ಕಾಡಂಚಿನ ಜನರು ಮತ್ತು ಅರಣ್ಯ ರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಮಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ರಿಷಬ್ ಶೆಟ್ಟಿ ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆದೇಶಿಸುವ ಭರಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾದ ಬಳಿಕ ನಾನು ಹೆಚ್ಚೆಚ್ಚು ಕಾಡು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಸುತ್ತಾಡಿದೆ. ಅರಣ್ಯ ಇಲಾಖೆಯ ಜೊತೆ ಕೆಲಸ ಮಾಡುತ್ತಾ ಅರಣ್ಯ ರಕ್ಷಣೆಯ ವೇಳೆ ಇಲಾಖೆಯ ಮಂದಿ ಮತ್ತು ಕಾಡಂಚಿನ ಪ್ರದೇಶಗಳ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿತುಕೊಂಡೆ. ಉದಾಹರಣೆಗೆ ಕೃಷಿಕರು ಎದುರಿಸುತ್ತಿರುವ ಕಾಡಾನೆ ತೊಂದರೆ ಸಮಸ್ಯೆ ಇರಬಹುದು, ಕಾಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಚರ್ ಗಳು ಎದುರಿಸುವ ಕಷ್ಟಗಳಿರಬಹುದು ಹೀಗೆ ಸುಮಾರು 20 ಅಂಶಗಳ ವಿವರವಾದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಅವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮುಖ್ಯಮಂತ್ರಿಗಳು ಇರುವುದಕ್ಕೆ ನಾವು ಧನ್ಯರು ಎಂದೂ ತಿಳಿಸಿದ್ದಾರೆ.
ಕಾಂತಾರ ಸಿನಿಮಾ ಮೂಲಕ ಅರಣ್ಯ ರಕ್ಷಣೆಯ ಸಂದೇಶ ನೀಡಿದ ರಿಷಬ್ ಶೆಟ್ಟಿಯವರು ಇದೀಗ ಅರಣ್ಯ ರಕ್ಷಣೆ ಮತ್ತು ಕಾಡಂಚಿನಲ್ಲಿರುವ ಜನರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸವೇ ಸರಿ.
ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು.
ಸಿನಿಮಾ ಪತ್ರಕರ್ತನಾಗಿ ಪರಿಚಿತರಾಗಿದ್ದ ಯತಿರಾಜ್ ನಂತರ ಕಲಾವಿದನಾಗಿ ಚಿರಪರಿಚಿತರಾದರು. ಈಗ ಯತಿರಾಜ್ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಅವರು ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ “ಬೊಂಬೆ ಹೇಳುತೈತೆ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರದ ಮೂಲಕ ಯತಿರಾಜ್ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ
ನಾನು ಇಪ್ಪತ್ತೈದು ವರ್ಷಗಳ ಹಿಂದೆ ಸಿನಿಮಾದ ಒಂದು ಸನ್ನಿವೇಶದಲ್ಲಿ ಕಂಡರೆ ಸಾಕು ಎಂದು ಕೊಂಡಿದ್ದವನು. ಆನಂತರ ಅನೇಕ ಚಿತ್ರಗಳಲ್ಲಿ ಅಭಿನಯಿಸಿದೆ. ನಂತರ ನಿರ್ದೇಶಕನಾಗುವ ಕನಸು ಈಡೇರಿತು. ಈ ತನಕ ಆರು ಚಿತ್ರಗಳನ್ನು ನಿರ್ದೇಶಿಸಿದ್ಧೇನೆ. ಇಡೀ ಚಿತ್ರ ಪೂರ್ತಿ ಒಂದೇ ಪಾತ್ರವಿರಬೇಕು. ಅದರಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಇದಕ್ಕೆ ಸ್ಪೂರ್ತಿ ಹಿಂದಿಯಲ್ಲಿ ಸುನಿಲ್ ದತ್ ಹಾಗೂ ತಮಿಳಿನಲ್ಲಿ ಪಾರ್ಥಿಬನ್ ಅವರು ಎಂದರೆ ತಪ್ಪಾಗಲಾರದು. ಈ ವಿಷಯವನ್ನು ನನ್ನ ಮಗ ಪೃಥ್ವಿರಾಜ್ ಮುಂದೆ ಹೇಳಿದಾಗ, ಅವನು “ಬೊಂಬೆ ಹೇಳುತೈತೆ” ಚಿತ್ರದ ಕಥೆ ಹೇಳಿದ್ದ. ಪರಿಕಲ್ಪನೆ ಅವನದೆ. ಕಥೆ ಕೇಳಿ ಮೆಚ್ಚಿದ ಮಾರುತಿ ಪ್ರಸಾದ್ ನಿರ್ಮಾಣಕ್ಕೆ ಮುಂದಾದರು.
ಚನ್ನಪಟ್ಟಣದ ಒಂದು ಬೊಂಬೆ ಅಂಗಡಿಯಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಚಿತ್ರ ಸೆನ್ಸಾರ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರ ಮುಗಿದ ಮೇಲೆ ನನಗೊಂದು ವಿಷಯ ತಿಳಿಯಿತು. ಈವರೆಗೂ ಕನ್ನಡದಲ್ಲಿ ಒಬ್ಬ ವ್ಯಕ್ತಿ ತಾನೇ ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ ಯಾವ ಚಿತ್ರಗಳು ಬಂದಿಲ್ಲ ಎಂದು. ಏಕ ಪಾತ್ರ, ದ್ವಿಪಾತ್ರ ಚಿತ್ರಗಳು ಬಂದಿದೆಯಾದರೂ, ನಿರ್ದೇಶಕರು ಬೇರೆಯವರಾಗಿರುತ್ತಾರೆ. ಅವರೆ ನಿರ್ದೇಶಿಸಿ ಜೊತೆಗೆ ಏಕಪಾತ್ರದಲ್ಲಿ ನಟಿಸಿರುವ ಕನ್ನಡದ ಮೊದಲ ಚಿತ್ರ ಇದೇ ಎನ್ನಬಹುದು. ಹಾಗಂತ ನಾನು ಯಾವ ದಾಖಲೆಗೂ ಇದನ್ನು ಕಳುಹಿಸಿಲ್ಲ. ಇದೇ ಮಾರ್ಚ್ 23ರ ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಅದರಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಬೇಕೆಂಬ ಆಸೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಸಕಾಲ ನೋಡಿಕೊಂಡು ಮುಂದಿನ ದಿನಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ ಎಂದ ನಿರ್ದೇಶಕ ಹಾಗೂ ನಟ ಯತಿರಾಜ್, ಸಹಕಾರ ನೀಡಿದ ಚಿತ್ರತಂಡದ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದ ತಿಳಿಸಿದರು.
ಕಥೆ ಬರೆದಿರುವ ಪೃಥ್ವಿರಾಜ್, ಛಾಯಾಗ್ರಾಹಕ ವಿದ್ಯಾ ನಾಗೇಶ್ ಹಾಗೂ ಸಹ ನಿರ್ದೇಶಕ ಅರುಣ್ ಚಿತ್ರದ ಕುರಿತು ಮಾತನಾಡಿದರು. ಪಿ ಆರ್ ಓ ಸುಧೀಂದ್ರ ವೆಂಕಟೇಶ್, ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಮತ್ತು ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಸಂಪರ್ಕಾಧಿಕಾರಿ ಶಂಕರ್ ಚಿತ್ರಕ್ಕೆ ಶುಭ ಕೋರಿದರು.
ಪತ್ರಿಕಾಗೋಷ್ಠಿಗೂ ಮುನ್ನ ಯತಿರಾಜ್ ಅವರೆ ಬರೆದಿರುವ, ರಾಜ್ ಭಾಸ್ಕರ್ ಸಂಗೀತ ನೀಡಿರುವ ಹಾಡನ್ನು ಹಾಗೂ ಚಿತ್ರದ ಟ್ರೇಲರ್ ಪ್ರದರ್ಶಿಸಲಾಯಿತು.
ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಅಥಿ ಐ ಲವ್ ಯು. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಒಂದೇ ದಿನದಲ್ಲಿ, ಒಂದು ಮನೆಯಲ್ಲಿ ನಡೆಯುವ ಕತೆ ಈ ಚಿತ್ರದಲ್ಲಿದೆ. ಗಂಡ-ಹೆಂಡತಿಯ ನಡುವಿನ ಆಪ್ತ ದೃಶ್ಯಗಳು ಇಲ್ಲಿ ಪ್ರಮುಖವಾಗಿರಲಿದೆ. ಅದು ಬೆಂಗಳೂರಿನ ಮನೆಯಲ್ಲಿ ನಡೆದ ಚಿತ್ರೀಕರಣ. ಬರೋಬ್ಬರಿ ಹನ್ನೊಂದು ನಿಮಿಷದ ದೊಡ್ಡ ದೃಶ್ಯವದು. ಅದೂ ಸಿಂಗಲ್ ಶಾಟ್ನಲ್ಲಿ ಕಂಪೋಸ್ ಮಾಡಲಾಗಿತ್ತು. ಮಲಗಿದ್ದ ಗಂಡ ಹೆಂಡತಿ ಎದ್ದ ನಂತರದ ದೀರ್ಘವಾದ ಈ ದೃಶ್ಯಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗಿತ್ತು. ಮನೆಯಲ್ಲೇ ವಿವಿಧ ಕೋನಗಳಲ್ಲಿ ಲೈಟಿಂಗ್ ವ್ಯವಸ್ಥೆ ರೂಪಿಸಿ, ಕ್ಯಾಮೆರಾ ಚಲನೆಗೆ ಪ್ಲಾನ್ ಮಾಡಲಾಗಿತ್ತು.
ಅಂದುಕೊಂಡಂತೇ ಈ ದೃಶ್ಯ ಮೂಡಿ ಬಂದಿದ್ದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಈ ರೀತಿಯ ದೀರ್ಘಾವಧಿಯ ದೃಶ್ಯಗಳು ಚಿತ್ರದುದ್ದಕ್ಕೂ ಮೂಡಿಬರಲಿದೆಯಂತೆ. ಒಂದು ನಿಮಿಷದ ದೃಶ್ಯವನ್ನು ಕಂಪೋಸ್ ಮಾಡುವುದು ಕಷ್ಟದ ಕೆಲಸ. ಹತ್ತು ನಿಮಿಷಕ್ಕೂ ಅಧಿಕ ಸಮಯದ ದೃಶ್ಯವನ್ನು ಕಟ್ಟುವುದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಸ್ವತಃ ನಾಯಕನಾಗಿ ನಟಿಸಿ, ನಿರ್ದೇಶನವನ್ನೂ ಮಾಡಿರುವ ಲೋಕೇಂದ್ರ ಸೂರ್ಯ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ನಾಯಕಿ ಶ್ರಾವ್ಯಾ ರಾವ್ ಕೂಡಾ ಈ ಚಿತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಾರೆ.
ʻʻಲೆಂತಿ ಶಾಟ್ ಗಳು ಚಿತ್ರದುದ್ದಕ್ಕೂ ಸಹಜವಾಗಿಯೇ ಕಾಣಸಿಗುತ್ತವೆ, ಕತ್ತರಿಸಿ ಜೋಡಿಸಿದರೂ ಸಿಗದ ಅನುಭವವನ್ನು ಶಾಟ್ ಕಟ್ ಮಾಡದೇಯೇ ಪರದೆಯ ಮೇಲೆ ತರಬೇಕಾದರೆ, ಕಲಾವಿದರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕಾಗುತ್ತದೆ. ಅಂತಹ ಪ್ರಯತ್ನದಲ್ಲಿ ಶ್ರಾವ್ಯ ಅವರು ನನಗೆ ಉತ್ತಮವಾದ ಸಾಥ್ ನೀಡಿದ್ದಾರೆ. ಭಾವನಾತ್ಮಕ ದೃಶ್ಯಗಳನ್ನು ಅಲ್ಲಲ್ಲಿ ಸಣ್ಣ ಶಾಟ್ಗಳಾಗಿ ವಿಭಾಗಿಸಿದರೆ, ಭಾವನೆಗಳನ್ನು ಹಿಡಿದಿಡುವುದು ಕಷ್ಟ. ಆದ ಕಾರಣ ಕೆಲವು ದೃಶ್ಯಗಳನ್ನು ಒಂದೊಂದೇ ಶಾಟ್ಗಳಲ್ಲಿ ಚಿತ್ರಿಸುತಿದ್ದೇವೆ. ಅದು ಪ್ರೇಕ್ಷಕರಿಗೆ ಮತ್ತಷ್ಟು ಹಿತವೆನಿಸುತ್ತದೆʼʼ ಎನ್ನುವುದು ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಮಾತು.
ʻʻಸಾಕಷ್ಟು ಸಿನಿಮಾಗಳಲ್ಲಿ ನಾನು ಅಭಿನಯಿಸಿದ್ದೇನೆ. ಎಲ್ಲವೂ ನನಗೆ ಇಷ್ಟವಾದವುಗಳೇ, ಆದರೆ, ಅಥಿ ಐ ಲವ್ ಯು ಚಿತ್ರದಲ್ಲಿ ನಾನು ಬೇರೊಂದು ಬಗೆಯಲ್ಲಿ ಅನುಭವ ಪಡೆದುಕೊಳ್ಳುತಿದ್ದೇನೆ. ಈ ಚಿತ್ರದ ಚಿತ್ರೀಕರಣ ನನಗೊಂದು ವಿಷೇಶವಾದ ಅನುಭವ ನೀಡುತ್ತಿದೆ. ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಜೊತೆ ಅಭಿನಯಿಸುವುದರ ಜೊತೆಗೆ, ಅವರ ನಿರ್ದೇಶನದ ರೀತಿಯೂ ಹೊಸತನದಿಂದ ಕೂಡಿದೆ. ಅಥಿ ಐ ಲವ್ ಯು ನನ್ನ ಚಿತ್ರ ಗುಚ್ಚದಲ್ಲಿ ಒಂದೊಳ್ಳೆ ಚಿತ್ರವಾಗುತ್ತದೆ.“ ಎಂದು ನಟಿ ಶ್ರಾವ್ಯ ರಾವ್ ಹೇಳಿದರು.
ನಾನು ಈ ಬಾರಿ ಚಿತ್ರದ ನಿರ್ಮಾಣದಲ್ಲಿ ತುಂಭಾ ಸಂತಸವನ್ನು ಹೊಂದಿದ್ದೇನೆ, ಒಂದೊಳ್ಳೆ ಚಿತ್ರದ ನಿರ್ಮಾಣ ನನ್ನ ಬ್ಯಾನರ್ ನಲ್ಲಿ ನಡೆಯುತ್ತಿರುವುದು ನನಗೆ ಮತ್ತಷ್ಟು ಸಂತಸವನ್ನು ತಂದುಕೊಟ್ಟಿದೆ. ಚಿತ್ರೀಕರಣದ ವೇಳೆಯಲ್ಲಿ ಕೆಲವು ದೃಷ್ಯಗಳು ನನಗೆ ತುಂಬ ಮಜಾ ಎನಿಸಿದೆ. ನಾನು ಅದೆಷ್ಟು ಅನುಭವಿಸಿದ್ದೇನೆ ಅನ್ನೋದನ್ನು ಪರದೆಯ ಮೇಲೆ ಚಿತ್ರ ವೀಕ್ಷಣೆ ಮಾಡಿದರೆ ಗೊತ್ತಾಗುತ್ತದೆ. ಎಲ್ಲಾ ಅಂದುಕೊಂಡತೆ ಚಿತ್ರದ ಫಸ್ಟ್ ಕಾಪಿ ರೆಡಿಯಾದ ಕೂಡಲೇ ಬಿಡುಗಡೆಗೆ ತಡ ಮಾಡುವುದಿಲ್ಲ. ಮೇ ಮೊದಲ ವಾರದಲ್ಲೇ ಬಿಡುಗಡೆ ಮಾಡುತ್ತೇವೆ. ಆದಷ್ಟು ಬೇಗ ಈ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಬೇಕು ಎನ್ನುವ ತವಕ ನನ್ನದಾಗಿದೆʼʼ ಎಂದು ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ತಮ್ಮ ಸಂತೋಷವನ್ನು ಹೇಳಿಕೊಂಡರು.
ಇನ್ನು ಕುಗ್ರಾಮ ಚಿತ್ರದ ನಟಿ ಋತು ಚೈತ್ರಾ ಅವರೇ ವಸ್ತ್ರ ವಿನ್ಯಾಸ ಮಾಡಿದ್ದು, ಜೋಡಿಗಳಿಗೆ ಮತ್ತಷ್ಟು ಅಂದವನ್ನು ಹೆಚ್ಚಿಸಿದ್ದಾರೆ. ಇದೇ ತಿಂಗಳಲ್ಲಿ ಚಿತ್ರದ ಕುಂಬಳ ಕಾಯಿ ಹೊಡೆಯುವ ಯೋಚನೆ ಚಿತ್ರ ತಂಡಕ್ಕಿದೆ. ಸೆವೆನ್ ರಾಜ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ, ರೆಡ್ ಅಂಡ್ ವೈಟ್ ಸೆವೆನ್ ರಾಜ್ ʻಅಥಿ ಐ ಲವ್ ಯೂʼ ಚಿತ್ರದಲ್ಲಿ ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ನಟಿ ಋತು ಚೈತ್ರ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿರುವುದು ವಿಶೇಷ. ಎನ್. ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯಿತು. 2022ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ನೀಡಲಾದ ಪ್ರಶಸ್ತಿಯಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರಗಳು ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾಗಿದ್ದರೆ, ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ‘ಕಾಂತರ’ದ ಕೈ ಸೇರಿದೆ. ಅತ್ಯುತ್ತಮ ಸಂಗೀತ ಕಾಂತಾರ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್ ಪಡೆದುಕೊಂಡರೆ, ಅತ್ಯುತ್ತಮ ಸ್ಟಂಟ್ ಪ್ರಶಸ್ತಿಯು ಕಾಂತಾರ ಸಿನಿಮಾದ ವಿಕ್ರಮ್ ಮೋರ್ ಅವರಿಗೆ ಸಂದಿದೆ.
ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಚಿತ್ರಕ್ಕೆ ಒಟ್ಟು ಮೂರು ಪ್ರಶಸ್ತಿಗಳು ಸಂದಿದ್ದು, ಸಿನಿಮಾಟೋಗ್ರಫಿಗಾಗಿ ಭುವನ್ ಗೌಡ, ಅತ್ಯುತ್ತಮ ಸಂಕಲನಕ್ಕಾಗಿ ಪ್ರಜ್ವಲ್ ಕುಲಕರ್ಣಿ ಹಾಗೂ ಅತ್ಯುತ್ತಮ ವಿಎಫ್ ಎಕ್ಸ್ ಹಾಗಿ ಉದಯ ರವಿ ಹೆಗಡೆ ಪಡೆದುಕೊಂಡಿದ್ದಾರೆ.
ಅತ್ಯುತ್ತಮ ನಟಿ ಪ್ರಶಸ್ತಿಯು ಗಾಳಿಪಟ 2 ಚಿತ್ರಕ್ಕಾಗಿ ಶರ್ಮಿಳಾ ಮಾಂಡ್ರೆಗೆ ದೊರೆತರೆ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು 777 ಚಾರ್ಲಿ ಚಿತ್ರಕ್ಕಾಗಿ ಕಿರಣ್ ರಾಜ್ ಕೆ ಪಡೆದಿದ್ದಾರೆ. ಈ ಬಾರಿ ಐದು ವಿಶೇಷ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯಿತು. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅತ್ಯುತ್ತಮ ನಿರ್ಮಾಪಕ (ಡೆಬ್ಯು), ಸಂಚಾರಿ ವಿಜಯ್ ಹೆಸರಿನಲ್ಲಿ ಅತ್ಯುತ್ತಮ ನಟ (ಡೆಬ್ಯು), ತ್ರಿಪುರಾಂಭ ಹೆಸರಿನಲ್ಲಿ ಅತ್ಯುತ್ತಮ ನಟಿ (ಡೆಬ್ಯು), ಶಂಕರನಾಗ್ ಹೆಸರಿನಲ್ಲಿ ಅತ್ಯುತ್ತಮ ನಿರ್ದೇಶಕ (ಡೆಬ್ಯು) ಹಾಗೂ ಚಿ.ಉದಯ ಶಂಕರ್ ಹೆಸರಿನಲ್ಲಿ ಅತ್ಯುತ್ತಮ ಬರಹಗಾರ (ಡೆಬ್ಯು) ಪ್ರಶಸ್ತಿಯನ್ನು ನೀಡಲಾಯಿತು.
ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮೋಹಕ ತಾರೆ ರಮ್ಯಾ, ನಟಿಯರಾದ ಕಾರುಣ್ಯ ರಾಮ್, ನಿರ್ದೇಶಕರಾದ ಬಿ.ಸುರೇಶ್, ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಸ್ಮೈಲ್ ಶ್ರೀನು, ಬಿ.ಎಸ್.ಲಿಂಗದೇವರು, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಅವಾರ್ಡ್ಸ್ ವಿಜೇತರು
ಅತ್ಯುತ್ತಮ ಚಿತ್ರ ಕಾಂತಾರ
ಅತ್ಯುತ್ತಮ ನಿರ್ದೇಶಕ ಕಿರಣ್ ರಾಜ್ (ಚಾರ್ಲಿ)
ಅತ್ಯುತ್ತಮ ನಾಯಕ ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಾಯಕಿ ಶರ್ಮಿಳಾ ಮಾಂಡ್ರೆ (ಗಾಳಿಪಟ 2)
ಅತ್ಯುತ್ತಮ ಸಂಭಾಷಣೆ ಮಾಸ್ತಿ (ಗುರು ಶಿಷ್ಯರು) ಅತ್ಯುತ್ತಮ ಪೋಷಕ ನಟ ಸುಚೇಂದ್ರ ಪ್ರಸಾದ್ (ವ್ಹೀಲ್ ಚೇರ್ ರೋಮಿಯೋ)
ಅತ್ಯುತ್ತಮ ಪೋಷಕ ನಟಿ ಸುಧಾರಾಣಿ (ತುರ್ತು ನಿರ್ಗಮನ)
ಅತ್ಯುತ್ತಮ ಚಿತ್ರಕಥೆ ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೆಲ್ 2)
ಅತ್ಯುತ್ತಮ ಬಾಲನಟ/ನಟಿ ಶಾರ್ವರಿ (ಚಾರ್ಲಿ)
ಅತ್ಯುತ್ತಮ ಸಂಗೀತ ಕಾಂತಾರ (ಅಜನೀಶ್)
ಅತ್ಯುತ್ತಮ ಹಿನ್ನೆಲೆ ಸಂಗೀತ ಅನೂಪ ಸೀಳೀನ್ (ಮಾನ್ಸೂನ್ ರಾಗ)
ಅತ್ಯುತ್ತಮ ಚಿತ್ರ ಸಾಹಿತ್ಯ ಶಶಾಂಕ (ಲವ್ 350)
ಅತ್ಯುತ್ತಮ ಗಾಯಕ ಮೋಹನ್ (ಜುಂಜಪ್ಪ, ವೇದ)
ಅತ್ಯುತ್ತಮ ಗಾಯಕಿ ಐಶ್ವರ್ಯ ರಂಗರಾಜ್ (ಏಕ್ ಲವ್ ಯಾ)
ಅತ್ಯುತ್ತಮ ಛಾಯಾಗ್ರಹಣ ಭುವನ್ ಗೌಡ (ಕೆಜಿಎಫ್ 2)
ಅತ್ಯುತ್ತಮ ಸಂಕಲನ ಉಜ್ವಲ್ ಕುಲಕರ್ಣಿ (ಕೆಜಿಎಫ್2)
ಅತ್ಯುತ್ತಮ ಕಲಾ ನಿರ್ದೇಶನ ಶಿವಕುಮಾರ (ವಿಕ್ರಾಂತ ರೋಣ)
ಅತ್ಯುತ್ತಮ ನೃತ್ಯ ನಿರ್ದೇಶನ ಮೋಹನ್ (ಏಕ್ ಲವ್ ಯಾ, ಮೀಟ್ ಮಾಡೋಣ)
ಅತ್ಯುತ್ತಮ ಸಾಹಸ ವಿಕ್ರಮ್ ಮೋರ್ (ಕಾಂತಾರ)
ಅತ್ಯುತ್ತಮ ವಿಎಫ್ ಎಕ್ಸ್ ಉದಯ ರವಿ ಹೆಗಡೆ ಯೂನಿಫೈ ಮೀಡಿಯಾ (ಕೆಜಿಎಫ್2)
ಅತ್ಯುತ್ತಮ ನಟ (ಡೆಬ್ಯು) ಪೃಥ್ವಿ ಶ್ಯಾಮನೂರು (ಪದವಿ ಪೂರ್ವ)
ಅತ್ಯುತ್ತಮ ನಟಿ (ಡೆಬ್ಯು) ಯಶಾ ಶಿವಕುಮಾರ್ (ಮಾನ್ಸನ್ ರಾಗ)
ಅತ್ಯುತ್ತಮ ನಿರ್ದೇಶಕ (ಡೆಬ್ಯು) ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)
ಅತ್ಯುತ್ತಮ ನಿರ್ಮಾಪಕ (ಡೆಬ್ಯು) ಪವನ್ ಒಡೆಯರ್ (ಡೊಳ್ಳು)
ಅತ್ಯುತ್ತಮ ಬರಹಗಾರ (ಡೆಬ್ಯು) ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)
ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ‘ಕೆಂಡದ ಸೆರಗು’. ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರ ಕುಸ್ತಿ ಕುರಿತ ಸಿನಿಮಾ. ಭೂಮಿ ಶೆಟ್ಟಿ, ಮಾಲಾಶ್ರೀ ಮುಖ್ಯ ತಾರಾಬಳಗದ ಈ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ‘ಕೆಂಡದ ಸೆರಗು’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಸಿನಿ ಜಗತ್ತಿಗೆ ವರ್ಲ್ಡ್ ಚಾಂಪಿಯನ್ ಕುಸ್ತಿ ಪಟು ದಿ ಗ್ರೇಟ್ ಖಲಿ ಎಂಟ್ರಿ ಕೊಟ್ಟಿದ್ದಾರೆ.
ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಅವರೇ ಬರೆದ ಕಾದಂಬರಿ ‘ಕೆಂಡದ ಸೆರಗು’ ಆಧರಿಸಿದ ಸಿನಿಮಾ. ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಈ ಚಿತ್ರ ಕುಸ್ತಿ ಪಟು ಕಥೆ ಹೇಳಲಿದೆ. ಕಮರ್ಶಿಯಲ್ ಎಳೆಯಲ್ಲಿ ಸಿನಿಮಾವನ್ನು ತೆರೆ ಮೇಲೆ ತರಲಾಗುತ್ತಿದ್ದು, ಇದೀಗ ನಿರ್ದೇಶಕ ರಾಕಿ ಸೋಮ್ಲಿ ವರ್ಲ್ಡ್ ಚಾಂಪಿಯನ್ ದಿ ಗ್ರೇಟ್ ಖಲಿಯನ್ನು ಕರೆ ತರುವ ಮೂಲಕ ಕ್ಯೂರಿಯಾಸಿಟಿ ಮೂಡಿಸಿದ್ದಾರೆ.
ನಿರ್ದೇಶಕ ರಾಕಿ ಸೋಮ್ಲಿ ದಿ ಗ್ರೇಟ್ ಖಲಿಯನ್ನು ಭೇಟಿ ಮಾಡಿ ಸಿನಿಮಾ ಕಥೆ ಹಾಗೂ ಅವರ ಪಾತ್ರದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಸಿನಿಮಾ ಬಗ್ಗೆ ಕೇಳಿ ಥ್ರಿಲ್ ಆಗಿರುವ ಖಲಿ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಖಲಿ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ರಾಕಿ ಸೋಮ್ಲಿ ಚಿತ್ರತಂಡಕ್ಕೆ ಖಲಿ ಎಂಟ್ರಿ ನೀಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ ಖಲಿ. ಸದ್ಯದಲ್ಲೇ ಖಲಿ ಚಿತ್ರತಂಡ ಸೇರಿಕೊಳ್ಳಲಿದ್ದು, ಚಿತ್ರೀಕರಣ ಆರಂಭವಾಗಲಿದೆ.
ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಶ್ರೀ ಮುತ್ತು ಟಾಕೀಸ್ ಮತ್ತು ಎಸ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕೆ.ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.
ಮೇಘಡಹಳ್ಳಿ ಡಾ.ಶಿವಕುಮಾರ್ ಅರ್ಪಿಸುವ, ರವಿರಾಜ್ ಎಸ್ ಕುಮಾರ್ ನಿರ್ಮಿಸಿರುವ ಹಾಗೂ ಆರ್ ರಂಗನಾಥ್ ನಿರ್ದೇಶನದಲ್ಲಿ ಚೇತನ್ ಚಂದ್ರ ನಾಯಕರಾಗಿ ನಟಿಸಿರುವ “ಪ್ರಭುತ್ವ” ಚಿತ್ರದಿಂದ “ನೀನೇನಾ ನೀನೇನಾ” ಎಂಬ ಮೆಲೋಡಿ ಸಾಂಗ್ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.
“ಪ್ರಭುತ್ವ” ಚಿತ್ರ ನನ್ನ ಸಿನಿಪಯಣದಲ್ಲೇ ಬಿಗ್ ಬಜೆಟ್ ಚಿತ್ರ ಎನ್ನಬಹುದು. ಇದಕ್ಕೆ ಕಾರಣ ನಿರ್ಮಾಪಕರು. ಯಾವುದಕ್ಕೂ ಕೊರತೆ ಇಲ್ಲದೆ ನಿರ್ಮಾಣ ಮಾಡಿದ್ದಾರೆ. ಇನ್ನು, ನಿರ್ದೇಶಕ ರಂಗನಾಥ್ ಚಿತ್ರವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಹಾಡು ಬಿಡುಗಡೆ ಸಮಾರಂಭ ಆಗಿರುವುದರಿಂದ, ಹಾಡಿನ ಬಗ್ಗೆ ಹೇಳುತ್ತೇನೆ. ನಿರ್ದೇಶಕ ಹರಿ ಸಂತೋಷ್ ಈ ಹಾಡನ್ನು ಬರೆದಿದ್ದು, ಕಾರ್ತಿಕ್ ಹಾಗೂ ಸುಪ್ರಿಯಾ ರಾಮ್ ಸೊಗಸಾಗಿ ಹಾಡಿದ್ದಾರೆ.
ಎಮಿಲ್ ಅಷ್ಟೇ ಚೆನ್ನಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಕೂಡ ಸುಂದರವಾಗಿದೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ ಎಂದು ನಾಯಕ ಚೇತನ್ ಚಂದ್ರ ಹೇಳಿದರು.
ನಾನು ಈ ಹಿಂದೆ “ಅರಿವು” ಹಾಗೂ “ಕೂಗು” ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದೆ. ಇದು ಮೂರನೇ ಚಿತ್ರ. ನಿರ್ಮಾಪಕ ರವಿರಾಜ್ ಅವರ ತಂದೆ ಮೇಘಡಹಳ್ಳಿ ಡಾ. ಶಿವಕುಮಾರ್ ಅವರೆ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಂಭಾಷಣೆ ವಿನಯ್ ಅವರದು. ಎಮಿಲ್ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಚಿತ್ರದಲ್ಲಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. “ಮತದಾನ” ದ ಮಹತ್ವ ಸಾರುವ ಚಿತ್ರ ಅಂತ ಹೇಳಬಹುದು. ಚೇತನ್ ಚಂದ್ರ, ಪಾವನ, ಶರತ್ ಲೋಹಿತಾಶ್ವ, ವಿಜಯ್ ಚೆಂಡೂರ್, ಡ್ಯಾನಿ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಉತ್ತಮ ಕಾರ್ಯವೈಖರಿಯಿಂದ ಚಿತ್ರ ಚೆನ್ನಾಗಿ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಎರಡು ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ ಎಂದರು ನಿರ್ದೇಶಕ ರಂಗನಾಥ್.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕಿ ಪಾವನ, ಇಂದು ಬಿಡುಗಡೆಯಾಗಿರುವ ಹಾಡು ತುಂಬಾ ಚೆನ್ನಾಗಿದೆ ಎಂದರು.
ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಮೊದಲು ಮೊಲೋಡಿ ಸಾಂಗ್ ಬಿಡುಗಡೆಯಾಗಿದೆ. ಕಾರ್ತಿಕ್ ಹಾಗೂ ಸುಪ್ರಿಯಾರಾಮ್ ಈ ಹಾಡನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಎಮಿಲ್ ಮಾಹಿತಿ ನೀಡಿದರು.
ನಟರಾದ ಶರತ್ ಲೋಹಿತಾಶ್ವ, ವಿಜಯ್ ಚೆಂಡೂರ್, ಡ್ಯಾನಿ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು.
ಕಥೆ ಬರೆದಿರುವ ಮೇಘಡಹಳ್ಳಿ ಡಾ. ಶಿವಕುಮಾರ್ ಮುಂದಿನ ದಿನಗಳಲ್ಲಿ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡದ ಪ್ರತಿಯೊಬ್ಬರಿಗೂ ನಿರ್ಮಾಪಕ ರವಿರಾಜ್ ಎಸ್ ಕುಮಾರ್ ಧನ್ಯವಾದ ತಿಳಿಸಿದರು.
ಚಿತ್ರ : 19 20 21 ನಿರ್ಮಾಣ : ದೇವರಾಜ್ ಆರ್. ನಿರ್ದೇಶನ : ಮಂಸೋರೆ ತಾರಾಗಣ: ಶೃಂಗ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್, ರಾಜೇಶ್ ನಟರಂಗ ಇತರರು.
‘ಕೇಸ್ ಚಾರ್ಜ್ ಶೀಟ್ ಗಟ್ಟಿ ಆಗಬೇಕು ಅಂದರೆ, ಹಿಂಗೆ ಕಥೆ ಕಟ್ಟಬೇಕು…’
ಹೀಗೆ ಆ ಪೊಲೀಸ್ ಅಧಿಕಾರಿ ಹೇಳುವ ಹೊತ್ತಿಗೆ, ಕಾಡನ್ನೇ ನಂಬಿ ಬದುಕುವ ಆದಿವಾಸಿ ಕುಟುಂಬದ ಮುಗ್ಧ ಅಪ್ಪ, ಮಗನ ಮೇಲೊಂದು ಆರೋಪದ ಸಂಚು ನಡೆದು ಹೋಗಿರುತ್ತೆ. ಇಷ್ಟು ಹೇಳಿದ ಮೇಲೆ ಇದೊಂದು ಮನಕಲಕುವ ಕಥೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಡೀ ಚಿತ್ರ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ ಅಂದರೆ, ಗಟ್ಟಿ ಕಥೆ ಮತ್ತು ನಿರೂಪಣೆ ಕಾರಣ.
ನಿರ್ದೇಶಕ ಮಂಸೋರೆ ಸಿನಿಮಾಗಳಲ್ಲಿ ವ್ಯವಸ್ಥೆ, ಅಸಹಾಯಕತೆ, ನೋವು, ದನಿ ಇಲ್ಲದವರ ಬವಣೆ ಇತ್ಯಾದಿ ವಿಷಯಗಳು ಹೈಲೆಟ್. ಈ ಕಥೆಯೊಳಗಿನ ವಿಷಯಗಳು ಅವುಗಳಿಗೆ ಹೊರತಲ್ಲ.
ಮೊದಲೇ ಹೇಳಿದಂತೆ ಇದು ದನಿ ಕಳಕೊಂಡವರ ಮೇಲಿನ ದೌರ್ಜನ್ಯ, ದಬ್ಬಾಳಿಕೆಯ ಕಥೆ ಮತ್ತು ವ್ಯಥೆ. ನೈಜ ಘಟನೆ ಇಟ್ಟುಕೊಂಡು ಹೆಣೆದ ಚಿತ್ರಕಥೆ ಸಿನಿಮಾದ ಜೀವಾಳ. ನಿರ್ದೇಶಕರ ನಿರೂಪಣೆ ಶೈಲಿ ಸೀಟಿನ ತುದಿಯಲ್ಲಿ ಕೂರಿಸುವಷ್ಟರ ಮಟ್ಟಿಗೆ ಮೂಡಿದೆ. ಹಾಗಂತ ಚಿತ್ರದುದ್ದಕ್ಕೂ ಯಾವುದೇ ನ್ಯೂನ್ಯತೆಗಳಿಲ್ಲ ಅಂದುಕೊಳ್ಳುವಂತಿಲ್ಲ. ಮೊದಲರ್ಧ ಕಥೆ ಅಲ್ಲಲ್ಲೇ ಸುತ್ತುತ್ತದೆ ಅಂತ ಹೇಳಬಹುದು. ದ್ವಿತಿಯಾರ್ಧ ಅತ್ತಿತ್ತ ನೋಡದಂತೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕ್ಕಿದೆ.
ಇಲ್ಲಿ ಆದಿವಾಸಿಗಳ ಆಕ್ರಂದನವಿದೆ, ಬಡತನ, ದಾರಿದ್ರ್ಯ, ಮುಗ್ಧರ ಮೇಲಿನ ಶೋಷಣೆ ತುಂಬಿದೆ, ತುಂಡು ಭೂಮಿಯಲ್ಲೇ ಬದುಕು ಸವೆಸುವ ಕಾಡ ಮಕ್ಕಳ ಒಕ್ಕಲೆಬಿಸುವಿಕೆ ಇದೆ, ದಬ್ಬಾಳಿಕೆ, ಬೆದರಿಸುವಿಕೆ ಇಂಚಿಂಚಿಗೂ ಕಾಣ ಸಿಗುತ್ತೆ. ಕಾಡಿನ ಮಕ್ಕಳು ನೋವಲ್ಲಿದ್ದರೂ, ಕಾನೂನು ಕಣ್ಣಿಗೆ ಮಾತ್ರ ಕಳ್ಳರು! ಇಂತಹ ಅನೇಕ ಮನಕಲಕುವ ವಿಷಯಗಳು ನೋಡುಗರ ಎದೆಭಾರ ಎನಿಸುತ್ತವೆ.
ಸಿನಿಮಾ ವೇಗಕ್ಕೆ ಸಂಗೀತ ಹಾಗು ಹಾಡು ಸಾಥ್ ನೀಡಿದರೆ, ಕತ್ತರಿ ಪ್ರಯೋಗವೂ ಹೆಗಲು ನೀಡಿದೆ. ಇಂತಹ ಸಿನಿಮಾಗಳಿಗೆ ಮಾತಿನ ಮೌಲ್ಯ ಮುಖ್ಯ. ಹಾಗಾಗಿ ಪ್ರತಿ ಪಾತ್ರಗಳು ಹರಿಬಿಡುವ ಡೈಲಾಗ್ ಕೂಡ ಚಿತ್ರದ ತೂಕ ಹೆಚ್ಚಿಸಿವೆ. ಇಡೀ ಸಿನಿಮಾ ಗಂಭೀರತೆಗೆ ದೂಡುವುದರ ಜೊತೆಗೆ, ಆಗಾಗ ಕೆಟ್ಟ ವ್ಯವಸ್ಥೆಯ ವಿರುದ್ಧ ಧಿಕ್ಕಾರ ಹಾಕಬೇಕೆನ್ನುವಷ್ಟರ ಮಟ್ಟಿಗೆ ನಿರ್ದೇಶಕರ ಕೆಲಸ ಇಷ್ಟವಾಗುತ್ತೆ.
ಇಂತಹ ನೈಜ ಘಟನೆ ಚಿತ್ರಗಳಿಗೆ ಬೇಕಿರೋದು ನೈಜತೆ ಎನಿಸುವಂತಹ ದೃಶ್ಯಗಳು. ಅಷ್ಟೇ ಪರಿಣಾಮಕಾರಿಯಾಗಿ ಹಿಡಿದಿಡುವಲ್ಲಿ ನಿರ್ದೇಶಕ ಮತ್ತವರ ತಂಡ ಯಶಸ್ವಿ ಎನ್ನಬಹುದು. ಕಾಡಿನ ಮಕ್ಕಳ ಕಥೆ ಹೆಣೆದು, ಅದನ್ನು ಅಷ್ಟೇ ಅದ್ಭುತ ಅನ್ನುವಂತೆ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಸಾರ್ಥಕ.
ಕಥೆ ಏನು? ಕಾಡಲ್ಲಿ ವಾಸ ಮಾಡುವ ಆದಿವಾಸಿ ಕುಟುಂಬದ ಅಮಾಯಕ ಮುಗ್ಧ ವಿದ್ಯಾರ್ಥಿ ಹಾಗು ಅವನ ತಂದೆಯನ್ನು ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು ನಕ್ಸಲ್ ಆರೋಪ ಹೊರಿಸಿ, ಜೈಲಿಗೆ ಕಳಿಸುತ್ತಾರೆ. ರೇಷನ್ ಕಾರ್ಡ್ ಕೂಡ ಇಲ್ಲದ ಆದಿವಾಸಿಗಳ ಮೇಲೆ ದೇಶ ದ್ರೋಹದ ಕೇಸ್ ಹಾಕಲಾಗುತ್ತೆ. ದೇಶದ್ರೋಹ ಹಾಗು ದೇಶಕ್ಕೆ ಧಕ್ಕೆ ತರುವ ಆರೋಪದಡಿ ಅವರಿಗೆ ಜಾಮೀನು ನಿರಾಕರಣೆಯಾಗುತ್ತೆ. ಈ ನಡುವೆ, ಅಲ್ಲಿ ನಡೆಯೋ ವ್ಯಥೆ, ಅವರು ಅನುಭವಿಸುವ ನರಕ ಯಾತನೆ ಅಷ್ಟಿಷ್ಟಲ್ಲ.
ಕಾನೂನಿಗೆ ಕಳ್ಳರು ಎನಿಸುವ ಆ ಮುಗ್ಧ ಅಪ್ಪ, ಮಗನ ಪರ ಲಾಲ್ ಸಲಾಮ್ ಎನ್ನುತ್ತಲೇ ಕೆಂಪು ಬಾವುಟ ಹಿಡಿದು ಬರುವ ಕಾಮ್ರೇಡ್ ಸದಸ್ಯರು, ಪತ್ರಕರ್ತರು, ವಕೀಲರು ಹೋರಾಟಕ್ಕಿಳಿಯುತ್ತಾರೆ. ಈ ನಡುವೆ ಪತ್ರಿಕೋದ್ಯಮ ವಿದ್ಯಾರ್ಥಿ ಆಗಿದ್ದ ಆದಿವಾಸಿ ಹುಡುಗನ ಭವಿಷ್ಯ ಹಾಳಾಗಲು ಬಿಡಬಾರದು ಅಂತ ಹೋರಾಡುವ ಕಾಮ್ರೇಡ್ ಗಳು, ವಕೀಲರು ಸಿನಿಮಾದ ಆಕರ್ಷಣೆ.
ಇಷ್ಟಕ್ಕೂ ಆ ಮುಗ್ಧರು ಮಾಡಿದ ತಪ್ಪೇನು, ಆ ಕೆಟ್ಟ ವ್ಯವಸ್ಥೆ ಬಡಪಾಯಿಗಳ ಮೇಲೆ ಎರಗುವುದೇಕೆ, ಯಾವೆಲ್ಲಾ ಕಾರಣಗಳು ಅವರ ಮೇಲೆ ದಬ್ಬಾಳಿಕೆ ನಡೆಸುತ್ತವೆ, ಆ ಅಮಾಯಕ ಅಪ್ಪ, ಮಗ ಜೈಲಿಂದ ಹೊರಬರುತ್ತಾರಾ, ವಿದ್ಯಾರ್ಥಿ ಭವಿಷ್ಯ ಮುಂದೇನಾಗುತ್ತೆ ಎಂಬ ಕುತೂಹಲ ಇದ್ದರೆ ಒಂದೊಮ್ಮೆ ತಾಳ್ಮೆಯಿಂದ ಸಿನಿಮಾ ನೋಡಬಹುದು.
ಯಾರು ಹೇಗೆ? ಸಿನಿಮಾದ ಕೇಂದ್ರಬಿಂದು ಅನ್ನುವುದಾದರೆ, ಥೇಟ್ ಅಮಾಯಕನಂತೆ ಕಾಣುವ, ಒಮ್ಮೆಲೆ ಇಷ್ಟವಾಗುವ ಶೃಂಗ ಅವರ ನಟನೆ ಆಪ್ತವೆನಿಸಿದೆ. ಅವರ ಅಭಿನಯದಲ್ಲಿ ನೈಜತೆ ಇದೆ. ಪಾತ್ರವನ್ನೇ ಜೀವಿಸುವ ಮೂಲಕ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಬಾಲಾಜಿ ಮನೋಹರ್ ಅವರು ಚಿತ್ರದ ಹೈಲೆಟ್. ವಕೀಲರಾಗಿ ನೋಡುಗರಿಗೆ ಇಷ್ಟವಾಗುತ್ತಾರೆ. ತಮ್ಮ ಪಾತ್ರದ ಮೂಲಕ ಒಂದಷ್ಟು ಮನಸುಗಳಿಗೆ ಖುಷಿಕೊಡುತ್ತಾರೆ.
ತಾಯಿಯಾಗಿ ಎಂ.ಡಿ.ಪಲ್ಲವಿ ಒಳ್ಳೆಯ ಸ್ಕೋರ್ ಮಾಡಿದ್ದಾರೆ. ಕಾಮ್ರೇಡ್ ಆಗಿ ರಾಜೇಶ್ ನಟರಂಗ ಗಮನ ಸೆಳೆದರೆ, ಹನುಮಣ್ಣನ ಪಾತ್ರದ ಮೂಲಕ ಸಂಪತ್ ಕುಮಾರ್ ನೋಡುಗರ ಕಣ್ಣು ಒದ್ದೆ ಮಾಡುತ್ತಾರೆ. ಉಳಿದಂತೆ ಮಹದೇವ್ ಹಡಪದ್, ಉಗ್ರಂ ಸಂದೀಪ್ ಸೇರಿದಂತೆ ಪ್ರತಿ ಪಾತ್ರವೂ ನ್ಯಾಯ ಸಲ್ಲಿಸಿದೆ.
ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ಪೂರಕವಾಗಿದೆ. ಬಿಂದು ಮಾಲಿನಿ ಅವರ ಸಂಗೀತದ ಕಿರಣ್ ಕಾವೇರಪ್ಪ ಅವರ ಸಾಹಿತ್ಯದ ಹಾಡೊಂದು ಕಾಡ ದೇವರ ಆಚರಣೆ, ಆದಿವಾಸಿಗಳ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸುರೇಶ್ ಆರ್ಮುಗಂ ಅವರ ಸಂಕಲನ ವೇಗ ಹೆಚ್ಚಿಸಿದೆ. ವೀರೇಂದ್ರ ಮಲ್ಲಣ್ಣ,ಅವಿನಾಶ್ ಅವರ ಸಂಭಾಷಣೆಯಲ್ಲಿ ಗಟ್ಟಿ ದನಿ ಇದೆ. ಶಿವು ಬಿ.ಕೆ.ಕುಮಾರ್ ಅವರ ಕ್ಯಾಮೆರಾ ಕೈಚಳಕದಲ್ಲಿ ‘ಕಾಡ ಬೆಳದಿಂಗಳು’ ಹೆಚ್ಚಿಸಿದೆ.
ಕನ್ನಡ ನಾಡಿಗೆ ಹಾಗು ರಾಷ್ಟ್ರಕ್ಕೆ ಸತತ ಸದಬಿರುಚಿಯ ಹಾಗು ದಾಖಲೆ ನಿರ್ಮಿಸಿದಂತಹ ಚಲನಚಿತ್ರಗಳನ್ನು ನಿರ್ಮಿಸುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಮತ್ತೊಂದು ಹೆಮ್ಮೆಯ ಚಿತ್ರ ಸಮರ್ಪಣೆ “ಯುವ”. ಚಿತ್ರರಂಗಕ್ಕೆ ತಮ್ಮ ಮೌಲ್ಯಾದಾರಿತ ಆಲೋಚನೆಗಳು ಹಾಗು ಮನೋರಂಜನೆ ತುಂಬಿದ ಚಿತ್ರಕತೆಗಳಿಂದ ಒಂದರ ಹಿಂದೆ ಮತ್ತೊಂದು ದಾಖಲೆ ನಿರ್ಮಿಸಿದ ಚಲನಚಿತ್ರಗಳನ್ನು ನೀಡಿದ ಸಂತೋಷ್ ಆನಂದ್ರಾಮ್ ರವರ ಐದನೆಯ ಬಹು ನಿರೀಕ್ಷಿತ ಚಿತ್ರ “ಯುವ”. ಹೊಂಬಾಳೆ ಫಿಲ್ಮ್ಸ್ ಹಾಗು ಸಂತೋಷ್ ಆನಂದ್ರಾಮ್ ರವರ ಕಾಂಬಿನೇಶನ್ ನ ಗೆಲುವಿನ ಓಟಕ್ಕೆ ಈ ಚಿತ್ರ ನಾಲ್ಕನೇ ಸೇರ್ಪಡೆ.
ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂಬ ಅನ್ವರ್ಥನಾಮ ಇರುವ ಮೇರು ನಟ ಪದ್ಮಭೂಷಣ ಡಾ. ರಾಜಕುಮಾರ್ ರವರ ಕುಟುಂಬದಿಂದ ಈ ನಾಡಿಗೆ ಹಾಗು ಕನ್ನಡ ಚಿತ್ರರಂಗಕ್ಕೆ ಹಲವಾರು ಕೊಡುಗೆಗಳು ದಶಕಗಳಿಂದ ನಮ್ಮ ರಾಜ್ಯಕ್ಕೆ ದೊರೆತಿದೆ. ಡಾ. ಪಾರ್ವತಮ್ಮ ರಾಜಕುಮಾರ್ ರ ಆದಿಯಾಗಿ, ಡಾ.ಶಿವರಾಜಕುಮಾರ್ , ರಾಘವೇಂದ್ರ ರಾಜಕುಮಾರ್ ಹಾಗು ಡಾ.ಪುನೀತ್ ರಾಜಕುಮಾರ್ ಕಲಾ ಸೇವೆಯಲ್ಲಿ ಅಂದಿನಿಂದಲೂ ಮೊದಲ ಸಾಲಿನಲ್ಲಿ ಇರುತ್ತಾರೆ . ಇಂತಹ ಜವಾಬ್ದಾರಿಯುತ ಕಲಾ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೊಡುಗೆ ಯುವರಾಜಕುಮಾರ್.
ಯುವರಾಜಕುಮಾರ್ ಅವರ ಮೊದಲ ಚಿತ್ರದ ಶೀರ್ಷಿಕೆ ಅನಾವರಣ ಹಾಗು ಚಿತ್ರದ ಮುಹೂರ್ತ ಇಂದು ಬೆಂಗಳೂರು ನಗರದ ಹೋಟೆಲ್ ಲಲಿತ್ ಅಶೋಕದಲ್ಲಿ ವಿಜೃಂಭಣೆಯಿಂದ ಜರುಗಿದೆ. ಈ ಭವ್ಯ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್ರಾಮ್, ನಟ ಯುವರಾಜಕುಮಾರ್,
ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್, ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ, ಹಾಗು ಚಿತ್ರದ ಇತರೆ ತಾಂತ್ರಿಕ ವಿಭಾಗದವರು ಹಾಗು ಡಾ. ರಾಜ್ ಕುಟುಂಬದ ಅನೇಕ ಗಣ್ಯರು ಹಿತೈಷಿಗಳು ಪಾಲ್ಗೊಂಡಿದ್ದರು.
ಈ ಸಮಾರಂಭದಲ್ಲಿ ಚಿತ್ರದ ಮೊದಲ ಕ್ಲಾಪ್ ಅನ್ನು ಶ್ರೀಮತಿ ಶೈಲಜಾ ವಿಜಯ್ ಕಿರಗಂದೂರ್ ಮಾಡಿದರೆ, ಕ್ಯಾಮೆರಾ ಚಾಲನೆ ನೀಡಿದ್ದು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್. ಚಿತ್ರದ ಮೊದಲ ಶಾಟ್ ಗೆ ಆಕ್ಷನ್ ಕಟ್ ಹೇಳಿದವರು ಡಾ. ಶಿವರಾಜಕುಮಾರ್. ಚಿತ್ರವು 22-ಡಿಸೆಂಬರ್-2023 ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ
ಆರ್.ಚಂದ್ರು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ಹಲವು ವಿಶೇಷಗಳಿಂದ ಕೂಡಿದೆ. ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದಿರುವ ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರತಂಡದಿಂದ ಮತ್ತೊಂದು ಮಹತ್ತರವಾದ ವಿಷಯ ಹೊರಬಂದಿದೆ. ತಮ್ಮ ಅಮೋಘ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ” ಕಬ್ಜ ” ಚಿತ್ರದಲ್ಲಿ ನಟಿಸಿದ್ದಾರೆ.
ಉಪೇಂದ್ರ, ಸುದೀಪ್ ಹಾಗೂ ಶಿವರಾಜಕುಮಾರ್ ಮೂವರು ನಟರನ್ನು ಒಂದೇ ಚಿತ್ರದಲ್ಲಿ ನೋಡುತ್ತಿರುವುದು ಅಭಿಮಾನಿಗಳ ಪಾಲಿಗಂತೂ ದೊಡ್ಡ ಹಬ್ಬವೇ ಸರಿ. ಮಾರ್ಚ್ 4 ರಂದು ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಮಾರ್ಚ್ 17 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಬಹು ನಿರೀಕ್ಷಿತ ಹಾಗೂ ನೈಜ ಘಟನೆ ಆಧಾರಿತ ಸಿನಿಮಾ ‘19.20.21’ ನಾಳೆ ಬಿಡುಗಡೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾವೆಂದು ಹೇಳಿಕೊಂಡು ಬಂದಿದ್ದ ಕಥೆ ಕೊನೆಗೂ ರಿವೀಲ್ ಆಗಿದೆ.
2012 ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಕಾನೂನು ಹೋರಾಟದ ಕಥೆಯೇ ಈ ಸಿನಿಮಾ. ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ ಮಗನನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ವಿಠಲ್ ಮಂಗಳೂರಿನ ವಿವಿಯಲ್ಲಿ ಪತ್ರಿಕೋದ್ಯಮ ಓದುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗ ಪೊಲೀಸರು ಕೈಯಲ್ಲಿದ್ದ ಕೋಳ ಕೂಡ ತೆಗೆದಿರಲಿಲ್ಲ. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ವಿಠಲ್ ಅವರಿಗೆ 2021ರಲ್ಲಿ ಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು.
ವಿಠಲ್ ಮಲೆಕುಡಿಯ ಈ ಹೋರಾಟದ ಕಥೆಯೇ ‘19.20.21’ ಸಿನಿಮಾ. ಆಡಳಿತ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ವಿಠಲ್ ಅವರ ಕಾನೂನು ಹೋರಾಟದ ರೋಚಕ ಕಥೆಯನ್ನು ಸೋಶಿಯಲ್ ಥ್ರಿಲ್ಲರ್ ಕಹಾನಿಯೊಂದಿಗೆ ತೆರೆ ಮೇಲೆ ತರ್ತಿದ್ದಾರೆ ಮಂಸೋರೆ. ಚಿತ್ರದಲ್ಲಿ ವಿಠಲ್ ಮಲೆಕುಡಿಯ ಪಾತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ.ವಿ ನಟಿಸಿದ್ದಾರೆ.
ಉಳಿದಂತೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ.