Categories
ಸಿನಿ ಸುದ್ದಿ

ಪ್ರಜಾರಾಜ್ಯಕ್ಕೆ ಜೈ ಅಂದ್ರು ದೇವರಾಜ್; ಸಿನಿಮಾ ಟೀಸರ್ ರಿಲೀಸ್…

ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ ” ಪ್ರಜಾರಾಜ್ಯ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ದೇವರಾಜ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಇಲ್ಲಿ ದೇವರಾಜ್ ಚಿತ್ರದ ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ರಾಜಕೀಯ ಮುಖಂಡನ ಪಾತ್ರ ಮಾಡಿದ್ದೇನೆ. ಈಗಿನ ರಾಜಕೀಯದ ಲೋಪದೋಷಗಳನ್ನು ತೋರಿಸಿ, ಅದಕ್ಕೆ ಪರಿಹಾರವನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ. ಟೀಸರ್ ಚೆನ್ನಾಗಿದೆ. ಇನ್ನು, ಈ ಚಿತ್ರದ ನಿರ್ಮಾಪಕರಾದ ವರದರಾಜು ಅವರು ವೈದ್ಯರಾಗಿದ್ದು, ಸಾಮಾಜಿಕ ಕಾಳಜಿಯಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ದೇವರಾಜ್ ಹಾರೈಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ನಮ್ಮ ತಾತಂದಿರ ಕಾಲದಲ್ಲಿ ಸ್ವಾತಂತ್ರ್ಯ ಬಂದ ರಜತ ಮಹೋತ್ಸವ ಆಚರಿಸಿದರು. ನಮ್ಮ ತಂದೆಯ ಕಾಲದವರು ಸುವರ್ಣ ಮಹೋತ್ಸವ ಆಚರಣೆ ಮಾಡಿದರು. ನಾವು ಈಗ ‍ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಇಷ್ಟು ವರ್ಷವಾದರೂ ನಾವು ಯೋಚಿಸುವುದು ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಅಂತ? ಆದರೆ ನಮಗೆ ಬೇಕಾದ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ನಾವು ಯೋಚಿಸಿಯೇ ಇಲ್ಲ.

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿರುವುದು ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಯೋಚಿಸಿ ಎಂದು. ನಾವು ಅದರ ಬಗ್ಗೆ ಯೋಚಸುತ್ತಲೇ ಇಲ್ಲ. ಎಂಬ ಪ್ರಧಾನ ಅಂಶದೊಂದಿಗೆ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಚಿತ್ರವನ್ನು ನೋಡಿ, ದೇಶದ ಪ್ರಜೆಗಳಾಗಿ ನಮ್ಮ ಕರ್ತವ್ಯವೇನು? ಎಂದು ಎಲ್ಲರೂ ತಿಳಿಯಬಹುದು ಎಂದು ನಿರ್ಮಾಪಕ ಹಾಗು ನಟ ಡಾ.ವರದರಾಜು ಚಿತ್ರದ ಕುರಿತು ಮಾಹಿತಿ ನೀಡಿದರು.

ಉತ್ತಮ ಕಥೆಯುಳ್ಳ ಚಿತ್ರ, ಎಲ್ಲರ ಸಹಕಾರದಿಂದ ಉತ್ತಮವಾಗಿ ಬಂದಿದೆ. ನಾನು ಈ ಚಿತ್ರದಲ್ಲಿ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ – ನಾಯಕ ವಿಜಯ್ ಭಾರ್ಗವ.

ಚಿತ್ರದಲ್ಲಿ ಐದು ಹಾಡುಗಳಿದೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ವಿಜಯ್ ಭಾರ್ಗವ ಬರೆದಿರುವ ಹಾಡುಗಳನ್ನು ರಿಯಲ್ ಸ್ಟಾರ್ ಉಪೇಂದ್ರ, ವಿಜಯ್ ಪ್ರಕಾಶ್ ಮುಂತಾದ ಖ್ಯಾತ ಗಾಯಕರು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹೇಳಿದರು.

ಚಿತ್ರದಲ್ಲಿ ನಟಿಸಿರುವ ದಿವ್ಯ, ಮೀಸೆ ಪ್ರಕಾಶ್, ಎಸ್ಕಾರ್ಟ್ ಶ್ರೀನಿವಾಸ್ ಶ್ರೀನಿವಾಸ್, ಚಿಕ್ಕ ಹೆಜ್ಜಾಜಿ‌ ಮಹದೇವ್, ಅಮೂಲ್ಯ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ನಿರ್ದೇಶಕ ಮಹೇಶ್ ಕುಮಾರ್, ಒಕ್ಕಲಿಗ ಸಂಘದ ನಿರ್ದೇಶಕರಾದ ಡಿ.ಕೆ.ರಮೇಶ್, ನಿರ್ಮಾಣ ನಿರ್ವಾಹಕ ರವಿಶಂಕರ್ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ, ಚಿತ್ರಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಹೀಗೊಂದು ಲಿಪ್ ಸ್ಟಿಕ್ ಸ್ಟೋರಿ! ಕೊಲೆಯ ತನಿಖೆ ಜಾಡಿನ ಹಿಂದೆ ರಿವೇಂಜ್ ಕಥೆ…

ಕೊರೋನಾ ನಂತರ ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಅಭಿರುಚಿಯೇ ಬದಲಾಗಿದೆ. ಇದೇ ಭಾಷೆಯ ಚಿತ್ರ ನೋಡಬೇಕೆನ್ನುವುದೂ ಹೊರಟು ಹೋಗಿದೆ. ಓಟಿಟಿಯಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ನೋಡಿದ ಮೇಲೆ ಕಂಟೆಂಟ್ ಆಧಾರಿತ ಚಿತ್ರಗಳ ಮೇಲೇ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಅದನ್ನು ಮನಗಂಡ ನಿರ್ದೇಶಕ ರಾಜೇಶ್ ಮೂರ್ತಿ ಅವರು ಉತ್ತಮ ಕಂಟೆಂಟ್ ಆಧಾರಿತ ಚಿತ್ರವೊಂದನ್ನು ಲಿಪ್ ಸ್ಟಿಕ್ ಮರ್ಡರ್ ಮೂಲಕ ಹೇಳ ಹೊರಟಿದ್ದಾರೆ. ಕನ್ನಡದಲ್ಲಿ ನಿರ್ಮಾಣವಾದ ಈ ಚಿತ್ರವನ್ನು ನೋಡಿದ ಬಾಲಿವುಡ್ ನ ಹೆಸರಾಂತ ಸಂಸ್ಥೆಯೊಂದು ಅತಿ ಹೆಚ್ಚು ಮೊತ್ತ ಕೊಟ್ಟು ಡಬ್ಬಿಂಗ್ ರೈಟ್ಸ್ ಖರೀದಿಸಿದ್ದು ತಮಿಳು,ತೆಲುಗು, ಮಲಯಾಳಂ ನಲ್ಲೂ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ.

ಇವರ ತಂದೆ ವಿಕೆ.ಮೂರ್ತಿ ಅವರು ಪ್ರಾದೇಶಿಕ ಭಾಷೆಯಲ್ಲಿ ಮೊಟ್ಟ ಮೊದಲ ಧಾರಾವಾಹಿ ನಿರ್ಮಿಸಿದವರು. ತಂದೆಯಂತೆಯೇ ತಮ್ಮ ಎಲ್ಲಾ ಚಿತ್ರಗಳಲ್ಲಿ ಹೊಸಬರಿಗೆ ಅವಕಾಶ ನೀಡಿ ಬೆಳೆಸುವ ಪರಿಪಾಠ ಬೆಳೆಸಿಕೊಂಡು ಬಂದಿರುವ ರಾಜೇಶ್ ಮೂರ್ತಿ, ಅವರ ನಿರ್ದೇಶನದ ಏಳನೇ ಚಿತ್ರ ‘ಲಿಪ್ ಸ್ಟಿಕ್ ಮರ್ಡರ್’ ಈ ಸಿನಿಮಾ ಡಿ.16ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಒಬ್ಬ ಅಬ್ ನಾರ್ಮಲ್ ಯುವತಿಯ ಕಥೆ ಇಟ್ಟುಕೊಂಡು ರಿವೇಂಜ್ ಸ್ಟೋರಿಯನ್ನು ತೆರೆಮೇಲೆ ತಂದಿದ್ದಾರೆ.

ನಮಗೆ ಗೊತ್ತಿಲ್ಲದ ಅಪರಿಚಿತರು ಕರೆದ ಜಾಗಕ್ಕೆ ಯಾವತ್ತೂ ಹೋಗಬಾರದು. ಅದು ತುಂಬಾ ಡೇಂಜರ್ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ನಟ, ರೂಪದರ್ಶಿ ಆರ್ಯನ್‌ರಾಜ್ ಈ ಚಿತ್ರದ ನಾಯಕನಾಗಿದ್ದು, ಕಥೆಯಲ್ಲಿ ನಡೆಯುವ ಸರಣಿ ಕೊಲೆಗಳನ್ನು ಪತ್ತೆಹಚ್ಚುವ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.


ಇನ್ವೆಸ್ಟಿಗೇಶನ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದ ಲಿಪ್‌ಸ್ಟಿಕ್ ಮರ್ಡರ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.
ಸಿನಿವ್ಯಾಲಿ ಕ್ರಿಯೇಶನ್ಸ್ ಮೂಲಕ ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್‌ಮೂರ್ತಿ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ಆನ್‌ಲೈನ್ ಡೇಟಿಂಗ್ ಆಪ್ ಮೂಲಕ ಯುವತಿಯರು, ಯುವಕರನ್ನು ಯಾವರೀತಿ ತಮ್ಮ ಬಲೆಗೆ ಬೀಳಿಸಿಕೊಂಡು ಮೋಸ ಮಾಡುತ್ತಾರೆ ಎಂಬುದನ್ನು ಹೇಳಲಾಗಿದೆ.
ಡೇಟಿಂಗ್ ಆಪ್ ಮೂಲಕ ಮಹಿಳೆಯರು ಕರೆಯುವ ಜಾಗಕ್ಕೆ ಹೋಗುವ ಯುವಕರು ಯಾವರೀತಿ ಕೊಲೆಯಾಗುತ್ತಾರೆ, ನಾಯಕಿ ಏಕೆ ಇಂಥ ಯುವಕರನ್ನು ಟಾರ್ಗೆಟ್ ಮಾಡುತ್ತಾಳೆ ಎನ್ನುವುದೇ ಈ ಚಿತ್ರದ ಕಥೆ.

ಸರಣಿ ಕೊಲೆಗಳ ಹಿಂದಿರುವ ರಹಸ್ಯವನ್ನು ಇನ್ವೆಸ್ಟಿಗೇಶನ್ ಆಫೀಸರ್ ಪತ್ತೆ ಹಚ್ಚಿ ಆ ಕೊಲೆಗಾರ್ತಿ ಯಾರು, ಕೊಲೆಯಾದವರಿಗೂ ಆಕೆಗೂ ಏನಾದರೂ ಸಂಬಂಧವಿತ್ತೇ, ಆಕೆಯೇನು ಕಿಲ್ಲರಾ, ಒಬ್ಬ ಸೈಕೋನಾ ? ಹೀಗೆ ಏಳುವ ಹಲವಾರು ಸಂದೇಹಗಳಿಗೆ ಚಿತ್ರದಲ್ಲಿ ಉತ್ತರವಿದೆ.


ಹೈದರಾಬಾದ್ ಮೂಲದ ಅಲೈಕಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿತೀಶ್‌ಕುಮಾರ್ ಅವರ ಸಂಗೀತ ಸಂಯೋಜನೆ, ಆರ್.ವಿನೋದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಶ್ರೀ ಬಾಲಾಜಿ ಫೋಟೋ ಸ್ಟುಡಿಯೋಗೆ ಬಂದ ವಿಜಯರಾಘವೇಂದ್ರ! ಸಿನಿಮಾ ಹಾಡು ಬಿಡುಗಡೆ

ಕನ್ನಡದಲ್ಲಿ ಈಗಾಗಲೇ ತರಹವೇವಾರಿ ಶೀರ್ಷಿಕೆ ಇರುವ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಕೂಡ ಸೇರಿದೆ.
ಈಗಾಗಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಚಿತ್ರದ ಹಾಡುಗಳು ಅದ್ಧೂರಿಯಾಗಿ ರಿಲೀಸ್ ಆಗಿವೆ.

ಆಡಿಯೋ ರಿಲೀಸ್ ವೇಳೆ ಅತಿಥಿಯಾಗಿ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ರವರು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರು ಹಾಗೂ ಕನ್ನಡ ಚಲನಚಿತ್ರದ ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಆಗಮಿಸಿ ಹಾಡು ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದರು.

ಹಿರಿಯ ಛಾಯಾಗ್ರಾಹ ಅಶೋಕ್ ಕಶ್ಯಪ್ ಮಾತನಾಡಿ, ” ಮಲೆನಾಡಿನ ಸೌಂದರ್ಯಕ್ಕೆ ತಾನು ಬೆರಗಾಗಿ, ಅಲ್ಲೇ ಹಲವು ವರ್ಷಗಳ ಕಾಲ ಅಲ್ಲೇ ಇದ್ದು ಅಲ್ಲಿಯ ಭಾಷೆ – ಸಂಸ್ಕೃತಿಯ ಬಗ್ಗೆ ಮಾರು ಹೋಗಿದ್ದೆ, ಈಗ ಈ ಸಿನೆಮಾ ಮತ್ತೆ ತನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದೆ, ಒಬ್ಬ ಫೋಟೋಗ್ರಾಫರ್ ಜೀವನದ ಬಗ್ಗೆ ಇದುವರೆಗೆ ಬರದ ಕಥೆ ಇಲ್ಲಿದೆ. ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ, ಚಿತ್ರಕ್ಕೆ ಗೆಲುವು ಸಿಗಲಿ ಎಂದು ಶುಭ ಹಾರೈಸಿದರು.

ವಿಜಯ ರಾಘವೇಂದ್ರ ಮಾತನಾಡಿ, “ಊರು ಕಥೆಯ ಬೇರು, ಒಂದು ಊರಿನಲ್ಲಿ ಹಲವು ತರಹದ ಕಥೆ ಇರೋದು ಸಹಜ. ಅದು ಹೃದಯದಿಂದ ಹುಟ್ಟೋ ಕಥೆಯಾಗಿ ಹೊರಬರುತ್ತೆ, ಅಂತಹ ಕಥೆಗಳು ಸೋತಿರೋ ಉದಾರಹಣೆ ತುಂಬಾ ಕಡಿಮೆ, ಇಂತಹ ಸಿನಿಮಾವನ್ನು ಜನರು ಇಷ್ಟ ಪಡುತ್ತಾರೆ, ಈಗಿನ ಸಿನೆಮಾ ನೋಡೋ ಮಂದಿ ಇದನ್ನೇ ಎದುರು ನೋಡುತ್ತಿದ್ದಾರೆ, ಈ ತಂಡದ ಜೊತೆ ನಾನು ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ, ನಾನೊಬ್ಬ ಕಲಾವಿದನಾಗಿ ಈ ಸಿನೆಮಾ ನೋಡಿ ಅಂತ ಹೇಳಲ್ಲ ಒಬ್ಬ ಪ್ರೇಕ್ಷಕನಾಗಿ ಈ ಸಿನಿಮಾ ನಾನು ನೋಡ್ತೀನಿ ನೀವು ನೋಡಿ ” ಎಂದರು.

ನಿರ್ಮಾಪಕ ವೆಂಕಟೇಶ್ವರ ರಾವ್, ಬಳ್ಳಾರಿ ಮೊದಲ ಸಲ ಸೃಜನ ಪ್ರೊಡಕ್ಷನ್ ಅಡಿ ಸಿನಿಮಾ ನಿರ್ಮಿಸಿದ್ದಾರೆ. ಅವರು,
“ಹಲವಾರು ಜನ ಸಿನಿಮಾ ಮಾಡಲು ಹೊರಟಾಗ ಬೇಡ ಎಂದು ತಲೆಕೆಡಿಸಲು ಪ್ರಯತ್ನ ಪಟ್ಟರು., ಆದರೆ ಈ ಸಿನೆಮಾ ಎಲ್ಲರ ಮನಸ್ಸನ್ನು ಗೆಲ್ಲೋದರಲ್ಲಿ ಯಾವುದೇ ಸಂಶಯ ಇಲ್ಲ,ಈ ಸಿನಿಮಾ ಮಾಡಿದಕ್ಕೆ ನನಗೆ ತೃಪ್ತಿ ಇದೆ ಎಂದು ತಿಳಿಸಿದರು,
ಈ ವೇಳೆ ಚಿತ್ರತಂಡ ಚಿತ್ರೀಕರಣದ ಅನುಭವ ಹಂಚಿಕೊಂಡಿತು.

ನಿರ್ದೇಶಕ ರಾಜೇಶ್ ಧ್ರುವ ಮಾತನಾಡಿ, “23 ದಿನ ಮಳೆಯಲ್ಲೇ ಈ ಸಿನೆಮಾ ಚಿತ್ರೀಕರಣ ಮಾಡಲಾಗಿದ್ದು, ಕೇವಲ 5 ತಿಂಗಳಲ್ಲಿ ತೆರೆಗೆ ತರಲು ಸಜ್ಜು ಮಾಡಿದ್ದೇವೆ, ಯಾವುದೇ ಸಿನಿಮಾ ಇಟ್ಟುಕೊಂಡು ಹಳೆಯದಾದಷ್ಟು ಅದರ ಸಾರ ಹೊರಟು ಹೋಗುತ್ತೆ, ನನ್ನ ಊರಿನಲ್ಲಿ ಅನುಭವಕ್ಕೆ ಬಂದ ಹಲವು ಅನುಭವನ್ನು, ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಂಡು ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಅರಿವು ಮಾಡಿಸಿ ಪಾತ್ರಕ್ಕೆ ತಕ್ಕಂಗೆ ತಯಾರು ಮಾಡಲಾಗಿದ್ದು, ಎಲ್ಲ ಕಲಾವಿದರು ಹೊಸಬರೇ. ಆದರೆ ಎಲ್ಲಿಯೂ ಕೂಡ ನೋಡುಗರಿಗೆ ಅದರ ಅರಿವೇ ಆಗದಂತೆ ನೈಜವಾಗಿ ಅಭಿನಯ ಮಾಡಿಸಲಾಗಿದೆ ” ಎಂದರು.

ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು ಈ ವೇಳೆ ಅನುಭವನ್ನು ಹಂಚಿಕೊಂಡರು,
ಈ ಸಿನೆಮಾ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ಕಿರುತೆರೆ ಟು ಬೆಳ್ಳಿತೆರೆ…

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗತ್ಮಕ ಚಿತ್ರದ ಕಡೆ ಮುಖ ಮಾಡಿದೆ, ಅದರಲ್ಲಿ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಜಾಸ್ತಿ, ಆ ಸಾಲಿಗ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ” ಚಿತ್ರ ಕೂಡ ಸೇರಿದೆ.
ಇಡೀ ಚಿತ್ರ ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತ ಮುತ್ತ ಚಿತ್ರೀಕರಣ ವಾಗಿದೆ. ಅಲ್ಲಿಯ ಸ್ಥಳೀಯ ಪ್ರತಿಭೆಗಳು ಕಾಣಿಸಿಕೊಂಡಿವೆ.

ಈ ಚಿತ್ರದ ವಿಶೇಷತೆ ಅಂದರೆ, ಬಳಸಿರುವ ಉತ್ತರ ಕನ್ನಡ ಭಾಷೆ.
ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಜೊತೆಗೊಂದು ನವಿರಾದ ಲವ್ ಸ್ಟೋರಿ.

ನಿರ್ದೇಶಕರಾಗಿ ಹಾಗೂ ಮುಖ್ಯ ಪಾತ್ರದಲ್ಲಿ ಕಿರುತೆರೆಯ 6 ವರ್ಷಗಳ ಕಾಲ ಸಂಚಲನ ಮೂಡಿಸಿದ್ದ ನಟ ರಾಜೇಶ್ ಧ್ರುವ ಇಲ್ಲಿದ್ದಾರೆ. ಉಳಿದಂತೆ ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಹಾಗೂ ಹಲವಾರು ಹೊಸ ಕಲಾವಿದರು ಕಾಣಿಸಿಕೊಂಡಿದ್ದಾರೆ.

ಕಥೆ – ಚಿತ್ರಕಥೆಗೆ ಅಭಿಷೇಕ್ ಶಿರಸಿ ಪಲ ಹಾಗೂ ಪೃಥ್ವಿಕಾಂತ ಪೆನ್ನು ಹಿಡಿದಿದ್ದಾರೆ. ಅಜಿತ್ ಬೊಪ್ಪನಳ್ಳಿ ಸಂಭಾಷಣೆ ಬರೆದಿದ್ದಾರೆ.

ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣವಿದೆ. ಗಣಪತಿ ಭಟ್ ಸಂಕಲನ ಮಾಡಿದ್ದಾರೆ.
ಚಿತ್ರದಲ್ಲಿ 2 ಹಾಡುಗಳಿಗೆ
ಶ್ರೀರಾಮ್ ಗಂಧರ್ವ ಸಂಗೀತ ನೀಡಿದ್ದಾರೆ‌ ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಇದೆ, ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕಿಶೋರ್ ಜೊತೆ ಪದ್ಮನಾಭ್! ನಿರ್ಮಾಪಕರ ಬರ್ತ್ ಡೇಗೆ ಸೆಲ್ವ ಸಿನಿಮಾ ಶೀರ್ಷಿಕೆ ಅನಾವರಣ…

ಜಾನ್ ಜಾನಿ ಜನಾರ್ದನ, ಕಾಲೇಜ್ ಕುಮಾರ್ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಎಲ್. ಪದ್ಮನಾಭ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಪದ್ಮನಾಭ ಅವರು ತನ್ವಿ ಮೀಡಿಯಾ ಕಾರ್ಪ್ ಸಂಸ್ಥೆ ಲಾಂಛನದಲ್ಲಿ ನಿರ್ಮಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಬಹುಭಾಷಾ ನಟ ಕಿಶೋರ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ “ಸೆಲ್ವ” ಎಂದು ಹೆಸರಿಡಲಾಗಿದೆ.

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದು.
ನಂದು ಮಲೇಲ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಸದ್ಯದಲ್ಲೇ ಅನಾವರಣವಾಗಲಿದೆ.
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸಜಾದ್ ಕಾಕ್ಕು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ.

Categories
ಸಿನಿ ಸುದ್ದಿ

ಕೊರಗಜ್ಜ ದೈವ ಬಳಿ ಶಿವಣ್ಣ ಭೇಟಿ: ಕರಿ ಹೈದ ಕರಿ ಅಜ್ಜ ತಂಡ ಖುಷಿ…

ಕನ್ನಡದಲ್ಲಿ “ಕೊರಗಜ್ಜ” ಸಿನಿಮಾ ಆಗುತ್ತಿರುವ ಹಿನ್ನೆಲೆ ಯಲ್ಲೇ ಹಿರಿಯ ನಟ ಶಿವರಾಜ್ ಕುಮಾರ್ ಅವರು ಮಂಗಳೂರು ಸಮೀಪದ ಕುತ್ತಾರುವಿನ ಕೊರಗಜ್ಜ ದೈವ ಸ್ಥಾನಕ್ಕೆ ಭೇಟಿ ನೀಡಿ ಚಕ್ಕುಲಿ-ವೀಳ್ಯ ಸಮರ್ಪಿಸಿರುವುದು “ಕರಿ ಹೈದ ಕರಿ ಅಜ್ಜ” ಚಿತ್ರ ತಂಡಕ್ಕೆ ಇನ್ನಿಲ್ಲದ ಖುಷಿ ನೀಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ನಟ ಕಬೀರ್ ಬೇಡಿ ಜೊತೆ ಕನ್ನಡದ ಖ್ಯಾತ ಕಲಾವಿದರಾದ ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಭರತ್ ಸೂರ್ಯ ಎನ್ನುವ ಹೊಸ ನಟನ ಪರಿಚಯವಾಗುತ್ತಿದೆ.


ತಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದು , ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ಇದೇ ಸಮಯದಲ್ಲಿ ಶಿವರಾಜ್ ಕುಮಾರ್ ರವರಂತಹ ಹಿರಿಯ ನಟರು ಕೊರಗಜ್ಜನ ದೈವಸ್ಥಾನಕ್ಕೆ ಭೇಟಿ ನೀಡಿರುವುದು ನಮ್ಮ ಚಿತ್ರಕ್ಕೆ ಆಶಿರ್ವಾದ ರೀತಿಯಲ್ಲಿ ಪರಿಣಮಿಸಲಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ.

ಚಿತ್ರೀಕರಣ ಸಂಪೂರ್ಣ ಮುಗಿದಿರುವ ಈ ಸಮಯದಲ್ಲಿ ಕೊರಗಜ್ಜನ ದೈವಸ್ಥಾನದ ದರ್ಶನ ಪಡೆದಿರುವ ನಮ್ಮ ಹಿರಿಯ ಕಲಾವಿದ ಶಿವರಾಜ್ ಕುಮಾರ್ ರವರ ಪ್ರಾರ್ಥನೆಯಿಂದಾಗಿ ಖಂಡಿತಾ ನಮ್ಮ ಚಿತ್ರ ಯಶಸ್ವಿಗೊಳ್ಳಲ್ಲಿದೆ ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಎಲ್ರೂನ ಲಾಕ್ ಮಾಡೋಕೆ ನಾಗೇಂದ್ರ ಅರಸ್ ರೆಡಿ! ಅರಸರ ಹೀಗೊಂದು ಪ್ರಯೋಗಾತ್ಮಕ ಚಿತ್ರ ಕಣ್ರೀ…

ಕನ್ನಡದಲ್ಲಿ ಈಗಾಗಲೇ ಹಲವಾರು ಪ್ರಯೋಗಾತ್ಮಕ ಸಿನಿಮಾಗಳು ಬಂದಿವೆ. ಆ ಸಾಲಿಗೆ ‘ಲಾಕ್’ ಸಿನಿಮಾ ಕೂಡ ಒಂದು. ಇಂಥದ್ದೊಂದು ಪ್ರಯೋಗಕ್ಕೆ ಇಳಿದಿರೋದು ನಟ, ನಿರ್ದೇಶಕ, ನಿರ್ಮಾಪಕ, ಸಂಕಲನಕಾರ ನಾಗೇಂದ್ರ ಅರಸ್. ಇದೊಂದು ವಿಭಿನ್ನ ಕಥೆಯ ಚಿತ್ರ. ಅವರದೇ ನಿರ್ದೇಶನ, ನಟನೆ, ನಿರ್ಮಾಣ, ಸಂಕಲನ ಇರುವ ಅಪರೂಪದ ಸಿನಿಮಾ. ಪ್ರೇಕ್ಷಕರ ಮನವನ್ನು ‘ಲಾಕ್’ ಮಾಡೋಕೆ ಸಜ್ಜಾಗಿದ್ದಾರೆ ನಾಗೇಂದ್ರ ಅರಸ್. ಆ ಕುರಿತ ಒಂದಷ್ಟು ಮಾಹಿತಿ

ಹೌದು, ನಾಗೇಂದ್ರ ಅರಸ್, ಸದಾ ಏನಾದರೊಂದು ಸಿನಿಮಾ ಚಟುವಟಿಕೆಯಲ್ಲಿರುವ ಅಪರೂಪದ ನಟ ಕಮ್ ನಿರ್ದೇಶಕ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಯಾವಾಗಲೂ ಉತ್ಸಾಹದಿಂದಲೇ ಚಿತ್ರ ತಂಡದ ಜೊತೆ ಕೆಲಸ ಮಾಡುವ ಮತ್ತು ಅವರನ್ನು ಪ್ರೋತ್ಸಾಹಿಸುವ ನಟ ಅಂದರೆ ತಪ್ಪಿಲ್ಲ. ಹೊಸಬರಿರಲಿ, ಹಳಬರೇ ಇರಲಿ ಅವರ ಜೊತೆ ನಗುತ್ತಲೇ ಕೆಲಸ ಮಾಡಿ ಮನಸ್ಸಿಗೆ ಹತ್ತಿರವಾಗುವ ನಟ.

ನಟನೆ, ನಿರ್ದೇಶನ, ಸಂಕಲನ, ನಿರ್ಮಾಣ, ಜೊತೆಗೆ ಮುಖಪುಟದಲ್ಲೂ ಸದಾ ತಮ್ಮ ‘ಫೇಸ್’ ವ್ಯಾಲ್ಯು ಹೆಚ್ಚಿಸಿಕೊಳ್ಳುತ್ತಲೇ, ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡ ನಟ ಕಮ್ ನಿರ್ದೇಶಕ. ಈಗ ಅವರೊಂದು ಸ್ಪೆಷಲ್ ಕಥೆ ಹೆಣೆದು, ನಿರ್ದೇಶನದ ಜೊತೆ ಅವರೊಬ್ಬರೇ ನಟಿಸಿರುವ ಲಾಕ್ ಇನ್ನೇನು ಪ್ರೇಕ್ಷಕರ ಮುಂದೆ ಓಪನ್ ಆಗೋಕೆ ಸಜ್ಜಾಗುತ್ತಿದೆ.

ಈ ಲಾಕ್ ಅಂದಾಕ್ಷಣ, ನೆನಪಾಗೋದೇ ಲಾಕ್ಡೌನ್. ಕೊರೊನಾ ತಂದಿಟ್ಟ ಅವಾಂತರವೆ ಈ ‘ಲಾಕ್’. ಈ ಸಮಯದಲ್ಲೇ ಹೊಳೆದಂತಹ ಕಥೆಯೊಂದು ಈಗ ಸಿನಿಮಾ ರೂಪ ತಾಳಿದೆ ಅನ್ನೋದು ವಿಶೇಷ.

ಇದೊಂದು ಪ್ರಯೋಗಾತ್ಮಕ ಚಿತ್ರವಷ್ಟೇ ಅಲ್ಲ, ಒಂದೇ ಒಂದು ಪಾತ್ರ ಇರುವ ಅಪರೂಪದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಆ ಕಾರಣಕ್ಕೆ ‘ಲಾಕ್’ ವಿಶೇಷವೆನಿಸುತ್ತೆ. ಸಿನಿಮಾಗೆ ಈಗಾಗಲೇ ಸೆನ್ಸಾರ್ ಅಗಿದೆ. ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

ಒಂದೇ ಮನೆ, ಒಂದೇ ಪಾತ್ರ!

ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. “ಲಾಕ್” ಮೊದಲೇ ಹೇಳಿದಂತೆ, ಪ್ರಯೋಗಾತ್ಮಕ ಸಿನಿಮಾ.
ನಾಗೇಂದ್ರ ಅರಸ್ ಅವರೇ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಟಿಸಿ, ನಿರ್ಮಾಣ ಮಾಡಿ ಸಂಕಲನದ ಜೊತೆ ನಿರ್ದೇಶನ ಮಾಡಿದ್ದಾರೆ.

ಹಾಗಾದರೆ ಈ ಸಿನಿಮಾದ ಒನ್ ಲೈನ್ ಏನು? ಇದಕ್ಕೆ ಉತ್ತರ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ. ಇಡೀ ದೇಶವೇ ಲಾಕ್ಡೌನ್ ಆದಾಗ ಮನೆಯೊಂದರಲ್ಲಿ ನಡೆಯೋ ಘಟನೆಯೊಂದು ವಿಚಿತ್ರ ತಿರುವು ಪಡೆದುಕೊಳ್ಳುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಕಥೆ.

ಭರವಸೆಯ ಲಾಕ್

ಸಾಮಾನ್ಯವಾಗಿ, ಕಮರ್ಷಿಯಲ್ ಕಥೆಗಳನ್ನು ಹೇಗೆ ಬೇಕಾದರೂ ಚಿತ್ರೀಕರಿಸಬಹುದು. ಆದರೆ, ಒಂದೇ ಪಾತ್ರ ಇಟ್ಟುಕೊಂಡು, ಒಂದೇ ಮನೆಯಲ್ಲಿ ಕುತೂಹಲ ಎನಿಸುವ ರೀತಿ ಕಟ್ಟಿಕೊಡುವುದಿದೆಯಲ್ಲ ಅದು ಚಾಲೆಂಜ್. ಅಂತಹ ಚಾಲೆಂಜಿಂಗ್ ಸಿನಿಮಾ ಮಾಡಿರುವ ನಾಗೇಂದ್ರ ಅರಸ್, ಇದರ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.

ತೆರೆ ಮೇಲೆ ಅವರೊಬ್ಬರೇ ರಾರಾಜಿಸಬಹುದು. ಆದರೆ, ತೆರೆಯ ಹಿಂದೆ ಒಂದಷ್ಟು ಒಳ್ಳೆಯ ಮನಸ್ಸುಗಳು ಸಾಥ್ ಕೊಟ್ಟಿವೆ. ಸತೀಶ್ ಬಾಬು ಸಂಗೀತ ನೀಡಿದರೆ, ಎಂ.ಬಿ.ಅಳ್ಳಿಕಟ್ಟಿ ಕ್ಯಾಮೆರಾ ಹಿಡಿದಿದ್ದಾರೆ. ಅದೇನೆ ಇರಲಿ, ನಾಗೇಂದ್ರ ಅರಸ್ ಅವರ ಈ ಪ್ರಯತ್ನಕ್ಕೆ ಗೆಲುವು ಸಿಗಲಿ ಅನ್ನೋದೇ ‘ ಸಿನಿ ಲಹರಿ‘ ಆಶಯ.

Categories
ಸಿನಿ ಸುದ್ದಿ

ಶ್ರೀ ಜೊತೆ ಪ್ರಣತಿ! ಜಸ್ಟ್ ಪಾಸ್ ಆಗೋಕೆ ಜೋಡಿ ರೆಡಿ…

‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಹೊಸ ಸಬ್ಜೆಕ್ಟ್ ಹೊತ್ತು ಬಂದಿದ್ದಾರೆ. ಈ ಬಾರಿ ಯೂತ್ ಫುಲ್ ಸಬ್ಜೆಕ್ಟ್ ಕಥೆ ಹೇಳಲು ರೆಡಿಯಾಗಿದ್ದಾರೆ. ಡಿಸೆಂಬರ್ 14ರಂದು ಸಿನಿಮಾ ಸೆಟ್ಟೇರಲಿದ್ದು, ಚಿತ್ರಕ್ಕೆ ‘ಜಸ್ಟ್ ಪಾಸ್’ ಎಂದು ಶೀರ್ಷಿಕೆ ಇಡಲಾಗಿದೆ.

ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಇರುವುದೆಲ್ಲವ ಬಿಟ್ಟು, ಗಜಾನನ ಗ್ಯಾಂಗ್ ಖ್ಯಾತಿಯ ನಟ ಶ್ರೀ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸಗಳೆಲ್ಲ ಮುಗಿಸಿ ಶೂಟಿಂಗ್ ಹೊರಡಲು ಸಿನಿಮಾ ತಂಡ ಸಕಲ ತಯಾರಿ ನಡೆಸಿಕೊಂಡಿದೆ. ಚಿತ್ರಕ್ಕೆ ಹೀರೋಯಿನ್ ಹುಡುಕಾಟಲ್ಲಿದ್ದ ಚಿತ್ರತಂಡಕ್ಕೆ ಹೊಸ ಪ್ರತಿಭೆ ಪ್ರಣತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್, ಫ್ಯಾಮಿಲಿ ವಾರ್ ಸೀಸನ್ 2 ರನ್ನರ್ ಅಪ್ ಆಗಿರುವ ಪ್ರಣತಿ ಬ್ರಹ್ಮಗಂಟು ಸೀರಿಯಲ್ ನಲ್ಲೂ ನಟಿಸಿದ್ದಾರೆ. ಈಗ ಜಸ್ಟ್ ಪಾಸ್ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಕೆ.ಎಂ ರಘು. ನಿರ್ದೇಶನದ ದೊಡ್ಡಹಟ್ಟಿ ಬೋರೇಗೌಡ ಸಿನಿಮಾ ಬೆಂಗಳೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ ಅತ್ಯುತ್ತಮ ಮೊದಲ ಸಿನಿಮಾ ಎಂಬ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿತ್ತು. ಮೊಲದ ಬಾರಿ ನಿರ್ದೇಶಕರು ಯೂತ್ ಫುಲ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದು, ಇದೇ ಡಿಸೆಂಬರ್ 14ರಂದು ಸಿನಿಮಾ ಸೆಟ್ಟೇರಲಿದೆ.

ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ಜಸ್ಟ್ ಪಾಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಅರ್ಪಿತಾ, ಚಂದು ಶ್ರೀ, ಯಶಿಕಾ, ವಿಶ್ವಾಸ್, ನಿಖಿಲ್, ಗಗನ್, ಅಭಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಜೊತೆ ಅಂಬರೀಶ್ ಪುತ್ರ ಅಭಿಷೇಕ್ ನಿಶ್ಚಿತಾರ್ಥ

ನಟ ಅಂಬರೀಶ್ ಹಾಗು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಭಾನುವಾರ ನೆರವೇರಿದೆ.

ಇತ್ತೀಚೆಗೆ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಆ ಸುದ್ದಿಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಈಗ ಅಭಿಷೇಕ್ ಮತ್ತು ಅವಿವಾ ಅವರ ನಿಶ್ಚಿತಾರ್ಥ ನೆರವೇರಿದೆ.

ಅವಿವಾ ಅವರು ಮಾಡೆಲ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ.

Categories
ಸಿನಿ ಸುದ್ದಿ

ಒಂದು ಕೊಲೆಯ ಪ್ರಮಾದ! ವಾಯ್ಸ್ ಬ್ರಾಂಡ್ ಪ್ರಮೋದ…

ಚಿತ್ರ ವಿಮರ್ಶೆ – ವಿಜಯ್ ಭರಮಸಾಗರ

ರೇಟಿಂಗ್ – 3/5

ಚಿತ್ರ: ಬಾಂಡ್ ರವಿ
ನಿರ್ದೇಶನ: ಪ್ರಜ್ವಲ್
ನಿರ್ಮಾಣ: ನರಸಿಂಹ ಮೂರ್ತಿ
ತಾರಾಗಣ: ಪ್ರಮೋದ್, ಕಾಜಲ್ ಕುಂದರ್, ಶೋಭರಾಜ್, ರವಿಕಾಳೆ, ಜೀ ಜೀ, ಪವನ್, ಧರ್ಮ ಇತರರು.

ನಾನು ಡಾನ್ ಆಗೋಕೆ ಬಂದಿಲ್ವೋ, ಬ್ರಾಂಡ್ ಆಗೋಕೆ ಬಂದೋನು…’

ಹೀಗೆ ಪಂಚ್ ಡೈಲಾಗ್ ಹೇಳುತ್ತ ಎದುರಾಳಿಗಳಿಗೆ ಒಂದೊಂದೆ ಪಂಚ್ ಕೊಡುವ ಮೂಲಕ ಹೀರೋ ಖಡಕ್ ಎಂಟ್ರಿ ಕೊಟ್ಟು ಖದರ್ ತೋರಿಸುವ ಹೊತ್ತಿಗೆ, ಅವನಾಗಲೇ ಜೈಲೊಳಗೆ ಎಂಟ್ರಿಯಾಗಿರುತ್ತಾನೆ. ಅವನು ಜೈಲಿಗೆ ಬಂದಿದ್ಯಾಕೆ? ಅವನ ಮೇಲೆ ರೌಡಿ ಖೈದಿಗಳು ಅಟ್ಯಾಕ್ ಮಾಡಿದ್ದೇಕೆ? ಅನ್ನೋದು ಸಸ್ಪೆನ್ಸ್. ಇಡೀ ಸಿನಿಮಾ ಮಾಸ್ ಫೀಲಲ್ಲೇ ಸಾಗುತ್ತೆ. ಈ ಬಾಂಡ್ ರವಿ ಯಾರು? ಅವನು ಒಳ್ಳೆಯವನೋ, ಕೆಟ್ಟವನೋ ಅನ್ನೋ ಕುತೂಹಲವಿದ್ದರೆ ಒಮ್ಮೆ ಬಾಂಡ್ ರವಿನ ವಿಚಾರಿಸಿಕೊಂಡು ಬರಬಹುದು.

ಇದೊಂದು ಮಾಸ್ ಫೀಲ್ ಇರುವ ಸಿನಿಮಾ. ಜೊತೆಗೊಂದಷ್ಟು ಪ್ರೀತಿ, ಗೆಳೆತನ, ಮೋಸ, ಇತ್ಯಾದಿಯ ಹೂರಣ ಇಲ್ಲಿದೆ. ಇದು ಪಕ್ಕಾ ಯೂತ್ಸ್ ಟಾರ್ಗೆಟ್ ಮಾಡಿ ತೋರಿಸಿರುವ ಸಿನಿಮಾ. ಇಡೀ ಸಿನಿಮಾದ ಅರ್ಧ ಭಾಗ ಜೈಲಿನಲ್ಲೇ ಸಾಗುತ್ತೆ. ಹಾಗಂತ ನೋಡೋರಿಗೆ ಎಲ್ಲೂ ಜೈಲು ಬೋರ್ ಎನಿಸದಷ್ಟರ ಮಟ್ಟಿಗೆ ನಿರ್ದೇಶಕರು ತಮ್ಮ ಕೆಲಸ ಮಾಡಿದ್ದಾರೆ. ಪಕ್ಕಾ ಲೋಕಲ್ ಹುಡುಗನ ಸುತ್ತ ಹೆಣೆದಿರೋ ಕಥೆಯಲ್ಲಿ ಹೇಳಿಕೊಳ್ಳುವಂತಹ ಧಮ್ ಇಲ್ಲವಾದರೂ, ನಿರೂಪಣೆಯಲ್ಲಿ ಬಿಗಿ ಹಿಡಿತವಿದೆ. ಆ ಕಾರಣಕ್ಕೆ ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಮೊದಲೇ ಹೇಳಿದಂತೆ ಕಥೆ ಸಿಂಪಲ್. ಆದರೆ, ನಿರ್ದೇಶಕರ ಸ್ಕ್ರೀನ್ ಪ್ಲೇ ತುಸು ಇಂಟ್ರೆಸ್ಟ್ ಎನಿಸುತ್ತೆ.

ಮೊದಲರ್ಧ ಕೊಲೆ, ಜೈಲು, ಅಲ್ಲಿ ನಡೆಯೋ ಡೀಲು, ಹೊಡೆದಾಟ, ಪ್ರೀತಿಯ ಹುಡುಕಾಟ, ಒಂದಷ್ಟು ತಮಾಷೆ, ಎಮೋಷನಲ್ ವಿಷಯಗಳಲ್ಲೇ ಮುಗಿದು ಹೋದರೆ, ದ್ವಿತಿಯಾರ್ಧ ಬದುಕಿನ ಹೋರಾಟ, ಚೀರಾಟ, ಪೋಲೀಸರ ಹುಡುಕಾಟ ಇತ್ಯಾದಿ ಅಂಶಗಳ ಜೊತೆಗೊಂದು ಅಂತ್ಯ. ಇವಿಷ್ಟು ವಿಷಯಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಮೂಲಕ ಸರಿ-ತಪ್ಪುಗಳ ಚರ್ಚೆಗೆ ಬಿಟ್ಟಿದ್ದಾರೆ.

ಸಿನಿಮಾದಲ್ಲಿ ಕೆಲ ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಎಲ್ಲೋ ಒಂದು ಕಡೆ ಚಿತ್ರದ ವೇಗ ಕಡಿಮೆ ಆಗುತ್ತಿದೆ ಅಂದುಕೊಳ್ಳುತ್ತಿದ್ದಂತೆ ಅಲ್ಲೊಂದು ಭರ್ಜರಿ ಫೈಟು, ಸಖತ್ ಸಾಂಗು ಕಾಣಿಸಿಕೊಂಡು ವೇಗಕ್ಕೆ ಹೆಗಲು ಕೊಡುತ್ತವೆ.

ಚಿತ್ರದಲ್ಲಿ ಓಹೋ ಅನ್ನುವ ಅಂಶಗಳಿಲ್ಲದಿದ್ದರೂ, ಕ್ಲೈಮ್ಯಾಕ್ಸ್ ಮಾತ್ರ ಎದೆ ಭಾರವಾಗಿಸುತ್ತೆ. ಅದೇ ಸಿನಿಮಾದ ಪ್ಲಸ್. ಹಾಗಾಗುತ್ತೆ ಅಂತ ಭಾವಿಸಿದರೆ, ಅಲ್ಲಿ ಬೇರೇನೋ ಆಗುತ್ತೆ. ಆಗಲೇ ಸಿನಿಮಾ ಮತ್ತಷ್ಟು ಕುತೂಹಲಕ್ಕೆ ಕರೆದೊಯ್ಯುತ್ತೆ. ಇಡೀ ಚಿತ್ರ ಮಾಸ್ ಫೀಲ್ ಕೊಟ್ಟರೂ ಅಲ್ಲಲ್ಲಿ ಹೃದಯದ ಪಿಸುಮಾತು ಕೇಳಿಸುತ್ತೆ. ಜೀವ ಭಾವ ಮಿಡಿತದ ಸಂದೇಶ ಕೊಡುತ್ತೆ. ಇದೆಲ್ಲ ನೋಡಬೇಕು ಕೇಳಬೇಕು ಅನ್ನೋ ಕುತೂಹಲವಿದ್ದರೆ ಬಾಂಡ್ ರವಿ ನೋಡಬಹುದು.

ಇದು ಕಥೆ…

ಬಾಂಡ್ ರವಿ ಕಥಾ ನಾಯಕ. ದುಡ್ಡು ಕೊಟ್ಟರೆ ಬೇಕಾದು ಮಾಡೋ ಲೋಕಲ್ ಹುಡುಗ. ಹಾಗಂತ ತೀರ ಕೆಟ್ಟ ಕೆಲಸದ ಸಹವಾಸ ಮಾಡಲ್ಲ. ಕಾಸಿಲ್ಲದೆ ಯಾರಿಗೂ ಕನೆಕ್ಟ್ ಆಗಲ್ಲ. ಅವನಿಗೆ ಸೆಂಟಿಮೆಂಟ್ ಗಿಂತ ಸೆಟ್ಲ್ ಮೆಂಟ್ ಇಷ್ಟ. ಒಂದು ರೀತಿ ಕೆಟ್ಟೋನು ಥರ ಇರೋ ಒಳ್ಳೆಯವನು. ಇಂಥ ಹುಡುಗನ ಲೈಫಲ್ಲಿ ಹುಡುಗಿ ಎಂಟ್ರಿಯಾಗುತ್ತಾಳೆ. ಅಲ್ಲಿ ಕೊಲೆ, ಪ್ರೀತಿ, ದ್ವೇಷ ಇನ್ನೇನೋ ಆಗುತ್ತೆ. ಕೊನೆಗೊಂದು ಮನಕಲಕುವ ದೃಶ್ಯದ ಅಂತ್ಯವಾಗುತ್ತೆ. ಮುಂದಾ ಅದೇ ಸ್ಪೆಷಲ್.

ಯಾರು ಹೇಗೆ?

ಪ್ರಮೋದ್ ಇಲ್ಲಿ ಎಂದಿಗಿಂತ ಇಷ್ಟವಾಗುತ್ತಾರೆ. ಖಡಕ್ ಡೈಲಾಗ್ ಜೊತೆ ಅವರ ವಾಯ್ಸ್ ಸಿನಿಮಾದ ಮತ್ತೊಂದು ಪ್ಲಸ್. ಶೋಭರಾಜ್ ಖಳನಾಗಿ ಅಬ್ಬರಿಸಿದರೆ, ರವಿಕಾಳೆ ಇರುವಷ್ಟು ಸಮಯ ಗಮನಸೆಳೆಯುತ್ತಾರೆ. ಕಾಜಲ್ ಕೂಡ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಜೈಲು ಗೆಳೆಯರಾಗಿ ಗೋವಿಂದೇಗೌಡ, (ಜೀ ಜೀ), ಪವನ್, ಮಿಮಿಕ್ರಿ ಗೋಪಿ, ವಿಜಯ್ ಚೆಂಡೂರ್, ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಧರ್ಮ ಪೊಲೀಸ್ ಅಧಿಕಾರಿಯಾಗಿ ಖದರ್ ತೋರಿಸಿದ್ದಾರೆ.

ಮನೋಮೂರ್ತಿ ಅವರ ಸಂಗೀತದ ಒಂದು ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಅರ್ಜುನ್ ಕಿಟ್ಟು ಅವರ ಕತ್ತರಿ ಪ್ರಯೋಗ ಸಿನಿಮಾ ವೇಗ ಹೆಚ್ಚಿಸಿದೆ. ಕೆ.ಎಸ್.ಚಂದ್ರಶೇಖರ್ ಅವರ ಕ್ಯಾಮೆರಾ ಕೈಚಳಕ ಬಾಂಡ್ ರವಿಯನ್ನು ಅಂದವಾಗಿಸಿದೆ.

Categories
ಸಿನಿ ಸುದ್ದಿ

ಹೊಸ ವರ್ಷಕ್ಕೆ ಭರ್ಜರಿ ಕಾಕ್ಟೈಲ್ ಪಾರ್ಟಿ! ಯುವ ನಟ ವೀರೆನ್ ರಗಡ್ ಎಂಟ್ರಿ…

ಕನ್ನಡದಲ್ಲಿ ಕೆಲವು ಸಿನಿಮಾಗಳು ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತವೆ. ಹಾಗೆಯೇ, ಬೆರಳೆಣಿಕೆಯಷ್ಟು ಹೀರೋಗಳು ತಮ್ಮ ಚೊಚ್ಚಲ ಸಿನಿಮಾ ಮೂಲಕವೇ ಜಾಸ್ತಿ ಸೌಂಡು ಮಾಡುತ್ತಿದ್ದಾರೆ. ಅಂತಹ ಜಾಸ್ತಿ ಸೌಂಡು ಮಾಡುತ್ತಿರುವ ಯಂಗ್ ಎನರ್ಜಿ ಇರುವ ಹೀರೋಗಳ ಸಾಲಿಗೆ ಈಗ ವೀರೆನ್ ಕೇಶವ್ ಕೂಡ ಸೇರಿದ್ದಾರೆ ಇವರ ಮೊದಲ ಸಿನಿಮಾವನ್ನು ಕೆ ಆರ್ ಜಿ ಸ್ಟುಡಿಯೋಸ್ ಅದ್ಧೂರಿಯಾಗಿ ರಿಲೀಸ್ ಮಾಡುತ್ತಿದೆ.

ಹೌದು, ವೀರೆನ್ ಕೇಶವ್ ಈಗಷ್ಟೇ ಚಂದನವನಕ್ಕೆ ಕಾಲಿಡಲು ಸಜ್ಜಾಗಿರುವ ಆರಡಿ ಕಟೌಟ್. ಅವರು ಅಭಿನಯಿಸಿರುವ ‘ಕಾಕ್ಟೈಲ್’ ಸಿನಿಮಾ ಹೊಸ ವರ್ಷದಲ್ಲಿ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಡಿಸೆಂಬರ್ 9 ಅವರ ಹುಟ್ಟು ಹಬ್ಬ. ಹಾಗಾಗಿ ಚಿತ್ರತಂಡ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಜನವರಿ 6ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಸಿನಿಮಾ ರಿಲೀಸ್ ಮೊದಲೇ ಹೀರೋ ವೀರೆನ್ ಕೇಶವ್ ‘ಡೆಬ್ಯು ಆ್ಯಕ್ಟರ್ ಅವಾರ್ಡ್- 2022’ ಗೆ ಭಾಜನರಾಗಿದ್ದಾರೆ. ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಡಿಸೆಂಬರ್ 10ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ‘ಕರ್ನಾಟಕ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಕಾಕ್ಟೈಲ್’ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ಪಡೆಯುತ್ತಿದ್ದಾರೆ. ಮೊದಲ ಸಿನಿಮಾಗೆ ಪ್ರಶಸ್ತಿ ಪಡೆಯುತ್ತಿರುವುದು ತಂಡಕ್ಕೆ ಸಹಜವಾಗಿಯೇ ಖುಷಿಯಾಗಿದೆ.

ಕಾಕ್ಟೈಲ್’ ಸಿನಿಮಾಗೆ ಶ್ರೀರಾಮ್ ಬಾಬು ನಿರ್ದೇಶಕರು. ವಿಜಯಲಕ್ಷ್ಮಿ ಕಂಬೈನ್ಸ್ ಮೂಲಕ ಡಾ.ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನು, ಕೆ ಆರ್ ಜಿ ಸ್ಟುಡಿಯೋಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ವಿಶೇಷ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ರಿಲೀಸ್ ಮೊದಲೇ ಗಮನ ಸೆಳೆಯುತ್ತಿದೆ. ಹೌದು, ಈಗಾಗಲೇ ಕನ್ನಡ ಚಿತ್ರರಂಗದ ದಿಗ್ಗಜ್ಜರು ‘ಕಾಕ್ಟೈಲ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಫಸ್ಟ್ ಗ್ಲಿಂಪ್ಸ್ ಕೂಡ ಮೆಚ್ಚುಗೆ ಪಡೆದುಕೊಂಡಿದೆ.

ಪಕ್ಕಾ ಹೀರೋ ಮೆಟೀರಿಯಲ್…

ನಾಯಕ ವೀರೆನ್ ಕೇಶವ್, ತಾನು ಹೀರೋ ಆಗೋಕೆ ಏನೆಲ್ಲಾ ಅರ್ಹತೆಗಳಿರಬೇಕೋ ಅವೆಲ್ಲವನ್ನೂ ಕರಗತ ಮಾಡಿಕೊಂಡೇ ಸ್ಯಾಂಡಲ್ ವುಡ್ ಸ್ಪರ್ಶಿಸುತ್ತಿದ್ದಾರೆ. ವೀರೆನ್ ಈಗಾಗಲೇ ಬಾಲನಟರಾಗಿಯೂ ಸೈ ಎನಿಸಿಕೊಂಡವರು. ಹೀರೋ ಆಗಬೇಕು ಎಂಬ ಉದ್ದೇಶದಿಂದ ಮುಂಬೈನ ಪ್ರತಿಷ್ಠಿತ ನಟನಾ ಶಾಲೆಯಲ್ಲಿ ಅವರು ನಟನಾ ತರಬೇತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಡ್ಯಾನ್ಸ್ ಮತ್ತು ಫೈಟ್ಸ್ ಕೂಡ ಕಲಿತಿದ್ದಾರೆ. ಥಿಯೇಟರ್ ಹಿನ್ನೆಲೆಯ ವೀರೆನ್ ಕೇಶವ್ ಅವರ ಮೊದಲ ಸಿನಿಮಾ ‘ಕಾಕ್ಟೈಲ್’.

ಸಿನಿಮಾ ಬಿಡುಗಡೆ ಮೊದಲೇ ಗ್ಲಿಂಪ್ಸ್ ರಿಲೀಸ್ ಮಾಡುವ ಮೂಲಕ ಕುತೂಹಲ ಕೆರಳಿಸಿದೆ. ‘ಕಾಕ್ಟೈಲ್” ಕುರಿತು ಹೇಳುವುದಾದರೆ, ಚಿತ್ರದ ಹೀರೋ ಎಂಬಿಎ ಮುಗಿಸಿ, ಸಮಾಜ ಸೇವೆಯ ಜೊತೆ ಕಂಪನಿಯಲ್ಲಿ ಕೆಲಸ ಮಾಡುವ ಒಬ್ಬ ಅನಾಥ.


ಹೈಸ್ಕೂಲ್ ಮೇಷ್ಟ್ರು ಮಗಳ ಹಾಗು ಹಿರೋ ನಡುವೆ ಪ್ರೀತಿ ಹುಟ್ಟುತ್ತೆ. ಈ‌ ಮಧ್ಯೆ ಪ್ರಭಾವಿ ರಾಜಕಾರಣಿ ಮತ್ತು ಅವನ ಮಗನ ಅನ್ಯಾಯ ಅಕ್ರಮ ವಿರುದ್ಧ ಹೀರೋ ಹೋರಾಡುತ್ತಾನೆ. ಆಮೇಲೆ ಏನಾಗುತ್ತೆ ಅನ್ನೋದು ಕಥೆ.

ಮೊದಲ ಸಿನಿಮಾ ರಿಲೀಸ್ ಮೊದಲೇ ಹೀರೋ ವೀರೇನ್ ಕೇಶವ್ ಅವರಿಗೆ ಒಂದಷ್ಟು ಕಥೆಗಳು ಹುಡುಕಿ ಬಂದಿವೆಯಾದರೂ, ಯಾವುದನ್ನೂ ಅಂತಿಮಗೊಳಿಸಿಲ್ಲ. ಒಳ್ಳೆಯ ಕಥೆ ಮತ್ತು ತಂಡದ ಜೊತೆ ಕೆಲಸ ಮಾಡಬೇಕೆಂದುಕೊಂಡಿರುವ ವೀರೆನ್ ಕೇಶವ್, ಈಗಾಗಲೇ ಒಂದು ಕಥೆ ಕೇಳಿದ್ದು, ಇಷ್ಟರಲ್ಲೇ ತಮ್ಮ ಎರಡನೇ ಸಿನಿಮಾ ಕುರಿತು ಅನೌನ್ಸ್ ಮಾಡಲಿದ್ದಾರೆ.

ಅದೇನೆ ಇರಲಿ, ಕನ್ನಡಕ್ಕೆ ಹೊಸ ಹೀರೋಗಳ ಆಗಮನ ತುಸು ಜೋರಾಗಿದೆ. ಆ ಸಾಲಿನ ಹೀರೋಗಳಲ್ಲಿ ವೀರೆನ್ ಕೇಶವ್ ಕೂಡ ಕನ್ನಡ ಚಿತ್ರರಂಗದಲ್ಲಿ ಗಟ್ಟಿನೆಲೆ ಕಾಣಲಿ ಎಂಬುದು ‘ಸಿನಿಲಹರಿ‘ ಆಶಯ.

error: Content is protected !!