ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಟ್ರೇಲರ್ ರಿಲೀಸ್: ಜನವರಿ 6 ಕ್ಕೆ ಚಿತ್ರ ಬಿಡುಗಡೆ…

ಕೆಲವು ಸಿನಿಮಾಗಳೇ ಹಾಗೆ. ಶೀರ್ಷಿಕೆ ಮೂಲಕವೇ ನಿರೀಕ್ಷೆ ಹೆಚ್ಚಿಸಿಬಿಡುತ್ತವೆ. ಅಂತಹ‌ ನಿರೀಕ್ಷೆ ಸಿನಿಮಾಗಳ ಸಾಲಿಗೆ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಿನಿಮಾ ಕೂಡ ಸೇರಿದೆ. ಈಗ ಈ ಸಿನಿಮಾನೂ ಸೊಗಸಾಗಿ ಮೂಡಿ ಬಂದಿದೆ ಎಂಬ ಖುಷಿ ಚಿತ್ರತಂಡದ್ದು. ಸಿನಿಮಾದ ಪೋಸ್ಟರ್ ಮತ್ತು ಹಾಡು ಈಗಾಗಲೇ ಮಜವೆನಿಸಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗು ಹಾಡೊಂದು ಬಿಡುಗಡೆಯಾಗಿದೆ.

‘ಗಂಧದಗುಡಿ’ ನಿರ್ದೇಶಕ ಅಮೋಘ ವರ್ಷ ಈ ಸಂದರ್ಭದಲ್ಲಿ ಸಿನಿಮಾ ತಂಡಕ್ಕೆ ಶುಭ ಕೋರಿ, ಇದೊಂದು ಅದ್ಭುತ ಕಲ್ಪನೆಯ ಕಥೆಯ ಸಿನಿಮಾ. ಸಿನಿಮಾ ಶೀರ್ಷಿಕೆಯೇ ಖುಷಿಕೊಟ್ಟಿದೆ. ಸಿನಿಮಾ ಕೂಡ ನೋಡುಗರಿಗೆ ಇಷ್ಟವಾಗುತ್ತೆ ಎಂಬುದಕ್ಕೆ ಚಿತ್ರದ ಟ್ರೇಲರ್ ಸಾಕ್ಷಿ. ಟ್ರೇಲರ್ ನೋಡಿದರೆ, ಇಲ್ಲಿ ಒಬ್ಬ ಫೋಟೋಗ್ರಾಫರ್ ನ ಭಾವನೆ, ತೊಳಲಾಟ, ಪೇಚಾಟ, ಬದುಕು ಎಲ್ಲವೂ ಇಲ್ಲಿ ಅನಾವರಣಗೊಂಡಿದೆ ಅನಿಸುತ್ತದೆ. ಕನ್ನಡದಲ್ಲಿ ಈ ರೀತಿಯ ವಿಭಿನ್ನ ಕಥಾಹಂದರದ ಸಿನಿಮಾಗಳು ಹೆಚ್ಚೆಚ್ಚು ಬರಲಿ. ಸಿನಿಮಾ ಎಲ್ಲರಿಗೂ ಯಶಸ್ಸು ತಂದುಕೊಡಲಿ ಅಂದರು.

ನಟ ಶಿಶಿರ್ ಕೂಡ ಸಿನಿಮಾ ತಂಡದ ಶ್ರಮದ ಕುರಿತು‌ ಮಾತನಾಡಿದರು. ಒಳ್ಳೆಯ ಸಿನಿಮಾ ಆಗಲು ಮೊದಲು ಒಳ್ಳೆಯ ಮನಸ್ಸುಗಳು ಸೇರಬೇಕು. ಅವೆಲ್ಲದರಿಂದ ಒಳ್ಳೆಯ ಬಸಿನಿಮಾ ಮೂಡಿಬಂದಿದೆ. ಇದೊಂದು ಎಲ್ಲರ ಮನಸ್ಸಲ್ಲಿ ಉಳಿಯೋ ಚಿತ್ರವಾಗಲಿ ಅಂದರು ಅವರು.

ಇದೇ ವೇಳೆ ಚಿತ್ರತಂಡ ಸಿನಿಮಾರಂಗದ ಹಿರಿಯ ಛಾಯಾಗ್ರಾಹಕ ಕೆ.ಎನ್.ನಾಗೇಶ್ ಕುಮಾರ್ ಅವರನ್ನು ಪ್ರೀತಿಯಿಂದ ಸನ್ಮಾನಿಸಿತು. ಈ ಚಿತ್ರವೇ ಕ್ಯಾಮರಾ ಮತ್ತು ಒಬ್ಬ ಫೋಟೋಗ್ರಾಫರ್ ಕುರಿತ ಕಥೆ. ಹಾಗಾಗಿ ನಾಗೇಶ್ ಕುಮಾರ್ ಅವರನ್ನೇ ಆಹ್ವಾನಿಸಿ, ಅದಕ್ಕೊಂದು ಅರ್ಥ ಕಲ್ಪಿಸಿದ್ದು ವಿಶೇಷವಾಗಿತ್ತು.

ಈಗಾಗಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು, ಜನವರಿ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಹಾಡುಗಳು ಮೆಚ್ಚುಗೆ ಪಡೆದಿವೆ.

ಇದು ಒಬ್ಬ ಫೋಟೋಗ್ರಾಫರ್ ಜೀವನದ ಕಥೆ. ಈವರೆಗೆ ಆ ಕುರಿತು ಬರದಂತಹ ಕಥೆ ಇಲ್ಲಿದೆ. ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ, ಚಿತ್ರಕ್ಕೆ ಎಲ್ಲರ ಹಾರೈಕೆ ಇರಲಿ ಎಂಬುದು ಚಿತ್ರತಂಡದ ಮಾತು.

ಈಗಂತೂ ಜನರು ಹೊಸ ಬಗೆಯ ಕಥೆ ಆಯ್ಕೆ ಮಾಡುತ್ತಾರೆ. ಅಂತಹವರಿಗೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ರುಚಿಸಲಿದೆ ಎಂಬುದು ನಿರ್ಮಾಪಕ ವೆಂಕಟೇಶ್ವರ ರಾವ್ ಬಳ್ಳಾರಿ ಅವರ ಮಾತು. ಇದು ಅವರ ಸೃಜನ ಪ್ರೊಡಕ್ಷನ್ ಅಡಿ ನಿರ್ಮಿಸಿದ ಮೊದಲ ಚಿತ್ರ.

ಅವರು, ಸಿನಿಮಾ ಮಾಡ್ತೀನಿ ಅಂದಾಗ,ಹಲವಾರು ಜನ ಸಿನಿಮಾ ಬೇಡ ಎಂದು ತಲೆಕೆಡಿಸಲು ಪ್ರಯತ್ನ ಪಟ್ಟಿದ್ದರಂತೆ.
, ಆದರೆ ಈ ಸಿನೆಮಾ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ಅವರದು.

ಇನ್ನು‌ ನಿರ್ದೇಶಕ ರಾಜೇಶ್ ಧ್ರುವ ಅವರು, 23 ದಿನ ಮಳೆಯಲ್ಲೇ ಚಿತ್ರೀಕರಿಸಿದ್ದಾರಂತೆ. ಅವರ ಊರಿನಲ್ಲಿ ಅನುಭವಕ್ಕೆ ಬಂದ ಹಲವು ಅನುಭವನ್ನು, ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಂಡು ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಅರಿವು ಮಾಡಿಸಿ ಪಾತ್ರಕ್ಕೆ ತಕ್ಕಂತೆ ತಯಾರು ಮಾಡಿಸಿ ಶೂಟಿಂಗ್ ‌ಮಾಡಿದ್ದಾರಂತೆ.

ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು ಈ ವೇಳೆ ಅನುಭವನ್ನು ಹಂಚಿಕೊಂಡರು,
ಈ ಸಿನೆಮಾ ಜನವರಿ 6 ರಂದು ಬಿಡುಗಡೆಯಾಗಲಿದೆ.

ಅಂದಹಾಗೆ, ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತ ಮುತ್ತ ಚಿತ್ರೀಕರಣ ನಡೆದಿದೆ.
ಈ ಚಿತ್ರದ ವಿಶೇಷತೆ ಅಂದರೆ, ಬಳಸಿರುವ ಉತ್ತರ ಕನ್ನಡ ಭಾಷೆ.
ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಜೊತೆಗೊಂದು ನವಿರಾದ ಲವ್ ಸ್ಟೋರಿ.

ಚಿತ್ರದಲ್ಲಿ ರಾಜೇಶ್ ಧ್ರುವ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಕಾಣಿಸಿಕೊಂಡಿದ್ದಾರೆ.

ಕಥೆ – ಚಿತ್ರಕಥೆಗೆ ಅಭಿಷೇಕ್ ಶಿರಸಿ ಪಲ ಹಾಗೂ ಪೃಥ್ವಿಕಾಂತ ಪೆನ್ನು ಹಿಡಿದಿದ್ದಾರೆ. ಅಜಿತ್ ಬೊಪ್ಪನಳ್ಳಿ ಸಂಭಾಷಣೆ ಬರೆದಿದ್ದಾರೆ.

ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣವಿದೆ. ಗಣಪತಿ ಭಟ್ ಸಂಕಲನ ಮಾಡಿದ್ದಾರೆ.
ಚಿತ್ರದಲ್ಲಿ 2 ಹಾಡುಗಳಿಗೆ
ಶ್ರೀರಾಮ್ ಗಂಧರ್ವ ಸಂಗೀತ ನೀಡಿದ್ದಾರೆ‌ ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಇದೆ, ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

Related Posts

error: Content is protected !!