ಕನ್ನಡದ ಹೆಮ್ಮೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ”ದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 17 ರ ಸಂಜೆ 5 ಗಂಟೆಗೆ ಆನಂದ್ ಆಡಿಯೋ ಮೂಲಕ ಬಹು ನಿರೀಕ್ಷಿತ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಈ ಚಿತ್ರ ಆರಂಭದಿಂದಲೂ ಭಾರತದಾದ್ಯಂತ ಮನೆ ಮಾತಾಗಿದೆ. ಈ ಚಿತ್ರದ ಟೀಸರ್ ಯಾವಾಗ ಬರಬಹುದೆಂದು ಕರ್ನಾಟಕ ಮಾತ್ರವಲ್ಲದೆ, ದೇಶದೆಲ್ಲೆಡೆಯಿರುವ ಅಭಿಮಾನಿ ಸಮೂಹ ಕಾತುರದಿಂದ ಕಾಯುತ್ತಿತ್ತು. ಈಗ ಆ ಸಮಯ ನಿಗದಿಯಾಗಿದೆ. ಚಿತ್ರದ ನಾಯಕ ಉಪೇಂದ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ “ಕಬ್ಜ” ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.
ಕನ್ನಡಿಗರ ಹೆಮ್ಮೆಯ “ಕೆ.ಜಿ.ಎಫ್ 2” ಚಿತ್ರ ಈಗಾಗಲೇ ವಿಶ್ವದಾದ್ಯಂತ ವಿಜಯ ಪತಾಕೆ ಹಾರಿಸಿದೆ. ಕನ್ನಡಿಗರ ಮತ್ತೊಂದು ಹೆಮ್ಮೆಯ “ಕಬ್ಜ” ಚಿತ್ರ ಕೂಡ ಗೆಲ್ಲಲೇಬೇಕು. ಚಿತ್ರತಂಡದ ಅಪಾರ ಶ್ರಮದಿಂದ ನಿರ್ಮಾಣವಾಗಿರುವ “ಕಬ್ಜ” ಚಿತ್ರ ಗೆದ್ದರೆ ಕನ್ನಡ ಚಿತ್ರ ಗೆದ್ದಂತೆ.
ಈ ಚಿತ್ರ ಗೆದ್ದರೆ ಮತ್ತೊಮ್ಮೆ ಬಾಲಿವುಡ್ ನಲ್ಲಿ ನಾವೇ ನಂಬರ್ ಒನ್ ಆಗಲಿದ್ದೇವೆ ಎನ್ನುತ್ತಿರುವ ಕನ್ನಡ ಕಲಾಭಿಮಾನಿಗಳು, “ಕಬ್ಜ” ಪ್ಯಾನ್ ಇಂಡಿಯಾ ಚಿತ್ರ ಪ್ರಪಂಚದಾದ್ಯಂತ ಪ್ರಚಂಡ ಯಶಸ್ಸು ಸಾಧಿಸಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತಿದ್ದಾರೆ.
ಆರ್ ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. .
ಸೆಪ್ಟೆಂಬರ್ ಹದಿನೇಳರಂದು ಟೀಸರ್ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಆರ್ ಚಂದ್ರು ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದೊಂದು ಐತಿಹಾಸಿಕ ಕಥೆ ಅಗಿದ್ದು, ವೇಲ್ ಪಾರಿ ಎಂಬ ರಾಜನ ಕಥೆ ಎನ್ನಲಾಗಿದೆ. ನೆಟ್ ಫ್ಲಿಕ್ಸ್ ಹಾಗು ಕರಣ್ ಜೋಹರ್ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗುತ್ತಿದೆ ಎನ್ನಲಾಗಿದ್ದು, ಇದು ಅಂದಾಜು ಒಂದು ಸಾವಿರ ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದ್ದು ಪ್ಯಾನ್ ವರ್ಲ್ಡ್ ಸಿನಿಮಾ ಎಂಬ ಮಾತುಗಳು ಕೇಳಿ ಬರುತ್ತಿವೆ
ರಾಕಿಂಗ್ ಸ್ಟಾರ್ ಯಶ್.. ಕನ್ಮಡ ಚಿತ್ರರಂಗ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವೇ ಒಪ್ಪಿ, ಅಪ್ಪಿಕೊಂಡ ನಟ. ಕನ್ನಡದ ಕೆಜಿಎಫ್ ಮೂಲಕ ಸಾಗರದಾಚೆಗೂ ಕನ್ನಡದ ಕಹಳೆಯನ್ನು ಜೋರಾಗಿಯೇ ಊದಿದ ಅಪರೂಪದ ಹೀರೋ. ಕೆಜಿಎಫ್ ಸಿನಿಮಾ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ.
ಕೆಜಿಎಫ್ ಬಳಿಕ ಯಶ್ ಆ ಕಥೆ ಕೇಳುತ್ತಿದ್ದಾರೆ. ಈ ಸಿನಿಮಾ ಮಾಡುತ್ತಿದ್ದಾರೆ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿದ್ದವು. ನಿಜ ಹೇಳೋದಾದರೆ, ಯಶ್ ಯಾವ ಕಥೆ ಕೇಳಿದರು ಅನ್ನುವುದು ಯಾರಿಗೂ ಗೊತ್ತಿಲ್ಲ. ಅಷ್ಟಕ್ಕೂ ಬಾಲಿವುಡ್ ನ ಅನೇಕ ಮಂದಿ ಅವರ ಬಳಿ ಬಂದು ಕಥೆ ಹೇಳಿದರೂ ಯಶ್ ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ. ಈಗ ಹೊಸ ಸುದ್ದಿ ಏನೆಂದರೆ, ಯಶ್ ಹೊಸ ಕಥೆ ಒಪ್ಪಿಕೊಂಡಿದ್ದು, ಮತ್ತೊಂದು ದಾಖಲೆ ಬರೆಯುವಂತಹ ಸಿನಿಮಾ ಮಾಡಲು ಸಜ್ಜಾಗಿದ್ದರೆ ಎಂಬುದು ಈ ಹೊತ್ತಿನ ವಿಶೇಷ.
ಹೌದು, ಯಶ್ ಕೆಜಿಎಫ್ ಬಳಿಕ ಯಾವ ಸಿನಿಮಾ, ಯಾರ ಜೊತೆ ಮಾಡುತ್ತಾರೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಬಲ್ಲ ಮೂಲಗಳ ಪ್ರಕಾರ, ಯಶ್ ಈಗ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ಐತಿಹಾಸಿಕ ಹಿನ್ನೆಲೆ ಇರುವ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಪಕ್ಕದ ತಮಿಳುನಾಡಿನಿಂದ ನಿಮ್ಮ ‘ಸಿನಿಲಹರಿ’ ಕಿವಿಗೆ ಅಪ್ಪಳಿಸಿದೆ.
ಶಂಕರ್ ಮತ್ತು ಯಶ್ ಕಾಂಬಿನೇಶನ್ ಸಿನಿಮಾ ಅಂದರೆ ನಿಜಕ್ಕೂ ಅದೊಂದು ಬಹು ನಿರೀಕ್ಷೆಯ ಸಿನಿಮಾ ಆಗಲಿದೆ ಎಂಬುದು ದಿಟ. ಅಂದಹಾಗೆ, ಆ ಚಿತ್ರ ನೆಟ್ ಫ್ಲಿಕ್ಸ್ ಮತ್ತು ಕರಣ್ ಜೋಹರ್ ಸೇರಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅದು ಸುಮಾರು ಒಂದು ಸಾವಿರ ಕೋಟಿ ಬಜೆಟ್ ಸಿನಿಮಾ ಅನ್ನುವ ಮಾತುಗಳೂ ಕೇಳಿಬರುತ್ತಿವೆ.
ಶಂಕರ್, ನಿರ್ದೇಶಕ
ಇನ್ನು ಆ ಚಿತ್ರಕ್ಕೆ ‘ವೇಲ್ ಪಾರಿ’ ಎಂದು ಹೆಸರನ್ನಿಡಲಾಗಿದೆ ಎಂಬ ಮಾತೂ ಹರಿದಾಡಿದೆ. ಅದೊಂದು ಐತಿಹಾಸಿಕ ಸಿನಿಮಾ ಆಗಿದ್ದು, ಒಂದು ನಾವೆಲ್ ಬೇಸ್ಡ್ ಸಿನಿಮಾ ಎನ್ನಲಾಗುತ್ತಿದೆ. ಒಬ್ಬ ರಾಜನ ಕಥೆ ಅದಾಗಿದ್ದು, ಪಾರಿ ಎಂಬ ರಾಜನ ಹೋರಾಟ, ಆವೇಶ ಹೇಗಿತ್ತು ಎಂಬುದನ್ನು ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ.
ಲೇಖಕ ವೆಂಕಟೇಸನ್
ಇನ್ನು ಸು. ವೆಂಕಟೇಸನ್ ಎಂಬ ಲೇಖಕರ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎಂಬುದು ಸುದ್ದಿ. ಇಲ್ಲಿ ಯಶ್ ಅವರು ಪಾರಿ ಎಂಬ ರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯ ರಾಮ್ ಚರಣ್ ಸಿನಿಮಾ ಆಗುತ್ತಿದ್ದು, ಆ ಸಿನಿಮಾ ನಂತರ ಯಶ್ ಭಿನಯದ ವೇಲ್ಪಾರಿ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.
ಕರಣ್ ಜೋಹರ್
ಅದೇನೆ ಇರಲಿ, ಈ ಸಿನಿಮಾ ಮಾಹಿತಿ ಎಷ್ಟರಮಟ್ಟಿಗೆ ಸರಿ ಅನ್ನುವುದಕ್ಕೆ ಇಷ್ಟರಲ್ಲೇ ಉತ್ತರ ಸಿಗಲಿದೆ. ಸದ್ಯಕ್ಕೆ ಈ ಸುದ್ದಿ ಪಕ್ಕಾ ಎನ್ನುವುದಕ್ಕೆ ಇನ್ನೂ ಸಮಯವಿದೆ. ಸಿನಿಲಹರಿ ಇಂಥದ್ದೊಂದು ಸುದ್ದಿ ನೀಡಿದೆ. ಎಲ್ಲವು ಅಂದುಕೊಂಡಂತೆ ನಡೆದರೆ ಸಿನಿಮಾ ಅನೌನ್ಸ್ ಬೇಗನೇ ಆಗಲಿದೆ.
ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಬೆಂ.ಕೋ.ಶ್ರೀ ಅವರ ಪುತ್ರ ಅಕ್ಷರ್ ಹಾಗೂ “ಏಕ್ ಲವ್ ಯಾ” ಬೆಡಗಿ ರೀಷ್ಮಾ ನಾಣಯ್ಯ ಅಭಿನಯಿಸಿರುವ “ಛೀ ಕಳ್ಳ” ಆಲ್ಬಂ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಗಾಯಕ ನವೀನ್ ಸಜ್ಜು ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಆಲ್ಬಂ(ವಿಡಿಯೋ ಸಾಂಗ್) ಪ್ರತಿಷ್ಠಿತ A2 music ಸಂಸ್ಥೆ ಮೂಲಕ ಬಿಡುಗಡೆಯಾಗಿದೆ. ಈವರೆಗೂ ಸಾಕಷ್ಟು ಜನಪ್ರಿಯ ಸಿನಿಮಾಗಳ ಹಾಡುಗಳನ್ನು ಹಾಗೂ ಆಲ್ಬಮ್ ಗಳನ್ನು A2 music ಸಂಸ್ಥೆ ಬಿಡುಗಡೆ ಮಾಡಿದೆ.
ಪನರ್ವ್ ಆಕರ್ಷ್ ನಿರ್ದೇಶಿಸಿರುವ ಈ ಅದ್ಭುತ ಗೀತೆ (ವಿಡಿಯೋ ಸಾಂಗ್)ಯನ್ನು ವಿಸ್ಮಯ ಜಗ ಬರೆದಿದ್ದಾರೆ. ವಿಸ್ಮಯ ಜಗ ಅವರೆ ರಾಗ ಸಂಯೋಜನೆ ಕೂಡ ಮಾಡಿದ್ದಾರೆ.
ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ನಿರ್ಮಾಪಕ ಬೆಂ.ಕೋ.ಶ್ರೀ “ಛೀ ಕಳ್ಳ” ಆಲ್ಬಂ ಬಿಡುಗಡೆ ಮಾಡಿ ಶುಭ ಹಾರೈಸಿದರು.
“ಛೀ ಕಳ್ಳ” ಆಲ್ಭಂ ಬಹಳ ಚೆನ್ನಾಗಿದೆ. ನಾನು ಏಳು ಚಿತ್ರಗಳನ್ನು ನಿರ್ಮಿಸಿದ್ದೇನೆ. ಆ ಪೈಕಿ ಕೆಲವು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಹ ಬಂದಿದೆ. ನನಗೆ ಮೊದಲಿನಿಂದಲೂ ಮಾಧ್ಯಮದವರು ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ. ಅದೇ ಪ್ರೋತ್ಸಾಹವನ್ನು ನನ್ನ ಮಗನಿಗೂ ನೀಡಿ ಎಂದರು ಬೆಂ.ಕೋ.ಶ್ರೀ.
ನನಗೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ. ಅದರ ಪೂರ್ವಭಾವಿಯಾಗಿ ಈ ಆಲ್ಬಂ ನಲ್ಲಿ ಅಭಿನಯಿಸಿದ್ದೇನೆ. ರೀಷ್ಮಾ ನಾಣಯ್ಯ ಅವರ ಆಭಿನಯ ಈ ಹಾಡನ್ನು ಮತ್ತಷ್ಟು ಸುಂದರವಾಗಿಸಿದೆ. ವಿಸ್ಮಯ ಜಗ ಅದ್ಭುತವಾದ ಹಾಡನ್ನು ಬರೆದು, ರಾಗ ಸಂಯೋಜನೆ ಕೂಡ ಮಾಡಿದ್ದಾರೆ. ಅಷ್ಟೇ ಅದ್ಭುತವಾಗಿ ಪುನರ್ವ್ ಆಕರ್ಶ್ ನಿರ್ದೇಶಿಸಿದ್ದಾರೆ. ನವೀನ್ ಸಜ್ಜು ಸುಮಧುರವಾಗಿ ಹಾಡಿದ್ದಾರೆ. ನವೀನ್ ಕುಮಾರ್ ಹಾಗೂ ಎ.ಜೆ.ಶೆಟ್ಟಿ ಅವರ ಛಾಯಾಗ್ರಹಣದಲ್ಲಿ ಈ ಹಾಡನ್ನು ನೋಡುವುದೆ ಸೊಗಸು. ನಾಗೇಂದ್ರ ಈ ಹಾಡಿನ ನೃತ್ಯ ನಿರ್ದೇಶಕರು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ “ಛೀ ಕಳ್ಳ” ಆಲ್ಬಂ ಬಿಡುಗಡೆ ಮಾಡಿರುವ A2 music ಅವರಿಗೆ ಧನ್ಯವಾದ ಎಂದರು ಅಕ್ಷರ್.
“ಛೀ ಕಳ್ಳ” ಆಲ್ಬಂ ತುಂಬಾ ಚೆನ್ನಾಗಿದೆ. ಇದು ನಾನು ನಟಿಸಿರುವ ಮೊದಲ ಆಲ್ಬಂ ಎಂದು ರೀಷ್ಮಾ ನಾಣಯ್ಯ ತಿಳಿಸಿದರು.
ನಿರ್ದೇಶಕ ಪುನರ್ವ್ ಆಕರ್ಶ್, ಹಾಡು ಬರೆದು, ರಾಗ ಸಂಯೋಜಿಸಿರುವ ವಿಸ್ಮಯ ಜಗ, ಛಾಯಾಗ್ರಾಹಕ ನವೀನ್ ಕುಮಾರ್ ಹಾಗೂ ನೃತ್ಯ ನಿರ್ದೇಶಕ ನಾಗೇಂದ್ರ “ಛೀ ಕಳ್ಳ” ಕುರಿತು ಮಾತನಾಡಿದರು.
ವಿಜಯ್ ಜಗದಾಲ್ ನಿರ್ದೇಶಿಸಿ, ನಾಯಕನಾಗಿಯೂ ನಟಿಸಿರುವ “ರುಪಾಯಿ” ಚಿತ್ರಕ್ಕಾಗಿ ಉತ್ಸವ್ ಗೊನ್ವಾರ್ ಬರೆದಿರುವ “ಕರೆಯದೆ” ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಆನಂದ್ ರಾಜ ವಿಕ್ರಮ್ ಸಂಗೀತ ನೀಡಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಸಂಸ್ಥೆಯ ಆನಂದ್ ಅವರು ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಅನನ್ಯ ಭಟ್ ಹಾಡಿರುವ ಈ ಇಂಪಾದ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ನಾನು ಮೂಲತಃ ರಂಗಭೂಮಿಯವನು. ನಟನಾಗಬೇಕೆಂಬ ಕನಸು ಹೊತ್ತು ಬಂದವನು. ನಿರ್ಮಾಪಕರಿಗೆ ನನ್ನ ಕನಸನ್ನು ತಿಳಿಸುವ ಸಲುವಾಗಿ ಮೂರು ಲಕ್ಷ ವೆಚ್ಚದಲ್ಲಿ ಒಂದು ಪ್ರಮೋಷನಲ್ ವಿಡಿಯೋ ಮಾಡಿ ತೋರಿಸಿದೆ. ಈ ವಿಡಿಯೋ ಇಷ್ಟಪಟ್ಟ ಮಂಜುನಾಥ್ ಹಾಗೂ ಹರೀಶ್ ಹಣ ಹೂಡಲು ಮುಂದಾದರು. ಆನಂತರ ಚಿತ್ರ ಆರಂಭವಾಯಿತು. ಹೆಸರೇ ಹೇಳುವಂತೆ ಹಣದ ಮಹತ್ವ ಸಾರುವ ಈ ಚಿತ್ರದಲ್ಲಿ, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ಸಾಗುತ್ತದೆ. ನಾನು, ಕೃಷಿ ತಾಪಂಡ, ಯಶ್ವಿಕ್, ಚಂದನ ರಾಘವೇಂದ್ರ ಹಾಗೂ ರಾಮ ಚಂದನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದೇವೆ. ನಾನೇ ನಿರ್ದೇಶನ ಮಾಡಿದ್ದೀನಿ. ಹಾಡು ಬಿಡುಗಡೆಯಾಗಿದೆ. ನವೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಉತ್ತಮ ಚಿತ್ರ ಮಾಡಿದ್ದೀವಿ ಎಂಬ ಭರವಸೆಯಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ನಾಯಕ – ನಿರ್ದೇಶಕ ವಿಜಯ್ ಜಗದಾಲ್.
ಒಳ್ಳೆಯ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ಎಂದರು ಕೃಷಿ ತಾಪಂಡ. ಪ್ರಮುಖ ಪಾತ್ರಧಾರಿಗಳಾದ ಯಶ್ವಿಕ್, ರಾಮ್ ಚಂದನ್ ಹಾಗೂ ಚಂದನ ರಾಘವೇಂದ್ರ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಿರ್ಮಾಣದ ಬಗ್ಗೆ ಮಂಜುನಾಥ್ ಅವರು ಮಾತನಾಡಿದರು.
ಸಂಗೀತದ ಬಗ್ಗೆ ಆನಂದ್ ರಾಜ್ ವಿಕ್ರಮ್, ಛಾಯಾಗ್ರಹಣದ ಬಗ್ಗೆ ಆರ್ ಡಿ ನಾಗಾರ್ಜುನ ಹಾಗೂ ಸಂಕಲನದ ಕುರಿತು ಶಿವರಾಜ್ ಮೇಹು ಮಾಹಿತಿ ನೀಡಿದರು. ಸಹ ನಿರ್ಮಾಪಕರಾದ ಯಶವಂತ ಶೆಟ್ಟಿ, ಗಿರೀಶ್ ಹಾಗೂ ಕಾರ್ಯಕಾರಿ ನಿರ್ಮಾಪಕ ಸುನಿದಿನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
“ಚುಟು ಚುಟು ಅಂತೈತಿ” ಎಂಬ ಜನಪ್ರಿಯ ಹಾಡಿಗೆ ನೃತ್ಯ ನಿರ್ದೇಶನ ಮಾಡುವ ಮೂಲಕ ನೃತ್ಯ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಭೂಷಣ್, ಈಗ “ರಾಜ ರಾಣಿ ರೋರರ್ ರಾಕೆಟ್” ಚಿತ್ರದ ಮುಖಾಂತರ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚಿತ್ರ ಸೆಪ್ಟೆಂಬರ್ 23 ರಂದು ತೆರೆಗೆ ಬರುತ್ತಿದೆ ಎಂಬುದು ವಿಶೇಷ.
ನೃತ್ಯ ನಿರ್ದೇಶಕನಾಗಿ “ರಾಂಬೋ 2” ಚಿತ್ರದ ಮೂಲಕ ನನ್ನ ಜರ್ನಿ ಆರಂಭವಾಯಿತು. ನಂತರ “ನಟಸಾರ್ವಭೌಮ”, ” ರಾಬರ್ಟ್ “, “ಬೆಲ್ ಬಾಟಮ್” ನಂತಹ ಸೂಪರ್ ಹಿಟ್ ಚಿತ್ರಗಳಿಗೆ ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಾಯಕನಾಗಬೇಕೆಂಬ ಆಸೆಯಿತ್ತು. ಈ ಚಿತ್ರದ ನಿರ್ದೇಶಕ ಕೆಂಪೇಗೌಡ ಮಾಗಡಿ ಒಳ್ಳೆಯ ಕಥೆ ಹೇಳಿದರು. ನಾಗರಾಜ್ ವಿ ಅಜ್ಜಂಪುರ ನಿರ್ಮಾಣಕ್ಕೆ ಮುಂದಾದರು. “ರಾಜ ರಾಣಿ ರೋರರ್ ರಾಕೆಟ್” ಎಂದರೆ ನಾಲ್ಕು ಪಾತ್ರಗಳ ಹೆಸರು. ಹಳ್ಳಿಯಲ್ಲಿ ಕೆಲಸ ಮಾಡದೆ ತಿರುಗುತ್ತಿದ್ದ ಹುಡುಗರ ಜೀವನದಲ್ಲಿ ಮುಂದೆ ಏನಾಗುತ್ತದೆ? ಎಂಬುದೇ ಕಥಾಹಂದರ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನೃತ್ಯ ನಿರ್ದೇಶಕ ನಾಯಕನಾಗಿರುವ ಕಾರಣ, ಎಲ್ಲಾ ನೃತ್ಯ ನಿರ್ದೇಶಕರು ನನಗೆ ಸಾಥ್ ನೀಡಿದ್ದಾರೆ. ಸೆಪ್ಟೆಂಬರ್ 23ರಂದು ಚಿತ್ರ ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಭೂಷಣ್.
ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಕೆಂಪೇಗೌಡ ಮಾಗಡಿ ಸಹ ಚಿತ್ರದ ಬಗ್ಗೆ ವಿವರಣೆ ನೀಡಿದರು.
ನೃತ್ಯ ನಿರ್ದೇಶಕರಾದ ನಾಗೇಂದ್ರ ಪ್ರಸಾದ್ ಮಾಸ್ಟರ್(ಪ್ರಭುದೇವ ಸಹೋದರ), ಜಗ್ಗು ಮಾಸ್ಟರ್ ಹಾಗೂ ಕಲೈ ಮಾಸ್ಟರ್ ಭೂಷಣ್ ಹಾಗೂ ತಂಡಕ್ಕೆ ಶುಭ ಕೋರಿದರು. ಮನೋಜ್ ಹಾಗೂ ಸುಷ್ಮಾ ಪಾತ್ರದ ಬಗ್ಗೆ ಮಾತನಾಡಿದರು.
ಭೂಷಣ್ ಅವರಿಗೆ ನಾಯಕಿಯಾಗಿ ಮಾನ್ಯ ಅಭಿನಯಿಸಿದ್ದಾರೆ. ರಣಧೀರ್, ಸಂತೋಷ್ ಹಾಗೂ ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಪತ್ರಕರ್ತರಾಗಿ, ಕಲಾವಿದರಾಗಿ ಪರಿಚಿತರಾಗಿದ್ದ ಯತಿರಾಜ್ ಈಗ ನಿರ್ದೇಶಕರಾಗಿಯೂ ಗುರುತಿಸಿಕೊಂಡಾಗಿದೆ.. ಒಂದೇ ವರ್ಷದಲ್ಲಿ ಅವರ ಮೂರು ಸಿನಿಮಾಗಳು ಸೆಟ್ಟೇರಿದ್ದು ವಿಶೇಷ. ಆ ಪೈಕಿ “ಸೀತಮ್ಮನ ಮಗ” ಚಿತ್ರ ಬಿಡುಗಡೆಯಾಗಿದ್ದು, “ಮಾಯಾಮೃಗ” ಬಿಡುಗಡೆ ಹಂತದಲ್ಲಿದೆ. ಇದೀಗ ಅವರ ಮೂರನೇ ಚಿತ್ರ “ಬೊಂಬೆ ಹೇಳುತೈತೆ” ಸದ್ಯದಲ್ಲೇ ಆರಂಭವಾಗಲಿದೆ.
ತಮ್ಮ ಸಿನಿಮಾ ಬಗ್ಗೆ ಯತಿರಾಜ್ ಹೇಳಿದ್ಸು ಹೀಗೆ. “ಬೊಂಬೆ ಹೇಳುತೈತೆ” ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಇದೇ ವರ್ಷ ನಾನು ನಿರ್ದೇಶಿಸುತ್ತಿರುವ ಮೂರನೇ ಚಿತ್ರವೂ ಹೌದು. ನನ್ನ ಮಗ ಪೃಥ್ವಿರಾಜ್ ನೀಡಿದ ಎಳೆಯನ್ನಿಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಕೇವಲ ಹದಿನೈದು ದಿನಗಳಲ್ಲಿ ಈ ಚಿತ್ರಕ್ಕೆ ಚಾಲನೆ ದೊರಕಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಚನ್ನಪಟ್ಟಣದಲ್ಲಿ ನಡೆಯಲಿದೆ. ಅದರಲ್ಲೂ ವಿಶೇಷವಾಗಿ ಕಾವೇರಿ ಆರ್ಟ್ಸ್ ಅಂಡ್ ಕ್ರಾಫ್ಟ್ ಎಂಪೋರಿಯಮ್ ನಲ್ಲಿ ಚಿತ್ರೀಕರಣ ನಡೆಸಲು ಅನುಮತಿ ದೊರೆತಿರುವುದರಿಂದ ಚಿತ್ರಕ್ಕೆ ಬಲ ಬಂದಂತಾಗಿದೆ. ಇನ್ನೂ “ಬೊಂಬೆ ಹೇಳುತೈತೆ” ಚಿತ್ರದ ಬಗ್ಗೆ ಹೇಳ ಬೇಕೆಂದರೆ, ಇಲ್ಲಿ ನಂಬಿಕೆಯ ಪ್ರಶ್ನೆಯಿದೆ. ಸರಿ-ತಪ್ಪುಗಳ ಜಿಜ್ಞಾಸೆಯಿದೆ. ಮಮತೆ – ವಾತ್ಸಲ್ಯಗಳ ವೈರುಧ್ಯವಿದೆ. ಆಸೆ – ದುರಾಸೆಗಳ ಆಳ ಅಗಲವಿದೆ. ವಾಸ್ತವ ಲೋಕದ ಪರಿಚಯಯವಿದೆ. ಅಳುವಿದೆ.. ನಗುವಿದೆ.
ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಹೇಗೆ ಏಕಾಂಗಿಯಾಗುತ್ತಾನೆ? ಎಂಬುದೆ ಚಿತ್ರದ ಕೇಂದ್ರ ವಸ್ತು. ಚಿತ್ರದಲ್ಲಿ ಹಲವು ಪಾತ್ರಗಳಿದ್ದರೂ ತೆರೆಯ ಮೇಲೆ ಕಾಣುವುದು ಸಿದ್ದರಾಜು ಪಾತ್ರ ಮಾತ್ರ. ಆ ಪಾತ್ರದಲ್ಲಿ ನಾನೇ ಅಭಿನಯಿಸುತ್ತಿದ್ದೇನೆ. ಈ ಹಿಂದೆ ಒಂದೇ ಪಾತ್ರದ ಕೆಲವು ಚಿತ್ರಗಳು ಬಂದಿದೆಯಾದರೂ ನಮ್ಮ ಚಿತ್ರದ ಕಥೆ ಸಾಗುವ ರೀತಿ ಸ್ವಲ್ಪ ಭಿನ್ನ ಎನ್ನುವ ಯತಿರಾಜ್, ಚಿತ್ರತಂಡದ ಪರಿಚಯ ಮಾಡಿಸಿ, ಸಹಕಾರ ನೀಡುತ್ತಿರುವವರಿಗೆ ಧನ್ಯವಾದ ತಿಳಿಸಿದರು. ಪುನೀತ್ ರಾಜ್ಕುಮಾರ್ ಅವರ ಬೊಂಬೆಯ ಮೂಲಕ ಸಮಾಜಕ್ಕೆ ಸಂದೇಶ ಸಾರುವ ಅಂಶ ನಮ್ಮ ಚಿತ್ರದಲ್ಲಿದ್ದು, ಅದಕ್ಕಾಗಿ ಅವರ ಪುಟ್ಟ ಪುತ್ಥಳಿ ಬೇಕಾಗಿತ್ತು. ಅದನ್ನು ಒದಗಿಸಿದ ಇಂಜಿನಿಯರ್ ಸಚಿನ್ ಅವರನ್ನು ವೇದಿಕೆಯಲ್ಲಿ ಪರಿಚಯಿಸಲಾಯಿತು.
ಚಿತ್ರಕಥೆ, ಸಂಭಾಷಣೆ ಬರೆಯುತ್ತಿರುವ ಶ್ರೀಕಾಂತ್, ಛಾಯಾಗ್ರಾಹಕ ವಿದ್ಯಾನಾಗೇಶ್ , ಸಹ ನಿರ್ದೇಶಕ ಅರುಣ್ ಕುಮಾರ್, ಗಾಯಕ ಸಚಿನ್ ಚಿತ್ರದ ಕುರಿತು ಮಾತನಾಡಿದರು. ಎಂ.ಡಿ.ಕೌಶಿಕ್, ವಿ ಶಶಿ ಗೌಡ, ವಿ ಆರ್ ರೆಸಿಡೆನ್ಸಿ ಹೋಟೆಲ್ ನ ಮಾಲೀಕ ಕುಮಾರ್ ಗೌಡ , ಕಾವೇರಿ ಎಂಪೋರಿಯಂ ನ ಅಶ್ವಿನ್ ಗೌಡ ಇದ್ದರು.
ಮಾರುತಿ ಪ್ರೊಡಕ್ಷನ್ಸ್ ಮೂಲಕ ಮಾರುತಿ ಪ್ರಸಾದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಸಾಹಸಿ ಸಿಂಹ ಡಾ.ವಿಷ್ಣುವರ್ಧನ್ 72ನೇ ಜಯಂತೋತ್ಸವಕ್ಕೆ ದಾದಾ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಇದೇ ಸೆಪ್ಟಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬ ಹಿನ್ನೆಲೆ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿ ಬರುವ ಡಿಸೆಂಬರ್ 29ಕ್ಕೆ ವಿಷ್ಣು ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ.
ಈ ಹಿನ್ನೆಲೆಯಲ್ಲಿ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ವಿಷ್ಣು ಪುಣ್ಯಭೂಮಿಯಲ್ಲಿ ದಾದಾನ ಪ್ರಮುಖ ಸಿನಿಮಾಗಳು ಐವತ್ತು ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ಸಜ್ಜಾಗಿದೆ. ಈ ಬಗ್ಗೆ ವಿಷ್ಣು ಸೇನಾ ಸಮಿತಿ ಸದಸ್ಯರು ಮಾಹಿತಿ ಹಂಚಿಕೊಂಡರು.
ವಿಷ್ಣುಸೇನಾ ಸಮಿತಿ ಆನಂದ್ ಮಾತನಾಡಿ, ಇದೇ ಡಿಸೆಂಬರ್ 29ಕ್ಕೆ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳು ಕಂಪ್ಲೀಟ್ ಆಗುತ್ತದೆ. ಈ ವಿಶೇಷ ಇಟ್ಟುಕೊಂಡು ವಿಷ್ಣು ಪುಣ್ಯಭೂಮಿಯಲ್ಲಿ ವಿಷ್ಣುವರ್ಧನ್ ಸೇನಾನಿ ಮತ್ತು ಹಲವು ಸಂಘ ಸಂಸ್ಥೆಗಳು ಅಧ್ಯಕ್ಷರು ಸೇರಿ ಒಂದೇ ಜಾಗದಲ್ಲಿ ಐವತ್ತು ಕಟೌಟ್ ಹಾಕುತ್ತವೆ.
ವಿಷ್ಣುವರ್ಧನ್ ಅವರ ಯಶಸ್ಸಿ ಚಿತ್ರಗಳ ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ಮುಂದಾಗಿದ್ದೇವೆ. ಒಂದು ಕಟೌಟ್ 40 ಅಡಿ ಇರಲಿದೆ. ಇಲ್ಲಿವರೆಗೆ ಭಾರತೀಯ ಚಿತ್ರರಂಗದಲ್ಲಿ ಏಕಸ್ಥಳದಲ್ಲಿ ಯಾವುದೇ ಸ್ಟಾರ್ ಗೆ ಈ ರೀತಿ ಕಟೌಟ್ ನಿಲ್ಲಿಸಿಲ್ಲ ಎಂದು ಮಾಹಿತಿ ಹಂಚಿಕೊಂಡರು.
ತಾರಾಗಣ: ಪುನೀತ್ ರಾಜಕುಮಾರ್, ಡಾರ್ಲಿಂಗ್ ಕೃಷ್ಣ, ಸಂಗೀತ, ರೋಷಣಿ, ರಂಗಾಯಣ ರಘು, ಸುಂದರ ರಾಜ್, ಸುಧಾ ಬೆಳವಾಡಿ ಸಾಧುಕೋಕಿಲ ಇತರರು…
‘ಗೊತ್ತಿಲ್ಲದೇ ಇರೋರನ್ನ ನಾನ್ ಮದುವೆ ಆಗಲ್ಲ… ಹೀಗಂತ ನಾಯಕ ಅರ್ಜುನ್ ಹೇಳ್ತಾನೆ. ಅ ಮಾತಿಗೆ ‘ ನಾವಿಬ್ರು ಮದ್ವೆ ಆಗಬಹುದಲ್ವ! ಹೀಗಂತ ನಾಯಕಿ ಅನು ಹೇಳ್ತಾಳೆ…
ಇವರಿಬ್ಬರ ಮಾತುಕತೆ ನಡೆಯೋ ಹೊತ್ತಿಗೆ, ಇಬ್ಬರಿಗೂ ಮದ್ವೆಯಾಗಿ, ಅದು ಈಗೋ ಹೆಚ್ಚಾಗಿ, ಜಗಳ ಶುರುವಾಗಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದೆ ಅದು ಡೈವೋರ್ಸ್ ಹಂತಕ್ಕೂ ಹೋಗುತ್ತೆ! ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೆ ಕಥೆ.
ಇಷ್ಟು ಹೇಳಿದ ಮೇಲೆ ಎಲ್ಲಾ ಸಿನಿಮಾ ಕಥೆಯಲ್ಲೂ ಈ ವಿಷಯ ಕಾಮನ್ ಬಿಡಿ ಎಂಬ ಮಾತು ಎದುರಾದರೂ, ಇಲ್ಲಿನ ಕಥೆಯಲ್ಲಿ ಹೊಸತನವಿದೆ. ನಿರೂಪಣೆಯಲ್ಲಿ ವಿಶೇಷತೆ ಇದೆ. ತೋರಿಸಿರುವ ವಿಧಾನದಲ್ಲಿ ಸ್ಪಷ್ಟತೆ ಇದೆ. ಹಾಗಾಗಿ ಇದೊಂದು ಸ್ವಚ್ಛ ಮತ್ತು ಸ್ಪಷ್ಟತೆಯ ಸಿನಿಮಾ.
ಇಡೀ ಸಿನಿಮಾದಲ್ಲಿ ನಗುವಿದೆ,ಅದರ ಜೊತೆ ಜೊತೆಯಲ್ಲೇ ತಮಾಷೆಯೂ ಇದೆ, ಬೇಜವಾಬ್ದಾರಿತನದ ಹುಡುಗಾಟ ಇದೆ. ಇವೆಲ್ಲದರ ಜೊತೆಗೊಂದು ಭಾವುಕತೆಯೂ ತುಂಬಿದೆ. ಸಿನಿಮಾ ನೋಡಿ ಆಚೆ ಬರುವ ಪ್ರತಿಯೊಬ್ಬರ ಮನದಲ್ಲಿ ದೇವರು ನೆಲೆಸುತ್ತಾನೆ! ಹೌದು, ಇಲ್ಲಿ ದೇವರು ಮತ್ತು ಮಾನವನ ನಡುವಿನ ಆಹ್ಲಾದಕರ ಮಾತುಕತೆ ಇದೆ. ಅದು ಎಲ್ಲೋ ಒಂದು ಕಡೆ ತಮಾಷೆ ಎನಿಸಿದರೂ, ಅಲ್ಲಲ್ಲಿ ಬದುಕಿನ ವಾಸ್ತವತೆಯ ಪರಿಯನ್ನು ಹೇಳುತ್ತದೆ.
ನಿರ್ದೇಶಕ ನಾಗೇಂದ್ರಪ್ರಸಾದ್ ಅವರಿಗೆ ಇದು ಮೊದಲ ಸಿನಿಮಾ. ಆದರೂ ಅವರು ಎಲ್ಲೂ ಎಡವದೆ ಒಂದು ನೀಟ್ ಸಿನಿಮಾ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ದೊಡ್ಡ ಪವಾಡವಿದೆ. ಅದೇ ಆ ದೇವರು ಪವಾಡ. ತೆರೆ ಮೇಲೆ ನಿಜವಾಗಿಯೂ ನೋಡುಗರಿಗೆ ದೇವರು ಕಂಡಷ್ಟೇ ಅನುಭವ. ಅ ದೇವರ ಪವಾಡವೇ ಇಲ್ಲಿ ಹೈಲೆಟ್. ಆ ಪವಾಡ ತಿಳಿಯೋಕೆ ಸಿನಿಮಾ ನೋಡಿ.
ಅಪ್ಪು ಎಂಬ ದೇವರು…
ಪುನೀತ್ ರಾಜ್ ಕುಮಾರ್ ಇಲ್ಲಿ ಸಾಕ್ಷಾತ್ ದೇವರಾಗಿಯೇ ಕಾಣಿಸಿಕೊಂಡಿದ್ದಾರೆ. ಪರದೆ ಮೇಲೆ ಅವರು ಕಾಣುತ್ತಿದ್ದಂತೆ ಖುಷಿಗೊಂದು, ದುಃಖಕ್ಕೊಂದು ಎರಡು ಕಣ್ಣುಗಳು ತುಂಬಿ ಹೋಗುತ್ತವೆ. ನೋಡುತ್ತಲೇ ಎದೆಭಾರವಾಗುತ್ತ ಹೋಗುತ್ತದೆ.
ದೇವರ ಪಾತ್ರದಲ್ಲಿ ಅಪ್ಪು ಅವರನ್ನು ನೋಡಿವರಿಗೆ ಪೂಜ್ಯಭಾವ. ಇಷ್ಟಕ್ಕೂ ಇಲ್ಲಿ ಲಕ್ಕಿಮ್ಯಾನ್ ಯಾರು? ಅದಕ್ಕೆ ಉತ್ತರ ಸಿನಿಮಾ ನೋಡಬೇಕು.
ಅಂದಹಾಗೆ, ಇದು ಓ ಮೈ ಕಡವುಲೆ ತಮಿಳು ಸಿನಿಮಾ ಅವತರಣಿಕೆ. ಅದನ್ನಿಲ್ಲಿ ಯಥಾವತ್ತಾಗಿ ಮಾಡಿದರೂ, ಕನ್ನಡೀಕರಣಕ್ಕೆ ಎಲ್ಲೂ ಧಕ್ಕೆ ತಂದಿಲ್ಲ. ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಮಾಡಿದ ಪಾತ್ರವನ್ನು ಇಲ್ಲಿ ಪುನೀತ್ ರಾಜಕುಮಾರ್ ಮಾಡಿದ್ದಾರೆ. ನಿಜಕ್ಕೂ ಪರದೆ ಮೇಲೆ ಅವರು ಸಾಕ್ಷಾತ್ ದೇವರೇ ಎಂಬಂತೆ ಬಿಂಬಿತವಾಗುತ್ತಾರೆ. ಅಷ್ಟರ ಮಟ್ಟಿಗೆ ಪಾತ್ರದಲ್ಲಿ ಅಪ್ಪು ಮಿಂಚಿದ್ದಾರೆ. ಇಡೀ ಸಿನಿಮಾದ ತಾಕತ್ತೇ ಅವರು. ಅವರಿಂದಲೇ ಕಥೆಗೊಂದು ಅರ್ಥ.
ಇಷ್ಟಕ್ಕೂ ಕಥೆ ಏನು?
ಅನು (ಸಂಗೀತ ಶೃಂಗೇರಿ) ತನ್ನ ಬಾಲ್ಯದ ಗೆಳೆಯ ಅರ್ಜುನ್ (ಕೃಷ್ಣ) ಅವರನ್ನ ಮದ್ವೆ ಆಗು ಅಂತ ನೇರವಾಗಿ ಕೇಳುತ್ತಾಳೆ. ಆಗ ಅವನ ಮನಸ್ಸು ಆತನ ಮನಸ್ಸು ಎಲ್ಲೆಲ್ಲೋ ಓಡುತ್ತೆ. ಮನಸ್ಸೂ ಭ್ರಮಾಲೋಕಕ್ಕೆ ಹೋಗುತ್ತೆ. ವಾಸ್ತವ ಬೆರೆತ ಬದುಕಲ್ಲಿ ದೇವರ ಬಳಿ ಹೋಗ್ತಾನೆ. ಈ ವಿಷಯ ಸ್ವಲ್ಪ ಒಗ್ಗಲ್ಲ. ಆದರೂ ದೇವರಾಗಿ ಪುನೀತ್ ದರ್ಶನವಾದಾಗ ಮನಸ್ಸು ಒಪ್ಪದೇ ಇರದು. ದೇವರ ಜೊತೆ ಮಾನವನ ಮಾತುಕತೆ ತಮಾಷೆ ಎನಿಸಿದರೂ ಅದು ಪವಾಡವೂ ಹೌದೆಂಬ ಭಾಸ.
ಅರ್ಜುನ್ ತನ್ನ ಹೆಂಡತಿ ಅನು ಬಗ್ಗೆ ಇಲ್ಲದ ಕಲ್ಪನೆ ಮಾಡಿಕೊಂಡು ಭೀತಿಗೊಂಡು ಡೈವೋರ್ಸ್ ಕೊಡಬೇಕೆಂದುಕೊಂಡಾಗ ದೇವರ ಜೊತೆ ನಡೆಯೋ ಅದ್ಭುತ ಸನ್ನಿವೇಶಗಳೇ ಸಿನಿಮಾ ನೋಡಿಸಿಕೊಂಡು ಹೋಗುತ್ತವೆ. ಹೆಚ್ಚು ಹೇಳುವುದಕ್ಕಿಂತ ದೇವರು ಆ ಯುವಕನಿಗೆ ಹೇಗೆಲ್ಲಾ ಬುದ್ಧಿ ಹೇಳಿ ನಿಜ ಬದುಕಿನತ್ತ ಕೊಂಡೊಯ್ಯುತ್ತದೆ ಅನ್ನೋದೇ ವಿಶೇಷ.
ಇನ್ನು ಸಿನಿಮಾ ನೋಡುಗರಿಗೆ ಅದು ಭ್ರಮೆಯೋ, ವಾಸ್ತವನಾ ಎಂಬ ಗೊಂದಲ ಇಲ್ಲ. ಅಷ್ಟೊಂದು ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ. ಇದಕ್ಕೆ ಕಾರಣ ಪುನೀತ್ ಅವರು ಇಡೀ ಸಿನಿಮಾ ಆವರಿಸಿಕೊಳ್ಳುವ ರೀತಿ. ಪ್ರತಿ ಪಾತ್ರಗಳ ಜೀವಂತಿಕೆ.
ಯಾರ ನಟನೆ ಹೇಗೆ?
ಪುನೀತ್ ರಾಜ್ಕುಮಾರ್ ದೇವರಾಗಿ ಕಾಣಿಸಿಕೊಂಡಿದ್ದಷ್ಟೇ ಅಲ್ಲ, ತೆರೆ ಮೇಲೆ ತಾನು ದೇವರಂತೆಯೇ ಕಾಣುತ್ತಾರೆ ಕೂಡ. ಇಡೀ ಚಿತ್ರವನ್ನು ಆವರಿಸಿಕೊಂಡು ನಗಿಸಿ, ಭಾವುಕರಾಗಿಸುತ್ತಾರೆ. ಇನ್ನು, ಡಾರ್ಲಿಂಗ್ ಕೃಷ್ಣ ಎಂದಿಗಿಂತಲೂ ಹುಡುಗಾಟದ ಹುಡುಗನಾಗಿ ಇಷ್ಟವಾಗುತ್ತಾರೆ. ಸಂಗೀತ ಶೃಂಗೇರಿ, ರೋಷನಿ ಕೂಡ ಇಷ್ಟವಾಗುತ್ತಾರೆ. ರಂಗಾಯಣ ರಘು, ಸುಂದರರಾಜ್, ನಾಗಭೂಷಣ್, ಸುಧಾ ಬೆಳವಾಡಿ ಸೇರಿದಂತೆ ಇತರರು ಗಮನ ಸೆಳೆಯುತ್ತಾರೆ.
ಕೊನೆಯ ಹಾಡಲ್ಲಿ ಡಾ.ರಾಜಕುಮಾರ್ ಅವರನ್ನು ನೆನಪಿಸುವ ಹಾಡಲ್ಲಿ ಪ್ರಭುದೇವ ಹೆಜ್ಜೆ ಹಾಕುತ್ತಾರೆ. ಅವರೊಂದಿಗೆ ಅಪ್ಪು ಕೂಡ ಸ್ಟೆಪ್ ಹಾಕಿ ಖುಷಿಪಡಿಸುತ್ತಾರೆ. ಇದು ವಿನಾಕಾರಣ ಬರುವ ಹಾಡಲ್ಲ. ಕಥೆಗೆ ಪೂರಕವಾಗಿದೆ. ಅವರ ಕ್ಯಾಮರಾ ಕೈಚಳಕ ಚೆನ್ನಾಗಿದೆ. ಅವರ ಸಂಗೀತದಲ್ಲಿ ಸ್ವಾದ ತುಂಬಿದೆ.
ಕೊನೆಮಾತು: ಒಟ್ಟಾರೆ ಸಿನಿಮಾ ನೋಡಿದವರು ‘ಪುನೀತ’ ರಾಗಿ ಹಾಗೊಮ್ಮೆ ಭಾವುಕರಾಗಿ ಹೊರಬರೋದು ದಿಟ.
ತಂತ್ರಜ್ಞಾನ ಮುಂದುವರೆದ ಹಾಗೆ ಜನರ ಆಲೋಚನೆ ಶಕ್ತಿಯು ಬೆಳೆಯುತ್ತಾ ಹೋಗುತ್ತಿದೆ. ಎರಡು, ಮೂರು ಗಂಟೆಗಳಲ್ಲಿ ಹೇಳ ಬೇಕಾದ ವಿಷಯವನ್ನು ಇಪ್ಪತ್ತು, ಮೂವತ್ತು ನಿಮಿಷಗಳ ಕಿರುಚಿತ್ರಗಳಲ್ಲಿ ಮನತಟ್ಟುವಂತೆ ಹೇಳುವ ನಿರ್ದೇಶಕರು ಈಗ ಹೆಚ್ಚಾಗುತ್ತಿದ್ದಾರೆ. ಅಂತಹ ಉತ್ತಮ ಕಿರುಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರುತ್ತಿದೆ.
ಸತ್ಯ ಹೆಗಡೆ ಸ್ಟುಡಿಯೋಸ್ ಅರ್ಪಿಸುವ, ಸೌಮ್ಯ ಚಂದ್ರಶೇಖರ್ ನಿರ್ಮಿಸಿರುವ ಹಾಗೂ ಪ್ರದೀಪ್ ಕೃಷ್ಣಮೂರ್ತಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ” ದಿ ಲಾಸ್ಟ್ ಕೇಸ್” ಕಿರುಚಿತ್ರದ ಪ್ರದರ್ಶನ ಹಾಗು ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.
ಎಲ್ಲಾ ಸಾಕ್ಷಿಗಿಂತ ಮನಸಾಕ್ಷಿಯೇ ದೊಡ್ಡದು ಎಂಬ ಅಂಶವನ್ನು ನಿರ್ದೇಶಕರು ಈ ಕಿರುಚಿತ್ರದಲ್ಲಿ ಮನಮುಟ್ಟುವಂತೆ ತೋರಿದ್ದಾರೆ.
ನನಗೆ ಈ ಕಿರುಚಿತ್ರದ ಕಥೆ ಬಹಳ ಮೆಚ್ಚುಗೆಯಾಯಿತು. ಅಪರಾಧಿಯೊಬ್ಬ ನಾನೇ ಕೊಲೆಗಾರ ಎಂದು ಹೇಳಿ ಪೊಲೀಸರ ಬಳಿ ಶರಣಾಗುವ ವಿಷಯ ಬಹಳ ಮನಸ್ಸಿಗೆ ಹತ್ತಿರವಾಯಿತು. ಉತ್ತಮ ಕಿರುಚಿತ್ರ ನಿರ್ಮಿಸಿರುವ ಇಡೀ ತಂಡಕ್ಕೆ ಧನ್ಯವಾದ ಎಂದರು ಈ ಕಿರುಚಿತ್ರದಲ್ಲಿ ಅಭಿನಯಿಸಿರುವ ನಟ ರಮೇಶ್ ಪಂಡಿತ್.
ಈ ಕಿರುಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ತಮ್ಮ ತಂಡಕ್ಕೆ ನಿರ್ದೇಶಕ ಪ್ರದೀಪ್ ಕೃಷ್ಣಮೂರ್ತಿ ಧನ್ಯವಾದ ತಿಳಿಸಿದರು.
“ದಿ ಲಾಸ್ಟ್ ಕೇಸ್” ಕಿರುಚಿತ್ರ ಚೆನ್ನಾಗಿದೆ. ಈ ತಂಡದಿಂದ ಆದಷ್ಟು ಬೇಗ ಹಿರಿತೆರೆಯಲ್ಲಿ ನಾನು ಚಿತ್ರವನ್ನು ನಿರೀಕ್ಷಿಸುತ್ತೇನೆ ಎಂದರು ಸತ್ಯ ಹೆಗಡೆ. ಕಿರುಚಿತ್ರ ತಂಡದ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು .
ಹಿರಿಯ ನಿರ್ದೇಶಕ ಚಿಂದೋಡಿ ಬಂಗಾರೇಶ್, ಸಾಹಿತಿ ಕವಿರಾಜ್ ಹಾಗೂ ಸಂಭಾಷಣೆಕಾರ ಮಾಸ್ತಿ ಮುಂತಾದ ಗಣ್ಯರು ಕಿರುಚಿತ್ರವನ್ನು ಶ್ಲಾಘಿಸಿದರು.
ವಾಸುದೇವ ಮೂರ್ತಿ ಕಥೆ ಬರೆದಿದ್ದು, ಗಿರೀಶ್ ಸಂಗೀತ ನೀಡಿದ್ದಾರೆ. ರಂಗನಾಥ್ ಛಾಯಾಗ್ರಹಣ ಹಾಗೂ ಉಜ್ವಲ್ ಸಂಕಲನ ಈ ಕಿರುಚಿತ್ರಕ್ಕಿದೆ. ರಮೇಶ್ ಪಂಡಿತ್, ಶಂಕರ್ ಅಶ್ವತ್ಥ್, ಪುನೀತ್ ಬಾಬು, ಪ್ರದೀಪ್ ಅಂಚೆ “ದಿ ಲಾಸ್ಟ್ ಕೇಸ್” ನಲ್ಲಿ ನಟಿಸಿದ್ದಾರೆ.
ವಿಭಿನ್ನ ಕಥಾನಕದ ಸುಳಿವು ನೀಡಿರುವ ದೂರದರ್ಶನ ಸಿನಿಮಾ ಆರಂಭದಿಂದಲೂ ಬಹಳಷ್ಟು ಸದ್ದು ಮಾಡುತ್ತಿದ್ದು, ಇದೀಗ ಡಬ್ಬಿಂಗ್ ಮುಗಿಸಿ, ಬಿಡುಗಡೆಗೆ ತಯಾರಾಗುತ್ತಿದೆ. ಸುಕೇಶ್ ಶೆಟ್ಟಿ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.
ದಿಯಾ ಸಿನಿಮಾ ಖ್ಯಾತಿ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ಆಯಾನಾ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರು ತಾರಾಗಣ ಸಿನಿಮಾದಲ್ಲಿದೆ.
ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಿನಿಮಾಗೆ ರಾಜೇಶ್ ಭಟ್ ನಿರ್ಮಾಣ ಮಾಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ಉಗ್ರಂ ಮಂಜು ಜವಾಬ್ದಾರಿ ಹೊತ್ತಿದ್ದಾರೆ.
ಅರುಣ್ ಸುರೇಶ್ ಛಾಯಾಗ್ರಹಣ, ವಾಸುಕಿ ವೈಭವ ಸಂಗೀತ, ಪ್ರದೀಪ್ ಆರ್ ರಾವ್ ಸಂಕಲನ, ನಂದೀಶ್ ಟಿಜಿ ಸಂಭಾಷಣೆ ಸಿನಿಮಾಕ್ಕಿದೆ. ಸದ್ಯ ಮಾತು ಮುಗಿಸಿರುವ ಚಿತ್ರತಂಡ ಪ್ರಮೋಷನ್ ಗೆ ಸಜ್ಜಾಗುತ್ತಿದೆ.