Categories
ಸಿನಿ ಸುದ್ದಿ

ಹೊಂದಿಸಿ ಬರೆಯಿರಿ ಅದೇ ಜೀವನ ; ಸ್ಟುಡೆಂಟ್‌ ಲೈಫ್‌ ನೆನಪಿಸೋ ಟೀಸರ್‌ ಇದು…

ಇಂಜಿನಿಯರಿಂಗ್ ಕಾಲೇಜ್ ಫ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ್ “ಹೊಂದಿಸಿ ಬರೆಯಿರಿ” ಸಿನಿಮಾ ಮೂಲಕ ನಿರ್ದೇಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ಹೌಸ್ ನಲ್ಲಿ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿ ಅನುಭವವಿರುವ ಜಗನ್ನಾಥ್, ಈ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ “ಹೊಂದಿಸಿ ಬರೆಯಿರಿ” ಸಿನಿಮಾದ ಫಸ್ಟ್ ಲುಕ್ ರಿಲೀಸ್ ಸಖತ್ ಸೌಂಡ್ ಮಾಡಿತ್ತು. ಈಗ ಬಿಡುಗಡೆಯಾಗಿರುವ ಟೀಸರ್ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವಿದ್ಯಾರ್ಥಿ ಜೀವನದ ಅನುಭವ ಅನಾವರಣ
ನೆನಪು, ಕನಸು ಹಾಗೂ ವಾಸ್ತವ..ಈ ಮೂರು ಪರಿಕಲ್ಪನೆಗಳ ಮೇಲೆ ಅನಾವರಣವಾಗುವ ಸಿನಿಮಾವೇ ಹೊಂದಿಸಿ ಬರೆಯಿರಿ. ಅದರಂತೆ ಟೀಸರ್ ನಲ್ಲಿ ಕಾಲೇಜ್ ನೆನಪುಗಳನ್ನು ಕಟ್ಟಿಕೊಡಲಾಗಿದೆ. ವಿದ್ಯಾರ್ಥಿ ಜೀವನದ ಏರಿಳಿತಗಳನ್ನು ತೋರಿಸಲಾಗಿದೆ. ಟೀಸರ್ ನಲ್ಲಿ ಚೂರಿಕಟ್ಟೆ ಖ್ಯಾತಿಯ ಪ್ರವೀಣ್, ಗುಳ್ಟು ಖ್ಯಾತಿಯ ನವೀನ್, ವಾಸ್ತುಪ್ರಕಾರದಿಂದ ಪರಿಚಿತರಾದ ಐಶಾನಿ ಶೆಟ್ಟಿ, ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಗೆ ಅಮ್ಮನಾಗಿ ನಟಿಸಿದ್ದ ಅರ್ಚನಾ ಜೋಯಿಸ್, ಸಂಯುಕ್ತ ಹೊರನಾಡು, ಶ್ರೀಮಹಾದೇವ್, ವನಾರಾವ್ ಹೀಗೆ ಹಲವರಿದ್ದಾರೆ.

ಈಗಾಗಲೇ “ಹೊಂದಿಸಿ ಬರೆಯಿರಿ” ಸಿನಿಮಾದ ಶೂಟಿಂಗ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. “ಟಗರು” ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಗುಳ್ಟು’ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ದೊಡ್ಡ ತಾರಾಬಳಗವೇ ನಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾವನ್ನು “ಸಂಡೇ ಸಿನಿಮಾಸ್ “ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ವಸಿಷ್ಠ ವಿಶಿಷ್ಠ ಹೆಜ್ಜೆ! ಸಿಂಹ ಆಡಿಯೋ ಶುರು ಮಾಡಿದ ಕಂಚಿನ ಕಂಠದ ನಟ!!

ವಿಲನ್ ಹೀರೋನೂ ಆಗಬಹುದು.. ಹೀರೋ ಸಿಂಗರ್ ಆಗಬಹುದು ಅನ್ನೋದು ಸಾಬೀತು ಮಾಡಿದವರು ಕಂಚಿನ ಕಂಠದ ಗಾಯಕ, ಖಡಕ್ ಖಳನಟ, ಹ್ಯಾಂಡ್ಸಮ್ ಹೀರೋ ವಸಿಷ್ಠ ಸಿಂಹ. ಇಂದು ವಸಿಷ್ಠ ಸಿಂಹ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಮತ್ತು ಗಾಯಕ ಕೂಡ. ಟಾಲಿವುಡ್ ನಲ್ಲಿಯೂ ಮಿಂಚುತ್ತಿರುವ ಪ್ರತಿಭಾನ್ವಿತ ನಾಯಕ ನಟ ಅನ್ನೋದು ವಿಶೇಷ. ಗಾಯಕನಾಗಿ ಸಾಧನೆ ಮಾಡಬೇಕೆಂಬ ಕನಸು ಹೊತ್ತು ಬಂದ ವಸಿಷ್ಠ ಅವರಿಗೆ ನಾಯಕನಟ, ಖಳ‌ನಟನಾಗಿಯೂ ಕಮಾಲ್ ಮಾಡುವ ಅವಕಾಶ ಸಿಕ್ತು. ಈ ಅವಕಾಶ ಸದುಪಯೋಗಪಡಸಿಕೊಂಡು ಸಕ್ಸಸ್‌ ಕಾಣುತ್ತಲೇ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ತಮ್ಮದೇ ಆಡಿಯೋ ಸಂಸ್ಥೆಯನ್ನು ಅನಾವರಣ ಮಾಡಿದ್ದಾರೆ….

ಸಿಂಹಾ ಆಡಿಯೋ ಲೋಗೋ‌ ಲಾಂಚ್

ಅಪ್ಪನ ಮುದ್ದಿನ ಮಗನಾಗಿರುವ ವಸಿಷ್ಠ ತಂದೆಯ ಹೆಸರಿನಡಿ, ತನ್ನ ನೆಚ್ಚಿನ ಆರಾಧ್ಯ ತಾಯಿ ಚಾಮುಂಡೇಶ್ವರಿ ನೆನೆಪಿನಾರ್ಥವಾಗಿ ಸಿಂಹಾ ಎಂಬ ಹೆಸರಿನಡಿ ಆಡಿಯೋ ಕಂಪನಿ ಶುರು ಮಾಡಿದ್ದಾರೆ. ನೆಚ್ಚಿನ ಗೆಳೆಯನ ಹಾಗೂ ಅಚ್ಚುಮೆಚ್ಚಿನ ಗುರು ಸ್ವರಬ್ರಹ್ಮ ಹಂಸಲೇಖ ಸಾಥ್ ನಲ್ಲಿ ಆಡಿಯೋ‌ ಲೋಗೋ ಅನಾವರಣಗೊಂಡಿದೆ.

ಕಾಲಚಕ್ರ ಹಾಡು ಬಿಡುಗಡೆ

ಸುಮನ್ ಕ್ರಾಂತಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬಂದಿರುವ, ವಿಭಿನ್ನ ಗೆಟಪ್ ನಲ್ಲಿ ವಸಿಷ್ಠ ಬಣ್ಣ ಹಚ್ಚಿರುವ ಕಾಲಚಕ್ರ ಸಿನಿಮಾದ ನೀನೇ ಬೇಕು ಎಂಬ ಹಾಡು ವಸಿಷ್ಠ ಸಿಂಹ ಸಾರಥ್ಯದ ಸಿಂಹಾ ಆಡಿಯೋ ಕಂಪನಿಯಲ್ಲಿ ಬಿಡುಗಡೆಯಾಗಿದೆ. ತಮ್ಮದೆ ಸಿನಿಮಾದ ಮೊದಲ ಹಾಡು ತಮ್ಮದೇ ಆಡಿಯೋ ಕಂಪನಿ ಪಾಲಾಗಿರೋದು ವಸಿಷ್ಠಗೆ ಡಬ್ಬಲ್ ಖುಷಿಕೊಟ್ಟಿದೆ.

ಅಂದಹಾಗೆ ವಸಿಷ್ಠ ಸಿಂಹ ಕಿರಿಕ್ ಪಾರ್ಟಿ’ ಸಿನಿಮಾದ ‘ನೀಚ ಸುಳ್ಳು ಸುತ್ತೋ ನಾಲಿಗೆ..’, ‘ದಯವಿಟ್ಟು ಗಮನಿಸಿ..’ ಸಿನಿಮಾದ ‘ಮರೆತೇ ಹೋದೆನು..’ ಸೇರಿ ಹಲವು ಹಾಡುಗಳನ್ನು ಅವರು ಹಾಡಿದ್ದಾರೆ. ಅವರಿಗೆ ಸಂಗೀತದ ಮೇಲೂ ಆಸಕ್ತಿ ಹಾಗೂ ಹೊಸ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಿಂಹಾ ಆಡಿಯೋ ಸಂಸ್ಥೆ ಕಣ್ತೆರೆದಿದ್ದು, ದೊಡ್ಡ ಎತ್ತರಕ್ಕೆ ಬೆಳೆಯಲಿ ಅನ್ನೋದು ಅಭಿಮಾನಿಗಳ ಹಾರೈಕೆ.

Categories
ಸಿನಿ ಸುದ್ದಿ

ಮಾತಲ್ಲಿ ನಿರತನಾದ ಲಂಕಾಸುರ! ಇದು ವಿನೋದ್‌ ಪ್ರಭಾಕರ್‌ ನಿರ್ಮಾಣದ ಸಿನಿಮಾ…

ನಟ ವಿನೋದ್ ಪ್ರಭಾಕರ್ ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿದ್ದು ಗೊತ್ತೇ ಇದೆ. ಆ ಬ್ಯಾನರ್‌ ಮೂಲಕ ” ಲಂಕಾಸುರ” ಎಂಬ ಚಿತ್ರ ನಿರ್ಮಾಣ ಮಾಡುತ್ತಿರುವ ಸುದ್ದಿಯೂ ಹೊಸದೇನಲ್ಲ. ಈ ಚಿತ್ರಕ್ಕೆ ನಿಶಾ ವಿನೋದ್ ಪ್ರಭಾಕರ್ ನಿರ್ಮಾಪಕರು ವಿಷಯ ಏನಪ್ಪಾ ಅಂದರೆ, ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಈಗ ಸಿನಿಮಾದ ಡಬ್ಬಿಂಗ್‌ ಕೆಲಸ ಜೋರಾಗಿ ಸಾಗುತ್ತಿದೆ.

ಹೌದು, ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಕೆಲಸ ನಡೆಯುತ್ತಿದೆ. ಒಂದು ಸಾಹಸ ಸನ್ನಿವೇಶ ಮಾತ್ರ ಚಿತ್ರಕ್ಕೆ ಬಾಕಿಯಿದೆ. ಈ ಸಾಹಸ ದೃಶ್ಯಕ್ಕಾಗಿ ವಿನೋದ್ ಹತ್ತು ಕೆಜಿ ತೂಕ ಇಳಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.

ಈ ಹಿಂದೆ “ಮೂರ್ಕಲ್ ಎಸ್ಟೇಟ್” ಎಂಬ ಚಿತ್ರ ನಿರ್ದೇಶಿಸಿದ್ದ ಪ್ರಮೋದ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಐದು ಸಾಹಸ ದೃಶ್ಯಗಳಿವೆ. ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್ ಈ ಚಿತ್ರದ ಸಾಹಸ ನಿರ್ದೇಶನ ಮಾಡಿದ್ದಾರೆ.

ವಿಜೇತ್ ಕೃಷ್ಣ ಸಂಗೀತ ನಿರ್ದೇಶನ ಮಾಡಿದರೆ, ಸುಜ್ಞಾನ್ ಛಾಯಾಗ್ರಹಣವಿದೆ. ಮುರಳಿ, ಮೋಹನ್ ಅವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ನಟಿಸಿದ್ದಾರೆ. ಮೊದಲ ಬಾರಿಗೆ ಲೂಸ್ ಮಾದ ಯೋಗಿ ವಿನೋದ್ ಪ್ರಭಾಕರ್ ಅವರೊಂದಿಗೆ ನಟಿಸಿದ್ದಾರೆ. ಹಿರಿಯ ನಟರಾದ ದೇವರಾಜ್ ಹಾಗೂ ರವಿಶಂಕರ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಮಸಣದಲ್ಲಿ ತಯಾರಾದ ಸಿನಿಮಾಗೆ ಪ್ರಶಸ್ತಿಗಳ ಸುರಿಮಳೆ! ದಾರಿ ಯಾವುದಯ್ಯ ವೈಕುಂಠಕೆ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ…

ದೇಶ, ವಿದೇಶಗಳ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಹಲವು ವಿಭಾಗಗಳಲ್ಲಿ ನೂರೈವತ್ತಕ್ಕೂ ಅಧಿಕ ಪ್ರಶಸ್ತಿ ಪಡೆದುಕೊಂಡಿರುವ “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ಮಾಜಿ ಸಭಾಪತಿ‌ ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಈ ವೇಳೆ ಇದ್ದರು.

ನಿರ್ದೇಶಕ ಸಿದ್ದು ಪೂರ್ಣಚಂದ್ರ ಮಾತನಾಇಡ, “ನನ್ನ ಮೊದಲ ಚಿತ್ರ “ಕೃಷ್ಣ ಗಾರ್ಮೆಂಟ್ಸ್” ನಿರೀಕ್ಷಿತ ಗೆಲವು ಪಡೆಯಲಿಲ್ಲ. ಎರಡನೇ ಚಿತ್ರ “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರ ಬಿಡುಗಡೆ ಮೊದಲೇ ಜನಪ್ರಿಯವಾಗಿದೆ.‌ ನೂರವತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇಂತಹ ನನ್ನ ಕನಸಿಗೆ ಆಸರೆ ನೀಡಿದ ನಿರ್ಮಾಪಕರಿಗೆ ಧನ್ಯವಾದ. ನನ್ನ ಚಿತ್ರತಂಡಕ್ಕೆ ವಿಶೇಷ ಧನ್ಯವಾದ. ಈ ಚಿತ್ರದ ಚಿತ್ರೀಕರಣ ಬಹುತೇಕ ಭಾಗ ರಾಮನಗರದ ಸ್ಮಶಾನದಲ್ಲಿ ನಡೆದಿದೆ.‌ ಅಲ್ಲಿ ಹೋಗಿ ಸಮಾಧಿಯಲ್ಲಿ ಮಲಗಿರುವ ಹಿರಿಯರ ಆಶೀರ್ವಾದ ಪಡೆದು ಚಿತ್ರ ಮಾಡಿದ್ದೇನೆ ಎಂದರು.

ಈ ಚಿತ್ರದ ಕಥೆ ಕೇಳಿದ ದಿನವೇ ನಿರ್ಮಾಣ ಮಾಡಬೇಕೆಂದು ಮನಸು ಮಾಡಿದ್ದೆ. ನನ್ನ ಸ್ನೇಹಿತ ಪ್ರಶಾಂತ್ ಅವರ ಮೂಲಕ ನಿರ್ದೇಶಕ ಸಿದ್ದು ಪೂರ್ಣಚಂದ್ರ ಪರಿಚಿತರಾದರು. ಉತ್ತಮ ಚಿತ್ರ ಮಾಡಿಕೊಟ್ಟಿದ್ದಕ್ಕೆ ಸಿದ್ದು ಅವರಿಗೆ ಧನ್ಯವಾದಗಳು. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಶರಣಪ್ಪ ಎಂ ಕೊಟಗಿ.

ನನಗೆ ಉತ್ತಮ ಪಾತ್ರ ನೀಡಿದ ನಿರ್ದೇಶಕರಿಗೆ ನಾನು ಆಭಾರಿ. ಚಿಕ್ಕವಯಸ್ಸಿನಲ್ಲಿ ಅಶೋಕ ಹೋಟೆಲ್‌ ಮುಂದೆ ಓಡಾಡುವಾಗ ಒಂದು ದಿನ ಈ ಹೋಟೆಲ್ ಒಳಗೆ ಹೋಗಬೇಕು ಅಂದುಕೊಳ್ಳುತ್ತಿದೆ. ಈಗ ಇದೇ ಹೋಟೆಲ್ ನಲ್ಲಿ ನನ್ನ ಸಿನಿಮಾದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ಖುಷಿ ಎಂದರು ನಾಯಕ ವರ್ಧನ್.

ಚಿತ್ರದ ಕಲಾವಿದ ಬಲರಾಜವಾಡಿ ಸೇರಿದಂತೆ ತಂಡದ ಅನೇಕ ಕಲಾವಿದರು, ಗಣ್ಯರು ಚಿತ್ರದ ಬಗ್ಗೆ ಮಾತನಾಡಿದರು. ಮ್ಯೂಸಿಕ್ ಬಾಕ್ಸ್ ಆಡಿಯೋ ಕಂಪನಿ ಹಾಡುಗಳನ್ನು ಹೊರತಂದಿದೆ. ಹಿರಿಯ ಛಾಯಾಗ್ರಾಹಕ ಜೆ.ಜಿ.ಕೃಷ್ಣ, ಗಾಯಕ ಶಶಿಧರ್ ಕೋಟೆ ಇತರರು ಇದ್ದರು.

Categories
ಸಿನಿ ಸುದ್ದಿ

ವೆಡ್ಡಿಂಗ್‌ ಗಿಫ್ಟ್‌ ಕೊಡ್ತಾರೆ ನಟಿ ಪ್ರೇಮ! ಜೂನ್‌ ವೇಳೆ ಹೊಸ ಸಿನಿಮಾ ರಿಲೀಸ್…

ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ನಿರ್ಮಾಪಕ ಭಾ.ಮ.ಹರೀಶ್ ಹಾಗೂ ಸುನೀಲ್ ಕಾರ್ಯಕ್ರಮದ ಆಕರ್ಷಣೆಯಾಗಿದ್ದರು. ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಪ್ರೇಮ, ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಸಂಕಲನಕಾರ ವಿಜೇತ್ ಚಂದ್ರ ಹಾಗೂ ಛಾಯಾಗ್ರಾಹಕ ಉದಯಲೀಲ ಹಾಡುಗಳ ಬಿಡುಗಡೆಗೆ ಸಾಕ್ಷಿಯಾದರು.

ನಿರ್ದೇಶಕ ವಿಕ್ರಂ ಪ್ರಭು ಕಳೆದ ಹತ್ತೊಂಬತ್ತು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್” ಚಿತ್ರದಲ್ಲಿ ಕೆಲಸ ಮಾಡಿದ್ದರು. ಆ ಬಳಿಕ ಅವರು ಇಂಡಸ್ಟ್ರಿ ಕಡೆ ಮುಖ ಮಾಡಲಿಲ್ಲ. ಆ ಕುರಿತು ಅವರು ಹೇಳುವುದಿಷ್ಟು. “ಲವ್‌ ಸಿನಿಮಾ ಬಳಿಕ ನಾನು ಪುಣೆಯಲ್ಲಿ ಬಿಜಿನೆಸ್ ಶುರುಮಾಡಿದೆ. ಹಾಗಾಗಿ ಅತ್ತ ಗಮನಹರಿಸಿದ್ದೆ. ಈಗ ಚಿತ್ರರಂಗಕ್ಕೆ ಬಂದು “ವೆಡ್ಡಿಂಗ್ ಗಿಫ್ಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ. ಕೆಲವು ಹೆಣ್ಣು ಮಕ್ಕಳು ಕಾನೂನನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದೇ ಕಥಾಹಂದರ.

ಹಿರಿಯ ನಟಿ ಪ್ರೇಮ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಶಾಂತ್, ಸೋನು ಗೌಡ, ಅಚ್ಯುತಕುಮಾರ್, ಪವಿತ್ರ ಲೋಕೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈಗ ಹಾಡುಗಳ ಬಿಡುಗಡೆಯಾಗಿದೆ. ಮೇ ತಿಂಗಳನ್ನು‌ ಪ್ರಚಾರಕ್ಕೆ ಮೀಸಲಿಟ್ಟು, ಜೂನ್ ನಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ವಿಕ್ರಂಪ್ರಭು.

ನಾನು ದುಡ್ಡಿಗಾಗಿ ಸಿನಿಮಾ ಮಾಡುವವಳಲ್ಲ. ಉತ್ತಮ ಕಥೆ ಇದ್ದರೆ ಮಾತ್ರ ಮಾಡುತ್ತೇನೆ.‌ ವಿಕ್ರಂಪ್ರಭು ಅವರು ಈ ಚಿತ್ರದ ಕಥೆ ಹೇಳಿದ ತಕ್ಷಣ ಮಾಡಬೇಕೆನಿಸಿತು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾಯಕನ ಪರ ವಕಾಲತ್ತು ವಹಿಸುವ ವಕೀಲೆಯಾಗಿ ಕಾಣಿಸಿಕೊಂಡಿದ್ದೀನಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಹಿರಿಯ ನಟಿ ಪ್ರೇಮ.

ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಶುಭ ಕೋರಿದರು. ಚಿತ್ರತಂಡದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಗಿರ್ಕಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಶುಭ ಹಾರೈಸಿದ ಸೆಂಚುರಿ ಸ್ಟಾರ್… ಇದು ತರಂಗ ವಿಶ್ವ ಚಿತ್ರ!

ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ “ಗಿರ್ಕಿ” ಚಿತ್ರದ ಮೋಷನ್ ಪೋಸ್ಟರನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇತ್ತೀಚೆಗೆ ಬಿಡುಗಡೆ ಮಾಡಿ, ಶುಭ ಕೋರಿದ್ದಾರೆ. A2 music ಮೂಲಕ ಬಿಡುಗಡೆಯಾಗಿರುವ ಈ ಮೋಷನ್ ಪೋಸ್ಟರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದ್ದು, ಮೇ ನಲ್ಲಿ ಚಿತ್ರ ತೆರೆಗೆ ಬರಲಿದೆ.

ಲವ್, ಥ್ರಿಲ್ಲರ್ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವೀರೇಶ್ ಪಿ.ಎಂ.ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಇವರೇ ಬರೆದಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡಿದ ಅನುಭವ ವೀರೇಶ್ ಪಿ.ಎಂ ಅವರಿಗಿದೆ.

ವಾಸುಕಿ ಭುವನ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ‌. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ನವೀನ್ ಕುಮಾರ್ ಛಲ್ಲ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನವಿರುವ ಈ ಚಿತ್ರಕ್ಕೆ
ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ.

ತಮ್ಮ ಕಾಮಿಡಿ ಮೂಲಕ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, “ಬಿಗ್ ಬಾಸ್” ಖ್ಯಾತಿಯ ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಮಹಿರ ಖ್ಯಾತಿಯ ಮಹೇಶ್ ಗೌಡ ಹೊಸ ಸಿನಿಮಾ ಶುರು- ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ಯಲ್ಲಿ ಅಗ್ನಿ ಸಾಕ್ಷಿ ವೈಷ್ಣವಿ ನಾಯಕಿ…

ಈ ಹಿಂದೆ ಬಂದಿದ್ದ ಮಹಿರ ಎಂಬ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ, ಚೈತ್ರಾ ಆಚಾರ್ ಸೇರಿದಂತೆ ಒಂದಷ್ಟು ಪ್ರತಿಭಾನ್ವಿತರು ನಟಿಸಿದ್ದರು. ತಾಯಿ ಮಗಳ ಹೋರಾಟದ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದ ನಿರ್ದೇಶಕ ಮಹೇಶ್ ಗೌಡ ಈ ಬಾರಿಯೂ ಹೊಸ ಪ್ರಯತ್ನದ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರೆ. ಅದರ ಮೊದಲ ಭಾಗವೆಂಬಂತೆ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ನ್ನು ಯುಗಾದಿ ಹಬ್ಬದ ಸ್ಪೆಷಲ್ ಆಗಿ ರಿಲೀಸ್ ಮಾಡಿದ್ದಾರೆ.

ದಿನೇಶ್ ಪಾತ್ರದಲ್ಲಿ ಮಹೇಶ್
‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಮಹೇಶ್ ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ. ಈ ಸಿನಿಮಾಗೆ ತಾವೇ ಕಥೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ತಮ್ಮದೇ ಹೊನ್ನುಡಿ ಪ್ರೊಡಕ್ಷನ್ ನಡಿ ಮಹೇಶ್ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದು, ಜೊತೆ ದಿನೇಶ್ ಎಂಬ ಪಾತ್ರ ಮಾಡುತ್ತಿದ್ದಾರೆ. ಹಳ್ಳಿ ಹುಡ್ಗಿ ಕವಿತಾ ಆಗಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಮಹೇಶ್ ಗೆ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ.

ನಾಯಕ ದಿನೇಶ್ ತೊನ್ನು(ವಿಟಿಲಿಗೋ) ಸಮಸ್ಯೆ ಇರುತ್ತೆ. ಆತ ಪಕ್ಕದ ಊರಿನ ಚೆಂದದ ಮುದ್ದು ಮುದ್ದಾದ ಹುಡ್ಗಿ ಕವಿತಾಳನ್ನು ವರಿಸುತ್ತಾರೆ. ಸಮಸ್ಯೆ ಗೊತ್ತಿದ್ರೂ ಕವಿತಾ ತನ್ನನ್ನ ಮದ್ವೆಯಾಗೋದೇಕೆ ಅನ್ನೋ ಕನ್ಫೂಷನ್ ದಿನೇಶ್ ಗೆ ಕಾಡ್ತಿರುತ್ತದೆ. ಅದನ್ನು ಕಾಮಿಡಿಯಲ್ಲಿ ಹೇಳೋದೇ ದೊಡ್ಡ ಚಾಲೆಂಜ್ ಅಂತಾರೇ ಮಹೇಶ್. ಅಂದಹಾಗೆ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾ ರೋಮ್ಯಾಂಟಿಕ್ ಕಾಮಿಡಿ ಜಾನರ್ ಚಿತ್ರವಾಗಿದ್ದು, ಪಕ್ಕಾ ಮನರಂಜನೆ ನೀಡಲಿದೆ.

ಮಹೇಶ್ ಗೌಡ ತಮ್ಮದೇ ತೊನ್ನಿನ ಸಮಸ್ಯೆಯನ್ನು ಇಲ್ಲಿ ಕಥೆಯಾಗಿ ಪರಿವರ್ತಿಸಿದ್ದಾರೆ. ಇಂತಹ ಸಿನಿಮಾಗಳನ್ನು ತೆರೆಮೇಲೆ ಮಾಡೋದು ಕಷ್ಟವೇ ಸರಿ. ಅಂತಹ ಸಾಹಸಕ್ಕೆ ಮುಂದಾಗಿರುವ ಮಹೇಶ್ ಗೌಡ ಕಾರ್ಯಕ್ಕೆ ಶಹಬ್ಬಾಸ್ ಹೇಳಲೇಬೇಕು.

Categories
ಸಿನಿ ಸುದ್ದಿ

ಅಧ್ಯಕ್ಷ ನ ಬಳಿಕ ಸದಸ್ಯನ ದರ್ಬಾರು! ಹೊಸಬರ ಕಾಮಿಡಿ ಸಿನಿಮಾ…

ಕನ್ನಡದಲ್ಲಿ ಹೊಸ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದೆ. ಆದ್ರೆ ಕಂಟೆಂಟ್ ಗಟ್ಟಿಯಾಗಿ ಇದ್ದವರು ಮಾತ್ರ ಇಲ್ಲಿ ನೆಲೆಯೂರುತ್ತಾರೆ. ಈಗ ಅದೇ ಗಟ್ಟಿ ಭರವಸೆಯೊಂದಿಗೆ ಹೊಸಬರ ತಂಡವೊಂದು ಎಂಟ್ರಿಕೊಡುತ್ತಿದೆ. ಯುಗಾದಿ ಹಬ್ಬದ ಪ್ರಯುಕ್ತ ಸಿನಿಮಾದ ಟೈಟಲ್ ಅನ್ನು ತಂಡ ರಿವೀಲ್ ಮಾಡಿದೆ.

ಮೂಲತಃ ಇಂಜಿನಿಯರಿಂಗ್ ಆಗಿರುವ ಶ್ರೀಕಾಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾ ಸದಸ್ಯ. ಈಗಾಗಲೇ ವಾರ್ಡ್ ನಂಬರ್ 11 ಸಿನಿಮಾ ಮೂಲಕ ನಿರ್ದೇಶಕರಾಗಿರುವ ಶ್ರೀಕಾಂತ್ ಕಿರು ಚಿತ್ರಗಳ ಮೂಲಕ ಬಣ್ಣದ ಬದುಕು ಆರಂಭಿಸಿ ಈಗ ಪೂರ್ಣಪ್ರಮಾಣ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸದಸ್ಯ ಶ್ರೀಕಾಂತ್ ನಿರ್ದೇಶನದ ಎರಡನೇ ಸಿನಿಮಾವಾಗಿದ್ದು, ಯುಗಾದಿ ಸ್ಪೆಷಲ್ ಆಗಿ ಚಿತ್ರತಂಡದ ಟೈಟಲ್ ಅನಾವರಣ ಮಾಡಿದೆ ಚಿತ್ರತಂಡ.

ಕಾಮಿಡಿ ಹೂರಣ ಒಳಗೊಂಡಿರುವ ಸದಸ್ಯ ಸಿನಿಮಾವನ್ನು ಪ್ರೊಡಕ್ಷನ್ ಫೀನಿಕ್ಸ್ ಎಂಟರ್ ಟೈನ್ ಮೆಂಟ್ ನಡಿ ಅನಿಲ್ ಕುಮಾರ್ ನಿರ್ಮಾಣ ಮಾಡ್ತಿದ್ದು, ಒಂದಷ್ಟು ಹೊಸ ಪ್ರತಿಭೆಗಳು, ಹಸಿವಿರುವ ಕಲಾವಿದರಿಗೆ ಅವಕಾಶ ನೀಡಲಿದೆ ಚಿತ್ರತಂಡ. ಸದ್ಯ ಟೈಟಲ್ ರಿವೀಲ್ ಮಾಡಿದ್ದು, ಮೇನಿಂದ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲಿಯೇ ರಿವೀಲ್ ಮಾಡಲಿದೆ.

Categories
ಸಿನಿ ಸುದ್ದಿ

ನಾಗರಾಜ್ ಸೋಮಯಾಜಿ ಅಕಟಕಟ ಚಿತ್ರಕ್ಕೆ ಚೈತ್ರಾ ಆಚಾರ್ ನಾಯಕಿ

ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆದೆ ಹೊಸ ಹೊಸ ನಟಿಯರ ಆಗಮನವಾಗುತ್ತಿದೆ. ಆದ್ರೆ ಗ್ಲಾಮರ್ ಜೊತೆಗೆ ಪ್ರತಿಭೆ, ಅದೃಷ್ಟ ಇದ್ದವರು ಮಾತ್ರ ಇಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ. ಈ ಪೈಕಿ ಪ್ರತಿಭಾನ್ವಿತ ನಾಯಕಿ ಚೈತ್ರಾ ಆಚಾರ್ ಕೂಡ ಒಬ್ಬರು. ಮಹಿರಾ, ಗಿಲ್ಕಿ, ತಲೆದಂಡ ಹೀಗೆ ಪ್ರತಿ ಸಿನಿಮಾಗಳಲ್ಲೂ ವಿಶೇಷ ಪಾತ್ರಗಳ ಮೂಲಕ ಗಮನಸೆಳೆದಿರುವ ಚೈತ್ರಾ ಈಗ ಅಕಟಕಟ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಪಾಸಿಟಿವ್ ಗರ್ಲ್
ನಾಗರಾಜ್‌ ಸೋಮಯಾಜಿ ನಿರ್ದೇಶನ ಮಾಡುತ್ತಿರುವ ಅಕಟಕಟ ಸಿನಿಮಾದಲ್ಲಿ ಚೈತ್ರಾ ಆಚಾರ್‌ ಜಾನಕಿ ಎಂಬ ಪಾತ್ರ ಮಾಡಲಿದ್ದಾರೆ. ಸದಾ ಖುಷಿ ಖುಷಿಯಿಂದ ಜೀವನವನ್ನು ಜೀವಿಸುವ.. ನೆಗೆಟಿವ್ ಬಿಟ್ಟು ಪಾಸಿಟಿವ್ ಬಗ್ಗೆ ಯೋಚಿಸುವ, ಮಧ್ಯಮ ವರ್ಗದ ಹುಡುಗಿಯಾಗಿ ಚೈತ್ರಾ ಬಣ್ಣ ಹಚ್ಚಲಿದ್ದು, ಇಂಥ ನಾಯಕಿ ನಾಯಕ ಬದುಕಿಗೆ ಎಂಟ್ರಿ ಕೊಟ್ಟಾಗ ಏನಾಗುತ್ತೇ ಅನ್ನೋದೇ ಚೈತ್ರಾ ಆಚಾರ್ ಪಾತ್ರ.

ಸಂಚಾರಿ ವಿಜಯ್‌ ನಟಿಸಿದ್ದ ‘ಪುಕ್ಸಟ್ಟೆ ಲೈಫು’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ನಾಗರಾಜ್‌ ಸೋಮಯಾಜಿ ಮೂಲತಃ ಫೋಟೊಗ್ರಾಫರ್‌. ರಂಗಭೂಮಿಯಲ್ಲಿಯೂ ಸಕ್ರಿಯರಾಗಿರುವ ಅವರು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು.

ಈಗ ಅಕಟಕಟ ಸಿನಿಮಾಗೆ ಕಥೆಯನ್ನು ನಾಗರಾಜ್‌ ಅವರೇ ಬರೆದಿದ್ದು ನಿರ್ದೇಶನ ಕೂಡ ಮಾಡ್ತಿದ್ದು, ಶೀಘ್ರದಲ್ಲೇ ನಾಯಕ ಮತ್ತು ಉಳಿದ ವಿವರಗಳನ್ನು ಶೀಘ್ರದಲ್ಲಿ ರಿವೀಲ್ ಮಾಡಲಿದೆ.

Categories
ಸಿನಿ ಸುದ್ದಿ

ಬಾನದಾರಿಯಲ್ಲಿ ಗಣೇಶ್ ಸಂಚಾರ! ಮತ್ತೆ ಪ್ರೀತಂ ಗುಬ್ಬಿ ಜೊತೆಯಾದ ಗೋಲ್ಡನ್ ಸ್ಟಾರ್…

“ಮಳೆಯಲಿ ಜೊತೆಯಲಿ” ಸಿನಿಮಾಗೆ ಜೊತೆಯಾಗಿದ್ದ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಜೋಡಿ ಈಗ ಹೊಸ ಚಿತ್ರ”ಬಾನದಾರಿಯಲ್ಲಿ” ಮೂಲಕ ಸಾಗಲಿದೆ.

ಇವರಿಬ್ಬರ ಕಾಂಬಿನೇಶನಲ್ಲಿ ಬರುತ್ತಿರುವ ಈ ಚಿತ್ರಕ್ಕೆ “ಬಾನದಾರಿಯಲ್ಲಿ” ಎಂದು ಹೆಸರಿಡಲಾಗಿದೆ. ಮೇನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಯುಗಾದಿ ಹಬ್ಬದ ಶುಭದಿನದಂದು ಪೋಸ್ಟರ್ ಬಿಡುಗಡೆಯಾಗಿದೆ.

ಪ್ರೀತಂಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಈ ಹಿಂದೆ “ಮಳೆಯಲಿ ಜೊತೆಯಲಿ” , “ದಿಲ್ ರಂಗೀಲಾ” ಹಾಗೂ “99” ಚಿತ್ರಗಳಲ್ಲಿ ನಟಿಸಿದ್ದರು. ಇದು ಅವರ ಕಾಂಬಿನೇಷನ್ ನ ನಾಲ್ಕನೇ ಚಿತ್ರ. “ಬಾನದಾರಿಯಲ್ಲಿ” ಗೆ ನೋಡು ಎಂಥಾ ಚೆಂದ ಎಂಬ ಅಡಿಬರಹವಿದೆ.

ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ಪ್ರೀತ ಜಯರಾಂ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

ಪುನೀತ್ ರಾಜಕುಮಾರ್ ಅವರು ಹಾಡಿದ್ದ “ಬಾನದಾರಿಯಲ್ಲಿ” ಹಾಡು ಇಂದಿಗೂ, ಎಂದೆಂದಿಗೂ ಜನಪ್ರಿಯ.. ಆ ಹಾಡಿನ ಮೊದಲ ಪದವೇ‌ ಈ ಚಿತ್ರದ ಶೀರ್ಷಿಕೆಯಾಗಿದ್ದು, ಆ ಹಾಡಿನಷ್ಟೇ ಈ ಚಿತ್ರ ಕೂಡ ಯಶಸ್ಸು ಕಾಣಲಿ ಅನ್ನೋದು ಹಾರೈಕೆ.

error: Content is protected !!