“ಟಗರು” ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಮಾನ್ವಿತ ಕಾಮತ್, ಪ್ರಸ್ತುತ ಪಿ.ಸಿ ಶೇಖರ್ ನಿರ್ದೇಶನದ “BAD” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ “BAD” ಚಿತ್ರ ಫಸ್ಟ್ ಲುಕ್ ಮೂಲಕ ಜನರ ಮನ ಗೆದ್ದಿದೆ. ಪ್ರಮುಖ ಪಾತ್ರಧಾರಿ ನಕುಲ್ ಗೌಡ ಅವರ ಲುಕ್ ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಾನ್ವಿತ ಕಾಮತ್ ಅವರ ಪಾತ್ರದ ಕುರಿತು ಮಾತನಾಡುವ ನಿರ್ದೇಶಕ ಪಿ.ಸಿ.ಶೇಖರ್, ಈ ಚಿತ್ರದಲ್ಲಿ ಮಾನ್ವಿತ ಅವರ ಪಾತ್ರದ ಹೆಸರು ಪವಿತ್ರ(ಪವಿ). ತುಂಬಾ ಬೋಲ್ಡ್ ಕ್ಯಾರೆಕ್ಟರ್ ಅವರದು. ವಿಲೇಜ್ ಬ್ಯಾಕ್ ಡ್ರಾಪ್ ನಲ್ಲಿ ಅವರ ಸ್ಟೋರಿ ಸಾಗುತ್ತಾ ಹೋಗುತ್ತದೆ. ನಾನು ಮುಂಚೆ ತಿಳಿಸಿದ ಹಾಗೆ ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ನಮ್ಮ ಚಿತ್ರದಲ್ಲಿದೆ. ಈ ಆರು ಪಾತ್ರಗಳಲ್ಲದೆ ಇನ್ನೊಂದು ಪಾತ್ರ ಕೂಡ ಇದೆ ಎಂದು. ಆ ಪಾತ್ರದಲ್ಲಿ ಮಾನ್ವಿತ ಅಭಿನಯಿಸುತ್ತಿದ್ದಾರೆ ಎಂದರು.
ನನಗೆ “BAD” ಚಿತ್ರದ ಪಾತ್ರ ಬಹಳ ಇಷ್ಟವಾಯಿತು. ಪವಿತ್ರ ನನ್ನ ಪಾತ್ರದ ಹೆಸರು. ಯಾವುದಕ್ಕೂ ಅಂಜದ, ಬೋಲ್ಡ್ ಹುಡುಗಿಯ ಪಾತ್ರ ನನ್ನದು. ಈ ಹಿಂದೆ ನಿರ್ದೇಶಕ ಸೂರಿ ಅವರು ಕಾಸ್ಟ್ಯೂಮ್ಸ್ ಇದೇ ರೀತಿ ಇರಬೇಕು ಎಂದು ಆಸಕ್ತಿ ತೋರಿಸುತ್ತಿದ್ದರು. ಅದೇ ರೀತಿ ಪಿ.ಸಿ.ಶೇಖರ್ ಅವರು ಕೂಡ ಕಾಸ್ಟ್ಯೂಮ್ಸ್ ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದ್ದೇನೆ ಎಂದು ನಟಿ ಮಾನ್ವಿತ ಕಾಮತ್ ತಿಳಿಸಿದ್ದಾರೆ.
ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನ “BAD” ಚಿತ್ರಕ್ಕಿದೆ.
“ಪ್ರೀತಿಯ ರಾಯಭಾರಿ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಹೊಸಬರ ಹೊಸ ಪ್ರಯತ್ನಕ್ಕೆ ಪ್ರತಿಷ್ಠಿತ ಪಿ.ಆರ್.ಕೆ ಪ್ರೊಡಕ್ಷನ್ಸ್ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಸ್ತುತ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ ” “ಆಚಾರ್ & ಕೋ” ಚಿತ್ರವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ವಿಶ್ವಾಸ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ.
ಇದು ಅರವತ್ತರ ಕಾಲಘಟ್ಟದಲ್ಲಿ ನಡೆಯುವ ಕಥೆ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ, ಬೆಂಗಳೂರಿನ ಜಯನಗರ ನಿವಾಸಿ ಮಧುಸೂದನ್ ಆಚಾರ್ – ಸಾವಿತ್ರಿ ಆಚಾರ್ ಹಾಗೂ ಅವರ ಹತ್ತು ಜನ ಮಕ್ಕಳ ಸುತ್ತ ನಡೆಯುವ ಕಥೆ. ಒಟ್ಟಿನಲ್ಲಿ ಇದೊಂದು ಕೂಡು ಕುಟುಂಬದ ಕಥೆ ಎನ್ನಬಹುದು. ಮಧುಸೂದನ್ ಆಚಾರ್ ಪಾತ್ರದಲ್ಲಿ ಹಿರಿಯ ನಟ ಅಶೋಕ್, ಸಾವಿತ್ರಿ ಆಚಾರ್ ಪಾತ್ರದಲ್ಲಿ ಸುಧಾ ಬೆಳವಾಡಿ ಅಭಿನಯಿಸಿದ್ದಾರೆ. ಹೆಚ್ಚು ಜನ ಕಲಾವಿದರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಬಹುತೇಕರು ರಂಗಭೂಮಿ ಹಿನ್ನೆಲೆಯುಳ್ಳವರು. ನಾನು ಕೂಡ ಇದರಲ್ಲಿ ಅಭಿನಯಿಸಿದ್ದೇನೆ.
ಅರವತ್ತರ ದಶಕದಲ್ಲಿ ನಡೆಯುವ ಕಥೆಯಾಗಿರುವುದರಿಂದ ಚಿತ್ರದಲ್ಲಿ ಸ್ವಲ್ಪ ಕೂಡ ಅಧುನಿಕತೆ ಕಾಣಬಾರದು ಹಾಗಾಗಿ ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರದ ಬಗ್ಗೆ ಪುನೀತ್ ರಾಜಕುಮಾರ್ ಅವರ ಬಳಿ ಮಾತನಾಡಿದ್ದೆ. ಇಂದು ಅವರಿದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಯಾವುದೇ ಕೊರತೆ ಬರದಂತೆ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ. ನಮ್ಮ ಚಿತ್ರದ ಬಹುತೇಕ ತಂತ್ರಜ್ಞರು ಮಹಿಳೆಯರೆ ಆಗಿರುವುದು ವಿಶೇಷ. ಜುಲೈ 28 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹ ನೀಡಿ ಎಂದರು.
ನಾನು ಸಿನಿಮಾ ನೋಡಿದ್ದೇನೆ. ಚೆನ್ನಾಗಿದೆ. ಸಿಂಧು ಶ್ರೀನಿವಾಸಮೂರ್ತಿ ಮತ್ತು ತಂಡಕ್ಕೆ ಶುಭವಾಗಲಿ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಹಾರೈಸಿದರು.
ಹಿರಿಯ ನಟ ಅಶೋಕ್, ಸುಧಾ ಬೆಳವಾಡಿ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು, ಛಾಯಾಗ್ರಹಕ ಅಭಿಮನ್ಯು ಸದಾನಂದನ್ ಮುಂತಾದವರು “ಆಚಾರ್ & ಕೋ” ಚಿತ್ರದ ಕುರಿತು ಮಾತಾಡಿದರು.
ಬಿಂದುಮಾಲಿನಿ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಆಶಿಕ್ ಕುಸುಗೊಳ್ಳಿ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಿಂಧು ಶ್ರೀನಿವಾಸಮೂರ್ತಿ ಹಾಗೂ ಕಣ್ಣನ್ ಗಿಲ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ತ್ರಿಲೋಕ್ ತ್ರಿವಿಕ್ರಮ ಬರೆದಿದ್ದಾರೆ.
ಜುಲೈ 12, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ.ಅಂದು ಶಿವಣ್ಣ ಅಭಿನಯಿಸಲಿರುವ ಅನೇಕ ಚಲನಚಿತ್ರಗಳ, ಸಿನಿಮಾ ಶೀರ್ಷಿಕೆಗಳ ಅನೌನ್ಸ್ ಮೆಂಟ್ ಆಗಿದೆ. ಆ ಚಿತ್ರಗಳಲ್ಲಿ “ಧೀರ” ಚಿತ್ರವೂ ಒಂದು. ಹೆಚ್.ಸಿ.ಶ್ರೀನಿವಾಸ್(ಶಿಲ್ಪ ಶ್ರೀನಿವಾಸ್) ಅರ್ಪಿಸುತ್ತಿರುವ ಈ ಚಿತ್ರವನ್ನು ಚಿಲ್ಲಿ ಫಿಲಂಸ್ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ಸಾಗರ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ನವೀನ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ನಟನಾಗಬೇಕೆಂಬ ಕನಸು ಹೊತ್ತು 12 ವರ್ಷಗಳ ಹಿಂದೆ ಮಲೆನಾಡಿಂದ ಬೆಂಗಳೂರಿಗೆ ಬಂದ ನವೀನ್ ಶೆಟ್ಟಿ ಅವರು ಎಸ್.ನಾರಾಯಣ್, ಓಂಪ್ರಕಾಶ್ ರಾವ್, ಗಡ್ಡವಿಜಿ ಅವರ ಜೊತೆ ಸಹಾಯಕನಾಗಿ ಕೆಲಸ ಮಾಡಿದ್ದಾರೆ.
ಇಲ್ಲಿ ಬಂದ ಮೇಲೆ ನಿರ್ದೇಶನದ ಮೇಲೆ ಹೆಚ್ಚು ಆಸಕ್ತಿ ಹುಟ್ಟಿ ಅದರಲ್ಲೇ ಪರಿಣತಿ ಪಡೆದಿಕೊಂಡಿದ್ದಾರೆ. ನಂತರ ಓಟಿಟಿ ವೇದಿಕೆಗೆಂದೇ ‘ನಿಧಾನವಾಗಿ ಚಲಿಸಿ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಮ್ಮೆ ಆ ಚಿತ್ರವನ್ನು ವೀಕ್ಷಿಸಿದ ಶಿವಣ್ಣ ಮೆಚ್ಚಿ ಬೆನ್ನು ತಟ್ಟಿದ್ದಾರೆ. ಅದೇ ಸಮಯದಲ್ಲಿ ತಾವು ಶಿವಣ್ಣ ಅವರಿಗೆಂದೇ ಮಾಡಿಕೊಂಡಿದ್ದ ‘ಧೀರ’ ಕಥೆಯನ್ನು ಹೇಳಿ ಅವರನ್ನು ಒಪ್ಪಿಸಿದ್ದಾರೆ.
ತೆರೆಮೇಲೆ ಶಿವಣ್ಣ ಅವರನ್ನು ಬೇರೆಯದೇ ರೀತಿ ತೋರಿಸಹೊಟಿರುವ ನವೀನ್ ಶಟ್ಟಿ, ಮಾಸ್, ಅಂಡರ್ ವರ್ಲ್ಡ್, ಮ್ಯೂಸಿಕಲ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಅನ್ನು ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ಕಲಿಯುಗ ಕರ್ಣ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರಕ್ಕೆ ಎಂ.ಎನ್. ಕೃಪಾಕರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಧೀರ ಚಿತ್ರದ ಪ್ರಿಪ್ರೊಡಕ್ಷನ್ ವರ್ಕ್ ನಡೆಯುತ್ತಿದ್ದು, ಶೀಘ್ರದಲ್ಲೇ ನಾಯಕಿ ಸೇರಿದಂತೆ ಉಳಿದ ತಾಂತ್ರಿಕ ವರ್ಗವನ್ನು ಪ್ರಕಟಿಸಲಾಗುವುದು.
ನನ್ ಮಗಳೇ ಹೀರೋಯಿನ್, ಎಂಆರ್.ಪಿ. ಯಂಥ ಹಾಸ್ಯಮಯ ಚಲನಚಿತ್ರಗಳನ್ನು ನಿರ್ದೇಶನ ಮಾಡಿಕೊಂಡು ಬಂದಿದ್ದ ಎಸ್.ಕೆ. ಬಾಹುಬಲಿ ಅವರು ಇದೇ ಮೊದಲ ಬಾರಿಗೆ ಮಲ್ಟಿ ಸ್ಟಾರ್ ಇಟ್ಟುಕೊಂಡು ಮಾಸ್ ಎಂಟರ್ಟೈನರ್ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ.
ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕೃಷ್ಣ ಅಜೇಯ್ ರಾವ್ ಇಬ್ಬರ ಕಾಂಬಿನೇಷನ್ ನಲ್ಲಿ ಹೊಸ ಚಿತ್ರವೊಂದನ್ನು ಬಾಹುಬಲಿ ನಿರ್ದೇಶನ ಮಾಡುತ್ತಿದ್ದಾರೆ. ನಟ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಲಾಗಿದೆ.
ಕುತೂಹಲ ಕೆರಳಿಸುವ ಆಕ್ಷನ್, ಡ್ರಾಮಾ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ಬಾಹುಬಲಿ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಪಿ.ಕೆ. ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಕಿರಣ್ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿ ಹೊರಬೀಳಲಿದೆ.
‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಜುಲೈ 12 (ಇಂದು) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸದೊಂದು ಚಿತ್ರವನ್ನು ಅವರು ಒಪ್ಪಿಕೊಂಡಿದ್ದು, ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಈ ಚಿತ್ರದಲ್ಲಿನ ಅವರ ಪಾತ್ರದ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ತಮಿಳಿನಲ್ಲಿ ವಿಕ್ರಮ್ ಪ್ರಭು ಅಭಿನಯದ ‘ಪಾಯುಮ್ ಒಳಿ ನೀ ಎನಕ್ಕು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸುಧೀರ್ ಚಂದ್ರ ಫಿಲಂ ಕಂಪನಿ ಮೂಲಕ ಸುಧೀರ್ ಚಂದ್ರ ಪದಿರಿ ನಿರ್ಮಿಸುತ್ತಿದ್ದಾರೆ. ಇದು ಅವರು ಕನ್ನಡದಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರವಾಗಿದೆ. ‘ವಿಕ್ರಮ್ ವೇದ’ ಮತ್ತು ‘ಕೈದಿ’ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಸ್ಯಾಮ್ ಸಿ.ಎಸ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಇದೊಂದು ಆಕ್ಷನ್ ಚಿತ್ರವಾಗಿದ್ದು, ದಕ್ಷಿಣ ಭಾರತದ ಜನಪ್ರಿಯ ನಟ-ನಟಿಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಹೆಚ್ಚಿನ ವಿವರಗಳು ಹೊರಬೀಳಲಿವೆ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಪ್ರಕಟವಾಗುತ್ತಿರುವ “ಟಿವಿ ಠೀವಿ” ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆದಿದೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ, ನಟಿ ಉಮಾಶ್ರೀ, ನಟ ಪ್ರಕಾಶ್ ರೈ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಮಿಲನ ಪ್ರಕಾಶ್ ಮುಂತಾದವರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ “ಟಿವಿ ಠೀವಿ” ಮಾಸ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ್ದಾರೆ.
ಮುಂದಿನ ವರ್ಷ ನಮ್ಮ ಸಂಸ್ಥೆ 25 ನೇ ವರ್ಷಕ್ಕೆ ಅಡಿಯಿಡುತ್ತಿದೆ ಎಂದು ಮಾತು ಆರಂಭಿಸಿದ, KTVA ಪ್ರಧಾನ ಕಾರ್ಯದರ್ಶಿ ಸೃಜನ್ ಲೋಕೇಶ್, ಈಗಿರುವ ನಮ್ಮ ಸಂಸ್ಥೆಯ ಸದಸ್ಯರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಬೇಕು ಹಾಗೂ ಇನ್ನೂ ಸದಸ್ಯರಾಗದವರೂ ಬೇಗ ಸದಸ್ಯತ್ವ ಪಡೆದುಕೊಳ್ಳುವಂತೆ ಹೇಳಿದರು .
ಕಿರುತೆರೆ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನ ಕೆಲಸ ಮಾಡುತ್ತಾರೆ. ಸುಮಾರು ಇಪ್ತತ್ತು ಸಾವಿರಕ್ಕೂ ಹೆಚ್ಚು ಜನ ಈ ಉದ್ಯಮವನ್ನೇ ನಂಬಿಕೊಂಡಿದ್ದಾರೆ. ಆದರೆ ಇವರಿಗೆ ಆರೋಗ್ಯ ವಿಮೆ(ಯಶಸ್ವಿನಿ) ಸೇರಿದಂತೆ ಯವುದೇ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ. ದಯವಿಟ್ಟು ಸಚಿವರು ಈ ಕುರಿತು ಸಹಕಾರ ನೀಡಬೇಕೆಂದು KTVA ಅಧ್ಯಕ್ಷ ರವಿ.ಆರ್.ಗರಣಿ ವಿನಂತಿಸಿದರು.
ಕೆಲವು ವರ್ಷಗಳು ಪ್ರಸಾರವಾಗಿ ಸ್ಥಗಿತಗೊಂಡಿದ್ದ “ಟಿವಿ ಠೀವಿ” ಮಾಸಪತ್ರಿಕೆಯನ್ನು ಪುನರಾರಂಭ ಮಾಡುತ್ತಿದ್ದೇವೆ. ವಿಶೇಷ ಸಂಚಿಕೆ ಇಂದು ಬಿಡುಗಡೆಯಾಗಿದೆ. ಈ ಮಾಸ ಪತ್ರಿಕೆ ಎಲ್ಲೂ ಮಾರಾಟಕ್ಕಿರುವುದಿಲ್ಲ. ನಮ್ಮ ಸದಸ್ಯರಿಗೆ ಹಾಗೂ ಆಸಕ್ತರಿಗೆ ನಾವೇ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.
“ಟಿವಿ ಠೀವಿ”ಮಾಸಪತ್ರಿಕೆಯಲ್ಲಿ ಬಂದಿರುವ ಲೇಖನಗಳು ಚೆನ್ನಾಗಿದೆ. ಅಧ್ಯಕ್ಷ ರವಿ ಆರ್ ಗರಣಿ, ಅವರು ಹೇಳಿರುವ ವಿಷಯಗಳನ್ನು ಆದಷ್ಟು ಬೇಗ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಮುಖ್ಯಮಂತ್ರಿಗಳನ್ನು ನಿಮ್ಮ ಸಂಘದ ಪದಾಧಿಕಾರಿಗಳು ಭೇಟಿ ಮಾಡಲು ವ್ಯವಸ್ಥೆ ಮಾಡುತ್ತೇನೆ. ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಸೆಟ್ಟೇರಿದ ದಿನದಿಂದಲೂ ಭಾರೀ ಕುತೂಹಲ ಹೆಚ್ಚಿಸಿರುವ ಹಾಸ್ಟೆಲ್ ಹುಡುಗರು ಸಿನಿಮಾದ ಮೊದಲ ನೋಟ ಬಿಡುಗಡೆಯಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಟ್ರೇಲರ್ ಲಾಂಚ್ ಮಾಡಲಾಯಿತು. ಅಶ್ವಿನಿ ಪುನೀತ್ ರಾಜ್ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್ವುಡ್ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದರು.
ರಿಷಬ್ ಶೆಟ್ಟಿ ಮಾತನಾಡಿ, ನನ್ನ ಶಿಷ್ಯದಿಂದರೇ ಮಾಡಿರುವ ಸಿನಿಮಾ. ಅರವಿಂದ್, ಪ್ರಜ್ವಲ್ ಇವರೆಲ್ಲರನ್ನೂ ಲೂಸಿಯಾ ಸಮಯದಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ತುಂಬಾ ಅದ್ಭುತ ಟೆಕ್ನಿಷಿಯನ್ಸ್. ಒಂದು ಸಿನಿಮಾದ ಕಥೆ ಇದೆ ಗೆಸ್ಟ್ ಅಪಿಯರೆನ್ಸ್ ಮಾಡ್ತೀರಾ ಅಂತಾ ಕೇಳಿದರು. ಕಥೆ ಏನೂ ಕೇಳಿಲ್ಲ. ಒಂದು ರಾತ್ರಿಯಷ್ಟೇ ಪಾತ್ರವನ್ನು ಚಿತ್ರೀಕರಿಸಲಾಯಿತು. ಪವನ್ ಇದ್ದರು. ಶೈನ್ ಇದ್ದರು, ಬಹಳ ಅದ್ಭುತವಾಗಿ ಶೂಟಿಂಗ್ ಅನುಭವ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಒಂದು ಅದ್ಭುತ ತಂಡ. ಬೆಳೆಯುತ್ತಾ ಬೆಳೆಯುತ್ತಾ ಸಿನಿಮಾ ದೊಡ್ಡ ಸ್ಕೆಲ್ ಆಯ್ತು. 500 ಜನ ಕಲಾವಿದರನ್ನು ಕಂಪ್ಲೀಟ್ ನೈಟ್ ಸೀಕ್ವೆಲ್ ನಲ್ಲಿ ಶೂಟ್ ಮಾಡುವುದು ತುಂಬಾ ಚಾಲೆಂಜಿಂಗ್ . ಇದೇ 21ಕ್ಕೆ ಸಿನಿಮಾ ಬರ್ತಿದೆ, ಥಿಯೇಟರ್ ಗೆ ಬಂದು ಸಿನಿಮಾ ನೋಡಿ. ನೀವು ಖಂಡಿತ ಎಂಜಾಯ್ ಮಾಡ್ತೀರ. ಅದ್ಭುತ ಸಿನಿಮಾ ಮಾಡಿದ್ದಾರೆ ಎಂದರು.
ಧ್ರುವ ಸರ್ಜಾ ಮಾತನಾಡಿ, ಒಬ್ಬ ಪ್ರೇಕ್ಷಕನಾಗಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನೋಡಿದ್ದೇನೆ. ಈ ಸಿನಿಮಾ ನೋಡಿದಾಗ ನಾನು ನನ್ನ ಅಣ್ಣನನ್ನು ಮಿಸ್ ಮಾಡಿಕೊಂಡೆ. ಏಳೆಂಟು ವರ್ಷ ನಾವು ಹಾಸ್ಟೆಲ್ ನಲ್ಲಿ ಇದ್ದೆವು. ಅದನ್ನು ನೋಡಿದ ತಕ್ಷಣ ನಾವು ಹೀಗೆ ಇದ್ವಲ್ಲಾ ಅನಿಸಿತು. ನಿತಿನ್ ಅವರು ತುಂಬಾ ಚೆನ್ನಾಗಿ ಸಿನಿಮಾ ಶೂಟ್ ಮಾಡಿದ್ದಾರೆ. ನಾನು ನೋಡಿದಾಗ ರೀ ರೆಕಾರ್ಡಿಂಗ್ ಆಗಿರಲಿಲ್ಲ. ರೀ ರೆಕಾರ್ಡಿಂಗ್ ಆದ್ಮೇಲೆ ನೋಡಬೇಕೆಂಬ ಕುತೂಹಲವಿದೆ. ನಾನು ಪ್ರೀಮಿಯರ್ ಶೋ ನೋಡಲ್ಲ. ನಾನು ಫಸ್ಟ್ ಡೇ ಫಸ್ಟ್ ಶೋ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡುತ್ತೇನೆ. ಕಿರಿಕ್ ಪಾರ್ಟಿಯಂತೆ ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಲಿ ಎಂದು ಶುಭ ಹಾರೈಸಿದರು.
ರಕ್ಷಿತ್ ಶೆಟ್ಟಿ ಮಾತನಾಡಿ, ನಾನು ಈ ಪ್ರೋಗ್ರಾಂಗೆ ಗೆಸ್ಟ್ ಆಗಿ ಬಂದಿಲ್ಲ. ಯಾಕಂದ್ರೆ ನಾನು ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ. ಅಪ್ಪು ಸರ್ ಏನೇ ಶುರು ಮಾಡಿದರು. ಅದ್ಭುತ ರಿಸ್ಟಲ್ ಕೊಡುತ್ತದೆ ಎಂಬ ನಂಬಿಕೆ. ನಮ್ಮ ಪರವಃ ಸ್ಟುಡಿಯೋಸ್ ನಮ್ಮ ಆಫೀಸ್ ನ್ನು ಅವರೇ ಉದ್ಘಾಟಿಸಿದ್ದರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಫಸ್ಟ್ ಪೋಸ್ಟರ್ ಅವರೇ ಲಾಂಚ್ ಮಾಡಿದ್ದರು. ಈ ಸಿನಿಮಾವನ್ನು ನಾನು ಪ್ರೆಸೆಂಟ್ ಮಾಡಲು ತುಂಬಾ ಕಾರಣವಿದೆ. ನಾನು ಈ ಚಿತ್ರವನ್ನು ಎರಡು ಬಾರಿ ನೋಡಿದ್ದೇನೆ. 2 ಸಲ ನೋಡುವಾಗಲೂ ಅಷ್ಟೇ ಎಂಜಾಯ್ ಮಾಡಿದ್ದೇನೆ. ಸಿನಿಮಾವನ್ನು ಹಾಲಿವುಡ್ ರೇಂಜ್ ಗೆ ಶೂಟ್ ಮಾಡಲಾಗಿದೆ ಎಂದರು.
ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಮಾತನಾಡಿ, ಅಪ್ಪು ಸರ್ ಪೋಸ್ಟರ್ ಲಾಂಚ್ ಮಾಡಿಕೊಟ್ಟಿದ್ದರು. ಅಲ್ಲಿಂದಲೇ ಜರ್ನಿ ಶುರುವಾಗಿದ್ದು, ಈ ವೇದಿಕೆ ಹತ್ತಿದ್ದೇನೆ. ಆದ್ರೆ ಕೆಲಸ ಮಾಡಲು. ನಾನು ಟಿವಿ ಮಾಧ್ಯಮದಲ್ಲಿ ಕೆಲಸ ಮಾಡಿದವನು. ಈ ಚಿತ್ರ ಮಾಡಲು ಎರಡು ವರ್ಷ ಬೇಕಾಯ್ತು. ಮಳೆ, ಲಾಕ್ ಡೌನ್ ನಿಂದ ಸ್ವಲ್ಪ ಲೇಟ್ ಆಯ್ತು. ಇಷ್ಟು ದಿನ ಪ್ರೋಮೋ ಬಿಟ್ಟಿದ್ದೇವೆ. ಈಗ ಟ್ರೇಲರ್ ಬಂದಿದೆ. ಈ ಮೂವೀಗೆ 1000 ಜನ ರಂಗಭೂಮಿ ಕಲಾವಿದರನ್ನು ಬಿಟ್ಟು ಸ್ಯಾಂಡಲ್ ವುಡ್ ಇಂಡಸ್ಟ್ರೀ ಸಾಥ್ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು.
ನಿರ್ಮಾಪಕ ವರುಣ್ ಗೌಡ ಮಾತನಾಡಿ, ಜುಲೈ 21ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ. ಇಷ್ಟು ದಿನ ಬೆಂಬಲ ಕೊಟ್ಟ ರೀತಿ ಮುಂದೆಯೂ ನಿಮ್ಮ ಬೆಂಬಲವಿರಲಿ ಎಂದರು.
ಕಿರಿಕ್ ಮಾಡುವ ವಾರ್ಡನ್ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್ ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮೋಹಕತಾರೆ ರಮ್ಯಾ ಲೆಕ್ಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್ ಸಾಥ್ ಕೊಟ್ಟಿರುವ ಈ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜೊತೆಗೆ ಸೇರಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದು, ಇದೇ 21 ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಇಂದು ಕನ್ನಡ ಚಿತ್ರಗಳ ಪಾಲಿಗೆ ಸಂಭ್ರಮವೆಂದರೆ ಬರೀ ವಾರ, ತಿಂಗಳ ಸುತ್ತ ಬಂಧಿಯಾಗುವ ಕಾಲಮಾನ. ಇಂಥ ಹೊತ್ತಿನಲ್ಲಿ ಸಿನಿಮಾವೊಂದು ಯಶಸ್ವಿಯಾಗಿ 50 ದಿನ ಪೂರೈಸಿದರೆ ಬರೀ ಚಿತ್ರತಂಡ ಮಾತ್ರವಲ್ಲ ಒಂದಿಡಿ ಚಿತ್ರರಂಗವೇ ಖುಷಿಪಡುವ ಸಂಗತಿ. ಅಂತಹ ಯಶಸ್ಸಿಗೆ ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಡೇರ್ ಡೆವಿಲ್ ಮುಸ್ತಫಾ ಸಿನಿಮಾ ಸಾಕ್ಷಿಯಾಗಿದೆ. ಭರ್ಜರಿಯಾಗಿ ಐವತ್ತು ದಿನ ಪೂರೈಸಿ ಅಮೇಜಾನ್ ಪ್ರೈಮ್ ಒಟಿಟಿಯಲ್ಲಿಯೂ ಭರಪೂರ ಮೆಚ್ಚುಗೆ ಪಡೆಯುತ್ತಿರುವ ಖುಷಿ ಕ್ಷಣಗಳನ್ನು ಚಿತ್ರತಂಡ ಸೆಲೆಬ್ರೆಟ್ ಮಾಡಿದೆ.
ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಐವತ್ತು ದಿನದ ಸಂಭ್ರಮಾಚರಣೆಯಲ್ಲಿ ಇಡೀ ತಂಡಕ್ಕೆ ಗೆಲುವಿನ ಪಾರಿತೋಷಕ ನೀಡಿ ಗೌರವಿಸಲಾಯಿತು. ಜೊತೆಗೆ ಬಿರಿಯಾನಿ ಪುಳಿಯೊಗ್ಗರೆ ಪಾರ್ಟಿ ಮಾಡಿ ಇಡೀ ಡೇರ್ ಡೆವಿಲ್ ಮುಸ್ತಾಫ್ ಬಳಗ ಖುಷಿಪಟ್ಟಿತು.
ಡೇರ್ ಡೆವಿಲ್ ಮುಸ್ತಫಾ ಸಿನಿಮಾವನ್ನು ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿರುವ ಧನಂಜಯ್ ಮಾತನಾಡಿ, ನಾನು ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ. ಶಶಾಂಕ್ ಕಾಲೇಜ್ ನಲ್ಲಿ ನನಗೆ ಜೂನಿಯರ್. ಅಲ್ಲಿಂದನೂ ನೋಡ್ತಾ ಇದ್ದೆ. ತುಂಬಾ ಜನ ನಿರ್ದೇಶಕರು ಆಗಬೇಕು ಅಂತಾ ಬರುತ್ತಾರೆ. ನಾನು ಕಥೆ ಮಾಡಿದ್ದೇನೆ ಇನ್ವೆಸ್ಟ್ ಮಾಡಿ ಅಂತಾರೇ. ನಾನು ಅವರಿಗೆ ಶಶಾಂಕ್ ಎಕ್ಸಂಪಲ್ ಕೊಟ್ಟು ಕಳಿಸುತ್ತೇನೆ. ಕೆಲಸ ಮಾಡುತ್ತಾ ಮಾಡುತ್ತಾ ಕಲಿಯುವುದು.
ಸಿದಾ ಬಂದು ಕಥೆ ಮಾಡಿದ್ದೇನೆ ಕೋಟ್ಯಾಂತರ ರೂಪಾಯಿ ದುಡ್ಡು ಹಾಕಿ ಎಂದರೆ ಕಷ್ಟವಾಗುತ್ತದೆ. ಡೇರ್ ಡೆವಿಲ್ ಮುಸ್ತಫಾ ಮಾಸ್ ಸಿನಿಮಾ ಅಂತಾನೇ ಕರೆಯುತ್ತೇನೆ. ಥಿಯೇಟರ್ ನಲ್ಲಿ ಕುಳಿತು ನೋಡಿ ಸೆಲಬ್ರೆಟ್ ಮಾಡುವ ಸಿನಿಮಾ. ಹಳೆ ಬೇರು ಹೊಸ ಚಿಗರು ಕೂಡಿರಲು ಮರ ಸೊಬಗು ಎನ್ನುವಂತೆ ಹಿರಿಯರು ಹಾಗೂ ಕಿರಿಯರು ಎಲ್ಲರೂ ಇಟ್ಟುಕೊಂಡು ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ ಎಂದರು.
ಒಳ್ಳೆಯ ಸಿನಿಮಾಗಳು ಬಂದಾಗ ಜನರು ಖಂಡಿತವಾಗಿಯೂ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಗಾಂಧಿನಗರದಲ್ಲಿದೆ. ಅದು ‘ಡೇರ್ಡೆವಿಲ್ ಮುಸ್ತಫಾ’ ವಿಚಾರದಲ್ಲಿ ನಿಜವಾಗಿದೆ. ಇದು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಾಣ ಮಾಡಿರುವ ಸಿನಿಮಾ. ಅನಂತ ಶಾಂತಯ್ಯ ಜೊತೆಗೂಡಿ ಚಿತ್ರಕಥೆ ಬರೆದಿರುವ ಶಶಾಂಕ್ ಸೋಗಾಲ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.
ಮಲೆನಾಡಿನ ಹೊಸ ಪ್ರತಿಭೆ ಹರೀಶ್ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾನೆ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ದೆವ್ವದ ಕಥೆಗಳು ಬಂದಿವೆ. ಆ ಸಾಲಿಗೆ ನಮಸ್ತೆ ಗೋಸ್ಟ್ ಸಿನಿಮಾ ಕೂಡ ಸೇರಿದೆ. ಹೆಸರೇ ಹೇಳುವಂತೆ ಇದೊಂದು ಹಾರರ್ ಕಥೆ. ಇಲ್ಕಿ ದೆವ್ವವುಂಟು. ಆ ದೆವ್ವದ ಜೊತೆ ಶಿವಮೊಗ್ಗದ ಪ್ರತಿಭೆ ಹರೀಶ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜುಲೈ 14ರಂದು ಬಿಡುಗಡೆಯಾಗುತ್ತಿದೆ
ಯುವ ನಟ ಶಿವಮೊಗ್ಗ ಹರೀಶ್ ಈಗ ಮತ್ತೊಂದು ಅವತಾರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ರೆಡಿ ಆಗಿದ್ದಾರೆ. ಇಷ್ಟು ದಿನ ರಂಗಭೂಮಿ ಮತ್ತು ಕಿರುತೆರೆ ಎರಡರಲ್ಲೂ ಅಭಿನಯಿಸಿ, ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದ ಹರೀಶ್, ಈಗ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಣಿಸುತ್ತಿದ್ದಾರೆ. ಅಂದರೆ ಸಿನಿಮಾ ನಟನಾಗಿ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿರುವ ʼನಮಸ್ತೆ ಗೋಸ್ಟ್ʼ ಹೆಸರಿನ ಚಿತ್ರ ಜುಲೈ 14 ರಂದು ರಾಜ್ಯಾಧ್ಯಂತ ತೆರೆ ಕಾಣುತ್ತಿದೆ. ಈ ಚಿತ್ರ ಅಂದು ಶಿವಮೊಗ್ಗದ ಸಿಟಿ ಸೆಂಟರ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆ ಆಗುತ್ತಿದೆ ಎಂಬುದು ವಿಶೇಷ.
ಮೂಲತಃ ಶಿವಮೊಗ್ಗದವರೇ ಆದ ಶಿವಮೊಗ್ಗ ಹರೀಶ್ , ಈಗಾಗಲೇ ರಂಗಭೂಮಿ ಮೂಲಕ ಒಂದಷ್ಟು ಹೆಸರು ಮಾಡಿದವರು. ಅದೇ ಅನುಭವದೊಂದಿಗೆ ಈಗ ಕಿರುತೆರೆಯಲ್ಲೂ ಸಾಕಷ್ಟು ಅವಕಾಶ ಗಿಟ್ಟಿಸಿಕೊಂಡು , ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅಲ್ಲಿಂದಲೇ ಈಗ ಬಡ್ತಿ ಪಡೆದು ಹಿರಿ ತೆರೆಯಲ್ಲೂ ತಮ್ಮ ನಟನಾ ಪ್ರತಿಭೆ ಯನ್ನು ಅಗ್ನಿ ಪರೀಕ್ಷಗೆ ಒಡ್ಡುತ್ತಿದ್ದಾರೆ.
ನಾಟಕ, ಸೀರಿಯಲ್ ನಲ್ಲಿ ತಮ್ಮ ನಟನೆಯನ್ನು ನೋಡಿ ಮೆಚ್ಚಿಕೊಂಡ ಪ್ರೇಕ್ಷಕರು, ಸಿನಿಮಾದಲ್ಲಿನ ಅಭಿನಯಕ್ಕೂ ಮೆಚ್ಚುಗೆ ಹೇಳಬಹುದು ಎನ್ನುವ ನಿರೀಕ್ಷೆ ಅವರದು. ಅದರಲ್ಲೂ ತಾವು ಅಭಿನಯಿಸಿದ ಮೊದಲ ಸಿನಿಮಾ ಸಿಟಿ ಸೆಂಟರ್ ನ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಾಣುತ್ತಿರುವುದಕ್ಕೆ ಶಿವಮೊಗ್ಗ ಹರೀಶ್ ಫುಲ್ ಎಕ್ಸೈಟ್ ಆಗಿದ್ದಾರೆ.
ʼ ಕಳೆದ ಒಂದು ವಾರದಿಂದ ನಿದ್ದೆ ಇಲ್ಲದೆ ಪ್ರಚಾರದಲ್ಲಿ ತೊಡಗಿದ್ದೇನೆ. ನನಗಿದು ಎರಡನೇ ಸಿನಿಮಾ. ಆದ್ರೆ ಫಸ್ಟ್ ಟೈಮ್ ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಈ ಸಿನಿಮಾದ ಮೂಲಕ ಸಿಕ್ಕಿದೆ. ಕಲಾವಿದರು ಅಂತೆನಿಸಿಕೊಂಡ ಪ್ರತಿಯೊಬ್ಬರಿಗೂ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಬೇಕು, ಪ್ರೇಕ್ಷಕರಿಂದ ಒಂದಷ್ಟು ಒಳ್ಳೆಯ ಮಾತುಗಳನ್ನು ಕೇಳಬೇಕೆನ್ನುವ ತುಡಿತ ಇದ್ದೇ ಇರುತ್ತದೆ.
ಅಂತಹ ತುಡಿತ ನನ್ನಲ್ಲೂ ಇದೆ. ಅದೇ ಕಾರಣದಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲಿ ಎನ್ನುವ ತವಕದಲ್ಲಿದ್ದೇನೆ. ನನ್ನಿಂದ ಆದಷ್ಟು ಪ್ರಚಾರ ನಡೆಸಿದ್ದೇನೆ. ಗೆಳೆಯರು, ಹಿತೈಷಿಗಳು, ಪರಿಚಯಸ್ಥರಿಗೆಲ್ಲ ನಾನೇ ಭೇಟಿ ಮಾಡಿ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಕೇಳುತ್ತಿದ್ದೇನೆ. ಅಂದ್ರೆ ಹೊಸಬರನ್ನು ಪ್ರೋತ್ಸಾಹಿಸಿ ಎನ್ನುವುದಷ್ಟೇ ಇಲ್ಲಿ ನನ್ನ ವಿನಂತಿʼ ಎನ್ನುವ ಮೂಲಕ ತಮ್ಮ ಸಿನಿಮಾದ ಬಿಡುಗಡೆಯ ತವಕ, ತುಡಿತವನ್ನು ಬಿಚ್ಚಿಡುತ್ತಾರೆ ಯುವ ನಟ ಶಿವಮೊಗ್ಗ ಹರೀಶ್.
ಈ ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಹಾರರ್ ಕಥಾ ಹಂದರದ ಚಿತ್ರ. ಸಸ್ಪೆನ್ಸ್, ಹಾರರ್ ಜತೆಗೆ ಒಂದಷ್ಟು ನೈಜ ಘಟನೆಯ ಅಂಶಗಳು ಈ ಚಿತ್ರದಲ್ಲಿ ಇವೆಯಂತೆ. ಚಿತ್ರದ ಕಥಾ ಹಂದರ ಬಗ್ಗೆ ಸಣ್ಣ ಸುಳಿವು ನೀಡುವ ಶಿವಮೊಗ್ಗ ಹರೀಶ್, ಏನೋ ಅತ್ಯದ್ಬುತ ಕಥೆ ಅಂತ ಹೇಳಲಾರೆ, ಆದರೂ ಪ್ರೇಕ್ಷಕರನ್ನು ಹಿಡಿದಿಡಬಲ್ಲ ಒಂದಷ್ಟು ಅಂಶಗಳು ಚಿತ್ರದಲ್ಲಿವೆ. ಚಿತ್ರದ ಕಥಾ ನಾಯಕನಿಗೆ ಪ್ರತಿ ನಿತ್ಯವೂ ಒಂದು ಕನಸು ಬಿಳುತ್ತೆ. ಆ ಕನಸಿನಲ್ಲಿ ದ್ವೆವ ಬರುತ್ತದೆ. ಅದು ಯಾಕಾಗಿ ಹಾಗೆಲ್ಲ ಆಗುತ್ತೆ, ಕೊನೆಗೆ ಅದು ಹೇಗೆ ಪರಿಹಾರ ಕಾಣುತ್ತೆ ಎನ್ನುವುದು ಚಿತ್ರದ ಒನ್ ಲೈನ್ ಸ್ಟೋರಿ. ಈ ಕತೆಯಲ್ಲಿ ನಾಲ್ಕು ಪಾತ್ರಗಳಿವೆ. ಆ ಪಾತ್ರಗಳಲ್ಲಿ ಹೀರೋ ಗೆಳೆಯನಾಗಿ ನಾನುಕಾಣಿಸಿಕೊಂಡಿದ್ದೇನೆ. ಕಥೆ ಶುರುವಾಗೋದೆ ನನ್ನ ಪಾತ್ರ ಮೂಲಕ. ಕೊನೆಗೆ ಕಥೆ ಮುಗಿಯುವುದು ಕೂಡ ನನ್ನದೇ ಪಾತ್ರದ ಮೂಲಕ . ಹಾಗಾಗಿ ಚಿತ್ರದಲ್ಲಿ ನನ್ನ ಪಾತ್ರಕ್ಕೂ ಪ್ರಮುಖ ಸ್ಥಾನ ಇದೆ ಎನ್ನುತ್ತಾರೆ ಶಿವಮೊಗ್ಗ ಹರೀಶ್.
ರಂಗಭೂಮಿ, ಆನಂತರ ಕಿರುತೆರೆ, ಈಗ ಸಿನಿಮಾ ನಟನಾಗಿಯೂ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಶಿವಮೊಗ್ಗ ಹರೀಶ್, ಸಿನಿಮಾದ ಅನುಭವವೇ ತುಂಬಾನೆ ಭಿನ್ನ ಎನ್ನುವ ಅನಿಸಿಕೆ ಹಂಚಿಕೊಳ್ಳುತ್ತಾರೆ. ʼ ನಾನು ಸೀರಿಯಲ್ ಗೆ ಹೋಗಬೇಕು ಅಂತ ಇಲ್ಲಿಂದ ಹೋದಾಗ ನಾಟಕದಂತೆ ಅಲ್ಲ ಸಿರೀಯಲ್ ಅಂತಿದ್ರು. ಅಲ್ಲಿ ಕೆಲಸ ಮಾಡಿ ಸಿನಿಮಾಕ್ಕೆ ಬಂದಾಗ, ಸೀರಿಯಲ್ ಇದ್ದಂತೆ ಅಲ್ಲ ಅಂತಿದ್ರು. ಹಾಗೆಲ್ಲ ನಾಟಕ, ಸೀರಿಯಲ್ ಹಾಗೂ ಸಿನಿಮಾದ ನಡುವೆ ಸಾಕಷ್ಟು ವ್ಯತ್ಯಾಸಗಳಿರುವ ಅನುಭವ ನನಗಾಗಿದೆ. ನಟನೆ ಒಂದು ಬಗೆಯದ್ದಾದರೂ, ಅಲ್ಲಿ ಇಷ್ಟು, ಇಲ್ಲಿ ಇಂತಿಷ್ಟು ಎನ್ನುವ ಗೆರೆಗಳು ಇದ್ದಿದ್ದು ನಾನು ಕಂಡೆ. ಆ ಇತಿ ಮಿತಿಗಳ ನಡುವೆಯೇ ಕಲಾವಿದನಾಗಿ ನಿಮ್ಮ ಮುಂದೆ ಕಾಣಿಸಿಕೊಂಡಿರುವ ನಾನು ಈ ಗ ಸಿನಿಮಾ ನಟನಾಗಿ ನಿಮ್ಮ ಮುಂದೆ ಬರುತ್ತಿದ್ದೇನೆ. ನೋಡಿ, ಪ್ರೋತ್ಸಾಹಿಸಿ, ಹಾರೈಸಿ ʼ ಎನ್ನುವ ಮಾತು ಹರೀಶ್ ಅವರದ್ದು.
ಚಿರಾಯು ಕ್ರಿಯೇಟಿವ್ ಸಿನಿಮಾಸ್ ಬ್ಯಾನರ್ ನಲ್ಲಿ ರಮೇಶ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಭರತ್ ನಂದ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶನದ ಜತೆಗೆ ಭರತ್ ನಂದ ಅವರು ಚಿತ್ರದ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ವಿದ್ಯಾರಾಜ್ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರದ ತಾರಾಗಣದಲ್ಲಿ ಬಾಲರಾಜ್ ವಾಡಿ, ಶಿವಮೊಗ್ಗ ಹರೀಶ್, ಶಿವಕುಮಾರ್ ಆರಾಧ್ಯ, ಅಖಿಲೇಶ್ ಮತ್ತಿತರರು ಇದ್ದಾರೆ. ವಿಶೇಷ ಅಂದ್ರೆ ಶಿವಮೊಗ್ಗದವರೇ ಆದ ಮಧುಸೂಧನ್ ಈಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಹಾಗೆಯೇ ರೂಪಾ ಹರೀಶ್ ಪ್ರಸಾದನವಿದೆ. ಉಳಿದಂತೆ ಶೇ. 80 ರಷ್ಟು ಚಿತ್ರದ ಸಿಬ್ಬಂದಿ ಶಿವಮೊಗ್ಗದವರೇ ಎನ್ನುವುದು ವಿಶೇಷ.
ಶ್ರೀ ಫ್ರೆಂಡ್ಸ್ ಮೂವೀ ಮೇಕರ್ ಲಾಂಛನದಲ್ಲಿ ಎಂ.ಎನ್ ಭೈರೇಗೌಡ, ಧನಂಜಯ್, ಯುವರಾಜು, ಸು.ಕಾ.ರಾಮು ಮತ್ತು ವೆಂಕಟೇಶ್ ಅವರು ನಿರ್ಮಿಸಿರುವ, ಉಮೇಶ್ ಗೌಡ ನಿರ್ದೇಶನದ, ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಪ್ರಮುಖಪಾತ್ರದಲ್ಲಿ ನಟಿಸಿರುವ “ಓ ಮನಸೇ” ಚಿತ್ರ ಇದೇ ಜುಲೈ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಾವು ಐದು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ನಿರ್ದೇಶಕ ಉಮೇಶ್ ಗೌಡ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಟಿಸಿರುವ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ಚಿತ್ರ ಪ್ರೇಕ್ಷಕರ ಮನ ಗೆಲ್ಲುವ ಭರವಸೆ ಇದೆ ಎಂದು ನಿರ್ಮಾಪಕರಲ್ಲೊಬ್ಬರಾದ ಯುವರಾಜ್ ತಿಳಿಸಿದರು.
ನನಗೆ ನಿರ್ದೇಶಕ ಉಮೇಶ್ ಗೌಡ ಹಾಗೂ ಸಂಭಾಷಣೆ ಬರೆದಿರುವ ಸಾಯಿಕೃಷ್ಣ ಅವರು ಬಂದು ಕಥೆ ಹೇಳಿದರು ಎಂದು ಮಾತು ಪ್ರಾರಂಭಿಸಿದ ವಿಜಯ ರಾಘವೇಂದ್ರ, ನಾನು ಚಿತ್ರ ಒಪ್ಪಿಕೊಳ್ಳಲು ಮುಖ್ಯಕಾರಣ ಇದು ಶಿಕ್ಷಣಕ್ಕೆ ಮಹತ್ವ ಕೊಡುವ ಕಥಾಹಂದರ ಹೊಂದಿದೆ. ಲವ್, ಸಸ್ಪೆನ್ಸ್ ಕೂಡ ಇದೆ. ನಾನು ಪೊಲೀಸ್ ಅಧಿಕಾರಿಪಾತ್ರದಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರವನ್ನು ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು.
ನಾನು ವಿಜಯ್ ರಾಘವೇಂದ್ರ ಅವರ ಜೊತೆ ಅಭಿನಯಿಸುತ್ತಿರುವ ಮೊದಲ ಸಿನಿಮಾವಿದು ಎಂದು ತಿಳಿಸಿದ ಧರ್ಮ ಕೀರ್ತಿರಾಜ್, ಈ ಚಿತ್ರದ ನಿರ್ಮಾಪಕರು ಯಾವುದೇ ಕೊರತೆಯಿಲ್ಲದೆ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಾವು ದುಡುಕಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಎನ್ನೆಲಾ ಅನುಭವಿಸಬೇಕಾಗುತ್ತದೆ ಎಂಬುದು ಈ ಚಿತ್ರದ ಕಥೆಯ ಒಂದೆಳೆ ಎಂದರು.
ಚಿತ್ರದ ಮಾರ್ಗದರ್ಶಕರಾದ ಹಿರಿಯ ನಿರ್ಮಾಪಕ ಅಣಜಿ ನಾಗರಾಜ್, ನಾಯಕಿ ಸಂಚಿತಾ ಪಡುಕೋಣೆ, ವಿತರಕ ರಮೇಶ್ ಗೌಡ ಹಾಗೂ ಸಂಭಾಷಣೆ ಬರೆದಿರುವ ಸಾಯಿಕೃಷ್ಣ “ಓ ಮನಸೇ” ಬಗ್ಗೆ ಮಾತನಾಡಿದರು.
ರಮೇಶ್ ಅದರಂಗಿ ಕಥೆ ಬರೆದಿರುವ ಈ ಚಿತ್ರಕ್ಕೆ ಎಂ.ಆರ್.ಸೀನು ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ಬಂಡೆ ಚಂದ್ರು ಅವರ ಸಾಹಸ ನಿರ್ದೇಶನವಿದೆ.
ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ, ಹರೀಶ್ ರಾಯ್, ಸಾಧುಕೋಕಿಲ, ಶೋಭ್ ರಾಜ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ರುಶಿಕಾ(ಟಗರು ಸರೋಜ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.