Categories
ಸಿನಿ ಸುದ್ದಿ

ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗು ಕುಟುಂಬದವರನ್ನು ಹಾರೈಸಿದ ಮೋದಿ…

ಮಾರ್ಚ್ 17 ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಜಗ್ಗೇಶ್ ಅವರು ರಾಷ್ಟ್ರದ ಪ್ರಧಾನ ಮಂತ್ರಿಗಳಾದ ಶ್ರೀನರೇಂದ್ರ ಮೋದಿ ಅವರನ್ನು ಕುಟುಂಬ ಸಮೇತ ಭೇಟಿಯಾಗಿ, ಆಶೀರ್ವಾದ ಪಡೆದುಕೊಂಡರು.

ಜಗ್ಗೇಶ್ ಅವರಿಗೆ ದೇವರು ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಧಾನ ಮಂತ್ರಿಗಳು ಮನತುಂಬಿ ಆಶೀರ್ವದಿಸಿದರು.
ಜಗ್ಗೇಶ್ ಅವರ ಜೊತೆಗೆ ಪತ್ನಿ ಪರಿಮಳಾ ಜಗ್ಗೇಶ್ ಹಾಗೂ ಪುತ್ರ ಯತಿರಾಜ್ ಕೂಡ ಇದ್ದರು.

ಪರಿಮಳಾ ಜಗ್ಗೇಶ್ ಅವರು ಸಿರಿಧಾನ್ಯಗಳನ್ನು ಬಳಸಿ ಮಧುಮೇಹವನ್ನು ಹತೋಟಿಗೆ ತರುವುದರ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ. ಇದರ ಉಪಯೋಗವನ್ನು ಸಾಕಷ್ಟು ಜನರು ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ತಿಳಿದ ಪ್ರಧಾನಿಗಳು ಬಹಳ ಖುಷಿಪಟ್ಟರು.

ಮಧುಮೇಹಕ್ಕೆ ಸಂಬಂಧಿಸಿದ ಹಾಗೆ ಸರ್ಕಾರದಿಂದ ನಡೆಯುತ್ತಿರುವ ಕಾರ್ಯಗಳಲ್ಲಿ ಪರಿಮಳಾ ಜಗ್ಗೇಶ್ ಅವರು ಪಾಲ್ಗೊಳ್ಳಲು ಸೂಚಿಸಿದರು. ಅಲ್ಲಿಂದಲೇ ಕೇಂದ್ರ ಸಚಿವರಿಗೂ ಈ ವಿಷಯವನ್ನು ತಿಳಿಸಿದರು. ಜಗ್ಗೇಶ್ ಅವರ ಕಿರಿಯ
ಪುತ್ರ ಯತಿರಾಜ್ ಅವರಿಗೂ ಪ್ರಧಾನ ಮಂತ್ರಿಗಳು ವಿಶೇಷವಾಗಿ ಆಶೀರ್ವದಿಸಿದರು.

ನನಗೆ ಮಾರ್ಚ್ 17ಕ್ಕೆ ಅರವತ್ತು ವರ್ಷ ತುಂಬುತ್ತಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರನಾಯಕ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಅವರ ಆಶೀರ್ವಾದ ಪಡೆದುಕೊಂಡಿದ್ದು ತುಂಬಾ ಸಂತೋಷವಾಗಿದೆ. ಇದು ನನ್ನ ಬಾಳಿನಲ್ಲೇ ಮರೆಯಲಾಗದ ದಿನ ಎಂದು ಜಗ್ಗೇಶ್ ತಿಳಿಸಿದ್ದಾರೆ.‌

Categories
ಸಿನಿ ಸುದ್ದಿ

ಮಾ. 23 ರಿಂದ 30 ರವರೆಗೆ 14 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 50 ದೇಶಗಳ 200 ಚಿತ್ರಗಳ ಪ್ರದರ್ಶನ…

ಈ ಬಾರಿ ಮಾರ್ಚ್ 23 ರಿಂದ 30 ರವರೆಗೆ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಮಾರ್ಚ್ 23 ರ ಸಂಜೆ ವಿಧಾನಸೌಧ ಮುಂಭಾಗದಲ್ಲಿ ಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದು, ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

ಮಾರ್ಚ್ 30 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಚಿತ್ರೋತ್ಸವದಲ್ಲಿ 50 ದೇಶಗಳ 200 ಅತ್ಯುತ್ತಮ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಉಕ್ರೇನ್, ಹಾಂಕಾಂಗ್, ಬೆಲ್ಜಿಯಂ, ನೆದರ್ ಲೆಂಡ್, ಪಿನ್ ಲೆಂಡ್, ಕ್ರೋಷಿಯ, ಇರಾನ್, ಚೀನಾ, ಸ್ವಿಟ್ಜರ್ ಲೆಂಡ್, ಪ್ಯಾಲೆಸ್ಟೆನ್, ಅರ್ಜಂಟೈನಾ, ಸಿಂಗಾಪೂರ್, ಡೆನ್ ಮಾರ್ಕ್, ಗ್ರೀಸ್, ರಷ್ಯಾ, ಫಿಲಿಫೈನ್ಸ್, ಲೆಬನಾನ್, ಪೋಲೆಂಡ್, ರೊಮಾನಿಯಾ, ಕಾಬೋಡೊಯಾ, ಕೆನಡಾ, ಜಪಾನ್, ಸೆನಗಲ್, ಸೇರಿದಂತೆ ಇತರೆ ದೇಶಗಳ ಅತ್ಯುತ್ತಮ ಚಿತ್ರಗಳು ಪ್ರದರ್ಶನವಾಗಲಿವೆ.

ಈ ಚಿತ್ರೋತ್ಸವದಲ್ಲಿ ಏಷಿಯನ್, ಇಂಡಿಯನ್, ಚಿತ್ರಗಳ ಸ್ಪರ್ಧಾ ವಿಭಾಗ ಇರಲಿದೆ ಈ ಮೂರು ವಿಭಾಗದಲ್ಲಿ ತಲಾ ಮೂರು ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ.

ಕನ್ನಡದ 108 ಸಿನಿಮಾಗಳು ಚಿತ್ರೋತ್ಸವಕ್ಕ ಬಂದಿವೆ. ಅವುಗಳ ಪೈಕಿ 12 ಅತ್ಯುತ್ತಮ ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯ್ಕೆ ಮಾಡಿದ 10 ಅತ್ಯುತ್ತಮ ಜನಪ್ರಿಯ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುವುದು.

ಚಿತ್ರೋತ್ಸವದಲ್ಲಿ ಪ್ರತಿ ವದಿನ ಉದ್ಯಮಕ್ಕೆ ಸಂಬಂಧಿಸಿದಂತೆ, ಸಂವಾದ, ಉಪನ್ಯಾಸ, ಮಾಸ್ಟರ್, ಕ್ಲಾಸ್ ಕಾರ್ಯಕ್ರಮ ಇರಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಹೇಳಿದರು.
ಈ ವೇಳೆ ಕಲಾತ್ಮಕ ನಿರ್ದೇಶಕ ನರಹರಿವರಾವ್, ಪ್ರದೀಪ್, ಪಿ.ಶೇಷಾದ್ರಿ, ರಿಜಿಸ್ಟ್ರಾರ್ ಹಿಮಂತ್ ರಾಜು ಇದ್ದರು.

Categories
ಸಿನಿ ಸುದ್ದಿ

ಹೊಯ್ಸಳ ಎಂಬ ರಗಡ್ ಅಧಿಕಾರಿ! ಇದು ಧನಂಜಯ್ ನಟನೆಯ 25ನೇ ಚಿತ್ರ…

ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಅವರು ನಿರ್ಮಿಸಿರುವ ‘ಹೊಯ್ಸಳ’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್, ಹಾಡುಗಳಿಂದ ಪ್ರೇಕ್ಷಕರ ಹೃದಯ ಗೆದ್ದಿರುವ ‘ಹೊಯ್ಸಳ’ ತಂಡದಿಂದ ಸದ್ಯದಲ್ಲಿಯೇ ಟ್ರೇಲರ್ ಕೂಡ ಬಿಡುಗಡೆ ಆಗಲಿದೆ. ಚಿತ್ರದ ಪ್ರಮೋಷನ್ ಜೋರಾಗಿದ್ದು, ನಾಯಕ ಡಾಲಿ ಧನಂಜಯ್ ಉತ್ತರ ಕರ್ನಾಟಕದಲ್ಲಿ ಸಂಚರಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಧನಂಜಯ್ “ರತ್ನನ ಪ್ರಪಂಚ’ ಆದಮೇಲೆ ಕೆ.ಆರ್.ಜಿ ಸ್ಟುಡಿಯೋ ಜೊತೆ ಕನೆಕ್ಟ್ ಆಗಿ ಒಂದಿಷ್ಟು ಸಿನಿಮಾ ಮಾಡುವ ಪ್ಲ್ಯಾನ್ ಮಾಡಿಕೊಂಡೆವು. ಆಗ ಈ ಚಿತ್ರದ ಕಥೆ ಬಂತು.

ಕಥೆ ಕೇಳಿದಾಗ ತುಂಬಾ ಇಷ್ಟವಾಯ್ತು. ನಂತರ ಗೊತ್ತಾಯ್ತು ಇದು ನನ್ನ ಅಭಿನಯದ 25ನೇ ಸಿನಿಮಾ ಅಂತ. ನನಗೂ ಸಮಾಜಕ್ಕೆ ಏನಾದರೂ ಸಂದೇಶ ಹೇಳುವ ಸಿನಿಮಾ ಮಾಡಬೇಕು ಎನಿಸಿತ್ತು. ಅದರಂತೆಯೇ ಫ್ಯಾಮಿಲಿ ಜೊತೆ ಕುಳಿತು ನೋಡುವ ಕಥೆ ನಂಗೆ ‘ಹೊಯ್ಸಳ’ದಲ್ಲಿ ಸಿಕ್ಕಿತು. ಇದರಲ್ಲಿ ಒಂದು ಸೀರಿಯಸ್ ಅಂಶವನ್ನು ಹೇಳುವ ಪ್ರಯತ್ನ ಮಾಡಲಾಗಿದ್ದು, ಒಳ್ಳೆ ಮೆಸೇಜ್ ಇರುವ ಕಮರ್ಷಿಯಲ್ ಸಿನಿಮಾ. ನಾವು ಚಿತ್ರದ ಶೀರ್ಷಿಕೆಯನ್ನು ರಾಮು ಫಿಲ್ಮ್ಸ್‌ ಜೊತೆ ಮಾತನಾಡಿ ಪಡೆದುಕೊಂಡೆವು. ಆದರೆ ಇದೇ ಹೆಸರಿನಲ್ಲಿ ಇನ್ನೊಂದು ಸಿನಿಮಾ ಸೆನ್ಸಾರ್ ಆಗಿದೆಯಂತೆ. ಹಾಗಾಗಿ ನಾನು ಚಿತ್ರದಲ್ಲಿ ಗುರುದತ್ ಹೊಯ್ಸಳ ಹೆಸರಿನಲ್ಲಿ ಕಾಣಿಸಿಕೊಂಡಿದ್ದು, ಇದೇ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ದರಾಗಿದ್ದೇವೆ. ಈ ಸಿನಿಮಾಗಾಗಿ ನಾನು ಕಾಯತಾ ಇದ್ದು, ತುಂಬಾ ವಿಷಯಗಳ ಬಗ್ಗೆ ಚಿತ್ರ ಮಾತನಾಡುತ್ತದೆ’ ಎಂದು ಹೇಳಿದರು.

ನಟ ನವೀನ ಶಂಕರ್ ಮಾತನಾಡಿ ‘ಈ ಸಿನಿಮಾ ಸಿಕ್ಕಿದ್ದು ನಂಗೆ ಖುಷಿಯ ವಿಷಯ. ಇದೇ ಮೊದಲಬಾರಿ ನಾನು ಕಂಪರ್ಟ್ನಲ್ಲಿ ನಟನೆ ಮಾಡಿದ್ದೇನೆ. ಇಲ್ಲಿ ನಾನು ಬರಿ ಪಾತ್ರ ಮಾಡಿದ್ದು ರಗಡ್ ಲುಕ್‌ನಲ್ಲಿ ವಿಲನ್ ಆಗಿರುತ್ತೇನೆ. ಧನಂಜಯ್ ‘ಹೆಡ್ ಬುಷ್’ ಸಿನಿಮಾಗೆ ಕರೆದಿದ್ದರು ಆಗಿರಲಿಲ್ಲ. ಈಗ ಗೆಳೆಯನ ಜೊತೆ ನಟನೆ ಮಾಡಿದ್ದು ಖುಷಿ ಇದೆ. ನಿರ್ಮಾಪಕರು ಕರೆದು ಅವಕಾಶ ಕೊಟ್ಟರು. ಪಾತ್ರ ಅದ್ಭುತವಾಗಿ ಬಂದಿದ್ದು, ಒಳ್ಳೆ ಜರ್ನಿ ನೀಡುವ ಸಿನಿಮಾ ಇದು ನಂಗೆ. ಅಪ್ಪಟ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಎಲ್ಲಾ ಪಾತ್ರಗಳಿಗೂ ಗಟ್ಟಿತನ ಇದೆ’ ಎಂದರು.

ಚಿತ್ರದ ನಾಯಕಿ ಅಮೃತ ಅಯ್ಯಂಗಾರ್ ‘ಧನಂಜಯ ಜೊತೆ ನಂಗೆ ಇದು 3ನೇ ಸಿನಿಮಾ. ಇದರಲ್ಲಿ ನಾನು ಗಂಗಾ ಆಗಿ ಪೊಲೀಸ್ ಆಫೀಸರ್ ಹೆಂಡತಿ ಪಾತ್ರ ಮಾಡಿದ್ದೇನೆ. ಜೊತೆಗೆ ನಾನು ಭರತನಾಟ್ಯ ಟೀಚರ್ ಆಗಿರುತ್ತೇನೆ. ಈ ಪಾತ್ರ ಮಾಡುವುದು ನಂಗೆ ಚಾಲೆಂಜಿಂಗ್ ಆಗಿತ್ತು. ಈ ಚಿತ್ರ ಒಳ್ಳೆ ಪೊಲೀಸ್ ಸ್ಟೋರಿ ಫೀಲ್ ಕೊಡುತ್ತದೆ’ ಎಂದು ಹೇಳಿದರು. ನಟ ಅವಿನಾಶ್ ಮಾತನಾಡಿ ‘ಇದರಲ್ಲಿ ನಾನು ವಿಲನ್ ಪಾತ್ರ ಮಾಡಿದ್ದು, ಅದ್ಭುತವಾಗಿ ಬಂದಿದೆ. ನಿರ್ದೇಶಕರು ನಂಗೆ ಕಥೆ ಹೇಳುವಾಗ ನಾನಾ ಪಾಟೇಕರ್ ತರಾ ಪಾತ್ರ ಇರುತ್ತದೆ ಎಂದು ಹೇಳಿದ್ದರು. ಈ ಪೊಲೀಸ್ ಸ್ಟೋರಿ ಸಿನಿಮಾ ಅದ್ಭುತವಾಗಿ ಬಂದಿದ್ದು, ನಾನಿಲ್ಲಿ ದಾದಾ ಪಾತ್ರ ಮಾಡಿದ್ದೇನೆ’ ಎಂದರು.

ಇದೇ ಸಂದರ್ಭದಲ್ಲಿ ನಿರ್ಮಾಪಕ ಯೋಗಿ ಜಿ. ರಾಜ್ ಮಾತನಾಡಿ ‘ಧನು ಜೊತೆ ಸಿನಿಮಾ ಮಾಡಲು ಸಿದ್ದರಾದಾಗ ನಿರ್ದೇಶಕರು ಕಥೆ ಹೇಳಿದ್ರು. ಕಥೆ ತುಂಬಾ ಚನ್ನಾಗಿದೆ ಅನಿಸಿ ನಿರ್ಮಾಣಕ್ಕೆ ಮುಂದಾದೆವು. ಚಿತ್ರ ಇದೇ ಮಾರ್ಚ್ 30 ರಂದು ವಿಶ್ವಾದ್ಯಂತ ಕನ್ನಡ ಭಾಷೆಯಲ್ಲಿಯೇ ರಿಲೀಸ್ ಆಗಲಿದೆ. ಇದರಲ್ಲಿ ನಾಯಕನ ಹೆಸರು ಗುರುದೇವ ಹೊಯ್ಸಳ ಅಂತ ಇರುತ್ತದೆ. ಕಥೆ ಬೆಳಗಾವಿ ಭಾಗದಲ್ಲಿ ನಡೆಯುತ್ತದೆ’ ಎಂದರು. ನಿರ್ದೇಶಕ ವಿಜಯ್ ಎನ್ ‘ಈ ಚಿತ್ರವನ್ನು ಪೊಲೀಸ್ ಡಿಪಾರ್ಟ್ಮೆಂಟ್‌ಗೆ ಅರ್ಪಣೆ ಮಾಡಲಾಗುತ್ತಿದೆ’ ಎಂದಷ್ಟೇ ಹೇಳಿದರು.

Categories
ಸಿನಿ ಸುದ್ದಿ

ಪ್ರಭುತ್ವ ಟ್ರೇಲರ್ ಗೆ ಮೆಚ್ಚುಗೆ: ಶೀಘ್ರ ಬಿಡುಗಡೆ

ಇತ್ತೀಚೆಗೆ ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳೇ ಹೆಚ್ಚು ಗೆಲುತ್ತಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಕಥಾಹಂದರ ಹೊಂದಿರುವ “ಪ್ರಭುತ್ವ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚೇತನ್ ಚಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೇಲರನ್ನು ರಾಜಕೀಯ ಮುಖಂಡರಾದ ರವೀಂದ್ರ ಅನಾವರಣ ಮಾಡಿದರು.
ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಪ್ರತಿಯೊಬ್ಬ ಪ್ರಜೆ ಈ ಚಿತ್ರವನ್ನು ನೋಡಬೇಕು. ಮತದಾನ ಅಮೂಲ್ಯವಾದ್ದದ್ದು. ಹಾಗಾಗಿ ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವ ಸಾರುವ ಈ ಸಿನಿಮಾಗೆ ನಾನೇ ಕಥೆ ಬರೆದಿದ್ದೇನೆ. ನನ್ನ ಮಗ ರವಿರಾಜ್ ಎಸ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಮೇಘಡಹಳ್ಳಿ ಡಾ.ಶಿವಕುಮಾರ್.

ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ಚುನಾವಣೆ ಮುಂಚೆಯೇ ಚಿತ್ರವನ್ನು ಬಿಡುಗಡೆ ‌ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಮಾಪಕ ರವಿರಾಜ್ ಎಸ್ ಕುಮಾರ್ ತಿಳಿಸಿದರು.

ಚಿತ್ರದ ಕಥಾಹಂದರದ ಬಗ್ಗೆ ಹೇಳಿದ ನಿರ್ದೇಶಕ ಆರ್ ರಂಗನಾಥ್, ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ತಮ್ಮ ತಂಡಕ್ಕೆ ಧನ್ಯವಾದ ಹೇಳಿದರು.

ಇದು ನನ್ನ ಹನ್ನೆರಡನೇ ಸಿನಿಮಾ. ಮೇಘಡಹಳ್ಳಿ ಡಾ. ಶಿವಕುಮಾರ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಬರೆದಿದ್ದಾರೆ. ರಂಗನಾಥ್ ಅಷ್ಟೇ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಹಾಗೂ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ ಎಂದರು ನಾಯಕ ಚೇತನ್ ಚಂದ್ರ.

ಅನು ಎಂಬ ಪಾತ್ರದಲ್ಲಿ ನಟಿಸಿರುವುದಾಗಿ ನಾಯಕಿ ಪಾವನ ತಿಳಿಸಿದರು. ಚಿತ್ರದಲ್ಲಿ ಅಭಿನಯಿಸಿರುವ ಅರವಿಂದ್ ರಾವ್, ಹರೀಶ್ ರಾಯ್, ಆದಿ ಲೋಕೇಶ್, ವಿಜಯ್ ಚೆಂಡೂರ್, ವೀಣಾ ಸುಂದರ್, ಅನಿತಾ‌ ಭಟ್ ಮುಂತಾದ ಕಲಾವಿದರು ಹಾಗೂ ಸಂಭಾಷಣೆ ಬರೆದಿರುವ ವಿನಯ್ “ಪ್ರಭುತ್ವ” ಚಿತ್ರದ ಕುರಿತು ‌ಮಾತನಾಡಿದರು.

ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಚೇತನ್ ಚಂದ್ರ, ಪಾವನ, ನಾಸರ್, ಶರತ್ ಲೋಹಿತಾಶ್ವ, ಆದಿ ಲೋಕೇಶ್, ಅರವಿಂದ್ ರಾವ್, ಹರೀಶ್ ರಾಯ್, ವಿಜಯ್ ಚೆಂಡೂರ್, ವೀಣಾ ಸುಂದರ್, ರಾಜೇಶ್ ನಟರಂಗ, ಅನಿತಾ ಭಟ್ ಮುಂತಾದವರಿದ್ದಾರೆ.

Categories
ಸಿನಿ ಸುದ್ದಿ

ಎಂ.ಜೆ ಅವ್ಯಾನಾ ರೆಸಾರ್ಟ್ ನಲ್ಲಿ ಅನಿಲ್ ಕುಮಾರ್ ಸಾರಥ್ಯದ ಎಂ ಜೆ ಪ್ರೊಡಕ್ಷನ್ ಗೆ ಚಾಲನೆ: ಸಿನಿಮಾ ಗಣ್ಯರು ಭಾಗಿ

ಜಿಗಣಿ-ಆನೇಕಲ್ ರಸ್ತೆಯಲ್ಲಿ ಎಂ.ಜೆ ಅವ್ಯಾನಾ ಎಂಬ ಅದ್ಭುತ ರೆಸಾರ್ಟ್ ಇದೆ. ಈ ಸುಂದರ ರೆಸಾರ್ಟ್ ನಲ್ಲಿ ಅನಿಲ್ ಕುಮಾರ್ ಅವರ ಸಾರಥ್ಯದ ಎಂ ಜೆ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಆರಂಭವಾಗಿದೆ. ನಟ ಶರಣ್, “ಕಾಂತಾರ” ಖ್ಯಾತಿಯ ನಟಿ ಸಪ್ತಮಿ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎನ್.ಸುಬ್ರಹ್ಮಣ್ಯ, ನಿರ್ದೇಶಕ ಹರಿ ಸಂತು,‌ ಮುಖೇಶ್ ಕುಮಾರ್, ಸತೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಇದ್ದರು.

ನಾನು ಮೂಲತಃ ಕೇರಳದವನು. ಮಲೆಯಾಳಂ ನಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈಗ ಎಂ.ಜೆ.ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇನೆ. ಈ ಮೂಲಕ ಕನ್ನಡದಲ್ಲೂ ಸದಭಿರುಚಿಯ ಚಿತ್ರಗಳನ್ನು ಸದ್ಯದಲ್ಲೇ ನಿರ್ಮಾಣ ಮಾಡುತ್ತೇನೆ. ಬೆಂಗಳೂರಿನ ಆನೇಕಲ್ ಸಮೀಪ “ಅವ್ಯಾನಾ” ಎಂಬ ಈ ಸುಸ್ಸಜಿತ ರೆಸಾರ್ಟ್ ನಿರ್ಮಾಣವಾಗಿದೆ. ಎಲ್ಲಾ ಅನುಕೂಲವಿರುವ ರೆಸಾರ್ಟ್ ಇದು. ನಮ್ಮ “ಅವ್ಯಾನಾ” ರೆಸಾರ್ಟ್ ನಲ್ಲಿ “ಆಡಂಬರ”, “ಅತುಲ್ಯಂ” ಎಂಬ ಸಭಾಂಗಣವಿದೆ. “ಸ್ವಾದಂ” ಹೆಸರಿನ ರೆಸ್ಟೋರೆಂಟ್ ಇದೆ.

ಏಷ್ಯಾದಲ್ಲೇ ಅತೀ ಉದ್ದವಾದ ವಾಟರ್ ಫಾಲ್ಸ್ ನಿರ್ಮಿಸಲಾಗಿದೆ. ಇಂಡಿಯಾದಲ್ಲೇ ದೊಡ್ಡದಾದ ಫುಟ್ಬಾಲ್ ಹಾಗೂ ಕ್ರಿಕೆಟ್ ಟರ್ಫ್ ಸೇರಿದಂತೆ ಎಲ್ಲಾ ಸೌಲಭ್ಯಗಳಿರುವ ನಮ್ಮ “ಅವ್ಯಾನಾ” ರೆಸಾರ್ಟ್ ನಲ್ಲಿ ಮದುವೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು. ವಿಶೇಷವಾಗಿ ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ಅನುಕೂಲವಿದ್ದು, ಚಿತ್ರರಂಗದವರು ಬಳಸಿಕೊಳ್ಳಬಹುದು ಎಂದು ಎಂ.ಜೆ .ಪ್ರೊಡಕ್ಷನ್ ಹಾಗೂ “ಅವ್ಯಾನಾ” ರೆಸಾರ್ಟ್ ಬಗ್ಗೆ ಮಾಹಿತಿ ನೀಡಿದರು.

ನನ್ನನ್ನು ಆಹ್ವಾನಿಸಲು ಎರಡು ಗಂಟೆ ಪ್ರಯಾಣ ಮಾಡಿಕೊಂಡು ಬರುವುದು ಬೇಡ ಎಂದೆ. ಆದರೂ ಅನಿಲ್ ಕುಮಾರ್ ಅವರು ಖುದ್ದಾಗಿ ಬಂದು ಸಮಾರಂಭಕ್ಕೆ ಆಹ್ವಾನಿಸಿದರು. ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ ಎಂದು ತಿಳಿದು ಸಂತೋಷವಾಯಿತು. “ಅವ್ಯಾನಾ” ರೆಸಾರ್ಟ್ ತುಂಬಾ ಚೆನ್ನಾಗಿದೆ. “ಎಂ.ಜೆ ಪ್ರೊಡಕ್ಣನ್” ಮೂಲಕ ಕನ್ನಡ ಚಿತ್ರ‌ ನಿರ್ಮಾಣಕ್ಕೆ ಕೂಡ ಮುಂದಾಗಿದ್ದಾರೆ ಒಳ್ಳೆಯದಾಗಲಿ ಎಂದು ನಟ ಶರಣ್ ಹಾರೈಸಿದರು.

“ಅವ್ಯಾನಾ” ರೆಸಾರ್ಟ್ ನೋಡಿ ಖುಷಿಯಾಯಿತು. ಅದರಲ್ಲೂ ನಾನು ಈಜುಗಾರ್ತಿ ಆಗಿರುವುದರಿಂದ, ಇಲ್ಲಿ ನಿರ್ಮಾಣವಾಗಿರುವ ಅತೀ ಉದ್ದದ ವಾಟರ್ ಫಾಲ್ಸ್ ಬಹಳ ಹಿಡಿಸಿತು. ಚಿತ್ರೀಕರಣಕ್ಕೆ ಇದೊಂದು ಸೂಕ್ತ ಜಾಗ ಎಂದರು “ಕಾಂತಾರ” ಖ್ಯಾತಿಯ ಸಪ್ತಮಿ ಗೌಡ.

ಅನಿಲ್ ಕುಮಾರ್ ಅವರ ಎಲ್ಲಾ ಉತ್ತಮ ಕೆಲಸಗಳಿಗೂ‌ ನಮ್ಮ‌ ಬೆಂಬಲವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ತಿಳಿಸಿದರು.

ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ, ನಿರ್ದೇಶಕ ಹರಿ ಸಂತೋಷ್, ಸತೀಶ್ ಕುಮಾರ್, ಮುಖೇಶ್ ಕುಮಾರ್ ಮುಂತಾದ ಗಣ್ಯರು “ಅವ್ಯಾನಾ” ಹಾಗೂ “ಎಂ.ಜೆ.ಪ್ರೊಡಕ್ಷನ್ ” ಗೆ ಶುಭ ಕೋರಿದರು.

Categories
ಸಿನಿ ಸುದ್ದಿ

ಶಾರ್ಟ್ ಫಿಲ್ಮ್ ಮೇಕರ್ಸ್ ಗೆ ಸತ್ಯ ಹೆಗಡೆ ಸ್ಟುಡಿಯೋಸ್ ವರದಾನ…

ಸದ್ಯ ಚಂದನವನದಲ್ಲಿ ಯುವ ಪ್ರತಿಭೆಗಳ ಅದೃಷ್ಟ ಪರೀಕ್ಷೆಗೆ ‘ಸತ್ಯ ಹೆಗಡೆ ಸ್ಟುಡಿಯೋಸ್’ ವರದಾನವಾಗುತ್ತಿದೆ. ಹೌದು, ಛಾಯಾಗ್ರಾಹಕನಾಗಿ ಹೆಸರು ಮಾಡಿರುವ ಸತ್ಯ ಹೆಗಡೆ ‘ಸತ್ಯ ಹೆಗಡೆ ಸ್ಟುಡಿಯೋ’ ಹುಟ್ಟು ಹಾಕಿ ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತಿದ್ದು, ಈ ಸಂಸ್ಥೆಯ ಮೂಲಕ ಶಾರ್ಟ್ ಫಿಲ್ಮಗಳನ್ನು ನಿರ್ಮಾಣ ಮಾಡುವ ಜೊತೆಗೆ ಸತ್ಯ ಹೆಗಡೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಯುವಕರು ತಮ್ಮ ನಿರ್ದೇಶಕನಾಗುವ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದು, ಈಗಾಗಲೇ ಈ ಯೂಟ್ಯೂಬ್ ಚಾನಲ್ ಮೂಲಕ 11 ಕಿರು ಚಿತ್ರಗಳು ಬಿಡುಗಡೆ ಆಗಿವೆ.‌

ಇದೀಗ ಮೂರು ಫಿಲ್ಮ್ ಗಳು ಈ ಚಾನಲ್ ನಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಆ ಪೈಕಿ ಕಳೆದ ಶನಿವಾರ ‘ಗ್ರಾಚಾರ’ ಎಂಬ ಕಿರುಚಿತ್ರ ರಿಲೀಸ್ ಆಗಿದ್ದು ಮುಂದಿನ ದಿನಗಳಲ್ಲಿ ‘ಕಥೆಗಾರನ ಕತೆ’ ಹಾಗೂ ‘ಅಹಂ ಪರಂ’ ಶಾರ್ಟ್ ಫಿಲಂ ಗಳು ಈ ಸತ್ಯ ಹೆಗಡೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿವೆ. ಹಾಗಾಗಿ ಇತ್ತೀಚಿಗಷ್ಟೇ ಸತ್ಯ ಹೆಗಡೆ ಹಾಗೂ ಅವರ ತಂಡ ಆ ಮೂರು ಕಿರು ಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಒಂಬತ್ತು ನಿಮಿಷಗಳ ‘ಕತೆಗಾರನ ಕಥೆ’ ಕಿರು ಚಿತ್ರವನ್ನು ಯುವ ಬರಹಗಾರ ಹಾಗೂ ನಿರ್ದೇಶಕ ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ.

ಹಾಸನ ಮೂಲದವರಾದ ಕೌಶಿಕ ‘ಹೃದಯದ ಮಾತು’ ಸೇರಿದಂತೆ 8 ಕಾದಂಬರಿಗಳನ್ನು ಬರೆದಿದ್ದು ಕೆಲವೊಂದು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಕೂಡ ಮಾಡಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡಿರುವ ಕೌಶಿಕಗೆ ಇದು ಮೊದಲ ಪ್ರಯತ್ನ. ಈಗಷ್ಟೇ ಬಿಡುಗಡೆ ಆಗಿರುವ ‘ಗ್ರಾಚಾರ’ ಕಿರು ಚಿತ್ರವನ್ನು ಅಜಯ್ ಪಂಡಿತ್ ನಿರ್ದೇಶನ ಮಾಡಿದ್ದು, ಇವರು ಮೂಲತಃ ಸಾಗರನವರು. ಇವರು ಕೂಡ ಸಾಫ್ಟ್ ವೇರ್ ಇಂಜಿನಿಯರಿಂಗ್ ಓದಿಕೊಂಡಿದ್ದಾರೆ. ಇನ್ನು ವಿಭಿನ್ನ ಪ್ರಯತ್ನದಂತೆ ‘ಅಹಂ ಪರಂ’ ಕಿರುಚಿತ್ರ ಸಿದ್ಧವಾಗಿದ್ದು ಇದನ್ನು ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ.

ಈ ಕಿರುಚಿತ್ರಗಳ ವೀಕ್ಷಣೆಗೆ ಅಥಿತಿಗಳಾಗಿ ನಿರ್ದೇಶಕರಾದ ಗಿರಿರಾಜ್, ಚೇತನ ಕುಮಾರ್, ನಟ ‘ಗುಲ್ಟು’ ನವೀನ ಮುಂತಾದವರು ಬಂದಿದ್ದರು. ಆ ಪೈಕಿ ನಿರ್ದೇಶಕ ಗಿರಿರಾಜ್ ಮಾತನಾಡಿ, ‘ಇಂದಿನ ಯುವಕರಿಗೆ ಶಾರ್ಟ್ ಫಿಲಂಗಳು ಒಂದು ಒಳ್ಳೆ ಅವಕಾಶ ಆಗುತ್ತಿವೆ. ಯುವಕರ ಪ್ರಯತ್ನಗಳಿಗೆ ಸತ್ಯ ಹೆಗಡೆ ಸ್ಟುಡಿಯೋಸ್ ಸಾಕಷ್ಟು ಸಹಾಯ ಮಾಡುತ್ತಿದೆ. ನಮ್ಮಗಳ ಕಾಲದಲ್ಲಿ ಇಂತಹ ಅವಕಾಶ ಇರಲಿಲ್ಲ. ಈಗಿನ ಯುವಕರಿಗೆ ಒಳ್ಳೆಯ ಅವಕಾಶವನ್ನು ಸತ್ಯ ಹೆಗಡೆ ಮಾಡಿಕೊಡುತ್ತಿದ್ದಾರೆ. ಮೂರು ಚಿತ್ರಗಳು ಚೆನ್ನಾಗಿ ಬಂದಿದ್ದು, ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಯುವ ಪ್ರತಿಭೆಗಳಿಗೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

ನವೀನ್ ಮಾತನಾಡಿ, ‘ನಾನು ಕೂಡ ಶಾರ್ಟ್ ಫಿಲಂಗಳಲ್ಲಿ ಅಭಿನಯಿಸುತ್ತಾ ಬಂದವನು. ನಾವು ಶಾರ್ಟ್ ಫಿಲಂ ತಯಾರಿಸುವಾಗ ಸತ್ಯ ಹೆಗಡೆಯಂತವರು ನಮಗೆ ಯಾರು ಸಾಥ್ ನೀಡಿರಲಿಲ್ಲ.

ಈಗಿನವರೆಗೆ ಒಳ್ಳೆಯ ಅವಕಾಶ ಸಿಗುತ್ತದೆ ಕಿರುಚಿತ್ರಗಳನ್ನು ಬಿಡುಗಡೆ ಮಾಡಲು. ಇಂತಹ ಅವಕಾಶವನ್ನು ಇನ್ನಷ್ಟು ಯುವ ಜನರಿಗೆ ಸಿಕ್ಕು ಒಳ್ಳೆಯ ಚಿತ್ರಗಳನ್ನು ತರಬೇಕು. ಈ ಶಾರ್ಟ್ ಫಿಲಂ ವೇದಿಕೆ ಯುವ ಪ್ರತಿಭೆಗಳಿಗೆ ತುಂಬಾ ಅನುಕೂಲವಾಗುತ್ತದೆ’ ಎಂದರು.

Categories
ಸಿನಿ ಸುದ್ದಿ

ಯಲಾ ಕುನ್ನಿ ಅಂದ್ರು ಕೋಮಲ್! ಮೇರಾ ನಾಮ್ ವಜ್ರಮುನಿ: ಇದು ಸೆನ್ಸೇಷನ್ ಸ್ಟಾರ್ ಸಿನಿಮಾ

ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಅಭಿನಯದ ನೂತನ ಚಿತ್ರ “ಯಲಾ ಕುನ್ನಿ” ಮೇರಾ ನಾಮ್ ವಜ್ರಮುನಿ ! ಎಂಬ ಅಡಿಬರಹ ಇರುವ ಶೀರ್ಷಿಕೆ ಇತ್ತೀಚೆಗೆ ಅನಾವರಣವಾಗಿದೆ.

ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ್ರು ನಿರ್ಮಿಸುತ್ತಿರುವ ಈ ಚಿತ್ರವನ್ನು ಎನ್. ಆರ್ ಪ್ರದೀಪ ನಿರ್ದೇಶಿಸುತ್ತಿದ್ದಾರೆ.

ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಗರಡಿಯಲ್ಲಿ ಪಳಗಿರುವ ಪ್ರದೀಪ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

1981 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನಲ್ಲಿ ಹಳ್ಳಿ ಮತ್ತು ದೇವಸ್ಥಾನದ ಸೆಟ್ ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಯಲಿದೆ.

ಕನ್ನಡದ ಖ್ಯಾತ ನಟ ವಜ್ರಮುನಿ ತಮ್ಮ ಚಿತ್ರಗಳಲ್ಲಿ ಹೆಚ್ಚು ಬಯ್ಯಲು ಬಳಸುತ್ತಿದ್ಡ ಸಂಭಾಷಣೆ “ಯಲಾ ಕುನ್ನಿ”. ಈ ಪದವನ್ನೆ ಚಿತ್ರದ ಶೀರ್ಷಿಕೆಯಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಚಿತ್ರದಲ್ಲಿ “ವಜ್ರಮುನಿ”ಯಾಗಿ ಕೋಮಲ್ ರೆಟ್ರೂ ಲುಕ್ ನಲ್ಲಿ ಕಮಾಲ್ ಮಾಡಲಿದ್ದಾರೆ. ಹಿರಿಯ ಕಲಾವಿದ ಮುಸುರಿ ಕೃಷ್ಣ ಮೂರ್ತಿ ಅವರ ಮಗ ಜಯಸಿಂಹ ಮುಸುರಿ, ನವರಸ ನಾಯಕ ಜಗ್ಗೇಶ್ ಅವರ ಕಿರಿಯ ಮಗ ಯತಿರಾಜ್ ಹಾಗೂ “ಫ್ರೆಂಚ್ ಬಿರಿಯಾನಿ” ಖ್ಯಾತಿಯ ಮಹಾಂತೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಕುಟುಂಬ ಸಮೇತ ನೋಡಬಹುದಾದ ಪರಿಶುದ್ಧ ಹಾಸ್ಯ ಕಥಾಹಂದರದ ಜೊತೆಗೆ ಎಮೋಶನ್ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರದೀಪ ಅವರೆ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ,ಗೀತ ರಚನೆ ಸಹ ಮಾಡಿದ್ದಾರೆ ಧರ್ಮ ವಿಶ್ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.

Categories
ಸಿನಿ ಸುದ್ದಿ

ಮೈಸೂರಲ್ಲಿ ರಾಜ್ ಮೊಮ್ಮಗನ ಹೊಸ ಲವ್ ಸ್ಟೋರಿ! ಒಂದು ಸರಳ ಪ್ರೇಮಕಥೆ ಹೇಳೋಕ್ ಬಂದ್ರು ಸಿಂಪಲ್ ಸುನಿ…

ಸಿಂಪಲ್ ಸುನಿ ನಿರ್ದೇಶನದಲ್ಲಿ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಒಂದು ಸರಳ ಪ್ರೇಮಕಥೆ’. ಚಿತ್ರದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್, ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣದಲ್ಲಿ ನಿರತವಾಗಿದ್ದು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ.

ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ನನಗೆ ಮೊದಲಿನಿಂದಲೂ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ತುಂಬಾ ಇಷ್ಟ ಜೊತೆಗೆ ಸುನಿ ಅವರ ನಿರ್ದೇಶನದ ಶೈಲಿ ಕೂಡ ತುಂಬಾ ಇಷ್ಟ. ಸುನಿ ಅವರು ಈ ಸಿನಿಮಾ ಕಥೆ ಹೇಳಲು ಬಂದಾಗ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡ್ತಿದ್ದೀನಿ ಅನ್ನೋದೇ ತುಂಬಾ ಖುಷಿ ಕೊಟ್ಟಿತ್ತು.

ಈ ಚಿತ್ರದಲ್ಲಿ ಅತಿಶಯ್ ಪಾತ್ರದಲ್ಲಿ ನಟಿಸಿದ್ದೇನೆ. ಸಂಗೀತ ನಿರ್ದೇಶಕನ ಪಾತ್ರ. ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಅನ್ನೋದು ಅವನ ಕನಸು. ಆತನ ಮನಸ್ಸಲ್ಲಿ ಒಂದು ಹುಡುಗಿಯ ಹುಡುಕಾಟ ಯಾವಾಗಲೂ ಇರುತ್ತೆ ಇದು ಸಿನಿಮಾದ ಒಂದು ಎಳೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಗೆ ಇಟ್ಟ ಮೊದಲ ಟೈಟಲ್ ‘ಒಂದು ಸರಳ ಪ್ರೇಮಕಥೆ’. ಯಾವುದಾದರೂ ಸಿನಿಮಾಗೆ ಈ ಟೈಟಲ್ ಇಡೋಣ ಎಂದು ಹತ್ತು ವರ್ಷದಿಂದ ಟೈಟಲ್ ರಿನಿವಲ್ ಮಾಡಿಕೊಂಡು ಬಂದಿದ್ದೆ. ಈ ಚಿತ್ರದ ಕಥೆ ಕೇಳಿ ವಿನಯ್ ರಾಜ್ ಕುಮಾರ್ ಓಕೆ ಮಾಡಿದರು. ಚಿತ್ರಕ್ಕೆ ಪ್ರಸನ್ನ ಅವರು ಕಥೆ ಬರೆದಿದ್ದಾರೆ.

ಜನವರಿ 23ರಂದು ಸಿನಿಮಾ ಮುಹೂರ್ತ ಆಗಿತ್ತು, ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಮೈಸೂರಿನಲ್ಲಿ ಇವತ್ತು ಕೊನೆಯ ದಿನದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಶೇಕಡಾ 50ರಷ್ಟು ಚಿತ್ರೀಕರಣ ಮುಗಿದಿದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಮಲ್ಲಿಕಾ ಸಿಂಗ್ ಮೊದಲ ಕನ್ನಡ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು.

ಸಾಧುಕೋಕಿಲ, ರಾಜೇಶ್ ನಟರಂಗ, ಅರುಣ ಬಾಲರಾಜ್ ಒಳಗೊಂಡ ಕಲಾವಿದರು ಒಂದು ಸರಳ ಪ್ರೇಮಕಥೆ ಚಿತ್ರದಲ್ಲಿದ್ದು, ಕಾರ್ತಿಕ್ ಛಾಯಾಗ್ರಹಣ, ಆದಿ ಸಂಕಲನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅವಾರ್ಡ್ ಗೆ ಹಾರ್ಸ್ ಫ್ಯಾಷನ್ಸ್ ಕಂಪನಿ ಸಾಥ್: ಬ್ರ್ಯಾಂಡ್ ಲಾಂಚ್ ಮಾಡಿದ ಯೋಗರಾಜ ಭಟ್

ಕನ್ನಡ ಚಿತ್ರರಂಗದ ಸಿನಿಮಾ ಪತ್ರಕರ್ತರು ನಡೆಸುವ ನಾಲ್ಕನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಈ ಬಾರಿಯೂ ಯಶಸ್ವಿಯಾಗಿದೆ. ಕಳೆದ ಮೂರು ವರ್ಷಗಳಿಂದಲೂ ಸಿನಿಮಾರಂಗದ ದಿಗ್ಗಜರು ಕೊಟ್ಟ ಸಹಕಾರ ಮತ್ತು ಪ್ರೋತ್ಸಾಹದಿಂದ ಅವಾರ್ಡ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗುವ ಮೂಲಕ ಕನ್ನಡದ ಸ್ಟಾರ್ ನಟ, ನಟಿಯರು ಹಾಗು ತಂತ್ರಜ್ಞರು, ನಿರ್ದೇಶಕ, ನಿರ್ಮಾಪಕರು ಸಿನಿಮಾ ಪತ್ರಕರ್ತರ ಕಾರ್ಯವನ್ನು ಶ್ಲಾಘಿಸುತ್ತ ಬಂದಿದ್ದಾರೆ.

ಈ ಬಾರಿಯೂ ಕೂಡ ಲಲಿತ್ ಅಶೋಕ ಹೋಟೆಲ್‌ನಲ್ಲಿ ನಡೆದ ಕಲರ್ ಪುಲ್ ಕಾರ್ಯಕ್ರಮಕ್ಕೆ ಅಇನಿಮಾ ಗಣ್ಯರು ಭಾಗಿಯಾಗುವ ಮೂಲಕ ಸಿನಿಮಾ ಪತ್ರಕರ್ತರ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕು ಅಥವಾ ಅರ್ಥಪೂರ್ಣವಾಗಿ ನಡೆಯಬೇಕಾದರೆ, ಕಾರ್ಯಕ್ರಮಕ್ಕೆ ಸಹಕಾರ ನೀಡುವ ಮನಸ್ಸುಗಳೂ ಮುಖ್ಯ. ಹಾಗಾಗಿ ಈ ಸಲವೂ ಸಹ, ನಿಮ್ಮ ಹಿಂದೆ ನಾವಿದ್ದೇವೆ. ಎಂದಿಗಿಂತಲೂ ಚೆನ್ನಾಗಿ ಕಾರ್ಯಕ್ರಮ ಮಾಡಬೇಕು ಎಂದು ಪ್ರೋತ್ಸಾಹಿಸುವ ಮೂಲಕ ಹಲವು ಕಂಪೆನಿಗಳು, ಉದ್ಯಮಿಗಳು ಕಾರ್ಯಕ್ರಮಕ್ಕೆ ತನು,ಮನ, ಧನ ನೀಡಿ ಬೆನ್ನು ತಟ್ಟಿದ್ದಾರೆ.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಲ್ಲಿ ಉದ್ಯಮಿ ನರಸಿಂಹನ್ ಕೂಡ ಒಬ್ಬರು. ಅವರು ತಮ್ಮ ಹಾರ್ಸ್ ಫ್ಯಾಷನ್ಸ್ ಎಂಬ ಕಂಪೆನಿ‌ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸ್ಪಂದಿಸಿದ್ದಾರೆ. ಅವರ ಹಾರ್ಸ್ ಫ್ಯಾಷನ್ಸ್ ಕಂಪೆನಿಯಲ್ಲಿ ಬ್ರ್ಯಾಂಡ್ ಟೀ ಶರ್ಟ್ಸ್ ಗಳು ತಯಾರಾಗುತ್ತವೆ. ಗುಣಮಟ್ಟದಿಂದ ತಯಾರಾಗುವ ಈ ಕಂಪೆನಿಯ ಟೀ ಶರ್ಟ್ಸ್ ಗಳಿಗೆ ಸದ್ಯ ಬೇಡಿಕೆ ಇದೆ.

ಹಾರ್ಸ್ ಫ್ಯಾಷನ್ಸ್ ಕಂಪೆನಿ ಮಾಲೀಕರಾದ ಉದ್ಯಮಿ ನರಸಿಂಹನ್, ಕೊಯಮತ್ತೂರು ಬಳಿ ಇರುವ ತ್ರಿಪುರ್ ನಲ್ಲಿ ಕಂಪೆನಿಯ ಫ್ಯಾಕ್ಟರಿ ಇಟ್ಟಿದ್ದಾರೆ. ಅಲ್ಲಿ ನೂರಾರು ಯುವ ಉದ್ಯೋಗಿಗಳಿಗೆ ಕೆಲಸ ನೀಡಿ ಉತ್ಸಾಹ ತುಂಬಿದ್ದಾರೆ.
ಇತ್ತೀಚೆಗೆ ನಡೆದ ಚಂದನವನ ಕ್ರಿಟಿಕ್ಸ್ ಫಿಲ್ಮ್ ಅವಾರ್ಡ್ ವೇಳೆ ನರಸಿಂಹನ್ ಅವರು ತಮ್ಮ, ಹಾರ್ಸ್ ಫ್ಯಾಷನ್ಸ್ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ. ಕನ್ನಡ ನಿರ್ದೇಶಕ ಯೋಗರಾಜ ಭಟ್ ಅವರು ಈ ಬ್ರ್ಯಾಂಡ್ ಲಾಂಚ್ ಮಾಡಿ ಶುಭ ಕೋರಿದ್ದಾರೆ.

Categories
ಸಿನಿ ಸುದ್ದಿ

ಅರಣ್ಯ ಸಮಸ್ಯೆ ಪರಿಹಾರಕ್ಕೆ ಸಿಎಂಗೆ ಮನವಿ ಸಲ್ಲಿಸಿದ ರಿಷಬ್ ಶೆಟ್ಟಿ : ಕಾಡ್ಗಿಚ್ಚು ನಿವಾರಣೆ, ಕಾಡಾನೆ ತೊಂದರೆ ಪರಿಹಾರಕ್ಕೆ ಮುಂದಾದ ಕಾಂತಾರ ಹೀರೋ…

ಕಾಡಂಚಿನ ಜನರು ಮತ್ತು ಅರಣ್ಯ ರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಮಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ರಿಷಬ್ ಶೆಟ್ಟಿ ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆದೇಶಿಸುವ ಭರಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾದ ಬಳಿಕ ನಾನು ಹೆಚ್ಚೆಚ್ಚು ಕಾಡು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಸುತ್ತಾಡಿದೆ. ಅರಣ್ಯ ಇಲಾಖೆಯ ಜೊತೆ ಕೆಲಸ ಮಾಡುತ್ತಾ ಅರಣ್ಯ ರಕ್ಷಣೆಯ ವೇಳೆ ಇಲಾಖೆಯ ಮಂದಿ ಮತ್ತು ಕಾಡಂಚಿನ ಪ್ರದೇಶಗಳ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿತುಕೊಂಡೆ. ಉದಾಹರಣೆಗೆ ಕೃಷಿಕರು ಎದುರಿಸುತ್ತಿರುವ ಕಾಡಾನೆ ತೊಂದರೆ ಸಮಸ್ಯೆ ಇರಬಹುದು, ಕಾಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಚರ್ ಗಳು ಎದುರಿಸುವ ಕಷ್ಟಗಳಿರಬಹುದು ಹೀಗೆ ಸುಮಾರು 20 ಅಂಶಗಳ ವಿವರವಾದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಅವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮುಖ್ಯಮಂತ್ರಿಗಳು ಇರುವುದಕ್ಕೆ ನಾವು ಧನ್ಯರು ಎಂದೂ ತಿಳಿಸಿದ್ದಾರೆ.

ಕಾಂತಾರ ಸಿನಿಮಾ ಮೂಲಕ ಅರಣ್ಯ ರಕ್ಷಣೆಯ ಸಂದೇಶ ನೀಡಿದ ರಿಷಬ್ ಶೆಟ್ಟಿಯವರು ಇದೀಗ ಅರಣ್ಯ ರಕ್ಷಣೆ ಮತ್ತು ಕಾಡಂಚಿನಲ್ಲಿರುವ ಜನರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸವೇ ಸರಿ.


ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು.

error: Content is protected !!