ಕನ್ನಡದಲ್ಲಿ ಈಗಾಗಲೇ ಬಿಚ್ಚುಗತ್ತಿ ಎಂಬ ಸಿನಿಮಾ ಬಂದಿದ್ದು ಎಲ್ಲರಿಗೂ ಗೊತ್ತಿದೆ. ಆ ಚಿತ್ರದ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಾಜವರ್ಧನ್ ಸದ್ಯ ‘ಪ್ರಣಯಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜವರ್ಧನ್ ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ರಾಜವರ್ಧನ್ ಮೂರನೇ ಸಿನಿಮಾ ಹಿಂದಿನ ಎರಡು ಸಿನಿಮಾಗಳಿಗಿಂತಲೂ ವಿಭಿನ್ನವಾಗಿರಲಿದೆ ಎಂಬುದು ವಿಶೇಷ. ಹೌದು, ಇದು ರಾ ಪ್ಯಾಟರ್ನ್ ಸಿನಿಮಾ. ಚಿತ್ರದಲ್ಲಿ ಖಡಕ್ ಲುಕ್ನಲ್ಲಿ ರಾಜವರ್ಧನ್ ಮಿಂಚಲಿದ್ದು, ಈ ಚಿತ್ರಕ್ಕೆ ಹಿರಣ್ಯ ಎಂಬ ಟೈಟಲ್ ಇಡಲಾಗಿದೆ. ಟೈಟಲ್ನಲ್ಲೇ ಹೊಸ ಫೋರ್ಸ್ ಇದೆ. ಹಾಗಾಗಿ ಈ ಚಿತ್ರದ ಮೇಲೆ ಸಹಜವಾಗಿಯೇ ರಾಜವರ್ಧನ್ ಅವರಿಗೂ ನಿರೀಕ್ಷೆ ಹೆಚ್ಚಿದೆ.
ಅಂದಹಾಗೆ, ಈ ಹಿರಣ್ಯ ಶೀರ್ಷಿಕೆ ಮೊದಲು ನಟ ಧನಂಜಯ್ ಅವರ ಬಳಿ ಇತ್ತು. ತನ್ನ ಗೆಳೆಯನಿಗೆ ಒಳ್ಳೆಯದಾಗಲಿ ಎನ್ನುವ ಒಂದೇ ಕಾರಣಕ್ಕೆ ಧನಂಜಯ್ ಅವರು ಈ ಟೈಟಲನ್ನು ಬಿಟ್ಟುಕೊಟ್ಟಿದ್ದಾರೆ.
ಇನ್ನು, ಈಗಾಗಲೇ ಹಲವು ಕಿರುಚಿತ್ರಗಳನ್ನು ಮಾಡಿದ ಅನುಭವ ಇರುವ ಪ್ರವೀಣ್ ಅವ್ಯೂಕ್ತ್ ಹಿರಣ್ಯ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗುತ್ತಿದ್ದಾರೆ. ವೇದಾಸ್ ಇನ್ಪಿನಿಟಿ ಪಿಚ್ಚರ್ ನಡಿ ವಿಘ್ನೇಶ್ವರ. ಯು ಹಾಗೂ ವಿಜಯ್ ಕುಮಾರ್ ಬಿ.ವಿ ಸಿನಿಮಾದ ನಿರ್ಮಾಪಕರು. ಯೋಗೇಶ್ವರನ್ ಆರ್ ಕ್ಯಾಮೆರಾ ಕೈಚಳಕವಿದ್ದರೆ, ಜೂಡಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ.
ಕನ್ನಡದಲ್ಲಿ ಸಾಕಷ್ಟು ವಿಭಿನ್ನ ಕಥೆ ಇರುವ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಭಾವಚಿತ್ರ” ಸಿನಿಮಾ ಕೂಡ ಸೇರಿದೆ. ಹೌದು, ಇದೊಂದು ವಿಶೇಷತೆಯ ಚಿತ್ರ. ಅದರಲ್ಲೂ ವಿಭಿನ್ನ ಕಥಾಹಂದರ ಇರುವ ಈ ಚಿತ್ರ ಈ ವಾರ ಅಂದರೆ, ಫೆಬ್ರವರಿ 18ರಂದು ಬರುತ್ತಿದೆ. ತಮ್ಮ ವಿಭಿನ್ನ ಸಿನಿಮಾ ಕುರಿತು ನಿರ್ದೇಶಕ ಗಿರೀಶ್ ಕುಮಾರ್ ಹೇಳುವುದಿಷ್ಟು…
ಮೊಬೈಲ್ ಬಂದ ಮೇಲಂತೂ ಎಲ್ಲರ ಬಳಿ ಕ್ಯಾಮರಾ ಕಾಮನ್. ಆ ಕ್ಯಾಮೆರಾ ಮೂಲಕ ಸಾಗುವ ಕಥೆಯೇ ನಮ್ಮ ” ಭಾವಚಿತ್ರ “. ಇದೇ ಹದಿನೆಂಟನೇ ತಾರೀಖು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಭಿನ್ನ ಕಥೆ ಹೊಂದಿರುವ ಚಿತ್ರ ” ಭಾವಚಿತ್ರ” ಹಲವು ವಿಶೇಷತೆಗಳನ್ನು ಹೊಂದಿದೆ. ಈಗ ಎಲ್ಲರ ಬಳಿ ಮೊಬೈಲ್ ಇದೆ. ಅದರೊಳಗೆ ಕ್ಯಾಮೆರಾ ಇದ್ದೇ ಇರುತ್ತೆ. ಆ ಕ್ಯಾಮೆರಾ ಮೂಲಕ ವಿಭಿನ್ನ ಕಥೆ ಹೇಳಿದ್ದೇನೆ. ಅದೇ ಈ ಚಿತ್ರದ ವಿಶೇಷ. ಕಥೆ ಬಗ್ಗೆ ಹೆಚ್ಚು ಹೇಳುವುದಿಲ್ಲ. ಅದನ್ನು ತೆರೆಯ ಮೇಲೆಯೇ ನೋಡಬೇಕು. ಇನ್ನು, ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರೆ ಚಿತ್ರತಂಡದ ಸಹಕಾರ ಮುಖ್ಯ. ಎಲ್ಲರಿಗೂ ಇಷ್ಟವಾಗುವಂತಹ ಸಿನಿಮಾ ಮಾಡಿ ತೆರೆಗೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ನಿರ್ದೇಶಕ ಗಿರೀಶ್ ಕುಮಾರ್ ಮಾತು.
ಚಿತ್ರಕ್ಕೆ ಚಕ್ರವರ್ತಿ ಹೀರೋ. ಅವರು ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಮತ್ತು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ಹೇಳುವುದು ಹೀಗೆ. “ವಿಭಿನ್ನ ಕಥೆಯ ಮೂಲಕ ಉತ್ತಮ ಚಿತ್ರವೊಂದನ್ನು ನಿರ್ದೇಶಕರು ತೆರೆಗೆ ತರುತ್ತಿದ್ದಾರೆ ನನ್ನ ಪಾತ್ರ ಕೂಡ ಜನರ ಮನಸ್ಸಿಗೆ ಹತ್ತಿರವಾಗಿರಲಿದೆ. ಅದು ಎಂತಹ ಪಾತ್ರರ, ಕಥೆಯ ತಿರುಳು ಏನೆಂಬುದನ್ನು ಸಿನಿಮಾದಲ್ಲೇ ನೋಡಬೇಕು ಅನ್ನುತ್ತಾರೆ ನಾಯಕ ಚಕ್ರವರ್ತಿ. ಇನ್ನು, ನಾಯಕಿ ಗಾನವಿ ಲಕ್ಷ್ಮಣ್ ಅವರಿಗೆ ಇದು ಅವರ ಮೊದಲ ಸಿನಿಮಾ. ಅವರು ಈ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆರ್ಕಲಾಜಿಸ್ಟ್ ಪಾತ್ರ ನಿರ್ವಹಿಸಿರುವ ಅವರು ಆ ಪಾತ್ರ ಹಾಗೂ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ವಿಶ್ವಾಸದಿಂದ ಹೇಳುತ್ತಾರೆ.
ನಿರ್ಮಾಪಕ ವಿನಾಯಕ ನಾಡಕರ್ಣಿ ಅವರಿಗೂ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಕಾರಣ, ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾವನ್ನು ಮಾಡಿದ್ದಾರಂತೆ. ಚಿತ್ರ ನೋಡಿ ನನಗಂತೂ ಖುಷಿಯಾಗಿದೆ. ಪ್ರೇಕ್ಷಕರು ಮೆಚ್ಚುತ್ತಾರೆ ಎಂದು ಖುಷಿಯಿಂದಲೇ ನಿರ್ಮಾಪಕ ನಾಯಕ ನಾಡಕರ್ಣಿ ಹೇಳುತ್ತಾರೆ.
ಗೌತಮ್ ಶ್ರೀವತ್ಸ ಸಂಗೀತ ಕುರಿತು ಹೇಳಿಕೊಂಡರು. ಛಾಯಾಗ್ರಹಣದ ಕುರಿತು ಅಜಯ್ ಕುಮಾರ್ ಮಾತನಾಡಿದರು. ಗಿರೀಶ್ ಬಿಜ್ಜಳ್ ಕೂಡ “ಭಾವಚಿತ್ರ” ದ ಪಾತ್ರ ಕುರಿತು ಮಾತನಾಡಿದರು. ಅವಿನಾಶ್, ಗಿರೀಶ್ ಕುಮಾರ್, ಕಾರ್ತಿ, ವಿನಾಯಕ ನಾಡಕರ್ಣಿ ಚಿತ್ರದಲ್ಲಿದ್ದಾರೆ.
ಕನ್ನಡದಲ್ಲಿ ಸಾಕಷ್ಟು ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಚಂದನವನದಲ್ಲಿ ತಾರೆಯಾಗಿ ಮಿನುಗಬೇಕೆಂಬ ಆಸೆ ಯಾರಿಗಿಲ್ಲ ಹೇಳಿ? ಗಾಂಧಿನಗರಕ್ಕೆ ಬರುವ ಬಹುತೇಕರು ತಾನು ಗಟ್ಟಿನೆಲೆ ಕಾಣಬೇಕು ಅಂತ ನೂರಾರು ಆಸೆ- ಆಕಾಂಕ್ಷೆಯಿಂದಲೇ ನಂಬಿಕೆಯ ಹೆಜ್ಜೆ ಇಡುತ್ತಾರೆ. ಹಾಗೆ ಬಂದು ಮೆಲ್ಲನೆ ತನ್ನ ಪ್ರತಿಭೆ ಮೂಲಕ ಗುರುತಿಸಿಕೊಂಡಿರುವ ನಟಿ ಪದ್ಮಿನಿ.
ಹೌದು, ಪದ್ಮಿನಿ ಅಪ್ಪಟ ಕನ್ನಡದ ಬೆಡಗಿ. ಈ ನಟಿಗೆ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರೂರಬೇಕೆಂಬ ಬಯಕೆ. ಆ ನಿಟ್ಟಿನಲ್ಲಿ ಪದ್ಮಿನಿ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಅಂದಹಾಗೆ ಈಗಾಗಲೇ ಅವರು ಕನ್ನಡದ ಚಿತ್ರಗಳಲ್ಲಿ ನಟಿಸಿದ್ದಾರೆ. ರೂಮ್ ಬಾಯ್ ಹಾಗು ಡಿಎಸ್ ಎಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿವೆ.
ಉಳಿದಂತೆ ಪದ್ಮಿನಿ ಅವರು ಕಿರುತೆರೆಯಲ್ಲೂ ಒಂದು ಹೆಜ್ಜೆ ಇಡುವ ಉತ್ಸಾಹದಲ್ಲಿದ್ದಾರೆ. ಸಿನಿಮಾದ ಜೊತೆ ಜೊತೆಯಲ್ಲೇ ಪದ್ಮಿನಿ ಕಿರುತೆರೆಗೂ ಲಗ್ಗೆ ಇಡುವ ಸೂಚನೆ ನೀಡುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಸೀರಿಯಲ್ಸ್ ಜೊತೆ ಮಾತುಕತೆಯೂ ನಡೆಯುತ್ತಿದೆ ಎಂಬುದು ಅವರ ಮಾತು.
ಪದ್ಮಿನಿ ಅವರು, ಸಿನಿಮಾ ಬರುವ ಮುನ್ನ, ಮಾಡೆಲಿಂಗ್ ಕ್ಷೇತ್ರದಲ್ಲಿದ್ದರು. 2019 ರಲ್ಲಿ ನಡೆದ ಮಿಸ್ ಕರ್ನಾಟಕ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ನಂತರ ಒಂದಷ್ಟು ರಿಯಾಲಿಟಿ ಶೋಗಳು ಹಾಗು ಯುನಿರ್ವಸಿಟಿ ಕಾಲೇಜ್ ವೊಂದರ ಜಾಹಿರಾತು ಸೇರಿದಂತೆ ಹಲವು ಜಾಹಿರಾತಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲ, ಬೇರೆ ಭಾಷೆಗಳಿಂದಲೂ ಇವರಿಗೆ ಅವಕಾಶಗಳಿವೆ. ಸದ್ಯ ಕನ್ನಡದಲ್ಲೇ ಕೆಲಸ ಮಾಡಿ, ಇಲ್ಲಿ ಒಪ್ಪಿಕೊಂಡ ಪ್ರಾಜೆಕ್ಟ್ ಮುಗಿಸಿ ನಂತರ ಪರಭಾಷೆ ಕಡೆಗೂ ಗಮನಹರಿಸುತ್ತೇನೆ ಎನ್ನುತ್ತಾರೆ.
ಈಗ ಒಂದೆರೆಡು ಸಿರಿಯಲ್ಸ್ ಮಾತುಕತೆಯೂ ಸೀರಿಯಸ್ ಆಗಿ ನಡೆಯುತ್ತಿದೆ. ಹಾಗೊಂದು ವೇಳೆ ಅವಕಾಶ ಸಿಕ್ಕರೆ ಅಲ್ಲೇ ವಾಲುತ್ತೆನೆ ಎನ್ನುವ ಪದ್ಮಿನಿ ಅವರಿಗೆ ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸುವಾಸೆ. ಅಷ್ಟೇ ಅಲ್ಲ, ಕನ್ನಡದಲ್ಲಿ ಪ್ರತಿಭೆ ಗುರುತಿಸುವ ಕೆಲಸ ಆಗುತ್ತಿಲ್ಲ. ಮೊದಲು ಪ್ರತಿಭಾವಂತರಿಗೆ ಒಳ್ಳೆಯ ವೇದಿಕೆ ಸಿಗಬೇಕು. ಇಲ್ಲಿನವರೇ ನಮ್ಮನ್ನು ಗುರುತಿಸದಿದ್ದರೆ ಹೇಗೆ? ಎಂದು ಪ್ರಶ್ನಿಸುವ ಪದ್ಮಿನಿ, ಒಂದೊಳ್ಳೆಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಪದ್ಮಿನಿ ಕೇವಲ ಮಾಡಲಿಂಗ್ ಮತ್ತು ನಟನೆಯಷ್ಟೇ ಅಲ್ಲ, ಅವರು ಮೇಕಪ್ ಬಗ್ಗೆಯೂ ಸಾಕಷ್ಟು ತಿಳಿದುಕೊಂಡಿದ್ದಾರೆ. ಬ್ಯೂಟಿಷಿಯನ್ ಕುರಿತಂತೆ ಇಂಟರ್ ನ್ಯಾಷನಲ್ ಕೋರ್ಸ್ ಕೂಡ ಮಾಡಿದ್ದಾರೆ.
ಹಾಗೆಯೇ ಕಾಸ್ಟ್ಯೂಮ್ ಸೆನ್ಸ್ ಕೂಡ ಅವರಿಗಿದೆ. ಅದೇನೆ ಇರಲಿ, ಕನ್ನಡ ಸಿನಿಮಾಗಳನ್ನು ನೋಡಿಕೊಂಡು ಬಂದಿರುವ ಈ ನಟಿಗೆ ಒಳ್ಳೆಯ ಅವಕಾಶ ಬೇಕಿದೆ. ತಾನೊಬ್ಬ ನಟಿ ಅನ್ನುವುದಕ್ಕಿಂತಲೂ ಕಲಾವಿದೆ ಎನಿಸಿಕೊಳ್ಳುವ ಆಸೆ ಇದೆ.
ಚಂದನವನದ ಚೆಂದದ ಬ್ಯೂಟಿ ಅನಿತಾ ಭಟ್ ನಟನೆಗೂ ಸೈ.. ನಿರ್ಮಾಣಕ್ಕೂ ಜೈ… ಈಗಾಗಲೇ ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮುದ್ರಂ ಸಿನಿಮಾ ನಿರ್ಮಾಣ ಮಾಡಿರುವ ಅನಿತಾ ಭಟ್, ಈಗ ಇಂದಿರಾ ಸಿನಿಮಾ ತೆರೆಗೆ ತರಲು ಸಜ್ಜಾಗಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇಂದಿರಾ ಸಿನಿಮಾದ ಫಸ್ಟ್ ಲುಕ್ ಕ್ಯೂರಿಯಾಸಿಟಿ ಹೆಚ್ಚಿಸಿದ್ದು, ಈಗ ಇಂದಿರಾಳ ಮೊದಲ ಹಾಡು ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಕ್ಯೂರಿಯಸ್ ಆಗಿದೆ ಸ್ಟೆಪ್ಸ್ ಟು ಡೆಸ್ಟಿನಿ ಹಾಡು
ಇಂದಿರಾ ಸಿನಿಮಾದ ಮೊದಲ ಹಾಡು ಕುತೂಹಲ ಮೂಡಿಸುತ್ತಿದೆ. A2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ‘ಸ್ಟೆಪ್ಸ್ ಟು ಡೆಸ್ಟಿನಿ’ ಹಾಡು ಕೇಳುಗರ ಗಮನ ಸೆಳೆಯುತ್ತಿದೆ. ನಿರ್ದೇಶಕ ರಿಷಿಕೇಶ್ ಬರೆದಿರುವ ಲಿರಿಕ್ಸ್ ಗೆ, ಲೋಹಿತ್ ನಾಯ್ಕ್ ಸಂಯೋಜಿಸಿದ್ದಾರೆ., ಸುಪ್ರಿಯ ರಾಮ್ ಕಂಠದಲ್ಲಿ ಹಾಡಿಗೆ ಧನ್ವಿಯಾಗಿದ್ದಾರೆ. ಸಸ್ಪೆನ್ಸ್ ಅಂಶಗಳಿಂದ ಈ ಹಾಡು ಅಟ್ರ್ಯಾಕ್ಟ್ ಮಾಡ್ತಿದೆ.
ಇಂದಿರಾ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ನಿರ್ಮಾಣವಾಗಿದೆ. ಮುಖ್ಯಭೂಮಿಕೆಯಲ್ಲಿ ಅನಿತಾ ಭಟ್ ನಟಿಸಿದ್ದು, ಉಳಿದಂತೆ ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಹಾಸನ್, ಚಕ್ರವರ್ತಿ ಚಂದ್ರಚೂಡ್, ನೀತು ಹಾಗೂ ಶಫಿ ಬಣ್ಣ ಹಚ್ಚಿದ್ದಾರೆ.
ಇಂದಿರಾ ಸಿನಿಮಾಕ್ಕೆ ರಿಷಿಕೇಶ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಲೋಹಿತ್ ಎಲ್.ನಾಯಕ್ ಮ್ಯೂಸಿಕ್, ಅಭಿಷೇಕ್ ಮಠದ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಅನಿತಾ ಭಟ್ ಹಾಗೂ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ ಸೊರಬ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ದಿಗಂತ್ ಅಭಿನಯದ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಸಿನಿಮಾ ಈಗ ರಿಲೀಸ್ಗೆ ರೆಡಿಯಾಗಿದೆ. ಚಿತ್ರ ತನ್ನ ಶೀರ್ಷಿಕೆಯಿಂದಲೇ ಜೋರು ಸುದ್ದಿ ಮಾಡಿತ್ತು. ಈಗ ತನ್ನೆಲ್ಲಾ ಕೆಲಸಗಳನ್ನು ಪೂರೈಸಿಕೊಂಡು ರಿಲೀಸ್ ಆಗೋಕೆ ಸಜ್ಜಾಗುತ್ತಿದೆ. ಹೌದು, ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರುವ ವಿನಾಯಕ ಕೋಡ್ಸರ ತಮ್ಮ ಚೊಚ್ಚಲ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಬಗ್ಗೆ ಅವರು ಹೇಳುವುದಿಷ್ಟು…
ಚಿತ್ರ ನಿರ್ಮಾಣ ಮಾಡುವುದು ಎಷ್ಟು ಕಷ್ಟವೋ, ಜನರಿಗೆ ತಲುಪಿಸೋದು ಅದಕ್ಕಿಂತಲೂ ಕಷ್ಟ. ಈ ಚಿತ್ರಕ್ಕೆ ಬಿ.ಜಿ. ಮಂಜುನಾಥ್ ನಿರ್ಮಾಪಕರು. “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ. ದಿಗಂತ್ ಚಿತ್ರದ ಹೈಲೈಟ್. ಐಂದ್ರಿತಾ ರೇ ಮತ್ತು ರಜನಿ ರಾಘವನ್ ಅವರ ಜೊತೆಯಲ್ಲಿದ್ದಾರೆ. ಇನ್ನು, ಚಿತ್ರಕ್ಕೆ ರವೀಂದ್ರ ಜೋಶಿ ಕಾರ್ಯಕಾರಿ ನಿರ್ಮಾಪಕರು.
ಬಿಡುಗಡೆಗೂ ಮುನ್ನ, ಚಿತ್ರತಂಡ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಟಿ.ಎಸ್.ಎಸ್ ಅಡಿಕೆ ವ್ಯಾಪಾರಿ ಅಂಗಳ ಅಂದರೆ ಬಹು ಖ್ಯಾತಿ. ಇದರ ಸಹಯೋಗದೊಂದಿಗೆ ಫೆ. 20ರಂದು ಮಧ್ಯಾಹ್ನ ಮೂರರಿಂದ ಸಂಜೆ ಐದು ಮುವತ್ತರವರೆಗೂ ಅಡಿಕೆ ಸುಲಿಯುವ ಸ್ಪರ್ಧೆ ಏರ್ಪಡಿಸಲಾಗಿದೆ.
ಶಿರಸಿಯ ಟಿ.ಎಸ್.ಎಸ್ ಪ್ರಾಂಗಣದಲ್ಲಿ ಈ ಸ್ಪರ್ಧೆ ನಡೆಯಲಿದೆ. ಸುಮಾರು 200 ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ವಿಜೇತರಿಗೆ ಬಹುಮಾನವೂ ಇದೆ. ದಿಗಂತ್, ಐಂದ್ರಿತ ರೆ , ರಂಜನಿ ರಾಘವನ್ ಹಾಗೂ ಚಿತ್ರತಂಡದ ಬಹುತೇಕ ಸದಸ್ಯರು ಅಂದು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಅಂದಹಾಗೆ ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿದ್ದು, ಅಡಿಕೆ ಜೊತೆ ಪಾತ್ರದ ನಂಟಿದೆ. ಹೀಗಾಗಿ ಮಲೆನಾಡಿನ ಜೀವನಾಡಿಯಾದ ಅಡಿಕೆ ಸುಲಿಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂಬುದು ನಿರ್ದೇಶಕ ವಿನಾಯಕ ಕೋಡ್ಸರ ಮಾತು.
ಕನ್ನಡ ಚಿತ್ರರಂಗದಲ್ಲಿ ಪ್ರದರ್ಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ನರಸಿಂಹಲು ಅವರ ಮಾಲೀಕತ್ವದ ” ವೈಷ್ಣವಿ – ವೈಭವಿ” ಚಿತ್ರಮಂದಿರ ಇದೀಗ ಉತ್ತರಹಳ್ಳಿಯಲ್ಲಿ ಶುರುವಾಗಿದೆ. ಇದು ಈಗ ನವೀನ ತಂತ್ರಜ್ಞಾನದೊಂದಿಗೆ ನವೀಕರಣಗೊಂಡಿದೆ. ಇತ್ತೀಚೆಗೆ ಜೋಗಿ ಪ್ರೇಮ್ ಈ ಚಿತ್ರಮಂದಿರವನ್ನು ಉದ್ಘಾಟಿಸುವ ಮೂಲಕ ಶುಭ ಹಾರೈಸಿದ್ದಾರೆ.
ಈ ವೇಳೆ ಪ್ರೇಮ್ ಹೇಳಿದ್ದಿಷ್ಟು. “ನಾನು ಈ ಚಿತ್ರಮಂದಿರದಲ್ಲಿ ನಮ್ಮ ಚಿತ್ರದ ಹಾಡುಗಳನ್ನು ನೋಡಿದೆ. ಸೌಂಡ್ ಸಿಸ್ಟಮ್ ಉತ್ತಮ ಗುಣಮಟ್ಟದಿಂದ ಕೂಡಿದೆ. ಯಾವ ಮಲ್ಟಿಪ್ಲೆಕ್ಸ್ ಗೂ ಕಡಿಮೆ ಇಲ್ಲ. ನರಸಿಂಹಲು ಅವರ ಈ ಪ್ರಯತ್ನಕ್ಕೆ ಒಳಿತಾಗಲಿ ಎಂದರು.
ನಾವು ಕೆಲವು ಸಂಸ್ಥೆಗಳ ಜೊತೆ ಕೈ ಜೋಡಿಸಿ ಉತ್ತಮ ರೀತಿಯಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಈ ಚಿತ್ರಮಂದಿರವನ್ನು ನವೀಕರಣ ಮಾಡಿದ್ದೇವೆ. ಆದರೆ ಬೆಲೆ ಮಾತ್ರ ಏರಿಕೆ ಮಾಡಿಲ್ಲ. ಮೊದಲಿನಷ್ಟೇ ಇರುತ್ತದೆ. 465 ಸಾಮರ್ಥ್ಯವುಳ್ಳ ಉತ್ತಮ ಆಸನ, ಸೌಂಡ್ ವ್ಯವಸ್ಥೆ ಹಾಗೂ ತಿಂಡಿ, ತಿನಿಸುಗಳು ಎಲ್ಲಾ ಉತ್ತಮವಾಗಿದೆ. ಟಿಕೇಟ್ ಹಾಗೂ ಆಹಾರದ ಬೆಲೆ ಜನಸಾಮಾನ್ಯರಿಗೆ ಹೊರೆಯಾಗುವುದಿಲ್ಲ. ಸಿಂಗಲ್ ಥಿಯೇಟರ್ ಗಳನ್ನು ಉಳಿಸಿಕೊಳ್ಳುವುದೇ ನಮ್ಮ ಉದ್ದೇಶ ಎಂದರು ನರಸಿಂಹಲು ಅವರ ಪುತ್ರ ಕಿಶೋರ್.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎನ್.ಎಂ.ಸುರೇಶ್, ವಿತರಕ ಭಾಷಾ, ನಾಗಣ್ಣ “ಏಕ್ ಲವ್ ಯಾ” ಚಿತ್ರದ ನಾಯಕ ರಾಣಾ ಈ ಸಮಾರಂಭಕ್ಕೆ ಆಗಮಿಸಿ ನರಸಿಂಹಲು ಅವರಿಗೆ ಶುಭ ಕೋರಿದರು.
ನಟಿ ಶ್ರೀಲೀಲಾ ಭಾವುಕರಾಗಿದ್ದಾರೆ! ಅರೇ ಅವರೇಕೆ ಹಾಗಾದರು ಎಂಬ ಪ್ರಶ್ನೆ ಸಹಜ. ಆದರೆ, ಅವರು ಭಾವುಕರಾಗಿರೋದು ನಿಜ. ಹಾಗಂತ ಅದು ಸಿನಿಮಾ ದೃಶ್ಯದಲ್ಲಲ್ಲ. ಬದಲಾಗಿ ರಿಯಲ್ ಆಗಿ ಭಾವುಕರಾಗಿದ್ದಾರೆ. ಅಂದಹಾಗೆ, ವಿಷಯ ಏನೆಂದರೆ, ಶ್ರೀ ಲೀಲ ಅವರು ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ.
ಹೌದು, ಶ್ರೀಲೀಲ ಅವರು ಮಾತೃಶ್ರೀ ಮನೋವಿಕಾಸ ಕೇಂದ್ರದ ಇಬ್ಬರು ಮಕ್ಕಳನ್ನು ದತ್ತು ಪಡೆಯುವ ಮೂಲಕ ಭಾವುಕ ಕ್ಷಣಗಳನ್ನು ಅನುಭವಿಸಿದ್ದಾರೆ. ಮಾತೃಶ್ರೀ ಮನೋವಿಕಾಸ ಕೇಂದ್ರದ ಎಂಟು ತಿಂಗಳ ಮಗು ಗುರು ಮತ್ತು ಶೋಭಿತ ಎನ್ನುವ ಹೆಣ್ಣು ಮಗಳನ್ನು ದತ್ತು ಪಡೆದ ಶ್ರೀಲಿಲ ಕಣ್ತುಂಬಿಕೊಂಡಿದ್ದಾರೆ. ಬೈ ಟು ಲವ್ ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರುವ ಶ್ರೀಲೀಲ, ಆ ಮಗುವಿನೊಂದಿಗೆ ಬೆಸೆದಿದ್ದ ಬಂಧ ಮತ್ತು ಮಾತೃ ಶ್ರೀಮನೋವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ನು ನೋಡಿದ ಕ್ಷಣವೇ ಅವರು ಭಾವುಕರಾದರು.
ಅದೇ ಫೀಲಿಂಗ್ನಲ್ಲಿದ್ದ ಅವರು ಇಬ್ಬರು ಮಕ್ಕಳನ್ನ ದತ್ತು ಪಡೆದು ಇತರರಿಗೆ ಮಾದರಿಯಾಗಿ, ಸ್ಫೂರ್ತಿ ತುಂಬಿದ್ದಾರೆ. ಈ ವೇಳೆ ಬೈ ಟು ಲವ್ ಚಿತ್ರದ ನಿರ್ದೇಶಕ ಹರಿ ಸಂತು ಅವರು ನಟಿ ಶ್ರೀಲೀಲ ಅವರಿಗೆ ಸಾಥ್ ನೀಡಿದರು. ಅಂದಹಾಗೆ, ಶ್ರೀಲೀಲ ಅಭಿನಯದ ಬೈಟು ಲವ್ ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದ್ದು, ಈ ಸಿನಿಮಾ ಇಂದಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದಯಂತೆ. ಅಂತಹ ವಿಶೇಷ ವಿಚಾರಗಳು ಚಿತ್ರದಲ್ಲಿವೆ ಎಂಬುದು ಶ್ರೀಲೀಲ ಮಾತು. ಬೈ ಟು ಲವ್ ಚಿತ್ರ ಫೆಬ್ರವರಿ 18ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ.
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಲನಚಿತ್ರ ದೇಶಾದ್ಯಂತ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ರಕ್ತಚಂದನ ಮಾಫಿಯಾವನ್ನೇ ಕೇಂದ್ರವನ್ನಾಗಿಸಿ ಆಂಧ್ರದ ದಟ್ಟಾರಣ್ಯದಲ್ಲಿ ನಡೆಯುವ ಆ ಕರಾಳ ದಂಧೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಇರಿಸುವಂತೆ ಮಾಡಿದೆ. ‘ಪುಷ್ಪ’ ಚಿತ್ರದ ಮಾದರಿಯಲ್ಲೇ ನಮ್ಮ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಬಹುದೊಡ್ಡ ದಂಧೆ ಕಾರ್ಯನಿರ್ವಹಿಸುತ್ತಿದೆ. ಈ ಮಾಫಿಯಾದ ಬ್ಯಾಕ್ಡ್ರಾಪ್ನಲ್ಲೇ ಸಂಚಾರಿ ವಿಜಯ್ ಅಭಿನಯದ `ಮೇಲೊಬ್ಬ ಮಾಯಾವಿ’ ಚಿತ್ರ ಕೂಡ ಇದೀಗ ಬಿಡುಗಡೆಗೆ ಸಿದ್ಧವಾಗಿದೆ.
ಅರಣ್ಯಪ್ರದೇಶವನ್ನೇ ಹೊದ್ದುಕೊಂಡಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ಹರಳು ಕಲ್ಲು ದಂಧೆ ಮತ್ತೆ ಕಾರ್ಯಾರಂಭಗೊಂಡಿದೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಪುಷ್ಪಗಿರಿ ಅರಣ್ಯದಲ್ಲಿ ಈ ನಿಗೂಢ ಹರಳುಕ ಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಆಭರಣ, ಉಂಗುರುಗಳಿಗೆ ಬಳಸುವ ಈ ಹರಳಿನ ಕಲ್ಲಿಗಾಗಿ ಅಕ್ರಮ ದಂಧೆಕೋರರು ಹುಡುಕಾಟ ನಡೆಸುತ್ತಿದ್ದು ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ದಶಕಗಳ ಹಿಂದೆ ನಿಂತು ಹೋಗಿದ್ದ ಹರಳು ಕಲ್ಲಿನ ಗಣಿಗಾರಿಕೆ ಮತ್ತೆ ಆರಂಭಗೊಂಡಿದ್ದು ಕೂಜಿಮಲೆ, ಸುಟ್ಟತ್ ಮಲೆ ಅರಣ್ಯ ಪ್ರದೇಶದಲ್ಲಿ ಹೊಳೆಯುವ ಕಲ್ಲಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಚ್ಚರಿಯ ವಿಚಾರವೆಂದರೆ, `ಮೇಲೊಬ್ಬ ಮಾಯಾವಿ’ ಚಿತ್ರತಂಡ ಈ ಅಪಾಯದ ಜಾಗಗಳಲ್ಲೇ ಚಿತ್ರೀಕರಣವನ್ನು ಮಾಡಿತ್ತು.
ಪುಷ್ಪಗಿರಿ ಅರಣ್ಯವಲಯದ ಕೂಜಿಮಲೆ ಮತ್ತು ಸುಟ್ಟತ್ ಮಲೆಯಲ್ಲಿ ಈಗ ಅಕ್ರಮ ದಂಧೆ ಮತ್ತೇ ಗರಿಗೆದರಿದೆ. ಕಳೆದ ಎರಡು ದಶಕಗಳ ಹಿಂದೆ ಸುಬ್ರಹ್ಮಣ್ಯ ಮತ್ತು ಕೊಡಗಿಗೆ ಹೊಂದಿಕೊಂಡಿರುವ ಕೂಜಿಮಲೆ ಮತ್ತು ಸುಟ್ಟತ್ ಮಲೆ ಎಂಬ ಬೆಟ್ಟಗಳಲ್ಲಿ ಹರಳು ಕಲ್ಲು ಪತ್ತೆಯಾಗಿತ್ತು. ಈ ಕಲ್ಲಿಗೆ ಆಗ ಕೆಜಿಯೊಂದಕ್ಕೆ 500 ರೂಪಾಯಿ ಇಂದ ಆರಂಭವಾಗಿ ಸಾವಿರಾರು ರೂಪಾಯಿ ಬೆಲೆ ದೊರೆಯುತ್ತಿತ್ತು. ಆದರೀಗ ಈ ಹರಳು ಕಲ್ಲಿಗೆ ರಾಜಸ್ಥಾನ ,ಗುಜರಾತ್ , ಮುಂಬೈ ಆಭರಣ ತಯಾರಿಕರಿಂದ ಭಾರೀ ಬೇಡಿಕೆ ಇದೆ. ಒಂದು ಮಾಹಿತಿಯ ಪ್ರಕಾರ ಈ ಹರಳು ಕಲ್ಲಿಗೆ ಪ್ರಸ್ತುತ 1 ಕೆಜಿಗೆ 30 ರಿಂದ 40 ಸಾವಿರ ರೂಪಾಯಿ ಇದೆ ಎಂದು ಹೇಳಲಾಗಿದೆ. ಈ ಎಲ್ಲಾ ಅಂಶಗಳನ್ನು ಚಿತ್ರತಂಡ `ಮೇಲೊಬ್ಬ ಮಾಯಾವಿ’ಯಲ್ಲಿ ಮನೋರಂಜನೆಯೊಂದಿಗೆ ಪ್ರೇಕ್ಷಕರ ಮುಂದಿಡಲಿದೆ.
ಈ ದಂಧೆಯಿಂದ ಪೃಕೃತಿಗೂ ಅಪಾರ ನಷ್ಟವುಂಟಾಗುತ್ತಿದೆ. ಒಂದು ಕಾಲದಲ್ಲಿ ಹರಳುಕಲ್ಲು ದಂಧೆಯಿಂದಾಗಿ ಹೊಡೆದಾಟ, ಬಡಿದಾಟ ನಡೆದು ಹಲವು ಮಂದಿಯ ಪ್ರಾಣಕ್ಕೆ ಕುತ್ತು ಬಂದಿತ್ತು. ಸುಟ್ಟತ್ ಮಲೆ ಮತ್ತು ಕೂಜಿಮಲೆ ಹರಳು ಕಲ್ಲಿನ ದಂಧೆಗೆ ಅರಣ್ಯ ಇಲಾಖೆ ಕಡಿವಾಣ ಹಾಕಿತ್ತು. ಇದೀಗ ಮತ್ತೆ ಇಲ್ಲಿ ದಂಧೆ ಶುರುವಾಗಿದೆ. ಅದರ ಮೇಲೆ `ಮೇಲೊಬ್ಬ ಮಾಯಾವಿ’ ಚಿತ್ರ ಪ್ರಕೃತಿಯ ಮೇಲೆ ನಡೆಯುತ್ತಿರುವ ವಿಕೃತಿಯ ಮೇಲೂ ಬೆಳಕು ಚೆಲ್ಲಲ್ಲಿದೆ.
ಶ್ರೀ ಕಟೀಲ್ ಸಿನಿಮಾಸ್’ ಬ್ಯಾನರ್ನಲ್ಲಿ ಭರತ್ ಕುಮಾರ್, ತನ್ವಿ ಅಮಿನ್ ಕೊಲ್ಯ ನಿರ್ಮಾಪಕರು. ನಿರ್ದೇಶಕ ಬಿ.ನವೀನ್ಕೃಷ್ಣ, ಸಂಚಾರಿ ವಿಜಯ್ ಅವರ ಇರುವೆ’ ಅನ್ನುವ ಪಾತ್ರ ಕಟ್ಟಿಕೊಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅನನ್ಯ ಶೆಟ್ಟಿ ನಾಯಕಿಯಾಗಿದ್ದು, ಬಿಗ್ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿ ಕಾಣಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಅವರಿಲ್ಲಿ ಸಂಭಾಷಣೆ, ಚಿತ್ರಕಥೆಯ ಜೊತೆಯಲ್ಲಿ ಹಾಡನ್ನೂ ಬರೆದಿದ್ದಾರೆ. ಚಿತ್ರದಲ್ಲಿ ಕೃಷ್ಣಮೂರ್ತಿ ಕವತ್ತಾರ್, ಪವಿತ್ರಾ ಜಯರಾಮ್, ಬೆನಕ ನಂಜಪ್ಪ, ಎಮ್.ಕೆ.ಮಠ, ನವೀನ್ಕುಮಾರ್, ಲಕ್ಷ್ಮಿ ಅರ್ಪಣ್ , ಮುಖೇಶ್, ಡಾ.ಮನೋನ್ಮಣಿ ಇತರರು ಇದ್ದಾರೆ.
ಚಿತ್ರಕ್ಕೆ ದಿ. ಎಲ್.ಎನ್.ಶಾಸ್ತ್ರೀಯವರ ಸಂಗೀತವಿದೆ. ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿ ಮಾಡಿದ್ದಾರ. ಕೆ.ಗಿರೀಶ್ ಕುಮಾರ್ ಅವರ ಸಂಕಲನವಿದೆ. ದೀಪಿತ್ ಬಿಜೈ ರತ್ನಾಕರ್ ಕ್ಯಾಮೆರಾ ಹಿಡಿದಿದ್ದಾರೆ. ರಾಮು ನೃತ್ಯ ಸಂಯೋಜನೆಯಿದೆ. ಚಿತ್ರ ಇಷ್ಟರಲ್ಲೇ ರಿಲೀಸ್ ಆಗಲಿದೆ.
ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ರಾಣ ಚಿತ್ರದ ಹಾಡುಗಳು ಹೊರಬಂದಿವೆ. ನಟ ದುನಿಯಾ ವಿಜಯ್ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಪಕ ಕೆ.ಮಂಜು ಅವರ ಹುಟ್ಟುಹಬ್ಬದ ಸಂಭ್ರಮ ಕೂಡ ಹಾಡು ಬಿಡುಗಡೆ ವೇಳೆ ನಡೆದಿದೆ.
ಹೌದು, ಕೆ.ಮಂಜು ಅರ್ಪಿಸಿರುವ ಗುಜ್ಜಾಲ್ ಟಾಕೀಸ್ ಬ್ಯಾನರ್ನಲ್ಲಿ ಪುರುಷೋತ್ತಮ ಗುಜ್ಜಾಲ್ ನಿರ್ಮಿಸುತ್ತಿರುವ, ನಂದ ಕಿಶೋರ್ ನಿರ್ದೇಶನದ ರಾಣ ಚಿತ್ರದ ಹಾಡುಗಳನ್ನು ದುನಿಯಾ ವಿಜಯ್ ರಿಲೀಸ್ ಮಾಡಿದ್ದಾರೆ. ಈ ಚಿತ್ರಕ್ಕೆ ಶ್ರೇಯಸ್ ಹೀರೋ. ಇನ್ನು ಶಿವು ಭೇರ್ಗಿ ಬರೆದಿರುವ “ಮಳ್ಳಿ ಮಳ್ಳಿ” ಎಂಬ ಹಾಡಿಗೆ ನಾಯಕ ಶ್ರೇಯಸ್ ಹಾಗೂ ಸಂಯುಕ್ತ ಹೆಗಡೆ ಹೆಜ್ಜೆ ಹಾಕಿದ್ದಾರೆ. ಇಮ್ರಾನ್ ನೃತ್ಯ ನಿರ್ದೇಶನವಿದೆ. ಹಾಡಿಗೆ ಶಿವು ಅದ್ಭುತವಾದ ಸೆಟ್ ಹಾಕಿದ್ದಾರೆ.
ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಕೆ.ಮಂಜು ಅವರು ಮಗನ ಮೇಲಿಟ್ಟರುವ ಪ್ರೀತಿ. ಈ ಹಾಡನ್ನು ನೋಡಿದರೆ ಶ್ರೇಯಸ್ ಪಟ್ಟಿರುವ ಶ್ರಮ ಗೊತ್ತಾಗುತ್ತೆ. ಸಂಯಕ್ತ ಅವರ ನಟನೆಯೂ ಚೆನ್ನಾಗಿದೆ. ಸಿನಿಮಾ ಕೂಡ ಚೆನ್ನಾಗಿ ಬಂದಿದೆ ಎಂಬ ನಂಬಿಕೆ ಇದೆ. ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು ದುನಿಯಾ ವಿಜಯ್.
ಹೀರೋ ಶ್ರೇಯಸ್ ಮಾತಿಗೆ ಮೊದಲು ಅಪ್ಪು ಅವರನ್ನು ನೆನೆದರು. ನಂತರ ಮಾತಿಗಿಳಿದ ಅವರು, ಸಂಯುಕ್ತ ಹೆಗಡೆ ಒಳ್ಳೆಯ ನೃತ್ಯಗಾರ್ತಿ. ಅವರೊಡನೆ ನೃತ್ಯ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ಹೆಚ್ಚು ಅಭ್ಯಾಸ ಮಾಡಿದ್ದೆ. ಈ ನಿಟ್ಟಿನಲ್ಲಿ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ಅವರ ಸಹಾಯಕರ ಸಹಕಾರ ಮರೆಯಲು ಸಾಧ್ಯವಿಲ್ಲ. ಚಿತ್ರೀಕರಣ ಬಹುತೇಕ ಮುಗಿದಿದೆ. ಸ್ವಲ್ಪ ಮಾತ್ರ ಬಾಕಿಯಿದೆ. ನಿರ್ಮಾಪಕ ಪುರುಷೋತ್ತಮ್, ನಿರ್ದೇಶಕ ನಂದಕಿಶೋರ್ ಹಾಗೂ ನಮ್ಮ ತಂದೆ ಕೆ.ಮಂಜು ಅವರಿಗೆ ಧನ್ಯವಾದ ಎಂದರು ಶ್ರೇಯಸ್.
ನೀವೆಲ್ಲರೂ ಹಾಡು ಚೆನ್ನಾಗಿದೆ ಎಂದು ಹೇಳಿದ್ದು ನನಗೆ ಖುಷಿ ಕೊಟ್ಟಿದೆ. ನನಗೆ ಚಿಕ್ಕ ವಯಸ್ಸಿನಿಂದಲೂ ನೃತ್ಯದಲ್ಲಿ ಆಸಕ್ತಿ. ಈ ಹಾಡಿನಲ್ಲಿ ನೃತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಂದಕಿಶೋರ್ ಅವರ ನಿರ್ದೇಶನ ಹಾಗೂ ಶ್ರೇಯಸ್ ಅವರ ಅಭಿನಯ ಚೆನ್ನಾಗಿದೆ ಎಂಬುದು ಸಂಯುಕ್ತ ಹೆಗಡೆ ಮಾತು.
ಇದೊಂದು ಬ್ಯಾಚುಲರ್ ಪಾರ್ಟಿ ಕುರಿತ ಹಾಡು. ಇದರಲ್ಲಿ ಸಂಯುಕ್ತ ಹೆಗಡೆ ಮತ್ತು ಶ್ರೇಯಸ್ ಚೆನ್ನಾಗಿ ನಟಿಸಿದ್ದಾರೆ. ಶಿವು ಅವರ ಕಲಾ ನಿರ್ದೇಶನ, ಶಿವು ಭೇರ್ಗಿ ಅವರ ಗೀತೆ , ಇಮ್ರಾನ್ ನೃತ್ಯ ನಿರ್ದೇಶನ ಎಲ್ಲವೂ ಚೆನ್ನಾಗಿದೆ. ಕೆ.ಮಂಜು ಅವರ ಹುಟ್ಚುಹಬ್ಬಕ್ಕೆ ಹಾಡು ಬಿಡುಗಡೆ ಮಾಡಿದ್ದೇವೆ. ಮೇ ವೇಳೆಗೆ ಚಿತ್ರವನ್ನು ತೆರೆಗೆ ತರಲು ಸಿದ್ದತೆ ನಡೆಯುತ್ತಿದೆ ಎಂದು ನಿರ್ಮಾಪಕ ಪುರಷೋತ್ತಮ್ ಗುಜ್ಜಾಲ್ ವಿವರಿಸಿದರು.
ನಿರ್ದೇಶಕ ನಂದಕಿಶೋರ್, ಛಾಯಾಗ್ರಾಹಕ ಶೇಖರ್ ಚಂದ್ರ, ನಟಿ ರಜನಿ ಭಾರದ್ವಾಜ್ ಸಿನಿಮಾ ಕುರಿತು ಮಾತನಾಡಿದರು. ರಮೇಶ್ ರೆಡ್ಡಿ, ದೀಪಕ್ ಇದ್ದರು. ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.
ಧರ್ಮ ಕೀರ್ತಿರಾಜ್ ಅವರನ್ನು ಕ್ಯಾಟ್ಬರೀಸ್ ಅಂತ ಕರೆಯುವುದುಂಟು. ಅದರಲ್ಲೂ ಅವರನ್ನು ಆಕ್ಷನ್ ಬಾಯ್ ಆಗಿ ನೋಡಿದವರಿಲ್ಲ. ಲವರ್ಬಾಯ್ ಆಗಿಯೇ ಅವರು ಕಾಣಿಸಿಕೊಂಡಿರೋದುಂಟು. ಈಗ ಅವರು ಪಕ್ಕಾ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, ಅದರ ಹೆಸರು ಖಡಕ್. ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಖಡಕ್ ಚಿತ್ರದ ಹಾಡು ಬಿಡುಗಡೆಗೆ ನಟ ವಿನೋದ್ ಪ್ರಭಾಕರ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪ್ರಥಮ್ ಸೇರಿದಂತೆ ಹಲವರು ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಚಿತ್ರರಂಗ ಕೊರೋನ ಸಮಯದಲ್ಲಿ ಸಾಕಷ್ಟು ನಷ್ಟ ಅನುಭವಿಸಿದೆ. ಈಗ ಮತ್ತೆ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿದೆ. ನಿರ್ಮಾಪಕ ವಲ್ಲಿ, ನನ್ನ ಅನೇಕ ಚಿತ್ರಗಳಿಗೆ ವಸ್ತ್ರಾಲಂಕಾರ ಮಾಡಿದ್ದಾರೆ. ತಾವು ಚಿತ್ರರಂಗದಲ್ಲಿ ದುಡಿದ ದುಡ್ಡನ್ನು ಮತ್ತೆ ಚಿತ್ರರಂಗಕ್ಕೆ ಹಾಕುತ್ತಿದ್ದಾರೆ. ಅವರ ಈ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ನಟ ವಿನೋದ್ ಪ್ರಭಾಕರ್ ಮಾತನಾಡಿ, ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿವೆ. ನನ್ನ ಹಾಗೂ ಧರ್ಮನ ಸ್ನೇಹ ತುಂಬಾ ವರ್ಷಗಳದ್ದು. ನಾನು ಇಲ್ಲಿಗೆ ಬರಲು ಆ ಸ್ನೇಹವೇ ಕಾರಣ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಅವರು. ಈ ವೇಳೆ ನಟ ಪ್ರಥಮ್ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರ. ಇದೇ ಮೊದಲ ಬಾರಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ ನೋಡಿ ಹಾರೈಸಿ ಎಂದರು ನಾಯಕ ಧರ್ಮ ಕೀರ್ತಿರಾಜ್. ತಮ್ಮ ಪಾತ್ರದ ಬಗ್ಗೆ ನಾಯಕಿ ಅನೂಶ ರೈ ವಿವರಿಸಿದರು. ಸಂಗೀತ ಕುರಿತು ಎಂ.ಎನ್ ಕೃಪಾಕರ್ ಮಾತನಾಡಿದರು.
ನಂದಿನಿ ಕಂಬೈನ್ಸ್ ಮೂಲಕ ವಲ್ಲಿ ಹಾಗೂ ಸಿದ್ದರಾಮಯ್ಯ ಸಿಂಗಾಪುರ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಟಿ.ಎನ್ ನಾಗೇಶ್ ನಿರ್ದೇಶಿಸಿದ್ದಾರೆ. ಶಂಕರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಕಬೀರ್ ದುಹಾನ್ ಸಿಂಗ್, ಸುಮನ್, ಕಮಲ್ ಇತರರು ಇದ್ದಾರೆ. ನಮ್ಮ ಮ್ಯೂಸಿಕ್ ಸಂಸ್ಥೆ ಮೂಲಕ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.