ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾಗಳು ಅಂದರೆ ವಿಭಿನ್ನವಾಗಿಯೇ ಇರುತ್ತವೆ. ಸದಾ ಡಿಫರೆಂಟ್ ಶೈಲಿಯೇ ಚಿತ್ರ ಮಾಡುವುದರಲ್ಲಿ ಸದಾ ಮುಂದೆ. ಹೊಸತನದ ಹೆಜ್ಜೆಗಳನ್ನು ಇಡುವ ಆರ್ ಜಿವಿ ಈಗ ಸಮರ ಕಲೆಯಾಧಾರಿತ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದು, ಆ ಚಿತ್ರ ಹುಡುಗಿ ಎಂಬ ಶೀರ್ಷಿಕೆಯಡಿ ಕನ್ನಡದಲ್ಲೂ ರಿಲೀಸ್ ಮಾಡಲಾಗ್ತಿದೆ. ಇದೇ 15ಕ್ಕೆ ಚಿತ್ರ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ರಾಮ್ ಗೋಪಾಲ್ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರ ನಡೆಸಿದರು.
ಮಾಧ್ಯಮಗಳೊಟ್ಟಿಗೆ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇದು ತುಂಬಾ ವಿಶೇಷವಾದ ಸಿನಿಮಾ. ನಾನು ಚಿಕ್ಕವನಿದ್ದಾಗ ಎಂಟರ್ ದಿ ಡ್ರ್ಯಾಗನ್ ಸಿನಿಮಾ ನೋಡಿದ್ದೆ. ಆ ಕಥೆಯ ನಾಯಕ ಬ್ರೂಸ್ಲಿಯಿಂದ ಸ್ಪೂರ್ತಿಯಿಂದ ಈ ಸಿನಿಮಾ ಮಾಡಿದ್ದು, ಮಾರ್ಷಲ್ ಆರ್ಟ್ಸ್ ಗೆ ಸಂಬಂಧಪಟ್ಟ ಸಿನಿಮಾವಾಗಿದೆ.
ಈ ಕಲೆ ಮಾಡುವವರ ಸಂಖ್ಯೆ ತೀರಾ ವಿರಳ. ಅದ್ರಲ್ಲೂ ಹೆಣ್ಣು ಮಕ್ಕಳು ಮಾಡೋದು ಕಡಿಮೆ. ನಾಯಕಿ ಪೂಜಾ ಹನ್ನೆರೆಡು ವರ್ಷದಿಂದ ಸಮರಕಲೆ ಅಭ್ಯಾಸ ಮಾಡ್ತಿದ್ದು, ಹೀಗಾಗಿ ಆಕೆಯನ್ನು ನಾಯಕಿಯನ್ನು ಆಕೆ ಮಾಡಲಾಗಿದೆ. ಟ್ರಯಾಂಗಲ್ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿದೆ ಎಂದು ತಿಳಿಸಿದರು.
ಹುಡುಗಿ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮಾರ್ಷಲ್ ಆರ್ಟ್ಸ್ ಹಿನ್ನೆಲೆಯಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಸಿನಿಮಾದಲ್ಲಿ ಪೂಜಾ ಭಾಲೇಕರ್ ನಾಯಕಿಯಾಗಿ ನಟಿಸಿದ್ದಾರೆ. ಭಾರತ ಹಾಗೂ ಚೀನಾದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಸಿನಿಮಾ ಚೀನಾದಲ್ಲಿ ಬಿಡುಗಡೆಯಾಗುತ್ತಿದೆ. ಆರ್ಟ್ಸಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬೆಳ್ಳಿತೆರೆಗೆ ಜುಲೈ 15ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.
ಅವನ ಹೆಸರು ವೆಂಕಿ ಅಲಿಯಾಸ್ ವೆಂಕಟೇಶ. ವಯಸ್ಸು 28. ಸದಾ ರಾಯಲ್ ಫ್ಯಾಮಿಲಿ ಅನ್ನೋ ಬಿಲ್ಡಪ್. ಲೈಫಲ್ಲಿ ಡಿಸಿಪ್ಲೀನ್ ಇಲ್ಲದ ಹುಡುಗ. ಸದಾ ಲವಲವಿಕೆಯಲ್ಲಿರೋ ಅಂಥಾ ಹುಡುಗ ಇದ್ದಕ್ಕಿದ್ದಂತೆ ದಂಗು ಬಡಿದವನಂತಾಗುತ್ತಾನೆ. ಆಮೇಲೆ ಸಿನಿಮಾ ಕಥೆ ಹೆಂಗೆಲ್ಲಾ ನಗಿಸಿಕೊಂಡು ಹೋಗುತ್ತೆ ಅನ್ನೋದೇ ಮಜವೆನಿಸೋ ಕಥೆ.
ನಿಜ ಹೇಳೋದಾದರೆ, ಇದಕ್ಕೆ ಶುಗರ್ ಲೆಸ್ ಎಂಬ ಹೆಸರು ಬರೀ ಹೆಸರಷ್ಟೆ. ಕಥೆಯಲ್ಲಿ ಎಷ್ಟು ಬೇಕೋ ಅಷ್ಟು ಸಿಹಿ ತುಂಬಿದೆ. ಚಿತ್ರಕಥೆಯೊಳಗೆ ಜೇನು ಕೂಡ ಮಿಕ್ಸ್ ಆಗಿದೆ. ಡ್ರೈ ಫ್ರೂಟ್ಸ್ ಜೊತೆ ಜಾಮೂನು ತಿಂದಷ್ಟೇ ನಿರೂಪಣೆಯ ರುಚಿಯೂ ಇದೆ. ಒಟ್ಟಾರೆ, ಇಡೀ ಸಿನಿಮಾ ನಗುವಿನ ರಸದೌತಣ ಉಣಬಡಿಸುತ್ತಲೇ ನೊಡುಗರನ್ನು ಅತ್ತಿತ್ತ ಅಲ್ಲಾಡದಂತೆ ನೋಡಿಸಿಕೊಂಡು ಹೋಗುತ್ತೆ. ಬದುಕಲ್ಲಿ ಶುಗರ್ ಇದ್ದವರೂ ಈ ಶುಗರ ಲೆಸ್ ಸಿನಿಮಾ ನೋಡಿದರೆ ಮೈಗಂಟಿರುವ ಶುಗರ್ ಮರೆತು ಸಿಹಿ ಬದುಕು ಕಟ್ಟಿಕೊಳ್ಳುವಷ್ಟರ ಮಟ್ಟಿಗೆ ನಿರ್ದೇಶಕ ಶಶಿಧರ್ ಕೆ.ಎಂ. ನಿರೂಪಿಸಿದ್ದಾರೆ.
ಹೊಡಿ, ಬಡಿ, ಕಡಿ ಎಂಬ ಸಿನಿಮಾಗಳ ನಡುವೆ ಮನಸ್ಸಿಗೆ ಖುಷಿ ಕೊಡುವ ಕಂಟೆಂಟ್, ಎರಡು ತಾಸು ಎಲ್ಲವನ್ನು ಮರೆಸಿ ನಗೆಗಡಲಲ್ಲಿ ತೇಲಿಸುತ್ತೆ. ಇಲ್ಲಿ ನಿರ್ದೇಶಕರ ಕಥೆ ಹೈಲೆಟ್. ಆ ಕಥೆಯನ್ನು ನಿರೂಪಿಸಿರುವ ರೀತಿ ಕೂಡ ಇಷ್ಟವಾಗುತ್ತೆ. ಮೊದಲ ಬಾಲ್ ನಲ್ಲೇ ಸಿಕ್ಸ್ ಹೊಡೆದಂತೆ ಚೊಚ್ಚಲ ನಿರ್ದೇಶನದಲ್ಲೇ ಅವರು ಸಾಬೀತುಪಡಿಸಿದ್ದಾರೆ. ಇಂಥದ್ದೊಂದು ಕಥೆಯಲ್ಲೂ ಅಷ್ಟೊಂದು ರಂಗು ತುಂಬಿ ರಂಜಿಸಬಹುದು ಅಂತ ತೋರಿಸಿಕೊಟ್ಟಿದ್ದಾರೆ.
ಒಂದೊಳ್ಳೆಯ ಸಿನಿಮಾದಲ್ಲಿ ಏನೆಲ್ಲಾ ಇರಬೇಕೋ ಆ ಎಲ್ಲಾ ಪಾಕವೂ ಇಲ್ಲುಂಟು. ಹಾಗಾಗಿ ಶುಗರ್ ಲೆಸ್ ಸಖತ್ ಟೇಸ್ಟ್ ಎನಿಸೋ ಕರದಂಟಿನಂತಹ ಸಿನಿಮಾ ಅಂತ ಮುಲಾಜಿಲ್ಲದೆ ಹೇಳಬಹುದು.
ಶುಗರ್ ಕಥೆ ಏನು?
ಟಾಯ್ಲೆಟ್ ಇಲ್ಲದಿರೋ ಮನೆ ಸಿಗುತ್ತೆ, ಆದರೆ ಟ್ಯಾಬ್ಲೆಟ್ ಇಲ್ಲದಿರೋ ಮನೆ ಸಿಗುತ್ತಾ? ಇದು ಕಥೆಯ ಕಾನ್ಸೆಪ್ಟ್. ಇಲ್ಲಿನ ಕಥಾ ನಾಯಕ 28 ವರ್ಷದ ವೆಂಕಟೇಶನಿಗೆ ಶುಗರ್ ಇರೋದು ಗೊತ್ತಾಗುತ್ತೆ. ಲೈಫಲ್ಲಿ ಶಿಸ್ತು ಇಲ್ಲದ ವೆಂಕಿಗೆ ಗುಂಡು ಹಾಕೋದೇ ಜೀವನ. ಅದರಲ್ಲೂ ಅವನ ಕುಚೇಷ್ಟೆಗಳಿಂದಲೇ ಸಿಕ್ಕ ಕೆಲಸಗಳೆಲ್ಲವೂ ಗೋತಾ. ಹೀಗಿರುವಾಗ ಅವನೊಂದು ಸಕ್ಕರೆಯಂತಹ ಹುಡುಗಿಗೆ ಫಿದಾ ಆಗ್ತಾನೆ. ಆಮೇಲೆ ಮದ್ವೆ ಆಗೋಕೂ ತಯಾರಿ ನಡೆಸ್ತಾನೆ. ಮದ್ವೆಗೂ ಮುನ್ನ ಅವನಿಗೆ ಶುಗರ್ ಇರೋದು ಗೊತ್ತಾಗುತ್ತೆ. ಅತ್ತ ದಂಗಾಗುವ ವೆಂಕಿ ಡಲ್ ಆಗ್ತಾನೆ. ಶುಗರ್ ತುಂಬಿಕೊಂಡು ಹೆಂಗೆಲ್ಲಾ ಒದ್ದಾಡ್ತಾನೆ ಅನ್ನೋದೆ ಕಥೆ. ಮೊದಲರ್ಧ ಜಾಲಿ. ದ್ವಿತಿಯಾರ್ಧವೂ ಫುಲ್ ಜಾಲಿ. ಈ ಜಾಲಿ ಮೂಡ್ ನಲ್ಲೇ ಸಾಗುವ ಕಥೆಯಲ್ಲಿ ಆಗಾಗ ಎಮೋಷನ್ಸ್ ಕೂಡ ಇಣುಕಿ ಹಾಕುತ್ತೆ. ಒಂದಷ್ಟು ಭಾವುಕ ಅನಿಸಿದರೂ, ಅದರೊಳಗೂ ನಗುವಿಟ್ಟು ಖುಷಿ ತುಂಬಿಸಿದ್ದಾರೆ ನಿರ್ದೇಶಕರು.
ಈ ವೆಂಕಿ ಜೊತೆ ವಿಭಿನ್ನ ಅಭಿರುಚಿ ಇರೋ ಮೂರು ಕುದುರೆಗಳು ಜತೆಯಾಗುತ್ತವೆ. ಹಾಸ್ಯದ ಮಧ್ಯೆ ಬದುಕಿನ ಪಾಠ ಹೇಳಿಕೊಡುವ ವಯಸ್ಕ ಗೆಳೆಯರ ಮಾತು ಕಥೆ ಮತ್ತು ವ್ಯಥೆ ಸಿನಿಮಾದ ಹೈಲೆಟ್. ಶುಗರ್ ಬಂದ ವೆಂಕಿ ಅದನ್ನು ಹೇಳಿಕೊಂಡರೆ ಏನೆಲ್ಲಾ ಸಮಸ್ಯೆ ಎದುರಾಗಬಹುದು ಅಂತಂದುಕೊಂಡು ಪೇಚೆಗೆ ಸಿಕ್ಕಿ ಒದ್ದಾಡುವ ಸನ್ನಿವೇಶಗಳು ನಗೆಗಡಲಲ್ಲಿ ತೇಲಿಸುತ್ತವೆ.
ಯಾರ ಕೆಲಸ ಹೇಗೆ?
ಒಂದು ಸಿನಿಮಾ ಅಂದರೆ ಬರೀ ಕಥೆಯಲ್ಲ, ಅದಕ್ಕೆ ಸರಿಯಾದ ಸಂಗೀತ, ಸಾಹಿತ್ಯ, ಛಾಯಾಗ್ರಹಣ ಇರಬೇಕು. ಜೊತೆಗೆ ಇಂತಹ ಹಾಸ್ಯಮಯ ಕಥೆಗೆ ಕಚಗುಳಿ ಇಡುವ ಮಾತುಗಳೇ ಜೀವಾಳ. ಅಂಥದ್ದೊಂದು ಒಳ್ಳೆಯ ತಂತ್ರಜ್ಞರ ಸ್ಪರ್ಶ ಇಲ್ಲಿದೆ. ಅನೂಪ್ ಸೀಳಿನ್ ಹಾಡು ಮತ್ತು ಹಿನ್ನೆಲೆ ಸಂಗೀತ ಮೂಲಕ ಇಷ್ಟ ಆಗುತ್ತಾರೆ. ಅಲ್ಲಲ್ಲಿ ಹಿನ್ನೆಲೆ ಸಂಗೀತದ ಒಂದೇ ಒಂದು ಬಿಟ್ ಮಾತ್ರ, ರವಿಚಂದ್ರನ್ ಸಿನಿಮಾವೊಂದರ ಹಾಡಿನ ಟ್ಯೂನ್ ನೆನಪಿಸುತ್ತದೆ. ಉಳಿದಂತೆ ಅನೂಪ್ ಅವರ ಸಂಗೀತ ಕಥೆಗೆ ಪೂರಕ. ಗುರುರಾಜ್ ಕಶ್ಯಪ್ ಅವರ ಮಾತಿಲ್ಲಿ ಜೋರು ಸದ್ದು ಮಾಡಿದೆ. ಪ್ರತಿ ಪಾತ್ರಗಳ ಮಾತಲ್ಲೂ ನಗೆಬುಗ್ಗೆ ಇದೆ ಅಂದರೆ ಅದಕ್ಕೆ ಅವರು ಪೋಣಿಸಿರುವ ಮಾತೇ ಕಾರಣ. ಇನ್ನು, ಸಿನಿಮಾ ಲವಿತ್ ಕ್ಯಾಮೆರಾ ಕೈಚಳಕ ಸಿನಿಮಾ ಜೇನು ತುಪ್ಪವಾಗಲು ಕಾರಣ. ಕಥೆಯ ವೇಗಕ್ಕೆ ರವಿಚಂದ್ರನ್ ಕತ್ತರಿ ಕೆಲಸ ಸಾಥ್ ನೀಡಿದೆ.
ತೆರೆ ಮೇಲಿನ ಹೈಲೆಟ್
ಪೃಥ್ವಿ ಅಂಬರ್ ಸಿನಿಮಾದ ಕೇಂದ್ರ ಬಿಂದು. ನಗಿಸುವ ಮೂಲಕ ಮತ್ತಷ್ಟು ಇಷ್ಟವಾಗುತ್ತಾರೆ. ಅವರ ನಟನೆ, ಡ್ಯಾನ್ಸ್ ಮತ್ತೊಂದು ಹೈಲೆಟ್. ಪ್ರಿಯಾಂಕ ತಿಮ್ಮೇಶ್ ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ಹಿರಿಯ ಕಲಾವಿದ ದತ್ತಣ್ಣ ಇಲ್ಲಿ ಕಾಡುತ್ತಾರೆ. ಡಾಕ್ಟರ್ ಆಗಿ ಎಸ್. ನಾರಾಯಣ್ ಇದ್ದಷ್ಟು ಸಮಯ ನಗಿಸುತ್ತಾರೆ. ಧರ್ಮಣ್ಣ, ನವೀನ್ ಡಿ.ಪಡೀಲ್, ರಘು ರಾಮನಕೊಪ್ಪ, ಪದ್ಮಜಾರಾವ್, ಗಿರೀಶ್ ಜತ್ತಿ ಇತರರು ಸಿನಿಮಾ ವೇಗಕ್ಕೆ ಹೆಗಲು ಕೊಟ್ಟಿದ್ದಾರೆ.
ಗೋಲ್ಡನ್ ಹಾರ್ಟ್ಸ್ ಸಂಸ್ಥೆ ಯಲ್ಲಿ ಕೆ.ಕೆ. ಅಶ್ರಫ್ ನಿರ್ಮಿಸಿ, ಹೆಚ್.ಬಿ. ಸಿದ್ದು ನಿರ್ದೇಶನದ ನಮ್ಮ ಹುಡುಗರು ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿದ್ದಾರೆ. ಇದೇ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ನಮ್ಮ ಹುಡುಗರು ಚಿತ್ರದ ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನೆರವೇರಿತು. ರಾಘವೇಂದ್ರ ರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ವಸಿಷ್ಠ ಸಿಂಹ, ಧನ್ಯ ರಾಮ್ ಕುಮಾರ್, ಲಹರಿ ವೇಲು, ಕಾರುಣ್ಯ ರಾಮ್, ಸಂಯುಕ್ತ ಹೆಗಡೆ ಮುಂತಾದವರು ಪಾಲ್ಗೊಂಡಿದ್ದರು.
ಈ ಸಮಾರಂಭಕ್ಕೆ ಕಿಚ್ಚ ಸುದೀಪ್ ಅವರು ಆಗಮಿಸಬೇಕಿತ್ತು. ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗಿರಲಿಲ್ಲ. ಸುದೀಪ್ ವಿಡಿಯೋವೊಂದನ್ನು ಕಳುಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ʻʻನಮ್ಮ ಹುಡುಗರು ಚಿತ್ರದ ಕಾರ್ಯಕ್ರಮಕ್ಕೆ ನೇರವಾಗಿ ಬರಬೇಕೆನ್ನುವ ಬಯಕೆ ಇತ್ತು. ಕಾಲಿಗೆ ಪೆಟ್ಟು ಬಿದ್ದಿರುವುದರಿಂದ ಅದು ಸಾಧ್ಯವಾಗಿಲ್ಲ. ಉಪೇಂದ್ರ ಅವರ ಕುಟುಂಬದಿಂದ ಬರುತ್ತಿರುವ ಪ್ರತಿಭೆ ನಿರಂಜನ್ ಸುಧೀಂದ್ರ. ಖಂಡಿತಾ ಕರ್ನಾಟಕದ ಜನ ಇವರನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ನಿರಂಜನ್ ನಟನೆಯ ಪ್ರೋಮೋ, ಹಾಡುಗಳನ್ನು ನೋಡಿದ್ದೀನಿ. ಕನ್ನಡ ಚಿತ್ರರಂಗದಲ್ಲಿ ನಿರಂಜನ್ ದೊಡ್ಡ ಮಟ್ಟದಲ್ಲಿ ನಿಲ್ಲುತ್ತಾರೆ. ಇವರಿಗೆ ನನ್ನ ಸಹಕಾರ ಯಾವತ್ತಿಗೂ ಇದ್ದೇ ಇರುತ್ತದೆʼʼ ಎಂದರು ಕಿಚ್ಚ.
ಈ ಕಾರ್ಯಕ್ರಮ, ಈ ಹಾಡು, ಈ ವೇದಿಕೆ ನಮ್ಮ ಕುಟುಂಬಕ್ಕೆ ತುಂಬಾ ಕನೆಕ್ಟ್ ಆಗಿದೆ. ಈ ಚಿತ್ರದ ಹೆಸರು ನಮ್ಮ ಹುಡುಗರು. ನಾವು ಹುಡುಗರು ಅಂತಾ ಹಿಂದೆ ಚಿತ್ರ ಮಾಡಿದ್ವಿ. ಉಪೇಂದ್ರ ನಮ್ಮ ಸಂಸ್ಥೆಗೆ ಓಂ, ಸ್ವಸ್ತಿಕ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇಂದಿಗೂ ಉಸಿರಾಡುತ್ತಿರುವ ಜೀವಂತ ಸಿನಿಮಾಗಳು ಅವು. ʻನಮ್ಮ ಹುಡುಗರುʼ ಚಿತ್ರಕ್ಕಾಗಿ ನನ್ನ ತಮ್ಮ ಹಾಡಿರುವ ಹಾಡನ್ನು ನಾನು ಈಗ ಬಿಡುಗಡೆ ಮಾಡಿದ್ದೀನಿ. ಅವನು ಮಾಡಿಟ್ಟು ಹೋಗಿರುವ ಕೆಲಸ ಇನ್ನೂ ಉಳಿದಿದೆ ಅನ್ನೋದು ನನಗೆ ಹೆಮ್ಮೆ ಅನ್ನಿಸುತ್ತದೆ. ನಿರಂಜನ್ ಅವರನ್ನು ನೋಡಿದಾಗ ನನಗೆ ಖುಷಿ ಆಗುತ್ತದೆ. ಪ್ಯಾನ್ ಇಂಡಿಯಾ ಪ್ರಾಡಕ್ಟ್ ಇವರು. ಇವರಿಗಾಗಿ ಉಪೇಂದ್ರ ಅವರು ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕು. ಆ ಮೂಲಕ ನಿರಂಜನ್ ಇಡೀ ಭಾರತದಲ್ಲಿ ಹೆಸರು ಮಾಡಬೇಕುʼʼ ಎಂದು ಆಶಯ ವ್ಯಕ್ತಪಡಿಸಿ, ಹಾರೈಸಿದರು.
ಉಪೇಂದ್ರ ಅವರು ಮಾತನಾಡಿ ನಾನು ಈಗಾಗಲೇ ಸಿನಿಮಾ ನೋಡಿದ್ದೀನಿ. ನಿರ್ದೇಶಕ ಸಿದ್ದು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಯಾರೂ ಊಹೆ ಮಾಡಲಾರದ ಟ್ವಿಸ್ಟು, ಟರ್ನುಗಳನ್ನು ಇಟ್ಟಿದ್ದಾರೆ. ಇದು ಸಿದ್ದು ಅವರ ಮೊದಲ ಸಿನಿಮಾ ಅಂತ ಅನ್ನಿಸೋದೇ ಇಲ್ಲ. ರಾಘಣ್ಣ ತುಂಬಾ ಅರ್ಥಪೂರ್ಣವಾಗಿ ಮಾತಾಡಿದರು. ಸಿನಿಮಾ ಬರೀ ನಮ್ಮ ಜನರೇಷನ್ನಿಗೆ ಮುಗಿದು ಹೋಗಬಾರದು ಎನ್ನುವ ಅವರ ಅಭಿಪ್ರಾಯ ಖಂಡಿತಾ ನಿಜ. ಹಾಗೇ ನನ್ನ ನಿರ್ದೇಶನದಲ್ಲಿ ನಿರಂಜನ್ ನಟನೆಯ ಸಿನಿಮಾ ಅತೀ ಶೀಘ್ರದಲ್ಲೇ ಶುರು ಮಾಡ್ತೀನಿ. ಎಂದು ಹೇಳಿ ಅಣ್ಣನ ಮಗನ ಚಿತ್ರದ ಟ್ರೇಲರ್ ಲಾಂಚ್ ಮಾಡಿದರು. ʻʻನಮ್ಮನೆ ಹುಡುಗನ ಬಗ್ಗೆ ನಾವು ಹೆಚ್ಚು ಮಾತಾಡಬಾರದು. ಸಿನಿಮಾ ಮಾತಾಡುವಂತಾಗಲಿʼʼ ಎಂದು ಪ್ರಿಯಾಂಕ ಹೇಳಿದರು.
ಚಿತ್ರದ ನಾಯಕಿ ರಾಧ್ಯಾ ಮಾತನಾಡುತ್ತಾ, ನನಗೆ ಶಿವಣ್ಣ, ರಾಘಣ್ಣ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಆದರೆ ಅಪ್ಪು ಸರ್ ಅವರನ್ನು ಕಣ್ಣಾರೆ ನೋಡುವ ಸಂದರ್ಭ ಸಿಕ್ಕಿರಲಿಲ್ಲ. ನನ್ನ ನಟನೆಯ ಸಿನಿಮಾದಲ್ಲಿ ಅವರು ಒಂದು ಹಾಡು ಹಾಡಿದ್ದಾರೆ. ಆ ಮೂಲಕ ಅವರ ಆಶೀರ್ವಾದ ನಮ್ಮ ಮೇಲೆ ಇದೆ ಅಂತಾ ಭಾವಿಸಿದ್ದೇನೆ ಎಂದು ಹೇಳುತ್ತಾ ಭಾವುಕರಾದರು.
ಇನ್ನು ಚಿತ್ರದ ನಾಯಕ ನಿರಂಜನ್ ಸುಧೀಂದ್ರ ಕಿಚ್ಚ ಸುದೀಪ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ. ಆದರೆ ಶೀಘ್ರದಲ್ಲೇ ಅವರು ಇಂಥದ್ದೇ ಸಮಾರಂಭದಲ್ಲಿ ನಮ್ಮ ಜೊತೆಯಾಗುತ್ತಾರೆ ಎಂದರು.
ಸಂಗೀತ ನಿರ್ದೇಶಕ ಅಭಿಮನ್ ರಾಯ್ ಮಾತನಾಡಿ, ʻʻಒಬ್ಬ ಕಲಾವಿದರಾಗಬೇಕು ಅಂದರೆ ನಲವತ್ತು ಜನ್ಮದ ಪುಣ್ಯ ಮಾಡಿರಬೇಕು ಅಂತಾರೆ. ಅಪ್ಪು ಸರ್ ನಾನ್ನೂರು ಜನುಮದ ಪುಣ್ಯ ಮಾಡಿದ್ದವರು. ನಾನು ಈ ಚಿತ್ರಕ್ಕಾಗಿ ಹಾಡನ್ನು ರೆಕಾರ್ಡ್ ಮಾಡಿಸಿಕೊಳ್ಳಲು ಹೋದಾಗ ತಕ್ಷಣಕ್ಕೆ ಅವರಿಗೆ ನನ್ನ ಗುರುತು ಸಿಕ್ಕಿರಲಿಲ್ಲ. ನಂತರ ಈ ಹಿಂದೆ ನಾನು ಮಾಡಿರುವ ಸಿನಿಮಾಗಳ ಬಗ್ಗೆ ತಿಳಿದು, ತುಂಬಾ ಸಂತೋಷ ಪಟ್ಟರು.ʼʼ ಎಂದರು. ಚಿತ್ರಕ್ಕೆ ಚಿದಾನಂದ್ ಹೆಚ್.ಕೆ. ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನವಿದೆ.
ನಟಿ ಅನಿತಾ ಭಟ್ ಅಂದಾಕ್ಷಣ ನೆನಪಾಗೋದೇ ಹಾಟ್ ಬೆಡಗಿ ಲುಕ್. ಹೌದು ಅನಿತಾಭಟ್ ನಟಿಯಾಗಿ ಈಗಾಗಲೇ ಸಾಕಷ್ಟು ಸುದ್ದಿಯಾಗಿದ್ದಾರೆ. ಅದು ಹಳೇ ಸುದ್ದಿ. ಆದರೆ ಅವರು ನಿರ್ಮಾಪಕಿಯಾಗಿಯೂ ಎಂಟ್ರಿಯಾಗಿದ್ದಾರೆ ಅನ್ನೋದು ಹೊಸ ಸುದ್ದಿಯಂತೂ ಅಲ್ಲ ಬಿಡಿ. ಅವರು ಈಗಾಗಲೇ ತಮ್ಮ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂದು ಸಿನಿಮಾ ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿದ್ದಾರೆ. ಅವರು ಸದ್ದಿಲ್ಲದೆಯೇ ಇಂದಿರಾ ಎಂಬ ಸಿನಿಮಾ ಮಾಡಿದ್ದಾರೆ.
ಅದೀಗ ರಿಲೀಸ್ ಆಗುತ್ತಿದೆ ಅನ್ನೋದೇ ವಿಶೇಷ. ಹೌದು. ಅನಿತಾ ಭಟ್ ನಿರ್ಮಾಣದ ಮೊದಲ ಸಿನಿಮಾ ಮೊದಲನೇ ಸಿನಿಮಾ “ಇಂದಿರಾ”. ಈ ಚಿತ್ರ ಜುಲೈ 8ಕ್ಕೆ ರಿಲೀಸ್ ಅಗುತ್ತಿದೆ. ಅದು ವೂಟ್ ಸೆಲೆಕ್ಟ್ ನಲ್ಲಿ. ಇಂದಿರಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿಲ್ಲ.
ವಿಶೇಷವೆಂದರೆ, ಇಂದಿರಾ ಸಿನಿಮಾದ ಕಂಟೆಂಟ್ ಹಾಗು ಗುಣಮಟ್ಟವೇ ವೂಟ್ ಸೆಲೆಕ್ಟ್ ನಲ್ಲಿ ಸಿನಿಮಾ ಬಿಡುಗಡೆಗೆ ಕಾರಣ ಅನ್ನೋದು ನಿರ್ಮಾಪಕಿ ಅನಿತಾಭಟ್ ಅವರ ಮಾತು.
ಈಗಾಗಲೇ ಇಂದಿರಾ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ ಕೂಡ ವೂಟ್ ಸೆಲೆಕ್ಟ್ ನಲ್ಲಿ ತೆರೆ ಕಾಣುತ್ತಿದೆ. ಅಂದಹಾಗೆ, ಇಂದಿರಾ ಸೈಕಲಾಜಿಕಲ್ ಥ್ರಿಲ್ಲರ್. ಇದು ಕನ್ನಡ ಹಾಗು ತೆಲುಗು ಭಾಷೆಯಲ್ಲಿ ತಯಾರಾಗಿದೆ. ರಿಷಿಕೇಶ್ ಚಿತ್ರದ ನಿರ್ದೇಶಕರು. ನಿರ್ದೇಶಕರೇ ಇಲ್ಲಿ ಛಾಯಾಗ್ರಹಣ ಮತಗತು ಸಂಕಲನ ಕೆಲಸ ಮಾಡಿದ್ದಾರೆ.
ಇಲ್ಲಿ ಅನಿತಾಭಟ್ ಜೊತೆಯಲ್ಲಿ ಷಫಿ, ರೆಹಮಾನ್ ಹಾಸನ್, ಚಕ್ರವರ್ತಿ ಚಂದ್ರಚೂಡ್, ನೀತು ಇತರರು ನಟಿಸಿದ್ದಾರೆ. ಲೋಹಿತ್ ಎಲ್. ನಾಯಕ್ ಸಂಗೀತವಿದೆ. ಅಭಿಷೇಕ್ ಮಠದ್ ಅವರ ನೃತ್ಯವಿದೆ.
ಅನಿತಾಭಟ್ ಅವರೊಂದಿಗೆ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ್ ಸೊರಬ್ ಅವರು ಸಾಥ್ ನೀಡಿದ್ದಾರೆ.
ಅದೇನೆ ಇರಲಿ, ನಟಿಯಾಗಿ ಗೆದ್ದಿರುವ ಅನಿತಾಭಟ್ ಈಗ ನಿರ್ಮಾಣದಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಅವರ ಇಂದಿರಾ ಅವರಿಗೆ ಖುಷಿ ಕೊಟ್ಟಿದೆ ಅನ್ನೋದೆ ಅವರ ಮತ್ತೊಂದು ಹೊಸ ಪ್ರಾಜೆಕ್ಟ್ ಗೆ ಕಾರಣವಾಗಿದೆ.
ಒಂದಷ್ಟು ಹೊಸಬರು ಸೇರಿಕೊಂಡು ತಯಾರಿಸಿರುವ ತೂತು ಮಡಿಕೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 8ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಈಗಾಗಲೇ, ಟ್ರೇಲರ್ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ತೂತು ಮಡಿಕೆ ಸಿನಿಮಾ ಮೂಲಕ ರಂಗಭೂಮಿ ಕಲಾವಿದ ಚಂದ್ರಕೀರ್ತಿ ಸ್ವತಂತ್ರ ನಿರ್ದೇಶಕರಾಗುವುದರ ಜೊತೆಗೆ ನಾಯಕನಾಗಿ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೇನೂ ದಿನಗಣನೆ ಶುರುವಾಗಿದ್ದು, ಹೀಗಾಗಿ ಇಡೀ ಚಿತ್ರತಂಡ ಮಾಧ್ಯಮದರ ಮುಂದೆ ಹಾಜರಾಗಿ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಕಂ ನಾಯಕ ಚಂದ್ರಕೀರ್ತಿ ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಎರಡೂವರೆ ವರ್ಷದಿಂದ ಕಾದು ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ಜನ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ನೋಡ್ಬೇಕು ಅನ್ನೋದು ನಮ್ಮ ಇಡೀ ಚಿತ್ರತಂಡದ ಕನಸು. ಜುಲೈ 8ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂದು ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ. ಪ್ರತಿ ಜಿಲ್ಲೆಯಲ್ಲಿಗೂ ಹೋಗಿ ಪ್ರಮೋಷನ್ ಮಾಡಿದ್ದೇವೆ. ಗ್ರಾಮೀಣ ಭಾಗದಲ್ಲಿಯೂ ಇಷ್ಟವಾಗುವ ಸಬ್ಜೆಕ್ಟ್ ನಮ್ಮದು. ಇದು ಯಾವುದೇ ಸಿನಿಮಾದ ಸ್ಫೂರ್ತಿಯಲ್ಲ ಎಂದರು.
ನಿರ್ಮಾಪಕರಾದ ಶಿವಕುಮಾರ್ ಮಾತನಾಡಿ, ತುಂಬಾ ಎಕ್ಸೈಟ್ ಆಗಿದ್ದೇವೆ. ಇದೇ 8ರಂದು ಸಿನಿಮಾ ತೆರೆಗೆ ಬರ್ತಿದೆ. 80 ಥಿಯೇಟರ್ ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಈಗಾಗ್ಲೇ ಒಟಿಟಿ ಸಿನಿಮಾ ಮಾರಾಟವಾಗಿದೆ. ಇದು ಸಿನಿಮಾದ ಕ್ವಾಲಿಟಿ ಮತ್ತು ಕಂಟೆಂಟ್ ಎರಡನ್ನು ತೋರಿಸುತ್ತದೆ ಎಂದು ತಿಳಿಸಿದರು.
ತೂತುಮಡಿಕೆ ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾವಾಗಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಚಂದ್ರ ಕೀರ್ತಿ, ಎ ಎಸ್ ಜಿ ಮತ್ತು ಡಾಲರ್ ಬರೆದಿದ್ದು, ಚಂದ್ರಕೀರ್ತಿಗೆ ಜೋಡಿಯಾಗಿ ಗೊಂಬೆಗಳ ಲವ್ ಖ್ಯಾತಿಯ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಇನ್ನು ಸರ್ವತ ಸಿನಿ ಗ್ಯಾರೇಜ್ ಮತ್ತು ಸ್ಪ್ರೆಡಾನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ಧಾರೆ. ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದೆ.
ಡಾಟರ್ ಆಫ್ ಪಾರ್ವತಮ್ಮ ನಿರ್ಮಾಪಕ ಕೆ.ಎಂ. ಶಶಿಧರ್ ಈಗ ಶುಗರ್ ಲೆಸ್ ಚಿತ್ರದ ಮೂಲಕ ನಿರ್ದೇಶಕರೂ ಆಗಿದ್ದಾರೆ. ಸಕ್ಕರೆ ಖಾಯಿಲೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿರುವ ಚಿತ್ರ ಇದಾಗಿದ್ದು, ಪೃಥ್ವಿ ಅಂಬರ್ ಹಾಗೂ ಪ್ರಿಯಾಂಕ ತಿಮ್ಮೇಶ್ ಇದರಲ್ಲಿ ನಾಯಕ -ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ದಿವ್ಯ ಶಶಿಧರ್ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಅವರ ನಿರ್ಮಾಣದ ಚಿತ್ರವಿದು.
ಜುಲೈ 8 ರಂದು ಬಿಡುಗಡೆ ಕುರಿತು ಪೃಥ್ವಿ ಅಂಬರ್ ಹೇಳಿದ್ದಿಷ್ಟು. ಚಿತ್ರದ ಟೈಟಲ್ ಅಷ್ಟೇ ಶುಗರ್ ಲೆಸ್, ಸಿನಿಮಾ ತುಂಬಾ ಸ್ವೀಟ್ ಇದೆ. ಇದರಿಂದ ನಮ್ಮ ಲೈಫ್ ಸ್ಟೈಲ್ ಬದಲಾಗಬೇಕು, ಅನುಪ್ ಸೀಳನ್ ಅವರು ಅದ್ಭುತವಾದ ಮ್ಯೂಸಿಕ್ ಮಾಡಿದ್ದಾರೆ. ಇದು ಸೀರಿಯಸ್ ಸಿನಿಮಾ ಅಲ್ಲ ಮನರಂಜನಾತ್ಮಕ ಚಿತ್ರ ಎಂದರು.
ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಶಧಿಧರ್, ಇದೊಂದು ವಿಶೇಷ ಸಿನಿಮಾ, ಹಿಂದೆ ಬಂದ ಕಂಟೆಂಟ್ ಚಿತ್ರಗಳು ಗೆದ್ದಿವೆ. ಇದು ಪ್ರತಿಯೊಂದು ಮನೆಗೆ ಸಂಬಂಧಿಸಿದ ಸಿನಿಮ. ಇಂದು ನಮ್ಮ ಲೈಫ್ ಸ್ಟೈಲ್ ಬದಲಾಗಿದ್ದು ಈಗ ಚಿಕ್ಕ ಮಕ್ಕಳಲ್ಲೂ ಸಹ ಶುಗರ್ , ಬಿಪಿ, ಹಾರ್ಟ್ ಅಟ್ಯಾಕ್ ನಂಥ ಖಾಯಿಲೆಗಳು ಬರುತ್ತಿದ್ದು ಇವುಗಳ ಜೊತೆ ನಾವು ಹೇಗೆ ಬದುಕಬೇಕು, ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು ಎಂಬುದರ ಜೊತೆಗೆ ಮನರಂಜನೆಯು ಇದೆ.
ವಿದೇಶಗಳಲ್ಲಿ ಕೂಡ ನಮ್ಮ ಚಿತ್ರ ರಿಲೀಸ್ ಆಗಲಿದೆ. ಚಿತ್ರ ನೋಡುಗರಿಗೆ ತುಂಬಾ ಎಂಜಾಯ್ ಮಾಡಿಸುತ್ತದೆ, ಕೊನೆಗೊಂದು ಮೆಸೇಜ್ ಕೂಡ ಇದೆ. ಎಲ್ಲರೂ ನೋಡಬೇಕಾದ ಚಿತ್ರ ಇದಾಗಿದೆ. ಶುಗರ್ ಲೆಸ್ ಎಲ್ಲರಿಗೂ ಆಪ್ತವಾದ್ದರಿಂದ ಚಿತ್ರಕ್ಕೆ ಈ ಟೈಟಲ್ ಇಟ್ಟಿದ್ದೇವೆ ಎಂದು ಹೇಳಿದರು.
ನಟ ಹಾಗೂ ಸಹ ನಿರ್ಮಾಪಕರಾದ ಕೃಷ್ಣೇಗೌಡ, ಲಾಕ್ ಡೌನ್ ಸಂದರ್ಭದಲ್ಲಿ ಈ ಚಿತ್ರವನ್ನು ಶುರು ಮಾಡಿದೆವು ಎಂದರು. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರು ಡಾಕ್ಟರ್ ಪಾತ್ರ ಮಾಡಿದ್ದು, ನಟ ದತ್ತಣ್ಣ ಅವರ ಮೂಲಕ ಚಿತ್ರದಲ್ಲಿ ಮೂರು ಜನರೇಷನ್ ಅಂದರೆ ಮಗು ಯುವಕ ಹಾಗೂ ವಯಸ್ಸಾದವರ ತೊಂದರೆ ಹೇಳಲಾಗಿದೆ. ಇಡೀ ಚಿತ್ರವನ್ನು ಕಾಮಿಡಿಯಾಗಿ ಹೇಳಲಾಗಿದ್ದು, ಈಗಾಗಲೇ ಹಿಂದಿ ಸೇರಿದಂತೆ ಬೇರೆ ಭಾಷೆಗೆ ರೈಟ್ಸ್ ಮಾರಾಟವಾಗಿದ್ದು, ನಾನು ಸೇಫ್ ಆಗಿದ್ದೇನೆ ಎಂದೂ ಶಶಿಧರ್ ಹೇಳಿದರು.
ನಟ ನಿತೇಶ್ ಮಾತನಾಡಿ, ಕಾಮಿಕ್ ಆದಂಥ ಪಾತ್ರ ಮಾಡಿರುವುದಾಗಿ ಹೇಳಿದರು. ನಟ ರಘು ರಾಮನಕೊಪ್ಪ ಮಾತನಾಡಿ ಇದು ಡಯಾಬಿಟಿಸ್ ನವರಿಗೆ ಅಷ್ಟೇ ಅಲ್ಲ, ಎಲ್ಲರೂ ನೋಡಬೇಕಾದ ಚಿತ್ರ, ಯೋಗದಿಂದ ಶುಗರ್ ಕಂಟ್ರೋಲ್ ಮಾಡಬಹುದೆಂದೂ ಹೇಳಿದ್ದೇವೆ ಎಂದರು. ಅನೂಪ್ ಸೀಳನ್ ಅವರ ಸಂಗೀತ, ಲವಿತ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಹಾಸ್ಯ ನಟ ತರಂಗ ವಿಶ್ವ ನಟನೆಯೊಂದಿಗೆ ನಿರ್ಮಾಣ ಕೂಡ ಮಾಡಿರುವ “ಗಿರ್ಕಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಜುಲೈ ಎಂಟರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಾಸುಕಿ ಭುವನ್, ವಿಶ್ವ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ವೀರೇಶ್ ಪಿ.ಎಂ ನಿರ್ದೇಶನ ಮಾಡಿದ್ದಾರೆ
ನಾನು ಕಲಾವಿದನಾಗಿ ಬಂದ ದಿನದಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹ ಅಪಾರ. ಈಗ ನಿರ್ಮಾಪಕನಾಗಿ “ಗಿರ್ಕಿ” ಚಿತ್ರ ನಿರ್ಮಿಸಿದ್ದೇನೆ. ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದೆ. ಎಲ್ಲರಿಗೂ ಮಚ್ವುಗೆಯಾಗಿದೆ. ಚಿತ್ರ ಇದೇ ಎಂಟರಂದು ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲವಿರಲಿ. ಒಂದೊಳ್ಳೆಯ ಕಥೆ ಇಲ್ಲಿದೆ. ಗೆಳೆತನ, ಪ್ರೀತಿ, ಒಂದಷ್ಟು ಥ್ರಿಲ್ಲಿಂಗ್ ಅಂಶಗಳಿವೆ ಎಂದರು ವಿಶ್ವ.
ವಿಶ್ವ ಅವರನ್ನು ನಾನು ಬಹಳ ದಿನಗಳಿಂದ ಬಲ್ಲೆ. ಒಂದು ದಿನ ಅವರು ನನ್ನ ಬಳಿ ಬಂದು, ನಾನು ಒಂದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಾನು ಹಾಗೂ ವಿಲೋಕ್ ರಾಜ್ ಪ್ರಮುಖಪಾತ್ರದಲ್ಲಿ ನಟಿಸುತ್ತೇವೆ. ನೀವು ನಿರ್ದೇಶನ ಮಾಡಬೇಕೆಂದರು. ಆಗ “ಗಿರ್ಕಿ” ಚಿತ್ರ ಆರಂಭವಾಯಿತು. ಮೊದಲ ನಿರ್ದೇಶನಕ್ಕೆ ಅವಕಾಶ ನೀಡಿದ್ದ ವಿಶ್ವ ಹಾಗೂ ವಾಸುಕಿ ಭುವನ್ ಅವರಿಗೆ ಧನ್ಯವಾದ.
“ಗಿರ್ಕಿ” ಎಂದರೆ ಸುತ್ತಾಟ. ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನನಗೆ ಸಹಕಾರ ನೀಡಿದ ಚಿತ್ರತಂಡವನ್ನು ನೆನೆಯುತ್ತೇನೆ. ನಮ್ಮ ಚಿತ್ರಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಕೇಳುತ್ತೇನೆ ಎಂದರು ನಿರ್ದೇಶಕ ವೀರೇಶ್ ಪಿ.ಎಂ.
ನಾನು ಈ ಹಿಂದೆ “ಮಾಸ್ಟರ್ ಪೀಸ್” ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ವಿಶ್ವ ನನ್ನ ಮಿತ್ರರು. ಅವರು ನಾನು ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದೇವೆ. ಒಳ್ಳೆಯ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ನೀಡಿ ಎಂದರು ನಟ ವಿಲೋಕ್ ರಾಜ್.
“ಗಿರ್ಕಿ” ಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ನಟಿ ದಿವ್ಯ ಉರುಡಗ, ಮನೋರಂಜನೆಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನೋಡಿ ಹಾರೈಸಿ ಎಂದರು.
ಸಂಗೀತ ನಿರ್ದೇಶಕ ವೀರಸಮರ್ಥ್ “ಗಿರ್ಕಿ” ಹಾಡುಗಳ ಬಗ್ಗೆ ಮಾತನಾಡಿ, ಇದೊಂದು ವಿಭಿಮ್ನ ಕಥಾಹಂದರ ಹೊಂದಿರುವ ಸಿನಿಮಾ. ಹಾಡುಗಳಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ವಿಶ್ವ ಅವರ ಸಾಹಸ ಮೆಚ್ಚಬೇಕು. ಅವರು ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಸಿನಿಮಾ ಮಾಡಿದ್ದಾರೆ ಎಂದರು ವೀರ್ ಸಮರ್ಥ್.
ಮನುಷ್ಯ ಹಾಗೂ ಶ್ವಾನದ ನಡುವಿನ ಉತ್ತಮ ಸಂಬಂಧವನ್ನು ಮನಮುಟ್ಟುವಂತೆ ನಿರ್ದೇಶಕ ಕಿರಣ್ ರಾಜ್ “777 ಚಾರ್ಲಿ” ಚಿತ್ರದಲ್ಲಿ ತೋರಿಸಿದ್ದಾರೆ. ಇಡೀ ವಿಶ್ವದಾದ್ಯಂತ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಕ್ಷಿತ ಶೆಟ್ಟಿ ಅವರ ಅಮೋಘ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. “ಚಾರ್ಲಿ” ನಟನೆಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಯಶಸ್ವಿ 25 ದಿನ ಪೂರೈಸಿ ಮುನ್ನಡೆಯುತ್ತಿದೆ. ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿದೆ.
ಈವರೆಗೂ ಒಟ್ಟಾರೆ 150 ಕೋಟಿ ಗ್ರಾಸ್ ಗಳಿಕೆಯಾಗಿದೆ. ಅದರಲ್ಲಿ 90ರಿಂದ 100 ಕೋಟಿವರೆಗೂ ಲಾಭ ಬಂದಿದೆ. ಅದರಲ್ಲಿ ಶೇ. 5ರಷ್ಟು ಚಾರ್ಲಿಗೆ ಸಲ್ಲುವಂತದ್ದು. ಅವಳ ಹೆಸರಿನಲ್ಲಿ ಭಾರತದಾದ್ಯಂತ ಶ್ವಾನಗಳ ಇಂಬ್ರಿಡಿಂಗ್ ವಿರುದ್ಧ ಹೋರಾಡುತ್ತಿರುವ ಹಾಗೂ ಅದನ್ನು ದತ್ತು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್ಜಿಓಗಳಿಗೆ ಸಹಾಯ ಮಾಡುವ ಕುರಿತು ಯೋಚನೆ ಮಾಡಿದ್ದೇವೆ. ಶೇ.5ರಷ್ಟು ಎಂದರೆ ಐದು ಕೋಟಿ ರೂಪಾಯಿಗಳಷ್ಟಾಗುತ್ತದೆ. ಅದನ್ನು ನೇರವಾಗಿ ಹಂಚಿಕೆ ಮಾಡಬೇಕಾ? ಅಥವಾ ಚಾರ್ಲಿ ಹೆಸರಿನಲ್ಲಿ ಒಂದು ಅಕೌಂಟ್ ಮಾಡಿ ದುಡ್ಡಿಟ್ಟು, ಪ್ರತಿ ತಿಂಗಳು ಸಿಗುವ ಬಡ್ಡಿಯಲ್ಲಿ ಸಹಾಯ ಮಾಡಬೇಕಾ? ಎಂಬ ವಿಷಯವಾಗಿ ಇನ್ನೂ ತೀರ್ಮಾನವಾಗಿಲ್ಲ. ಜೊತೆಗೆ ಕಲಾವಿದರು ಮತ್ತು ತಂತ್ರಜ್ಞರಿಗೆ ಶೇ. 10ರಷ್ಟು ಲಾಭದಲ್ಲಿ ಹಂಚಿಕೆ ಮಾಡಲಿದ್ದೇವೆ. ಆ ಮೊತ್ತವೇ 10 ಕೋಟಿ ರೂಪಾಯಿಗಳಷ್ಟಾಗುತ್ತದೆ. ಈ ಪಟ್ಟಿಯಲ್ಲಿ ನಾನಿಲ್ಲ. ಏಕೆಂದರೆ, ನಾನು ಒಬ್ಬ ನಟ ಮತ್ತು ನಿರ್ಮಾಪಕನಾಗಿರುವುದರಿಂದ, ನನ್ನನ್ನು ಬಿಟ್ಟು ಮಿಕ್ಕವರಿಗೆ ಹಂಚಲಿದ್ದೇವೆ ಎಂದರು ರಕ್ಷಿತ್ ಶೆಟ್ಟಿ.
25 ದಿನ ಕರ್ನಾಟಕದಲ್ಲಿ 100 ಪ್ಲಸ್ ಸೆಂಟರ್ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಬೇರೆ ದೇಶಗಳಲ್ಲಿ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಯಾಗಿ 15 ದಿನಗಳ ನಂತರ ಚಿತ್ರತಂಡದವರು ದುಬೈಗೆ ಹೋಗಿ ಬಂದಿದ್ದಾರೆ. ಮಾರಿಷಸ್, ಜಪಾನ್ ಮುಂತಾದ ಕಡೆ ಸಹ ಚಿತ್ರ ಪ್ರದರ್ಶನವಾಗುತ್ತಿದೆ. ಅಲ್ಲಿ ಪ್ರದರ್ಶನಗಳ ಪ್ರಮಾಣ ಕಡಿಮೆ ಇರಬಹುದು. ಆದರೆ, ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ, ಅಲ್ಲೆಲ್ಲ ಪ್ರದರ್ಶನವಾಗುತ್ತಿದೆ. ಸಾಮಾನ್ಯವಾಗಿ ಚಿತ್ರಕ್ಕೆ ಜನ ಬರುತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ಆದರೆ, ಚಿತ್ರವನ್ನು ಚೆನ್ನಾಗಿ ಪ್ರಮೋಟ್ ಮಾಡಿದರೆ, ಖಂಡಿತಾ ಜನ ಬರುತ್ತಾರೆ ಎಂದು “777 ಚಾರ್ಲಿ” ತೋರಿಸಿಕೊಟ್ಟಿದೆ. ಚಿತ್ರಕ್ಕೆ ಈಗಲೂ ಜನ ಬರುತ್ತಿದ್ದಾರೆ. ಭಾನುವಾರ 1 ಕೋಟಿಗೂ ಹೆಚ್ಚು ಗಳಿಕೆಯಾಗಿದೆ. ಚಿತ್ರ ಬಿಡುಗಡೆಯಾಗಿ 25 ದಿನಗಳ ನಂತರವೂ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್ಗಳಲ್ಲಿ ಬೇಡಿಕೆ ಇದೆ ಎಂದರು ವಿತರಕ ಕಾರ್ತಿಕ್ ಗೌಡ.
ಸಾಮಾನ್ಯವಾಗಿ ನಾಯಕಿ ಅಂದರೆ ಪ್ರೇಮಕಥೆ ಇರುತ್ತದೆ. ಇಲ್ಲಿ ಹಾಗಿಲ್ಲ. ಆದರೂ ನನ್ನ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎನ್ನುವುದೇ ಸಂತೋಷ. ಅವಕಾಶ ಕೊಟ್ಟ ಎಲ್ಲರಿಗೂ ನಾಯಕಿ ಸಂಗೀತ ಶೃಂಗೇರಿ ಧನ್ಯವಾದಗಳನ್ನು ಸಲ್ಲಿಸಿದರು.
ಸ್ನೇಹಿತರು ಮತ್ತು ಸಂಬಂಧಿಕರು ಚಿತ್ರ ನೋಡಿ ಖುಷಿಪಟ್ಟರು. ನಾವು 65 ಜನ ಒಟ್ಟಿಗೆ ಸಿನಿಪೊಲಿಸ್ಗೆ ಹೋಗಿ ಚಿತ್ರ ನೋಡಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮ ಆಚರಿಸಿದ್ದೇವೆ. ನಾನು ಕ್ಲಾಸ್ಗೆ ಹೋಗುವಾಗ ಚಾರ್ಲಿ ಹುಡುಗಿ ಅಂತ ಎಲ್ಲ ಹೇಳುತ್ತಾರೆ. ಸೆಲ್ಫಿ ತೆಗೆಸಿಕೊಂಡು ಆಲ್ ದಿ ಬೆಸ್ಟ್ ಹೇಳುತ್ತಾರೆ ಎಂದು ಪುಟಾಣಿ ಶಾರ್ವರಿ ತಮ್ಮ ಅನುಭವ ಹಂಚಿಕೊಂಡರು.
ಸೋಲು ಹಲವು ಪಾಠ ಕಲಿಸುತ್ತದೆ. ಗೆಲುವು ಹಲವು ದಾರಿಗಳನ್ನು ತೋರಿಸುತ್ತವೆ. ಸಹಾಯಕ ನಿರ್ದೇಶಕನಾಗಿ ಮೂರು ಸಿನಿಮಾಗಳನ್ನು ಮಾಡಿದ್ದೇನೆ. ಸೋಲು, ಗೆಲುವು ಎರಡನ್ನು ನೋಡಿದ್ದೀನಿ. ಸೋಲು ನೋಡಿರುವುದರಿಂದ ಗೆಲುವಿನ ಮಹತ್ವ ಗೊತ್ತಾಯಿತು. ಈ ಜರ್ನಿಯಲ್ಲಿ ಹಲವರಿದ್ದಾರೆ. ಒಂದೇ ಮನಸ್ಥಿತಿಯವರಾದ್ದರಿಂದ ಇಂಥದ್ದೊಂದು ಪ್ರಯತ್ನ ಮಾಡುವುದಕ್ಕೆ ಸಾಧ್ಯವಾಯಿತು. ಚಿತ್ರ 25 ದಿನ ಪೂರೈಸಿದೆ. ಮುಂದೆ ಸಹ ಇದೇ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಲಾಭ ಕೊಡುತ್ತದೆ ಎಂಬ ನಂಬಿಕೆ ಇದೆ. ಈ ಗೆಲುವಿನಿಂದ ಇನ್ನಷ್ಟು ಪ್ರಯತ್ನಗಳನ್ನು ಮಾಡುವುದಕ್ಕೆ ಸ್ಫೂರ್ತಿ ಸಿಕ್ಕಿದೆ. ಕಿರಿಕ್ ಪಾರ್ಟಿ ಮಾಡಿದಾಗ ಹಣದ ಅಭಾವವಿತ್ತು. ಆಗ ರಕ್ಷಿತ್ ಎಲ್ಲರನ್ನೂ ಕರೆದು, ಚಿತ್ರ ಚೆನ್ನಾಗಿ ಹೋದರೆ ಇನ್ನಷ್ಟು ಕೊಡುವುದಾಗಿ ಹೇಳಿದ್ದರು. ಅದರಂತೆ ಚಿತ್ರ ಗೆದ್ದ ಮೇಲೆ ಹಲವರಿಗೆ ಅವರ ಪಾಲು ಕೊಟ್ಟರು. ಇದನ್ನು ನೋಡಿ ಕೆಲವರು ಕಣ್ಣೀರು ಹಾಕಿದ್ದು ನೆನಪಿದೆ. ಈಗಲೂ ರಕ್ಷಿತ್ ಅದನ್ನೇ ಮುಂದುವರೆಸಿದ್ದಾರೆ ಎಂದರು ನಿರ್ದೇಶಕ ಕಿರಣ್ ರಾಜ್.
ನಾಲ್ವರು ಸ್ನೇಹಿತರ ಮಧ್ಯೆ ಹುಟ್ಟಿಕೊಳ್ಳುವ ಒಂದು ಸುಳ್ಳು ಮುಂದೆ ಏನೆಲ್ಲ ಘಟನೆಗಳಿಗೆ ಕಾರಣವಾಯಿತು ಎಂಬ ಎಳೆ ಇಟ್ಟುಕೊಂಡು ಯುವ ನಿರ್ದೇಶಕ ಹೆಚ್.ಬಿ. ಸಿದ್ದು ಅವರು ನಿರ್ದೇಶಿಸಿರುವ ಚಿತ್ರ ನಮ್ಮ ಹುಡುಗರು. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ಜುಲೈ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಟ ವಸಿಷ್ಠಸಿಂಹ ಅವರು ಈ ಚಿತ್ರದಲ್ಲಿ ಒಬ್ಬ ಕಲಾವಿದನಾಗೇ ಕಾಣಿಸಿಕೊಂಡಿದ್ದಾರೆ.
ಜುಲೈ 6ರಂದು ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಪ್ರೀರಿಲೀಸ್ ಕಾರ್ಯಕ್ರ ನಡೆಯಲಿದೆ. ಕಿಚ್ಚ ಸುದೀಪ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇಲ್ಲಿ ಮಂಡ್ಯದ ಹಿನ್ನೆಲೆಯಲ್ಲಿ ನಡೆಯುವ ಕಥೆಯಿದೆ. ಅಲ್ಲೊಂದು ಸ್ನೇಹಿತರ ಬಳಗ, ಆ ಸ್ನೇಹಿತರ ಹುಡುಗಾಟ, ಅವರ ನಡುವೆ ಹುಟ್ಟಿಕೊಳ್ಳುವ ಸುಳ್ಳಿನಿಂದ ಆರಂಭವಾಗಿ ಸುಳ್ಳಿನಿಂದಲೇ ಮುಗಿಯುವ ಕಥೆಯನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ಮಂಡ್ಯದಲ್ಲಿ ಪ್ರಾರಂಭವಾಗಿ ಮಂಗಳೂರಿನಲ್ಲಿ ಎಂಡ್ ಆಗುವ ಕಥೆಯಿದು. ಒಂದು ಪದ ಇಟ್ಟುಕೊಂಡು ಇಡೀ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬಹುದು ಎಂದು ಇದರಲ್ಲಿ ಹೇಳಲಾಗಿದೆ. ಸ್ನೇಹಿತರ ನಡುವೆ ಮೋಸ, ವಂಚನೆ ಸುಳಿಯಬಾರದು, ಅಲ್ಲಿ ಸುಳ್ಳೊಂದು ಹುಟ್ಟಿದಾಗ ಅದು ಏನೆಲ್ಲ ತೊಂದರೆಗೆ ಕಾರಣವಾಯಿತೆಂದು ಈ ಚಿತ್ರ ನಿರೂಪಿಸುತ್ತದೆ. ಮಂಡ್ಯ, ಮೈಸೂರು, ಬೆಂಗಳೂರು, ಕಾರವಾರ, ಸಕಲೇಶಪುರ ಹಾಗೂ ಮಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆದಿದೆ. ಅಭಿಮನ್ ರಾಯ್ ಅವರ ಸಂಗೀತವಿದೆ. ಇಲ್ಲಿ ಬಿಂದು. ಶಫಿ ಎಂಬ ಹೊಸ ಗಾಯಕರಿಗೆ ಅವಕಾಶ ನೀಡಲಾಗಿದೆ.
ನಿರ್ದೇಶಕರು ಹೇಳುವಂತೆ, ಕಥೆಯ ನೆರೇಶನ್ ವಿಶೇಷವಾಗಿದೆ. ಆರಂಭ ಅಂತ್ಯ ಎರಡೂ ಸ್ಪೆಷಲ್ ಎಲಿಮೆಂಟ್. ಅಲ್ಲದೆ ಚಿತ್ರದ ಎಲ್ಲಾ ಪಾತ್ರಗಳು ಕಥೆಯನ್ನು ಕ್ಯಾರಿ ಮಾಡುತ್ತವೆ. ಸಿನಿಮಾ ನೋಡಿದ ಉಪೇಂದ್ರ ಅವರು ಫಸ್ಟ್ ಅಟೆಂಪ್ಟ್ ಆದರೂ ತುಂಬಾ ಚೆನ್ನಾಗಿ ಮಾಡಿದ್ದೀರಿ ಎಂದು ಮೆಚ್ಚಿಕೊಂಡರು. ಲೆಂತ್ ಆಗುತ್ತೆ ಅಂತ ನಾವು ತೆಗೆದುಹಾಕಿದ್ದ ಸೀನನ್ನು ಕಥೆಗದು ಬೇಕು ಎಂದು ಮತ್ತೆ ಹಾಕಿಸಿದರು ಎಂದು ಸಿದ್ದು ವಿವರಿಸುತ್ತಾರೆ.
ನಂತರ ನಾಯಕ ನಿರಂಜನ್, ಹೀರೋ ಆಗಿ ನನ್ನ ಮೊದಲ ಚಿತ್ರವಿದು. ನಾರ್ಮಲ್ ಸಿನಿಮಾ ಇದಲ್ಲ. ಒಂದೊಳ್ಳೇ ಕಂಟೆಂಟ್ ಇದೆ. ರಿಯಲ್ ಲೈಫ್ನಲ್ಲಿ ಎಲ್ಲರಿಗೂ ಎಮೋಷನಲಿ ಕನೆಕ್ಟ್ ಆಗುವಂಥ ಸಬ್ಜೆಕ್ಟ್. ಚಿತ್ರದಲ್ಲಿ ಹಾಡುಗಳೂ ಹೈಲೈಟ್, ಇವತ್ತು ಹಾಡೊಂದನ್ನು ಶ್ರೀಮುರುಳಿ ಅವರು ಬಿಡುಗಡೆ ಮಾಡಿಕೊಟ್ಟರು. ಅಪ್ಪು ಅವರ ವೀಡಿಯೋ ಹಾಡನ್ನು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ರಾಘಣ್ಣ ರಿಲೀಸ್ ಮಾಡಲಿದ್ದಾರೆ. ಇಂಟರ್ವೆಲ್ಗೂ ಮುಂಚೆ ಬರುವ ಸೀನೊಂದನ್ನು ಬೆಟ್ಟದ ಮೇಲೆ ಶೂಟ್ ಮಾಡಿದ್ದೇವೆ. ಸಖತ್ ಹೈಟ್ಪೀಕ್ನಲ್ಲಿ ಮಾಡಿದ ಆ ಸೀನನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲೋಕ್, ಪ್ರವೀಣ್ ಹಾಗೂ ಮಾರುತಿ ನನ್ನ ಸ್ನೇಹಿತರಾಗಿ ಉತ್ತಮ ಅಭಿನಯ ನೀಡಿದ್ದಾರೆ. ಸೆಂಟಿಮೆಂಟ್, ಕಾಮಿಡಿಯಿಂದ ಆರಂಭವಾಗುವ ಕಥೆ ನಂತರ ಸೀರಿಯಸ್ ಆಗುತ್ತದೆ ಎಂಬುದು ನಿರಂಜನ್ ಮಾತು.
ಚಿತ್ರದ ನಾಯಕಿ ರಾಧ್ಯ ಗೌರಿ ಎಂಬ ಮಂಡ್ಯ ಹುಡುಗಿಯಾಗಿ ನಟಿಸಿದ್ದಾರೆ., ಎಲ್ಲರ ಮನಕ್ಕೂ ಹತ್ತಿರವಾಗುವಂಥ ಪಾತ್ರವಂತೆ ಅದು. ಗೋಲ್ಡನ್ ಹಾರ್ಟ್ಸ್ ಮೂಲಕ ಕೆಕೆ. ಅಶ್ರಫ್ ಅವರ ನಿರ್ಮಾಣದ ಈ ಚಿತ್ರವನ್ನು ಜಯಣ್ಣ ಫಿಲಂಸ್ ಬಿಡಗಡೆ ಮಾಡುತ್ತಿದೆ.
ಕನ್ನಡ ಚಿತ್ರರಂಗದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಹರ್ಷಿಕಾ ಅವರು ತೆರೆಯ ಮೇಲೆ ಮಾತ್ರ ನಾಯಕಿಯಲ್ಲ. ತೆರೆಯ ಹಿಂದೆಯೂ ನಾಯಕಿ ಅಂತಾ ಕೊರೊನಾ ಸಮಯದಲ್ಲೇ ಸಾಮಾಜಿಕ ಕಾರ್ಯದ ಮೂಲಕ ಸಾಬೀತುಪಡಿಸಿದ್ದಾರೆ.
ಭುವನಂ ಸಂಸ್ಥೆಯ ಮೂಲಕ ನಟ ಭುವನ್ ಅವರೊಂದಿಗೆ ಹರ್ಷಿಕಾ ಜೊತೆಯಾಗಿ, ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದರು. ಅದನ್ನು ಪರಿಗಣಿಸಿ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕಲಾವಿದರು ನಿಜ ಜೀವನದಲ್ಲೂ ನಾಯಕ, ನಾಯಕಿ ಆಗೋದು ಸ್ವಲ್ಪ ಕಮ್ಮಿ. ಆದರೆ ನಿಜ ಬದುಕಲ್ಲೂ ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ಅವರು ನಾಯಕ, ನಾಯಕಿ ಅನ್ನುವುದನ್ನು ತೋರಿಸಿದ್ದಾರೆ.
ಇವರಿಬ್ಬರ ಸಮಾಜಮುಖಿ ಕಾರ್ಯ ಗುರುತಿಸಿ ಭುವನಂ ಸಂಸ್ಥೆಯ ಪರವಾಗಿ ನಟಿ ಹರ್ಷಿಕಾ, ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ.
ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ನಟಿ ಹರ್ಷಿಕಾ ಅವರಿಗೆ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯಿಂದ ಭುವನಂ ಸಂಸ್ಥೆಯ ಮೂಲಕ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ನಟಿಗೆ ಪ್ರೇರಣೆ ಸಿಕ್ಕಂತಾಗಿದೆ. ಪ್ರಶಸ್ತಿಯ ಕುರಿತು ಹರ್ಷಿಕಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.