ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪೆಪೆ’. ಟೈಟಲ್ ಮೂಲಕವೇ ಕುತೂಹಲ ಹುಟ್ಟು ಹಾಕಿರುವ ಈ ಚಿತ್ರದ ರಗಡ್ ಟೀಸರ್ ಝಲಕ್ ಸಿನಿ ರಸಿಕರಲ್ಲಿ ಒಂದಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಇದೀಗ ಚಿತ್ರತಂಡ ಹೊಸ ವರ್ಷಕ್ಕೆ ಮಾಸ್ ಫೀಲ್ ಇರೋ ರಗಡ್ ಪೋಸ್ಟರ್ ಬಿಡುಗಡೆ ಮಾಡಿದೆ. ವಿನಯ್ ರಾಜ್ ಕುಮಾರ್ ನಯಾ ಅವತಾರ, ಮಾಸ್ ಲುಕ್ ಚಿತ್ರ ಪ್ರೇಮಿಗಳ ಗಮನ ಸೆಳೆಯುತ್ತಿದೆ.
ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ‘ಪೆಪೆ’ ಚಿತ್ರತಂಡ ನಿರತವಾಗಿದೆ. ಟೈಟಲ್ ಮೂಲಕವೇ ಕುತೂಹಲವನ್ನು ಹುಟ್ಟುಹಾಕಿರುವ ಈ ಚಿತ್ರ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ. ಗ್ಯಾಂಗ್ ಸ್ಟಾರ್ ಸಿನಿಮಾ ಇದಾಗಿದ್ದು, ವಿನಯ್ ರಾಜ್ ಕುಮಾರ್ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಅವತಾರ ತಾಳಿದ್ದಾರೆ. ಒಂದೇ ಜಾನರ್ ಸಿನಿಮಾಗೆ ಒಗ್ಗಿ ಕೊಳ್ಳದೇ, ಪ್ರತಿ ಬಾರಿ ವಿಭಿನ್ನ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುವ ವಿನಯ್ ರಾಜ್ ಕುಮಾರ್ ಈ ಚಿತ್ರದಲ್ಲಿ ಕಂಪ್ಲೀಟ್ ಡಿಫ್ರೆಂಟ್ ಅವತಾರ ತಾಳಿದ್ದಾರೆ. ಗ್ಯಾಂಗ್ ಲೀಡರ್ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದು, ಟೀಸರ್ ಹಾಗೂ ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಇದಕ್ಕೆ ಸಾಕ್ಷಿಯಾಗಿವೆ. ದೊಡ್ಮನೆ ಅಭಿಮಾನಿ ಬಳಗ ವಿನಯ್ ಲುಕ್ ಕಂಡು ಥ್ರಿಲ್ ಆಗಿದ್ದು ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಮೆದಿನಿ ಕೆಳಮನಿ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್ ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ. ಡಾ. ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ.
ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ‘ಪೆಪೆ’ ಸಿನಿಮಾವನ್ನು ಸೆರೆ ಹಿಡಿಯಾಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲಂಸ್ ಬ್ಯಾನರ್ ನಡಿ ಉದಯ್ ಮತ್ತು ಶ್ರೀರಾಮ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸಾಕಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ “ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರ ನಿರ್ದೇಶಕ “ಸಿದ್ದು ಪೂರ್ಣಚಂದ್ರ” ಅವರು ಕಥೆ,ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರ “ಬ್ರಹ್ಮಕಮಲ”. ಸಿದ್ದು ಪೂರ್ಣಚಂದ್ರ ಅವರೇ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ.
ಹೊಸ ವರ್ಷಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ.
ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲ.
ಈಗಾಗಲೇ ಚಿತ್ರೀಕರಣ ಮುಗಿಸಿ ಸೆನ್ಸಾರ್ ಮಂಡಳಿಯಿಂದ “ಯು” ಸರ್ಟಿಫಿಕೇಟ್ ಪಡೆದುಕೊಂಡಿದೆ.
” ಬ್ರಹ್ಮಕಮಲ” ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅಧ್ವಿತಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್,ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ, ಕವಿತಾ ಕಂಬಾರ್, ರಾಧಾ ರಾಮಚಂದ್ರ ಚಿತ್ರದಲ್ಲಿದ್ದಾರೆ.
ಛಾಯಾಗ್ರಹಣ ಲೋಕೇಂದ್ರ ಸೂರ್ಯನಾರಾಯಣ, ಸಂಕಲನ ದೀಪು ಸಿ ಎಸ್, ಸಂಗೀತ ಅನಂತ್ ಆರ್ಯನ್ ಹೊಣೆ ಹೊತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರು ಎ.ಕೆ. ಪುಟ್ಟರಾಜು ಮತ್ತು ಪ್ರಮಿಳಾ ಸುಬ್ರಹ್ಮಣ್ಯಂ. ನಿರ್ಮಾಣ ನಿರ್ವಹಣೆ ನಾಗರತ್ನ ಕೆ ಹೆಚ್, ವಸ್ತ್ರ ವಿನ್ಯಾಸ ಋತು ಚೈತ್ರ, ಕಲೆ ಬಸವರಾಜ್ ಆಚಾರ್ ಕೆ ಆರ್.
ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬಂದಿರುವ ಬಹು ತಾರಾಗಣದ ‘ಹೊಂದಿಸಿ ಬರೆಯಿರಿ’ ಸಿನಿಮಾ ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಿದೆ. ಬಿಡುಗಡೆ ಸನಿಹದಲ್ಲಿರುವ ಚಿತ್ರತಂಡ, ಸಿನಿಮಾ ಪ್ರಚಾರ ಕಾರ್ಯವನ್ನು ಬಿಡುವಿಲ್ಲದೇ ನಡೆಸುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟೀಸರ್, ಹಾಡುಗಳು ಸಿನಿ ಪ್ರೇಕ್ಷಕರಲ್ಲಿ ಬಹು ನಿರೀಕ್ಷೆ ಮೂಡಿಸಿದೆ. ಇದೀಗ ಚಿತ್ರದ ಮತ್ತೊಂದು ಬಹು ನಿರೀಕ್ಷಿತ ‘ನೀ ಇರದ ನಾಳೆ’ ಹಾಡಿನ ಲಿರಿಕಲ್ ವೀಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ನಿರ್ದೇಶಕ ಯೋಗರಾಜ್ ಭಟ್ ಈ ಹಾಡನ್ನು ಮೆಚ್ಚಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು, ಪ್ರತಿ ಹಾಡುಗಳು ಸಿನಿಮಾದಲ್ಲಿ ಬಹು ಮುಖ್ಯ ಪಾತ್ರ ವಹಿಸಲಿವೆ. ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು ಪ್ರೇಕ್ಷಕರ ಮನಗೆದ್ದಿದ್ದು, ಇದೀಗ ಚಿತ್ರದ ಮತ್ತೊಂದು ಬಹು ನಿರೀಕ್ಷಿತ ಹಾಡು ‘ನೀ ಇರದ ನಾಳೆ ಬೇಕಿಲ್ಲ ನನಗೆ’ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಈ ಹಾಡಿಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದು, ಸಂಬಂಧಗಳಲ್ಲಿರುವ ಗೊಂದಲವನ್ನು ವ್ಯಕ್ತಪಡಿಸುವ ಹಾಡು ಇದಾಗಿದೆ. ಪ್ರವೀಣ್ ತೇಜ್, ಭಾವನ ರಾವ್ ಈ ಹಾಡಿನ ಭಾಗವಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಹಾಡು ಇದಾಗಿದೆ. ಕೀರ್ತನ್ ಹೊಳ್ಳ, ಐಶ್ವರ್ಯ ರಂಗರಾಜನ್ ಹಾಡಿಗೆ ದನಿಯಾಗಿದ್ದು ಜೋ ಕೋಸ್ಟ ಸಂಗೀತ ನಿರ್ದೇಶನ ಹಾಡಿಗಿದೆ. ಸಂಡೆ ಸಿನಿಮಾಸ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿದೆ.
ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲರ್ ಫುಲ್ ಕಲಾವಿದರ ಮುಖ್ಯ ಭೂಮಿಕೆ ಚಿತ್ರದಲ್ಲಿದೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ಬಹು ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.
ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎನ್ನುವ ಒನ್ ಲೈನ್ ಕಹಾನಿ ಸುತ್ತ ಹೆಣೆಯಲಾದ ಚಿತ್ರವೇ ‘ಹೊಂದಿಸಿ ಬರೆಯಿರಿ’. ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಐದು ಜನ ಸ್ನೇಹಿತರ ಬದುಕಿನ ಒಂದೊಂದು ಚಿತ್ರಣ ಹಾಗೂ ಭಾವನಾತ್ಮಕ ಪಯಣ ಇದೆ.
ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ, ಶಾಂತಿ ಸಾಗರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಸಂಡೇ ಸಿನಿಮಾಸ್’ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸಿನಿಮಾ ನಿರ್ಮಾಣ ಮಾಡಿದ್ದು. ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ ಬರೋ ಸಾಧ್ಯತೆ ಇದೆ.
ಕಲರ್ ಫುಲ್ ಕನಸು ಕಟ್ಟಿಕೊಂಡು ಈ ಬಣ್ಣದ ಲೋಕಕ್ಕೆ ಬರುವವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಹಾಗೆಯೇ ಪ್ರತಿ ದಿನ ಹೊಸ ಬಗೆಯ ಸಿನಿಮಾಗಳೂ ಸಾಕಷ್ಠು ಸೆಟ್ಟೇರುತ್ತಿವೆ. ಆ ಸಾಲಿಗೆ ‘ಕೆಂಡದ ಸೆರಗು’ ಎಂಬ ಸಿನಿಮಾ ಕೂಡ ಸೇರಿದ್ದು, ಚಿತ್ರೀಕರಣ ಕೂಡ ಮುಗಿದಿದೆ. ಇದು ಮಹಿಳಾ ಪ್ರಧಾನ ಚಿತ್ರ. ರಾಕಿ ಸೋಮ್ಲಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾ.
ಹೌದು, ‘ಕೆಂಡದ ಸೆರಗು’ ಈ ಶೀರ್ಷಿಕೆಯೇ ವಿಶೇಷವಾಗಿದೆ ಅಂದಮೇಲೆ, ಸಿನಿಮಾ ಕಥಾಹಂದರ ಕೂಡ ವಿಶೇಷವಾಗಿರಲೇಬೇಕು. ಇದು ಕಾದಂಬರಿ ಆಧಾರಿತ ಸಿನಿಮಾ. ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಈಗ ಚಿತ್ರವಾಗುತ್ತಿದೆ. ವಿಶೇಷ ಅಂದರೆ ರಾಕಿ ಸೋಮ್ಲಿ ಅವರೇ ತಮ್ಮ ಕಾದಂಬರಿ ಇಟ್ಟುಕೊಂಡು ಮೊದಲ ಬಾರಿಗೆ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ರಾಕಿ ಸೋಮ್ಲಿ ಅವರ ಈ ಕಾದಂಬರಿ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಶಸ್ತಿ ಪಡೆದಿರುವುದು ಮತ್ತೊಂದು ಸ್ಪೆಷಲ್.
2020 ರಲ್ಲಿ ಯುವ ಬರಹಗಾರ ಚೊಚ್ಚಲ ಕೃತಿ ಅಡಿಯಲ್ಲಿ ಈ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ. ಅದೇ ಕಾದಂಬರಿಯನ್ನೆ ರಾಕಿ ಸೋಮ್ಲಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾವಾದರೂ, ಚಿತ್ರರಂಗದಲ್ಲಿ ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಇದೆ. ಗೀತ ಸಾಹಿತಿಯಾಗಿ, ಸಂಭಾಷಣೆಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ಮೊದಲ ಕನಸು ‘ಕೆಂಡದ ಸೆರಗು’ ಶೂಟಿಂಗ್ ಕೂಡ ಮುಗಿದಿದೆ.
ಏನು ಕಥೆ?
ಕೆಂಡದ ಸೆರಗು’ ಈ ಶೀರ್ಷಿಕೆಯೇ ಹೇಳುವಂತೆ, ಇದೊಂದು ಮಹಿಳಾ ಪ್ರಧಾನ ಸಿನಿಮಾ. ಹೆಣ್ಣಿನ ಶೋಷಣೆ, ಬವಣೆ , ಮೋಸ, ಇತ್ಯಾದಿ ವಿಷಯಗಳು ಸಿನಿಮಾದ ಹೈಲೆಟ್. ಸಿನಿಮಾ ಆಕರ್ಷಣೆಯೇ ಹೆಣ್ಣಿನ ಕಥೆ. ಅವಳ ಅಸಹಾಯಕತೆ, ಹೋರಾಟ ಇಲ್ಲಿ ಹೈಲೆಟ್. ನೊಂದ ಹೆಣ್ಣನ್ನು ದೂಷಿಸುವ ಸಮಾಜ, ಕೆಟ್ಟ ವ್ಯವಸ್ಥೆ ಮತ್ತಿತರ ವಿಷಯಗಳಿವೆ.
ವರ್ಧನ್ ಎಂಬ ಖಡಕ್ ಖಳ ನಟ…
ಬಿಗ್ ಬಾಸ್ ಖ್ಯಾತಿಯ ಭೂಮಿಶೆಟ್ಟಿ ‘ಕೆಂಡದ ಸೆರಗು’ ಸಿನಿಮಾದ ಪ್ರಮುಖ ಆಕರ್ಷಣೆ. ಮಹಿಳಾ ಪ್ರಧಾನ ಸಿನಿಮಾ ಅಂದಮೇಲೆ, ವಿಲನ್ ಇರದಿದ್ದರೆ ಹೇಗೆ? ಇಲ್ಲೂ ಖಡಕ್ ವಿಲನ್ ಇದ್ದಾರೆ. ಒಬ್ಬ ಕೆಟ್ಟ ಪೊಲೀಸ್ ಅಧಿಕಾರಿಯಾಗಿ ನಟ ವರ್ಧನ್ ತೀರ್ಥಹಳ್ಳಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಲ್ಲಿ ದುಷ್ಟ ಅಧಿಕಾರಿ ಆಗಿರುವುದರಿಂದ ದಾಡಿ ಬಿಟ್ಟು ರಗಡ್ ಅಧಿಕಾರಿಯಾಗಿ ಕಾಣಲಿದ್ದಾರೆ.
ನಿರ್ದೇಶಕ ರಾಕಿ ಜೊತೆ ವರ್ಧನ್
ಈಗಾಗಲೇ ವರ್ಧನ್ ಕನ್ನಡ ಚಿತ್ರರಂಗದಲ್ಲಿ ಹಲವು ಬಗೆಯ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳ ಮೂಲಕ ಗಮನಸೆಳೆದಿದ್ದಾರೆ. ತಮ್ಮ ವಿಶಿಷ್ಠ ಮ್ಯಾನರಿಸಂ ಮೂಲಕವೇ ನಿರ್ದೇಶಕರ ನಟರಾಗಿ, ಎಲ್ಲಾ ಬಗೆಯ ಪಾತ್ರಗಳಲ್ಲೂ ಮಿಂಚುತ್ತಿದ್ದಾರೆ. ‘ಕೆಂಡದ ಸೆರಗು’ ಸಿನಿಮಾದ ಪಾತ್ರ ವಿಭಿನ್ನವಾಗಿದ್ದು, ಒಳ್ಳೆಯ ತಂಡದಲ್ಲಿ ಹೊಸ ಬಗೆಯ ಕಥೆ ಇರುವ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ವರ್ಧನ್.
ಕೆಂಡದ ಸೆರಗಲ್ಲಿ ಇವರೆಲ್ಲಾ ಇದಾರೆ…
ಕೆಂಡದ ಸೆರಗು ಮಹಿಳಾ ಪ್ರಧಾನ ಕಥೆಯಾದರೂ ಚಿತ್ರದಲ್ಲಿ ವರ್ಧನ್, ಯಶ್ ಶೆಟ್ಟಿ ಕೂಡ ಅಬ್ಬರಿಸಲಿದ್ದಾರೆ. ಉಳಿದಂತೆ, ಶೋಭಿತ, ಅರ್ಚನಾ, ಪ್ರತಿಮಾ, ಮೋಹನ್ ಇತರರು ಇದ್ದಾರೆ. ವಿಶೇಷ ಅಂದರೆ ಮಾಲಾಶ್ರೀ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವೂ ಇಲ್ಲಿ ಪ್ರಮುಖ ಆಕರ್ಷಣೆ.
ಚಿತ್ರಕ್ಕೆ ವಿಪಿನ್ ರಾಜ್ ಕ್ಯಾಮೆರಾ ಹಿಡಿದಿದ್ದಾರೆ. ವೀರೇಶ್ ಕಬ್ಳಿ ಸಂಗೀತವಿದೆ. ಕೊಡುತ್ತಿದ್ದಾರೆ. ಕ್ಯಾಪ್ಟನ್ ಕಿಶೋರ್ ನೃತ್ತ, ಶ್ರೀಕಾಂತ್ ಸಂಕಲನವಿದೆ. ಚಿತ್ರವನ್ನು ಕೊಟ್ರೇಶ್ ಗೌಡ ನಿರ್ಮಿಸಿದ್ದಾರೆ.
80,90ರ ದಶಕದವರಿಗೆ ದೂರದರ್ಶನ ಅಂದ್ರೆ ಒಂದು ರೋಮಾಂಚನಕಾರಿ ಅನುಭವ. ಅದರೊಂದಿಗೆ ಒಂದು ಅವಿನಾಭಾವ ನಂಟು ಬೆಳೆದಿರುತ್ತೆ. ಅದರಲ್ಲೂ ಹಳ್ಳಿ ಯವರಾದರೆ ಆ ನಂಟಿನ ಸೊಗಸೇ ಅದ್ಭುತ. ಈಗಲೂ ಆ ದಿನಗಳನ್ನು ನೆನಪಿಸಿ ಮಿಸ್ ಮಾಡಿಕೊಳ್ಳೋರಿಗೆ ಆ ಮಜಭೂತನ್ನು ತೆರೆ ಮೇಲೆ ಕಟ್ಟಿಕೊಡಲು ಸಿದ್ದವಾಗಿರೋ ಸಿನಿಮಾ ‘ದೂರದರ್ಶನ’. ಟೈಟಲ್ ಕೇಳಿದಾಕ್ಷಣ ಬಹಳ ಬೇಗ ಕನೆಕ್ಟ್ ಆಗುತ್ತೆ ಅದೇ ರೀತಿ ಸಿನಿಮಾ ಕೂಡ ಹಳ್ಳಿ ಸೊಗಡಲ್ಲೇ ಮೋಡಿ ಮಾಡೋಕೆ ಸಿದ್ದವಾಗಿದೆ. ಹಾಡುಗಳ ಮೂಲಕ ಮೋಡಿ ಮಾಡಿರೋ ‘ದೂರದರ್ಶನ’ ಚಿತ್ರತಂಡ ಪ್ರಾಮಿಸಿಂಗ್ ಆಗಿರೋ ಟೀಸರ್ ಬಿಡುಗಡೆ ಮಾಡಿದೆ.
ಮಾಸ್ ಸಿನಿಮಾ ಭರಾಟೆಯಲ್ಲಿ ಹಳ್ಳಿ ಸೊಗಡಿರೋ, ಹಳ್ಳಿಯಲ್ಲಿ ನಡೆಯೋ ಕಥಾನಕಗಳಿರೋ ಸಿನಿಮಾಗಳು ಕಡಿಮೆ ಆಗಿದೆ ಅನ್ನೋರಿಗೆ ಪಕ್ಕಾ ಹಳ್ಳಿ ಸೊಗಡಿರೋ, 80, 90 ದಶಕದ ಚಿತ್ರಣವನ್ನೊಳಗೊಂಡ ‘ದೂರದರ್ಶನ’ ಸಿನಿಮಾ ಮನರಂಜನೆ ನೀಡಲು ಸಜ್ಜಾಗಿದೆ. ಹಾಗೆಂದ ಮಾತ್ರಕ್ಕೆ ಕ್ಲಾಸ್ ಆಡಿಯನ್ಸ್ ಸಿನಿಮಾವೇನಲ್ಲ. ಮಾಸ್ ಆಡಿಯನ್ಸ್ ಗಳನ್ನು ಸೆಳೆಯೋ ಕಟೆಂಟ್ ಚಿತ್ರದಲ್ಲಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಪ್ರಾಮಿಸಿಂಗ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡ ಗಮನ ಸೆಳೆದಿದೆ.
‘ದೂರದರ್ಶನ’ ಸಿನಿಮಾ ಸುಕೇಶ್ ಶೆಟ್ಟಿ ನಿರ್ದೇಶನಲ್ಲಿ ಮೂಡಿಬಂದಿರೋ ಸಿನಿಮಾ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ ಸುಕೇಶ್ ಶೆಟ್ಟಿ. ಈ ಚಿತ್ರ 80, 90 ದಶಕದಲ್ಲಿ ಹಳ್ಳಿಗಳಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಹಳ್ಳಿಯೊಂದಕ್ಕೆ ಟಿವಿ(ದೂರದರ್ಶನ)ಯ ಆಗಮನವಾದ ಮೇಲೆ ಏನೆಲ್ಲ ಬದಲಾವಣೆ ಆಗುತ್ತೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ. ಡ್ರಾಮಾ ಹಾಗೂ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕ ನಟನಾಗಿ ನಟಿಸಿದ್ದು, ಅಯಾನ ನಾಯಕಿಯಾಗಿ ನಟಿಸಿದ್ದಾರೆ.
ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಒಳಗೊಂಡ ತಾರಾಗಣ ಸಿನಿಮಾದಲ್ಲಿದೆ. ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.
ವಿ ಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ದೂರದರ್ಶನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ಪ್ರದೀಪ್ ಆರ್ ರಾವ್ ಸಂಕಲನ ಚಿತ್ರಕ್ಕಿದೆ.
ಚಿತ್ರ : ಜಮಾಲಿಗುಡ್ಡ ನಿರ್ದೇಶಕ : ಕುಶಾಲ್ ಗೌಡ ನಿರ್ಮಾಪಕ: ಶ್ರೀ ಹರಿ ತಾರಾಗಣ: ಧನಂಜಯ, ಯಶ್ ಶೆಟ್ಟಿ, ಭಾವನಾ, ಪ್ರಕಾಶ್ ಬೆಳವಾಡಿ, ನಂದಗೋಪಾಲ್, ರುಶಿಕಾ, ಪ್ರಾಣ್ಯ, ಸಂತು, ದಿವ್ಯ ಇತರರು.
ಜಗತ್ತಿನ ಕಣ್ಣಿಗೆ ಮತ್ತು ಪೋಲೀಸರ ದೃಷ್ಟಿಯಲ್ಲಿ ಅವನು ಮೋಸ್ಟ್ ವಾಂಟೆಡ್ ಕ್ರಿಮಿನಲ್! ಹೆಸರು ಹಿರೋಶಿಮ. ಆದರೆ, ಅವನೊಬ್ಬ ಇನ್ನೋಸೆಂಟ್. ನಿಷ್ಕಲ್ಮಷ ಪ್ರೇಮಿ. ಅಂಥಾ ಪ್ರೇಮಿಯೊಬ್ಬ ಆಕಸ್ಮಿಕ ಕೊಲೆಗಾರ. ಯಾಕೆ, ಏನು ಎತ್ತ ಎಂಬುದನ್ನು ತಿಳಿಯಲು ‘ಜಮಾಲಿಗುಡ್ಡ’ ಹತ್ತಿ ಸುಧಾರಿಸಿಕೊಂಡು ನೋಡಬೇಕು!!
ಒಂದೇ ಮಾತಲ್ಲಿ ಹೇಳುವುದಾದರೆ, ಇಡೀ ಸಿನಿಮಾದ ಹೈಲೆಟ್ ಬಾಬಬುಡನ್ ಗಿರಿಯ ಹಸಿರು ವಾತಾವರಣ ಮತ್ತು ಚುಮು ಚುಮು ಮಂಜು ಧುಮುಕುವ ದೃಶ್ಯ. ಇಷ್ಟನ್ನು ಕಣ್ತುಂಬಿಕೊಳ್ಳೋಕೆ ಯಾವುದೇ ಮೋಸವಿಲ್ಲ.
ಇನ್ನು ಡಾಲಿ ಧನಂಜಯ ಅವರ ಎಂದಿನ ಶೈಲಿಯ ಸಿನಿಮಾ ಅಂದುಕೊಂಡು ಬಂದರೆ, ಆ ನಿರೀಕ್ಷೆ ಇಲ್ಲಿ ಸುಳ್ಳಾಗುತ್ತೆ. ಅಂತಹ ಪವಾಡ ಇಲ್ಲಿಲ್ಲ. ಕಥೆ ತೀರಾ ಸರಳ. ಹೊಸ ವಿಷಯವೇನಿಲ್ಲ. ಒಂದೊಳ್ಳೆಯ ಭಾವುಕ ಸನ್ನಿವೇಶಗಳು ಆಗಾಗ ಇಣುಕಿ ನೋಡುತ್ತವೆ ಎಂಬುದು ಬಿಟ್ಟರೆ, ಇಲ್ಲಿ ಎಲ್ಲವೂ ಝಾಳು ಝಾಳು.
ಸಿನಿಮಾ ಕೂಡ ಹೇಳಿಕೊಳ್ಳುವಂತಹ ಅದ್ಧೂರಿಯಾಗಿಲ್ಲ. ಹಾಗಂತ, ಕಥೆಯೊಳಗಿನ ಪಾತ್ರಗಳಿಗೆ ವಿನಾಕಾರಣ ಬಿಲ್ಡಪ್ ಕೊಟ್ಟಿಲ್ಲ. ಕೆಲವು ಸನ್ನವೇಷಗಳು ತೀರಾ ಕಳಪೆ ಎನಿಸಿಬಿಡುತ್ತವೆ. ಒಬ್ಬ ಕ್ರಿಮಿನಲ್ ಹುಡುಕಿ ಬರುವ ಪೊಲೀಸ್ ಅಧಿಕಾರಿ ಮತ್ತು ತಂಡ, ಅದರ ಜೊತೆ ಬರುವ ಶಾರ್ಪ್ ಶೂಟರ್ ಅವರನ್ನೆಲ್ಲಾ ಆ ಸನ್ನಿವೇಶದಲ್ಲಿ ನೋಡುವಾಗ ನಿಜಕ್ಕೂ ಅದು ಫೂಲಿಶ್ ಅನಿಸುತ್ತೆ.
ಒಂದು ಹಸಿರು ಬೆಟ್ಟದ ತಪ್ಪಲಿನಲ್ಲಿ ನಡೆಯೋ ಆ ದೃಶ್ಯಕ್ಕೆ ವಿಪರೀತ ಬಿಲ್ಡಪ್ ಬೇಕಿರಲಿಲ್ಲ. ಆದರೂ ಅದೊಂದು ರೀತಿ ಆಡಿಕೊಳ್ಳುವ ಮಾತಿಗೆ ಸಿಲುಕುವ ದೃಶ್ಯ ಅನ್ನೋದು ಸತ್ಯ.
ಮೊದಲರ್ಧ ಕಾಮನ್ ಆಗಿಯೇ ಸಾಗುವ ಸಿನಿಮಾ, ದ್ವಿತಿಯಾರ್ಧ ನೋಡುಗರ ತಾಳ್ಮೆ ಪರೀಕ್ಷಿಸುತ್ತೆ. ಕೆಲವೊಮ್ಮೆ ಸಿನಿಮಾದ ಲಿಂಕ್ ಎತ್ತೆತ್ತಲ್ಲೋ ಸಾಗಿ, ನೋಡುಗನ ಗೊಂದಲಕ್ಕೀಡು ಮಾಡುತ್ತೆ. ಇನ್ನೇನು ಸೀಟಿಗೆ ಒರಗಿಕೊಳ್ಳಬೇಕು ಅನ್ನುತ್ತಿದ್ದಂತೆ ಅಲ್ಲೊಂದು ಹಾಡು ಕಾಣಿಸಿಕೊಂಡು ಕೊಂಚ ರಿಲ್ಯಾಕ್ಸ್ ಗೆ ಕಾರಣವಾಗುತ್ತೆ.
95-96 ರ ಕಾಲಘಟ್ಟದ ಕಥೆ ಇದು. ಆದರೆ, ಆ ಫೀಲ್ ಅಷ್ಟಾಗಿ ಕಾಣಸಿಗಲ್ಲ. ನಿರ್ದೇಶಕರು ಲೊಕೇಷನ್ ಸೌಂದರ್ಯಕ್ಕೆ ಒತ್ತು ಕೊಟ್ಟಷ್ಟು, ನಿರೂಪಣೆಗೆ ಒತ್ತು ಕೊಟ್ಟಿದ್ದರೆ, ಒಂದಷ್ಟು ಬಿಗಿ ಹಿಡಿತ ಇದ್ದಿದ್ದರೆ ಜಮಾಲಿಗುಡ್ಡದ ಸೊಬಗು ಮತ್ತಷ್ಟು ರಂಗೇರುತ್ತಿತ್ತು. ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕರ ಕಲ್ಪನೆಯೂ ಸೊಗಸಾಗಿದೆ. ಆದರೆ, ಅದನ್ನು ಮತ್ತಷ್ಟು ಅಂದವಾಗಿ ಕಟ್ಟಿಕೊಡಬಹುದಿತ್ತು. ಅಲ್ಲಲ್ಲಿ ಬರುವ ಸಂಭಾಷಣೆ ಮತ್ತು ಕೆಲ ದೃಶ್ಯಗಳು ಮನಸ್ಸಿಗೆ ನಾಟುತ್ತವೆ. ಉಳಿದಂತೆ ಚಿಟಿಕೆಯಷ್ಟು ಮುದ ಕೊಡುವಷ್ಟರ ಮಟ್ಟಿಗೆ ಮೂಡಿದೆಯಷ್ಟೆ. ಇನ್ನೂ ಪರಿಣಾಮಕಾರಿಯಾಗಿ ತರಬಲ್ಲ ಸಾಧ್ಯತೆಗಳಿದ್ದವು. ಆದರೆ ಅದಿಲ್ಲಿ ಸಾದ್ಯವಾಗಿಲ್ಲ.
ಕಥೆ ಇಷ್ಟು…
ಅವನೊಬ್ಬ ಬಾರ್ ಸಪ್ಲೈಯರ್. ಮಸಾಜ್ ಸೆಂಟರ್ ನಲ್ಲಿ ಸ್ವರ್ಗ ನೋಡಬಹುದು ಅನ್ನೋ ಗೆಳೆಯನೊಬ್ಬನ ಮಾತು ಕೇಳಿ ಸ್ಪಾ ವೊಂದಕ್ಕೆ ಹೋಗ್ತಾನೆ. ಅಲ್ಲಿ ಮಸಾಜ್ ಮಾಡುವ ಅಂದದ ಹುಡುಗಿಯನ್ನು ನೋಡಿ ಪ್ರೀತಿಗೆ ಜಾರುತ್ತಾನೆ. ಆ ಪ್ರೀತಿ ಅವರಿಬ್ಬರ ಬದುಕಲ್ಲಿ ನಾಟ್ಯವಾಡುತ್ತೆ. ಘಟನೆಯೊಂದರಲ್ಲಿ ಅವನು ಜೈಲು ಸೇರುತ್ತಾನೆ.
ಅಲ್ಲಿ ಮತ್ತೊಬ್ಬ ಕ್ರಿಮಿನಲ್ ನಾಗಸಾಕಿ ಎಂಬಾತನ ನಂಟು ಬೆಳೆದು, ಜೈಲಿಂದ ಇಬ್ಬರೂ ಪರಾರಿಯಾಗುತ್ತಾರೆ. ಸಾಗುವ ದಾರಿ ನಡುವೆ ಆಕಸ್ಮಿಕ ಘಟನೆ ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು. ಕೊನೆಗೆ ಆ ಹೀರೋಶಿಮ ಪೋಲೀಸರ ಕೈಗೆ ಸಿಕ್ತಾನಾ, ಅವನ ಪ್ರೀತಿ ಸಿಗುತ್ತಾ ಅನ್ನುವ ಕುತೂಹಲವಿದ್ದರೆ ಒಂದೊಮ್ಮೆ ಧೈರ್ಯವಾಗಿ ಗುಡ್ಡ- ಬೆಟ್ಟ ಸುತ್ತಾಡಿ ಬರಲ್ಲಡ್ಡಿಯಿಲ್ಲ.
ಯಾರು ಹೇಗೆ?
ಹೀರೋಶಿಮನಾಗಿ ಡಾಲಿ ಧನಂಜಯ ಪಾತ್ರಕ್ಕೆ ಮೋಸ ಮಾಡಿಲ್ಲ. ಆದರೆ, ಯಾಕೋ ಅವರಿಲ್ಲಿ ತೀರಾ ಡಲ್ ಆದವರಂತೆ ಕಾಣುತ್ತಾರೆ. ಆ ಕಾಲಘಟ್ಟದ ಕಥೆ ಆಗಿದ್ದರೂ, ಅದಕ್ಕೆ ಇನ್ನಷ್ಟು ತಯಾರಿ ಬೇಕಿತ್ತು ಎನಿಸುತ್ತೆ. ಉಳಿದಂತೆ ಒಬ್ಬ ಪ್ರೇಮಿಯಾಗಿ, ಮುಗ್ಧನಾಗಿ, ಭಾವುಕತೆ ಹೆಚ್ಚಿಸುವ ವ್ಯಕ್ತಿಯಾಗಿ ಇಷ್ಟವಾಗುತ್ತಾರೆ. ನಾಗಸಾಕಿಯಾಗಿ ಅವರಿಸಿಕೊಂಡಿರುವ ಯಶ್ ಶೈಟಿ ಸಿನಿಮಾದ ಮತ್ತೊಂದು ಹೈಲೆಟ್. ಅವರ ನಟನೆಯ ಲವಲವಿಕೆ ಇಲ್ಲಿ ಎಂದಿಗಿಂತಲೂ ಸೊಗಸಾಗಿದೆ. ಕ್ರಿಮಿನಲ್ ಆಗಿ ನಿಜಕ್ಕೂ ಭಯ ಹುಟ್ಟಿಸೋ ‘ಗೊಗ್ಗಯ್ಯ’ನಾಗಿ ಗಮನ ಸೆಳೆಯುತ್ತಾರೆ. ಅವರ ಗೆಟಪ್ ಇಲ್ಲಿ ವಿಶೇಷವಾಗಿದೆ.
ಅದಿತಿ ಪ್ರಭುದೇವ ಸ್ಪಾ ಹುಡುಗಿಯಾಗಿ ಅಷ್ಟೇನೂ ಪ್ರಭಾವ ಬೀರಿಲ್ಲ. ಅಲಲ್ಲಿ ಭಾವುಕತೆಗೆ ದೂಡುವ ಪ್ರೇಮಿಯಾಗಿ ಜಮಾಲಿಗುಡ್ಡದ ಭಾಗವಾಗಿದ್ದಾರೆ. ಪ್ರಕಾಶ್ ಬೆಳವಾಡಿ ಅಂತಹ ಕಲಾವಿದರನ್ನು ಇಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು. ಸಿಕ್ಕ ಪಾತ್ರಕ್ಕೆ ಅವರು ನ್ಯಾಯ ಸಲ್ಲಿಸಿದ್ದಾರೆ. ನಟ ನಂದಗೋಪಾಲ್ ಅವರನ್ನೂ ಸೀಮಿತಗೊಳಿಸಲಾಗಿದೆ. ಭಾವನಾ ಅವರಿಲ್ಲಿ ಸಿಗರೇಟ್ ಸೇದಿ ಹೊಗೆ ಬಿಡುವುದಕ್ಕಷ್ಟೇ ಸೀಮಿತ. ಉಳಿದಂತೆ ಹಾಗೆ ಬಂದು ಹೋಗುವ ಪಾತ್ರಗಳು ನಿರ್ದೇಶಕರ ಅಣತಿಯಂತೆ ಕಾರ್ಯ ನಿರ್ವಹಿಸಿವೆ.
ಮಾಸ್ತಿ ಹಾಗು ಕುಶಾಲ್ ಅವರ ಸಂಭಾಷಣೆ ತಕ್ಕಮಟ್ಟಿಗೆ ಗಟ್ಟಿಯಾಗಿದೆ. ಅರ್ಜುನ್ ಜನ್ಯ ಅವರ ಸಂಗೀತದ ಒಂದು ಹಾಡು ಪರವಾಗಿಲ್ಲ. ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಕಥೆಯ ವೇಗಕ್ಕೆ ಅಷ್ಟಾಗಿ ಹೆಗಲು ಕೊಡಲಾಗಿಲ್ಲ. ಅವರ ಆಲಾಪದ ದನಿಯೇ ಇಲ್ಲಿ ಹಿನ್ನೆಲೆಯಾಗಿರುವುದು ಕೊಂಚ ವೇಗಮಿತಿಗೆ ಕಾರಣ. ಇನ್ನು, ಹರೀಶ್ ಕೊಮ್ಮೆ ಕತ್ತರಿ ಪ್ರಯೋಗ ವೇಗ ಹೆಚ್ಚಿಸಿದೆ. ಕಾರ್ತಿಕ್ ಅವರ ಕ್ಯಾಮೆರಾ ಕೈ ಚಳಕದಲ್ಲಿ ಜಮಾಲಿಗುಡ್ಡದ ಸೊಬಗು ತುಂಬಿದೆ.
ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಗೆಲುತ್ತಿವೆ. ಆ ಸಾಲಿಗೆ ಸೇರುವ ಗ್ರಾಮೀಣ ಸೊಗಡಿನ “ದೊಡ್ಡಹಟ್ಟಿ ಬೋರೇಗೌಡ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ.
ನಾನು ಈ ಹಿಂದೆ “ತರ್ಲೆ ವಿಲೇಜ್”, “ಪರಸಂಗ” ಚಿತ್ರಗಳನ್ನು ನಿರ್ದೇಶಿಸಿದ್ದೆ. ಈಗ ಗ್ರಾಮೀಣ ಸೊಗಡಿನ “ದೊಡ್ಡಹಟ್ಟಿ ಬೋರೇಗೌಡ” ಚಿತ್ರವನ್ನು ನಿರ್ದೇಶಿಸಿದ್ದೇನೆ. ನಮ್ಮ ಚಿತ್ರ ಮನೆಯ ಸುತ್ತ ಹೆಣೆಯಲಾಗಿರುವ ಕಥೆ.
ಹಳ್ಳಿಯಲ್ಲಿ ಬಡವರಿಗೆ ಸರ್ಕಾರದಿಂದ ನೀಡುವ ಆಶ್ರಯ ಯೋಜನೆ ಮನೆಯನ್ನು ವ್ಯಕ್ತಿಯೊಬ್ಬ ಪಡೆದುಕೊಳ್ಳಲು ಯಾವರೀತಿ ಕಷ್ಟಪಡುತ್ತಾನೆ ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ನಮ್ಮ ಚಿತ್ರಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ದೊರಕಿದೆ.
ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಇದು ಕಲಾತ್ಮಕ ಚಿತ್ರ ಅಲ್ಲ. ಕಮರ್ಷಿಯಲ್ ಚಿತ್ರ. ನನ್ನ ಪ್ರಕಾರ ಆರರಿಂದ ಅರವತ್ತು ವರ್ಷಗಳ ತನಕ ಎಲ್ಲರಿಗೂ ಹಿಡಿಸುವ ಚಿತ್ರಗಳು ಕಮರ್ಷಿಯಲ್ ಚಿತ್ರಗಳೇ.ಈ ಚಿತ್ರದಲ್ಲಿ ಗ್ರಾಮೀಣ ಪ್ರತಿಭೆಗಳೇ ಅಭಿನಯಿಸಿರುವುದು ವಿಶೇಷ. ಮೂರು ತಿಂಗಳ ಕಾಲ ಎಲ್ಲರಿಗೂ ತರಬೇತಿ ನೀಡಲಾಗಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಕೆ.ಎಂ.ರಘು.
ನಾನು ಮೈಸೂರಿನ ಬಳಿಯ ಬೀರಹುಂಡಿ ಎಂಬ ಹಳ್ಳಿಯವನು. ಗ್ರಾಮ ಪಂಚಾಯತಿ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ. ರಂಗಭೂಮಿಯಲ್ಲಿ ಅನುಭವವಿದೆ. ಹಿರಿತೆರೆಯಲ್ಲಿ ಮೊದಲ ಚಿತ್ರ. ನಾನೇ ಬೋರೇಗೌಡ ಪಾತ್ರ ಮಾಡಿದ್ದೀನಿ ಎಂದರು ನಟ ಶಿವಣ್ಣ ಬೀರಹುಂಡಿ.
ಚಿತ್ರದಲ್ಲಿ ಅಭಿನಯಿಸಿರುವ ಗೀತಾ, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್ ಮುಂತಾದ ಕಲಾವಿದರು ಅಭಿನಯದ ಅನುಭವ ಹಂಚಿಕೊಂಡರು. ಹಾಡುಗಳ ಬಗ್ಗೆ ಹರ್ಷವರ್ಧನ್ ರಾಜ್ ಮಾಹಿತಿ ನೀಡಿದರು.
ನಿರ್ಮಾಪಕರಾದ ಶಶಿಕುಮಾರ್ ಬಿ ಸಿ ಹಾಗೂ ಲೋಕೇಶ್ ಕೆ.ಎಂ ಹಾಗೂ ಚಿತ್ರ ಬಿಡುಗಡೆಗೆ ಸಹಕಾರ ನೀಡಿರುವ ವೆಂಕಟೇಶ, ಅನ್ನಪೂರ್ಣ ಇದ್ದರು.
ಕನ್ನಡದಲ್ಲಿ ಈಗಾಗಲೇ ದ್ವನಿ ಇಲ್ಲದವರ ಕುರಿತ ಸಿನಿಮಾಗಳು ಬಂದಿವೆ. ಅವುಗಳು ಸದ್ದು ಮಾಡಿವೆ ಕೂಡ. ಅದರಲ್ಲೂ ಕಾಡೇ ನಮ್ಮ ಬದುಕು ಅಂದುಕೊಂಡು ಉಸಿರಾಡುತ್ತಿರುವ ಜನರ ಬದುಕಿನ ಚಿತ್ರಣವನ್ನೂ ಕಟ್ಟಿಕೊಡಲಾಗಿದೆ. ಅಂತಹ ಸಿನಿಮಾಗಳ ಸಾಲಿಗೆ ಈಗ ‘ಅಡವಿ’ ಎಂಬ ಸಿನಿಮಾ ಕೂಡ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಆ ಸಿನಿಮಾ ಚಿತ್ರೀಕರಣ ಪೂರೈಸಿದೆ. ಆ ಸಿನಿಮಾ ಕುರಿತ ಒಂದು ವರದಿ ಇದು…
ಕಲೆ ತನ್ನ ದೈವ ಅಂದುಕೊಂಡು, ಸದಾ ಹೋರಾಟದ ಮನೋಭಾವನೆಯಲ್ಲೇ ದಿನ ಸವೆಸುತ್ತಿರುವ, ಜನಪರ ಕಾಳಜಿ ಇರುವ, ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಟೈಗರ್ ನಾಗ್, ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಇದು ಅವರ ಇಷ್ಟು ವರ್ಷಗಳ ಅನುಭವದ ಪಾಕ. ಯಶಸ್ವಿಯಾಗಿ ಸಿನಿಮಾ ಮುಗಿಸಿರುವ ಖುಷಿಯಲ್ಲಿ ಟೈಗರ್ ನಾಗ್ ಹಾಗು ಅವರ ತಂಡವಿದೆ.
ಅಂದಹಾಗೆ, ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ನ ಮೊದಲ ಸಿನಿಮಾ ಇದು. ಟೈಗರ್ ನಾಗ್ ಅವರೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸದ್ಯ ‘ಅಡವಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಬೇಕಾದ ಕೆಲಸಗಳನ್ನು ಚಿತ್ರತಂಡ ತಯಾರಿ ನಡೆಸುತ್ತಿದೆ.
ಅಡವಿ ಕಥೆ ಏನು?
ಕಾಡನ್ನೇ ಸರ್ವಸ್ವ ಎಂದು ನಂಬಿ ಬದುಕುವ ದ್ರಾವಿಡ ಜನರ ಬದುಕು ಬವಣೆಯ ಕಥೆ ಇದು. ಕರ್ನಾಟಕದ ಪ್ರಥಮ ದಲಿತ ದೊರೆ ಕೊರಂಗರಾಯ ಆಳಿದ ಐತಿಹಾಸಿಕ ಹಿನ್ನೆಲೆ ಹಾಗು ಸಿದ್ದ ಸಾಧು ಸಂತರ ತಪೋ ಭೂಮಿ ಆಯುರ್ವೇದದಲ್ಲಿ ಪ್ರಖ್ಯಾತಿ ಪಡೆದ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಸಿದ್ದರ ಬೆಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಮುಹೂರ್ತಕ್ಕೆ ಅಲ್ಲೇ ಚಾಲನೆ ನೀಡಲಾಗಿತ್ತು ಅಲ್ಲೇ ಚಿತ್ರಕ್ಕೆ ಕುಂಬಳಕಾಯಿ ಹೊಡೆದಿದ್ದು ವಿಶೇಷ.
ಚಿತ್ರಕ್ಕಾಗಿ ಸಿದ್ದರ ಬೆಟ್ಟದಲ್ಲಿ ಆದಿವಾಸಿಗಳು ವಾಸಿಸುವ ಗುಡಿಸಲ ಹಟ್ಟಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಹಿರಿಯ ಕಲಾ ನಿರ್ದೇಶಕ ಬಾಬು ಖಾನ್ ಅವರ ಕಲಾ ನಿರ್ದೇಶನವಿದೆ. ಕಲಾ ಸಹಾಯಕರ ತಂಡ ಹಗಲಿರುಳನ್ನದೆ ಶ್ರಮಿಸಿ ಗುಡಿಸಲ ಹಟ್ಟಿ ಸೆಟ್ ಜೊತೆಗೆ ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್ ಸೆಟ್ ಕೂಡ ನಿರ್ಮಾಣ ಮಾಡಲಾಗಿತ್ತು.
ಸಿದ್ದರಬೆಟ್ಟ. ಚಿಕ್ಕಮಗಳೂರು. ಸಕಲೇಶಪುರ. ಮತ್ತಿತರ ಸುಂದರ ತಾಣಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು ಅರಣ್ಯ ರಕ್ಷಣೆಯ ಜಾಗೃತಿ ಜೊತೆಗೆ ಆದಿವಾಸಿ ದ್ರಾವಿಡ ಜನರು ತಮ್ಮ ಬದುಕಿಗಾಗಿ ಏನೆಲ್ಲಾ ಹೋರಾಟ ಮಾಡಬೇಕಾಗುತ್ತದೆ ಎಂಬ ಆದಿವಾಸಿ ಜನರ ಹಾಗೂ ವ್ಯವಸ್ಥೆಯ ಸಂಘರ್ಷದ ಕಥೆಯನ್ನು ತೆರೆದಿಡುವ ಈ ಚಿತ್ರ, ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರ ಆಗಲಿದೆ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಮೂರು ಹಾಡುಗಳಿವೆ. ಎರಡು ಭರ್ಜರಿ ಸಾಹಸಗಳಿವೆ. ಅದೇನೆ ಇರಲಿ, ಟೈಗರ್ ನಾಗ್ ಅವರು ಶೋಷಿತ ವರ್ಗದ ಕಥೆ ಇಟ್ಟುಕೊಂಡು ಸಿನಿಮಾ ಮಾಡಿರುವ ಅವರು, ಪತ್ರಕರ್ತರಾಗಿ, ಕೊರಟಗೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ್ದಾರೆ. ಇದರೊಂದಿಗೆ ಹೋರಾಟದ ಹಾದಿಯಲ್ಲಿರುವ ಟೈಗರ್ ನಾಗ್, ಸುಮಾರು 17 ಕ್ಕೂ ಹೆಚ್ಚು ಭ್ರಷ್ಟ ಅಧಿಕಾರಿಗಳನ್ನು ಎಸಿಬಿ ಗೆ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ದಶಕದಿಂದಲೂ ಶೋಷಿತರ ಪರ, ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ವಿಭಿನ್ನ ಹೋರಾಟಗಳ ಮೂಲಕ ದಿನ ಸವೆಸಿದ್ದಾರೆ. ತಳ ಸಮುದಾಯಗಳ ಪರ ಭ್ರಷ್ಟ ಅಧಿಕಾರಿಗಳ ವಿರುದ್ಧ ದ್ವನಿ ಎತ್ತುತ್ತಿರುವ ಅವರು, ಮೊದಲ ಪ್ರಯತ್ನದಲ್ಲೇ ಚರ್ಚೆಗೆ ಗ್ರಾಸವಾಗುವ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಸಮಾಜದ ಅಂಕು ಡೊಂಕು ತಿದ್ದುವ, ಭ್ರಷ್ಟಾಚಾರ ತೋರಿಸುವ, ಮಾನವ ಹಕ್ಕು ಉಲ್ಲಂಘನೆಯಂತಹ ವಿಷಯಗಳಿವೆ. ಇವೆಲ್ಲದರ ಜೊತೆ, ಸಮಾನತೆಗೆ ಹೋರಾಡುವ, ಹೋರಾಟಗಾರರನ್ನು ಬಳಸಿಕೊಂಡು ಚಿತ್ರೀಕರಿಸಿರುವುದು ಮತ್ತೊಂದು ವಿಶೇಷ.
ನಿರ್ಮಾಪಕ ಬಿಎಎಸ್ ಮಧುಗಿರಿ ಸಾಧಿಕ್ ಸಾಬ್
ಜಗದೀಶ್ ಮಹಾದೇವ್ ( ವಕೀಲ್ ಸಾಬ್ ) ಹ.ರಾ.ಮಹಿಷಾ. ಕುಣಿಗಲ್ ರಮೇಶ್ ಸೇರಿದಂತೆ ಹಲವು ಹೋರಾಟಗಾರರು ಅಭಿನಯಿಸಿದ್ದಾರೆ. ಮೋಹನ್ ಮೌರ್ಯ ನಾಯಕರಾಗಿ ನಟಿಸಿದ್ದಾರೆ. ಮಾಸ್ಟರ್ ಚಿರುಶ್ರೀ ನಾಗ್. ಅರುಂಧತಿ ಲಾಲ್, ಅರ್ಜುನ್ ಪಾಳ್ಳೇಗಾರ್ ಹಾಗು ವಿಲನ್ ಆಗಿ ಟೈಗರ್ ನಾಗ್ ಕೂಡ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ರವಿಕುಮಾರ್ ಸಾನ, ಆರ್. ಅನಂತರಾಜ್, ರಥವಾರಂ ದೇವು, ಶಿಲ್ಪಾ ನಾಗ್, ವಾಲೆ ಚಂದ್ರು, ರಾಮನಾಯಕ್, ವೃಶ್ಚಿಕ, ಮಂಜೀವ, ಸರಸ್ವತಿ, ಬೇಬಿ ಸಿಂಚನ, ಪತ್ರಕರ್ತರಾದ ಶಿವಾನಂದ, ಕೆ ಆರ್ ಓಬಳರಾಜು ನವೀನ್, ಆನಂದ್ ದಿನೇಶ್, ಅರುಣ್ ಸೇರಿದಂತೆ ಇತರರು ನಟಿಸಿದ್ದಾರೆ.
ನಿರ್ದೇಶಕ ಟೈಗರ್ ನಾಗ್
ಈ ಚಿತ್ರಕ್ಕೆ ಬಿಎಎಸ್ ಮಧುಗಿರಿ ಸಾಧಿಕ್ ಸಾಬ್ ನಿರ್ಮಾಪಕರು. ವಿಪಿನ್ ರಾಜ್ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತವಿದೆ. ಎ.ಆರ್. ಸಾಯಿ ರಾಮ್ ಸಂಭಾಷಣೆ, ಸಾಹಸವಿದೆ. ಕೆ. ಮಂಜುನಾಥ್ ಕೋಟೆ ಕೆರೆ. ಸಹ ನಿರ್ದೇಶಕರು. ಪುಟ್ಟರಾಜ, ದಯಾನಂದ್ ಸಾಥ್ ನೀಡಿದ್ದಾರೆ. ಸದ್ಯ ಚಿತ್ರ ಸಂಕಲನ ಕಾರ್ಯದಲ್ಲಿದೆ.
ಕನ್ನಡದಲ್ಲಿ ಹಲವು ವಿಭಿನ್ನ ಕಥಾಹಂದರದ ಸಿನಿಮಾ ಮೂಲಕ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಕಾಕ್ಟೈಲ್’ ಸಿನಿಮಾದ ಯುವ ಪ್ರತಿಭೆ ವಿರೇನ್ ಕೇಶವ್ ಕೂಡ ಸೇರಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಕನ್ನಡದಲ್ಲಿ ಗಟ್ಟಿನೆಲೆ ಕಟ್ಟಿಕೊಡುವ ವಿಶ್ವಾಸ ಅವರದ್ದು. ಕಾಕ್ಟೈಲ್’ ಜನವರಿ 6 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕೆ ಆರ್ ಜಿ ಸ್ಟುಡಿಯೋ ಈ ಸಿನಿಮಾ ರಿಲೀಸ್ ಮಾಡುವ ಜವಾಬ್ದಾರಿ ಹೊತ್ತಿದೆ.
ವಿಜಯಲಕ್ಷ್ಮಿ ಕಂಬೈನ್ಸ್ ಬ್ಯಾನರ್ ನಲ್ಲಿ ಡಾ. ಶಿವಪ್ಪ ಈ ಸಿನಿಮಾ ನಿರ್ಮಿಸಿದ್ದಾರೆ. ಶ್ರೀರಾಮ್ ನಿರ್ದೇಶನ ಮಾಡಿರುವ”ಕಾಕ್ಟೈಲ್” ಚಿತ್ರದ ಟ್ರೇಲರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಕೂಡ ಈ ವೇಳೆ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ಮಾಪಕ ಡಾ.ಶಿವಪ್ಪ ಮಾತನಾಡಿ, ನಾನು ಈ ಸಮಯದಲ್ಲಿ ಮೊದಲು ನೆನಪಿಸಿಕೊಳ್ಳುವುದು ಪುನೀತ್ ರಾಜಕುಮಾರ್ ಅವರನ್ನು. ನನ್ನ ಮಗನನ್ನು ನಾಯಕನನ್ನಾಗಿ ಮಾಡುವುದರಿಂದ ಹಿಡಿದು, ನಮ್ಮ ಚಿತ್ರದ ಎಲ್ಲಾ ವಿಷಯಗಳನ್ನು ಅವರ ಬಳಿ ಹಂಚಿಕೊಳ್ಳುತ್ತಿದ್ದೆ. ಅವರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಧೈರ್ಯ ತುಂಬುತ್ತಿದ್ದರು. ಚಿತ್ರ ಬಿಡುಗಡೆಯ ಹೊತ್ತಿಗೆ ಅವರಿಲ್ಲದುರುವುದು ತುಂಬಾ ದುಃಖವಾಗುತ್ತಿದೆ. ಇಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಅಶ್ವಿನಿ ಪುನೀತ್ ರಾಜಕುಮಾರ್ ಬಂದಿದ್ದಾರೆ. ಅವರಿಗೆ ಅನಂತ ಧನ್ಯವಾದಗಳು. ಈ ಸಿನಿಮಾ ಮೂಲಕ ವಿರೇನ್ ಕೇಶವ್ ಹೀರೋ ಆಗುತ್ತಿದ್ದಾನೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದರು ನಿರ್ಮಾಪಕ ಡಾ.ಶಿವಪ್ಪ.
ನನಗೆ ಸುಮಾರು ಹದಿನೈದು ವರ್ಷಗಳಿಂದ ಚಿತ್ರರಂಗದ ಒಡನಾಟವಿದೆ. “ಕಾಕ್ಟೈಲ್” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಲವ್, ಹಾರರ್, ಸೆಂಟಿಮೆಂಟ್, ಸಸ್ಪೆನ್ಸ್ ಥ್ರಿಲ್ಲರ್ ಎಲ್ಲವೂ ಇದೆ. ಇದು ಒಂದೇ ಜಾನರ್ ನ ಚಿತ್ರವಲ್ಲ. ಕನ್ನಡದಲ್ಲಿ ಇದು ಹೊಸ ನರೇಶನ್ ಸಿನಿಮಾ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಕೆಲವು ಸ್ನೇಹಿತರು ಸಹ ಮೆಚ್ಚುಗೆ ಸೂಚಿಸಿದರು.
ಚಿತ್ರ ಉತ್ತಮವಾಗಿ ಬರಲು ಕಾರಣ ನನ್ನ ತಂಡ. ನಿವೃತ್ತ ಐ ಎ ಎಸ್ ಅಧಿಕಾರಿಯಾಗಿರುವ ನಿರ್ಮಾಪಕ ಡಾ.ಶಿವಪ್ಪ ಅವರ ಮಗ ವೀರೆನ್ ಕೇಶವ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜನವರಿ 6 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಜನರ ಪ್ರೋತ್ಸಾಹ ಸಿಕ್ಕರೆ, ಮುಂದಿನ ದಿನಗಳಲ್ಲಿ ಭಾಗ 2 ಮಾಡುತ್ತೇವೆ ಎಂದರು ನಿರ್ದೇಶಕ ಶ್ರೀರಾಮ್.
ನಾಲ್ಕೈದು ಡ್ರಿಂಕ್ಸ್ ಗಳ ಮಿಶ್ರಣಕ್ಕೆ “ಕಾಕ್ಟೈಲ್” ಎನ್ನುತ್ತಾರೆ. ನಮ್ಮ ಸಿನಿಮಾದಲ್ಲೂ ಹಾಗೆ. ಲವ್ ಇದೆ. ಲವ್ ಜಾನರ್ ಸಿನಿಮಾ ಅಲ್ಲ. ಸೆಂಟಿಮೆಂಟ್ ಇದೆ ಸೆಂಟಿಮೆಂಟ್ ಸಿನಿಮಾ ಅಲ್ಲ. ಎಲ್ಲಾ ಅಂಶಗಳನ್ನು ಒಳಗೊಂಡಿರುವ ಬೇರೆ ರೀತಿಯ ಸಿನಿಮಾ ನಮ್ಮದು. ವಿಕ್ರಮ್ ಎಂಬುದು ನನ್ನ ಪಾತ್ರದ ಹೆಸರು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಾಯಕ ವೀರೆನ್ ಕೇಶವ್.
ನಾಯಕಿ ಚರಿಶ್ಮಾ ಸಹ ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಲೋಕಿ ತವಸ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕೆಲವು ಸಿನಿಮಾಗಳೇ ಹಾಗೆ. ಶೀರ್ಷಿಕೆ ಮೂಲಕವೇ ನಿರೀಕ್ಷೆ ಹೆಚ್ಚಿಸಿಬಿಡುತ್ತವೆ. ಅಂತಹ ನಿರೀಕ್ಷೆ ಸಿನಿಮಾಗಳ ಸಾಲಿಗೆ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಿನಿಮಾ ಕೂಡ ಸೇರಿದೆ. ಈಗ ಈ ಸಿನಿಮಾನೂ ಸೊಗಸಾಗಿ ಮೂಡಿ ಬಂದಿದೆ ಎಂಬ ಖುಷಿ ಚಿತ್ರತಂಡದ್ದು. ಸಿನಿಮಾದ ಪೋಸ್ಟರ್ ಮತ್ತು ಹಾಡು ಈಗಾಗಲೇ ಮಜವೆನಿಸಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗು ಹಾಡೊಂದು ಬಿಡುಗಡೆಯಾಗಿದೆ.
‘ಗಂಧದಗುಡಿ’ ನಿರ್ದೇಶಕ ಅಮೋಘ ವರ್ಷ ಈ ಸಂದರ್ಭದಲ್ಲಿ ಸಿನಿಮಾ ತಂಡಕ್ಕೆ ಶುಭ ಕೋರಿ, ಇದೊಂದು ಅದ್ಭುತ ಕಲ್ಪನೆಯ ಕಥೆಯ ಸಿನಿಮಾ. ಸಿನಿಮಾ ಶೀರ್ಷಿಕೆಯೇ ಖುಷಿಕೊಟ್ಟಿದೆ. ಸಿನಿಮಾ ಕೂಡ ನೋಡುಗರಿಗೆ ಇಷ್ಟವಾಗುತ್ತೆ ಎಂಬುದಕ್ಕೆ ಚಿತ್ರದ ಟ್ರೇಲರ್ ಸಾಕ್ಷಿ. ಟ್ರೇಲರ್ ನೋಡಿದರೆ, ಇಲ್ಲಿ ಒಬ್ಬ ಫೋಟೋಗ್ರಾಫರ್ ನ ಭಾವನೆ, ತೊಳಲಾಟ, ಪೇಚಾಟ, ಬದುಕು ಎಲ್ಲವೂ ಇಲ್ಲಿ ಅನಾವರಣಗೊಂಡಿದೆ ಅನಿಸುತ್ತದೆ. ಕನ್ನಡದಲ್ಲಿ ಈ ರೀತಿಯ ವಿಭಿನ್ನ ಕಥಾಹಂದರದ ಸಿನಿಮಾಗಳು ಹೆಚ್ಚೆಚ್ಚು ಬರಲಿ. ಸಿನಿಮಾ ಎಲ್ಲರಿಗೂ ಯಶಸ್ಸು ತಂದುಕೊಡಲಿ ಅಂದರು.
ನಟ ಶಿಶಿರ್ ಕೂಡ ಸಿನಿಮಾ ತಂಡದ ಶ್ರಮದ ಕುರಿತು ಮಾತನಾಡಿದರು. ಒಳ್ಳೆಯ ಸಿನಿಮಾ ಆಗಲು ಮೊದಲು ಒಳ್ಳೆಯ ಮನಸ್ಸುಗಳು ಸೇರಬೇಕು. ಅವೆಲ್ಲದರಿಂದ ಒಳ್ಳೆಯ ಬಸಿನಿಮಾ ಮೂಡಿಬಂದಿದೆ. ಇದೊಂದು ಎಲ್ಲರ ಮನಸ್ಸಲ್ಲಿ ಉಳಿಯೋ ಚಿತ್ರವಾಗಲಿ ಅಂದರು ಅವರು.
ಇದೇ ವೇಳೆ ಚಿತ್ರತಂಡ ಸಿನಿಮಾರಂಗದ ಹಿರಿಯ ಛಾಯಾಗ್ರಾಹಕ ಕೆ.ಎನ್.ನಾಗೇಶ್ ಕುಮಾರ್ ಅವರನ್ನು ಪ್ರೀತಿಯಿಂದ ಸನ್ಮಾನಿಸಿತು. ಈ ಚಿತ್ರವೇ ಕ್ಯಾಮರಾ ಮತ್ತು ಒಬ್ಬ ಫೋಟೋಗ್ರಾಫರ್ ಕುರಿತ ಕಥೆ. ಹಾಗಾಗಿ ನಾಗೇಶ್ ಕುಮಾರ್ ಅವರನ್ನೇ ಆಹ್ವಾನಿಸಿ, ಅದಕ್ಕೊಂದು ಅರ್ಥ ಕಲ್ಪಿಸಿದ್ದು ವಿಶೇಷವಾಗಿತ್ತು.
ಈಗಾಗಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು, ಜನವರಿ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಹಾಡುಗಳು ಮೆಚ್ಚುಗೆ ಪಡೆದಿವೆ.
ಇದು ಒಬ್ಬ ಫೋಟೋಗ್ರಾಫರ್ ಜೀವನದ ಕಥೆ. ಈವರೆಗೆ ಆ ಕುರಿತು ಬರದಂತಹ ಕಥೆ ಇಲ್ಲಿದೆ. ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ, ಚಿತ್ರಕ್ಕೆ ಎಲ್ಲರ ಹಾರೈಕೆ ಇರಲಿ ಎಂಬುದು ಚಿತ್ರತಂಡದ ಮಾತು.
ಈಗಂತೂ ಜನರು ಹೊಸ ಬಗೆಯ ಕಥೆ ಆಯ್ಕೆ ಮಾಡುತ್ತಾರೆ. ಅಂತಹವರಿಗೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ರುಚಿಸಲಿದೆ ಎಂಬುದು ನಿರ್ಮಾಪಕ ವೆಂಕಟೇಶ್ವರ ರಾವ್ ಬಳ್ಳಾರಿ ಅವರ ಮಾತು. ಇದು ಅವರ ಸೃಜನ ಪ್ರೊಡಕ್ಷನ್ ಅಡಿ ನಿರ್ಮಿಸಿದ ಮೊದಲ ಚಿತ್ರ.
ಅವರು, ಸಿನಿಮಾ ಮಾಡ್ತೀನಿ ಅಂದಾಗ,ಹಲವಾರು ಜನ ಸಿನಿಮಾ ಬೇಡ ಎಂದು ತಲೆಕೆಡಿಸಲು ಪ್ರಯತ್ನ ಪಟ್ಟಿದ್ದರಂತೆ. , ಆದರೆ ಈ ಸಿನೆಮಾ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ಅವರದು.
ಇನ್ನು ನಿರ್ದೇಶಕ ರಾಜೇಶ್ ಧ್ರುವ ಅವರು, 23 ದಿನ ಮಳೆಯಲ್ಲೇ ಚಿತ್ರೀಕರಿಸಿದ್ದಾರಂತೆ. ಅವರ ಊರಿನಲ್ಲಿ ಅನುಭವಕ್ಕೆ ಬಂದ ಹಲವು ಅನುಭವನ್ನು, ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಂಡು ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಅರಿವು ಮಾಡಿಸಿ ಪಾತ್ರಕ್ಕೆ ತಕ್ಕಂತೆ ತಯಾರು ಮಾಡಿಸಿ ಶೂಟಿಂಗ್ ಮಾಡಿದ್ದಾರಂತೆ.
ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು ಈ ವೇಳೆ ಅನುಭವನ್ನು ಹಂಚಿಕೊಂಡರು, ಈ ಸಿನೆಮಾ ಜನವರಿ 6 ರಂದು ಬಿಡುಗಡೆಯಾಗಲಿದೆ.
ಅಂದಹಾಗೆ, ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತ ಮುತ್ತ ಚಿತ್ರೀಕರಣ ನಡೆದಿದೆ. ಈ ಚಿತ್ರದ ವಿಶೇಷತೆ ಅಂದರೆ, ಬಳಸಿರುವ ಉತ್ತರ ಕನ್ನಡ ಭಾಷೆ. ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಜೊತೆಗೊಂದು ನವಿರಾದ ಲವ್ ಸ್ಟೋರಿ.
ಚಿತ್ರದಲ್ಲಿ ರಾಜೇಶ್ ಧ್ರುವ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಕಾಣಿಸಿಕೊಂಡಿದ್ದಾರೆ.
ಕಥೆ – ಚಿತ್ರಕಥೆಗೆ ಅಭಿಷೇಕ್ ಶಿರಸಿ ಪಲ ಹಾಗೂ ಪೃಥ್ವಿಕಾಂತ ಪೆನ್ನು ಹಿಡಿದಿದ್ದಾರೆ. ಅಜಿತ್ ಬೊಪ್ಪನಳ್ಳಿ ಸಂಭಾಷಣೆ ಬರೆದಿದ್ದಾರೆ.
ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣವಿದೆ. ಗಣಪತಿ ಭಟ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿಗೆ ಶ್ರೀರಾಮ್ ಗಂಧರ್ವ ಸಂಗೀತ ನೀಡಿದ್ದಾರೆ ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಇದೆ, ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.