ಸಿನಿಮಾ ರಂಗಕ್ಕೆ ಎಂಟ್ರಿಯಾಗುವ ಬಹುತೇಕ ಹೊಸ ಪ್ರತಿಭೆಗಳು ಕಿರುಚಿತ್ರವೋ ಅಥವಾ ಆಲ್ಬಂ ಸಾಂಗ್ ಮೂಲಕವೋ ಎಂಟ್ರಿಯಾಗುತ್ತಿರುವುದು ಹೊಸದೇನಲ್ಲ. ಆ ಸಾಲಿಗೆ ಇಲ್ಲೊಂದು ಹೊಸತರ ತಂಡ ಒಂದು ಆಲ್ಬಂ ಸಾಂಗ್ನೊಂದಿಗೆ ಸದ್ದು ಮಾಡುತ್ತಿದೆ. ಹೌದು, “ನಿನದೇ ನೆನಪು” ಶೀರ್ಷಿಕೆಯ ಆಲ್ಬಂ ಸಾಂಗ್ವೊಂದು ಈಗ ಎಲ್ಲೆಡೆ ಜೋರು ಸುದ್ದಿಯಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದರದ್ದೇ ಸುದ್ದಿ.
ಗೀತ ಸಾಹಿತಿ ಗೌಸ್ಪೀರ್ ಅವರು ಬರೆದ “ಹೃದಯಕ್ಕೆ ಹೃದಯವೇ ಕಡು ವೈರಿ” ಎಂದು ಶುರುವಾಗುವ ಗೀತೆ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿದೆ. ಈ ಹಾಡಿನ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್ನಲ್ಲಿ ನಡೆದಿದೆ. ಸರವಣ್ ಮತ್ತು ಪ್ರತಿಮಾ ಈ ಆಲ್ಬಂ ಸಾಂಗ್ನಲ್ಲಿ ಅಭಿನಯಿಸಿದ್ದಾರೆ.
ಸರವಣ್ ಈಗಾಗಲೇ ಸಬ್ ವೇ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಆ ಸಿನಿಮಾ ರಿಲೀಸ್ಗೆ ರೆಡಿಯಾಗುತ್ತಿದೆ. “ಟಿಕ್ ಟಾಕ್” ಮೂಲಕ ಮನೆ ಮಾತಾಗಿರುವ ಪ್ರತಿಮಾ ಈಗಾಗಲೇ ಕೆಲವು ಆಲ್ಬಂಗಳಲ್ಲಿ ನಟಿಸಿದ್ದಾರೆ. ಈ ಆಲ್ಬಂ ನಿರ್ಮಾಣ ಮಾಡಿರೋದು ಆಂಜಿ ಬಾಬು. ಅವರಿಗೆ ಬೆಂಬಲವಾಗಿ ನಿಂತವರು ಫೈಯಿಂಗ್ ಕಿಂಗ್ ಮಂಜು. ಈ ಮೊದಲು ಮಯೂರ್ ಪಟೇಲ್ ಅಭಿನಯದ ರಾಜೀವ ಚಿತ್ರವನ್ನೂ ಮಂಜು ನಿರ್ದೇಶಿಸಿದ್ದಾರೆ.
ಈ ಹಾಡನ್ನು ಎಂ. ವೈ. ಕೃಷ್ಣ ನಿರ್ದೇಶಿಸಿದ್ದಾರೆ. ವಾಸುಕಿ ವೈಭವ್ ಹಾಡಿರುವ ಹಾಡಿಗೆ ರೋಹಿತ್ ಸೊವಾರ್ ಸಂಗೀತವಿದೆ. ಕಾರ್ತಿಕ್ ಛಾಯಾಗ್ರಹಣ ಮಾಡಿದ್ದಾರೆ. ಚಾಣಕ್ಯ ಫಿಲಂಸ್ ಮೂಲಕ ಈ ಅಲ್ಬಂ ನಿರ್ಮಾಣಗೊಂಡಿದೆ. ನರೇಂದ್ರ ಬಾಬು, ನಿರ್ಮಾಪಕ ಸಯ್ಯದ್ ಸಲಾಂ, ರಮೇಶ್ ಹೊಸಬರ ಈ ಹಾಡಿಗೆ ಶುಭ ಹಾರೈಸಿದ್ದಾರೆ.
ಸಿನಿಮಾನೆ ಹಾಗೆ. ಇಲ್ಲಿ ಕನಸು ಕಾಣೋ ಮಂದಿಯೇ ಹೆಚ್ಚು. ಅದರಲ್ಲೂ ಇಲ್ಲಿ ಕನಸು ಕಂಡವರಿಗೆಲ್ಲಾ ಅದು ನನಸಾಗುತ್ತೆ ಅಂತ ಹೇಳುವುದಕ್ಕೂ ಆಗೋದಿಲ್ಲ. ಎಲ್ಲೋ ಒಂದಷ್ಟು ಅದೃಷ್ಟವಂತರಿಗೆ ಮಾತ್ರ ಅಂಥದ್ದೊಂದು ಲಕ್ ಸಿಗುತ್ತೆ. ಈಗ ಅಂಥದ್ದೊಂದು ಲಕ್ಗೆ ಸಿದ್ದರಾಜು ಕಾಳೇನಹಳ್ಳಿ ಕಾರಣರಾಗಿದ್ದಾರೆ. ಹೌದು, ಸರಿ ಸುಮಾರು ಎರಡು ದಶಕಗಳಿಂದಲೂ ಕ್ಯಾಬ್ ಚಾಲಕರಾಗಿರುವ ಸಿದ್ದರಾಜು ಅವರಿಗೆ ತಮ್ಮ ಅನುಭವಗಳನ್ನೇ ಆಧರಿಸಿ ಚಿತ್ರ ನಿರ್ಮಾಣ ಮಾಡಬೇಕೆಂಬ ಹಂಬಲವಿತ್ತು. ಆದರೆ, ಹಣವಿರಲಿಲ್ಲ. ಕ್ಯಾವ್ನಲ್ಲಿ ಪಯಣಿಸುತ್ತಿದ್ದ, ಜ್ಞಾನೇಶ್ ಅವರ ಬಳಿ ಸಿದ್ದರಾಜು ಈ ವಿಷಯ ಹೇಳಿದಾಗ, ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸುವ ಮನಸ್ಸು ಮಾಡಿದ್ದಾರೆ ಜ್ಞಾನೇಶ್. ನಂತರ ಇಬ್ಬರು ಸೇರಿ ಕೆ.ಹೆಚ್.ಎಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ.
ತಮ್ಮ ಕನಸ್ಸನ್ನೇ ನನಸು ಮಾಡಿಕೊಳ್ಳಲು ಹೆಣಗಾಡುತ್ತಿರುವವರ ನಡುವೆ ಮತ್ತೊಬ್ಬನ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಜ್ಞಾನೇಶ್. ಒಬ್ಬ ಕ್ಯಾಬ್ ಡ್ರೈವರ್ ಅನ್ನು ಡೈರೆಕ್ಟರ್ ಮಾಡಲು ಹೋಗಿ ಪ್ಯಾಸೆಂಜರ್ ಒಬ್ಬರು ಪ್ರೊಡ್ಯೂಸರ್ ಆಗಿದ್ದಾರೆ. ಇನ್ನು, ಬಾಲ್ಯದಲ್ಲೇ ತಂದೆತಾಯಿ ಕಳೆದುಕೊಂಡ ಮಕ್ಕಳು ವಿದ್ಯಾಭ್ಯಾಸ ಹಾಗೂ ತಮ್ಮ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬ ಕಥಾವಸ್ತು ಚಿತ್ರದ ಹೈಲೈಟ್. ಸದ್ಯ ಚಿತ್ರೀಕರಣ ಪೂರ್ಣಗೊಂಡು, ಬಿಡುಗಡೆಗೆ ರೆಡಿಯಾಗಿದೆ.
ಹುಲಿಯೂರುದುರ್ಗ, ಮಾಗಡಿ ತಾವರೆಕೆರೆ, ಬೆಂಗಳೂರು ನಗರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಿದ್ದರಾಜು ಕಾಳೇನಹಳ್ಳಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಗೇಶ್ ಉಜ್ಜನಿ ಸಹ ನಿರ್ದೇಶನವಿದೆ. ಮಲ್ಲಿಕಾರ್ಜುನ್ ಎಮ್ ಎನ್, ಸೋಮಣ್ಣ ಅವರ ಸಹಾಯಕ ನಿರ್ದೇಶನವಿದೆ. ಅಮ್ಮನಿಂದ ದೂರವಾದ ಒಂದು ಬಡ ವರ್ಗದ ಹುಡುಗನ ಶೈಕ್ಷಣಿಕ ಹಾದಿ, ಅಮ್ಮ ಮಗನ ನಡುವಿನ ಬಾಂಧವ್ಯ ಇರುವ ಹಾಗೂ ಸಮಾಜಕ್ಕೆ ಶಿಕ್ಶಣದ ಮಹತ್ವದ ಅರಿವು ಮೂಡಿಸುವ ಕುರಿತಾದ ಈ ಚಿತ್ರದಲ್ಲಿ ಪಕ್ಕಾ ಫ್ಯಾಮಿಲಿ, ಫ್ರೆಂಡ್ಷಿಪ್, ಸೆಂಟಿಮೆಂಟ್ ಹಾಗೂ ಕಾಮಿಡಿಯಂತಹ ಎಲ್ಲಾ ಮನರಂಜನಾತ್ಮಕ ಅಂಶಗಳಿವೆ.
ಈ ಚಿತ್ರಕ್ಕೆ ಎ.ಟಿ.ರವೀಶ್ ಅವರ ಸಂಗೀತವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ನಾಗೇಶ್ ಉಜ್ಜನಿ, ಜ್ಞಾನೇಶ ಎಂ.ಬಿ, ಶೈಲಜಾ ಎಸ್.ರಾವ್ ಸಾಹಿತ್ಯವಿದೆ. ಸರಿಗಮಪ ವಿನ್ನರ್ ಸುನಿಲ್, ಮೆಹಬೂಬ್ ಸಾಬ್, ಕನ್ನಡ ಕೋಗಿಲೆ ತನುಷ್ ರಾಜ್ ಹಾಡಿದ್ದಾರೆ. ಮಲ್ಲ, ಕೋದಂಡರಾಮ ಚಿತ್ರದ ಸಂಜೀವ್ ರೆಡ್ಡಿ ಅವರ ಸಂಕಲನವಿದ್ದು, ರಮೇಶ್ ಹಾಗೂ ನರಸಿಂಹ ಅವರ ಛಾಯಾಗ್ರಹಣವಿದೆ. ಲಯನ್ ಗಂಗರಾಜು ಅವರ ಸಾಹಸ, ಸ್ಟಾರ್ ನಾಗಿ, ಸುರೇಶ್ ಅವರ ನೃತ್ಯ ನಿರ್ದೇಶನವಿದೆ.
ಈ ಚಿತ್ರದಲ್ಲಿ ಬಾಲನಟರಾಗಿ ತನುಷರಾಜ್, ಕಾನಿಷ್ಕ ರವಿ ದೇಸಾಯಿ, ಅಮೋಘ ಕೃಷ್ಣ, ಮಧುಸೂಧನ್, ಬೇಬಿ ಅಂಕಿತ ಜಯರಾಮ್, ಬೇಬಿಶ್ರೀ, ಜೀವನ್, ಚೇತನ್, ನವನೀತ್, ಬಾ ನಾ ರವಿ, ಚಂದ್ರಪ್ರಭಾ, ಗೋವಿಂದೇಗೌಡ, ವಿನೋದ್ ಆನಂದ್, ಮೋನಿಕ, ಶ್ರೀದೇವಿ ಮಂಜುನಾಥ, ರಾಜೇಶ್, ನವೀನ್ ರಾಜ್, ಗಂಗರಾಜು ನಾಗಶ್ರೀ, ಗುರು, ರಾಜು, ಅಂಧರಾದ ಬಸವರಾಜ್, ಪ್ರತಾಪ್ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಕರ್ನಾಟಕ ಜನಸೇವಾ ಟ್ರಸ್ಟಿನ ಪ್ರಶಾಂತ್ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. ಗೋ ಸಂರಕ್ಷಕರಾದ ಮಹೇಂದ್ರ ಮುನ್ನೋತ್ ಶಿಕ್ಷಣ ಸಚಿವರಾಗಿ ನಟಿಸಿದ್ದಾರೆ.
ಆಕಾಶದಲ್ಲಿ ಹಲವಾರು ನಕ್ಷತ್ರಗಳಿರಬಹುದು, ಆದರೆ ಒಂದೇ ಒಂದು ನಕ್ಷತ್ರ ಹೆಚ್ಚಾಗಿ ಮಿಂಚುತ್ತಿರುತ್ತದೆ, ಆ ನಕ್ಷತ್ರವೇ ರಾಜ್ಕುಮಾರ್..
-ರಾಜ್ ಕುಮಾರ್ ಅವರನ್ನು ಹೀಗೆ ವರ್ಣನೆ ಮಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಡಾ. ರಾಜ್ ಕುಮಾರ್ ಅಕಾಡೆಮಿಯಿಂದ ರೂಪಿಸಿದ ಡಾ.ರಾಜ್ಕುಮಾರ್ ಲರ್ನಿಂಗ್ ಆಪ್ ಬಿಡುಗಡೆ ಮಾಡಿ ಮಾತನಾಡಿದರು.
ಡಾ.ರಾಜ್ಕುಮಾರ್ ಅಂದರೆ ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ.ರಾಜ್ಕುಮಾರ್ ಅವರೊಬ್ಬರೆ ಮಾತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.21 ನೇ ಶತಮಾನ ಜ್ಞಾನವಂತರಿಗೆ ಸೇರಿದ್ದು. ಜ್ಞಾನಕ್ಕೆ ಬೆಲೆ ಹಾಗೂ ಬಲ ಬಂದಿದೆ. ಜ್ಞಾನದ ಕ್ಷೇತ್ರಕ್ಕೆ ಡಾ.ರಾಜ್ಕುಮಾರ್ ಅವರ ಆಪ್ ದೊಡ್ಡ ಕೊಡುಗೆ ನೀಡಿದೆ. ಮಕ್ಕಳಿಗೆ ತರ್ಕ ಬದ್ಧವಾಗಿ ಚಿಂತನೆ ಮಾಡಲು ಪ್ರೇರೇಪಿಸಬೇಕು. ಆಗ ಸಹಜವಾಗಿ ಅವರ ಸ್ಮೃತಿ ಪಟಲದಲ್ಲಿ ಉಳಿಯುತ್ತದೆ ಎಂದರು.
ಆಪ್ ಗಳ ಮೂಲಕ ಜಗತ್ತನ್ನು ತಲುಪಲು ಸಾಧ್ಯ. ನೂತನ ಶಿಕ್ಷಣ ನೀತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದು, ಈ ಆಪ್ ಶಿಕ್ಷಣ ನೀತಿಗೆ ಉಪಯುಕ್ತವಾಗಲಿದೆ. ಭಾರತದಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ತಿಳಿಸಿದರು.ಡಾ.ರಾಜ್ಕುಮಾರ್ ಅಂದರೆ ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ.ರಾಜ್ಕುಮಾರ್. ಅವರ ಸರಳತೆ, ನಡೆ, ನುಡಿ , ಮೌಲ್ಯಗಳನ್ನು ವಿಶೇಷವಾಗಿ ಅಧಿಕಾರಿಗಳು, ಜನಪ್ರಿಯ ವ್ಯಕ್ತಿಗಳು ಕಲಿಯಬೇಕು ಎಂದರು. ಈಗಷ್ಟೇ ಹುಟ್ಟಿರುವ ಮಗುವಿನ ಮುಗ್ಧತೆ ಅವರಲ್ಲಿತ್ತು ಎಂದು ಹೇಳಿದರು.
ಮಗುವಿನಲ್ಲಿರುವ ಕುತೂಹಲಕ್ಕೆ ಜ್ಞಾನ, ಅರ್ಥವನ್ನು ಕೊಡಬೇಕು. ಡಾ.ರಾಜ್ಕುಮಾರ್ ನಿರಂತರ ವಿದ್ಯಾರ್ಥಿಯಾಗಿದ್ದರೂ, ಮುಗ್ಧತೆ ಸದಾಕಾಲ ಇರುತ್ತಿತ್ತು ಎಂದರು. ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಯುವ ನಿರ್ದೇಶಕ ಗಂಗಾಧರ್ ಸಾಲಿಮಠ್, ಒಂದಷ್ಟು ಗ್ಯಾಪ್ ಬಳಿಕ ಸಿನಿ ದುನಿಯಾಕ್ಕೆ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿ ನಟ ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರ ಕಾಂಬಿನೇಷನ್ ಮೂಲಕ ತಮ್ಮ ನಿರ್ದೇಶನದ ಕೈ ಚಳಕ ತೋರಿಸಲು ಹೊರಟಿದ್ದಾರೆ. ಕನ್ನಡದಲ್ಲಿಯೇ ಕೊಂಚ ಹೊಸತೆನಿಸುವ ಟೆಕ್ನೋ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಗಂಗಾಧರ್ ಸಾಲಿಮಠ್, ಇದರಲ್ಲಿ ನಟ ವಿಜಯ್ರಾಘವೇಂದ್ರ ಅವರನ್ನು ಹೈ ಪ್ರೊಫೈಲ್ ಸೈಕಾಲಜಿಸ್ಟ್ ಆಗಿ ತೆರೆ ಮೇಲೆ ತೋರಿಸುವ ತವಕದಲ್ಲಿದ್ದಾರೆ. ಸದ್ಯಕ್ಕೆ ಈ ಚಿತ್ರಕ್ಕಿನ್ನು ಟೈಟಲ್ ಫೈನಲ್ ಆಗಿಲ್ಲ. ಹಾಗೆಯೇ ತಂತ್ರಜ್ಜರ ಜತೆಗೆ ಕಲಾವಿದರ ಆಯ್ಕೆ ಕೂಡ ಬಾಕಿ ಇದೆ. ಮೊದಲ ಹಂತದಲ್ಲಿ ಚಿತ್ರದ ನಾಯಕ ನಟ ವಿಜಯ್ ರಾಘವೇಂದ್ರ ಅವರ ಕಾಲ್ ಶೀಟ್ ಫೈನಲ್ ಆಗಿದೆ.
ಉಳಿದಂತೆ ಅಕ್ಟೋಬರ್ ಮೊದಲ ವಾರದೊಳಗೆ ಎಲ್ಲವನ್ನು ಫೈನಲ್ ಮಾಡಿಕೊಂಡು ಶೂಟಿಂಗ್ ಹೊರಡುವ ಫ್ಲಾನ್ನಲ್ಲಿದ್ದಾರೆ ನಿರ್ದೇಶಕ ಗಂಗಾಧರ್ ಸಾಲಿಮಠ್. ಇನ್ನು ಈ ಗಂಗಾಧರ್ ಸಾಲಿಮಠ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ʼಅಯನʼ ಚಿತ್ರ. ವೃತ್ತಿಯಲ್ಲಿ ಅವರು ಸಾಫ್ಟ್ ವೇರ್ ಇಂಜಿನಿಯರ್. ಸಿನಿಮಾ ಮೇಲಿನ ವ್ಯಾಮೋಹಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಗೆಳೆಯರ ಜತೆಗೆ ಸೇರಿಕೊಂಡು ʼಅಯನʼ ಹೆಸರಿನ ಚಿತ್ರವೊಂದನ್ನು ತೆರೆಗೆ ತಂದಿದ್ದರು. ಇದರ ನಿರ್ದೇಶಕರು ಗಂಗಾಧರ್ ಸಾಲಿಮಠ್.
ಡೆಬ್ಯೂ ಸಿನಿಮಾ. ಅಲ್ಲೊಂದು ಕುತೂಹಲಕಾರಿ ಕಥೆ ಇತ್ತು. ನಿರೂಪಣೆ ಕೂಡ ಚೆಂದವಾಗಿತ್ತು. ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತು. ಆದರೆ ಆ ಹೊತ್ತಿಗಿದ್ದ ಸ್ಟಾರ್ ಸಿನಿಮಾಗಳ ಅಬ್ಬರದಲ್ಲಿ ʼಅಯನʼದಂತಹ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರನ್ನು ತಲುಪು ವುದೇ ದುಸ್ತರ ಆಯಿತು. ಆದರೆ ಆಗ ಬಂದ ಹೊಸಬರ ಸಿನಿಮಾಗಳಲ್ಲಿ ʼಅಯನʼ ಒಂದಷ್ಟು ಸದ್ದು ಮಾಡಿದ್ದು ಹೌದು. ಆ ವರ್ಷ ಚೊಚ್ಚಲ ನಿರ್ದೇಶಕರ ಸಿನಿಮಾ ವಿಭಾಗದಲ್ಲಿ ಇದಕ್ಕೆ ರಾಜ್ಯ ಪ್ರಶಸ್ತಿಯೂ ಬಂತು. ಅಲ್ಲಿಂ ದ ಒಂದಷ್ಟು ಗ್ಯಾಪ್ ಮೂಲಕ ಗಂಗಾಧರ್ ಸಾಲಿಮಠ್ ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಮತ್ತೆ ಸಸ್ಪೆನ್ಸ್, ಥ್ರಿಲ್ಲರ್ ಕಥೆಯೊಂದಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಸಮಕಾಲೀನ ತಂತ್ರಜ್ಣಾನಕ್ಕೆ ಪೂಕರವಾದ ಸಬ್ಜೆಕ್ಟ್ ವೊಂದನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ಹೊರಟಿರುವುದು ಈಗ ವಿಶೇಷ.
ʼ ಈಗಿನ ಪ್ರೇಕ್ಷಕರಿಗೆ ತುಂಬಾ ಅಪ್ಡೇಟ್ ಆಗಿರುವಂತಹ ಕಥೆಯನ್ನೇ ಹೇಳ್ಬೇಕು, ಆಗ ಮಾತ್ರ ಆವರಿಗಿದು ಹೊಸತೆನಿಸುತ್ತದೆ. ಅದೇ ದೃಷ್ಟಿ ಯಲ್ಲಿ ನಾನೀಗ ಟೆಕ್ನೋ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವರ್ಚುವಲ್ ನಲ್ಲಿನ ಒಂದು ಗೇಮ್ಗೆ ಅಡಿಕ್ಟ್ ಆದ ಮಕ್ಕಳ ಮನಸಲ್ಲಿ ಅದು ಹೇಗೆಲ್ಲ ಪರಿಣಾಮ ಬೀರುತ್ತದೆ, ಅದರಿಂದ ಹೊರ ಬರಬೇಕಾದರೆ ಎಷ್ಟೇಲ್ಲ ಕೌನ್ಸಿಲಿಂಗ್ ಬೇಕಾಗುತ್ತದೆ ಎನ್ನುವ ಎಲ್ಲರಿಗೂ ಗೊತ್ತಿರುವಂತಹ ಸಂಗತಿಗಳನ್ನೇ ತೆರೆ ಮೇಲೆ ತೋರಿಸಲು ಹೊರಟಿದ್ದೇನೆ. ಅದೇ ಸಿನಿಮಾದ ವಿಶೇಷ ಎನ್ನುತ್ತಾರೆ ನಿರ್ದೇಶಕ ಗಂಗಾಧರ್ ಸಾಲಿಮಠ್.
ಗಂಗಾಧರ್ ಸಾಲಿಮಠ್ ಈಗ ಆಕ್ಷನ್ ಕಟ್ ಹೇಳಲು ಹೊರಟಿರುವ ಕಥೆ ಐದು ಪ್ರಮುಖ ಪಾತ್ರಗಳಿವೆಯಂತೆ. ಅದರಲ್ಲಿ ಚಿತ್ರದ ನಾಯಕನ ಪಾತ್ರ ವೂ ಒಂದು. ಅದು ಒಬ್ಬ ಹೈ ಪ್ರೊಫೈಲ್ ಸೈಕಾಲಜಿಸ್ಟ್. ಆ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ ನಟ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ. ಉಳಿದ ನಾಲ್ಕು ಪಾತ್ರಗಳಲ್ಲಿ ಒಬ್ಬ ಬಾಲಕನ ಪಾತ್ರಕ್ಕೆ ಅಷ್ಟೇ ಆದ್ಯತೆ ಇದೆ. ಆ ಪಾತ್ರಕ್ಕೆ ತಕ್ಕಂತೆ ಒಬ್ಬ ಚೈಲ್ಡ್ ಆರ್ಟಿಸ್ಟ್ ಹುಡುಕಾಟ ನಡೆದಿದೆ. ಅದರಾಚೆ ಮೂರು ಸ್ತ್ರೀ ಪಾತ್ರಗಳಿದ್ದು, ಅದಕ್ಕೆ ಹುಡುಕಾಟ ನಡೆಸಿದ್ದಾ ರಂತೆ ನಿರ್ದೇಶಕ ಗಂಗಾಧರ್ ಸಾಲಿಮಠ್. ಇನ್ನು ಈ ಚಿತ್ರಕ್ಕೆ ಮುಂಬೈ ನಲ್ಲಿ ನೆಲೆಸಿರುವ ಧಾರವಾಡ ಮೂಲದ ಆನಂದ್ ಮುಗುದ್ ಬಂಡವಾ ಳ ಹೂಡುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಅವರೇ ಕಥೆ ಬರೆದಿದ್ದು. ಅದಕ್ಕೆ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ಗಂಗಾಧರ್ ಸಾಲಿಮಠ್. ಬಸವರಾಜ್ ಇದರ ಕಾರ್ಯಕಾರಿ ನಿರ್ಮಾಪಕ.
ಒಬ್ಬರು ಕರುನಾಡ ಚಕ್ರವರ್ತಿ ಇನ್ನೊಬ್ಬರು ಅಭಿನಯ ಚಕ್ರವರ್ತಿ. ಗಂಧದಗುಡಿಯ ಈ ಇಬ್ಬರು ಚಕ್ರವರ್ತಿಗಳು ಮಂಗಳವಾರ ಬೆಳಗ್ಗೆ ೮ ಗಂಟೆ ಸುಮಾರಿಗೆ ಐಷರಾಮಿ ಹೋಟೆಲ್ನಲ್ಲಿ ಕ್ಯಾಮೆರಾಗೆ ಸೆರೆ ಸಿಕ್ಕರು. ಇಬ್ಬರು ಚಕ್ರವರ್ತಿಗಳನ್ನು ಒಂದೇ ಫ್ರೇಮ್ನಲ್ಲಿ ನೋಡಿ ಅವರಿಬ್ಬರ ಫ್ಯಾನ್ಸ್ ಮಾತ್ರವಲ್ಲ ಕ್ಯಾಮೆರಾ ಕೂಡ ಖುಷಿಪಡ್ತು. ಈ ಖುಷಿ ಹಾಗೂ ಸಂಭ್ರಮಕ್ಕೆ ಕಾರಣವಾಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ `ನೀ ಸಿಗೋವರೆಗೂ’ ಸಿನಿಮಾ.
ಸೆಂಚುರಿಸ್ಟಾರ್ ಅಭಿನಯದ ೧೨೪ನೇ ಚಿತ್ರವಾದ `ನೀ ಸಿಗೋವರೆಗೂ’ ಸಿನಿಮಾ ಮುಹೂರ್ತ ನೆರವೇರಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಫಸ್ಟ್ ಕ್ಲ್ಯಾಪ್ ಮಾಡಿ ಶಿವಣ್ಣನ ನಯಾ ಚಿತ್ರಕ್ಕೆ ಸುದೀಪ್ ಶುಭ ಕೋರಿದರು 124 ಸಿನಿಮಾ ಮಾಡೋದು ತಮಾಷೆಯ ಮಾತಲ್ಲ ಇಂಡಸ್ಟ್ರಿಗೆ ಬಂದು 35 ವರ್ಷದಲ್ಲಿ 124 ಸಿನಿಮಾ ಮಾಡಿ ಮುನ್ನುಗುತ್ತಿದ್ದಾರೆ ಅಂದರೆ, ಸಿನಿಮಾ ಮೇಲೆ ಅವರಿಗಿರುವ ಪ್ರೀತಿ-ಭಕ್ತಿ ಹಾಗೂ ಶ್ರದ್ದೆಯನ್ನು ತೋರಿಸುತ್ತೆ ಎಂದರು. ತಮ್ಮ ಕರಿಯರ್ ಆರಂಭದ ದಿನಗಳನ್ನು ಮೆಲುಕು ಹಾಕಿದ ಕಿಚ್ಚ, ನನ್ನ ಬಹುತೇಕ ಸಿನಿಮಾಗಳಿಗೆ ಶಿವಣ್ಣ ಫಸ್ಟ್ ಕ್ಲಾಪ್ ಮಾಡಿ ತುಂಬು ಹೃದಯದಿಂದ ಹಾರೈಸಿದ್ದಾರೆ ಹೀಗಾಗಿ ನನ್ನ ಸಿನಿ ಜರ್ನಿಯಲ್ಲಿ ಕರುನಾಡ ಚಕ್ರವರ್ತಿಯ ಪಾತ್ರ ಬಹಳಷ್ಟಿದೆ ಎಂದರು. ಶಿವಣ್ಣನಿಗೋಸ್ಕರ ಡೈರೆಕ್ಟರ್ಸ್ ಈಗಲೂ ಲವ್ಸ್ಟೋರಿ ಕಥೆಗಳನ್ನು ರಚಿಸುತ್ತಾರೆ ಆದರೆ ನಮಗ್ಯಾಕೆ ಲವ್ಸ್ಟೋರಿ ಕಾನ್ಸೆಪ್ಟ್ ಗಳನ್ನು ನಿರ್ದೇಶಕರು ಮಾಡ್ತಿಲ್ಲವೋ ಏನೋ? ನನಗೆ ಈ ವಿಚಾರದಲ್ಲಿ ಬೇಸರ ಇದೆ ಅಂತ ಮೀಸೆ ಮರೆಯಲ್ಲಿ ನಗುತ್ತಾ ಕಿಚ್ಚ ಹಾಸ್ಯ ಚಟಾಕಿ ಹಾರಿಸಿದರು.
ಸ್ಯಾಂಡಲ್ವುಡ್ನ ಚಿರ ಯುವಕ ಶಿವಣ್ಣ ೫೯ರಲ್ಲೂ ಯಂಗ್ ಅಂಡ್ ಎನರ್ಜಿಟಿಕ್. ಇವತ್ತಿನ ಹೀರೋಗಳಿಗೆ ಸೆಡ್ಡು ಹೊಡೆಯುವ ಹ್ಯಾಟ್ರಿಕ್ ಹೀರೋ ಮತ್ತೆ ಲವ್ವರ್ ಬಾಯ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. 124ನೇ ಚಿತ್ರ `ನೀ ಸಿಗೋವರೆಗೂ’ ಮೂವೀಯಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಮೆರೆಯಲಿದ್ದು ಟಿಟೌನ್ ಬ್ಯೂಟಿ ಮೆಹ್ರೀನ್ ಫಿರ್ಜಾದಾ ಸೆಂಚುರಿ ಸ್ಟಾರ್ಗೆ ಜೋಡಿಯಾಗ್ತಿದ್ದಾರೆ. ಸ್ಯಾಂಡಲ್ವುಡ್ಗೆ ಲಗ್ಗೆ ಇಡ್ಬೇಕು, ಕನ್ನಡದಲ್ಲೊಂದು ಸಿನಿಮಾ ಮಾಡ್ಬೇಕು ಅಂತ ಕನಸು ಕಂಡಿದ್ದ ಮೆಹ್ರೀನ್ಗೆ, ದೊಡ್ಮನೆ ಸೂಪರ್ಸ್ಟಾರ್ ಜೊತೆ ಅಭಿನಯಿಸೋ ಚಾನ್ಸ್ ಸಿಕ್ಕಿದೆ. ಹೀಗಾಗಿ ಮೆಹ್ರೀನ್ ಫುಲ್ ಎಕ್ಸೈಟ್ ಆಗಿದ್ದಾರೆ. ಡೆಬ್ಯೂ ಚಿತ್ರದ ಬಗ್ಗೆ ನೂರೆಂಟು ಕನಸು ಕಂಡಿದ್ದಾರೆ.
ಕರುನಾಡ ಚಕ್ರವರ್ತಿಗೆ ಇದೇ ಮೊದಲ ಭಾರಿಗೆ ರವಿ ಧುಲಿಪುಡಿ ಆಕ್ಷನ್ ಕಟ್ ಹೇಳ್ತಿದ್ದಾರೆ. ರವಿ ಧುಲಿಪುಡಿ ತೆಲುಗು ಮೂಲದವರಾಗಿದ್ದು ಶಿವಣ್ಣನನ್ನ 124ನೇ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ತೋರ್ಸೋಕೆ ಮುಂದಾಗಿದ್ದಾರೆ. ನವೀರಾದ ಪ್ರೇಮಕಥೆ ಇದಾಗಿದ್ದು ಸ್ವತಃ ಸೆಂಚುರಿಸ್ಟಾರ್ ಕೂಡ ಕೊಂಚ ಎಕ್ಸೈಟ್ ಆಗಿದ್ದಾರೆ. ಆನಂದ್ ಸಿನಿಮಾ ನೋಡಿ ಫ್ಯಾನ್ ಆಗಿರುವ ನಾರಾಲ ಶ್ರೀನಿವಾಸ್ ರೆಡ್ಡಿ ಅವರು ಇದೀಗ `ನೀ ಸಿಗೋವರೆಗೂ’ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದಾರೆ. ಇವರ ಜೊತೆಗೆ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ, ಕುಡುಪುಡಿ ವಿಜಯ್ ಕುಮಾರ್ ಕೈ ಜೋಡಿಸ್ತಿದ್ದಾರೆ. ಅದ್ದೂರಿಯಾಗಿಯೇ ಸಿನಿಮಾ ಮಾಡ್ಬೇಕು ಎನ್ನುವ ಕನಸೊತ್ತಿದ್ದಾರೆ. ಶಿವಣ್ಣ-ಮೆಹ್ರೀನ್ ಜೊತೆಗೆ ನಾಸರ್, ಸಂಪತ್, ಮಂಗ್ಲಿ, ಸಾಧುಕೋಕಿಲ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಮಹೇಂದ್ರ ಸಿಂಹ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದ್ದು, ಚರಣ್ ರಾಜ್ ಮ್ಯೂಸಿಕ್ ಬಾರಿಸಲಿದ್ದಾರೆ.
ಸಂಡೇ ಹೊರತುಪಡಿಸಿ ವರ್ಷದ ೩೬೫ ದಿನವೂ ಬ್ಯುಸಿ ಇರಬೇಕು ಇದು ಹ್ಯಾಟ್ರಿಕ್ ಹೀರೋ ಶಿವಣ್ಣನ ಪಾಲಸಿ. ಅದರಂತೇ ಸದಾ ಸಿನಿಮಾ ಕೆಲಸದಲ್ಲೇ ತೊಡಗಿಸಿಕೊಳ್ತಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ತಾರೆ. ಸದ್ಯ, ಬಹುನಿರೀಕ್ಷಿತ ಭಜರಂಗಿ-೨ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಭೈರಾಗಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಮಧ್ಯೆ ೧೨೪ನೇ ಚಿತ್ರ ಸೆಟ್ಟೇರಿದೆ. ೧೨೫, ೧೨೬, ೧೨೭, ೧೨೮, ೧೨೯ನೇ ಸಿನಿಮಾಗಳು ಶಿವಣ್ಣನ ಅಕೌಂಟ್ನಲ್ಲಿ ನಾನು ಫಸ್ಟ್.. ನಾನು ಫಸ್ಟ್.. ಅಂತ ಕುಣಿಯುತ್ತಿವೆ. ಯಾವಾಗ ಯಾವ ಸಿನಿಮಾ ಕೈಗೆತ್ತಿಕೊಳ್ತಾರೋ ಕಾದುನೋಡಬೇಕಿದೆ. ಒಟ್ನಲ್ಲಿ ಸೆಂಚುರಿಸ್ಟಾರ್ ಮೋಸ್ಟ್ ಬ್ಯುಸಿಯೆಸ್ಟ್ ಆಕ್ಟರ್ ಅನ್ನೋದಂತೂ ದಿಟ.
ನಾಯಕಿ ಆಯ್ಕೆ ಬಗ್ಗೆ ನಾನು ಟೀಮ್ ಜೊತೆ ಚರ್ಚೆ ಮಾಡಲ್ಲ. ನಾಯಕಿಯಾಗಿ ಯಾರೇ ಇದ್ದರೂ ಅಭ್ಯಂತರ ಇಲ್ಲ. ಒಂದು ಕಂಡೀಷನ್ ಅಂದರೆ, ನಾನು ಹೇಳುವ ಡೈಲಾಗ್ ಎದುರು ನಿಲ್ಲೋ ನನ್ನ ಕೋಸ್ಟಾರ್ ನಾಯಕಿಗೆ ಅರ್ಥ ಆಗ್ಬೇಕು ಅಷ್ಟೇ. ಧ್ರುವ ಅವರ ಈ ಮಾತನ್ನು ಎರಡು ರೀತಿ ಅರ್ಥೈಸಿಕೊಳ್ಳಬಹುದು. ಕನ್ನಡತಿ ನಾಯಕಿಯಾಗಬೇಕು ಎನ್ನುವುದು ಮೊದಲ ಅರ್ಥವಾದರೆ, ಕನ್ನಡ ಭಾಷೆ ಬರುವ ಯಾವುದೇ ನಾಯಕಿ ತನಗೆ ಕೋಸ್ಟಾರ್ ಆಗಬಹುದು ಎನ್ನುವುದು ಮತ್ತೊಂದು ಅರ್ಥ ನೀಡುತ್ತೆ
ಮಾಯಲೋಕದಲ್ಲಿ ಮೆರೆಯುತ್ತಿರುವ ಹಾಗೂ ಸೋಷಿಯಲ್ ಲೋಕವನ್ನು ಕಳೆದ ಎರಡು ದಿನಗಳಿಂದ ಆಳುತ್ತಿರುವ ಏಕೈಕ ಹೆಸರು ಮಾರ್ಟಿನ್'. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈವೋಲ್ಟೇಜ್ ಸಿನಿಮಾ ಇದು. ಬಹದ್ದೂರ್ ಗಂಡು ನಟನೆಯ ಐದನೇ ಚಿತ್ರ. ಅದ್ಧೂರಿ ಕಾಂಬೋ ಮತ್ತೆ ಒಂದಾಗಿರುವ ಮಹಾ ಮೂವೀ. ಒಂಭತ್ತು ವರ್ಷಗಳ ನಂತರ ಮತ್ತೆ ಜೊತೆಯಾಗಿ ಸೆನ್ಸೇಷನ್ ಸೃಷ್ಟಿಸಿರುವ ಜೋಡಿಯಮಾರ್ಟಿನ್’ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಫಸ್ಟ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಇದರ ಬೆನ್ನಲ್ಲೇ ಮಾರ್ಟಿನ್ ಹೊಸ ದಾಖಲೆ ಬರೆದಿದೆ. ಸೋಷಿಯಲ್ ಲೋಕದಲ್ಲಿ ಫಸ್ಟ್ ಲುಕ್ ಹಾಗೂ ಟೀಸರ್ ಧೂಳೆಬ್ಬಿಸುತ್ತಿದೆ. ಕೇವಲ ೨೪ ಗಂಟೆಯಲ್ಲಿ ೮೦ ಲಕ್ಷ ಮಂದಿ ಟೀಸರ್ನ ಕಣ್ತುಂಬಿಕೊಂಡಿದ್ದಾರೆ. ಇದೆಲ್ಲದರ ನಡುವೆ `ಮಾರ್ಟಿನ್’ ನಾಯಕಿ ಯಾರಾಗ್ತಾರೆ ಎನ್ನುವ ಕೂತೂಹಲ ಫಸ್ಟ್ ಲುಕ್ ಹಾಗೂ ಟೀಸರ್ನ ಬೀಟ್ ಮಾಡಿ ಮುನ್ನುಗುತ್ತಿದೆ. ಇದೇ ಹೊತ್ತಲ್ಲೇ ಎಂಥಾ ನಾಯಕಿ ಬೇಕು ಅನ್ನೋದನ್ನ ಆಕ್ಷನ್ಪ್ರಿನ್ಸ್ ಖಾಸಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಮಾರ್ಟಿನ್ ನಾಯಕಿ ಯಾರು?
ಸ್ಟಾರ್ ಸಿನಿಮಾಗಳು ಸೆಟ್ಟೇರುವ ಹೊತ್ತಲ್ಲಿ ಫ್ಯಾನ್ಸ್ ಗೆ ಹಾಗೂ ಗಾಂಧಿನಗರದ ಮಂದಿಗೆ ಟೈಟಲ್ ಮೇಲೆ ಎಷ್ಟು ಕೂತೂಹಲ ಇರುತ್ತೋ ಅಷ್ಟೇ ಕ್ಯೂರಿಯಾಸಿಟಿ ಚಿತ್ರದ ನಾಯಕಿ ಮೇಲೆಯೂ ಇರುತ್ತೆ. ಚಿತ್ರತಂಡ ಟೈಟಲ್ ಅನೌನ್ಸ್ ಮಾಡಿ, ಫಸ್ಟ್ ಲುಕ್-ಮೋಷನ್ ಪೋಸ್ಟರ್-ಟೀಸರ್ ಅಂತ ಎಲ್ಲಾ ರಿವೀಲ್ ಮಾಡಿದ್ರೂ ಕೂಡ ಹೀರೋಯಿನ್ ಮೇಲಿರುವ ಕೂತೂಹಲದ ವ್ಯಾಮೋಹ ಮಾತ್ರ ಕಮ್ಮಿಯಾಗೋದಿಲ್ಲ. ಸದ್ಯಕ್ಕೆ, `ಮಾರ್ಟಿನ್’ ಹೀರೋಯಿನ್ ಯಾರು ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ. ಆ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಹದಿನೈದು ದಿನ ಟೈಮ್ ಬೇಕು ಯಾಕಂದ್ರೆ ಇನ್ನೂ ಫೈನಲೈಸ್ ಮಾಡಿಲ್ಲ ಅಂತ ನಿರ್ದೇಶಕ ಎ.ಪಿ ಅರ್ಜುನ್ ಹೇಳಿದ್ದಾರೆ. ಇತ್ತ ಧ್ರುವ ಸರ್ಜಾ ತನ್ನ ಪಕ್ಕದಲ್ಲಿ ನಿಲ್ಲುವ ನಾಯಕನಟಿ ಹೇಗಿರಬೇಕು ಎನ್ನುವುದನ್ನು ಮುಕ್ತವಾಗಿ ಹೇಳಿದ್ದಾರೆ.
ನನ್ನ ಡೈಲಾಗ್ ಅವರಿಗೆ ಅರ್ಥ ಆಗ್ಬೇಕಷ್ಟೇ!
ಆಕ್ಷನ್ಪ್ರಿನ್ಸ್ ಧ್ರುವ ಸರ್ಜಾ ಜೊತೆ ಇಲ್ಲಿಯವರೆಗೆ ಒಟ್ಟು ಐದು ಜನ ನಾಯಕಿಯರು ಸ್ಕ್ರೀನ್ ಶೇರ್ ಮಾಡಿದ್ದಾರೆ. ಬಹದ್ದೂರ್ ಗಂಡಿಗೆ ಜೊತೆಯಾದ ಮೊದಲ ನಾಯಕಿ ರಾಧಿಕಾ ಪಂಡಿತ್. ಅದ್ದೂರಿ ಚಿತ್ರದಲ್ಲಿ ಧ್ರುವ-ರಾಧಿಕಾ ಕೆಮಿಸ್ಟ್ರಿ ವರ್ಕ್ ಆಗಿದ್ದೇ ಬಂತು ಬಹದ್ದೂರ್ ಚಿತ್ರಕ್ಕೆ ಮತ್ತೆ ಜೋಡಿ ಮಾಡಿದರು. ಇವರಿಬ್ಬರು ಜೊತೆಯಾಗಿ ಮೆರವಣಿಗೆ ಹೊರಟ ಎರಡು ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆದ್ವು. ಮುಂದೆ ಡಿಂಪಲ್ಕ್ವೀನ್-ಹರಿಪ್ರಿಯಾ-ವೈಶಾಲಿ ದೀಪಕ್ ಸೇರಿದಂತೆ ಮೂವರು ಸುಂದರಿಯರ ಜೊತೆ ಡ್ಯುಯೆಟ್ ಹಾಡಿ ಭರ್ಜರಿ' ಚಿತ್ರದಲ್ಲಿ ಹ್ಯಾಟ್ರಿಕ್ ಬಾರಿಸಿದರು. ಕಿರಿಕ್ ಕ್ವೀನ್ ಜೊತೆಯಾಗಿಪೊಗರು’ ತೋರಿಸಿದರು. ಇದೀಗ ಮಾರ್ಟಿನ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾದಲ್ಲಿ ಹವಾ ಎಬ್ಬಿಸೋಕೆ ಧ್ರುವ ಹೊರಟು ನಿಂತಿದ್ದಾರೆ.ನಾಯಕಿಯ ಆಯ್ಕೆ ಬಗ್ಗೆ ನಾನು ಟೀಮ್ ಜೊತೆ ಯಾವತ್ತೂ ಚರ್ಚೆ ಮಾಡುವುದಿಲ್ಲ. ನಾಯಕಿಯಾಗಿ ಅವರು ಯಾರನ್ನೂ ಕೊಟ್ಟರೂ ನನಗೆ ಅಭ್ಯಂತರ ಇಲ್ಲ ನಾನು ಆಕ್ಟ್ ಮಾಡ್ತೀನಿ. ನಂದು ಒಂದೇ ಒಂದು ಕಂಡೀಷನ್ ಅಂದರೆ ನಾನು ಹೇಳುವ ಮಾತು ಹಾಗೂ ಡೈಲಾಗ್ ಎದುರುಗಡೆ ನಿಲ್ಲುವ ನನ್ನ ಕೋಸ್ಟಾರ್ ನಾಯಕಿಗೆ ಅರ್ಥ ಆಗ್ಬೇಕು ಅಷ್ಟೇ.
ಪರಭಾಷೆ ಸುಂದರಿಯರು ಬರಬಹುದೇನೋ?
ಧ್ರುವ ಸರ್ಜಾರ ಈ ಮಾತನ್ನು ಎರಡು ರೀತಿಯಾಗಿ ಅರ್ಥೈಸಿಕೊಳ್ಳಬಹುದು. ಅಪ್ಪಟ ಕನ್ನಡತಿ ನಾಯಕಿಯಾಗಬೇಕು ಎನ್ನುವುದು ಮೊದಲ ಅರ್ಥವಾದರೆ, ಕನ್ನಡ ಭಾಷೆ ಬರುವ ಯಾವುದೇ ನಾಯಕಿ ತನಗೆ ಕೋಸ್ಟಾರ್ ಆಗಬಹುದು ಎನ್ನುವುದು ಮತ್ತೊಂದು ಅರ್ಥ ನೀಡುತ್ತೆ. ಅಂದ್ಹಾಗೇ, ಇಲ್ಲಿಯವರೆಗೆ ಬಹದ್ದೂರ್ ಬೆಂಕಿಚೆಂಡಿಗೆ ನಾಯಕಿಯಾಗಿರುವುದು ಅಪ್ಪಟ ಕನ್ನಡತಿಯರೇ ಕನ್ನಡದ ಮಣ್ಣಿನವರೇ. ಹೀಗಾಗಿ, ಐದನೇ ಸಿನಿಮಾಗೂ ಕನ್ನಡದ ನಟಿಯೇ ಆಗ್ತಾರೆನ್ನುವ ನಿರ್ಧಾರಕ್ಕೆ ಬರುವುದಾದರೂ? ಮಾರ್ಟಿನ್' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಿರ್ಮಾಣಗೊಳ್ಳುತ್ತಿರುವುದರಿಂದ ಪರಭಾಷೆಯ ಕೋಟಿ ಸುಂದರಿಯರುಮಾರ್ಟಿನ್’ ಅಡ್ಡಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಬಹುದು. ಆಕ್ಷನ್ಪ್ರಿನ್ಸ್ ಪಕ್ಕದಲ್ಲಿ ನಿಂತರೂ ನಿಲ್ಲಬಹುದು.. ಜೋಗಿ ಪ್ರೇಮ್ ಏಮಿಜಾಕ್ಸನ್ಗೆ ಕನ್ನಡ ಹೇಳಿಕೊಟ್ಟ ಹಾಗೇ ಕನ್ನಡ ಹೇಳಿಕೊಟ್ಟು ಆಕ್ಟ್ ಮಾಡಿಸುವ ಸಂದರ್ಭ ಎ.ಪಿ ಅರ್ಜುನ್ ಸರ್ಗೆ ಬಂದರೂ ಬರಬಹುದು. ಸಾರಥಿಯ ಮಾತಿಗೆ ಆಕ್ಷನ್ಪ್ರಿನ್ಸ್ ಸೈ ಎನ್ನಬೇಕಾದ ಸಿಚ್ಯೂಯೇಷನ್ ಕ್ರಿಯೇಟ್ ಆಗಬಹುದು.
ಇಷ್ಟೆಲ್ಲಾ ಅಂತೆ-ಕಂತೆ ನಡುವೆ ಒಂದು ಸಿನಿಮಾಗೆ ನಾಯಕಿಯ ಆಯ್ಕೆ ಹೇಗೆ ನಡೆಯುತ್ತೆ? ಅದರಲ್ಲೂ ಸ್ಟಾರ್ ಹೀರೋಗಳ ಚಿತ್ರಕ್ಕೆ ಹೀರೋಯಿನ್ ಸೆಲೆಕ್ಷನ್ ಹೇಗೆ ಮಾಡುತ್ತಾರೆ? ನಾಯಕಿಯರನ್ನು ಫೈನಲ್ ಮಾಡೋದು ನಿರ್ದೇಶಕರಾ? ನಟರಾ? ನಿರ್ಮಾಪಕರಾ? ಅಥವಾ ಸಿನಿಮಾದ ಕಥೆ ಬಯಸಿದಂತೆ ನಟಿಯರನ್ನು ಆಯ್ಕೆ ಮಾಡ್ತಾರಾ? ಈ ಎಲ್ಲಾ ಪ್ರಶ್ನೆಗೆ ಒಂದೇ ಸಾಲಿನಲ್ಲಿ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಯಾಕಂದ್ರೆ, ಒಂದೊಂದು ಸಿನಿಮಾಗೆ ಒಂದೊಂದು ರೀತಿಯ ಸೆಲೆಕ್ಷನ್ ಪ್ಯಾಟ್ರನ್ ಇರುತ್ತೆ. ಹೀರೋ ಕಾಲ್ಶೀಟ್ ಸಿಕ್ಕಮೇಲೆ ನಿರ್ದೇಶಕರು ಕಥೆ ಬರೆಯೋದ್ರಿಂದ ಸ್ಕ್ರಿಪ್ಟ್ ನಿರ್ದಿಷ್ಠ ನಾಯಕಿಯರನ್ನ ಕೇಳೋದಿಲ್ಲ ಎನ್ನುವ ಮಾತು ಚಾಲ್ತಿಯಲ್ಲಿದೆ.
ಇದರ ಜೊತೆಗೆ ಏನಪ್ಪಾ ಅಂದರೆ, ಅನ್ನದಾತರು ಗಟ್ಟಿ ಗುಂಡಿಗೆಯವರಾದರೆ ಹೀರೋ ಹೈಟ್ಗೆ-ಪರ್ಸನಾಲಿಟಿಗೆ-ಇಮೇಜ್ಗೆ ತಕ್ಕಂತೆ ಕೋಟಿ ಕೋಟಿ ಸುರಿದು ಬೇಡಿಕೆಯ ನಟಿಯರನ್ನೇ ಹೀರೋ ಪಕ್ಕದಲ್ಲಿ ನಿಲ್ಲಿಸುತ್ತಾರೆ. ಗುಂಡಿಗೆ ಕೊಂಚ ವೀಕ್- ಖಜಾನೆ ಸ್ವಲ್ಪ ಮಂಕು ಎನ್ನುವ ನಿರ್ಮಾಪಕರು ನಾಯಕಿಗೆ ಹೈಹೀಲ್ಸ್ ಹಾಕ್ಸಿ ಹೈಟ್ ಮ್ಯಾಚ್ ಮಾಡ್ರಿ ಸರಾ ಅಂತ ಡೈರೆಕ್ಟರ್ಸ್ ಹಾಗೂ ಹೀರೋನಾ ಕನ್ವಿನ್ಸ್ ಮಾಡ್ತಾರಂತೆ. ನಿರ್ಮಾಪಕರು ಅನ್ನದಾತರಾಗಿರೋದ್ರಿಂದ ಓಕೆ ಎನ್ನಬೇಕಾಗುತ್ತೇನೋ ಗೊತ್ತಿಲ್ಲ.
ಯೋಗಿ ಅಂತಹ ನಟರಿದ್ದರೆ, ಇಂತಹ ಹತ್ತಾರು ಸಿನಿಮಾಗಳನ್ನು ಮಾಡಬಹುದು. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತುಂಬಾ ಸಹಕಾರ ಮನೋಭಾವ ಇರುವ ಯೋಗಿ ಅವರ ಪ್ರೋತ್ಸಾಹದಿಂದ ಲಂಕೆ ಸಿನಿಮಾ ಬೇರೆ ಲೆವೆಲ್ಗೆ ಹೋಗಿದೆ. ಈಗ “ಲಂಕೆ”ಗೆ ಬಿಡುಗಡೆ ಮೊದಲೇ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ, ಖಂಡಿತ ಇಲ್ಲಿ ಗಟ್ಟಿನೆಲೆ ಕಾಣುತ್ತೇವೆ ಎಂಬ ಭರವಸೆ ಇದೆ
“ಸೂರ್ಯನೆ ಕಾಣದ ಈ ಮಾಯಾ ಬಜಾರ್ನಲ್ಲಿ ಭಾವನೆಗೇ ಬೆಲೆ ಇಲ್ಲ… ರಾಮನ ತೇಜಸ್ಸು, ರಾವಣನ ವರ್ಚಸ್ಸು, ಇವೆರೆಡೂ ಇವನ ತಾಕತ್ತು. ಸೈನ್ಯ ಇಟ್ಕೊಂಡ್ ಹೋರಾಡೋನು ದಳಪತಿ, ಒಂಟಿಯಾಗಿ ಹೊಡೆದಾಡೋನು ಅಧಿಪತಿ…ʼ ಇದು ಯೋಗಿ ಅಭಿನಯದ “ಲಂಕೆʼ ಚಿತ್ರದ ಅಫಿಷಿಯಲ್ ಟೀಸರ್ನಲ್ಲಿ ಬರೋ ಡೈಲಾಗ್. ಡೈಲಾಗ್ ಮಾತ್ರ ಖಡಕ್ ಆಗಿಲ್ಲ. ಆ ಟೀಸರ್ನಲ್ಲಿ ಕಾಣೋ ಫೈಟು ಕೂಡ ಅಷ್ಟೇ ಖದರ್ ಆಗಿದೆ. ಅಲ್ಲಿಗೆ “ಲಂಕೆʼ ಪಕ್ಕಾ ಮಾಸ್ ಅನ್ನೋದು ಸಾಬೀತಾಗುತ್ತದೆ. ಇಷ್ಟಕ್ಕೂ ಈ “ಲಂಕೆ” ಬಗ್ಗೆ ಹೇಳೋಕೆ ಹೊರಟಿರುವ ವಿಷಯ, ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆಗಿರುವ ಅಫಿಷಿಯಲ್ ಟೀಸರ್ಗೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ಟೀಸರ್ ನೋಡಿದವರಿಗೆ ಯೋಗಿಯ ತಾಕತ್ತಷ್ಟೇ ಅಲ್ಲ, ಆ ಸಿನಿದೊಳಗಿರುವ ತಾಕತ್ತು ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ಅಷ್ಟರಮಟ್ಟಿಗೆ ನಿರ್ದೇಶಕ ರಾಮ್ ಪ್ರಸಾದ್ ಪವರ್ಫುಲ್ ಆಗಿ ಕಟ್ಟಿಕೊಟ್ಟಿದ್ದಾರೆ.
ಒಂದು ಸಿನಿಮಾ ಮಾಡೋದು ದೊಡ್ಡ ವಿಷಯವಲ್ಲ, ಆ ಸಿನಿಮಾದೊಳಗಿರುವ ಅಂಶಗಳನ್ನು ಗುರುತಿಸಿ, ಅದನ್ನೆಲ್ಲಾ ಟೀಸರ್ಗೆ ಸೇರಿಸಿ ಸಿನಿಮಾಗೂ ಮೊದಲೇ ಪ್ರೇಕ್ಷಕರ ಮುಂದೆ ಬಿಡುವ ಜಾಣತನ ದೊಡ್ಡದು. ಅಂಥದ್ದೊಂದು ಜಾಣತನ ಟೀಸರ್ನಲ್ಲಿ ಎದ್ದು ಕಾಣುತ್ತದೆ. ನಿರ್ದೇಶಕ ರಾಮ್ಪ್ರಸಾದ್ ಈ ಬಾರಿ ಸಕ್ಸಸ್ ದಾರಿಯಲ್ಲಿದ್ದಾರೆ ಅನ್ನುವುದಕ್ಕೆ ಆ ಟೀಸರ್ ಸಾಕ್ಷಿ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದ “ಲಂಕೆ” ಟೀಸರ್ಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಕೂಡ ಟ್ರೆಂಡಿಂಗ್ನಲ್ಲಿವೆ. ಶನಿವಾರ ಚಿತ್ರದ ಆಡಿಯೋ ಕೂಡ ಹೊರಬರಲಿದೆ ಅನ್ನೋದು ಹೊಸ ಸುದ್ದಿ.
ಸದ್ಯ ಕೊರೊನಾ ಹಾವಳಿ ಅಲ್ಲಲ್ಲಿ ಇರುವುದರಿಂದ ಸಿನಿಮಾ ಬಿಡುಗಡೆ ಕೊಂಚ ತಡವಾಗಿದೆ. ವೀಕೆಂಡ್ ಕರ್ಪ್ಯೂ ಕೆಲವು ಜಿಲ್ಲೆಗಳಲ್ಲಿದೆ. ಅದೆಲ್ಲವೂ ತೆರೆವಾದ ನಂತರ “ಲಂಕೆ” ಪ್ರೇಕ್ಷಕನ ಮುಂದೆ ಬರಲಿದೆ. ಅಂದಹಾಗೆ, “ಲಂಕೆ” ಯೋಗಿ ಅವರಿಗೊಂದು ಕಮ್ಬ್ಯಾಕ್ ಸಿನಿಮಾ ಅಂದರೂ ತಪ್ಪಿಲ್ಲ. ಯಾಕೆಂದರೆ, ಯೋಗಿ ಅಭಿನಯದ ಹಿಂದಿನ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಈಗ “ಲಂಕೆ” ಮೇಲೆ ಬಹು ನಿರೀಕ್ಷೆ ಇಟ್ಟುಕೊಂಡಿರುವ ಯೋಗಿಗೂ ಒಳ್ಳೆಯ ಯೋಗ ಬರುತ್ತೆ ಎಂಬ ನಂಬಿಕೆಯಂತೂ ಇದೆ. ಎಲ್ಲರ ಶ್ರಮದಿಂದಾಗಿ “ಲಂಕೆʼ ಚೆನ್ನಾಗಿ ಮೂಡಿಬಂದಿದೆ ಎಂಬುದು ನಿರ್ದೇಶಕ ರಾಮ್ಪ್ರಸಾದ್ ಅವರ ಮಾತು.
ಯೋಗಿ ಅಂತಹ ನಟರಿದ್ದರೆ, ಖಂಡಿತವಾಗಿಯೂ ಇಂತಹ ಹತ್ತಾರು ಸಿನಿಮಾಗಳನ್ನು ಮಾಡಬಹುದು. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತುಂಬಾನೇ ಸಪೋರ್ಟಿಂಗ್ ನೇಚರ್ ಇರುವ ಯೋಗಿ ಅವರ ಸಹಕಾರದಿಂದ ಸಿನಿಮಾ ಬೇರೆ ಲೆವೆಲ್ಗೆ ಹೋಗಿದೆ. ನಾವೂ ಕೂಡ ಇಷ್ಟು ದಿನಗಳ ಕಾಲ ಗಟ್ಟಿನೆಲೆ ಕಾಣಬೇಕು ಎಂಬ ತುಡಿತವಿತ್ತು. ಈಗ “ಲಂಕೆ”ಗೆ ಬಿಡುಗಡೆ ಮೊದಲೇ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ, ಖಂಡಿತವಾಗಿಯೂ ಇಲ್ಲಿ ಗಟ್ಟಿನೆಲೆ ಕಾಣುತ್ತೇವೆ ಎಂಬ ಭರವಸೆ ಇದೆ. ಸದ್ಯ ‘ಲಂಕೆ’ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ‘ಲಂಕೆ’ ಚಿತ್ರದ ವಿಡಿಯೋ ಸಾಂಗ್ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಾಕಷ್ಟು ಮೆಚ್ಚುಗೆ ಪಡೆದಿದೆ.
ನಯನಕೆ ನಯನ… ಎಂಬ ಬ್ಯೂಟಿಫುಲ್ ಸಾಂಗ್ಗೆ ಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಸಿನಿಮಾ ತಂಡ ಪ್ರಚಾರ ಶುರು ಮಾಡಿದೆ. “ಲಂಕೆ” ಒಂದು ಪಕ್ಕಾ ಮಾಸ್ ಸಿನಿಮಾ. ಅದು ಟೀಸರ್ನಲ್ಲೇ ಗೊತ್ತಾಗಲಿದೆ. ಯೋಗಿ ಅವರಿಲ್ಲಿ ಲಂಕಾಧಿಪತಿಯಾಗಿ ಅಬ್ಬರಿಸಲಿದ್ದಾರೆ. ಇನ್ನು, ಅವರಿಗೆ ಕ್ರಿಷಿ ತಾಪಂಡ ಹಾಗು ಕಾವ್ಯಾ ಶೆಟ್ಟಿ ನಾಯಕಿಯರು. ವಿಶೇಷವೆಂದರೆ, ನಟ ಸಂಚಾರಿ ವಿಜಯ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಚಿತ್ರಕ್ಕೆ ಕಾರ್ತಿಕ್ ಶರ್ಮ ಸಂಗೀತ ನೀಡಿದ್ದಾರೆ. ಇರುವ ನಾಲ್ಕು ಹಾಡುಗಳು ಕೂಡ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿವೆ. ಧನಂಜಯ್ ನೃತ್ಯ ನಿರ್ದೇಶನವಿದೆ. ಚಿತ್ರಕ್ಕೆ ಸುರೇಖ ರಾಮ್ ಪ್ರಸಾದ್ ಹಾಗು ಪಟೇಲ್ ಶ್ರೀನಿವಾಸ್ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಪಿ.ವಾಸು ಅಂದ್ರೆ ರಿಯಲಿ ಅಮೇಜಿಂಗ್….ಹಿರಿಯ ನಿರ್ದೇಶಕ ಪಿ. ವಾಸು ಅವರ ಬಗ್ಗೆ ಹೀಗೆ ಮೆಚ್ಚುಗೆಯ ಉದ್ಘಾರ ತೆಗೆದಿದ್ದು ಕನ್ನಡದ ಭರವಸೆಯ ಯುವ ನಟಿ ಆರೋಹಿ ನಾರಾಯಣ್. ಭೀಮಸೇನ ನಳಮಹಾ ರಾಜನ ಈ ಚೆಲುವೆ ಈಗ ʼ ದೃಶ್ಯ 2ʼ ಚಿತ್ರದ ಚಿತ್ರೀಕರಣ ದಲ್ಲಿ ಬ್ಯುಸಿ ಆಗಿದ್ದಾರೆ. ಅಂದ ಹಾಗೆ ʼದೃಶ್ಯ 2ʼ ಹೆಸರಾಂತ ನಿರ್ದೇಶಕ ಪಿ. ವಾಸು ನಿರ್ದೇಶನದ ಸಿನಿಮಾ. ʼದೃಶ್ಯʼ ಭಾಗ ಒಂದಕ್ಕೂ ಅವರೇ ನಿರ್ದೇಶಕರು. ಕನ್ನಡಕ್ಕೆ ʼಆಪ್ತಮಿತ್ರʼದಂತಹ ಸೂಪರ್ ಡೂಪರ್ ಹಿಟ್ ಸಿನಿಮಾ ಕೊಟ್ಟ ಖ್ಯಾತಿ ಅವರದು. ಇದೀಗ ʼದೃಶ್ಯ 2ʼ ಮೂಲಕ ಮತ್ತೆ ಸಿನಿದುನಿಯಾದಲ್ಲಿ ಕಮಾಲ್ ಮಾಡಲು ಬರುತ್ತಿದ್ದು, ಕೊರೋನಾ ಭೀತಿಯ ನಡುವೆಯೂ ಈ ಚಿತ್ರಕ್ಕೆ ಈಗ ಮಡಿಕೇರಿಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ನಟ ರವಿಚಂದ್ರನ್ ಸೇರಿದಂತೆ ಇಡೀ ತಂಡವೇ ಅಲ್ಲಿದೆ. ಇನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ನಟಿ ಆರೋಹಿ ನಾರಾಯಣ್ ಕೂಡ ಈಗ ಮಡಿಕೇರಿ ನಲ್ಲಿದ್ದಾರೆ.
ಮಡಿಕೇರಿಯಲ್ಲೀಗ ಮಳೆ. ಮಡಿಕೇರಿ ಮಳೆ ಅಂದ್ರೆ ಅದನ್ನು ಹೆಚ್ಚೇನು ವಿವರಿಸಬೇಕಿಲ್ಲ. ಕಾಫಿ ಕಾಡಿನಲ್ಲಿ ದಟ್ಟವಾಗಿ ಸುರಿಯುವ ಮಳೆ ಅದು. ಅದರ ನಡುವೆಯೇ ಕಳೆದ ಹಲವು ದಿನಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟಿ ಆರೋಹಿ ನಾರಾಯಣ್, ʼಸಿನಿಲಹರಿʼಯೊಂದಿಗೆ ಮಾತನಾಡುತ್ತಾ, ಚಿತ್ರೀಕರಣದ ಅನುಭವ ಹಂಚಿಕೊಂಡರು.ʼ ಚಿತ್ರೀಕರಣ ಅದ್ಬುತವಾಗಿ ನಡಯುತ್ತಿದೆ. ಇಡೀ ಟೀಮ್ ಜತೆಗಿದೆ. ಒಂದು ಸಿನಿಮಾ ಟೀಮ್ ಎನ್ನುವುದಕ್ಕಿಂತ ಒಂದೇ ಫ್ಯಾಮಿಲಿ ವಾತಾವರಣ ಇಲ್ಲಿದೆ. ತುಂಬಾ ಕಂಫರ್ಟ್ ಜೋನ್ ನಲ್ಲಿ ಶೂಟಿಂಗ್ ನಡೆಯುತ್ತಿದೆ. ಎಲ್ಲರೂ ತುಂಬಾ ಸೇಫ್ಟಿ ತೆಗೆದುಕೊಂಡೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆನ್ನುತ್ತಾ ಅಲ್ಲಿನ ಅನುಭವ ತೆರೆದಿಟ್ಟರು.
ಚಿತ್ರೀಕರಣದ ಕುರಿತು ಮಾತನಾಡಿದ್ದಕ್ಕಿಂತ ನಿರ್ದೇಶಕ ಪಿ. ವಾಸು ಅವರ ಬಗ್ಗೆಯೇ ಹೆಚ್ಚು ಮಾತನಾಡಿದರು.ʼ ಪಿ.ವಾಸು ಅವರಂತಹ ಲೆಂಜೆಡರಿ ಡೈರೆಕ್ಟರ್ ಕಾಂಬನೇಷನಿನಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದೆ ಒಂದು ಪುಣ್ಯ. ಸಿನಿಮಾ ಅಂತ ಬಂದಾಗ ಅವರಿಂದ ತುಂಬಾ ಕಲಿಯುವುದಿದೆ. ಅದಕ್ಕೆ ನಂಗೊಂದು ಅವಕಾಶ ಈ ಸಿನಿಮಾದಲ್ಲಿ ಸಿಕ್ಕಿದೆ ಎಂದರು.
ಇನ್ನು ನಟಿ ಆರೋಹಿ ನಾರಾಯಣ್ ಡಯಟ್ ಮಾಡುತ್ತಿದ್ದಾರಂತೆ. ಕೊಂಚ ಸಣ್ಣಾಗಬೇಕೆನ್ನುವುದು ಅವರ ಆಸೆ. ಹೀಗಾಗಿ ಫುಡ್ ವಿಚಾರ ದಲ್ಲಿ ತುಂಬಾ ಸ್ಟ್ರಿಕ್ಟ್ ಅಂತೆ. ʼ ಡಯೆಟ್ನಲ್ಲಿದ್ದಾಗ ತಕ್ಕನಾದ ಫುಡ್ ಸಿಗೋದು ಕಷ್ಟ. ಅದರಲ್ಲೂ ಸಿನಿಮಾ ಸೆಟ್ ನಲ್ಲಿ ಅಂತಹ ಫುಡ್ ಗೆ ಪರದಾಡಬೇಕಾಗುತ್ತದೆ. ಆದರೆ ನಿರ್ದೇಶಕರಾದ ಪಿ. ವಾಸು ಸ್ವಂತ ತಮ್ಮ ಮಕ್ಕಳಂತೆ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಡಯಟ್ ಪೂರಕವಾದ ಫುಡ್ ಅನ್ನು ಟೀಮ್ ಗೆ ಹೇಳಿ ತರಿಸಿಕೊಡುತ್ತಾರೆ. ಇಷ್ಟು ಕೇರ್ ಯಾರು ತಗೋಳ್ಳೋದಿಲ್ಲ. ಆದರೆ, ನಮ್ಮ ನಿರ್ದೇಶಕರು ಡಿಫೆರೆಂಟ್ ಅಂತಾರೆ ನಟಿ ಆರೋಹಿ ನಾರಾಯಣ್.
ಕೆಲ ಸಿನಿಮಾಗಳು ಹಾಗೆನೇ. ಎಷ್ಟೇ ವರ್ಷ ಉರುಳಿದರೂ ಪದೇ ಪದೇ ನೆನಪಾಗುತ್ತಲೇ ಇರುತ್ತವೆ. ಅಷ್ಟರಮಟ್ಟಿಗೆ ಪ್ರಭಾವ ಬೀರಿರುವ ಸಿನಿಮಾಗಳ ಪೈಕಿ, ಈ ಹಿಂದೆ ಕನ್ನಡದಲ್ಲಿ ಜೋರು ಸದ್ದು ಮಾಡಿದ “ಪೋಲೀಸ್ ಸ್ಟೋರಿ”ಯೂ ಒಂದು. ಹೌದು, “ಪೋಲೀಸ್ ಸ್ಟೋರಿ” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ್ದಂತೂ ನಿಜ. ಅದಕ್ಕೆ ಕಾರಣ, ಚಿತ್ರದ ಕಥೆ ಹಾಗೂ ಸಾಯಿಕುಮಾರ್ ಅವರ ನಟನೆ. ಅಲ್ಲಿ ನಟನೆ ಅನ್ನುವುದಕ್ಕಿಂತ ಅವರ ಡೈಲಾಗ್ ಡಿಲವರಿಯೇ ಚಿತ್ರವನ್ನು ಬಹು ಎತ್ತರಕ್ಕೆ ಕೊಂಡೊಯ್ದ ವಿಷಯ ಎಲ್ಲರಿಗೂ ಗೊತ್ತು. ಆ ಚಿತ್ರದ ಡೈಲಾಗ್ಗಳು ಎಲ್ಲರ ಬಾಯಲ್ಲೂ ಗುನುಗುವಂತಾಗಿದ್ದು ಸುಳ್ಳಲ್ಲ. ಇಂದಿಗೂ ಪಡ್ಡೆ ಹುಡುಗ್ರು ಸಾಯಿಕುಮಾರ್ ಬಾಯಿಂದ ಬಂದಂತಹ ಪೋಲೀಸ್ ಸ್ಟೋರಿ ಸಿನಿಮಾದ ಡೈಲಾಗ್ ಹೇಳ್ತಾರೆ ಅಂದರೆ, ಆ ಸಿನಿಮಾದ ಖಡಕ್ ಮಾತುಗಳು ಎಷ್ಟರಮಟ್ಟಿಗೆ ಪರಿಣಾಮ ಬೀರಿವೆ ಅನ್ನೋದನ್ನು ಊಹಿಸಿಕೊಳ್ಳಿ.
ಅಷ್ಟಕ್ಕೂ ಈಗ ಯಾಕೆ “ಪೋಲೀಸ್ ಸ್ಟೋರಿ” ಸಿನಿಮಾ ವಿಷಯ ಅಂದುಕೊಂಡ್ರಾ? ವಿಷಯವಿದೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯಿಸಿ, ಭರ್ಜರಿ ಯಶಸ್ಸು ಕಂಡಿದ್ದ “ಪೊಲೀಸ್ ಸ್ಟೋರಿ” ಚಿತ್ರ ಇಂದಿಗೆ ಯಶಸ್ವಿ ೨೫ ವರ್ಷಗಳನ್ನು ಪೂರೈಸಿದೆ. ಹೌದು, ಆಗಸ್ಟ್ 16 ಕ್ಕೆ “ಪೋಲಿಸ್ ಸ್ಟೋರಿ” ರಿಲೀಸ್ ಆಗಿ 25 ವರ್ಷಗಳಾಗಿವೆ. 1996 ರಲ್ಲಿ ತೆರೆ ಕಂಡ ಈ ಸಿನಿಮಾ, ಭರ್ಜರಿ ಯಶಸ್ಸು ಪಡೆದಿತ್ತು. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲೂ ಈ ಚಿತ್ರ ಗೆಲುವು ಕಂಡಿತ್ತು.
ಇಪ್ಪತ್ತೈದು ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಟ ಸಾಯಿಕುಮಾರ್ ಅವರು, “ಪೋಲೀಸ್ ಸ್ಟೋರಿ” ಚಿತ್ರದ ಯಶಸ್ಸಿಗೆ ಕಾರಣರಾದ ನಿರ್ಮಾಪಕ, ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಚಿತ್ರ ಯಶಸ್ಸು ಕಾಣಲು ಮಾಧ್ಯಮದವರ ಹಾಗೂ ಕನ್ನಡ ಕಲಾಭಿಮಾನಿಗಳ ಪಾಲು ಬಹು ದೊಡ್ಡದು. ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ ಸಾಯಿಕುಮಾರ್. ಇದೇ ಖುಷಿಯಲ್ಲಿರುವ ಸಾಯಿಕುಮಾರ್, ಅದೇ ತಂಡದ ಜೊತೆ ಇಷ್ಟರಲ್ಲೇ ಹೊಸ ಚಿತ್ರ ಶುರುಮಾಡುವ ಯೋಚನೆಯೂ ಇದೆ ಎಂದಿದ್ದಾರೆ.
ಕೊರೋನಾ ಮಹಾಮಾರಿಯ ನಡುವೆಯೂ ಈ ವರ್ಷ ʼರಾಬರ್ಟ್ʼ ಭರ್ಜರಿ ಆಗಿಯೇ ಆಬ್ಬರಿಸಿದ ನಂತರ ಚಂದನವನದಲ್ಲಿ ನಟ ದರ್ಶನ್ ನಟನೆಯ ಮುಂಬರುವ ಸಿನಿಮಾಗಳ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಇದೆ. ಸದ್ಯಕ್ಕೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ʼರಾಜಾವೀರ ಮದಕರಿ ನಾಯಕʼ ದಲ್ಲಿ ದರ್ಶನ್ ಬ್ಯುಸಿ ಆಗಿದ್ದಾರೆ. ಹಾಗೆಯೇ ʼಯಜಮಾನʼ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರಿಗೆ ದರ್ಶನ್ ಮತ್ತೊಂದು ಕಾಲ್ಶೀಟ್ ನೀಡಿದ್ದಾರೆ. ಇಷ್ಟರಲ್ಲಿಯೇ ಆ ಸಿನಿಮಾ ಚಿತ್ರೀಕರಣ ಶುರುವಾಗಲಿದೆ ಅನ್ನೋ ಸುದ್ದಿಗಳಿವೆ. ಸದ್ಯಕ್ಕೆ ಇವೆರೆಡು ಸಿನಿಮಾಗಳ ಅಧಿಕೃತ ಮಾಹಿತಿ ಹೊರಬಿದ್ದಿದೆ. ಅದಾದ ನಂತರ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು, ಯಾರ ಜತೆಗೆ ಎನ್ನುವ ಕುತೂಹಲದ ನಡುವೆಯೇ ನಟ ದರ್ಶನ್ ಅವರನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ಭೇಟಿ ಮಾಡಿ, ಕೇಕ್ ತಿನ್ನಿಸಿದ್ದಾರೆ. ಸಹಜವಾಗಿಯೇ ಇವರ ಭೇಟಿ ಭಾರೀ ಕುತೂಹಲ ಮೂಡಿಸಿದೆ.
ಕನ್ನಡದ ಮಟ್ಟಿಗೆ ಸಕ್ಸಸ್ ನಿರ್ದೇಶಕರೇ ಅಗಿರುವ ದಯಾಳ್ ಪದ್ಮನಾಭನ್ ಇತ್ತೀಚೆಗೆ ದೊಡ್ಡ ಸ್ಟಾರ್ ಜತೆಗೆ ಸಿನಿಮಾ ಮಾಡಿಲ್ಲ ಅಂತಂದರೂ ಕೂಡ ಕಂಟೆಂಟ್ ಆಧರಿತ ಸಿನಿಮಾಗಳ ಮೂಲಕ ಸಖತ್ ಸೌಂಡ್ ಮಾಡುತ್ತಲೇ ಬರುತ್ತಿದ್ದಾರೆ. ತಮ್ಮದೇ ಬ್ಯಾನರ್ನಲ್ಲಿ ತಾವೇ ನಿರ್ಮಾಪಕರಾಗುವುದರ ಜತೆಗೆ ನಿರ್ದೇಶಕರೂ ಆಗಿ, ಒಂದು ಸಿನಿಮಾಕ್ಕೆ ಹಾಕಿದ ಬಂಡವಾಳ ಲಾಸ್ ಮಾಡಿಕೊಂಡಿದ್ದೇ ಇಲ್ಲ.
ಕಡಿಮೆ ಬಜೆಟ್ ಸಿನಿಮಾ ಮಾಡಿ, ಹೆಚ್ಚು ಲಾಭ ಮಾಡುವ ನಿರ್ದೇಶಕ ಕಮ್ ನಿರ್ಮಾಪಕ ಯಾರು ಅಂತ ಹುಡುಕಿದರೆ ಮೊದಲು ಸಿಗುವ ಹೆಸರು ದಯಾಳ್ ಪದ್ಮನಾಭನ್. ಅದ್ಯಾಕೋ ಅವರಿಗೆ ಈಗ ದರ್ಶನ್ ಅವರೊಂದಿಗೆ ಸಿನಿಮಾ ಮಾಡುವ ಆಸೆ ಚಿಗುರಿದೆ. ಅವರಿಬ್ಬರ ಭೇಟಿ ಈ ಫೋಟೋ ನೋಡಿದಾಗ ಹಾಗನಿಸಿದರೂ ಅಚ್ಚರಿ ಇಲ್ಲ. ಆದರೆ ಅವರ ಭೇಟಿಯ ಉದ್ದೇಶ ಬೇರೆಯದೇ ಇದೆ. ಅದು ಸಿನಿಮಾ ಮಾಡುವ ಕಾರಣಕ್ಕಾಗಿ ಅಲ್ಲ. ಹಾಗಾದ್ರೆ, ಯಾಕೆ ಈ ಭೇಟಿಯ ಉದ್ದೇಶ ? ಆ ಬಗ್ಗೆ ದಯಾಳ್ ಹೇಳ್ತಾರೆ ಕೇಳಿ.
ʼ ನಟ ದರ್ಶನ್ ಅವರು ಚಿತ್ರರಂಗಕ್ಕೆ ಬಂದು ಇಲ್ಲಿಗೆ ೨೪ ವರ್ಷ ಆಯಿತು. ಒಬ್ಬ ನಟನ ಪಾಲಿಗೆ ಇದು ಬಹುದೊಡ್ಡ ಸಾಧನೆ. ಅದೇ ಕಾರಣಕ್ಕೆ ಅವರಿಗೆ ವಿಶ್ ಮಾಡೋಣ ಅಂತ ಕಳೆದ ನಾಲ್ಕೈದು ದಿನಗಳಿಂದ ಅಂದುಕೊಂಡಿದ್ದೆ. ಅದ್ಯಾಕೋ ಸಮಯ ಕೂಡಿ ಬಂದಿರಲಿಲ್ಲ. ಜತೆಗೆ ಅವರು ಸಿಗ್ತಾರೋ ಇಲ್ಲವೋ ಎನ್ನುವ ಕಾರಣಕ್ಕೆ ಹಿಂದು ಮುಂದು ನೋಡುತ್ತಿದ್ದೆ. ಇದೇ ವೇಳೆ ಚೆನ್ನೈನಿಂದ ಪರಿಚಿತರೊಬ್ಬರು ನಟ ದರ್ಶನ್ ಅವರನ್ನು ಭೇಟಿ ಮಾಡುವುದಿದೇ ಅಂತ ಹೇಳಿದ್ದರು.ಒಂದು ಖಾಸಗಿ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಅವರು, ಚೆನ್ನೈನಿಂದ ದರ್ಶನ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಅವರ ಕರೆದುಕೊಂಡು ಹೋಗುವ ನೆಪದಲ್ಲಿ ನಾನು ಬರುವುದಾಗಿ ಹೇಳಿದ್ದೆ. ಹಾಗೆಯೇ ಅವರ ಸಿನಿ ಜರ್ನಿಗೆ ಸ್ಪೆಷಲ್ ವಿಶ್ ಮಾಡೋಣ ಅಂತ ಒಂದು ಸಿನಿಮಾ ರೋಲ್ ನ ಸೆಲ್ಯುಲಾಯ್ಡ್ ಶೈಲಿಯ ಕೇಕ್ ತಯಾರಿಸಿ, ಅವರ ಮನೆಗೆ ತೆಗೆದುಕೊಂಡು ಹೋಗಿದ್ದೆ. ಅದನ್ನು ನೋಡಿ ದರ್ಶನ್ ತುಂಬಾ ಖುಷಿ ಪಟ್ಟರು. ಇದೇನೋ ತುಂಬಾ ಡಿಫೆರೆಂಟ್ ಆಗಿದೆ, ನಿಮ್ಗೆ ಮಾತ್ರ ಈ ಥರ ಪ್ಲಾನ್ ಹೊಳೆಯುತ್ತೆ ಅಂತೆಲ್ಲ ತಮಾಷೆ ಮಾಡಿ, ಖುಷಿ ಪಟ್ಟರುʼ ಅಂತ ದರ್ಶನ್ ಭೇಟಿಯ ಹಿಂದಿನ ಕಥೆಯನ್ನು ಬಿಚ್ಚಿಟ್ಟರು ನಿರ್ದೇಶಕ ದಯಾಳ್.