ದೂದ್ ಪೇಡ ದಿಗಂತ್ ಈಗ ಗಂಭೀರ ಪೆಟ್ಟಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಅವರು ಮುಂಬೈನಲ್ಲಿ ಫೈಟ್ ಮಾಡುವಾಗ ಕಣ್ಣಿಗೆ ಪೆಟ್ಟು ಬಿದ್ದಿತ್ತು. ಅದಾದ ಮೇಲೂ ಅವರು ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದರು. ಈಗ ಪುನಃ ಕುತ್ತಿಗೆ ಹಾಗೂ ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಗೋವಾ ಪ್ರವಾಸದಲ್ಲಿದ್ದ ಅವರು ಈ ಅವಘಡಕ್ಕೀಡಾಗಿದ್ದಾರೆ.
ದಿಗಂತ್ ಅವರುಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ತುರ್ತು ವಿಮಾನದ ಮೂಲಕ ಬೆಂಗಳೂರಿಗೆ ಕರೆ ತರಲಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಗುರಿಪಡಿಸಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ರಂಗ ಅಂದಾಕ್ಷಣ ನೆನಪಾಗುವುದೇ ಹಾಲು ಜೇನು ಚಿತ್ರದ ಡಾ.ರಾಜ್ ಪಾತ್ರ ರಂಗ, ಹಾಗೇಯೇ ಮನೆದೇವ್ರು ಸಿನಿಮಾದಲ್ಲಿ ರವಿಚಂದ್ರನ್ ಶ್ರೀರಂಗ, ಇತ್ತೀಚೆಗೆ ಉಪೇಂದ್ರ ನಟನೆಯ ಸಿನಿಮಾ ಸೂಪರ್ ರಂಗ..ಇದೀಗ ವೆಂಕಟ್ ಭಾರದ್ವಾಜ್ ಶ್ರೀರಂಗ ಟೈಟಲ್ ಮೂಲಕ ಹೊಸದೊಂದು ಕಥೆ ಹೇಳಲು ಬರ್ತಿದ್ದು, ಸದ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಶ್ರೀರಂಗ ಕಾಮಿಡಿ ಜೊತೆಗೆ ಕ್ರೈ ಥ್ರಿಲ್ಲರ್ ಸಿನಿಮಾವಾಗಿದ್ದು, ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ನಾಯಕನಾಗಿ ಶಿನವ್, ನಾಯಕಿಯರಾಗಿ ರಚನಾ ರಾಯ್, ರೂಪ ರಾಯಪ್ಪ ಹಾಗೂ ವಂದನಾ ಶೆಟ್ಟಿ ನಟಿಸಿದ್ದು, ಉಳಿದಂತೆ ಗುರುರಾಜ್ ಹೊಸಕೋಟೆ, ಯಮುನಾ ಶ್ರೀನಿಧಿ, ಸಾಗರ್ ಜಯರಾಮ್, ಚಿಪ್ಸ್ ಬಾಬು, ಗಿರೀಶ್, ಮಣಿ ಮಾರನ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಪುಟಾಣಿಗಳ ದಂಡೇ ಇದೆ. ಮಾಸ್ಡರ್ ಚಿರಾಯು ಚಕ್ರವರ್ತಿ, ತ್ರಿಧಾರ ಲಕ್ಷ್ಮಣ್, ಪುಶ್ಕಲ್ ಪ್ರೀತ್, ರಜತ್ ರಿತಿಕ್, ಐಶಾನಿ ನಟಿಸಿದ್ದಾರೆ.
ಮಿಥುನ್ ಛಾಯಾಗ್ರಾಹಣ, ಚಂದನ್ ಸಂಕಲನ, ಶಂಕರ್ ರಾಮನ್ ಸಂಭಾಷಣೆ, ಸಮೀರ್ ಕುಲಕರ್ಣಿ ಸಂಗೀತ, ಕನ್ನಡದ ಟಾಪ್ ರಪೆರ್ ವಿರಾಜಕನ್ನಡಿಗ, ಅವಿನಾಶ್ ಛೆಬ್ಬಿ, ಚೈತ್ರಾ ನಾಣಯ್ಯ ಹಾಡುಗಳಿಗೆ ಧ್ವನಿಯಾಗಿದ್ದಾರೆ. ರುತು ಕ್ರಿಯೇಷನ್ ನಡಿ ಸುಮಾ ಸಿಆರ್ ನಿರ್ಮಾಣ ಮಾಡಿದ್ದು, ಬಿಎಂ ದಿಲೀಪ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೆನ್ಸಾರ್ ಮುಗಿಸಿರುವ ಸಿನಿಮಾ ಶೀರ್ಘದಲ್ಲಿಯೇ ಥಿಯೇಟರ್ ಗೆ ಲಗ್ಗೆ ಇಡಲಿದೆ.
ಎಲ್ಲರ ಜೀವನ ರಾಟೆಯಂತೆ. ಅದು ಸದಾ ಸುತ್ತುತ್ತಿರುತ್ತದೆ. ಈ ವಿಷಯವನ್ನು ಕೇಂದ್ರವಾಗಿಟ್ಟಿಕೊಂಡು ” ರಂಗಿನ ರಾಟೆ” ಚಿತ್ರ ಸಿದ್ದವಾಗುತ್ತಿದೆ. ಸದ್ಯ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ಚಿತ್ರತಂಡ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದೆ.
ನಾನು ಮುರಳಿ ಮೋಹನ್ ಅವರ ಬಳಿ ಕೆಲಸ ಮಾಡುತ್ತಿದ್ದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಎಲ್ಲರ ಜೀವನವೇ ಒಂದು ಸುತ್ತಾಟ. ರಾಟೆ ತಿರುಗಿದ ಹಾಗೆ. ಹಾಗಾಗಿ ನಾನು ಚಿತ್ರಕ್ಕೆ ಈ ಶೀರ್ಷಿಕೆ ಇಟ್ಟಿದ್ದೀನಿ. ಚಿತ್ರೀಕರಣ ಮುಕ್ತಾಯವಾಗಿದೆ. ಆಗರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ರಾಜೀವ್ ರಾಥೋಡ್, ದುನಿಯಾ ರಶ್ಮಿ, ಭವ್ಯ ಹಾಗೂ ಸಂತೋಷ್ ನಾಲ್ಕು ಜನರ ಸುತ್ತ ಕಥೆ ಸಾಗುತ್ತದೆ. ಸಂತೋಷ್ ಮಳವಳ್ಳಿ ಅವರ ಮೂಲಕ ನಿರ್ಮಾಪಕಿ ಕವಿತಾ ಅರುಣ್ ಕುಮಾರ್ ಅವರ ಪರಿಚಯವಾಯಿತು. ಅವರು ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಮಾತಿನ ಜೋಡಣೆ ಆರಂಭವಾಗಲಿದೆ ಎಂದು ನಿರ್ದೇಶಕ ಆರ್ಮುಗಂ ಮಾಹಿತಿ ನೀಡಿದರು.
“ಯವರಾಜ” ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಗಿದೆ. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೂರನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ನಿರ್ದೇಶಕರು ಕಥೆ ಹೇಳಿದ ಕೂಡಲೆ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದೆ. ಅನಿರೀಕ್ಷಿತ ಘಟನೆಯಲ್ಲಿ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ. ಅದರಿಂದ ಹೇಗೆ ಪಾರಾಗುತ್ತೇನೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು ಎಂದರು ರಾಜೀವ್ ರಾಥೋಡ್.
ನನಗೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ಸಂತೋಷ್ ಅವರು ನಿರ್ದೇಶಕರ ಪರಿಚಯ ಮಾಡಿಸಿದರು. ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದೆ. ಮೊದಲ ಪ್ರಯತ್ನ. ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕಿ ಕವಿತಾ ಅರುಣ್ ಕುಮಾರ್.
ಇದು ನನ್ನ ಮೊದಲ ಚಿತ್ರ. ನಟಿಸುವ ಆಸೆಯಿತ್ತು. ಈಡೇರಿದೆ. ಕಥೆಯೇ ಈ ಚಿತ್ರದ ನಾಯಕ, ನಾಯಕಿ. ರಾಜೀವ್ ರಾಥೋಡ್, ದುನಿಯಾ ರಶ್ಮಿ ಹಾಗೂ ನಾನು ಮುಖ್ಯಪಾತ್ರದಲ್ಲಿ ನಟಿಸಿದ್ದೇವೆ. ನಮ್ಮ ಚೊಚ್ಚಲ ಪ್ರಯತ್ನಕ್ಕೆ ನಿಮ್ಮ ಹಾರೈಕೆಯಿರಲಿ ಎಂದರು ನಟಿ ಭವ್ಯ.
ಹಾಡು ಬರೆದು ನಟನೆ ಮಾಡರುವ ಸಂತೋಷ್ ಮಳವಳ್ಳಿ, ಸಂಗೀತ ನಿರ್ದೇಶಕ ಚಂದ್ರು ಒಬ್ಬಯ್ಯ, ಛಾಯಾಗ್ರಾಹಕ ರವಿ ಸುವರ್ಣ ಹಾಗೂ ಸಂಕಲನಕಾರ ದಾಮೋದರ ನಾಯ್ಡು “ರಂಗಿನ ರಾಟೆ” ಯ ಬಗ್ಗೆ ಮಾತನಾಡಿದರು.
ಮರಿ ಟೈಗರ್ ವಿನೋದ್ ಪ್ರಭಾಕರ್ ವಿಭಿನ್ನ ಪಾತ್ರಗಳ ಮೂಲಕ, ಹೊಸತನದ ಕಥೆಗಳ ಮೂಲಕ ಚಿತ್ರಪ್ರೇಮಿಗಳನ್ನು ರಂಜಿಸುತ್ತಾ ಬರ್ತಿದ್ದಾರೆ. ಇದೀಗ ವಿನೋದ್ ಅಂತಹದ್ದೇ ಮತ್ತೊಂದು ಹೊಸತನದ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಈ ಹಿಂದೆ ಚಿರಂಜೀವಿ ಸರ್ಜಾ ನಟನೆಯ ಖಾಕಿ ಚಿತ್ರ ಮೂಲಕ ನಿರ್ದೇಶದ ಅಖಾಡಕ್ಕಿಳಿದಿದ್ದ ನವೀನ್ ಬಿ ರೆಡ್ಡಿ ಈಗ ವಿನೋದ್ ಪ್ರಭಾಕರ್ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸಿನಿಮಾಗೆ ಮಾದೇವ ಎಂಬ ಕ್ಯಾಚಿ ಟೈಟಲ್ ಇಡಲಾಗಿದ್ದು, ಇವತ್ತು ಬೆಂಗಳೂರಿನ ಬಂಡೀಮಹಾಕಾಳಿ ದೇಗುಲದಲ್ಲಿ ಮುಹೂರ್ತ ನೆರವೇರಿದೆ.
80 ದಶಕದ ಎಮೋಷನಲ್ ಹಾಗೂ ಮಾಸ್ ಎಲಿಮೆಂಟ್ ಕಂಟೆಂಟ್ ಹೊಂದಿರುವ ಮಾದೇವ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುತ್ತಿದ್ದಾರೆ. ಮುಂದಿನ ತಿಂಗಳು ಜುಲೈ ಕೊನೆಯ ವಾರದಲ್ಲಿ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ ಎಂದು ನಿರ್ದೇಶಕ ನವೀನ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಶೃತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿದಂತೆ ಒಂದಷ್ಟು ತಾರಾಬಳಗ ಫೈನಲ್ ಆಗಿದೆ.
ಸದ್ಯದಲ್ಲಿಯೇ ನಾಯಕಿ ಹಾಗೂ ವಿಲನ್ ಪಾತ್ರಗಳ ಆಯ್ಕೆ ನಡೆಯಲಿದೆ. ನಿರ್ಮಾಪಕಿ ಗಾಯತ್ರಿ ಆರ್ ಹಳಲೆ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರದ್ದ್ಯೋತ್ತನ್ ಸಂಗೀತ ನೀಡಲಿದ್ದು, ಬಾಲಕೃಷ್ಣ ತೋಟ ಛಾಯಾಗ್ರಹಣವಿದ್ದು, ಸಹ ನಿರ್ಮಾಣದ ಜವಾಬ್ದಾರಿಯನ್ನು ಲವ್ ಗುರು ಸುಮಂತ್ ಹೊತ್ತುಕೊಂಡಿದ್ದಾರೆ.
ಬೈರಾಗಿಯಲ್ಲಿ ಟಗರು ಡಾಲಿ ಜತೆ ಚಿಟ್ಟೆ ಬೈರಾಗಿ ಟಗರು ಪಾರ್ಟ್ 2…? ಟಗರು ಡಾಲಿ ಚಿಟ್ಟೆ ಕಾಂಬೋ ಬೈರಾಗಿಯಲ್ಲಿ ಮತ್ತೆ ಆರ್ಭಟ ಬೈರಾಗಿ ಹಾಡಿಗೆ ವಸಿಷ್ಠ ಸಿಂಹ ಗಾಯನ ಟಗರು,ಡಾಲಿಗೆ ಮತ್ತೆ ಚಿಟ್ಟೆ ಸಾಥ್
ಶಿವಣ್ಣನ ಟಗರಿನೇಟಿಗೆ ತರಗೆಲೆ ಥರಾ ಉದುರೋಗ್ತಾರೆ ಡಾಲಿ-ಚಿಟ್ಟೆ ಜೋಡಿ. ಆದ್ರೂ ಶಿವಣ್ಣ-ಡಾಲಿ-ಚಿಟ್ಟೆ ಕಾಂಬಿನೇಷನ್ ಗೆ ಭಯಂಕರ ಫ್ಯಾನ್ ಫಾಲೋಯಿಂಗ್ ಇದೆ. ಈ ತ್ರಿವಳಿ ಜೋಡಿ ಮತ್ತೆ ಒಂದಾಗ್ತಾ ಇದೆ.
ಹೌದು, ಶಿವಣ್ಣ ಜೊತೆ ಡಾಲಿ ಧನಂಜಯ ಹಾಗೂ ಚಿಟ್ಟೆ ವಸಿಷ್ಠ ಸಿಂಹ ಮತ್ತೆ ಜೋಡಿಯಾಗ್ತಾ ಇದ್ದಾರೆ. ಆದ್ರೆ ಇಲ್ಲಿ ವಸಿಷ್ಠ ತೆರೆ ಮೇಲೆ ಜೋಡಿಯಾಗೋ ಬದಲು ಹಾಡು ಹಾಡಿ, ಧ್ವನಿಯಲ್ಲಿ ಒಂದಾಗ್ತಾ ಇದ್ದಾರೆ. ಇದೇ ಜು.1ಕ್ಕೆ ತೆರೆಗೆ ಬರ್ತಿರೋ ಡಾಲಿ ಧನಂಜಯ-ಶಿವಣ್ಣ ಒಟ್ಟಾಗಿ ನಟಿಸಿರುವ ಬೈರಾಗಿ ಸಿನಿಮಾದ ಒಂದು ಪವರ್ ಫುಲ್ ಹಾಡಿಗೆ ಚಿಟ್ಟೆ ವಸಿಷ್ಠ ದನಿಯಾಗಿದ್ದಾರೆ.
ಈಗಾಗ್ಲೆ ಹಾಡೊಂದಕ್ಕೆ ಶಿವಣ್ಣ ಜೊತೆ ಶರಣ್ ದನಿಯಾಗಿದ್ದು. ಈಗ ಮತ್ತೊಂದು ಹಾಡಿನಲ್ಲಿ ವಸಿಷ್ಠ ಹಾಡುವ ಮೂಲಕ ಶಿವಣ್ಣ ಡಾಲಿಯ ಸಿನಿಮಾದಲ್ಲಿ ಮತ್ತೆ ಒಂದಾಗ್ತಾ ಇದ್ದಾರೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡಿನಲ್ಲಿ ವರಿಷ್ಠ ರಿಗೆ ಕೆ.ಜಿ.ಎಫ್ ಅನನ್ಯ ಭಟ್ ಸಾಥ್ ಕೊಟ್ಟಿದ್ದಾರೆ.
ಕವಿ ಗೋಪಾಲಕೃಷ್ಣ ಅಡಿಗರ “ಯಾವ ಮೋಹನ ಮುರಳಿ ಕರೆಯಿತು” ಹಾಡನ್ನು ಕೇಳದ ಕಿವಿಗಳೇ ಇಲ್ಲ ಅನಿಸುತ್ತದೆ. ಈಗಲೂ ಈ ಹಾಡು ಎಲ್ಲೋ ಕೇಳಿ ಬಂದರೂ, ಅದರೊಟ್ಟಿಗೆ ಗುನಗುವ ಗೀತೆ ಅದು. ಈಗ ಆ ಹಾಡಿನ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. “ಯಾವ ಮೋಹನ ಮುರಳಿ ಕರೆಯಿತು” ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ.ನಗರದ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ನೆರವೇರಿದೆ…
ನಿರ್ಮಾಪಕ ಟಿ.ಪಿ.ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ, ಶುಭ ಕೋರಿದರೆ, ನಾಗೇಂದ್ರ ರೆಡ್ಡಿ ಹಾಗೂ ಲಕ್ಕಿ ಕ್ಯಾಮೆರಾ ಚಾಲನೆ ಮಾಡಿದರು. ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.
ಪ್ರಕೃತಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶರಣಪ್ಪ ಗೌರಮ್ಮ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ವಿಶ್ವಾಸ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಕನ್ನಡದ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ವಿಶ್ವಾಸ್ ಕೃಷ್ಣ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಜೋಗದ ಬಳಿಯ ಕಾರ್ಗಲ್ ಹಾಗೂ ಭಟ್ಕಳದಲ್ಲಿ ಚಿತ್ರೀಕರಣ ನಡೆಯಲಿದೆ.
ಕೌಟುಂಬಿಕ ಕಥಾಹಂದರದ ಈ ಚಿತ್ರಕ್ಕೆ ನಿರ್ದೇಶಕರೆ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ನೀಡಲಿದ್ದಾರೆ ಹಾಗೂ ಕೀರ್ತನ್ ಪೂಜಾರಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಮಾಧವ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ. ಸ್ವಪ್ನ ಶೆಟ್ಟಿಗಾರ್. ಬೇಬಿ ಪ್ರಕೃತಿ, ಪಟೇಲ್ ವರುಣ್ ರಾಜು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ನಾಯಿ ರಾಕಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.
ದಕ್ಷಿಣ ಕನ್ನಡದ ಅಚ್ಚುಮೆಚ್ಚಿನ ಕಂಬಳದ ಕುರಿತಾಗಿ ಬರುತ್ತಿರುವ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ” ವೀರ ಕಂಬಳ” ಚಿತ್ರದಲ್ಲಿ ಕಂಬಳದ ಪರ ವಕೀಲರಾಗಿ ಪ್ರಕಾಶ್ ರೈ ನಟಿಸಿದ್ದಾರೆ. ಪ್ರತಿವಾದಿಯಾಗಿ ರವಿಶಂಕರ್ ಅಭಿನಯಿಸಿದ್ದಾರೆ. ಈ ಕೋರ್ಟ್ ಸನ್ನಿವೇಶವನ್ನು ಕಂಠೀರವ ಸ್ಟುಡಿಯೋದಲ್ಲಿ ಸೆರೆ ಹಿಡಿಯಲಾಯಿತು. ಈ ವೇಳೆ ಪ್ರಕಾಶ್ ರೈ, ರವಿಶಂಕರ್, ರಾಜೇಂದ್ರ ಸಿಂಗ್ ಬಾಬು, ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಆದಿತ್ಯ, ವೀಣಾ ಪೊನ್ನಪ್ಪ ಮುಂತಾದವರು ಕಾಣಿಸಿದ್ದು ವಿಶೇಷ.
ಎರಡು ವರ್ಷ ಸ್ಕ್ರಿಪ್ಟ್ ಮಾಡಿದ್ದೇವೆ. 16 ಸಾವಿರ ಪುಟಗಳ ಚರ್ಚೆಯಾಗಿದೆ. ಕೋರ್ಟಿನಿಂದ ತರಿಸಿ, ಈ ವಾದಗಳನ್ನು ಯಾವ ರೀತಿ ತರಬೇಕು ಎಂಬುದು ಮುಖ್ಯ. ಏಕೆಂದರೆ, ಕಾಮೆಂಟರಿ ಅಥವಾ ಸಾಕ್ಷ್ಯಚಿತ್ರ ಆಗಬಾರದು. ದೊಡ್ಡ ಸವಾಲಿತ್ತು. ತುಂಬಾ ಜನರ ಸಲಹೆ ಪಡೆದೆ. ಟಿ.ಎನ್.ಸೀತಾರಾಮ್ ಅವರಿಂದ ಬೇಕಾದಷ್ಟು ವಿಷಯ ಕಲೆ ಹಾಕಿದೆವು. ಒಂಬತ್ತು ತಿಂಗಳಿನಿಂದ ಇದೊಂದು ಸೀನ್ ಮೇಲೆ ನಾನು ಮತ್ತು ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಕೆಲಸ ಮಾಡುತ್ತಿದ್ದೇವೆ. ಅದೇ ಕಾರಣಕ್ಕೆ ಚಿತ್ರೀಕರಣ ಕೊನೆಯಲ್ಲಿಟ್ಟುಕೊಂಡೆವು. ಇದನ್ನು ಹೇಗೆ ಹೇಳಬೇಕು ಎಂದು ಯೋಚಿಸಿ, ಇವತ್ತು ಚಿತ್ರೀಕರಣ ಮಾಡುತ್ತಿದ್ದೇವೆ. ನಾವೇನೇ ಬರೆದಿಟ್ಟುಕೊಂಡರೂ ಪ್ರಕಾಶ್ ರೈ ಮತ್ತು ರವಿ ಶಂಕರ್ ಅವರ ಅಭಿನಯ, ದೃಶ್ಯದ ಮೌಲ್ಯ ಹೆಚ್ಚಿಸಿದೆ. ಇಬ್ಬರೂ ಅಪ್ಪಟ ಪ್ರತಿಭಾವಂತರು ಎಂಬುದು ಸಿಂಗ್ ಬಾಬು ಮಾತು.
ಪ್ರಕಾಶ್ ರೈ ಈ ಹಿಂದೆ “ಮುತ್ತಿನ ಹಾರ” ಚಿತ್ರದಲ್ಲಿ ನಟಿಸಿದ್ದರು. ಒಳ್ಳೆಯ ಕ್ಷಣ ಕಳೆದಿದ್ದೇವೆ. ಅದನ್ನು ನೆನಪಿಟ್ಟುಕೊಂಡು ಅವರು ಬಂದು ನಟಿಸುತ್ತಿದ್ದಾರೆ. ಎರಡು ಫೋನ್ ಮಾಡಿದೆ. ಅವರು ಒಪ್ಪಿ ನಟಿಸಿದರು. ಹೈದರಾಬಾದ್ನಿಂದ ನೇರವಾಗಿ ಚಿತ್ರೀಕರಣಕ್ಕೆ ಬಂದರು. ಭಾರತ ಅಲ್ಲ, ಪ್ರಪಂಚದ ಎಲ್ಲ ಭಾಷೆಗಳಲ್ಲೂ ನಟಿಸಲಿ. ಎಲ್ಲಿ ಹೋದರು ಗೆದ್ದು ಬರುತ್ತಾರೆ. ಅವರಿಗೆ ಆ ಪ್ರತಿಭೆ ಇದೆ. ಕನ್ನಡಿಗರ ಆಶೀರ್ವಾದವಿದೆ. ರವಿಶಂಕರ್ ಬಹಳ ಒಳ್ಳೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಇಲ್ಲೂ ಒಂದೊಳ್ಳೆಯ ಪಾತ್ರವಿದೆ.
ಎರಡು ವರ್ಷ ಸ್ಕ್ರಿಪ್ಟ್ ಮಾಡಿದ್ದೇವೆ 10-15 ಕಂಬಳಗಳಿಗೆ ಹೋಗಿ, ನೋಡಿ, ಅಲ್ಲಿಯ ತಜ್ಞರು, ಮಾಲೀಕರು ಮತ್ತು ಜಾಕಿಗಳನ್ನು ಮಾತಾಡಿಸಿದ್ದೇವೆ. ಯಾರು ಹೀರೋ? ಹೀರೋ ಹಾಕಿದರೆ, ಕಂಬಳ ಓಡಿಸುವವರ ಡ್ಯೂಪ್ಲಿಕೇಟ್ ಹಾಕುವುದಕ್ಕೆ ಇಷ್ಟ ಇರಲಿಲ್ಲ. ನನಗೆ ಒರಿಜಿನಲ್ ಬೇಕಿತ್ತು. ಶ್ರೀನಿವಾಸ್ ಗೌಡ ಅವರನ್ನು ಹೀರೋ ತರಹ ಹಾಕಿ, ಸ್ವರಾಜ್ ಅವರಿಗೆ ಟೆನ್ ಮಾಡಿ, ನೇಟಿವಿಟಿ ಮಿಸ್ ಆಗಬಾರದು ಎಂಬ ಕಾರಣಕ್ಕೆ. 800 ವರ್ಷಗಳ ಕ್ರೀಡೆ. ಪ್ರತಿಯೊಂದನ್ನೂ ಗಮನಿಸಿ, ಯಾವುದೇ ಚ್ಯುತಿ ಬರದಂತೆ ಮಾಡಿದ್ದೇವೆ. ಎಲ್ಲ ನೈಜ. ಯಾವುದು ಕೃತಕವಲ್ಲ. ಅದನ್ನು ನಮ್ಮ ಕಥೆಗೆ ಪೂರಕವಾಗಿ ಬಳಸಿಕೊಂಡಿದ್ದೇವೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.
ಇದುವರೆಗೂ ಹಲವು ಕೋರ್ಟ್ ದೃಶ್ಯಗಳಲ್ಲಿ ಭಾಗವಹಿಸಿದ್ದರೂ ಇದು ಬೇರೆ. ಇದು ನನ್ನ ಮಣ್ಣಿನ ಒಂದು ವಿಷಯ. ಎಲ್ಲರೂ ತಿಳಿದುಕೊಳ್ಳಬೇಕಾದ ಒಂದು ವಿಷಯ. ಇಲ್ಲಿ ಸಂಭಾಷಣೆಯ ಮಾತುಗಳಿಗಿಂತ ನನ್ನ ಭಾವನೆಯೂ ಮುಖ್ಯವಾಗುತ್ತದೆ. ಇದು ನನಗೆ ಬಹಳ ಪರ್ಸನಲ್ ಆದಂತಹ ಚಿತ್ರ. ಹಲವು ಚಿತ್ರಗಳು ನನಗೆ ಯಾವುದೇ ಸಂಬಂಧವಿರುವುದಿಲ್ಲ. ಅಲ್ಲಿ ನಾನು ಒಬ್ಬ ನಟನಾಗಿ ನನ್ನ ಪಾತ್ರ ಮಾಡುತ್ತೇನೆ ಅಷ್ಟೇ. ಅದನ್ನು ಹೊರತುಪಡಿಸಿ, ಒಬ್ಬ ಕನ್ನಡಿಗನಾಗಿ ಒಂದು ಜವಾಬ್ದಾರಿ ಇರುತ್ತದೆ. ಒಬ್ಬ ತುಳುವನಾಗಿ, ಆ ಮಣ್ಣಿನ ವಿಷಯದ ಚಿತ್ರ ಮಾಡಿದಾಗ, ಅದರ ಪರವಾಗಿ ವಾದಿಸುವಂತಹ, ಅದರ ಕುರಿತಾಗಿ ಇರುವ ಊಹಾಪೋಹಗಳನ್ನ ಮತ್ತು ಅಪಪ್ರಚಾರಗಳನ್ನು ನೀಗಿಸುವಂತಹ ಕೆಲಸ ಮಾಡಬೇಕಾಗುತ್ತದೆ. ಯಾರೋ ಒಬ್ಬರು ಕಂಬಳದ ನೀರು ಕೆಸರು ಎಂದಾಗ, ಇಲ್ಲ ಅದು ಕೆಸರಲ್ಲ, ಅದು ತೀರ್ಥ ಅಂತ ಹೇಳುವ ದೃಶ್ಯಗಳಿವೆ ಎಂದರು ಪ್ರಕಾಶ್ ರೈ.
ನಾನು ಈ ಚಿತ್ರದಲ್ಲಿ ನಟಿಸಲು ಮೂರು ಕಾರಣಗಳಿವೆ. ಮೊದಲು ನನಗೆ ತುಳು ಭಾಷೆಯ ಚಿತ್ರದಲ್ಲಿ ನಟಿಸುವ ಆಸೆಯಿತ್ತು. ನಂತರ ನಾನು ರಾಜೇಂದ್ರ ಸಿಂಗ್ ಬಾಬು ಅವರ ಅಭಿಮಾನಿ. “ಬಂಧನ”, ” ಮುತ್ತಿನ ಹಾರ” ಚಿತ್ರಗಳನ್ನು ಸಾಕಷ್ಟು ಸಲ ನೋಡಿದ್ದೀನಿ ಮತ್ತು ಭಾರತದ ಶ್ರೇಷ್ಠ ನಟ ಪ್ರಕಾಶ್ ರೈ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ಈ ಎಲ್ಲಾ ಕಾರಣಕ್ಕೆ “ವೀರ ಕಂಬಳ” ನನಗೆ ವಿಶೇಷವೆಂದರು ರವಿಶಂಕರ್.
ಉತ್ಸಾಹಿ ಯುವ ನಿರ್ದೇಶಕ ಭರತ್ ಜಿ ನಿರ್ದೇಶಿಸಿರುವ “ಸ್ಪೂಕಿ ಕಾಲೇಜ್” ಚಿತ್ರದ ಟೀಸರ್ ಶ್ರೀದೇವಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಿ.ಜಿ.ಎಸ್ ಮತ್ತು ಎಸ್ ಜೆ ಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಪರಮಪೂಜ್ಯ ಶ್ರೀ ಡಾ.ಪ್ರಕಾಶನಾಥಸ್ವಾಮೀಜಿ ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ.
ಚಿತ್ರ ಆರಂಭದ ದಿನದಿಂದಲೂ ಪೋಸ್ಟರ್, ಫಸ್ಟ್ ಲುಕ್ ಸಾಕಷ್ಟು ಕುತೂಹಲ ಹುಟ್ಟಿಸಿತ್ತು. ಈಗ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಕುರಿತಾದ ಕುತೂಹಲ ಮತ್ತಷ್ಟು ಹೆಚ್ಚಿದೆ. ಈಗಾಗಲೇ ಅಧಿಕ ಸಂಖ್ಯೆಯಲ್ಲಿ ಟೀಸರ್ ವೀಕ್ಷಣೆಯಾಗುತ್ತಿದೆ. ನಟ ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಟೀಸರ್ ಬಗ್ಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. “ಸ್ಪೂಕಿ” ಎಂದರೆ ಭಯ. ಟೀಸರ್ ನೋಡಿದವರಿಗೆ “ಸ್ಪೂಕಿ” ಪದದ ವಿಶ್ಲೇಷಣೆಯನ್ನು ನಿರ್ದೇಶಕರು ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಹಿಂದೆ ಕನ್ನಡ ಚಿತ್ರರಂಗದ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾಗಳಾದ “ನಾ ನಿನ್ನ ಬಿಡಲಾರೆ”, ” ಆಪ್ತಮಿತ್ರ ” ಸಿನಿಮಾಗಳ ರೀತಿ ಈ ಚಿತ್ರಕೂಡ ಪ್ರೇಕ್ಷಕರ ಮನಗೆಲುವುದರಲ್ಲಿ ಯಾವ ಸಂದೇಹವಿಲ್ಲ ಎಂಬ ಮಾತುಗಳು ಟೀಸರ್ ನೋಡಿದವರಿಂದ ಕೇಳಿ ಬರುತ್ತಿದೆ. ಕಾಲೇಜ್ ನಲ್ಲಿ ದೆವ್ವ ಇದೆ ಎನ್ನುವುದು ಈ ಚಿತ್ರದ ಹೈಲೆಟ್.
ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಧಾರಾವಾಡದ ನೂರಕ್ಕೂ ಹೆಚ್ಚಿನ ವರ್ಷ ಹಳೆಯದಾದ ಕಾಲೇಜು ಹಾಗೂ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ನಿಮ್ಮ ಮುಂದೆ “ಸ್ಪೂಕಿ ಕಾಲೇಜ್” ಬರಲಿದೆ.
“ರಂಗಿತರಂಗ” , “ಅವನೇ ಶ್ರೀಮನ್ನಾರಾಯಣ” ಚಿತ್ರಗಳ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ನಿರ್ದೇಶಕ ಭರತ್ ಅವರೆ ಬರೆದಿದ್ದಾರೆ.
ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ (ಕೆ ಜಿ ಎಫ್) ಅವರ ಸಂಕಲನ ಈ ಚಿತ್ರಕ್ಕಿದೆ.
“ಪ್ರೀಮಿಯರ್ ಪದ್ಮಿನಿ” ಖ್ಯಾತಿಯ ವಿವೇಕ್ ಸಿಂಹ “ಸ್ಪೂಕಿ ಕಾಲೇಜ್” ನ ನಾಯಕ. “ದಿಯಾ” ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ “ಕಾಮಿಡಿ ಕಿಲಾಡಿಗಳು” ಶೋನ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಮ್ಮ ಅದ್ಭುತ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಗಳಿದೆ. ಅದರಲ್ಲಿ ವಿಡಿಯೋ ಸಾಂಗ್ ಕೂಡ ಒಂದು. ಎಷ್ಟೊಂದು ವಿಡಿಯೋ ಸಾಂಗ್ಸ್ ಚಿತ್ರಗೀತೆಗಳನ್ನು ಮೀರಿಸುವಷ್ಟು ಅದ್ದೂರಿಯಾಗಿರುತ್ತದೆ.
ಯು.ಎಸ್ ನಿವಾಸಿ ಆದರ್ಶ್ ಅಯ್ಯಂಗಾರ್ ಅವರು “ಫಾರೆವರ್” ಎಂಬ ಅದ್ದೂರಿ ವಿಡಿಯೋ ಸಾಂಗ್ ನಿರ್ಮಾಣ ಮಾಡಿದ್ದಾರೆ. ತ್ರಿಕೋನ ಪ್ರೇಮಕಥೆಯ ಈ ಸುಂದರ ಪ್ರೇಮಕಾವ್ಯವನ್ನು ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿದ್ದಾರೆ. ಆದರ್ಶ್ ಅಯ್ಯಂಗಾರ್, ಸಿರಿ ಪ್ರಹ್ಲಾದ್, ಸುಮನ್, ರಾಜ್, ದರ್ಶನ್ ಕುಮಾರ್ ಇದರಲ್ಲಿ ನಟಿಸಿದ್ದಾರೆ.
ಕಾಲೇಜು ಜೀವನದಲ್ಲಿ ಪ್ರೀತಿ, ಪ್ರೇಮ ಸಾಮಾನ್ಯ. “ಫಾರೆವರ್” ಸಹ ಕಾಲೇಜ್ ವೊಂದರಲ್ಲಿ ನಡೆಯುವ ತ್ರಿಕೋನ ಪ್ರೇಮಕಥೆಯನ್ನಾಧರಿಸಿದೆ. ಕೆಲವು ಪ್ರೇಮ ಪ್ರಕರಣಗಳು ಮನೆಯವರಿಂದ ದೂರವಾಗುತ್ತದೆ. ಆದರೆ “ಫಾರೆವರ್” ನಲ್ಲಿ ಇದು ಯಾವುದೇ ಅಡೆತಡೆಗಳು ಇಲ್ಲದಿದ್ದರೂ, ವಿಧಿಯಿಂದ ಪ್ರೇಮಕಥೆ ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ “ಫಾರೆವರ್” ಗೆ “ಪ್ರೀತಿಯಂಬ ರಹದಾರಿಯಲ್ಲಿ ವಿಧಿಯೆಂಬ ಅನಿರೀಕ್ಷಿತ ನಿಲ್ದಾಣ” ಎಂಬ ಅಡಿಬರಹವಿದೆ. ಪ್ರೇಮಿಗಳ ಭಾವನೆ ಮತ್ತು ಹಾಡಿನ ಅಂತ್ಯ ಪ್ರೀತಿಯ ನಿರೀಕ್ಷೆಯನ್ನು ಪ್ರೇಮಿಗಳಲ್ಲಿ ಸದಾ ಇರುವಂತೆ ಮಾಡುವುದು ಈ ಹಾಡಿನ ವಿಶೇಷ.
ಮೂಲತಃ ಇಲ್ಲಿಯವರಾಗಿದ್ದರೂ ಯು.ಎಸ್ ನಲ್ಲಿ ನೆಲೆಸಿರುವ ಆದರ್ಶ್ ಅಯ್ಯಂಗಾರ್ ಈ ಹಿಂದೆ ಕೂಡ ಕೆಲವು ವಿಡಿಯೋ ಸಾಂಗ್ ಗಳನ್ನು ನಿರ್ಮಿಸಿ, ನಟಿಸಿದ್ದಾರೆ. “ಫಾರೆವರ್” ಇತ್ತೀಚೆಗೆ ಬಿಡುಗಡೆಯಾಗಿದ್ದು, ನೋಡುಗರ ಹಾಗೂ ಕೇಳುಗರ ಮನ ಗೆದ್ದಿದೆ.
ಹಿಂದೆ “ಹೊಂಬಣ್ಣ” ಎಂಬ ಚಿತ್ರ ನಿರ್ದೇಶಿಸಿದ್ದ ರಕ್ಷಿತ್ ತೀರ್ಥಹಳ್ಳಿ ಈ ಹಾಡನ್ನು ನಿರ್ದೇಶಿಸಿದ್ದಾರೆ. ದರ್ಶನ್ ಕುಮಾರ್ ಸಂಗೀತ ಹಾಗೂ ಗೀತರಚನೆ, ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ ಹಾಗೂ ಸುಧೀರ್ ಎಸ್ ಜೆ ಅವರ ಸಂಕಲನ “ಫಾರೆವರ್” ಗಿದೆ.
ಈ ವಿಡಿಯೋ ಸಾಂಗ್ ವೀಕ್ಷಿಸಿರುವ ನಟಿ ರುಕ್ಮಿಣಿ ವಸಂತ್, ನಿರ್ದೇಶಕ ಪ್ರೀತಂ ಗುಬ್ಬಿ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಆದರ್ಶ್ ಅಯ್ಯಂಗಾರ್ ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ನೂತನ ಪ್ರತಿಭೆಗಳಿಗೆ ಅವಕಾಶ ನೀಡುವ ಯೋಜನೆ ಹಾಕಿಕೊಂಡಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ 777 ಚಾರ್ಲಿ ಸಿನಿಮಾ ವರ್ಲ್ಡ್ ವೈಡ್ ಅದ್ಧೂರಿ ಪ್ರದರ್ಶನ ಕಾಣ್ತಿದೆ. ಇದೇ ತಿಂಗಳ 10ರಂದು ರಿಲೀಸ್ ಆಗಿದ್ದ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಸಿನಿಮಾ ನೋಡಿ ಕಣ್ಣೀರಾಗಿದ್ದರು. ಮನುಷ್ಯ ಹಾಗೂ ಶ್ವಾನದ ಭಾವುಕ ಜರ್ನಿಗೆ ನಾಡದೊರೆ ಬಿಕ್ಕಿಬಿಕ್ಕಿ ಅತ್ತಿದ್ದರು. ಇದೀಗ ಈ ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ.
ರಕ್ಷಿತ್ ಶೆಟ್ಟಿ ತಮ್ಮದೇ ಪರಃವಃ ಸ್ಟುಡಿಯೋದಡಿ ನಿರ್ಮಾಣ ಮಾಡಿದ್ದ 777 ಚಾರ್ಲಿ ಸಿನಿಮಾದಲ್ಲಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಜೊತೆಗೆ ಪ್ರಾಣಿಗಳ ಸೂಕ್ಷ್ಮತೆಗಳನ್ನು ಎತ್ತಿಹಿಡಿಯುವ ಕಥಾವಸ್ತುವಿದೆ ಎಂಬ ಕಾರಣಕ್ಕಾಗಿ ತೆರೆಗೆ ವಿನಾಯಿತಿಗೆ ಸಾಕಷ್ಟು ಬೇಡಿಕೆ ಹೆಚ್ಚಿತ್ತು. ಇದರ ಬೆನ್ನಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆಯಿಂದ ಆರು ತಿಂಗಳ ಕಾಲ ಜಿಎಸ್ ಟಿ ವಿಧಿಸದೇ ಸಿನಿಮಾಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ.
ಅಂದಹಾಗೇ ರಾಜ್ಯ ಸರ್ಕಾರ ಕಾಶ್ಮೀರಿ ಫೈಲ್ಸ್ ಬಳಿಕ ತೆರೆಗೆ ವಿನಾಯಿತಿ ನೀಡಿರುವ ಎರಡನೇ ಹಾಗೂ ಮೊದಲ ಕನ್ನಡ ಸಿನಿಮಾ 777 ಚಾರ್ಲಿ ಎಂಬ ಹೆಗ್ಗಳಿಕೆ ಇದೆ. ಕಿರಣ್ ರಾಜ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ, ಬೇಬಿ ಶರ್ವರಿ ಸೇರಿದಂತೆ ಹಲವರು ನಟಿಸಿದ್ದಾರೆ.