ತು ಜೂನ್ 1ರ ಸೋಮವಾರ ಮತ್ತು ಮಂಗಳವಾರ ಈ ಎರಡು ದಿನ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೂ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ “ಕೋವಿಡ್ ಶಿಲ್ಡ್” ಲಸಿಕೆಯನ್ನು ಉಚಿತವಾಗಿ ನೀಡಲಾತ್ತಿದೆ.
ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಲಾವಿದರು ಇದರ ಉಪಯೋಗ ಪಡೆದು ಕೊಳ್ಳಬೇಕೆಂದು ಮನವಿ ಮಾಡಲಾಗಿದೆ.


ಈ ಸಂದರ್ಭದಲ್ಲಿ ಹಾಜರಾಗುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು, ಮಾಸ್ಕ್ ಧರಿಸಿರಬೇಕು ಮತ್ತು
ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು.
ಮೇ 31 ರ ಬೆಳಗ್ಗೆ 11.30ಕ್ಕೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್,
ಸಂಸದೆ ಸುಮಲತಾ ಅಂಬರೀಶ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ಕಲಾವಿದ ದೊಡ್ಡಣ್ಣ ಸೇರಿದಂತೆ ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿ ಹಾಗೂ ಬಿಬಿಎಂಪಿ ಕಮಿಷನರ್ ಕೂಡ ಹಾಜರಿರುತ್ತಾರೆ ಎಂದು
ನಿರ್ದೇಶಕಿ ರೂಪ ಅಯ್ಯರ್ ಶ್ರೀವತ್ಸ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಲವ್ ಮಿ ಆರ್ ಹೇಟ್ ಮಿ ಶೀರ್ಷಿಕೆ ಗೊಂದಲ! ಯಾರಿಗೆ ಸಲ್ಲುತ್ತೆ ಈ ಟೈಟಲ್?

ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ ಮತ್ತು ರಚಿತರಾಮ್ ಅಭಿನಯದ ಹೊಸ ಚಿತ್ರಕ್ಕೆ ‘ ಲವ್ ಮಿ ಆರ್ ಹೇಟ್ ಮಿ’ ಎಂದು ಹೆಸರಿಡಲಾಗಿದೆ ಅಂತ ಹೇಳಲಾಗಿತ್ತು.
ಈಗ ಆ ಚಿತ್ರದ ಶೀರ್ಷಿಕೆ ಕುರಿತು ತಕರಾರು ಎದ್ದಿದೆ. ಇನ್ನೊಂದು ತಂಡ ಆ ಶೀರ್ಷಿಕೆಯ ಹೆಸರಲ್ಲಿ ಚಿತ್ರ ಮಾಡಲು ಹೊರಟಿರುವ ಸುದ್ದಿ ಹೊರಬಿದ್ದಿದೆ.
ಹೌದು, ಈ ಕುರಿತಂತೆ ನಿರ್ದೇಶಕ ವಿ.ದೇವದತ್ತ ಅವರು ‘ಲವ್ ಮಿ ಆರ್ ಹೇಟ್ ಮಿ’ ಶೀರ್ಷಿಕೆಯಡಿ ಸಿನಿಮಾ ಮಾಡುತ್ತಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಆ ಬಗ್ಗೆ ಹೇಳಿರುವ ಅವರು, ಈ ಹಿಂದೆ “ಸೈಕೊ” ಎಂಬ ಕನ್ನಡ ಚಲನಚಿತ್ರವನ್ನು ನಿರ್ದೇಶಿಸಿದ್ದು ಈ ಚಿತ್ರದಿಂದಲೇ ನಾನು ಗುರುತಿಸಿಕೊಡಿದ್ದೇನೆ. ಈಗ “ಶ್ರೀ ವೆಂಕಟೇಶ್ವರ ಇಂಟರ್ ನ್ಯಾಷನಲ್” ಎಂಬ ಸಂಸ್ಥೆಯಡಿಯಲ್ಲಿ ಶ್ರೀ ರವಿಕಿರಣ್ ಬಿ. ಕೆ. ಅವರ ನಿರ್ಮಾಣದಲ್ಲಿ “ಲವ್ ಮಿ ಆರ್ ಹೇಟ್ ಮಿ” ಎಂಬ ಕನ್ನಡ ಚಲನಚಿತ್ರವನ್ನು ನಿರ್ದೇಶಿಸಲು ಅಣಿಯಾಗಿದ್ದು, ಈ ಚಿತ್ರದ ಚಿತ್ರೀಕರಣಕ್ಕೆ ಸಂಬಂಧ ಪಟ್ಟಂತೆ ತಯಾರಿಯಲ್ಲಿ ಇರುವಾಗ ಕೋವಿಡ್ ಸಮಸ್ಯೆಯಿಂದ ಉಂಟಾದ ಲಾಕ್ಡೌನ್ ನಿಂದಾಗಿ ಚಿತ್ರೀಕರಣವನ್ನು ಮುಂದೂಡಬೇಕಾಯಿತು, ಈ ಸಂದರ್ಭದಲ್ಲಿ “ಆಕ್ಷನ್ ಕಟ್ ಎಂಟರ್ಟೈನ್ಮೆಂಟ್ ” ಎಂಬ ಬ್ಯಾನರ್ ಅಡಿಯಲ್ಲಿ ಶ್ರೀ ದೀಪಕ್ ಗಂಗಾಧರ್ ರವರು ನಟರಾದ ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಅಭಿನಯದಲ್ಲಿ “ಲವ್ ಮಿ ಆರ್ ಹೇಟ್ ಮಿ” ಎಂಬ ನಮ್ಮ ಸಂಸ್ಥೆಯ ಶೀರ್ಷಿಕೆಯಡಿಯಲ್ಲಿ ಕನ್ನಡ ಚಿತ್ರವನ್ನು ನಿರ್ಮಾಣ ಮಾಡ ಹೊರಟಿರುವುದು ವಿವಿಧ ಮಾಧ್ಯಮಗಳ ಮೂಲಕ ಈ ದಿನ ನಮ್ಮ ಗಮನಕ್ಕೆ ಬಂದಿರುತ್ತದೆ.


ಈ ಶೀರ್ಷಿಕೆಯು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಯಲ್ಲಿ ನಮ್ಮ ಸಂಸ್ಥೆಯ ಹೆಸರಿನಲ್ಲಿ ದಿನಾಂಕ: ನವೆಂಬರ್ 30, 2020 ರಂದು ನೋಂದವಣೆಗೊಂಡಿದ್ದು, ಈ ಸಂಬಂಧ ಅನುಮತಿಯನ್ನು ಪಡೆದಿರುತ್ತೇವೆ ಹಾಗೂ ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯಿಂದ ದಿನಾಂಕ ಜನವರಿ, 4, 2021 ರಂದು ಸೂಕ್ತ ಅನುಮತಿಯನ್ನು ಪಡೆದಿರುತ್ತೇವೆ.

ಲಾಕ್ ಡೌನ್ ಮುಗಿದ ನಂತರ ಈ ಚಿತ್ರಕ್ಕೆ ಸಂಬಂದ ಪಟ್ಟ ಪ್ರಕಟಣೆಗಳನ್ನು ಮಾಧ್ಯಮಗಳಿಗೆ ನೀಡಿ ಪ್ರಚಾರವನ್ನು ಪ್ರಾರಂಭಿಸಬೇಕೆಂಬ ಯೋಜನೆಯಲ್ಲಿರುವಾಗ, ಈ ಘಟನೆ ನಡೆದಿರುತ್ತದೆ. ಮೇಲ್ಕಂಡ ವಿಷಯಕ್ಕೆ ಸ್ಪಷ್ಟನೆಯನ್ನು ನೀಡುತ್ತಾ ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ತಮ್ಮ ಅವಾಗಹನೆಗಾಗಿ ನೀಡುತ್ತಿದ್ದೇವೆ ಹಾಗೂ ತಮ್ಮಿಂದ ಸೂಕ್ತ ಸಹಕಾರವನ್ನು ಬಯಸುತ್ತಿದ್ದೇವೆ’ ಎಂದಿದ್ದಾರೆ ನಿರ್ದೇಶಕರು.

ಸದ್ಯ ವಾಣಿಜ್ಯ ಮಂಡಳಿಯಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ಸಿನಿಮಾಗೂ ಅದೇ ಹೆಸರಿಡಲಾಗಿದೆ. ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

H/34 ಪಲ್ಲವಿ ಟಾಕೀಸ್ ಚಿತ್ರದ ಸಾಂಗ್ ರಿಲೀಸ್; ಇದು ತಿಲಕ್ ನಟನೆಯ ಹಾರರ್ ಚಿತ್ರ!

ತಿಲಕ್ ಅಭಿನಯದ “H/34 ಪಲ್ಲವಿ ಟಾಕೀಸ್” ಚಿತ್ರದ “ಬರೆವೆ ಬರೆವೆ ಒಲವ ಕವನ…” ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಶ್ರೀನಿವಾಸ್ ಚಿಕ್ಕಣ್ಣ(ಸೀನಿ) ಬರೆದಿರುವ ಈ ಹಾಡನ್ನು ಬಾಲಿವುಡ್‌ ನ ಜನಪ್ರಿಯ ಗಾಯಕ ಅಂಕಿತ್ ತಿವಾರಿ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಈ ಹಾಡಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.

ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಜೂನ್ ಎರಡನೇ ವಾರದಲ್ಲಿ ಓ ಟಿ ಟಿ ಫ್ಲಾಟ್ ಫಾರಂ ಮೂಲಕ ಚಿತ್ರ ಬಿಡುಗಡೆಯಾಗಲಿದ್ದು,
ಕಾಲಭೈರವ ಆರ್ಟ್ಸ್ ಬ್ಯಾನರ್ ನಲ್ಲಿ ಮಂಜುನಾಥ್ ಕೆ, ಹಾಗು ರವಿಕಿರಣ್ ಎಂ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಶ್ರೀನಿವಾಸ್ ಚಿಕ್ಕಣ್ಣ (ಸೀನಿ) ನಿರ್ದೇಶಿಸಿದ್ದಾರೆ.


ಈ ಹಿಂದೆ “6 ನೇ ಮೈಲಿ” ಚಿತ್ರವನ್ನು ನಿರ್ದೇಶಿಸಿದ್ದ, ಶ್ರೀನಿವಾಸ್ ಚಿಕ್ಕಣ್ಣ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಹಾರರ್ ಹಾಗು ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ಮನೋಹರ್ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವ್ ಸಂಕಲನ ಈ ಚಿತ್ರಕ್ಕಿದೆ.

ತಿಲಕ್ ಅವರಿಗೆ ನಾಯಕಿಯಾಗಿ ಯಜ್ಞಾ ಶೆಟ್ಟಿ ಅಭಿನಯಿಸಿದ್ದಾರೆ. ಸಚೇಂದ್ರ ಪ್ರಸಾದ್, ಅವಿನಾಶ್, ಸುಧಾ ಬೆಳವಾಡಿ, ಅಚ್ಯುತಕುಮಾರ್, ಪದ್ಮಜಾರಾವ್, ಕುರಿ ಪ್ರತಾಪ್, ವಿಶ್ವ, ಅಮೃತ ಮಯೂರಿ, ರಾಜೇಶ್ವರಿ, ರಾಕ್ ಲೈನ್ ಸುಧಾಕರ್, ಅಜಯ್ ರಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಲವ್ ಮಿ ಆರ್ ಹೇಟ್ ಮಿ… ಅಂತಿದಾರೆ ಡಾರ್ಲಿಂಗ್ ಕೃಷ್ಣ! ಅಚ್ಚರಿ ಬೇಡ, ಇದು ಅವರ ಹೊಸ ಸಿನಿಮಾ ಹೆಸರು!!

ಲವ್ ಮಿ ಆರ್ ಹೇಟ್ ಮಿ… ಕಿಸ್ ಮಿ ಆರ್ ಕಿಲ್ ಮಿ…. ಓ ಡಾರ್ಲಿಂಗ್ ಪ್ಲೀಸ್ ಡು ಸಂಥಿಂಗ್ ಟು ಮಿ….’

ಅರೇ, ಇದೇನಪ್ಪಾ ಡಾ.ರಾಜಕುಮಾರ್ ಅಭಿನಯದ ‘ಶಂಕರ್ ಗುರು’ ಹಾಡಲ್ವಾ ಅನ್ನೋ ಅಚ್ಚರಿ ಆಗಬಹುದು. ಇಷ್ಟಕ್ಕೂ ಇಲ್ಲಿ ಹೇಳಹೊರಟಿರೋದ ಸಿನಿಮಾ ಬಗ್ಗೆ.


ಹೌದು, ಡಾರ್ಲಿಂಗ್ ಕೃಷ್ಣ ಅಭಿನಯದ ಹೊಸ ಚಿತ್ರದ ಹೆಸರಿದು. ‘ಲವ್ ಮಿ ಆರ್ ಹೇಟ್ ಮಿ’ ಈ ಮೂಲಕ ಹೊಸ ಕಥಾಹಂದರದ ಸಿನಿಮಾಗೆ ಸಜ್ಜಾಗಿದ್ದಾರೆ ಕೃಷ್ಣ.

ಈ ಸಿನಿಮಾಗೆ ದೀಪಕ್ ಗಂಗಾಧರ್ ನಿರ್ದೇಶಕರು. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ರಚಿತಾರಾಮ್ ನಟಿಸುತ್ತಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತವಿದೆ. ಕೆ.ಎಮ್.ಪ್ರಕಾಶ್ ಅವರ ಸಂಕಲನವಿದೆ. ಸದ್ಯ ಶುಕ್ರವಾರ ಚಿತ್ರದ ಶೀರ್ಷಿಕೆ ರಿಲೀಸ್ ಆಗಿದೆ.


ಸಿನಿಮಾ ಯಾವಾಗ ಶುರು, ಕಥೆ ಏನು, ಯಾರೆಲ್ಲಾ ಇರಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.

Categories
ಸಿನಿ ಸುದ್ದಿ

ಕೊರೊನಾ ವಿರುದ್ಧ ಗೆಲ್ಲಲು ದುನಿಯಾ ವಿಜಯ್‌ ಹೇಳಿದ ಅನುಭವದ ಪಾಠವಿದು!

‘ಅದೆಲ್ಲಿತ್ತೋ ಏನೋ, ಈ ಕೊರೊನಾ ಸಂಬಂಧಗಳ ನಡುವೆಯೇ ದೊಡ್ಡ ಕಂದಕ ಸೃಷ್ಟಿಸಿದೆ. ಕೊರೊನಾ ಪಾಸಿಟಿವ್‌ ಅಂದಾಕ್ಷಣ, ಅಪ್ಪ, ಅಮ್ಮ, ಮಕ್ಕಳು ಎನ್ನದೇ ಮಾರು ದೂರ ಹೋಗಿ ನಿಲ್ಲುವಂತಹ ಅಮಾನವೀಯ ಘಟನೆಗಳು ಕಣ್ಣೆದುರೆ ನಡೆದು ಹೋಗಿವೆ. ಇದಕ್ಕೆ ಮುಖ್ಯ ಕಾರಣ ಜೀವ ಭಯ. ಕೊರೊನಾ ಪಾಸಿಟಿವ್ ಬಂದವರನ್ನು ಮುಟ್ಟಿದರೆ, ಅವರ ಹತ್ತಿರ ಹೋದರೆ ಆ ಕಾಯಿಲೆ ಬೇರೆಯವರೆಗೂ ಬರುತ್ತೆ ಅಂತ ಆರಂಭದಿಂದ ದೊಡ್ಡ ಸುದ್ದಿ ಆಗಿದ್ದು, ನಾನಾ ಅವಾಂತರಗಳನ್ನು ಸೃಷ್ಟಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಎಷ್ಟೋ ಜನ ಬೀದಿ ಹೆಣ ಆಗಿ ಹೋಗಿದ್ದಾರೆ. ಇಂತಹ ಅಮಾನವೀಯ ಘಟನೆಗಳ ನಡುವೆ ಇತರರಿಗೂ ಸ್ಪೂರ್ತಿಯಾಗಬಲ್ಲಂತಹ ಘಟನೆಗೆ ಕನ್ನಡದ ನಟ ದುನಿಯಾ ವಿಜಯ್‌ ಸಾಕ್ಷಿಯಾಗಿದ್ದಾರೆ.

ಹೌದು, ಆ ಘಟನೆ ಏನು ಅಂತ ಅವರದೇ ಮಾತುಗಳು ಇಲ್ಲಿವೆ ಕೇಳಿ…

ಓವರ್‌ ಟು ದುನಿಯಾ ವಿಜಯ್…‌

‘ಸುಮಾರು ಒಂದು ತಿಂಗಳಿಂದ ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಮನುಷ್ಯ ಯಾವಾಗಲೂ ಪಾಸಿಟಿವ್ ಆಗಿರಬೇಕು ಅಂತಾರೆ. ನಾನು ಜೀವನದಲ್ಲಿ ಇರೋದು ಯಾವಾಗಲೂ ಹಾಗೇನೆ.ಆದರೆ ಒಂದು ದಿನ ನನ್ನ ಜನ್ಮದಾತರಿಬ್ಬರಿಗೂ ಕೊರೊನಾ ಪಾಸಿಟಿವ್ ಆಗಿದೆ ಎಂದಾಗ ಒಂದು ಕ್ಷಣ ನಲುಗಿದೆ. ಮತ್ತೆ ಮರುಕ್ಷಣ ಕಾರ್ಯಶೀಲನಾದೆ. ಬಿಯು ನಂಬರ್ ಬರೋವರೆಗೂ ನಮ್ಮ ತಂದೆ ತಾಯಿಗೆ ಬೆಡ್ ಸಿಗಲ್ಲ ಎಂಬ ವಿಷಯ ನನಗೆ ತಿಳಿಯಿತು. ನನ್ನ ತಂದೆಗೆ 80 ವರ್ಷ ವಯಸ್ಸು, ನನ್ನ ತಾಯಿಗೆ 76 ವರ್ಷ. ಈಗಾಗಲೇ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿದೆ. ಯೋಚಿಸಿಕೊಂಡು ಕೋರುವ ಸಮಯ ಇದಲ್ಲ ಎಂದು ತಿಳಿದ ನಾನು, ನನ್ನ ಆತ್ಮೀಯ ವೈದ್ಯ ವಿದ್ಯಾನಂದ ರನ್ನು ಸಂಪರ್ಕಿಸಿದೆ. ಆಗ ಅವರು ಬೆಡ್ ಗೆ ಕಾಯದೆ ಟ್ರೀಟ್ಮೆಂಟ್ ಆರಂಭಿಸಲು ಹೇಳಿದರು.

ಅಂದು ಡಾಕ್ಟರ್ ಜೊತೆ ಸಾಯಂಕಾಲ ಮಾತನಾಡಿ ನಂತರ ರಾತ್ರಿ ಒಬ್ಬನೇ ಯೋಚಿಸುತ್ತಾ ಕುಳಿತಾಗ ‘ನಿಮ್ಮ ತಂದೆ-ತಾಯಿಗೆ ಬಂದಿರುವ ಕೊರೊನಾ, ಅವರನ್ನು ಆರೈಕೆ ಮಾಡುವ ಸಮಯದಲ್ಲಿ ನಿನಗೂ ಬಂದು ಸಾಯುವೆನೆಂಬ ಭಯವೇ’ ಎಂಬ ಪ್ರಶ್ನೆಯನ್ನು ನನ್ನ ಆತ್ಮಸಾಕ್ಷಿ ನನ್ನ ಮುಂದಿಟ್ಟಿತು. ಮರುಕ್ಷಣದಲ್ಲೇ ನನ್ನ ಆತ್ಮಸಾಕ್ಷಿಗೆ ನನ್ನ ಉತ್ತರ ನಗುವಾಗಿತ್ತು. ಅವರೇ ನೀಡಿದ ಈ ಜನ್ಮ ಅವರ ಆರೈಕೆ ಸಂದರ್ಭದಲ್ಲಿ ಹೋದರೆ ಅದಕ್ಕಿಂತ ಅದೃಷ್ಟ ಇನ್ನೇನಿದೆ ಎಂದುಕೊಂಡು. ಸುಮಾರು 15 ಗಂಟೆಗಳ ನಂತರ. ಅಂದರೆ ಮರುದಿನ ಬೆಳಗ್ಗೆ 9 ರ ಮುಂಜಾನೆಗೆ ಒಂದು ಆಟೋದಲ್ಲಿ ಆಕ್ಸಿಜನ್, ಮೆಡಿಸಿನ್ ಜತೆ ಈಶ್ವರ್ ಎಂಬ ಆರೋಗ್ಯ ಶುಶ್ರೂಷಕ ಬಂದು ಇಳಿದರು. ನಾನು ನನ್ನ ಮಗ ಮತ್ತು ಕೀರ್ತಿ ಮೂರು ಜನ ನಮ್ಮ ತಂದೆ ತಾಯಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಕ್ರೂರಿ ಕೊರೊನಾ ಜೊತೆ ಸೆಣೆಸಾಡಲು ನಿಂತೆವು. ಮಾನಸಿಕವಾಗಿ ನಾನು ನಂಬಿದ ಗುರುಗಳು ನನ್ನ ಜತೆಯಲ್ಲಿದ್ದರೆ, ದೈಹಿಕವಾಗಿ ನಮ್ಮ ಜೊತೆ ಆರೋಗ್ಯ ಶುಶ್ರೂಷಕ ಈಶ್ವರ್ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಅರ್ಧಗಂಟೆ ಬಂದು ಹೋಗುತ್ತಿದ್ದರು.

ನಮ್ಮ ತಂದೆ ಈಗಾಗಲೇ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅದರಲ್ಲಿ ಈ ಕೊರೊನಾ ಅವರನ್ನು ತುಂಬಾ ಬಳಲುವಂತೆ ಮಾಡಿತು. ನಮ್ಮ ತಾಯಿ ಎರಡು ಮೂರು ದಿನದಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿದರು. ಈ ನಡುವೆ ಪ್ರತಿ ದಿನ ವಿಡಿಯೋ ಕಾಲ್ ಮೂಲಕ ವೈದ್ಯರು ಚಿಕಿತ್ಸೆಯನ್ನು ಹೇಳುತ್ತಿದ್ದರು ಮತ್ತು ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅದರ ಜತೆಗೆ ಪ್ರತಿ ದಿನ ಬರುತ್ತಿದ್ದ ಈಶ್ವರ ನಮ್ಮಗಳ ಪಾಲಿಗೆ ನಿಜವಾದ ಈಶ್ವರನೆ ಆದ. ನಮ್ಮ ತಂದೆಯ ಆರೋಗ್ಯ ಮಾತ್ರ ದಿನದಿಂದ ದಿನಕ್ಕೆ ಬಿಗಡಾಯಿಸಲು ಪ್ರಾರಂಭಿಸಿತು. ಯಾವ ಮಟ್ಟಿಗೆ ಎಂದರೆ ನನ್ನ ಆತ್ಮೀಯರು ಫೋನ್ ಮಾಡಿದಾಗ ನಮ್ಮ ತಂದೆ ನಮ್ಮನ್ನು ಬಿಟ್ಟು ಹೋಗುತ್ತಾರೆ ಏನು ಎಂಬ ಅನುಮಾನ ಕಾಡುತ್ತಿದೆ ಎಂದು ಸ್ವತಃ ನಾನೇ ಹೇಳಿದ್ದುಂಟು. ಆ ಕಾರಣಕ್ಕೆ ಅವರ ಜತೆ ಕಳೆಯುತ್ತಿರುವ ಕೊನೆಯ ಕ್ಷಣಗಳು ನೆನಪಿನಲ್ಲಿ ಉಳಿಯಲಿ ಎಂಬ ಉದ್ದೇಶದಿಂದ ವಿಡಿಯೋ ಮಾಡಲು ಪ್ರಾರಂಭಿಸಿದೆವು. ಇದರ ಮಧ್ಯೆ ನಾನು ಭರವಸೆಯನ್ನು ಮಾತ್ರ ಕಳೆದುಕೊಂಡಿರಲಿಲ್ಲ. ಮೊದಲು ನನ್ನ ತಾಯಿ ಚೇತರಿಸಿಕೊಂಡು ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖರಾದರು.

‘ ನೀನು ಹೆದರಬೇಡ. ಚೇತರಿಸಿಕೊಂಡ ನಂತರ ನನ್ನಮ್ಮ ನನ್ನನ್ನು ಕರೆದು ‘ ನಮಗೆ ಯಾರಿಗೂ ಸಿಗದ ಯೋಗ ನಿನಗೆ ಸಿಕ್ಕಿದೆ. ನಿನ್ನನ್ನು ಪ್ರೀತಿಸುವವರು ಇರುವವರೆಗೂ, ಅವರ ಆಶೀರ್ವಾದ, ಆರೈಕೆ ನಿನ್ನನ್ನು ಕಾಯುತ್ತದೆ’ ಎಂದು ಹೇಳಿದರು. ನಿಜವಾಗಲೂ ನಮ್ಮ ತಾಯಿ ಹೇಳಿದಂತೆ ಆಯಿತು. ನಿಮ್ಮಗಳ ಆಶೀರ್ವಾದ ಮತ್ತು ದೈವ ಬಲದಿಂದ ನಮ್ಮ ಮನೆಯಲ್ಲಿ ಚಮತ್ಕಾರ ನಡೆಯಿತು. ನಮ್ಮ ತಂದೆ ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಾ ಬಂದರು. ನಾನು ನಿಮ್ಮೆಲ್ಲರ ಬಳಿ ಕೇಳಿಕೊಳ್ಳುವುದಿಷ್ಟೆ. ಕೊರೊನಾ ಬಂತು ಎಂದು ಧೃತಿಗೆಡಬೇಡಿ, ತಂದೆ-ತಾಯಿಯರನ್ನು ಕೈ ಬಿಡಬೇಡಿ. ನನ್ನ ತಂದೆ-ತಾಯಿ ಬದುಕಿದ್ದಾರೆ ಎಂಬ ಖುಷಿಯಿಂದ ಈ ಘಟನೆಯನ್ನು ಹಂಚಿಕೊಳ್ಳುತ್ತಿಲ್ಲ, ಎಷ್ಟೋ ಜನ ನನ್ನ ರೀತಿ ಸೇವೆ ಮಾಡಿ ತಂದೆ ತಾಯಿಯನ್ನು ಕಳೆದುಕೊಂಡವರಿದ್ದಾರೆ. ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ಸಕಾರಾತ್ಮಕವಾಗಿ ಯೋಚಿಸಿ ಈ ಕೊರೊನಾ ವಿರುದ್ಧ ಗೆಲ್ಲೋಣ. ಜತೆಗೆ ನನ್ನ ಜೀವನದಲ್ಲಿ ನಡೆದ ಈ ಘಟನೆ ಕೆಲವರಿಗೆ ಸ್ಪೂರ್ತಿಯಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಹಂಚಿಕೊಂಡಿದ್ದೇನೆ. ಏನಾದರೂ ತಪ್ಪಾಗಿದ್ದರೆ ಕ್ಷಮೆಯಿರಲಿ ಇಂತಿ ನಿಮ್ಮ ವಿಜಯ್ .

ನಟ ದುನಿಯಾ ವಿಜಯ್‌ ಇದಿಷ್ಟು ಮಾತನ್ನು ಬಲವಾದ ಕಾರಣಕ್ಕಾಗಿಯೇ ಹಂಚಿಕೊಂಡಿದ್ದಾರೆ. ಕೊರೊನಾ ಪಾಸಿಟಿವ್‌ ಅಂದಾಕ್ಷಣ, ಮನೆಯವರೇ ಸೋಂಕಿತರನ್ನು ಒಂಥರ ನಿಕೃಷ್ಟವಾಗಿ ನೋಡಿಕೊಳ್ಳುವ ಘಟನೆಗಳು ನಡೆದಿವೆ. ವಯಸ್ಸಾದವರಂತೂ ದಾರಿ ಕಾಣದೆ ಎಷ್ಟೋ ಜನ ಹಾಸಿಗೆಯಲ್ಲಿ ಕಣ್ಣು ಮುಚ್ಚಿದ್ದಾರೆ. ಹಾಗೆ ನೋಡಿದರೆ ಸರಿಯಾದ ಆರೈಕೆ ಸಿಕ್ಕರೆ ಕೊರೊನಾ ಗೆಲ್ಲುವುದು ಸುಲಭವಿದೆ.

ಅದನ್ನೀಗ ನಟ ದುನಿಯಾ ವಿಜಯ್‌ ಮಾಡಿ ತೋರಿಸಿದ್ದಾರೆ. ಅದು ಇತರರಿಗೂ ಸ್ಪೂರ್ತಿ ಆಗಲಿ ಅಂತ ಇದನ್ನು ಹಂಚಿಕೊಂಡಿದ್ದಾರೆ. ಅವರ ಆಶಯದಂತೆ ಇದು ಇತರರಿಗೂ ಸ್ಪೂರ್ತಿ ಆಗಲಿ.

error: Content is protected !!