ಶ್ರೀಲಂಕಾದ ಫಿಲಂ ಕರ್ಪೋರೇಶನ್, ಅಲ್ಲಿನ ಪ್ರವಾಸೋದ್ಯಮ ಇಲಾಖೆ, ಏಷ್ಯನ್ ಮೀಡಿಯಂ ಕಲ್ಚರಲ್ ಅಸೊಸಿಯೇಶನ್ ಮತ್ತು ಶ್ರೀಲಂಕಾದ ಭಾರತೀಯ ರಾಯಭಾರಿ ಕಛೇರಿ ಇವುಗಳ ಸಹಯೋಗದಲ್ಲಿ ಏಪ್ರಿಲ್ 27 ರಿಂದ ಮೇ 3 ರವರೆಗೆ ಶ್ರೀಲಂಕಾದಲ್ಲಿ ಅದ್ದೂರಿಯಾಗಿ ನಾಗತಿಹಳ್ಳಿ ಚಲನ ಚಿತ್ರೋತ್ಸವ, ಚಲನಚಿತ್ರ ಕಾರ್ಯಾಗಾರ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿವೆ.
ನಾಗತಿಹಳ್ಳಿ ಚಂದ್ರಶೇಖರ ಅವರ ಪ್ರಶಸ್ತಿ ಪುರಸ್ಕೃತ ಹಾಗೂ ಮಹತ್ವದ ಚಿತ್ರಗಳಾದ ಅಮೆರಿಕಾ! ಅಮೆರಿಕಾ!!, ಮಾತಾಡ್ ಮಾತಾಡ್ ಮಲ್ಲಿಗೆ, ಕೋಟ್ರೇಶಿ ಕನಸು, ಇಷ್ಟಕಾಮ್ಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕಥಾ ನಿರೂಪಣೆ, ಚಿತ್ರಕಥೆ ರಚನೆ, ಛಾಯಾಗ್ರಹಣ, ಸಂಕಲನ ಮುಂತಾದ ವಿಷಯಗಳ ಬಗ್ಗೆ ಶ್ರೀಲಂಕಾದ ಸಿನಿಮಾಸಕ್ತ ವಿದ್ಯಾರ್ಥಿಗಳೊಂದಿಗೆ ಕಾರ್ಯಾಗಾರವನ್ನು ನಾಗತಿಹಳ್ಳಿ ಚಂದ್ರಶೇಖರ ಅವರು ನಡೆಸಿಕೊಡಲಿದ್ದಾರೆ.
ಈ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಅವರೊಟ್ಟಿಗೆ ನಟ ನಿರೂಪ್ ಭಂಡಾರಿ, ನಟಿ ಕಾವ್ಯಾಶೆಟ್ಟಿ, ಛಾಯಗ್ರಾಹಕ ಎಸ್. ಕೆ. ರಾವ್, ನಿರ್ಮಾಪಕ ವೈ.ಎನ್.ಶಂಕರೇಗೌಡ ಮತ್ತು ಮಾಧ್ಯಮ ಕ್ಷೇತ್ರದ ಮದನ್ಗೌಡ, ಜಿ.ಎನ್,ಮೋಹನ್ ಭಾಗವಹಿಸಲಿದ್ದಾರೆ.
ನಟ ದರ್ಶನ್ ಕೊನೆಗೂ ಮಾಧ್ಯಮಕ್ಕೆ ತಲೆಬಾಗಿದ್ಧಾರಾ? ದರ್ಶನ್ ತಮ್ಮ ಮನದಾಳದ ಮಾತುಗಳನ್ನು ಪತ್ರದ ಮೂಲಕ ಹಂಚಿಕೊಂಡಿದ್ದಾರಾ? ಹೀಗೊಂದು ಸುದ್ದಿ ಹೊರಬಿದ್ದಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ?
ಕನ್ನಡ ಚಿತ್ರರಂಗದಲ್ಲಿ ಮಹಾನ್ ನಟರೆಲ್ಲರೂ ಛಾಪು ಮೂಡಿಸಿ ಹೋಗಿದ್ದಾರೆ.ಅಂತಹ ನಟರಲ್ಲೊ ತೂಗುದೀಪ ಶ್ರೀನಿವಾಸ್ ಕೂಡ ಒಬ್ಬರು. ಅವರ ಕುಡಿಯಾದ ನಾನು ಮಾಧ್ಯಮಕ್ಕೆ ನೋವಾಗುವಂತೆ ಮಾತಾಡಿದ್ದೇನೆ ಹಾಗಾಗಿ ವಿಷಾಧವಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಅದೇನೆ ಇರಲಿ ರಾತ್ರಿಯಿಡೀ ಸೋಶಿಯಲ್ ಮೀಡಿಯಾದಲ್ಲಿ ಈ ಪತ್ರ ಹರಿದಾಡಿ ಚರ್ಚೆಗೆ ಗ್ರಾಸವಾಗಿದ್ದಂತೂ ನಿಜ.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳು ನಿರ್ಮಾಣವಾಗಿ ತೆರೆಗೆ ಬರುತ್ತಿವೆ. ಅಂತಹ ಮತ್ತೊಂದು ಚಿತ್ರವೇ ಕಾಶಿಕಾ. ಕನ್ನಡದಲ್ಲಿ ಮೊದಲ ಬಾರಿಗೆ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿಕೊಂಡು ತಯಾರಾಗಿರುವ ಸಾರಿ (ಕರ್ಮ ರಿಟರ್ನ್ಸ್) ಚಿತ್ರದ ನಿರ್ಮಾಪಕ ನವೀನ್ ಕುಮಾರ್ ಅವರ ಮತ್ತೊಂದು ಅದ್ದೂರಿ ವೆಚ್ಚದ ಹಾಗೂ ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿರುವ, ಬಿಗ್ ಸ್ಟಾರ್ ಕಾಸ್ಟ್ ಒಳಗೊಂಡ ಚಿತ್ರ ಇದಾಗಲಿದೆ. ಸಾರಿ ನಂತರ ಕಿಸ್ ಇಂಟರ್ ನ್ಯಾಷನಲ್ (ಕೆನಡಾ) ಸಂಸ್ಥೆಯಿಂದ ಹೊರಬರುತ್ತಿರುವ ಮೂರನೆಯ ಚಿತ್ರವಿದು. ಸಾರಿ ಚಿತ್ರವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಮತ್ತೊಂದು ಚಿತ್ರವನ್ನು ಅನೌನ್ಸ್ ಮಾಡಿದೆ. ಈ ಹಿಂದೆ ಸಿದ್ದಿಸೀರೆ ಮತ್ತು ಸಾರಿ ಯಂಥ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿದ ಬ್ರಹ್ಮ ಆವರ ನಿರ್ದೇಶನದ ಮೂರನೇ ಚಿತ್ರ ಇದಾಗಿದೆ.
ಇದೊಂದು ಮಹಿಳಾ ಪ್ರದಾನ ಆಕ್ಷನ್ ಚಿತ್ರವಾಗಿದ್ದು, ನಾಯಕಿ ಕಾಶಿಯಿಂದ ಕರ್ನಾಟಕಕ್ಕೆ ಬರುತ್ತಾಳೆ. ಆಕೆ ಇಲ್ಲಿಗೆ ಏಕೆ ಬಂದಳು, ಯಾರನ್ನು ಹುಡುಕಿಕೊಂಡು ಬಂದಳು ಅನ್ನೋದೇ ಚಿತ್ರದ ಕಾನ್ಸೆಪ್ಟ್. ನಾಯಕಿಯ ಪಾತ್ರಕ್ಕೆ ಹೆಸರಾಂತ ನಟಿಯನ್ನು ಸಂಪರ್ಕಿಸಲಾಗಿದ್ದು ಮುಂದಿನ ದಿನಗಳಲ್ಲಿ ಅವರ ಹೆಸರನ್ನು ರಿವೀಲ್ ಮಾಡಲಾಗುವುದು.
ಇನ್ನು ಈ ಚಿತ್ರದ ಸಹ ನಿರ್ಮಾಪಕರಾಗಿ ಶ್ರೀವಿಜಯ್ ಹಾಗೂ ಜೈ ಕ್ರಿಪ್ಲಾನಿ ಕೈಜೋಡಿಸಿದ್ದಾರೆ. ರಾಜೀವ್ ಗಣೇಸನ್ ಅವರು ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಲಿದ್ದಾರೆ. ಸದ್ಯ ಚಿತ್ರದ ಶೀರ್ಷಿಕೆಯನ್ನಷ್ಟೇ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ನಿರ್ದೇಶಕ ಬ್ರಹ್ಮ ಅವರ ಎಲ್ಲಾ ಚಿತ್ರಗಳು ಮಹಿಳಾ ಪ್ರಧಾನ ಚಿತ್ರಗಳೇ. ಅವರ ಮೊದಲ ಸಿನಿಮಾ ಸಿದ್ದಿಸೀರೆ ಹಾಲಿವುಡ್ ನಲ್ಲಿ 9ನೇ ಸ್ಥಾನ ಹಾಗೂ ಜಪಾನ್ ಫಿಲಂ ಫೆಸ್ಟಿವಲ್ ನಲ್ಲಿ 3 ನೇ ಸ್ಥಾನದ ಪ್ರಶಸ್ತಿ ಪಡೆದಿತ್ತು.
ಸಾರಿ ಚಿತ್ರವೂ ಕೂಡ ತಾಂತ್ರಿಕತೆಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ಕಾಶಿಕಾ ಚಿತ್ರದ ತಾರಾಬಳಗದಲ್ಲಿ ಎಲ್ಲಾ ಭಾಷೆಯ ಖ್ಯಾತ ನಟನಟಿಯರೇ ಇರಲಿದ್ದಾರೆ, ಹಂತ ಹಂತವಾಗಿ ಚಿತ್ರದ ಬಗ್ಗೆ, ತಾರಾಗಣದ ಹಾಗೂ ಇತರ ತಂತ್ರಜ್ಞರ ಬಗ್ಗೆ ಮಾಹಿತಿ ತಿಳಿಸಲಾಗುವುದು ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರಾದ ಅಫ್ಜಲ್ ಅವರು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಸಿನಿಮಾ ನಾಗರಹಾವು. ಈ ಚಿತ್ರದ ರಾಮಾಚಾರಿ ಹಾಗೂ ಮಾರ್ಗರೇಟ್ ಪಾತ್ರಗಳು ಇಂದಿಗೂ ಪ್ರೇಕ್ಷಕರ ಅಚ್ಚುಮೆಚ್ಚು. ಇದೇ ಚಿತ್ರದ ಪಾತ್ರಗಳನ್ನು ಇಟ್ಕೊಂಡು ಬಂದ ರಾಮಾಚಾರಿ ಮತ್ತು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಇದೇ ನಾಗರಹಾವು ಸಿನಿಮಾದ ಪಾತ್ರಗಳ ಸ್ಫೂರ್ತಿ ಪಡೆದು ಹೊಸ ಸಿನಿಮಾವೊಂದು ಬರ್ತಿದೆ. ಆ ಚಿತ್ರಕ್ಕೆ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಎಂದು ಟೈಟಲ್ ಇಡಲಾಗಿದೆ.
ಯುವ ಪ್ರತಿಭೆ ಅಭಿಲಾಶ್ ನಾಯಕನಾಗಿ ಹಾಗೂ ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸುತ್ತಿರುವ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಚಿತ್ರದ ಮುಹೂರ್ತ ಸಮಾರಂಭವಿಂದು ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ನೆರವೇರಿತು. ನಟರಾಕ್ಷಸ ಡಾಲಿ ಧನಂಜಯ್ ಹೊಸ ತಂಡಕ್ಕೆ ಶುಭ ಹಾರೈಸಿದರು.
ಡಾಲಿ ಧನಂಜಯ್ ಮಾತನಾಡಿ,ಅಭಿ ಬಡವ ರಾಸ್ಕಲ್, ಹೊಯ್ಸಳದಲ್ಲಿ ಸಣ್ಣ ಪಾತ್ರ ಮಾಡಿದ್ದಾನೆ. ಆತ ಅಭಿಮಾನಿಯಾಗಿ ಪರಿಚಯ. ಈಗ ಹೀರೋ ಆಗುತ್ತಿದ್ದಾನೆ. ಸುಮಾರು ವರ್ಷಗಳ ಪ್ರಯತ್ನ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ನಿರ್ದೇಶಕ ಗಿರಿಧರ್ ಕುಂಬಾರ್ ಮಾತನಾಡಿ, ಈ ಚಿತ್ರದ ಮೂಲಕ ಇವತ್ತಿನ ಸಮಾಜಕ್ಕೆ ಬೇಕಿರುವ ಸಂದೇಶ ಕೊಡುತ್ತೇವೆ. ನಾಗರಹಾವು ಸಿನಿಮಾದ ಪಾತ್ರಗಳು ಲೆಜೆಂಡ್ ಪಾತ್ರಗಳು. ಅವುಗಳನ್ನು ನಾವು ಮುಟ್ಟಲಾಗುವುದಿಲ್ಲ. ಒಬ್ಬ ಸಾಮಾನ್ಯ ಹುಡುಗನಿಗೆ ಶ್ರೀಮಂತ ಹುಡುಗಿ ಸಿಕ್ಕಾಗ ಏನಾಗುತ್ತದೆ ಅನ್ನೋದೆ ಕಥೆ. ಮೇ 15ರಂದು ಶೂಟಿಂಗ್ ಶುರುವಾಗಲಿದೆ ಎಂದರು.
ನಿರ್ಮಾಪಕರಾದ ಹರೀಶ್ ಮಾತಾನಾಡಿ, ಬಹಳ ಸಂತೋಷ ಆಗಿದೆ. ಧನಂಜಯ್ ಅಣ್ಣ ಬಂದಿರುವುದು ಖುಷಿಕೊಟ್ಟಿದೆ. ಅವರು ಯುವಕರಿಗೆ ಎಷ್ಟು ಪ್ರೇರಣೆ ಕೊಡುತ್ತಾರೆ ಎಂದರೆ ನಿಜ ಬೆಲೆ ಕಟ್ಟಲು ಆಗುವುದಿಲ್ಲ. ಎಲ್ಲವೂ ಹೊಸಮುಖ. ಧನಂಜಯ್ ಅಣ್ಣ, ಸುರೇಶ್ ಅಣ್ಣ, ಅಜಯ್ ಅಣ್ಣ ಮಾರ್ಗದರ್ಶನದಲ್ಲಿ ಹೋಗುತ್ತೇವೆ. ಒಳ್ಳೆ ಯುವಕರಿದ್ದಾರೆ. ಅವರ ಭವಿಷ್ಯ ಈ ಚಿತ್ರದಲ್ಲಿದೆ. ಈ ಸಿನಿಮಾ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.
ನಟ ಅಭಿಲಾಷ್, ತುಂಬಾ ಎಮೋಷನಲ್ ಮೂಮೆಂಟ್. ಇವತ್ತು ಕಷ್ಟಪಟ್ಟು ಇಲ್ಲಿ ಕೂತಿದ್ದೇನೆ. ಇದಕ್ಕೆ ಮೂಲ ಕಾರಣ ನಿರ್ಮಾಪಕರು. ನನ್ನ ಒದ್ದಾಟಗಳನ್ನು ಬಹಳ ಹತ್ತಿರದಿದ್ದ ನೋಡಿದ್ದಾರೆ. ಇವರೇ ನನ್ನ ಅನ್ನದಾತರು. ಧನಂಜಯ್ ಅಣ್ಣ ಹೇಳಿಕೊಟ್ಟ ಮಾರ್ಗದರ್ಶನಲ್ಲಿ ನಾನು ನಡೆಯುತ್ತಿದ್ದೇವೆ. ಈಗ ಅವರು ನನ್ನ ಚಿತ್ರಕ್ಕೆ ಹಾರೈಸಿರುವುದು ಖುಷಿಕೊಟ್ಟಿದೆ ಎಂದರು.
ಸೋನಲ್ ಮೊಂಥೆರೋ, ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
ರಂಗಭೂಮಿ ಹಿನ್ನೆಲೆ ಹೊಂದಿರುವ ನಟ ಅಭಿಲಾಶ್ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ಮೂಲಕ ಹೀರೋ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಕೆಜಿಎಫ್’, ‘ಲವ್ ಮಾಕ್ಟೇಲ್’, ‘ಬಡವ ರಾಸ್ಕಲ್’, ‘ಗುರುದೇವ್ ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಅಭಿಲಾಶ್ ಗುರುತಿಸಿಕೊಂಡಿದ್ದಾರೆ. ನಾಗರಹಾವು ಸಿನಿಮಾದಲ್ಲಿ ಪಾತ್ರಗಳನ್ನು ಹೋಲುವ ರೀತಿಯ ಹೆಸರುಗಳನ್ನೇ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾದಲ್ಲಿಯೂ ಇಡಲಾಗಿದೆ. ಅಭಿಲಾಶ್ ರಾಮಾಚಾರಿ ಅಲಿಯಾಸ್ ರಾಮು ಎಂಬ ಪಾತ್ರ ಮಾಡಲಿದ್ದಾರೆ. ನಟಿ ಸೋನಲ್ ಮೊಂಥೆರೋ ಮೀರಾ ರಾಘವ್ ರಾಮ್ ಅಲಿಯಾಸ್ ಮ್ಯಾಗಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಯಶ್ ಶೆಟ್ಟಿ ಜಯಂತ್ ಅಲಿಯಾಸ್ ಜಲೀಲಾಗಿ ಕಾಣಿಸಿಕೊಳ್ಳಲಿದ್ದಾರೆ. ಅನುಭವಿ ನಟರಾದ ಅವಿನಾಶ್ ಮತ್ತು ರವಿಶಂಕರ್ ಮುಂತಾದವರು ಕೂಡ ನಟಿಸುತ್ತಿದ್ದಾರೆ.
ವನಿತಾ ಎಚ್.ಎನ್. ಅವರ ‘ನಿಹಾಂತ್ ಪ್ರೊಡಕ್ಷನ್ಸ್’ ಮೂಲಕ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಮುಹೂರ್ತ ನೆರವೇರಿದ್ದು, ಮೇ 15ರಿಂದು ಚಿತ್ರದುರ್ಗದಲ್ಲಿ ಶೂಟಿಂಗ್ ಶುರುವಾಗಲಿದೆ.
ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ವಿಡುದಲೈ’ ಕೆಲವು ದಿನಗಳ ಹಿಂದೆ ದೇಶಾದ್ಯಂತ ಬಿಡುಗಡೆಯಾಗಿ ಜನಮನ್ನಣೆ ಪಡೆಯುತ್ತಿದೆ. ಈ ಚಿತ್ರದ ವಿಶೇಷತೆಯೆಂದರೆ, ತಮಿಳಿನ ಖ್ಯಾತ ನಟರಾದ ವಿಜಯ್ ಸೇತುಪತಿ, ಸೂರಿ, ಗೌತಂ ವಾಸುದೇವ ಮೆನನ್ ಮುಂತಾದವರ ಜೊತೆಗೆ ಕನ್ನಡದ ಆ ದಿನಗಳು ಖ್ಯಾತಿಯ ಸರ್ದಾರ್ ಸತ್ಯ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು.
ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ವೇಲುಮುರುಗನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸತ್ಯ, ತಮ್ಮ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆ ದಿನಗಳು’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸತ್ಯ, ಆ ನಂತರ ‘ಸ್ಲಂ ಬಾಲ’, ‘ರಾಜಧಾನಿ’, ‘ದ್ಯಾವ್ರೇ’, ‘ಚಂಬಲ್’ ಮುಂತಾದ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗುರುತಿಸಿಕೊಂಡವರು. ಆ ನಂತರ ‘ಗುಂಡ್ರು ಗೋವಿ’ ಮೂಲಕ ಹೀರೋ ಆಗಿಯೂ ಮಿಂಚಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ತಮ್ಮದೇ ಸಾಯಿನಿರ್ಮಲ ಪ್ರೊಡಕ್ಷನ್ಸ್ ಸಂಸ್ಥೆಯಡಿ ‘ಪದ್ಮಾವತಿ’, ‘ಕನ್ನಡ ಕೋಗಿಲೆ’ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ಮಿಸಿದರು, ಈಗ ದೊಡ್ಡ ಮಟ್ಟದಲ್ಲಿ ‘ವಿಡುದಲೈ’ ನಲ್ಲಿ ನಟಿಸಿದ್ದಾರೆ.
ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ’ ಚಿತ್ರದಲ್ಲಿ ನಟಿಸುವುದಕ್ಕೆ ಮುಖ್ಯ ಕಾರಣ ನಿರ್ದೇಶಕ ಜೇಕಬ್ ವರ್ಗೀಸ್ ಎನ್ನುವ ಸತ್ಯ, ‘ನನ್ನ ಮತ್ತು ಜೇಕಬ್ ನಡುವೆ ಒಳ್ಳೆಯ ಬಾಂಧವ್ಯವಿದೆ. ಅವರ ‘ಚಂಬಲ್’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಾನು ನಟಿಸಿದ್ದೆ. ಅವರು ಮತ್ತು ವೆಟ್ರಿಮಾರನ್ ಒಳ್ಳೆಯ ಸ್ನೇಹಿತರು. ಒಮ್ಮೆ ವೆಟ್ರಿಮಾರನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರು ಒಂದು ನಿಮಿಷ ನನ್ನನ್ನು ಸೂಕ್ಷ್ಮವಾಗಿ ಗಮನಿಸಿದರು. ಅದಾಗಿ ಮೂರು ತಿಂಗಳಲ್ಲಿ ನಾನು ವಿಡುದಲೈ ಚಿತ್ರದ ಭಾಗವಾಗಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಸತ್ಯ.
ತಮಿಳು ಚಿತ್ರವೊಂದರಲ್ಲಿ ನಟಿಸಬೇಕು ಎಂಬುದು ಸತ್ಯ ಅವರ ತಂದೆ-ತಾಯಿಯ ಆಸೆಯಾಗಿತ್ತಂತೆ. ‘ನಾನು ಮೂಲತಃ ಚಾಮರಾಜನಗರದವನು. ಕನ್ನಡದ ಜೊತೆಗೆ ತಮಿಳು ಸಹ ಬರುತ್ತದೆ. ಅಷ್ಟೇ ಅಲ್ಲ, ನನಗೆ ಐದು ಭಾಷೆಗಳು ಚೆನ್ನಾಗಿ ಮಾತನಾಡುವುದಕ್ಕೆ ಬರುತ್ತದೆ. ನಾನು ನಾಯಕನಾಗಿ ನಟಿಸಿದ ‘ಗುಂಡ್ರು ಗೋವಿ’ ಅಷ್ಟೇನೂ ಯಶಸ್ವಿಯಾಗಲಿಲ್ಲ. ಎರಡನೆಯ ಚಿತ್ರ ‘ಬೀರ’ ಬಿಡುಗಡೆಯಾಗಲೇ ಇಲ್ಲ. ಆ ಚಿತ್ರಕ್ಕಾಗಿ ಮೂರು ವರ್ಷ ಕಷ್ಟಪಟ್ಟಿದ್ದೆ. ಆದರೆ, ಚಿತ್ರ ಬಿಡುಗಡೆಯಾಗದಿದ್ದರಿಂದ ನನ್ನ ಶ್ರಮವೆಲ್ಲ ವ್ಯರ್ಥವಾಯಿತು. ಈ ಮಧ್ಯೆ, ನನಗೆ ಕನ್ನಡದಲ್ಲಿ ಸರಿಯಾಗಿ ಕೆಲಸ ಸಿಗುತ್ತಿರಲಿಲ್ಲ, ಸಿಕ್ಕರೂ ದುಡ್ಡು ಸಿಗುತ್ತಿರಲಿಲ್ಲ. ಆಗ ಹೆಂಡತಿ ನಿರ್ಮಲಾ ಆಸೆಯ ಮೇರೆಗೆ ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದೆ. ಅಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡೆ.
ಎರಡ್ಮೂರು ವರ್ಷಗಳ ಕಾಲ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದೇವೆ. ಇದುವರೆಗೂ 1500 ದಿನಕ್ಕೂ ಹೆಚ್ಚು ಚಿತ್ರೀಕರಣ ಮಾಡಿರುವ ಸಂಸ್ಥೆ ನಮ್ಮದು. ನಮ್ಮ ಸಂಸ್ಥೆಯಲ್ಲಿ ನೂರಾರು ಜನ ಕೆಲಸ ಮಾಡಿದ್ದಾರೆ. ಸಾವಿರಾರು ಜನ ಊಟ ಮಾಡಿದ್ದಾರೆ. ಇದೆಲ್ಲವೂ ಖುಷಿ ಇದ್ದರೂ, ನಟನಾಗಿ ಏನಾದರೂ ಸಾಧಿಸಬೇಕು ಎಂಬ ಆಸೆ ಮಾತ್ರ ಹಾಗೆಯೇ ಹಸಿ ಹಸಿ ಯಾಗಿತ್ತು. ನನ್ನ ಪ್ರತಿಭೆ ವ್ಯರ್ಥವಾಗುತ್ತಿರುವುದನ್ನು ನೋಡಿ, ಇಲ್ಲಿ ಸಾಧ್ಯವಾಗದಿದ್ದರೆ ತಮಿಳಿಗೆ ಹೋಗು ಎಂದು ಸಲಹೆ ನೀಡಿದ್ದೇ ನನ್ನ ತಾಯಿ. ಅಲ್ಲಿಯವರೆಗೂ ಕನ್ನಡದಲ್ಲೇ ನಟಿಸುತ್ತಿದ್ದೆ. ಆ ನಂತರ ತಮಿಳಿನಲ್ಲಿ ಅವಕಾಶ ಸಿಗುತ್ತದಾ ಎಂದು ಪ್ರಯತ್ನ ಮಾಡಿದೆ. ಆಗ ವೆಟ್ರಿಮಾರನ್ ಪರಿಚಯವಾಯಿತು. ಈಗ ನನ್ನ ಮೊದಲ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ.
ಆದರೆ, ಅದನ್ನು ನೋಡಲು ನನ್ನ ತಂದೆ-ತಾಯಿ ಇಬ್ಬರೂ ಇಲ್ಲ. ವಿಡುದಲೈ ಚಿತ್ರೀಕರಣದ ಸಂದರ್ಭದಲ್ಲಿ 20 ದಿನಗಳ ಅಂತರದಲ್ಲಿ ಇಬ್ಬರೂ ನಿಧನರಾದರು. ಅವರ ಆಸೆಯೇನೋ ಈಡೇರಿಸಿದೆ. ಆದರೆ, ಅದನ್ನು ನೋಡಲು ಅವರೇ ಇಲ್ಲವಲ್ಲ ಎಂಬ ಬೇಸರವಿದೆ. ತನ್ನ ತಂದೆ ತಾಯಿ ಇಬ್ಬರನ್ನೂ ವೆಟ್ರಿಮಾರನ್ರವರಲ್ಲಿ ಕಾಣುತ್ತೇನೆ’ ಎನ್ನುತ್ತಾರೆ ಸತ್ಯ.
‘ವಿಡುದಲೈ ಚಿತ್ರಕ್ಕೆ ಸತ್ಯ ಆಯ್ಕೆಯಾದಾಗ, ಅದೊಂದು ಪೂರ್ಣಪ್ರಮಾಣವಾದ ಪಾತ್ರವಿರಬಹುದು ಎಂದು ಯೋಚಿಸಿರಲಿಲ್ಲವಂತೆ. ನಾನು ಆ ಚಿತ್ರಕ್ಕೆ ಆಯ್ಕೆಯಾದಾಗ, ಚಿಕ್ಕ ಪಾತ್ರವಿರಬಹುದು, ಮೂರ್ನಾಲ್ಕು ದಿನಗಳ ಕಾಲ ಕೆಲಸವಿರಬಹುದು ಅಂತಂದುಕೊಂಡಿದ್ದೆ. ಆದರೆ, ಆ ಚಿತ್ರದಲ್ಲಿ ನಾನು ಸುಮಾರು 120 ದಿನಗಳ ಕಾಲ ಕೆಲಸ ಮಾಡಿದ್ದೇನೆ. ನಾನು ನನ್ನ ಹಳೆಯ ನೆನಪುಗಳನ್ನೆಲ್ಲ ಬಿಟ್ಟು ಹೋಗಿದ್ದೆ. ವೆಟ್ರಿಮಾರನ್ ಏನು ಹೇಳಿದರೋ, ಅದನ್ನಷ್ಟೇ ಮಾಡಿದ್ದೇನೆ. ಅವರಿಂದ ತುಂಬಾ ಕಲಿತಿದ್ದೇನೆ. ಇಡೀ ಚಿತ್ರದಲ್ಲಿ ನನ್ನ ಪಾತ್ರವಿದೆ.
ವಿಜಯ್ ಸೇತುಪತಿ, ಸೂರಿ, ಗೌತಮ್ ಮೆನನ್, ರಾಜೀವ್ ಮೆನನ್ ಮುಂತಾದ ಪ್ರತಿಭಾವಂತ ಕಲಾವಿದರ ಜತೆಗೆ ನಟಿಸುವ ಅವಕಾಶ ಸಿಕ್ಕಿದೆ. ನನ್ನ ಕೆಲಸ ಇನ್ನೂ ಪೂರ್ತಿ ಮುಗಿದಿಲ್ಲ. ಎರಡನೆಯ ಭಾಗದಲ್ಲೂ ನನ್ನ ಪಾತ್ರ ಸಾಕಷ್ಟಿದೆ. ಈಗಾಗಲೇ ಎರಡನೆಯ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನೂ 50 ದಿನಗಳಷ್ಟು ಚಿತ್ರೀಕರಣ ಬಾಕಿ ಇದೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಾರೆ ಸತ್ಯ. ‘ವಿಡುದಲೈ’ಚಿತ್ರದಿಂದ ಕಷ್ಟಗಳ ಬಿಡುಗಡೆ ಆಯ್ತು ಎನ್ನುವ ಸತ್ಯ, ‘ನಾನು ಕಳೆದುಕೊಂಡಿದ್ದನ್ನೆಲ್ಲ ‘ವಿಡುದಲೈ’ ವಾಪಸ್ಸು ತಂದುಕೊಟ್ಟಿದೆ. ಇದಕ್ಕೂ ಮುನ್ನ ನಾನು ಕರ್ನಾಟಕಕ್ಕೆ ಮಾತ್ರ ಗೊತ್ತಿತ್ತು. ಈಗ ಆ ಚಿತ್ರದಲ್ಲಿ ತಮಿಳು ನಾಡು, ಆಂಧ್ರ ಮುಂತಾದ ಕಡೆಗಳಲ್ಲೂ ಪರಿಚಿತನಗಿದ್ದೇನೆ. ವೆಟ್ರಿಮಾರನ್ ಒಬ್ಬ ಸೂಕ್ಷ್ಮ ಸಂವೇದನೆಯ ನಿರ್ದೇಶಕ. ಅವರಿಗೆ ಜಾತಿ, ಬಣ್ಣ, ಭಾಷೆಯ ಬೇಧ-ಭಾವವಿಲ್ಲ. ಅವರು ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುತ್ತಾರೆ.
ಚಿತ್ರ ಜನರಿಗೆ ಇಷ್ಟವಾಗಿದೆಯೆಂದರೆ, ಅದಕ್ಕೆ ಕಾರಣ ಪ್ರಸ್ತುತತೆ. ಇದು ಯಾವುದೋ ಒಂದು ಪ್ರದೇಶದ ಸಮಸ್ಯೆಯಲ್ಲ. ಪ್ರತಿ ರಾಜ್ಯದಲ್ಲೂ ನಡೆದ ಮತ್ತು ನಡೆಯಬಹುದಾದ ಘಟನೆಯಾಗಿದೆ. ಹಾಗಾಗಿ, ಅದನ್ನು ಎಲ್ಲರೂ ತಮಗೆ ಹೋಲಿಸಿಕೊಂಡು ನೋಡುತ್ತಿದ್ದಾರೆ. ಇವತ್ತು ಮಾನವಕುಲಕ್ಕೆ ದೊಡ್ಡ ಅಪಾಯವಿರುವುದು ಪ್ರಕೃತಿಯಿಂದಲ್ಲ. ಇವತ್ತು ಮನುಷ್ಯನಿಗೆ ದೊಡ್ಡ ಶತ್ರುವೆಂದರೆ ಅದು ಮನುಷ್ಯನೇ. ಮನುಷ್ಯನ ದುರ್ಗುಣದಿಂದ ಇನ್ನೊಬ್ಬ ಬಲಿಯಾಗುತ್ತಿದ್ದಾನೆ. ಅವನ ತಾರತಮ್ಯದಿಂದಾಗಿ ಹಲವರಿಗೆ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ಇದೊಂದು ಶ್ರೇಷ್ಠವಾದ ಚಿತ್ರ. ಎಲ್ಲ ಕಡೆ ಮೆಚ್ಚುಗೆ ಸಿಗುತ್ತಿದೆ. ಚಿತ್ರ ನೋಡಿದ ಅನ್ಯಭಾಷಿಕರು ಸಹ ಗುರುತು ಹಿಡಿದು ಮಾತನಾಡಿಸುತ್ತಿದ್ದಾರೆ’ ಎನ್ನುತ್ತಾರೆ ಸತ್ಯ.
‘ವಿಡುದಲೈ’ ನಂತರ ಸತ್ಯ ಮೂರು ಸ್ಕ್ರಿಪ್ಟ್ ಕೇಳಿದ್ದಾರಂತೆ. ಒಂದು ಚಿತ್ರವನ್ನೂ ಸದ್ದಿಲ್ಲದೆ ಮುಗಿಸಿದ್ದಾರಂತೆ. ‘ನನ್ನ ಮೊದಲ ಪ್ರಾಶಸ್ತ್ಯ ಯಾವತ್ತೂ ಕನ್ನಡಕ್ಕೇ. ಏಕೆಂದರೆ, ನನ್ನನ್ನು ಮೊದಲು ರೂಪಿಸಿದ್ದು ಕನ್ನಡಿಗರು. ನನ್ನನ್ನು ಇವತ್ತು ಬೇರೆ ಭಾಷೆಯವರು ಗುರುತಿಸುತ್ತಾರೆ ಎಂದರೆ, ಅದಕ್ಕೆ ಕಾರಣ ಕನ್ನಡ ಮತ್ತು ಕರ್ನಾಟಕ. ಈ ಭಾಷೆಗೆ ಮತ್ತು ಮಣ್ಣಿಗೆ ನಾನು ಯಾವತ್ತೂ ಚಿರಋಣಿ. ಈಗಾಗಲೇ ಕನ್ನಡದಿಂದ ಹಲವು ಅವಕಾಶಗಳು ಬರುತ್ತಿವೆ. ಇಲ್ಲಿಂದ ಸಾಯುವವರೆಗೂ ನನಗೆ ಕೆಲಸ ಸಿಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಸತ್ಯ.
ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್ 2’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 28ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸುತ್ತಿದೆ. ಉತ್ತರ ಭಾರತದಲ್ಲಿ ಪ್ರಚಾರ ಮುಗಿಸಿರುವ ಚಿತ್ರತಂಡ, ದಕ್ಷಿಣದಲ್ಲಿ ಪ್ರಚಾರ ನಡೆಸುತ್ತಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಮೋಷನ್ ಮಾಡಿರುವ ಪಿಎಸ್-2 ಬಳಗ ಬೆಂಗಳೂರಿನಲ್ಲಿ ಪ್ರಮೋಷನ್ ಕಹಳೆ ಮೊಳಗಿಸಿದೆ. ನಟ ವಿಕ್ರಂ, ತ್ರಿಷಾ, ಕಾರ್ತಿ ಹಾಗೂ ಜಯಂರವಿ ಭಾಗಿಯಾಗಿದ್ದ ವೇಳೆ ಕನ್ನಡದ ಸಿನಿಮಾ ಹಾಗೂ ಕನ್ನಡ ಕಲಾವಿದರನ್ನು ತಮಿಳು ಸ್ಟಾರ್ಸ್ಸ್ ಹಾಡಿ ಹೊಗಳಿದ್ದಾರೆ.
ಮೊದಲಿಗೆ ಕನ್ನಡಿಗರಿಗೆ ವಂದಿಸಿ ಮಾತಾನಾಡಿದ ಜಯಂರವಿ, ಕೆಜಿಎಫ್ ಭಾರತದ ಭಾಷೆ ಗಡಿ ಮುರಿದಿದ್ದರೆ, ಕಾಂತಾರ ಧಾರ್ಮಿಕ ಗಡಿ ಮುರಿದಿದೆ. ಅದರಿಂದ ನಮಗೆ ಧಾರ್ಮಿಕ ನಂಬಿಕೆ ಹೆಚ್ಚಾಗಿದೆ. ಪ್ರಪಂಚದ ಸಿನಿಮಾ ಲೋಕದಲ್ಲಿ ಕನ್ನಡ ಇಂಡಸ್ಟ್ರಿ ಗುರುತರ ಪಾತ್ರ ವಹಿಸಿದೆ ಎಂದರು.
ವಿಕ್ರಂ ಮಾತಾನಾಡಿ, ನನಗೆ ಎಲ್ಲಾ ತರಹ ಪಾತ್ರಗಳನ್ನು ಮಾಡಲು ಇಷ್ಟ. ಆದಿತ್ಯ ಕರಿಕಾಳನ್ ಪಾತ್ರ ನನಗೆ ತೃಪ್ತಿ ಕೊಟ್ಟಿದೆ. ಪಿಎಸ್ 2 ಒಂದೊಳ್ಳೆ ಐತಿಹಾಸಿಕ ಸಿನಿಮಾ. ಪ್ರತಿಯೊಬ್ಬರು ನೋಡಲೇಬೇಕು ಎಂದರು.
ಕಾರ್ತಿ, ಪಿಎಸ್ 1 ಮತ್ತು ಪಿಎಸ್ 2 ಎರಡು ಸಿನಿಮಾಗಳು ಒಟ್ಟಿಗೆ ಚಿತ್ರೀಕರಣವಾಗಿತ್ತು. ಮೊದಲ ಭಾಗಕ್ಕೆ ನೀವು ತೋರಿಸಿದ ಪ್ರೀತಿ ಪಿಎಸ್2 ಸೀಕ್ವೆಲ್ ಮೇಲೆಯೂ ಇರಲಿ. ಹತ್ತನೇ ಶತಮಾನದ ರಾಜರು ಹಿಂದೆ ಹೇಗೆ ಬದುಕುತ್ತಿದ್ದರು ಎಂಬುವುದು ಗೊತ್ತಿಲ್ಲ. ಈ ಚಿತ್ರದಲ್ಲಿ ಅದನ್ನು ದೃಶ್ಯದ ಮೂಲಕ ಕಟ್ಟಿಕೊಡಲಾಗಿದೆ. ಪಿಎಸ್, ಪಿಎಸ್ 2 ಗೆ ತಳಹದಿಯಾಗಿದೆ ಎಂದರು.
ತ್ರಿಷಾ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡು. ಮಣಿರತ್ನಂ ಅವರ ಜೊತೆ ಕೆಲಸ ಮಾಡಿರುವುದಕ್ಕೆ ಸಂತಸ ಇದೆ ಎಂದರು.
ಇನ್ನೂ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಚನ್ನಪಟ್ಟಣ ಬೊಂಬೆ, ಚಿಕ್ಕಮಗಳೂರು ಕಾಫಿಪುಡಿ, ಧಾರವಾಡ ಪೇಡಾ, ಮೈಸೂರು ಸ್ಯಾಂಡಲ್ ಸೋಪ್ ಗಿಫ್ಟ್ ಬಾಕ್ಸ್ ನೋಡಿ ಚಿತ್ರತಂಡ ಖುಷಿಪಟ್ಟಿತು.
ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ ಆಧಾರಿಸಿದ ಸಿನಿಮಾವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಚಾಪ್ಟರ್ ಮೆಗಾ ಹಿಟ್ ಆಗಿತ್ತು. ಬಾಕ್ಸಾಫೀಸ್ನಲ್ಲಿ 500 ಕೋಟಿ ರೂ. ಲೂಟಿ ಮಾಡಿತ್ತು. ಅದೇ ಸಕ್ಸಸ್ನಲ್ಲೇ ‘ಪೊನ್ನಿಯಿನ್ ಸೆಲ್ವನ್ 2’ ಸೀಕ್ವೆಲ್ ತೆರೆಗೆ ಬರ್ತಿದೆ. ಚೋಳ ಸಾಮ್ರಾಜ್ಯದ ದೃಶ್ಯವೈಭೋಗದ ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ಕ್ಕೆ ತೆರೆಕಾಣಲಿದೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. ‘ಪೊನ್ನಿಯಿನ್ ಸೆಲ್ವನ್ -2’ ಸಿನಿಮಾದಲ್ಲಿ ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಆಗಿದೆ. ಮಣಿರತ್ನಂ ನಿರ್ದೇಶನ ಹೈಲೈಟ್ ಆದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್ ಇದೆ. ಇದೇ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರ್ತಿರುವ ಪೊನ್ನಿಯಿನ್ ಸೆಲ್ವನ್ 2 ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ಎಲ್ಲಾ ಭಾಷೆಯಲ್ಲಿಯೂ ಪ್ರೇಕ್ಷಕರ ಎದುರು ಅನಾವರಣ ಮಾಡುತ್ತಿದೆ.
ಜೂಟಾಟ, ಗುಬ್ಬಚ್ಚಿ ಸಿನಿಮಾಗಳ ಸಾರಥಿ ಅಥರ್ವ್ ಆರ್ಯ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತ್ ಕಾಮತ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದು, ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ.
K.R.S ಪ್ರೊಡಕ್ಷನ್ಸ್ ನಡಿ ತಬಲಾನಾಣಿ ಹಾಗೂ ಸ್ನೇಹಿತರ ಜೊತೆಗೂಡಿ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ತಂದೆಯ ಮಹತ್ವ ಸಾರುವ, ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಆತ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎಂಬುದು ಕಥೆಯ ತಿರುಳು. ಇಲ್ಲಿ ತಂದೆಯಾಗಿ ತಬಲಾನಾಣಿ ಬಣ್ಣ ಹಚ್ಚಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.
ಪ್ರೊಡಕ್ಷನ್ ನಂಬರ್-1 ಸಿನಿಮಾಗೆ ನಾಗಾರ್ಜುನ್ ಆರ್ ಡಿ ಛಾಯಾಗ್ರಹಣ, ವೇಧಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಫಿ ಚಿತ್ರಕ್ಕಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನದ ಹಾಡುಗಳಿಗೆ ಡಾ.ನಾಗೇಂದ್ರ ಪ್ರಸಾದ್, ಕವಿರಾಜ್, k. ಕಲ್ಯಾಣ್, ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ.
ತೆಲುಗು ನಟ ನರೇಶ್ ಹಾಗೂ ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಮತ್ತೆ ಮದುವೆ ಟೀಸರ್..ಇವರಿಬ್ಬರು ನಟಿಸಿರುವ ಮತ್ತೆ ಮದುವೆ ಟೀಸರ್ ರಿಲೀಸ್ ಆಗಿದೆ. ಸಣ್ಣ ಝಲಕ್ ಮೂಲಕ ಸಂಚಲನ ಸೃಷ್ಟಿಸಿದ್ದ ಈ ಸಿನಿಮಾದ ಟೀಸರ್ ನಲ್ಲಿ ಹಲವು ವಿಷಯಗಳನ್ನು ಬಿಚ್ಚಿಡಲಾಗಿದೆ. ತೆಲುಗು ಇಂಡಸ್ಟ್ರೀಯವರು ಕನ್ನಡದ ಮೇಲೆ ಕಣ್ಣು ಹಾಕ್ತಿದ್ದಾರೆ ಎಂಬ ಪಂಚಿಂಗ್ ಡೈಲಾಗ್ ಮೂಲಕ ಶುರುವಾಗುವ ಟೀಸರ್ ಥೇಟ್ ನರೇಶ್ ಪವಿತ್ರಾ ರಿಯಲ್ ಕಥೆಯಂತಿದೆ.
ನರೇಶ್ ಮೂರನೇ ಪತ್ನಿ ನಡೆಸಿದ ಬೀದಿ ರದ್ದಾಂತ, ಮೈಸೂರಿನ ಹೋಟೆಲ್ ನಲ್ಲಿ ನಡೆದ ಘಟನೆ, ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಎಲ್ಲವೂ ಟೀಸರ್ ನಲ್ಲಿ ಬಿಚ್ಚಿಡಲಾಗಿದೆ, ಇದು ರಿಯಲ್ ಲೈಫ್ ಕಥೆಯಂತೆ ಭಾಸವಾಗಿದೆ.
ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರ್ತಿದ್ದು, ಮೇ ತಿಂಗಳಲ್ಲಿ ಥಿಯೇಟರ್ ಅಂಗಳ ಪ್ರವೇಶಿಸಲಿದೆ.
ಖ್ಯಾತ ನಿರ್ದೇಶಕ ಮಣಿರತ್ನಂ ಕನಸಿನ ಕೂಸು ‘ಪೊನ್ನಿಯಿನ್ ಸೆಲ್ವನ್-2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 28ಕ್ಕೆ ವಿಶ್ವಾದ್ಯಂತ ಅದ್ದೂರಿಯಾಗಿ ಸಿನಿಮಾ ತೆರೆ ಕಾಣುತ್ತಿದೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಚಿತ್ರ ತೆರೆಗೆ ಬರೋದಿಕ್ಕೆ ಇನ್ನೇನೂ ದಿನಗಣನೆಯಷ್ಟೇ ಬಾಕಿ ಇದೆ.
ಚಿತ್ರತಂಡ ಕೂಡ ಭರದಿಂದ ಪ್ರಚಾರ ಕಾರ್ಯ ನಡೆಸುತ್ತಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಚಾರ ಇಟ್ಟುಕೊಂಡಿದೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಸ್ಟಾರ್ ತಾರಾಬಳಗವಿರುವ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ -2’.
ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಚಿತ್ರದಲ್ಲಿದೆ.
ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ಸೀಕ್ವೆಲ್ 2 ಮೇಲೆ ನಿರೀಕ್ಷೆ ಹೆಚ್ಚಿಸಿದೆ.
ಲೇಖಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ ಆಧಾರಿತ ಚಿತ್ರವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಸೀಕ್ವೆಲ್ ವರ್ಲ್ ವೈಡ್ ಅಭೂತ ಪೂರ್ವ ಯಶಸ್ಸು ಕಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ಲೂಟಿ ಮಾಡಿತ್ತು.
ಇದೀಗ ಆ ಗೆಲುವಿನ ಸಂಭ್ರಮದಲ್ಲೇ ಸೀಕ್ವೆಲ್ ತೆರೆಗೆ ಬರ್ತಿದೆ. ಚೋಳ ಸಾಮ್ರಾಜ್ಯದ ದೃಶ್ಯವೈಭೋಗದ ಪೊನ್ನಿಯಿನ್ ಸೆಲ್ವನ್-2 ತಮಿಳು, ತೆಲುಗು, ಕನ್ನಡ, ಹಿಂದಿ
ಹಾಗೂ ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ಕ್ಕೆ ಅನಾವರಣಗೊಳ್ತಿದ್ದು, ಮಣಿರತ್ನ ತಂಡ ಕಟ್ಟಿಕೊಂಡ ಹೊರರಾಜ್ಯಗಳಲ್ಲಿ ಪ್ರಮೋಷನ್ ಕಹಳೆ ಮೊಳಗಿಸ್ತಿದ್ದಾರೆ.
ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದ “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈಗ “ಬ್ರಹ್ಮ ಕಮಲ” ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಕೂಡ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಜನಮನ ಮುಟ್ಟುತ್ತಿದೆ.
ಪೂರ್ಣಚಂದ್ರ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮುಖ್ಯಪಾತ್ರದಲ್ಲಿ ಅದ್ವಿತಿಶೆಟ್ಟಿ ಅಭಿನಯಿಸಿದ್ದಾರೆ.
ಉಳಿದಂತೆ ಋತುಚೈತ್ರ, ಲೋಕೇಂದ್ರಸೂರ್ಯ, ಬಲ ರಾಜವಾಡಿ, ಗಂಡಸಿ ಸದಾನಂದಸ್ವಾಮಿ,ಕವಿತ ಕಂಬಾರ್, ರಾಧಾ ರಾಮಚಂದ್ರ ಇನ್ನೂ ಮುಂತಾದವರು ಆಭಿನಯಿಸಿದ್ದಾರೆ.
ಈಗಾಗಲೇ ಬೆಂಗಳೂರು ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಕಂಡಿದೆ. ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ “ಬ್ರಹ್ಮಕಮಲ” ಆಯ್ಕೆಯಾಗಿದೆ. ಈ ವಿಷಯ ಇಡೀ ಚಿತ್ರತಂಡಕ್ಕೆ ಸಂತಸತಂದಿದೆ ಎನ್ನುತ್ತಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ.