Categories
ಸಿನಿ ಸುದ್ದಿ

ಆಗ ಆಫೀಸ್ ಬಾಯ್, ಲೈಟ್ ಬಾಯ್ ಕೆಲಸ… ಈಗ ನಟ, ನಿರ್ದೇಶಕ, ನಿರ್ಮಾಪಕ!

ಸಿನಿ ದುನಿಯಾದ ಅದೃಷ್ಟ

ಸಿದ್ದು

ಈ ಚಿತ್ರರಂಗವೇ ಹಾಗೆ. ಒಮ್ಮೆ ಈ ಬಣ್ಣದ ಲೋಕಕ್ಕೆ ಕಾಲಿಟ್ಟರೆ, ಮನಸು ಸಾಧಿಸೋವರೆಗೂ ಬಿಡಲ್ಲ. ಕಲೆ ಎಲ್ಲರನ್ನೂ ಒಪ್ಪಿ ಅಪ್ಪಿಕೊಳ್ಳುವುದಿಲ್ಲ.
ನೂರಾರು ಸಂಕಷ್ಟಗಳ ನಡುವೆಯೇ ಇಲ್ಲಿ ಬದುಕು ಕಟ್ಟಿಕೊಂಡವರೂ ಇದ್ದಾರೆ. ಬೆಟ್ಟದಷ್ಟು ಕನಸು ಕಟ್ಟಿಕೊಂಡು‌ ಬಂದ ಪ್ರತಿಭೆಗಳೂ ಇಲ್ಲಿವೆ. ಆ ಸಾಲಿಗೆ ಈಗ ಸಿದ್ದು ಎಂಬ ಹೊಸ ಪ್ರತಿಭೆಯೂ ಸೇರಿದೆ.
ಸಿದ್ದು ಮೂಲತಃ ಕೋಟೆ ನಾಡು ಚಿತ್ರದುರ್ಗದವರು.
ಸಿದ್ದು, ಸಿನಿಮಾರಂಗಕ್ಕೆ ಬಂದದ್ದು ತಾನೊಬ್ಬ ನಟ‌ ಆಗಬೇಕು, ನಿರ್ದೇಶಕನಾಗಬೇಕು ಅಂತ. ಆದರೆ, ಆ ಕನಸು ಸುಲಭವಾಗಿರಲಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟಿದ್ದೂ ಇದೆ. ಈಗಲೂ ಆ ಶ್ರಮ ಮುಂದುವರೆದಿದೆ.

ಆಗ ಲೈಟ್ ಬಾಯ್, ಈಗ ನಿರ್ಮಾಪಕ
ಸಿದ್ದು ಆರಂಭದ ದಿನಗಳಲ್ಲಿ ಆಫೀಸ್ ಬಾಯ್ ಆಗಿ, ಲೈಟ್ ಬಾಯ್ ಆಗಿ ನಂತರದ ದಿನಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ, ಬರಹಗಾರನಾಗಿಯೂ ಕೆಲಸ ಮಾಡಿದ್ದಾರೆ.
ಈ ಅನುಭವದೊಂದಿಗೆ ಅವರು, 2017 ರಲ್ಲಿ “ಅನಾಸಿನ್” ಎಂಬ ಕಿರುಚಿತ್ರದಲ್ಲಿ ಒಬ್ಬರೇ 6 ಪಾತ್ರಗಳಲ್ಲಿ ನಟಿಸಿ, ನಿರ್ದೇಶನ‌ ಮಾಡಿದ್ದಾರೆ.
ಆಮೇಲೆ ಸ್ವಂತವಾಗಿ ಸಿನಿ ಪ್ಯಾಲೇಸ್ ಸ್ಟುಡಿಯೋ ಎಂಬ ಕ್ಯಾಮೆರಾ ರೆಂಟಲ್ ಶುರು ಮಾಡಿ ಸಿನಿಮಾಗಳು, ಕಿರುಚಿತ್ರಗಳು, ಆಲ್ಬಮ್ ಸಾಂಗ್, ಸೀರಿಯಲ್, ವೆಬ್ ಸೀರೀಸ್ ಗಳು ಮಾಡಿದ್ದಾರೆ.

ಆರ್ಮಿಗೆ ಸೆಲ್ಯೂಟ್ 
ಕಳೆದ 2019ರಲ್ಲಿ ‘ಸೆಲ್ಯೂಟ್ ಫಾರ್ ಸೋಲ್ಡ್ಜರ್ಸ್’ ಎಂಬ ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದಾರೆ. 2020 ರಲ್ಲಿ ‘ ಆಯ್ತು ಬಿಡಿ’ ಎಂಬ ಆಲ್ಬಮ್ ಸಾಂಗ್ ಗೆ ಸಾಹಿತ್ಯ ಬರೆದು, ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಹಾಡಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.ಇದರೊಂದಿಗೆ ಸಿದ್ದು, ‘ಬ್ರಾಂಡೆಡ್ ಲವ್’ ಎಂಬ 30 ನಿಮಿಷದ ಕಿರುಚಿತ್ರ ತಯಾರಿಸಿದ್ದಾರೆ. ಈಗ ಇದೇ ಅನುಭವದೊಂದಿಗೆ ಒಂದು ಸಿನಿಮಾವನ್ನು ನಿರ್ದೇಶಿಸಿ, ನಿರ್ಮಿಸಿ, ನಟಿಸಿದ್ದಾರೆ. ಅದನ್ನೀಗ ಬಿಡುಗಡೆಗೆ ರೆಡಿ ಮಾಡುತ್ತಿದ್ದಾರೆ. ಮುಂದಿನ‌ ವರ್ಷ ಫೆಬ್ರವರಿಯಲ್ಲಿ ಒಂದು ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸುವ ಯೋಚನೆಯಲ್ಲಿದ್ದಾರೆ ಸಿದ್ದು.

 

 

Categories
ಸಿನಿ ಸುದ್ದಿ

ಸಂಚಾರಿ,ಕಮಾಂಡರ್ ಎಂಬ ಅತಿಥಿ ಅವತಾರಿ!

ಆಕ್ಟ್ 1978′ ಪಕ್ಕಾ ಮಾಸ್ ಸಿನಿಮಾ- ಸಂಚಾರಿ  ವಿಜಯ್ ವಿಶ್ವಾಸ

ಸಂಚಾರಿ ವಿಜಯ್ ಈಗ ಎನ್ ಎಸ್ ಜಿ ಕಮಾಂಡರ್. ಹೌದು , ಇದು ಅವರ ಹೊಸ ಅವತಾರ. ‘ಆಕ್ಟ್ 1978′ ಜಾರಿಗೆ ಅಂತ ಕಮಾಂಡರ್ ರೂಪದಲ್ಲಿ ಗಾಂಧಿನಗರಕ್ಕೆ ಅವರು ಹೊಸದಾಗಿ ಎಂಟ್ರಿ ಆಗುತ್ತಿದ್ದಾರೆ. ಆದರೆ, ಸರ್ಕಾರಿ ಸೇವೆಗಾಗಿ ಅವರು ಇಂತಹ ಯೂನಿಫಾರ್ಮ್ ಹಾಕಿರುವುದು ಇದು ಮೊದಲಲ್ಲ.‌‌’ಕಿಲ್ಲಿಂಗ್ ವೀರಪ್ಪನ್’ ಚಿತ್ರದಲ್ಲಿ ಎಸ್ ಟಿ ಎಫ್ ಇನ್ಸೆಸ್ಪೆಕ್ಟರ್ ಆಗಿದ್ದರು. ಆದಾದ‌ ನಂತರ ‘ಜಂಟಲ್ ಮೆನ್’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಆಗಿ ಮಿಂಚಿದ್ದರು. ಇದೀಗ ಎನ್ ಎಸ್ ಜಿ ಕಮಾಂಡರ್.

ಆಕ್ಟ್ 1978 ನ ಅವತಾರ !

ಅಂದ ಹಾಗೆ, ಇದು ಬಹುನಿರೀಕ್ಷಿತ ‘ಆಕ್ಟ್ 1978’ ಚಿತ್ರದಲ್ಲಿನ ಅವರ ಹೊಸ ಅವತಾರ . ಕನ್ನಡದ ಪ್ರತಿಭಾವಂತ ನಿರ್ದೇಶಕ ಮಂಸೋರೆ ನಿರ್ದೇಶನದ ಚಿತ್ರವಿದು. ಈಗಾಗಲೇ ಟ್ರೇಲರ್ ಮೂಲಕ ಭಾರೀ ಕುತೂಹಲ ಮೂಡಿಸಿದೆ. ನವೆಂಬರ್ 20 ಕ್ಕೆ ರಿಲೀಸ್ ಆಗುತ್ತಿದೆ.


ಲಾಕ್ ಡೌನ್ ನಂತರ ಚಿತ್ರ ಮಂದಿರದಲ್ಲಿ ತೆರೆ ಕಾಣುತ್ತಿರುವ ಮೊದಲ ಕನ್ನಡ ಚಿತ್ರ. ಕನ್ನಡ ಮಾತ್ರವಲ್ಲ ದಕ್ಷಿಣ ಭಾರತದಲ್ಲೆ ಮೊದಲು. ಈ ಮೂಲಕ ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರಗಳ ರಿಲೀಸ್ ಮೆರವಣಿಗೆ ಶುರುವಾಗುತ್ತಿದೆ. ಕತೆ ಮತ್ತು ಮೇಕಿಂಗ್ ಕಾರಣಕ್ಕೆ ಸುದ್ದಿಯಾಗಿರುವ ಹಾಗೆಯೇ ಚಿತ್ರದಲ್ಲಿನ ದೊಡ್ಡ ತಾರಾಗಣವೇ ಇಲ್ಲಿನ‌ ಪ್ರಮುಖ‌ ಆಕರ್ಷಣೆ. ಅಷ್ಟು ಕಲಾವಿದರ ಜತೆಗೆ ಮತ್ತಷ್ಟು ಕುತೂಹಲ ಇರುವುದು ನಟ ಸಂಚಾರಿ ವಿಜಯ್ ಪಾತ್ರ ಬಗ್ಗೆ.

ಬಿಕ್ಕಟ್ಟಿನ ಸಂದರ್ಭಕ್ಕೆ ಎಂಟ್ರಿ…

‘ ಇದೊಂದು‌ ದೊಡ್ಡ ಕಲಾವಿದರ ಸಮಾಗಮದ ಚಿತ್ರ.‌ ಅಂದ್ರೆ ಸಾಕಷ್ಟು ಜನ ಕಲಾವಿದರು ಇಲ್ಲಿದ್ದಾರೆ. ಅಷ್ಟು ಪಾತ್ರಗಳಿಗೂ‌ ಸರಿ‌ ಸಮಾನದ ಪ್ರಾಮುಖ್ಯತೆ ಸಿಕ್ಕಿದೆ ಅನ್ನೋದು ಅದರ ಇನ್ನೊಂದು ವಿಶೇಷ. ಅಂತಹ ಪಾತ್ರಗಳ ಪೈಕಿ ಎನ್ ಎಸ್ ಜಿ ಕಮಾಂಡರ್ ಪಾತ್ರವು ಒಂದು. ಇದು ಚಿತ್ರದಲ್ಲಿನ ಗೆಸ್ಟ್ ರೋಲ್. ಇದಕ್ಕೆ ಬಣ್ಣ ಹಚ್ಚಿರುವುದು ನನ್ನ ಅದೃಷ್ಟ. ಒಂದು ಕ್ರೂಷಿಯಲ್ ಸಂದರ್ಭದಲ್ಲಿ ಕಮಾಂಡರ್ ಎಂಟ್ರಿ ಆಗುತ್ತೆ. ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸಲು ಸರ್ಕಾರವೇ ಅಲ್ಲಿಗೆ ನನ್ನನ್ನು ನೇಮಕ‌ಮಾಡಿರುತ್ತದೆ.‌ ಆದರೆ ಅಲ್ಲಿಗೆ ಬಂದಾಗ ಪೊಲೀಸ್ ಇನ್ಸೆಸ್ಪೆಕ್ಟರ್ ‌ಪ್ರಮೋದ್ ಶೆಟ್ಟಿ ಮತ್ತು ನನಗೆ ಒಂದಷ್ಟು‌ಜಟಾಪಟಿ‌ ನಡೆಯುತ್ತೆ‌. ಅಲ್ಲಿನ ಸಂಭಾಷಣೆ ಅದ್ಬುತವಾಗಿದೆ. ಅದ್ಯಾಕೆ ಅನ್ನೊದು ಸಿನಿಮಾದ ಸಸ್ಪೆನ್ಸ್’ ಎನ್ನುತ್ತಾರೆ ನಟ‌ ಸಂಚಾರಿ ವಿಜಯ್.

ಮಂಸೋರೆ ಬದಲಾಗಿದ್ದು ಕಂಡೆ..

ಸಂಚಾರಿ ವಿಜಯ್ ಹಾಗೂ ನಿರ್ದೇಶಕ ಮಂಸೋರೆ ಮತ್ತೊಮ್ಮೆ ಒಂದಾಗಿರುವುದು‌ ಇಲ್ಲಿನ ಮಗದೊಂದು ವಿಶೇಷ. ಯಾಕಂದ್ರೆ ಅವರಿಬ್ಬರದು ಭಲೇ ಜೋಡಿ.‌ ಚೊಚ್ಚಲ ಸಿನಿಮಾದಿಂದಲೇ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದರು.‌ಸಿನಿ‌ದುನಿಯಾದಲ್ಲಿ ಜೊತೆಯಾಗಿ ಸಾಗಿ ಬರುತ್ತಿದ್ದಾರೆ. ಒಂದು ಹಂತದಲ್ಲಿ ಬದ್ದತೆಗೆ ಕಟ್ಟು ಬಿದ್ದು ಬದಲಾಗದೆ ಉಳಿದವರು ಈಗ ಬದಲಾಗಿದ್ದಾರೆ. ಸಂಚಾರಿ ವಿಜಯ್ ಕಮಾಂಡರ್ ಆಗಿದ್ದು ಕೂಡ ಹಾಗೆಯೆ.‌ಅದರಾಚೆ ಮಂಸೋರೆ ಕೂಡ ಕ್ಲಾಸ್ ಆಚೆ ಮಾಸ್ ಸಿನಿಮಾ ‌ಮಾಡಿದ್ದೇನೆಂದು ಹೇಳುತ್ತಿರುವುದು ಕೂಡ ಹಾಗೆಯೆ. ಹಾಗಾದ್ರೆ ಆ ಬದಲಾವಣೆ ಏನು? ಆ ಬಗ್ಗೆ ಸಂಚಾರಿ ವಿಜಯ್ ಕಂಡಿದ್ದೇನು?

ಪಕ್ಕಾ ಕಮರ್ಷಿಯಲ್  ಸಿನಿಮಾ‌..

‘ ಮಂಸೋರೆ ಸಿ‌ನಿ‌ಜರ್ನಿಯಲ್ಲಿ ಆಕ್ಟ್ ೧೯೭೮ ಮಹತ್ತರವಾದ ಸಿನಿಮಾ. ಅದಕ್ಕೆ ಕಾರಣ ಹಲವು.‌ಕತೆ, ಅದರ ಮೇಕಿಂಗ್ ಶೈಲಿ ಇತ್ಯಾದಿ. ‘ಹರಿವು’ ಸಿನಿಮಾದಿಂದಲೂ ಪರಸ್ಪರ ಒಟ್ಟಿಗೆ ಕೆಲಸ‌ಮಾಡುತ್ತಾ ಬಂದಿದ್ದೇವೆ. ಅವರ ಸಿನಿಮಾ‌ ಮೇಕಿಂಗ್ ಶೈಲಿ ಎಂಥದ್ದು ಅಂತ‌ ನಂಗೊತ್ತು.‌ಹಾಗೆಯೇ ನನ್ನ ಆ್ಯಕ್ಟಿಂಗ್ ಟೆಸ್ಟ್ ಹೇಗೆ ಆಂತಲೂ‌ಅವರಿಗೆ ಗೊತ್ತು.‌ಆ ದೃಷ್ಟಿಯಲ್ಲಿ ನಾನಿಲ್ಲಿ ಸಾಕಷ್ಡು ಬದಲಾವಣೆ ಕಂಡಿದ್ದೇನೆ. ಅವರ ತಮ್ಮ ಮಾಮೂಲು ಶೈಲಿಯನ್ನು‌ಮೀರಿ‌ ಒಂದಷ್ಟು ಸಿನಿಮ್ಯಾಟಿಕ್ ರೂಪ ಬಳಸಿದ್ದಾರೆ. ಹಾಗೆಯೇ ಬಡ್ಜೆಟ್ ನಲ್ಲೂ‌ ರಾಜಿಯಾಗದೆ ಕತೆಯ ಡಿಮ್ಯಾಂಡ್ ಅನುಸಾರ ಸಿನಿಮಾ‌ ಮಾಡಿದ್ದಾರೆ.‌ಆದ್ದರಿಂದಲೇ ದೊಡ್ಡ ಮಟ್ಟದ ಸೆಟ್ ಹಾಕಿ‌ ಸಿನಿಮಾ‌ ಮಾಡಲು ಸಾಧ್ಯವಾಗಿದೆ. ಪಾತ್ರಗಳ ದಂಡೇ ಇಲ್ಲಿದ್ದರೂ, ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ‌ಸಿಗುವಂತೆ ಚಿತ್ರಕತೆ ಹೆಣೆದಿದ್ದಾರೆ. ಥ್ರಿಲ್ಲರ್ ಎಲಿಮೆಂಟ್ ಸಿನಿಮಾ‌ದೊಡ್ಡ‌ಶಕ್ತಿ‌ಆಗಿದೆ. ಹಾಗೆಯೇ ತಾಂತ್ರಿಕತೆ ಯಲ್ಲೂ ಯಾವುದೇ ರೀತಿ ರಾಜಿ ಆಗಿಲ್ಲ. ಇದೆಲ್ಲ‌ಮಾಸ್ ಸಿನಿಮಾವೊಂದರ ಸ್ಟೈಲ್ ಅಂತಾರೆ‌ ನಟ ಸಂಚಾರಿ‌ವಿಜಯ್.

Categories
ಸಿನಿ ಸುದ್ದಿ

ಹೀಗೊಂದು ಸಿಹಿ ಸುದ್ದಿ ಗಂಡು ಗರ್ಭ ಧರಿಸಿದ ಕಥೆ!

ಇದು ನೂತನ ವೆಬ್ ಸೀರೀಸ್

ಈಗಾಗಲೇ ಕನ್ನಡದಲ್ಲಿ ತರಹೇವಾರಿ ಶೀರ್ಷಿಕೆ ‌ಇರುವ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಸದ್ಯಕ್ಕೆ ಮತ್ತೊಂದು ವಿಶೇಷ ಎನಿಸುವ, ಗಮನ ಸೆಳೆಯುವ ಶೀರ್ಷಿಕೆ ಹೊತ್ತ ವೆಬ್ ಸೀರೀಸ್ ಗೆ ಚಾಲನೆ ದೊರೆತಿದೆ.
ಹೌದು ಕನ್ನಡದಲ್ಲಿ ಈಗಂತೂ ವೆಬ್ ಸಿರೀಸ್ ಗಳ ಪರ್ವ. ಆ ಸಾಲಿಗೆ ‘ನಿಮಗೊಂದು ಸಿಹಿ ಸುದ್ದಿ’ ಹೆಸರಿನ‌ ವೆಬ್ ಸೀರೀಸ್ ಕೂಡ ಸೇರಿದೆ. ಇದೊಂದು ವಿಶೇಷ ಕಥಾಹಂದರ ಹೊಂದಿರುವ ವೆಬ್ ಸೀರೀಸ್.


ಕನ್ನಡದಲ್ಲಿ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸೊಬ್ಬನ ಕಥೆ ಈ ವೆಬ್ ಸೀರೀಸ್ ನಲ್ಲಿ ಮೂಡಿ ಬರಲಿದೆ.
ಹಾಗೆ ಹೇಳುವುದಾದರೆ, ಕನ್ನಡದ ಮಟ್ಟಿಗೆ ಇದು
ಹೊಸ ಕಾನ್ಸೆಪ್ಟ್. ಸುಮಾರು
ಎಂಟು ಎಪಿಸೋಡುಗಳನ್ನು ಹೊಂದಿರುವ ಈ ಫ್ಯಾಮಿಲಿ ಎಂಟರ್ಟೈನ್ಮೆಂಟ್ ವೆಬ್ ಸಿರೀಸ್ ಗೆ ಇತ್ತೀಚೆಗೆ ಪೂಜೆ ನೆರವೇರಿದೆ. ಪರ್ಪಲ್ ರಾಕ್ ಎಂಟರ್ಟೈನರ್ಸ್ ಮತ್ತು ಗೋಲ್ಡ್ ಚೈನ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಶುರುವಾಗುತ್ತಿರುವ ಈ ವೆಬ್ ಸರಣಿಗೆ ಗೋವಾದ ಶಾಂತದುರ್ಗ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ.
ಸುಮಾರು 30 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.


‘ಡಿಯರ್ ಸತ್ಯ’ ಸಿನಿಮಾದ ಬಳಿಕ ಪರ್ಪಲ್ ರಾಕ್ ಎಂಟರ್ಟೈನರ್ಸ್ ಶುರು ಮಾಡುತ್ತಿರುವ ವೆಬ್ ಸೀರೀಸ್ ನಲ್ಲಿ ರಘು ಭಟ್ ಪ್ರಮುಖ ಆಕರ್ಷಣೆ. ಕಾವ್ಯ ಶೆಟ್ಟಿ ನಾಯಕಿ. ಆನಂದ್ ಸುಂದರೇಶ ಛಾಯಾಗ್ರಹಣವಿದೆ. ‘ಟೋಪಿವಾಲಾ’ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಸುಧೀಂದ್ರ ನಾಡಿಗರ್ ಆರ್ ಈ ವೆಬ್ ಸಿರೀಸ್ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

Categories
ಸಿನಿ ಸುದ್ದಿ

ಜಗ್ಗೇಶ್ ಕಲಾ ಬದುಕಿಗೆ ನಾಲ್ಕು ದಶಕ

ನವರಸ ನಾಯಕನ 40 ವರ್ಷಗಳ ಯಶಸ್ವಿ ಜರ್ನಿ

ಕನ್ನಡ ಚಿತ್ರರಂಗದ ನವರಸ ನಾಯಕ‌ ಅಂದಾಕ್ಷಣ ನೆನಪಾಗೋದೆ ಜಗ್ಗೇಶ್. ಕನ್ನಡ‌ ಚಿತ್ರರಗ ಕಂಡ ಅಪರೂಪದ ನಟ ಜಗ್ಗೇಶ್.
ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದ ಜಗ್ಗೇಶ್ ಅವರ ಸಿನಿ ಜರ್ನಿ ನಿಜಕ್ಕೂ ಅದ್ಭುತ. ಅವರ ಸಿನಿಮಾ‌ ಪಯಣಕ್ಕೀಗ ನಾಲ್ಕು ದಶಕ.
ಹೌದು, ಜಗ್ಗೇಶ್ ಕಲಾ ಬದುಕಿಗೆ ಎಂಟ್ರಿಯಾಗಿ ನಲವತ್ತು ದಶಕಗಳಾಗಿವೆ. ಇಷ್ಟು ವರ್ಷಗಳ ಸಿನಿ ಬದುಕಲ್ಲಿ ಹಲವು ಸೋಲು‌ ಕಂಡಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಗೆಲುವು ಬಂದಾಗ ಹಿಗ್ಗದ ಸೋಲು‌ ಕಂಡಾಗ ಕುಗ್ಗದ ಜಗ್ಗೇಶ್ ತಮ್ಮ ಸಿನಿಮಾ ಪಯಣದಲ್ಲಿ ಹಲವು ಬಗೆಯ ಪಾತ್ರಗಳ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದಾರೆ.


ಸಿನಿಮಾ‌ ಜೊತೆಗೆ ಜಗ್ಗೇಶ್ ಅವರು, ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.
ಸಿನಿಮಾ ಜೊತೆ ಜೊತೆಗೆ ಅವರು ಕಿರುತೆರೆಯಲ್ಲೂ ಸದ್ದು ಮಾಡಿದ್ದು ಗೊತ್ತೇ ಇದೆ. ಸದಾ ರಾಯರ ನೆನೆಯುವ ಜಗ್ಗೇಶ್, ಈಗ ಯಶಸ್ವಿ ನಾಲ್ಕು ದಶಕ ಪೂರೈಸಿದ್ದಾರೆ. ಇನ್ನೂ ನಟನೆಯ ಉತ್ಸಹದಲ್ಲಿರುವ ಜಗ್ಗೇಶ್ ಇನ್ನಷ್ಟು ವಿಭಿನ್ನ ಸಿನಿಮಾ ಮಾಡಲಿ.

Categories
ಸಿನಿ ಸುದ್ದಿ

ತನಿಖೆಗೆ ಬಂದ ಹೊಸಬರು

ನವೆಂಬರ್‌ 20ಕ್ಕೆ ನಮ್ಮ ಫ್ಲಿಕ್ಸ್‌ನಲ್ಲಿ ಚಿತ್ರ ರಿಲೀಸ್

ಕನ್ನಡದಲ್ಲಿ ಈಗಾಗಲೇ ಓಟಿಟಿ ಫ್ಲಾಟ್‌ಫಾರ್ಮ್‌ ಮೂಲಕ ಒಂದಷ್ಟು ಸಿನಿಮಾಗಳು ಬಿಡುಗಡೆಯಾಗಿವೆ.ಇನ್ನಷ್ಟು ಚಿತ್ರಗಳು ಬಿಡುಗಡೆಗೂ ಸಜ್ಜಾಗಿವೆ. ಆ ಸಾಲಿಗೆ ಈಗ “ತನಿಖೆ” ಎಂಬ ಹೊಸಬರ ಚಿತ್ರವೂ ಸೇರಿದೆ

ಚಂದನಾ, ನಾಯಕಿ

“ತನಿಖೆ” ಎಂಬ ಶೀರ್ಷಿಕೆ ಕೇಳಿದಾಕ್ಷಣ, ಕಳೆದ ಎರಡುವರೆ ದಶಕದ ಹಿಂದೆ ಬಂದ ಗುಲ್ಜಾರ್‌ ಖಾನ್‌ ಅವರ “ತನಿಖೆ” ನೆನಪಾಗದೇ ಇರದು. ಈಗ ಆದೇ ಶೀರ್ಷಿಕೆ ಇಟ್ಟುಕೊಂಡು ಹೊಸಬರು ಹೊಸ ಪ್ರಯತ್ನದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ಈ ಹೊಸಬರ “ತನಿಖೆ” ಸಿನಿಮಾ ಈ ಹಿಂದೆಯೇ ತೆರೆಗೆ ಬರಬೇಕಿತ್ತು. ಕೊರೊನಾ ಹಾವಳಿಯಿಂದಾಗಿ, ಚಿತ್ರ ಈಗ ಬಿಡುಗಡೆಯಾಗುತ್ತಿದೆ. ಅದರಲ್ಲೂ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ.

ತನಿಖೆ ಚಿತ್ರತಂಡ…

“ನಮ್ಮ ಫ್ಲಿಕ್ಸ್” ಎಂಬ ಓಟಿಟಿ ಫ್ಲಾಟ್‌ಫಾರ್ಮ್ ನಲ್ಲಿ ನವೆಂಬರ್‌ 20 ರಂದು “ತನಿಖೆ” ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕಲಿಗೌಡ ನಿರ್ದೇಶನ ಮಾಡಿದ್ದಾರೆ. ಇವರಿಗೆ ಇದು ಮೊದಲ ಚಿತ್ರ. ತಮ್ಮ ಗೆಳೆಯರ ಜೊತೆಗೂಡಿ ನಿರ್ಮಾಣವನ್ನೂ ಮಾಡಿದ್ದಾರೆ. ಇನ್ನು, ಈ ಚಿತ್ರ ಬಿಡುಗಡೆ ಕುರಿತು ನಿರ್ದೇಶಕ ಕಲಿಗೌಡ ಹೇಳುವುದಿಷ್ಟು. “ಬಹುತೇಕ ಹೊಸಬರೇ ಸೇರಿ ಮಾಡಿರುವ “ತನಿಖೆ” ಇದು. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೊದಲೇ ನಾವು, “ನಮ್ಮ ಫ್ಲಿಕ್ಸ್” ಓಟಿಟಿ ಫ್ಲಾಟ್‌ಫಾರ್ಮ್‌ ನಲ್ಲಿ ನೇರವಾಗಿ ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ನಾವು ಟಿಕೆಟ್‌ಗಳನ್ನೂ ವಿತರಿಸಿದ್ದೇವೆ. ಸುಮಾರು 30 ಸಾವಿರ ಟಿಕೆಟ್‌ ವಿತರಿಸಲಾಗಿದೆ. ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ೯೯ ರುಪಾಯಿ ಕೊಟ್ಟು ಟಿಕೆಟ್‌ ಖರೀದಿಸುವ ಪ್ರೇಕ್ಷಕ ನಾವು ಕೊಡುವ ಒಂದು ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ, ತಮ್ಮ ಮೊಬೈಲ್, ಲ್ಯಾಪ್‌ ಟಾಪ್‌, ಟಿವಿಯಲ್ಲಿ ನಮ್ಮ ಸಿನಿಮಾವನ್ನು ವೀಕ್ಷಿಸಬಹುದು.

ಕಲಿಗೌಡ, ನಿರ್ದೇಶಕ

 

ಕೇವಲ 99 ರುಪಾಯಿಗೆ ಮನೆಮಂದಿ ಕೂಡ ಸಿನಿಮಾ ನೋಡಬಹುದಾಗಿದೆ. ಇದೊಂದು ಒಳ್ಳೆಯ ವೇದಿಕೆಯಾಗಿದ್ದರಿಂದ ನಾವು ಓಟಿಟಿ ಮೊರೆ ಹೋಗಿದ್ದೇವೆ. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ಗ್ರಾಮದಲ್ಲಿ ನಡೆಯುವ ಕಥೆ. ಐವರು ಸೋಮಾರಿ ಗೆಳೆಯರ ಸುತ್ತ ನಡೆಯುವ ಸ್ಟೋರಿ ಇದಾಗಿದ್ದು, ಅವರು ಇರುವ ಹಳ್ಳಿಯಲ್ಲೊಂದು ಕ್ರೈಮ್‌ ನಡೆದು ಹೋಗುತ್ತದೆ. ಅದು ಅವರ ಮೇಲೆ ಆರೋಪ ಕೇಳಿಬರುತ್ತದೆ. ಆಗ ಭಯಗೊಂಡ ಆ ಐವರು ಗೆಳೆಯರು ಊರು ಬಿಟ್ಟು ಹೋಗುತ್ತಾರೆ. ಆಗ ಅಲ್ಲಿಗೆ ಬರುವ ಖಡಕ್‌ ಪೊಲೀಸ್‌ ಅಧಿಕಾರಿ, “ತನಿಖೆ” ನಡೆಸುತ್ತಾರೆ. ಆ ತನಿಖೆಯೇ ಸಸ್ಪೆನ್ಸ್.‌ ಅದನ್ನು ಸಿನಿಮಾದಲ್ಲೇ ನೋಡಬೇಕು” ಎನ್ನುತ್ತಾರೆ ಕಲಿಗೌಡ.
ಈ ಚಿತ್ರವನ್ನು “ನಮ್ಮ ಫ್ಲಿಕ್ಸ್”‌ ಬಿಡುಗಡೆ ಮಾಡುತ್ತಿರುವ ಓಟಿಟಿಯ ಮುಖ್ಯಸ್ಥ ವಿಜಯಪ್ರಕಾಶ್‌, ಮಾತನಾಡಿ, ಇದೊಂದು ಒಳ್ಳೆಯ ಬೆಳವಣಿಗೆ. ಸಿನಿಮಾ ತಂಡ ಹೊಸದು. ಅವರಿಗೆ ನಮ್ಮ ಫ್ಲಾಟ್‌ಫಾರ್ಮ್ ಕಲ್ಪಿಸಿಕೊಡುತ್ತಿದ್ದೇವೆ. ಈಗಾಗಲೇ30 ಸಾವಿರ ಟಿಕೆಟ್‌ ಸೇಲ್‌ ಆಗಿದೆ. ಚಿತ್ರ ಬಿಡುಗಡೆ ನಂತರವೂ ಚಿತ್ರಕ್ಕೆ ಟಿಕೆಟ್‌ ಪಡೆದು ವೀಕ್ಷಿಸಬಹುದು. ಕನ್ನಡ ಚಿತ್ರರಂಗಕ್ಕೆ, ಕನ್ನಡ ಚಿತ್ರಗಳಿಗಾಗಿಯೇ ಈ ವೇದಿಕೆ ಕಲ್ಪಿಸಲಾಗಿದೆ ಎಂದರು.


ನಾಯಕಿ ಚಂದನಾ ಜಾನಕಿ ಅವರಿಗೆ ಇದು ಮೊದಲ ಸಿನಿಮಾ. ಅವರು ಈ ಚಿತ್ರದ ಮೇಲೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದಾರಂತೆ. ಅವರೇ ಹೇಳುವಂತೆ, “ಇದು ನನ್ನ ಮೊದಲ ಚಿತ್ರ. ನಾನಿಲ್ಲಿ ಶಾಲೆಯ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ಕಾಲೇಜು ದಿನಗಳಲ್ಲಿ ಕ್ರಶ್‌ ಆಗುತ್ತೆ. ಆಮೇಲೆ ಒಂದಷ್ಟು ಸಮಸ್ಯೆಗಳೂ ನಡೆದುಹೋಗುತ್ತವೆ. ಆಗ ಏನೆಲ್ಲಾ ಸಮಸ್ಯೆ ಎದುರಿಸುತ್ತೇನೆ ಎಂಬುದು ಕಥೆ. ಈ ಚಿತ್ರ ನವೆಂಬರ್‌ 20 ರಂದು ರಿಲೀಸ್‌ ಆಗುತ್ತಿದೆ. ಎಲ್ಲರೂ ವೀಕ್ಷಿಸಿ, ಕನ್ನಡ ಚಿತ್ರರಂಗವನ್ನು ಬೆಳೆಸಿ” ಎಂದರು ಚಂದನಾ.
ಮಚ್ಚು ಮುನಿ ಅವರಿಗೆ ಇದು ಮೊದಲ ಚಿತ್ರವಂತೆ. ಇಲ್ಲಿ ಎಲ್ಲರೂ ಹೊಸಬರೇ ಸೇರಿ ಸಿನಿಮಾ ಮಾಡಿದ್ದೇವೆ. ನಮ್ಮಂತಹ ಹೊಸಬರನ್ನು ಪ್ರೋತ್ಸಾಹಿಸಿ ಎಂದರು ಮುನಿ. ಛಾಯಾಗ್ರಾಹಕ ಶ್ಯಾಮ್‌ ಸುಂದರ್‌ ಕೂಡ, “ತನಿಖೆ” ಚಿತ್ರ ಹೊಸಬರಿಂದ ಕೂಡಿದೆ. ಒಂದು ಕ್ರೈಂ ಸುತ್ತ ನಡೆಯುವ ಕಥೆ ಇದು. ಇಡೀ ಸಿನಿಮಾ ಸಸ್ಪೆನ್ಸ್‌ ಆಗಿಯೇ ಸಾಗಲಿದೆ ಎಂದರು. ಅನಿಲ್‌ ಆಡಿ, ಹರ್ಷಿಕಾ, ಅನಿಲ್‌,‌ ಅಪ್ಪು ಬಡಿಗೇರ್ ಇತರರು ಇದ್ದರು.

Categories
ಸಿನಿ ಸುದ್ದಿ

ಕಳೆದು ಹೋದ ಪಿಂಕಿ ಚಿತ್ರೋತ್ಸವಗಳಲ್ಲಿ ಪ್ರತ್ಯಕ್ಷ!

ಪಿಂಕಿ ಎಲ್ಲಿ ಕನ್ನಡ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮೆಚ್ಚುಗೆ

ಈಗಾಗಲೇ ಹಲವು ವಿದೇಶಗಳನ್ನು ಸುತ್ತಿ ಬಂದಿದ್ದಲ್ಲದೆ, ಅಲ್ಲಿನ ಜನರ ಪ್ರೀತಿಗೆ ಪಾತ್ರವಾಗಿದೆ. ಸೌತ್‌ ಕೊರಿಯಾದ ಬುಸಾನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾದ ಭಾರತದ ೫ ಸಿನಿಮಾಗಳ ಪೈಕಿ “ಪಿಂಕಿ ಎಲ್ಲಿ” ಎಂಬ ಚಿತ್ರವೂ ಒಂದು. ಇನ್ನು, ಮುಂಬೈ ಫಿಲ್ಮ್‌ ಫೆಸ್ಟಿವಲ್‌ನ ಗೋಲ್ಡ್‌ ವಿಭಾಗದಲ್ಲೂ ಆಯ್ಕೆಯಾಗಿದೆ. ಇನ್ನು ಕಳೆದ ವರ್ಷ ಗೋವಾದ ಫಿಲ್ಮ್‌ ಬಜಾರ್‌ ಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರಶಸ್ತಿಗೆ ಭಾಜನವಾಗಿದೆ.

ಕನ್ನಡ ಚಿತ್ರರಂಗ ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿರುವುದು ಹೊಸದೇನಲ್ಲ. ಹಲವು ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಬಾಚಿಕೊಂಡಿರುವುದು ಗೊತ್ತೇ ಇದೆ. ಸದಾ ನೈಜತೆಗೆ ಹೆಚ್ಚು ಒತ್ತು ಕೊಡುವ ಮೂಲಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ವಿದೇಶಿ ಸಿನಿರಸಿಕರನ್ನು ರಂಜಿಸಿದ್ದಲ್ಲದೆ, ಅವರು ಅಂತಹ ಅಪರೂಪದ ಕನ್ನಡ ಸಿನಿಮಾಗಳ ಬಗ್ಗೆ ಹೊಗಳಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಅಂತಹ ಮೆಚ್ಚುಗೆಗೆ ಮತ್ತೊಂದು ಕನ್ನಡದ ಸಿನಿಮಾ ಪಾತ್ರವಾಗಿದೆ ಎಂಬುದು ವಿಶೇಷ. ಆ ಸಾಲಿಗೆ ಸೇರಿರುವ ಸಿನಿಮಾ. “ಪಿಂಕಿ ಎಲ್ಲಿ” ಎಂಬ ಸಿನಿಮಾ.

ವಿದೇಶದಲ್ಲಿ ಪಿಂಕಿ ಸದ್ದು

ವಿಶೇಷವೆಂದರೆ, “ಪಿಂಕಿ ಎಲ್ಲಿ” ಎಂಬ ಸಿನಿಮಾ ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೋರು ಸುದ್ದಿ ಮಾಡುತ್ತಿದೆ ಎಂಬುದು ಮತ್ತೊಂದು ವಿಶೇಷ. ಬಹುತೇಕ ಹೊಸ ಪ್ರತಿಭೆಗಳೇ ಇರುವ ಈ ಚಿತ್ರ ಈಗಾಗಲೇ ಹಲವು ವಿದೇಶಗಳನ್ನು ಸುತ್ತಿ ಬಂದಿದ್ದಲ್ಲದೆ, ಅಲ್ಲಿನ ಜನರ ಪ್ರೀತಿಗೆ ಪಾತ್ರವಾಗಿದೆ. ಸೌತ್‌ ಕೊರಿಯಾದ ಬುಸಾನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾದ ಭಾರತದ ೫ ಸಿನಿಮಾಗಳ ಪೈಕಿ “ಪಿಂಕಿ ಎಲ್ಲಿ” ಎಂಬ ಚಿತ್ರವೂ ಒಂದು. ಇನ್ನು, ಮುಂಬೈ ಫಿಲ್ಮ್‌ ಫೆಸ್ಟಿವಲ್‌ನ ಗೋಲ್ಡ್‌ ವಿಭಾಗದಲ್ಲೂ ಆಯ್ಕೆಯಾಗಿದೆ. ಇನ್ನು ಕಳೆದ ವರ್ಷ ಗೋವಾದ ಫಿಲ್ಮ್‌ ಬಜಾರ್‌ ಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರಶಸ್ತಿಗೆ ಭಾಜನವಾಗಿದೆ.

ಮಗು ಸುತ್ತ ನಡೆಯೋ ತಲ್ಲಣದ ಕಥೆ

ಅಂದಹಾಗೆ, ಈ ಚಿತ್ರವನ್ನು ಪೃಥ್ವಿ ಕೊಣನೂರು ನಿರ್ದೇಶಿಸಿದ್ದಾರೆ. ಇವರಿಗೆ ಸಿನಿಮಾ ಹೊಸದೇನಲ್ಲ. ಮೂಲತಃ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಪೃಥ್ವಿ ಕೊಣನೂರು, ಈ ಹಿಂದೆ “ಆಲೆಗಳು” ಮತ್ತು “ರೈಲ್ವೇ ಚಿಲ್ಡ್ರನ್”‌ ಸಿನಿಮಾ ನಿರ್ದೇಶಿಸಿದ್ದಾರೆ. ತಮ್ಮ “ಪಿಂಕಿ ಎಲ್ಲಿ” ಸಿನಿಮಾ ಕುರಿತು “ಸಿನಿ ಲಹರಿ” ಜೊತೆ ಮಾತನಾಡುವ ಅವರು, “ಇದೊಂದು ಎಂಟು ತಿಂಗಳ ಮಗುವಿನ ಸುತ್ತ ನಡೆಯುವ ಕಥೆ. ಆ ಮಗು ಕಳೆದು ಹೋದಾಗ, ನಡೆಯುವ ಒಂದು ಕಥಾಹಂದರ ಹೊಂದಿದೆ. ನೈಜ ಘಟನೆಯೊಂದರ ಸ್ಫೂರ್ತಿಯಿಂದ ಮಾಡಿದ ಸಿನಿಮಾ ಇದು. ಮಗು ಕಳೆದಾಗ, ಸುತ್ತಲೂ ಆವರಿಸಿಕೊಳ್ಳುವ ಒಂದಷ್ಟು ಪಾತ್ರಗಳ ಗೊಂದಲ ಇತ್ಯಾದಿ ಸಿನಿಮಾದ ಹೈಲೈಟ್.‌ ಪ್ರಸ್ತುತ ನಗರಗಳಲ್ಲಿ ವಾಸಿಸುವ ಗಂಡ-ಹೆಂಡತಿ ಇಬ್ಬರೂ ಉದ್ಯೋಗಕ್ಕೆ ಹೊರ ಹೋದರೆ, ತಮ್ಮ ಮಗುವನ್ನು ನೋಡಿಕೊಳ್ಳುವಂತೆ ಮನೆಗೆಲಸದವರಿಗೆ ಬಿಡುತ್ತಾರೆ. ಆದರೆ, ಮನೆಗೆಲಸದವರು ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ. ಆ ಮಗು ಯಾರ ಕೈಗೆ ಸಿಗುತ್ತದೆ. ಒಂದು ಹಂತದಲ್ಲಿ ಭಿಕ್ಷುಕರು ಈ ಮಗುವನ್ನು ಬಳಸಿಕೊಂಡು ಭಿಕ್ಷೆಗೆ ಮುಂದಾಗುತ್ತಾರೆ. ತಮ್ಮ ಮಗು ಕಳುವಾದಾಗ ನಡೆಯುವಂತಹ ತಲ್ಲಣವೇ ಕಥೆಯ ವಿಶೇಷ. ಇನ್ನು, ಈ ಚಿತ್ರದಲ್ಲಿ ಎಲ್ಲರೂ ಮೊದಲ ಸಲ ನಟಿಸಿದ್ದಾರೆ. ಬಹುತೇಕ ಸ್ಲಂ ವಾಸಿಗಳಿಂದಲೇ ನಟನೆ ಮಾಡಿಸಿದ್ದು ವಿಶೇಷ” ಎಂಬುದು ನಿರ್ದೇಶಕರ ಹೇಳಿಕೆ.

ಪೃಥ್ವಿ  ನಿರ್ದೇಶಕ

ಸಾಮಾಜಿಕ ಕಾಳಜಿ ಚಿತ್ರ

ನಟನೆ ಬಗ್ಗೆ ಏನೂ ಗೊತ್ತಿಲ್ಲದವರನ್ನು ಕರೆತಂದು, ಅವರಿಗೆ ಒಂದಷ್ಟು ತರಬೇಡಿ ಕೊಟ್ಟು ನಂತರ ಕ್ಯಾಮೆರಾ ಮುಂದೆ ನಿಲ್ಲಿಸಿರುವುದು ಸುಲಭದ ವಿಷಯವಲ್ಲ. ನೈಜತೆಗಾಗಿಯೇ ನಿರ್ದೇಶಕರು ಸ್ಲಂನಲ್ಲಿ ವಾಸಿಸುವ, ಕಥೆ ಮತ್ತು ಪಾತ್ರಕ್ಕೆ ಸೂಕ್ತವೆನಿಸುವ ಮಂದಿಯನ್ನು ಆಯ್ಕೆ ಮಾಡಿಕೊಂಡು ನಟನೆ ಮಾಡಿಸಿರುವುದು ಸವಾಲಿನ ಕೆಲಸ. ಸ್ಲಂ ಸೇರಿದಂತೆ ಇತರೆಡೆ ಚಿತ್ರೀಕರಿಸಲಾಗಿದೆ. ಇಂಥದ್ದೊಂದು ಸಾಮಾಜಿಕ ಕಾಳಜಿ ಇರುವಂತಹ ಸಿನಿಮಾ ನಿರ್ಮಾಣ ಮಾಡಿರುವುದು ಕೃಷ್ಣೇಗೌಡ. ತಮ್ಮ “ಪಿಂಕಿ ಎಲ್ಲಿ” ಸಿನಿಮಾ ಬಗ್ಗೆ ಹೇಳುವ ಅವರು, “ನಾನು ನಿರ್ದೇಶಕರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅಭಿರುಚಿ ಇರುವ ನಿರ್ಮಾಪಕರಿಗೆ ಇಂತಹ ನಿರ್ದೇಶಕರು ಸಿಗಬೇಕು.

ಕೃಷ್ಣೇಗೌಡ, ನಿರ್ಮಾಪಕ

ಒಂದೊಳ್ಳೆ ಚಿತ್ರ ಮಾಡಿದ ತೃಪ್ತಿ

ಒಳ್ಳೆಯ ಕಥೆಗಾರ. ಹೇಳಿದ್ದನ್ನು ಮಾಡಿ ತೋರಿಸುವ ನಿರ್ದೇಶಕ ಎನ್ನುವುದು ಗೊತ್ತಾದ ಮೇಲೆ, ಅವರಿಗೆ ನಾನು ಸಂಪೂರ್ಣ ಬೆಂಬಲ ಕೊಟ್ಟೆ. ನಿರ್ದೇಶಕರು ಹಾಲಿವುಡ್‌ನಲ್ಲಿ ಸಿನಿಮಾ ಕುರಿತು ಓದಿಕೊಂಡು ಬಂದವರು. ತುಂಬಾನೇ ಸೂಕ್ಷ್ಮತೆ ಇರುವ ಕಥೆ ಆಯ್ಕೆ ಮಾಡಿಕೊಂಡು, ಒಂದು ಸಾಮಾಜಿಕ ಬದ್ಧತೆ ಇಟ್ಟುಕೊಂಡು ಮಾಡಿರುವಂತಹ ಸಿನಿಮಾ ಇದು. ಈ ಚಿತ್ರ ನೋಡಿದವರು ಖಂಡಿತವಾಗಿಯೂ ಇದರ ಬಗ್ಗೆ ಮಾತಾಡುತ್ತಾರೆ. ದೊಡ್ಡ ಮಟ್ಟದಲ್ಲಿ ಜಾಗೃತಿಯೂ ಮೂಡುತ್ತದೆ. ಈ ಹಿಂದೆ ನಿರ್ದೇಶಕ ಪೃಥ್ವಿ ಕೊಣನೂರು ಅವರು, “ರೈಲ್ವೇ ಚಿಲ್ಡ್ರನ್”‌ ಸಿನಿಮಾ ಮಾಡಿದ್ದರು. ಆ ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಅಲ್ಲಿಯೂ ಕೂಡ ನೈಜತೆಗೆ ಒತ್ತು ಕೊಟ್ಟಿದ್ದರು. ಈಗ “ಪಿಂಕಿ ಎಲ್ಲಿ” ಸಿನಿಮಾದಲ್ಲೂ ಅಂತಹ ನೈಜತೆ ಕಾಣಬಹುದು. ಒಂದೊಳ್ಳೆಯ ಸಿನಮಾ ನಿರ್ಮಾಣ ಮಾಡಿದ್ದೇನೆ ಎಂಬ ತೃಪ್ತಿ ನನ್ನದು” ಎನ್ನುತ್ತಾರೆ ಕೃಷ್ಣೇಗೌಡ.

 

Categories
ಸಿನಿ ಸುದ್ದಿ

ಲವ್‌ ಮಾಕ್ಟೇಲ್‌ ಜೋಡಿಗೆ ಶುಭ ಕೋರಿದ ಸುದೀಪ್‌

ಸದಾ ಹೀಗೆ ಖುಷಿಯಾಗಿರಿ ಎಂದ ಕಿಚ್ಚ

ಶ್ರೀಲೀಲಾ

ಲವ್‌ಮಾಕ್ಟೇಲ್‌ ಮೂಲಕ ಜೋರು ಸುದ್ದಿಯಾದ “ಮದರಂಗಿ” ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಫೆಬ್ರವರಿ ೧೪ ರಂದು ಮದುವೆ ಆಗುತ್ತಿರುವುದನ್ನು ಘೋಷಿಸಿಕೊಂಡಿದ್ದಾರೆ. ಈ ಮುದ್ದಾದ ಜೋಡಿಗೆ ಈಗಾಗಲೇ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ನಟ ಕಿಚ್ಚ ಸುದೀಪ್‌ ಅವರೂ ಕೂಡ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ಜೋಡಿಗೆ ಶುಭಾಶಯ ಕೋರಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಶುಭಕೋರಿರುವ ಸುದೀಪ್‌, ‘ಫೆಬ್ರವರಿ 14ಕ್ಕೆ ಹೊಸ ಜೀವನಕ್ಕೆ ಕಾಲಿಡುತ್ತಿರುವ ನಿಮ್ಮಬ್ಬರಿಗೂ ಶುಭ ಹಾರೈಕೆಗಳು. ನೀವು ಯಾವಾಗಲು ಹೀಗೆ ಖುಷಿಯಾಗಿ ಜೊತೆಯಾಗಿರಿ’ ಎಂದಿದ್ದಾರೆ. ಜೊತೆಗೆ ಕೃಷ್ಣ ಮತ್ತು ಮಿಲನಾ ಅವರ ಫೋಟೋವನ್ನು ಶೇರ್‌ ಮಾಡಿದ್ದಾರೆ.

ಕಳೆದ ಆರು ವರ್ಷಗಳಿಂದಲೂ ಕೃಷ್ಣ ಮತ್ತು ಮಿಲನಾ ಇಬ್ಬರೂ ಪ್ರೀತಿಯಲ್ಲಿದ್ದರು. “ಲವ್‌ ಮಾಕ್ಟೇಲ್”‌ ಸಿನಿಮಾ ಹಿಟ್‌ ಆಗುತ್ತಿದ್ದಂತೆಯೇ, ಈ ಜೋಡಿ ಮಾಧ್ಯಮ ಎದುರು ಬಂದು ತಮ್ಮ ಪ್ರೀತಿಯನ್ನು ಹೇಳಿಕೊಂಡಿತ್ತು. ಇತ್ತೀಚೆಗೆ ತಾವು ಮದುವೆ ಆಗುವುದನ್ನು ಸಹ ಹೇಳಿಕೊಂಡಿದ್ದರು.   ಸದ್ಯಕ್ಕೆ ಮಿಲನಾ ನಾಗರಾಜ್, ಕೃಷ್ಣ ಇವರಿಬ್ಬರಿಗೂ ಸಾಕಷ್ಟು ಮಂದಿ ಶುಭಾಶಯ ಕೋರುತ್ತಿದ್ದಾರೆ. ಒಟ್ಟಾರೆ, ಪ್ರೇಮಿಗಳ ದಿನದಂದೇ ಈ ಪ್ರೇಮಿಗಳು ವಿವಾಹ ಆಗುತ್ತಿರುವುದು ಅವರ ಅಭಿಮಾನಿ ವರ್ಗಕ್ಕೆ ಖುಷಿ ಕೊಟ್ಟಿದೆ.

Categories
ಸಿನಿ ಸುದ್ದಿ

ಲವ್‌ ಗುರು  ಹೆಸರಲ್ಲೊಂದು‌ ವಿಡಿಯೋ‌ ಸಾಂಗ್ ಆಲ್ಬಂ

ಕಾಗೆ ಹಾರಿಸಿ ಹೋದ್ಲು ಮಾಮ

ಕೈಗೆ ಸಿಗದೇ ಹೋಯ್ತು ಪ್ರೇಮ…

– ಹೀಗೆ ಶುರುವಾಗುವ ವಿಡಿಯೋ ಸಾಂಗ್‌ ಈಗ ಲೋಕಾರ್ಪಣೆಗೊಂಡಿದೆ. ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರಬಂದಿರುವ ಮೊಟ್ಟಮೊದಲ ಮ್ಯೂಸಿಕ್‌ ವಿಡಿಯೋ ಇದಾಗಿದೆ. ಇದರ ಹೆಸರು ‘ಲವ್ ಗುರು’ . ಶುಕ್ರವಾರ ಸಂಜೆ ಮಲ್ಲೇಶ್ವರಂ ನ ರೇಣುಕಾಂಬ ಸ್ಟುಡಿಯೋ ದಲ್ಲಿ ಈ ಹಾಡು ಪ್ರದರ್ಶನ ಗೊಂಡಿತು.

ಈ ಹೆಸರು ಕೇಳಿದಾಕ್ಷಣ ತರುಣ್ ಚಂದ್ರ ನಟನೆಯ ಲವ್ ಗುರು ಸಿನಿಮಾ ನೆನಪಾದ್ರೂ ಅಚ್ಚರಿ ಇಲ್ಲ.ಹಾಗಂತ ಅದಕ್ಕೂ ಇದಕ್ಕೂ ಏನಾದ್ರೂ ಕನೆಕ್ಷನ್ ಉಂಟಾ ಅಂತ ನಿಮಗನಿಸಿದರೂ, ಅದೇನು ತಪ್ಪಲ್ಲ. ಯಾಕಂದ್ರೆ , ಅವರೆಡಕ್ಕೂ ಕನೆಕ್ಷನ್ ಇದೆ.‌ಲವ್ ಗುರು ಖ್ಯಾತಿಯ ನಟ ತರುಣ್ ಇದರ ಪ್ರಮುಖ ಆಕರ್ಷಣೆ. ಆ ಮೂಲಕ, ತರುಣ್ ಮತ್ತೆ ಬಣ್ಣ ಹಚ್ವಿ ಬಣ್ಣದ‌ ಲೋಕಕ್ಕೆ ಬಂದಿದ್ದಾರೆ.

ತರುಣ್ ಅವರ ಮಿತ್ರ ಹಾಗೂ ನಿರ್ಮಾಪಕ ಗಣೇಶ್‌ ಪಾಪಣ್ಣ ಈ ವಿಡಿಯೋ ಸಾಂಗ್ ನಿರ್ದೇಶಕರು. ಲಹರಿ ಮ್ಯೂಜಿಕ್ ಒರಿಜಿನಲ್ ಇದರ ನಿರ್ಮಾಣ ಸಂಸ್ಥೆ.
ಎಲ್ವಿನ್ ಜೋಷ್ವಾ ಸಂಗೀತ ನೀಡಿದ್ದಾರೆ. ಕೆಜಿಎಫ್ ಚಿತ್ರ ಖ್ಯಾತಿ‌ಯ ಖಳ ನಟ ಲಕ್ಕಿ‌ಲಕ್ಣ್ಮಣ್ ಈ‌‌ ಆಲ್ಬಂ‌ಮೂಲಕ ಗಾಯಕರಾಹಿಯೂ ಪರಿಚಯವಾಗುತ್ತಿದ್ದಾರೆಹೆಸರಾಂತ ಮಾಡೆಲ್ ಹಾಗೂ‌ ಬಾಲಿವುಡ್ ನಟಿ ನುತಶ್ರೀ ಜಗತಪ್‌ ಈ ಹಾಡಿನಲ್ಲಿ ನಟಿಸಿದ್ದಾರೆ. ಆಲ್ಬಂ ಲಾಂಚ್ ಗೆ ಅವರು ಗೈರಾಗಿದ್ದರು.


‘ ಅವರ ಹಾಜರಿ ಎಂಟು ಸೆಕೆಂಡುಗಳಷ್ಟೇ ಇತ್ತು. ಆದರೂ ಅವರು ಬೆಂಗಳೂರಿಗೆ ಬಂದು ಖುಷಿಯಿಂದ ಶೂಟಿಂಗ್‌ನಲ್ಲಿ ಪಾಲ್ಗೊಂಡರು. ಅಷ್ಟು ದೂರದಿಂದ ಬಂದರು ಎನ್ನುವ ಕಾರಣಕ್ಕೆ ಮತ್ತೆ ಎಂಟು ಸೆಕೆಂಡುಗಳನ್ನು ಹೆಚ್ಚಿಗೆ ಮಾಡಿದ್ದೇನೆ ‘ ಅಂತ ನಿರ್ದೇಶಕ ಗಣೇಶ್ ಪಾಪಣ್ಣ ಹೇಳಿದರು. ‘ಫ್ರೆಂಚ್‌ ಬಿರಿಯಾನಿ ‘ಚಿತ್ರದಲ್ಲಿ ಮಸಲ್‌ ಮಣಿ ಈ ಆಲ್ಬಂ ನಲ್ಲಿದ್ದಾರೆ. ನಟ ತರುಣ್ ಹಾಜರಿದ್ದರು.

ಲಹರಿ ಮ್ಯೂಸಿಕ್‌ ಸಂಸ್ಥೆಯ ನವೀನ್‌ ಮನೋಹರನ್‌ ಈ ಒರಿಜಿನಲ್‌ ಆಲ್ಬಂ ಅನ್ನು ನಿರ್ಮಾಣ ಮಾಡಿದ್ದಾರೆ. ಗೌಸ್‌ ಪೀರ್‌ ಬರೆದಿರುವ ಹಾಡಿಗೆ ಎಲ್ವಿನ್‌ ಜೋಷ್ವಾ ಸಂಗೀತ, ಆರ್.ಜೆ. ರಘು ನೃತ್ಯ ನಿರ್ದೇಶನ, ಅರುಣ್‌ ರಾಚಪುಟಿ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಇಷ್ಟರಲ್ಲಿಯೇ ಒಂದ್ ಸಿನ್ಮಾ ಅನೌನ್ಸ್ ಮಾಡ್ತೀನಿ !

ಇದು ಮತ್ತೆ ಬಂದ ತರುಣ್ ಚಂದ್ರ ಕೊಟ್ಟ ಭರವಸೆ 

ಡೈರೆಕ್ಷನ್ ಮಾಡೋಣ ಅಂತ ಗ್ಯಾಪ್ ತಗೊಂಡೆ, ಆ ನಡುವೆ ಆಕ್ಸಿಡೆಂಟ್ ಆಯ್ತು, ಅದೇ ಇಷ್ಟು ಸಮಯ ತೆಗೆದುಕೊಳ್ತು…
– ಐದು ವರ್ಷಗಳ ನಟನೆಯ ಗ್ಯಾಪ್ಗೆ ಹೀಗೆ ಕಾರಣ ಕೊಟ್ಟು ನಕ್ಕರು’ ಗೆಳೆಯ ‘ಖ್ಯಾತಿಯ ನಟ ತರುಣ್ ಅಲಿಯಾಸ್ ತರುಣ್ ಚಂದ್ರ.

ಹೌದು , ಲವ್ ಗುರು ಖ್ಯಾತಿ ನಟ ತರುಣ್ ನಟನೆಗೆ ಗ್ಯಾಪ್ ಕೊಟ್ಟು ಇಲ್ಲಿಗೆ ಐದು ವರ್ಷ. ಇಷ್ಟು ಟೈಮ್ ಸಿನಿಮಾ ಚಟುವಟಿಕೆಗಳಲ್ಲಿ ಎಲ್ಲೂ ಕಾಣಿಸಿಕೊಳ್ಳದೆ, ತೆರೆಮರೆಯಲ್ಲೆ ಇದ್ದರು. ಆ ಗ್ಯಾಪ್ ಗೆ ವಿದಾಯ ಹೇಳಿ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಲವ್ ಗುರು ಹೆಸರಿನ ವಿಡಿಯೋ ಸಾಂಗ್ ಆಲ್ಬಂವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕ್ಯಾಮೆರಾ ಎದುರಿಸಿದ್ದಾರೆ. ಆ ಹಾಡಿನ ಬಿಡುಗಡೆ ಸಂದರ್ಭದಲ್ಲಿ ಮಾತಿಗೆ ಸಿಕ್ಕ ತರುಣ್ , ಇಷ್ಟು ವರ್ಷ ಯಾಕಾಯ್ತು ಗ್ಯಾಪ್? ಈ ಟೈಮ್ನ್ ನಲ್ಲಿ ಏನ್ ಮಾಡಿದ್ರು? ಮತ್ತೆ ಕಲರ್ ಫುಲ್ ದುನಿಯಾಕ್ಕೆ ಹೇಗೆ ಬರ್ತೀದ್ದಾರೆ? ಅದರ ಸಿದ್ದತೆಗಳೇನು? ಇತ್ಯಾದಿ ಕುರಿತ ಕುತೂಹಲದ ಪ್ರಶ್ನೆಗಳಿಗೆ ಉತ್ತರ ನೀಡಿದರು.

‘ ಗೋವಾ ಸಿನಿಮಾ ರಿಲೀಸ್ ಆಗಿದ್ದು 2015, ಆದೇ ಲಾಸ್ಟ್ ಸಿನಿಮಾ. ಅಲ್ಲಿಂದ ಇಲ್ಲಿ ತನಕ ಐದು ವರ್ಷಗಳ ಗ್ಯಾಪ್. ಅದ್ಯಾಕಾಯ್ತು ಅಂತ ಅನೇಕ‌ ಜನರಿಗೆ ಕುತೂಹಲ. ಹಾಗೆಯೇ ಹಲವು ಪ್ರಶ್ನೆ. ಅದಕ್ಕೆ ನಾನು ಹೇಳೋದು ನನ್ನದೇ ಕೆಲವು ಕಾರಣ. ಡೈರೆಕ್ಷನ್ ಮೇಲೆ ನನಗೆ ಮೊದಲನಿಂದಲೂ‌ ಆಸಕ್ತಿ ಇತ್ತು. 2015ರ ಹೊತ್ತಿಗೆ ನಂಗ್ಯಾಕೋ ಅದು ಇನ್ನು ಹೆಚ್ಚಾಗಿ ಕಾಡತೊಡಗಿತ್ತು. ಡೈರೆಕ್ಷನ್ ಕಲಿಬೇಕು ಅಂತ ಗ್ಯಾಪ್ ತಗೊಂಡೆ. ಅಮೆರಿಕದ ಪ್ರತಿಷ್ಟಿತ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಡೈರೆಕ್ಷನ್ ಕೊರ್ಸ್ ಮುಗಿಸಿಕೊಂಡು ಬಂದೆ.‌ ಅಲ್ಲಿ‌ಂದ ಸ್ಕ್ರಿಪ್ಟ್ ವರ್ಕ್ ಮಾಡಿ, ಇನ್ನೇನು ಡೈರೆಕ್ಷನ್ ಗೆ ಇಳಿಬೇಕು ಎನ್ನುವಾಗ ಸಣ್ಣದೊಂದು ಆಕ್ಸಿಡೆಂಟ್ವಾಯ್ತು. ಅದು ಇಷ್ಟು ಗ್ಯಾಪ್ ಗೆ ಕಾರಣ ಎನ್ನುವ ಮೂಲಕ ಸತತ ಐದು ವರ್ಷಗಳ ಗ್ಯಾಪ್ ಹಿಂದಿನ ಕಾರಣ ಏನು ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕೊಟ್ಟರು ನಟ ತರುಣ್.

ಐದು ವರ್ಷಗಳ ಗ್ಯಾಪ್ ಗೆ ಇದು ಕಾರಣ ಹೌದು. ಆದರೆ ಈ ಐದು ವರ್ಷದಲ್ಲಿ ತರುಣ್ ಸಿನಿಮಾಕ್ಕೆ ಸಂಬಂಧಿಸಿದಂತೆ ಗ್ರಾಫಿಕ್ಸ್ ವರ್ಕ್ ,ಅನಿಮೇಷನ್ ಕಲಿತುಕೊಂಡಿದ್ದಾರಂತೆ. ಹಾಗೆಯೇ ವರ್ಕ್ಔಟ್ ಮಾಡಿ ವ್ಹೆಟ್ ಲಾಸ್ ಮಾಡಿಕೊಂಡಿದ್ದಾರಂತೆ. ಅದರ ಜತೆಗೆ ಐದಾರು ಕತೆ ರೆಡಿಯಾಗಿವೆಯಂತೆ. ಅವರ ಜತೆಗೆ ಇತರೆ ಸ್ಟಾರ್ ಗೂ ಮುಂದೆ ಸಿನಿಮಾ ಮಾಡೋ ಆಲೋಚನೆ‌ ಇದೆ ಎನ್ನುತ್ತಾರೆ. ಹಾಗೆಯೇ ಇಷ್ಟರಲ್ಲಿ ಒಂದು ಸಿನಿಮಾ ಶುರುವಾಗುತ್ತೆ ಅಂತ ಭರವಸೆ ನೀಡಿದ್ದಾರೆ. ಮತ್ತೆ ಗ್ಯಾಪ್ ಆಗೋಲ್ಲ ಎನ್ನುವ ಮಾತನ್ನು ಒತ್ತಿ ಹೇಳಿದರು.

Categories
ಸಿನಿ ಸುದ್ದಿ

ಶೂಟಿಂಗ್‌ ಮುನ್ನವೇ ನಾನ್ ‌ ನಿಮ್ಗೆ ಸಿನ್ಮಾ ತೋರಿಸ್ತೀನಿ !

ನಿಮ್ಮ ಕಥೆಗೆ ಅನಿಮೇಷನ್‌ ಸ್ಪರ್ಶ

ಕನ್ನಡಕ್ಕೆ ಬಂದಿದೆ ಡಿಜಿಟಲ್‌ ಸ್ಟೋರಿಬೋರ್ಡ್‌ ಪ್ರಿವಿಶ್ಯುಲೇಷನ್‌ ಅನಿಮೇಷನ್‌ ಮೂವಿ

ಕಾಲ ಬದಲಾದಂತೆ ಚಿತ್ರರಂಗ ಕೂಡ ಬದಲಾಗುತ್ತಿದೆ. ಬದಲಾಗಿದೆ ಕೂಡ. ಚಿತ್ರರಂಗಕ್ಕೆ ಹೊಸ ಹೊಸ ತಾಂತ್ರಿಕತೆಯೂ ಬಂದಿದೆ. ನೋಡುಗನ ನೋಟವೂ ಬದಲಾಗಿದೆ. ಇವೆಲ್ಲದರ ಜೊತೆಗೆ ಈಗ ಮತ್ತೊಂದು ಹೊಸ ಹೊಸ ತಾಂತ್ರಿಕತೆ ಸೇರ್ಪಡೆಯಾಗಿದೆ. ಹೌದು, ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್‌ ಸ್ಟೋರಿ ಬೋರ್ಡ್‌ ಪ್ರಿವಿಶ್ಯುಲೇಷನ್‌ ಅನಿಮೇಷನ್‌ ಮೂವೀ ಎಂಬ ಹೊಸ ಕಲ್ಪನೆ ಪರಿಚಯವಾಗುತ್ತಿದೆ. ಇಂಥದ್ದೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿರೋದು ಶ್ರೀರಾಮ್‌ ಬಾಬು.

ಇಷ್ಟಕ್ಕೂ ಈ “ಡಿಜಿಟಲ್‌ ಸ್ಟೋರಿ ಬೋರ್ಡ್‌ ಪ್ರಿವಿಶ್ಯುಲೇಷನ್‌ ಅನಿಮೇಷನ್‌ ಮೂವೀ” ಬಗ್ಗೆ ಹೇಳುವುದಾದರೆ, ಇದೊಂದು ನಿರ್ದೇಶಕ ಹಾಗೂ ನಿರ್ಮಾಪಕರಿಗಾಗಿಯೇ ಪರಿಚಯಿಸುತ್ತಿರುವ ಹೊಸ ಕಲ್ಪನೆ. ಈಗಷ್ಟೇ ಇಂಡಸ್ಟ್ರಿಗೆ ಬರುವ, ಬಂದಿರುವ ಯುವ ನಿರ್ದೇಶಕ, ನಿರ್ಮಾಪಕರಿಗೆ ಸಿನಿಮಾ ಮೇಲಿನ ಹಿಡಿತ ಇರಲಿ ಎಂಬ ಕಾರಣಕ್ಕೆ ಇದನ್ನು ಪರಿಚಯಿಸಲಾಗಿದೆ. ಹಾಗಾದರೆ, ಇದೆಲ್ಲಾ ಹೇಗೆ ವರ್ಕೌಟ್‌ ಆಗತ್ತೆ ಎಂಬ ಪ್ರಶ್ನೆ ಎದುರಾಗಬಹುದು. ಒಂದು ಚಿತ್ರ ಮಾಡಲು ಹೊರಡುವ ನಿರ್ದೇಶಕ, ನಿರ್ಮಾಪಕ ಈ ಡಿಜಿಟಲ್‌ ಸ್ಟೋರಿಬೋರ್ಡ್‌ ಪ್ರಿವಿಶ್ಯುಲೇಷನ್‌ ಅನಿಮೇಷನ್‌ ಮೂವೀ ಎಂಬ ಹೊಸ ತಾಂತ್ರಿಕತೆಯನ್ನು ಬಳಸಿಕೊಂಡರೆ, ತಾವು ಮಾಡ ಹೊರಡುವ ಒಂದು ಸಿನಿಮಾದ ರೂಪವನ್ನು ಮೊದಲೇ ತಿಳಿದುಕೊಳ್ಳಬಹುದು. ಸಿನಿಮಾ ಬಜೆಟ್‌ ಪ್ರಕಾರ ಸಿನಿಮಾ ಮೂಡಿಬರುತ್ತೋ ಇಲ್ಲವೋ ಎಂಬುದನ್ನೂ ತಿಳಿದುಕೊಳ್ಳಬಹುದು. ನಿರ್ದೇಶಕ ಕಥೆ, ಚಿತ್ರಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬಹುದು. ಮೇಕಿಂಗ್‌ ಅನ್ನೂ ಕೂಡ ಹೊಸ ರೀತಿಯಲ್ಲಿ ಪ್ರಯತ್ನಿಸಲು ಮುಂದಾಗಬಹುದು. ಶೆಡ್ಯೂಲ್‌ ಪ್ಲಾನ್‌ ಕೂಡ ಕಡಿಮೆಗೊಳಿಸಿಕೊಳ್ಳಬಹುದು. ಇದರಿಂದ ನಿರ್ಮಾಪಕರಿಗೆ ನಿರ್ದೇಶಕರ ಮೇಲೆ ನಂಬಿಕೆ ಹೆಚ್ಚಾಗಲಿದೆ.

ನಿರ್ಮಾಪಕರಿಗೆ ತಮ್ಮ ಸಿನಿಮಾ ಬಜೆಟ್‌ನ ಶೇ. 30ರಷ್ಟು ಖರ್ಚು ಕಡಿಮೆ ಮಾಡಿಕೊಳ್ಳಬಹುದು. ದುಂದುವೆಚ್ಚಕ್ಕೂ ಕಡಿವಾಣ ಹಾಕಬಹುದು. ಆರಂಭದಲ್ಲೇ ಈ ಸಿನಿಮಾ ನಿರ್ಮಿಸಬೇಕಾ ಬೇಡವಾ ಎಂಬುದನನು ನಿರ್ಧರಿಸಬಹುದು. ಒಂದು ಸಿನಿಮಾದ ಕಥೆ ಕೇಳಿದರೆ, ಕಲ್ಪನೆ ಮೂಡಬಹುದಷ್ಟೆ. ಆದರೆ, ತಮ್ಮ ಸಿನಿಮಾ ಹೇಗೆ ಮೂಡಿಬರುತ್ತೆ ಎಂಬುದನ್ನು ಡಿಜಿಟಲ್‌ ಸ್ಟೋರಿಬೋರ್ಡ್‌ ಪ್ರಿವಿಶ್ಯುಲೇಷನ್‌ ಅನಿಮೇಷನ್‌ ಮೂವಿ ಮೂಲಕ ಹಿನ್ನೆಲೆ ಸಂಗೀತ, ಸಂಭಾಷಣೆ ಜೊತೆಗೆ ನೋಡಿದಾಗ ನಿರ್ಧರಿಸಲು ಅನುಕೂಲವಾಗುತ್ತೆ. ಒಂದು ಸಿನಿಮಾದ ಫೀಲ್‌ ಮೊದಲೇ ಸಿಕ್ಕಾಗ, ಏನು ಬೇಕು, ಬೇಡ ಅನ್ನುವುದನ್ನೂ ಇಲ್ಲಿ ನಿರ್ಧರಿಸಬಹುದು.

ಇಷ್ಟಕ್ಕೂ ಇಂತಹ ಪ್ರಯತ್ನಕ್ಕೆ ದೊಡ್ಡ ಬಜೆಟ್‌ ಬೇಕಾಗುತ್ತಾ ಎಂಬ ಪ್ರಶ್ನೆ ಕೂಡ ಮೂಡಬಹುದು. ಆದರೆ, ತ್ರೀಡಿ ಅನಿಮೇಷನ್‌ ಮೂವಿಗೆ ಚಿತ್ರವೊಂದರ ವೇಸ್ಟೇಡ್‌ ಅಮೌಂಟ್‌ ಸಾಕಾಗುತ್ತೆ. ಕಥೆ ಓಕೆ ಮಾಡುವ ನಿರ್ಮಾಪಕರು, ತಮ್ಮ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆಸಿಕೊಳ್ಳಲು ರೂಮ್‌ ಹಾಕಿ ಕಚೇರಿ ಶುರುಮಾಡಿ ಇತರೆ ಖರ್ಚುಗಳೊಂದಿಗೆ ಕೆಲಸ ಆರಂಭಿಸಿದರೆ, ಆ ಸ್ಕ್ರಿಪ್ಟ್‌ ಮುಗಿಯುವ ಹೊತ್ತಿಗೆ ಲಕ್ಷಾಂತರ ವೆಚ್ಚವಾಗಿರುತ್ತೆ. ಆದೇ ಈ ಡಿಜಿಟಲ್‌ ತಾಂತ್ರಿಕತೆಗೆ ಮೊರೆ ಹೋದರೆ, ಕಡಿಮೆ ವೆಚ್ಚದಲ್ಲಿ ಇಡೀ ಸಿನಿಮಾವನ್ನೇ ಚಿತ್ರ ಚಿತ್ರೀಕರಿಸುವ ಮೊದಲೇ ವೀಕ್ಷಿಸಬಹುದು. ಈ ಹೊಸ ತಾಂತ್ರಿಕತೆಗೆ ಹೆಚ್ಚು ಹಣ ಬೇಕಿಲ್ಲ. ಮೊದಲೇ ಎಲ್ಲವೂ ಸ್ಪಷ್ಟವಾಗಲಿದೆ. ಇಂತಹ ಪ್ರಯೋಗ ಬೇರೆ ಇಂಡಸ್ಟ್ರಿಯಲ್ಲೂ ಇದೆ. ಇಲ್ಲಿ ಅಳವಡಿಸಿಕೊಳ್ಳುವ ಮನಸ್ಸುಗಳು ಬೇಕಿದೆ. ಈಗ ಬಹುತೇಕ ಡಿಜಿಟಲ್‌ಮಯ ಆಗಿರುವುದರಿಂದ ಸಮಯ ಉಳಿಸಿಕೊಳ್ಳಲು ಇದೊಂದು ಸೂಕ್ತ ವೇದಿಕೆಯಾಗಬಹುದೇನೋ?

ಶೂಟಿಂಗ್‌ ಹೋಗುವ ಮುನ್ನವೇ ಈ ಪ್ರಯತ್ನ ಮಾಡಿದರೆ, ಇಡೀ ಸಿನಿಮಾ ಈ ಅನಿಮೇಷನ್‌ ಮೂವಿಯಲ್ಲಿ ಸಿಗಲಿದೆ. ಶಾಟ್‌ ಲೆಂಥ್‌ ಎಷ್ಟಿರಬೇಕು, ಡೈಲಾಗ್‌ ಎಷ್ಟಿರಬೇಕು, ಇತ್ಯಾದಿ ಸೀನ್‌ಗಳು ಹೇಗಿರಬೇಕು ಎಂಬುದು ಈ ಪ್ರಿವಿಶ್ಯಲೇಷನ್‌ ಅನಿಮೇಶನ್‌ ಮೂವಿಯಲ್ಲಿರಲಿದೆ. ಹೊಸದಾಗಿ ಸಿನಿಮಾ ಮಾಡಲು ಬರುವವರಿಗೆ ಈ ತಾಂತ್ರಿಕತೆ ಬಳಕೆಯಾದರೆ, ಖಂಡಿತ ಇಲ್ಲೊಂದಷ್ಟು ಕಲಿಯಬಹುದು. ಪ್ಲಾನ್‌ ಕೂಡ ಮಾಡಬಹುದು. ಇಷ್ಟಕ್ಕೂ ಈ ತಾಂತ್ರಿಕತೆ ಮೂಲಕ ಸಿನ್ಮಾ ರೂಪ ಪಡೆಯಲು ಕೇವಲ ಒಂದುವರೆ ತಿಂಗಳು ಸಾಕು.

ಶ್ರೀರಾಮ್‌ ಬಾಬು

ಇನ್ನು, ಶ್ರೀರಾಮ್‌ ಬಾಬು ತಮ್ಮ ಹರ್ ಶ್ರೀ ಕ್ರಿಯೇಟಿಂಗ್‌ನಡಿ ಈ ಹೊಸ ಡಿಜಿಟಲ್‌ ಮಾಧ್ಯಮ ಶುರು ಮಾಡಿದ್ದು, ಏಳು ಮಂದಿ ಕೆಲಸಗಾರರ ಜೊತೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ತಾಂತ್ರಿಕತೆ ಬಯಸುವವರು 9663961270 ಸಂಪರ್ಕಿಸಬಹುದು.

error: Content is protected !!