Categories
ಸಿನಿ ಸುದ್ದಿ

ಅರ್ಥೈಸಿಕೊಂಡರೆ ಗಣನ ಗುಣಗಾನ!

ಚಿತ್ರ : ಗಣ
ನಿರ್ಮಾಣ: ಪಾರ್ಥು
ನಿರ್ದೇಶನ: ಹರಿಪ್ರಸಾದ್ ಜಕ್ಕ
ತಾರಾಗಣ: ಪ್ರಜ್ವಲ್ ದೇವರಾಜ್, ಯಶ ಶಿವಕುಮಾರ, ವೇದಿಕಾ, ಸಂಪತ್, ರವಿಕಾಳೆ, ರಮೇಶ್ ಭಟ್, ಶಿವು ಕೆ.ಆರ್.ಪೇಟೆ ಇತರರು.

ಆ ಮನೆಯಲ್ಲಿ ಲ್ಯಾಂಡ್ ಫೋನ್ ಇದೆ. ಆದರೆ ಫೋನ್ ಕನೆಕ್ಷನ್ ಇಲ್ಲ. ಆದರೂ ಫೋನ್ ರಿಂಗ್ ಆಗುತ್ತೆ. ಆಕೆ 1993ರ ಕಾಲಘಟ್ಟದಲ್ಲಿರುವ ಟೀಚರ್. ಅವನು 2022ರ ಫ್ಯೂಚರ್ ನಲ್ಲಿರೋನು. ಇಬ್ಬರೂ ಒಬ್ಬರಿಗೊಬ್ಬರು ಭೇಟಿ ಇಲ್ಲ. ಆದರೂ ಕನೆಕ್ಷನ್ ಇರದ ಆ ಫೋನ್ ನಲ್ಲಿ ಸಂಭಾಷಣೆ. ಆಕೆಯ ಕಾಲಘಟ್ಟದಲ್ಲಿ ನಡೆಯೋ ಘಟನೆಗಳೆಲ್ಲವೂ ಇವನಿಗೆ ಗೊತ್ತು. ಆದರೂ ಕೆಲ ಕೆಟ್ಟ ಘಟನೆ ತಡೆಯಬೇಕು ಅನ್ನೋ ಚಾಲೆಂಜ್ ಅವನದು. ಅದು ಹೇಗೆ? ಅದೇ ಈ ಸಿನಿಮಾದ ವಿಶೇಷತೆ. ಸಿನಿಮಾ ಆರಂಭದಲ್ಲಿ ಎತ್ತ ಸಾಗುತ್ತೆ, ಏನು ನಡೆಯುತ್ತೆ ಅನ್ನುವುದಕ್ಕೆ ಸ್ವಲ್ಪ ತಾಳ್ಮೆಯಿಂದಲೇ ಕೂತು ನೋಡಬೇಕು. ಸಿನಿಮಾದಲ್ಲಿ ಎರಡು ಕಾಲಘಟ್ಟದ ಕಥೆ ಇದೆ. ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಮಾತ್ರ ಈ ಸಿನಿಮಾದ ವಿಶೇಷ ಗುಣ ಏನೆಂಬುದನ್ನು ಗಣ ಹೇಳುತ್ತಾ ಹೋಗುತ್ತಾನೆ. ಇತ್ತಿಚಿನ ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ, ತಲೆಗೆ ಕೆಲಸ ಕೊಡುವ, ತುಂಬಾನೇ ತದೇಕಚಿತ್ತದಿಂದ ಆಲಿಸುವ ಸಿನಿಮಾ ಇದು. ಒಂದಿಷ್ಟು ಅತ್ತಿತ್ತ ಕಣ್ಣಾಯಿಸಿದರೆ, ಗಮನ ಬೇರೆಡೆ ಹರಿಬಿಟ್ಟರೆ, ಖಂಡಿತವಾಗಿಯೂ ಈ ಚಿತ್ರ ಅರ್ಥ ಆಗೋದು ಕಷ್ಟ. ಇದೊಂದು ರೀತಿ ನೋಡುಗರಿಗೆ ಬಿಗ್ ಟಾಸ್ಕ್. ಸರಿಯಾಗಿ ಗಮನಿಸಿದವರಿಗೆ ಮಾತ್ರ ಗಣ ಅರ್ಥವಾಗುತ್ತಾನೆ ಇಲ್ಲವಾದರೆ ಕಷ್ಟ ಕಷ್ಟ.

ಇದೊಂದು ಟೈಮ್ ಟ್ರಾವೆಲಿಂಗ್ ಎಳೆ ಹೊಂದಿರುವ ಕಥೆ. ಹಾಗಾಗಿ ಇಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸಬೇಕು. ಒಂದಂತೂ ನಿಜ, ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ನಿರ್ದೇಶಕರ ಕೆಲಸ. ಇಲ್ಲೊಂದಷ್ಟು ಹುಳಬಿಡುವ ಕೆಲಸ ಮಾಡಿದ್ದಾರೆ. ಸ್ಕ್ರೀನ್ ಮೇಲೆ ಏನಾಗುತ್ತಿದೆ ಅನ್ನುವುದನ್ನು ಸ್ವಲ್ಪ ಅರ್ಥಮಾಡಿಕೊಂಡು ನೋಡಿದರೆ ಮಾತ್ರ ಗಣನ ಗುಣಗಾನ ಮಾಡಬಹುದು. ಆದರೂ, ಈ ಸಿನಿಮಾ ನೋಡಿದವರಿಗೆ ತಮಿಳಿನ ಮಾರ್ಕ್ ಆಂಟೋನಿ ಸಿನಿಮಾ ನೆನಪಾಗುತ್ತೆ. ಕಥೆ ಅದೇ ಅಲ್ಲ, ಆದರೆ, ಒಂದಷ್ಟು ಸಾಮ್ಯತೆ ಎನಿಸುತ್ತೆ. ಕನ್ನಡಕ್ಕೆ ಇದು ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿತ್ತು ಎನಿಸುತ್ತೆ.

ಇಲ್ಲಿ ಎರಡು ಕಾಲಘಟ್ಟದ ಕಥೆಯನ್ನು ಹೇಳುತ್ತಲೇ ನೋಡುಗರನ್ನು ಒಂದಷ್ಟು ಗೊಂದಲ ಉಂಟು ಮಾಡುತ್ತಾರೆ ನಿರ್ದೇಶಕರು. ಅವರ ಪ್ರಕಾರ ಎರಡು ಕಾಲಘಟ್ಟದ ಕಥೆಯನ್ನು ಹೇಳುತ್ತಲೇ, ಕ್ಲ್ಯೆಮ್ಯಾಕ್ಸ್ ನಲ್ಲಿ ಅದಕ್ಕೊಂದು ಹ್ಯಾಪಿ ಎಂಡಿಂಗ್ ಕೊಡುತ್ತಾರೆ. ಆರಂಭದಲ್ಲಿ ಸಿನಿಮಾ ಮಂದಗತಿ ಎನಿಸುತ್ತಾದರೂ, ದ್ವಿತಿಯಾರ್ಧ ಸಿನಿಮಾ ವೇಗ ಹೆಚ್ಚಿಸುತ್ತೆ. ಒಂದು ಕಾಲದಿಂದ ಇನ್ನೊಂದು ಕಾಲದ ಪಯಣದ ಕಥೆ ಇಲ್ಲಿದೆ. ಟೈಮ್ ಟ್ರಾವೆಲಿಂಗ್ ಸ್ಟೋರಿ ಇದಾಗಿರುವುದರಿಂದ ಇಲ್ಲಿ 1993ರಲ್ಲಿ ನಡೆದ ಘಟನೆ 2022 ರಲ್ಲೂ ಕನೆಕ್ಟ್ ಆಗುತ್ತಾ ಹೋಗುತ್ತೆ. ಒಂದು ಫೋನ್ ಕಾಲ್ ನಲ್ಲಿ ವಿಚಿತ್ರ ಸನ್ನಿವೇಶಗಳು ನಡೆಯುತ್ತಾ ಹೋಗುತ್ತವೆ.

ಅದನ್ನು ಅರ್ಥ ಮಾಡಿಕೊಳ್ಳೋದೇ ದೊಡ್ಡ ಟಾಸ್ಕ್. ನೋಡುಗರಿಗೆ ಅಷ್ಟೊಂದು ದೊಡ್ಡ ಟಾಸ್ಕ್ ಕೊಟ್ಟ ನಿರ್ದೇಶಕರು ಸ್ವಲ್ಪ ಗೊಂದಲ ಎಬ್ಬಿಸೋದು ನಿಜ. ಆದರೂ, ಇದೊಂದು ಗುಡ್ ಥಾಟ್ ಸಿನಿಮಾ. ಅರ್ಥ ಮಾಡಿಕೊಂಡರೆ ಇದೊಂದು ಒಳ್ಳೆಯ ಪ್ರಯೋಗದ ಸಿನಿಮಾ ಅನಿಸುತ್ತೆ. ಹಾಗಂತ ಇದನ್ನು ಕಮರ್ಷಿಯಲ್ ಸಿನಿಮಾ ಅಲ್ಲ ಅಂದುಕೊಳ್ಳುವಂತಿಲ್ಲ. ಇಲ್ಲೂ ಲವ್ ಇದೆ, ಫೈಟ್ ಇದೆ. ಎಮೋಷನ್ಸ್ ಇದೆ. ಅಲ್ಲಲ್ಲಿ ಸ್ವಲ್ಪ ನಗು ತರದ ಹಾಸ್ಯವೂ ಇದೆ. ಹೆಚ್ಚಾಗಿ ಸಿನಿಮಾ ನೋಡಿಸಿಕೊಂಡು ಹೋಗುವ ತಾಕತ್ತು ಹೊಂದಿದೆ. ಆದರೆ, ಅರ್ಥೈಸಿಕೊಳ್ಳಬೇಕಷ್ಟೆ.

ಕಥೆ ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಫಸ್ಟ್ ಹಾಫ್ ಬಂದಿರುತ್ತೆ. ಸೆಕೆಂಡ್ ಹಾಫ್ ನಲ್ಲಿ ಟ್ವಿಸ್ಟ್ ಗಳೊಂದಿಗೆ ಸಾಗುವ ಸಿನಿಮಾದಲ್ಲಿ ಒಂದಷ್ಟು ಏರಿಳಿತಗಳು ಎದುರಾಗುತ್ತವೆ. ಅದನ್ನು ದಾಟಿಕೊಂಡು ಹೋಗುವಷ್ಟರಲ್ಲಿ ಅಂತ್ಯವಾಗುತ್ತೆ. ಸಿನಿಮಾದಲ್ಲಿ ವಿನಾಕಾರಣ ಹಾಡು ಬಂದು ಗೊಂದಲ ಎಬ್ಬಿಸಲ್ಲ. ಬೇಕಂತನೇ ಫೈಟ್ ಎದುರಾಗಲ್ಲ. ಎಲ್ಲವೂ ಕಥೆಗೆ ಪೂರಕವೆನಿಸುತ್ತೆ. ಆದರೂ, ಕೆಲವೊಂದು ಹೊಡೆದಾಟ ಅನಗತ್ಯ ಎನಿಸದಿರದು. ಕಥೆಯಲ್ಲೇನೂ ಗೊಂದಲ ಇಲ್ಲ. ಆದರೆ, ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿಯಾದ ಹಿಡಿತ ಇರಬೇಕಿತ್ತು. ಇನ್ನಷ್ಟು ರೋಚಕವಾಗಿ ತೋರಿಸಲು ಅವಕಾಶವಿತ್ತು. ಅದಿಲ್ಲಿ ಸಾಧ್ಯವಾಗಿಲ್ಲ.

ಕಥೆ ಇಷ್ಟು…

ಆರಂಭದಲ್ಲಿ ಎರಡು ಮರ್ಡರ್ ಆಗುತ್ತೆ. ಅದು 1993ರಲ್ಲಿ ಆಗುವ ಕೊಲೆ. 2022ರಲ್ಲಿ ಎರಡು ಅಸ್ತಿಪಂಜರ ಸಿಕ್ಕು ದೊಡ್ಡ ನ್ಯೂಸ್ ಆಗುತ್ತೆ. ಗಣ ಇಲ್ಲಿ ಟಿವಿಯೊಂದರ ಜರ್ನಲಿಸ್ಟ್. ಬ್ರೇಕಿಂಗ್ ನ್ಯೂಸ್ ಕೊಡುವ ಗಣ, ಎರಡು ಅಸ್ತಿಪಂಜರದ ಮುಂದೆ ನಿಂತು ಅದು ಕೊಲೆ ಅನ್ನುತ್ತಾನೆ, ಅಷ್ಟೇ ಅಲ್ಲ, ಅದು ಗಂಡು, ಹೆಣ್ಣು ಅಂತಾನೂ ಹೇಳ್ತಾನೆ. ಮೂರು ದಶಕಗಳ ಹಿಂದೆ ಆಗಿರುವ ಘಟನೆಯನ್ನು ಕೊಲೆ ಅಂತ ಹೇಳುವ ಅವನಿಗೆ ದೊಡ್ಡ ಟಾಸ್ಕ್ ಅದಾಗುತ್ತೆ. ಕೊಲೆಯಾದ ಟೀಚರ್ ಒಬ್ಬರ ಜೊತೆಗೆ ಲ್ಯಾಂಡ್ ಫೋನ್ ನಲ್ಲಿ ಮಾತಾಡೋಕೆ ಶುರುವಾಗ್ತಾನೆ! ಅದೊಂದು ಎನರ್ಜಿ ಪಾಸ್ ಆಗುವ ವ್ಯಕ್ತಿ ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಪಯಣಿಸುತ್ತಾನೆ. 1993 ರಲ್ಲಿ ಕೊಲೆಯಾದವರ ಜೊತೆ ಸಂಪರ್ಕ ಬೆಳೆಸುವ ಆತ, ಮುಂದೆ ಅವರನ್ನು ಕಾಪಾಡುವ ಹಂತಕ್ಕೂ ಹೋಗ್ತಾನೆ. ಆ ಕಾಲದದಲ್ಲಿ ನಡೆದ ಘಟನೆ ಫ್ಯೂಚರ್ ಗೂ ಹೇಗೆ ಟಚ್ ಆಗುತ್ತೆ. ಅದೆಲ್ಲಾ ಸಾಧ್ಯನಾ? ಅದೇ ಟೈಮ್ ಟ್ರಾವೆಲಿಂಗ್ ಸ್ಟೋರಿಯ ವಿಶೇಷ. ಕುತೂಹಲವಿದ್ದರೆ ಒಂದೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಪ್ರಜ್ವಲ್ ದೇವರಾಜ್ ಇಲ್ಲಿ ಗಮನಸೆಳೆಯುತ್ತಾರೆ. ಹೊಡೆದಾಟದಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಆ ಪಾತ್ರಕ್ಕೆ ಇನ್ನಷ್ಟು ಧಮ್ ಕಟ್ಟಬೇಕಿತ್ತು. ಯಶ ಅವರು ಚೆನ್ನಾಗಿ ಕಾಣುತ್ತಾರೆ ಅನ್ನೋದು ಬಿಟ್ಟರೆ, ಅಷ್ಟೇನು ಗಮನ ಸೆಳೆಯಲ್ಲ. ವೇದಿಕಾ ಸಿನಿಮಾದ ಹೈಲೆಟ್. ಉಳಿದಂತೆ ರವಿಕಾಳೆ ವಿಶೇಷ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ರಮೇಶ್ ಭಟ್ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಸಂಪತ್ ಇಲ್ಲಿ ನೆಗೆಟಿವ್ ಶೇಡ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಶಿವು ಕೆ.ಆರ್.ಪೇಟೆ ಪಾತ್ರ ಹಾಸ್ಯವಾಗಿದ್ದರೂ, ಅವರು ನಗಿಸೋಕೆ ಕಷ್ಟಪಟ್ಟಿದ್ದಾರೆ. ಉಳಿದಂತೆ ಬರುವ ಪಾತ್ರಗಳೆಲ್ಲವೂ ಸಿಕ್ಕ ಪಾತ್ರಕ್ಕೆ ತಕ್ಕಮಟ್ಟಿಗೆ ನ್ಯಾಯ ಸಲ್ಲಿಸಿವೆ.

ಇನ್ನು, ಜೈ ಆನಂದ್ ಛಾಯಾಗ್ರಾಹಣದಲ್ಲಿ ಗಣ ಅಂದವಾಗಿದ್ದಾನೆ. ಅನೂಪ್ ಸೀಳಿನ್ ಸಂಗೀತದ ಹಾಡು ಗುನುಗುವಂತೇನಿಲ್ಲ. ಹಿನ್ನೆಲೆ ಸಂಗೀತದ ಬಗ್ಗೆ ಹೇಳದಿರುವುದೇ ಒಳಿತು. ಇಂತಹ ಕಥೆಗೆ ಬೇಕಾದ ಬಿಜಿಎಂ ಕೊಡುವಲ್ಲಿ ಅವರು ಹಿಂದುಳಿದಿದ್ದಾರೆ. ಸಂಕಲನ ಚಿತ್ರದ ವೇಗವನ್ನು ಎತ್ತಿಹಿಡಿದಿದೆ ಎನ್ನಬಹುದು.

Categories
ಸಿನಿ ಸುದ್ದಿ

ರುದ್ರ ಗರುಡ ಪುರಾಣ ಸಕ್ಸಸ್ ನ ಖುಷಿ ಹಂಚಿಕೊಂಡ ರಿಷಿ

2025 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ, ರಿಷಿ ನಾಯಕನಾಗಿ ನಟಿಸಿರುವ `ರುದ್ರ ಗರುಡ ಪುರಾಣ’ ಚಿತ್ರ ಕಳೆದವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ಟೀಮ್ ಖುಷಿ ಹಂಚಿಕೊಂಡಿದೆ.

ನಮ್ಮ ಚಿತ್ರಕ್ಕೆ ಜನರು ತೋರುತ್ತಿರುವ ಒಲವು. ಈ ಚಿತ್ರದ ಗೆಲುವು ಎಂದು ಮಾತನಾಡಿದ ನಟ ರಿಷಿ, ಈ ಸಂದರ್ಭದಲ್ಲಿ ನಾನು ಮೊದಲು ಮಾಧ್ಯಮದವರನ್ನು ಅಭಿನಂದಿಸುತ್ತೇನೆ. ಅವರು ನಮ್ಮ ಚಿತ್ರದ ಬಗ್ಗೆ ಬರೆದ ಅದ್ಭುತ ವಿಮರ್ಶೆಗಳನ್ನು ನೋಡಿ ನಮ್ಮ ಚಿತ್ರಕ್ಕೆ ಹೆಚ್ಚು ಜನರು ಬರುತ್ತಿದ್ದಾರೆ.

ಚಿತ್ರವನ್ನು ನೋಡುತ್ತಿರುವ ಪ್ರತಿಯೊಬ್ಬರು ಚಿತ್ರದ ಬಗ್ಗೆ ಪಾಸಿಟಿವ್ ಮಾತುಗಳನ್ನಾಡುತ್ತಿರುವುದು ಮನಸ್ಸಿಗೆ ತುಂಬಾ ಖುಷಿಯಾಗಿದೆ. ಐದು ದಿನಗಳಲ್ಲಿ ಥಿಯೇಟರ್ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಿಗೆ ಆಗಿದೆ. ತೆಲುಗು ಡಬ್ಬಿಂಗ್ ರೈಟ್ಸ್ ಸಹ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ಇನ್ನೂ ಹೆಚ್ಚಿನ ಜನರು ಕುಟುಂಬ ಸಮೇತ ಬಂದು ನಮ್ಮ ಚಿತ್ರ ನೋಡಿ ಎಂದು ಮನವಿ ಮಾಡಿದರು.

ನಿರ್ಮಾಪಕ ಲೋಹಿತ್ ಹಾಗೂ ನಿರ್ದೇಶಕ ನಂದೀಶ್ ಸಹ ಚಿತ್ರತಂಡದ ಸದಸ್ಯರಿಗೆ, ಮಾಧ್ಯಮದವರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.

ನಟರಾದ ಶಿವರಾಜ ಕೆ ಆರ್ ಪೇಟೆ, ಗಿರೀಶ್ ಶಿವಣ್ಣ, ಪ್ರಭಾಕರ್, ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಕಲನಕಾರ ಮನು ಶೇಡ್ಗಾರ್, ಸಂಭಾಷಣೆಕಾರ ರಘು ನಿಡುವಳ್ಳಿ ಮುಂತಾದವರು “ರುದ್ರ ಗರುಡ ಪುರಾಣ” ದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಚಿತ್ರದ ತಂದೆ ಮಗನ ಬಾಂಧವ್ಯದ ಹಾಡೊಂದನ್ನು ಬಿಡುಗಡೆ ಮಾಡಲಾಯಿತು.

Categories
ಸಿನಿ ಸುದ್ದಿ

ಅಮೆರಿಕಾದಲ್ಲಿ ತಿಮ್ಮನ ಮೊಟ್ಟೆಗಳು! ಡಲ್ಲಾಸ್ ಕನ್ನಡಿಗರಿಗೆ ಸ್ಪೆಷಲ್ ಶೋ

ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರಿನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರ ನಿರ್ಮಾಣದಲ್ಲಿ ರಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ “ತಿಮ್ಮನ ಮೊಟ್ಟೆಗಳು” ಚಿತ್ರ ಅಮೇರಿಕಾದ ಡಲ್ಸ್ಲಾಸ್ ನಲ್ಲಿ ಅದ್ದೂರಿ ಪ್ರೀಮಿಯರ್ ಶೋನೊಂದಿಗೆ ಬಿಡುಗಡೆಯಾಗಿದೆ.


ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ಸುಂದರ ಕೌಟುಂಬಿಕ ಕಥಾನಕವನ್ನ ಹೊಂದಿರುವ ಚಿತ್ರ ಕೊಲ್ಕತ್ತಾ ಅಂತರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಹಾಗೂ ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಸ್ಪೆಷಲ್ ಜೂರಿ ಮೆನ್ಸನ್ ಅವಾರ್ಡ್ ಕೂಡ ಪಡೆದುಕೊಂಡಿತ್ತು.


ರಕ್ಷಿತ್ ತೀರ್ಥಹಳ್ಳಿ ಬರೆದ “ಕಾಡಿನ ನೆಂಟರು” ಕಥಾ ಸಂಕಲನದ ಆಯ್ದ ಒಂದು ಕಥೆ ತಿಮ್ಮನ ಮೊಟ್ಟೆಗಳು ಸಿನಿಮಾವಾಗಿದೆ. ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಬಿ ಎಸ್ ಕೆಂಪರಾಜು ಅವರ ಸಂಕಲನ ಹಾಗೂ ಹೇಮಂತ್ ಜೋಯಿಸ್ ಅವರ ಸುಮಧುರ ಸಂಗೀತ ಚಿತ್ರಕ್ಕಿದೆ. ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್, ಆದರ್ಶ್ ಅಯ್ಯಂಗಾರ್ ಮತ್ತು ಚಿನ್ಮಯಿ ಚಂದ್ರಶೇಖರ್ ಹಾಡಿರುವ ಹಾಡುಗಳು ಇಂಪಾಗಿದ್ದು ಕಥೆಗೆ ಪೂರಕವಾಗಿವೆ.

ಸುಚೇಂದ್ರ ಪ್ರಸಾದ್, ಕೇಶವ್ ಗುತ್ತಳಿಕೆ, ಆಶಿಕಾ ಸೋಮಶೇಕರ್, ಪ್ರಗತಿ ಪ್ರಭು, ಶೃಂಗೇರಿ ರಾಮಣ್ಣ, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ ಮುಂತಾದವರ ಅಭಿನಯ ಚಿತ್ರಕ್ಕಿದೆ.
ಡಲ್ಲಾಸ್ ನಲ್ಲಿರುವ ಕನ್ನಡಿಗರು ಲುಂಗಿ ತೊಟ್ಟು, ಹೆಗಲ ಮೇಲೊಂದು ಟವಲ್ ಇಟ್ಟು, ತಲೆಯ ಮೇಲೊಂದು ಮಂಡಾಳೆಯನ್ನ ಹಾಕಿಕೊಂಡು ಮಲೆನಾಡಿನ ಸಾಮಾನ್ಯ ವ್ಯಕ್ತಿಯಂತೆ ಚಿತ್ರ ವೀಕ್ಷಿಸಲು ಬಂದದ್ದು ಎಲ್ಲರ ಗಮನ ಸೆಳೆಯಿತು.

ಚಿತ್ರ ನೋಡಿದವರೆಲ್ಲಾ ಮಾನವೀಯ ಮೌಲ್ಯಗಳು, ಪ್ರಕೃತಿ ಮತ್ತು ಮನುಷ್ಯ ನಡುವಿನ ಸಂಬಂಧಗಳು, ದೈವಾರಾಧನೆ ಮತ್ತು ಮನುಷ್ಯನ ನಂಬಿಕೆಗಳ ಬಗ್ಗೆ ಚಿತ್ರದಲ್ಲಿ ಮೂಡಿಬಂದಿರುವ ಬಗೆಯ ಬಗ್ಗೆ ಭಾವನಾತ್ಮಕವಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.


ಚಿತ್ರದ ಕಥೆಯಲ್ಲಿ ಕಾಳಿಂಗ ಹಾವಿನ ಪಾತ್ರ ಬಹುಮುಖ್ಯವಾಗಿದ್ದು ಚಿತ್ರದ ಓಟಕ್ಕೆ ಸಹಕಾರಿಯಾಗಿದೆ. ಸದ್ಯದಲ್ಲೇ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾಗುವುದೆಂದು ಚಿತ್ರತಂಡ ಹೇಳಿಕೊಂಡಿದೆ.

Categories
ಸಿನಿ ಸುದ್ದಿ

ಗಣನ ಅಬ್ಬರಕ್ಕೆ ರೆಡಿ: ಥ್ರಿಲ್ಲರ್ ಕಥೆ ಹಿಂದೆ ಪ್ರಜ್ವಲ್

ಗಣ ಸಿನಿಮಾ ಎಂಬುದು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಆ ಎರಡು ಕಾಲಘಟ್ಟಕ್ಕೆ ಸೇತುವೆ ಆಗಿರುವುದು ಲ್ಯಾಂಡ್‌ಲೈನ್‌ ಫೋನ್.‌ ಒಮ್ಮೆ 1993ರ ಕಾಲಘಟ್ಟಕ್ಕೆ ಕಥೆ ಸಾಗಿದರೆ, ಇನ್ನೊಮ್ಮೆ ಪ್ರಸ್ತುತತೆಗೆ ಹೊರಳುತ್ತದೆ. ಹೀಗೆ ಟೈಮ್‌ ಟ್ರಾವೆಲಿಂಗ್‌ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಿನಿಮಾ ಈ ಗಣ. ಲೇಟ್‌ ಆದರೂ ಲೇಟೆಸ್ಟ್‌ ಆಗಿಯೇ ಈ ಚಿತ್ರ ತೆರೆಗೆ ಬರುತ್ತಿದೆ. ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರೆ, ಯಶಾ ಶಿವಕುಮಾರ್‌, ವೇದಿಕಾ ನಾಯಕಿಯರಾಗಿ ನಟಿಸಿದ್ದಾರೆ. ಇದೀಗ ಇದೇ ಚಿತ್ರ ಜನವರಿ 31ರಂದು ಚಿತ್ರಮಂದಿರಗಳಿಗೆ ಗ್ರ್ಯಾಂಡ್‌ ಆಗಿ ಲಗ್ಗೆ ಇಡುತ್ತಿದೆ.

ಹೈದರಾಬಾದ್ ಮೂಲದ ಪಾರ್ಥು ಎಂಬುವವರು ತಮ್ಮ ಚೆರಿ ಕ್ರಿಯೇಷನ್ಸ್ ಬ್ಯಾನರ್‌ ಮೂಲಕ ಗಣ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ. ಇವರಷ್ಟೇ ಅಲ್ಲ, ಗಣ ಸಿನಿಮಾದ ನಿರ್ದೇಶಕರೂ ಕೂಡ ತೆಲುಗು ಮೂಲದವರೇ. ಇತ್ತೀಚೆಗಷ್ಟೇ ಟಾಲಿವುಡ್‌ನಲ್ಲಿ ಹಿಟ್‌ ಆದ ಪುಷ್ಪ 2 ಸಿನಿಮಾ ನಿರ್ದೇಶಕ ಸುಕುಮಾರ್‌ ಅವರ ಜತೆಗೆ ಕೆಲಸ ಮಾಡಿದ ಅನುಭವ ಇರುವ ಹರಿಪ್ರಸಾದ್‌ ಜಕ್ಕ, ಗಣ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದಾರೆ.

ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಪಾರ್ಥು, “ನಾನು ತೆಲುಗು ಮೂಲದವನು, ಗಣ ನನ್ನ ಮೊದಲ ಸಿನಿಮಾ. ಈ ಸಿನಿಮಾ ಕೈ ಹಿಡಿದರೆ, ಇನ್ನೂ ಒಂದಷ್ಟು ಕನ್ನಡ ಸಿನಿಮಾಗಳನ್ನು ಮಾಡುವ ಬಯಕೆ ಇದೆ. ಇದೇ ಜನವರಿ 31ರ ಶುಕ್ರವಾರ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ರಿಲೀಸ್‌ ಆಗುತ್ತಿದೆ. ಕನ್ನಡ ನಾಡಿನ ಪ್ರೇಕ್ಷಕರು ನಮ್ಮ ಸಿನಿಮಾವನ್ನು ಮೆಚ್ಚಿಕೊಂಡು ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ” ಎನ್ನುತ್ತಾರೆ ನಿರ್ಮಾಪಕ ಪಾರ್ಥು.

ಟೈಮ್‌ ಟ್ರಾವೆಲಿಂಗ್‌ ಜಾನರ್‌ನ ಸಿನಿಮಾ
ಚಿತ್ರದ ಬಗ್ಗೆ ಮಾತನಾಡುವ ಅವರು, “ಇದೊಂದು ಪಕ್ಕ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಒಳ್ಳೆಯ ಮನರಂಜನೆಯ ಜತೆಗೆ ಪ್ರೇಕ್ಷಕ ಬಯಸುವ ಎಲ್ಲ ಅಂಶಗಳೂ ಗಣ ಸಿನಿಮಾದಲ್ಲಿದೆ. ಕರ್ಮಷಿಯಲ್‌ ಕೋನದಲ್ಲಿ ನಿರ್ಮಾಣ ಮಾಡಿದರೂ, ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ತಾಕತ್ತು ನಮ್ಮ ಈ ಚಿತ್ರಕ್ಕಿದೆ. ಈಗಾಗಲೇ ಟ್ರೇಲರ್‌ನಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ. ಟೈಮ್‌ ಟ್ರಾವೆಲಿಂಗ್‌ ಜಾನರ್‌ನ ಈ ಸಿನಿಮಾ, ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ. ಗಟ್ಟಿ ಕಂಟೆಂಟ್‌ ಜತೆಗೆ ಅಮ್ಮ ಮಗನ ಬಾಂಧವ್ಯವೂ ಈ ಸಿನಿಮಾದ ಹೈಲೈಟ್” ಎಂಬುದು ಪಾರ್ಥು ಅವರ ಮಾತು.

200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಗಣ
ಮುಂದುವರಿದು ಮಾಹಿತಿ ನೀಡುವ ಅವರು, “ಸರಿ ಸುಮಾರು 75 ದಿನಗಳ ಕಾಲ ಈ ಸಿನಿಮಾ ಶೂಟಿಂಗ್ ಮಾಡಿದ್ದೇವೆ.‌ ಎಲ್ಲಿಯೂ ಕೊರತೆ ಬಾರದೆ, ರಿಚ್ ಆಗಿಯೇ ಸಿನಿಮಾ ಮಾಡಿದ್ದೇವೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಬಹುತೇಕ ಶೂಟಿಂಗ್‌ ನಡೆದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳು ಸರಿಗಮ ಕನ್ನಡ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿವೆ. ಟ್ರೇಲರ್‌ ಸಹ ಎಲ್ಲರಿಗೂ ಇಷ್ಟವಾಗಿದೆ. ಇದೀಗ ಜನವರಿ 31ರ ಶುಕ್ರವಾರ ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಕಮರ್ಷಿಯಲ್‌ ಆಗಿ ಟೈಮ್‌ ಟ್ರಾವೆಲಿಂಗ್‌ ಎಳೆಯ ಥ್ರಿಲ್ಲಿಂಗ್‌ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಬಹುದು” ಎನ್ನುತ್ತಾರೆ ಪಾರ್ಥು.

ಪಾತ್ರವರ್ಗ ಮತ್ತು ತಾಂತ್ರಿಕ ಬಳಗ ಹೀಗಿದೆ..
ಅಂದಹಾಗೆ ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಜೈ ಆನಂದ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪಾತ್ರವರ್ಗದಲ್ಲಿ ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಅನ್ ಲಾಕ್ ರಾಘವ ಟ್ರೇಲರ್ ಮೋಡಿ

ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ “ಅನ್ ಲಾಕ್ ರಾಘವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್,‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿ ಕುಶಾಲ್, ಭಾ.ಮ.ಗಿರೀಶ್, ನಟ ಪ್ರಥಮ್, ಜಿಮ್ ರವಿ ಸೇರಿದಂತೆ ಅನೇಕ ಗಣ್ಯರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಮ್ಮ ಚಿತ್ರದ ಶೀರ್ಷಿಕೆಯನ್ನು ಕಳೆದ ಕೆಲವು ದಿನಗಳ ಹಿಂದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರೆ ಬಿಡುಗಡೆ ಮಾಡಿದ್ದರು. ಇಂದು ನಮ್ಮ ಚಿತ್ರದ ಟ್ರೇಲರ್ ಅವರಿಂದಲೇ ಬಿಡುಗಡೆಯಾಗಿದ್ದು ಬಹಳ ಸಂತೋಷವಾಗಿದೆ. ಇಂದು ಬೆಳಗಿನ ಜಾವ ಈ ಟ್ರೇಲರ್ ಸಿದ್ದವಾಯಿತು. ಅಂದುಕೊಂಡ ಸಮಯಕ್ಕೆ ಟ್ರೇಲರ್ ಬಿಡುಗಡೆಯಾಗಲು ಸಹಕಾರ ನೀಡಿದ ನನ್ನ ತಂಡಕ್ಕೆ ಧನ್ಯವಾದ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್(ಲವ್ ಮಾಕ್ಟೇಲ್) ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ಕಥೆ, ಚಿತ್ರಕಥೆಯನ್ನು “ರಾಮ ರಾಮ ರೆ” ಖ್ಯಾತಿಯ ಸತ್ಯಪ್ರಕಾಶ್ ಬರೆದಿದ್ದಾರೆ. ಲವಿತ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ “ಅನ್ ಲಾಕ್ ರಾಘವ” ಚಿತ್ರ ಫೆಬ್ರವರಿ 7 ರಂದು ತೆರೆಗೆ ಬರಲಿದೆ ಎಂದು ನಿರ್ದೇಶಕ ದೀಪಕ್ ಮಧುವನಹಳ್ಳಿ ತಿಳಿಸಿದರು.

ಚಿತ್ರದ ಆರಂಭದಿಂದಲೂ ನಮಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಅಶ್ವಿನಿ ಮೇಡಂ ಅವರಿಗೆ ಅನಂತ ಧನ್ಯವಾದ ಎಂದು ಮತನಾಡಿದ ನಾಯಕ ಮಿಲಿಂದ್, “ಅನ್ ಲಾಕ್ ರಾಘವ” ಚಿತ್ರ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳಿರುವ ಚಿತ್ರ. ಸಾಧುಕೋಕಿಲ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ಮಾಡಿರುವ ಪಾತ್ರ ಈವರೆಗೂ ಯಾವ ಚಿತ್ರದಲ್ಲೂ ಮಾಡಿಲ್ಲ. ನಮ್ಮ ಚಿತ್ರ ಇದೇ ಫೆಬ್ರವರಿ 7ರಂದು ತೆರೆಗೆ ಬರಲಿದೆ. ಕುಟುಂಬ ಸಮೇತ ಬಂದು ಚಿತ್ರ ನೋಡಿ ಎಂದರು.

“ಅನ್ ಲಾಕ್ ರಾಘವ” ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಜಾನಕಿ ನನ್ನ ಪಾತ್ರದ ಹೆಸರು ಎಂದರು ನಾಯಕಿ ರೆಚೆಲ್ ಡೇವಿಡ್.

“ಉದ್ಘರ್ಷ” ಚಿತ್ರ ಸೇರಿದಂತೆ ಈ ಚಿತ್ರದ ತನಕ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇತ್ತೀಚೆಗೆ ಟೆಕ್ನಿಕಲ್ ಶೋ ನಲ್ಲಿ ಚಿತ್ರವನ್ನು ನೋಡಿದಾಗ ತುಂಬಾ ಖುಷಿಯಾಯಿತು ಎಂದರು ನಿರ್ಮಾಪಕ ಮಂಜುನಾಥ್‌ ದಾಸೇಗೌಡ.

ನನಗೆ ಹದಿನೇಳು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. ಆದರೆ ನಿರ್ಮಾಪಕನಾಗಿ ಇದು ಮೊದಲ ಚಿತ್ರ. ನಿರ್ದೇಶಕ ದೀಪಕ್ ಅವರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಆದರೆ ಇತ್ತೀಚೆಗೆ ಚಿತ್ರವನ್ನು ತೆರೆಯ ಮೇಲೆ ನೋಡಿದಾಗ ಇನ್ನೂ ಇಷ್ಟವಾಯಿತು ಎಂದು ಚಿತ್ರದ ಮತ್ತೊಬ್ಬ ನಿರ್ಮಾಪಕರಾದ ಗಿರೀಶ್ ಕುಮಾರ್ ತಿಳಿಸಿದರು. ಗೀತರಚನೆಕಾರ ಹೃದಯಶಿವ ಹಾಡಿನ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಗಜರಾಮನ ಖದರ್ ಹೇಗಿದೆ ಗೊತ್ತಾ? ಟ್ರೇಲರ್ ಸಖತ್ ಟ್ರೆಂಡ್ ಗುರೂ

ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ರಾಜವರ್ಧನ್ ಅಭಿನಯದ ಬಹು ನಿರೀಕ್ಷಿತ ಗಜರಾಮ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 2 ನಿಮಿಷ 46 ಸೆಕೆಂಡ್ ಇರುವ ಟ್ರೇಲರ್ ನಲ್ಲಿ ಆಕ್ಷನ್, ಎಮೋಷನ್, ಸೆಂಟಿಮೆಂಟ್, ಲವ್ ಅಂಶಗಳೇ ಹೈಲೆಟ್ಸ್.. ರಾಜವರ್ಧನ್ ಕುಸ್ತಿಕಣದಲ್ಲಿ ಪೈಲ್ವಾನ್ ಆಗಿ ತೊಡೆ ತಟ್ಟಿದ್ದು, ಕಬೀರ್ ಸಿಂಗ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್‌ ಖದರ್ ತೋರಿಸಿದ್ದು, ತಪಸ್ವಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಮಾಸ್ ಕ್ವೀನ್ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಿರುವ ಸಾರಾಯಿ ಶಾಂತಮ್ಮ ಹಾಡು ಈಗಾಗಲೇ ಹಿಟ್ ಲೀಸ್ಟ್ ಸೇರಿದೆ. ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ , ಚೇತನ್ ಕುಮಾರ್ ಅವರ ಸಾಹಿತ್ಯವಿದೆ. ಮೆಲೋಡಿ ಮಾಂತ್ರಿಕ ಮನೋಮೂರ್ತಿ ಸಂಗೀತ ಚಿತ್ರದ ತೂಕ ಹೆಚ್ಚಿಸಿದೆ.

ಒಂದಷ್ಟು ನಿರ್ದೇಶಕರ ಜೊತೆ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಸುನಿಲ್ ಕುಮಾರ್‌ ಅವರೀಗ ‘ಗಜರಾಮ’ ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

‘ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ‘ಗಜರಾಮ’ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಟ್ರೇಲರ್ ಮೂಲಕ ಆಮಂತ್ರಣ ಕೊಟ್ಟಿರುವ ಚಿತ್ರತಂಡ ಫೆಬ್ರವರಿ 7ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.

Categories
ಸಿನಿ ಸುದ್ದಿ

ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರದಾನ: ಶಿವಣ್ಣ ಬದುಕಿನ ಯುದ್ಧ ಗೆದ್ದಿದ್ದಾರೆ


ಬಾಕಿ ಉಳಿದಿರುವ ಐದೂ ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಇದೇ ವರ್ಷ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಭರವಸೆ ನೀಡಿದರು.

ಶ್ರೀ ರಾಘವೇಂದ್ರ ಚಿತ್ರವಾಣಿಯ 49ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದ ಸಾಧಕರಿಗೆ 24ನೇ ವರ್ಷದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.‌

“ಸೊಸೆ ತಂದ ಸೌಭಾಗ್ಯ” ಸಿನಿಮಾದಿಂದ ಪಿಆರ್ ಒ ಕ್ಷೇತ್ರಕ್ಕೆ ಆಗಮಿಸಿದ ರಾಘವೇಂದ್ರ ಚಿತ್ರವಾಣಿ ಈಗ ಕನ್ನಡ ಚಿತ್ರರಂಗದ ಸೌಭಾಗ್ಯ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ಈ ವಾರ ಸಿನಿಮಾ ಜಗತ್ತಿಗೆ ಸಂಭ್ರಮದ ವಾರ. 2019 ನೇ ಸಾಲಿನ ರಾಜ್ಯ ಸಿನಿಮಾ ಪ್ರಶಸ್ತಿಗಳು ಹಾಗೂ ನೆನ್ನೆ ಅನಂತನಾಗ್ ಅವರೂ ಸೇರಿ ಸಿನಿಮಾ ಕ್ಷೇತ್ರದ ದಿಗ್ಗಜರಿಗೆ ಪದ್ಮ‌ ಪ್ರಶಸ್ತಿಗಳು ಲಭಿಸಿವೆ. ಇದು ಸಂಭ್ರಮದ ವಾರ ಎಂದರು.

ಐದು ವರ್ಷಗಳಿಂದ ರಾಜ್ಯ ಸಿನಿಮಾ ಪ್ರಶಸ್ತಿಗಳು ಸ್ಥಗಿತಗೊಂಡಿದ್ದವು. ನಾವು ಈಗಗಲೇ 2019 ರ ಪ್ರಶಸ್ತಿ ಘೋಷಣೆಯಾಗಿದ್ದು ಬಾಕಿ ಇರುವ ಐದೂ ವರ್ಷಗಳ ಪ್ರಶಸ್ತಿಯನ್ನೂ ಇದೇ ವರ್ಷ ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದರು.

ಸಿನಿಮಾ PRO ಗಳಿಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ದೇಶಕರನ್ನಾಗಿಸಲು ಮತ್ತು ಸರ್ಕಾರದ ಸಿನಿಮಾ ಪ್ರಶಸ್ತಿಗೆ ಪರಿಗಣಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.

ನಟಿ ಜಯಂತಿ ಅವರ ಹೆಸರಿನ ಪ್ರಶಸ್ತಿ ಸ್ಥಾಪಿಸಲು ಈಗಾಗಲೇ ಸರ್ಕಾರಿ ಆದೇಶ ಆಗಿದೆ ಎಂದು ತಿಳಿಸಿದರು.

ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಹಿರಿಯ ಪತ್ರಕರ್ತೆ ವಿಜಯಮ್ಮ, ಹಿರಿಯ ಪತ್ರಕರ್ತರಾದ ಸದಾಶಿವ ಶೆಣೈ, ನಿರ್ದೇಶಕರಾದ ಇಂದ್ರಜಿತ್ ಲಂಕೇಶ್, ನಟಿ ರಾಗಿಣಿ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಉಮೇಶ್ ಬಣಕಾರ್, ಸಂಜಯ್ ಗೌಡ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಬೇಗೂರು ಕಾಲೋನಿಯಲ್ಲಿ ಜೈ ಭೀಮ್ ಹಾಡು! ಜನವರಿ 31ಕ್ಕೆ ಸಾಂಗ್ ರಿಲೀಸ್

ಶ್ರೀಮಾ ಸಿನಿಮಾಸ್ ಬ್ದಯಾನರ ನಲ್ಲಿ ಎಂ ಶ್ರೀನಿವಾಸ್ ಬಾಬು ಅವರು ನಿರ್ಮಿಸಿರುವ, ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಹಾಗೂ “ಬಿಗ್ ಬಾಸ್” ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ “ಬೇಗೂರು ಕಾಲೋನಿ” ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರಪ್ರಸಾದ್ ಬರೆದಿರುವ “ಜೈ ಭೀಮ್” ಹಾಡು ಗಣರಾಜ್ಯೋತ್ಸವದ ಸಂದರ್ಭದಲ್ಲಿ‌ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಅಭಿನಂದನ್ ಕಶ್ಯಪ್ ಸಂಗೀತ ನೀಡಿರುವ ಈ ಹಾಡನ್ನು ಹೆಸರಾಂತ ಗಾಯಕ ಶಂಕರ್ ಮಹಾದೇವನ್ ಹಾಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಬೇಗೂರ್ ಕಾಲೋನಿ” ಒಂದು ಹೋರಾಟದ ಕಥೆ. ಕಾಲೋನಿಲ್ಲಿರುವ ಮಧ್ಯಮವರ್ಗದ ಜನರ ಕಥೆಯೂ ಹೌದು. ಇಲ್ಲಿ ಹೋರಾಟ ನಡೆಯುವುದು ಆಟದ ಮೈದಾನಕ್ಕಾಗಿ. ಮೈದಾನಗಳೆಲ್ಲಾ ಮನೆಗಳಾಗುತ್ತಿದೆ. ಮಕ್ಕಳಿಗೆ ಆಡಲು ಜಾಗವಿಲ್ಲದ ಹಾಗೆ ಆಗಿದೆ.‌ ಈ ಅಂಶವನ್ನು ಪ್ರಮುಖವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಕಾಲೋನಿಯಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲಾ ಜನಾಂಗದವರು ವಾಸಿಸುತ್ತಿರುತ್ತಾರೆ.

ಈ ಕಾಲೋನಿ ಸಾಮರಸ್ಯದ ಸಂಕೇತ ಎಂದರೆ ತಪ್ಪಾಗಲಾರದು. ಇಂತಹ‌ ವಿಭಿನ್ನ ಕಥೆಯುಳ್ಳ ಸಿನಿಮಾದಿಂದ ಸಾಮರಸ್ಯ ಸಾರುವ ಹಾಡೊಂದನ್ನು ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದೇವೆ. ವಿ.ನಾಗೇಂದ್ರ ಪ್ರಸಾದ್ ಅವರು ಅದ್ಭುತ ಸಾಹಿತ್ಯ, ಅಭಿನಂದನ್ ಕಶ್ಯಪ್ ಸಂಗೀತ ನಿರ್ದೇಶನ ಹಾಗೂ ಶಂಕರ್ ಮಹಾದೇವನ್ ಅವರ ಅಮೋಘ ಗಾಯನದಲ್ಲಿ ಈ ಹಾಡು ಮೂಡಿಬಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟ್ರೇಲರ್ ಜನರ ಮನಸ್ಸಿಗೆ ಹತ್ತಿರವಾಗಿದೆ. ನಮ್ಮ ಚಿತ್ರ ಇದೇ‌ ಜನವರಿ 31 ರಂದು ಬಿಡುಗಡೆಯಾಗಲಿದೆ.‌ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು.

ಇಂದು ಬಿಡುಗಡೆಯಾಗಿರುವ “ಜೈ ಭೀಮ್” ಹಾಡು ಬಹಳ ಚೆನ್ನಾಗಿದೆ ಎಂದು ಮಾತನಾಡಿದ ನಾಯಕ ರಾಜೀವ್ ಹನು, ನಿರ್ದೇಶಕರು ಹೇಳಿದ ಹಾಗೆ ಇದು ಹೋರಾಟದ ಕಥೆ. ಈ ಹೋರಾಟ ಬೇರೆ ಯಾವುದಕ್ಕೂ ಅಲ್ಲ. ಆಟದ ಮೈದಾನಕ್ಕಾಗಿ. ಮಕ್ಕಳಿಗೆ ಪಾಠದಷ್ಟೇ ಆಟ ಕೂಡ ಮುಖ್ಯ. ಆದರೆ ಮಕ್ಕಳು ಆಟವಾಡಲು ಈಗ ಮೈದಾನಗಳು ಹೆಚ್ಚು ಇಲ್ಲ. ಇರುವ ಮೈದಾನಗಳನ್ನಾದರೂ ಉಳಸಿಕೊಳ್ಳುವ ಪ್ರಯತ್ನ ಆಗಬೇಕು. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರಾಘವ. ನಿರ್ದೇಶಕರು ಸಹ ಶಿವ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕ ಶ್ರೀನಿವಾಸ ಬಾಬು ಅವರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ . ಚಿತ್ರತಂಡದ ಸಹಕಾರದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು.

ಹಾಡಿನ ಬಗ್ಗೆ ಅಭಿನಂದನ್ ಕಶ್ಯಪ್ ಮಾಹಿತಿ ನೀಡಿದರು. ಸಂಕಲಕಾರ ಪ್ರಮೋದ್ ತಲ್ವಾರ್, ಛಾಯಾಗ್ರಾಹಕ ಕಾರ್ತಿಕ್ ಎಸ್ ಹಾಗೂನಟಿಯರಾದ ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಮುಂತಾದವರು “ಬೇಗೂರ್ ಕಾಲೋನಿ” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ತಾಯವ್ವನಿಗೆ ಸುದೀಪ್ ಸಾಥ್: ಹಾಡು ರಿಲೀಸ್ ಮಾಡಿ ಹಾರೈಸಿದ ಕಿಚ್ಚ

ʼತಾಯವ್ವʼ ಹೀಗೊಂದು ಹೆಸರಿನ ಚಿತ್ರ ಸುಮಾರು ಎರಡೂವರೆ ದಶಕಗಳ ಹಿಂದೆ ಕನ್ನಡದಲ್ಲಿ ತೆರೆಗೆ ಬಂದಿದ್ದು, ಹಲವರಿಗೆ ಗೊತ್ತಿರಬಹುದು. ಕನ್ನಡ ಚಿತ್ರರಂಗದ ನಟ ʼಕಿಚ್ಚʼ ಸುದೀಪ್‌ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಚಿತ್ರವದು. ಆಗ ತೆರೆಗೆ ಬಂದಿದ್ದ ʼತಾಯವ್ವʼ ಚಿತ್ರದಲ್ಲಿ ಸುದೀಪ್‌ ಅವರೊಂದಿಗೆ ಹಿರಿಯ ನಟಿ ಉಮಾಶ್ರೀ ʼತಾಯವ್ವʼನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ʼತಾಯವ್ವʼ ಎಂಬ ಹೆಸರಿನಲ್ಲಿ, ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಇನ್ನು ಈ ಬಾರಿ ʼತಾಯವ್ವʼನಾಗಿ ಈ ಚಿತ್ರದಲ್ಲಿ ನವ ಪ್ರತಿಭೆ ಗೀತಪ್ರಿಯ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಸದ್ದಿಲ್ಲದೆ ʼತಾಯವ್ವʼ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ʼತಾಯವ್ವʼ ಚಿತ್ರದ ಹಾಡುಗಳು ಬಿಡುಗಡೆಯಾಯಿತು. ಅನಂತ ಆರ್ಯನ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ʼತಾಯವ್ವʼ ಚಿತ್ರದ ಗೀತೆಗಳಿಗೆ ಸ್ವತಃ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ʼತಾಯವ್ವʼನಾಗಿ ಅಭಿನಯಿಸಿರುವ, ಗೀತಪ್ರಿಯ ಅವರೇ ಧ್ವನಿಯಾಗಿದ್ದಾರೆ. ಅಪ್ಪಟ ಕನ್ನಡದ ಗ್ರಾಮೀಣ ಸೊಗಡಿನ ಜನಪದ ಗೀತೆಗಳ ಗುಚ್ಚವನ್ನು ʼತಾಯವ್ವʼ ಚಿತ್ರದಲ್ಲಿ ಹೊಸರೂಪದಲ್ಲಿ ತೆರೆಮೇಲೆ ತರಲಾಗುತ್ತಿರುವುದು ಮತ್ತೊಂದು ವಿಶೇಷ. ಬೆಂಗಳೂರಿನ ʼಜಿ. ಟಿ ವರ್ಲ್ಡ್‌ ಮಾಲ್‌ʼ ನಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ʼಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್‌ ಮುಖ್ಯ ಅತಿಥಿಯಾಗಿ ಆಗಮಿಸಿ, ʼತಾಯವ್ವʼ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ನಟ ಕಿಚ್ಚ ಸುದೀಪ್‌, ʼನಾನು ಆಗಷ್ಟೇ ಕಾಲೇಜು ಮುಗಿಸುತ್ತಿರುವ ಸಂದರ್ಭದಲ್ಲಿ ʼತಾಯವ್ವʼ ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಮೊದಲ ಬಾರಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ಈ ಸಿನೆಮಾ ನನಗೆ ಸಾಕಷ್ಟು ವಿಷಯಗಳನ್ನು ಹೇಳಿಕೊಟ್ಟಿತ್ತು. ನನ್ನ ವೃತ್ತಿ ಜೀವನದಲ್ಲಿ ಈ ಸಿನೆಮಾ ಇಂದಿಗೂ ಒಂದು ಸುಮಧುರ ನೆನಪಾಗಿ ಉಳಿದಿದೆ. ಈಗ ಅದೇ ʼತಾಯವ್ವʼ ಹೆಸರಿನಲ್ಲಿ ಅಂಥದ್ದೇ ಮತ್ತೊಂದು ಸಿನೆಮಾ ತೆರೆಗೆ ಬರುತ್ತಿರುವುದು ಒಳ್ಳೆಯ ವಿಷಯ. ʼತಾಯವ್ವʼ ಎಂಬ ಹೆಸರಿನಲ್ಲೇ ಒಂದು ಭಾವನಾತ್ಮಕ ಸೆಳೆತವಿದೆ. ಈ ಸಿನೆಮಾದಲ್ಲೂ ಅದೇ ಅಂಶಗಳಿರಬಹುದು ಎಂಬ ನಿರೀಕ್ಷೆಯಿದೆ. ಚಿತ್ರಕ್ಕೆ ಒಳ್ಳೆಯದಾಗಲಿʼ ಎಂದು ಶುಭ ಹಾರೈಸಿದರು.

ʼತಾಯವ್ವʼ ಚಿತ್ರದ ಮೂಲಕ ಮೊದಲ ಬಾರಿಗೆ ನವ ಪ್ರತಿಭೆ ಗೀತಪ್ರಿಯ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ʼಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನೆಮಾ. ಹೆಣ್ಣುಮಕ್ಕಳನ್ನು ಉಳಿಸಿ, ಬೆಳೆಸಿ ಎಂಬ ಸಂದೇಶವನ್ನು ಇಟ್ಟುಕೊಂಡು ಈ ಸಿನೆಮಾ ಮಾಡಲಾಗಿದೆ. ಇದರಲ್ಲಿ ನಾನು ʼತಾಯವ್ವʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನೆಮಾದಲ್ಲಿ ಒಂದು ಸಂದೇಶವಿದೆ. ಎಲ್ಲರಿಗೂ ತಲುಪುವಂಥ ವಿಷಯ ಈ ಸಿನೆಮಾದಲ್ಲಿದೆ. ಕಿಚ್ಚ ಸುದೀಪ್‌ ಅವರ ಮೊದಲ ಸಿನೆಮಾದ ಹೆಸರನ್ನೇ ನಮ್ಮ ಸಿನೆಮಾಕ್ಕೆ ಇಟ್ಟುಕೊಂಡು ತೆರೆಗೆ ತರುತ್ತಿದ್ದೇವೆ. ನಮ್ಮ ಸಿನೆಮಾಕ್ಕೆ ಬೆಂಬಲವಾಗಿ ಸುದೀಪ್‌ ನಿಂತಿರುವುದು ನಮಗೆ ದೊಡ್ಡ ಬಲ ತಂದಂತಾಗಿದೆ. ಈಗಾಗಲೇ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಆದಷ್ಟು ಬೇಗ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆʼ ಎಂದರು.

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್‌, ಮೊದಲ ಬಾರಿಗೆ ʼಭಾ. ಮ. ಹರೀಶ್‌ ಆಡಿಯೋʼ ಹೆಸರಿನಲ್ಲಿ ಹೊಸ ಆಡಿಯೋ ಕಂಪೆನಿಯನ್ನು ಪ್ರಾರಂಭಿಸಿದ್ದು, ಈ ಕಂಪೆನಿಯ ಅಡಿಯಲ್ಲಿ ʼತಾಯವ್ವʼ ಸಿನೆಮಾದ ಆಡಿಯೋ ಬಿಡುಗಡೆಯಾಗಿದೆ.
ಕಾರ್ಯಕ್ರಮದಲ್ಲಿ ನಿರ್ಮಾಪಕಿ ಪದ್ಮಾವತಿ ಚಂದ್ರಶೇಖರ್‌, ನಿರ್ಮಾಪಕರಾದ ಭಾ. ಮ. ಹರೀಶ್‌, ಕರ್ನಾಟಕ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಐಪ್ಲೆಕ್ಸ್‌ ಮುಖ್ಯಸ್ಥ ಗಿರೀಶ್‌, ಶಿಕ್ಷಣ ತಜ್ಞ ನಾಗಪಾಲ್‌ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Categories
ಸಿನಿ ಸುದ್ದಿ

ನಿಧಿಯ ಬೆನ್ನೇರಿ ಹೊರಟವರು

ಚಿತ್ರ ವಿಮರ್ಶೆ: ರೇಟಿಂಗ್ 3.5/5

ನಿರ್ಮಾಣ : ಎನ್ ಎಂ ಕಾಂತರಾಜ್
ನಿರ್ದೇಶನ : ಚಂದ್ರಮೋಹನ್
ತಾರಾಗಣ: ಚಿಕ್ಕಣ್ಣ, ಗುರುನಂದನ್, ಅನೀಶ್ ತೇಜೇಶ್ವರ್, ರಂಗಾಯಣ ರಘು, ಅರ್ಚನ ಕೊಟ್ಟಿಗೆ, ಶರಣ್ಯ ಶೆಟ್ಟಿ ಇತರರು
.

ಕಾಡು, ನಿಧಿ, ಶೋಧ ಮತ್ತು ಐವರು. ಇದು ಸಿನಿಮಾದ ಹೈಲೆಟ್. ಇದೊಂದು ಶೋಧಕ್ಕೆ ಹೊರಡುವವರ ಕಥೆ. ಅಲ್ಲಿ ಆತಂಕವಿದೆ. ನಗೆ ಇದೆ. ಅಚ್ಚರಿ ಇದೆ. ಆಗಾಗ ಚಕಿತಗೊಳಿಸುವ ಅಂಶಗಳೂ ಇವೆ. ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ ನೋಡಿಸಿಕೊಂಡು ಹೋಗುವ ಸಿನಿಮಾ ಇದು ಎಂದೆನಿಸದಿರದು.

ಇಲ್ಲಿ ರಂಗಾಯಣ ರಘು, ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಮತ್ತು ಅರ್ಚನಾ ಕೊಟ್ಟಿಗೆ ಕಾಂಬಿನೇಷನ್ ಸಖತ್ ವರ್ಕೌಟ್ ಆಗಿದೆ. ಈ ಐವರು ನಿಧಿಯ ಶೋಧನೆಗೆ ಕಾಡೊಳಗೆ ಎಂಟ್ರಿ ಕೊಡ್ತಾರೆ. ಯಾವ ನಿಧಿ, ಇಧಿ ಸಿಗುತ್ತಾ, ಅಲ್ಲಿ ಏನಾಗುತ್ತೆ ಎಂಬ ಕುತೂಹಲಕ್ಕೆ ಒಂದೊಮ್ಮೆ ಸಿನಿಮಾ ನೋಡಬಹುದು.

ಈ ಐವರಲ್ಲೊಬ್ಬ ಕಿವಿ ಕೇಳದ ಹುಡುಗ. ಅವನಿಗೆ ಕಾಡೊಳಗೆ ಯಾಕೆ ಹೋಗುತ್ತಿದ್ದೇವೆ ಅನ್ನುವ ಪರಿವಿಲ್ಲ. ಹಾಗಾಗಿಯೇ ಕೆಲ ಸಂದರ್ಭ ಅಪಾರ್ಥ ವಾಗಿ ಬರುವ ಮಾತುಗಳು ನಗೆ ಎಬ್ಬಿಸುತ್ತವೆ.

ಕಾಡು ಅಂದಾಕ್ಷಣ ಪ್ರಾಣಿ ಭಯ ಭೀತಿ ಕಾಮನ್. ಆದರೆ ಇಲ್ಲಿ ಯಾವ ಘಟನೆ ಕೂಡ ನಡೆಯಲ್ಲ. ಆದರೂ ಸನ್ನಿವೇಶ ಮಾತುಗಳು ನೋಡುಗರಲ್ಲಿ ನಗೆ ಹುಟ್ಟಿಸುತ್ತವೆ. ಮಾತುಕತೆಯಲ್ಲೇ ಫಸ್ಟ್ ಹಾಫ್ ಮುಗಿಯುತ್ತೆ. ಅದು ಹೋಗೋದೇ ಗೊತ್ತಾಗಲ್ಲ ಅಷ್ಟೊಂದು ನೀಟ್ ಆಗಿ ನೋಡುಗರನ್ನು ರಂಜಿಸುತ್ತಾ ಕರೆದುಕೊಂಡು ಹೋಗುವಲ್ಲಿ ನಿರ್ದೇಶಕರು ಇಷ್ಟವಾಗುತ್ತಾರೆ.

ಹೇಗೋ ಅವರು ಹೋಗುವ ಸ್ಥಳ ಬರುತ್ತೆ. ಅಲ್ಲೊಂದು ಟ್ವಿಸ್ಟ್ ಕೂಡ ಇದೆ. ಅಂತಹ ಕಾಡೊಳಗೆ ಒಬ್ಬಾತನ ದರ್ಶನ. ಇವರೆಲ್ಲರಿಗೂ ಅಲ್ಲೊಂದು ಭೀತಿ ಶುರುವಾಗುತ್ತೆ. ಮುಂದೇನಾಗಿತ್ತೆ ಅನ್ನೋದೇ ಮಜ.

ಅಲ್ಲೊಂದು ವಿಪರೀತ ಭಯಾನಕ ಎನಿಸೋ ದುಷ್ಟಶಕ್ತಿ. ಆದರೆ ಅವರಿಗೆ ಅದು ಅಪಾಯ ತಂದೊಡ್ಡುತ್ತೋ ಇಲ್ಲವೋ ಅನ್ನೋದು ಸಸ್ಪೆನ್ಸ್.

ನೋಡಿದವರಿಗೆ ಅವರು ಪಾಪ ಅನಿಸುತ್ತೆ. ಇಡೀ ಕಥೆ ಥ್ರಿಲ್ ಜೊತೆ ಮನರಂಜನೆಗೆ ಕರೆದೊಯ್ಯುತ್ತೆ. ಅಷ್ಟಾದರೂ ಅವರಿಗೆ ನಿಧಿ ಸಿಗುತ್ತಾ ಎಂಬ ಪ್ರಶ್ನೆ ಕೊನೆಯವರೆಗೂ ಕಾಡುತ್ತೆ. ನಿಧಿಗಾಗಿ ಅಲ್ಲೊಂದು ಘಟನೆ ನಡೆಯುತ್ತೆ ಅದನ್ನು ನೋಡುವುದಕ್ಕಾದರೂ ಒಮ್ಮೆ ಫಾರೆಸ್ಟ್ ಒಳ ಹೊಕ್ಕಿ ಬರಬಹುದು.

ರಂಗಾಯಣ ರಘು ಹಾಗೂ ಚಿಕ್ಕಣ್ಣ ಇಬ್ಬರ ಹಾಸ್ಯ ಮೋಡಿ ಮಾಡಿದೆ. ಅನೀಶ್, ಗುರುನಂದನ್, ಅರ್ಚನಾ ನಟನೆಯಲ್ಲಿ ಹಿಂದೆ ಉಳಿದಿಲ್ಲ. ಎಲ್ಲರೂ ಸಿಕ್ಕ ಪಾತ್ರಕ್ಕೆ ನ್ಯಾಯ ತುಂಬಿದ್ದಾರೆ.

ಧರ್ಮವಿಶ್ ಅವರ ಹಿನ್ನೆಲೆ ಸಂಗೀತ ಇಲ್ಲಿ ಮಾತಾಡುವಂತಿದೆ. ಇಡೀ ಸಿನಿಮಾದ ಫಾರೆಸ್ಟ್ ಒಳಗಿನ ಆತಂಕವನ್ನು ಭೀತಿಯನ್ನು ಹೆಚ್ಚಿಸಲು ಸಂಗೀತ ಕಾರಣ.

ಇಲ್ಲಿ ಪ್ಲಸ್ ಮೈನಸ್ ಅಂಶಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಒಂದೊಳ್ಳೆಯ ಮನರಂಜನೆಯ ಸಿನಿಮಾ ಎನಿಸಿಕೊಳ್ಳುತ್ತೆ.

error: Content is protected !!