ಕನ್ನಡದಲ್ಲಿ ಈಗಾಗಲೇ ದ್ವನಿ ಇಲ್ಲದವರ ಕುರಿತ ಸಿನಿಮಾಗಳು ಬಂದಿವೆ. ಅವುಗಳು ಸದ್ದು ಮಾಡಿವೆ ಕೂಡ. ಅದರಲ್ಲೂ ಕಾಡೇ ನಮ್ಮ ಬದುಕು ಅಂದುಕೊಂಡು ಉಸಿರಾಡುತ್ತಿರುವ ಜನರ ಬದುಕಿನ ಚಿತ್ರಣವನ್ನೂ ಕಟ್ಟಿಕೊಡಲಾಗಿದೆ. ಅಂತಹ ಸಿನಿಮಾಗಳ ಸಾಲಿಗೆ ಈಗ ‘ಅಡವಿ’ ಎಂಬ ಸಿನಿಮಾ ಕೂಡ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಆ ಸಿನಿಮಾ ಚಿತ್ರೀಕರಣ ಪೂರೈಸಿದೆ. ಆ ಸಿನಿಮಾ ಕುರಿತ ಒಂದು ವರದಿ ಇದು…
ಕಲೆ ತನ್ನ ದೈವ ಅಂದುಕೊಂಡು, ಸದಾ ಹೋರಾಟದ ಮನೋಭಾವನೆಯಲ್ಲೇ ದಿನ ಸವೆಸುತ್ತಿರುವ, ಜನಪರ ಕಾಳಜಿ ಇರುವ, ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಟೈಗರ್ ನಾಗ್, ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಇದು ಅವರ ಇಷ್ಟು ವರ್ಷಗಳ ಅನುಭವದ ಪಾಕ. ಯಶಸ್ವಿಯಾಗಿ ಸಿನಿಮಾ ಮುಗಿಸಿರುವ ಖುಷಿಯಲ್ಲಿ ಟೈಗರ್ ನಾಗ್ ಹಾಗು ಅವರ ತಂಡವಿದೆ.
![](https://cinilahari.in/wp-content/uploads/2022/12/IMG_20221229_085624-1024x319.jpg)
ಅಂದಹಾಗೆ, ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ನ ಮೊದಲ ಸಿನಿಮಾ ಇದು. ಟೈಗರ್ ನಾಗ್ ಅವರೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸದ್ಯ ‘ಅಡವಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಬೇಕಾದ ಕೆಲಸಗಳನ್ನು ಚಿತ್ರತಂಡ ತಯಾರಿ ನಡೆಸುತ್ತಿದೆ.
![](https://cinilahari.in/wp-content/uploads/2022/12/IMG_20221229_085655-1024x476.jpg)
ಅಡವಿ ಕಥೆ ಏನು?
ಕಾಡನ್ನೇ ಸರ್ವಸ್ವ ಎಂದು ನಂಬಿ ಬದುಕುವ ದ್ರಾವಿಡ ಜನರ ಬದುಕು ಬವಣೆಯ ಕಥೆ ಇದು. ಕರ್ನಾಟಕದ ಪ್ರಥಮ ದಲಿತ ದೊರೆ ಕೊರಂಗರಾಯ ಆಳಿದ ಐತಿಹಾಸಿಕ ಹಿನ್ನೆಲೆ ಹಾಗು ಸಿದ್ದ ಸಾಧು ಸಂತರ ತಪೋ ಭೂಮಿ ಆಯುರ್ವೇದದಲ್ಲಿ ಪ್ರಖ್ಯಾತಿ ಪಡೆದ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಸಿದ್ದರ ಬೆಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಮುಹೂರ್ತಕ್ಕೆ ಅಲ್ಲೇ ಚಾಲನೆ ನೀಡಲಾಗಿತ್ತು ಅಲ್ಲೇ ಚಿತ್ರಕ್ಕೆ ಕುಂಬಳಕಾಯಿ ಹೊಡೆದಿದ್ದು ವಿಶೇಷ.
![](https://cinilahari.in/wp-content/uploads/2022/12/IMG_20221229_085500-1024x509.jpg)
ಚಿತ್ರಕ್ಕಾಗಿ ಸಿದ್ದರ ಬೆಟ್ಟದಲ್ಲಿ ಆದಿವಾಸಿಗಳು ವಾಸಿಸುವ ಗುಡಿಸಲ ಹಟ್ಟಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಹಿರಿಯ ಕಲಾ ನಿರ್ದೇಶಕ ಬಾಬು ಖಾನ್ ಅವರ ಕಲಾ ನಿರ್ದೇಶನವಿದೆ. ಕಲಾ ಸಹಾಯಕರ ತಂಡ ಹಗಲಿರುಳನ್ನದೆ ಶ್ರಮಿಸಿ ಗುಡಿಸಲ ಹಟ್ಟಿ ಸೆಟ್ ಜೊತೆಗೆ ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್ ಸೆಟ್ ಕೂಡ ನಿರ್ಮಾಣ ಮಾಡಲಾಗಿತ್ತು.
![](https://cinilahari.in/wp-content/uploads/2022/12/IMG_20221229_085605-1024x487.jpg)
ಸಿದ್ದರಬೆಟ್ಟ. ಚಿಕ್ಕಮಗಳೂರು. ಸಕಲೇಶಪುರ. ಮತ್ತಿತರ ಸುಂದರ ತಾಣಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು ಅರಣ್ಯ ರಕ್ಷಣೆಯ ಜಾಗೃತಿ ಜೊತೆಗೆ ಆದಿವಾಸಿ ದ್ರಾವಿಡ ಜನರು ತಮ್ಮ ಬದುಕಿಗಾಗಿ ಏನೆಲ್ಲಾ ಹೋರಾಟ ಮಾಡಬೇಕಾಗುತ್ತದೆ ಎಂಬ ಆದಿವಾಸಿ ಜನರ ಹಾಗೂ ವ್ಯವಸ್ಥೆಯ ಸಂಘರ್ಷದ ಕಥೆಯನ್ನು ತೆರೆದಿಡುವ ಈ ಚಿತ್ರ, ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರ ಆಗಲಿದೆ ಎಂಬುದು ನಿರ್ದೇಶಕರ ಮಾತು.
![](https://cinilahari.in/wp-content/uploads/2022/12/IMG_20221229_085429-1024x498.jpg)
ಚಿತ್ರದಲ್ಲಿ ಮೂರು ಹಾಡುಗಳಿವೆ. ಎರಡು ಭರ್ಜರಿ ಸಾಹಸಗಳಿವೆ. ಅದೇನೆ ಇರಲಿ, ಟೈಗರ್ ನಾಗ್ ಅವರು ಶೋಷಿತ ವರ್ಗದ ಕಥೆ ಇಟ್ಟುಕೊಂಡು ಸಿನಿಮಾ ಮಾಡಿರುವ ಅವರು, ಪತ್ರಕರ್ತರಾಗಿ, ಕೊರಟಗೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ್ದಾರೆ. ಇದರೊಂದಿಗೆ ಹೋರಾಟದ ಹಾದಿಯಲ್ಲಿರುವ ಟೈಗರ್ ನಾಗ್, ಸುಮಾರು 17 ಕ್ಕೂ ಹೆಚ್ಚು ಭ್ರಷ್ಟ ಅಧಿಕಾರಿಗಳನ್ನು ಎಸಿಬಿ ಗೆ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
![](https://cinilahari.in/wp-content/uploads/2022/12/IMG_20221229_085552-1024x488.jpg)
ಒಂದು ದಶಕದಿಂದಲೂ ಶೋಷಿತರ ಪರ, ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ವಿಭಿನ್ನ ಹೋರಾಟಗಳ ಮೂಲಕ ದಿನ ಸವೆಸಿದ್ದಾರೆ. ತಳ ಸಮುದಾಯಗಳ ಪರ ಭ್ರಷ್ಟ ಅಧಿಕಾರಿಗಳ ವಿರುದ್ಧ ದ್ವನಿ ಎತ್ತುತ್ತಿರುವ ಅವರು, ಮೊದಲ ಪ್ರಯತ್ನದಲ್ಲೇ ಚರ್ಚೆಗೆ ಗ್ರಾಸವಾಗುವ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಸಮಾಜದ ಅಂಕು ಡೊಂಕು ತಿದ್ದುವ, ಭ್ರಷ್ಟಾಚಾರ ತೋರಿಸುವ, ಮಾನವ ಹಕ್ಕು ಉಲ್ಲಂಘನೆಯಂತಹ ವಿಷಯಗಳಿವೆ. ಇವೆಲ್ಲದರ ಜೊತೆ, ಸಮಾನತೆಗೆ ಹೋರಾಡುವ, ಹೋರಾಟಗಾರರನ್ನು ಬಳಸಿಕೊಂಡು ಚಿತ್ರೀಕರಿಸಿರುವುದು ಮತ್ತೊಂದು ವಿಶೇಷ.
![](https://cinilahari.in/wp-content/uploads/2022/12/IMG_20221229_085407-722x1024.jpg)
ಜಗದೀಶ್ ಮಹಾದೇವ್ ( ವಕೀಲ್ ಸಾಬ್ ) ಹ.ರಾ.ಮಹಿಷಾ. ಕುಣಿಗಲ್ ರಮೇಶ್ ಸೇರಿದಂತೆ ಹಲವು ಹೋರಾಟಗಾರರು ಅಭಿನಯಿಸಿದ್ದಾರೆ. ಮೋಹನ್ ಮೌರ್ಯ ನಾಯಕರಾಗಿ ನಟಿಸಿದ್ದಾರೆ. ಮಾಸ್ಟರ್ ಚಿರುಶ್ರೀ ನಾಗ್. ಅರುಂಧತಿ ಲಾಲ್, ಅರ್ಜುನ್ ಪಾಳ್ಳೇಗಾರ್ ಹಾಗು ವಿಲನ್ ಆಗಿ ಟೈಗರ್ ನಾಗ್ ಕೂಡ ಕಾಣಿಸಿಕೊಂಡಿದ್ದಾರೆ.
![](https://cinilahari.in/wp-content/uploads/2022/12/IMG_20221229_085639-1024x514.jpg)
ಚಿತ್ರದಲ್ಲಿ ರವಿಕುಮಾರ್ ಸಾನ, ಆರ್. ಅನಂತರಾಜ್, ರಥವಾರಂ ದೇವು, ಶಿಲ್ಪಾ ನಾಗ್, ವಾಲೆ ಚಂದ್ರು, ರಾಮನಾಯಕ್, ವೃಶ್ಚಿಕ, ಮಂಜೀವ, ಸರಸ್ವತಿ, ಬೇಬಿ ಸಿಂಚನ, ಪತ್ರಕರ್ತರಾದ ಶಿವಾನಂದ, ಕೆ ಆರ್ ಓಬಳರಾಜು ನವೀನ್, ಆನಂದ್ ದಿನೇಶ್, ಅರುಣ್ ಸೇರಿದಂತೆ ಇತರರು ನಟಿಸಿದ್ದಾರೆ.
![](https://cinilahari.in/wp-content/uploads/2022/12/IMG_20221229_085417-783x1024.jpg)
ಈ ಚಿತ್ರಕ್ಕೆ ಬಿಎಎಸ್ ಮಧುಗಿರಿ ಸಾಧಿಕ್ ಸಾಬ್ ನಿರ್ಮಾಪಕರು. ವಿಪಿನ್ ರಾಜ್ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತವಿದೆ. ಎ.ಆರ್. ಸಾಯಿ ರಾಮ್ ಸಂಭಾಷಣೆ, ಸಾಹಸವಿದೆ. ಕೆ. ಮಂಜುನಾಥ್ ಕೋಟೆ ಕೆರೆ. ಸಹ ನಿರ್ದೇಶಕರು. ಪುಟ್ಟರಾಜ, ದಯಾನಂದ್ ಸಾಥ್ ನೀಡಿದ್ದಾರೆ. ಸದ್ಯ ಚಿತ್ರ ಸಂಕಲನ ಕಾರ್ಯದಲ್ಲಿದೆ.