Categories
ಸಿನಿ ಸುದ್ದಿ

ಜೂನಿಯರ್ ಚಿರು ಪುಟಾಣಿ ಕೈಯಿಂದ ರಾಜಾಮಾರ್ತಾಂಡ ಟ್ರೇಲರ್ ರಿಲೀಸ್‌!


ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜಾ ಮಾರ್ತಾಂಡ’ ತೆರೆಗೆ ಸಿದ್ಧವಾಗುತ್ತಿದೆ. ಚಿರಂಜೀವಿ ಪಾತ್ರಕ್ಕೆ ಅವರ ಸಹೋದರ ಧ್ರುವ ಡಬ್‌ ಮಾಡಿದ್ದಾರೆ.  ಫೆಬ್ರವರಿ 19ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಈ ಟ್ರೇಲರ್‌ ಅನ್ನು ಚಿರಂಜೀವಿ ಪುಟಾಣಿ ಪುತ್ರನ ಕೈಗಳಿಂದ ಲಾಂಚ್‌ ಮಾಡಿಸಲಾಗುತ್ತಿದೆ! ಚಿತ್ರದ ನಿರ್ದೇಶಕ ರಾಮ್‌ನಾರಾಯಣ್‌ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ತೊಟ್ಟಿಲಲ್ಲಿರುವ ಜ್ಯೂ.ಚಿರು ಜೊತೆಗಿನ ಸೆಲ್ಫಿ ಹಾಕಿ ಅವರು ಈ ಸುದ್ದಿಯನ್ನು ಬರೆದಿದ್ದಾರೆ.

ಜ್ಯೂ.ಚಿರಂಜೀವಿಯಿಂದ ‌ಟ್ರೇಲರ್ ಲಾಂಚ್ ಮಾಡಿಸುವ ಐಡಿಯಾಗೆ ನಟಿ  ಮೇಘನಾ ರಾಜ್‌ ಅವರೂ ಖುಷಿಯಾಗಿದ್ದಾರೆ. ಪುಟಾಣಿಯಿಂದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ಬಹುಶಃ ಕನ್ನಡ ಚಿತ್ರರಂಗದ ಮಟ್ಟಿಗೂ ಹೊಸದು. ಇನ್ನು ಚಿರಂಜೀವಿ ನಟನೆಯ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ‘ರಾಜಾಮಾರ್ತಾಂಡ’ ಕುರಿತು ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಡಬ್ ಮಾಡಲು ಶುರುಮಾಡಿದ್ದಾರೆ.

ಟ್ರೇಲರ್‌ಗೆ ಬೇಕಾದ ಡಬ್ಬಿಂಗ್ ಕೆಲಸ ಮುಗಿಸಿರುವ ಧ್ರುವ ತಮ್ಮ ‘ಪೊಗರು’ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಅವರು ಪೂರ್ಣಪ್ರಮಾಣದಲ್ಲಿ ಆ ಸಿನಿಮಾದ ಡಬ್ಬಿಂಗ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.  ಟ್ರೇಲರ್ ಬಿಡುಗಡೆಯ ಕೆಲವು ದಿನಗಳಲ್ಲಿ ‘ರಾಜಾಮಾರ್ತಾಂಡ’ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ನಟ ದರ್ಶನ್‌ ಕೂಡ ಈ ಸಿನಿಮಾದ ಬೆನ್ನಿಗೆ ನಿಂತಿದ್ದಾರೆ. ಚಿತ್ರದಲ್ಲಿ ದರ್ಶನ್ ಹಿನ್ನೆಲೆ ದನಿ ಇರಲಿದೆ. ಈ ಮೂಲಕ ಅಗಲಿದ ಗೆಳೆಯನಿಗೆ ಅವರ ಕಡೆಯಿಂದ ಶ್ರ‌ದ್ಧಾಂಜಲಿ ಅರ್ಪಣೆಯಾಗುತ್ತಿದೆ.

Categories
ಸಿನಿ ಸುದ್ದಿ

ಅಭಿಮಾನಿ ಹೃದಯದಲ್ಲಿ ಸಲಗ – ಎದೆ ಮೇಲೆ‌ ರಾರಾಜಿಸಿದ ಸಲಗನ ಕಂಡು ವಿಜಯ್‌ ಭಾವುಕ

“ದುನಿಯಾ” ವಿಜಯ್‌ ಅಭಿನಯದ “ಸಲಗ” ಸಿನಿಮಾ ರಿಲೀಸ್‌ಗೆ ಮುನ್ನವೇ ಜೋರು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ವಿಜಯ್‌ ಅವರ ಗೋವಾದ ಅಭಿಮಾನಿಯೊಬ್ಬ ತನ್ನ ಕೈ ಮೇಲೆ “ಸಲಗ” ಎಂಬ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದು ಗೊತ್ತೇ ಇದೆ. ಈಗ ಮತ್ತೊಬ್ಬ ಅಭಿಮಾನಿ ತನ್ನ ಎದೆಯ ಮೇಲೆಯೇ “ಸಲಗ” ಹೆಸರನ್ನ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ. ಹೌದು, ಅಭಿಮಾನಿ ಎದೆಯ ಮೇಲೆ ರಾರಾಜಿಸುತ್ತಿರುವ “ಸಲಗ” ಹೆಸರು ನೋಡಿದ ʼದುನಿಯಾʼ ವಿಜಯ್‌ ಅಭಿಮಾನಿಯ ಪ್ರೀತಿಯ ಅಭಿಮಾನಿಗೆ ಫಿದಾ ಆಗಿದ್ದಾರೆ.

ಸದ್ಯಕ್ಕೆ ಈಗ “ದುನಿಯಾ” ವಿಜಯ್ ಅಭಿಮಾನಿಗಳಿಂದ ಟ್ಯಾಟೋ‌ ಅಭಿಯಾನ ಕೊಂಚ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ ಒಂದು ರೀತಿ ಈ ಅಭಿಯಾನ ಸೆನ್ಸೇಷನ್ ಕೂಡ ಕ್ರಿಯೇಟ್ ಮಾಡುತ್ತಿದೆ. ದಿನ ಕಳೆದಂತೆ “ಸಲಗ” ಚಿತ್ರದ ಕ್ರೇಜ್ ಹೆಚ್ಚುತ್ತಲೇ ಇದೆ. ವಿಜಯ್ ಅಭಿಮಾನಿಗಳು‌ ತಮ್ಮ‌ ಪ್ರೀತಿಯ ನಟನ ಸಿನಿಮಾ‌ ಮೇಲೆ‌ ತುಸು ಹೆಚ್ಚಾಗಿಯೇ ಪ್ರೀತಿ ಬೆಳೆಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಹಾಗೂ ರಿಲೀಸ್ ಆಗಿರುವ ಹಾಡುಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

“ಸಲಗ” ಥಿಯೇಟರ್‌ಗೆ ಬರುವುದನ್ನು ಕಾತರದಿಂದಲೇ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ತಮ್ಮದೇ ಆದ ರೀತಿಯಲ್ಲೇ ಅವರು ಅಭಿಮಾನವನ್ನು ತೋರಿಸುತ್ತಿದ್ದಾರೆ. ಗೋವಾ ಕನ್ನಡಿಗನೊಬ್ಬ ತನ್ನ ಕೈ ಮೇಲೆ‌‌ ಟ್ಯಾಟೋ‌ ಹಾಕಿಸಿಕೊಂಡು ಅಭಿಮಾನ ತೋರಿದ್ದ ಬೆನ್ನಲ್ಲೇ ಈಗ ಇನ್ನೊಬ್ಬ ಅಭಿಮಾನಿ ತನ್ನ ಎದೆ ಮೇಲೇನೆ “ಸಲಗ” ಟ್ಯಾಟೋ‌ ಹಾಕಿಸಿಕೊಂಡು, ಖುದ್ದು ತಮ್ಮ ಪ್ರೀತಿಯ ನಟ ವಿಜಯ್‌ ಮನೆಗೆ ಬಂದು ಅವರ ಕೈಯಲ್ಲೇ ಆ ಟ್ಯಾಟೋ ಕವರ್‌ ಅನ್ನು ಬಿಚ್ಚಿಸಿಕೊಂಡಿದ್ದಾನೆ. ಅಭಿಮಾನಿಯ ಈ ಅಭಿಮಾನಕ್ಕೆ ವಿಜಯ್‌ ಅವರೇ ಖುದ್ದು ಭಾವುಕರಾಗಿ ಅಭಿಮಾನಿಗೆ ಶರಣಗಿದ್ದಾರೆ.

Categories
ಸೌತ್‌ ಸೆನ್ಸೇಷನ್

ಓಟಿಟಿಯಲ್ಲಿ ದೃಶ್ಯಂ-2 – ಫೆ.19ರಿಂದ ಮೋಹನ್‌ ಲಾಲ್‌ ಚಿತ್ರ ನೋಡಬಹುದು

ಮೋಹನ್ ಲಾಲ್ ಮತ್ತು ಮೀನಾ ನಟನೆಯ ‘ದ್ಯಶ್ಯಂ’ (2013) ಮಲಯಾಳಂ ಸಿನಿಮಾ ಥ್ರಿಲ್ಲರ್ ಮಾದರಿಗೆ ಹೊಸ ಭಾಷ್ಯ ಬರೆದ ಪ್ರಯೋಗ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ, ಸಿನ್ಹಳ ಭಾಷೆಗಳಲ್ಲಷ್ಟೇ ಅಲ್ಲದೆ ಚೀನಾ ಭಾಷೆಗೂ ರೀಮೇಕ್ ಆಗಿತ್ತು. ಇದೀಗ ‘ದೃಶ್ಯಂ’ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ಸರಣಿ ಸಿನಿಮಾ ‘ದೃಶ್ಯಂ-2’ ಸಿದ್ಧಪಡಿಸಿದ್ದಾರೆ. ವಿಶೇಷವೆಂದರೆ ಈ ಸಿನಿಮಾ ನಾಡಿದ್ದು 19ರಂದು ನೇರವಾಗಿ ಓಟಿಟಿಯಲ್ಲಿ (ಅಮೇಜಾನ್ ಪ್ರೈಂ ವೀಡಿಯೋ) ಪ್ರೀಮಿಯರ್ ಆಗಲಿದೆ.

ಸ್ಟಾರ್ ಹೀರೋ ಮೋಹನ್‌ಲಾಲ್‌ ನಟನೆಯ ಚಿತ್ರವೊಂದು ಓಟಿಟಿಯಲ್ಲಿ ತೆರೆಕಾಣುತ್ತಿದ್ದು, ಇದು ಹೊಸ ಬೆಳವಣಿಗೆಗಳಿಗೆ ನಾಂದಿಯಾಗಲಿದೆ ಎನ್ನುವುದು ಉದ್ಯಮದವರ ಅಂಬೋಣ.
ಇನ್ನು ‘ದೃಶ್ಯಂ-2’ ಚಿತ್ರದ ಬಗ್ಗೆ ಅವರು ಮಾತನಾಡುತ್ತಾ, “ಥ್ರಿಲ್ಲರ್ ಸಿನಿಮಾದೆಡೆ ಪ್ರೇಕ್ಷಕರ ಕಲ್ಪನೆಯನ್ನೇ ಬದಲಿಸಿದ ಸಿನಿಮಾ ದೃಶ್ಯಂ. ಇಲ್ಲಿ ಪ್ರೀತಿ ಮತ್ತು ಬಲವಾದ ಕೌಟುಂಬಿಕ ಬೆಸುಗಿ ಇದೆ. ಇದೇ ಕಾರಣಕ್ಕೇ ಜನರು ಈ ಚಿತ್ರವನ್ನು ಪ್ರೀತಿಯಿಂದ ಒಪ್ಪಿಕೊಂಡರು” ಎನ್ನುತ್ತಾರೆ ಚಿತ್ರದಲ್ಲಿ ಜಾರ್ಜ್‌ ಕುಟ್ಟಿ ಪಾತ್ರದಲ್ಲಿ ನಟಿಸಿರುವ ಮೋಹನ್‌ ಲಾಲ್‌.
ನಾಲ್ಕು ದಶಕಗಳ ಸಿನಿಮಾ ಬದುಕಿನಲ್ಲಿ ಮೋಹನ್‌ಲಾಲ್‌ 340ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

‘ದೃಶ್ಯಂ-2’ ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಅವರು ಸಿನಿಮಾಗಳಲ್ಲಿ ತಮಗೆ ದೊರೆತ ವೈವಿಧ್ಯಮಯ ಪಾತ್ರಗಳನ್ನು ನೆನಪು ಮಾಡಿಕೊಂಡು ಅಚ್ಚರಿ ಪಡುತ್ತಾರೆ. “ನಾನು ನನ್ನ ಚಿತ್ರದ ನಿರ್ದೇಶಕರು, ಚಿತ್ರಕಥೆಗಾರರು, ಸಹಕಲಾವಿದರು ಹಾಗೂ ಅಭಿಮಾನಿಗಳ ಬಗ್ಗೆ ನಂಬಿಕೆ ಇಡುತ್ತೇನೆ. ನಾನು ಆಯ್ಕೆ ಮಾಡಿಕೊಳ್ಳುವ ಚಿತ್ರಕಥೆಗಳು ಹಾಗೂ ನಿರ್ದೇಶಕರೇ ಬಹುಶಃ ನನ್ನ ಇಲ್ಲಿಯವರೆಗಿನ ಯಶಸ್ಸಿಗೆ ಕಾರಣವಿರಬಹುದು” ಎನ್ನುತ್ತಾರೆ ಮೋಹನ್‌ಲಾಲ್‌.

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಗೃಹ ಪ್ರವೇಶ- ಫೆಬ್ರವರಿ 28ಕ್ಕೆ ಮುಹೂರ್ತ ಇಟ್ಟ ಕಿಚ್ಚ ಸ್ವಾಮಿ!

ಈಗ ಎಲ್ಲರಿಗೂ ಆ ಮನೆಯದ್ದೇ ಚಿಂತೆ!
ಅರೇ ಹೀಗೆಂದಾಕ್ಷಣ, ಒಂದಷ್ಟು ಪ್ರಶ್ನೆಗಳು ಮೂಡಿಬರೋದು ಸಹಜ. ಇಲ್ಲೀಗ ಹೇಳಹೊರಟಿರುವುದು ಬಿಗ್‌ಬಾಸ್‌ ಮನೆ ಕುರಿತು. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ “ಬಿಗ್ ಬಾಸ್ ಸೀಸನ್ 8” ಕ್ಕೆ ಕ್ಷಣಗಣನೆ ಶುರುವಾಗಿದೆ. ನಟ ಸುದೀಪ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಹಿಂದೆ ನಡೆಸಿಕೊಟ್ಟಿರುವ ಅಷ್ಟೂ ಸೀಸನ್‌ಗಳೂ ಸಾಕಷ್ಟು ಮೆಚ್ಚುಗೆ ಪಡೆದಿವೆ. ಈಗ ಎಂಟನೇ ಆವೃತ್ತಿಗೆ ಸಜ್ಜಾಗಿದೆ ಬಿಗ್‌ಬಾಸ್‌ ಟೀಮ್.‌ ಫೆಬ್ರವರಿ 28ರ ಸಂಜೆ 6ಕ್ಕೆ “ಬಿಗ್‌ಬಾಸ್‌” ಗ್ರ್ಯಾಂಡ್‌ ಓಪನಿಂಗ್‌ ಪಡೆಯಲಿದೆ. ಸದ್ಯಕ್ಕೆ ಬಿಗ್‌ಬಾಸ್‌ ಮನೆಗೆ ಈ ಬಾರಿ ಯಾರೆಲ್ಲಾ ಹೋಗಲಿದ್ದಾರೆ ಎಂಬುದು ಇನ್ನೂ ಗೌಪ್ಯವಾಗಿದೆ.

ಆ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಬಿಗ್‌ಬಾಸ್‌ ನಡೆಸಿಕೊಡಲಿರುವ ಸುದೀಪ ಅವರನ್ನೊಳಗೊಂಡಂತೆ ಬಿಗ್‌ಬಾಸ್‌ ತಂಡಕ್ಕೆ ಮಾತ್ರ ಗೊತ್ತಿದೆ. ಸದ್ಯಕ್ಕೆ ಎಲ್ಲರಿಗೂ ಬಿಗ್‌ಬಾಸ್‌ ಮೇಲೆ ಕಣ್ಣು. ಆದರೆ, ಬಿಗ್‌ಬಾಸ್‌ ಮಾತ್ರ ಆ ಮನೆಯೊಳಗಿರುವ ಸ್ಪರ್ಧಿಗಳ ಮೇಲೆ ಕಣ್ಣು. ಇಲ್ಲಿ ಯಾರ ಕಣ್ಣು ಯಾರ ಮೇಲಿದೆಯೋ ಗೊತ್ತಿಲ್ಲ. ಆದರೆ, ಈ ಬಾರಿ ಒಂದಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ. ಅದಕ್ಕೆ ಕಾರಣ, ಇನ್ನೂ ಸ್ಪರ್ಧಿಗಳು ಯಾರು ಅನ್ನೂವುದು. ಅಂದಹಾಗೆ, ಇತ್ತೀಚೆಗಷ್ಟೇ, ಸುದೀಪ್‌ ಸ್ವಾಮೀಜಿ ಗೆಟಪ್‌ನಲ್ಲಿ ಕಾಣಿಸಿಕೊಂಡು, ಬಿಗ್‌ಬಾಸ್‌ ಮನೆ ಆರಂಭಕ್ಕೆ ದಿನಾಂಕ ನಿಗದಿ ಮಾಡಿದ್ದರು. ವಿಭಿನ್ನ ಯೋಚನೆಯ ಜಾಹಿರಾತು ಮೂಲಕ ಬಿಗ್‌ಬಾಸ್‌ ಸೀಸನ್‌ ೮ಕ್ಕೆ ಡೇಟ್‌ ಫಿಕ್ಸ್‌ ಮಾಡಲಾಗಿದೆ. ಸದ್ಯಕ್ಕೆ ನೂರು ದಿನಗಳ ಕಾಲ ಆ ಮನೆಯಲ್ಲಿ ಯಾರೆಲ್ಲಾ ಇರುತ್ತಾರೆ, ಈ ಬಾರಿ ಎಂಥೆಂಥಾ ಪ್ರಸಂಗಗಳು ನಡೆಯುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ರಾಘವೇಂದ್ರ ರಾಜಕುಮಾರ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

ನಟ ರಾಘವೇಂದ್ರ ರಾಜಕುಮಾರ್ ಅವರನ್ನು ಮಂಗಳವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಯಶವಂತಪುರದ‌ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಘವೇಂದ್ರ ರಾಜಕುಮಾರ್ ಅವರ ಜೊತೆ ಪುನೀತ್ ರಾಜ್‍ಕುಮಾರ್ ಕೂಡ ಇದ್ದು, ನೋಡಿಕೊಳ್ಳುತ್ತಿದ್ದಾರೆ.
“ನಮ್ಮ ತಂದೆ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜಕುಮಾರ್ ಹೇಳಿದ್ದಾರೆ.
ಸದ್ಯ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಾಳೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗುವ ಬಗ್ಗೆ ಕುಟುಂಬದವರು ಹೇಳಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಡ್ ಮ್ಯಾನರ್ಸ್ ತಂಡ ಸೇರಿದ ತಾರಾ – ಅಂಬರೀಷ್ ಜೊತೆ ನಟಿಸಿದ್ದ ಅವರೀಗ ರೆಬೆಲ್ ಮಗನ ಜೊತೆಯೂ ನಟನೆ

 

ಕನ್ನಡ ಚಿತ್ರರಂಗದಲ್ಲಿ ಬಹುತೇಕ ಹಿರಿಯ ನಟರಿಂದ ಹಿಡಿದು ಅನೇಕ ಸ್ಟಾರ್ ನಟರ ಜೊತೆ ನಟಿಸಿರುವ ನಟಿ‌ ತಾರಾ, ಸಾಕಷ್ಟು ಹೊಸ ಪ್ರತಿಭೆಗಳ ಜೊತೆಯಲ್ಲೂ ಕಾಣಿಸಿಕೊಡಿದ್ದಾರೆ. ಇದೀಗ, ಅಭಿಷೇಕ್ ಅಂಬರೀಶ್ ಜೊತೆ ನಟಿಸುತ್ತಿದ್ದಾರೆ.

ಹೌದು, “ಬ್ಯಾಡ್ ಮ್ಯಾನರ್ಸ್” ಚಿತ್ರಕ್ಕೆ ಈಗ ರಾಷ್ಟ್ರ ಪ್ರಶಸ್ತಿ ವಿಜೇತೆ, ನಟಿ ತಾರಾ ಅನುರಾಧ ಅವರ ಎಂಟ್ರಿಯಾಗಿದೆ.ತಾರಾ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರೊಂದಿಗೂ ನಟಿಸಿದ್ದರು. ಈಗ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ವಿಶೇಷ ಅಂದರೆ, ನಿರ್ದೇಶಕ “ದುನಿಯಾ” ಸೂರಿಯವರ ಚಿತ್ರದಲ್ಲಿ ತಾರಾ ಮೊದಲ ಸಲ ನಟಿಸುತ್ತಿದ್ದಾರೆ. ಹೀಗಾಗಿ‌ತಾರಾ ಅವರು ಸಹಜವಾಗಿಯೇ ಖುಷಿಯಾಗಿದ್ದಾರೆ. ಸದ್ಯಕ್ಕೆ ತಾರಾ ಅವರೀಗ, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Categories
ಸಿನಿ ಸುದ್ದಿ

ಅಮೀರ್‌ ಸಿನಿಮಾದಿಂದ ಸೇತುಪತಿ ಹೊರ ಬಂದಿದ್ದೇಕೆ!?

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಅಮೀರ್ ಖಾನ್‌ರ ‘ಲಾಲ್ ಸಿಂಗ್ ಛಡ್ಡಾ’ ಹಿಂದಿ ಚಿತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಬೇಕಿತ್ತು. ಟಾಮ್ ಹ್ಯಾಂಕ್‌ ನಟಿಸಿದ್ದ ಜನಪ್ರಿಯ ಹಾಲಿವುಡ್ ಸಿನಿಮಾ ‘ಫಾರೆಸ್ಟ್ ಗಂಪ್‌’ ರೀಮೇಕಿದು. ಅಮೀರ್ ನಾಯಕನಾಗಿ ನಟಿಸುತ್ತಿದ್ದರೆ ಚಿತ್ರದಲ್ಲಿ ಇನ್ನೆರೆಡು ಪ್ರಮುಖ ಪಾತ್ರಗಳಿದ್ದವು. ಕರೀನಾ ಕಪೂರ್‌ ಅವರದ್ದು ಒಂದು ಪಾತ್ರ. ಮತ್ತೊಂದು ಪ್ರಮುಖ ಪಾತ್ರಕ್ಕೆ ವಿಜಯ್ ಸೇತುಪತಿ ಆಯ್ಕೆಯಾಗಿದ್ದರು.


ಕೋವಿಡ್ ಕಾರಣದಿಂದಾಗಿ ‘ಲಾಲ್ ಸಿಂಗ್ ಛಡ್ಡಾ’ ಶೂಟಿಂಗ್ ನಿಂತುಹೋಗಿತ್ತು. ಮತ್ತೆ ಚಿತ್ರೀಕರಣ ಆರಂಭವಾದಾಗ ಚಿತ್ರತಂಡದಲ್ಲಿ ಸೇತುಪತಿ ಹೆಸರು ಬಿಟ್ಟುಹೋಗಿತ್ತು. “ಸೇತುಪತಿ ಹಿಂದಿ ಚಿತ್ರಕ್ಕಾಗಿ ತಮ್ಮ ದೇಹದ ತೂಕ ಇಳಿಸಿಕೊಳ್ಳಬೇಕಿತ್ತು. ಅದು ಸಾಧ್ಯವಾಗದ ಕಾರಣ ಅವರು ಚಿತ್ರದಿಂದ ಹೊರಗುಳಿಯಬೇಕಾಯ್ತು” ಎನ್ನುವ ವದಂತಿಯಿತ್ತು. ಈ ವದಂತಿಗಳನ್ನು ಅಲ್ಲಗಳೆದಿರುವ ಅವರು, “ಕೋವಿಡ್ ಕಾರಣದಿಂದಾಗಿ ನನ್ನ ಸಿನಿಮಾ ಯೋಜನೆಗಳೆಲ್ಲಾ ತಲೆಕೆಳಗಾದವು. ಐದು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಹಾಗಾಗಿ ಹಿಂದಿ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.

ಹಿಂದಿ ಚಿತ್ರದಲ್ಲಿ ನಟಿಸುವಂತೆ ಸ್ವತಃ ಅಮೀರ್ ಖಾನ್ ಅವರೇ ಒತ್ತಡ ತಂದಿದ್ದರು ಎನ್ನುತ್ತಾರೆ ಸೇತುಪತಿ. “ತಮಿಳುನಾಡಿನಲ್ಲಿ ನನ್ನ ಚಿತ್ರದ ಶೂಟಿಂಗ್ ನಡೆಯುವಲ್ಲಿಯೇ ಅಮೀರ್ ಬಂದಿದ್ದರು. ಕಾರಣಾಂತರಗಳಿಂದ ಚಿತ್ರದ ನಿರ್ದೇಶಕ ಅದ್ವೈತ್‌ ಚಂದನ್ ಬಂದಿರಲಿಲ್ಲ. ಅಮೀರ್ ಸ್ಕ್ರಿಪ್ಟ್ ಹಾಗೂ ನನ್ನ ಪಾತ್ರದ ಬಗ್ಗೆ ಹೇಳಿದ್ದರು. ಅವರು ಕತೆ ಹೇಳುವ ರೀತಿಯೇ ಸೊಗಸು. ಬ್ಯುಸಿ ಶೆಡ್ಯೂಲ್‌ನಿಂದಾಗಿ ಹಿಂದಿ ಚಿತ್ರ ಕೈತಪ್ಪಿತು. ಮುಂದೊಮ್ಮೆ ಅವರೊಂದಿಗೆ ನಟಿಸುವ ಅವಕಾಶ ಕಳೆದುಕೊಳ್ಳುವುದಿಲ್ಲ” ಎನ್ನುವ ಅವರು ವದಂತಿಗಳನ್ನು ಸಂಪೂರ್ಣ ಅಲ್ಲಗಳೆಯುತ್ತಾರೆ.

Categories
ಸಿನಿ ಸುದ್ದಿ

ಹಾರರ್‌ ಸಿನಿಮಾ ರೂಹಿ ಟ್ರೇಲರ್ ಔಟ್‌!

ಹಾರ್ದಿಕ್ ಮೆಹ್ತಾ ನಿರ್ದೇಶನದ ‘ರೂಹಿ’ ಕಾಮಿಡಿ-ಹಾರರ್ ಹಿಂದಿ ಸಿನಿಮಾದ ‌ಟ್ರೇಲರ್‌  ಇಂದು ಬಿಡುಗಡೆಯಾಗಿದೆ. ಹಾರರ್‌ಗೆ ಅಗತ್ಯವಿರುವ ಹಿನ್ನೆಲೆ ಸಂಗೀತ, ಗ್ರಾಫಿಕ್ ವಿ‍ಶ್ಯುಯಲ್ಸ್‌ಗಳೊಂದಿಗೆ ನೋಡುಗರಿಗೆ ಅಂಜಿಕೆ ಬರುವಂತಿದೆ ಟ್ರೇಲರ್.‌  ರಾಜ್‌ಕುಮಾರ್ ರಾವ್, ಜಾಹ್ನವಿ ಕಪೂರ್ ಮತ್ತು ವರುಣ್ ಶರ್ಮಾ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಹಾರರ್‌ ಜೊತೆ ಸಂದೇಶವೊಂದನ್ನು ಸಾರುವ ಸೂಚನೆ ನೀಡುತ್ತದೆ.

ಹಾರ್ದಿಕ್ ಮೆಹ್ತಾ ಈ ಹಿಂದೆ ‘ಕಾಮ್‌ಯಾಬ್‌’ (2018) ಹಿಂದಿ ಸಿನಿಮಾ ನಿರ್ದೇಶಿಸಿದ್ದರು. ಅದಕ್ಕೂ ಎರಡು ವರ್ಷಗಳ ಹಿಂದೆ  ‘ಟ್ರಾಪ್ಡ್‌’ ಚಿತ್ರಕಥೆಯಲ್ಲಿ ಭಾಗಿಯಾಗಿದ್ದವರು. ‘ರೂಹಿ’ಯಾಗಿ ಜಾಹ್ನವಿ ಕಪೂರ್ ವಸ್ತ್ರವಿನ್ಯಾಸ, ಮೇಕಪ್‌ ಸೂಕ್ತವಾಗಿದ್ದು, ಜಾಹ್ನವಿ ಪಾತ್ರವನ್ನು ಅರಿತು ನಟಿಸಿರುವಂತಿದೆ. ಮದುವೆ ನಂತರ ಹನಿಮೂನ್‌ಗೆ ತೆರೆಳುವ ದಂಪತಿ ಕಂಡರೆ ಪ್ರೇತಾತ್ಮ ‘ರೂಹಿ’ಗೆ ಅಸಮಾಧಾನ.

ರೂಹಿಯಿಂದ ಯುವತಿಯರನ್ನು ರಾಜ್‌ಕುಮಾರ್ ರಾವ್ ಮತ್ತು ವರುಣ್ ಶರ್ಮಾ ಹೇಗೆ ಕಾಪಾಡುತ್ತಾರೆ ಎನ್ನುವುದು ಕಥಾವಸ್ತು. ಇಬ್ಬರು ನಾಯಕರು ಪ್ರೇತಾತ್ಮದ ಬಗ್ಗೆ ಕನಿಕರದಿಂದ ಸಮಸ್ಯೆಯನ್ನು ನಿಭಾಯಿಸುವಾಗ ಸಂಭವಿಸುವ ತಮಾಷೆಗಳು ಅಲ್ಲಲ್ಲಿ ಕಾಣಿಸುತ್ತವೆ. ಕತ್ತನ್ನು 360 ಡಿಗ್ರಿ ತಿರುಗಿಸುವುದು, ಕಾಲುಗಳನ್ನು ತಿರುವು, ಮುರುವು ಮಾಡುವ ‘ರೂಹಿ’ ಪಾತ್ರದಲ್ಲಿ ಜಾಹ್ನವಿ ಭರವಸೆ ಮೂಡಿಸುತ್ತಾರೆ.

Categories
ಸಿನಿ ಸುದ್ದಿ

ಮಿತ್ರ ಫಿಲ್ಮ್‌ ಅಕಾಡೆಮಿ – ನಟಿಸೋರಿಗೊಂದು ಹೊಸ ವೇದಿಕೆ ಕಲ್ಪಿಸಿಕೊಟ್ಟ ಹಾಸ್ಯ ಕಲಾವಿದ

ಹಾಸ್ಯ ನಟ ಕಮ್‌ ನಿರ್ಮಾಪಕ ಮಿತ್ರ ಅಂದಾಕ್ಷಣ ನೆನಪಾಗೋದೇ “ರಾಗ” ಎಂಬ ಅದ್ಭುತ ಸಿನಿಮಾ. ಹೌದು, ಈ ಚಿತ್ರದ ಮೂಲಕ ನಿರ್ಮಾಪಕ ಎನಿಸಿಕೊಂಡ ಮಿತ್ರ, ಒಂದೊಳ್ಳೆಯ ಸಿನಿಮಾ ನಿರ್ಮಿಸಿದ ಕಲಾವಿದ ಎಂಬ ಮಾತಿಗೂ ಕಾರಣರಾದರು. ನೂರಾರು ಸಿನಿಮಾಗಳ ಮೂಲಕ ಕನ್ನಡ ಚಿತ್ರರಸಿಕರ ಪಾಲಿಗೆ ಪ್ರೀತಿಯ ನಟ ಎನಿಸಿಕೊಂಡಿರುವ ಮಿತ್ರ ಅವರೀಗ ಹೊಸದೊಂದು ಕಾರ್ಯಕ್ಕೆ ಕೈ ಹಾಕಿದ್ದಾರೆ. ಹಾಗಂತ, ಹೊಸ ಸಿನಿಮಾ ನಿರ್ಮಾಣಕ್ಕಿಳಿದು ಬಿಟ್ಟರಾ? ಈ ಪ್ರಶ್ನೆ ಎದುರಾಗೋದು ಸಹಜ.

ಆದರೆ, ಮಿತ್ರ, ಹೊಸ ಸಿನಿಮಾ ಮಾಡೋಕೆ ಸಜ್ಜಾಗಿರೋದು ಸತ್ಯ. ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಿವೆಯಾದರೂ, ಈಗ ಅವರೊಂದು ಹೊಸ ಯೋಚನೆಯಲ್ಲಿದ್ದಾರೆ. ಆ ಯೋಚನೆ ಮತ್ತು ಯೋಜನೆ ಬೇರೇನೂ ಅಲ್ಲ, ಅವರೀಗ “ಆರ್‌ಕೆ ಮಿತ್ರ ಫಿಲ್ಮ್‌ ಅಕಾಡೆಮಿ” ಶುರು ಮಾಡಿದ್ದಾರೆ. ಇದು ಅವರ ಹೊಸ ಕನಸು. ಅವರ ಈ ಹೊಸ ಯೋಜನೆ ಅವರದೇ ಕೂರ್ಗ್‌ನಲ್ಲಿರುವ ಸ್ವರ್ಣಭೂಮಿ ರೆಸಾರ್ಟ್‌ನಲ್ಲಿ ಶುರುವಾಗುತ್ತಿದೆ. ಫೆಬ್ರವರಿ ೨೮ರಿಂದ ಶುರುವಾಗಲಿರುವ ಆವರ “ಆರ್‌ಕೆ ಮಿತ್ರ ಫಿಲ್ಮ ಅಕಾಡೆಮಿ” ಮೂಲಕ ಕೇವಲ ನಟನಾ ತರಬೇತಿ ನಡೆಯಲಿದೆ. ಇದೊಂದು ವಿನೂತನ ಮತ್ತು ಅಪರೂಪ ಎನಿಸುವ ನಟನಾ ತರಬೇತಿ ಎನ್ನುವ ಮಿತ್ರ, “ಸಿನಿಲಹರಿ” ಜೊತೆ ತಮ್ಮ ಅಕಾಡೆಮಿಯೊಳಗಿನ ಮಾಹಿತಿ ಹಂಚಿಕೊಂಡರು.


“ನಾನೊಬ್ಬ ಹಾಸ್ಯ ಕಲಾವಿದನಾಗಿ. ಸದಾ ಹೊಸತನ್ನೇ ಬಯಸುತ್ತಿರುತ್ತೇನೆ. ಏನಾದರೊಂದು ಮಾಡಬೇಕೆಂಬ ತುಡಿತ ನನ್ನದು. ಆ ನಿಟ್ಟಿನಲ್ಲಿ ನಾನು ಸಿನಿಮಾರಂಗದಲ್ಲಿದ್ದುಕೊಂಡೇ “ರಾಗ” ಎಂಬ ಒಂದೊಳ್ಳೆಯ ಚಿತ್ರವನ್ನು ನಿರ್ಮಿಸಿದೆ. ಅದರಿಂದ ನನಗೆ ಹಣ ಬರದಿದ್ದರೂ, ಒಂದೊಳ್ಳೆಯ ಸಿನಿಮಾ ಮಾಡಿದ ತೃಪ್ತಿ ಇದೆ. ಇನ್ನು, ಇದರ ನಡುವೆ ನಾನು ನಟನೆಯಲ್ಲೂ ಬಿಝಿ ಇದ್ದೇನೆ. ಒಂದಷ್ಟು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಕೆಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಇನ್ನಷ್ಟು ಚಿತ್ರಗಳ ಮಾತುಕತೆಯೂ ನಡೆಯುತ್ತಿದೆ. ಇದರ ನಡುವೆಯೇ ನಾನು ಕೂರ್ಗ್‌ನಲ್ಲಿ ಸ್ವರ್ಣಭೂಮಿ ರೆಸಾರ್ಟ್‌ವೊಂದನ್ನು ನಡೆಸುತ್ತಿದ್ದೇನೆ. ಮೂಲತಃ ರೆಸಾರ್ಟ್‌ ಉದ್ಯಮದಿಂದಲೇ ನಾನು ಸಿನಿಮಾ ಲೋಕಕ್ಕೆ ಬಂದವನು. ಹಾಗಾಗಿ, ರೆಸಾರ್ಟ್‌ ಜೊತೆ ನನಗೆ ಅವಿನಾಭಾವ ಸಂಬಂಧವೂ ಇದೆ. ಈಗ ಕೂರ್ಗ್‌ನಲ್ಲಿ ವಿಶಾಲವಾಗಿ, ಸುಸಜ್ಜಿತವಾಗಿ ತಲೆಎತ್ತಿರುವ ಸ್ವರ್ಣಭೂಮಿ ರೆಸಾರ್ಟ್‌ನಲ್ಲೀ “ಆರ್‌ಕೆ ಮಿತ್ರ ಫಿಲ್ಮ ಅಕಾಡೆಮಿ” ಶುರು ಮಾಡಿ, ಆ ಮೂಲಕವೇ ರಂಗತರಬೇತಿ ಶಿಬಿರ ಆಯೋಜಿಸುತ್ತಿದ್ದೇನೆ. ಅದು ಹದಿನೈದು ದಿನಗಳ ಶಿಬಿರವಾಗಿದ್ದು, ಅಲ್ಲಿ ನಟನೆ ತರಗತಿ ಮಾತ್ರ ನಡೆಯಲಿದೆ.

ಈ ಹದಿನೈದು ದಿನಗಳಲ್ಲಿ ನುರಿತ ಕಲಾವಿದರು, ತಾಂತ್ರಿಕ ವರ್ಗದವರು, ಸಿನಿಮಾ ಪತ್ರಕರ್ತರು ಬಂದು ಶಿಬಿರಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ನಟನೆ ಬಗ್ಗೆ ಒಂದಷ್ಟು ಮಾಹಿತಿಯನ್ನೂ ಕೊಡಲಿದ್ದಾರೆ. ಉಳಿದಂತೆ ಶಿಬಿರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿತಿಗಳಿಗೆ ನಾವೇ ಕಿರುಚಿತ್ರ ತಯಾರು ಮಾಡಿ, ಅವರ ಪ್ರತಿಭೆಗೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹದಿನೈದು ದಿನಗಳ ಕಾಲ ಅಲ್ಲೇ ವಾಸ್ತವ್ಯ, ಊಟ, ತಿಂಡಿಯ ವ್ಯವಸ್ಥೆಯೂ ಇರಲಿದೆ. ಹದಿನೈದು ದಿನಗಳ ಕಾಲ ರೆಸಾರ್ಟ್‌ನಲ್ಲಿ ತಂಗುವುದರ ಜೊತೆಗೆ ಸುಪ್ತ ಪ್ರತಿಭೆ ಆಚೆ ತರುವ ಕೆಲಸ ನಡೆಯುತ್ತದೆ. ಹೆಚ್ಚಿನ ವಿವರಗಳಿಗೆ “www.rkmithrafilmacademy.com” ವೆಬ್‌ಸೈಟ್‌ ವೀಕ್ಷಿಸಬಹುದಾಗಿದೆ.


ವಿಶೇಷವಾಗಿ ಹೇಳುವುದಾದರೆ, ಈ ಹದಿನೈದು ದಿನದ ತರಬೇತಿಯ ಬ್ಯಾಚ್‌ನಲ್ಲಿ ಕೇವಲ ೨೦ ಜನರಿಗೆ ಮಾತ್ರ ಅವಕಾಶವಿದೆ. ತಿಂಗಳಿಗೊಂದು ಬ್ಯಾಚ್‌ ನಡೆಯುತ್ತಿದ್ದು, 20 ಜನರ ಮೇಲೆ ಎಷ್ಟೇ ಹಣ ಕೊಟ್ಟರೂ, ಅವಕಾಶ ಇರುವುದಿಲ್ಲ. ಇಲ್ಲಿ ಹಣಕ್ಕಿಂತ ಮೊದಲು, ಒಂದೊಳ್ಳೆಯ ವೇದಿಕೆ ಕಲ್ಪಿಸಬೇಕೆಂಬುದು ನಮ್ಮ ಉದ್ದೇಶ. ನಿರ್ದೇಶನದ ಕನಸು ಕಟ್ಟಿಕೊಂಡಿರುವವರಿಗೆ ಇಲ್ಲಿ ಕಿರುಚಿತ್ರ ನಿರ್ದೇಶನಕ್ಕೂ ಅವಕಾಶ ಮಾಡಿಕೊಡುತ್ತಿದ್ದು, ಆ ಕಿರುಚಿತ್ರದ ನಿರ್ಮಾಣವನ್ನೂ ಆರ್‌ಕೆ ಮಿತ್ರ ಫಿಲ್ಮ್ಮ್ಸ್‌ ಅಕಾಡೆಮಿ ನೋಡಿಕೊಳ್ಳಲಿದೆ. ಅವರ ಶಾರ್ಟ್‌ ಸಿನಿಮಾ ನಮ್ಮದೇ ಚಾನೆಲ್‌ನಲ್ಲೂ ಪ್ರಸಾರ ಮಾಡಲಿದ್ದೇವೆ. ರಾಜ್ಯದ ಯಾವುದೇ ಮೂಲೆಯಿಂದಲೂ ಸಿನಿಮಾ ಮೇಲೆ ಪ್ರೀತಿ ಇದ್ದವರು ಬಂದವರಿಗೆ ಇಲ್ಲಿ ಅವಕಾಶವಿದೆ. ಮೊದಲು ರಿಜಿಸ್ಟರ್‌ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಇಲ್ಲಿ ಸಂಪೂರ್ಣ ಹೊಸ ರೀತಿಯ ಅನುಭವದ ಜೊತೆ, ನಟನೆ ಕಲಿಕೆಯ ವೇದಿಕೆ ವ್ಯವಸ್ಥೆ ಮಾಡಲಾಗುವುದು” ಎನ್ನುತ್ತಾರೆ ಮಿತ್ರ.

Categories
ಸಿನಿ ಸುದ್ದಿ

ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ… ಹೀಗಂತ ದರ್ಶನ್‌ ಟಾಂಗ್‌ ಕೊಟ್ಟಿದ್ದು ಯಾರಿಗೆ? ವೈರಲ್‌ ಆಯ್ತು ರಾಬರ್ಟ್‌‌ ಅಫಿಶಿಯಲ್ ಟ್ರೇಲರ್

 

“ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ…
– ಇದು ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಅವರ ಖದರ್‌ ಡೈಲಾಗ್.‌ ಇಂಥದ್ದೊಂದು ಸಖತ್‌ ಡೈಲಾಗ್‌ ಇರೋದು. “ರಾಬರ್ಟ್‌” ಟ್ರೇಲರ್‌ನಲ್ಲಿ. ಹೌದು, ಫೆಬ್ರವರಿ 16ರಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹುಟ್ಟುಹಬ್ಬ. ಅವರ ಬರ್ತ್‌ಡೇಗೆ “ರಾಬರ್ಟ್‌” ಚಿತ್ರತಂಡ ಅದ್ಧೂರಿಯಾಗಿರುವ ಒಂದು ಟ್ರೇಲರ್‌ ಬಿಡುಗಡೆ ಮಾಡಿದೆ. ನಿಜಕ್ಕೂ ಅದೊಂದು ಅದ್ಭುತವಾಗಿ ರೂಪುಗೊಂಡಿರುವ ಟ್ರೇಲರ್.‌ ಆ ಟ್ರೇಲರ್‌ ನೋಡಿದ ಪ್ರತಿಯೊಬ್ಬ ದರ್ಶನ್‌ ಅಭಿಮಾನಿಗಳು ಖುಷ್.‌

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಟ್ರೇಲರ್‌ನಲ್ಲಿ ಭರ್ಜರಿ ಮಾಸ್‌ ಡೈಲಾಗ್‌ಗಳಿವೆ. ಅದರಲ್ಲೂ, ಮೇಕಿಂಗ್‌ ಬಗ್ಗೆ ಹೇಳುವಂತೆಯೇ ಇಲ್ಲ. ಟ್ರೇಲರ್‌ ನೋಡಿದವರಿಗೆ “ರಾಬರ್ಟ್‌” ದರ್ಶನ ಮಾಡಲೇಬೇಕು ಎಂಬಷ್ಟರ ಮಟ್ಟಿಗೆ ನಿರ್ದೇಶಕ ತರುಣ್‌ ಸುಧೀರ್‌ ಅವರು ಟ್ರೇಲರ್‌ ಕಟ್‌ ಮಾಡಿಸಿದ್ದಾರೆ. ಆ ಟ್ರೇಲರ್‌ ನೋಡಿದವರಿಗೆ ಸಿನಿಮಾದ ಕ್ವಾಲಿಟಿ ಮತ್ತು ಅದ್ಧೂರಿತನ ಗೊತ್ತಾಗುತ್ತೆ. ದರ್ಶನ್ ಅವರ ಹೊಸ ಲುಕ್ ಇಲ್ಲಿ ಸ್ಪೆಷಲ್ ಎನಿಸುತ್ತೆ. ಸಾಕಷ್ಟು ಪವರ್‌ ಕೂಡ ಇದೆ. ಇನ್ನು, ಇಡೀ ಟ್ರೇಲರ್‌ನಲ್ಲಿ ಅಬ್ಬರದ ಡೈಲಾಗ್‌ಗಳೇ ತುಂಬಿವೆ.


“ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ..” ಎಂಬ ಡೈಲಾಗ್‌ ಕೇಳಿದವರಿಗೆ ದರ್ಶನ್‌ ಅವರು ಯಾರಿಗೆ ಈ ಡೈಲಾಗ್‌ ಮೂಲಕ ಟಾಂಗ್‌ ಕೊಟ್ಟಿದ್ದಾರೆ ಎಂಬ ಪ್ರಶ್ನೆಗಳೂ ಗಿರಕಿ ಹೊಡೆಯುತ್ತವೆ. ಅಷ್ಟೇ ಅಲ್ಲ, ಅವರ ಇನ್ನೊಂದು ಡೈಲಾಗ್‌ ಕೂಡ ಅಂಥದ್ದೊಂದು ಪ್ರಶ್ನೆಗೂ ಕಾರಣವಾಗುತ್ತೆ. “ಒಬ್ಬರ ಲೈಫಲ್ಲಿ ನಾವ್‌ ಹೀರೋ ಆಗಬೇಕೆಂದರೆ, ಇನ್ನೊಬ್ಬರ ಲೈಫಲ್ಲಿ ನಾವ್‌ ವಿಲನ್‌ ಆಗಲೇಬೇಕು…” ಎಂಬ ಡೈಲಾಗ್‌ ಕೇಳಿದವರಿಗೆ ಇಲ್ಲಿ ದರ್ಶನ್‌ ಯಾರ ಲೈಫ್‌ಗೆ ವಿಲನ್‌ ಆಗಿದ್ದಾರೆ? ಅವರು ಯಾರ ಕುರಿತಾಗಿ ಈ ಡೈಲಾಗ್‌ ಹೇಳಿದ್ದಾರೆ ಅನ್ನೋ ಪ್ರಶ್ನೆ ಕೂಡ ಸಹಜವಾಗಿಯೇ ಮೂಡುತ್ತೆ. ಮತ್ತೊಂದು ಡೈಲಾಗ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲೂ ಒಂದು ಟಾಂಗ್‌ ಇದೆ. “ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣ ಮುಂದೆ ಗೆಲ್ಲೋದು ಗೊತ್ತು…” ಈ ಕೌಂಟ್‌ ಡೌನ್‌ ಸ್ಟಾರ್ಟ್ಸ್ಸ್‌ʼ ಎಂದು ಬರುವ ಡೈಲಾಗ್‌ ಕೂಡ ಸಖತ್‌ ಮಾಸ್‌ ಆಗಿದೆ.


ಅದೆಲ್ಲಾ ಏನೇ ಇದ್ದರೂ, “ರಾಬರ್ಟ್‌” ಚಿತ್ರ ನೋಡಿದಾಗಲೇ, ದರ್ಶನ್‌ ಅವರ ಈ ಡೈಲಾಗ್‌ ಅಲ್ಲಿರುವ ವಿಲನ್‌ಗಾಗಿಯೇ ಹೇಳಿದ್ದು ಅಂತ ಗೊತ್ತಾಗುತ್ತೆ. ಒಂದಂತೂ ನಿಜ, “ರಾಬರ್ಟ್‌” ಚಿತ್ರ ನೋಡೋಕೆ ಅವರ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ “ರಾಬರ್ಟ್‌” ಚಿತ್ರ ತೆರೆಗೆ ಬರುತ್ತಿದೆ.
ಟ್ರೇಲರ್‌ನಲ್ಲಿ ಸಾಕಷ್ಟು ವಿಶೇಷತೆಗಳಿವೆ. ದೊಡ್ಡ ತಾರಾಬಳಗವೇ ಇದೆ. ಜಗಪತಿ ಬಾಬು, ದೇವರಾಜ್‌ ಸೇರಿದಂತೆ ದೊಡ್ಡ ಕಲಾವಿದರ ದಂಡೇ ತುಂಬಿದೆ. ಇನ್ನು, ಬಾಲ ಶ್ರೀರಾಮನನ್ನು ತನ್ನ ಹೆಗಲ ಮೇಲೆ ಹೊತ್ತ ಆಂಜನೇಯ ಪಾತ್ರದಲ್ಲಿ ದರ್ಶನ್‌ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಆ ಪಾತ್ರ ಯಾಕೆ ಅನ್ನೋದನ್ನೂ ಸಿನಿಮಾದಲ್ಲೇ ನೋಡಬೇಕು. ಒಟ್ನಲ್ಲಿ, ನಿರ್ದೇಶಕ ತರುಣ್‌ ಸುಧೀರ್‌ ಅವರು, ಕುತೂಹಲ ಕೆರಳಿಸುವಂತಹ ಸಿನಿಮಾ ಮಾಡಿದ್ದಾರೆ ಎಂಬುದಂತೂ ಸತ್ಯ. ಟ್ರೇಲರ್‌ನಲ್ಲೇ ಅಂಥದ್ದೊಂದು ಥ್ರಿಲ್‌ ಕಟ್ಟಿಕೊಟ್ಟಿರುವ ನಿರ್ದೇಶಕರು ಭರವಸೆ ಮೂಡಿಸಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರು ಅದ್ಧೂರಿಯಾಗಿಯೇ ತಯಾರಿಸಿದ್ದಾರೆ. ಆಶಾಭಟ್‌ ದರ್ಶನ್‌ಗೆ ಜೋಡಿಯಾಗಿದ್ದಾರೆ. ಅಂದಹಾಗೆ, ಟ್ರೇಲರ್‌ ಬಂದು ಕೇವಲ 42 ನಿಮಿಷಕ್ಕೆ ಹತ್ತು ಲಕ್ಷ ಜನ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ್ದು ವಿಶೇಷ.

 

error: Content is protected !!