Categories
ಸಿನಿ ಸುದ್ದಿ

ರಾಘಣ್ಣನಿಗೆ ಪುನೀತ್‌ ಸಾಥ್-‌ ರಾಜತಂತ್ರ ಟೀಸರ್‌ ಬಂತು, ಜನವರಿಗೆ ಸಿನಿಮಾ ಬರುತ್ತೆ

ನಿವೃತ್ತ ಮಿಲಿಟರಿ ಅಧಿಕಾರಿಯಾಗಿ ರಾಘಣ್ಣ

ರಾಘವೇಂದ್ರ ರಾಜಕುಮಾರ್‌ “ರಾಜತಂತ್ರ” ಸಿನಿಮಾ ಮಾಡುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಲಾಕ್‌ಡೌನ್‌ ಕೊಂಚ ಸಡಿಲಗೊಂಡ ಬಳಿಕ “ರಾಜತಂತ್ರ” ಸಿನಿಮಾ ಶುರುವಾಗಿತ್ತು. ಅದಾಗಲೇ ಸದ್ದಿಲ್ಲದೆಯೇ ಕೊರೊನಾ ನಡುವೆಯೂ ಮುಂಜಾಗ್ರತೆ ವಹಿಸಿಕೊಂಡು ಯಶಸ್ವಿಯಾಗಿ ಸಿನಿಮಾ ಚಿತ್ರೀಕರಣ ಮುಗಿಸಿ, ಇದೀಗ ರಿಲೀಸ್‌ಗೆ ರೆಡಿಯಾಗಿದೆ.


ಅದಕ್ಕೂ ಮುನ್ನ, ಚಿತ್ರದ ಟೀಸರ್‌ ಹೊರತರಲಾಗಿದೆ. ನಟ ಪುನೀತ್‌ರಾಜಕುಮಾರ್‌ ಅವರು ಟೀಸರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್‌ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ತಮ್ಮ ಸಿನಿಮಾ ಕುರಿತು ಮಾತನಾಡಿದ ಪ್ರಹ್ಲಾದ್‌, ” ಕಾಲೇಜ್‌ ದಿನಗಳಿಂದಲೂ ಬರಹಗಾರನಾಗಿ ಬದುಕಬೇಕೆಂಬುದು ನನ್ನಾಸೆ ಆಗಿತ್ತು. ಪತ್ರಕರ್ತನಾದರೆ, ಬರಹಗಾರನಾಗಬಹುದು ಅಂತ ಅಂದುಕೊಂಡು, ಪತ್ರಿಕೋದ್ಯಮಕ್ಕೆ ಬಂದೆ. ಅಲ್ಲಿ ಹತ್ತು ವರ್ಷ ಕೆಲಸ ಮಾಡಿದೆ. ಹಾಗೆಯೇ ಹಲವು ನಾಟಕಗಳಲ್ಲಿ ಕೆಲಸ ಮಾಡಿದೆ. ಹಂಸಲೇಖ ಅವರು ನನ್ನನ್ನು ಸಿನಿಮಾರಂಗಕ್ಕೆ ಪರಿಚಯಿಸಿದರು.”ಸಿಪಾಯಿ” ಮೂಲಕ ಚಿತ್ರರಂಗ ಪ್ರವೇಶಿಸಿದೆ.

ನಂತರದ ದಿನಗಳಲ್ಲಿ ಶಿವರಾಜಕುಮಾರ್‌ ಅವರ ಸಿನಿಮಾಗೂ ಕೆಲಸ ಮಾಡಿದೆ. ಈವರೆಗೆ ಸುಮಾರು ೪೦ ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ಕಿರುತೆರೆಯ “ಮಾಯಾಮೃಗ” ಧಾರಾವಾಹಿಗೂ ಕೆಲಸ ಮಾಡಿದೆ. ಒಟ್ಟು ೯ ಸಾವಿರ ಎಪಿಸೋಡ್‌ ಬರೆದಿದ್ದೇನೆ ಎಂಬ ಸಂತಸವಿದೆ. ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಕೆಲಸ ಮಾಡಿದ ಹೆಮ್ಮೆಯೂ ಇದೆ. ಆಪ್ತರು ಸೇರಿ ಒಂದು ಕಂಪೆನಿ ಮಾಡೋಣ ಅಂತಂದುಕೊಂಡು ವಿಶ್ವಂ ಡಿಜಿಟಲ್‌ ಮೀಡಿಯಾ ನಿರ್ಮಾಣ ಸಂಸ್ಥೆ ಶುರುಮಾಡಿದೆವು. ನಮ್ಮ ಬಳಿ ಕಂಟೆಂಟ್‌ ಇತ್ತು ಆದರೆ, ನಿರ್ಮಾಣ ಮಾಡುವುದು ಕಷ್ಟ ಎನಿಸಿತು. ಆದರೂ, ಮೊದಲಿಗೆ ” ಅಭಯಾರಣ್ಯ” ಚಿತ್ರ ಮಾಡಿದೆವು. ನಂತರ “ರಾಜತಂತ್ರ” ಕಥೆ ಮಾಡಿ ಸಿನಿಮಾ ಮಾಡಿದ್ದೇವೆ. ನಿರ್ದೇಶಕರ ಬಳಿ ಹೇಳಿದಾಗ, ಈ ಕಥೆ ರಾಘಣ್ಣವರಿಗೆ ಹೇಳಿ ಸೂಕ್ತವಾಗುತ್ತೆ ಅಂದರು. ಅಲ್ಲಿಂದ ಇಲ್ಲಿಯವರೆಗೆ ನಡೆದುಬಂದಿದೆ ಎಂದರು ಪ್ರಹ್ಲಾದ್.‌

ನಿರ್ಮಾಪಕ ವಿಜಯ ಭಾಸ್ಕರ್ ಮಾತನಾಡಿ, ಒಳ್ಳೆಯ ಕಥೆ ಜತೆಗೆ ಆಗಮಿಸುತ್ತಿದ್ದೇವೆ. ನೋಡಿ ಹರಸಿ ಎಂದು ಮನವಿ ಮಾಡಿದರು.
ರಾಘವೇಂದ್ರ ರಾಜಕುಮಾರ್‌ ಕೂಡ ಖುಷಿಯಲ್ಲಿದ್ದರು. “ನನ್ನ ಲೈಫ್ ನಲ್ಲಿ ಈ ಥರದ ಪಾತ್ರ ಮಾಡಿರಲಿಲ್ಲ. ಮಾಜಿ ಮಿಲಿಟಿರಿ ಅಧಿಕಾರಿ ಪಾತ್ರ ನನಗೆ ಹೊಸ ಅನುಭವ ಕೊಟ್ಟಿದೆ. ಇಲ್ಲಿ ನಾನು ಹೆಚ್ಚು ಕಲಿತಿದ್ದೇನೆ. ನಾನು ಮಾಡಿದ್ದೇನೆ ಎನ್ನುವುದಕ್ಕಿಂತ ಎಲ್ಲರೂ ನನ್ನಿಂದ ಕೆಲಸ ಮಾಡಿಸಿದ್ದಾರೆ. ಅಭಿಮಾನಿಗಳ ಪ್ರೋತ್ಸಾಹವೇ ನಮ್ಮಕೆಲಸಕ್ಕೆ ಕಾರಣ ಎಂದರು.

ಟೀಸರ್‌ ಬಿಡುಗಡೆ ಮಾಡಿ ಮಾತನಾಡಿದ ಪುನೀತ್‌, ” ಈ ವರ್ಷ ನಾವು , ನೀವೆಲ್ಲರೂ ಕೊರೊನಾ ಪರಿಸ್ಥಿತಿಗೆ ಸಿಕ್ಕವರು. ಇಂತಹ ಸಮಯದಲ್ಲೂ ಈ ಚಿತ್ರತಂಡ ಚಿತ್ರ ಮಾಡಿದೆ. ಈ ಸಿನಿಮಾದಲ್ಲಿ ರಾಘಣ್ಣ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಮೇಲೆ ಸಿನಿಮಾ ಮಾಡ್ತಾ ಇದ್ದಾರೆ. ಈ ಸಿನಿಮಾಗೆ ಗೆಲುವು ಸಿಗಲಿ. ರಾಘಣ್ಣ ಇಲ್ಲಿ ಫೈಟ್‌ ಮಾಡಿದ್ದಾರೆ. ಒಬ್ಬ ನಟನಿಗೆ ವಯಸ್ಸು ಇರಬಹುದು. ಯಾವುದೇ ಪರಿಸ್ಥಿತಿ ಇರಬಹುದು. ಸಿನಿಮಾ ಅಂತ ಬಂದಾಗ ಉತ್ಸಾಹ ತುಂಬುತ್ತೆ. ಜನರ ಪ್ರೀತಿ, ಅಭಿಮಾನಿಗಳ ಪ್ರೋತ್ಸಾಹವೇ ಇದಕ್ಕೆ ಕಾರಣ. ಜನವರಿ ೧ರಂದು ರಿಲೀಸ್ ಆಗಲಿದೆ ಎಲ್ಲರೂ ಪ್ರೋತ್ಸಾಹಿಸಿ ಎಂದರು.


ನಿರ್ದೇಶಕ ಪಿವಿಆರ್ ಸ್ವಾಮಿ, ” “ಅಮ್ಮನ ಮನೆ” ಸಿನಿಮಾದಲ್ಲಿ ರಾಘಣ್ಣ ಜತೆ‌ ಕೆಲಸ ಮಾಡಿದ್ದೆ. ಆಗಲೇ ಈ ಕಥೆ ಹೇಳಿದ್ದೆ. ಈ ಚಿತ್ರದಲ್ಲಿ ನಿವೃತ್ತ ಆರ್ಮಿ ಆಧಿಕಾರಿಯಾಗಿ ಕ್ಯಾಪ್ಟನ್ ರಾಜಾರಾಮ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಸಮಾಜದೊಳಗಿನ ಲೋಪಗಳನ್ನು ತಮ್ಮದೆ ಶೈಲಿಯಲ್ಲಿ ಸರಿಪಡಿಸುತ್ತಾರೆ. ಅದೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ರಾಘಣ್ಣ ಅವರ ಕಡೆಯಿಂದ ಫೈಟ್ ಸಹ ಮಾಡಿಸಿದ್ದೇವೆ ಎಂದರು.


ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್.ಶ್ರೀಧರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್‌ ಸಿಕ್ಕಿದೆ. ಶ್ರೀಸುರೇಶ್ ಸಂಗೀತವಿದೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ಶಂಕರ್ ಅಶ್ವಥ್, ನೀನಾಸಂ ಅಶ್ವಥ್ ಇತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಮುತ್ತಪ್ಪ ರೈ ಚಿತ್ರ ನಾನೇ ಮಾಡ್ತೀನಿ – ರೈ ಬಳಗದ ಆಪ್ತ ಪದ್ಮನಾಭ್ ಹೇಳಿಕೆ

ಎಂಆರ್ ಸಿನಿಮಾ ಅನೌನ್ಸ್ ಮಾಡಿದ ರವಿ ಶ್ರೀವತ್ಸ ಈಗ ಏನ್ ಮಾಡ್ತಾರೆ?

ಒಂದು ಕಾಲದ ಡಾನ್ ಎಂದೇ‌ ಹೆಸರಾಗಿದ್ದ ಮುತ್ತಪ್ಪ ರೈ ಅವರ ಕುರಿತ ಚಿತ್ರವೊಂದು ಇತ್ತೀಚೆಗೆ ಮುಹೂರ್ತ ಕಂಡಿತ್ತು.
ಮಾಸ್ ನಿರ್ದೇಶಕ ಎಂದೇ ಹೆಸರಾಗಿರುವ ರವಿ ಶ್ರೀವತ್ಸ ಅವರು ನಿರ್ಮಾಪಕ ಶೋಭ ರಾಜಣ್ಣ ಅವರ ಪುತ್ರನಿಗೆ ‘ಎಂ ಆರ್’ ಹೆಸರಿನ ಸಿನಿಮಾ ಅನೌನ್ಸ್ ಮಾಡಿದ್ದರು. ತಮ್ಮ ಚಿತ್ರತಂಡದ ಪರಿಚಯ ಮಾಡಿಕೊಡುವುದರ ಜೊತೆಗೆ ‘ಎಂ ಆರ್’ ಸಿನಿಮಾ ಕುರಿತು ವಿವರ ನೀಡಿದ್ದರು.
ಆದರೆ, ಈಗ ಎಲ್ಲವೂ ಉಲ್ಟಾ ಹೊಡೆದಿದೆ. ಮುತ್ತಪ್ಪ ರೈ ಕುರಿತ ಸಿನಿಮಾವನ್ನು ನಾನೇ ಮಾಡ್ತೀನಿ ಎಂದು ಮುತ್ತಪ್ಪ ರೈ ಬಳಗದ ಆಪ್ತ ನಿರ್ಮಾಪಕ ಪದ್ಮನಾಭ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಅವರು ಬಿಡುಗಡೆ ಮಾಡಿರುವ ಹೇಳಿಕೆಯನ್ನೊಮ್ಮೆ ಓದಿ…


‘ನಾನು, ನಿರ್ಮಾಪಕ ಎಲ್ ಪದ್ಮನಾಭ್, ಈಗಾಗಲೇ ನನ್ನ ಗಮನಕ್ಕೆ ಬಾರದೆ, ನಾನು ವಿದೇಶದಲ್ಲಿ ಇದ್ದ ಕಾರಣ, ‘ಎಂ ಆರ್’ ಸಿನಿಮಾ ಮುಹೂರ್ತ ಆಗಿರುವುದು ಗೊತ್ತಾಗಿಲ್ಲ. ಹೀಗಾಗಿ, ಮುತ್ತಪ್ಪ ರೈ ಕುರಿತ ಚಿತ್ರವನ್ನು ನಾನೇ ನಿರ್ಮಿಸಬೇಕಿದೆ. ಈಗಾಗಲೇ ಈ ಹಿಂದೆ ಈ ಬಗ್ಗೆ ಒಂದು ಪತ್ರಿಕಾಗೋಷ್ಟಿಯನ್ನೂ ನಾನು ಮಾಡಿದ್ದೆ. ಅವರಿದ್ದಾಗಲೇ ಬಹುಭಾಷೆಯಲ್ಲಿ ಈ ಚಿತ್ರ ಮಾಡುವ ಬಗ್ಗೆ ಚರ್ಚೆಯಾಗಿತ್ತು. ರಾಮ್ ಗೋಪಾಲ್ ವರ್ಮಾ ಹಿಂದೆ ಸರಿದ ಬಳಿಕ ನಾನೇ ನಮ್ಮ ಎಂಆರ್ ಬ್ಯಾನರ್ ನಲ್ಲಿ ಈ ಚಿತ್ರವನ್ನು ಬಹುಭಾಷೆಯಲ್ಲಿ ನಿರ್ಮಾಣ ಮಾಡುವ ಬಗ್ಗೆ ಪ್ರಕ್ರಿಯೆ ಈ ಮೊದಲೇ ಶುರುವಾಗಿತ್ತು. ನನ್ನ ಎಂಆರ್ ಪಿಕ್ಚರ್ಸ್ ಸಂಸ್ಥೆ ಹುಟ್ಟು ಹಾಕಿದ್ದೆ ಅದರ ಸಲುವಾಗಿ. ಅಷ್ಟೇ ಅಲ್ಲ, ರೈ ಅಣ್ಣನ ಬಗ್ಗೆ ಸಿನಿಮಾ‌ ಪ್ರಾಜೆಕ್ಟ್ ಕೈಗೆತ್ತಿಕೊಂಡರೆ ಅದಕ್ಕೆ ಅನುಮತಿ ಪಡೆಯಲೇಬೇಕಿದೆ. ಇದೀಗ ನಿರ್ದೇಶಕ ರವಿ ಶ್ರೀವತ್ಸ ಅವರು ಸಿನಿಮಾ ಘೋಷಣೆ ಮಾಡಿಕೊಂಡು ಮುಹೂರ್ತವನ್ನೂ ಮಾಡಿಕೊಂಡಿದ್ದಾರೆ. ಆ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ಸಿನಿಮಾ ಕೈ ಬಿಡುವಂತೆ ಚರ್ಚೆ ಮಾಡಿದ್ದೇನೆ. ಅವರಿಂದಲೂ ಸಮ್ಮತಿ ಸಿಕ್ಕಿದೆ. ಕೊಂಚ ಕಾಲಾವಕಾಶವನ್ನೂ ಕೇಳಿದ್ದಾರೆ. ಅವರು ಕೈಬಿಟ್ಟ ಬಳಿಕ ಅವರ ಸಿನಿಮಾ ಕಥೆ ಕೇಳುತ್ತೇನೆ. ಒಬ್ಬ ನಿರ್ಮಾಪಕನಾಗಿ ಮತ್ತೊಬ್ಬ ನಿರ್ಮಾಪಕನ ಸಮಸ್ಯೆ ನನಗೆ ಗೊತ್ತು. ಹಾಗಾಗಿ, ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಅವರ ಗಮನಕ್ಕೆ ತರುವುದು ಒಳಿತು ಎನ್ನುವ ಕಾರಣಕ್ಕೆ ಅವರೊಂದಿಗೆ ಚರ್ಚಿಸಿದ್ದೇನೆ. ಸದ್ಯ ಸಾಕಷ್ಟು ಸಿನಿಮಾಗಳು ಸೆನ್ಸಾರ್ ಆಗಿವೆ. ಅವುಗಳ ಬಿಡುಗಡೆ ಪ್ರಕ್ರಿಯೆ ಶುರುವಾಗಲಿ. ಇನ್ನು ಕೆಲ ದಿನಗಳ ಬಳಿಕ ಆ ಚಿತ್ರವನ್ನು ನಾನೇ ಘೋಷಣೆ ಮಾಡಲಿದ್ದೇನೆ. ಎಂಆರ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಾನೇ ನಿರ್ಮಾಣ ಮಾಡಲಿದ್ದೇನೆ’ ಎಂದು ಪದ್ಮನಾಭ್ ಹೇಳಿದ್ದಾರೆ.
ಅದೇನೋ ಸರಿ ಆದರೆ, ರವಿ ಶ್ರೀವತ್ಸ ಅವರು ಈಗ ‘ಎಂ.ಆರ್’ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಶೂಟಿಂಗ್ ಹೋಗುವ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಈಗ ಪದ್ಮನಾಭ್ ನಾನೇ ಆ ಚಿತ್ರ ಮಾಡ್ತೀನಿ ಎನ್ನುತ್ತಿದ್ದಾರೆ. ಹಾಗಾದರೆ, ರವಿ ಶ್ರೀವತ್ಸ ಅವರೇ ಪದ್ಮನಾಭ್ ನಿರ್ಮಾಣದಲ್ಲಿ ಚಿತ್ರ ನಿರ್ದೇಶನ ಮಾಡುತ್ತಾರೋ ಅಥವಾ ಬೇರೆ ನಿರ್ದೇಶಕರ ಜೊತೆ ಪದ್ಮನಾಭ್ ಸಿನಿಮಾ ನಿರ್ಮಾಣ ಮಾಡುತ್ತಾರೋ ಕಾದು ನೋಡಬೇಕಿದೆ.
ಒಟ್ಟಲ್ಲಿ ಮುತ್ತಪ್ಪ ರೈ ಅವರು ಇದ್ದಾಗಲೂ ಈ ಚಿತ್ರ ಸೆಟ್ಟೇರಲಿಲ್ಲ. ಅವರು ಇಲ್ಲವಾದಾಗ ಇನ್ನೇನು ಶುರುವಾಯಿತು ಅನ್ನುವುದರೊಳಗೆ ಈಗ ಸಿನಿಮಾಗೆ ಸಣ್ಣ ಅಡಚಣೆಯಾಗಿದೆ. ಇದು ಎಷ್ಟರಮಟ್ಟಿಗೆ ಬಗೆಹರಿದು ಸಿನಿಮಾ ಆಗುತ್ತೋ ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಪನೋರಮಾ ಗೋವಾ ಚಿತ್ರೋತ್ಸವಕ್ಕೆ ‘ ಪಿಂಕಿ ಎಲ್ಲಿ?’ ಕನ್ನಡದಿಂದ ಆಯ್ಕೆಯಾದ ಒಂದೇ ಒಂದು ಸಿನಿಮಾ

ಜ. 16 ರಿಂದ 24  ರವರೆಗೆ  ಗೋವಾ ಚಿತ್ರೋತ್ಸವ 

ಕೃಷ್ಣೇಗೌಡ ನಿರ್ಮಾಣ ಹಾಗೂ ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ ? ‘ ಚಿತ್ರ ಇಂಡಿಯನ್ ಪನೋರಮಾ ಗೆ ಆಯ್ಕೆ ಆಗಿದೆ. ಭಾರತದ ವಿವಿಧ ಭಾಷೆಗಳ ಒಟ್ಟು 23 ಸಿನಿಮಾಗಳ ಪೈಕಿ ಕನ್ನಡದಿ‌ಂದ ಆಯ್ಕೆಯಾದ ಒಂದೇ ಒಂದು‌ ಸಿನಿಮಾ ‘ಪಿಂಕಿ ಎಲ್ಲಿ? ‘ ಮಾತ್ರ.
ಇಂಡಿಯನ್ ಪನೋರಮಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಮುಂದಿನ ತಿಂಗಳು 16 ರಿಂದ 24 ರವರೆಗೆ ಗೋವಾದಲ್ಲಿ‌ ನಡೆಯುವ ಸಾಧ್ಯತೆಗಳಿವೆ. ಒಂದು‌ ಮೂಲದ ಪ್ರಕಾರ ಇಂಡಿಯನ್ ಪನೋರಮಾ ಚಿತ್ರೋತ್ಸವಕ್ಕೆ ಕನ್ನಡದಿಂದ ನಾಲ್ಕು ಚಿತ್ರಗಳು ಆಯ್ಕೆಯ ಅಂತಿಮ ಹಂತದಲ್ಲಿದ್ದವು. ಈ ಪೈಕಿ ಪಿಂಕಿ ಎಲ್ಲಿ? ಮಾತ್ರ ಅವುಗಳಲ್ಲಿ ಆಯ್ಕೆ ಯಾಗಿರುವುದು ಅಧಿಕೃತ ಗೊಂಡಿದೆ.
ಉಳಿದಂತೆ ಪನೋರಮಾ ಚಿತ್ರದಲ್ಲಿ ಮಲಯಾಳಂ ಚಿತ್ರಗಳಿಗೆ ಭಾರೀ ಆದ್ಯತೆ ಸಿಕ್ಕಿದೆ.ಅನ್ವರ್ ರಷೀದ್ ನಿರ್ದೇಶನ್ ಟ್ರಾನ್ಸ್ ಸೇರಿದಂತೆ ಐದು ಚಿತ್ರಗಳ ಚಿತ್ರೋತ್ಸವಕ್ಕೆ ಸೆಲೆಕ್ಟ್ ಆಗಿವೆ. ವಿಶೇಷ ಅಂದ್ರೆ ತಮಿಳು ಚಿತ್ರರಂಗದಿಂದ ವೆಟ್ರಿಮಾರನ್ ನಿರ್ದೇಶನ ಹಾಗೂ‌ಧನುಷ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಅಸುರನ್ ಕೂಡ ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಭಾರೀ ಕುತೂಹಲ ಮೂಡಿಸಿದೆ. ಹಾಗೆಯೇ ಗಣೇಶನ್ ವಿನಾಯಕನ್ ಅವರ ಥೈನ್ ಕೂಡ ಸೆಲೆಕ್ಟ್ ಆಗಿದೆ‌.

ಎಲ್ಲವೂ ಈಗ ಒಳ್ಳೆಯ ದಾಗುತ್ತಿದೆ. ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ.

– ಕೃಷ್ಟೇ ಗೌಡ, ಪಿಂಕಿ ಎಲ್ಲಿ ? ಚಿತ್ರದ ನಿರ್ಮಾಪಕ

ಮರಾಠಿ ಹಾಗೂ ಹಿಂದಿ ಚಿತ್ರಗಳು ಪನೋರಮಾ ಚಿತ್ರೋತ್ಸವದಲ್ಲಿ ಹೆಚ್ಚು ಆದ್ಯತೆ ಪಡೆದಿವೆ‌. ಗೋವಿಂದ್ ನಿಹಲಾನಿ ನಿರ್ದೇಶನದ’ ಅಪ್ ಅಪ್ಆ್ಯಂಡ್ ಅಪ್’. ನಾನ್ ಪ್ಯೂಚರ್ ವಿಭಾಗದಲ್ಲಿ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಫಿಲ್ಮ್ ಮೇಕರ್ ಜಾನ್ ಮ್ಯಾಥ್ಯೂ ಮಥನ್ ನೇತೃತ್ವದ 13 ಜನರ ಜ್ಯೂರಿ ಕಮಿಟಿ ಪ್ಯೂಚರ್ ಫಿಲ್ಮ್ ಸೆಲೆಕ್ಟ್ ಕಮಿಟಿಯಲ್ಲಿತ್ತು.

Categories
ಸಿನಿ ಸುದ್ದಿ

ಶಂಭೋ ಶಿವ ಶಂಕರನ ಶೂಟಿಂಗ್‌ ಜೋರು -ನಾಯಕಿ ಸೋನಾಲ್‌ ಎಂಟ್ರಿ ಭರ್ಜರಿ

ಪೊಲೀಸ್‌ ಅಧಿಕಾರಿಯಾಗಿ ಸುಪ್ರೀಂ ಹೀರೋ ಶಶಿಕುಮಾರ್‌ ‌

ನಿಮಗೆ “ಶಂಭೋ ಶಿವ ಶಂಕರ” ಸಿನಿಮಾ ಬಗ್ಗೆ ಗೊತ್ತಿರಬಹುದು. ಇತ್ತೀಚೆಗಷ್ಟೇ ಶುರುವಾದ ಸಿನಿಮಾವಿದು. ಇತ್ತೀಚೆಗಷ್ಟೇ ಈ ಚಿತ್ರದಲ್ಲಿ ಶಶಿಕುಮಾರ್‌ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಈ ಚಿತ್ರದಿಂದ ಮತ್ತೊಂದು ಹೊಸ ಸುದ್ದಿ ಹೊರಬಿದ್ದಿದೆ. ಈ ಚಿತ್ರದ ಚಿತ್ರೀಕರಣ ಬಿರುಸಾಗಿಯೇ ಸಾಗಿದೆ. ಈ ಚಿತ್ರದಲ್ಲಿ ಸೋನಾಲ್‌ ಮಾಂತೆರೋ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿಯ ದೃಶ್ಯವನ್ನು ಅದ್ಧುರಿಯಾಗಿಯೇ ಚಿತ್ರೀಕರಿಸಲಾಗಿದೆ.

ಇತ್ತೀಚೆಗೆ ಅವರ ಪರಿಚಯಿಸುವ ದೃಶ್ಯವನ್ನು ಉತ್ತರಹಳ್ಳಿಯಲ್ಲಿರುವ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ಬಳಿ ಅದ್ಧೂರಿಯಾಗಿಯೇ ಚಿತ್ರೀಕರಿಸಲಾಗಿದೆ. ಈ ದೃಶ್ಯದಲ್ಲಿ ಸೋನಾಲ್‌ ಮಾಂತೆರೊ ಜೊತೆಯಲ್ಲಿ ನಾಯಕರಾದ ಅಭಯ್‌ ಪುನೀತ್‌, ರೋಹಿತ್‌ ಹಾಗೂ ರಕ್ಷಕ್‌ ಸೇರಿದಂತೆ ಇತರರು ಕಾಣಿಸಿಕೊಂಡಿದ್ದಾರೆ. ಅಘನ್ಯ ಪಿಕ್ಚರ್ಸ್ ಬ್ಯಾನರ್‌ನಲ್ಲಿ ವರ್ತೂರ್ ಮಂಜು ಅವರು ನಿರ್ಮಿಸುತ್ತಿರುವ ಚಿತ್ರ ಈಗಾಗಲೇ ಶೇ,೫೦ ರಷ್ಟಯ ಚಿತ್ರೀಕರಣಗೊಂಡಿದೆ. ಇದುವರೆಗೆ ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ನಿರ್ದೇಶಿಸುತ್ತಿದ್ದಾರೆ. ಇವರು ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿದ್ದು, “ಶಂಭೋ ಶಿವ ಶಂಕರ” ಇವರ ಮೊದಲ ಚಿತ್ರ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರೇ ಬರೆದಿದ್ದಾರೆ.

ಗೌಸ್‌ ಪೀರ್ ಹಾಗೂ ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಸಂಗೀತವಿದೆ. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ವೆಂಕಟೇಶ್ ಯುಡಿವಿ ಸಂಕಲನ ಹಾಗೂ ಅಲ್ಟಿಮೆಟ್ ಶಿವು ಅವರ ಸಾಹಸವಿದೆ. ಅಂದಹಾಗೆ, ‘ಶಂಭೋ ಶಿವ ಶಂಕರ’ ಇದು ಮೂವರು ನಾಯಕರ ಹೆಸರಿರುವ ಸಿನಿಮಾ. ಈ ಮೂರು ಹೆಸರಿನ ಪಾತ್ರದಲ್ಲಿ ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಸೂಪರ್‌ ಹೀರೋ ಕಾನ್ಸೆಪ್ಟ್‌ ಚಿತ್ರ ಮುಕ್ತಾಯ – ಆನ ಇದು ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ ಚಿತ್ರ

ವಿಶೇಷ ಪಾತ್ರದಲ್ಲಿ ಅದಿತಿ ಪ್ರಭುದೇವ

ಈಗಾಗಲೇ ಸಾಕಷ್ಟು ಸೂಪರ್ ಹೀರೋ ಕಾನ್ಸೆಪ್ಟ್‌ ಸಿನಿಮಾಗಳು ಬಂದಿವೆ. ಆದರೆ, ಮಹಿಳಾ ಪ್ರಧಾನದ ಸೂಪರ್ ಹೀರೋ ಕಾನ್ಸೆಪ್ಟ್‌ ಚಿತ್ರ ಭಾರತದಲ್ಲಿ ಈವರೆಗೂ ಬಂದಿಲ್ಲ.‌ “ಆನ” ಮೂಲಕ ನಟಿ ಅದಿತಿ ಪ್ರಭುದೇವ ಅವರು ಇಲ್ಲಿ ಮಹಿಳಾ ಸೂಪರ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ಹಿಂದೆ ಅದಿತಿ ಪ್ರಭುದೇವ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ, ಈ ರೀತಿಯ ಪಾತ್ರ ನಿರ್ವಹಿಸಿಲ್ಲ. “ಆನ” ಅವರಿಗೊಂದು ವಿಶೇಷ ಸಿನಿಮಾ ಎನ್ನುವುದಂತೂ ಹೌದು. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಹೆಸರುಫಟ್ಟ ಬಳಿ‌ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಸಲಾಗಿದ್ದು, ಅಲ್ಲೇ‌ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಈಗಷ್ಟೇ ಡಬ್ಬಿಂಗ್‌ ಕೆಲಸ ಕೂಡ ಮುಕ್ತಾಯ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್‌ ವೇಳೆ ಚಿತ್ರವನ್ನು ಪ್ರೇಕ್ಷಕರ ಎದುರು ತರಲು ತಯಾರಿ ನಡೆಸಲಾಗುತ್ತಿದೆ.


ಈ ಚಿತ್ರಕ್ಕೆ ಮನೋಜ್‌ ಪಿ.ನಡುಲಮನೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಹಿಂದೆ ಹಲವು ಕಿರುಚಿತ್ರಗಳು ಹಾಗೂ ಟೆಲಿ ಸಿನಿಮಾ ನಿರ್ದೇಶಿಸಿ ಅನುಭವ ಇರುವ ಮನೋಜ್‌ ಅವರಿಗೆ ಇದು ಮೊದಲ ಸಿನಿಮಾ. ಯು.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂಜಾ ವಸಂತಕುಮಾರ್ ಈ
ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣವಿದೆ. ರಿತ್ವಿಕ್ ಮುರಳೀಧರನ್ ಅವರ ಸಂಗೀತ ನಿರ್ದೇಶನವಿದೆ. ವಿಜೇತ್‌ ಚಂದ್ರ ಸಂಕಲನ ಮಾಡುತ್ತಿದ್ದಾರೆ. ಚಿತ್ರದಲ್ಲಿ. ಸುನೀಲ್ ಪುರಾಣಿಕ್, ಚೇತನ್ ಗಂಧರ್ವ, ಸುನೀಲ್ ಕುಮಾರ್ ಡಿ.ಕೆ, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಂ, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಸೇರಿದಂತೆ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಶರಣ್ ನಟನೆಯ ಹೊಸ ಚಿತ್ರಕ್ಕೆ ಡಿ.21ರಂದು ನಾಮಕರಣ

ಮತ್ತೊಂದು ಸಖತ್ ಸಿನ್ಮಾ ನಿರೀಕ್ಷೆ…

ಈ ಹಿಂದೆ ನಟ ಶರಣ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಶರಣ್ ಅಮ್ಮಂದಿರ ಮಾತಿಗೆ ಶರಣ್ ಉತ್ತರಿಸದೆ, ಬರೀ ವಿಷಲ್ ಹಾಕುವ ಮೂಲಕ ಹೊಸದೊಂದು ಕುತೂಹಲ ಮೂಡಿಸಿದ್ದರು.
ಆಮೇಲೆ ಅದೊಂದು ಹೊಸ ಚಿತ್ರ ಅನ್ನೋದು ಗೊತ್ತಾಗಿತ್ತು.

ಅಂದಹಾಗೆ, ಜಡೇಶ್ ಹಂಪಿ ನಿರ್ದೇಶನದ ಆ ಚಿತ್ರಕ್ಕೆ ಶೀರ್ಷಿಕೆ ಇಟ್ಟಿರಲಿಲ್ಲ. ಈಗ ನಾಮಕರಣ ಮಾಡುವ ಸಂದರ್ಭ ಒದಗಿ ಬಂದಿದೆ.
ಹೌದು, ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ಸೇರಿ ನಿರ್ಮಾಣ ಮಾಡುತ್ತಿರುವ ಆ ಹೊಸ ಚಿತ್ರದ ಟೈಟಲ್ ಡಿಸೆಂಬರ್ 21ರಂದು ಅನಾವರಣಗೊಳ್ಳಲಿದೆ.

ಸದ್ಯಕ್ಕೆ ಶೀರ್ಷಿಕೆ ಅನಾವರಣ ಮಾಡಲಿರುವ ಚಿತ್ರತಂಡ ಹಂತ ಹಂತವಾಗಿ ಆ ಸಿನ್ಮಾದ ತಂತ್ರಜ್ಞರು, ಕಲಾವಿದರಾಹಿತಿ ಹೊರ ಹಾಕಲಿದೆ.

Categories
ಸಿನಿ ಸುದ್ದಿ

ಸಲಾರ್‌ ; ನಟ ಪ್ರಭಾಸ್‌ಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ? ೧೦೦ ಕೋಟಿ ಎನ್ನುತ್ತಿವೆ ಗಾಂಧಿನಗರದ ಮೂಲಗಳು

ಸಲಾರ್‌ಗಾಗಿ ಇಟ್ಟ ಬಜೆಟ್‌ ೫೦೦ ಕೋಟಿ?

ಕನ್ನಡ ಚಿತ್ರರಂಗದಲ್ಲಿ “ಕೆಜಿಎಫ್‌” ಬಹುದೊಡ್ಡ ಬಜೆಟ್‌ನ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತು. ಆ ಸಿನಿಮಾ ದೇಶ, ವಿದೇಶಗಳಲ್ಲೂ ಭಾರೀ ಸದ್ದು ಮಾಡಿತು ಅನ್ನೋದು ಗೊತ್ತು. ಈಗ “ಕೆಜಿಎಫ್‌ ಚಾಪ್ಟರ್‌ ೨” ಕೂಡ ದೊಡ್ಡ ಬಜೆಟ್‌ ಸಿನಿಮಾ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ದೊಡ್ಡ ಬಜೆಟ್‌ ಸಿನಿಮಾ ಅನೌನ್ಸ್‌ ಮಾಡಿದ್ದೂ ಸಹ ದೊಡ್ಡ ಸುದ್ದಿಯಾಗಿದೆ. ಹೌದು, ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅವರಿಗೆ “ಸಲಾರ್‌” ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿತ್ತು. ಆ ಚಿತ್ರಕ್ಕೆ “ಕೆಜಿಎಫ್‌” ಖ್ಯಾತಿಯ ಪ್ರಶಾಂತ್‌ ನೀಲ್‌ ನಿರ್ದೇಶಕ ಎನ್ನುವುದನ್ನೂ ಹೇಳಿತ್ತು. ಈಗ ಜೋರಾಗಿ ಹರಿದಾಡುತ್ತಿರುವ ಸುದ್ದಿ ಅಂದರೆ, “ಸಲಾರ್‌” ಚಿತ್ರದ ನಟನೆಗಾಗಿ ಪ್ರಭಾಸ್‌ ಅವರಿಗೆ ಹೊಂಬಾಳೆ ಫಿಲ್ಮ್ಸ್‌ ಕೊಟ್ಟಿರುವ ಸಂಭಾವನೆ ಕುರಿತು. ಗಾಂಧಿನಗರದ ಮೂಲಗಳ ಪ್ರಕಾರ, ಪ್ರಭಾಸ್‌ ಅವರಿಗೆ ೧೦೦ ಕೋಟಿ ಸಂಭಾವನೆ ಕೊಡಲಾಗುತ್ತಿದೆ ಎಂಬುದು ದೊಡ್ಡ ಸುದ್ದಿ.

ಇನ್ನು, ಈ ಚಿತ್ರವನ್ನು ಸುಮಾರು ೫೦೦ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅದೇನೆ ಇರಲಿ, “ಕೆಜಿಎಫ್‌” ಬಳಿಕ ಹೊಂಬಾಳೆ ಫಿಲ್ಮ್ಸ್‌ ಕೈಗೆತ್ತಿಕೊಂಡ ಅದ್ಧೂರಿ ಸಿನಿಮಾ “ಸಲಾರ್‌”. “ಬಾಹುಬಲಿ” ಖ್ಯಾತಿಯ ಪ್ರಭಾಸ್‌ ಈ ಹಿಂದೆ ಹಿಂದಿಯಲ್ಲಿ “ಸಾಹೋ” ಚಿತ್ರ ಮಾಡಿದ್ದರು. ಆ ಚಿತ್ರಕ್ಕೂ ಅವರಿಗೆ ೧೦೦ ಕೋಟಿ ಸಂಭಾವನೆ ಕೊಡಲಾಗಿತ್ತು ಎಂಬ ಸುದ್ದಿ ಇತ್ತು. ಅದು ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ, ಈಗ ಹೀಗೊಂದು ಸುದ್ದಿ ಗಾಂಧಿನಗರದಲ್ಲೂ ಜೋರಾಗಿ ಹರಿದಾಡುತ್ತಿದೆ. ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್‌ ಶ್ರೀಮುರಳಿ ಅವರಿಗೆ “ಬಘೀರ” ಸಿನಿಮಾವನ್ನು ಅನೌನ್ಸ್‌ ಮಾಡಿದೆ. ಈ ಚಿತ್ರ ಏಪ್ರಿಲ್‌ ವೇಳೆಗೆ ಶುರುವಾಗಬಹುದು.
ಈ ಎಲ್ಲಾ ಬೆಳವಣಿಗೆಗಳ ಸುದ್ದಿ ಕೇಳುತ್ತಿದ್ದರೆ, ಕನ್ನಡ ಚಿತ್ರರಂಗ ಇನ್ನಷ್ಟು ಮಟ್ಟಕ್ಕೆ ಬೆಳವಣಿಗೆಯಲ್ಲಿದೆ ಎಂಬುದು ಗೊತ್ತಾಗುತ್ತದೆ. ಒಂದಂತೂ ಸತ್ಯ, ಹೊಂಬಾಳೆ ಫಿಲ್ಮ್ಸ್‌ ಮಾಡುವ ಚಿತ್ರಗಳಲ್ಲಿ ಅದ್ಧೂರಿತನಕ್ಕೇನೂ ಕೊರತೆ ಇರೋದಿಲ್ಲ.

Categories
ಸಿನಿ ಸುದ್ದಿ

ಮಾರ್ಚ್‌ನಲ್ಲಿ ಸಲಗ ಅಬ್ಬರ, ಸಾಧ್ಯತೆಯ ಸುಳಿವು ಕೊಟ್ಟ ಶ್ರೀಕಾಂತ್


ದುನಿಯಾ ವಿಜಯ್‌ ನಿರ್ದೇಶನದ ಜತೆಗೆ ನಾಯಕರಾಗಿ ಅಭಿನಯಿಸಿರುವ ʼಸಲಗʼ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದೆ. ಕನ್ನಡದ ಸಿನಿಪ್ರೇಕ್ಷಕರ ಪಾಲಿಗೆ ಇದೊಂದು ಬಹುನಿರೀಕ್ಷಿತ ಚಿತ್ರ. ದೊಡ್ಡ ತಾರಾಗಣದ ಜತೆಗೆ ಬಿಗ್‌ ಬಜೆಟ್‌ ಸಿನಿಮಾ. ಹಾಗೆಯೇ ನಟ ದುನಿಯಾ ವಿಜಯ್‌ ನಿರ್ದೇಶನದ ಮೊದಲ ಸಿನಿಮಾ. ಜತೆಗೆ ಒಂದಲ್ಲ ಒಂದು ಕಾರಣಕ್ಕೆ ದಿನ ನಿತ್ಯವೂ ಸುದ್ದಿ ಮಾಡುತ್ತಾ ಬರುತ್ತಿದೆ.

 

ದುನಿಯಾ ವಿಜಯ್‌ ಅಭಿಮಾನಿಗಳಂತೂ ತುದಿಗಾಲಲ್ಲೆ ನಿಂತಿದ್ದಾರೆ. ಅದೆಲ್ಲ ಕಾರಣಕ್ಕೆ ಈ ಸಿನಿಮಾ ಕನ್ನಡದ ಸಿನಿಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ರಿಲೀಸ್‌ ದಿನವನ್ನೆ ಎದುರು ನೋಡುವಂತೆ ಮಾಡಿದೆ.

Mಸದ್ಯಕ್ಕೆ ಈ ಚಿತ್ರದ ರಿಲೀಸ್‌ ದಿನಾಂಕ ಫಿಕ್ಸ್‌ ಅಗಿಲ್ಲ. ಚಿತ್ರ ತಂಡದ ಮೂಲಗಳ ಪ್ರಕಾರ ಫೆಬ್ರವರಿ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎನ್ನುವ ಮಾತುಗಳು ಇವೆ. ಆದರೆ ನಿರ್ಮಾಪಕ ಶ್ರೀಕಾಂತ್‌ ಪ್ರಕಾರ ಸಲಗ ತೆರೆಗೆ ಬರುವುದಕ್ಕೆ ಇನ್ನಷ್ಟು ದಿನ ಕಾಯಲೇ ಬೇಕಿದೆ. ” ಸದ್ಯಕ್ಕೆ ನಾವಿನ್ನು ರಿಲೀಸ್‌ ಬಗ್ಗೆ ಡಿಸೈಡ್‌ ಮಾಡಿಲ್ಲ. ಈಗ ಟೈಮ್‌ ಬೇರೆ ಸರಿಯಿಲ್ಲ. ಚಿತ್ರ ಮಂದಿರಗಳು ಒಪನ್‌ ಆಗಿವೆ, ಹೊಸಬರ ಸಿನಿಮಾ ರಿಲೀಸ್‌ ಅಗುತ್ತಿವೆ ಎನ್ನುವುದು ನಿಜವಾದರೂ, ರಾಜ್ಯದ ಎಷ್ಟೋ ಕಡೆಗಳಲ್ಲಿ ಈಗಲೂ ಚಿತ್ರ ಮಂದಿರಗಳು ಬಾಗಿಲು ತೆಗೆದಿಲ್ಲ. ಇನ್ನೊಂದು ಬಗೆಯಲ್ಲಿ ಚಿತ್ರ ಮಂದಿರಗಳ ವಾಸ್ತವ ಪರಿಸ್ಥಿತಿ ಹೀಗಿದೆ. ಹಾಗಾಗಿ ಯಾವಾಗ ಬಂದರೆ ಸೂಕ್ತ ಎನ್ನುವುದು ನಮಗೂ ಗೊಂದಲವಿದೆʼ ಎನ್ನುತ್ತಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.‌

ಸಲಗ ಮಾತ್ರವಲ್ಲ ಸದ್ಯ ರಿಲೀಸ್ ಗೆ ರೆಡಿಯಿರುವ ಸ್ಟಾರ್ ಸಿನಿಮಾಗಳ ಪರಿಸ್ಥಿತ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲರೂ ವಾತಾವರಣ ಪೂರ್ಣ ಪ್ರಮಾಣದಲ್ಲಿ ತಿಳಿಯಾಗುವುದನ್ನೇ ಕಾಯುತ್ತಿದ್ದಾರೆ. ಕೊರೋನಾ ಆತಂಕ ದೂರವಾಗಬೇಕು, ಆ ಮೂಲಕ ರಾಜ್ಯದ ಉದ್ದಗಲಕ್ಕೂ ಚಿತ್ರಮಂದಿರಗಳು ಒಪನ್‌ ಅಗಬೇಕು, ಆಗಲೇ ಚಿತ್ರ ರಿಲೀಸ್‌ ಆದರೆ ಸೂಕ್ತ ಅಂತ ಎಲ್ಲರೂ ಕಾಯುತ್ತಿದ್ದಾರೆ. ಸಲಗ ಕೂಡ ಅದೇ ಹಾದಿಯಲ್ಲಿದೆ.

Categories
ಸಿನಿ ಸುದ್ದಿ

ಬ್ಯಾಕ್ ಗ್ರೌಂಡ್ ಡಾನ್ಸರ್ ಈಗ ಹೀರೋ, ಕುದುರೆ ಮೇಲೆ ಬರುತ್ತಿದ್ದಾನೆ ಮೈಸೂರು ಹುಡುಗ

ಚರಿತ್‌ ಎನ್ನುವ ತನ್ನದೇ ಹೆಸರಿನ ಚಿತ್ರಕ್ಕೆ ಆತನೇ ನಾಯಕ

 

ಈತ ಮೈಸೂರು ಹುಡುಗ. ಹೆಸರು ಚರಿತ್. ಬೆಳ್ಳಿತೆರೆಗೆ ಈಗ ಹೀರೋ ಆಗಿ ಎಂಟ್ರಿ ಆಗುತ್ತಿದ್ದಾರೆ. ಅತ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಚೊಚ್ಚಲ ಚಿತ್ರದ ಫಸ್ಟ್‌ ಲುಕ್‌ ನಾಳೆ ರಿವೀಲ್‌ ಆಗುತ್ತಿದೆ. ಮೈಸೂರು ಹುಡುಗ ಅಲ್ಬಾ, ಆ ಪ್ರೀತಿಯ ಕಾರಣಕ್ಕೆ ಮಜಾ ಟಾಕೀಸ್ ಖ್ಯಾತಿಯ ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್‌, ಚರಿತ್‌ ಅಭಿನಯದ ಚೊಚ್ಚಲ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಲಾಂಚ್‌ ಮಾಡುವ ಮೂಲಕ ಆತನನ್ನು ಸಿನಿಮಾ ಜಗತ್ತಿಗೆ ಹೀರೋ ಆಗಿ ಪರಿಚಯಿಸುತ್ತಿದ್ದಾರೆ. ಆ ಮೂಲಕ ಕನ್ನಡದ ಅನೇಕ ಸ್ಟಾರ್‌ ಗಳ ಹಾಗೆ ಅರಮನೆ ನಗರಿಯ ಮತ್ತೊಬ್ಬ ಚೆಲುವ ಹೀರೋ ಆಗಿ ಸ್ಯಾಂಡಲ್‌ವುಡ್‌ ಗೆ ಎಂಟ್ರಿಯಾಗುತ್ತಿರುವುದು ವಿಶೇಷ.

ಏಳು ವರ್ಷದ ಅನುಭವಿ ಈ ಚರಿತ್

ಚರಿತ್‌ ಮೈಸೂರು ಹುಡುಗ ಅಂದ್ಮೇಲೆ ಹೆಚ್ಚೇನು ಹೇಳಬೇಕಿಲ್ಲ. ಯಾಕಂದ್ರೆ ಮೈಸೂರಿಗೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ನಂಟು. ಲೋಕೇಶ್‌, ಅಶ್ವತ್ಥ್‌, ಅಂಬರೀಶ್‌, ವಿಷ್ಣುವರ್ಧನ್‌ ಸೇರಿದಂತೆ ಕನ್ನಡ ಚಿತ್ರ ರಂಗ ಪ್ರಜ್ಬಲಿಸುವಂತೆ ಮಾಡಿದ ಘಟಾನುಘಟಿ ಕಲಾವಿದರೆಲ್ಲ ಮೈಸೂರಿನವರೆ. ಅಷ್ಟೇ ಯಾಕೆ, ಈಗಲೂ ಸ್ಯಾಂಡಲವುಡ್‌ ನಲ್ಲಿ ಸ್ಟಾರ್‌ ಆಗಿ ಮಿಂಚುತ್ತಿರುವವರಲ್ಲಿ ಮೈಸೂರಿನವರದ್ದೇ ಸಿಂಹಪಾಲು. ಅಲ್ಲಿನ ಮಣ್ಣಿವ ಗುಣ ಅದು. ಅದೇ ನಂಟಿನ ಪ್ರಭಾವದೊಂದಿಗೆ ಹೀರೋ ಆಗಲೇಬೇಕೆಂದು ಸಿನಿಮಾ ಜಗತ್ತಿಗೆ ಬಂದಿರುವ ಯುವ ಪ್ರತಿಭೆ ಚರಿತ್‌ ಗೆ ಯಾವುದೇ ಹಿನ್ನೆಲೆ ಇಲ್ಲ. ಅವರದೊಂದು ಕೃಷಿ ಕುಟುಂಬ. ಅಪ್ಪ-ಅಮ್ಮ ಕೃಷಿಕರು. ಒಂದಷ್ಟು ಜಮೀನಿದೆ. ಅದೇ ಅವರ ಜೀವನೋಪಾಯದ ಮೂಲ. ಅದರೂ ಹೀರೋ ಅಗುವ ಕನಸು ಹೊತ್ತು ಬೆಂಗಳೂರಿಗೆ ಬಂದ ಈ ಸಿಕ್ಸ್‌ ಪ್ಯಾಕ್‌ ಹುಡುಗನಿಗೆ ಏಳು ವರ್ಷದ ಸಿನಿ ದುನಿಯಾದ ಜತೆಗಿನ ನಂಟಿದೆ. ಹಾಗೆಯೇ ಹೀರೋ ಆಗಲೇಬೇಕೆಂದು ಅಷ್ಟು ವರ್ಷಗಳಲ್ಲಿಒಂದಷ್ಟು ನಟನೆಗೆ ಪೂರಕವಾದ ತರಬೇತಿ ಪಡೆದಿದ್ದಾನೆನ್ನುವುದು ಪ್ಲಾಸ್‌ ಪಾಯಿಂಟ್.

ಹೀರೋ ಆಗುತ್ತಿರುವುದು ಸುಮ್ನೆ ಅಲ್ಲ..

ಅದೇ ಅನುಭವದ ಮೂಲಕ ಚಿಕ್ಕಂದಿನ ತಮ್ಮ ಕನಸು ನನಸಾಗಿಸಿಕೊಳ್ಳುತ್ತಿರುವ ಚರಿತ್‌, ಮೂಲಕ ” ಸಿನಿಲಹರಿ” ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುವುದು ಹೀಗೆ; ʼ ನಂದು ಮೈಸೂರು. ರೈತ ಕುಟುಂಬದಿಂದ ಬಂದವನು. ಅಪ್ಪ -ಅಮ್ಮ ಇಬ್ಬರು ಕೃಷಿಕರು. ಆದರೂ ನಂಗೆ ಬಾಲ್ಯದಿಂದಲೂ ಹೀರೋ ಆಗ್ಬೇಕೆನ್ನುವ ಹುಚ್ಚು. ಅದ್ಯಾಕೆ ಬಂತೋ ಗೊತ್ತಿಲ್ಲ. ಬಹುಶ:, ಮೈಸೂರಿನ ಮಣ್ಣಿನ ಗುಣವೂ ಇರಬಹುದು. ಅದೇ ಕಾರಣಕ್ಕೆ ಓದು ಒಂದು ಹಂತಕ್ಕೆ ಮುಗಿದ ನಂತರ ಹೀರೋ ಆಗುವ ಕನಸು ಹೊತ್ತು ಬೆಂಗಳೂರಿಗೆ ಬಂದೆ. ಆದರೆ ಹೀರೋ ಆಗ್ಬೇಕು ಅನ್ನೋದು ಕನಸು ಕಂಡಷ್ಟು ಸುಲಭ ಅಲ್ಲ ಅನ್ನೋದು ಇಲ್ಲಿಗೆ ಬಂದ್ಮೇಲೆ ಗೊತ್ತಾಯಿತು. ಅದಕ್ಕೂ ಒಂದಷ್ಟು ಸಿದ್ಧತೆ ಬೇಕು, ಶ್ರದ್ಧೆ ಇರಬೇಕು ಅಂತ ಇಲ್ಲಿ ಪರಿಚಯವಾದವರು ಹೇಳಿದರು. ಅಲ್ಲಿಂದ ನನ್ನ ಕೆಲಸ ಶುರುವಾಯಿತು. ಇಲ್ಲಿಗೆ ಬಂದ ಆರಂಭದಲ್ಲೆ ಹೆಸರಾಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಶಾಲೆಯಲ್ಲಿ ಆಕ್ಟಿಂಗ್‌ ಟ್ರೈನಿಂಗ್‌ ಮುಗಿಸಿದೆ. ಮುಂದೇನು ಅಂತ ಯೋಚಿಸುತ್ತಿದ್ದಾಗ ಒಂದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದೆ. ಅದರ ಜತೆಗೆ ನಂಗೆ ಡಾನ್ಸ್‌ ಗೊತ್ತಿದ್ರಿಂದ ೧೫ ಕ್ಕೂ ಹೆಚ್ಚು ಚಿತ್ರಗಳಲ್ಲಿ ಬ್ಯಾಕ್‌ ಗ್ರೌಂಡ್‌ ಡಾನ್ಸರ್‌ ಆಗಿ ಕೆಲಸ ಮಾಡಿದೆ. ಅಲ್ಲಿ ಸಂಪಾದಿಸಿಕೊಂಡ ಹಣದಲ್ಲಿ ಜಿಮ್ ಗೆ ಹೋಗಿ ವರ್ಕೌಟ್‌ ಮಾಡಿದೆ. ಇಷ್ಟಾಗಿಯೂ ನಂಗೆ ನಿತ್ಯ ಕಾಡುತ್ತಿದ್ದದ್ದು ಒಂದೇ ಹೀರೋ ಆಗಬೇಕೆನ್ನುವ ಕನಸು. ಹೇಗಾದ್ರೂ ಮಾಡಿ, ಅದನ್ನು ನನಸಾಗಿಸಿಕೊಳ್ಳಬೇಕೆನ್ನುವ ನನ್ನ ಹಣಾಹಣಿ ಪ್ರಯತ್ನದಲ್ಲಿ ಫೈನಲಿ ಈಗ ಶುರುವಾಗುತ್ತಿರುವುದು ಚರಿತ್‌ ಎನ್ನುವ ಹೊಸ ಸಾಹಸ !

ಚರಿತ್’ ಗೆ ಗೆಳೆಯರು ಕೊಟ್ಟರು ಸಾಥ್

ಇದು ಚರಿತ್‌ ಮಾತು. ಸಿನಿಮಾ ಎಂಬುದು ಮಾಯೆ. ಅದು ಬೆನ್ನು ಬಿದ್ದರೆ ಅದನ್ನು ಟಚ್‌ ಮಾಡುವ ತನಕ ನೆಮ್ಮದಿಯಿಂದ ಇರುವುದಕ್ಕೆ ಬಿಡುವುದಿಲ್ಲ. ಚರಿತ್‌ ಕೂಡ ಹಾಗೆಯೇ ಅದರ ಬೆನ್ನು ಬಿದ್ದವರು. ಫೈನಲಿ ಈಗ ಹೀರೋ ಆಗುತ್ತಿದ್ದಾರೆ. ಗೆಳೆಯರ ಜತೆ ಸೇರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಕೃಷ್ಣ ಎನ್ನುವವರು ಇದರ ನಿರ್ದೇಶಕರು. ಈ ಹಿಂದೆ ಇವರು ʼಅಥರ್ವʼ ಹೆಸರಿನ ಚಿತ್ರಕ್ಕೆ ಅಯಕ್ಷನ್‌ ಕಟ್‌ ಹೇಳಿದ್ದರು. ಹಾಗೆಯೇ ಮೂಲಕ ಕೃಷಿಕರಾದ ಭರತ್‌ ಎನ್ನುವವರು ಚಿತ್ರದ ನಿರ್ಮಾಪಕರು. ಅವರಿಗೆ ಒಂದಷ್ಟು ಗೆಳೆಯರು ಕೂಡ ಸಾಥ್‌ ನೀಡಿದ್ದಾರಂತೆ. ಇನ್ನು ತನ್ವಿಕ್‌ ಎನ್ನುವವರು ಚಿತ್ರದ ಛಾಯಾಗ್ರಾಹಕ.

ಮೂರು ವರ್ಷಗಳ ಭರ್ಜರಿ ಟ್ರೈನಿಂಗ್

ಇದು ೨೦೧೫ರಲ್ಲೇ ಶುರುವಾದ ಪ್ರಾಜೆಕ್ಟ್.‌ ತಡವಾಗಿ ಶುರುವಾಗುತ್ತಿದೆ. ಅದಕ್ಕೆ ಕಾರಣ ಸಿನಿಮಾದ ಸಿದ್ಧತೆ. ʼ ಬೆಸಿಕಲಿ ಇದು ಹಾರ್ಸ್‌ ರೈಡಿಂಗ್‌ ಜತೆಗೆ ಸ್ಫೋರ್ಟ್‌ ಬೆಸ್‌ ಸಿನಿಮಾ. ಅದಕ್ಕೆ ಸಾಕಷ್ಟು ಸಿದ್ದತೆ ಬೇಕಿತ್ತು. ಮೊದಲು ಹಾರ್ಸ್‌ ರೈಡಿಂಗ್.‌ ಒಂದೂವರೆ ವರ್ಷ ಅದನ್ನು ಕಲಿತುಕೊಂಡೆ. ಆಮೇಲೆ ಡಾನ್ಸ್‌ ಟ್ರೈನಿಂಗ್‌ ಮಾಡಿದೆ. ಆಮೇಲೆ ಮತ್ತೆ ಬಾಡಿ ಬಿಲ್ಡಿಂಗ್‌ ಮಾಡ್ಬೇಕು ಅಂದ್ರು, ಅದನ್ನು ಕಲಿತುಕೊಳ್ಳುವುದಕ್ಕೆ ಒಂದಷ್ಟು ಸಮಯ ಬೇಕಾಯಿತು. ಫೈನಲಿ ಎಲ್ಲಾ ಮುಗಿಸಿಕೊಂಡು ಈಗ ಸಿನಿಮಾ ಶುರು ಮಾಡುತ್ತಿದ್ದೇವೆʼ ಎನ್ನುತ್ತಾ ಒಂದೆಡೆ ಹೀರೋ ಆಗುತ್ತಿರುವ ಬಗೆಗಿನ ಖುಷಿ, ಮತ್ತೊಂದೆಡೆ ಅದಕ್ಕಾಗಿ ಪಟ್ಟ ಪರಿಶ್ರಮ ನೆನಪಿಸಿಕೊಂಡು ನಗು ಹಾಗೂ ಆತಂಕ ಹೊರ ಹಾಕಿದರು ಚರಿತ್.‌ ಸದ್ಯಕ್ಕೆ ಸಿನಿಮಾಕ್ಕೆ ಹೀರೋ ಮಾತ್ರ ಫಿಕ್ಸ್‌ ಅಗಿದ್ದಾರೆ. ಹೀರೋ ಯಿನ್‌ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಬಾಕಿಯಿದೆಂತೆ. ನಾಳೆ ಚಿತ್ರದ ಅಧಿಕೃತ ಪೋಸ್ಟರ್‌ ಲಾಂಚ್‌ ಆಗುವ ಮೂಲಕ ಶೂಟಿಂಗ್‌ ಸೇರಿದಂತೆ ಉಳಿದ ಕೆಲಸಗಳಿಗೆ ಪ್ಲಾನ್‌ ರೆಡಿಯಾಗಲಿದೆಂತೆ. ಆದಷ್ಟು ಬೇಗ ಸಿನಿಮಾ ಶುರುವಾಗಲಿ, ಚರಿತ್‌ ಸಕ್ಸಸ್‌ ನಟ ಆಗಲಿ ಎನ್ನುವುದು ‘ಸಿನಿಲಹರಿ ‘ಹಾರೈಕೆ.

Categories
ಸಿನಿ ಸುದ್ದಿ

ಮದಗಜ ಘರ್ಜನೆಗೆ ಭರಪೂರ ಮೆಚ್ಚುಗೆ – ಒಂದೇ ದಿನದಲ್ಲಿ 30 ಲಕ್ಷ ಜನರ ವೀಕ್ಷಣೆ

 

ಇದು ದಾಖಲೆಗಳ ದರ್ಬಾರ್‌

– ಈಗ ಎಲ್ಲೆಡೆ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ್ದೇ ಸುದ್ದಿ. ಅದಕ್ಕೆ ಕಾರಣ, ಅವರ ಹುಟ್ಟು ಹಬ್ಬಕ್ಕೆ ಬಿಡುಗಡೆಯಾದ ಸಖತ್ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಇನ್ನು, ಕೇವಲ 24 ಗಂಟೆಯಲ್ಲಿ 30 ಲಕ್ಷ (ಮೂರು ಮಿಲಿಯನ್) ಜನರಿಂದ ರಿಯಲ್‌ ಟೈಮ್‌ನಲ್ಲಿ ವೀಕ್ಷಣೆ ಪಡೆದು, ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. ಸಹಜವಾಗಿಯೇ ಈ ಬೆಳವಣಿಗೆ ಚಿತ್ರತಂಡಕ್ಕೆ ಖುಷಿ ತಂದಿದೆ. ೨೪ ಗಂಟೆಯಲ್ಲೆ ವೇಗವಾಗಿ ಅತೀ ಹೆಚ್ಚು ವೀಕ್ಷಣೆ ಕಂಡಿರುವ ಕನ್ನಡದ ಮೊದಲ ಫಸ್ಟ್‌ ಲುಕ್‌ ಟೀಸರ್‌ ಎಂಬ ಹೆಗ್ಗಳಿಕೆಗೂ ಈ ಚಿತ್ರದ ಟೀಸರ್‌ ಪಾತ್ರವಾಗಿದೆ.

ನ್ನು, “ಉಗ್ರಂ” , “ಕೆಜಿಎಫ್‌” ಖ್ಯಾತಿಯ ಪ್ರಶಾಂತ್‌ ನೀಲ್‌ ಅವರು ಚಿತ್ರದ ಟೀಸರ್‌ ಬಿಡುಗಡೆ ಮಾಡಿ, ಶುಭಹಾರೈಸಿದ್ದರು. ಶ್ರೀಮುರಳಿ ಅಭಿನಯದ “ಮದಗಜ” ಚಿತ್ರಕ್ಕೆ ಮಹೇಶ್‌ ಕುಮಾರ್‌ ನಿರ್ದೇಶಕರು. ಉಮಾಪತಿ ನಿರ್ಮಾಣವಿದೆ. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ.


ಶ್ರೀಮುರಳಿ ಅವರ ಹುಟ್ಟುಹಬ್ಬದ ದಿನ ಈ ಟೀಸರ್‌ ಬಿಡುಗಡೆಯಾದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಕೂಡ ಶ್ರೀಮುರಳಿ ಅವರಿಗೆ ಹೊಸ ಚಿತ್ರವನ್ನು ಅನೌನ್ಸ್‌ ಮಾಡಿದೆ. “ಬಘೀರ” ಸಿನಿಮಾ ಅನೌನ್ಸ್‌ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಕಾಣಿಕೆ ನೀಡಿದೆ. ಈ ಚಿತ್ರಕ್ಕೆ ಡಾ.ಸೂರಿ ನಿರ್ದೇಶಕರು. ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಬಜೆಟ್‌ನ ಸಿನಿಮಾ ಆಗಿದ್ದು, ಈಗಾಗಲೇ ಬಿಡುಗಡೆ ಮಾಡಿರುವ “ಬಘೀರ” ಪೋಸ್ಟರ್‌ ಕೂಡ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಒಂದಷ್ಟ ಕುತೂಹಲವೂ ಇದೆ.

 

 

error: Content is protected !!