ಹಾಸ್ಯ ನಟ ಬಿರಾದಾರ ಅವರ ಅಭಿಮಯದ ಐನೂರನೇ ಚಿತ್ರ’ನೈಂಟಿ ಹೊಡಿ ಮನೀಗ್ ನಡಿ’ ಚಿತ್ರ ಇತ್ತೀಚೆಗೆ ಹಾಡೊಂದನ್ನು ಚಿತ್ರೀಕರಿಸಿದೆ. ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಹಾಕಿದ ಅದ್ಧೂರಿ ಸೆಟ್ ನಲ್ಲಿ ಹಾಕಿಸಿ ‘ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ..” ಎಂಬ ಪಕ್ಕಾ ನಾಟೀ ಸ್ಟೈಲ್ ಹಾಡಿಗೆ ನಟಿ ನೀತಾ ಜೊತೆ ಬಿರಾದಾರ್ ಸ್ಟೆಪ್ ಹಾಕಿದ್ದಾರೆ.
ಅಮ್ಮಾ ಟಾಕೀಸ್ ಬಾಗಲಕೋಟೆ ಬ್ಯಾನರ್ ನಲ್ಲಿ ರತ್ನಮಾಲಾ ಬಾದರದಿನ್ನಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ನಿರ್ದೇಶಕರು.
ಇನ್ನು,’ಸಿಂಗಲ್ ಕಣ್ಣಿ’ನ ಹಾಡಿಗೆ ಚುಟು-ಚುಟು ಖ್ಯಾತಿಯ ಶಿವು ಭೇರಗಿ ಸಾಹಿತ್ಯ ಬರೆದು ರಾಗ ಸಂಯೋಜಿಸಿದ್ದಾರೆ. ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರಗಾಂವಿ ಹಾಡಿದ್ದಾರೆ.
ಈ ಹಾಡಿಗೆ ಭೂಷಣ್ ನೃತ್ಯ ಸಂಯೋಜಿಸಿದ್ದಾರೆ.
ಚಿತ್ರದಲ್ಲಿ ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ನೀತಾ, ಪ್ರೀತು ಪೂಜಾ, ಆರ್.ಡಿ ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ ಇತರರು ಇದ್ದಾರೆ.
ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಜಾ ರಮೇಶ್ ಅವರ ಸಾಹಸವಿದೆ.
ಡಿಸೆಂಬರ್ ನಲ್ಲಿ ಬಹುತೇಕ ಚಿತ್ರೀಕರಣ ಮುಗಿಸುವ ತಯಾರಿ ಮಾಡಿಕೊಂಡಿದೆ ಕುಂಬಳಕಾಯಿ ಕಾಣಿಸುವ ಯೋಚನೆ ಚಿತ್ರತಂಡದ್ದು.
ಕೆಲವು ಸಿನಿಮಾಗಳು ಸದ್ದಿಲ್ಲದೆಯೇ ಶುರುವಾಗಿ ಸದ್ದಿಲ್ಲದೆಯೇ ಮುಕ್ತಾಯಗೊಳ್ಳುತ್ತವೆ. ಅಂತಹ ಚಿತ್ರಗಳ ಸಾಲಿಗೆ ಈಗ “ಫ್ಯಾಂಟಸಿ” ಸಿನಿಮಾವೂ ಒಂದು. ಹೌದು, ಇತ್ತೀಚೆಗಷ್ಟೇ ಶುರುವಾಗಿದ್ದ “ಫ್ಯಾಂಟಸಿ” ಚಿತ್ರ ತನ್ನ ಶೂಟಿಂಗ್ ಮುಗಿಸಿದೆ. ಕೇವಲ 24 ದಿನಗಳಲ್ಲಿ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಈಗ ಖುಷಿಯಲ್ಲಿದೆ. ಇತ್ತೀಚೆಗೆ ರಾಕ್ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಿ, ಅಂದೇ ಚಿತ್ರ ಪೂರ್ಣಗೊಳಿಸಿದೆ. ಇನ್ನು, ಪವನ್ ಡ್ರೀಮ್ ಫಿಲಂಸ್ ಬ್ಯಾನರ್ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಪವನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರದೆ. ಅಷ್ಟೇ ಅಲ್ಲ, ನಿರ್ಮಾಣವನ್ನೂ ಮಾಡಿದ್ದಾರೆ. ಪೋಷಕರಾದ ಎಂ. ಮಹಾದೇವಿ, ಟಿ. ರಂಗಸ್ವಾಮಿ ಅವರು ಸಹ ನಿರ್ಮಾಪಕರು.
ತಮ್ಮ ಸಿನಿ ಜರ್ನಿ ಕುರಿತು ಹೇಳುವ ನಿರ್ದೇಶಕ ಪವನ್ ಕುಮಾರ್, ” ಆರಂಭದಲ್ಲಿ ನಾನು ನಿರ್ದೇಶಕ ಗುರು ದೇಶಪಾಂಡೆ ‘ಸಂಹಾರ’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಗಾಂಧಿನಗರಕ್ಕೆ ಎಂಟ್ರಿಯಾದೆ. ನಂತರದ ದಿನಗಳಲ್ಲಿ ‘ಅಮ್ಮ ಐ ಲವ್ ಯೂ’ ಹಾಗೂ ‘ಆದ್ಯಾ’ ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಚಿರು ಸರ್ಜಾ ಅವರೇ ನಾನು ಈ ಸಿನಿರಂಗಕ್ಕೆ ಬರಲು ಕಾರಣ. ಇನ್ನು, ನಿರ್ದೇಶಕ ಚೈತನ್ಯ ಅವರಿಂದ ನಿರ್ದೇಶನದ ಕೆಲಸ ಕಲಿತಿದ್ದೇನೆ ಎನ್ನುವ ಅವರು, ಇದೊಂದು ಥ್ರಿಲ್ಲರ್ ಶೈಲಿಯ ಸಿನಿಮಾ. ಚಿತ್ರದ ಶೇ. 90 ಭಾಗ ಒಳಾಂಗಣದಲ್ಲಿ ನಡೆದರೆ, ಇನ್ನು ಶೇ. 10 ಹೊರಾಂಗಣದಲ್ಲಿ ಶೂಟ್ ಮಾಡಿದ್ದೇವೆ. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ನಡೆಯುತ್ತಿದೆ. ಫೆಬ್ರವರಿ ವೇಳೆಗೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎನ್ನುತ್ತಾರೆ ಅವರು.
ಈ ಸಿನಿಮಾಗೆ ಛಾಯಾಗ್ರಾಹಕ ಪಿ.ಕೆ.ಎಚ್. ದಾಸ್ ಶಕ್ತಿಯಾಗಿದ್ದಾರೆ. ಗಣೇಶ್ ನಾರಾಯಣ್ ಸಂಗೀತ ನೀಡಿದ್ದಾರೆ. ಶಶಿರಾಮ್ ಸಂಕಲನ ಮಾಡಿದ್ದಾರೆ. ಬಲರಾಜ ವಾಡಿ ಇಲ್ಲಿ ಹೊಸ ರೀತಿಯ ಪಾತ್ರ ನಿರ್ವಹಿಸಿದ್ದಾರಂತೆ. ಭಾಸ್ಕರ್ ಪೊನ್ನಪ್ಪ ಎಂಬ ಪಾತ್ರ ಚಿತ್ರದ ವಿಶೇಷತೆಗಳಲ್ಲೊಂದು ಎಂಬುದು ಅವರ ಮಾತು. ಇನ್ನು,
ಚಿತ್ರದ ನಾಯಕಿ ಪ್ರಿಯಾಂಕಾ ಸಹ ಸಿನಿಮಾ ಬಗ್ಗೆ ತುಂಬಾಬೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಬಿಗ್ಬಾಸ್ʼ ನಂತರದ ದಿನಗಳಲ್ಲಿ ಸಾಕಷ್ಟು ಕಥೆ ಬಂದಿದ್ದುಂಟು. ಆ ಬಳಿಕ ಈ “ಫ್ಯಾಂಟಸಿ” ಸಿನಿಮಾ ಬಂತು. ಇದು ನನ್ನ ಮೊದಲ ಸಿನಿಮಾ. ಧಾರಾವಾಹಿಯಂತೆ ಇಲ್ಲಿಯು ನೆಗೆಟಿವ್ ಪಾತ್ರ ಮುಂದುವರಿದಿದೆʼ ಎನ್ನುತ್ತಾರೆ. ಬಾಲನಟ ಅನುರಾಗ್ ಕೂಡ ತನ್ನ ಸಿನಿಮಾ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ನಟ ಹೇಮಂತ್, ಹರಿಣಿ, ಮೂರ್ತಿ, ಗೌರಿ ಇತರರು ನಟಿಸಿದ್ದಾರೆ.
ದಿಗಂತ್ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್ ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ರಘುವರ್ಧನ್ ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್ ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಎಂ.ನಾಯಕ್ ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಗುಳಿಕೆನ್ನೆ ಹುಡುಗ ದಿಗಂತ್ ಅಭಿನಯದ “ಮಾರಿಗೋಲ್ಡ್” ಚಿತ್ರೀಕರಣ ಪೂರ್ಣಗೊಂಡಿದ್ದು ಗೊತ್ತೇ ಇದೆ. ರಾಜ್ಯೋತ್ಸವ ದಿನದಂದ ಚಿತ್ರದ ಶೀರ್ಷಿಕೆಯ ಫಸ್ಟ್ ಲುಕ್ ಪೋಸ್ಟರ್ ಕೂಡ ಹೊರಬಂದು ಸುದ್ದಿಯಾಗಿದ್ದು ಗೊತ್ತು. ಈಗ ಚಿತ್ರತಂಡ “ಮಾರಿಗೋಲ್ಡ್” ಚಿತ್ರದ ಡಬ್ಬಿಂಗ್ ಕಾರ್ಯಕ್ಕೆ ಮುಂದಾಗಿದೆ. ಹೌದು, ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ, ಈಗ ಡಬ್ಬಿಂಗ್ ಕೆಲಸದಲ್ಲಿ ನಿರತಗೊಂಡಿದೆ. ಸೋಮವಾರದಿಂದ ಡಬ್ಬಿಂಗ್ಗೆ ಮುಂದಾಗಿರುವ ಚಿತ್ರತಂಡ, ರೇಣು ಸ್ಟುಡಿಯೋದಲ್ಲಿ ಡಬ್ಬಿಂಗ್ ನಡೆಸುತ್ತಿದೆ. ಈಗಾಗಲೇ “ಮಾರಿಗೋಲ್ಡ್” ಸಾಕಷ್ಟು ಕುತೂಹಲ ಹುಟ್ಟಿಸಿದೆ. ಅದಕ್ಕೆ ಕಾರಣ, ಶೀರ್ಷಿಕೆ ಮತ್ತು ಚಿತ್ರತಂಡ ಬಿಡುಗಡೆ ಮಾಡಿರುವ ಶೀರ್ಷಿಕೆ ಫಸ್ಟ್ ಲುಕ್.
ಮಾರಿಗೋಲ್ಡ್ ಅಂಡರ್ವರ್ಲ್ಡ್ ಸಿನ್ಮಾನಾ?
ಶೀರ್ಷಿಕೆಯೇ ಅದೊಂದು ಅಂಡರ್ವರ್ಲ್ಡ್ ಸಿನಿಮಾ ಇರಬಹುದಾ ಎಂಬ ಪ್ರಶ್ನೆಯೂ ಮೂಡಿಬರುತ್ತೆ. ಅದಕ್ಕೆ ಕಾರಣ, ನಿರ್ದೇಶಕ ರಾಘವೇಂದ್ರ ಎಂ.ನಾಯಕ್ ಅವರು ಬಿಡುಗಡೆ ಮಾಡಿರುವ ಪೋಸ್ಟರ್ನಲ್ಲಿ ಒಂದು ಗನ್, ಬುಲೆಟ್ಸ್ ಹಾಗೂ ಗೋಲ್ಡ್ ಬಿಸ್ಕತ್ಗಳನ್ನಿಟ್ಟು ಒಂದಷ್ಟು ಕುತೂಹಲ ಮೂಡಿಸಿದ್ದಾರೆ. ಹಾಗಾಗಿ, ಇದೊಂದು “ಮಾರಿಗೋಲ್ಡ್” ಅಂಡರ್ವರ್ಲ್ಡ್ ಸಬ್ಜೆಕ್ಟ್ ಇರಬಹುದೇನೋ ಎಂಬ ಪ್ರಶ್ನೆಯನ್ನು ತಳ್ಳಿಹಾಕುವಂತಿಲ್ಲ. ದಿಗಂತ್ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್ ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿಸಿಕೊಂಡಿರುವ ಈ ಚಿತ್ರವನ್ನು ರಘುವರ್ಧನ್ ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್ ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಎಂ.ನಾಯಕ್ ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ರಘುವರ್ಧನ್, ನಿರ್ಮಾಪಕ
ಕಥೆಗಾಗಿ ನಿರ್ಮಾಣಕ್ಕಿಳಿದ ರಘುವರ್ಧನ್
ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್ ಅವರು ಮಾಡಿಕೊಂಡಿದ್ದ ಕಥೆ. ಕಥೆ ಚೆನ್ನಾಗಿದ್ದರಿಂದ, ಆ ಕಥೆಯನ್ನು ರಾಘವೇಂದ್ರ ನಾಯಕ್ ಅವರೇ ನಿರ್ದೇಶಿಸಲಿ ಎಂಬ ಮನೋಭಾವದಿಂದಾಗಿ ರಘುವರ್ಧನ್, ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇನ್ನು, ಬಹುತೇಕ ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಆ ಕಾರಣಕ್ಕೆ ಇದು ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಇದೊಂದು ಪಕ್ಕಾ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ದಿಗಂತ್ ಅವರಿಗೆ ಸಂಗೀತಾ ಶೃಂಗೇರಿ ಜೋಡಿಯಾಗಿದ್ದಾರೆ. ಇವರೊಂದಿಗೆ ಸಂಪತ್ ಕುಮಾರ್, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ರಾಜ್ ಬಲವಾಡಿ, ಗಣೇಶ್ರಾವ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.
ರಾಘವೇಂದ್ರ ಎಂ.ನಾಯಕ್, ನಿರ್ದೇಶಕ
ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಕ್ಯಾಮೆರಾ ಹಿಡಿದರೆ, ವೀರ್ಸಮರ್ಥ್ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಬರೆದಿದಾರೆ. ಯೋಗರಾಜ್ ಭಟ್, ಕವಿರಾಜ್, ವಿಜಯ್ ಭರಮಸಾಗರ ಸಾಹಿತ್ಯವಿದೆ. ಸದ್ಯಕ್ಕೆ ಡಬ್ಬಿಂಗ್ ಕಾರ್ಯದಲ್ಲಿ ನಿರತವಾಗಿರುವ ಚಿತ್ರ, ಒಂದಷ್ಟು ಸುದ್ದಿಯಲ್ಲಂತೂ ಇದೆ. “ಮಾರಿಗೋಲ್ಡ್” ಒಂದು ರೀತಿಯ ಮಾಸ್ ಕ್ರೇಜ್ ಹುಟ್ಟುಹಾಕಿದ್ದು, ದಿಗಂತ್ ಅವರನ್ನೂ ಮಾಸ್ ಲುಕ್ ನಲ್ಲಿ ತೋರಿಸಿದ್ದಾರಾ ಎಂಬ ಪ್ರಶ್ನೆ ಇದ್ದರೂ, “ಮಾರಿಗೋಲ್ಡ್” ಪಕ್ಕಾ ಸಿನಿಪ್ರೇಮಿಗಳಿಗಂತೂ ಒಂದೊಳ್ಳೆಯ ಮನರಂಜನಾತ್ಮಕ ಸಿನಿಮಾ ಆಗಿ ಹೊರಬರಲಿದೆ ಎಂಬ ಗ್ಯಾರಂಟಿ ಕೊಡುತ್ತಾರೆ ನಿರ್ಮಾಪಕ ರಘುವರ್ಧನ್.
ಕನ್ನಡದಲ್ಲಿ ಒಂದಷ್ಟು ಸಿನಿಮಾಗಳು ಗಮನಸೆಳೆಯುತ್ತಿರುವುದು ಗೊತ್ತೇ ಇದೆ. ಅದರಲ್ಲೂ ಹೊಸಬರಂತೂ ತಮ್ಮ ಚಿತ್ರಗಳಿಗೆ ವಿಭಿನ್ನ ಸಿನಿಮಾ ಶೀರ್ಷಿಕೆ ಮೂಲಕವೇ ಗಮನಸೆಳೆಯುತ್ತಿದ್ದಾರೆ. ಆ ಸಾಲಿಗೆ “ಇದು ಆಕಾಶವಾಣಿ ಬೆಂಗಳೂರು ನಿಲಯ” ಸಿನಿಮಾ ಕೂಡ ಸೇರಿದೆ. ತನ್ನ ಶೀರ್ಷಿಕೆಯಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಮೇಲೆ ನಿರೀಕ್ಷೆಯೂ ಇದೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಡಬ್ಬಿಂಗ್ ಕೂಡ ಮುಗಿಸಿದೆ. ಕಮಲಾನಂದ ಚಿತ್ರಾಲಯ ಸಂಸ್ಥೆಯಡಿ ಶಿವಾನಂದಪ್ಪ ಬಳ್ಳಾರಿ (ಮಿಸ್ಟರ್ ಎಇಜಿ) ಹಾಗೂ ಅವರ ಒಂದಷ್ಟು ಗೆಳೆಯರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೆಂಗಳೂರು, ತಿಪಟೂರು ಹಾಗೂ ನೊಣವಿನಕೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಇತ್ತೀಚೆಗೆ ಚಿತ್ರದ ಡಬ್ಬಿಂಗ್ ಮುಗಿಸಿರುವ ಚಿತ್ರತಂಡ, ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಈ ಹಿಂದೆ “ನಾವೇ ಭಾಗ್ಯವಂತರು” ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಎಂ. ಹರಿಕೃಷ್ಣ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಇದೊಂದು ವಿಭಿನ್ನವಾದ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಆಗಿದ್ದು, ಚಿತ್ರಕ್ಕೆ ಸುಮ್ ಸುಮ್ನೆ ವಿಜಯಕುಮಾರ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎ.ಟಿ.ರವೀಶ್ ಸಂಗೀತವಿದೆ. ಆಂಟೋನಿ ಎಂ, ಶಿವರಾಜ್ಗುಬ್ಬಿ ಅವರ ಸಾಹಿತ್ಯವಿದೆ. ಪ್ರವೀಣ್ ಶೆಟ್ಟಿ ಅವರ ಛಾಯಾಗ್ರಹಣ, ಪವನ್ಗೌಡ ಅವರ ಸಂಕಲನ, ಕಂಬಿರಾಜು ಅವರ ನೃತ್ಯ ನಿರ್ದೇಶನವಿದೆ. ನಿಖಿತಸ್ವಾಮಿ, ರಣ್ವೀರ್
ಟೀಲ್, ಸುಚೇಂದ್ರ ಪ್ರಸಾದ್, ಟೆನ್ನಿಸ್ ಕೃಷ್ಣ, ಎಸ್.ನಾರಾಯಣಸ್ವಾಮಿ, ದಿವ್ಯಶ್ರೀ (ಕಾಮಿಡಿ ಕಿಲಾಡಿಗಳು) ಮುಂತಾದವರ ತಾರಾಬಳಗವಿದೆ. ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರದ್ದು.
ಕನ್ನಡದಲ್ಲಿ ಹಲವು ಸಿನಿಮಾ ಮೂಲಕ ಗುರುತಿಸಿಕೊಂಡಿದ್ದರೂ, ಕಿರುತೆರೆ ಮೂಲಕ ಸುದ್ದಿಯಾದ ನಟ ಜೆಕೆ (ಜಯರಾಮ್ ಕಾರ್ತಿಕ್) ಈಗ ಮತ್ತೊಂದು ಹೊಸ ಸಿನಿಮಾ ಮೂಲಕ ಸುದ್ದಿಯಾಗುತ್ತಿದ್ದಾರೆ. ಹೌದು, ಅವರ ಹೊಸ ಚಿತ್ರಕ್ಕೆ “ಐರಾವನ್” ಎಂದು ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಗವಿಪುರಂನಲ್ಲಿರುವ ಕಾಲಭೈರವನ ಸನ್ನಿಧಿಯಲ್ಲಿ ನೂತನ ಚಿತ್ರ ಆರಂಭಗೊಂಡಿದೆ. “ನಿರಂತರ” ಗಣೇಶ್ ಅವರು ಕ್ಲಾಪ್ ಮಾಡುವ ಮೂಲಕ ಸಿನಿಮಾಗೆ ಚಾಲನೆ ಕೊಟ್ಟರು. ಇನ್ನು, ಈ ಸಂದರ್ಭದಲ್ಲಿ ತುಮಕೂರಿನ ಶ್ರೀಸಾಗರ ಮಹಾಸ್ವಾಮಿಗಳು ಕ್ಯಾಮೆರಾಗೆ ಚಾಲನೆ ನೀಡಿದರು.
ಈ ಚಿತ್ರವನ್ನು ನಿರಂತರ ಗಣೇಶ್ ಅವರು ತಮ್ಮ ನಿರಂತರ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ. ರಾಮ್ಸ್ ರಂಗಾ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಕನ್ನಡದ ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗಾ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದ್ದು, ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಎಸ್. ಪ್ರದೀಪ್ ವರ್ಮ ಸಂಗೀತವಿದೆ. ಚಿತ್ರಕ್ಕೆ ದೇವೇಂದ್ರ ಛಾಯಾಗ್ರಹಣ ಮಾಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಅರ್ಜುನ್ ಸಾಹಸ ನಿರ್ದೇಶನ ಹಾಗೂ ವಲ್ಲಭ ಅವರ ನಿರ್ಮಾಣ ನಿರ್ವಹಣೆಯಿದೆ ಚಿತ್ರಕ್ಕೆ ಇದೆ. ಚಿತ್ರದಲ್ಲಿ ವಿವೇಕ್, ಅದ್ವಿತಿ ಶೆಟ್ಟಿ, ಅವಿನಾಶ್, ಕೃಷ್ಣ ಹೆಬ್ಬಾರ್ ಇತರರು ಇದ್ದಾರೆ.
ಕನ್ನಡ ಚಿತ್ರರಂಗ ಕಂಡ ಅದ್ಬುತ ನಟ, ನಿರ್ದೇಶಕ ಮತ್ತು ತಂತ್ರಜ್ಞ. ಇದ್ದ ಅಲ್ಪ ಸಮಯದಲ್ಲೇ ಸಾಕಷ್ಟು ಸಂದೇಶವುಳ್ಳ ಸಿನಿಮಾ ಕಟ್ಟಿಕೊಡುವ ಮೂಲಕ ಕನ್ಮಡಿಗರ ಪಾಲಿಗೆ ಪ್ರೀತಿಯ ಶಂಕ್ರಣ್ಣ ಆಗಿ ಉಳಿದವರು. ನವೆಂಬರ್ 9 ಅವರ ಹುಟ್ಟುಹಬ್ಬ. ಎಲ್ಲೆಡೆ ಅವರ ಅಭಿಮಾನಿಗಳು ಹುಟ್ಟುಹಬ್ಬವನ್ನು ಪ್ರೀತಿಯಿಂದ ಆಚರಿಸಿದ್ದಾರೆ. ಇನ್ನು, ಸಿನಿಮಾರಂಗದಿಂದಲೂ ಸಾಕಷ್ಟು ಸ್ಟಾರ್ ನಟರು ಪ್ರೀತಿಯಿಂದಲೇ ಶಂಕರ್ನಾಗ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಕಿಚ್ಚ ಸುದೀಪ್ ಕೂಡ ಶಂಕರ್ ನಾಗ್ ಅವರ ಹುಟ್ಟುಹಬ್ಬಕ್ಕೆ ತಮ್ಮ ಟ್ವೀಟ್ನಲ್ಲಿ ಶಂಕರ್ ನಾಗ್ ಅವರ ಫೋಟೋ ಹಂಚಿಕೊಂಡು ಶುಭಕೋರಿದ್ದಾರೆ. ಉಳಿದಂತೆ ಸಾಕಷ್ಟು ಮಂದಿ ಶುಭಕೋರಿದ್ದಾರೆ.
ಶಂಕರ್ ನಾಗ್ ಅವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳ ಮೂಲಕ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಉತ್ತತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಮಲ್ಲಾಪುರ ಗ್ರಾಮದ ಶಂಕರ್ನಾಗ್, ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ಪದವಿ ಓದಿದವರು. ಬ್ಯಾಂಕ್ ನೌಕರರಾಗಿ ಮೊದಲು ಸೇವೆ ಸಲ್ಲಿಸಿದವರು. “ಒಂದಾನೊಂದು ಕಾಲದಲ್ಲಿ” ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು. “ಸೀತಾರಾಮು” ಅವರ ವೃತ್ತಿ ಬದುಕಲ್ಲಿ ದೊಡ್ಡ ತಿರುವು ಕೊಟ್ಟ ಚಿತ್ರ. ಆ ಬಳಿಕ “ಮಿಂಚಿನ ಓಟ” ಎಂಬ ಸಿನಿಮಾ ಮೂಲಕ ನಿರ್ದೇಶನಕ್ಕೆ ಎಂಟ್ರಿಕೊಟ್ಟರು. ಆ ಸಿನಿಮಾ ಮೂಲಕವೇ ನಿರ್ಮಾಪಕರೂ ಆಗಿಬಿಟ್ಟರು. ಇನ್ನು, “ಸಂಕೇತ್ ಸ್ಟುಡಿಯೋ” ಕಟ್ಟಿದ್ದ ಅವರು ದೊಡ್ಡ ಕೊಡುಗೆ ಕೊಟ್ಟವರು. “ಮಾಲ್ಗುಡಿ ಡೇಸ್” ಎಂಬ ಧಾರಾವಾಹಿ ನಿರ್ದೇಶಿಸಿ, ಇಂದಿಗೂ ಮನೆಮಾತಾದವರು. 1978 ರಿಂದ 1990ರ ತನಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ಅವರು ಇರುವವರೆಗೆ 83 ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬುದು ವಿಶೇಷ. ಅವರ ಅಭಿನಯದ ಕೊನೆಯ ಚಿತ್ರ “ಸುಂದರ ಕಾಂಡ”. ಈಗ ಅವರು ಇಲ್ಲದ 30 ವರ್ಷಗಳು ಕಳೆದಿವೆ. ಸೆ.30, 1990 ಅವರು ಇಹಲೋಕ ತ್ಯಜಿಸಿದರು. ಮೂರು ದಶಕ ಕಳೆದರೂ ಅವರ ನೆನಪು ಮಾತ್ರ ಜೀವಂತ. ಸೆ.30 ಆಟೋರಾಜನ ಪುಣ್ಯಸ್ಮರಣೆ. ನವೆಂಬರ್ 9 ಅವರ ಹುಟ್ಟುಹಬ್ಬ. ಶಂಕರ್ ನಾಗ್ ಅವರಿಗೆ ಎಲ್ಲಾ ವರ್ಗದ ಅಭಿಮಾನಿಗಳೂ ಇದ್ದಾರೆ. ಅವರ ಎದೆಯಲ್ಲಿ ಸದಾ ಹಸಿರಾಗಿರುವ ಶಂಕರ್ ನಾಗ್ ಎಂದೂ ಮರೆಯದ ಧ್ರುವತಾರೆ. ಇಂದಿಗೂ ಅವರು ಗೀತಾ, ಸಾಂಗ್ಲಿಯಾನ, ಮಿಂಚಿನ ಓಟ, ಒಂದು ಮುತ್ತಿನ ಕಥೆ, ಮಾಲ್ಗುಡಿ ಡೇಸ್… ಮೂಲಕ ನೆನಪಾಗುತ್ತಲೇ ಇದ್ದಾರೆ. ಇಂತಹ ಮಹಾನ್ ನಟನಿಗೆ “ಸಿನಿಲಹರಿ” ಕಡೆಯಿಂದ ಹುಟ್ಟುಹಬ್ಬದ ಶುಭಾಶಯ.
ನಿರ್ದೇಶಕ ಕಮ್ ನಿರ್ಮಾಪಕ ಗುರುದೇಶಪಾಂಡೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಈ ವರ್ಷದ ಆರಂಭದಲ್ಲಿ “ಜಂಟಲ್ ಮ್ಯಾನ್” ಸಿನಿಮಾ ರಿಲೀಸ್ ಮಾಡಿ ಗೆಲುವು ಕಂಡಿದ್ದ ಗುರುದೇಶಪಾಂಡೆ, ಈಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅವರು ತಮ್ಮ ಜಿ ಸಿನಿಮಾಸ್ ಬ್ಯಾನರ್ನಡಿಯಲ್ಲಿ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ “ಪೆಂಟಗನ್” ಎಂದು ಹೆಸರಿಡಲಾಗಿದೆ. ಅಂದಹಾಗೆ, ಈ ಚಿತ್ರವನ್ನು ಐವರು ಪ್ರತಿಭಾವಂತ ನಿರ್ದೇಶಕರು ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಐವರು ನಿರ್ದೇಶಕರಿಂದ ವಿಭಿನ್ನ ಸಿನಿಮಾ ಕೊಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ದೇಶಪಾಂಡೆ. ಇನ್ನು, ಐವರು ನಿರ್ದೇಶಕರು ನಿರ್ದೇಶನ ಮಾಡುತ್ತಿದ್ದಾರೆ ಅಂದಮೇಲೆ, ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡ ಕಥೆಗಳು ಕೂಡ ಒಂದಕ್ಕಿಂತ ಒಂದು ಭಿನ್ನವಾಗಿರಲಿವೆ. ಪ್ರತಿ ಕಥೆಯಿಂದ ಇನ್ನೊಂದು ಕಥೆಗೆ ಹೊಂದಾಣಿಕೆಯಾಗುವಂತೆಯೇ ಕಥೆ ಹೆಣೆಯಲಾಗಿದೆ. ಕಥೆಯಲ್ಲಿ ಒಳ್ಳೆಯ ಆಶಯವಿದೆ. ಐದು ಬೇರೆ ಬೇರೆ ಕಥೆಗಳಿದ್ದರೂ, ಅಂತ್ಯದಲ್ಲಿ ಒಂದಕ್ಕೊಂದು ಲಿಂಕ್ ಇರಲಿದೆ. ಈ “ಪೆಂಟಗನ್” ಸಿನಿಮಾ ಕುರಿತು ಮಾತನಾಡುವ ಗುರುದೇಶಪಾಂಡೆ, “ನನ್ನ ನಿರ್ಮಾಣ ಸಂಸ್ಥೆಯಲ್ಲಿ ಸೃಜನಶೀಲ ಹಾಗೂ ಹೊಸತನಗಳಿಂದ ಕೂಡಿದ ಚಿತ್ರಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದೇನೆ. ಅದು “ಜಂಟಲ್ಮನ್” ನಂತರವೂ ನಾನು ಮುಂದುವರೆಸುತ್ತಿದ್ದೇನೆ ಎನ್ನುತ್ತಾರೆ ಅವರು.
ಗುರು ಶೂಟಿಂಗ್ ಶುರು…
ಈಗಾಗಲೇ ಸದ್ದಿಲ್ಲದೆಯೇ “ಪೆಂಟಗನ್” ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಐದು ಕಥೆಗಳ ಪೈಕಿ ಎರಡು ಕಥೆಗಳ ಚಿತ್ರೀಕರಣವನ್ನೂ ಮುಗಿಸಲಾಗಿದೆ. ಇತರೆ ಕಥೆಗಳ ಚಿತ್ರೀಕರಣ ಬಾಕಿ ಇದೆ. ಈ ಸಿನಿಮಾಗೆ ಹಲವು ತಿಂಗಳ ಹಿಂದೆಯೇ ಸಿದ್ಧತೆ ನಡೆಸಲಾಗಿತ್ತು. ಕೊರೊನಾ ಸಮಸ್ಯೆಯಿಂದಾಗಿ ಎಲ್ಲೂ ಸುದ್ದಿಯಾಗಿರಲಿಲ್ಲ. ಈಗ “ಪೆಂಟಗನ್” ಕುರಿತು ವಿವರಿಸುತ್ತಿರುವುದಾಗಿ ಹೇಳುತ್ತಾರೆ ಗುರುದೇಶಪಾಂಡೆ. ಇನ್ನು ಶೀರ್ಷಿಕೆ ಕುರಿತು ಹೇಳುವ ಗುರುದೇಶಪಾಂಡೆ, “ಪೆಂಟಗನ್” ಅಂದರೆ, ಐದು ಮುಖಗಳ ಆಕಾರ. ಕಥೆ ಕೂಡ ಶೀರ್ಷಿಕೆಗೆ ಹೊಂದಿಕೊಳ್ಳುತ್ತದೆ. ಒಟ್ಟಾರೆ, ಒಂದೊಳ್ಳೆಯ ಸಿನಿಮಾ ಕೊಡುವ ಉದ್ದೇಶದಿಂದ ಐದು ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರ ಎಲ್ಲರಿಗೂ ರುಚಿಸಲಿದೆ ಎಂಬ ನಂಬಿಕೆ ನನಗಿದೆ. ಇನ್ನು, ಚಿತ್ರದಲ್ಲಿ ಐವರು ಪ್ರತಿಭಾವಂತ ನಿರ್ದೇಶಕರು ಮಾತ್ರವಲ್ಲದೆ, ಪ್ರಸಿದ್ಧ ನಟರು ಮತ್ತು ತಾಂತ್ರಿಕರು ಕೆಲಸ ಮಾಡುತ್ತಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಈಗಾಗಲೇ ತಮ್ಮದೇ ಆದ ಕೊಡುಗೆ ನೀಡಿದ ನಿರ್ದೇಶಕರು ಮತ್ತು ಹೊಸ ಹಾಗೂ ಅನುಭವಿ ಕಲಾವಿದರು ಮತ್ತು ತಾಂತ್ರಿಕರು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಇಷ್ಟರಲ್ಲೇ ಅವರನ್ನು ಪರಿಚಯಿಸುವ ಪ್ರಯತ್ನ ಮಾಡುವುದಾಗಿ ವಿವರ ಕೊಡುತ್ತಾರೆ ಗರು.
ಅಮೂಲ್ಯ ಸಹೋದರ ದೀಪಕ್ ಅರಸ್ ಈ ಹಿಂದೆ ‘ಮನಸಾಲಜಿ’ ಎಂಬ ಸಿನಿಮಾ ಮಾಡಿದ್ದು ಗೊತ್ತೇ ಇದೆ. ಈಗ ತುಂಬ ಗ್ಯಾಪ್ ಬಳಿಕ ಅವರೊಂದು “ಶುಗರ್ ಫ್ಯಾಕ್ಟರಿ” ಶುರುಮಾಡಿದ್ದಾರೆ.
ಹೀಗಂದಾಕ್ಷಣ, ದೀಪಕ್ ಶುಗರ್ ಫ್ಯಾಕ್ಟರಿ ಇಟ್ಟುಕೊಂಡರಾ ಎಂಬ ಅನುಮಾನ ಬೇಡ. ಗ್ಯಾಪ್ ನಂತರ ಅವರೀಗ “ಶುಗರ್ ಫ್ಯಾಕ್ಟರಿ” ಹೆಸರಿನ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.
ಈ ಸಿನಿಮಾಗೆ “ಡಾರ್ಲಿಂಗ್” ಕೃಷ್ಣ ಹೀರೋ. ಅವರಿಗೆ ಸೋನಲ್ ಮಾಂತೆರೊ ನಾಯಕಿಯಾಗಿದ್ದಾರೆ.
ಇದೊಂದು ಫನ್ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಚಿತ್ರ. ತಮ್ಮ ಎರಡನೇ ಸಿನಿಮಾಗೆಬಕೈ ಹಾಕಿರುವ ದೀಪಕ್ ಅರಸ್,
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಬಹದ್ದೂರ್ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ. ಇನ್ನು,.
ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಗಿರೀಶ್ ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ನಂತರ ಹಂತಹಂತವಾಗಿ ಗೋವಾ, ಮೈಸೂರು ಹಾಗೂ ಅಬ್ರಾಡ್ ನಲ್ಲಿ ಚಿತ್ರೀಕರಣ ಸಾಗಲಿದೆ.
ಆರು ಹಾಡುಗಳಿಗೆ ಕಬೀರ್ ರಫಿ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.
ಡಾರ್ಲಿಂಗ್ ಕೃಷ್ಣ ಅವರಿಗೆ ಮೂವರು ನಾಯಕಿಯರಿದ್ದು, ಸದ್ಯ ಸೋನಾಲ್ ಮಾಂತೆರೊ ಮೊದಲ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನಿಬ್ಬರು ನಾಯಕಿಯರು ಸೇರಿದಂತೆ ಉಳಿದ ತಾರಾಬಳಗದ ಸುದ್ದಿ ಸದ್ಯದಲ್ಲೇ ಹೊರಬೀಳಲಿದೆ.
ಈ ಚಿತ್ರರಂಗವೇ ಹಾಗೆ. ಒಮ್ಮೆ ಈ ಬಣ್ಣದ ಲೋಕಕ್ಕೆ ಕಾಲಿಟ್ಟರೆ, ಮನಸು ಸಾಧಿಸೋವರೆಗೂ ಬಿಡಲ್ಲ. ಕಲೆ ಎಲ್ಲರನ್ನೂ ಒಪ್ಪಿ ಅಪ್ಪಿಕೊಳ್ಳುವುದಿಲ್ಲ.
ನೂರಾರು ಸಂಕಷ್ಟಗಳ ನಡುವೆಯೇ ಇಲ್ಲಿ ಬದುಕು ಕಟ್ಟಿಕೊಂಡವರೂ ಇದ್ದಾರೆ. ಬೆಟ್ಟದಷ್ಟು ಕನಸು ಕಟ್ಟಿಕೊಂಡು ಬಂದ ಪ್ರತಿಭೆಗಳೂ ಇಲ್ಲಿವೆ. ಆ ಸಾಲಿಗೆ ಈಗ ಸಿದ್ದು ಎಂಬ ಹೊಸ ಪ್ರತಿಭೆಯೂ ಸೇರಿದೆ.
ಸಿದ್ದು ಮೂಲತಃ ಕೋಟೆ ನಾಡು ಚಿತ್ರದುರ್ಗದವರು.
ಸಿದ್ದು, ಸಿನಿಮಾರಂಗಕ್ಕೆ ಬಂದದ್ದು ತಾನೊಬ್ಬ ನಟ ಆಗಬೇಕು, ನಿರ್ದೇಶಕನಾಗಬೇಕು ಅಂತ. ಆದರೆ, ಆ ಕನಸು ಸುಲಭವಾಗಿರಲಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟಿದ್ದೂ ಇದೆ. ಈಗಲೂ ಆ ಶ್ರಮ ಮುಂದುವರೆದಿದೆ.
ಆಗ ಲೈಟ್ ಬಾಯ್, ಈಗ ನಿರ್ಮಾಪಕ
ಸಿದ್ದು ಆರಂಭದ ದಿನಗಳಲ್ಲಿ ಆಫೀಸ್ ಬಾಯ್ ಆಗಿ, ಲೈಟ್ ಬಾಯ್ ಆಗಿ ನಂತರದ ದಿನಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ, ಬರಹಗಾರನಾಗಿಯೂ ಕೆಲಸ ಮಾಡಿದ್ದಾರೆ.
ಈ ಅನುಭವದೊಂದಿಗೆ ಅವರು, 2017 ರಲ್ಲಿ “ಅನಾಸಿನ್” ಎಂಬ ಕಿರುಚಿತ್ರದಲ್ಲಿ ಒಬ್ಬರೇ 6 ಪಾತ್ರಗಳಲ್ಲಿ ನಟಿಸಿ, ನಿರ್ದೇಶನ ಮಾಡಿದ್ದಾರೆ.
ಆಮೇಲೆ ಸ್ವಂತವಾಗಿ ಸಿನಿ ಪ್ಯಾಲೇಸ್ ಸ್ಟುಡಿಯೋ ಎಂಬ ಕ್ಯಾಮೆರಾ ರೆಂಟಲ್ ಶುರು ಮಾಡಿ ಸಿನಿಮಾಗಳು, ಕಿರುಚಿತ್ರಗಳು, ಆಲ್ಬಮ್ ಸಾಂಗ್, ಸೀರಿಯಲ್, ವೆಬ್ ಸೀರೀಸ್ ಗಳು ಮಾಡಿದ್ದಾರೆ.
ಆರ್ಮಿಗೆ ಸೆಲ್ಯೂಟ್
ಕಳೆದ 2019ರಲ್ಲಿ ‘ಸೆಲ್ಯೂಟ್ ಫಾರ್ ಸೋಲ್ಡ್ಜರ್ಸ್’ ಎಂಬ ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದಾರೆ. 2020 ರಲ್ಲಿ ‘ ಆಯ್ತು ಬಿಡಿ’ ಎಂಬ ಆಲ್ಬಮ್ ಸಾಂಗ್ ಗೆ ಸಾಹಿತ್ಯ ಬರೆದು, ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಹಾಡಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.ಇದರೊಂದಿಗೆ ಸಿದ್ದು, ‘ಬ್ರಾಂಡೆಡ್ ಲವ್’ ಎಂಬ 30 ನಿಮಿಷದ ಕಿರುಚಿತ್ರ ತಯಾರಿಸಿದ್ದಾರೆ. ಈಗ ಇದೇ ಅನುಭವದೊಂದಿಗೆ ಒಂದು ಸಿನಿಮಾವನ್ನು ನಿರ್ದೇಶಿಸಿ, ನಿರ್ಮಿಸಿ, ನಟಿಸಿದ್ದಾರೆ. ಅದನ್ನೀಗ ಬಿಡುಗಡೆಗೆ ರೆಡಿ ಮಾಡುತ್ತಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಒಂದು ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸುವ ಯೋಚನೆಯಲ್ಲಿದ್ದಾರೆ ಸಿದ್ದು.
ಆಕ್ಟ್ 1978′ ಪಕ್ಕಾ ಮಾಸ್ ಸಿನಿಮಾ- ಸಂಚಾರಿ ವಿಜಯ್ ವಿಶ್ವಾಸ
ಸಂಚಾರಿ ವಿಜಯ್ ಈಗ ಎನ್ ಎಸ್ ಜಿ ಕಮಾಂಡರ್. ಹೌದು , ಇದು ಅವರ ಹೊಸ ಅವತಾರ. ‘ಆಕ್ಟ್ 1978′ ಜಾರಿಗೆ ಅಂತ ಕಮಾಂಡರ್ ರೂಪದಲ್ಲಿ ಗಾಂಧಿನಗರಕ್ಕೆ ಅವರು ಹೊಸದಾಗಿ ಎಂಟ್ರಿ ಆಗುತ್ತಿದ್ದಾರೆ. ಆದರೆ, ಸರ್ಕಾರಿ ಸೇವೆಗಾಗಿ ಅವರು ಇಂತಹ ಯೂನಿಫಾರ್ಮ್ ಹಾಕಿರುವುದು ಇದು ಮೊದಲಲ್ಲ.’ಕಿಲ್ಲಿಂಗ್ ವೀರಪ್ಪನ್’ ಚಿತ್ರದಲ್ಲಿ ಎಸ್ ಟಿ ಎಫ್ ಇನ್ಸೆಸ್ಪೆಕ್ಟರ್ ಆಗಿದ್ದರು. ಆದಾದ ನಂತರ ‘ಜಂಟಲ್ ಮೆನ್’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಆಗಿ ಮಿಂಚಿದ್ದರು. ಇದೀಗ ಎನ್ ಎಸ್ ಜಿ ಕಮಾಂಡರ್.
ಆಕ್ಟ್ 1978 ನ ಅವತಾರ !
ಅಂದ ಹಾಗೆ, ಇದು ಬಹುನಿರೀಕ್ಷಿತ ‘ಆಕ್ಟ್ 1978’ ಚಿತ್ರದಲ್ಲಿನ ಅವರ ಹೊಸ ಅವತಾರ . ಕನ್ನಡದ ಪ್ರತಿಭಾವಂತ ನಿರ್ದೇಶಕ ಮಂಸೋರೆ ನಿರ್ದೇಶನದ ಚಿತ್ರವಿದು. ಈಗಾಗಲೇ ಟ್ರೇಲರ್ ಮೂಲಕ ಭಾರೀ ಕುತೂಹಲ ಮೂಡಿಸಿದೆ. ನವೆಂಬರ್ 20 ಕ್ಕೆ ರಿಲೀಸ್ ಆಗುತ್ತಿದೆ.
ಲಾಕ್ ಡೌನ್ ನಂತರ ಚಿತ್ರ ಮಂದಿರದಲ್ಲಿ ತೆರೆ ಕಾಣುತ್ತಿರುವ ಮೊದಲ ಕನ್ನಡ ಚಿತ್ರ. ಕನ್ನಡ ಮಾತ್ರವಲ್ಲ ದಕ್ಷಿಣ ಭಾರತದಲ್ಲೆ ಮೊದಲು. ಈ ಮೂಲಕ ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರಗಳ ರಿಲೀಸ್ ಮೆರವಣಿಗೆ ಶುರುವಾಗುತ್ತಿದೆ. ಕತೆ ಮತ್ತು ಮೇಕಿಂಗ್ ಕಾರಣಕ್ಕೆ ಸುದ್ದಿಯಾಗಿರುವ ಹಾಗೆಯೇ ಚಿತ್ರದಲ್ಲಿನ ದೊಡ್ಡ ತಾರಾಗಣವೇ ಇಲ್ಲಿನ ಪ್ರಮುಖ ಆಕರ್ಷಣೆ. ಅಷ್ಟು ಕಲಾವಿದರ ಜತೆಗೆ ಮತ್ತಷ್ಟು ಕುತೂಹಲ ಇರುವುದು ನಟ ಸಂಚಾರಿ ವಿಜಯ್ ಪಾತ್ರ ಬಗ್ಗೆ.
ಬಿಕ್ಕಟ್ಟಿನ ಸಂದರ್ಭಕ್ಕೆ ಎಂಟ್ರಿ…
‘ ಇದೊಂದು ದೊಡ್ಡ ಕಲಾವಿದರ ಸಮಾಗಮದ ಚಿತ್ರ. ಅಂದ್ರೆ ಸಾಕಷ್ಟು ಜನ ಕಲಾವಿದರು ಇಲ್ಲಿದ್ದಾರೆ. ಅಷ್ಟು ಪಾತ್ರಗಳಿಗೂ ಸರಿ ಸಮಾನದ ಪ್ರಾಮುಖ್ಯತೆ ಸಿಕ್ಕಿದೆ ಅನ್ನೋದು ಅದರ ಇನ್ನೊಂದು ವಿಶೇಷ. ಅಂತಹ ಪಾತ್ರಗಳ ಪೈಕಿ ಎನ್ ಎಸ್ ಜಿ ಕಮಾಂಡರ್ ಪಾತ್ರವು ಒಂದು. ಇದು ಚಿತ್ರದಲ್ಲಿನ ಗೆಸ್ಟ್ ರೋಲ್. ಇದಕ್ಕೆ ಬಣ್ಣ ಹಚ್ಚಿರುವುದು ನನ್ನ ಅದೃಷ್ಟ. ಒಂದು ಕ್ರೂಷಿಯಲ್ ಸಂದರ್ಭದಲ್ಲಿ ಕಮಾಂಡರ್ ಎಂಟ್ರಿ ಆಗುತ್ತೆ. ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸಲು ಸರ್ಕಾರವೇ ಅಲ್ಲಿಗೆ ನನ್ನನ್ನು ನೇಮಕಮಾಡಿರುತ್ತದೆ. ಆದರೆ ಅಲ್ಲಿಗೆ ಬಂದಾಗ ಪೊಲೀಸ್ ಇನ್ಸೆಸ್ಪೆಕ್ಟರ್ ಪ್ರಮೋದ್ ಶೆಟ್ಟಿ ಮತ್ತು ನನಗೆ ಒಂದಷ್ಟುಜಟಾಪಟಿ ನಡೆಯುತ್ತೆ. ಅಲ್ಲಿನ ಸಂಭಾಷಣೆ ಅದ್ಬುತವಾಗಿದೆ. ಅದ್ಯಾಕೆ ಅನ್ನೊದು ಸಿನಿಮಾದ ಸಸ್ಪೆನ್ಸ್’ ಎನ್ನುತ್ತಾರೆ ನಟ ಸಂಚಾರಿ ವಿಜಯ್.
ಮಂಸೋರೆ ಬದಲಾಗಿದ್ದು ಕಂಡೆ..
ಸಂಚಾರಿ ವಿಜಯ್ ಹಾಗೂ ನಿರ್ದೇಶಕ ಮಂಸೋರೆ ಮತ್ತೊಮ್ಮೆ ಒಂದಾಗಿರುವುದು ಇಲ್ಲಿನ ಮಗದೊಂದು ವಿಶೇಷ. ಯಾಕಂದ್ರೆ ಅವರಿಬ್ಬರದು ಭಲೇ ಜೋಡಿ. ಚೊಚ್ಚಲ ಸಿನಿಮಾದಿಂದಲೇ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದರು.ಸಿನಿದುನಿಯಾದಲ್ಲಿ ಜೊತೆಯಾಗಿ ಸಾಗಿ ಬರುತ್ತಿದ್ದಾರೆ. ಒಂದು ಹಂತದಲ್ಲಿ ಬದ್ದತೆಗೆ ಕಟ್ಟು ಬಿದ್ದು ಬದಲಾಗದೆ ಉಳಿದವರು ಈಗ ಬದಲಾಗಿದ್ದಾರೆ. ಸಂಚಾರಿ ವಿಜಯ್ ಕಮಾಂಡರ್ ಆಗಿದ್ದು ಕೂಡ ಹಾಗೆಯೆ.ಅದರಾಚೆ ಮಂಸೋರೆ ಕೂಡ ಕ್ಲಾಸ್ ಆಚೆ ಮಾಸ್ ಸಿನಿಮಾ ಮಾಡಿದ್ದೇನೆಂದು ಹೇಳುತ್ತಿರುವುದು ಕೂಡ ಹಾಗೆಯೆ. ಹಾಗಾದ್ರೆ ಆ ಬದಲಾವಣೆ ಏನು? ಆ ಬಗ್ಗೆ ಸಂಚಾರಿ ವಿಜಯ್ ಕಂಡಿದ್ದೇನು?
ಪಕ್ಕಾ ಕಮರ್ಷಿಯಲ್ ಸಿನಿಮಾ..
‘ ಮಂಸೋರೆ ಸಿನಿಜರ್ನಿಯಲ್ಲಿ ಆಕ್ಟ್ ೧೯೭೮ ಮಹತ್ತರವಾದ ಸಿನಿಮಾ. ಅದಕ್ಕೆ ಕಾರಣ ಹಲವು.ಕತೆ, ಅದರ ಮೇಕಿಂಗ್ ಶೈಲಿ ಇತ್ಯಾದಿ. ‘ಹರಿವು’ ಸಿನಿಮಾದಿಂದಲೂ ಪರಸ್ಪರ ಒಟ್ಟಿಗೆ ಕೆಲಸಮಾಡುತ್ತಾ ಬಂದಿದ್ದೇವೆ. ಅವರ ಸಿನಿಮಾ ಮೇಕಿಂಗ್ ಶೈಲಿ ಎಂಥದ್ದು ಅಂತ ನಂಗೊತ್ತು.ಹಾಗೆಯೇ ನನ್ನ ಆ್ಯಕ್ಟಿಂಗ್ ಟೆಸ್ಟ್ ಹೇಗೆ ಆಂತಲೂಅವರಿಗೆ ಗೊತ್ತು.ಆ ದೃಷ್ಟಿಯಲ್ಲಿ ನಾನಿಲ್ಲಿ ಸಾಕಷ್ಡು ಬದಲಾವಣೆ ಕಂಡಿದ್ದೇನೆ. ಅವರ ತಮ್ಮ ಮಾಮೂಲು ಶೈಲಿಯನ್ನುಮೀರಿ ಒಂದಷ್ಟು ಸಿನಿಮ್ಯಾಟಿಕ್ ರೂಪ ಬಳಸಿದ್ದಾರೆ. ಹಾಗೆಯೇ ಬಡ್ಜೆಟ್ ನಲ್ಲೂ ರಾಜಿಯಾಗದೆ ಕತೆಯ ಡಿಮ್ಯಾಂಡ್ ಅನುಸಾರ ಸಿನಿಮಾ ಮಾಡಿದ್ದಾರೆ.ಆದ್ದರಿಂದಲೇ ದೊಡ್ಡ ಮಟ್ಟದ ಸೆಟ್ ಹಾಕಿ ಸಿನಿಮಾ ಮಾಡಲು ಸಾಧ್ಯವಾಗಿದೆ. ಪಾತ್ರಗಳ ದಂಡೇ ಇಲ್ಲಿದ್ದರೂ, ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ಸಿಗುವಂತೆ ಚಿತ್ರಕತೆ ಹೆಣೆದಿದ್ದಾರೆ. ಥ್ರಿಲ್ಲರ್ ಎಲಿಮೆಂಟ್ ಸಿನಿಮಾದೊಡ್ಡಶಕ್ತಿಆಗಿದೆ. ಹಾಗೆಯೇ ತಾಂತ್ರಿಕತೆ ಯಲ್ಲೂ ಯಾವುದೇ ರೀತಿ ರಾಜಿ ಆಗಿಲ್ಲ. ಇದೆಲ್ಲಮಾಸ್ ಸಿನಿಮಾವೊಂದರ ಸ್ಟೈಲ್ ಅಂತಾರೆ ನಟ ಸಂಚಾರಿವಿಜಯ್.