ಡಾಲಿ ಧನಂಜಯ್ ಹಾಗೂ ಸತ್ಯದೇವ್ ಕಾಂಬಿನೇಷನ್ ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಝೀಬ್ರಾ. ಶುರು ಆದಾಗಿನಿಂದಲೂ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ.
ಝೀಬ್ರಾ ಎಂಬ ಮಾಸ್ ಎಂಟರ್ಟೇನರ್ ಚಿತ್ರವಾಗಿದ್ದು, ಡಾಲಿ ಜೊತೆ ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರದ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸತ್ಯದೇವ್ ಮತ್ತು ಡಾಲಿ ಇಬ್ಬರೂ ಚಿತ್ರದ ನಾಯಕರಾಗಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇಬ್ಬರದ್ದೂ 26ನೇ ಸಿನಿಮಾ ಎಂಬುದು ವಿಶೇಷ.
ಝೀಬ್ರಾ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಮೂಡಿ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್, ಸತ್ಯರಾಜ್, ಸುನೀಲ್ ವರ್ಮ, ಜೆನಿಫರ್ , ಸುರೇಶ್ಚಂದ್ರ ಮೆನನ್, ಕಲ್ಯಾಣಿ ನಟರಾಜ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.
ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕತೆ-ಚಿತ್ರಕತೆ ಅವರದ್ದೇ. ಪ್ಯಾನ್ ಇಂಡಿಯಾ ‘ZEBRA’ ಚಿತ್ರಕ್ಕೆ ಕೆಜಿಎಫ್ ಚಿತ್ರ ಖ್ಯಾತಿಯ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ.
ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದೆ. ಡಿಸೆಂಬರ್ ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದು, ಅದಕ್ಕಾಗಿ ಸಕಲ ಸಿದ್ದತೆ ನಡೆದಿದೆ. ನಂದಿ ಚಲನಚಿತ್ರ ಪ್ರಶಸ್ತಿ-2023ರ ಕರ್ಟನ್ ರೈಸ್ ಗೆ ಕಿಚ್ಚ ಸುದೀಪ್ ಚಾಲನೆ ನೀಡಿ ಹೊಸ ಪ್ರಶಸ್ತಿ ಸಮಾರಂಭಕ್ಕೆ ಶುಭ ಹಾರೈಸಿದರು.
ಕಿಚ್ಚ ಸುದೀಪ್ ಮಾತನಾಡಿ, ಸಂಸ್ಥಾಪಕರಿಗೆ ಒಳ್ಳೆದಾಗಲಿ. ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗುವುದು ಬಿಟ್ಟು 2003-2004 ಕೊನೆ.ಆ ಬಳಿಕ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗೇ ಇಲ್ಲ. ಅದಕ್ಕೆ ಬೇರೆ ಇತಿಹಾಸವಿದೆ. ಆದರೆ ಇಲ್ಲಿ ಆ ಅವಾರ್ಡ್ಸ್ ಮಹತ್ವ ಬೇರೆ ಕಲಾವಿದರಿಗೆ ಆಗಲಿ. ಎಲ್ಲರಿಗೂ ಎಷ್ಟು ಮುಖ್ಯ ಎನ್ನುವುದನ್ನು ನೋಡಿದ್ದೇನೆ. ನನ್ನ ಮನವಿ ಏನೆಂದರೆ ಯಾರಿಗೆ ಹೋಗಬೇಕು ಅವರಿಗೆ ಹೋಗಲಿ. ಮಿಕ್ಕಿದವರೆಲ್ಲಾ ದುಡ್ಡು ಮಾಡುತ್ತಿದ್ದಾರೆ. ಅವಾರ್ಡ್, ದುಡ್ಡು ಅಂತಾ ನೋಡಿದಾಗ ಪ್ರಶಸ್ತಿ ಬಿಟ್ಟು ದುಡ್ಡಿಗೆ ಕೈ ಹಾಕುವವರು ಇದ್ದಾರೆ. ಪ್ರಶಸ್ತಿಗೆ ಗೌರವ ಕೊಟ್ಟು ಅದಕ್ಕಾಗಿ ಬಾಳಿ ಬದುಕುವವರಿಗೆ ಅವರಿಗೆ ನೀಡಿ. ನಂದಿ ಬಹಳ ಶ್ರೇಷ್ಠ. ಅದರ ಹೆಸರಲ್ಲಿ ನಡೆಸುತ್ತೀರಾ ಎಂದರೆ ಅಷ್ಟೇ ಶುದ್ಧವಾಗಿ ಇರಲಿ. ಕರ್ನಾಟಕದಲ್ಲಿ ಅವಾರ್ಡ್ಸ್ ಪ್ರೋಗ್ರಾಂ ನಡೆಸಲು ಬಹಳ ಕೊರತೆ ಇದೆ. ತಲೆ ಎತ್ತಿ ನೋಡುವ ಅವಾರ್ಡ್ಸ್ ಪ್ರೋಗ್ರಾಂ ಇಲ್ಲ. ಅಂತಹ ಪ್ರಶಸ್ತಿ ಕಾರ್ಯಕ್ರಮ ನಂದಿ ಆಗಲಿ ಎಂದು ಶುಭ ಹಾರೈಸಿದರು.
ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಆದರೆ, ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಮಬಂಧವಿಲ್ಲ. ಎರಡು ಬೇರೆ ಬೇರೆ. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ ‘ನಂದಿ’ ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ‘ನಂದಿ ಫಿಲ್ಮಂ ಅವಾರ್ಡ್’ ಸಂಸ್ಥಾಪರಾಗಿದ್ದಾರೆ. ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಅಶೋಕ್ ಡೈರೆಕ್ಟರ್ಸ್ ಗಳಾಗಿದ್ದಾರೆ.
ನಂದಿ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾಗಳು, ಪ್ರಾದೇಶಿಕವಾಗಿ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಹಾಗೂ ಬಂಜಾರ ಈ ಭಾಷೆಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಸಾಹಿತ್ಯ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೂ ಪ್ರಶಸ್ತಿ ನೀಡಲಾಗುತ್ತದೆ. 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ಕನ್ನಡದ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದ್ದು, ನಂದಿ ಅವಾರ್ಡ್ ಘೋಷಣೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್ನಲ್ಲಿ ಡಿಸೆಂಬರ್ 6 ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಭಾಗಿಯಾಗಲಿದ್ದಾರೆ.
ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಹಾಗೂ ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿಖಿಲ್ ಕುಮಾರಸ್ವಾಮಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ಭರ್ಜರಿ ಯಶಸ್ವಿಯಾಗಲೆಂದು ಹಾರೈಸಿದರು. ಜಗದೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
“ಶುಗರ್ ಫ್ಯಾಕ್ಟರಿ” ಎಂದರೆ ಒಂದು ಪಬ್ ನ ಹೆಸರು ಎಂದು ಮಾತು ಆರಂಭಿಸಿದ ನಿರ್ದೇಶಕ ದೀಪಕ್ ಅರಸ್, ಚಿತ್ರದಲ್ಲಿ ಪಬ್ ಕೂಡ ಒಂದು ಪಾತ್ರ ಹಾಗಾಗಿ ನಮ್ಮ ಚಿತ್ರಕ್ಕೆ “ಶುಗರ್ ಫ್ಯಾಕ್ಟರಿ” ಎಂದು ಹೆಸರಿಟ್ಟಿದ್ದೇವೆ. ಹಾಗಂತ ನಮ್ಮ ಚಿತ್ರದಲ್ಲಿ ಬರಿ ಹಾಡು, ಕುಣಿತ, ಕುಡಿತ ಅಷ್ಟೇ ಇಲ್ಲ. ಇದೊಂದು ಸುಮಧುರ ಪ್ರೇಮ ಕಾವ್ಯ ಕೂಡ. ಆಕ್ಷನ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಒಟ್ಟಿನಲ್ಲಿ ಈಗಿನ ಜನತೆ ಯಾವ ಮನೋರಂಜನೆ ಬಯಸುತ್ತಾರೊ ಅದೆಲ್ಲವೂ ನಮ್ಮ ಚಿತ್ರದಲ್ಲಿದೆ ಎಂದರು.
ಚಿತ್ರತಂಡದವರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಬಂದಿದೆ. ಇದೇ ನವೆಂಬರ್ 24ರಂದು ತೆರೆಗೆ ಬರುತ್ತಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ಆರ್ ಗಿರೀಶ್.
“ಲವ್ ಮಾಕ್ಟೇಲ್” ಚಿತ್ರದ ನಂತರ ಕೇಳಿದ ಕಥೆ ಇದು. ನಾನು “ಲವ್ ಮಾಕ್ಟೇಲ್ ” ಚಿತ್ರದ ಆಡಿಶನ್ ನಲ್ಲಿ ಯುವಜನತೆ ಈಗ ಯಾವ ರೀತಿ ಕಥೆ ಇಷ್ಟ ಪಡುತ್ತಾರೆ ಎಂದು ಕೇಳುತ್ತಿದೆ. ಅದೇ ತರಹದ ಕಥೆಯನ್ನು ದೀಪಕ್ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಬಂದಿದೆ ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದರು.
ನಾಯಕಿಯರಾದ ಸೋನಾಲ್ ಮೊಂತೆರೊ, ಅದ್ವಿತಿ ಶೆಟ್ಟಿ ಹಾಗೂ ರುಹಾನಿ ಶೆಟ್ಟಿ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಕಬೀರ್ ರಫಿ ಹಾಗೂ ನೃತ್ಯ ನಿರ್ದೇಶಕ ಧನಂಜಯ್ “ಶುಗರ್ ಫ್ಯಾಕ್ಟರಿ” ಬಗ್ಗೆ ಮಾತನಾಡಿದರು. ರಂಗಾಯಣ ರಘು ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಹಮದಾಬಾದ್ ಅಂತರರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಚಿಣ್ಣರ ಚಂದ್ರ” ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದ್ದು, ಸ್ಪರ್ಧಾ ವಿಭಾಗದಲ್ಲಿ ಪ್ರವೇಶ ಪಡೆದಿದೆ.
ಈ ಚಿತ್ರ ಈಗಾಗಲೇ ಮೆಲ್ಬರ್ನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿ ಸ್ಪರ್ಧೆಯ ಅಂತಿಮ ಹಂತ ತಲುಪಿದೆ.
“ಚಿಣ್ಣರ ಚಂದ್ರ” ಚಿತ್ರವು ಶಿಕ್ಷಣದ ಮಹತ್ವವನ್ನು ಸಾದರ ಪಡಿಸುತ್ತಲೇ ಸಮಾಜದಲ್ಲಿ ಸದಭಿರುಚಿ, ಸೌಹಾರ್ದತೆ ಮತ್ತು ಸಮಾನತೆ ಅಗತ್ಯ ಎಂಬುದನ್ನೂ ಮಕ್ಕಳ ಮೂಲಕ ಅಭಿವ್ಯಕ್ತ ಪಡಿಸುತ್ತದೆ. ಜೊತೆಗೆ ಜನಪದ ಕಥೆಗಳು ಮಕ್ಕಳ ಮನಸ್ಸಿನ ಭಾಗವಾಗುವುದನ್ನು ಚಿತ್ರಿಸುತ್ತದೆ.
ಬರಗೂರರ “ಅಡಗೂಲಜ್ಜಿ” ಎಂಬ ಕಾದಂಬರಿಯನ್ನು ಆಧರಿಸಿರುವ ಈ ಚಿತ್ರವನ್ನು ಜಿ.ಎಸ್ ಗೋವಿಂದರಾಜು (ರಾಜಶೇಖರ್) ನಿರ್ಮಿಸಿದ್ದಾರೆ.
ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ ರೋಜಿ. ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗ “ರೋಜಿ” ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಹಾಗೂ ಇಳಯದಳಪತಿ ವಿಜಯ್ ಅಭಿನಯದ “ಲಿಯೊ” ಚಿತ್ರದಲ್ಲಿ ಚಾಕೊಲೇಟ್ ಕಾಫಿ ಎಂಬ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಸ್ಯಾಂಡಿ ಮಾಸ್ಟರ್ ನಟಿಸುತ್ತಿದ್ದಾರೆ. ಮಾಸ್ಟರ್ ಅವರ ಪಾತ್ರ ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ನಾನು ನೃತ್ಯ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. “ಲಿಯೊ” ಚಿತ್ರದ ನನ್ನ ಪಾತ್ರಕ್ಕೆ ಈಗ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗಿದೆ. ನಿರ್ದೇಶಕ ಶೂನ್ಯ ಅವರು ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರದ ಬಗ್ಗೆ ಹೇಳಿದರು. ಇಷ್ಟವಾಯಿತು. ಆಂಡಾಳ್ ಎಂಬುದು ನನ್ನ ಪಾತ್ರದ ಹೆಸರು ಎಂದು ಸ್ಯಾಂಡಿ ಮಾಸ್ಟರ್ ತಿಳಿಸಿದರು.
ನನ್ನ ಪಾತ್ರದ ಹೆಸರು “ರೋಜಿ”. ನಮ್ಮ ಚಿತ್ರಕ್ಕೆ ಈಗಾಗಲೇ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆದಿದೆ ಎಂದ ಲೂಸ್ ಮಾದ ಯೋಗಿ, ಸದ್ಯದಲ್ಲೇ ವಿಭಿನ್ನವಾದ ಟೀಸರ್ ಸಹ ಬರಲಿದೆ. ಇದು ಮೂರು ನಿಮಿಷಗಳ ಅವಧಿಯಿದ್ದು ಟೀಸರ್ ಎನ್ನಬೇಕೊ ಅಥವಾ ಟ್ರೇಲರ್ ಎನ್ನಬೇಕೊ ಗೊತ್ತಾಗುತ್ತಿಲ್ಲ ಎಂದರು.
ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಮೊದಲ ಹಂತದ ಚಿತ್ರೀಕರಣದ ಕೆಲವು ಭಾಗಗಳನ್ನು ಆಯ್ಕೆ ಮಾಡಿ ಟೀಸರ್ ಸಹ ಸಿದ್ದವಾಗುತ್ತಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ. ಈಗ ಸ್ಯಾಂಡಿ ಮಾಸ್ಟರ್ ಚಿತ್ರತಂಡ ಸೇರ್ಪಡೆಯಾಗಿದ್ದಾರೆ. ವಿಭಿನ್ನಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ನಟರಿಬ್ಬರು ಹಾಗೂ ತೆಲುಗಿನ ಖ್ಯಾತ ನಟರೊಬ್ಬರು ನಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುವುದಾಗಿ “ಹೆಡ್ ಬುಷ್” ಚಿತ್ರದ ಖ್ಯಾತಿಯ ನಿರ್ದೇಶಕ ಶೂನ್ಯ.
ಟೀಸರ್ ಗೆ ಹಿನ್ನೆಲೆ ಸಂಗೀತ ನೀಡಲು ಶೂನ್ಯ ನನ್ನ ಸಂಪರ್ಕಿಸಿದರು. ಟೀಸರ್ ಚೆನ್ನಾಗಿ ಬಂದಿದೆ. ನಾಲ್ಕು ಹಾಡುಗಳು ಚಿತ್ರದಲ್ಲಿದೆ. ಯೋಗಿ ಅವರ ಜೊತೆ ಇದು ನನ್ನ ಮೊದಲ ಚಿತ್ರ ಎಂದರು ಸಂಗೀತ ನಿರ್ದೇಶಕ ಗುರುಕಿರಣ್.
ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಚಿತ್ರತಂಡಕ್ಕೆ ನಿರ್ಮಾಪಕ ಡಿ.ವೈ.ರಾಜೇಶ್ ಧನ್ಯವಾದ ತಿಳಿಸಿದರು. ಸಹ ನಿರ್ಮಾಪಕ ಡಿ.ವೈ ವಿನೋದ್ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ ಪತ್ರಿಕಾಗೋಷ್ಠಿಯಲ್ಲಿದ್ದರು.
ರಾಜ್ ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಸ್ಯಾಂಡಲ್ವುಡ್ ಕ್ವೀನ್’ ರಮ್ಯಾ ಅವರು ತಮ್ಮ ಆಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲೈಟರ್ ಬುದ್ಧ ಫಿಲಂಸ್ ಸಹಯೋಗದೊಂದಿಗೆ ನಿರ್ಮಾಣವಾಗಿರುವ “ಸ್ವಾತಿ ಮುತ್ತಿನ ಮಳೆ ಹನಿಯೇ” ಚಿತ್ರ ನವೆಂಬರ್ 24ರಂದು ಕೆ.ಆರ್.ಜಿ. ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.
ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ, ನಾನೊಬ್ಬ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ವಿದ್ಯಾರ್ಥಿ. ನಾನು ಜನರ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಸಾವಿನಂಚಿನಲ್ಲಿರುವ ರೋಗಿಗಳನ್ನು ಶುಶ್ರೂಷೆ ಮಾಡುವ ಕೇಂದ್ರಕ್ಕೆ ಭೇಟಿ ನೀಡಿದಾಗ ಈ ಕಥೆ ಮಾಡಬೇಕೆನಿಸಿತು. ಇನ್ನು ಸ್ವಾತಿ ಮಳೆಯ ನೀರು ಆರೋಗ್ಯಕರ ಎಂದು ಆಯುರ್ವೇದ ಹೇಳುತ್ತದೆ. ಈ ಮಳೆಯ ನೀರು ಕಪ್ಪೆಚಿಪ್ಪಿನ ಜೊತೆ ಸೇರಿ ಮುತ್ತಾಗುತ್ತದೆ.
ಹಾಗಾಗಿ ನಮ್ಮ ಚಿತ್ರದ ಕಥೆಗೆ ಈ ಶೀರ್ಷಿಕೆ ಸರಿ ಹೊಂದುವುದರಿಂದ “ಸ್ವಾತಿ ಮುತ್ತಿನ ಮಳೆ ಹನಿಯೇ” ಎಂದು ಶೀರ್ಷಿಕೆ ಇಟ್ಟಿದ್ದೇವೆ. ಅನಿಕೇತ್ ನನ್ನ ಪಾತ್ರದ ಹೆಸರು. ಮಿಥುನ್ ಮುಕುಂದನ್ ಸುಮಧುರ ಸಂಗೀತದಲ್ಲಿ ಚಿತ್ರದ ಹಾಡುಗಳು ಇಂಪಾಗಿ ಮೂಡಿಬಂದಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಕೂಡ ಚೆನ್ನಾಗಿ ಬಂದಿದೆ ಎಂದರು.
ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಪ್ರೇರಣ. ಹಾಸ್ ಪೈಸ್ ವೊಂದರಲ್ಲಿ ಕೌನ್ಸಿಲರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತೇನೆ. ಸಾವಿನಂಚಿನಲ್ಲಿರುವವರಿಗೆ ಸಾವಿನ ಬಗ್ಗೆ ಧೈರ್ಯ ತುಂಬುವ ಪಾತ್ರ ಎನ್ನಬಹುದು ಎಂದರು ನಾಯಕಿ ಸಿರಿ ರವಿಕುಮಾರ್.
ಮಿಥುನ್ ಮುಕುಂದನ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು. ಗಾಯಕಿ ಮಾಧುರಿ ಶೇಷಾದ್ರಿ ಚಿತ್ರದ “ಮೆಲ್ಲಗೆ” ಹಾಡನ್ನು ಹಾಡಿದರು.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ನಟಿಸಿರುವ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮಾ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು.
ಪ್ರವೀಣ್ ಶ್ರೀಯಾನ್ ಈ ಚಿತ್ರದ ಛಾಯಾಗ್ರಹಣದ ಜೊತೆಗೆ, ರಾಜ್ ಜೊತೆಗೆ ಸೇರಿ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ರಿಯೊ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಂಜನಿ ನಿರ್ಮಿಸುತ್ತಿರುವ ಹಾಗೂ ಎಂ.ಶಂಕರ್ ನಿರ್ದೇಶಿಸುತ್ತಿರುವ ” ಮುದುಡಿದ ಎಲೆಗಳು” ಚಿತ್ರದ ಮುಹೂರ್ತಕ್ಕೆ ಚಾಲನೆ ಸಿಕ್ಕಿದೆ. ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ತಂಡಕ್ಕೆ ಶುಭ ಕೋರಿದ್ದಾರೆ.
ನಿರ್ಮಾಪಕ ಹಾಗೂ ನಿರ್ದೇಶಕ ಎಂ.ಶಂಕರ್ನ ಮಾತನಾಡಿ, ನಮ್ಮ ರಿಯೊ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ನನ್ನ ಪತ್ನಿ ರಂಜನಿ ಈ ಚಿತ್ರದ ಸಹ ನಿರ್ಮಾಪಕಿ. ಮನುಷ್ಯ ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಬರೆದಿದ್ದೇನೆ. “ಮುದುಡಿದ ಎಲೆಗಳು” ಹೇಗೆ ಚದರಿ ಹೋಗುತ್ತದೆ .
ಮತ್ತೆ ಹೇಗೆ ಒಂದಾಗುತ್ತದೆ ಎಂಬ ಅಂಶವನ್ನೂ ಕಥೆ ಆಧರಿಸಿದೆ. ಮೂವತ್ತು ದಿನಗಳ ಒಂದೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಹಾಡುಗಳು ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಈ ಚಿತ್ರದಲ್ಲಿ ರಂಜಿತ್ ಕುಮಾರ್, ಪಂಕಜ್ ಎಸ್ ನಾರಾಯಣ್ ಹಾಗೂ ದರ್ಶನ್ ಸೂರ್ಯ ಮೂವರು ನಾಯಕರು.
ಊರ್ವಶಿ ರಾಯ್, ಸೀಮಾ ವಸಂತ್ ಹಾಗೂ ಸುಶ್ಮಿತ ನಾಯಕಿಯರು. ಹಿರಿಯ ನಟ ಭವ್ಯ, ಶೋಭ್ ರಾಜ್, ಶಂಕರ್ ಅಶ್ವಥ್, ಹರ್ಷಿಕಾ ಪೂಣ್ಣಚ್ಚ, ಸಂತೋಷ್ ರೆಡ್ಡಿ, ಅಮಿತ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ರಮೇಶ್ ಕೋಟೆ ಸಹ ನಿರ್ದೇಶನ, ಶ್ಯಾಮ್ ಸಿಂಧನೂರು ಛಾಯಾಗ್ರಹಣ ಹಾಗೂ ವಿಕಾಸ್ ವಸಿಷ್ಠ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ ಎಂದರು.
ನನ್ನ ಪತಿ ಶಂಕರ್ ಅವರ ಸಾರಥ್ಯದಲ್ಲಿ “ಮುದುಡಿದ ಎಲೆಗಳು” ಚಿತ್ರ ಉತ್ತಮವಾಗಿ ಮೂಡಿ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಸಹ ನಿರ್ಮಾಪಕಿ ರಂಜನಿ.
ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಸಹ ನಿರ್ದೇಶಕ ರಮೇಶ್ ಕೋಟೆ ನೀಡಿದರು.
ಚಿತ್ರದಲ್ಲಿ ನಟಿಸುತ್ತಿರುವ ಭವ್ಯ, ಅಮಿತ್ ರಾಜ್, ರಂಜಿತ್ ಕುಮಾರ್, ಪಂಕಜ್ ಎಸ್ ನಾರಾಯಣ್, ದರ್ಶನ್ ಸೂರ್ಯ, ಊರ್ವಶಿ ರಾಯ್, ಸುಶ್ಮಿತ, ಸೀಮಾ ವಸಂತ್ ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.
ಚಿತ್ರ: ದಿ ವೆಕೆಂಟ್ ಹೌಸ್ ನಿರ್ದೇಶನ: ಎಸ್ತರ್ ನರೋನ್ಹಾ ನಿರ್ಮಾಣ: ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ತಾರಾಗಣ: ಎಸ್ತರ್ ನರೋನ್ಹಾ, ಶ್ರೇಯಸ್ ಚಿಂಗ, ಸಂದೀಪ್ ಮಲಾನಿ ಇತರರು.
ಕಾನನದೊಳಗಿನ ನಡು ರಸ್ತೆ. ಆವರಿಸಿದ ಕಗ್ಗತ್ತಲು. ಮೃತ ದೇಹ ಹೊತ್ತು ಬರುತ್ತಿರುವ ವಿಕಾರವಾದ ರೂಪ. ಇಷ್ಟು ಹೇಳಿದ ಮೇಲೆ ಇದೊಂದು ದೆವ್ವದ ಕಥೆ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ.
ಹೌದು, ದಿ ವೆಕೆಂಟ್ ಹೌಸ್ ಪಕ್ಕಾ ಹಾರರ್ ಫೀಲ್ ತುಂಬಿದ ಚಿತ್ರ. ಹಾಗಂತ ಇಡೀ ಸಿನಿಮಾವನ್ನು ದೆವ್ವವೇ ಆವರಿಸಿಕೊಂಡಿದೆ ಅಂದುಕೊಳ್ಳುವಂತಿಲ್ಲ. ಮೊದಲ ಬಾರಿಗೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಎಸ್ತರ್ ನರೋನ್ಹಾ ಒಂದಷ್ಟು ಭಯ ಬೀಳಿಸುವ ಪ್ರಯತ್ನ ಮಾಡಿದ್ದಾರೆ. ಮೊದಲರ್ಧ ಪ್ರೀತಿ ಗೀತಿ ಇತ್ಯಾದಿ ತುಂಬಿದ್ದರೆ, ದ್ವಿತಿಯಾರ್ಧ ಅಲ್ಲಲ್ಲಿ ಭೀತಿ ಹುಟ್ಟಿಸೋಕೆ ಶುರು ಮಾಡುತ್ತಾರೆ. ಒಟ್ಟಾರೆ ಹೆಚ್ಚೇನು ಪ್ರಭಾವ ಬೀರದಿದ್ದರೂ, ದೆವ್ವ ಕೊಡುವ ಕಾಟ ಮಾತ್ರ ಗಮನಸೆಳೆಯದೇ ಇರದು.
ಸಿನಿಮಾದ ಚಿತ್ರಕಥೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಸಂಭಾಷಣೆ ಬಗ್ಗೆ ಕೊಂಚ ಗಮನಿಸಬೇಕಿತ್ತು. ಸಿನಿಮಾ ಎಲ್ಲೋ ಒಂದು ಕಡೆ ಸ್ಲೋ ಎನಿಸುತ್ತಿದ್ದಂತೆಯೇ ಅಲ್ಲೊಂದು ಹಾಡು ತೂರಿ ಬಂದು ಸಿನಿಮಾವನ್ನು ಮತ್ತದೇ ಟ್ರ್ಯಾಕ್ ಕಡೆಗೆ ಕರೆದೊಯ್ಯುತ್ತೆ. ಉಳಿದಂತೆ ಹಿನ್ನೆಲೆ ಸಂಗೀತದಲ್ಲಿ ಗಿಟಾರ್ ನದ್ದೇ ಸದ್ದು. ಇಂತಹ ಸಿನಿಮಾಗಳಿಗೆ ಎಫೆಕ್ಟ್ ಮುಖ್ಯ. ಅದಿಲ್ಲಿ ಮಾಯ. ಆದರೂ ಕೆಲವು ಕಡೆ ದೆವ್ವದ ಪ್ರೇಮದಾಟ ನೋಡುಗರಿಗೆ ನಗುಬತರಿಸುತ್ತೆ ಅನ್ನೋದೇ ಸಮಾಧಾನ.
ಚಿತ್ರದಲ್ಲಿ ಓಹೋ ಎನ್ನುವ ಎಲಿಮೆಂಟ್ಸ್ ಇರದಿದ್ದರೂ, ಕಥೆ ಸ್ವಲ್ಪ ಇಂಟ್ರೆಸ್ಟಿಂಗ್ ಎನಿಸುತ್ತೆ. ನಿರ್ದೇಶಕರ ಜಾಣತನ ಬಗ್ಗೆ ಹೇಳಬೇಕೆಂದರೆ, ಇಲ್ಲಿ ನಾಲ್ಕು ಪಾತ್ರಗಳು ಮಾತ್ರ ರಾರಾಜಿಸುತ್ತವೆ. ಎರಡುಮನೆ ನಾಲ್ಕು ಪಾತ್ರ ಒಂದು ರಸ್ತೆ, ಒಂದು ತೋಟ ಇವಿಷ್ಟೇ ಲೊಕೇಷನ್. ಒಂದು ದೆವ್ವದ ಕಥೆ ಹೇಳೋಕೆ ಇಷ್ಟು ಸಾಕು ಬಿಡಿ.
ಇಷ್ಟಕ್ಕೂ ಕಥೆ ಏನು? ಅಪ್ಪ ಅಮ್ಮನ ಕಳಕೊಂಡ ಅನಾಥ ಹುಡುಗ ಒಬ್ಬ ಶಿಕ್ಷಕ. ಅವನಿಗೋ ಪ್ರೀತಿಸುವ ಬಯಕೆ. ಅದೇ ಸಮಯದಲ್ಲಿ ಖಾಲಿ ಇರುವ ಎದುರು ಮನೆಗೆ ಗಂಡ ಹೆಂಡತಿಯ ಆಗಮನವಾಗುತ್ತೆ. ಇತ್ತ ಆ ಹುಡುಗನ ಮನದಲ್ಲಿ ಸಣ್ಣ ಆಸೆ ಚಿಗುರೊಡೆಯುತ್ತೆ. ಎದುರು ಮನೆ ಹುಡುಗಿ ಅಂದುಕೊಂಡು ಪ್ರೀತಿಸತೊಡಗುತ್ತಾನೆ. ಆದರೆ, ಆಕೆಗೆ ಮದ್ವೆ ಆಗಿರೋ ವಿಷಯ ಗೊತ್ತಾದ ಮೇಲೆ ಆಸೆಗಳು ನುಚ್ಚು ನೂರು.
ಅತ್ತ ತನ್ನೊಳಗಿನ ಆಸೆಯನ್ನು ಆಕೆಯ ಮುಂದೆ ಹೊರಹಾಕುವಾಗ ಒಂದು ಘಟನೆ ನಡೆಯುತ್ತೆ. ಆಮೇಲೆ ಆಕೆಯ ಪತಿ ರಸ್ತೆ ಅಪಘಾತದಲ್ಲಿ ಸಾಯುತ್ತಾನೆ. ಮುಂದೆ ಆಗೋದೆಲ್ಲಾ ಭಯಾನಕ ಘಟನೆಗಳು. ಹಾಗಂತ ಬೆಚ್ಚಿ ಬೀಳಿಸುವ ಘಟನೆಗಳೇನು ಅಲ್ಲಿ. ಸಣ್ಣದ್ದೊಂದು ತಿರುವುಬಸಿನಿಮಾದ ಹೈಲೆಟ್. ಅದೇನು ಎಂಬ ಕುತೂಹಲ ಇದ್ದರೆ ವೆಕೆಂಟ್ ಹೌಸ್ ನೋಡಬಹುದು.
ಯಾರು ಹೇಗೆ
ಎಸ್ತರ್ ನರೋನ್ಹಾ ಪಾತ್ರವನ್ನು ಆವರಿಸಿದ್ದಾರೆ. ಇಢಿ ಸಿನಿಮಾದ ಹೈಲೆಟ್ ಅವರು. ಶ್ರೇಯಸ್ ಚಿಂಗ ನಟನೆ ಬಗ್ಗೆ ಹೆಚ್ಚೇನು ಹೇಳಂಗಿಲ್ಲ. ಪ್ರೇಮಿಯಾಗಿ, ನಗುತ್ತ ನಗಿಸುತ್ತ ಅಳುತ್ತಲೇ ಕಾಡುತ್ತಾರೆ. ಸಂದೀಪ್ ಮಲಾನಿ ನಿರ್ದೇಶಕರು ಕೊಟ್ಟ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ನರೇಂದ್ರ ಗೌಡ ಛಾಯಾಗ್ರಹಣದಲ್ಲಿ ಮಲೆನಾಡ ಸೊಬಗಿದೆ. ವಿಜಯ್ ರಾಜ್ ಸಂಕಲನ ಇನ್ನಷ್ಟು ಚುರುಕಾಗಬೇಕಿತ್ತು.
‘ಈ ಘಳಿಗೆಯಲ್ಲಿ ನಿನಗೆ ಮಗು ಹುಟ್ಟಿದರೆ ರಾಜಯೋಗ ಶುರುವಾಗುತ್ತೆ… ಹೋಗಲಿ ಬಿಡು ಈಗ ಒಳ್ಳೆ ಘಳಿಗೆ ಮಧ್ಯಮ ಯೋಗವಿದೆ… ಮೂಲ ನಕ್ಷತ್ರ ಶುರುವಾಯ್ತು. ಮಗು ಹುಟ್ಟುತ್ತಲೇ ಗಂಡಾಂತರ ಶುರುವಾಗುತ್ತೆ… ಆ ಗ್ರಾಮದ ಐನೋರು ಈ ಡೈಲಾಗ್ ಹೇಳಿದ ಬಳಿಕ ಮಗುವೊಂದರ ಜನನವಾಗುತ್ತೆ. ಅಲ್ಲಿಗೆ ಮೂಲನಕ್ಷತ್ರದಲ್ಲಿ ಹುಟ್ಟಿದ ಹುಡುಗನ ಕಥೆ -ವ್ಯಥೆ ಇತ್ಯಾದಿ ಕಷ್ಟ ಕಾರ್ಪಣ್ಯಗಳ ತೊಳಲಾಟವೇ ಚಿತ್ರದ ಒನ್ ಲೈನ್.
ನಿರ್ದೇಶಕರು ಒಂದೊಳ್ಳೆಯ ಎಳೆಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲ ಗಮನ ಸೆಳೆಯುವ ಅಂಶವೆಂದರೆ ಗ್ರಾಮೀಣ ಭಾಷೆ ಮತ್ತು ಅಲ್ಲಿನ ಪರಿಸರ. ಎಲ್ಲವನ್ನೂ ಅಷ್ಟೇ ರಸವತ್ತಾಗಿ ತೋರಿಸುವುದರ ಜೊತೆಗೊಂದು ಮಾನವೀಯತೆ, ಸಂಬಂಧಗಳ ಮೌಲ್ಯ ವನ್ನು ಸಾರಿದ್ದಾರೆ. ಹಳ್ಳಿ ಸುತ್ತ ನಡೆಯುವ ಕಥೆಯಾದ್ದರಿಂದ ನೈಜತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಬಳಸಿರುವ ಭಾಷೆಯೂ ಕೂಡ ಆಪ್ತವೆನಿಸಿ, ನೋಡಿಸಿಕೊಂಡು ಹೋಗುತ್ತೆ. ಮೊದಲರ್ಧ ಹಾಸ್ಯವಾಗಿ ಸಾಗುವ ಸಿನಿಮಾದಲ್ಲಿ ಆಳವಾದ ವಿಷಯವಿದೆ. ದ್ವಿತಿಯಾರ್ಧದಲ್ಲೂ ಇನ್ನಷ್ಟು ಹಿಡಿತ ಇದ್ದಿದ್ದರೆ ಸಿನಿಮಾ ಮತ್ತಷ್ಟು ಚುರುಕಾಗಿರುತ್ತಿತ್ತು. ಪದೇ ಪದೇ ಹೇಳಿದ ತೋರಿಸಿದ ದೃಶ್ಯ ವಿಷಯಗಳೇ ಇಣುಕುತ್ತವೆ. ಹಾಗಾಗಿ ನೋಡುಗರಿಗೆ ಕೊಂಚ ಕಿರಿಕಿರಿ ಎನಿಸಬಹುದು. ನಿರ್ದೇಶಕರು ಸ್ವಲ್ಪ ಅವಧಿ ಕಡಿಮೆಗೊಳಿಸಬಹುದಿತ್ತು. ದ್ವಿತಿಯಾರ್ಧ ಕೆಲ ಕಡೆ ವಿನಾಕಾರಣ ಎಳೆದಂತಾಗಿದೆ. ಎಲ್ಲೋ ಒಂದು ಕಡೆ ನೋಡುಗ ಸೀಟಿಗೆ ಒರಗುತ್ತಾನೆ ಅನ್ನುವಷ್ಟರಲ್ಲಿ, ಅಲ್ಲೊಂದು ಹಾಡು ಬಂದು ಮತ್ತೆ ಟ್ರ್ಯಾಕ್ ಗೆ ಕರೆದೊಯ್ಯುತ್ತೆ. ಉಳಿದಂತೆ ಎಲ್ಲೂ ಹೊಡಿ ಬಡಿ ಕಡಿ ದೃಶ್ಯಗಳಿಲ್ಲ. ಹಳ್ಳಿಯೊಂದರ ಕೂಡು ಕುಟುಂಬದೊಳಗಿನ ಸಾರವನ್ನು ಅಚ್ಚುಕಟ್ಟಾಗಿ ಉಣಬಡಿಸುವಲ್ಲಿ ನಿರ್ದೇಶಕರ ಹರಸಾಹಸ ಮಾಡಿದ್ದಾರೆ.
ಕಥೆ ಇಷ್ಟು..
ಅವನು ಪ್ರಾಣೇಶ. ಮೂಲ ನಕ್ಷತ್ರದಲ್ಲಿ ಹುಟ್ಟಿದವ. ಅಪ್ಪ ಮಾತ್ರವಲ್ಲ, ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ ಅಣ್ಣ ತಂಗಿ ಎಲ್ಲರೂ ಅವನನ್ನು ಹೀಯಾಳಿಸುವರೆ. ಊರ ಜನರೂ ಇದಕ್ಕೆ ಹೊರತಲ್ಲ. ಹೀಗಿರುವಾಗ, ಬಿ ಎ ಓದಿರುವ ಪ್ರಾಣೇಶಿಗೆ ಕೆಎಎಸ್ ಎಕ್ಸಾಂ ಬರೆದು ತಹಸೀಲ್ದಾರ್ ಆಗಬೇಕೆಂಬ ಛಲ. ಎಲ್ಲರೂ ಅವನನ್ನು ಕೇವಲವಾಗಿ ನೋಡುವರೇ. ಘಟನೆಯೊಂದರಲ್ಲಿ ಪ್ರಾಣೇಶನ ಸಾಧನೆಯ ಮಹತ್ವ ಎಲ್ಲರಿಗೂ ಗೊತ್ತಾಗುತ್ತೆ. ಅಲ್ಲೊಂದು ಟ್ವಿಸ್ಟು, ಟೆಸ್ಟು ಎದುರಾಗುತ್ತೆ. ಅದೇ ಸಿನಿಮಾದ ಬಿಗ್ ಟ್ವಿಸ್ಟ್. ಆ ಟ್ವಿಸ್ಟ್ ನ ಕುತೂಹಲ ಇದ್ದರೆ, ಒಂದೊಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ.
ಯಾರು ಹೇಗೆ?
ಮೊದಲ ಸಲ ಪ್ರಮುಖ ಪಾತ್ರ ನಿರ್ವಹಿಸಿ, ಇಡೀ ಸಿನಿಮಾವನ್ನು ಆವರಿಸಿರುವ ಧರ್ಮಣ್ಣ ನಿಜಕ್ಕೂ ತಾನೊಬ್ಬ ಕಲಾವಿದ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಅವರಿಗೆ ತಕ್ಕ ಪಾತ್ರ ಸಿಕ್ಕಿದೆ. ಆ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರಿಲ್ಲಿ ನಗಿಸೋಕು ಸೈ , ಅಳಿಸೋಕು ಸೈ. ಒಟ್ಟಾರೆ ಒಂದು ಭಾವನಾತ್ಮಕ ಸಿನಿಮಾಗೆ ಹೇಗೆ ನೈಜತೆ ಕಟ್ಟಿಕೊಡಲು ಸಾಧ್ಯವೋ ಅದನ್ನು ಮಾಡಿದ್ದಾರೆ.
ನಾಯಕಿ ನಿರೀಕ್ಷಾ ರಾವ್ ಪಾತ್ರಕ್ಕೆ ಮೋಸ ಮಾಡಿಲ್ಲ. ನಾಗೇಂದ್ರ ಶಾ ಅವರಿಲ್ಲಿ ಹೆಚ್ಚು ಕಾಡುತ್ತಾರೆ. ನಗಿಸುತ್ತಾರೆ, ಅಳಿಸುತ್ತಾರೆ., ಕೃಷ್ಣ ಮೂರ್ತಿ ಕವತ್ತಾರ್, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ್ ಹಿರೇಮಠ್ , ಮಠ ಇತರರು ಗಮನ ಸೆಳೆಯುತ್ತಾರೆ. ಅಕ್ಷಯ್ ರಿಶಭ್ ಸಂಗೀತದ ಎರಡು ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತಕ್ಕಿನ್ನು ಸ್ವಾದ ಬೇಕಿತ್ತು. ವಿಷ್ಣುಪ್ರಸಾದ್ ಕ್ಯಾಮೆರಾ ಕೈ ಚಳಕದಲ್ಲಿ ಹಳ್ಳಿಯ ಸೊಗಸಿದೆ.
ರವೀಂದ್ರಕುಮಾರ್ ನಿರ್ಮಾಣದ, ಜಯತೀರ್ಥ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ ” ಕೈವ” ಚಿತ್ರದ ಆಕ್ಷನ್ ಟೀಸರ್ ದೀಪಾವಳಿ ಹಬ್ಬದಂದು ಬಿಡುಗಡೆಯಾಗಿದೆ. ಅಭಿಷೇಕ್ ಅಂಬರೀಶ್ ಹಾಗೂ ದಿನಕರ್ ತೂಗುದೀಪ ಈ ಚಿತ್ರದ ಆಕ್ಷನ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನಿರ್ದೇಶಕ “ಮದಗಜ” ಮಹೇಶ್ ಕುಮಾರ್ ಕೂಡಬೀ ವೇಳೆ ಇದ್ದರು.
“ಕೈವ” ಇದು ಒಬ್ಬ ವ್ಯಕ್ತಿಯ ಹೆಸರು. 1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ನನಗೆ ಮಾರ್ಚುರಿಯಲ್ಲಿ ಕೆಲಸ ಮಾಡುವವರಿಂದ ಈ ಕಥೆ ಸಿಕ್ಕಿತು. ಆನಂತರ ತಿಗಳರಪೇಟೆಗೆ ಹೋಗಿ ಅಲ್ಲಿ ಈ ಘಟನೆ ಬಗ್ಗೆ ಕೂಲಂಕುಶವಾಗಿ ತಿಳಿದುಕೊಂಡೆ. ಈ ಘಟನೆ ಕಂಡಿದ್ದ ಅನೇಕರು ಈಗಲೂ ಇದ್ದಾರೆ. ಇದೇ ಇಸವಿಯಲ್ಲಿ ನಡೆದ ಗಂಗಾರಾಮ್ ಕಟ್ಡಡದ ದುರಂತಕ್ಕು ಹಾಗೂ ಈ ಚಿತ್ರದ ಕಥೆಗೂ ಸಂಬಂಧವಿದೆ.
ಚಿತ್ರದ ನಾಯಕನಾಗಿ ಧನ್ವೀರ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಮೇಘ ಶೆಟ್ಟಿ ನಟಿಸಿದ್ದಾರೆ. ದಿನಕರ್ ತೂಗುದೀಪ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ವೇತಪ್ರಿಯ ಛಾಯಾಗ್ರಹಣ ಮಾಡಿದ್ದಾರೆ. ಮೈಸೂರಿನಲ್ಲಿ ನಲವತ್ತೆಂಟು ದಿನಗಳ ಚಿತ್ರೀಕರಣ ನಡೆದಿದೆ. ಕೆಲವು ಭಾಗಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆ. ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದರು.
“ಕೈವ” ನನ್ನ ನಾಲ್ಕನೇ ಚಿತ್ರ ಎಂದು ಮಾತು ಆರಂಭಿಸಿದ ನಾಯಕ ಧನ್ವೀರ್, ಈ ಕಥೆ ಎಲ್ಲ ಕಡೆ ಸುತ್ತಿ ದ್ರೌಪದಿ ತಾಯಿ ಆಶೀರ್ವಾದದಿಂದ ನನ್ನ ಬಳಿ ಬಂತು. ಜಯತೀರ್ಥ ಅವರು ತುಂಬಾ ಅದ್ಛುತವಾಗಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದವರು ಚಿತ್ರ ಚೆನ್ನಾಗಿದೆ ಎನ್ನುತ್ತಿದ್ದಾರೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು.
ದಿನಕರ್ ತೂಗುದೀಪ್ ರವರು ಮಾತನಾಡಿ, ನನಗೆ ಸಂಭಾಷಣೆಕಾರ ರಘು ನಿಡವಳ್ಳಿ, ನಿರ್ದೇಶಕ ಜಯತೀರ್ಥ ಅವರು ಭೇಟಿಯಾಗಬೇಕಂತೆ ಅಂದರು. ಆಗ ಜಯತೀರ್ಥ ಅವರು ಈ ಪಾತ್ರದ ಬಗ್ಗೆ ಹೇಳಿದರು. ನನ್ನ ಪಾತ್ರ ನೋಡಿದವರು ನಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರ ಹಾಗೆ ಕಾಣುತ್ತೀರಿ ಎನ್ನುತ್ತಿದ್ದಾರೆ. ಅದು ನಮ್ಮ ತಂದೆಯವರ ಆಶೀರ್ವಾದ. ನಮ್ಮ ಅಮ್ಮ ಕೂಡ ನನ್ನ ಪಾತ್ರ ನೋಡಿ ಸಂತೋಷಪಟ್ಟರು ಎಂದರು.
ನಾಯಕಿ ಮೇಘ ಶೆಟ್ಟಿ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ರಾಘು ಶಿವಮೊಗ್ಗ, ಸಂಭಾಷಣೆಕಾರ ರಘು ನಿಡವಳ್ಳಿ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ಅವರು “ಕೈವ” ಚಿತ್ರದ ಕುರಿತು ಮಾತನಾಡಿದರು.