Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್‌ ಮತ್ತೊಂದು ದೊಡ್ಡ ಹೆಜ್ಜೆ- ಏಕಕಾಲದಲ್ಲಿ ಹಲವು ಭಾಷೆಯ ಸಿನಿಮಾ ಮಾಡಲು ರೆಡಿ

ಡಿ. 2 ರಂದು ಹೊರಬೀಳಲಿದೆ ಬಹುದೊಡ್ಡ ಘೋಷಣೆ

ಏಳು ವರ್ಷ… ಏಳು ಸಿನಿಮಾ.. ಸೋಲಿಗಿಂತ ದೊಡ್ಡ ಗೆಲುವಿನ ಪಾಲೇ ಹೆಚ್ಚು..!
-ಇದು ಹೊಂಬಾಳೆ ಫಿಲಂಸ್‌ ನಿರ್ಮಾಣದ ಚಿತ್ರಗಳ ಸುದ್ದಿ. ಹೌದು, ಹೊಂಬಾಳೇ ಫಿಲಂಸ್‌ ಕಳೆದ ಏಳು ವರ್ಷಗಳಲ್ಲಿ ಏಳು ಚಿತ್ರಗಳನ್ನು ನಿರ್ಮಾಣ ಮಾಡಿದೆ. ಈ ಪೈಕಿ ಮೂರು ಚಿತ್ರಗಳು ಪ್ಯಾನ್‌ ಇಂಡಿಯಾ ಸಿನಿಮಾಗಳು ಅನ್ನುವುದು ಖುಷಿ. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್​ ಇದೀಗ ಹೊಸ ಸಾಹಸಕ್ಕೆ ಹೆಜ್ಜೆ ಇಡುತ್ತಿದೆ. ಆ ಸಾಹಸವೂ ಸಿನಿಮಾ ನಿರ್ಮಾಣದ್ದೇ ಅನ್ನುವುದು ವಿಶೇಷ. ಹೌದು, ಈ ವರ್ಷಗಳ ಅವಧಿಯಲ್ಲಿ ಭಾರತ ಮಾತ್ರವಲ್ಲ, ವಿದೇಶಗಳೂ ಇತ್ತ ಒಮ್ಮೆ ತಿರುಗಿ ನೋಡುವಂತಹ ಸಿನಿಮಾಗಳನ್ನು ಕಟ್ಟುಕೊಟ್ಟಿರುವುದು ಈ ಸಂಸ್ಥೆಯ ಹೆಮ್ಮೆ. ಈಗ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಸಂಸ್ಥೆ ಮುಂದಾಗಿದೆ. ಡಿಸೆಂಬರ್​ 2ರ ಮಧ್ಯಾಹ್ನ ಹೊಸ ಚಿತ್ರದ ಬಗ್ಗೆ ಹೊಂಬಾಳೆ ಸಂಸ್ಥೆ ಮಾಹಿತಿ ಹಂಚಿಕೊಳ್ಳಲಿದೆ.

ವಿಜಯ್‌ ಕಿರಗಂದೂರು, ನಿರ್ಮಾಪಕ

ಕಳೆದ 2014ರಲ್ಲಿ “ನಿನ್ನಿಂದಲೇ” ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ವಿಜಯ್‌ ಕಿರಗಂದೂರು ಅವರ ಹೊಂಬಾಳೆ ಫಿಲಂಸ್​ನ ನಿರ್ಮಾಣದ ಪಯಣ ಇಲ್ಲಿಯವರೆಗೆ ಯಶಸ್ಸಿನ ಮೆಟ್ಟಿಲ್ಲನ್ನು ಹತ್ತಿಕೊಂಡೇ ಬಂದಿದೆ. “ಮಾಸ್ಟರ್ ಪೀಸ್”​,” ರಾಜಕುಮಾರ”, “ಕೆಜಿಎಫ್”, “ಕೆಜಿಎಫ್​ 2”, “ಯುವರತ್ನ” ಚಿತ್ರದವರೆಗೂ ಹೊಂಬಾಳೆ ತನ್ನ ಅದ್ಧೂರಿ ನಿರ್ಮಾಣ ಚಿತ್ರಗಳನ್ನು ನೀಡುತ್ತ ಬಂದಿದೆ. ಏಳು ವರ್ಷಗಳಲ್ಲಿ ಏಳು ಸಿನಿಮಾ ನೀಡುವ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಈ ಏಳು ಸಿನಿಮಾಗಳ ಪೈಕಿ ಮೂರು ಪ್ಯಾನ್​ ಇಂಡಿಯಾ ಚಿತ್ರಗಳು. ಈಗ ಈ ಎಲ್ಲಾ ಸಿನಿಮಾಗಳಿಗಿಂತಲೂ ಮತ್ತೊಂದು ದೊಡ್ಡ ಸಿನಿಮಾ ಘೋಷಣೆ ಮಾಡಲು ಹೊಂಬಾಳೆ ಸಂಸ್ಥೆ ರೆಡಿಯಾಗಿದೆ.

ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಚಿತ್ರ ನಿರ್ಮಿಸುವ ಗುರಿ ಹೊಂದಿರುವ ಸಂಸ್ಥೆ, ಡಿ.೨ರಂದು ಆ ಕುರಿತಂತೆ ಅಧಿಕೃತ ಮಾಹಿತಿ ಹೊರಹಾಕಲಿದೆ. ಆ ಚಿತ್ರ ಯಾವುದು, ನಿರ್ದೇಶಕರು ಯಾರು, ಯಾರೆಲ್ಲಾ ಆ ಚಿತ್ರದಲ್ಲಿರುತ್ತಾರೆ ಎಂಬಿತ್ಯಾದಿ ಕುರಿತು ವಿಷಯ ಹೊರಬೀಳಲಿದೆ.
ಈಗಾಗಲೇ ಪ್ಯಾನ್​ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿಬರುತ್ತಿದ್ದು, ಅದೊಂದು ಉತ್ತಮ ಬೆಳೆವಣಿಗೆ ಎನ್ನಲಾಗುತ್ತಿದೆ. ಕನ್ನಡದ “ಕೆಜಿಎಫ್”​ ಸಿನಿಮಾ ಈಗಾಗಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿರುವುದು ಗೊತ್ತೇ ಇದೆ. ಅದರ ಹತ್ತು ಪಟ್ಟು ನಿರೀಕ್ಷೆ “ಕೆಜಿಎಫ್​ ಚಾಪ್ಟರ್ 2” ಮೇಲೂ ಇದೆ. ಹಾಗೆಯೇ ಪುನೀತ್ ರಾಜ್​ಕುಮಾರ್ ಅವರ “ಯುವರತ್ನ” ಚಿತ್ರವೂ ಕನ್ನಡದ ಜತೆಗೆ ತೆಲುಗಿನಲ್ಲೂ ಬಿಡುಗಡೆ ಆಗುತ್ತಿದೆ. ಹೀಗೆ ಈ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆಯೇ ಇದೀಗ ಇಡೀ ಭಾರತದಲ್ಲೇ ಮೊದಲ ಸಲ ಯಾರೂ ಮಾಡದಂತಹ ಹೊಸ ಸಾಹಸಕ್ಕೆ ಕೈ ಹಾಕಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಗೆ ಡಿಸೆಂಬರ್‌ 2 ರವರೆಗೆ ಕಾಯಬೇಕು.

Categories
ಸಿನಿ ಸುದ್ದಿ

ಲಾಕ್‌ಡೌನ್‌ ಸಮಯದಲ್ಲಿ ಹುಟ್ಟಿದ ಪ್ರೀತಿ – ಲವ್ ಇನ್ ಲಾಕ್ ಡೌನ್ ಚಿತ್ರಕ್ಕೆ ಚಾಲನೆ

ಹೊಸಬರ ಪ್ರೀತಿಯ ಕಥೆ ವ್ಯಥೆ

 

ಲಾಕ್‌ಡೌನ್‌ ಸಮಯದಲ್ಲಿ ಹೆಚ್ಚು ಉಪಯೋಗವಾಗಿದ್ದು ಆನ್ನುವುದಾದರೆ ಅದು ಸಿನಿಮಾ ಮಂದಿಗೆ. ಹೌದು, ಈ ಸಮಯದಲ್ಲಿ ಸಾಕಷ್ಟು ಜನ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಒಂದೊಳ್ಳೆಯ ಸ್ಕ್ರಿಪ್ಟ್‌ ಮಾಡಿಕೊಂಡಿದ್ದುಂಟು. ಅಷ್ಟೇ ಅಲ್ಲ, ಬಹುತೇಕರು ಆ ಸಮಯದಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡೋಕೆ ಮುಂದಾಗಿದ್ದು ಹೌದು. “ಕೊರೊನಾ” ಕುರಿತ ಕಥೆ ಹೆಣೆದ ಜನ ಒಂದಷ್ಟು ಇದ್ದರೆ, ಲಾಕ್‌ಡೌನ್‌ ಸಮಯದಲ್ಲಿ ಆದಂತಹ ಸಮಸ್ಯೆಗಳ ಕುರಿತು ಕಥೆ ಮಾಡಿಕೊಂಡವರು ಒಂದಷ್ಟು ಮಂದಿ ಇದ್ದಾರೆ. ಈಗ ಇಲ್ಲೊಂದು ಹೊಸಬರ ತಂಡ, ಲಾಕ್‌ ಡೌನ್‌ ಸಮಯದಲ್ಲಿ ಆಗುವಂತಹ ಕೆಲ ವಿಷಯಗಳನ್ನು ಇಟ್ಟುಕೊಂಡು ಒಂದು ಕಥೆ ಹೆಣೆದು, ಚಿತ್ರ ಮಾಡಲು ಹೊರಟಿದೆ. ಆ ಚಿತ್ರಕ್ಕೆ “ಲವ್‌ ಇನ್‌ ಲಾಕ್‌ಡೌನ್”‌ ಎಂದು ನಾಮಕರಣ ಮಾಡಿದೆ.


ಚಿತ್ರದ ಶೀರ್ಷಿಕೆಯೇ ಹೇಳಿದಂತೆ, ಇದೊಂದು ಲಾಕ್ ಡೌನ್ ಸಮಯದಲ್ಲಿ ನಡೆದ ದುರಂತ ಪ್ರೇಮಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಲಾಕ್‍ಡೌನ್ ಸಮಯದಲ್ಲಿ ಒಂದಷ್ಟು ಅಪರೂಪದ ಘಟನೆಗಳು ನಡೆದಿದ್ದು, ಆ ವೇಳೆ ನಡೆದ ಒಂದು ಘಟನೆಯೇ ಈ ಚಿತ್ರಕ್ಕೆ ಸ್ಫೂರ್ತಿ ಅನ್ನುವುದು ಚಿತ್ರತಂಡದ ಹೇಳಿಕೆ.


ಅಂದಹಾಗೆ, ಲಾಕ್ ಡೌನ್ ವೇಳೆ ನಡೆದ ಪ್ರೀತಿ, ಪ್ರೇಮ ಪ್ರಣಯದ ಕಥೆಯನ್ನು ತೆರೆಯ ಮೇಲೆ ತರಲು ಹೊರಟಿರೋದು ನಿರ್ದೇಶಕ ಮಂಜುನಾಥ್ ಬಿ.ರಾಮ್. ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ಅಡಿಯಲ್ಲಿ ಎಂ.ನಾರಾಯಣಸ್ವಾಮಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಮಂಜುನಾಥ್ ಬಿ.ರಾಮ್ ಅವರು ತಾವು ಕಂಡ ಪ್ರೇಮಕಥೆಯೊಂದನ್ನು ಹಾಗು ಅದರ ದುರಂತ ಅಂತ್ಯವನ್ನು ಸಿನಿಮಾ ರೂಪದಲ್ಲಿ ಹೇಳ ಹೊರಟಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಚಿಕ್ಕಬಳ್ಳಾಪುರದ ರಂಗಸ್ಥಳದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮುಹೂರ್ತ ನಡೆದಿದೆ.

ಈಗಾಗಲೇ “ನಾ ಕನ್ನಡಿಗನೆಂದುಕೊಂಡು ಬಾಳು ಮಗಾ..” ಎನ್ನುವ ಗೀತೆಯನ್ನು ಸುಮಾರು 40 ಮಂದಿ ನೃತ್ಯ ಕಲಾವಿದರೊಂದಿಗೆ ಚಿತ್ರೀಕರಿಸಲಾಗಿದೆ. ಇನ್ನು ಈ ಚಿತ್ರದಲ್ಲಿ ಮಂಜುನಾಥ್‌ ಹೀರೋ. ಅವರಿಗೆ ಯಶಸ್ವಿ ನಾಯಕಿ. ಈ ಹಿಂದೆ ಯಶಸ್ವಿ “ಲೆಕ್ಕಾಚಾರ” ಎಂಬ ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ “ಕಿಲ್ಲರ್” ವೆಂಕಟೇಶ್, ಬ್ಯಾಂಕ್ ಜನಾರ್ದನ್, ಗಣೇಶ್‍ರಾವ್, ಭಲರಾಮ್ ಪಾಂಚಾಲ, ಪಲ್ಲವಿ ರಾಜೇಂದ್ರ ಇತರರು ನಟಿಸುತ್ತಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣವಿದೆ. ಡ್ಯಾನಿಯಲ್ ಸಂಗೀತ, ಪ್ರಸನ್ನ ನೃತ್ಯವಿದೆ. ಶಿವು ಅವರ ಸಾಹಸ ಹಾಗೂ ರಾಜೀವ್ ಕೃಷ್ಣ ಅವರು ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಗಜೇಂದ್ರಗಡ ಸುತ್ತಮುತ್ತ ಮೂರು ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರು ಮಾಡಿಕೊಂಡಿದೆ.

Categories
ಸಿನಿ ಸುದ್ದಿ

ಹೊಸಬರ ಕಾಯಕವೇ ಕೈಲಾಸ – ಉದ್ಯೋಗಂ ಪುರುಷ ಲಕ್ಷಣಂ ರಿಲೀಸ್‌ಗೆ ರೆಡಿ

ಅವಳು ಮತ್ತು ಅವರು- ತ್ರಿಕೋನ ಪ್ರೇಮಕಥೆಯಲ್ಲಿ ಕೆಲಸ ಗಿಲಸ ಇತ್ಯಾದಿ..

ಪುರುಷರು ಮನೆಯಲ್ಲಿರಬಾರದು. ಹಾಗಂತ, ಹೊರಗೆ ಸುತ್ತಾಡಬೇಕು ಅಂತಲ್ಲ. ಸಣ್ಣದಾದರೂ ಪರವಾಗಿಲ್ಲ ಒಂದು ಉದ್ಯೋಗ ಅನ್ನೋದು ಇರಬೇಕು. ಅದಕ್ಕಾಗಿಯೇ ಒಂದು ಗಾದೆ ಇದೆ. “ಉದ್ಯೋಗಂ ಪುರುಷ ಲಕ್ಷಣಂ” ಅಂತ. ಈಗ ಇದೇ ಹೆಸರಿನಲ್ಲೊಂದು ಸಿನಿಮಾ ಕೂಡ ಆಗಿದೆ. ಹೌದು, ಇಲ್ಲೀಗ ಹೇಳ ಹೊರಟಿರುವುದು ಕೂಡ “ಉದ್ಯೋಗಂ ಪುರುಷ ಲಕ್ಷಣಂ” ಬಗ್ಗೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ತಮ್ಮ ಚಿತ್ರದ ಬಗ್ಗೆ ಹೇಳಲೆಂದೇ ಚಿತ್ರತಂಡ ಮಾಧ್ಯಮ ಮುಂದೆ ಆಗಮಿಸಿತ್ತು. ಇದು ಬಹುತೇಕ ಹೊಸಬರೇ ಸೇರಿ ಮಾಡಿರುವ ಚಿತ್ರ. ಈ ಚಿತ್ರದ ಮೂಲಕ ಸುಜಿತ್‌ ಕುಮಾರ್‌ ಕೆ.ಎಂ. ಕುಡ್ಲೂರು ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯೂ ಅವರದೇ. ತಮ್ಮ ಚೊಚ್ಚಲ ಸಿನಿಮಾ ಕುರಿತು ಸುಜಿತ್‌ ಕುಮಾರ್‌ ಹೇಳಿದ್ದಿಷ್ಟು.

ಸುಜಿತ್‌, ನಿರ್ದೇಶಕ

“ನನಗೆ ನಿರ್ದೇಶನ ಅನ್ನೋದು ತುಂಬ ಆಸಕ್ತಿಯ ವಿಷಯ. ಅದಕ್ಕಾಗಿ ನಾನು ಎಂಟು ವರ್ಷಗಳ ಕಾಲ ಅಲೆದಾಟ ನಡೆಸಿದೆ. ಒಂದು ಐಡೆಂಟಿಟಿ ಸಿಕ್ಕರೆ ಮಾತ್ರ ನಾವು ಏನು ಅಂತ ತೋರಿಸಲು ಸಾಧ್ಯ. ಹೀಗೆ ಒಮ್ಮೆ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಸಿನಿಮಾಗೆ ಹೋದೆ. ಸಿಗಲಿಲ್ಲ. ಒಂದಷ್ಟು ಸಮಯ ಹೋಗಿ ಬಂದು ಮಾಡಿದೆ. ಒಮ್ಮೆ ಸಿಕ್ಕರು. ಆಗ ನನ್ನ ಆಸೆ ಹೊರಹಾಕಿದೆ. ಚಿತ್ರಕಥೆ, ಕಟ್ಟುವ ವಿಭಾಗದಲ್ಲಿ ತರಬೇತಿ ಪಡೆದೆ. ಅವರ ಜೊತೆಗೆ ನಾನು “ಇಷ್ಟಕಾಮ್ಯ” ಸಿನಿಮಾದಲ್ಲೂ ಕೆಲಸ ಮಾಡಿದೆ. ನಂತರ ಹೊಸದೊಂದು ಸಿನಿಮಾ ಮಾಡಬೇಕು ಅಂತ ಹೊರಟೆ. ಪವನ್‌, ವೆಂಕಟೇಶ್‌, ಉಮೇಶ್‌ ನನ್ನ ಪ್ರಯತ್ನಕ್ಕೆ ಸಾಥ್‌ ಕೊಟ್ಟರು. ಈ ಚಿತ್ರ ಶುರುವಾಯ್ತು. ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ನಾಲ್ವರು ಹುಡುಗರ ಸುತ್ತ ನಡೆಯುವ ಕಥೆ. ರೊಮ್ಯಾನ್ಸ್‌, ಕಾಮಿಡಿ ಹಾಗು ಸಸ್ಪೆನ್ಸ್‌ ಜೊತೆಗೆ ಒಂದಷ್ಟು ವಿಷಯಗಳನ್ನು ಹೊಂದಿದೆ. ಸರಳ ತ್ರಿಕೋನ ಪ್ರೇಮಕಥೆ ಇಲ್ಲಿದ್ದು, ಕಾಯಕವೇ ಕೈಲಾಸ ಎಂಬುದನ್ನು ಹೇಳಲಾಗಿದೆʼ ಎನ್ನುತ್ತಾರೆ ಸುಜಿತ್.‌

ರಾಕೇಶ್‌, ನಿರ್ಮಾಪಕ

ನಾಯಕ ರಾಜ್‌ ಚರಣ್‌ ಅವರು ಇಲ್ಲಿಗೆ ಬರಲು ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಸಿನಿಮಾ ಕಾರಣವಂತೆ. ಅವರಿಲ್ಲಿ ಅರುಣ್‌ ಎಂಬ ಪಾತ್ರ ಮಾಡುತ್ತಿದ್ದು, ಅದೊಂದು ರೀತಿ ಲವ್ವರ್‌ ಬಾಯ್‌ ಪಾತ್ರವಂತೆ. ನನಗಿಲ್ಲಿ ಡ್ಯಾನ್ಸ್‌ ಕಷ್ಟವಿತ್ತು. ವಿಜಯ್‌ ಮಾಸ್ಟರ್‌ ಎಲ್ಲವನ್ನೂ ಚೆನ್ನಾಗಿ ಹೇಳಿಕೊಟ್ಟಿದ್ದಕ್ಕೆ ಸುಲಭವಾಯ್ತು. ಒಂದೊಳ್ಳೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂದರು ರಾಜ್‌ಚರಣ್.‌

ರಾಜ್‌ ಚರಣ್‌

ನಿರ್ಮಾಪಕ ರಾಕೇಶ್‌ ಚೆಲುವರಾಜ್‌ ಅವರಿಗೆ ಇದು ಮೊದಲ ಅನುಭವ. ಅವರಿಗೆ ನಿರ್ದೇಶಕ ಸುಜಿತ್‌ ಒಳ್ಳೆಯ ಗೆಳೆಯರು. ಅವರು ಒಮ್ಮೆ ಕಥೆ ಬಗ್ಗೆ ಚರ್ಚೆ ನಡೆಸಿದಾಗ, ಸಿನಿಮಾ ಮಾಡುವ ಮನಸ್ಸು ಮಾಡಿದರಂತೆ. ಚಿತ್ರದ ಕಥೆ ಮತ್ತು ಹಾಡು ಎಲ್ಲವೂ ಸೊಗಸಾಗಿದೆ. ಒಳ್ಳೆಯ ತಂಡ ಚೆನ್ನಾಗಿ ಕೆಲಸ ಮಾಡಿದೆ. ಪ್ರೇಕ್ಷಕರಿಗೆ ನಮ್ಮ ಸಿನಿಮಾ ಇಷ್ಟವಾಗುವ ನಂಬಿಕೆ ಇದೆʼ ಎಂಬುದು ರಾಕೇಶ್‌ ಚೆಲುವರಾಜ್‌ ಮಾತು.

ಸತ್ಯ, ಸಂಗೀತ ನಿರ್ದೇಶಕ

ಸಂಗೀತ ನಿರ್ದೇಶಕ ಸತ್ಯ ರಾಧಾಕೃಷ್ಣ ಮತ್ತು ಜತಿನ್‌ ದರ್ಶನ್‌ ಸಂಗೀತ ನೀಡಿದ್ದಾರೆ. ತಮ್ಮ ಸಂಗೀತದ ಬಗ್ಗೆ ಮಾತನಾಡಿದ ಸತ್ಯ ರಾಧಾಕೃಷ್ಣ, “ಇಲ್ಲಿ ಎರಡು ಹಾಡುಗಳಿವೆ. ನಾನು “ವಿರೂಪ” ಚಿತ್ರದಲ್ಲಿ ಕೆಲಸ ಮಾಡುವಾಗ, ನಿರ್ದೇಶಕರ ಪರಿಚಯವಾಯ್ತು. ಅದು ಈ ಸಿನಿಮಾ ಆಗುವರೆಗೆ ಬಂದು ನಿಂತಿದೆ. ಒಂದು ಹಾಡನ್ನು ನಾನು ಹಾಡಿದ್ದೇನೆ. ಇನ್ನೊಂದು ಚೇತನ್‌ ನಾಯಕ್‌ ಹಾಡಿದ್ದಾರೆ ಎಂದು ವಿವರ ಕೊಟ್ಟರು.

ರಿಧಿ ರಾವ್‌

ನಾಯಕಿ ರಿಧಿರಾವ್‌ ಅವರಿಲ್ಲಿ ಪೃಥ್ವಿ ಎಂಬ ಪಾತ್ರ ನಿರ್ವಹಿಸಿದ್ದಾರಂತೆ. ಇಬ್ಬರು ನಾಯಕರ ಜೊತೆ ಸಾಗುವ ಕಥೆಯಲ್ಲಿ ಪ್ರೀತಿಯ ಅಂಶಗಳಿವೆ ಎಂದರೆ, ಮತ್ತೊಬ್ಬ ಹೀರೋ ಸಾವನ್‌ ಸಿಂಗ್‌ ಠಾಕೂರ್‌, ಇಲ್ಲಿ ಚಂದು ಎಂಬ ಮುಗ್ಧ ಹುಡುಗನ ಪಾತ್ರ ಮಾಡಿದ್ದಾಗಿ ಹೇಳಿಕೊಂಡರು. ನೃತ್ಯ ನಿರ್ದೇಶಕ ವಿಜಯ್‌ ಅವರು ಎರಡು ಸಾಂಗ್‌ಗಳಿಗೆ ನೃತ್ಯ ನಿರ್ದೇಶನ ಮಾಡಿದರ ಬಗ್ಗೆ ಹೇಳಿಕೊಂಡರು. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ರಾಮಿಶೆಟ್ಟಿ ಪವನ್‌
Categories
ಆಡಿಯೋ ಕಾರ್ನರ್

ನಾನು ಗಾಯಕನಾಗಲೂ ಅನೂಪ್‌ ಕಾರಣ – ವಸಿಷ್ಠ ಸಿಂಹ ಗುಣಗಾನ

ವಸಿಷ್ಠ ಅವರೊಳಗಿನ ಗಾಯಕನನ್ನ ಗಮನಿಸಿದ ಸೀಳಿನ್

ಅದು ಯಾವುದೇ ಕ್ಷೇತ್ರ ಇರಬಹುದು. ಸಾಮಾನ್ಯವಾಗಿ ಯಾರೇ ಗುರುತಿಸಿಕೊಂಡರು ಅವರ ಹಿಂದೆ ಒಬ್ಬರು ಸಾಥ್‌ ಕೊಟ್ಟಿರುತ್ತಾರೆ. ಅವರ ಗೆಲುವಿನ ಹಿಂದಿನ ಶಕ್ತಿಯಾಗಿರುತ್ತಾರೆ. ಒಬ್ಬ ಹೀರೋ ಆದವರು, ನಿರ್ದೇಶಕರಾದವರು, ಕಲಾವಿದರಾದವರು ಹೀಗೆ ಏನೇ ಆಗಿದ್ದರೂ, ಅವರು ಆ ಮಟ್ಟಕ್ಕೆ ಬಂದು ಗುರುತಿಸಿಕೊಳ್ಳಬೇಕಾದರೆ, ಒಬ್ಬರ ಸಹಕಾರ ಇದ್ದೇ ಇರುತ್ತೆ. ಈಗ ಇಲ್ಲಿ ಹೇಳಹೊರಟಿರುವ ವಿಷಯವಿಷ್ಟೆ. ನಾಯಕ ವಸಿಷ್ಠ ಸಿಂಹ ಅವರು ಗಾಯಕ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಅವರ ಖಡಕ್‌ ವಾಯ್ಸ್‌ ಹೇಗಿದೆಯೋ ಹಾಗೆಯೇ ಅವರ ಹಾಡಲ್ಲೂ ಅಂಥದ್ದೊಂದು ರಾ ಫೀಲ್‌ ಸಿಗುತ್ತೆ. ಆ ಕಾರಣಕ್ಕಾಗಿಯೋ ಏನೋ, ಅವರನ್ನು ಗುರುತಿಸಿ ಹಾಡಿಸಿದ್ದೂ ಉಂಟು.


ಅಷ್ಟಕ್ಕೂ ವಸಿಷ್ಠ ಸಿಂಹ ಗಾಯಕ ಆಗೋಕೆ ಕಾರಣ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಅನ್ನುವುದು ಅವರ ಮಾತು. ಈ ಕುರಿತು ಸ್ವತಃ ವಸಿಷ್ಠ ಸಿಂಹ ಅವರೇ ಹೇಳಿಕೊಂಡಿದ್ದಾರೆ. ನಾನು ಹಿಂದೊಮ್ಮೆ “ಕಿರಿಕ್‌ ಪಾರ್ಟಿ” ಚಿತ್ರದಲ್ಲಿ ಧನಂಜಯ್‌ ರಾಜನ್‌ ಬರೆದ “ನೀಚ ಸುಳ್ಳು ಸುತ್ತೋ ನಾಲಿಗೆ…” ಹಾಡನ್ನು ಹಾಡಿದ್ದೆ. ಆದರೆ, ಅದೆಷ್ಟೋ ಜನ ವಾಯ್ಸ್‌ ಹಾಗಿದೆ, ಹೀಗಿದೆ ಅನ್ನೋ ಮಾತುಗಳನ್ನಾಡಿದರು. ಅದು ನನ್ನ ಕಿವಿಗೂ ಬಿತ್ತು. ಆದರೆ, ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಬಂದೆ. “ದಯವಿಟ್ಟು ಗಮನಿಸಿ” ಚಿತ್ರದಲ್ಲಿ ಅನೂಪ್‌ ಸೀಳಿನ್‌ ಕೆಲಸ ಮಾಡುವಾಗ, ಜಯಂತ್‌ ಕಾಯ್ಕಿಣಿ ಅವರು ಅ ಚಿತ್ರಕ್ಕೆ ಬರೆದ ಸಾಹಿತ್ಯ ಅದ್ಭುತವಾಗಿತ್ತು. ಆ ಹಾಡಿಗೆ ಫ್ರೆಶ್‌ ವಾಯ್ಸ್‌ ಇದ್ದರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌, ಅಂಥದ್ದೊಂದು ವಾಯ್ಸ್‌ಗೆ ಹುಡುಕಾಟ ನಡೆಸಿದ್ದರಂತೆ.

ಆ ವಿಷಯ ಆ ಚಿತ್ರದಲ್ಲಿ ನಟಿಸಿದ್ದ ವಸಿಷ್ಠ ಸಿಂಹ ಅವರ ಕಿವಿಗೆ ಬಿದ್ದಾಗ, ವಸಿಷ್ಠ ಅನ್ನೋ ಹುಡುಗ ಇದ್ದಾನೆ ಅವನ ಕೈಯಲ್ಲಿ ಹಾಡಿಸಿ ಅಂತ ಹಾಗೆ ಸುಮ್ಮನೆ ಜೋಕ್‌ ಮಾಡಿದ್ದರಂತೆ. ಆದರೆ, ಅನೂಪ್‌ ಸೀಳಿನ್‌ ಮಾತ್ರ ವಸಿಷ್ಠ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡು, ವಸಿಷ್ಠ ಅವರ ಬಳಿ “ಮರೆತು ಹೋದೆನು..” ಹಾಡನ್ನು ಹಾಡಿಸಿದರಂತೆ. ಆ ಹಾಡು ಸೂಪರ್‌ ಹಿಟ್‌ ಕೂಡ ಆಯ್ತು.
ಅನೂಪ್‌ ಸೀಳಿನ್‌ ಅವರು ವಸಿಷ್ಠ ಸಿಂಹ ಅವರೊಳಗಿನ ಗಾಯಕನನ್ನು ಗುರುತಿಸಿ ಹಾಡಿಸಿದ್ದರಿಂದ, ಈಗ ವಸಿಷ್ಠ ಸಿಂಹ ಗಾಯಕ ಆಗಿದ್ದಾರೆ. ಇದನ್ನು ಎಲ್ಲಿ ಹೋದರೂ ವಸಿಷ್ಠ ಹೇಳುತ್ತಲೇ ಇರುತ್ತಾರೆ. ಇತ್ತೀಚೆಗೆ ನಡೆದ ಹೆಸರಿಡದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ವಸಿಷ್ಠ ಗಾಯಕ ಆಗೋಕೆ ಅನೂಪ್‌ ಕಾರಣ ಎಂದು ಹೇಳಿಕೊಂಡರು.

Categories
ಆಡಿಯೋ ಕಾರ್ನರ್

ಆಲ್ಬಂ ಸಾಂಗ್‌ಗೆ ಮೇಘಾ ಶೆಟ್ಟಿ ಸ್ಟೆಪ್‌- ನೋಡು ಶಿವ ಅಂತ ಹಾಡ್ತಾರೆ ಚಂದನ್‌ ಶೆಟ್ಟಿ

ಹಾಡಿಗೆ ಅದ್ಧೂರಿ ಬಜೆಟ್‌

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಆಲ್ಬಂ ಸಾಂಗ್‌ ಹೊರಬಂದಿವೆ. ಆ ಸಾಲಿಗೆ ಈಗ “ನೋಡು ಶಿವ..” ಶೀರ್ಷಿಕೆಯ ಹಾಡೊಂದು ಸಿದ್ಧಗೊಳ್ಳುತ್ತಿದೆ. ಈ ಹಾಡಿನ ವಿಶೇಷವೆಂದರೆ, “ಜೊತೆ ಜೊತೆಯಲ್ಲಿ” ಧಾರಾವಾಹಿ ಖ್ಯಾತಿಯ ಮೇಘಾಶೆಟ್ಟಿ ಹೆಜ್ಜೆ ಹಾಕುತ್ತಿರುವುದು. ಹೌದು, ಮೋನಿಕಾ ಕಲ್ಲೂರಿ ಆರ್ಟ್ಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಈ ವಿಡಿಯೋ ಆಲ್ಬಂ ಸಾಂಗ್‌ಗೆ ಚಂದನ್ ಶೆಟ್ಟಿ ಸಂಗೀತ ನೀಡಿ ಅವರೇ ಹಾಡಿದ್ದಾರೆ. ಸುಮೀತ್ ಎಂ.ಕೆ ಈ ಹಾಡಿಗೆ ಸಾಹಿತ್ಯ ಬರೆದು ನಿರ್ದೇಶಿಸುವುದರ ಜೊತೆಗೆ ಹಾಡಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಚಂದನ್‌ ಶೆಟ್ಟಿ ಕೂಡ ಸ್ಟೆಪ್‌ ಹಾಕುತ್ತಿದ್ದಾರೆ.

ಮೋನಿಕಾ

ಎಎಂಸಿ ಸಿಟಿ ಗ್ರೂಪ್​ ಆಫ್​ ಇನ್ಸಿಟ್ಯೂಷನ್ ಸೇರಿ ಒಟ್ಟು 9 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಮತ್ತು ಆ ಸಂಸ್ಥೆಗಳ ವೈಸ್ ಪ್ರೆಸೆಡೆಂಟ್ ಆಗಿರುವ ಮೋನಿಕಾ ಕಲ್ಲೂರಿ, ಈ ಆಲ್ಬಂ ಹಾಡಿನ ಮೂಲಕ ಸ್ಯಾಂಡಲ್​ವುಡ್​ಗೆ ಆಗಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಾಡಿನ ಬಗ್ಗೆ ಮಾಹಿತಿ ನೀಡುವ ಮೋನಿಕಾ, ‘ನೋಡು ಶಿವ..” ಎಂಬ ಹಾಡು ತುಂಬಾನೇ ವಿಶೇಷವಾಗಿ ಮೂಡಿಬರಲಿದೆ. ಎಷ್ಟೋ ಜನ ಜೀವನದಲ್ಲಿ ಅಂದುಕೊಂಡಿದ್ದು ಏನೂ ಆಗಿಲ್ಲವಲ್ಲ ಎಂದು ತಮ್ಮನ್ನೇ ತಾವೇ ಶಪಿಸಿಕೊಳ್ಳುತ್ತಿರುತ್ತಾರೆ. ಎಷ್ಟೇ ಶ್ರಮ ಪಟ್ಟರೂ ಅದು ಈಡೇರುವುದಿಲ್ಲ. ಅಂದುಕೊಂಡ ಯಶಸ್ಸು ಸಿಕ್ಕಿರುವುದಿಲ್ಲ. ಈ ಥರದ ಹುಡುಗ ದೇವರ ಹತ್ತಿರ ಹೇಗೆ ಮಾತಾಡ್ತಾನೆ, ತನ್ನ ಗೋಳನ್ನು ಹೇಗೆ ಹೇಳಿಕೊಳ್ಳುತ್ತಾನೆ ಎಂಬುದನ್ನೇ ಹಾಸ್ಯ ರೂಪದಲ್ಲಿ ಹಾಡಿನ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬುದು ಮೋನಿಕಾ ಮಾತು.

ಸುಮೀತ್

ಕನ್ನಡದ ಮಟ್ಟಿಗೆ ಇದೊಂದು ಅದ್ಧೂರಿ ಆಲ್ಬಂ ಸಾಂಗ್‌ ಆಗಲಿದೆ. ಹೊಸತನವೂ ಇರಲಿದೆ. ಅದ್ಧೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಹಾಡು, ಪರಭಾಷಿಕರಿಗೂ ವಿಶೇಷ ಎನಿಸುವ ಮಟ್ಟಿಗೆ ಹಾಡು ಮೂಡಿಬರಲಿದೆ. ಸುಮಾರು 30ಲಕ್ಷ ಬಜೆಟ್ ನಲ್ಲಿ ಈ ಹಾಡು ಸಿದ್ದವಾಗಲಿದೆ ಎಂಬುದು ಮೋನಿಕಾ ಮಾತು.  ಹಾಡಿನ ಸಾಹಿತ್ಯ ಕೇಳಿ ಇಷ್ಟಪಟ್ಟು, ಚಂದನ್​ ಶೆಟ್ಟಿ ಸಂಯೋಜಿಸಿ, ಧ್ವನಿಯನ್ನೂ ನೀಡಿದ್ದಾರೆ. ಈ ಹಾಡಿನ ತಯಾರಿ ಜೋರಾಗಿದ್ದು, ಸುಮಾರು 200 ಜನ ಇದಕ್ಕಾಗಿಯೇ ಕೆಲಸ ಮಾಡುತ್ತಿದ್ದಾರೆ. 60 ವೃತ್ತಿಪರ ಡ್ಯಾನ್ಸರ್​ಗಳು ಹೆಜ್ಜೆ ಹಾಕಲಿದ್ದಾರೆ. ಮೂರು ದಿನಗಳಲ್ಲಿ ಎಎಂಸಿ ಕಾಲೇಜು ಕ್ಯಾಂಪಸ್​ನಲ್ಲಿಯೇ ಶೂಟಿಂಗ್​ ಮುಗಿಸಿಕೊಳ್ಳುವ ಪ್ಲಾನ್​ ತಂಡದ್ದಾಗಿದ್ದು, ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.
ಇನ್ನು ವಿದೇಶದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿರುವ ಮೋನಿಕಾ, ಮೊದಲಿಂದಲೂ ಕಲೆಯತ್ತ ಆಸಕ್ತಿ. ಜಾಗೃತಿ ಮೂಡಿಸುವ ಕೆಲಸವನ್ನು ಏಕಕಾಲದಲ್ಲಿ ದೊಡ್ಡ ಸಮುದಾಯಕ್ಕೆ ತೋರಿಸುವ ಆಕ್ತಿ ಸಿನಿಮಾ ಕ್ಷೇತ್ರಕ್ಕಿದೆ. ಆ ಒಂದು ಕಾರಣಕ್ಕೆ ಸಿನಿಮಾ ಕ್ಷೇತ್ರವನ್ನು ಆಯ್ದುಕೊಂಡಿದ್ದು, ಮುಂದಿನ ವರ್ಷ ಹೊಸ ಸಿನಿಮಾ ನಿರ್ಮಾಣ ಮಾಡುವ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ಅಂದಹಾಗೆ, ಡಿಸೆಂಬರ್ ವೇಳೆಗೆ ಆನಂದ್ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಲಿದೆ.

ಚಂದನ್‌ ಶೆಟ್ಟಿ

 

Categories
ಸಿನಿ ಸುದ್ದಿ

ಯುವರತ್ನ ಪ್ರೋಮೋ ರಿಲೀಸ್‌- ಜನವರಿ 21ಕ್ಕೆ ಚಿತ್ರ ಬರುವ ಸಾಧ್ಯತೆ

ಪವರ್‌ ಅಫ್‌ ಯೂಥ್‌ ಅನ್ನಿ ಅಂದ್ರು ಅಪ್ಪು

ಈ ವರ್ಷದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ಅಂದರೆ ಅದು ಪುನೀತ್‌ರಾಜಕುಮಾರ್‌ ಅಭಿನಯದ “ಯುವರತ್ನ”. ಆರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಚಿತ್ರದ ಹೊಸದೊಂದು ಪ್ರೋಮೋ ನ.27ರ ಶುಕ್ರವಾರ ಸಂಜೆ ಬಿಡುಗಡೆಯಾಗಿದೆ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ “ಯುವರತ್ನ” ಚಿತ್ರದ ‘ಪವರ್ ಆಫ್ ಯೂಥ್” ಹೆಸರಿನ ಈ ಪ್ರೋಮದಲ್ಲಿ ಯುವರತ್ನ ಸಿನಿಮಾದ ಹಾಡಿನ ತುಣುಕು ಇದೆ. ಈ ತುಣುಕಲ್ಲಿ ಪುನೀತ್‌ರಾಜ್‌ಕುಮಾರ್ ಸಖತ್ ಯೂಥ್‌ಫುಲ್ ಆಗಿ ಮಿಂಚಿದ್ದಾರೆ. ಗಿಟಾರ್ ಹಿಡಿದುಕೊಂಡು ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪುನೀತ್, “ಹೆಸರು ಮಾಡು ಹಸಿರಾಗೊ ಹಾಗೆ, ಉಸಿರು ಹೋದರೂ ಹೆಸರಿರುವ ಹಾಗೆ, ಆ ಚರಿತ್ರೆಗೆ ನೀನೆ ಮುನ್ನುಡಿ, ನೂರು ಸಾರಿ ಕೂಗು, ಪವರ್ ಆಫ್ ಯೂಥ್’ ಎಂದು ಹಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಪ್ರೋಮೋದಲ್ಲಿ ನಿರ್ದೇಶಕ ಸಂತೋಷ್‌ ಆನಂದ್‌ರಾಮ್ ಕೂಡ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ, ಇದು ಒಂದು ಝಲಕ್. ಚಿತ್ರದ ಈ ಹಾಡು ಮತ್ತು ವಿಡಿಯೋ ಡಿಸೆಂಬರ್ 2ಕ್ಕೆ ಬಿಡುಗಡೆ ಆಗಲಿದೆ ಎಂಬುದು ಚಿತ್ರತಂಡದ ಮಾತು.


ಈ ಚಿತ್ರಕ್ಕೆ ವಿಜಯ್ ಕಿರಗಂದೂರ್ ನಿರ್ಮಾಪಕರು. ಪುನೀತ್‌ ರಾಜಕುಮಾರ್‌ ಅವರಿಗೆ ಚಿತ್ರದಲ್ಲಿ ಸಾಯೇಷಾ ನಾಯಕಿಯಾಗಿದ್ದಾರೆ. ಧನಂಜಯ್, ದಿಗಂತ್, ಸಾಯಿಕುಮಾರ್, ಸುಧಾರಾಣಿ ಸೇರಿದಂತೆ ಹಲವರು ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, “ಯುವರತ್ನ” ಜನವರಿ 21ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.

Categories
ಸಿನಿ ಸುದ್ದಿ

ಹೀಗೊಂದು ಗುಡ್‌ ಟೈಟಲ್‌ ಟೀಸರ್‌‌ ಮೇಕಿಂಗ್ – ಹೊಸಬರ ವಿಭಿನ್ನ ಪ್ರಯೋಗ!

ಟೈಟಲ್‌ಗೊಂದು ಪ್ರೋಮೋ- ಇದು ಕನ್ನಡದಲ್ಲಿ ಮೊದಲ ಪ್ರಯತ್ನ‌

ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸಬರು ಎಂಟ್ರಿಯಾಗುತ್ತಿದ್ದಾರೆ. ಪಕ್ಕಾ ತಯಾರಿಯೊಂದಿಗೆ ಒಂದಷ್ಟು ಪ್ರಯೋಗದ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಈಗ ಗುರುತಿಸಿಕೊಳ್ಳಲು ಬರುತ್ತಿರೋ ಹೊಸ ನಿರ್ದೇಶಕ ಯುವಧೀರ. ಹೌದು, ಈ ಯುವಧೀರ ಅವರಿಗೆ ಸಿನಿಮಾರಂಗ ಹೊಸದಲ್ಲ. ಕಳೆದ ಒಂದುವರೆ ದಶಕದಿಂದಲೂ ಸಿನಿಮಾರಂಗದಲ್ಲಿ ಜೀವಿಸಿದ್ದಾರೆ. ಈಗಲೂ ಜೀವಿಸುತ್ತಿದ್ದಾರೆ. ಈಗ ಹೊಸ ಸುದ್ದಿಯೆಂದರೆ, ಹೊಸತನ ಇಟ್ಟುಕೊಂಡಿರುವ ಕಥೆ ಹೆಣೆದು, ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಅವರ ಕನಸಿಗೆ ನಿರ್ಮಾಪಕ ಸುರೇಶ ಬಿ. ಅವರು ಬಣ್ಣ ತುಂಬಲು ಸಜ್ಜಾಗಿದ್ದಾರೆ.

ಯುವಧೀರ, ನಿರ್ದೇಶಕ

ಇಬ್ಬರಿಗೂ ಇದು ಮೊದಲ ಪ್ರಯತ್ನ. ಮೊದಲ ಪ್ರಯತ್ನದಲ್ಲೇ ಒಂದಷ್ಟು ಗಮನ ಸೆಳೆಯು ಅಂಶಗಳೊಂದಿಗೆ ಕನ್ನಡ ಸಿನಿಪ್ರೇಮಿಗಳಿಗೆ ಸಿನಿಮಾ ಕಟ್ಟಿಕೊಡುವ ಉದ್ದೇಶ ಇವರಿಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸ್ಕ್ರಿಪ್ಟ್‌ ಕೆಲಸ ಮುಗಿಸಿರುವ ಯುವಧೀರ, ತಮ್ಮ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲು ತಯಾರಿ ಮಾಡಿಕೊಂಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ನವೆಂಬರ್‌ ೨೯ರಂದು ಚಿತ್ರದ ಶೀರ್ಷಿಕೆ ಅನಾವರಣಗೊಳಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕ ಯುವಧೀರ ಅವರು, ಶೀರ್ಷಿಕೆಗಾಗಿಯೇ ಒಂದು ಪ್ರೋಮೋ ಮಾಡಿದ್ದಾರೆ. ಅಂದು ಪ್ರೋಮೋ ಮೂಲಕ ಚಂದದ ಶೀರ್ಷಿಕೆ ಅನಾವರಣಗೊಳಿಸಲು ಸಜ್ಜಾಗಿದ್ದಾರೆ.
ಅಷ್ಟಕ್ಕೂ ಯುವಧೀರ ಅವರ ಶೀರ್ಷಿಕೆಯೇ ಒಂದಷ್ಟು ವಿಭಿನ್ನವಾಗಿದೆ. ಕಥೆಗೆ ಪೂರಕವಾಗಿಯೇ ಅವರು ಆ ಶೀರ್ಷಿಕೆ ಇಟ್ಟಿದ್ದಾರಂತೆ.‌ ಆ ಶೀರ್ಷಿಕೆ ಕುರಿತು ಹೇಳುವ ಯುವಧೀರ, ಎಲ್ಲರಿಗೂ ಸುಲಭವೆನಿಸುವ, ಎಲ್ಲರ ಬಾಯಲ್ಲೂ ಸದಾ ಬರುವ ಪದವನ್ನೇ ಇಟ್ಟುಕೊಂಡು ಶೀರ್ಷಿಕೆ ಇಟ್ಟಿದ್ದಾರೆ. ಆ ಶೀರ್ಷಿಕೆಗಾಗಿ ಒಂದು ಚಂದದ ಟೈಟಲ್‌ ಟೀಸರ್‌ ಮಾಡಿಕೊಂಡಿರುವ ಯುವಧೀರ, ಜನವರಿ ಬಳಿಕ ಚಿತ್ರೀಕರಣಕ್ಕೆ ಹೋಗುವ ಯೋಜನೆಯಲ್ಲಿದ್ದಾರೆ.

ಸುರೇಶ, ನಿರ್ಮಾಪಕರು

ಅಂದಹಾಗೆ, ಈ ಚಿತ್ರವನ್ನು ಸರ್ವಮಂಗಳ ಸುರೇಶ ಅವರು ಅರ್ಪಿಸುತ್ತಿದ್ದು, ಶ್ರೀನಿಧಿ ಪಿಕ್ಚರ್ಸ್‌ ಮೂಲಕ ತಯಾರಾಗುತ್ತಿದೆ. ಯುವಧೀರ ಅವರು, ಇಷ್ಟು ವರ್ಷಗಳ ಅನುಭವಗಳನ್ನು ಒಟ್ಟಿಗೆ ಸೇರಿಸಿಕೊಂಡು ಒಂದು ಚಂದದ ಈ ಸಿನಿಮಾಗೆ ಕೈ ಹಾಕಿದ್ದಾರೆ. ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರ. ಇದರೊಂದಿಗೆ ರೊಮ್ಯಾನ್ಸ್‌, ಥ್ರಿಲ್ಲರ್‌, ಡ್ರಾಮಾ, ಕ್ರೈಮ್‌, ಸ್ಟಂಟ್ಸ್‌ ಸೇರಿದಂತೆ ಇತ್ಯಾದಿ ಅಂಶಗಳೂ ಸೇರಿವೆ. ಇದು ಒಂದೇ ಜಾನರ್‌ಗೆ ಸೇರುವ ಸಿನಿಮಾ ಅಲ್ಲ ಅನ್ನುವ ಅವರು, ಹಲವು ಜಾನರ್‌ಗಳ ಸಮ್ಮಿಶ್ರಣ ಇಲ್ಲಿದೆ. ಹಾಗಾಗಿ ಇದನ್ನು ಹೊಸತನದ ಸಿನಿಮಾ ಎನ್ನಬಹುದು ಎಂಬುದು ಯುವಧೀರ ಮಾತು.
ಈ ಚಿತ್ರಕ್ಕೆ ಇನ್ನೂ ನಾಯಕ, ನಾಯಕಿ ಸೇರಿದಂತೆ ಕಲಾವಿದರ ಆಯ್ಕೆ ಆಗಿಲ್ಲ. ಆದರೆ, ತಾಂತ್ರಿಕ ವರ್ಗ ಅಂತಿಮವಾಗಿದೆ. ಚಿತ್ರಕ್ಕೆ ಶಶಾಂಕ್‌ ಶೇಷಗಿರಿ ಸಂಗೀತವಿದೆ. ಮರಿಸ್ವಾಮಿ ಅವರ ಸಂಕಲನವಿದೆ. ಕುಮಾರ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸದ್ಯಕ್ಕೆ ಟೈಟಲ್‌ ಟೀಸರ್‌ ಮೇಕಿಂಗ್‌ಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.

Categories
ಸಿನಿ ಸುದ್ದಿ

ರೊಮ್ಯಾಂಟಿಕ್‌ ಮೂಡ್‌ನಲ್ಲಿ ರಾಣಿಜೇನು! ಹೊಸಬರ ವಿಡಿಯೋ ಆಲ್ಬಂ ರಿಲೀಸ್‌

ಝೇಂಕಾರ್‌ ಮ್ಯೂಸಿಕ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಹಾಡಿಗೆ ಮೆಚ್ಚುಗೆ

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಆಲ್ಬಂ ಬಿಡುಗಡೆಯಾಗಿದೆ. ಆ ಸಾಲಿಗೆ ಈಗ “ರಾಣಿಜೇನು” ಎಂಬ ರೊಮ್ಯಾಂಟಿಕ್‌ ವಿಡಿಯೋ ಆಲ್ಬಂ ಬಿಡುಗಡೆಯಾಗಿದೆ. ಹೌದು, ಸಂಗೀತ ಕ್ಷೇತ್ರದಲ್ಲಿ ತಮ್ಮದ್ದೊಂದು ಛಾಪು ಮೂಡಿಸಿರುವ ಝೇಂಕಾರ್‌ ಮ್ಯೂಸಿಕ್‌ ಸಂಸ್ಥೆ ಇತ್ತೀಚೆಗೆ ತನ್ನ ಯುಟ್ಯೂಬ್‌ ಚಾನೆಲ್‌ನಲ್ಲಿ “ರಾಣಿಜೇನು” ಎಂಬ ಹೆಸರಿನ ರೊಮ್ಯಾಂಟಿಕ್‌ ವಿಡಿಯೋ ಆಲ್ಬಂ ಬಿಡುಗಡೆ ಮಾಡಿದೆ. ಸೋನಿ ಆಚಾರ್ಯ ಹಾಗೂ ಪೂಜಾ ನಾಣಯ್ಯ ನಟಿಸಿರುವ ಈ ರೊಮ್ಯಾಂಟಿಕ್‌ ಆಲ್ಬಂಗೆ ಈಗಾಗಲೇ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.

ಈ ಹಾಡನ್ನು ಶ್ರೀರಂಗಪಟ್ಟಣ, ಕರಿಘಟ್ಟ ಸುತ್ತಮುತ್ತಲಿನ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಸೋನಿ ಆಚಾರ್ಯ ಸಾಹಿತ್ಯ ಬರೆದು, ಸಂಗೀತ ಒದಗಿಸುವುದರ ಜೊತೆಗೆ ನಟಿಸಿದ್ದಾರೆ. ಈ ರೊಮ್ಯಾಂಟಿಕ್‌ ವಿಡಿಯೋ ಅಲ್ಬಂಗೆ ರಾಮ್‌ಸಂತೋಷ್‌ ಅವರು ಛಾಯಾಗ್ರಹಣ ಮಾಡಿದರೆ, ಶಶಾಂಕ್‌ ಮುರಳೀಧರನ್‌ ಸಂಕಲನವಿದೆ. ಶ್ರೀಧರ್‌ ಶ್ರೀ ನೃತ್ಯ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಝೇಂಕಾರ್‌ ಮ್ಯೂಸಿಕ್‌ ಯುಟ್ಯೂಬ್‌ನಲ್ಲಿ “ರಾಣಿಜೇನು” ಮೆಚ್ಚುಗೆ ಪಡೆಯುತ್ತಿದೆ.

Categories
ಸಿನಿ ಸುದ್ದಿ

ಕನಸು ನನಸಾದಾಗ… ಆ ಒಂದು ಕನಸು ಟೈಟಲ್‌ ಹೊರಬಂತು

ಕಿರುತೆರೆ ಮಂದಿಯ ಹೊಸ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸಬರ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ “ಆ ಒಂದು ಕನಸು” ಚಿತ್ರವೂ ಒಂದು ರಂಗು ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ದಿಲೀಪ್‌ ಬಿ.ಎಂ. ಅವರು ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರ “ಆ ಒಂದು ಕನಸು”. ಈ ಚಿತ್ರದ ಶೀರ್ಷಿಕೆಯನ್ನು ಹಿರಿಯ ನಟ ಎಸ್.‌ ಉಮೇಶ್‌ ಅವರು ಬಿಡುಗಡೆ ಮಾಡಿರುವುದು ವಿಶೇಷ. ಇವರೊಂದಿಗೆ ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ ಹಾಗು ಹಿರಿಯ ಕಂಠದಾನ ಕಲಾವಿದೆ ಆಶಾ ಅವರೂ ಸೇರಿಕೊಂಡು ಬಿಡುಗಡೆಗೆ ಸಾಥ್‌ ನೀಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿಷ್ಣು ನಾಚನೇಕರ್‌ ನಿರ್ದೇಶನ ಮಾಡುತ್ತಿರುವುದು ವಿಶೇಷ. ಡಿಸೆಂಬರ್‌ ೩ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.


ವಿಷ್ಣು ನಾಚನೇಕರ್‌ ಕನ್ನಡದ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಕಿರುತೆರೆಯ ಹಲವು ಧಾರಾವಾಹಿಗಳ ಸಂಚಿಕೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. “ಶನಿ” ಧಾರಾವಾಹಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಿಷ್ಣು ನಾಚನೇಕರ್ ಅವರು, “ಆ ಒಂದು ಕನಸು” ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.  ಉದಯಂ ಕಥೆ ಬರೆದರೆ, ಮಳವಳ್ಳಿ ಸಾಯಿಕೃಷ್ಣ ಅವರು ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ವೀನಸ್ ಮೂರ್ತಿ ಅವರ‌ ಛಾಯಾಗ್ರಹಣವಿದೆ. ಅಭಿಷೇಕ್ ಜೆ. ರಾಯ್ ಸಂಗೀತವಿದೆ. ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಮಾಡಿದರೆ, ಹೈಟ್ ಮಂಜು, ಸ್ಟಾರ್ ಗಿರಿ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ನಾಲ್ಕು ಫೈಟ್ಸ್‌ ಇದೆ. ಬೆಂಗಳೂರು, ಸಾಗರ, ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.

 

ಅಂದಹಾಗೆ, ಈ ಚಿತ್ರಕ್ಕೆ ವಿಶ್ವಾಸ್‌ ಹೀರೋ. ಅವರಿಗೆ ಇದು ಎರಡನೆ ಸಿನಿಮಾ. ಇವರು ಈಗಾಗಲೇ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಬಲ ರಾಜವಾಡಿ, ಅಮಿತ್, ಗಿರೀಶ್ ಶಿವಣ್ಣ, ರಮೇಶ್ ಭಟ್.
ಗಿರೀಜಾ ಲೋಕೇಶ್, ಕುರಿ ಬಾಂಡ್ ರಂಗ, ಹರ್ಷವರ್ಧನ್, ಶ್ವೇತಾರಾವ್, ಜಯಶ್ರೀ, ನಾರಾಯಣ ಸ್ವಾಮಿ ಇತರರು ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಪೈರಸಿ ತಡೆಗೆ ಹೊಸ ಸಾಫ್ಟ್‌ವೇರ್‌ – ರೆಕಾರ್ಡ್‌ ಮಾಡೋರಿಗೆ ಕಾದಿದೆ ಹಬ್ಬ!

ತಾಂತ್ರಿಕತೆಗೆ ಪುನೀತ್‌ ಚಾಲನೆ-ಮೆಚ್ಚುಗೆ

ಯಾವುದೇ ಭಾಷೆಯ ಚಿತ್ರವಿರಲಿ, ಪೈರಸಿ ಕಾಟ ತಪ್ಪಿದ್ದಲ್ಲ. ಇದು ನಿನ್ನೆ ಮೊನ್ನೆಯ ಸಮಸ್ಯೆಯಂತೂ ಅಲ್ಲ. ಹಲವು ವರ್ಷಗಳಿಂದಲೂ ಇದೆ. ಈ ಪೈರಸಿ ಎಂಬ ಗುಮ್ಮನಿಗೆ ಸಾಕಷ್ಟು ಸಲ ಗುದ್ದಲು ಪ್ರಯತ್ನ ಪಟ್ಟರೂ, ಪದೇ ಪದೇ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ಇದರಿಂದಾಗಿ ಯಾವುದೇ ಸಿನಿಮಾಗಳು ಚಿತ್ರಮಂದಿರ ಹೊಕ್ಕರೂ, ಅಲ್ಲಿ ಪೈರಸಿ ಎಂಬ ಪೆಡಂಭೂತದಿಂದಾಗಿ ನಿರ್ಮಾಪಕ ಹೈರಾಣಾಗುತ್ತಿದ್ದಾನೆ. ಈ ಪೈರಸಿ ತಡೆಗೆ ಹೊಸ ತಾಂತ್ರಿಕತೆಯ ಅಗತ್ಯವಿತ್ತು. ಆದೀಗ ಈಡೇರಿದೆ. ಹೌದು, ಕಾಂಟ್ರಫೈನ್‌ ಸಂಸ್ಥೆಯ ದುರ್ಗಾಪ್ರಸಾದ್‌ ಹಾಗೂ ರಾಹುಲ್‌ರೆಡ್ಡಿ ಮತ್ತು ತಂಡ ಜೊತೆಗೂಡಿ ಪೈರಸಿ ತಡೆಗಟ್ಟುವ ಹೊಸ ತಾಂತ್ರಿಕತೆಯನ್ನು ಹೊರತಂದಿದ್ದು, ಅದಕ್ಕೆ ಚಾಲನೆಯೂ ಸಿಕ್ಕಿರುವುದು ವಿಶೇಷ.


ಕಾಂಟ್ರಫೈನ್ಸ್‌ ಸಂಸ್ಥೆಯ “ಫೆಂಡೆ” ಹೆಸರಿನ ಸಾಫ್ಟ್‌ವೇರ್‌ಗೆ ಪುನೀತ್‌ರಾಜಕುಮಾರ್‌ ಅವರು ಚಾಲನೆ ನೀಡುವ ಮೂಲಕ, ಹೊಸ ತಾಂತ್ರಿಕತೆಯಲ್ಲಿ ಮಾತ್ರ ಈಗ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಪೈರೆಸಿ ಅನ್ನುವುದು ಹೊಸದಲ್ಲ. ಅದು ವಿಡಿಯೋ ಜಮಾನ ಬಂದಾಗಿನಿಂದಲೂ ಇದೆ. ಈಗಂತೂ ಡಿಜಿಟಲ್‌ ಹವಾ. ಅದು ಹೆಚ್ಚಾಗುತ್ತಿದ್ದಂತೆ ಸಿನಿಮಾ ಮೇಕರ್ಸ್‌ ಸಂಖ್ಯೆಯೂ ಹೆಚ್ಚುತ್ತಿದೆ. ತಮ್ಮ ಜೇಬಿನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಹೊರಗೆ ಬಿಟ್ಟು ಪೈರೆಸಿ ಮಾಡುತ್ತಿದ್ದಾರೆ. ಚಿತ್ರಮಂದಿರಗಳ ಬಳಿಕ ಅನೇಕ ಸಿನಿಮಾಗಳು ಓಟಿಟಿ ಫ್ಲಾಟ್‌ಫಾರಂನತ್ತ ಹೋಗುತ್ತಿವೆ. ಈಗ ಯುವ ಬಳಗ ಸೇರಿ, ಈ ಹೊಸ ತಾಂತ್ರಿಕತೆ ಕಂಡುಹಿಡಿದಿದೆ. ಅವರ ಈ ಹೊಸ ಸಾಫ್ಟ್‌ವೇರ್ ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲರಿಗೂ ಉಪಯೋಗವಾಗಲಿ ಎಂದರು.


ನಟಿ ಶೃತಿ ಕೂಡ ಈ ಹೊಸ ತಾಂತ್ರಿಕತೆಯನ್ನು ಪ್ರೀತಿಯಿಂದಲೇ ಸ್ವಾಗತಿಸಿದರು. ಚಿತ್ರರಂಗದ ಅನ್ನದಾತ ನಿರ್ಮಾಪಕ. ಅವರ ಉಳಿವಿಗೆ ಮತ್ತು ಸಿನಿಮಾಗಳ ಉಳಿವಿಗೆ ಈ ಹೊಸ ತಾಂತ್ರಿಕತೆ ಬಂದಿದೆ. ಪೈರಸಿ ತೊಲಗಿಸಲು ಈ ಯುವಕರ ತಂಡ ನಿಂತಿದೆ. ನಮ್ಮ ಕನ್ನಡಿಗರು ಈ ಹೊಸ ತಾಂತ್ರಿಕತೆಯ ಹಿಂದೆ ನಿಂತಿರೋದು ಹೆಮ್ಮೆಯ ವಿಷಯ ಎಂದರು.
ಕಾಂಟ್ರಫೈನ್ಸ್ ಸಂಸ್ಥೆಯ ಫೆಂಡೆ ಸಾಫ್ಟ್‌ವೇರ್‌ ಪೈರೆಸಿ ತಡೆಯುವ ಹೊಸ ತಾಂತ್ರಿಕತೆ ಹೊಂದಿದೆ. ಇದನ್ನು ಚಿತ್ರಮಂದಿರಗಳಲ್ಲಿ ಅಳವಡಿಸಿದರೆ, ಪ್ರೇಕ್ಷಕ ಮೊಬೈಲ್‌ನಿಂದ ಸೆರೆಹಿಡಿಯುವ ದೃಶ್ಯಗಳು ರೆಕಾರ್ಡ್ ಆಗುತ್ತದೆ. ಆದರೆ ಸೌಂಡ್‌ ಮಾತ್ರ ರೆಕಾರ್ಡ್‌ ಆಗುವುದಿಲ್ಲ. ಆತ ಎಲ್ಲಿ ಕುಳಿತು ಪೈರಸಿ ಮಾಡುತ್ತಿದ್ದಾನೆ ಎಂಬುದನ್ನು ಕೂಡ ಈ ಹೊಸ ಸಾಫ್ಟ್‌ವೇರ್‌ ಪತ್ತೆ ಹಚ್ಚುತ್ತದೆ. ತಿಳಿಸುತ್ತದೆ. ಅಷ್ಟೇ ಅಲ್ಲ, ಆ ಪ್ರದರ್ಶನಕ್ಕೆ ಸಂಬಂಧಿಸಿದವರಿಗೆ ಹಾಗೂ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡುತ್ತದೆ. ಮುಂದಿನ ದಿನಗಳಲ್ಲಿ ವಿಡಿಯೋ ರೆಕಾರ್ಡ್‌ ಆಗದ ಸಾಫ್ಟ್‌ವೇರ್ ಕೂಡ ಹೊರಬರಲಿದೆ ಎಂದು ಸಂಸ್ಥೆಯ ಯುವಕರು ಹೇಳಿಕೊಂಡರು.


ಅಂದಹಾಗೆ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್‌ಬಾಬು, ದಿನಕರ ತೂಗದೀಪ, ಶೃತಿ ಅವರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ನೋಡಿದಾಗ ಕೇವಲ ವಿಡಿಯೋ ಕಾಣಿಸಿತು ವಿನಃ, ಆಡಿಯೋ ಕೇಳಿಸಲಿಲ್ಲ. ಅಲ್ಲಿಗೆ ಈ ಯುವಕರ ಸಾಧನೆ ಯಶಸ್ವಿ ಎಂಬ ಮಾತುಗಳು ಕೇಳಿಬಂದವು. ಈ ವೇಳೆ, ನಿರ್ಮಾಪಕ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ, ಕೆ.ಸಿ.ಎನ್.ಚಂದ್ರಶೇಖರ್, ಬಾ.ಮ.ಹರೀಶ್, ಆರ್.ಎಸ್.ಗೌಡ, ಎನ್.ಎಂ.ಸುರೇಶ್ ಇತರರು ಇದ್ದರು.

error: Content is protected !!