Categories
ಸಿನಿ ಸುದ್ದಿ

ಅಯೋಧ್ಯೆ ರಾಮನಿಗೆ ಒಂದು ಲಕ್ಷ ದೇಣಿಗೆ -ರಾಮಮಂದಿರ ನಿರ್ಮಾಣಕ್ಕೆ ನಟಿ ಪ್ರಣೀತಾ ಕಿರು ಕಾಣಿಕೆ

ದೇಶದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ವಿಷಯ ಈಗ ಕೇಂದ್ರಬಿಂದುವಾಗಿದೆ. ಈಗಾಗಲೇ ಅಯೋಧ್ಯೆಯ ಶ್ರೀರಾಮಮಂದಿರದ ನಿರ್ಮಾಣ ಕಾರ್ಯಕ್ಕೆ ನಿಧಿ ಸಮರ್ಪಣಾ ಅಭಿಯಾನವೊಂದು ಶುರುವಾಗಿದೆ. ಈ ನಿಟ್ಟಿನಲ್ಲಿ ಇದೀಗ ಕನ್ನಡದ ನಟಿ ಪ್ರಣೀತಾ ಅವರು ಒಂದು ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದ್ದಾರೆ.

ಈ ಕುರಿತು ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಆ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಭಕ್ತರಿಗೆ ಮನವಿ ಮಾಡಿದ್ದಾರೆ. “ನಿಮಗೆಲ್ಲರಿಗೂ ಗೊತ್ತಿರುವವಂತೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ. ದೇಶದೆಲ್ಲೆಡೆ ನಿಧಿ ಸಮರ್ಪಣಾ ಕಾರ್ಯ ನಡೆದಿದೆ. ಈ ಕಾರ್ಯಕ್ಕೆ ನಾನು ನನ್ನ ಸಣ್ಣ ಸೇವೆ ಸಲ್ಲಿಸಿದ್ದೇನೆ. ನೀವು ಕೈ ಜೋಡಿಸಿ” ಎಂದು ಮನವಿ ಮಾಡಿದ್ದಾರೆ.
ಪ್ರಣೀತಾ ಸದ್ಯಕ್ಕೆ ತೆಲುಗು ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ಕೊಟ್ಟಿರುವ ಪ್ರಣೀತಾ, ಆಗಾಗ ಸಮಾಜ ಸೇವೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿರುತ್ತಾರೆ. ಈಗ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೂ ದೇಣಿಗೆ ನೀಡಿದ್ದಾರೆ.

Categories
ಸಿನಿ ಸುದ್ದಿ

ಬರಲಿದೆ ಡಾ.ರಾಜ್‌ಕುಮಾರ್‌ ರಸ್ತೆ ಕಾದಂಬರಿ – ವಿನಾಯಕರಾಮ ಕಲಗಾರು ಅವರ ಕಾಮಗಾರಿ ಶುರು

 

ಜನವರಿ 27ಕ್ಕೆ ಲೋಕಾರ್ಪಣೆ

ಪತ್ರಕರ್ತ ವಿನಾಯಕರಾಮ್‌ ಕಲಗಾರು ಒಳ್ಳೆಯ ಬರಹಗಾರ. ಅದಕ್ಕಿಂತಲೂ ಹೆಚ್ಚು ಅಷ್ಟೇ ಸೊಗಸಾದ ಮಾತುಗಾರ. ಹಾಗಾಗಿಯೇ ಅವರು, ಹಲವು ಚಿತ್ರಗಳಿಗೆ ಮಾತುಗಳನ್ನೂ ಪೋಣಿಸಿದ್ದಾರೆ. ಹಲವಾರು ವಾಹಿನಿಗಳ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ವಿನಾಯಕರಾಮ್‌ ಕಲಗಾರು, ಕೆಲವು ವಾಹಿನಿಗಳಲ್ಲಿ ಪ್ರಸಾರಗೊಂಡ ರಿಯಾಲಿಟಿ ಶೋಗಳ ಸೂತ್ರದಾರ ಕೂಡ. ಅವರ ಬಗ್ಗೆ ಇಲ್ಲೇಕೆ ಇಷ್ಟೊಂದು ಪೀಠಿಕೆ ಅಂದರೆ, ಸಿನಿಮಾರಂಗದಲ್ಲೇ ಅತೀ ಹೆಚ್ಚು ಒಡನಾಟ ಇಟ್ಟುಕೊಂಡಿರುವ ವಿನಾಯಕರಾಮ್‌ ಕಲಗಾರು, ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಈ ಹಿಂದೆಯೇ ಹೇಳಿದ್ದರು. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ “ಡಾ.ರಾಜಕುಮಾರ ರಸ್ತೆ” ಎಂದೂ ಹೆಸರಿಟ್ಟಿದ್ದರು. ಹಾಗಂತ ಅವರ ಆ ಸಿನಿಮಾ ಕನಸು ಇನ್ನೂ ಮುಗಿದಿಲ್ಲ. ನನಸು ಮಾಡಿಕೊಳ್ಳುವ ಹಾದಿಯಲ್ಲೇ ಅವರಿದ್ದಾರೆ. ಹಾಗಾಗಿಯೇ ರಾಜ್‌ಕುಮಾರ್‌ ರಸ್ತೆಯಲ್ಲಿ ನಿಂತಿದ್ದಾರೆ.

ವಿನಾಯಕರಾಮ್‌ ಕಲಗಾರು

ಹೌದು, ವಿನಾಯಕರಾಮ್‌ ಕಲಗಾರು ಸಿನಿಮಾ ಮಾಡುವುದು ದಿಟ. ಅದಕ್ಕೂ ಮೊದಲು ಅವರೀಗ ಕಾದಂಬರಿ ಹಿಂದೆ ನಿಂತಿದ್ದಾರೆ. “ಡಾ.ರಾಜ್‌ಕುಮಾರ್‌ ರಸ್ತೆ” ಹೆಸರಿನ ಕಾದಂಬರಿ ಬರೆದು ಮುಗಿಸಿರುವ ಅವರು, ಅದನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ. ಆ ಅಪರೂಪದ ಪುಸ್ತಕವನ್ನು ಅಣ್ಣಾವ್ರ ಮುತ್ತಿನಂಥ ಮೂವರು ಮಕ್ಕಳಿಗೆ ಅರ್ಪಣೆ ಮಾಡುವ ಹುರುಪಿನಲ್ಲಿದ್ದಾರೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿಯೂ ನಡೆಸಿದ್ದಾರೆ. ಜನವರಿ ೨೭ರಂದು “ಡಾ.ರಾಜ್‌ಕುಮಾರ್‌ ರಸ್ತೆ ಕಾದಂಬರಿ ಅಧ್ಯಾಯಗಳ ರೂಪದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೆ.ಪಿ.ಶ್ರೀಕಾಂತ್‌ ಅವರು ಕಾದಂಬರಿಯ ಮೊದಲ ಎಪಿಸೋಡ್‌ ಅನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಇಷ್ಟಕ್ಕೂ ಜನವರಿ 27ರಂದು ಪುಸ್ತಕ ಬಿಡುಗಡೆ ಯಾಕೆ ಗೊತ್ತಾ? ಆ ದಿನದಂದು “ಡಾ.ರಾಜ್‌ಕುಮಾರ್‌ ರಸ್ತೆ”ಗೆ ನಾಮಕರಣ ಮಾಡಲಾಗಿತ್ತು. ಆ ಕಾರಣಕ್ಕಾಗಿಯೇ ಜನವರಿ ೨೭ರಂದು ವಿನಾಯಕರಾಮ್‌ ಕಲಗಾರು ತಮ್ಮ ಪುಸ್ತಕವನ್ನು ಅಂದು ಬಿಡುಗಡೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ತಮ್ಮ “ಡಾ.ರಾಜ್‌ಕುಮಾರ್‌ ರಸ್ತೆ” ಬಗ್ಗೆ ಹೇಳುವ ವಿನಾಯಕರಾಮ್‌ ಕಲಗಾರು, “ಇಲ್ಲಿ ಬರುವ ಪಾತ್ರಗಳು ಮತ್ತು ಚಿತ್ರಗಳು ಕೇವಲ ಕಾಲ್ಪನಿಕ. ಅದಕೆ ರಾಜಕುಮಾರ ಎಂಬ ರಮಣೀಯ ಹೆಸರೇ ಆ ಎಲ್ಲ ಕಥನ ಕಹಾ‌ನಿಯ ನಾವಿಕ. ಈ ಕಾದಂಬರಿ ನನ್ನ ಬದುಕಿನ ಮುಖಪುಟ. ಇಲ್ಲಿ ಯಾರೂ ಅರಿಯದೇ ಇರೋ ಅಚ್ಚರಿಗಳ ಗುಚ್ಛ ಸಹಿತ ರೋಚಕ ಪಟ ಇದಾಗಲಿದೆ. ಇದು ಬರೀ ಕಾದಂಬರಿ ಅಲ್ಲ. ಇಲ್ಲಿ ತೆರೆದುಕೊಳ್ಳುತ ಹೋಗುವ ಪಾತ್ರ-ಚಿತ್ರಗಳು ನನ್ನನ್ನೇ ಭಯ ಬೀಳಿಸುವ ಸತ್ಯಾಂಶ ಸಂಭೂತರು! ಆದರೆ, ಇದು ಕಾಲ್ಪನಿಕ…100% ವೈಮಾನಿಕ… ನನ್ನ ಕಣ್ಣಳತೆಗೂ ಮೀರಿದ ‘ರಾಜತಾಂತ್ರಿಕ’ ಘಟನಾ ಗುಚ್ಛಗಳ ಗಮನಾರ್ಹ ಗ್ಯಾಲರಿ” ಎಂಬುದು ಅವರ ಮಾತು.


ಅದೇನೆ ಇರಲಿ, ರಸ್ತೆ ಅನ್ನುವ ಪದವನ್ನು ಕೇಳಿದರೆ ಸಾಕು, ಅಲ್ಲಿ ಒಂದಷ್ಟು ಕಲರ್‌ಫುಲ್‌ ಕನಸುಗಳ ಮೆರವಣಿಗೆಯ ನೆನಪಾಗುತ್ತೆ. ಒಂದೊಂದು ರಸ್ತೆಯೂ ಒಂದೊಂದು ಕಥೆ ಹೇಳುತ್ತೆ. ಅಂಥದ್ದೊಂದು ರಸ್ತೆಗೆ ಸಾಕಷ್ಟು ಇತಿಹಾಸವೂ ಉಂಟು. ಈಗ ಡಾ.ರಾಜ್‌ಕುಮಾರ್‌ ರಸ್ತೆ ಮೇಲೊಂದು ಕಾದಂಬರಿ ಬರೆದಿದ್ದಾರೆ. ಆ ಹೆಸರಿನ ರಸ್ತೆ ಅಂದಾಕ್ಷಣ ಅದೊಂದು ಮುಗಿಯದ ಸಂಭ್ರಮವೇ ಸರಿ. ಸದ್ಯ, ಕಾದಂಬರಿ ಬಿಡುಗಡೆ ಮಾಡಿ, ನಂತರದ ದಿನಗಳಲ್ಲಿ ಸಿನಿಮಾ ಮಾಡುವ ಉದ್ದೇಶ ಅವರದು. ಅವರ ಹೊಸ ಹೆಜ್ಜೆಗೆ “ಸಿನಿಲಹರಿ”ಯ ಶುಭಹಾರೈಕೆ.

Categories
ಸಿನಿ ಸುದ್ದಿ

ಮಕ್ಕಳ ತಂಟೆಗೆ ಬರಬೇಡಿ ಅಂತಾರೆ ಕೋಡ್ಲು ರಾಮಕೃಷ್ಣ – ಕೊರೊನಾ ಎಫೆಕ್ಟ್‌ ಬಳಿಕ ಮಕ್ಕಳ ಮನಸ್ಥಿತಿಯ ಚಿತ್ರಣ

ಮಕ್ಕಳ ತಂಟೆಗೆ ಬಂದ್ರೆ ಹುಷಾರ್…!‌
– ಈ ಮಾತನ್ನು ನಾವ್‌ ಹೇಳುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಸೈ ಎನಿಸಿಕೊಂಡಿರುವ ಕೋಡ್ಲು ರಾಮಕೃಷ್ಣ ಹೇಳುತ್ತಿದ್ದಾರೆ. ಹೌದು, ಅವರೀಗ ಮಕ್ಕಳ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಆ ಚಿತ್ರಕ್ಕೆ “ಮಕ್ಕಳ ತಂಟೆಗೆ ಬಂದ್ರೆ ಹುಷಾರ್” ಎಂದು ನಾಮಕರಣ ಮಾಡಲಾಗಿದೆ. ಇದೊಂದು ಸಂದೇಶ ಸಾರುವ ಸಿನಿಮಾ. ಈ ಚಿತ್ರದ ಬಗ್ಗೆ ಹೇಳುವುದಾದರೆ, “ಮಕ್ಕಳ ನಿತ್ಯ ಚಟುವಟಿಕೆ, ಪೋಷಕರ ಜೀವನ ಶೈಲಿ, ಮೊಬೈಲ್ ಗೀಳು, ಶ್ರೀಮಂತ, ಮಧ್ಯಮ ಹಾಗೂ ಬಡವರ ಮನೆ ಮಕ್ಕಳು ಕೊರೊನಾ ಬರುವ ಮೊದಲು ಹಾಗೂ ನಂತರ ಹೇಗಿದ್ದಾರೆ? ಎನ್ನುವುದೇ ಈ ಚಿತ್ರದ ಕಥಾ ಹಂದರ.


ಚಿತ್ರೀಕರಣ ಮುಗಿದು, ಸೆನ್ಸಾರ್ ಕೂಡ ಆಗಿದೆ. ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದೆ. ಸಂಕ್ರಾಂತಿಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಭುವನ್ ಫಿಲಂಸ್ ಬ್ಯಾನರ್‌ನಲ್ಲಿ ನಾರಾಯಣ್ ಹಾಗೂ ಕೋಡ್ಲು ರಾಮಕೃಷ್ಣ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ದೀಪು (ರಾಮನಗರ) ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.


ಕ್ರಿಶ್ ಜೋಶಿ ಅವರ ಕಥೆಗೆ ಕೋಡ್ಲು ರಾಮಕೃಷ್ಣ ಹಾಗೂ ರಾಮಮೂರ್ತಿ ಚಿತ್ರಕಥೆ ರಚಿಸಿದ್ದಾರೆ. ಕ್ರಿಶ್ ಜೋಶಿ ಅವರ ಜೊತೆಗೂಡಿ ಕೋಡ್ಲು ರಾಮಕೃಷ್ಣ ಸಂಭಾಷಣೆ ಬರೆದಿದ್ದಾರೆ. ಶಮಿತ ಮಲ್ನಾಡ್ ಸಂಗೀತ ನಿರ್ದೇಶನವಿದೆ., ನಾಗೇಂದ್ರ ಛಾಯಾಗ್ರಹಣ ಮಾಡಿದರೆ, ವಸಂತ್ ಕುಮಾರ್ ಸಂಕಲನವಿದೆ.

ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ವಿನಯಾ ಪ್ರಕಾಶ್, ಶಿವಧ್ವಜ್, ಪ್ರಥಮ ಪ್ರಕಾಶ್, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ, ಕುಮಾರಿ ಐಶ್ವರ್ಯ, ಶ್ರೀಧರ್ ನಾಯಕ್ ಸ್ನೇಹ ಭಟ್, ಪ್ರಕಾಶ್, ಭವಾನಿ ಪ್ರಕಾಶ್, ಬೇಬಿ ಗಗನ, ಬೇಬಿ ಯಶಿಕಾ, ಬೇಬಿಶ್ರೀ, ಬೇಬಿ ಪ್ರತಿಷ್ಠ ದೇಶಪಾಂಡೆ, ಯುಕ್ತ ಹೆಗಡೆ, ಮಾಸ್ಟರ್ ವಿಷ್ಣು ಸಂಜಯ್, ಮಾಸ್ಟರ್ ತರುಣ್, ಮಾಸ್ಟರ್ ಸರ್ವಜ್ಞ, ಮಾಸ್ಟರ್ ಯುವರಾಜ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಚಡ್ಡಿದೋಸ್ತರ ಹಾಡು ಪಾಡು – ಕಡ್ಡಿ ಅಲ್ಲಾಡಿಸೋ ಮಂದಿಯ ಆಡಿಯೋ ಕಾರ್ಯಕ್ರಮ

ಕೌಂಡಿನ್ಯರ ಕಾದಂಬರಿಗೆ ಸಿನಿಮಾ ಸ್ಪರ್ಶ

ನಿರ್ದೇಶಕ “ಆಸ್ಕರ್‌” ಕೃಷ್ಣ ಈಗ ಹೊಸದೊಂದು ಚಿತ್ರ ಮಾಡಿದ್ದು ಗೊತ್ತೇ ಇದೆ. ಅದೀಗ ರಿಲೀಸ್‌ ಹಂತಕ್ಕ ಬಂದಿದೆ. ಹೌದು, ಈ ಹಿಂದೆ “ಆಸ್ಕರ್”, “ಮಿಸ್ ಮಲ್ಲಿಗೆ”, “ಮೊನಿಕಾ ಈಸ್ ಮಿಸ್ಸಿಂಗ್” ಮತ್ತು “ಮನಸಿನ ಮರೆಯಲಿ” ಸಿನಿಮಾ ನಿರ್ದೇಶಿಸಿದ್ದ ಕೃಷ್ಣ, ಈಗ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರ ಮಾಡಿದ್ದಾರೆ. ಅದರ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡವು. ಅಂದಹಾಗೆ, ಈ ಚಿತ್ರವನ್ನು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್‍ರಾಜ್ ನಿರ್ಮಾಣ ಮಾಡಿದ್ದಾರೆ. ನಟಿ ಪ್ರೇಮಾ ಅಂದು ಆಡಿಯೋ ಬಿಡುಗಡೆಗೆ ಸಾಕ್ಷಿಯಾದರು.

ಅವರೊಂದಿಗೆ ಎಸ್.ಎ. ಚಿನ್ನೇಗೌಡ, ಬಾಮ ಹರೀಶ್, ಬಾಮ. ಗಿರೀಶ್, ರವಿಚೇತನ್, ಶಿಲ್ಪ ಶ್ರೀನಿವಾಸ್ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದರು.
ತಮ್ಮ ಸಿನಿಮಾ ಕುರಿತು ಮಾತಿಗಿಳಿದ ನಿರ್ದೇಶಕ ಕೃಷ್ಣ, “ನನ್ನ ನಿರ್ದೇಶನದ ಐದನೇ ಚಿತ್ರವಿದು. “ಆಸ್ಕರ್”, “ಮಿಸ್ ಮಲ್ಲಿಗೆ”, “ಮೊನಿಕಾ ಈಸ್ ಮಿಸ್ಸಿಂಗ್” ಹಾಗೂ “ಮನಸಿನ ಮರೆಯಲಿ” ನಂತರ ಈ ಚಿತ್ರ ಮಾಡಿದ್ದೇನೆ. ಅಲ್ಲದೆ ಮೊದಲ ಸಲ ಪ್ರಮುಖ ಪಾತ್ರವೊಂದನ್ನು ಕೂಡ ಮಾಡಿದ್ದೇನೆ ಸೂಪರ್ ನ್ಯಾಚುರಲ್, ರೊಮ್ಯಾಂಟಿಕ್ ಥ್ರಿಲ್ಲರ್ ಹೀಗೆ ಎಲ್ಲಾ ಜಾನರ್ ಚಿತ್ರಗಳನ್ನು ಮಾಡಿದ ನಂತರ ಈ ಚಿತ್ರದ ಮೂಲಕ ಕ್ರೈಂ ಥ್ರಿಲ್ಲರ್ ಕಥೆಯೊಂದನ್ನು ಹೇಳ ಹೊರಟಿದ್ದೇನೆ. ಈ ಟೈಟಲ್ ಕೊಟ್ಟವರು ಚಿತ್ರದ ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ. ಇಬ್ಬರು ಸ್ನೇಹಿತರ ಬಾಂಡಿಂಗ್, ಫ್ರೆಂಡ್‍ಷಿಪ್ ಮಧ್ಯೆ ನಡೆಯುವ ಹುಡುಗಾಟ, ತುಂಟಾಟ ಎಲ್ಲಾ ಇದೆ. ಇದರಲ್ಲಿ ಪೋಲೀಸ್, ವ್ಯಕ್ತಿಯ ಸೋಷಿಯಲ್ ಲೈಫ್ ಹೇಗೆಲ್ಲಾ ಇರುತ್ತೆ ಎಂಬುದನ್ನು ಹೇಳಲಾಗಿದೆ.

ಎಷ್ಟೋ ಸಲ ನಾವು ಕ್ರೈಂ ಮಾಡಿದ್ದರೂ ಅದರಿಂದ ಏನೂ ಆಗುವುದಿಲ್ಲ, ಕೆಲವೊಮ್ಮೆ ನಾವು ಏನೂ ಮಾಡದಿದ್ದರೂ ಅದು ನಮ್ಮನ್ನು ಸುತ್ತಿಕೊಂಡಿರುತ್ತೆ, ಇಲ್ಲೂ ಅಂಥದ್ದೇ ಕಥೆ ಇದೆ. ಲೋಕೇಂದ್ರ ಸೂರ್ಯ ಅವರ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿ ಇಷ್ಟಪಟ್ಟೆ. ನಂತರ ಅವರನ್ನು ಭೇಟಿ ಮಾಡಿ ಮಾತಾಡಿದೆ. ಮೊದಲು ಬರೀ ಪಾತ್ರ ಮಾಡಲು ಬಂದವರು ನಂತರ ಎಲ್ಲದರಲ್ಲೂ ಇನ್‍ವಾಲ್ವ್ ಆಗಿಬಟ್ಟರು. ಅವರೇ ಚಿತ್ರಕಥೆ ಡೈಲಾಗ್ ಬರೆದರು. ಆಗಿನ್ನೂ ಪ್ರೊಡ್ಯೂಸರ್ ಇರಲಿಲ್ಲ, ಮೊದಲು ಇಬ್ಬರೇ ಸೇರಿ ಮಾಡೋಣ ಅಂದುಕೊಂಡಿದ್ದೆವು. ಆ ಸಮಯದಲ್ಲಿ ಸೆವೆನ್‍ರಾಜ್ ಸಿಕ್ಕರು, ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದರೆ ಅದಕ್ಕೆ ಕಾರಣ ಸೆವೆನ್‍ರಾಜ್. ನಾಯಕಿ ಪಾತ್ರಕ್ಕೆ ಹಲವರನ್ನು ಸಂಪರ್ಕಿಸಿದೆವು, ಯಾರೂ ಸರಿಯಾಗಲಿಲ್ಲ, ಸಿನಿಮಾ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿರುವ ಬಹುಭಾಷಾ ನಟಿ ಗೌರಿ ನಾಯರ್ ನಮ್ಮ ನಾಯಕಿಯಾಗಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಬಳಿಕ ಅವರೀಗ ಬೇರೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರದ್ದೆಯಿದ್ದರೆ ಮಾತ್ರ ಸಿನಿಮಾ ಮಾಡಬೇಕು ಎನ್ನುವದು ನನ್ನ ಪಾಲಿಸಿ, ನನ್ನ ಪಾತ್ರಕ್ಕೆ ಹೆಚ್ಚು ಮೇಕಪ್ ಬೇಕಿರಲಿಲ್ಲ, ಜೈಲಿಂದ ಹೊರಬಂದ ವ್ಯಕ್ತಿ ಹೇಗಿರ್ತಾನೋ ಆ ಥರದ ಪಾತ್ರ ನನ್ನದು ಎಂದರು ಅವರು.
ಬಹುತೇಕ ಕುಣಿಗಲ್, ತುಮಕೂರು, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲಿ ರಿಲೀಸ್ ಮಾಡುವ ಯೋಚನೆ ಅವರದು. ನಟ ಲೋಕೇಂದ್ರ ಸೂರ್ಯ, ಚಿತ್ರದಲ್ಲಿ ಗಡಾರಿ ಎನ್ನುವ ಪಾತ್ರ ಮಾಡಿದರೆ, ಆಸ್ಕರ್ ಕೃಷ್ಣ ಫ್ಯಾಷನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದರು. ನಿರ್ಮಾಪಕ ಸೆವೆನ್ ರಾಜ್, “ಏಳು ನನ್ನ ಜೀವನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದೆ, ನಾನು ಹುಟ್ಟಿದ್ದು ಏಳನೇ ತಾರೀಖು, ನನ್ನ ತಂದೆಗೆ ನಾನು ಏಳನೇ ಪುತ್ರ. ನನ್ನ ಹೆಸರು ಕೂಡ ಸೆವೆನ್‌ ರಾಜ್, ನಾನು ಚಿತ್ರರಂಗಕ್ಕೆ ಬರಬೇಕೆಂದು ಬಹಳ ಹಿಂದೆಯೇ ಪ್ರಯತ್ನಿಸಿದ್ದೆ, ಆಗಿರಲಿಲ್ಲ, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ ಎಂದರು. ಕೌಂಡಿನ್ಯ ಅವರ ಕಾದಂಬರಿ ಆಧರಿಸಿ ಮಾಡಲಾಗಿರುವ ಈ ಚಿತ್ರದಲ್ಲಿ 2 ಹಾಡುಗಳಿದ್ದು, ಅನಂತ್ ಆರ್ಯನ್ ಅವರ ಸಂಗೀತವಿದೆ. ಗಗನ್ ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ಅಕುಲ್ ಅವರ ನೃತ್ಯನಿರ್ದೇಶನ ಹಾಗೂ ವೈಲೆಂಟ್‌ ಸಾಹಸ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಡಬ್ಬಿಂಗ್‌ ಬ್ಯುಜಿಯೋ ಬ್ಯುಜಿ – ಸ್ಟುಡಿಯೋ ಖಾಲಿ ಇಲ್ಲ, ಕಲಾವಿದರೂ ಖಾಲಿ ಕೂತಿಲ್ಲ

ಇದು ಡಬ್ಬಿಂಗ್‌ ಲಾಭ-ನಷ್ಟದ ಲೆಕ್ಕಾಚಾರ

ಕನ್ನಡಕ್ಕೆ ಡಬ್ಬಿಂಗ್‌ ಬಂದರೆ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಅನೇಕರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ..!
– ಈ ಮಾತು ಹಿಂದಿನಿಂದಲೂ ಕೇಳಿಬರುತ್ತಲೇ ಇತ್ತು. ಈ ಕಾರಣಕ್ಕಾಗಿಯೇ ಮೊದಲಿನಿಂದಲೂ ಡಬ್ಬಿಂಗ್‌ ಅನ್ನು ವಿರೋಧಿಸುತ್ತಲೇ ಬರಲಾಗುತ್ತಿತ್ತು. ಡಾ.ರಾಜಕುಮಾರ್‌ ಅವರ ನೇತೃತ್ವದಲ್ಲಿ ಡಬ್ಬಿಂಗ್‌ ವಿರೋಧ ಜೋರಾಗಿಯೇ ಇತ್ತು. ಆದರೆ, ಈಗ…?
ಕಾಲ ಬದಲಾಗಿದೆ. ಡಬ್ಬಿಂಗ್‌ ವಿರೋಧದ ಧ್ವನಿಯೂ ಕ್ಷೀಣವಾಗಿದೆ. ಅಂದುಕೊಂಡಿದ್ದು ಇಲ್ಲಿ ಯಾವುದೂ ನಡೆಯುತ್ತಿಲ್ಲ. ಮುಕ್ತವಾಗಿಯೇ ಈಗ ಡಬ್ಬಿಂಗ್‌ ತಲೆ ಎತ್ತಿರುವುದರಿಂದ ಯಾರೊಬ್ಬರೂ ಮಾತನಾಡುತ್ತಿಲ್ಲ. “ಮೌನಂ ಸಮ್ಮತಿ ಲಕ್ಷಣಂ” ಅನ್ನುವಂತಾಗಿದೆ. ಹೌದು, ಡಬ್ಬಿಂಗ್‌ ಅಲೆ ಈಗ ಜೋರಾಗಿದೆ. ಪರಭಾಷೆಯ ಸಿನಿಮಾಗಳಷ್ಟೇ ಅಲ್ಲ, ಧಾರಾವಾಹಿಗಳು ಕೂಡ ಕನ್ನಡಕ್ಕೆ ಡಬ್‌ ಆಗಿ ಪ್ರಸಾರವಾಗುತ್ತಿವೆ. ಈಗಾಗಲೇ ನೂರಾರು ಚಿತ್ರಗಳು, ಧಾರಾವಾಹಿಗಳು ಕನ್ನಡಕ್ಕೆ ಡಬ್‌ ಆಗಿದ್ದು, ಪ್ರೇಕ್ಷಕರ ಮುಂದೆ ಬಂದಿರುವುದೂ ಉಂಟು. ಹಲವು ಚಿತ್ರಗಳು ಚಿತ್ರಮಂದಿರಕ್ಕೂ ಲಗ್ಗೆ ಇಟ್ಟಿರುವುದಷ್ಟೇ ಅಲ್ಲ, ಒಟಿಟಿ ಫ್ಲಾಟ್‌ಫಾರಂನಲ್ಲೂ ಕಾಣಿಸಿಕೊಳ್ಳುತ್ತಿವೆ.

ಇದು ನೇರವಾಗಿ ಕನ್ನಡ ಚಿತ್ರರಂಗದಲ್ಲಿ ದುಡಿಯುವ ಮಂದಿ ಮೇಲೆ ಪರಿಣಾಮ ಬೀರಿದೆ. ಇಂದು ಡಬ್ಬಿಂಗ್‌ ಅಲೆ ಹೆಚ್ಚಾಗಿದ್ದರಿಂದ ಕನ್ನಡ ಚಿತ್ರರಂಗದ ಅದೆಷ್ಟೋ ಕಿರಿಯ ಕಲಾವಿದರು, ಸಹ ಕಲಾವಿದರು, ಒಕ್ಕೂಟದ ಕಾರ್ಮಿಕರು ಇಂದು ಕೆಲಸವಿಲ್ಲದೆ ಪರಿತಪಿಸುವಂತಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗಿ ನೇರ ಒಟಿಟಿಯಲ್ಲಿ ಪ್ರತ್ಯಕ್ಷಗೊಂಡವು. ಇನ್ನು ಬಹುತೇಕ ಜನರು ತಿಂಗಳುಗಟ್ಟಲೆ ಮನೆಯಲ್ಲೇ ಇದ್ದುರಿಂದ ಅವರೆಲ್ಲರೂ ತಮ್ಮ ಮನೆಯಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗುವ ಡಬ್ಬಿಂಗ್‌ ಸೀರಿಯಲ್‌ ನೋಡುವಂತಾಯಿತು. ಈಗ ಲಾಕ್‌ಡೌನ್‌ ಸಡಿಲಗೊಂಡಿದೆ. ಆದರೆ, ಡಬ್ಬಿಂಗ್‌ ಸಿನಿಮಾಗಳು, ಧಾರಾವಾಹಿಗಳು ನಿಂತಿಲ್ಲ. ಇದರಿಂದ ಸ್ಯಾಂಡಲ್‌ವುಡ್‌ನ ಬಹಳಷ್ಟು ಮಂದಿಗೆ ದೊಡ್ಡ ಪೆಟ್ಟು ಬಿದ್ದಿರುವುದಂತೂ ನಿಜ.

ಹಾಗೆ ನೋಡಿದರೆ, ಡಬ್ಬಿಂಗ್‌ನಿಂದ ಎಲ್ಲವೂ ಹಾಳಾಗಿದೆ ಅಂತ ಹೇಳುತ್ತಿಲ್ಲ. ಡಬ್ಬಿಂಗ್‌ ಬಂದು ಒಂದಷ್ಟು ಜನರ ಕೆಲಸವನ್ನು ಕಸಿದುಕೊಂಡಿದ್ದು ಬಿಟ್ಟರೆ, ಒಂದಷ್ಟು ಜನರ ಮೊಗದಲ್ಲಿ ಮಂದಹಾಸ ಮೂಡಿಸಿದಂತೂ ನಿಜ. ಇದನ್ನು ಇನ್ನಷ್ಟು ವಿಸ್ತರಿಸಿ ಹೇಳುವುದಾದರೆ, ಡಬ್ಬಿಂಗ್‌ ಎಂಟ್ರಿಯಾಗಿದ್ದರಿಂದ ಅನೇಕ ಡಬ್ಬಿಂಗ್‌ ಕಲಾವಿದರು ಬಿಝಿಯಾದರು. ಅವರನ್ನು ಬಿಡುವಿಲ್ಲದಂತೆ ಅರಸಿ ಬಂದ ಕೆಲಸದಿಂದಾಗಿ ಎಲ್ಲರೂ ಬಿಝಿಯಾದರು. ಅದೆಷ್ಟೋ ನಟ,ನಟಿಯರಿಗೆ ಧ್ವನಿ ಕೊಡುವ ಮೂಲಕ ತಕ್ಕಮಟ್ಟಿಗೆ ದುಡಿಮೆ ಮಾಡುತ್ತಿದ್ದ ಡಬ್ಬಿಂಗ್‌ ಕಲಾವಿದರು, ಕೊಟ್ಟಷ್ಟು ಕಾಸು ಪಡೆದು ದಿನ ಸವೆಸುತ್ತಿದ್ದರು. ಯಾವಾಗ ಡಬ್ಬಿಂಗ್‌ ಬಂತೋ, ಅಲ್ಲಿಗೆ ಅವರ ಅದೃಷ್ಟದ ಬಾಗಿಲೂ ತೆರೆಯಿತು. ಅಲ್ಲೊಂದು ಇಲ್ಲೊಂದು ಸಿನಿಮಾಗಳಿಗೆ ಡಬ್‌ ಮಾಡುವ ಮೂಲಕ ಗುರುತಿಸಿಕೊಳ್ಳುತ್ತಿದ್ದವರು, ಈಗ ಇಡೀ ದಿನ ವಾಯ್ಸ್‌ ಡಬ್‌ ಮಾಡುವಲ್ಲಿಯೇ ನಿರತರಾಗಿದ್ದಾರೆ.

ಹಾಗಾಗಿ ಡಬ್ಬಿಂಗ್‌ ಅಂತಹ ಅನೇಕ ಡಬ್ಬಿಂಗ್‌ ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದೆ ಅಂದರೆ ತಪ್ಪಿಲ್ಲ.
ಇದರೊಂದಿಗೆ ಈಗ ಸ್ಟುಡಿಯೋಗಳೂ ಕೂಡ ಬಿಝಿಯಾಗಿವೆ. ಬರೀ ಬೆಂಗಳೂರು ಮಾತ್ರವಲ್ಲ, ರಾಜ್ಯದ ಪ್ರಮುಖ ನಗರಗಳಲ್ಲೂ ಸ್ಟುಡಿಯೋಗಳಿವೆ. ಅಲ್ಲಿಯೂ ಒಂದಷ್ಟು ಪರಭಾಷೆ ಸಿನಿಮಾಗಳು ಡಬ್‌ ಆಗುತ್ತಿವೆ. ಹಾಗಾಗಿ ಎಲ್ಲಾ ಸ್ಟುಡಿಯೋಗಳಲ್ಲೂ ಕೆಲಸ ಹೆಚ್ಚಾಗಿದ್ದು, ಎಲ್ಲರೂ ಡಬ್ಬಿಂಗ್‌ ಕೆಲಸದಲ್ಲಿ ಹಿಂದೆಂದಿಗಿಂತಲೂ ಬಿಝಿಯಾಗಿದ್ದಾರೆ. ಇಲ್ಲೀಗ ಪರದಾಡುತ್ತಿರುವುದೆಂದರೆ, ಜೂನಿಯರ್‌ ಕಲಾವಿದರು ಮತ್ತು ಸಹ ಕಲಾವಿದರು. ಇದರೊಂದಿಗೆ ಕಿರುತೆರೆಯಲ್ಲಿ ಕೆಲಸ ಮಾಡುವ ಅನೇಕ ನಟ,ನಟಿಯರಿಗೂ ಇದು ಸಮಸ್ಯೆಯಾಗಿ ಪರಿಣಮಿಸಿದೆ.

ಡಬ್ಬಿಂಗ್‌ ಸಿನಿಮಾಗಳು ಇಲ್ಲಿ ಬಂದು ಹಣ ಮಾಡುತ್ತವೆಯೇ? ಇದು ಎಲ್ಲರಿಗೂ ಕಾಡುವ ಪ್ರಶ್ನೆ. ಅವುಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಹಣ ಮಾಡುತ್ತವೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ, ಹಲವು ವಾಹಿನಿಗಳಲ್ಲೂ ಕೂಡ ಪ್ರಸಾರವಾಗುತ್ತಿವೆ ಅನ್ನೋದೇ ವಿಷಯ. ಈಗಾಗಲೇ ಪರಭಾಷೆಯ ಅನೇಕ ಚಿತ್ರಗಳು ಥಿಯೇಟರ್‌ ಜೊತೆಗೆ ಕಿರುತೆರೆಯಲ್ಲೂ ಬಿಡುಗಡೆಯಾಗಿವೆ. ಒಂದು ಡಬ್‌ ಮಾಡುವ ಸಿನಿಮಾಗೆ ಸುಮಾರು ೧೦ ಲಕ್ಷ ರುಪಾಯಿ ಖರ್ಚು ಮಾಡಿದರೆ, ರೆಡಿಯಾಗುತ್ತದೆ. ಇದು ಸುಲಭ ಮಾರ್ಗ. ಬಹಳಷ್ಟು ಜನ ಇಲ್ಲಿಗೆ ಪರಭಾಷೆಯ ಅನೇಕ ಸಿನಿಮಾಗಳನ್ನು ತಂದು ಡಬ್ಬಿಂಗ್‌ ಮಾಡಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಹಿಂದೆ ಪರಭಾಷೆಯ ಕೆಲವು ಸೀರಿಯಲ್‌ಗಳು ರಿಮೇಕ್‌ ಆಗುತ್ತಿದ್ದವು. ಆದರೆ, ಈಗೀಗ ಕನ್ನಡಕ್ಕೆ ಡಬ್‌ ಆಗುತ್ತಿವೆ. ಅವುಗಳು ಪ್ರಸಾರ ಕೂಡ ಆಗುತ್ತಿದ್ದು, ಡಬ್ಬಿಂಗ್ ಸ್ಟುಡಿಯೋಗಳು‌ ಎರಡು ಮೂರು ವರ್ಷಕ್ಕೆ ಬುಕ್‌ ಆಗಿವೆ ಅನ್ನೋದೇ ವಿಶೇಷ.


ಪ್ರಭಾಸ್‌ ಅಭಿನಯದ “ಬಾಹುಬಲಿ” ಕೂಡ ಕನ್ನಡದಲ್ಲಿ ಬಂತು. ಅಜಿತ್‌ ಅವರ “ಜಗಮಲ್ಲ”, ವಿಜಯ್‌ ಅವರ “ಬಿಗಿಲ್”‌, ಅಲ್ಲು ಅರ್ಜುನ್‌ ಅವರ “ಬಂದ ನೋಡು ಸರ್ರೆನೊಡು”, ರಾಮ್‌ ಚರಣ್‌ ಅವರ “ರಂಗಸ್ಥಳ”, ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಅವರ “ಡಿಯರ್‌ ಕಾಮ್ರೆಡ್”‌, ಜೂನಿಯರ್‌ ಎನ್‌ಟಿಆರ್‌ ಅವರ “ಅಪ್ಪನ ಪ್ರೀತಿಯಲ್ಲಿ” ಸಿನಿಮಾ ಕೂಡ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗುತ್ತಿದೆ. ಅದೇನೆ ಇರಲಿ, ಡಬ್ಬಿಂಗ್‌ ಶುರುವಾಗಿದಾಗಿದೆ. ಹಲವು ಚಿತ್ರಗಳು ಡಬ್ಬಿಂಗ್‌ ಆಗಿಹೋಗಿವೆ. ಇಲ್ಲಿ ಯಾರಿಗೆ ಏನು ಲಾಭ ಆಗಿದೆಯೋ, ನಷ್ಟ ಆಗಿದೆಯೋ ಬೇರೆ ಮಾತು. ಆದರೆ ಡಬ್ಬಿಂಗ್‌ ಸ್ಟುಡಿಯೋಗಳಿಗೆ, ಡಬ್ಬಿಂಗ್‌ ಕಲಾವಿದರಿಗಂತೂ ಸಾಕಷ್ಟು ಸಹಾಯವಾಗಿದೆ. ಇಲ್ಲಿ ಕನ್ನಡಿಗರು ಭಾಷಾ ವಿರೋಧಿಗಳಲ್ಲ. ಭಾಷಾ ಪ್ರೇಮಿಗಳು. ಆದರೆ, ವ್ಯಾಪಾರ ದೃಷ್ಟಿಯಿಂದ ನೋಡುವುದಾದರೆ, ಇವೆಲ್ಲಾ ಕೆಲಸಗಳು ನಡೆಯಲೇಬೇಕು ಅನ್ನೋ ಮಾತುಗಳು ಗಾಂಧಿನಗರದಲ್ಲಿ ಗಿರಕಿಹೊಡೆಯುತ್ತಿರುವುದಂತೂ ಸತ್ಯ.

ಕನ್ನಡದಲ್ಲಿ ಡಬ್ಬಿಂಗ್‌ ಕೆಲಸಗಳು ಜೋರಾಗಿವೆ. ಪರಭಾಷೆ ನಟರು ಅದಾಗಲೇ ಎಂಟ್ರಿಯಾಗಿದ್ದಾಗಿದೆ. ಇಲ್ಲಿ ಸಣ್ಣಪುಟ್ಟ ಕಾರ್ಮಿಕರು, ಕಲಾವಿದರಿಗೆ ಸಂಕಷ್ಟ ಎದುರಾಗಿರುವುದಂತೂ ನಿಜ. ಸ್ಟಾರ್‌ಗಳೂ ಈಗ ಮತ್ತಷ್ಟು ಚುರುಕಾಗಬೇಕಿದೆ. ವರ್ಷಕ್ಕೆ ಒಂದು ಸಿನಿಮಾ ಬದಲು ಎರಡು ಸಿನಿಮಾಗಳನ್ನಾದರೂ ಮಾಡಿದರೆ, ಕೊನೇಪಕ್ಷ ಇಂಡಸ್ಟ್ರಿಯಲ್ಲಿರುವ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳೇ ರಾರಾಜಿಸುತ್ತವೆ. ಆಗ ಪರಭಾಷೆಯ ಡಬ್ಬಿಂಗ್‌ ಸಿನಿಮಾಗಳ ಬಿಡುಗಡೆ ಕೊಂಚ ಕಡಿಮೆಯಾಗಬಹುದೇನೋ? ಇಲ್ಲಿ ಭಾಷೆಯನ್ನು ವಿರೋಧಿಸುತ್ತಿಲ್ಲ. ಕನ್ನಡಿಗರು ಎಲ್ಲಾ ಭಾಷಿಗರನ್ನೂ ಪ್ರೀತಿಸುತ್ತಾರೆ. ಅಂತೆಯೇ ಎಲ್ಲಾ ಭಾಷೆಯ ಸಿನಿಮಾಗಳನ್ನೂ ನೋಡುತ್ತಾರೆ. ಕನ್ನಡ ಸ್ಟಾರ್‌ಗಳು ಕೂಡ ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡಿದರೆ, ಎಲ್ಲರಿಗೂ ಹೆಚ್ಚು ಕೆಲಸ ಸಿಗುತ್ತೆ. ಆಗ ಎಷ್ಟೇ ಡಬ್ಬಿಂಗ್‌ ಚಿತ್ರಗಳು ಬಂದರೂ ಯಾವುದೇ ಪರಿಣಾಮ ಬೀರೋದಿಲ್ಲ.

Categories
ಸಿನಿ ಸುದ್ದಿ

ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್

ದರ್ಶನ್ ವಿಡಿಯೋ ಮೂಲಕ ವಿವರಣೆ

ದರ್ಶನ್ ಅಭಿನಯದ “ರಾಬರ್ಟ್‌” ಸಿನಿಮಾ ಬಿಡುಗಡೆ ಯಾವಾಗ ಎನ್ನುವವರಿಗೆ ಚಿತ್ರತಂಡ ಹೀಗೊಂದು ಸಿಹಿ ಸುದ್ದಿ ನೀಡಿದೆ.
ಹೌದು “ರಾಬರ್ಟ್” ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಇದೇ ಮಾರ್ಚ್11 ರಂದು “ರಾಬರ್ಟ್” ಬಿಡುಗಡೆಯಾಗುತ್ತಿದೆ.

ಈ ವಿಷಯವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಕೂಡ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.

Categories
ಸಿನಿ ಸುದ್ದಿ

ಶೂಟಿಂಗ್ ಮುಗಿಸಿದ ಧೀರ – ಸಂಭ್ರಮದಲ್ಲಿ ಸಾಮ್ರಾಟ್

ಉತ್ಸಾಹದಲ್ಲಿ ಹೊಸಬರು

ಕಳೆದ ಜನವರಿಯಲ್ಲಿ ಮಹೂರ್ತ ಕಂಡಿದ್ದ “ಧೀರ ಸಾಮ್ರಾಟ್” ಈಗ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿದೆ.
ಹೌದು, ಬಹುತೇಕ ಹೊಸಬರೇ ಸೇರಿ ಮಾಡಿದ ಈ ಚಿತ್ರ ಇತ್ತೀಚೆಗೆ ಕುಂಬಳಕಾಯಿ ಒಡೆದಿದೆ.
ಅಂದಹಾಗೆ, ಖಾಸಗಿ ವಾಹಿನಿಯಲ್ಲಿ ನಿರೂಪಕನಾಗಿ ಸಾಕಷ್ಟು ಅನುಭವ ಹೊಂದಿರುವ ಪವನ್ ಕುಮಾರ್ (ಪಚ್ಚಿ ) ಈ ಸಿನಿಮಾಗೆ ನಿರ್ದೇಶಕರು.

ಸುಮಾರು 45 ದಿನಗಳ ಚಿತ್ರೀಕರಣ ನಡೆಸಿದ ಚಿತ್ರತಂಡ, ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿದೆ. ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳ ಚಿತ್ರೀಕರಣ ನಡೆಸಿದ ಚಿತ್ರತಂಡ, ನಗರದ ಹೊರ ಭಾಗದಲ್ಲಿ ನಡೆದ ಕೊನೆ ದಿನದ ಚಿತ್ರೀಕರಣದಲ್ಲಿ ಸಿನೆಮಾದ ನಾಯಕನ ತಂಡ ಮತ್ತು ಖಳನಾಯಕನ ಮಧ್ಯೆ ಜಿದ್ದಾಜಿದ್ದಿನ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ಚಿತ್ರೀಕರಣ ಮುಗಿಸಿದೆ. ತನ್ವಿ ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ ಉತ್ತರ ಕರ್ನಾಟಕದ ಗುರು ಬಂಡಿ ಚಿತ್ರದ ನಿರ್ಮಾಪಕರು.

ಒಳ್ಳೆಯ ಸಿನಿಮಾ ಕೊಡಬೇಕು ಎಂಬ ಉದ್ದೇಶದಿಂದ ಹೊಸಬರ ತಂಡದ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಹಾಡುಗಳಿಗೆ ಮುರಳಿ ಮಾಸ್ಟರ್ ಮತ್ತು ಕಿಶೋರ್ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗದ ಚಿತ್ರೀಕರಣದಲ್ಲಿ ವೀರೇಶ್ ಎನ್ ಟಿ ಎ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದರೆ, ಎರಡನೇ ಭಾಗದ ಚಿತ್ರೀಕರಣಕ್ಕೆ ಅರುಣ್ ಸುರೇಶ್ ಕ್ಯಾಮೆರಾ ಹಿಡಿದಿದ್ದಾರೆ. ಎ. ಆರ್. ಸಾಯಿರಾಂ ಸಂಭಾಷಣೆ ಬರೆದಿರೋ ಈ ಸಿನಿಮಾದಲ್ಲಿ ನಿರ್ದೇಶಕ ಪವನ್ ಕುಮಾರ್ ಕೂಡ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
ಆರಂಭದಲ್ಲಿ ಆಕ್ಷನ್ ಪ್ರಿನ್ಸ್ ಧೃವ‌ ಸರ್ಜಾಅವರು ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ವಿ.ನಾಗೇಂದ್ರ ಪ್ರಸಾದ್ ಮತ್ತು “ಭರ್ಜರಿ” ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
ರಾಕೇಶ್ ಬಿರಾದರ್ ಮತ್ತು ಅದ್ವಿತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಉಳಿದಂತೆ ಬಲರಾಜ್ ವಾಡಿ, ನಾಗೇಂದ್ರ ಅರಸ್, ಶೋಭರಾಜ್, ಶಂಕರ್ ಭಟ್, ರವೀಂದ್ರನಾಥ್, ರಮೇಶ್ ಭಟ್, ಮಂಡ್ಯ ಚಂದ್ರು, ಮನಮೋಹನ್ ರೈ, ಯತಿರಾಜ್ , ಸಂಕಲ್ಪ್, ರವಿ, ಗಿರಿಧರ್, ಹರೀಶ್ ಅರಸು, ಇಂಚರ, ಜ್ಯೋತಿ ಮುರೂರ್ ಅಭಿನಯಿಸಿದ್ದಾರೆ. ರಾಘವ್ ಸುಭಾಷ್ ಸಂಗೀತ ನೀಡಿದ್ದು, ಸತೀಶ್ ಚಂದ್ರಯ್ಯ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.

Categories
ಸಿನಿ ಸುದ್ದಿ

ರಾಧಿಕಾ ಕುಮಾರಸ್ವಾಮಿಗೆ ಕನ್ನಡದಲ್ಲಿ 90 ಲಕ್ಷ ಸಂಭಾವನೆ! ಇದು ಕನ್ನಡದ ಮಟ್ಟಿಗೆ ದಾಖಲೆ

ನಾಟ್ಯರಾಣಿ ಶಾಕುಂತಲಾ ಚಿತ್ರದ ನಟನೆಗೆ ಈ ಸಂಭಾವನೆ!

ಕನ್ನಡ ಚಿತ್ರರಂಗ ಈಗಾಗಲೇ ಸಾಕಷ್ಟು ದಾಖಲೆ ಬರೆದಿದೆ. ಅದು ಯಶಸ್ವಿ ಸಿನಿಮಾಗಳಿರಬಹುದು, ಒಳ್ಳೆಯ ಕಥೆಗಳಿರಬಹುದು, ತಾಂತ್ರಿಕ ವರ್ಗವೇ ಇರಬಹುದು. ಕಲಾವಿದರ ಸಂಭಾವನೆಯಲ್ಲೂ ಕೂಡ ಕನ್ನಡ ಚಿತ್ರರಂಗ ಹಿಂದೆ ಬಿದ್ದಿಲ್ಲ.
ಈಗ ಇಲ್ಲಿ ಹೇಳ ಹೊರಟಿರುವ ವಿಷಯ, ಕನ್ನಡ ಚಿತ್ರರಂಗದಲ್ಲಿ ನಟಿಯೊಬ್ಬರು ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ.


ಹೌದು, ಅಷ್ಟೊಂದು ದುಬಾರಿ ನಟಿ ಬೇರಾರೂ ಅಲ್ಲ, ರಾಧಿಕಾ ಕುಮಾರಸ್ವಾಮಿ. ಸದ್ಯದ ಮಟ್ಟಿಗೆ ರಾಧಿಕಾ ಕುಮಾರಸ್ವಾಮಿ ಅವರು ಸುದ್ದಿಯಲ್ಲಿದ್ದಾರೆ. ಅದರ ಜೊತೆಗೆ ಅವರು ಚಿತ್ರವೊಂದರಲ್ಲಿ ನಟಿಸಲು ಬರೋಬ್ಬರಿ 90 ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದೇ ಈ ಹೊತ್ತಿನ ಬಿಗ್ ನ್ಯೂಸ್.
ಅಂದಹಾಗೆ, ರಾಧಿಕಾ ಕುಮಾರಸ್ವಾಮಿ ಅವರು ಅತೀ ಹೆಚ್ಚು ಸಂಭಾವನೆ ಪಡೆದಿರುವ‌ ಸಿನಿಮಾ, “ನಾಟ್ಯರಾಣಿ ಶಾಕುಂತಲಾ’ ಸಿನಿಮಾ.


ಈ ಚಿತ್ರದಲ್ಲಿ ಅವರು ನಟಿಸಲು 90 ಲಕ್ಷ ರೂಪಾಯಿ ಕೇಳಿದ್ದು, ಈಗಾಗಲೇ 60 ಲಕ್ಷ ರುಪಾಯಿ ಸಂದಾಯ ಕೂಡ ಆಗಿದೆ ಎಂಬುದು‌ ಸುದ್ದಿ.
ಅದೇನೆ ಇರಲಿ, ಸೌತ್ ಇಂಡಿಯಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಮಣಿಯರಲ್ಲಿ ಕನ್ನಡದ ರಾಧಿಕಾ ಕುಮಾರಸ್ವಾಮಿ ಕೂಡ ಸೇರಿದ್ದಾರೆ ಅನ್ನುವುದೇ ವಿಶೇಷ.


ಸದ್ಯ ಆ ಚಿತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ‌. ಇನ್ನುಳಿದ ಮಾಹಿತಿಗಳು ಕೂಡ ಒಂದೊಂದೇ ಹೊರಬೀಳುವ ಸಾಧ್ಯತೆ ಇದೆ.
ನಮ್ ಕನ್ನಡ‌ ನಟಿಯರು ಬಾಲಿವುಡ್ ರೇಂಜ್ ನಲ್ಲಿದ್ದಾರೆ ಅನ್ನುವುದಕ್ಕೆ ಈ ಸಂಭಾವನೆ ಸುದ್ದಿಯೇ ಸಾಕು.

Categories
ಸಿನಿ ಸುದ್ದಿ

ನಿರ್ದೇಶಕ ಸೃಷ್ಟಿಸಿದ ದೇವರ ಕಾಲೋನಿ! ಬರಲಿದೆ ಚಂದ್ರಶೇಖರ್‌ ಬಂಡಿಯಪ್ಪ ಬರೆದ ಹೊಸ ಪುಸ್ತಕ

ನಿರ್ದೇಶಕರ ಹೊಸ ಹೆಜ್ಜೆ

ಕನ್ನಡ ಚಿತ್ರರಂಗದಲ್ಲಿ ಹಲವು ನಿರ್ದೇಶಕರು ಸಾಕಷ್ಟು ಪುಸ್ತಕಗಳನ್ನು ಹೊರತಂದಿರುವುದುಂಟು. ಆ ಸಾಲಿಗೆ ಈಗ ನಿರ್ದೇಶಕ ಚಂದ್ರಶೇಖರ್‌ಬಂಡಿಯಪ್ಪ ಅವರು ಕೂಡ ಹೊಸದೊಂದು ಪುಸ್ತಕ ಹೊರತರುವ ತಯಾರಿಯಲ್ಲಿದ್ದಾರೆ. ಹೌದು, “ಆನೆ ಪಟಾಕಿ”,”ರಥಾವರ” ಮತ್ತು “ತಾರಕಾಸುರ” ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ಬಂಡಿಯಪ್ಪ, ಒಳ್ಳೆಯ ಬರಹಗಾರರೂ ಹೌದು. ಅವರೀಗೆ ಸಿನಿಮಾ ನಿರ್ದೇಶನದ ಜೊತೆಯಲ್ಲೊಂದು ಪುಸ್ತಕವನ್ನೂ ಬರೆದಿದ್ದಾರೆ ಅನ್ನೋದೇ ಖುಷಿಯ ವಿಷಯ. ಅವರು ಒಂದು ಕಥೆಯನ್ನಿಟ್ಟುಕೊಂಡು, ಅದನ್ನು ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಅವರು ಬರೆದಿರುವ ಕಥೆಯ ಪುಸ್ತಕಕ್ಕೆ “ದೇವರ ಕಾಲೋನಿ” ಎಂದು ನಾಮಕರಣ ಮಾಡಿದ್ದಾರೆ. ಈ ಪುಸ್ತಕದ ವಿಶೇಷತೆ ಅಂದರೆ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್‌ ಮುನ್ನುಡಿ ಬರೆದರೆ, ಯೋಗರಾಜ್‌ಭಟ್‌ ಬೆನ್ನುಡಿ ಬರೆದಿದ್ದಾರೆ. ತಮ್ಮ ಚೊಚ್ಚಲ ಪುಸ್ತಕ “ದೇವರ ಕಾಲೋನಿ” ಕುರಿತು ಚಂದ್ರಶೇಖರ್‌ ಬಂಡಿಯಪ್ಪ “ಸಿನಿ ಲಹರಿ” ಜೊತೆ ಒಂದಷ್ಟು ಮಾತನಾಡಿದ್ದಾರೆ.


“ನನ್ನ ಬದುಕಿನಲ್ಲಿ ನಿರ್ದೇಶನ ಮತ್ತು ವ್ಯವಸಾಯ ಈ ಎರಡನ್ನು ತುಂಬಾನೇ ಇಷ್ಟಪಡ್ತೀನಿ. ಅದರೊಂದಿಗೆ ಈಗ ಪುಸ್ತಕ ಬರಹಕ್ಕೂ ಇಳಿದಿದ್ದೇನೆ. “ದೇವರ ಕಾಲೋನಿ” ಎಂಬ ಹೆಸರಿನ ಪುಸ್ತಕಕ್ಕೆ ಕಥೆ ಬರೆಯುತ್ತಿದ್ದೇನೆ. ಈ ಮೂಲಕ ಲೇಖಕ ಎನಿಸಿಕೊಳ್ಳುತ್ತಿದ್ದೇನೆ ಎಂಬ ಖುಷಿ ಇದೆ. ಸಿನಿಮಾ ಅಂತ ಬಂದಾಗ ಅಲ್ಲಿ ಒಂದಷ್ಟು ಚೌಕಟ್ಟು ಇರುತ್ತೆ. ಅದರದ್ದೇ ಆದ ಕಟ್ಟುಪಾಡುಗಳಿರುತ್ತವೆ. ಅಲ್ಲಿ ಕಮರ್ಷಿಯಲ್‌ ಫಾರ್ಮೆಟ್‌ ಇರುತ್ತೆ. ಇನ್ನೇನಾದರೂ ಅಲ್ಲಿ ಮಾಡೋಕೆ ಹೋದರೆ, ಅದು ಜನರಿಗೆ ರೀಚ್‌ ಆಗೋದಿಲ್ಲ. ಆದರೆ, ಈ ಪುಸ್ತಕ ವಿಚಾರಕ್ಕೆ ಬಂದರೆ, ಅಲ್ಲಿ ಬರಹಗಾರರನಿಗೆ ಸಂಪೂರ್ಣ ಸಹಕಾರ ಇರುತ್ತೆ. ಅವನಿಗೆ ಏನು ತೋಚುತ್ತೋ, ಅದನ್ನು ಗೀಚಬಹುದು. ಎಷ್ಟೇ ನೇರವಾಗಿ, ಖಾರವಾಗಿಯಾದರೂ ಪ್ರತಿಕ್ರಿಯಿಸಬಹುದು. ಒಂದು ರೀತಿಯಲ್ಲಿ ಲೇಖಕ ಸ್ವತಂತ್ರ. ಇನ್ನು ಸಿನಿಮಾದಲ್ಲಿ ಕೆಲ ಕಥಾವಸ್ತು ಇಟ್ಟುಕೊಂಡು ಸಿನಿಮಾ ಮಾಡೋಕೂ ಧೈರ್ಯ ಬೇಕು. ನನಗೆ ಪುಸ್ತಕ ಬರೆಯುವ ಯೋಚನೆ ಹಲವು ವರ್ಷಗಳಿಂದ ಇತ್ತು. ಸಾಕಷ್ಟು ಸಂಶೋಧನೆ ಮಾಡಿಯೇ ನಾನು ಕಥೆ ಬರೆಯೋಕೆ ಮುಂದಾಗಿದ್ದೇನೆ. ಸದ್ಯ ಈ “ದೇವರ ಕಾಲೋನಿ” ಪುಸ್ತಕಕ್ಕೆ ತಯಾರಿ ನಡೆಯುತ್ತಿದೆ. ಬರವಣಿಗೆ ಕೆಲಸ ಆದಾಗಲೇ ಮುಗಿದಿದ್ದು, ಡಿಟಿಪಿ ಕೆಲಸ ನಡೆಯುತ್ತಿದೆ. ದೊಡ್ಡ ಪಬ್ಲಿಕೇಷನ್‌ ಮೂಲಕ ಈ ಪುಸ್ತಕ ಇಷ್ಟರಲ್ಲೇ ಹೊರಬರಲಿದೆʼ ಎಂಬುದು ಚಂದ್ರಶೇಖರ್‌ ಬಂಡಿಯಪ್ಪ ಅವರ ಮಾತು.


ಅದೇನೆ ಇರಲಿ, ಚಂದ್ರಶೇಖರ್‌ ಬಂಡಿಯಪ್ಪ ಅವರ ನಿರ್ದೇಶನದ ಚಿತ್ರಗಳಲ್ಲಿ ಒಂದಷ್ಟು ವಿಲಕ್ಷಣ ಕಥೆಗಳು, ಪಾತ್ರಗಳು ಕಾಣಿಸಿಕೊಂಡಿವೆ. ವಿಚಿತ್ರ ಕಥೆಗಳನ್ನು ತಂದು ಜನರ ಮುಂದಿಟ್ಟಾಗ, ಜನರು ಕೂಡ ಒಪ್ಪಿ ಅಪ್ಪಿಕೊಂಡಿದ್ದುಂಟು. ಆ ಮೂಲಕ ಅವರು ಹೊಸ ಪ್ರತಿಭೆಗಳನ್ನು ಹೊರತಂದಿದ್ದಾರೆ. ಅಂದಹಾಗೆ, ಚಂದ್ರಶೇಖರ್‌ ಬಂಡಿಯಪ್ಪ ಅವರ “ದೇವರ ಕಾಲೋನಿ” ಟೋಟಲ್‌ ಕನ್ನಡ ಮೂಲಕ ರಿಲೀಸ್‌ ಆಗುತ್ತಿದೆ. ಇದು ನಿರ್ದೇಶಕರ ಮತ್ತೊಂದು ಹೊಸ ಹೆಜ್ಜೆ. ಅವರ ಹೊಸ ಪ್ರಯತ್ನಕ್ಕೆ ಗೆಲುವು ಸಿಗಲಿ ಎಂಬುದು “ಸಿನಿಲಹರಿ” ಹಾರೈಕೆ.

Categories
ಸಿನಿ ಸುದ್ದಿ

ಯಜಮಾನನಿಗೆ ಮತ್ತೊಂದು ಚಿತ್ರ ಫಿಕ್ಸ್ -ರಾಜವೀರ ಮದಕರಿನಾಯಕ ಬಳಿಕ  ದರ್ಶನ್‌ ಹರಿಕೃಷ್ಣ ಜೋಡಿಯ ಮೋಡಿ

ಯಜಮಾನ ನಿರ್ಮಾಪಕರಿಂದ ಇನ್ನೊಂದು ಕಾಣಿಕೆ

ಕನ್ನಡದ ಮಟ್ಟಿಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದವರು. ಸದ್ಯಕ್ಕೆ ಅವರ ಕೈಯಲ್ಲಿ ಒಂದಷ್ಟು ಸಿನಿಮಾಗಳಿವೆ. “ರಾಬರ್ಟ್‌” ಈಗ ರಿಲೀಸ್‌ಗೆ ರೆಡಿಯಾಗಿದೆ. ಅದರ ಬೆನ್ನಲ್ಲೇ “ರಾಜವೀರ ಮದಕರಿನಾಯಕ” ಚಿತ್ರ ಕೂಡ ಸೆಟ್ಟೇರಿದ್ದು, ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕಿದೆ. ಇನ್ನು, “ರಾಬರ್ಟ್‌” ತಂಡದ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿಯೂ ಈಗಾಗಲೇ ದರ್ಶನ್‌ ಅನೌನ್ಸ್‌ ಮಾಡಿದ್ದಾಗಿದೆ. ಇವುಗಳ ಜೊತೆಯಲ್ಲಿ ದರ್ಶನ್‌ಗೆ ಮತ್ತೊಂದು ಸಿನಿಮಾ ಕೂಡ ಆಗುತ್ತಿದೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ದರ್ಶನ್‌ ಅವರಿಗೆ ಹೊಸ ಸಿನಿಮಾ ಕಥೆ ರೆಡಿಯಾಗುತ್ತಿದೆ. ಮತ್ತೊಂದು ಅದ್ಧೂರಿ ಬಜೆಟ್‌ನ ಚಿತ್ರ ಆಗಲಿದೆ ಎಂಬುದು ವಿಶೇಷತೆಗಳಲ್ಲೊಂದು.


ಹೌದು, ಈ ಹಿಂದೆ ದರ್ಶನ್‌ ಅವರಿಗೆ “ಯಜಮಾನ” ಚಿತ್ರ ನಿರ್ಮಿಸಿದ್ದ ಶೈಲಜಾ ನಾಗರಾಜ್‌ ಅವರೇ ದರ್ಶನ್‌ ಅವರಿಗೆ ಮತ್ತೊಂದು ದೊಡ್ಡ ಚಿತ್ರ ಮಾಡಲು ತಯಾರಿ ನಡೆಸಿದ್ದಾರೆ. ಹಾಗೆ ನೋಡಿದರೆ, “ಯಜಮಾನ” ಸಿನಿಮಾ ಆಗುವ ಸಂದರ್ಭದಲ್ಲೇ ನಿರ್ಮಾಪಕರು ದರ್ಶನ್‌ ಅವರಿಗೆ ಅಡ್ವಾನ್ಸ್‌ ಕೊಟ್ಟಿದ್ದರು ಎನ್ನಲಾಗಿದ್ದು, ಆ ಚಿತ್ರದ ಕಥೆಯ ಕೆತ್ತನೆಯ ಕೆಲಸ ಜೋರಾಗಿಯೇ ನಡೆಯುತ್ತಿದೆ. ಇನ್ನು, ದರ್ಶನ್‌ ಅವರ ಮುಂದಿನ ಸಿನಿಮಾಗೆ ನಿರ್ದೇಶಕರು ಯಾರು? ಈ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. “ಯಜಮಾನ” ಚಿತ್ರವನ್ನು ನಿರ್ದೇಶನ ಮಾಡಿದ್ದ ಹರಿಕೃಷ್ಣ ಅವರೇ ದರ್ಶನ್‌ ಅವರಿಗೆ ಹೊಸ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಈಗಾಗಲೇ ಹರಿಕೃಷ್ಣ ಅವರು ತಮ್ಮದ್ದೊಂದು ತಂಡ ಕಟ್ಟಿಕೊಂಡು ಕಥೆ, ಚಿತ್ರಕಥೆ ಬರೆಯುವಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯಕ್ಕೆ ದರ್ಶನ್‌ ಅವರು “ರಾಬರ್ಟ್‌” ರಿಲೀಸ್‌ ಎದುರು ನೋಡುತ್ತಿದ್ದಾರೆ.

ಇದರ ಜೊತೆ ಜೊತೆಯಲ್ಲೇ ಅವರು “ರಾಜವೀರ ಮದಕರಿನಾಯಕ” ಸಿನಿಮಾ ಚಿತ್ರೀಕರಣದಲ್ಲೂ ತೊಡಗಿಕೊಳ್ಳಲಿದ್ದಾರೆ. ಆ ಬಳಿಕ ಅವರು, ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾಗೆ ಮುಂದಾಗುತ್ತಾರೋ ಅಥವಾ ಹರಿಕೃಷ್ಣ ಅವರ ಹೊಸ ಚಿತ್ರದಲ್ಲಿ ಎಂಟ್ರಿಯಾಗುತ್ತಾರೋ ಎಂಬುದು ಗೌಪ್ಯ. ಆದರೆ, ಹರಿಕೃಷ್ಣ ಅವರೊಂದಿಗೆ ಮತ್ತೊಂದು ಸಿನಿಮಾ ಆಗುತ್ತಿರುವುದಂತೂ ನಿಜ. “ಯಜಮಾನ” ಬಳಿಕ ಹೊಸ ಸಿನಿಮಾ ಇನ್ನೂ ಹೊಸತನದಲ್ಲಿರಲ್ಲಿದ್ದು, ಪಕ್ಕಾ ಮಾಸ್‌ ಅಂಶಗಳೊಂದಿಗೆ ಪಡ್ಡೆಗಳೂ ಸೇರಿದಂತೆ ದರ್ಶನ್ ಅಭಿಮಾನಿಗಳಿಗೊಂದು ರಗಡ್‌ ಸಿನಿಮಾ ಮಾಡಬೇಕೆಂಬ ಹಠದಲ್ಲೇ ಹರಿಕೃಷ್ಣ ಸದ್ಯಕ್ಕೆ ಸ್ಕ್ರಿಪ್ಟ್‌ನಲ್ಲಿ ಮಗ್ನರಾಗಿದ್ದಾರೆ.

ಹರಿಕೃಷ್ಣ ಅಂದಾಕ್ಷಣ, ನೆನಪಾಗೋದೇ ಅದ್ಭುತ ಹಾಡುಗಳ ಮೋಡಿಗಾರ ಅನ್ನೋದು. ಅವರು ಸಂಗೀತ ನಿರ್ದೇಶನದ ಜೊತೆ ಜೊತೆಯಲ್ಲೇ ನಿರ್ದೇಶನಕ್ಕೂ ಬಂದಿದ್ದು ಮತ್ತೊಂದು ಪ್ಲಸ್‌ ಪಾಯಿಂಟ್.‌ ಬಹಳಷ್ಟು ಮಂದಿ ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಪಳಗಿದವರು, ನಿರ್ದೇಶನವನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಾರೋ ಏನೋ ಎಂಬ ಪ್ರಶ್ನೆಗಳನ್ನು ಹಾಕುತ್ತಿದ್ದರು. ಯಾವಾಗ,”ಯಜಮಾನ” ಹೊರಬಂತೋ, ಅದರೊಳಗಿರುವ ಗತ್ತುಗೈರತ್ತು ನೋಡಿದ ಮಂದಿ, ಒಂದು ಮಾತನ್ನೂ ಆಡೋಕೆ ಮುಂದಾಗಲಿಲ್ಲ.

ಅಷ್ಟರಮಟ್ಟಿಗೆ “ಯಜಮಾನ” ಸಿನಿಮಾವನ್ನು ಕಟ್ಟಿಕೊಡುವ ಮೂಲಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದುಂಟು. ಈಗ ಅದೇ ಹುಮ್ಮಸ್ಸಿನಲ್ಲೇ ದರ್ಶನ್‌ ಅವರಿಗೆ ಮತ್ತೊಂದು ಸಿನಿಮಾ ಮಾಡೋಕೆ ಅಣಿಯಾಗುತ್ತಿದ್ದಾರೆ ಹರಿಕೃಷ್ಣ. ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನೂ ಹರಿಕೃಷ್ಣ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಇನ್ನು ಶೈಲಜಾ ನಾಗ್‌ ಅವರು ಕೂಡ ದರ್ಶನ್‌ ಜೊತೆ ಭರ್ಜರಿಯಾಗಿಯೇ ಹೊಸ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದ್ದು, ಇಷ್ಟರಲ್ಲೇ ಆ ಚಿತ್ರದ ಒಂದಷ್ಟು ಹೊಸ ಸುದ್ದಿಗಳು ಹೊರಬಿದ್ದರೆ ಅಚ್ಚರಿ ಇಲ್ಲ.

error: Content is protected !!