Categories
ಸಿನಿ ಸುದ್ದಿ

ಬೆಳ್ಳಿಹಬ್ಬದ ಖುಷಿಯಲ್ಲಿ ಕಲಾಕಾರ್! ಹರೀಶ್ ರಾಜ್ ಬಣ್ಣಕ್ಕೆ 25 ವರುಷ…

ತಮ್ಮದೇ ಅಭಿನಯದ ಮೂಲಕ ಜನಮನ ಗೆದ್ದ ನಟ ಹರೀಶ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳು ಕಳೆದಿದೆ. ತಮ್ಮ ಸಿನಿಪಯಣಕ್ಕೆ 25 ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ಹರೀಶ್ ರಾಜ್ ಚಿಕ್ಕ ಸಮಾರಂಭ ಆಯೋಜಿಸಿದ್ದರು. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟ, ನಿರ್ದೇಶಕ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕ ಮಧುಸೂದನ್ ಗೌಡ ಅಲ್ಲಿದ್ದರು.

ತಮ್ಮ ಸಿನಿ ಪಯಣ ಕುರಿತು ಮಾತಿಗಿಳಿದ ಹರೀಶ್‌ರಾಜ್‌ ಹೇಳಿದ್ದಿಷ್ಟು. 1997 ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಸೌಂದರ್ಯ ಅವರು ನಟಿಸಿದ್ದ
“ದೋಣಿ ಸಾಗಲಿ” ಚಿತ್ರದ ಮೂಲಕ ನನ್ನ ಸಿನಿಪಯಣ ಆರಂಭವಾಯಿತು. ಅದೇ ವರ್ಷ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ್ದ “ತಾಯಿ ಸಾಹೇಬ” ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಅದರಲ್ಲಿ ನಾನು ಜಯಮಾಲ ಅವರ ಮಗನ ಪಾತ್ರ ನಿರ್ವಹಣೆ ಮಾಡಿದ್ದೆ. ಇಂದಿನ ಸಮಾರಂಭಕ್ಕೆ ನನ್ನ ಮೊದಲ ಸಿನಿಮಾ ನಿರ್ಮಾಪಕರಾದ ಮಧುಸೂದನ್ ಗೌಡ ಅವರು, ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಸರ್, ಸುನೀಲ್ ಪುರಾಣಿಕ್ ಹಾಗೂ ಭಾ.ಮ.ಹರೀಶ್ ಸರ್ ಬಂದಿರುವುದು ಖುಷಿಯಾಗಿದೆ.

ನಾನು, ಸುನೀಲ್ ಪುರಾಣಿಕ್ ಅವರು ಫಣಿ ರಾಮಚಂದ್ರ ನಿರ್ದೇಶನದ “ದಂಡ ಪಿಂಡಗಳು” ಧಾರಾವಾಹಿಯಲ್ಲಿ ಜೊತೆಗೆ ನಟಿಸಿದ್ದೆವು. ಇದೆಲ್ಲಾ ನೆನಪಿಸಿಕೊಂಡರೆ ಇಷ್ಟು ಬೇಗ 25 ವರ್ಷಗಳು ಕಳೆದು ಹೋಯಿತಾ? ಅನಿಸುತ್ತದೆ. ಈ ಇಪ್ಪತ್ತೈದು ವರ್ಷಗಳಲ್ಲಿ 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಾಡಿದ್ದೇನೆ. ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ರಾಜೇಂದ್ರ ಸಿಂಗ್ ಬಾಬು ಅವರಂತಹ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿದ್ದೇನೆ.


ಬಿಗ್ ಬಾಸ್ ನನಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. ನಾನು ಏನಾದರೂ ಈ ರಂಗದಲ್ಲಿ ಸಾಧನೆ ಮಾಡಿದ್ದೀನಿ ಅಂದರೆ ಅದಕ್ಕೆ ಕಾರಣ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಹಾಗೂ ಮಾಧ್ಯಮದವರು. ಇಡೀ ಚಿತ್ರರಂಗಕ್ಕೆ ನಾನು ಚಿರ ಋಣಿ ಎಂದರು ಹರೀಶ್ ರಾಜ್.

ಸ್ನೇಹಿತರೊಬ್ಬರ ಮೂಲಕ ನನಗೆ ಹರೀಶ್ ರಾಜ್ ಪರಿಚಯವಾದರು. ರಬಕವಿಯಲ್ಲಿ “ತಾಯಿಸಾಹೇಬ” ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಜಯಮಾಲ, ಶಿವರಾಮಣ್ಣ ಭಾಗವಹಿಸಿದ್ದರು. ತುರ್ತು ಕಾರ್ಯದ ನಿಮಿತ್ತ ಶಿವರಾಮಣ್ಣ ಬೆಂಗಳೂರಿಗೆ ತೆರಳಬೇಕಾಯಿತು. ಆಗ ತಕ್ಷಣ ಹರೀಶ್ ರಾಜ್ ಅವರಿಗೆ ಫೋನ್ ಮಾಡಿ, ನಾಳೆ ನಿಮ್ಮ ಪಾತ್ರದ ಚಿತ್ರೀಕರಣವಿದೆ. ರಾತ್ರಿಯೇ ಹೊರಟು ಬನ್ನಿ ಎಂದೆ. ಬೆಳಗ್ಗೆ ಬಂದರು. ಯಾವುದೇ ಆಯಾಸವಿಲ್ಲದೆ ಅಂದಿನ ಚಿತ್ರೀಕರಣದಲ್ಲಿ ಲವಲವಿಕೆಯಿಂದ ಭಾಗವಹಿಸಿ, ಎಲ್ಲರ ಮೆಚ್ಚುಗೆ ಪಡೆದರು. ನಂತರ ನನ್ನ “ದ್ವೀಪ” ಚಿತ್ರದಲ್ಲೂ ಅಭಿನಯಿಸಿದ್ದರು. ಆ ಚಿತ್ರದ ಅಭಿನಯಕ್ಕಾಗಿ ಇವರು ರಾಷ್ಟ್ರೀಯ ಪ್ರಶಸ್ತಿ ರೇಸ್ ನಲ್ಲಿ ಇದ್ದರು ಎಂದು ನನಗೆ ನಿಧಾನವಾಗಿ ತಿಳಿಯಿತು. ಒಟ್ಟನಲ್ಲಿ ಹರೀಶ್ ರಾಜ್ ಉತ್ತಮ ನಟ.‌ ಮುಂದೆ ಸಹ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾರೈಸಿದರು.

ತಮ್ಮ ಹರೀಶ್ ರಾಜ್ ಒಡನಾಟದ ಬಗ್ಗೆ ಸುನೀಲ್ ಪುರಾಣಿಕ್ ನೆನಪಿಸಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಶುಭಾಶಯ ತಿಳಿಸಿದರು.

Categories
ಸಿನಿ ಸುದ್ದಿ

ವಿಜಯಾನಂದ ಟೀಸರ್ ಗೆ ಭರಪೂರ ಮೆಚ್ಚುಗೆ: ಇದು ವಿಜಯ ಸಂಕೇಶ್ವರ ಬಯೋಪಿಕ್…

ಈಗಾಗಲೇ ನಾನಾ ಭಾಷೆಯಲ್ಲಿ ಹಲವು ಪ್ರಮುಖ ವ್ಯಕ್ತಿಗಳ, ಸಾಧಕರ ಜೀವನ ಚರಿತ್ರೆ ಕುರಿತು ಸಿನಿಮಾಗಳು ಬಂದಿವೆ. ಬಯೋಪಿಕ್ ಸಿನಿಮಾಗಳು ಸುಮ್ಮನೆ ಆಗುವುದಿಲ್ಲ. ಅದರಲ್ಲೂ ಸಾಧನೆ‌ ಮಾಡಿ ಸಾವಿರಾರು ಮಂದಿ ಬದುಕನ್ನ ಹಸನು ಮಾಡಿದವರ ಸಿನಿಮಾಗಳೇ ಹೆಚ್ಚು. ಈಗ ಕನ್ನಡದಲ್ಲೂ ಅಂತಹ ಸಾದಕರೊಬ್ಬರ ಬಯೋಪಿಕ್ ಸಿನಿಮಾವೊಂದು ಶುರುವಾಗಿದೆ.‌ಅದು ಬೇರಾರೂ ಅಲ್ಲ, ಸಾರಿಗೆ ಕ್ಷೇತ್ರ ಮತ್ತು ಮಾಧ್ಯಮ ರಂಗದಲ್ಲಿ ಛಾಪು ಮೂಡಿಸಿರುವ ಯಶಸ್ವಿ ಉದ್ಯಮಿ ವಿಜಯ ಸಂಕೇಶ್ವರ ಅವರದು.‌ಅವರ ಬಯೋಪಿಕ್ ಸಿನಿಮಾಗೆ ಇಟ್ಟ ಹೆಸರು ವಿಜಯಾನಂದ….

ಪ್ರತಿಷ್ಠಿತ ವಿ ಆರ್ ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಪ್ರೊಮೋಟರ್ ಆದ ಡಾ. ಆನಂದ ಸಂಕೇಶ್ವರ ಅವರು ಇದೀಗ ವಿ ಆರ್ ಎಲ್ ಮೀಡಿಯಾ ಸಂಸ್ಥೆಯ ಅಡಿಯಲ್ಲಿ “ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್” ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿ, ಅವರ ನಿರ್ಮಾಣ ಸಂಸ್ಥೆಯ ಚೊಚ್ಚಲ ಕನ್ನಡ ಸಿನಿಮಾ “ವಿಜಯಾನಂದ ನಿರ್ಮಿಸಿದ್ದಾರೆ.

ಇದು‌ ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರ. 1976 ರಲ್ಲಿ ಒಂದೇ ಟ್ರಕ್‌ನೊಂದಿಗೆ ತನ್ನ ಪ್ರಯಾಣ ಶುರುಮಾಡಿ , ಇಂದು ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಕಂಪನಿ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಅದ್ಭುತ ಮತ್ತು ರೋಮಾಂಚನಕಾರಿ ಕಥೆ ಇಲ್ಲಿದೆ. ಈ ಕಥೆ ವಿಜಯ ಸಂಕೇಶ್ವರ ಮತ್ತು ಅವರ ಪುತ್ರ ಆನಂದ ಸಂಕೇಶ್ವರ ಅವರ ಯಶಸ್ಸಿನ ಕಥೆ ಒಳಗೊಂಡಿದೆ.


“ವಿಜಯಾನಂದ” ಚಿತ್ರದ ಮೊದಲ ಅಧಿಕೃತ ಟೀಸರ್ ಈಗ ರಿಲೀಸ್ ಆಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆದು ಲಕ್ಷಗಟ್ಟಲೆ ವೀಕ್ಷಣೆ ಪಡದಿದೆ.
ಇದು ತಮಿಳು, ತೆಲುಗು ಮತ್ತು ಮಳಯಾಳಂ ಭಾಷೆಗಳಲ್ಲೂ ತೆರೆ ಕಾಣಲಿದೆ. ಇನ್ನು ಈ ಹಿಂದೆ “ಟ್ರಂಕ್” ಸಿನಿಮಾ ನಿರ್ದೇಶಿಸಿದ್ದ ರಿಷಿಕಾ ಶರ್ಮಾ ಈ ಚಿತ್ರದ ನಿರ್ದೇಶಕರು.”ವಿಜಯಾನಂದ” ಸಿನಿಮಾಗೆ ವಿಜಯ ಸಂಕೇಶ್ವರ ಅವರ ಪಾತ್ರಕ್ಕೆ “ಟ್ರಂಕ್” ಚಿತ್ರದಲ್ಲಿ ನಾಯಕರಾಗಿದ್ದ ನಿಹಾಲ್ ಬಣ್ಣ ಹಚ್ಚಿದ್ದಾರೆ.

ಪ್ರಮುಖ ಪಾತ್ರಗಳಲ್ಲಿ ಅನಂತನಾಗ್, ವಿನಯಾ ಪ್ರಸಾದ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ಸಿರಿ ಪ್ರಹ್ಲಾದ್ ಮತ್ತು ಭರತ್ ಬೋಪಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರ ರಂಗದ ಗೋಪಿ ಸುಂದರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ರವಿ ವರ್ಮಾ ಸಾಹಸವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ಹಿಡಿದಿದ್ದಾರೆ. ಕುಮಾರ್ ಸಂಕಲನವಿದೆ.

Categories
ಸಿನಿ ಸುದ್ದಿ

ಇದು ಇವರ ಸೆಕೆಂಡ್ ಲೈಫ್‌ ಸ್ಟೋರಿ! ಇಲ್ಲಿ ಏನೇನು ಆಗುತ್ತೆ ಅನ್ನೋದೇ‌ ಸಸ್ಪೆನ್ಸ್

ಯಾರಾದರೂ ದೊಡ್ಡ ಅನಾಹುತದಿಂದ ಪಾರಾದಾಗ ಆಡುವ ಮಾತು ನನಗೆ ಇದು “2nd ಲೈಫ್” ಅಂತ. ಈಗ ಅದೇ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ.

ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ನಿರ್ಮಿಸಿರುವ “2nd ಲೈಫ್” ಚಿತ್ರವನ್ನು ರಾಜು ದೇವಸಂದ್ರ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು “ಅಕ್ಷತೆ” ಸೇರಿದಂತೆ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದು ನಾಲ್ಕನೇ ಚಿತ್ರ. ಈ ಚಿತ್ರದ ಬಗ್ಗೆ ಅವರು ಹೇಳಿದ್ದಿಷ್ಟು…

ಇದು ನನ್ನ ನಾಲ್ಕನೇ ನಿರ್ದೇಶನದ ಚಿತ್ರ. ಥ್ರಿಲ್ಲರ್ ಕಥಾಹಂದರ ಹೊಂದಿದೆ ಈ ಚಿತ್ರ. ಮಂಜುಳ ರಮೇಶ್ ಅವರು ಕಥೆ, ಚಿತ್ರಕಥೆ ಬರೆದಿದ್ದಾರೆ. ನಾನು ನಿರ್ದೇಶನ ಮಾಡಿದ್ದೇನೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಚಿತ್ರ ಇದಾಗಿದೆ ಎಂದು ನಿರ್ದೇಶಕ ರಾಜು ದೇವಸಂದ್ರ ತಿಳಿಸಿದರು.

ನಾನು ಈ ಹಿಂದೆ “ಸ್ವಾರ್ಥ ರತ್ನ” ಎಂಬ ಚಿತ್ರದಲ್ಲಿ ‌ಅಭನಯಸಿದ್ದೆ. ಈಗ “2 nd ಲೈಫ್” ಚಿತ್ರದಲ್ಲಿ ನಟಿಸಿದ್ದೇನೆ. ವಿಭಿನ್ನ ಕಥೆಯಿರುವ ಚಿತ್ರ ನಮ್ಮದು. ಮಗು ಹುಟ್ಟಿದ ಕೆಲವೆ ದಿನಗಳಲ್ಲಿ ಕರಳು ಬಳ್ಳಿ(ಹೊಕ್ಕಳ ಬಳ್ಳಿ) ಬೀಳುತ್ತದೆ. ಇದನ್ನು ಶೇಖರಿಸಿಡುವ ಕಾರ್ಯ ಈಗ ಭರದಿಂದ ಸಾಗಿದೆ. ಇದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಅಂತಹ ಕಥಾವಸ್ತು ಆಧರಿಸಿ ನಮ್ಮ ಚಿತ್ರ ನಿರ್ಮಾಣವಾಗಿದೆ. ಒಂದು ಬೇಜಾರಿನ ಸಂಗತಿ ಅಂದರೆ, ಹೊಸ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವ ಪುನೀತ್ ರಾಜಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು.

ಈ ಸಲುವಾಗಿ ಚರ್ಚಿಸಲು ಅವರು ನಮಗೆ ಸ್ನೇಹಿತರೊಬ್ಬರ ಮೂಲಕ ಸಮಯವನ್ನು ನೀಡಿದ್ದರು. ಆದರೆ ವಿಧಿಬರಹವೇ ಬೇರೆಯಾಗಿತ್ತು. ಈಗ ನಮ್ಮ ಚಿತ್ರದ ಹಾಡು ಪಿ.ಆರ್.ಕೆ ಮೂಲಕವೇ ಬಿಡುಗಡೆಯಾಗಿರುವುದು ಖುಷಿಯ ವಿಚಾರವೆಂದು ನಾಯಕ ಆದರ್ಶ್ ಗುಂಡುರಾಜ್ ತಿಳಿಸಿದರು.

ಈ‌ ಚಿತ್ರದಲ್ಲಿ ನನ್ನದು ಅಂಧ ಪಾತ್ರ. ಡೈರೆಕ್ಟರ್ ನನಗೆ ಕಥೆ ಬಗ್ಗೆ ಏನು ಹೇಳಿಲ್ಲ. ಪಾತ್ರದ ಕುರಿತು ಮಾತ್ರ ಹೇಳಿದ್ದಾರೆ ಎಂದರು ನಾಯಕಿ ಸಿಂಧೂ ರಾವ್.

ಸಂಗೀತ ನಿರ್ದೇಶಕ ಆರವ್ ಕೌಶಿಕ್, ಛಾಯಾಗ್ರಹಕ ರಮೇಶ್ ಕೊಯಿರ ಹಾಗೂ ನಟ ಶಿವಪ್ರದೀಪ್, ನವೀನ್ ಶಕ್ತಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಹುಲಿಯನಿಗೊಂದು ಹುಲಿಯಾ ಹಾಡು! ಗಿರಿಜಾ ಸಿದ್ಧಿ ಧ್ವನಿಗೆ ಸಿದ್ಧರಾಮಯ್ಯ ಫಿದಾ…

ಹಿರಿಯ ರಾಜಕಾರಣಿ ಸಿದ್ದರಾಮಯ್ಯನವರಿಗೋಸ್ಕರ ಸಲಗ ಖ್ಯಾತಿಯ ಗಿರಿಜಾ ಸಿದ್ದಿ ಮೈಸೂರು ಹುಲಿಯಾ ಎಂಬ ಹಾಡು ಹಾಡಿದ್ದಾರೆ. ಎಪ್ಪತ್ತೈದರ ವಸಂತಕ್ಕೆ ಕಾಲಿಟ್ಟಿರುವ ರಾಜಕೀಯ ಧುರೀಣ ಸಿದ್ದಣ್ಣನಿಗೋಸ್ಕರ ಅಪರೂಪದ ಹಾಡಿಗೆ ಕಂಠದಾನ ಮಾಡಿದ್ದಾರೆ ಗಿರಿಜಾ ಸಿದ್ಧಿ.

ಸಲಗ ಚಿತ್ರದ ಟಿಣಿಂಗ ಮಿಣಿಂಗ ಟಿಶ್ಯಾ ಹಾಡಿನ ಮೂಲಕ ಮನೆ ಮಾತಾಗಿದ್ದ ಗಿರಿಜಾ ಇದೇ ಮೊದಲ ಬಾರಿಗೆ ಜನಪದ ಶೈಲಿಯಲ್ಲಿ ಈ ಹಾಡು ಹಾಡಿದ್ದು, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಹಾಡಿಗೆ ಸಂಗೀತ ನೀಡಿದ್ದು, ಸಿನೆಮಾ ಶೈಲಿಯಲ್ಲಿ ಹಾಡು ಮೂಡಿ ಬಂದಿದೆ. ಸಿದ್ದರಾಮಯ್ಯನವರ ಎಪ್ಪತ್ತೈದು ವರುಷದ ಜೀವನ ಸಾಧನೆಯ ವರ್ಣನೆ ಹೊಂದಿರುವ ಈ ಹಾಡಿಗೆ ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ವಿಶೇಷವಾದ ಸಾಹಿತ್ಯ ಬರೆದಿದ್ದಾರೆ. ಕೈ ಹಿಡಿಯೋ ಕೈ ಸಿದ್ದರಾಮಯ್ಯ ಎನ್ನುತ್ತ ಶುರುವಾಗುವ ಈ ಹಾಡನ್ನು ಸಿದ್ದರಾಮಯ್ಯನವರ ಆಪ್ತರೂ ಆಗಿರುವ ಪುಲಕೇಶಿ ನಗರದ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ.

ಸಲಗ ಗಿರಿಜಾ ಹಾಡಿರುವ ಈ ಹಾಡಿನ ಜೊತೆಗೆ ಇದೇ ಆಗಸ್ಟ್ 3 ರಂದು ಇನ್ನೊಂದು ಹಾಡು ಸಹ ಬಿಡುಗಡೆ ಆಗಲಿದ್ದು, ಅದನ್ನು ಚುಟುಚುಟು ಅಂತೈತಿ ಖ್ಯಾತಿಯ ರವೀಂದ್ರ ಸೊರಗಾವಿ ಹಾಡಿದ್ದಾರೆ. ಹರ್ಷ ವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಅವರೇ ಸಾಹಿತ್ಯ ಬರೆದಿದ್ದಾರೆ.

ಈ ಎರಡೂ ಲಿರಿಕಲ್ ವೀಡಿಯೋ ಹೊಂದಿರುವ ಹಾಡುಗಳು ಎ೨ ಎಂಟರ್ ಟೈನ್ ಮೆಂಟ್ ಚಾನೆಲ್ ನಲ್ಲಿ ರಿಲೀಸ್ ಆಗಲಿದ್ದು, ಈಗಾಗಲೇ ಸಿದ್ದಿ ಹಾಡಿರುವ ಜೈ ಜೈ ಜೈ ಜೈ ಜನ ನಾಯಕ ಎಂಬ ಸಾಲುಗಳಿಂದ ಕೂಡಿರುವ ಹಾಡು ವೈರಲ್ ಆಗಿದೆ. ಸಿದ್ದರಾಮಯ್ಯ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೇ ಮಾಡಿದೆ.


ಆಗಸ್ಟ್ ೩ರಂದು ಸಿದ್ದರಾಮಯ್ಯನವರ ಹುಟ್ಟುಹಬ್ಬದ ಸಮಾರಂಭ ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಅದೇ ದಿನ ಈ ಹಾಡಿನ ಲೋಕಾರ್ಪಣೆಯಾಗಲಿದೆ.

Categories
ಸಿನಿ ಸುದ್ದಿ

ನಟಿ ಮೇಘನರಾಜ್ ಅವರಿಗೆ ಪ್ರತಿಷ್ಠಿತ ಫೆಸ್ಟಿವಲ್ ಆಫ್ ಗ್ಲೋಬ್ ಪ್ರಶಸ್ತಿ…

ತಮ್ಮ ಉತ್ತಮ ನಟನೆಯ ಮೂಲಕ ಜನಪ್ರಿಯರಾಗಿರುವ ನಟಿ ಮೇಘನರಾಜ್ ಅವರಿಗೆ ಈ ಬಾರಿಯ ಪ್ರತಿಷ್ಠಿತ “FOG HERO” ಅವಾರ್ಡ್ ದೊರಕಿದೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ “ಫೆಡರೇಷನ್ ಆಫ್ ಇಂಡೋ ಅಮೆರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಫೋರ್ನಿಯಾ” ಇವರು ಆಯೋಜಿಸುವ “ಫೆಸ್ಟಿವಲ್ ಆಫ್ ಗ್ಲೋಬ್”(FOG) ಸಮಾರಂಭ ಕಳೆದ ನಲವತ್ತು ವರ್ಷಗಳಿಂದ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಈ ಬಾರಿ ಆಗಸ್ಟ್‌ 19, 20 ಹಾಗೂ 21 ರಂದು ಈ ಸಮಾರಂಭ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ಅಲ್ಲಿ ನೆಲೆಸಿರುವ ಭಾರತೀಯರು, ಸ್ಥಳೀಯರು ಸೇರಿದಂತೆ ಲಕ್ಷಕ್ಕೂ ಅಧಿಕ ಜನ‌ರು ಬರುವ ನಿರೀಕ್ಷೆಯಿದೆ.

ಅಲ್ಲಿನ ರಾಜಕೀಯ ಪ್ರಮುಖರು, ಗಣ್ಯರು ಸಹ ಸಮಾರಂಭಕ್ಕೆ ಆಗಮಿಸುತ್ತಾರೆ. ಪ್ರತಿವರ್ಷ ಭಾರತದ ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಆಗಸ್ಟ್ 15ರ ಆಸುಪಾಸಿನ ದಿನಗಳಲ್ಲಿ ಈ ಹಬ್ಬ ಸಡಗರದಿಂದ ನಡೆಯಲಿದೆ. ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತದೆ.

ಕಳೆದ ಎರಡು ವರ್ಷಗಳ ನಂತರ (ಕೊರೋನ ನಂತರ) ಈ ಬಾರಿ ಮತ್ತೆ ಅದ್ದೂರಿಯಾಗಿ ಈ ಹಬ್ಬವನ್ನು ಆಯೋಜಿಸಲಾಗಿದೆ.

ಪ್ರತಿವರ್ಷ ಈ ಸಂದರ್ಭದಲ್ಲಿ ಭಾರತದಲ್ಲಿ ಸಾಧನೆ ಮಾಡಿರುವ ಗಣ್ಯರೊಬ್ಬರಿಗೆ “FOG HERO” ಅವಾರ್ಡ್” ನೀಡಲಾಗುತ್ತದೆ. ಹೆಚ್ಚಾಗಿ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಆಶಾ ಪರೇಕ್, ಅಮಿತಾಬ್ ಬಚ್ಚನ್, ದೇವಾನಂದ್, ವಿನೋದ್ ಖನ್ನಾ, ಧರ್ಮೇಂದ್ರ ಮುಂತಾದ ಸಿನಿರಂಗದ ಗಣ್ಯರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಾರಿ ದಕ್ಷಿಣ ಭಾರತದ ಖ್ಯಾತ ನಟಿ ಮೇಘನರಾಜ್ “F0G HERO” ಅವಾರ್ಡ್ ಗೆ ಭಾಜನರಾಗಿದ್ದಾರೆ ಎಂದು ಸಂಸ್ಥೆಯ ಕ್ರಿಸ್ ಮೂರ್ತಿ ಮಾಹಿತಿ ನೀಡಿದರು.

ಅಮಿತಾಭ್‌ ಬಚ್ಚನ್‌, ಧರ್ಮೇಂದ್ರ ಮುಂತಾದ ಗಣ್ಯರು ಪಡೆದಿರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ನಾನು ಭಾಜನಳಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಅಂತಹ ಮಹಾನ್ ನಟರಿಗೆ ಸಂದಿರುವ ಪ್ರಶಸ್ತಿಗೆ ಈ ಬಾರಿ ನಾನು ಆಯ್ಕೆಯಾಗಿರುವುದು ನನ್ನ ಪುಣ್ಯ. ನನ್ನ ತಂದೆಯ ಮೂಲಕ ಈ ವಿಷಯ ನನಗೆ ತಿಳಿಯಿತು. ಆಗಸ್ಟ್21 ರಂದು ನಡೆಯುವ ಅದ್ದೂರಿ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಿದ್ದೇನೆ. ಕನ್ನಡ ಚಿತ್ರರಂಗ ಈಗ ಇಡೀ ವಿಶ್ವದಾದ್ಯಂತ ಜನಪ್ರಿಯ. ಕನ್ನಡಿಗಳಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಹೆಚ್ಚಿನ ಖುಷಿಯಾಗಿದೆ ಎಂದರು ನಟಿ ಮೇಘನರಾಜ್.

Categories
ಸಿನಿ ಸುದ್ದಿ

ಕೆವಿಎನ್ ಪ್ರೊಡಕ್ಷನ್ ತೆಕ್ಕೆಗೆ ಗಾಳಿಪಟ 2 ವಿತರಣೆ ಹಕ್ಕು

ಕನ್ನಡ ಚಿತ್ರರಂಗ ಈಗ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಹ ಸಿನಿಮಾಗಳನ್ನು ಕಟ್ಟಿ ಕೊಡುತ್ತಿದೆ. ಸದಭಿರುಚಿಯ ಸಿನಿಮಾಗಳ ಜೊತೆಯಲ್ಲಿ ಮಾಸ್ ಸಿನಿಮಾಗಳ ಮೂಲಕ ಸಾಗರದಾಚೆಗೂ ಜೋರು ಸದ್ದು ಮಾಡುತ್ತಿದೆ.

ಈಗ ಹೊಸ ಸುದ್ದಿ ಅಂದರೆ, ಕನ್ನಡದಲ್ಲಿ ದೊಡ್ಡ ಪ್ರೊಡಕ್ಷನ್ ಕಂಪನಿ ಎನಿಸಿಕೊಂಡಿರುವ ಕೆವಿಎನ್ ಪ್ರೊಡಕ್ಷನ್ ಕೂಡ ಎಂಟ್ರಿಯಾಗಿದ್ದು, ಆ ಮೂಲಕ ಬಿಗ್ ಸ್ಟಾರ್ಸ್ ಸಿನಿಮಾಗಳ ನಿರ್ಮಾಣದ‌ ಜೊತೆ ಜೊತೆಗೆ ಸ್ಟಾರ್ಸ್ ಸಿನಿಮಾಗಳ ವಿತರಣೆ ಮಾಡಲು ಮುಂದಾಗಿದೆ. ಈಗಾಗಲೇ ಹಲವು ಸಿನಿಮಾಗಳ ವಿತರಣೆ ಹಕ್ಕು ಪಡೆದಿರುವ ಕೆವಿಎನ್, ಈಗ ಯೋಗರಾಜ್ ಭಟ್ ನಿರ್ದೇಶನದ, ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಅಭಿನಯದ ಗಾಳಿಪಟ 2 ಸಿನಿಮಾದ ವಿತರಣೆ ಹಕ್ಕು ಪಡೆದಿದ್ದಾರೆ.

ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ನಿಂದ ಬಹು ತಾರಾಗಣದ
ಗಾಳಿಪಟ 2 ಚಿತ್ರದ ವಿತರಣೆ ಹಕ್ಕು ಪಡೆದಿದ್ದಾರೆ. ಇತ್ತೀಚೆಗೆ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ

Categories
ಸಿನಿ ಸುದ್ದಿ

ಮಾದೇವನಿಗೆ ಜೈ ಎಂದ ಸೋನಾಲ್! ವಿನೋದ್ ಪ್ರಭಾಕರ್ ಗೆ ಮಾಂಥೆರೋ ಮತ್ತೆ ಜೋಡಿ…

ಮರಿ ಟೈಗರ್ ವಿನೋದ್ ಪ್ರಭಾಕರ್ ಬತ್ತಳಿಕೆಯ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಮಾದೇವ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಅಂಗಳಕ್ಕೀಗ ಪಂಚತಂತ್ರ ಬ್ಯೂಟಿ ಸೋನಲ್ ಮಾಂಥೆರೋ ಎಂಟ್ರಿ ಕೊಟ್ಟಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೋನಲ್ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ನಟಿಸಲಿದ್ದಾರೆ.

ವಿನೋದ್ ಹಾಗೂ ಸೋನಲ್ ಈ ಹಿಂದೆ ರಾಬರ್ಟ್ ಸಿನಿಮಾದಲ್ಲಿ ತನು-ರಾಘವ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮನೆ ಗೆದ್ದಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಖಾಕಿ ಸಿನಿಮಾ ಸಾರಥಿ ನವೀನ್ ಬಿ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮಾದೇವ ಚಿತ್ರದಲ್ಲಿ ಸೋನಲ್ 80ರ ದಶಕದ ಮಧ್ಯಮವರ್ಗದ ಹುಡುಗಿಯಾಗಿ ಬಣ್ಣ ಹಚ್ಚಲಿದ್ದಾರೆ.

80 ದಶಕದ ಎಮೋಷನಲ್ ಹಾಗೂ ಮಾಸ್ ಎಲಿಮೆಂಟ್ ಕಂಟೆಂಟ್ ಹೊಂದಿರುವ ಮಾದೇವ ಸಿನಿಮಾ ರೈಲು ಮತ್ತು ಜೈಲಿನ ಬ್ಯಾಕ್ ಡ್ರಾಪ್ ನಲ್ಲಿ ನಡೆಯಲಿದೆ. ವಿನೋದ್ ಪ್ರಭಾಕರ್ ಈ ಹಿಂದಿನ ಪಾತ್ರಗಳಿಗಿಂತ ಈ ಚಿತ್ರದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಶಿವಮೊಗ್ಗ, ಧಾರವಾಡ ಮತ್ತು ಹೈದರಾಬಾದ್‌ನಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ. ಹಿರಿಯ ನಟಿ ಶ್ರುತಿ, ಪೋಷಕ ಕಲಾವಿದ ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದು, ಬಾಲಕೃಷ್ಣ ತೋಟ ಕ್ಯಾಮೆರಾ ಕೈಚಳಕ, ಪ್ರದ್ಯೋಥನ್ ಮ್ಯೂಸಿಕ್ ಪುಳಕ ಸಿನಿಮಾಕ್ಕಿದೆ. ಗಾಯತ್ರಿ ರಾಜೇಶ್ ಹಾಗೂ ಲವ್ ಗುರು ಸುಮಂತ್ ನಿರ್ಮಾಣದ ಮಾದೇವ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಮಾದೇವ ಸಿನಿಮಾದ ಜೊತೆಯಲ್ಲಿ ವಿನೋದ್ ಪ್ರಭಾಕರ್ ಲಂಕಾಸುರ ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ. ತಮ್ಮದೇ ಟೈಗರ್ ಟಾಕೀಸ್ ನಡಿ ವಿನೋದ್ ಪತ್ನಿ ನಿಶಾ ನಿರ್ಮಾಣ ಮಾಡ್ತಿರುವ ಈ ಚಿತ್ರದ ಟೈಟಲ್ ಟ್ರ್ಯಾಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡ್ತಿದೆ. ಈ ಚಿತ್ರದಲ್ಲಿ ಮರಿ ಟೈಗರ್ ಹೊಸ ಅವತಾರದಲ್ಲಿ ಅಬ್ಬರಿಸಿದ್ದಾರೆ.

Categories
ಸಿನಿ ಸುದ್ದಿ

ರೆಟ್ರೋ ಶೈಲಿಯಲ್ಲಿ ಪರಿಮಳ ಡಿಸೋಜ ಮಿಂಚಿಂಗ್! ಅದ್ಧೂರಿ ಸೆಟ್ ಸಾಂಗ್ ಜೊತೆ ಶೂಟಿಂಗ್ ಕಂಪ್ಲೀಟ್…

ವಿಲೇಜ್ ರೋಡ್ ಸಂಸ್ಥೆಯ ಮೂಲಕ ವಿನೋದ್ ಶೇಷಾದ್ರಿ ಅವರು ನಿರ್ಮಿಸುತ್ತಿರುವ ಹಾಗೂ ಡಾ.ಗಿರಿಧರ್ ಹೆಚ್ ಟಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಪರಿಮಳ ಡಿಸೋಜಾ” ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನೆಲಮಂಗಲದ ಬಳಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್ ನಲ್ಲಿ ನಡೆಯಿತು.

ರೆಟ್ರೋ ಶೈಲಿಯಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡಿನಲ್ಲಿ ವಿನೋದ್ ಶೇಷಾದ್ರಿ ಹಾಗೂ ಶ್ವೇತ ರಮೇಶ್ ನಟಿಸಿದ್ದಾರೆ. ವಿನೋದ್ ಶೇಷಾದ್ರಿ ಅವರೆ ಈ ಹಾಡನ್ನು ಬರೆದಿದ್ದು, ರಾಜೇಶ್ ಕೃಷ್ಣನ್ ‌ಹಾಗೂ ಶೃತಿ.ವಿ.ಎಸ್ ಹಾಡಿದ್ದಾರೆ. ಈ ಹಾಡಿನ ಚಿತ್ರೀಕರಣದೊಂದಿಗೆ “ಪರಿಮಳ ಡಿಸೋಜಾ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಒಟ್ಟು 72 ದಿನಗಳ ಚಿತ್ರೀಕರಣ ನಡೆದಿದೆ.

ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಕ್ರಿಸ್ಟೋಪರ್ ಜೇಸನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್,ಜಯಂತ್ ಕಾಯ್ಕಿಣಿ, ಕೆ.ಕಲ್ಯಾಣ್ ಹಾಗೂ ವಿನೋದ್ ಶೇಷಾದ್ರಿ ಹಾಡುಗಳನ್ನು ಬರೆದಿದ್ದಾರೆ. ಜೋಗಿ ಪ್ರೇಮ್, ರಾಜೇಶ್ ಕೃಷ್ಣನ್, ಶೃತಿ ವಿ ಎಸ್, ನಕುಲ್ ಆಭಯಂಕರ್, ಸುಪ್ರೀಯ ರಾಮ್ ಹಾಡಿದ್ದಾರೆ,
ಕೆ .ರಾಮ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ವಿಜಯನಗರ ಮಂಜು ನೃತ್ಯ ಈ ಚಿತ್ರಕ್ಕಿದೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರದ ಜೊತೆಗೆ ಉತ್ತಮ ಸಂಗೀತಮಯ ಚಿತ್ರವೂ ಹೌದು. ಕುಟುಂಬ ಸಮೇತ ನೋಡಬಹುದಾದ ಚಿತ್ರ ನಮ್ಮದು ಎನ್ನುತ್ತಾರೆ ನಿರ್ದೇಶಕರು.

ಶ್ರೀನಿವಾಸ್ ಪ್ರಭು, ಭವ್ಯ, ಕೋಮಲ ಬನವಾಸೆ, ವಿನೋದ್ ಶೇಷಾದ್ರಿ, ಶಿವಕುಮಾರ್ ಆರಾದ್ಯ, ಮೀಸೆ ಆಂಜನಪ್ಪ, ಶ್ವೇತ ರಮೇಶ್, ಸುನೀಲ್ ಎ ಮೋಹಿತೆ, ನಾಗಮಂಗಲ ಜಯರಾಮಣ್ಣ,

ಚಂದನ ಶ್ರೀನಿವಾಸ್, ಡಾ.ಚಂದ್ರಶೇಖರ್ ಎನ್ ಆರ್, ಪೂಜಾ ರಾಮಚಂದ್ರ, ಯೋಗೇಶ್, ರೊಹಿಣಿ ಸೇರಿದಂತೆ ಐವತಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ

Categories
ಸಿನಿ ಸುದ್ದಿ

ಪಾಕ್ ನೆಲದಲ್ಲೂ ವಿಕ್ರಾಂತನ ಅಬ್ಬರ! ನೇಪಾಳದಲ್ಲಿ ರೋಣನ ಯಾತ್ರೆ… 27ಕ್ಕೆ 27ದೇಶದಲ್ಲಿ ಪ್ರೀವ್ಯೂ

ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ದುಬೈ ನಲ್ಲಿ ವರ್ಲ್ಡ್‌ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು,
ಈಗ ‘ಸಿನೆಬಡ್ಸ್’ ಎಂಬ ಆಪ್‌ ಮೂಲಕ ಪ್ರೇಕ್ಷಕರು ವಿಕ್ರಾಂತ್‌ರೋಣ ಚಿತ್ರವನ್ನು ತನ್ನಿಷ್ಟದ ಭಾಷೆಗಳಲ್ಲಿ ನೋಡುವಂಥ ಅವಕಾಶವನ್ನು ಕಲ್ಪಿಸುತ್ತಿರುವುದು ವಿಶೇಷ.

ಅಂದಹಾಗೆ, ಈ ಆಪನ್ನು ಹೊರತಂದಿರುವ ಆದಿತ್ಯ ಕಶ್ಯಪ್ ಹೇಳಿದ್ದಿಷ್ಟು.
ನಮ್ಮ ಸಹೋದರ ವಿನೀತ್ ಕಶ್ಯಪ್ ಅವರು ಡೆವಲಪ್ ಮಾಡಿದ ಆಪ್ ಇದಾಗಿದ್ದು, ಪ್ಲೇಸ್ಟೋರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿ ತೆರೆಮೇಲೆ ಯಾವುದೇ ಭಾಷೆ ಸಿನಿಮಾ ಪ್ರದರ್ಶನವಾಗುತ್ತಿರಲಿ, ನಾವು ಮೊಬೈಲ್ ನಲ್ಲಿ ನಮ್ಮಿಷ್ಟದ ಭಾಷೆ ಆಯ್ಕೆ ಮಾಡಿಕೊಂಡು ಹೆಡ್ ಫೋನ್ ಮೂಲಕ ಕೇಳುತ್ತ ಚಿತ್ರವನ್ನು ವೀಕ್ಷಿಸಬಹುದು.
ಕಳೆದವಾರ ರಿಲೀಸಾದ ತಮಿಳಿನ ರಾಕೆಟ್ರಿ ಚಿತ್ರದ ಜೊತೆ ನಾವು ಟೈಅಪ್ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಇದಲ್ಲದೆ ಓಟಿಟಿಯಲ್ಲಿ ಬರುವ ಚಿತ್ರಗಳನ್ನೂ ನಮ್ಮ ಭಾಷೆಯಲ್ಲೇ ವೀಕ್ಷಿಸಬಹುದಾಗಿದೆ. ಚಿತ್ರದ ನಿರ್ಮಾಪಕರು ಆಪ್‌ನೊಂದಿಗೆ ಮೊದಲೇ ಟೈಅಪ್ ಮಾಡಿಕೊಂಡಿದ್ದರೆ ಮಾತ್ರವೇ ಅದು ಸಾಧ್ಯವಾಗಲಿದೆ ಎಂದು ವಿವರಿಸಿದರು.

ನಿರ್ಮಾಪಕ ಜಾಕ್ ಮಂಜು ಮಾತನಾಡಿ ಒಂದೆರಡು ತಿಂಗಳ ಹಿಂದೆಯೇ ನನ್ನಬಳಿ ಬಂದಿದ್ದರೆ ಬೆಂಗಾಳಿ, ಮರಾಠಿ, ಗುಜರಾತಿ ಭಾಷೆಯಲ್ಲೂ ನಮ್ಮ ಚಿತ್ರವನ್ನು ಡಬ್ ಮಾಡಬಹುದಿತ್ತು. ನಾವು ಡಬ್ ಮಾಡಿದ ಅಷ್ಟೂ ಭಾಷೆಯ ಸೌಂಡ್‌ಟ್ರ‍್ಯಾಕನ್ನು ಇವರಿಗೆ ಕೊಟ್ಟಾಗ ಅವರು ಅದನ್ನು ತಮ್ಮ ಆಪ್‌ಗೆ ಅಳವಡಿಸುತ್ತಾರೆ. ಕೆಲ ಕೇಂದ್ರಗಳಲ್ಲಿ ಎಲ್ಲಾ ಭಾಷೆಯಲ್ಲಿ ರಿಲೀಸ್ ‌ಮಾಡಲು ಸಾಧ್ಯವಾಗದಿದ್ದಾಗ ಆ ಭಾಷೆಯ ಜನರಿಗೆ ಇದರಿಂದ ಅನುಕೂಲವಾಗುತ್ತದೆ. ಇದು
ಚಿತ್ರದ ಯಾವುದೇ ಕಂಟೆಂಟನ್ನು ಕಾಪಿ ಮಾಡಲ್ಲ, ಇದೆಲ್ಲ ತಿಳಿದುಕೊಂಡೇ ನಾವು ಮುಂದುವರೆಯುತ್ತಿದ್ದೇವೆ ಎಂದರು. ಜುಲೈ 27ರಂದು ಪ್ರಪಂಚದ 27ದೇಶಗಳಲ್ಲಿ ಪ್ರೀವ್ಯೂ ಆಗುತ್ತಿದೆ. ಜೊತೆಗೆ ದುಬೈನಲ್ಲಿ 5 ಭಾಷೆಯಲ್ಲೂ ಪ್ರದರ್ಶನವಾಗಲಿದೆ. ನಿನ್ನೆಯಷ್ಟೇ ನೇಪಾಳ ಕನ್‌ಫರ್ಮ್ ಆಯ್ತು, ಅಲ್ಲದೆ ಪಾಕಿಸ್ತಾನದಲ್ಲೂ ವಿಕ್ರಾಂತ್‌ರೋಣ ರಿಲೀಸಾಗುವ ಸಾಧ್ಯತೆಯಿದೆ. ಪ್ರಪಂಚದಾದ್ಯಂತ 3200ರಿಂದ 3500 ಚಿತ್ರಮಂದಿಗಳಲ್ಲಿ ವಿಕ್ರಾಂತ್ ರೋಣ ರಿಲೀಸಾಗುತ್ತಿದೆ, ಕರ್ನಾಟಕದಲ್ಲೇ 400ರಿಂದ 420 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕರ್ನಾಟಕಕ್ಕಿಂತ ತೆಲುಗು ರಾಜ್ಯಗಳಲ್ಲಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಬಾಲಿವುಡ್‌ನಲ್ಲಿ 900 ಚಿತ್ರಮಂದಿರ, ಟಾಲಿವುಡ್‌ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್ ಅಲ್ಲದೆ ವಿದೇಶಗಳಲ್ಲಿ 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಕ್ರಾಂತ್‌ರೋಣ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನಾಳೆ, ನಾಡಿದ್ದು ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಈಗಾಗಲೇ ರಿಲೀಸಾಗಿರುವ ಟ್ರೇಲರ್ ಜೊತೆಗೆ ಹಾಡುಗಳಂತೂ ಒಂದಕ್ಕಿಂತ ಒಂದು ಹೆಚ್ಚಾಗಿ
ವೈರಲ್ ಆಗಿವೆ. ಅದರಲ್ಲೂ ಯಾರ ಮೊಬೈಲ್‌ನಲ್ಲಿ ನೋಡಿದರೂ ರಾರಾ.. ರಕ್ಕಮ್ಮ ಹಾಡಿನ
ರೀಲ್ಸ್ ನದ್ದೇ ಅಬ್ಬರ. ಈ ಹಾಡು ಅಷ್ಟೂ ಭಾಷೆಗಳಲ್ಲೂ ದೊಡ್ಡ ಕ್ರೇಜನ್ನೇ ಸೃಷ್ಟಿಸಿದೆ.ಶೇಂಗಾ.90ರಷ್ಟು ೩ಡಿ ವರ್ಷನ್ ಚಿತ್ರ ರಿಲೀಸಾಗುತ್ತಿದ್ದು, 3ಡಿ ಇಲ್ಲದ ಕಡೆ ಮಾತ್ರವೇ 2ಡಿ
ವರ್ಷನ್ ಪ್ರದರ್ಶನವಾಗಲಿದೆ.

Categories
ಸಿನಿ ಸುದ್ದಿ

ಚಲನಚಿತ್ರ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಫಿಲ್ಮ್ ಚೇಂಬರ್‌ ಸನ್ಮಾನ…

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಮೂರು ಪ್ರಶಸ್ತಿಗಳು ಲಭಿಸಿವೆ. ವಿಶಿಷ್ಟ ಕಥಾಹಂದರದ ‘ಡೊಳ್ಳು’ ಸಿನಿಮಾಗೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ ಹಾಗೂ ಸಿಂಕ್ ಸೌಂಡ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿದೆ.

‘ತಲೆದಂಡ’ ಚಿತ್ರಕ್ಕೆ ಪರಿಸರ ಕಾಳಜಿಯ ಕಥಾವಸ್ತುವುಳ್ಳ ರಾಷ್ಟ್ರ ಪ್ರಶಸ್ತಿಯ ಗರಿ ಒಲಿದಿದೆ. ‘ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಸಿನಿಮಾ’ ವಿಭಾಗದಲ್ಲಿ ಗಿರೀಶ್​ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ’ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಇದು ಕನ್ನಡಿಗರಿಗೆ ಹೆಮ್ಮಯ ಸಂಗತಿ.

ಫಿಲ್ಮ್‌ ಚೇಂಬರ್ ವತಿಯಿಂದ ರಾಷ್ಟ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು. ಡೊಳ್ಳು ಸಿನಿಮಾ ನಿರ್ಮಾಪಕರಾದ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್, ನಿರ್ದೇಶಕ ಸಾಗರ್ ಪುರಾಣಿಕ್ ಹಾಗೂ ‘ತಲೆದಂಡ’ ಚಿತ್ರದ ನಿರ್ಮಾಪಕಿ ಡಾ. ಹೇಮಾಮಾಲಿನಿ ಕೃಪಾಕರ್ ಸೇರಿದಂತೆ

ಈ ಬಾರಿ ಪ್ರಶಸ್ತಿ ವಿಜೇತರಿಗೆ ಫಿಲ್ಮಂ ಚೇಂಬರ್ ಅಧ್ಯಕ್ಷರಾದ ಭಾ.ಮಾ.ಹರೀಶ್ ಸಾರಥ್ಯದಲ್ಲಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಫಿಲ್ಮಂ ಚೇಂಬರ್ ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಚಿನ್ನೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

error: Content is protected !!