Categories
ಸಿನಿ ಸುದ್ದಿ

ಈ ಲುಕ್ ನೋಡಿ ಕಳೆದೋಗಿದ್ದಾರೆ ಆಕ್ಷನ್‌ಪ್ರಿನ್ಸ್ !‌ ಮಾರ್ಟಿನ್ ‘ರಾ’ ಫೀಲ್‌ಗೆ ಸಖತ್ ಫಿದಾ ಆದ್ರು ಫ್ಯಾನ್ಸ್ !!

ಸ್ಟಾರ್ ನಟರುಗಳನ್ನು ಆರಾಧಿಸುವ-ಪ್ರೀತಿಸುವ-ಗೌರವಿಸುವ ಹಾಗೂ ತಲೆ ಮೇಲೆ ಹೊತ್ತು ಮೆರೆಸುವ ಅಭಿಮಾನಿ ದೇವರುಗಳು, ತಾವಿಷ್ಟ ಪಡುವ ನಟರುಗಳ ಹಾದಿಯಲ್ಲಿ ಸಾಗುತ್ತಾರೆ. ಅವರ ಒಳ್ಳೆಗುಣಗಳನ್ನು ಮೈಗೂಡಿಸಿಕೊಂಡು ಆದರ್ಶವಾಗಿ ಬದುಕೋದಕ್ಕೆ ಇಷ್ಟಪಡುತ್ತಾರೆ. ಮಾತ್ರವಲ್ಲ, ಸಿನಿಮಾದಿಂದ ಸಿನಿಮಾಗೆ ಬದಲಾಗುವ ನಟರುಗಳ ಲುಕ್-ಗೆಟಪ್‌ನ ಫಾಲೋ ಮಾಡುತ್ತಾರೆ. ಅವರಂತೆ ಹೇರ್‌ ಸ್ಟೈಲ್‌ ಮಾಡಿಸಿಕೊಂಡು, ಅವರಂತೆ ಕಾಸ್ಟ್ಯೂಮ್ಧ ರಿಸಿಕೊಂಡು ತಮ್ಮಿಷ್ಟದ ಸ್ಟಾರ್‌ಗಳನ್ನು ಬೆಂಬಲಿಸುತ್ತಾರೆ. ಇದಕ್ಕೆ ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಕೂಡ ಹೊರತಾಗಿಲ್ಲ…

ಇಂಟ್ರೆಸ್ಟಿಂಗ್‌ ಅಂದರೆ ಮಾರ್ಟಿನ್' ಲುಕ್-ಗೆಟಪ್ ನೋಡಿ ಸ್ವತಃ ಆಕ್ಷನ್‌ಪ್ರಿನ್ಸ್ ಕಳೆದು ಹೋಗಿರುವುದು. ಹೌದು, ಮಾಸ್ ಅಪೀಲ್ ಕೊಡುವ ಮಾರ್ಟಿನ್ ಹೇರ್‌ಸ್ಟೈಲ್ ಅಭಿಮಾನಿಗಳ ಹೃದಯವನ್ನು ಮಾತ್ರವಲ್ಲ ಅದ್ದೂರಿ ಹುಡುಗನ ಮನಸ್ಸನ್ನು ಗೆದ್ದು‌ ಬಿಟ್ಟಿದೆ. ಹೀಗಾಗಿಯೇ ಬಹದ್ದೂರ್ ಬೆಂಕಿ ಚೆಂಡು ತಮ್ಮ ಸೋಷಿಯಲ್ ಸ್ಟೇಟಸ್‌ಗೆ ಅಪ್‌ಲೋಡ್ ಬಿಟ್ಟಿದ್ದಾರೆ. ಈಗಾಗಲೇ ಫ್ಯಾನ್ಸ್ ಟೀಸರ್‌ನಲ್ಲಿಮಾರ್ಟಿನ್’ ಲುಕ್ ನೋಡಿದ್ರೂ ಕೂಡ, ಧ್ರುವಾ ಸರ್ಜಾರ ಸ್ಟೇಟಸ್‌ನಿಂದ ಫೋಟೋನ ಎತ್ತಿಕೊಂಡು ಸೋಷಿಯಲ್ ಸಮುದ್ರದಲ್ಲಿ ಸುನಾಮಿ ಎಬ್ಬಿಸುತ್ತಿದ್ದಾರೆ.

ಎ.ಪಿ ಅರ್ಜುನ್ ಡೈರೆಕ್ಟ್ ಮಾಡಿರುವ ಮಾರ್ಟಿನ್' ಕನ್ನಡದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನ್ಮಾ. ಸಿಂಪಲ್ಲಾಗಿ ನಾಲ್ಕು ಹೊಡೆದಿರುವ ಧ್ರುವಮಾರ್ಟಿನ್’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮಾತ್ರವಲ್ಲ ಪ್ಯಾನ್ ಇಂಡ್ಯಾ ತುಂಬೆಲ್ಲಾ ಚಂಡಮಾರುತದ ಅಲೆ ಎಬ್ಬಿಸೋಕೆ ಸಿಡಿದು ನಿಂತಿದ್ದಾರೆ. ಗನ್‌ನ ನಾನ್ ಚೂಸ್ ಮಾಡಿಕೊಂಡಿಲ್ಲ ಬದಲಾಗಿ ಗನ್ನೇ ನನ್ನ ಚೂಸ್ ಮಾಡಿಕೊಂಡಿದೆ'. ಇದು ಜೋಕ್ ಅಲ್ಲ, ಇದೇ ಸತ್ಯ ಅಂತೇಳಿ ಕಣ್ಣುಬ್ಬಿನ ಮೇಲಿನ ರಕ್ತದ ಕಲೆ ಒರೆಸಿಕೊಂಡು ನೋಡುಗರ ಗಟ್ಟಿಗುಂಡಿಗೆ ಶೇಕ್ ಆಗುವಂತೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ನ 15 ಕೋಟಿಗೂ ಅಧಿಕ ಮಂದಿ ಕಣ್ತುಂಬಿಕೊಂಡಿರುವುದುಮಾರ್ಟಿನ್’ ಹವಾ ಹೆಂಗೈತಿ ಅನ್ನೋದನ್ನು ತೋರಿಸುತ್ತಿದೆ. ಆಕ್ಷನ್‌ಪ್ರಿನ್ಸ್ ತೋಳ್‌ಬಲದ ಮೇಲಿರುವ ಸೋಲ್ಡ್ಜರ್ಸ್ ಟ್ಯಾಟೂ `ಮಾರ್ಟಿನ್’ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.‌

ಅಂದ್ಹಾಗೇ, ಮಾರ್ಟಿನ್' ಚಿತ್ರಕ್ಕಾಗಿ ಧ್ರುವ ಸಂಪೂರ್ಣವಾಗಿ ಬದಲಾಗಿದ್ದಾರೆ. ಬರೀ ಲುಕ್-ಗೆಟಪ್ ಮಾತ್ರವಲ್ಲ ಸ್ಕ್ರೀನ್ಪ್ರ‌ ಸೆನ್ಸ್ ಇಂದ ಹಿಡಿದು ಡೈಲಾಗ್ ಡೆಲಿವರಿ ತನಕ ಎಲ್ಲವನ್ನೂ ಚೇಂಜ್ ಮಾಡಿಕೊಂಡಿದ್ದಾರೆ. ಅದ್ದೂರಿ-ಬಹದ್ದೂರ್-ಭರ್ಜರಿ-ಪೊಗರು ಚಿತ್ರದಲ್ಲಿ ಉದ್ದುದ್ದ ಡೈಲಾಗ್‌ಗಳಿದ್ವು ಆದರೆ ಮಾರ್ಟಿನ್’ ಸಿನಿಮಾದಲ್ಲಿ ಲೆಂಗ್ತಿ ಡೈಲಾಗ್ ಇರೋದಿಲ್ಲ ಅಂತ ಟೀಸರ್ ರಿಲೀಸ್ ಸಂದರ್ಭದಲ್ಲೇ ಧ್ರುವ ಹೇಳಿದ್ದಾರೆ. ಆದರೆ ಮಾರ್ಟಿನ್' ಮೂವೀಯಲ್ಲಿ ಬರುವ ಒಂದೊಂದು ಡೈಲಾಗ್‌ಗೆ ಅದರದ್ದೇ ಆದ ತೂಕ ಮತ್ತು ಮಹತ್ವವಿರುತ್ತಂತೆ. ಅಷ್ಟಕ್ಕೂ,ಮಾರ್ಟಿನ್’ ಚಿತ್ರದಲ್ಲಿ ಧ್ರುವ ಮಾರ್ಟಿನ್ ಅಲ್ವಂತೆ ಹಾಗಾದ್ರೆ ಮತ್ಯಾರು? ಈ ಪ್ರಶ್ನೆಗೆ ಉತ್ತರವನ್ನು ಚಿತ್ರತಂಡ ನಿಗೂಢವಾಗಿಟ್ಟಿದೆ. ಸ್ಟೈಲಿಷ್‌ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಭರ್ಜರಿ ಆಕ್ಷನ್ ದೃಶ್ಯಗಳಿವೆ. ಸೌತ್‌ನ ಫೇಮಸ್ಸ್ ಆಕ್ಷನ್ ಮಾಸ್ಟರ್‌ಗಳಾದ ರಾಮ್-ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.

ಅದ್ದೂರಿ ಜೋಡಿಯ ಎರಡನೇ ಚಿತ್ರವಾದ ಮಾರ್ಟಿನ್' ಕೂಡ ಅದ್ಧೂರಿಯಾಗಿಯೇ ನಿರ್ಮಾಣವಾಗ್ತಿದೆ. ಐದು ಭಾಷೆಯಲ್ಲಿ ಸಿನಿಮಾ ನಿರ್ಮಾಣಕ್ಕೆ ಉದಯ್ ಕೆ. ಮೆಹ್ತಾ ಬಂಡವಾಳ ಹೂಡಿದ್ದಾರೆ. 2022ರ ಆರಂಭದಲ್ಲೇಮಾರ್ಟಿನ್’ ತೆರೆಗೆ ತರಬೇಕು ಎಂದು ಭರದಿಂದ ಶೂಟಿಂಗ್ ಮುಗಿಸ್ತಿದ್ದಾರೆ. ತಮಿಳಿನ ಅರವಿಂದ್ ಸಾಮಿ- ದೇವಯಾನಿ ಸೇರಿದಂತೆ ಪರಭಾಷಾ ಕಲಾವಿದರು ಕೂಡ ಮಾರ್ಟಿನ್' ಮೈಲೇಜ್‌ನ ಹೆಚ್ಚಿಸುತ್ತಿದ್ದಾರೆ. ಲವ್ ಅಂಡ್ ಎಮೋಷನ್ಸ್ ಫೀಲ್ ಇಟ್ಟು ಸಿನಿರಸಿಕರ ಹಾರ್ಟ್ನ ಬೀಟ್ ಮಾಡಿದ್ದಅದ್ದೂರಿ’ ಜೋಡಿ ಮಾರ್ಟಿನ್' ಮೂಲಕ ಬೆಳ್ಳಿತೆರೆ ರೂಲ್ ಮಾಡ್ಬೇಕು ಎಂದು ಹೊರಟಿದ್ದಾರೆ. ಪೊಗರು ಚಿತ್ರದ ಮೂಲಕ ಗಡಿದಾಟಿ ಘರ್ಜಿಸಿದ್ದ ಬಹದ್ದೂರ್ ಗಂಡುಮಾರ್ಟಿನ್’ ಮೂಲಕ ವಲ್ಡ್ವೈಡ್ ಜಗಮಗಿಸ್ತಾರೆ ಎನ್ನುವ ಕೂತೂಹಲ ಮತ್ತು ನಿರೀಕ್ಷೆ ಅಭಿಮಾನಿ ವಲಯದಲ್ಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆAಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ದಿಲ್‌ ಪಸಂದ್‌‌ ಫಸ್ಟ್‌ ಪೋಸ್ಟರ್‌‌ ರಿಲೀಸ್! ಫಸ್ಟ್‌ ಲುಕ್‌ನಲ್ಲೇ ಕಾಂತಿ ತುಂಬಿದ ತೇಜಸ್ಸು!!

ನಿರ್ದೇಶಕ ಶಿವತೇಜಸ್‌ ಅವರು “ದಿಲ್‌ ಪಸಂದ್”‌ ಸಿನಿಮಾ ಕೈಗೆತ್ತಿಕೊಂಡಿರೋದು ಗೊತ್ತೇ ಇದೆ. ಈಗ ಆ ಸಿನಿಮಾದ ಹೊಸ ಸುದ್ದಿ ಅಂದರೆ, ಚಿತ್ರದ ಫಸ್ಟ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಸಿನಿಮಾದವರಿಗೆ ಶುಕ್ರವಾರ ಅಂದರೆ, ಶುಭ ದಿನ. ಹಾಗಾಗಿ, ಚಿತ್ರತಂಡ, ಮೊದಲ ಪೋಸ್ಟರ್‌ ರಿಲೀಸ್‌ ಮಾಡಿದ್ದು, ಪೋಸ್ಟರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ, ನಿರ್ದೇಶಕ ಶಿವತೇಜಸ್‌, ಅವರು ಹೆಣೆದಿರುವ ಬ್ಯೂಟಿಫುಲ್‌ ಲವ್‌ಸ್ಟೋರಿಗೆ “ಡಾರ್ಲಿಂಗ್‌” ಕೃಷ್ಣ ಬೋಲ್ಡ್‌ ಆಗಿ, ಕ್ಯಾಮೆರಾ ಮುಂದೆ ನಿಂತಿದ್ದು ಆಗಿದೆ. ಚಿತ್ರಗಳಲ್ಲಿ ಹಲವು ವಿಶೇಷತೆಗಳಿವೆ. ಆ ಪೈಕಿ ಮೊದಲು ಇಲ್ಲಿ ಕಥೆ ವಿಶೇಷವಾಗಿದೆ. ಅಷ್ಟೇ ಅಲ್ಲ, ಒಬ್ಬ ಸಕ್ಸಸ್‌ಫುಲ್‌ ಹೀರೋ ಸ್ಪೆಷಲ್‌ ಸ್ಟೋರಿ ಮತ್ತು ರೋಲ್‌ ಒಪ್ಪಿಕೊಂಡು ಮಾಡುತ್ತಿರುವ ಸಿನಿಮಾ.

ಇನ್ನು, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್‌ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಸುಮಂತ್‌ ಕ್ರಾಂತಿ ನಿರ್ದೇಶಕರು. ಈಗ ಶಿವತೇಜಸ್‌ ಕಥೆಗೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಾಗಿದೆ. ಈ ಹಿಂದೆಯೇ ಸುಮಂತ್‌ ಕ್ರಾಂತಿ “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ ಅನ್ನೋದು ವಿಶೇಷ.


ಹೌದು, “ದಿಲ್‌ ಪಸಂದ್‌” ಸಿನಿಮಾದ ಶೀರ್ಷಿಕೆಯೇ ಆಕರ್ಷಣೆಯಾಗಿದೆ. ಪೊಲೀಸ್‌ ಅಧಿಕಾರಿ ಚನ್ನಣ್ಣನವರ್‌ ಪೋಸ್ಟರ್‌ ಲಾಂಚ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಸದ್ಯ, ಚಿತ್ರದ ಚಿತ್ರೀಕರಣ ಮೊದಲ ಹಂತ ಮುಗಿದೆ. ಇಲ್ಲಿಯವರೆಗೆ ಹತ್ತು ದಿನಗಳ ಕಾಲ ಶೂಟಿಂಗ್‌ ನಡೆಸಿರುವ ನಿರ್ದೇಶಕ ಶಿವತೇಜಸ್‌, ಡಿಸೆಂಬರ್‌ ೧ರಿಂದ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಜೋರು ಮಳೆ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಮುಂದೂಡಲಾಗಿದೆ.

ಇನ್ನು, ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. ಈಗಾಗಲೇ ಅರ್ಜುನ್‌ ಜನ್ಯಾ ಅವರ ಸ್ಟುಡಿಯೋದಲ್ಲಿ “ದಿಲ್‌ ಪಸಂದ್‌” ಚಿತ್ರದ ಹಾಡುಗಳಿಗೆ ಕೆಲಸ ನಡೆಯುತ್ತಿದೆ. ಮೊದಲ ಹಂತದ ಹತ್ತು ದಿನಗಳ ಚಿತ್ರೀಕರಣದಲ್ಲಿ ಶೇ.೩೦ ರಷ್ಟು ಚಿತ್ರೀಕರಣ ಮಾಡಲಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಡಾರ್ಲಿಂಗ್‌ ಕೃಷ್ಣ. ನಿಶ್ವಿಕಾ ನಾಯ್ಡು, ತಬಲಾ ನಾಣಿ, ರಂಗಾಯಣ ರಘು, ಚಿತ್‌ಕಲಾ, ಅರುಣ ಬಾಲರಾಜ್‌ ಸೇರಿದಂತೆ ಇತರೆ ಕಲಾವಿದರು ಪಾಲ್ಗೊಂಡಿದ್ದಾರೆ.

ಈವರೆಗೆ ರಿಚ್‌ ಮನೆಗಳಲ್ಲೇ ಚಿತ್ರೀಕರಣ ನಡೆದಿದೆ. ಇನ್ನು, ಎರಡನೇ ಹಂತದ ಶೂಟಿಂಗ್‌ನಲ್ಲಿ ಪಬ್‌, ಟೆಂಪಲ್‌, ಸಾಫ್ಟ್‌ವೇರ್‌ ಕಂಪೆನಿ ಹೀಗೆ ಇತರೆ ಲೊಕೇಷನ್‌ಗಳಲ್ಲಿ ಚಿತ್ರೀಕರಿಸಲಾಗುತ್ತದೆ ಎನ್ನುವ ನಿರ್ದೇಶಕರು, ಎರಡನೇ ಹಂತದಲ್ಲಿ ಕಾಮಿಡಿ ನಟ ಸಾಧುಕೋಕಿಲ, ಗಿರಿ ಇತರರು ಕೂಡ ಸೇರಿಕೊಳ್ಳಲಿದ್ದಾರೆ ಎಂದು ವಿವರ ಕೊಡುತ್ತಾರೆ. ಸದ್ಯ ಎರಡನೇ ಹಂತದಲ್ಲಿ ಮಾತಿನ ಭಾಗ ಮುಗಿಸಿ, ನಂತರ ಫೈಟ್‌ ಮತ್ತು ಸಾಂಗ್‌ ಪ್ಲಾನ್‌ ಮಾಡಲಿದೆ ಚಿತ್ರತಂಡ.

Categories
ಸಿನಿ ಸುದ್ದಿ

ಅಪ್ಪು ಅಣ್ಣನಿಲ್ಲದ ನಮಗೆ ಶಿವಣ್ಣ- ಗೀತಕ್ಕನೇ ತಂದೆ- ತಾಯಿ; ಶಕ್ತಿಧಾಮದ ಮಕ್ಕಳ ಹೃದಯ ಗೀತೆಗೆ ಕಣ್ಣೀರಾಗ್ತೀರಿ ನೀವೆಲ್ಲ !

ಅಪ್ಪು ಮರೆಯಾದ್ಮೇಲೆ ದೊಡ್ಮನೆಯಲ್ಲಿ ಎಷ್ಟು ಕತ್ತಲು ಕವಿದಿದೆಯೋ, ಅದೆಷ್ಟು ದುಃಖ- ನೋವು ತುಂಬಿಕೊಂಡಿದೆಯೋ, ಅದೆಷ್ಟು ಅನಾಥಭಾವ ದೊಡ್ಮನೆಗೆ ಕಾಡುತ್ತಿದೆಯೋ, ಅದೆಷ್ಟು ಕಣ್ಣೀರು ಹನಿಯಾಗಿ ಹರಿದಿದೆಯೋ ಅಷ್ಟೇ ದುಃಖ-ನೋವು- ಸಂಕಟವನ್ನು ಶಕ್ತಿಧಾಮವೂ ಅನುಭವಿಸಿದೆ. ಶಕ್ತಿಧಾಮ ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರು ನಡೆಸುತ್ತಿದ್ದಂತಹ ಅನಾಥಾಶ್ರಮ. ಅಣ್ಣಾವ್ರು ಮತ್ತು ಅಮ್ಮಾವ್ರು ಹೋದ್ಮೇಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಶಕ್ತಿಧಾಮದ ಬೆನ್ನಿಗೆ ನಿಂತರು. ವೃದ್ದರು- ಅನಾಥರು- ನಿರ್ಗತಿಕರು- ಅಶಕ್ತರು ಸೇರಿದಂತೆ ಸಾವಿರಾರು ಜನರ ಜವಬ್ದಾರಿಯನ್ನು ವಹಿಸಿಕೊಂಡರು. ಊಟ-ವಸತಿ- ಶಿಕ್ಷಣ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡರು.ಹೀಗೆ ಅಪ್ಪು ಆಸರೆಯಲ್ಲಿ ನಿಶ್ಚಿಂತರಾಗಿ ಬದುಕುತ್ತಿದ್ದ
ಜೀವಗಳಿಗೆ ದೊಡ್ಮನೆ ರಾಜಕುಮಾರನ ಸಾವು ಬರಸಿಡಿಲು ಬಡಿದಂತಾಗಿದೆ. ಮುಂದೇನು ಎನ್ನುವ ಪ್ರಶ್ನೆ ಉದ್ಭವಿಸುವ ಮೊದಲೇ ಶಕ್ತಿಧಾಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಸರೆಯಾಗಿ ನಿಂತಿದ್ದಾರೆ.

ಹೌದು, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಶಕ್ತಿಧಾಮವನ್ನು ಮುನ್ನಡೆಸಲಿದ್ದಾರೆ. ತಮ್ಮನ ಸಮಾಜ ಸೇವೆಗೆ ಬೆನ್ನೆಲುಬಾಗಿ ಶಿವಣ್ಣ- ರಾಘಣ್ಣ ನಿಂತ್ಕೊಳ್ಳಲಿದ್ದಾರೆ. ಹೀಗಾಗಿ, ಶಕ್ತಿಧಾಮದ ಸಕಲರೂ ನಿರಾಳರಾಗಿದ್ದಾರೆ. ಆದರೆ, ನಟಸಾರ್ವಭೌಮನಿಲ್ಲದ ನೋವು ಮಾತ್ರ ಶಕ್ತಿಧಾಮದ ಸಕಲರನ್ನೂ ಹೈರಣಾಗಿಸಿದೆ. ಕನ್ನಡ ಚಿತ್ರರಂಗ ಹಮ್ಮಿಕೊಂಡಿದ್ದ ‘ ಪುನೀತ್ ನಮನ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಕ್ತಿಧಾಮದ ಮಕ್ಕಳು ಪರಮಾತ್ಮನ ಸ್ಮರಣೆ ಮಾಡಿ ಹೃದಯ ಗೀತೆಯ ಮೂಲಕ ತಮ್ಮ ಭಾವಾಂಜಲಿಯನ್ನು ಅರ್ಪಿಸಿದರು.

ಶಕ್ತಿಧಾಮದ ಹೆಸರು ಎಷ್ಟು ಸುಂದರ…ಮುಕ್ತಿ ನೀಡುವ ನಮಗೆ ಭವ್ಯಮಂದಿರ…

ಅಂಬೆಗಾಲ ಇಡುತ ನಾವು ಬದುಕುತ್ತಿದೆವು…ಅಮ್ಮ ನಿಮ್ಮ ಶಕ್ತಿಯಿಂದ ಎದ್ದುನಿಂತೆವು…

ಕರವ ಮುಗಿದು ನಮಿಸಬೇಕು ಇಂಥ ಶಕ್ತಿಗೆ…ಜಯವಾಗಲಿ ಎಂದೆಂದೂ ಶಕ್ತಿಧಾಮಗೆ…

ಒಂದೇ ಬಳ್ಳಿ ಹೂಗಳಂತೆ ನಾವು
ಎಲ್ಲರು…ನಗುನಗುತ ಬಾಳಬೇಕು ಇಲ್ಲಿ ಎಲ್ಲರು…

ದಾರಿತೋರಿ ನಡೆಸಬೇಕು ಹಿರಿಯರೆಲ್ಲರು…ಸಹಕರಿಸಿ ನಡೆಯಬೇಕು ಕಿರಿಯರೆಲ್ಲರು…

ತಾಯಿಯಂತೆ ಗೀತಮ್ಮ ಸಲಹುತಿರುವರು…
ತಂದೆಯಂತೆ ಶಿವಣ್ಣ ಹರಸುತ್ತಿರುವರು…

ಅಪ್ಪು ಅಣ್ಣ ಎಂದೆಂದು ಮನದಲಿರುವರು…ಅವರು ಕೊಟ್ಟ ಪ್ರೀತಿಯನ್ನು ಮರೆಯಲಾರೆವು…

ಶಕ್ತಿಧಾಮದ ಏಳ್ಗೆ ನಮ್ಮದಂತೆ…ನಮ್ಮೆಲ್ಲರ ಬದುಕಿಗೆ ಆಸರೆಯಂತೆ…

ದುಡಿದವರೆಲ್ಲ ಎಂದೆಂದೂ ಶಕ್ತಿಧಾಮಕೆ…ನಡೆವರೆಲ್ಲರ ಎಂದೆಂದೂ ಶಕ್ತಿಧಾಮಕೆ…

ಇದು ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಶಕ್ತಿಧಾಮದಲ್ಲಿ ಆಸರೆ ಪಡೆಯುತ್ತಿರುವ ಮಕ್ಕಳು ಸಾಮೂಹಿಕವಾಗಿ ಒಟ್ಟಾಗಿ ಹಾಡಿದಂತಹ ಹಾಡು. ಇದು ಕೇವಲ ಹಾಡಲ್ಲ. ಅವರೆಲ್ಲರ ಹೃದಯದ ಮಾತು- ದೊಡ್ಮನೆ ಮೇಲೆ ಅವರಿಗಿರುವ ಪ್ರೀತಿ- ಗೌರವ- ಹೆಮ್ಮೆ- ವಿಶ್ವಾಸ- ನಂಬಿಕೆ- ಭರವಸೆಯನ್ನು ತುಂಬಿಕೊಂಡಿದ್ದ ಗೀತೆ ಇದು. ಈ ಹಾಡು ಅರಸು ಆರಾಧನೆಯಲ್ಲಿ ಮಕ್ಕಳು ಹಾಡುತ್ತಿದ್ದಾಗ ಕಣ್ಣಾಲಿಗೆಗಳು ಒದ್ದೆಯಾದ್ವು, ರಾಜರತ್ನ ಅಪ್ಪು ಮೇಲಿದ್ದ ಪ್ರೀತಿ ಮತ್ತು ಗೌರವ ಒಂದು ತೂಕ ಹೆಚ್ಚಾಯ್ತು. ನಮ್ಮ ಅಪ್ಪು ನಮಗೆ ಬೇಕು ಎಂದು ಹಠ ಹಿಡಿದುಕೊಳ್ಳುವಂತಾಯ್ತು. ಆದರೆ ಏನ್ಮಾಡೋದು ಕ್ರೂರ ವಿಧಿ ರಾಜಕುಮಾರನ ಹೃದಯ ವೈಶ್ಯಾಲ್ಯತೆಯನ್ನು ನೋಡಿ ಅಸೂಹೆ ಪಟ್ಟು ಕಿತ್ಕೊಂಡಿದ್ದಾನೆ. ಅವನೇ ಬೆಟ್ಟದ ಹೂ ನ ಭೂಮಿಗೆ ಮತ್ತೆ ವಾಪಾಸ್ ಕಳುಹಿಸಿಕೊಡಬೇಕು. ದೊಡ್ಮನೆಯಲ್ಲಿ ಅಪ್ಪು ಮತ್ತೆ ಹುಟ್ಟಿ ಬರಬೇಕು.
ಇದೇ ಕೋಟಿ ಮಂದಿಯ ಕೊನೆಯ ಆಸೆ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅಪ್ಪು ಸಮಾಧಿ ಬಳಿ ಬನಾರಸ್ ಚಿತ್ರದ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಬಿಡುಗಡೆ

ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ – ಸೋನಾಲ್ ಮಾಂಟೆರೊ ನಾಯಕ,‌ ನಾಯಕಿಯಾಗಿ ನಟಿಸಿರುವ, ಜಯತೀರ್ಥ ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ “ಬನಾರಸ್”.
ಈ ಚಿತ್ರದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿಯ ಮುಂದೆ ಬಿಡುಗಡೆ ಮಾಡಲಾಗಿದೆ.

ಇದಕ್ಕೂ ಮುನ್ನ ಚಿತ್ರತಂಡ ಡಾ.ರಾಜಕುಮಾರ್, ಪಾರ್ವತಮ್ಮ ರಾಜ್‍ಕುಮಾರ್, ಅಂಬರೀಶ್ ಹಾಗೂ ಪುನೀತ್ ರಾಜ್‍ಕುಮಾರ್ ಅವರ‌ ಸಮಾಧಿಗಳಿಗೆ ಪೂಜೆ ಸಲ್ಲಿಸಿದ್ದರು. ಕಂಠೀರವ ಸ್ಟುಡಿಯೋದಿಂದ, ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿಗೂ ಪೂಜೆ ಸಲ್ಲಿಸಿ, ಲಕ್ಷ್ಮೀ ಪೂಜೆ ಮಾಡಿ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಸಂಸ್ಥೆಯ ಕಡೆಯಿಂದ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್ ಗೆ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಯಾರೂ ನಿರೀಕ್ಷಿಸದಂಥಾ ದುರಂತ ಘಟಿಸದಿದ್ದರೆ ಈ ದಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೇ ಖುದ್ದಾಗಿ ಬನಾರಸ್‌ನ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ಕನ್ನು ಬಿಡುಗಡೆಗೊಳಿಸ ಬೇಕಿತ್ತು.. ದುರಾದೃಷ್ಟವಶಾತ್ ಅವರು ಮರೆಯಾಗಿದ್ದಾರೆ. ಅವರು ತೋರಿದ ಪ್ರೀತಿಯನ್ನು ಮನಸಲ್ಲಿಟ್ಟುಕೊಂಡು ಅವರ ಪುಣ್ಯಭೂಮಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಅಲ್ಲಿಂದಲೇ ಅಪ್ಪು ಖುಷಿಗೊಳ್ಳುತ್ತಾರೆ, ಹರಸುತ್ತಾರೆಂಬ ತುಂಬು ನಂಬಿಕೆ ಚಿತ್ರ ತಂಡಕ್ಕಿದೆ. ಈ ಪೂಜೆ ಮತ್ತು ಫಸ್ಟ್ ಲುಕ್ ಬಿಡುಗಡೆಯ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕ ಜಯತೀರ್ಥ, ನಾಯಕ ನಾಯಕಿಯರಾದ ಝೈದ್ ಖಾನ್, ಸೋನಲ್ ಮಾಂಟೆರೊ, ಖ್ಯಾತ ಹಾಸ್ಯ ನಟ ಸುಜಯ್ ಮುಂತಾದವರು ಉಪಸ್ಥಿತರಿದ್ದರು. ಇಡೀ ಚಿತ್ರ ಮೂಡಿ ಬಂದಿರುವ ಅದ್ಧೂರಿತನ ಮತ್ತು ವಿಭಿನ್ನ ಕಥಾನಕದ ಸುಳಿವನ್ನು ಈ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ನೀಡಲಿದೆ.

ಹಲವಾರು ಅದ್ಭುತಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಈ ಚಿತ್ರದ ೯೦ ಭಾಗದ ಚಿತ್ರೀಕರಣವನ್ನು ಬನಾರಸ್‌ನ ಮನಮೋಹಕ ಪರಿಸರದಲ್ಲಿ ನಡೆಸಲಾಗಿದೆ. ಇಲ್ಲಿನ 84 ಘಾಟ್ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿರುವುದು ಬನಾರಸ್‌ನ ಮತ್ತೊಂದು ಪ್ರಧಾನ ಅಂಶ.
ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ತಯಾರಾಗಿರುವ ಬನಾರಸ್, ದೇಶವ್ಯಾಪಿ ಸದ್ದು ಮಾಡಲಿದೆ.

ಈಗಾಗಲೇ ಈ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯಗಳೂ ಕೂಡಾ ದೇಶವ್ಯಾಪಿ ಹಬ್ಬಿಕೊಂಡಿದೆ. ಅದೆಲ್ಲಕ್ಕೂ ಕಳಶವಿಟ್ಟಂತೆ ಈಗ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ಇದಕ್ಕೆ ಸಿಗುತ್ತಿರುವ ಭರಪೂರ ಪ್ರತಿಕ್ರಿಯೆ ಚಿತ್ರತಂಡದಲ್ಲಿ ಹೊಸಾ ಹುರುಪು ಮೂಡಿಸಿದೆ.
ಹೊಸಾ ಪ್ರತಿಭೆಯ ಆಗಮನಕ್ಕೆ ಮತ್ತು ಹೊಸತನದ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಕಾಲವೂ ಇರಲಿ ಎನ್ನುವುದು ಚಿತ್ರತಂಡದ ಮನವಿ.

Categories
ಸಿನಿ ಸುದ್ದಿ

ಹೊಸಬರ ಜುಗಲ್ ಬಂದಿ! ಡಿಂಡಿಮ ಬಾರಿಸಲಿದ್ದಾರೆ ದಿವಾಕರ್!

ಜುಗಲ್ ಬಂದಿ..ಕನ್ನಡದಲ್ಲಿ ಹೀಗೊಂದು ಹೊಸ ಸಿನಿಮಾ ಸದ್ದು ಮಾಡುತ್ತಿದೆ. ಹೊಸಬರೇ ಸೇರಿ ಮಾಡ್ತಿರುವ ಜುಗಲ್ ಬಂದಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ.

ಡಿಂಡಿಮ ಪ್ರೊಡಕ್ಷನ್ ನಡಿ ರೆಡಿಯಾಗ್ತಿರುವ ಜುಗಲ್ ಬಂದಿ ಸಿನಿಮಾಕ್ಕೆ ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿದ್ದಾರೆ.
ನಿರ್ದೇಶನದ ಜೊತೆಗೆ ಡಿಂಡಿಮ ಸಿನಿಮಾ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ, ಮಾನಸಿ ಸುಧೀರ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಥ್ರಿಲ್ಲರ್ ಕಥಾಹಂದರ ಹೊಂದಿರುವ ಜುಗಲ್ ಬಂದಿ ಸಿನಿಮಾಕ್ಕೆ ಪ್ರದ್ಯೋತನ್ ಸಂಗೀತ ನಿರ್ದೇಶನ ನೀಡಿದ್ದಾರೆ, ಈ ಹಿಂದೆ ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದ ಡಿಂಡಿಮ ಜುಗಲ್ ಬಂದಿ ಸಿನಿಮಾ ಮೂಲಕ ನಿರ್ದೇಶನಾಗಿ ಬಡ್ತಿ ಪಡೆದಿದ್ದಾರೆ.


ಉಳಿದಂತೆ ಕೋ ಡೈರೆಕ್ಟರ್ ಆಗಿ ಬಾಲಕೃಷ್ಣ ಯಾದವ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಸಂತೋಷ್, ಶ್ರೀನಿವಾಸ್,ಕೆಲಸ ನಿರ್ವಹಿಸಲಿದ್ದಾರೆ.

ಫಸ್ಟ್ ಲುಕ್ ಮೂಲಕ ಹೊಸ ನಿರೀಕ್ಷೆ ಹುಟ್ಟಿಸಿರುವ ಜುಗಲ್ ಬಂದಿ ಸಿನಿಮಾ ಇದೇ 20 ರಂದು ಮುಹೂರ್ತ ಮೂಲಕ ಕಿಕ್ ಸ್ಟಾರ್ಟ್ ಆಗಲಿದೆ.

Categories
ಸಿನಿ ಸುದ್ದಿ

ಹೊಸಬರ ವೆಡ್ಡಿಂಗ್‌ ಗಿಫ್ಟ್!‌ ಮೇಷ್ಟ್ರು ಕ್ಲಾಪ್‌ ಮಾಡಿದ್ರು -ಪ್ರೇಮ ಚಾಲನೆ ಕೊಟ್ರು…

ವೆಡ್ಡಿಂಗ್‌ ಗಿಫ್ಟ್….‌ ಇದು ಹೊಸಬರ ಸಿನಿಮಾ. ಇದೇ ಮೊದಲ ಸಲ ವಿಕ್ರಂ ಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಮೊದಲ ಸನ್ನಿವೇಶಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್‌ ಮಾಡಿದರೆ, ನಟಿ ಪ್ರೇಮ ಕ್ಯಾಮೆರಾ ಚಾಲನೆ ಮಾಡಿದರು

ಇದೇ ಮೊದಲ ಸಲ ನಿರ್ದೇಶನದ ಪಟ್ಟ ಅಲಂಕರಿಸಿರುವ ವಿಕ್ರಂ ಪ್ರಭು, “ನಾನು ಕಳೆದ ಕೆಲವು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ.‌ ನಾನೇ ಕಥೆ ಬರೆದು, ನಿರ್ಮಾಣ ಮಾಡುತ್ತಿದ್ದೇನೆ. ನಿಶಾನ್ ನಾಣಯ್ಯ ಈ ಚಿತ್ರದ ನಾಯಕ. ನಾಯಕಿಯಾಗಿ ಸೋನು ಗೌಡ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಪ್ರೇಮ ನಾಲ್ಕುವರ್ಷಗಳ ನಂತರ ಅವರಿಲ್ಲಿ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪವಿತ್ರ ಲೋಕೇಶ್, ಯಮುನ ಶ್ರೀನಿಧಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಮ್ಮ ಚಿತ್ರದ ಶೀರ್ಷಿಕೆ ಕೇಳುತ್ತಿದ್ದ ಹಾಗೆ, ಕೌಟುಂಬಿಕ ಚಿತ್ರ ಅನಿಸಬಹುದು ಆದರೆ, ಇದು ಡಾರ್ಕ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಚಿತ್ರ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನಲ್ಲಿ ನಲವತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ವಿಕ್ರಂಪ್ರಭು.

ಹೀರೋ ನಿಶಾನ್‌ ಮಾತನಾಡಿ, “ನಾನು ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ. ಕಥೆ ತುಂಬಾ ಇಷ್ಟವಾಯಿತು . ವಿಲಾಸ್ ಎಂಬ ಪಾತ್ರ ನಿರ್ವಹಿಸಿಸುತ್ತಿದ್ದೇನೆ ಎಂದರು ನಾಯಕ ನಿಶಾನ್ ನಾಣಯ್ಯ.

ನಾನು ಈವರೆಗೂ ಮಾಡಿರದ ಪಾತ್ರ ಸಿಗಬೇಕು ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ಸಿಕ್ಕಿದೆ. ಗಂಡ-ಹೆಂಡತಿಯಲ್ಲಿ ಯಾವತ್ತೂ ನನ್ನದು ಎನ್ನುವುದು ಬರಕೂಡದು. ನಮ್ಮದು ಅಂತ ಇರಬೇಕು. ಯಾವಾಗ ನನ್ನದು ಅಂತ ಬರುತ್ತದೆಯೋ, ಆಗ ಅವರಿಬ್ಬರ ನಡುವೆ ಏನಾಗುತ್ತದೆ. ಎಂಬುದೇ ಕಥಾಹಂದರ. ನನಗೆ ಈ ಪಾತ್ರ ತುಂಬಾ ಇಷ್ಟವಾಯಿತು.. ಎಲ್ಲರಿಗೂ ಹಿಡಿಸಲಿದೆ ಎಂಬ ನಂಬಿಕೆಯಿದೆ ಎಂದರು ನಾಯಕಿ ಸೋನು ಗೌಡ.

ಉಳಿದಂತೆ ನಟಿ ಯಮುನ ಶ್ರೀನಿಧಿ, ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಛಾಯಾಗ್ರಹಕ ಉದಯಲೀಲ ಹಾಗೂ ಸಂಕಲನಕಾರ ವಿಜೇತ್ ಚಂದ್ರ ಮಾತನಾಡಿದರು.

Categories
ಸಿನಿ ಸುದ್ದಿ

ಸಸ್ಪೆನ್ಸ್ ಗೋವಿಂದ !‌ ನ.26ಕ್ಕೆ ಸುಮಂತ್‌ ಸಿನಿಮಾ ರಿಲೀಸ್

ವಿಭಿನ್ನ ಕಥಾಹಂದರದ “ಗೋವಿಂದ ಗೋವಿಂದ” ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶೈಲೇಂದ್ರ ಪ್ರೊಡಕ್ಷನ್ಸ್ , ಎಲ್.ಜಿ.ಕ್ರಿಯೇಷನ್ಸ್ ಅವರು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ “ಗೋವಿಂದ ಗೋವಿಂದ” ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಸಿನಿಮಾಗೆ ತಿಲಕ್‌ ನಿರ್ದೇಶಕರು. ಅವರು ಈ ಚಿತ್ರದ ಕುರಿತು ಹೇಳುವುದಿಷ್ಟು. “ರಂಗಭೂಮಿಯಲ್ಲಿ ಅನುಭವವಿರುವ ನನಗೆ, ಹಿರಿತರೆಯಲ್ಲಿ ಮೊದಲ ಚಿತ್ರ. ರವಿ ಆರ್ ಗರಣಿ ಅವರು ಮೂಲತಃ ನಿರ್ದೇಶಕರೇ ಆಗಿದ್ದರೂ, ನನಗೆ ನಿರ್ದೇಶನದ ಜವಾಬ್ದಾರಿ ನೀಡಿದ್ದಾರೆ. ಅವರಿಗೂ ಹಾಗೂ ಇತರ ನಿರ್ಮಾಪಕರಿಗೆ ಧನ್ಯವಾದ. ಇದು ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿದೆ ಎಂದರು ನಿರ್ದೇಶಕ ತಿಲಕ್.

ನಾನು, ಕಿಶೋರ್ ಹಾಗೂ ಶೈಲೇಂದ್ರ ಬಾಬು ಮೂವರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಉತ್ತಮ ಚಿತ್ರಗಳಿಗೆ ಮಾಧ್ಯಮದ ಸಹಕಾರ ಇದೆ ಇರುತ್ತದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ಸ್ವಲ್ಪ ಹೆಚ್ಚಿರಲಿ ಎಂದರು ನಿರ್ಮಾಪಕ ರವಿ ಆರ್ ಗರಣಿ.

ನಮ್ಮ ಶೈಲೇಂದ್ರ ಪ್ರೊಡಕ್ಷನ್ಸ್ ವತಿಯಿಂದ ನಿರ್ಮಾಣವಾಗಿರುವ ಎಲ್ಲಾ ಚಿತ್ರಗಳಿಗೂ ಮಾಧ್ಯಮ ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ, ಬೇರೆ ಸಂಸ್ಥೆಗಳ ಜೊತೆ ಸೇರಿ ನಿರ್ಮಾಣ ಮಾಡಿದೆ. ಅನುಭವಿ ಕಲಾವಿದರ ಹಾಗೂ ತಂತ್ರಜ್ಞರ ಸಮ್ಮಿಲನದಲ್ಲಿ ಉತ್ತಮ ಚಿತ್ರ ಮೂಡಿ ಬಂದಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಶೈಲೇಂದ್ರ ಬಾಬು.
.
ಮತ್ತೊಬ್ಬ ನಿರ್ಮಾಪಕ ಕಿಶೋರ್ ಎಂ ಕೆ ಮಧುಗಿರಿ ಅವರು ಉತ್ತಮ ಚಿತ್ರ ನಿರ್ಮಾಣ ಮಾಡಿದ್ದೇವೆ ನೋಡಿ ಹಾರೈಸಿ ಎಂದರು.

ನಾಯಕ ಸುಮಂತ್ ಶೈಲೇಂದ್ರ, ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ಕಾಮಿಡಿ ತುಂಬಾ ಇರುತ್ತದೆ. ಇಡೀ ಸಿನಿಮಾ ನನ್ನೊಬ್ಬ‌ನಿಂದಲೇ ನಗಿಸುವುದು ಕಷ್ಟ.. ನನ್ನ ಸ್ನೇಹಿತರ ಪಾತ್ರದಲ್ಲಿ ಪವನ್ ಕುಮಾರ್ ಹಾಗೂ ವಿಜಯ್ ಚೆಂಡೂರ್ ನಟಿಸಿದ್ದು, ಮೂವರು ಸೇರಿ ಉತ್ತಮ ಮನೋರಂಜನೆ ನೀಡುತ್ತೇವೆ. ನನ್ನ ಹಿಂದಿನ ಚಿತ್ರಗಳಿಗೆ ನೀವು ನೀಡಿರುವ ಪ್ರೋತ್ಸಾಹಕ್ಕೆ ನಾನು ಆಭಾರಿ. ಈ ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ ಎಂದರು.

ಚಿತ್ರದಲ್ಲಿ ಅಭಿನಯಿಸಿರುವ ರೂಪೇಶ್ ಶೆಟ್ಟಿ, ಕವಿತಾ ಗೌಡ, ಪವನ್ ಕುಮಾರ್, ವಿಜಯ್ ಚಂಡೂರ್, ಸಂಗೀತ ನಿರ್ದೇಶಕ ಹಿತನ್ ಹಾಸನ್ ಹಾಗೂ ಕಾರ್ಯಕಾರಿ ನಿರ್ಮಾಪಕ ಜನಾರ್ದನ್ ಚಿತ್ರದ ಕುರಿತು ಮಾತನಾಡಿದರು.

ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಕವಿತಾ ಗೌಡ, ಭಾವನ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ ಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸಪ್ರಭು, ಗೋವಿಂದೇ ಗೌಡ, ಯಮುನ ಶ್ರೀನಿಧಿ ಇತರರಿದ್ದಾರೆ.

Categories
ಸಿನಿ ಸುದ್ದಿ

ಅಪ್ಪು ಕಲೆ- ಕಾರ್ಯವೈಖರಿ – ಸೇವೆ ಮುನ್ನಡೆಸೋಣ ಅಂದ್ರು ದರ್ಶನ್!

ಕನ್ನಡ ಚಿತ್ರರಂಗದ ಧ್ರುವ ತಾರೆ, ದೊಡ್ಮನೆ ನಂದಾದೀಪ, ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಅಗಲಿ ಇವತ್ತಿಗೆ ಹತ್ತೊಂಭತ್ತು ದಿನಗಳು ಕಳೆದಿವೆ. ಆದರೆ, ಅಪ್ಪು ಇನ್ನಿಲ್ಲದ ನೋವು ಮಾತ್ರ ಎಲ್ಲರಿಗೂ ದೊಡ್ಡ ಆಘಾತ ನೀಡಿದೆ. ಅಗಲಿದ ಅಪ್ಪುಗೆ ಕನ್ನಡ ಚಿತ್ರರಂಗದ ವತಿಯಿಂದ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ಯಾಂಡಲ್ ವುಡ್ ಕಲಾವಿದರು ಸೇರಿದಂತೆ ಪರಭಾಷೆಯವರು ಆಗಮಿಸಿದ್ದರು. ಈ ವೇಳೆ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಹಿತ್ಯದ ಮೂಲಕ ಗಂಧದಗುಡಿಯ ಅರಸುನಾ ನೆನೆದರು.

ಕಾಣದ ಕೈಯಲಿ ಗೊಂಬೆಯು ನೀನು ಕಾಲದ ಎದುರಲಿ, ಕುರುಡನು ನೀನು, ಅರ್ಥವೇ ಆಗದ ಜಗದಲ್ಲಿ, ಅರ್ಥವ ಹುಡುಕಿದೆ ನೀನಿಲ್ಲಿ ಗೀಚಿದ ಬ್ರಹ್ಮ ಗೀಚುವ ಮುಂಚೆ, ಯೋಚಿಸಲೇ ಇಲ್ಲ ಹಣೆಯ ಮೇಲೆ ಕೆತ್ತಿದ ಮೇಲೆ ತಿದ್ದುವರು ಯಾರಿಲ್ಲ…

ಗೀತ ಸಾಹಿತಿ ವಿ.‌ನಾಗೇಂದ್ರ ಪ್ರಸಾದ್ ಅವರ ಬರೆದಂತಹ ಸಾಲುಗಳಿವು. ಅಪ್ಪು ಇಲ್ಲದ ಈ ಕ್ಷಣಕ್ಕೆ ಈ ಸಾಹಿತ್ಯದ ಸಾಲುಗಳು ಹೊಂದಿಕೆಯಾಗುತ್ತವೆ. ಅಂದ್ಹಾಗೇ, ಗೇಟ್ ಇಂದ ಆಚೆ ಹೋದವರು ಮತ್ತೆ ಬರ್ತೀವಿ ಎನ್ನುವ ನಂಬಿಕೆ ಇಲ್ಲ. ಎಷ್ಟು ನಿಮಿತ್ತ ಆಗೋದ್ವಿ‌ ನಾವು. ನಾವು ಈ‌ಕ್ಷಣ ಇದೀವೋ ಇಲ್ಲವೋ ಎನ್ನುವುದನ್ನು ಯೋಚನೆ ಮಾಡೋದಕ್ಕೆ ಆಗುತ್ತಿಲ್ಲ.‌ಆ ಬ್ರಹ್ಮ 47 ಅಂತ ಬರೆದ . ಆದರೆ ಅವನ ಕೈಯ್ಯಲ್ಲಿ ತಿದ್ದೋಕೆ‌ ಆಗಲಿಲ್ಲವೇನೋ ಅಪ್ಪು ಆಯಸ್ಸನ್ನು. ಯಾಕಂದ್ರೆ ಇನ್ನೂ ಜೀವನ ಇತ್ತು.

ಚಿತ್ರರಂಗದಲ್ಲಾಗಲಿ, ಪ್ರತಿಯೊಂದರಲ್ಲಿ ಸಾಧನೆ ಮಾಡುವುದು ಬಹಳಷ್ಟಿತ್ತು. ಅವರ ಮಕ್ಕಳನ್ನು ನೋಡಿದಾಗ ಅನ್ಸುತ್ತೆ ಅಪ್ಪು ಇನ್ನೂ ಮಾಡಬೇಕಾಗಿದ್ದು ಬಹಳ ಇತ್ತು ಅಂತ. ಆದರೆ ಏನ್ ಮಾಡೋದು ವಿಧಿ ಕ್ರೂರಿಯಾಗಿ ಪವರ್ ಸ್ಟಾರ್ ನ ಕಿತ್ಕೊಂಡು ಬಿಟ್ಟ. ಇನ್ಮೇಲೆ ನಾವು ಅವರ ನೆನಪಲ್ಲಿ, ಅವರು ನಡೆದ ಹಾದಿಯಲ್ಲಿ ಸಾಗುತ್ತಾ,
ಅಪ್ಪು ,ಕಾರ್ಯವೈಖರಿ ಕಲೆ ಸೇವೆ ಮುಂದುವರೆಸಿಕೊಂಡು ಹೋಗೋಣ…

Categories
ಸಿನಿ ಸುದ್ದಿ

ನನ್ನ ಆತ್ಮ ಹೇಳ್ತಿದೆ, ಅಪ್ಪು ವಾಪಾಸ್‌ ಬಂದೇ ಬರ್ತಾನೆ; ಜಗ್ಗೇಶ್‌ ಭಾವುಕ ಮಾತು…

ಪುನೀತ್‌ ನುಡಿ ನಮನ ಕಾರ್ಯಕ್ರಮದಲ್ಲಿ ಜಗ್ಗೇಶ್‌, ಪುನೀತ್‌ ಅವರ ಕುರಿತು ಭಾವುಕರಾಗಿ ಮಾತಾಡಿದರು. “ಅವರು ನಮ್ಮನ್ನು ಕಳಿಸಿಕೊಡಬೇಕಿತ್ತು. ನಾವು ಅವರನ್ನು ಕಳಿಸಿಕೊಡುವಂತಹ ಸ್ಥಿತಿ ಬಂದಿದೆ. ಕನ್ನಡ ಚಿತ್ರರಂಗಕ್ಕೆ ಗಟ್ಟಿಯಾದ ನಟ ಅವರು. ಗಟ್ಟಿ ಕಲಾವಿದರಲ್ಲಿ ಈತನೂ ಒಬ್ಬ. ಸಮಾಧಾನ ನಮಗೇ ನಾವು ಮಾಡಿಕೊಳ್ಳಬೇಕು. ನಾವು ನಾಲ್ಕೈದು ವರ್ಷಗಳಿಂದ ಬೇರೆ ಆಯಾಮದಲ್ಲಿ ಹೊರಟು ಹೋದ್ವಿ. ಈತನ ಸಾವು ಆದಮೇಲೆ, ಶೇ.30ರಷ್ಟು ಆಶಾಭಾವ ಇತ್ತು. ಅದೂ ಹೊರಟು ಹೋಯ್ತು. ಪುನೀತ್‌ ನಮ್ಮನ್ನು ಬಿಟ್ಟು ಹೋಗಿಲ್ಲ. ಆತ ಮತ್ತೆ ಬಂದೇ ಬರ್ತಾನೆ ಎಂದು ನನ್ನ ಆತ್ಮ ಹೇಳ್ತಾ ಇದೆ ವಾಪಾಸ್‌ ಬರ್ತಾನೆ. ಬಹಳ ವಿಶೇಷವಾಗಿ ಬರ್ತಾನೆ ಎಂದರು.

ಇನ್ನೂ ಮಾಡಬೇಕು ಎಂಬ ಭಾವಗಳು, ಭಾವನೆಗಳಿದ್ದವು. ಬರ್ತಾನೆ ಎಂಬ ನಂಬಿಕೆ ಇದೆ. ಪುನೀತ್‌ ಎಲ್ಲೂ ಹೋಗಿಲ್ಲ. ನಮ್ಮೊಳಗಿದ್ದಾನೆ. ಕಲಾವಿದ ಎಷ್ಟು ಅದೃಷ್ಟವಂತ ಅನ್ನುವುದಕ್ಕೆ ಇದೊಂದೆ ನಿದರ್ಶನ ಸಾಕು. ಭಾರವಾದ ಹೃದಯವಿದೆ. ಶ್ರದ್ಧಾಂಜಲಿ ಹೇಳೋಕೆ ನಂಬಿಕೆ ಇಲ್ಲ.
ಆತ ಒಂದು ಸಂದೇಶ ಬಿಟ್ಟು ಹೋದ.

ಎಂಥ ಒಂದು ಮೆಸೇಜ್‌ ಅಂದರೆ, ಎಲ್ಲರ ಮನಸ್ಸಲ್ಲೂ ಒಂದು ಭಾವ ಬಂತು. ಯಾವುದೂ ಶಾಶ್ವತವಲ್ಲ. ಎಲ್ಲವೂ ನಶ್ವರ. ದೇವರು ಕರೆದಾಗ ಹೋಗಬೇಕು ಎಂಬ ಮೆಸೇಜ್‌ ಕೊಟ್ಟು ಹೋದ. ನಾವು ಎರಡು ಹೆಜ್ಜೆ ಕೆಳಗಿಳಿದು, ಇದೇ ರೀತಿ ಕಲಾವಿದರು ಒಂದೇ ರೀತಿ ಬದುಕೋಣ…

Categories
ಸಿನಿ ಸುದ್ದಿ

ಪುನೀತ್ ನಮನ’- ಕಿರುಚಿತ್ರ ಪ್ರದರ್ಶನ ! ಯುವರತ್ನ’ನ ಜೀವನ ಚರಿತ್ರೆಗೆ ಕಿಚ್ಚನ ಕಂಠದಾನ !

ಅಗಲಿದ ಗಂಧದಗುಡಿಯ ಅರಸುಗೆ ಕನ್ನಡ ಚಿತ್ರರಂಗದ ವತಿಯಿಂದ ಅರಮನೆ ಮೈದಾನದಲ್ಲಿ ಮಂಗಳವಾರ ಪುನೀತ್ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಪ್ಪು ‌ಬೆಳೆದು ನಿಂತ ಹಾದಿಯ ಬಗ್ಗೆ ಬೆಳಕು ಚೆಲ್ಲುವ ಕಿರುಚಿತ್ರ ಪ್ರದರ್ಶನ ಮಾಡಲಾಯ್ತು. ವಿಶೇಷ ಅಂದರೆ ಬಾಲ್ಯದ ಗೆಳೆಯ ಅಪ್ಪು ಜೀವನ ಚರಿತ್ರ್ಯೆಗೆ ಕಿಚ್ಚ ಸುದೀಪ್ ಕಂಠದಾನ ಮಾಡಿದ್ದರು. ಅಭಿನಯ ಚಕ್ರವರ್ತಿ ಅಪ್ಪು ಸಾಧನೆ ಬಗ್ಗೆ ಹೇಳುತ್ತಾ ಹೋಗಿದ್ದು ಹೀಗೆ….

ಓವರ್‌ ಟು ಸುದೀಪ್‌ ವಾಯ್ಸ್…


ಚೆನ್ನೈನ ಆಸ್ಪತ್ರೆಯೊಂದರಲ್ಲಿ 1975ನೇ ಇಸವಿ ಸೋಮವಾರ ಮಾರ್ಚ್ 17ರಂದು ನಕ್ಷತ್ರ ಹುಟ್ಟಿತು. ಚೆನ್ನೆನ ಆಸ್ಪತ್ರೆಯೊಂದರಲ್ಲಿ ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಗರ್ಭದಲ್ಲಿ ಹುಟ್ಟಿದ ಕಂದ ಪುನೀತ್ ರಾಜ್‌ಕುಮಾರ್. ಸಹೋದರರಾದ ಶಿವರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮಾರ್, ಸಹೋದರಿಯರಾದ ಪೂರ್ಣಿಮಾ- ಲಕ್ಷಿಯವರು ಮುದ್ದಿನ ಅಪ್ಪು. ಎಲ್ಲರ ಪಾಲಿನ ಪ್ರೀತಿಯ ಅಪ್ಪು. ಅಭಿಮಾನಿಗಳ ಪಾಲಿಗೆ ಪವರ್‌ಸ್ಟಾರ್.

ಹುಟ್ಟಿದ ಆರೇ ತಿಂಗಳಿಗೆ ಪ್ರೇಮದ ಕಾಣಿಕೆ ಮೂಲಕ ತೆರೆ ಏರಿದ ಅದೃಷ್ಟವಂತ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಪ್ರೇಮದ ಕಾಣಿಕೆ. 1980ರಲ್ಲಿ ವಸಂತ ಗೀತೆ, 1981ರಲ್ಲಿ ಭಾಗ್ಯವಂತ, 1982 ರಲ್ಲಿ ಚಲಿಸುವ ಮೋಡಗಳು, ೧೯೮೩ ರಲ್ಲಿ ಎರಡು ನಕ್ಷತ್ರಗಳು, 1985ರಲ್ಲಿ ಭಕ್ತ ಪ್ರಹ್ಲಾದ ಮತ್ತು ಬೆಟ್ಟದ ಹೂ. ಹೀಗೆ ಸಾಲು ಸಾಲಾಗಿ ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ ಅಪ್ಪು. ಬೆಟ್ಟದ ಹೂ ಚಿತ್ರಕ್ಕೆ ಬಾಲ ಕಲಾವಿದ ರಾಷ್ಟ್ರ ಪ್ರಶಸ್ತಿ ಪಡೆದರೆ, ಎರಡು ನಕ್ಷತ್ರಗಳು ಹಾಗೂ ಚಲಿಸುವ ಮೋಡಗಳು ಚಿತ್ರಕ್ಕೆ ಶ್ರೇಷ್ಟ ಬಾಲ ಕಲಾವಿದ ರಾಜ್ಯಪ್ರಶಸ್ತಿ ಪಡೆದರು. ಡಾ.ರಾಜ್ ಎನ್ನುವ ಮಹಾನ್ ನಟರ ಎದುರು ನಟಿಸಿ ಸೈ ಎನಿಸಿಕೊಂಡವರು. ಕನ್ನಡಿಗರ ಮನೆಮಾತಾಗಿ ಮಾಸ್ಟರ್ ಲೋಹಿತ್ ನಂತರ ಮಾಸ್ಟರ್ ಪುನೀತ್. ಬಾಲ ಕಲಾವಿದನಾಗಿ ಪ್ರೇಕ್ಷಕರು ಹುಬ್ಬೇರುವಂತೆ ನಟಿಸಿದ ಅಮೋಘ ದೃಶ್ಯಗಳು ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿ. ಕನ್ನಡದ ನಟಸಾರ್ವಭೌಮನಾದ ಅಪ್ಪನೆದುರು ನಟಿಸಿ ಅಪ್ಪು ತಂದೆಗೆ ತಕ್ಕ ಮಗ ಹೀಗೆನಿಸಿಕೊಂಡಿದ್ದು ಈಗ ಇತಿಹಾಸ.

ಚಿಕ್ಕಂದಿನಲ್ಲೇ ನಟನೆಯಲ್ಲಿ ಮಾತ್ರವಲ್ಲ ಗಾಯನದಲ್ಲೂ ಮನೆಮಾತಾದ ಅಪ್ಪು, ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ನಾಡುನುಡಿಗೆ ಉದಾಹರಣೆಯಾದರು. ಮಗ ದೊಡ್ಡ ಕಲಾವಿದನಾಗುತ್ತಾನೆಂದು ಅಪ್ಪ-ಅಮ್ಮನಿಗೆ ಆಗಲೇ ಭರವಸೆಯಿತ್ತು. ಡಿಪ್ಲೋಮೋ ಇನ್ ಸೈನ್ಸ್ ಓದಿ ಮುಗಿಸಿದ ಅಪ್ಪು, ೧೯೯೯ರ ಡಿಸೆಂಬರ್ ೦೧ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್‌ರನ್ನು ಕೈಹಿಡಿದರು. ಈಗ ಅವರಿಗೆ ಧೃತಿ ಮತ್ತು ವಂದಿತಾ ಇಬ್ಬರು ಪುತ್ರಿಯರು. ಬಾಲನಟನಿಂದ ನಾಯಕನಟನ ಸ್ಥಾನಕ್ಕೆ ಬರಲು ಅಪ್ಪು ಕಲಿತ ಪಾಠಗಳು ಒಂದೆರಡಲ್ಲ. ನೃತ್ಯ, ಸಾಹಸ, ಈಜು, ಇತರ ಅನೇಕ ಕಲೆಗಳನ್ನು ಕಲಿತರು. ಅಭಿನಯವಂತೂ ಅಜ್ಜ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರಿಂದ ತಂದೆ ಡಾ. ರಾಜ್‌ಕುಮಾರ್ ಅವರಿಂದ ಬಂದ ಬಳುವಳಿ. ೨೦೦೨ರಲ್ಲಿ ನಾಯಕನಟನಾಗಿ ಚಿತ್ರರಂಗಕ್ಕೆ ಮರು ಪದಾರ್ಪಣೆ ಮಾಡಿದ ಪುನೀತ್ ರಾಜ್‌ಕುಮಾರ್ ಅಲ್ಲಿಂದ ಇಲ್ಲಿಯತನಕ 27 ಚಿತ್ರಗಳಲ್ಲಿ ಅಭಿನಯಿಸಿದರು. 6 ರಾಜ್ಯಪ್ರಶಸ್ತಿ, 5 ಫಿಲ್ಮ್ಫೇರ್ ಪ್ರಶಸ್ತಿ, 4 ಸೈಮಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ನಾಡಿನಾದ್ಯಂತ ಅನೇಕ ಸಂಘ-ಸಂಸ್ಥೆಗಳು ಅಭಿನಂದಿಸಿವೆ ಗೌರವಿಸಿವೆ ಸನ್ಮಾಸಿವೆ. ಅಪ್ಪು-ಅಭಿ-ವೀರಕನ್ನಡಿಗ-ಮೌರ್ಯ-ಆಕಾಶ್-ನಮ್ಮ ಬಸವ-ಅಜಯ್-ಅರಸು-ಮಿಲನ-ಬಿಂದಾಸ್-ವಂಶಿ-ರಾಜ್ ದಿ ಶೋಮ್ಯಾನ್-ರಾಮ್-ಪೃಥ್ವಿ-ಜಾಕಿ-ಹುಡುಗರು- ಪರಮಾತ್ಮ-ಅಣ್ಣಾಬಾಂಡ್-ಯಾರೇ ಕೂಗಾಡಲಿ- ನಿನ್ನಿಂದಲೇ-ಪವರ್-ಮೈತ್ರಿ-ರಣವಿಕ್ರಮ-ಚಕ್ರವ್ಯೂಹ-ದೊಡ್ಮನೆ ಹುಡುಗ-ರಾಜಕುಮಾರ-ಅಂಜನಿಪುತ್ರ-ನಟಸಾರ್ವಭೌಮ-ಯುವರತ್ನ-ಇನ್ನೂ ತೆರಕಾಣಬೇಕಿದ್ದ ಜೇಮ್ಸ್. ಇಷ್ಟು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ ನಮ್ಮೆಲ್ಲರ ನೆಚ್ಚಿನ ಪವರ್‌ಸ್ಟಾರ್ ದಿಢೀರನೆ ನಮ್ಮನ್ನೆಲ್ಲ ಅಗಲಿ ಹೋಗಿದ್ದು ಅವರ ಕುಟುಂಬಕ್ಕೆ, ಚಿತ್ರೋದ್ಯಮಕ್ಕೆ, ಕನ್ನಡ ಚಿತ್ರಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಇಡೀ ಕನ್ನಡಿಗರಿಗೆ ದೊಡ್ಡ ಆಘಾತ. ಅವರ ಮನೋಜ್ಞ ಅಭಿನಯವನ್ನು ಯಾರೂ ಮರೆಯೋ ಹಂಗಿಲ್ಲ.

ಡ್ಯೂಪ್‌ಗಳಿಲ್ಲದೇ ನಾನೇ ನಟಿಸುತ್ತೇನೆಂದು ನಟಿಸಿದ ಸಾಹಸ ದೃಶ್ಯಗಳು ಸದಾ ಜೀವಂತ. ಕನ್ನಡ ಚಲನಚಿತ್ರಗಳಲ್ಲಿ ನೃತ್ಯಕ್ಕೆ ಮಾಧರಿಯಾಗಿ ನಿಂತ ಅಪ್ಪು ಅವರ ನೃತ್ಯ ಎಂದರೆ ಹಸುಗೂಸುಗಳಿಗೂ ಅಚ್ಚುಮೆಚ್ಚು. ಮೇರುನಟನ ಮಗನೆಂಬ ದರ್ಪವಿಲ್ಲದೇ, ಅಪ್ಪನ ಆದರ್ಶಗಳನ್ನು-ಸರಳತೆಯನ್ನು-ಸೌಜನ್ಯವನ್ನು ತನ್ನದಾಗಿಸಿಕೊಂಡು ಕಿರಿಯರಲ್ಲಿ ಕಿರಿಯನಾಗಿ ನಡೆದುಬಂದ ಅಪ್ಪು, ತಲೆ ಎತ್ತಿ ನಿಲ್ಲಬೇಕಾದರೆ ತಲೆಬಾಗಿ ನಡೆಯಬೇಕೆಂಬ ಸೂಕ್ತಿಯನ್ನು ಅಕ್ಷರಶಃ ಪಾಲಿಸಿದವರು. ನಿರ್ಮಾಪಕರಿಗೆ-ನಿರ್ದೇಶಕರಿಗೆ-ಕಥೆಗಾರರಿಗೆ-ನೃತ್ಯ ನಿರ್ದೇಶಕರಿಗೆ-ನೃತ್ಯಗಾರರಿಗೆ-ಗೀತ ಸಾಹಿತಿಗಳಿಗೆ-ಸಂಗೀತ ನಿರ್ದೇಶಕರಿಗೆ-ಗಾಯಕರಿಗೆ-ಛಾಯಾಗ್ರಾಹಕರಿಗೆ-ಸಾಹಸ ಕಲಾವಿದರಿಗೆ-ಲೈಟ್‌ಮ್ಯಾನ್‌ನಿಂದ ಹಿಡಿದು ಗೋಡೆಗೆ ಪೋಸ್ಟರ್ ಅಂಟಿಸುವ ತನಕ ಎಲ್ಲರೊಂದಿಗೆ ನಗುನಗುತ್ತಾ, ಆತ್ಮೀಯವಾಗಿ ಸೌಜನ್ಯದಿಂದ ವರ್ತಿಸುತ್ತಿದ್ದ ಅಪ್ಪುಗೆ ಪ್ರೀತಿಯ ಅಪ್ಪು ಅಜರಾಮರ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರವಲ್ಲದೇ ಇತರೆ ಎಲ್ಲಾ ಸಂಘ-ಸಂಸ್ಥೆಗಳೊಟ್ಟಿಗಿನ ಅಪ್ಪು ಅವರ ನಂಟು ಮರೆಯಲು ಸಾಧ್ಯವಿಲ್ಲ. ಕಾವೇರಿ ವಿವಾದ, ಮಹದಾಯಿ, ಮುಂತಾದ ಕನ್ನಡ ಪರ ಹೋರಾಟಗಳಲ್ಲಿ ಮುಂದೆ ನಿಲ್ಲುತ್ತಿದ್ದುದ್ದನ್ನು ಕನ್ನಡಿಗರು ಮರೆಯಲು ಸಾಧ್ಯವೇ ? ಇಲ್ಲಿಯವರೆಗೂ ನಾವು ನೋಡಿದ ಅಪ್ಪು ಚಿತ್ರರಂಗದ ಪವರ್‌ಸ್ಟಾರ್. ಇದರಿಂದಾಚೆಗೆ ಇವತ್ತು ಜಗತ್ತೇ ತಿರುಗಿ ನೋಡುತ್ತಿರುವ ಅಪ್ಪು, ಬೇರೆ ಬೇರೆ ದೇಶದ ಜನರ ಕಣ್ಣಲ್ಲಿ ನೀರು ತರಿಸಿದ ಅಪ್ಪು, ಕೊಡುಗೈ ದಾನಿ ಅಪ್ಪು, ಯುವರತ್ನ ಮಾತ್ರವಲ್ಲ ಸೇವಾರತ್ನ ಅಪ್ಪು, ಸದ್ದಿಲ್ಲದೇ ಸಾವಿರಾರು ಬದುಕುಗಳಿಗೆ ಬೆಳಕಾದ ಅಪ್ಪು, ಸಾವಿನಲ್ಲೂ ಸಾರ್ಥಕತೆ ಮೆರೆದು ನೇತ್ರದಾನ ಮಾಡಿದ ಅಪ್ಪು, ಒಂದು ದೊಡ್ಡ ಸಂಸ್ಥೆ ಮಾಡಬಹುದಾದದ್ದನ್ನು ಒಬ್ಬ ವ್ಯಕ್ತಿಯಾಗಿ ಸಾಧಿಸಿದ ಅಪ್ಪು, ಅಬ್ಬಾ.. ಒಂದೇ.. ಎರಡೇ..

ಹಣ ಪಡೆಯದೇ ಸಮಾಜಮುಖಿಯಾಗಿ ಕರ್ನಾಟಕ ಸರ್ಕಾರದ ಹಾಲು-ಒಕ್ಕೂಟದ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿದ್ದರು. ಎಲ್.ಇ.ಡಿ ಬಲ್ಬ್ ಯೋಜನೆಗಳ ರಾಯಭಾರಿಯಾಗಿದ್ದರು. ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ತಂಡದ ಆರ್‌ಸಿಬಿಗೆ ರಾಯಭಾರಿಯಾಗಿದ್ದರು. ಬಿಎಂಟಿಸಿ ಬಸ್ ಹಾಗೂ ರಾಜ್ಯ ಚುನಾವಣಾ ಕಮಿಷನ್‌ಗೂ ಸಹ ರಾಯಭಾರಿಯಾಗಿ ಅವರ ಜನಪರ ಕಾಳಜಿ ತೋರಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ ನೀಡಲು ಡಾ.ರಾಜ್‌ಕುಮಾರ್ ಅವರ ಹೆಸರಲ್ಲಿ ಐಎಎಸ್ ಮತ್ತು ಎಪಿಎಸ್ ತರಭೇತಿ ಸಂಸ್ಥೆ ತೆರೆದಿದ್ದರು. ಪಿ.ಆರ್.ಕೆ ಎಂಬ ಸಂಸ್ಥೆಯಡಿ ಹೊಸ ಹೊಸ ಬಗೆಯ ಚಿತ್ರಗಳನ್ನು ತಯ್ಯಾರಿಸುತ್ತಿದ್ದರು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದರು. ಪಿಆರ್‌ಕೆ ಆಡಿಯೋ ಸಂಸ್ಥೆಯನ್ನು ನಿರ್ಮಿಸಿ ಆಡಿಯೋ ಹಕ್ಕುಗಳನ್ನು ಪಡೆಯುತ್ತಿದ್ದರು. ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿಗೆ ನಿರೂಪಕರಾಗಿ ಮಾತ್ರವಲ್ಲದೇ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದರು. ಕನ್ನಡಕ್ಕೆ ಹೊಸ ತಂತ್ರಜ್ಞಾನ ಪರಿಚಯಿಸಬೇಕೆನ್ನುವ ಹಂಬಲವಿಟ್ಟುಕೊಂಡಿದ್ದ ಅಪ್ಪು ಎಲ್ಲವನ್ನೂ ಅರ್ಧದಲ್ಲಿ ಬಿಟ್ಟು ಹೋದದ್ದು ನಮ್ಮೆಲ್ಲರಿಗೂ ತುಂಬಲಾರದ ನಷ್ಟ.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಸಂಭಾವನೆಯನ್ನು ಪರೋಪಕ್ಕಾರಕ್ಕೆ ನೀಡಿದ, ಆರೂವರೆ ಕೋಟಿ ಕನ್ನಡಿಗರ ಹೃದಯದ ಯುವರತ್ನ ಅನೇಕ ಗೀತೆಗಳನ್ನು ಹಾಡಿ ಅದರಿಂದ ಬಂದ ಸಂಭಾವನೆಯನ್ನು ಆಶ್ರಮಗಳಿಗೆ ನೀಡುತ್ತಿದ್ದರು. ಸಾವಿರಾರು ಜನರಿಗೆ ವಿದ್ಯಾರ್ಜನೆ, ಮಕ್ಕಳ ವಿದ್ಯಾಭ್ಯಾಸ, ಗೋಶಾಲೆಗಳಿಗೆ-ವೃದ್ಧಾಶ್ರಮಕ್ಕ- ತಮ್ಮದೇ ಕುಟುಂಬದ ಶಕ್ತಿಧಾಮ ಆಶ್ರಮಕ್ಕೆ ತಮ್ಮ ಸಂಭಾವನೆಯ ಬಹುಪಾಲು ಹಣವನ್ನು ನೀಡುತ್ತಿದ್ದರು. ಸಮಾಜಮುಖಿಯಾಗಿ ಬದುಕಿ-ಬಾಳಿದ ಪುಣ್ಯಾತ್ಮ ಪುನೀತ್ ರಾಜ್‌ಕುಮಾರ್ 29 ಅಕ್ಟೋಬರ್
2021ರಂದು ಹೃದಯಾಘಾತಕ್ಕೆ ಒಳಗಾಗಿ ನಮ್ಮನ್ನು ಅಗಲಿದ ಶ್ರೀ ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀದ ದರ್ಶನಕ್ಕೆ ಒಂದು ಲೆಕ್ಕದ ಪ್ರಕಾರ ಮಹಾತ್ಮ ಗಾಂಧೀಜೀಯವರ ಅಂತಿಮ ದರ್ಶನಕ್ಕೆ ಬಂದಿದ್ದಕ್ಕೆ ಹೆಚ್ಚಿನ ಜನರು ಬಂದಿದ್ದರು ಎನ್ನುವ ಮಾತಿದೆ. ಪುನೀತ್ ರಾಜ್‌ಕುಮಾರ್ ಅವರ ಕೀರ್ತಿ ದೊಡ್ಡದು.. ಬಹಳ ದೊಡ್ಡದು.

error: Content is protected !!