Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಅಪ್ಪು ಎಂಬ ಮಹಾನುಭಾವ! ಸಂಭ್ರಮ್‌ ಸ್ಟುಡಿಯೋಸ್‌ ಮೂಲಕ ಗೀತ ನಮನ

ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್‌ ರಾಜಕುಮಾರ್‌ ಅವರು ನಮ್ಮೊಂದಿಗಿಲ್ಲ. ಆದರೆ, ಅವರು ಬಿಟ್ಟು ಹೋದ ಆದರ್ಶ ಮತ್ತು ಮಾನವೀಯ ಮೌಲ್ಯಗಳಿವೆ. ಆ ಮೂಲಕ ಅವರಿನ್ನೂ ಜೀವಂತವಾಗಿದ್ದಾರೆ. ಅಪ್ಪು ಅವರ ನೆನಪಲ್ಲಿ ಈಗಾಗಲೇ ಹಲವು ಗೀತೆಗಳು ಹೊರಬಂದಿವೆ. ಬರುತ್ತಲೂ ಇವೆ. ಮಾರ್ಚ್‌ 17 ರಂದು ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ನಡುವೆಯೇ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್‌ ವಿ.ಸಂಭ್ರಮ್‌ ಅವರು ತಮ್ಮ ಹೊಸ ಸಂಭ್ರಮ್‌ ಸ್ಟುಡಿಯೋಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಅಪ್ಪು ಅವರಿಗೊಂದು ವಿನೂತನ ಎನಿಸುವ ಗೀತೆಯನ್ನು ರಿಲೀಸ್‌ ಮಾಡಿದ್ದಾರೆ

ಹೌದು, ಸಂಗೀತ ನಿರ್ದೇಶಕ ಶ್ರೀಧರ್‌ ವಿ.ಸಂಭ್ರಮ್‌ ಅವರು, ಹಲವಾರು ವರ್ಷಗಳಿಂದಲೂ ಅನೇಕ ಹಿಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸಾಕಷ್ಟು ಸೂಪರ್‌ ಹಿಟ್‌ ಸಾಂಗ್‌ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಸಂಗೀತ ಯಾನ ನಡೆಸಿರುವ ಶ್ರೀಧರ್‌ ಸಂಭ್ರಮ್‌ ಇದೀಗ ತಮ್ಮದೇ ಆದ ಯುಟ್ಯೂಬ್‌ ಚಾನೆಲ್‌ ಶುರುಮಾಡಿದ್ದಾರೆ. ಆಮೂಲಕ ಅವರೀಗ ಪುನೀತ್‌ ರಾಜಕುಮಾರ್‌ ಅವರಿಗಾಗಿಯೇ “ಮಹಾನುಭಾವ” ಎಂಬ ಗೀತೆ ಬಿಡುಗಡೆ ಮಾಡಿದ್ದಾರೆ. ಈ ಮಹಾನುಭಾವ ಹಲವು ವಿಶೇಷತೆಗಳನ್ನು ಹೊಂದಿದೆ. ಆ ಕುರಿತು ಸ್ವತಃ ಶ್ರೀಧರ್‌ ಸಂಭ್ರಮ್‌ ಹೇಳುವುದಿಷ್ಟು.

“ಅಪ್ಪು ಸರ್‌ ಅಂದರೆ, ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಅಪ್ಪು ಸರ್‌ ಇಲ್ಲ ಅನ್ನುವುದನ್ನೂ ಸಹ ಊಹಿಸಿಕೊಳ್ಳಲಾಗುತ್ತಿಲ್ಲ. ಅವರು ಯಾವುದೇ ಕ್ಷಣದಲ್ಲಿ ಸಿಕ್ಕರೂ ಪ್ರೀತಿಯಿಂದಲೇ ಮಾತಾಡಿಸುತ್ತಿದ್ದರು. ಸದಾ ನಗುಮೊಗದಲ್ಲೇ ಇರುತ್ತಿದ್ದ ಅಪ್ಪು ಸರ್‌ ನಮ್ಮೊಂದಿಗಿಲ್ಲ. ಹಾಗಂತ ಆ ಭಾವನೆಯಲ್ಲೂ ನಾವಿಲ್ಲ. ಅವರ ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರಿಗಾಗಿಯೇ ಒಂದೊಳ್ಳೆಯ ಗೀತೆ ಮಾಡಬೇಕು ಎಂಬ ಉದ್ದೇಶವಿತ್ತು.

ಕರುನಾಡಿಗರೆಲ್ಲರೂ ಅವರಿಲ್ಲದ ನೋವಲ್ಲಿದ್ದಾರೆ. ಹಾಗಂತ, ಪ್ರತಿನಿತ್ಯ ಆ ನೋವಲ್ಲೇ ಬಾಳುವುದಕ್ಕಾಗಲ್ಲ. ಅವರನ್ನು ಹಾಡಿನ ಮೂಲಕ ನೆನಪಿಸಿಕೊಳ್ಳುವಂತಾಗಬೇಕು ಎಂಬುದು ನಮ್ಮ ಆಲೋಚನೆ ಆಗಿತ್ತು. ಹಾಗಾಗಿಯೇ ಅವರನ್ನು ಹತ್ತಿರದಿಂದ ನೋಡಿದ್ದರಿಂದ, ಅವರ ಒಡನಾಟ ಇದ್ದುದರಿಂದ, ದೊಡ್ಮನೆ ಹುಡುಗನಾಗಿ ಹೇಗೆಲ್ಲಾ ಇದ್ದರು, ಏನೆಲ್ಲಾ ಮಾಡಿದ್ದರು, ಹೇಗೆಲ್ಲ ಪ್ರೀತಿ ತೋರುತ್ತಿದ್ದರು ಅನ್ನುವುದನ್ನೇ ಹಾಡಿನ ಮೂಲಕ ಹೇಳಲಾಗಿದೆ. ಅದೊಂದು ಅವರ ಮೇಲಿನ ಪ್ರೀತಿ ಮತ್ತು ಗೌರವಕ್ಕಾಗಿ ಮಾಡಿರುವ ಹಾಡಿದು” ಎಂದು ವಿವರ ಕೊಡುತ್ತಾರೆ ಶ್ರೀಧರ್‌ ವಿ.ಸಂಭ್ರಮ್.‌

ಇನ್ನು, ಈ ಹಾಡನ್ನು ನಿರ್ದೇಶಕ ಕಾಂತ ಕನ್ನಲ್ಲಿ ಬರೆದಿದ್ದಾರೆ. ಅವರ ಸಾಹಿತ್ಯಕ್ಕೆ ತಕ್ಕಂತೆ ನಾನು ಸಂಗೀತ ನೀಡಿದ್ದೇನೆ. ” ಆಕಾಶ ಭೂಮಿ ಹೇಳಿದೆ, ಊರಿಗೇ ನಮ್ಮೂರಿಗೆ ಮಹಾನುಭಾವ ನೀನಯ್ಯ… ನಾಡಿಗೆ ಕರುನಾಡಿಗೆ ಮಹಾನುಭಾವ ನೀನಯ್ಯ…” ಎಂದು ಶುರುವಾಗುವ ಗೀತೆ ಈಗಾಗಲೇ ಸಂಭ್ರಮ್‌ ಸ್ಟುಡಿಯೋಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಸಾಕಷ್ಟು ಜನ ಹಾಡನ್ನು ಮೆಚ್ಚಿಕೊಂಡಿದ್ದಾರೆ.

ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇನ್ನು, ಹಾಡಲ್ಲಿ ವಿಶೇಷತೆಗಳಿವೆ. ಈ ಹಾಡಿಗೆ ಖ್ಯಾತ ಗಾಯಕರು ಧ್ವನಿಯಾಗಿದ್ದಾರೆ. ಬಾಲಿವುಡ್‌ ಗಾಯಕರಾದ ಸೋನು ನಿಗಮ್‌, ಶಂಕರ್‌ ಮಹದೇವನ್.‌ ವಿಜಯ ಪ್ರಕಾಶ್‌, ಕೈಲಾಶ್‌ ಕೇರ್ ಅವರು ಧ್ವನಿಯಾಗಿರುವುದು ವಿಶೇಷತೆಗಳಲ್ಲೊಂದು ನಿರ್ದೇಶಕ‌ ಕಾಂತ ಕನ್ನಲ್ಲಿ ಅವರ ಗೀತ ಸಾಹಿತ್ಯದ ಜೊತೆ ಪರಿಕಲ್ಪನೆಯೂ ಇದೆ. ಇನ್ನು, ಇಂಥದ್ದೊಂದು ಒಳ್ಳೆಯ ಹಾಡಿಗೆ ಸುನೀಲ್‌ ಬಿ.ಎನ್.‌ ಅವರು ನಿರ್ಮಾಣ ಮಾಡಿದ್ದಾರೆ ಎಂದು ಹೇಳುತ್ತಾರೆ ಶ್ರೀಧರ್‌ ವಿ.ಸಂಭ್ರಮ್.‌

“ಮಹಾನುಭಾವ” ಗೀತೆಯಿಂದ ಬರುವ ಆದಾಯವನ್ನು ಅಪ್ಪು ಸರ್‌ ಅವರ ಚಾರಿಟಿಗೆ ಕೊಡಬೇಕು ಎಂಬ ನಿರ್ಧಾರ ಮಾಡಲಾಗಿದೆ. ಯಾಕೆಂದರೆ, ಅಪ್ಪು ಸರ್‌ ಅವರು ಯಾರಿಗೂ ಗೊತ್ತಾಗದ ರೀತಿ ಹಲವು ಮಾನವೀಯ ಕೆಲಸ ಮಾಡಿದ್ದಾರೆ. ಅನೇಕರ ಕಷ್ಟಕ್ಕೆ ಮಿಡಿದಿದ್ದಾರೆ. ಹಾಗಾಗಿ, ಅವರ ನೆನಪಲ್ಲಿ ಮಾಡಿರುವ ಈ ಗೀತೆಯಿಂದ ಬರುವ ಆದಾಯವನ್ನು ಅವರ ಚಾರಿಟಿಗೆ ನೀಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ ಎನ್ನುವ ಶ್ರೀಧರ್‌ ಸಂಭ್ರಮ್‌, ಮುಂದಿನ ದಿನಗಳಲ್ಲಿ ನಮ್ಮ ಸಂಭ್ರಮ್‌ ಸ್ಟುಡಿಯೋಸ್‌ ಯುಟ್ಯೂಬ್‌ ಚಾನೆಲ್‌ ಮೂಲಕ ಹೊಸ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಇಲ್ಲಿ ಗೀತೆಗಳ ಜೊತೆಯಲ್ಲಿ ವಿಡಿಯೋ ಆಲ್ಬಂ ಕೂಡ ರಿಲೀಸ್‌ ಮಾಡಲಾಗುತ್ತದೆ. ಹೊಸಬರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದಲೇ ನಾವು ನಾಗಭಾವಿಯಲ್ಲಿ ಸುಸಜ್ಜಿತ ಸ್ಟುಡಿಯೋ ನಿರ್ಮಾಣ ಮಾಡಿ, ಆ ಮೂಲಕ ಹೊಸಬರಿಗೆ ವೇದಿಕೆ ಕಲ್ಪಿಸುವ ಉದ್ದೇಶನ ನನ್ನದು. “ಮಹಾನುಭಾವ” ಗೀತೆ ಮೂಲಕ ನಮ್ಮ ಯುಟ್ಯೂಬ್‌ ಚಾನೆಲ್‌ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ಗೀತೆಗಳನ್ನೂ ಕೊಡುವ ಉದ್ದೇಶವಿದೆ ಎನ್ನುತ್ತಾರೆ ಶ್ರೀಧರ್.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಆರ್‌ಆರ್‌ಆರ್ ಪ್ರಮೋಷನ್‌ಗೆ ರಾಜಮೌಳಿ ಸಜ್ಜು; ಮಾರ್ಚ್ 14ಕ್ಕೆ ಎತ್ತುವ ಜಂಡಾ ಎಂಬ ಮತ್ತೊಂದು ಹಾಡು ರಿಲೀಸ್…

ಎಸ್.ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆರ್ ಆರ್ ಆರ್’ ಸಿನಿಮಾ‌ ನೋಡಲು ಚಿತ್ರಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಬಾಹುಬಲಿ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ಜೂ.ಎನ್. ಟಿ.ಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ತ್ರಿಬಲ್ ಆರ್ ಸಿನಿಮಾ ಬೆಳ್ಳಿಪರದೆ ಮೇಲೆ ರಾರಾಜಿಸಬೇಕಿತ್ತು. ಆದರೆ ಕೊರೋನಾ ಕಾರಣದಿಂದ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ಹೀಗಾಗಿ ಎರಡು ಮುಹೂರ್ತ ಅನೌನ್ಸ್ ಮಾಡಿದ್ದ ರಾಜಮೌಳಿ, ಆ ಎರಡು ದಿನಗಳನ್ನು ಬಿಟ್ಟು ಮಾರ್ಚ್ 25ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಾಗಿ ಅನೌನ್ಸ್ ಮಾಡಿದ್ದಾರೆ. ಹೊಸ ದಿನಾಂಕ ಘೋಷಣೆ ಬಳಿ ರಾಜ್‌ಮೌಳಿ ಟೀಂ ಪ್ರಮೋಷನ್ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ಮತ್ತೆ ಪ್ರಮೋಷನ್ ಕಹಳೆ ಮೊಳಗಿಸಲು ಆರ್ ಆರ್ ಆರ್ ಟೀಂ ಸಜ್ಜಾಗಿದೆ.

ಮಾರ್ಚ್ 14ಕ್ಕೆ ಎತ್ತುವ ಜಂಡಾ ಸಾಂಗ್ ರಿಲೀಸ್

ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ದೋಸ್ತಿ, ಹಳ್ಳಿನಾಟು ಹಾಡುಗಳು ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿಸಿದ್ದವು. ಇದೀಗ ತ್ರಿಬಲ್ ಆರ್ ಅಂಗಳದಿಂದ ಮತ್ತೊಂದು ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 14ನೇ ರಂದು “ಎತ್ತುವ ಜಂಡಾ” ಹಾಡು ರಿಲೀಸ್ ಮಾಡುವ ಮೂಲಕ ಆರ್ ಆರ್ ಆರ್ ಸಿನಿಮಾದ ಪ್ರಚಾರಕ್ಕೆ ಮತ್ತೆ ರಾಜಮೌಳಿ ಕಹಳೆ ಮೊಳಗಿಸಲಿದ್ದಾರೆ.

ಡಿವಿವಿ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಸಿನಿಮಾಗೆ, ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ‘ಆರ್‌ಆರ್‌ಆರ್‌’ ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಮಾರ್ಚ್ 25ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆ ಹಾಗೂ ನಿರ್ಮಾಣದ ಪ್ರತಿಷ್ಠಿತ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್, ಆರ್ ಆರ್ ಆರ್ ಸಿನಿಮಾವನ್ನು ಕರ್ನಾಟಕಲ್ಲಿ ಹಂಚಿಕೆ ಮಾಡಲಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಸೀತಮ್ಮನ ಮಗನಿಗೆ ಗುರು ಬಲ! ಯತಿರಾಜ್‌ ಚಿತ್ರದ ಹಾಡಿಗೆ ದೇಶಪಾಂಡೆ ಸಾಥ್

ಕಲಾವಿದ ಯತಿರಾಜ್ ನಿರ್ದೇಶಿಸಿ, ನಟಿಸಿರುವ “ಸೀತಮ್ಮನ ಮಗ” ಚಿತ್ರದ ಹಾಡುಗಳು ಹೊರಬಂದಿವೆ. ನಿರ್ದೇಶಕ ಕಮ್ ನಿರ್ಮಾಪಕ ಗುರು ದೇಶಪಾಂಡೆ ಸಾಂಗ್‌ ರಿಲೀಸ್‌ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕೆಂಪೇಗೌಡ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲೇ ಈ ಚಿತ್ರ ನಿರ್ಮಾಣವಾಗಬೇಕಿತ್ತು. ಕಿಚ್ಚ ಸುದೀಪ್ ಅವರು ಸಹ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು. ಆದರೆ, ಕಾರಣಾಂತರದಿಂದ ಅದು ಆಗಲಿಲ್ಲ. ಈಗ ಕಾಲ ಕೂಡಿ ಬಂದಿದೆ. ನನ್ನ ಸ್ನೇಹಿತರೊಬ್ಬರ ಮೂಲಕ ಪರಿಚಿತರಾದ, ಉಪಾಧ್ಯಾಯರಾಗಿರುವ ಮಂಜುನಾಥ್ ನಾಯಕ್, ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ
ಚಿತ್ರದ ಚಿತ್ರೀಕರಣವನ್ನು ಚಿತ್ರದುರ್ಗದ ಬಳಿಯ ಪಂಡರಹಳ್ಳಿಯಲ್ಲಿ ಮಾಡಿದ್ದೇವೆ. ಸದ್ಯ ಸಂಗೀತ ನಿರ್ದೇಶಕ ವಿನು ಮನಸು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.

ಸದ್ಯದಲ್ಲೇ ನಮ್ಮ ಚಿತ್ರ ತೆರೆಗೆ ಬರಲು ಸಿದ್ದವಾಗಲಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ತಂತ್ರಜ್ಞರ ಕೈ ಚಳಕವೂ ಚೆನ್ನಾಗಿದೆ. ಎರಡು ಹಾಡುಗಳನ್ನು ಮಾನಸ ಹೊಳ್ಳ ಹಾಗೂ ಮೆಹಬೂಬ್ ಸಾಬ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇಸ್ಮು ಮ್ಯೂಸಿಕ್ ಮೂಲಕ ಈ ಹಾಡುಗಳು ಬಿಡುಗಡೆಯಾಗಿದೆ ಎಂದು ನಿರ್ದೇಶಕ ಯತಿರಾಜ್ ಸಿನಿಮಾ ಕುರಿತು ವಿವರಣೆ ನೀಡಿದರು.

ಮಕ್ಕಳ ಸಿನಿಮಾ ಮಾಡಬೇಕೆಂಬುದು ನನ್ನ ಬಹು ದಿನಗಳ ಕನಸು. ಅದರಲ್ಲೂ ನಮ್ಮ ಪಂಡರಹಳ್ಳಿಯಲ್ಲೇ ಚಿತ್ರೀಕರಣ ಮಾಡಬೇಕೆಂಬ ಆಸೆಯಿತ್ತು. ಬಹಳ ವರ್ಷಗಳ ನಂತರ ನನ್ನ ಆಸೆ ಈಡೇರಿದೆ. ನಾನು ಸಿನಿಮಾ ಆರಂಭಿಸುವುದಾಗಿ ಹೇಳಿದಾಗ ಸಾಕಷ್ಟು ಜನ ನಿರ್ದೇಶಕರು ಫೋನ್ ಮಾಡಿದ್ದರು. ಆದರೆ ನಾನು ಯತಿರಾಜ್ ಅವರಿಗೆ ಸಿನಿಮಾ ಮಾಡಲು ಹೇಳಿದೆ. ಯತಿರಾಜ್ ಬಿಟ್ಟರೆ ಯಾರಿಂದಲೂ ಇಷ್ಟು ಚೆನ್ನಾಗಿ ಚಿತ್ರ ನಿರ್ದೇಶನ ಮಾಡಲು ಆಗುತ್ತಿರಲಿಲ್ಲವೇನೋ? ಎಂಬುದು ನನ್ನ ಅನಿಸಿಕೆ ಎಂದರು ನಿರ್ಮಾಪಕ ಮಂಜುನಾಥ್ ನಾಯಕ್.

ಸಹ ನಿರ್ಮಾಪಕ ಸುಮಿತ್ ನಾಯಕ್, ಮುಪ್ಪಣ್ಣ ಗೌಡ್ರು, ಸಂಗೀತ ನಿರ್ದೇಶಕ ವಿನು ಮನಸು, ಇಸ್ಮು ಮ್ಯೂಸಿಕ್ ನ ಇಸ್ಮಾಯಿಲ್, ಸೀತಮ್ಮನ ಪಾತ್ರಧಾರಿ ಚೈತ್ರ ಶ್ರೀನಿವಾಸ್, ಸೀತಮ್ಮನ ಮಗನಾಗಿ ಅಭಿನಯಿಸಿರುವ ಚರಣ್ ಕಾಸಾಲ ಹಾಗೂ ನಟಿ ಸೋನು ಸಾಗರ ಚಿತ್ರದ ಕುರಿತು ಮಾತನಾಡಿದರು.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ರೈತನಿಗೆ ಗಾನ ನಮನ; ಇದು ALL OK ಗೆಳೆಯರ ಶ್ರಮ

ಪ್ರತಿಯೊಬ್ಬನ ಜೀವನವೂ ಆತ ತಿನ್ನುವ ಅನ್ನದಿಂದ ನಡೆಯುತ್ತಿದೆ. ಇಂತಹ ಅನ್ನವನ್ನು ನಮಗೆ ನೀಡುತ್ತಿರುವ “ರೈತ” ನಿಜಕ್ಕೂ ಅನ್ನದಾತ.

ಇಂತಹ “ರೈತ” ನಿಗೆ ನಮನ ಸಲ್ಲಿಸುವ ಸಲುವಾಗಿ ಸಂಜಯ್ ಗೌಡ ಅವರು “ರೈತ” ಎಂಬ ಹೆಸರಿನಲ್ಲೇ ಆಲ್ಬಂ ಸಾಂಗ್ ನಿರ್ಮಾಣ ಮಾಡಿದ್ದಾರೆ.
ತಮ್ಮ ಅಮೋಘ ಗಾಯನದ ಮೂಲಕ ಖ್ಯಾತರಾಗಿರುವ ALL OK ಈ ಹಾಡನ್ನು ಬರೆದು, ಹಾಡಿ, ಸಂಗೀತ ನೀಡಿದ್ದಾರೆ. ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆಯಾಗಿದೆ.
ರೈತರ ಮಕ್ಕಳು ಈ ಹಾಡನ್ನು ಲೋಕಾರ್ಪಣೆ ಮಾಡದ್ದು ವಿಶೇಷ.


ಸಾಯಿಗೋಲ್ಡ್ ಪ್ಯಾಲೆಸ್ ನ ಶರವಣ, ಯುನೈಟೆಡ್ ಆಸ್ಪತ್ರೆಯ ಶಾಂತಕುಮಾರ್, ಅನಂತು, ನಟ ಉಪೇಂದ್ರ ಅವರ ಸಹೋದರ ಸುಧೀಂದ್ರ ಸೇರಿದಂತೆ ಅನೇಕರು ಈ ಸ ಸಮಾರಂಭಕ್ಕೆ ಆಗಮಿಸಿದ್ದರು.

ನಾವು ಮಕ್ಕಳನ್ನು ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ ? ಅಂತ ಕೇಳಿದಾಗ, ಅವರು ಡಾಕ್ಟರ್, ಇಂಜಿನಿಯರ್ ಆಗುತ್ತೀನಿ ಎನ್ನುತ್ತಾರೆ ಹೊರೆತು ರೈತ ಆಗುತ್ತೀನಿ ಅನ್ನುವುದಿಲ್ಲ. ನಾನು ರೈತ ಆಗುತ್ತೀನಿ ಅನ್ನುವ ದಿನ ಬೇಗ ಬರಬೇಕು ಎಂಬುದೇ ನಮ್ಮ‌ ಆಸೆ. ನಾನು ಹಾಗೂ ಸಂಜಯ್ ಗೌಡ ಇಬ್ಬರು ಬಾಲ್ಯ ಸ್ನೇಹಿತರು. ಹಿಂದೆ KA01 ಎಂಬ ಆಲ್ಬಂ ಸಾಂಗ್ ಮಾಡಿ ವಿದೇಶದಲ್ಲಿ ಬಿಡುಗಡೆ ಮಾಡಿದ್ದೆವು. ಈಗ ರೈತನ ಕುರಿತಾದ ಈ ಗೀತೆ ತಂದಿದ್ದೀವಿ. ಈ ವಿಷಯವನ್ನು ರಾಜಕೀಯ ವ್ಯಕ್ತಿಗಳು ಸೇರಿದಂತೆ ಅನೇಕ ‌ಗಣ್ಯರ ಮುಂದೆ ಹೇಳಿದಾಗ ಸಂತೋಷದಿಂದ ಸಾಥ್ ನೀಡಿದರು. ಛಾಯಾಗ್ರಾಹಕ ಆಕಾಶ್ ಜೋಶಿ ಸೇರಿದಂತೆ ಎಲ್ಲಾ ತಂತ್ರಜ್ಞರ ಸಾಹಕಾರ ಅಪಾರ ಎಂದರು ALL OK.

ನನ್ನನ್ನು ಪರದೆಯ ಮೇಲೆ ತರುವ ಸಲುವಾಗಿ ಗೆಳೆಯ ALL OK ಈ ವಿಭಿನ್ನ ಹಾಡನ್ನು ಮಾಡಿದ್ದಾನೆ.. ಆದರೆ ನಾವು ಪರದೆಯ ಮೇಲೆ ಬರುವುದಕ್ಕಿಂತ ನಮಗೆ ತಿನ್ನಲು ಅನ್ನ ನೀಡುತ್ತಿರುವ ರೈತನಿಗೆ ನಮನ ಸಲ್ಲಿಸುವ ಈ “ರೈತ” ಆಲ್ಬಂ ಸಾಂಗ್ ಬಿಡುಗಡೆ ಮಾಡಲಾಗಿದೆ. ರೈತನಿಗೆ ನೋಡಿ ಪ್ರಮೋಷನ್, ಇನ್ಕ್ರಿಮೆಂಟ್, ರಿಟೈರ್ ಮೆಂಟ್ ಏನು ಇಲ್ಲ. ಯಾವಾಗಲೂ ದುಡಿಮೆಯೇ ಆತನ ಜೀವನ. ನಮ್ಮ
ಮಕ್ಕಳು ರಜೆ ದಿನಗಳಲ್ಲಿ ಅಲ್ಲಿಇಲ್ಲಿ ಕರೆದುಕೊಂಡು ಹೋಗು ಎನ್ನುವ ಬದಲು ಹೊಲ,ಗದ್ದೆಗಳಿಗೆ ಕರೆದುಕೊಂಡು ಹೋಗು ನಾನು ನೋಡಬೇಕು ಎನ್ನುವಂತಾಗಲಿ ಎಂದು ಸಂಜಯ್ ಗೌಡ ಆಶಿಸಿದರು.


ಈ ಹಾಡಿನಲ್ಲಿ ನನ್ನೊಂದಿಗೆ ಸೋನು ಗೌಡ ಅಭಿನಯಿಸಿದ್ದಾರೆ. ತಂತ್ರಜ್ಞರ ಕೆಲಸ ಉತ್ತಮವಾಗಿದೆ. ರೈತರ ಮೇಲಿನ ಗೌರವದಿಂದ ಅನೇಕ ಗಣ್ಯರು ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಮುಂದೊಂದು ದಿನ ರೈತನ ಕುರಿತಾದ ಚಿತ್ರ ನಿರ್ಮಾಣ ಮಾಡುತ್ತೇನೆ ಎಂದ ಸಂಜಯ್ ಗೌಡ ಅವರು, ಕಾರ್ಯಕ್ರಮ ಬಂದ ಎಲ್ಲಾ ಅತಿಥಿಗಳಿಗೆ ಧನ್ಯವಾದ ತಿಳಿಸಿದರು.

ಸಂಜಯ್ ಗೌಡ ಮತ್ತು ALL OK ತಂಡದವರನ್ನು ಶರವಣ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ವಿಮೆ ಇಲ್ಲದ ರೈತನ ಕುಟುಂಬದಲ್ಲಿ ಯಾರಿಗಾದರೂ ತೊಂದರೆಯಾದರೆ, ಕೇವಲ ಅವರ ಚಿಕಿತ್ಸೆ ವೆಚ್ಚದಲ್ಲಿ 50% ಕಡಿಮೆ ಮಾಡುವುದಾಗಿ ಯುನೈಟೆಡ್ ಆಸ್ಪತ್ರೆಯ ಶಾಂತಕುಮಾರ್ ಹೇಳಿದರು.

ಭೋಧಿ ಟ್ರೀ ಸಂಸ್ಥೆಯವರು
ಸುಮಾರು ನೂರೈವತ್ತಕ್ಕೂ ಅಧಿಕ ಮಕ್ಕಳಿಗೆ ವಿಶೇಷ ಕಿಟ್ ನೀಡಿದರು. ALL OK ಚಿತ್ರರಂಗ ಪ್ರವೇಶಿಸಿ ಹದಿನೈದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಗೌರವಿಸಿದರು.

Categories
ಆಡಿಯೋ ಕಾರ್ನರ್

ಸೈದಾಪುರ ಹುಡುಗನಿಗೆ ಆತ್ಮದ ಆಶೀರ್ವಾದ! ತಮ್ಮನ ನಟನೆ ನೋಡುವ ಮುನ್ನವೇ ಹಾರಿಹೋಯ್ತು ಅಣ್ಣನ ಜೀವ

ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಅಷ್ಟು ಸುಲಭವಾಗಿ ಜಾಗ ಸಿಗೋದಿಲ್ಲ. ಸಿಕ್ಕರೂ, ಅದನ್ನು ಭದ್ರಪಡಿಸಿಕೊಳ್ಳೋಕೆ ಹೆಣಗಾಡಲೇಬೇಕು. ಇಲ್ಲಿ ಹೊಸಬರ ಸಂಖ್ಯೆಯೇ ಹೆಚ್ಚು. ದಿನ ಕಳೆದಂತೆ ಹೊಸಬರು ನೂರಾರು ಕನಸು ಕಟ್ಟಿಕೊಂಡು ಇಲ್ಲಿಗೆ ಬಂದೇ ಬರ್ತಾರೆ. ಅಂತಹವರ ಸಾಲಿಗೆ ಈಗ “ಸೈದಾಪುರ” ಚಿತ್ರತಂಡವೂ ಒಂದು. ಹೌದು, ಇದು ಹೊಸಬರೇ ಸೇರಿ ಮಾಡಿರುವ ಚಿತ್ರ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಿಡುಗಡೆಗೆ ರೆಡಿಯಾಗುತ್ತಿದೆ. ಅದಕ್ಕೂ ಮುಂಚೆ ಚಿತ್ರದ ಆಡಿಯೋ ರಿಲೀಸ್‌ ಕೂಡ ಆಗಿದೆ. ಇಲ್ಲಿ ಸಿನಿಮಾ ಮತ್ತು ಹಾಡುಗಳ ಬಗ್ಗೆ ಹೇಳುವುದಕ್ಕಿಂತ ಅವರೊಳಗಿರುವ ಸಿನಿಮಾ ಪ್ರೀತಿ ಬಗ್ಗೆ ಹೇಳಲೇಬೇಕು. ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ನೋವು ಇದ್ದೇ ಇರುತ್ತೆ. ಇಲ್ಲಿ ಪ್ರೀತಿ ಗೀತಿ ಇತ್ಯಾದಿ ಬಗ್ಗೆ ಹೇಳೋಕೆ ಕಾರಣವೇನು ಗೊತ್ತಾ? ಇಲ್ಲಿ ಇಡೀ ಚಿತ್ರತಂಡ ನೋವಲ್ಲೇ ಸಿನಿಮಾ ಮಾಡಿ ಮುಗಿಸಿದೆ. ಹಾಗಾದರೆ ಆ ನೋವೇನು? ಯಾಕೆ? ಆ ಬಗ್ಗೆ ಒಂದು ರೌಂಡಪ್.

ಸಿನಿಮಾ ಎಂಬ ರಂಗಿನ ಪ್ರಪಂಚದಲ್ಲಿ ಮಿಂದೇಳಬೇಕೆಂಬ ಆಸೆ ಯಾರಿಗೆ ತಾನೆ ಇರಲ್ಲ ಹೇಳಿ. ಬಣ್ಣದ ಲೋಕಕ್ಕೆ ಎಂಟ್ರಿಯಾಗಬೇಕು, ತಾನೂ ಇಲ್ಲೊಂದು ಗುರುತು ಮಾಡಬೇಕು ಅನ್ನೋ ಆಸೆ ಕಟ್ಟಿಕೊಂಡೇ ಇಲ್ಲಿ ಕಾಲಿಡುತ್ತಾರೆ. ಅಂತಹ ಆಸೆ ಹೊತ್ತುಕೊಂಡು ಬಂದವರಲ್ಲಿ ಭಾನುಪ್ರಕಾಶ್‌ ಬ್ರದರ್ಸ್‌ ಕೂಡ ಸೇರಿದ್ದಾರೆ. ಇವರಿಬ್ಬರ ಕನಸಿಗೆ ಸಾಕಾರವಾಗಿದ್ದೇ “ಸೈದಾಪುರ” ಎಂಬ ಸಿನಿಮಾ. ಈ ಚಿತ್ರ ಇನ್ನೇನು ಮುಗಿದು, ಸೆನ್ಸಾರ್‌ಗೆ ಹೋಗಬೇಕು ಅನ್ನುವ ಹೊತ್ತಿಗೆ ಒಂದು ಆಘಾತ ಎದುರಾಗುತ್ತೆ. ಅದು ಇಡೀ ಚಿತ್ರತಂಡವನ್ನೇ ಕುಸಿದು ಬೀಳುವಂತೆ ಮಾಡುತ್ತೆ. ಅದು ಮತ್ತೇನೂ ಅಲ್ಲ, ತನ್ನ ಸಹೋದರನಿಗಾಗಿಯೇ ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದ ಅಣ್ಣನ ಸಾವು!

ಮಹದೇವ ಫಿಲ್ಮ್‌ ಪ್ರೊಡಕ್ಷನ್‌ ಮೂಲಕ ಈ ಚಿತ್ರ ತಯಾರಾಗಿದೆ. ಈ ಸಿನಿಮಾಗೆ ಭಾನುಪ್ರಕಾಶ್‌ ಹೀರೋ. ತನ್ನ ತಮ್ಮನಿಗಾಗಿಯೇ ಚಿತ್ರ ನಿರ್ಮಾಣಕ್ಕಿಳಿದಿದ್ದ ಸಹೋದರ ಮಹದೇವ ಅವರು ಸಿನಿಮಾವನ್ನು ಚೆನ್ನಾಗಿಯೇ ನಿರ್ಮಾಣ ಮಾಡಿದ್ದರು. ಇನ್ನೇನು ಚಿತ್ರವನ್ನು ಸೆನ್ಸಾರ್‌ ಮಾಡಿಸಬೇಕು ಅನ್ನುವ ಹೊತ್ತಿಗೆ ಅವರು ಇಹಲೋಕ ತ್ಯಜಿಸಿಬಿಟ್ಟರು. ಈ ಆಘಾತ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ದಿಕ್ಕೇ ತೋಚದಂತಾದ ಹೀರೋ ಭಾನುಪ್ರಕಾಶ್‌, ಮುಂದೇನು ಎಂಬ ಚಿಂತೆಗೀಡಾದರು. ಅವರ ಕುಟುಂಬ ಕೂಡ ಮಹದೇವನ ನೆನಪಲ್ಲೇ ಕಣ್ಣೀರು ಹಾಕತೊಡಗಿತು. ಅಣ್ಣನ ಸಿನಿಮಾ ಪ್ರೀತಿಯಿಂದಲೇ “ಸೈದಾಪುರ” ಚಿತ್ರ ತಯಾರಾಗಿದ್ದರಿಂದ, ಏನೇ ಆದರೂ ಸರಿ, ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದು, ಅಣ್ಣನ ಆಸೆಯನ್ನು ಈಡೇರಿಸಬೇಕು ಎಂಬ ಛಲ ತೊಟ್ಟರು ಭಾನುಪ್ರಕಾಶ್‌. ಈಗ ಸಿನಿಮಾದ ಆಡಿಯೋ ರಿಲೀಸ್‌ ಮಾಡಲಾಗಿದೆ. ರಿಲೀಸ್‌ ವೇಳೆ ಒಂದು ಮನಕಲಕುವ ಸನ್ನಿವೇಶವೂ ಜರುಗಿತು.

ಅಂದು ಆಡಿಯೋ ರಿಲೀಸ್‌ಗೆ ಭಾನುಪ್ರಕಾಶ್‌ ತಮ್ಮ ಕುಟುಂಬವನ್ನು ಕರೆತಂದಿದ್ರು. ವೇದಿಕೆ ಏರಿದ ಆ ಕುಟುಂಬ ಕಣ್ಮರೆಯಾದ ಮಹದೇವನನ್ನು ನೆನೆದು ಕಣ್ಣೀರಾಯಿತು. ಉತ್ತರ ಕರ್ನಾಟಕ ಮೂಲದ ಯಾದಗಿರಿಯಿಂದ ಬಂದಿದ್ದ ಮಹದೇವನ ಅಪ್ಪ, ಅಮ್ಮ, ತಂಗಿ ಮತ್ತು ಬಳಗ ಕಣ್ಣುತುಂಬಿಕೊಂಡಿತು. ವೇದಿಕೆ ಮೇಲಿದ್ದ ಚಿತ್ರತಂಡದ ಕಣ್ಣಾಲಿಗಳು ಕೂಡ ಒದ್ದೆಯಾಗಿದ್ದವು. ಆ ಕ್ಷಣ ಎಲ್ಲವೂ ಮೌನ, ಎಲ್ಲರ ಹೃದಯವೂ ಭಾರ. ಅಲ್ಲಿ ಮಾತಿಲ್ಲ ಬರೀ ದುಃಖ-ದುಮ್ಮಾನ. ವೇದಿಕೆಯಲ್ಲಿ ಸಿನಿಮಾ ಬಗ್ಗೆ ಹೇಳುವುದಕ್ಕಿಂತ ಕಳೆದುಕೊಂಡ ಅಣ್ಣನ ಬಗ್ಗೆ ಗುಣಗಾನ ಮಾಡಿದ್ದೇ ಹೆಚ್ಚು. ಅದಕ್ಕಿಂತ ಹೆಚ್ಚಾಗಿ ಅವರೆಲ್ಲರ ಕಣ್ಣಂಚಲ್ಲಿ ನೀರು ಜಿನುಗಿದ್ದೇ ಹೆಚ್ಚು.

ಅದೇನೆ ಇರಲಿ, ದೂರವಾಗಿರುವ ಮಹದೇವನ ಆತ್ಮ ಅಲ್ಲಿಂದಲೇ ತನ್ನ ತಮ್ಮನ ಸಿನಿಮಾಗೆ ಆಶೀರ್ವದಿಸಲಿದೆ ಅನ್ನೋದು ಚಿತ್ರತಂಡದ ಬಲವಾದ ನಂಬಿಕೆ. ಅಂದಹಾಗೆ, ಈ ಚಿತ್ರಕ್ಕೆ ಶ್ರೀರಾಮ್‌ ನಿರ್ದೇಶಕರು. ಸಿನಿಮಾ ಬಗ್ಗೆ ಹೇಳೋದಾದರೆ, ಪ್ರೀತಿ ಸಿಗದೆ ಪರಿತಪಿಸೋ ಹುಡುಗನ ಪರದಾಟವನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ಹಳ್ಳಿ ಹುಡುಗನ ಹಳ್ಳಿಗಾಡಿನ ಸಿನಿಮಾಗೆ ಭಾನುಪ್ರಕಾಶ್‌ ಹೀರೋ. ಅವರಿಗೆ ಸಂಗೀತ ನಾಯಕಿ. ಈ ಚಿತ್ರಕ್ಕೆ ಅಶೋಕ್‌ ಮತ್ತು ಸುರೇಶ್‌ ಚಿಕ್ಕಣ್ಣ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ವಿನುಮನಸು ಸಂಗೀತ ನೀಡಿದರೆ, ಲೋಕೇಶ್ ಸಾಹಿತ್ಯವಿದೆ. ಬಾಲ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸದ್ಯ ರಿಲೀಸ್‌ಗೆ ಸಜ್ಜಾಗಿರುವ ಸೈದಾಪುರ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

Categories
ಆಡಿಯೋ ಕಾರ್ನರ್

ಮನದುಂಬಿ ಹೇಳುವೆನು ನೀ ಕೋಟಿಯಲಿ ಒಬ್ಬನೇ…! ಕೋಟಿಗೊಬ್ಬ 3 ಲಿರಿಕಲ್‌ ವಿಡಿಯೋಗೆ ಭರಪೂರ ಮೆಚ್ಚುಗೆ

ಸದ್ಯಕ್ಕೆ ಕನ್ನಡದಲ್ಲಿ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದು “ಕೋಟಿಗೊಬ್ಬ 3 ” ಹೌದು, ಕಿಚ್ಚ ಸುದೀಪ್‌ ಅಭಿನಯದ “ಕೋಟಿಗೊಬ್ಬ 3” ಸಿನಿಮಾ ಪ್ರೇಕ್ಷಕರ ಮುಂದೆ ಬರೋಕೆ ತಯಾರಿ ನಡೆಸಿದೆ. ಈಗಾಗಲೇ ಪೋಸ್ಟರ್‌ ಮತ್ತು ಟೀಸರ್‌ ಮೂಲಕ ಸಾಕಷ್ಟು ಮೆಚ್ಚುಗೆ ಪಡೆದು ಕುತೂಹಲ ಮೂಡಿಸಿರುವ ಈ ಚಿತ್ರದ ಹೊಸ ಲಿರಿಕಲ್‌ ಹಾಡೊಂದು ಬಿಡುಗಡೆಯಾಗಿದ್ದು, ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.

ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದ್ದು, ಒಳ್ಳೆಯ ಕಾಮೆಂಟ್ಸ್‌ ಕೂಡ ಬರುತ್ತಿದೆ. ಇನ್ನು, ಈ ಹಾಡು ಕಿವಿಗಿಂಪೆನಿಸುವಂತಿದೆ. ಮಧುರವಾಗಿರುವ ಈ ಹಾಡನ್ನು ಬರೆದಿರೋದು ಯೋಗರಾಜ್‌ಭಟ್.‌ ಯೋಗರಾಜ್‌ ಭಟ್‌ ಅಂದಾಕ್ಷಣ, ಒಂದಷ್ಟು ಆಡು ಭಾಷೆ ಪದ ಬಳಕೆ ಮಾಡಿ ಹಾಡು ಗೀಚುವುದು ಕಾಮನ್‌ ಅಂದುಕೊಂಡಿದ್ದವರಿಗೆ, ಈ ಹಾಡು ನಿಜಕ್ಕೂ ಭಟ್ಟರ ಪದಗಳಲ್ಲೇ ಮೂಡಿ ಬಂದಿದೆಯಾ ಅನಿಸುವಷ್ಟರ ಮಟ್ಟಿಗೆ ಚೆನ್ನಾಗಿದೆ. ಒಂದೊಳ್ಳೆಯ ಮೆಲೋಡಿ ಸಾಂಗ್‌ ಇದಾಗಿದ್ದು, ಕೇಳುಗರು ಮತ್ತೆ ಮತ್ತೆ ಕೇಳಬೇಕೆನಿಸುವಷ್ಟರ ಮಟ್ಟಿಗೆ ಸಾಹಿತ್ಯ ಮೂಡಿಬಂದಿದೆ.

“ಯಾತಕೆ ನಿನ್ನನೆ ಬಯಸಿದೆ ಹೃದಯ, ನಿನ್ನಲಿ ಏನಿದೆಯೋ ಮಹರಾಯ ಮಾಮೂಲಿ ಅಲ್ಲ ನೀನು ಮನದುಂಬಿ ಹೇಳುವೆನು ನೀ ಕೋಟಿಯಲಿ ಒಬ್ಬನೇ….” ಎಂದು ಸಾಗುವ ಈ ಹಾಡನ್ನು ಶ್ರೇಯಾ ಘೋಷಾಲ್‌ ಹಾಡಿದ್ದಾರೆ. ಒಂದೊಳ್ಳೆಯ ಲಿರಿಕಲ್‌ ವಿಡಿಯೋ ಇದಾಗಿದ್ದು, ಆನಂದ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಸದ್ಯಕ್ಕೆ ಹಾಡು ಟ್ರೆಂಡಿಂಗ್‌ನಲ್ಲಿರುವುದಂತೂ ನಿಜ. ಕಿಚ್ಚ ಸುದೀಪ್‌ ಅಭಿನಯದ ಈ ಚಿತ್ರದಲ್ಲಿ ನಾಯಕಿಯಾಗಿ ಮಡೋನಾ ಸೆಬಾಸ್ಟಿನ್‌ ಇದ್ದಾರೆ. ಜೊತೆಯಲ್ಲಿ ಶ್ರದ್ಧಾದಾಸ್, ರವಿಶಂಕರ್‌ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇನ್ನು, ಶಿವಕಾರ್ತಿಕ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೂರಪ್ಪ ಬಾಬು ಅವರು ದೊಡ್ಡ ಮಟ್ಟದಲ್ಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ಪ್ರವೀಣ್‌ ಆಂಟೋನಿ ಸಂಕಲನವಿದೆ. ಕನಾಲ್‌ ಕಣ್ಣನ್‌, ವಿಜಯ್‌ ಇತರರು ಭರ್ಜರಿ ಸ್ಟಂಟ್‌ ಕಂಪೋಸ್‌ ಮಾಡಿದ್ದಾರೆ. ಸುದೀಪ್‌ ಅಭಿಮಾನಿಗಳ ಪಾಲಿಗೆ ಈ ಹಾಡು ಎವರ್‌ಗ್ರೀನ್‌ ಆಗುವುದಂತೂ ನಿಜ. ಅಷ್ಟರಮಟ್ಟಿಗೆ ಸಾಂಗ್‌ ಮೂಡಿಬಂದಿದೆ. “ಪೈಲ್ವಾನ್”‌ ಚಿತ್ರದ ಬಳಿಕ ಸುದೀಪ್‌ ಅವರು “ಕೋಟಿಗೊಬ್ಬ 3” ಸಿನಿಮಾದಲ್ಲಿ ನಟಿಸಿದ್ದಾರೆ. ಹೆಚ್ಚು ಕಮ್ಮಿ ಒಂದುವರೆ ವರ್ಷದ ನಂತರ ಬರುತ್ತಿರುವ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಸುದೀಪ್‌ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿದೆ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಕೂಡ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ.

ಈಗಾಗಲೇ ಸ್ಟಾರ್‌ ನಟರ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪುನಃ ಚೈತನ್ಯ ತುಂಬಿಕೊಡುತ್ತಿವೆ. ಈ ನಿಟ್ಟಿನಲ್ಲೀಗ “ಕೋಟಿಗೊಬ್ಬ 3” ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗುತ್ತಿದೆ. “ಕೋಟಿಗೊಬ್ಬ” ದೊಡ್ಡ ಸಕ್ಸಸ್‌ ಕಂಡ ಸಿನಿಮಾ. ಆ ಬಳಿಕ ಕೋಟಿಗೊಬ್ಬ ಸೀರೀಸ್‌ ಶುರುವಾಯ್ತು. ಸುದೀಪ್‌ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆ ನಂಬಿಕೆಯಲ್ಲೇ ಈಗ “ಕೋಟಿಗೊಬ್ಬ 3” ಸಿನಿಮಾ ಕೂಡ ದೊಡ್ಡ ಯಶಸ್ಸು ತಂದುಕೊಡುತ್ತದೆ ಎಂದೇ ಅವರ ಅಭಿಮಾನಿಗಳು ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

Categories
ಆಡಿಯೋ ಕಾರ್ನರ್

ಕಸ್ತೂರಿ ಹಾಡು! ಮಾ.19ರಂದು ದಿನೇಶ್‌ ಬಾಬು ನಿರ್ದೇಶನದ 50ನೇ ಸಿನಿಮಾ ಕಸ್ತೂರಿ ಮಹಲ್ ಲಿರಿಕಲ್ ಸಾಂಗ್ ರಿಲೀಸ್

ಕನ್ನಡದಲ್ಲಿ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ದಿನೇಶ್ ಬಾಬು ಇದೀಗ “ಕಸ್ತೂರಿ ಮಹಲ್‌” ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಬಹುಬೇಗನೇ ಸಿನಿಮಾದ ಚಿತ್ರೀಕರಣ ಮುಗಿಸಿರವ ದಿನೇಶ್‌ ಬಾಬು, “ಕಸ್ತೂರಿ ಮಹಲ್‌” ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಅಣಿಯಾಗುತ್ತಿದ್ದಾರೆ. ಅದಕ್ಕೂ ಮುನ್ನ ಚಿತ್ರದ ಲಿರಿಕಲ್‌ ವಿಡಿಯೊ ಬಿಡುಗಡೆಯಾಗಲಿದೆ. ಮಾರ್ಚ್‌ 19ರಂದು ಚಿತ್ರದ ಲಿರಿಕಲ್‌ ಹಾಡು ಹೊರಬರುತ್ತಿದ್ದು, ಮೇ ಆಥವಾ ಜೂನ್‌ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ. ಇದು ದಿನೇಶ್‌ ಬಾಬು ನಿರ್ದೇಶನದ 50ನೇ ಸಿನಿಮಾ ಎಂಬುದು ವಿಶೇಷ. ಎ೨ ಮ್ಯೂಸಿಕ್ ಮೂಲಕ ಲಿರಿಕಲ್ ಹಾಡು ಬಿಡುಗಡೆಯಾಗುತ್ತಿದೆ. ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಬರೆದಿರುವ “ನಾನ್ಯಾರು ನನಗೆ ಯಾರು” ಎಂಬ ಈ ಹಾಡನ್ನು ಅನುರಾಧಾ ಭಟ್ ಹಾಡಿದ್ದಾರೆ.

ಇತ್ತೀಚೆಗೆ ನಟ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಮೆಚ್ಚುಗೆ ಸೂಚಿಸಿದ್ದ ಈ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಜೋರು ಸದ್ದು ಮಾಡುತ್ತಿದೆ. ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸ್ಕಂದ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ಕಾಶಿಮ ರಫಿ, ನೀನಾಸಂ ಅಶ್ವಥ್ , ಅಕ್ಷರ್‌ ಇತರರಿದ್ದಾರೆ.‌

ಇದೊಂದ ಸಸ್ಪೆನ್ಸ್‌, ಹಾರರ್‌ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ದಿನೇಶ್ ಬಾಬು ಅವರೇ ನಿರ್ದೇನದ ಜೊತೆಗೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಶ್ರೀ ಭವಾನಿ‌ ಆರ್ಟ್ಸ್ ಬ್ಯಾನರ್‌ನಲ್ಲಿ ರವೀಶ್ ಆರ್.ಸಿ. ಚಿತ್ರವನ್ನು ನಿರ್ಮಿಸಿದ್ದಾರೆ. ಇವರೊಂದಿಗೆ ನವೀನ್ ಆರ್.ಸಿ. ಹಾಗೂ ಅಕ್ಷಯ್ ಸಿ.ಎಸ್ ಅವರ ಸಹ ನಿರ್ಮಾಣವಿದೆ. ಪಿ.ಕೆ.ಹೆಚ್ ದಾಸ್‌, ಛಾಯಾಗ್ರಹಣವಿದೆ. ಹರೀಶ್ ಕೃಷ್ಣ ಅವರ ಸಂಕಲನ ಚಿತ್ರಕ್ಕಿದೆ.

Categories
ಆಡಿಯೋ ಕಾರ್ನರ್

ಸುಶಾಂತ್ ಸಿಂಗ್ ರಜಪೂತ್ ನೆನಪು – ನಟನಿಗೆ ‌ಸಂಗೀತ ನಿರ್ದೇಶಕ ವಿನಯ್‌ ಚಂದ್ರ ಅಲ್ವಿದಾ ಆಲ್ಬಂ ಗೌರವ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಇಂದು ನಮ್ಮೊಂದಿಗಿಲ್ಲ. ಆದರೆ, ಅವರ ಸಿನಿಮಾಗಳು, ಅವರ ಹಾಡುಗಳು ಇಂದಿಗೂ ಅಚ್ಚಳಿಯದೆ ಎಲ್ಲರ ಮನದಲ್ಲಿ ಉಳಿದಿವೆ. ಕಡಿಮೆ ಅವಧಿಯಲ್ಲೇ ಜೋರು ಸುದ್ದಿಯಾದ ಸುಶಾಂತ್‌ ಸಿಂಗ್‌ ಅವರ ನೆನಪಿಗೋಸ್ಕರ “ಅಲ್ವಿದಾ” ಆಲ್ಬಂವೊಂದನ್ನು ಹೊರತರಲಾಗಿದೆ. ಹೌದು, ಬಾಲಿವುಡ್‌ನಲ್ಲಿ ಒಂದಷ್ಟು ಸಾಧನೆ ಮಾಡಿದ ಸುಶಾಂತ್‌ ಸಿಂಗ್‌ ಕುರಿತ “ಅಲ್ವಿದಾ” ಆಲ್ಬಂ ಹಾಡು ಸಿದ್ಧಗೊಂಡಿದ್ದು, ಅದನ್ನು ಇತ್ತೀಚೆಗೆ ಪ್ಲೇ ಟು ಮೀ ಅರ್ಪಿಸಿದೆ.

ಸಂಗೀತ ನಿರ್ದೇಶಕ ಕಮ್‌ ಗಾಯಕ ವಿನಯ್‌ ಚಂದ್ರ ಅವರು ವಿಶೇಷವಾಗಿಯೇ “ಅಲ್ವಿದಾ” ಹಾಡನ್ನು ರೆಡಿಮಾಡಿದ್ದಾರೆ. ಇತ್ತೀಚೆಗೆ ವಿನಯ್‌ಚಂದ್ರ ಅವರ ತಂಡ ಆ ಹಾಡಿನ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು. ಹಾಡು ಹಿಂದಿಯಲ್ಲಿಯೇ ತಯಾರಾಗಿದ್ದು, ಹಾಡಿಗೆ ದನಿಯಾಗುವುದರ ಜತೆಗೆ ಸಂಗೀತವನ್ನೂ ನೀಡಿದ್ದಾರೆ ವಿನಯ್ ಚಂದ್ರ. ಅಷ್ಟೇ ಅಲ್ಲ ಈ ಹಾಡಲ್ಲೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅದರ ಟೀಸರ್ ಕೂಡ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.


ಈ ವೇಳೆ ಮಾತಿಗಿಳಿದ ಸಂಗೀತ ನಿರ್ದೇಶಕ ವಿನಯ್‌ ಚಂದ್ರ, “ಬಾಲಿವುಡ್ ನಲ್ಲಿ‌ ನೆಲೆ ನಿಲ್ಲಲು ಸುಶಾಂತ್ ಅವರ ಶ್ರಮ ಹೇಗಿತ್ತು ಎಂಬುದನ್ನು ಈ‌ ಹಾಡಿನಲ್ಲಿ ತೋರಿಸಿದ್ದೇವೆ. ಅವರ ಬಾಲ್ಯದ ಫೋಟೋಗಳಿಂದ ಹಿಡಿದ ಇತ್ತೀಚಿನ ಫೋಟೋಗಳನ್ನು ಮೂರು ನಿಮಿಷದ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಕೊನೆಗೆ ತಮ್ಮ ಈ ಸಿನಿಮಾ ಪಯಣದಲ್ಲಿ ಕೈ ಹಿಡಿದವರಿಗೆ, ಆಸರೆಯಾದವರಿಗೂ ಥ್ಯಾಂಕ್ಸ್ ಹೇಳಿ ಹೊರಡುವ ಪರಿಕಲ್ಪನೆಯ ಹಾಡು ಅಂದು ಎಂಬುದು ಅವರ ಮಾತು.


ಎರಡೂವರೆ‌ ದಿನಗಳ ಕಾಲ ಬೆಂಗಳೂರಿನಲ್ಲಿಯೇ ಸಂಪೂರ್ಣವಾಗಿ ಸೆಟ್ ಹಾಕಿ ಅಲ್ವಿದಾ ಹಾಡಿನ ಶೂಟಿಂಗ್ ನಡೆಸಿರುವುದು ವಿಶೇಷ. ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ, ಅದ್ಧೂರಿಯಾಗಿಯೇ ಚಿತ್ರೀಕರಿಸಲಾಗಿದೆ. ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಇನ್ನೊಂದು ವಾರದಲ್ಲಿ ಯೂಟ್ಯೂಬ್ ನಲ್ಲಿ ಹಾಡು ಬಿಡುಗಡೆಯಾಗಲಿದೆ.
ಪ್ಲೇ ಟು ಮಿ ಇಂಡಿಯಾದ ಬಿಗೆಸ್ಟ್ ಫರ್ಫಾಮಿಂಗ್ ನಮಗೊಂದು ಒಳ್ಳೆಯ ವೇದಿಕೆ ಕಲ್ಪಿಸಿದೆ.

ಇದೀಗ ಪ್ಲೇ ಟು ಮಿ ಒರಿಜಿನಲ್ಸ್ ಶುರುಮಾಡಿದ್ದು, ಆ ಮೂಲಕ ನನ್ನ ಮೊದಲ ಹಾಡಾಗಿ ಅಲ್ವಿದಾ ಮೂಡಿಬಂದಿದೆ. ಕೀರ್ತಿ ವಾಸನ್ ಸುಬ್ರಮಣ್ಯಂ ಪ್ಲೇ ಟು ಮಿಯ ಸಿಇಒ ಆಗಿದ್ದಾರೆ. 104 ಎಫ್ಎಂನ ಸಿಇಒ ಮತ್ತು ವಲ್ಫೂಲ್ ಬ್ರಾಂಡ್ ನ ಬಿಸಿನೆಸ್ ಹೆಡ್ ಕೂಡ ಅವರು. ಇನ್ನು, ಶ್ರೀಧರ್ ಮತ್ತು ಶೀತಲ್ ಈ ಹಾಡಿಗೆ ಹಣ ಹಾಕಿದ್ದಾರೆ. ಹಾಡಿನ ನಿರ್ದೇಶನವನ್ನೂ ಶ್ರೀಧರ್ ಮಾಡಿದ್ದಾರೆ.

ಹಾಡಿನ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಅಂದು ಅತಿಥಿಗಳ ದಂಡೇ ಹಾಜರಿತ್ತು. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಸ‌ ನಿರ್ದೇಶಕ ಥ್ರಿಲ್ಲರ್ ಮಂಜು, ವಿನಯ್ ಚಂದ್ರ ಅವರ ತಂದೆ ಮತ್ತು ಹಿರಿಯ ಪತ್ರಕರ್ತರು, ಕಲಾವಿದರಾಗಿರುವ ಸುರೇಶ್ ಚಂದ್ರ, ರವಿಚೇತನ್, ನಟಿ ರೂಪಿಕಾ, ಅಭಯ್ ಚಂದ್ರ, ಕೀರ್ತಿ ವಾಸನ್ ಸೇರಿದಂತೆ ಹಲವು ಗೆಳೆಯರು ಆಗಮಿಸಿ ವಿನಯ್‌ ಚಂದ್ರ ಅವರ ಪ್ರಯತ್ನಕ್ಕೆ ಶುಭಕೋರಿದರು.

ಈಗಾಗಲೇ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ‌ಮಾಡುತ್ತಿರುವ ಅನಿಲ್ ಕುಮಾರ್ , ಆಲ್ವಿದಾ ಹಾಡಿಗೆ ಕ್ಯಾಮರಾ ಹಿಡಿದಿದ್ದಾರೆ. ಜತೆಗೆ ಸಂಕಲನವನ್ನೂ ಮಾಡಿದ್ದಾರೆ. ವಿನಯ್‌ ಚಂದ್ರ ಸ್ವತಃ ಸಂಗೀತದ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು, ಅಭಿಲಾಷ್ ಗುಪ್ತಾ ಸಾಹಿತ್ಯವಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಕೋಟಿಗೊಬ್ಬನ ಹಾಡು ಪಾಡು- ಮಾರ್ಚ್‌ 28ಕ್ಕೆ ಹಾಡುಗಳ ಬಿಡುಗಡೆ

ಸಾಂಗ್‌ ಎದುರು ನೋಡುತ್ತಿರುವ ಫ್ಯಾನ್ಸ್‌ 

ಕೋಟಿಗೊಬ್ಬ ಅಂದಾಕ್ಷಣ, ನೆನಪಾಗೋದೇ ಡಾ.ವಿಷ್ಣುವರ್ಧನ್.‌ ಈಗ ಅದೇ ಕೋಟಿಗೊಬ್ಬ ಹೆಸರಲ್ಲಿ ಸುದ್ದಿಯಾದವರು ಕಿಚ್ಚ ಸುದೀಪ್.‌ ಹೌದು, ಸುದೀಪ್‌ ಈಗಾಗಲೇ “ಕೋಟಿಗೊಬ್ಬ” ಸೀರೀಸ್‌ನಲ್ಲಿ ಸಿನಿಮಾ ಮಾಡಿರುವ ಸುದೀಪ್‌, “ಕೋಟಿಗೊಬ್ಬ ೩” ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.

ಅದಕ್ಕೆ ಕಾರಣ, ಈಗಾಗಲೇ ಸಾಕಷ್ಟು ಸುದ್ದಿಯಲ್ಲಿರೋದು. ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾಗಳ ಸ್ಟಾರ್‌ ನಟ ಎನಿಸಿರುವ ಸುದೀಪ್‌ ಅವರ “ಕೋಟಿಗೊಬ್ಬ” ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಮಾ.೨೮ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಹೌದು, ಸೂರಪ್ಪ ಬಾಬು ನಿರ್ಮಾಣದ “ಕೋಟಿಗೊಬ್ಬ ೩” ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರದ ಹಾಡುಗಳನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ, ಟ್ವೀಟ್‌ ಮೂಲಕ ಚಿತ್ರತಂಡ ಹಾಡುಗಳ ಬಿಡುಗಡೆ ಕುರಿತು ಹೇಳಿಕೊಂಡಿದೆ.

Categories
ಆಡಿಯೋ ಕಾರ್ನರ್

ಮೇಘಾಶೆಟ್ಟಿ ಡ್ಯಾನ್ಸ್‌ ನೋಡು ಶಿವಾ…! ಚಂದನ್‌ ಜೊತೆ ಡಿಂಗು ಡಾಂಗು

ಆಲ್ಬಂ ಸಾಂಗ್‌ ಶೂಟಿಂಗ್‌ ಮುಗೀತು

ಮೇಘಾಶೆಟ್ಟಿ

ಮೇಘಾಶೆಟ್ಟಿ…

ಸದ್ಯಕ್ಕೆ ಕಿರುತೆರೆಯಲ್ಲಿ ಓಡುತ್ತಿರುವ ಹೆಸರಿದು. ಈ ಮೇಘಾಶೆಟ್ಟಿ ಈಗ ಕನ್ನಡ ಚಿತ್ರರಂಗಕ್ಕೂ ಎಂಟ್ರಿಯಾಗಿದ್ದಾಗಿದೆ. ಈ ಹಿಂದೆ ಮೇಘಾಶೆಟ್ಟಿ ಕನ್ನಡ ಆಲ್ಬಂ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಅನ್ನೋ ಸುದ್ದಿ ಎಲ್ಲರಿಗೂ ಗೊತ್ತಿತ್ತು. ಆ ಹಾಡಿಗೆ ಕುಣಿಸಿದ್ದು ಬೇರಾರೂ ಅಲ್ಲ, ಚಂದನ್‌ ಶೆಟ್ಟಿ. ಹೌದು, ಅದ್ಧೂರಿಯಾಗಿ ತಯಾರಾಗಿರುವ ಕನ್ನಡ ಆಲ್ಬಂ ಸಾಂಗ್‌ನಲ್ಲಿ ಮೇಘಾಶೆಟ್ಟಿ ಕುಣಿದು ಕುಪ್ಪಳಿಸಿದ್ದಾರೆ.

ಇಲ್ಲಿ ಸುಮಿತ್‌ ಮತ್ತು ಮೇಘಾಶೆಟ್ಟಿಯ ಜೊತೆಗೆ ಚಂದನ್‌ ಶೆಟ್ಟಿ ಕೂಡ ಒಂದೆರೆಡು ಸ್ಟೆಪ್‌ ಹಾಕಿರೋದು ವಿಶೇಷ. ಅಂದಹಾಗೆ, “ನೋಡು ಶಿವ” ಎಂದು ಶುರುವಾಗುವ ಈ ಆಲ್ಬಂ ಸಾಂಗ್‌ ಅನ್ನು, ಸುಮಿತ್ ಎಂ.ಕೆ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಈ ಸುಮಿತ್‌ ಅವರು “ಪರಾರಿ” ಎಂಬ ಸಿನಿಮಾ ಮಾಡಿದ್ದರು.

ಸುಮಿತ್

ಇನ್ನೊಂದು ವಿಶೇಷವೆಂದರೆ, ಸುಮಿತ್ ಅವರೆ “ನೋಡು ಶಿವ” ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಚಂದನ್ ಶೆಟ್ಟಿ ಸಂಗೀತದ ಜೊತೆಗೆ ಧ್ವನಿಯನ್ನೂ ನೀಡಿದ್ದಾರೆ. ಈ ಹಾಡಲ್ಲಿ ಸುಮಾರು ‌‌‍60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹ ಕಲಾವಿದರು ಕಾಣಿಸಿಕೊಂಡಿದ್ದು, ಕನ್ನಡದ ಮಟ್ಟಿಗೆ ಇದೊಂದು ಅದ್ದೂರಿಯಾಗಿ‌ ಮೂಡಿಬಂದಿರುವ ಮೊದಲ‌‌ ಆಲ್ಬಂ ಸಾಂಗ್ ಎಂಬುದು ವಿಶೇಷ.

ಇತ್ತೀಚೆಗೆ ಬನ್ನೇರುಘಟ್ಟ ‌ರಸ್ತೆಯ ಎ.ಎಂ.ಸಿ ಇಂಜನಿಯರಿಂಗ್ ಕಾಲೇಜ್ ಆವರಣದಲ್ಲಿ ಈ ಹಾಡಿನ‌ ಚಿತ್ರೀಕರಣ ನಡೆದಿದೆ. ಎಂ.ಕೆ‌ ಆರ್ಟ್ಸ್ ಬ್ಯಾನರ್‌ನಲ್ಲಿ ಮೋನಿಕಾ‌ ಕಲ್ಲುರಿ ಅವರು ಈ ಆಲ್ಬಂ ಸಾಂಗ್ ನಿರ್ಮಾಣ‌ ಮಾಡಿದ್ದು, “ಭಜರಂಗಿ” ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ.‌ “ಹೆಬ್ಬುಲಿ” ಖ್ಯಾತಿಯ ಕರುಣಾಕರ್ ಅವರ ಛಾಯಾಗ್ರಹಣವಿದೆ. ಮೂರುವರೆ ನಿಮಿಷಗಳ‌ ಅವಧಿಯ ಈ ಆಲ್ಬಂ ಸಾಂಗ್ ಇದೇ ತಿಂಗಳಲ್ಲಿ ‌ಆನಂದ್ ಆಡಿಯೋ‌ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ.

 

error: Content is protected !!