Categories
ಸಿನಿ ಸುದ್ದಿ

ಇದು ಶಿಕ್ಷಣ ವಂಚನೆ ಕಥೆ: ಸ್ಕ್ಯಾಮ್ 1770 ಏಪ್ರಿಲ್ 12ಕ್ಕೆ ರಿಲೀಸ್

ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್ ನಿರ್ಮಿಸಿರುವ, ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ “SCAM 1770” ಚಿತ್ರ ಏಪ್ರಿಲ್ 12 ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ. ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಎಂಬ ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ SCAM 1770. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇ ಬೇಕಾದ ಚಿತ್ರವಿದು.

ಡಾ. ಇಂದು ನಟೇಶ್ ಹಾಗೂ ಅಡ್ವೊಕೇಟ್ ನೇತ್ರಾವತಿ ಅವರು ಕಥೆ ಬರೆದಿದ್ದು, ವಿಕಾಸ್ ಪುಷ್ಪಗಿರಿ ಹಾಗೂ ಶಂಕರ್ ರಾಮನ್ ಚಿತ್ರಕಥೆ ಬರೆದಿದ್ದಾರೆ‌. ಸಂಭಾಷಣೆ ಶಂಕರ್ ರಾಮನ್ ಅವರದು.

ಸತೀಶ್ ಆರ್ಯನ್ ಸಂಗೀತ ನಿರ್ದೇಶನ, ಶೋಯೆಬ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ – ರಾಮು ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನ “SCAM 1770” ಚಿತ್ರಕ್ಕಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್(ದಡ್ಡ ಪ್ರವೀಣ), ನಿಶ್ವಿತ(ನಾಯಕಿ), ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಏಪ್ರಿಲ್ 12ರಿಂದ ಚಿತ್ರ ಮಂದಿರದಲ್ಲಿ ನೈಟ್ ಕರ್ಫ್ಯೂ! ಇದು ಮಾಲಾಶ್ರೀ ಚಿತ್ರ

ಆಕ್ಷನ್ ಕ್ವೀನ್ ಮಾಲಾಶ್ರೀ ಗ್ಯಾಪ್ ನಂತರ ’ನೈಟ್ ಕರ್ಫ್ಯೂ’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಸೇನೆಯಲ್ಲಿದ್ದು ಸೇವೆ ಸಲ್ಲಿಸಿದ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಸ ಹಾಗೂ ಕುತೂಹಲದ ಕಥೆ ಹೊಂದಿದ್ದು, ಕೋವಿಡ್ 19 ಸಂದರ್ಭದಲ್ಲಿ ನಡೆದಂತಹ ಸತ್ಯ ಘಟನೆಗಳನ್ನು ತೆಗೆದುಕೊಂಡು ಅದನ್ನು ದೃಶ್ಯ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.

ರಚನೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ರವೀಂದ್ರವೆಂಶಿ. ಇವರು ಈ ಹಿಂದೆ ’ಪುಟಾಣಿ ಸಫಾರಿ’ ’ಮಠ’ ಮತ್ತು ’ವಾಸಂತಿ ನಲಿದಾಗ’ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯುಎ ಪ್ರಮಾಣಪತ್ರ ನೀಡಿದೆ.

ಬಿಲ್ಡರ್ ಹಾಗೂ ಡೆವಲಪರ್ ಆಗಿರುವ ಬೆಂಗಳೂರಿನ ಬಿ.ಎಸ್.ಚಂದ್ರಶೇಖರ್ ನಿರ್ಮಾಣ ಮಾಡಿದ್ದ ಮಕ್ಕಳ ಸಿನಿಮಾ ’ಪುಟಾಣಿ ಸಫಾರಿ’ ಅನೇಕ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿತ್ತು. ಅಲ್ಲದೆ ನೂರು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಇದರ ಪ್ರೇರಣೆಯಿಂದಲೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶಕ್ತಿಗಾಗಿ ಮಾಲಾಶ್ರೀ, ಯುಕ್ತಿಗಾಗಿ ರಂಜನಿರಾಘವನ್ ಸಹ ಡಾಕ್ಟರ್ ಆಗಿ ನಟನೆ ಮಾಡಿದ್ದಾರೆ.

ಇವರೊಂದಿಗೆ ಪ್ರಮೋದ್‌ಶೆಟ್ಟಿ, ರಂಗಾಯಣರಘು, ಸಾಧುಕೋಕಿಲ, ಸಹನಶ್ರೀ, ಅಶ್ವಿನ್‌ರಮೇಶ್, ವರ್ಧನ್‌ತೀರ್ಥಹಳ್ಳಿ, ಮಂಜುಪಾವಗಡ, ಮಂಡ್ಯಸಿದ್ದು, ಸದಾನಂದ, ಗಂಗರಾಜು, ನಿತಿನ್, ವಸಂತಕುಮಾರ್.ಸಿ, ಬೇಬಿ ಮೌಲ್ಯಮಂಜುನಾಥ, ಜ್ಯೋತಿ, ರಜನಿ, ಶಿವರಾಜ್‌ಶೆಟ್ಟಿ, ಮಹೇಶ್.ಎಂ, ಅಲ್ಸೂರು ರಾಜಕುಮಾರ್ ಅಭಿನಯಿಸಿದ್ದಾರೆ.

ಹಿನ್ನಲೆ ಸಂಗೀತ ಎಂ.ಎಸ್.ಮಾರುತಿ, ಛಾಯಾಗ್ರಹಣ ಪ್ರಮೋದ್‌ಭಾರತೀಯ, ಸಾಹಸ ಜಾಗ್ವಾರ್‌ಸಣ್ಣಪ್ಪ, ಸಂಕಲನ ಸಿ.ರವಿಚಂದ್ರನ್ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ದಗೊಂಡಿದ್ದು, ಏಪ್ರಿಲ್ 12ರಂದು ತೆರೆ ಕಾಣುತ್ತಿದೆ.

Categories
ಸಿನಿ ಸುದ್ದಿ

ಡಾಲಿ ಈಗ ಕೋಟಿ ಒಡೆಯ! ಇದು ಪರಮ್ ನಿರ್ದೇಶನದ ಮೊದಲ‌ ಚಿತ್ರ

ಕನ್ನಡದ ಪ್ರತಿಭಾವಂತ ನಟ ಡಾಲಿ ಧನಂಜಯ ಅವರ ಹೊಸ ಕನ್ನಡ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪರಮ್‌ ನಿರ್ದೇಶನದ ಈ ಸಿನಿಮಾ ಹೆಸರು ಕೋಟಿ. ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್.‌ ಕಲರ್ಸ್‌ ಕನ್ನಡ ವಾಹಿನಿಯನ್ನು ಅವರು ಮುನ್ನಡೆಸುತ್ತಿದ್ದಾಗ ಅತಿ ಹೆಚ್ಚು ಕನ್ನಡ ಮೂಲದ ಕತೆಗಳನ್ನು ಅವರು ಕೊಟ್ಟಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅಪ್ಪಟ ಕನ್ನಡದ ಕತೆಯೊಂದಿಗೆ ಅವರು ಮೊದಲ ಬಾರಿ ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದಾರೆ.


ಯುಗಾದಿಗೆ ಬಂತು ಪೋಸ್ಟರ್


ಯುಗಾದಿ ಹಬ್ಬದ ದಿನವಾದ ಇಂದು ಕೋಟಿ ಚಿತ್ರದ ಟೈಟಲ್‌ ಬಿಡುಗಡೆಯಾಗಿದೆ. ಐದುನೂರು ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷ. ತೀಕ್ಷ್ಣ ಕಣ್ಣುಗಳಿಂದ ಈ ಪೋಸ್ಟರ್‌ ಗಮನ ಸೆಳೆಯುತ್ತಿರುವುದಂತೂ ಹೌದು.‌
ಕೋಟಿ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿದೆ. ದುಡ್ಡಿಗಾಗಿ ಒದ್ದಾಡುವ ಒಬ್ಬ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಈ ಸಿನಿಮಾ ಹೇಳಬಹುದು ಎಂಬ ಸೂಚನೆಯನ್ನು ಧನಂಜಯ ಆಗಲೇ ಕೊಟ್ಟಿದ್ದಾರೆ. ಹೊಯ್ಸಳ ನಂತರ ಬರುತ್ತಿರುವ ಅವರ ಮೊದಲ ಕನ್ನಡ ಚಿತ್ರ ಇದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.


ಸಮರ್ಥ ಚಿತ್ರತಂಡ


ಈ ಸಿನಿಮಾಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದು ಸ್ವತಃ ಪರಮ್‌ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರೊಂದಿಗೆ ಸಿನಮಾ ಮಾಡಬೇಕು ಎಂಬ ಅವರ ಬಹುದಿನಗಳ ಕನಸು ನೆರವೇರಿದಂತಾಗಿದೆ. ಕಳೆದ ವರ್ಷ ಟೆಲಿವಿಷನ್‌ ಚಾನೆಲ್ಲಿನಿಂದ ಹೊರಗೆ ಬಂದಾಗ ತಾನು ಹಿರಿತೆರೆಯಲ್ಲಿ ಕತೆಗಳನ್ನು ಹೇಳಬೇಕು ಎಂದು ಅವರು ಆಸೆ ಪಟ್ಟಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಜಿಯೋ ಸ್ಟುಡಿಯೋಸ್‌ ನ ಜ್ಯೋತಿ ದೇಶಪಾಂಡೆ.

ಈ ವರ್ಷ ಒಂದಾದ ಮೇಲೆ ಒಂದು ಹಿಟ್‌ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ಜ್ಯೋತಿ ಮತ್ತು ಜಿಯೋ ಸ್ಟುಡಿಯೋಸ್ ಈ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಸುಕಿ ವೈಭವ್‌ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ ನೊಬಿನ್‌ ಪೌಲ್‌ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾಗೆ ಅರುಣ್‌ ಬ್ರಹ್ಮನ್‌ ಛಾಯಾಗ್ರಹಣವಿದೆ.
ಸಿನಿಮಾ ಶೀರ್ಷಿಕೆ ಅನಾವರಣ ಮಾಡುತ್ತಲೇ ಇದೇ ಶನಿವಾರ ಟೀಸರ್‌ ಬಿಡುಗಡೆಯಾಗಲಿದೆ ಎಂದು ತಂಡ ಹೇಳಿದೆ.‌

Categories
ಸಿನಿ ಸುದ್ದಿ

02 ಇದು ಪುನೀತ್ ರಾಜ್‍ಕುಮಾರ್ ಮೆಚ್ಚಿದ ಕಥೆ: ಏಪ್ರಿಲ್ 19ಕ್ಕೆ ರಿಲೀಸ್

ಸದಾ ಹೊಸಬರ ಹೊಸ ಪ್ರಯತ್ನಗಳಿಗೆ ಬೆನ್ನು ತಟ್ಟುವ ಕೆಲಸವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಪುನೀತ್ ರಾಜಕುಮಾರ್ ಮಾಡಿಕೊಂಡು ಬರುತ್ತಿದ್ದರು. ಈಗ ಆ ಕೆಲಸವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “O2” ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಇದೇ ಏಪ್ರಿಲ್ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಪುನೀತ್ ರಾಜಕುಮಾರ್ ಅವರು ಕೇಳಿ ಮೆಚ್ಚಿಕೊಂಡ ಕೊನೆಯ ಸಿನಿಮಾ ಕಥೆ.

“ಮಾಯಾಬಜಾರ್” ಚಿತ್ರದ ರಾಧಾಕೃಷ್ಣ ಅವರ ಮೂಲಕ ನಮಗೆ ಪುನೀತ್ ರಾಜಕುಮಾರ್ ಅವರ ಪರಿಚಯವಾಯಿತು. ಈ ಚಿತ್ರದ ಕಥೆ ಕೇಳಿದ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿರ್ಮಾಣಕ್ಕೆ ಮುಂದಾದರು. “O2”, ಪ್ರಮುಖವಾಗಿ ಮೆಡಿಕಲ್ ಕುರಿತಾದ ಸಿನಿಮಾ. ಹೃದಯ ಸ್ತಂಭನವಾಗಿ ಸಾವಿನಂಚಿಗೆ ತಲುಪಿದ ವ್ಯಕ್ತಿಯನ್ನು “02” ಡ್ರಗ್ ಮೂಲಕ ಬದುಕಿಸಬಹುದು. ಆ ಹೊಸ ಆವಿಷ್ಕಾರವನ್ನು ನಮ್ಮ ಚಿತ್ರದಲ್ಲಿ ನಾಯಕಿ ಶ್ರದ್ದಾ(ಆಶಿಕಾ ರಂಗನಾಥ್) ಮಾಡುತ್ತಾರೆ. “O2” ಡ್ರಗ್ ಕುರಿತು ಸಂಶೋಧನೆ ನಡೆಸುವಾಗ ಆಕೆ ಸಾಕಷ್ಟು ಸವಾಲುಗಳನ್ನು ಎದರಿಸುತ್ತಾರೆ.

ಇದಷ್ಟೇ ಅಲ್ಲದೆ ನಮ್ಮ ಚಿತ್ರದಲ್ಲಿ ಪ್ರೀತಿ, ಅನಿರೀಕ್ಷಿತ ತಿರುವುಗಳು ಹಾಗೂ ಮನರಂಜನೆ ಕೂಡ ಇದೆ. ಕನ್ನಡದಲ್ಲಿ ಈ ರೀತಿಯ ಕಥೆ ವಿರಳ ಎನ್ನಬಹದು. ಅವಕಾಶ ನೀಡಿದ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು ಎಂದರು ನಿರ್ದೇಶಕ ದ್ವಯರಾದ ಪ್ರಶಾಂತ್ ರಾಜ್ ಹಾಗೂ ರಾಘವ್ ನಾಯಕ್. ರಾಘವ್ ನಾಯಕ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ ಕೂಡ.

ಇದು ಅಪ್ಪು ಅವರು ಇದ್ದಾಗ ಕೇಳಿದ ಕಥೆ ಎಂದು ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಾನು ಹಾಗೂ ಅವರು ಇಬ್ಬರು ಒಟ್ಟಿಗೆ ಈ ಕಥೆ ಕೇಳಿದ್ದೆವು. ಇದು ಅಪ್ಪು ಅವರು ಕೇಳಿದ ಕೊನೆಯ ಕಥೆ. “O2” ಈಗ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಹಾಡು ಹಾಗೂ ಕ್ಕೈಮ್ಯಾಕ್ಸ್ ನನಗೆ ಬಹಳ ಇಷ್ಟವಾಯಿತು. ಸದ್ಯದಲ್ಲೇ ಎರಡು ಚಿತ್ರಗಳನ್ನು ನಮ್ಮ ಸಂಸ್ಥೆಯಿಂದ ಆರಂಭಿಸುತ್ತಿದ್ದೇವೆ‌. ಏಪ್ರಿಲ್ 19 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಮ್ಮ ಇಡೀ ಕುಟುಂಬದವರು ರಾಜಕುಮಾರ್ ಅವರ ಕುಟುಂಬದ ಅಪ್ಪಟ್ಟ ಅಭಿಮಾನಿಗಳು. ಅಂತಹುದರಲ್ಲಿ ನನಗೆ ಪುನೀತ್ ರಾಜಕುಮಾರ್ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವ ಆವಕಾಶ ಸಿಕ್ಕಾಗ ತುಂಬಾ ಸಂತೋಷವಾಯಿತು. ನನ್ನದು ಈ ಚಿತ್ರದಲ್ಲಿ ಎನ್ ಆರ್ ಐ ವೈದ್ಯನ ಪಾತ್ರ ಎಂದು ನಾಯಕ ಪ್ರವೀಣ್ ತೇಜ್ ತಿಳಿಸಿದರು.

ಶ್ರದ್ದಾ ನನ್ನ ಪಾತ್ರದ ಹೆಸರು. ನಾನು ಕೂಡ ಈ ಚಿತ್ರದಲ್ಲಿ ವೈದ್ಯೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟಿ ಆಶಿಕಾ ರಂಗನಾಥ್. ಸಂಗೀತ ನಿರ್ದೇಶಕ ವಿವಾನ್ ರಾಧಾಕೃಷ್ಣ ಹಾಗೂ ನಟ ಪುನೀತ್ ಬಾ ಉಪಸ್ಥಿತರಿದ್ದರು.

ಪುಟ್ಟಸ್ವಾಮಿ ಕೆ.ಬಿ ಹಾಗೂ ಸತೀಶ್ ವಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ “O2” ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ, ಪುನೀತ್ ಬಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ರತ್ನನಿಗೆ ಅಪ್ಪು ಆಪ್ತರ ಸಾಥ್: ಹಾಡು ಹೊರಬಂತು

ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ “ರತ್ನ” ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಇತ್ತೀಚಿಗೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಒಂದೊಂದು ಹಾಡನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಹಾಗೂ ಅವರ ಹತ್ತಿರದ ಒಡನಾಡಿಗಳು ಬಿಡುಗಡೆ ಮಾಡಿದ್ದು ವಿಶೇಷ. “ಅಪ್ಪು” ವೆಂಕಟೇಶ್, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಪುನೀತ್ ಅವರ ಅಂಗರಕ್ಷಕರಾಗಿದ್ದ ಚಲಪತಿ, ಹುಬ್ಳಳಿಯಿಂದ ಬಂದಿದ್ದ ರಘುಪತಿ ಹಾಗೂ ಮಾರುತಿ ಅವರು “ರತ್ನ” ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.

“ರತ್ನ” ಕೂಡ ಅಪ್ಪು ಅಭಿಮಾನಿಯ ಕುರಿತಾದ ಚಿತ್ರವಾಗಿದೆ. ಹಾಡುಗಳನ್ನು ಬಿಡುಗಡೆ ಮಾಡಿದ್ದ ಅಷ್ಟು ಜನ ಜನ ಅಭಿಮಾನಿಗಳು ಹಾಗೂ ಒಡನಾಡಿಗಳು ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾದರು. ಪುನೀತ್ ರಾಜಕುಮಾರ್ ಅಭಿಮಾನಿಗಳು ಈ ಚಿತ್ರವನ್ನು ತಪ್ಪದೇ ನೋಡಿ ಎಂದರು‌.

ಪುನೀತ್ ರಾಜಕುಮಾರ್ ಅವರು ನನಗೆ ಮಾಡಿರುವ ಸಹಾಯ ಹಾಗೂ ಸಹಕಾರ ಅಷ್ಟಿಷ್ಟಲ್ಲ. ಅವರ ಒಳ್ಳೆಯ ಗುಣಗಳೇ, ನನಗೆ ಈ ಚಿತ್ರ ಮಾಡಲು ಸ್ಪೂರ್ತಿ. ನಾನು ಕೂಡ ಅವರ ಅಪ್ಪಟ್ಟ ಅಭಿಮಾನಿ. ಅಪ್ಪು ಅವರನ್ನು ಜನ ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಈ ಚಿತ್ರ ನೋಡಬೇಕು. ಏಕೆಂದರೆ ಇದು ಅಪ್ಪು ಅವರ ಅಭಿಮಾನಿಯ ಕುರಿತಾದ ಚಿತ್ರ. “ರತ್ನ” ಚಿತ್ರದ ಹಾಡುಗಳನ್ನು ಅಪ್ಪು ಅವರ ಅಭಿಮಾನಿಗಳು ಹಾಗೂ ಅವರ ಹತ್ತಿರದ ಒಡನಾಡಿಗಳಿಂದ ಬಿಡುಗಡೆ ಮಾಡಿಸುವ ಹಂಬಲವಿತ್ತು. ಸತೀಶ್ ಬಾಬು ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಅಭಿಮಾನಿಗಳಿಗೆ ನನ್ನ ಧನ್ಯವಾದ. ಏಪ್ರಿಲ್ 19 ಚಿತ್ರ ಬಿಡುಗಡೆಯಾಗಲಿದೆ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಬಸವರಾಜ್ ಬಳ್ಳಾರಿ.

ನಾಯಕ ವರ್ಧನ್, ಸಂಕಲನ ಕಾರ ಹಾಗೂ ನಟ ನಾಗೇಂದ್ರ ಅರಸ್, ನಟ ಅಮಿತ್ ರಾವ್, ವಿತರಕ ವಿಜಯ್ ಕುಮಾರ್ ಹಾಗೂ ಸಹ ನಿರ್ಮಾಪಕರಾದ ಮಂಜುನಾಥ್,ಕಲ್ಕೆರೆ ರಾಘವೇಂದ್ರ ಕರೂರ್ “ರತ್ನ” ಚಿತ್ರದ ಕುರಿತು ಮಾತನಾಡಿದರು.

ಹರ್ಷಲ ಹನಿ ವರ್ಧನ್, ಆನಂದ್ ಅಪ್ಪು, ಬಾಲರಾಜ್ ಒಡೆಯರ್, ನಾಗೇಂದ್ರ ಅರಸ್, ಅಮಿತ್ ರಾವ್,ವಿಜಯ್ ಚಂಡೂರ್. ಮಹೇಶ್ ಬಾಬು.ಸಾರಿಕಮ್ಮ, ರಾಣಿ ಬಸವರಾಜ್, ಸುಚಿತ್ ಚೌವ್ಹಾಣ್, ರಾಮು ಕರೂರ್, ಮಂಜು ದೈವಜ್ಞ.ಜಗದೀಶ್ ಕೊಪ್ಪ ಮುಂತಾದವರು “ರತ್ನ” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ನಾಡಪ್ರಭು ಕೆಂಪೇಗೌಡ ಸಿನಿಮಾ ಅನೌನ್ಸ್: ಇದು ದಿನೇಶ್ ಬಾಬು ನಿರ್ದೇಶನದ‌ ಚಿತ್ರ; ಕಿರಣ್ ತೋಟಂಬೈಲ್ ನಿರ್ಮಾಣ

ಕನ್ನಡ ಸಿನಿಮಾ ರಂಗದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನವನ್ನು ಆಧರಿಸಿದ ಸಂಪೂರ್ಣ ಸಿನಿಮಾ ಬಾರದೇ ಇದ್ದರೂ, ಕೆಲವು ಚಿತ್ರಗಳಲ್ಲಿ ಇವರ ಝಲಕ್‌ಗಳು ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ ಹಾಡುಗಳಲ್ಲೂ ಮಿಂಚಿದ್ದಾರೆ. ಅಲ್ಲದೇ, ಕೆಂಪೇಗೌಡರ ಪ್ರತಿಮೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೆಣೆದಿರುವ ಹಲವು ದೃಶ್ಯಗಳನ್ನೂ ಕಾಣಬಹುದಾಗಿದೆ. ಆದರೀಗ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರವರ ಜೀವನ ಚರಿತ್ರೆ ಸಿನಿಮಾವಾಗುತ್ತಿದೆ. ಬೆಂದಕಾಳೂರು ಕಟ್ಟಿದ ನಾಡಪ್ರಭುವಿನ‌ ಕಥೆಯನ್ನು ತೆರೆಗೆ ತರುವ ಕಾಲ ಕೂಡಿ ಬಂದಿದೆ. ಧರ್ಮಬೀರು ನಾಡಪ್ರಭು ಕೆಂಪೇಗೌಡ ಎಂಬ ಶೀರ್ಷಿಕೆಯಡಿ ಸಿನಿಮಾ ಘೋಷಣೆಯಾಗಿದೆ.

ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಸಾಹಸ ಕಥೆಯನ್ನು ಸಿನಿಮಾ ರೂಪಕ್ಕೆ ಇಳಿಸುತ್ತಿರುವುದು ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ದಿನೇಶ್ ಬಾಬು.

ಇನ್ಸ್‌ಪೆಕ್ಟರ್‌ ವಿಕ್ರಂ, ಅಭಿ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ದಿನೇಶ್ ಬಾಬು ಧರ್ಮಬೀರು ನಾಡಪ್ರಭು ಕೆಂಪೇಗೌಡ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಿದ್ರೆ ನಾಡಪ್ರಭು ಕೆಂಪೇಗೌಡರಾಗಿ ಬಣ್ಣ ಹಚ್ಚುತ್ತಿರುವವರು ಯಾರು ಅನ್ನೋದನ್ನು ಸದ್ಯಕ್ಕೆ ಚಿತ್ರತಂಡ ರಿವೀಲ್ ಮಾಡಿಲ್ಲ. ಜನಪ್ರಿಯ ನಟರೊಬ್ಬರು ಕೆಂಪೇಗೌಡರಾಗಿ ರಾರಾಜಿಸಲಿದ್ದಾರೆ ಎನ್ನುತ್ತದೆ ಚಿತ್ರತಂಡ. ಸದ್ಯ ಆ ನಟ ತಮ್ಮ ಪಾತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದು, ಮುಂದಿನ ದಿನಗಳಲ್ಲಿ ಅವರನ್ನು ನಿಮ್ಮ ಮುಂದೆ ಪರಿಚಯಿಸುವುದಾಗಿ ಚಿತ್ರತಂಡ ತಿಳಿಸಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಕಿರಣ್ ತೋಟಂಬೈಲ್ ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಂಪೇಗೌಡ ಮೆಡಿಕಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುವಾಗಲೇ ಮುಂದೊಂದು ದಿನ ಕೆಂಪೇಗೌಡರ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ. ಅದರಂತೆ ಇಂದು ಧರ್ಮಬೀರು ನಾಡಪ್ರಭು ಕೆಂಪೇಗೌಡರ ಸಿನಿಮಾ ನಿಮ್ಮ ಮುಂದೆ ತರಲು ಸಜ್ಜಾಗಿದ್ದಾರೆ.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕಥೆ ಬರೆದಿದ್ದು, ಸಂಕೇತ್ ಎಂವೈಎಸ್ ಈ ಸಿನಿಮಾಗೆ ಕ್ಯಾಮೆರಾ ಹಿಡಿಯುತ್ತಿದ್ದು, ಉಜ್ವಲ್ ಕುಲಕರ್ಣಿ ಸಂಕಲನ, ನಿರ್ಮಾಪಕರಾದ ಕಿರಣ್ ತೋಟಂಬೈಲ್ ಸಂಗೀತ ಒದಗಿಸುತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಹಾಗೂ ಸಂತೋಷ್ ನಾಯಕ್ ಸಾಹಿತ್ಯ ಹಾಡುಗಳಿಗಿದ್ದು, ಮಾಸ್ತಿ ಹಾಗೂ ರಘು‌ ನಿಡುವಳ್ಳಿ ಸಂಭಾಷಣೆ ಧರ್ಮಬೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕಿದ್ದು, ಚೇತನ್ ರಾಜ್ ನಿರ್ಮಾಣ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಕನ್ನಡ ಹಾಗೂ‌‌‌ ಇಂಗ್ಲೀಷ್ ಭಾಷೆಯಲ್ಲಿ ಚಿತ್ರ‌ ನಿರ್ಮಾಣವಾಗಲಿದ್ದು, ಮೇ ಅಥವಾ ಜೂನ್ ತಿಂಗಳಲ್ಲಿ‌ ಮುಹೂರ್ತ ನಡೆಯಲಿದೆ. ಮುಹೂರ್ತ ಮುಗಿಸಿಕೊಂಡು ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

Categories
ಸಿನಿ ಸುದ್ದಿ

ಕನ್ನಡದ ಈ ಬಚ್ಚನ್ ಈಗ ಬಹು ಭಾಷೆಯ ಅಚ್ಚೇ ವಿಲನ್!

ವೃತ್ತಿ ಬದುಕಿಗೆ ತಿರುವು ಕೊಟ್ಟ ಯುವ ಬುಕ್ಕಿ ಪಾತ್ರ
ಸ್ಯಾಂಡಲ್ವುಡ್ ಟು ಬಾಲಿವುಡ್ ಪಯಣ
ಸಖತ್ ಹೈಟು, ಖಡಕ್ ವಾಯ್ಸ್ ಬಚ್ಚನ್ ಜಿಂದಗಿಯ ಕಿಕ್

ಕನ್ನಡ ಚಿತ್ರರಂಗದಲ್ಲಿ ಖಳನಟರ ಸಂಖ್ಯೆಗೇನೂ ಕಮ್ಮಿ ಇಲ್ಲ. ದಿನ ಕಳೆದಂತೆ ಹೊಸ ಖಳನಟರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಅಪ್ಪಟ ಕನ್ನಡದ ಸಿನಿಮಾ ಪ್ರೇಮಿ ಎಂದೆನಿಸಿಕೊಂಡಿರುವ ಖಳನಟರೊಬ್ಬರು ಇದೀಗ ಶೈನ್ ಆಗುತ್ತಿದ್ದಾರೆ. ಹೌದು ಅದು ಬೇರಾರೂ ಅಲ್ಲ ಬಚ್ಚನ್.

ಅರೇ ಹೆಸರೇ ಬಚ್ಚನ್ ಅಂತಾನಾ ಎಂಬ ಪ್ರಶ್ನೆ ಬರಬಹುದು. ಯೆಸ್ ಇವರು ಆ ಅಮಿತಾಬ್ ಬಚ್ಚನ್ ಅಲ್ಲ, ಕನ್ನಡದ ಬಚ್ಚನ್. ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಟರಾಗಿದ್ದ ಇವರು ದೂರದ ಮುಂಬೈಗೂ ಜಿಗಿದವರು. ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಒಂದಷ್ಟು ಸಿನಿಮಾ ಮಾಡಿದವರು. ಸದ್ಯ ಖಳನಟರಾಗಿಯೇ ಗುರುತಿಸಿಕೊಂಡಿರುವ ಬಚ್ಚನ್ ಈಗ ಸುದ್ದಿಯಲ್ಲಿದ್ದಾರೆ.

ಯಾರು ಈ ಬಚ್ಚನ್ ಎಂಬ ಪ್ರಶ್ನೆಗೆ ‘ಯುವ’ ಸಿನಿಮಾ‌ಉತ್ತರ. ಹೌದು ಆ ಸಿನಿಮಾ‌ ನೋಡಿದವರಿಗೆ ಇವರ ಪರಿಚಯ ಇದ್ದೇ ಇರುತ್ತೆ. ಯುವ ಚಿತ್ರದಲ್ಲಿ ಬುಕ್ಕಿ ಪಾತ್ರದ ಮೂಲಕ ಗಮನ ಸೆಳೆದ ಬಚ್ಚನ್ ಆ ಪಾತ್ರ ಮೂಲಕ ನನ್ನ ವೃತ್ತಿ ಬದುಕಿಗೊಂದು ತಿರುವು ಸಿಕ್ಕಿದೆ ಎಂಬ ಖುಷಿ ಹೊರಹಾಕುತ್ತಾರೆ.

ಬಚ್ಚನ್ ಆರಡಿ ಕಟೌಟ್. ಪಗರ್ ದಸ್ತಾದ ಮೈಕಟ್ಟು. ಖಡಕ್ ವಾಯ್ಸ್. ಆರಂಭದಲ್ಲಿ ಬಾಲಿವುಡ್ ಅಂಗಳದಲ್ಲೇ ಕಾಲೂರಿದ್ದ ಬಚ್ಚನ್ ಮತ್ತೆ ಅವಕಾಶ ಹುಡುಕಿ ಬಂದಿದ್ದರಿಂದ ಪುನಃ ಕನ್ನಡಕ್ಕೆ ಬಂದಿದ್ದಾರೆ. ಹಾಗೆ ನೋಡಿದರೆ, ಬಚ್ಚನ್ ಬರೀ ಕನ್ನಡಕ್ಕೆ ಸೀಮಿತವಾಗಿಲ್ಲ. ಅವರು ಪ್ಯಾನ್ ಇಂಡಿಯಾ ಸಿನಿಮಾಗಳ ವಿಲನ್.

ಕನ್ನಡದ ಸಿನಿಮಾಗಳ ಜೊತೆ ಧಾರಾವಾಹಿ, ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ರಿಲೀಸ್ ಯುವರಾಜ್‌ಕುಮಾರ್‌ ನಟನೆಯ ‘ಯುವ’ ಚಿತ್ರದಲ್ಲಿ ಬಚ್ಚನ್ ಅವರ ಪಾತ್ರದ ಮೂಲಕ ಗಮನಸೆಳೆದಿದ್ದಾರೆ.

‘ಯುವ ಚಿತ್ರದಲ್ಲಿ ಅವರು ಬುಕ್ಕಿ ಪಾತ್ರ ಮಾಡಿದ್ದಾರೆ. ಅವರ ಪಾತ್ರದಿಂದಲೇ ಚಿತ್ರದ ನಾಯಕ ಕ್ರೀಡೆಯಿಂದ ದೂರ ಆಗುವ ದೃಶ್ಯವಿದೆ. ಈ ಪಾತ್ರದಲ್ಲಿ ಅವರನ್ನು ನೋಡಿ ತುಂಬಾ ಜನ ನಾನು ಉತ್ತರ ಭಾರತದವನು ಅಂದುಕೊಂಡಿದ್ದು ನಿಜ. ಆದರೆ ಬಚ್ಚನ್ ಅವರು ಪಕ್ಕಾ ಕನ್ನಡಿಗ. ಬಾಲಿವುಡ್ ಗೆ ಹೋಗುವ ಮುನ್ನ ಕನ್ನಡದ ಕಿರುತೆರೆಯಲ್ಲಿ ನಟಿಸುತ್ತಿದ್ದರು. ನಂತರ ಹಿರಿತೆರೆಗೂ ಕಾಲಿಟ್ಟರು. ಈಗ ಯುವ ಚಿತ್ರದಲ್ಲಿ ಅವರು ಮಾಡಿರುವ ಬುಕ್ಕಿ ಪಾತ್ರ ಅವರೇ ಹೇಳುವಂತೆ ಅವರ ವೃತ್ತಿ ಪಯಣಕ್ಕೊಂದು ಹೊಸ ತಿರುವು ಕೊಟ್ಟಿದೆ. ಈ ಸಿನಿಮಾ ನಂತರ ಅವರಿಗೆ ಎರಡ್ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದಿದೆ ಎಂಬುದು ಬಚ್ಚನ್‌ ಮಾತು.

ಅಂದಹಾಗೆ ಬಚ್ಚನ್ ಮೈಸೂರಿನ ಎಚ್‌ ಡಿ ಕೋಟೆ ಮೂಲದವರು. ಅವರು ಸಿನಿಮಾಗೆ ಕಾಲಿಟ್ಟಿದ್ದೇ ನಿರ್ಮಾಪಕ ಆಗಬೇಕೆಂದು. ಆದರೆ, ಅವರ ಹೈಟು ಮತ್ತು ದೇಹ ನೋಡಿದ ಕೆಲವರು ಕಿರುತೆರೆಯಲ್ಲಿ ನಟನೆಗೆ ಅಕಾಶಗಳು ಕೊಟ್ಟರು.

‘ಮುಕ್ತ ಮುಕ್ತ’, ‘ರಂಗೋಲಿ’, ‘ರಥಸಪ್ತಮಿ’, ‘ನಮ್ಮ ಲಚ್ಚಿ’, ‘ಜೋಗುಳ’ ಇತರೆ ಧಾರಾವಾಹಿಗಳಲ್ಲಿ ನಟಿಸಿದರು. ಅಲ್ಲೆಲ್ಲ ಬಹುತೇಕ ವಿಲನ್ ಆಗುಯೇ ಅಬ್ಬರಿಸಿದರು.

‘ಜೋಗಯ್ಯ’ ಚಿತ್ರದಲ್ಲಿ ಪೊಲೀಸ್‌ ಪಾತ್ರ ಮಾಡುವ ಮೂಲಕ ಹಿರಿತೆರೆಗೂ ಕಾಲಿಟ್ಟರು. ಮುಂದೆ ‘ಬ್ರಹ್ಮ’, ‘ಪಾಪ್ ಕಾರ್ನ್ ಮಂಕಿ ಟೈಗರ್’, ‘ಕಾಟೇರ’, ‘ಒಂದು ಸರಳ ಪ್ರೇಮ ಕತೆ’ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಈಗ ಬಚ್ಚನ್ ಒಂದಷ್ಟು ಸಿಮಾಗಳಲ್ಲಿ ನಟಿಸುತ್ತಿದ್ದಾರೆ. ರವಿಚಂದ್ರನ್‌ ಅವರ ‘ಜಡ್ಜ್‌ಮೆಂಟ್‌’ ಚಿತ್ರದಲ್ಲಿ ಇವರೇ ಮೇನ್ ವಿಲನ್‌. ಹಿಂದಿಯಲ್ಲಿ ವರುಣ್‌ ಧವನ್‌ ಜತೆಗೆ ‘ಭೇಡಿಯಾ 2’, ಮರಾಠಿಯಲ್ಲಿ ‘ಸುದಾಗಡ್‌ 07’ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ ಮೇಲೆ ಈಗಷ್ಟೆ ‘ಬಿಹು ಅಟ್ಯಾಕ್‌’ ಚಿತ್ರಕ್ಕೆ ವಿಲನ್‌ ಆಗಿದ್ದಾರೆ.

ಅದೇನೆ ಇರಲಿ ಬಚ್ಚನ್ ಅವರಿಗೆ ಅವರ ಹೈಟು ಮತ್ತು ವಾಯ್ಸ್ ವರವಾಗಿದೆ. ಅವರು ಮಾತನಾಡುವ ಶೈಲಿ, ಬಾಡಿ ಲಾಗ್ವೇಜ್‌ ಹಾಗೂ ಅವರ ಔಟ್‌ ಲುಕ್‌ ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಸಲೀಸಾಗಿ ಅವಕಾಶಗಳು ಸಿಗುತ್ತಿವೆ.
ತೆರೆಮೇಲೆ ವಿಲನ್ ಆಗಿ ನೋಡುಗರಿಗೆ ಕೋಪ ತರಿಸಿದರೂ ತೆರೆ ಹೀಮದೆ ಮೃದು ಸ್ವಭಾವದ ವ್ಯಕ್ತಿತ್ವ ಇರುವ ಬಚ್ಚನ್, ತಾನು ಖಳನಟನಾಗಿ ಗಟ್ಟಿನೆಲೆ ಕಾಣಬೇಕು ಎಂದಷ್ಟೇ ಹೇಳುತ್ತಾರೆ. ಅವರ ಕನಸುಗಳು ಸಾಕಾರವಾಗಲಿ ಅನ್ನೋದು ‘ಸಿನಿಲಹರಿ’ ಆಶಯ.

Categories
ಸಿನಿ ಸುದ್ದಿ

ವೆಂಕ್ಯಾ ಸಿನಿಮಾಗೆ ಶೀಮ್ಲಾ ಬೆಡಗಿ ಎಂಟ್ರಿ: ಪವನ್ ಒಡೆಯರ್ ನಿರ್ಮಾಣದ ಚಿತ್ರಕ್ಕೆ ರೂಪಾಲಿ ಸೂದ್ ಆಗಮನ

ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ಹೊಸ ಸಿನಿಮಾ ವೆಂಕ್ಯಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಬಾರಿ ಸಾಗರ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದು, ಇದೀಗ ವೆಂಕ್ಯಾ ಬಳಗಕ್ಕೆ ಯುವ ನಟಿಯರೊಬ್ಬರ ಆಗಮನವಾಗಿದೆ. ಶಿಮ್ಲಾ ಸುಂದರಿ ರೂಪಾಲಿ ಸೂದ್ ಸಾಗರ್ ಪುರಾಣಿಕ್ ಚಿತ್ರದಲ್ಲಿ ನಟಿಸ್ತಿದ್ದು, ಈ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

ಮೂಲತಃ ಶಿಮ್ಲಾದವರಾದ ರೂಪಾಲಿ ಕಾಲೇಜು ದಿನಗಳಲ್ಲಿದ್ದಾಗಲೇ ಮಾಡೆಲಿಂಗ್ ಅಖಾಡಕ್ಕೆ ಇಳಿದಿದ್ದರು. ಮಾಡೆಲಿಂಗ್ ಜೊತೆ ಜೊತೆಯಲಿ ಹಲವು ಮ್ಯೂಸಿಕ್ ಆಲ್ಬಂಗಳಲ್ಲಿ ನಟಿಸಿರುವ ಈ ಶಿಮ್ಲಾ ಚೆಲುವೆ, ಹಾರ್ಡಿ ಸಂಧು ಅವರೊಂದಿಗಿನ ಸೂಪರ್ ಹಿಟ್ ಹಾಡು’ಹಾರ್ನ್ ಬ್ಲೋ’ನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ವೆಂಕ್ಯಾ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರೂಪಾಲಿ ಈಗಾಗಲೇ ವೆಂಕ್ಯಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಅವರು ಹಿಮಾಚಲದ ಪಹಾಡಿ ಹುಡುಗಿಯಾಗಿ ನಟಿಸುತ್ತಿದ್ದಾರೆ. ಶೂಟಿಂಗ್ ಅನುಭವ ಹಂಚಿಕೊಂಡಿರುವ ರೂಪಾಲಿ, ‘ನಾವು ಇತ್ತೀಚೆಗೆ ಮನಾಲಿಯ ಮುಂದೆ ಕೈಲಾಂಗ್ನಲ್ಲಿ, ಪರ್ವತಗಳ ನಡುವೆ ಸುಂದರವಾದ ಸ್ಥಳದಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದೇವೆ. ಇದು ನನ್ನ ಸಿನಿಮಾ ವೃತ್ತಿಜೀವನಕ್ಕೆ ಅದ್ಭುತ ಆರಂಭ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಡೊಳ್ಳು ಸಿನಿಮಾ ನಿರ್ಮಾಣ ಮಾಡಿದ್ದ ಪವನ್ ಒಡೆಯರ್ ವೆಂಕ್ಯಾನಿಗೂ ಸಾಥ್ ಕೊಟ್ಟಿದ್ದಾರೆ. ಒಡೆಯರ್ ಫಿಲ್ಮ್ಸ್ ನಡಿ ತಯಾರಾಗ್ತಿರುವ ಈ ಚಿತ್ರಕ್ಕೆ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಕೂಡ ಹಣ ಹಾಕಿದ್ದಾರೆ. ಉತ್ತರ ಕರ್ನಾಟಕವನ್ನು ಕಥೆ ಆಧಾರಿಸಿ ಮೂಡಿ ಬರ್ತಿರುವ ವೆಂಕ್ಯಾ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀನಿಧಿ ಡಿಎಸ್ ಬರೆದಿದ್ದಾರೆ, ಪ್ರಣವ್ ಮುಲೆ ಅವರ ಛಾಯಾಗ್ರಹಣ ಮತ್ತು ಹೇಮಂತ್ ಜೋಯಿಸ್ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

ನ್ಯಾಚುರಲ್ ಸ್ಟಾರ್ ನಾನಿ ಹೊಸ ಸಿನಿಮಾ: ಮತ್ತೆ ದಸರಾ ಜೋಡಿ ಮೋಡಿಗೆ ಸಜ್ಜು

ದಸರಾ ಮೂಲಕ ಧಮಾಕ ಎಬ್ಬಿಸಿದ್ದ ನ್ಯಾಚುರಲ್ ಸ್ಟಾರ್ ನಾನಿ ಮತ್ತೊಮ್ಮೆ ಅದೇ ತಂಡದ ಜೊತೆ ಕೈ ಜೋಡಿಸಿದ್ದಾರೆ. ನಾನಿ ಅಭಿನಯಿಸ್ತಿರುವ 33ನೇ ಸಿನಿಮಾ ಘೋಷಣೆಯಾಗಿದೆ. ದಸರಾಗೆ ಆಕ್ಷನ್ ಕಟ್ ಹೇಳಿ ಮೊದಲ ಚಿತ್ರದಲ್ಲೇ ನಿರ್ದೇಶಕರಾಗಿ ಖ್ಯಾತಿ ಗಳಿಸಿರುವ ಶ್ರೀಕಾಂತ್ ಒಡೆಲಾ, ನಿರ್ಮಾಪಕ ಸುಧಾಕರ್ ಚೆರುಕುರಿ ಹಾಗೂ ನಾನಿ ಎರಡನೇ ಬಾರಿಗೆ ಒಂದಾಗಿದ್ದಾರೆ. ಈ ಕ್ರೇಜಿ ಕಾಂಬೋದ ಹೊಸ ಪ್ರಾಜೆಕ್ಟ್ ಫಸ್ಟ್ ಲುಕ್ ರಿವೀಲ್ ಆಗಿದೆ.

ಬಾಯಲ್ಲಿ ಸಿಗರೇಟ್, ಸಖತ್ ರಗಡ್ ಲುಕ್ ನಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಪೋಸ್ಟರ್ ನಲ್ಲಿ ಸಾಕಷ್ಟು ಸಂಖ್ಯೆಯ ಜನರನ್ನು ಕೂಡ ತೋರಿಸಲಾಗಿದೆ. ಕ್ರಾಂತಿಯು ಪ್ರಾರಂಭವಾಗುವ ಮೊದಲು ಹಿಂಸಾಚಾರವು ಅದರ ಸರಿಯಾದ ರೂಪವನ್ನು ಪಡೆಯುತ್ತದೆ. ಮತ್ತೊಂದು ಪವರ್ ಪ್ಯಾಕ್ಡ್ ಆಕ್ಷನ್ ನೊಂದಿಗೆ ನಾನಿ ಪರಿಚಯ ಎಂದು ಶ್ರೀಕಾಂತ್ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ತಿಳಿಸಿದ್ದಾರೆ.

ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ (SLV ಸಿನಿಮಾಸ್) ನಡಿ ಸುಧಾಕರ್ ಚೆರುಕುರಿ ನಾನಿ 33ನೇ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ನಾನಿ ಈ ಚಿತ್ರದಲ್ಲಿ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 2025ಕ್ಕೆ ಸಿನಿಮಾ ತೆರೆಗೆ ತರೋದಿಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

‘ದಸರಾ’ ಸಿನಿಮಾ ತೆರೆಕಂಡು ಒಂದು ವರ್ಷವಾಗಿದೆ. ಈ ಖುಷಿಯಲ್ಲಿ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಾಗಿದೆ. ಸದ್ಯ ನಾನಿ 33 ಎಂದು ಟೈಟಲ್ ಇಡಲಾಗಿದೆ. ಕಳೆದ ವರ್ಷ ತೆರೆಗೆ ಬಂದಿದ್ದ ಮಾಸ್ ಆಕ್ಷನ್ ಎಂಟರ್ ಟೈನರ್ ದಸರಾ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಬೇಟೆಯಾಡಿತ್ತು.

Categories
ಸಿನಿ ಸುದ್ದಿ

ಪಿ ಆರ್ ಕೆ ನಿರ್ಮಾಣದ ಹೊಸ ಚಿತ್ರ 02: ಏಪ್ರಿಲ್ 19 ರಿಲೀಸ್

ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಪಿ.ಆರ್.ಕೆ ಪ್ರೊಡಕ್ಷನ್ಸ್ ಇದೀಗ ಮತ್ತೊಮ್ಮೆ ಸಿನಿ ಪ್ರೇಕ್ಷಕರನ್ನು “O2” ಎಂಬ ಹೊಸ ಚಿತ್ರದ ಮೂಲಕ ರಂಜಿಸಲು ಸಜ್ಜಾಗಿದೆ. ಏಪ್ರಿಲ್ 19ರಂದು ತೆರೆ ಕಾಣಲು ಸಜ್ಜಾಗಿರುವ “O2” , ಒಂದು ಕುತೂಹಲಕಾರಿ ಮೆಡಿಕಲ್ ಥ್ರಿಲ್ಲರ್. ಈ ಕಥೆಯು ಕೇವಲ‌ ಥ್ರಿಲ್ಲರ್ ಅಂಶಗಳನ್ನಷ್ಟೇ ಅಲ್ಲದೆ, ಪ್ರೀತಿ-ಪ್ರೇಮದ ಅಂಶಗಳನ್ನೂ ಒಳಗೊಂಡಿದೆ. ಇದೊಂದು “ಲವ್ ಥ್ರಿಲ್ಲರ್” ಎನ್ನಬಹುದು.


ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿರುವ‌ ಪಿ.ಆರ್.ಕೆ ಪ್ರೊಡಕ್ಷನ್ಸ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರಲ್ಲಿ‌ ನಿಸ್ಸೀಮರು. “O2” ಪಿ.ಆರ್.ಕೆ ಬ್ಯಾನರ್ ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ನಿರ್ಮಾಣದ ಹತ್ತನೇ ಚಿತ್ರ.
ಚಿತ್ರದಲ್ಲಿ ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಾಗೂ ಚಿತ್ರವನ್ನು ಪ್ರಶಾಂತ್ ರಾಜ್ ಮತ್ತು ಚಿತ್ರದ‌ ನಾಯಕ ರಾಘವ್ ನಾಯಕ್ ನಿರ್ದೇಶನವಿದೆ.


“O2” ಬಹಳ ವಿಭಿನ್ನ ಕಥಾಹಂದರದ ಚಿತ್ರ. ಸಾಯುತ್ತಿರುವವರನ್ನು ಬದುಕಿಸುವುದೇ ವೈದ್ಯರ ಆದ್ಯ ಕರ್ತವ್ಯ ಎಂದು ನಂಬುವ ಶ್ರದ್ಧಾ (ಆಶಿಕಾ ರಂಗನಾಥ್), ತನ್ನ ಸಂಶೋಧನೆಯ ಫಲವಾದ
“O2” ಎಂಬ ಡ್ರಗ್ ಮೂಲಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಈ ಹಾದಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ.

ಈ ಎಲ್ಲಾ ಅಡೆತಡೆಗಳನ್ನು ಮೀರಿ ಗುರಿ ತಲುಪಲು ಶ್ರದ್ಧಾಳಿಗೆ ಸಾಧ್ಯವಾಗುವುದೋ ಇಲ್ಲವೋ ಎಂಬುದು ಕಥೆ. ಒಟ್ಟಾರೆ “O2” ಚಿತ್ರ ಮನರಂಜನೆ, ವಿಜ್ಞಾನ, ಪ್ರೀತಿ, ಅನಿರೀಕ್ಷಿತ ತಿರುವುಗಳ ಸಮಾಗಮ.

ನಿರ್ಮಾಪಕಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹೇಳುವಂತೆ, “O2″ ಎಂಬ ವಿಭಿನ್ನವಾದ ಚಿತ್ರವನ್ನು ನಿರ್ಮಿಸಿರುವುದು ನಮಗೆ ಹೆಮ್ಮೆ ತಂದಿದೆ. ಈ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಕಾತುರದಿಂದ ಕಾಯುತ್ತಿದ್ದೇನೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಹೊಂದಿರುವ ನಮ್ಮ ಸಂಸ್ಥೆಯಿಂದ ಮೂಡಿಬರುತ್ತಿರುವ ಈ‌ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ ಹಾಗೂ ಭಾರಿ‌ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ನಂಬಿದ್ದೇನೆ” ಎನ್ನುತ್ತಾರೆ.

error: Content is protected !!