Categories
ಸಿನಿ ಸುದ್ದಿ

ಹೊಸಬರ ಖಾಸಗಿ ವಿಷಯಗಳು! ಪುಟಗಳಲ್ಲಿ  ಬಚ್ಚಿಟ್ಟ  ಮಾತು

ಒಂದು ಹೊಸ ಪ್ರಯತ್ನದ ಸಿನಿಮಾ ಇದು…

ದಿನ ಕಳೆದಂತೆ ಕನ್ನಡ ಚಿತ್ರರಂಗ ಮೆಲ್ಲನೆ ರಂಗೇರಿತ್ತಿದೆ. ಹಳಬರು, ಹೊಸಬರು ಸಿನಿಮಾಗಳನ್ನು ಶುರು ಮಾಡುತ್ತಿದ್ದಾರೆ. ಈಗಾಗಲೇ ಕೊರೊನೊ ಹಾವಳಿ ಕೊಂಚ ಕಡಿಮೆ ಆಗುತ್ತಿದ್ದಂತೆಯೇ,, ಒಂದಷ್ಟು ಚಿತ್ರಗಳು ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಹೊಸಬರ ‘ಖಾಸಗಿ ಪುಟಗಳು’ ಚಿತ್ರವೂ ಸೇರಿದೆ.

ಶ್ವೇತಾ, ನಾಯಕಿ

ಹನುಮ ಜಯಂತಿ ದಿನದಂದು ಚಿತ್ರತಂಡ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದೆ.
ಈ ಪೋಸ್ಟರ್ ನೋಡಿದವರಿಗೆ ಇದೊಂದು ವಿಭಿನ್ನ ಪ್ರಯೋಗಾತ್ಮಕ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಅದರಲ್ಲೂ ಪೋಸ್ಟರ್ ನಲ್ಲೇ ಒಂದು ಕಡಲ ದಡಿಯ ಕಥೆ ಎಂಬುದನ್ನೂ ಸಾರುತ್ತೆ.

ವಿಶ್ವ, ನಾಯಕ

ಒಂದು ಕಡಲು, ಒಂದು ದೋಣಿ, ಯಕ್ಷಗಾನ ಕಲಾವಿದರೊಬ್ಬರ ಭಾವಚಿತ್ರ, ಹುಲಿವೇಷದಾರಿ , ಕಾಣುವ ಅಂಚೆ ಡಬ್ಬ, ಲಗೋರಿ ಆಡುತ್ತಿರುವ ಹುಡುಗ, ವಾಲಿಬಾಲ್ ಆಡುತ್ತಿರುವ ಮಂದಿ, ದಡಕ್ಕೆ ದೋಣಿ ಸರಿಸುತ್ತಿರುವ ನಾವಿಕ, ಅಲ್ಲೊಂದು ಕ್ಯಾಮರಾ ಕಣ್ಣು… ಹೀಗೆ ಸೂಕ್ಷ್ಮವಾಗಿ ಗಮನಿಸಿದರೆ ಇವೆಲ್ಲವೂ ಈ ‘ಖಾಸಗಿ ಪುಟಗಳಲ್ಲಿ’ ಕಾಣಸಿಗುತ್ತವೆ.
ಇಂಥದ್ದೊಂದು ವಿಭಿನ್ನ ಎನಿಸುವ ಅರ್ಥಪೂರ್ಣವಾಗಿರುವ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಒಂದಷ್ಟು ಕುತೂಹಲ ಮೂಡಿಸಿದೆ ಚಿತ್ರತಂಡ.
ಅಂದಹಾಗೆ, ಈ ಚಿತ್ರವನ್ನು ಸಂತೋಷ್ ಶ್ರೀಕಂಠಪ್ಪ ನಿರ್ದೇಶನ ಮಾಡುತ್ತಿದ್ದಾರೆ.

ಸಂತೋಷ್ , ನಿರ್ದೇಶಕ

ಮಂಜು ದಿ ರಾಜ್, ವೀಣಾ ದಿ ರಾಜ್, ಮಂಜುನಾಥ್ ಡಿ.ಎಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ವಿಶ್ವಜಿತ್ ರಾವ್ ಛಾಯಾಗ್ರಹಣವಿದೆ. ವಾಸುಕಿ ವೈಭವ್ ಸಂಗೀತವಿದೆ. ಆಶಿಕ್ ಕುಸುಗೊಳಿ ಸಂಕಲನ ಮಾಡಲಿದ್ದಾರೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ, ವಿಶ್ವಜಿತ್ ರಾವ್ ಸಾಹಿತ್ಯವಿದೆ.


ಸದ್ಯಕ್ಕೆ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡಕ್ಕೆ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಇನ್ನು ಈ ಚಿತ್ರಕ್ಕೆ ವಿಶ್ವ ಹೀರೋ. ಈ ಹಿಂದೆ ‘ಗೋಣಿ ಚೀಲ’ ಎಂಬ ಶಾರ್ಟ್ ಫಿಲ್ಮ್ ಮಾಡಿದ್ದ ವಿಶ್ವ ಇಲ್ಲಿ ಹೈಲೆಟ್.

ಅವರಿಗೆ ನಾಯಕಿಯಾಗಿ ಶ್ವೇತಾ ಕಾಣಿಸಿಕೊಂಡಿದ್ದಾರೆ. ಉಡುಪಿ ಸುತ್ತ ಮುತ್ತ ಚಿತ್ರೀಕರಣಗೊಂಡಿದ್ದು, ಇನ್ನು ಹಾಡುಗಳ ಚಿತ್ರೀಕರಣ ಬಾಕಿ ಇದೆ.

Categories
ಸಿನಿ ಸುದ್ದಿ

ಅಪ್ಪನಿಗೆ ಮಗ ನಿರ್ದೇಶನ – ನವಮಿಯಲ್ಲಿ ಎಸ್.ನಾರಾಯಣ್ ನಟನೆ

ಹೀರೋ ತಂದೆಯಾಗಿ ನಾರಾಯಣ್

ಕನ್ನಡ ಚಿತ್ರರಂಗದಲ್ಲಿ ಅಪ್ಪನ ನಿರ್ಮಾಣದಲ್ಲಿ ಮಗ ಹೀರೋ ಆಗಿರುವ ಉದಾಹರಣೆ ಇದೆ. ಅಪ್ಪನ ನಿರ್ದೇಶನದಲ್ಲಿ ಮಗ ನಟಿಸಿದ್ದೂ ಇದೆ. ಮಗನ ನಿರ್ದೇಶನದಲ್ಲಿ ಅಪ್ಪ ಅಭಿನಯಿಸಿದ್ದೂ ಉಂಟು. ಈಗ ಮಗನ ಚೊಚ್ಚಲ ನಿರ್ದೇಶನದಲ್ಲಿ ಅಪ್ಪ ಬಣ್ಣ ಹಚ್ಚಿ ನಟಿಸಿದ್ದು ಸುದ್ದಿಯಾಗಿದೆ.


ಹೌದು, ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಎಸ್ ನಾರಾಯಣ್ ‘ನವಮಿ 9.9.1999’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಾರಾಯಣ್ ಪುತ್ರ ಪವನ್ ಎಸ್ ನಾರಾಯಣ್ ನಿರ್ದೇಶಕರು. ಮಗನ ನಿರ್ದೇಶನದಲ್ಲಿ ಅಪ್ಪ ಅಭಿನಯಿಸಿರುವುದು ವಿಶೇಷ.
ಎಸ್.ನಾರಾಯಣ್ ಈ ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‌ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.‌ ಫೈಟ್ ಹಾಗೂ ಹಾಡುಗಳ ಚಿತ್ರೀಕರಣ ‌ಬಾಕಿ ಉಳಿದಿದೆ. ಬೆಂಗಳೂರು, ಶಿವಗಂಗೆ, ಸಕಲೇಶಪುರದಲ್ಲಿ 40 ದಿನಗಳ ಚಿತ್ರೀಕರಣ ನಡೆದಿದೆ.
ಉತ್ಸಾಹಿ ಯುವಕರ ತಂಡವೊಂದು ಲಾಕ್ ಡೌನ್ ಸಮಯದಲ್ಲಿ ಕಥೆ ಬರೆದಿದ್ದು, ಪವನ್ ಎಸ್‌ ನಾರಾಯಣ್ ಮೊದಲ ಸಲ ಆಕ್ಷನ್ ಕಟ್ ಹೇಳುತ್ತಿದ್ದಾರೆ.


ತಂದೆ ಗರಡಿಯಲ್ಲಿ ಪಳಗಿರುವ ಪವನ್ ಈಗ ಸ್ವತಂತ್ರ ನಿರ್ದೇಶಕನಾಗಿ ಈ ಸಿನಿಮಾದ ಮೂಲಕ ಹೆಜ್ಜೆ ಇಡುತ್ತಿದ್ದಾರೆ.
ಈ ಚಿತ್ರಕ್ಕೆ ನಟ ಯಶಸ್ ಅಭಿ ಹೀರೋ. ಈ ಹಿಂದೆ ‘ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಲ್ಲಿ ಯಶಸ್ ಅಭಿ ‌ನಟಿಸಿದ್ದಾರೆ.

ನಾಯಕ ನಟ ಯಶಸ್ ಅಭಿ ಮತ್ತು ಕೃಷ್ಣ ಗುಡೆಮಾರನ ಹಳ್ಳಿ ಚಿತ್ರಕಥೆ ರಚಿಸಿ, ಪದ್ಮ ಸುಂದರಿ ಕ್ರಿಯೇಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಂದಿನಿ ಗೌಡ ಈ ಚಿತ್ರದ ನಾಯಕಿಯಾಗಿದ್ದಾರೆ.
ಎಸ್.ನಾರಾಯಣ್, ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಸಂದೀಪ್ ಕುಮರ್ ಜಿ.ಎಂ, ಅನುಶ್ರಿ, ಪವಿತ್ರ, ಕುರಿಬಾಂಡ್ ಸುನೀಲ್, ಅರುಣ ಬಾಲರಾಜ್ ಮುಂತಾದವರು ಈ‌ ಚಿತ್ರದಲ್ಲಿದ್ದಾರೆ.
ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗಿರಿಧರ್ ದಿವಾನ್ ಸಂಗೀತ ನಿರ್ದೇಶನವಿದೆ. ನಾಗಾರ್ಜುನ್ ಶರ್ಮ ಸಾಹಿತ್ಯ, ಮಾಸ್ ಮಾದ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನವಿದೆ. ಮೋಹನ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ


ಶಶಿಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಾಹಿಸುತ್ತಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ನವ(ಒಂಭತ್ತು ಜನ) ನಿರ್ದೇಶಕರು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದರು.

Categories
ಸಿನಿ ಸುದ್ದಿ

ಕೋಟಿಗೊಂದೇ ಕ್ಯಾಲೆಂಡರ್‌! ಕನ್ನಡ ವರ್ಣಮಾಲೆಯಲ್ಲಿ ಅರಳಿದ ಡಾ.ವಿಷ್ಣುವರ್ಧನ್

ಅಭಿಮಾನಿಗಳಿಗಾಗಿ ಅಭಿಮಾನದ ಕ್ಯಾಲೆಂಡರ್‌ ಲೋಕಾರ್ಪಣೆ

 

ಡಾ.ವಿಷ್ಣುವರ್ಧನ್‌ ಅವರ ಕುರಿತ ಅನೇಕ ಪುಸ್ತಕಗಳು ಹೊರಬಂದಿವೆ. ಅಷ್ಟೇ ಯಾಕೆ, ಸರ್ಕಾರ ಅವರ ಭಾವಚಿತ್ರವಿರುದ ಅಂಚೆ ಚೀಟಿಯನ್ನೂ ಹೊರತಂದಿದೆ. ಅವರ ಅಭಿಮಾನಿಗಳಂತೂ ವಿವಿಧ ರೀತಿಯಲ್ಲಿ ವಿಷ್ಣುವರ್ಧನ್‌ ಅವರನ್ನು ಆರಾಧಿಸುತ್ತಲೇ ಬಂದಿದ್ದಾರೆ. ಈಗ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ಡಾ.ವಿಷ್ಣುವರ್ಧನ್‌ ಅವರ ವಿಭಿನ್ನವಾದ ಕ್ಯಾಲೆಂಡರ್‌ವೊಂದನ್ನು ಹೊರತಂದಿದ್ದಾರೆ. ಆ ಕ್ಯಾಲೆಂಡರ್‌ ತುಂಬಾನೇ ವಿಶೇಷವಾಗಿದೆ ಎಂಬುದೇ ಈ ಹೊತ್ತಿನ ಸುದ್ದಿ.
ಅಷ್ಟಕ್ಕೂ ಆ ಕ್ಯಾಲೆಂಡರ್‌ನ ವಿಶೇಷತೆ ಏನು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಸಾಮಾನ್ಯವಾಗಿ ವರ್ಣಮಾಲೆ ಕಲಿಯದ ಕನ್ನಡಿಗರಿಲ್ಲ. ಬಾಲ್ಯದಿಂದಲೂ ಅ-ಅರಸ, ಆ-ಆಕಾಶ ಹೀಗೆ ಒಂದೊಂದು ಅಕ್ಷರದ ಮೂಲಕ ಕನ್ನಡವನ್ನು ಪ್ರೀತಿಯಿಂದ ಕಲಿತಿರುವುದುಂಟು. ಅದನ್ನು ಸದಾ ಕಂಠಪಾಠ ಮಾಡುತ್ತಲೇ ಇಂದಿಗೂ ಕನ್ನಡ ಮೇಲಿನ ಪ್ರೀತಿ ಇಟ್ಟುಕೊಂಡಿದ್ದಾರೆ. ಈಗ ಡಾ.ವಿಷ್ಣು ಅಭಿಮಾನಿಗಳಿಗಾಗಿ ಅದೇ ವರ್ಣಮಾಲೆಯನ್ನು ಬಳಸಕೊಂಡೇ ಸ್ವಲ್ಪ ವಿಭಿನ್ನವಾಗಿ ವಿನೂತನ ರೀತಿಯಲ್ಲಿ ಕ್ಯಾಲೆಂಡರ್‌ ಮಾಡಲಾಗಿದೆ.

ಅ-ಅಸಾಧ್ಯ ಅಳಿಯ, ಆ-ಆಪ್ತಮಿತ್ರ, ಇ-ಇಂದಿನ ರಾಮಾಯಣ, ಈ-ಈ ಜೀವ ನಿನಗಾಗಿ, ಊ-ಊರಿಗೆ ಉಪಕಾರಿ, ಎ-ಎಲ್ಲರಂತಲ್ಲ ನನ್ನ ಗಂಡ, ಏ-ಏಕದಂತ… ಹೀಗೆ ವರ್ಣಮಾಲೆಯ ಮೊದಲ ಅಕ್ಷರದಲ್ಲಿ ಮೂಡಿಬಂದಿರುವ ಸಿನಿಮಾಗಳನ್ನೂ ಹೆಸರಿಸಿ, ರಿಚ್‌ ಆಗಿರುವ ಆಕರ್ಷಣೆ ಎನಿಸುವ ಕ್ಯಾಲೆಂಡರ್‌ ಮಾಡಲಾಗಿದೆ.

 


ಅ-ಅಸಾಧ್ಯ ಅಳಿಯ, ಆ-ಆಪ್ತಮಿತ್ರ, ಇ-ಇಂದಿನ ರಾಮಾಯಣ, ಈ-ಈ ಜೀವ ನಿನಗಾಗಿ, ಊ_ಊರಿಗೆ ಉಪಕಾರಿ, ಎ-ಎಲ್ಲರಂತಲ್ಲ ನನ್ನ ಗಂಡ, ಏ-ಏಕದಂತ… ಹೀಗೆ ವರ್ಣಮಾಲೆಯ ಮೊದಲ ಅಕ್ಷರದಲ್ಲಿ ಮೂಡಿಬಂದಿರುವ ಸಿನಿಮಾಗಳನ್ನೂ ಹೆಸರಿಸಿ, ರಿಚ್‌ ಆಗಿರುವ ಆಕರ್ಷಣೆ ಎನಿಸುವ ಕ್ಯಾಲೆಂಡರ್‌ ಮಾಡಲಾಗಿದೆ.  ಅ ಅಕ್ಷರದಿಂದ ಳ ಅಕ್ಷರದವರೆಗೆ ಇರುವಂತಹ ಎಲ್ಲಾ ಡಾ.ವಿಷ್ಣುವರ್ಧನ್ ಅವರ ಚಿತ್ರಗಳ ಹೆಸರುಗಳನ್ನು ಕನ್ನಡ ವರ್ಣಮಾಲೆಯೊಂದಿಗೆ ಜೋಡಿಸಿ ಮುದ್ರಿಸಿರುವ ವಿಶಿಷ್ಠ ಪ್ರಯತ್ನ ಇದಾಗಿದೆ. ಕೇವಲ ವರ್ಣಮಾಲೆ ಮಾತ್ರವಲ್ಲದೆ ಕನ್ನಡಿಗರ ಹೆಗ್ಗುರುತಾದ ಹಂಪೆಯ ಕಲ್ಲಿನ ರಥವನ್ನು ಈ ಕ್ಯಾಲೆಂಡರ್ ವಿನ್ಯಾಸಕ್ಕೆ ಬಳಸಲಾಗಿದೆ.

ವೀರಕಪುತ್ರ ಶ್ರೀನಿವಾಸ್‌, ವಿಷ್ಣು ಸೇನಾ ಸಮಿತಿ ಅಧ್ಯಕ್ಷ

ಪ್ರತಿ ತಿಂಗಳ ಪುಟದಲ್ಲೂ ಡಾ.ವಿಷ್ಣುವರ್ಧನ್ ಅವರ ಅಪರೂಪದ ಭಾವಚಿತ್ರಗಳಿರುವುದು ಈ ಕ್ಯಾಲೆಂಡರ್‌ನ ವಿಶೇಷತೆ. ಪ್ರತಿ ತಿಂಗಳಿಗೂ ವಿಶೇಷ ಬಣ್ಣಗಳ ಸಂಯೋಜನೆ ಕೂಡ ಆಕರ್ಷಕವಾಗಿದೆ. ಕ್ಯಾಲೆಂಡರ್‌ನಲ್ಲಿ ರಜಾದಿನಗಳು, ಅಮಾವಾಸೆ, ಹುಣ್ಣಿಮೆ, ಹಬ್ಬಗಳು, ಗಣ್ಯರ ಜನ್ಮದಿನ ಒಳಗೊಂಡಿರುವ ಈ ಕ್ಯಾಲೆಂಡರ್ ವೃತಿಪರ ಕ್ಯಾಲೆಂಡರ್‌ಗಳಂತೆಯೇ ಮೂಡಿಬಂದಿದೆ.
ಈ ಕೋಟಿಗೊಬ್ಬ ಕ್ಯಾಲೆಂಡರ್ ಸರಣಿ ಶುರುವಾಗಿ 2021ಕ್ಕೆ ಹತ್ತು ವರ್ಷಗಳಾಗಿವೆ. ದಿ.ಅನಂತಕುಮಾರ್ ಮತ್ತು ಡಾ.ಭಾರತಿ ವಿಷ್ಣುವರ್ಧನ್ ಅವರು ಈ ಕ್ಯಾಲೆಂಡರ್ ಸರಣಿಯ ಮೊದಲನೇ ಸಂಚಿಕೆಯನ್ನು ಬಿಡುಗಡೆಗೊಳಿಸಿದ್ದರು. ಅಂದಿನಿಂದ ಇಂದಿನವರೆಗೆ ಹತ್ತು ವರ್ಷಗಳ ಕಾಲ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಮನೆಮಾತಾಗಿರುವ ಈ 2021ರ ಕೋಟಿಗೊಬ್ಬ ಕ್ಯಾಲೆಂಡರ್ ಈಗಾಗಲೇ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ ಲೋಕಾರ್ಪಣೆಗೊಂಡಿದೆ ಎಂದು ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಹೇಳಿದ್ದಾರೆ.

Categories
ಸಿನಿ ಸುದ್ದಿ

ಕೊರೊನಾ ವರ್ಷಕ್ಕೆ ಸ್ಯಾಂಡಲ್‌ವುಡ್‌ ಗುಡ್‌ ಬೈ – ಈ ವರ್ಷ ರಿಲೀಸ್‌ ಆದ ಸಿನಿಮಾಗಳೆಷ್ಟು ಗೊತ್ತಾ?

ರಿಲೀಸ್‌ ಆಗಿದ್ದು 76 ಪ್ಲಸ್-‌ ಒಟಿಟಿಯಲ್ಲೂ 3 ಚಿತ್ರ ಬಿಡುಗಡೆ

ಅಂತೂ ಇಂತೂ  2020 ಮುಗಿಯೋ ಹಂತ ತಲುಪಿದೆ. ಈ ವರ್ಷ ಎಲ್ಲಾ ರಂಗಕ್ಕೂ ಬಿಸಿ ತಟ್ಟಿದೆ. ಅದರಲ್ಲೂ ಸಿನಿಮಾರಂಗದ ವಿಷಯಕ್ಕೆ ಬಂದರೆ, ಈ ವರ್ಷದ ಮನರಂಜನೆ ಪೂರ್ಣ ಪ್ರಮಾಣದಲ್ಲಿ ಕುಸಿದಿದ್ದು ನಿಜ. ಈ ವರ್ಷದ ಜನವರಿಯಿಂದ ಮಾರ್ಚ್‌ ಎರಡನೇ ವಾರದವರೆಗೆ ಮಾತ್ರ ಚಿತ್ರರಂಗ ವೇಗ ಕಂಡುಕೊಂಡಿತ್ತು. ಆಮೇಲೆ ಕೊರೊನಾ ವಕ್ಕರಿಸಿದ ಬಳಿಕ ಮನರಂಜನೆ ಅನ್ನೋದು ಮರೀಚಿಕೆಯಾಗಿದ್ದು ಸುಳ್ಳಲ್ಲ. ಹಾಗೆ ನೋಡಿದರೆ ಈ ವರ್ಷದ ಎಂಟು ತಿಂಗಳ ಕಾಲ ಮನರಂಜನೆಗೆ ಬ್ರೇಕ್‌ ಬಿದ್ದಿದ್ದರೂ, ಕನ್ನಡ ಚಿತ್ರರಂಗದಲ್ಲಿ ಸುಮಾರು 76 ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಕಂಡಿವೆ ಎಂಬುದು ಅಚ್ಚರಿ.

ಹೌದು, ಪ್ರತಿ ವರ್ಷ ಬಿಡುಗಡೆಯಲ್ಲಿ ಸುಮಾರು 120ರ ಗಡಿ ದಾಟುತ್ತಿದ್ದ ಸಿನಿಮಾಗಳು, ಈ ವರ್ಷ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದಂತೂ ಹೌದು. ಅಕ್ಟೋಬರ್‌ 15ರಿಂದ ಚಿತ್ರಮಂದಿರಗಳಿಗೆ ಅವಕಾಶ ದೊರೆತ ನಂತರ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದವು. ಆದರೆ, ಪ್ರತಿ ವರ್ಷದ ದಾಖಲೆ ಈ ವರ್ಷ ಆಗಿಲ್ಲ ಅನ್ನುವುದು ಅಷ್ಟೇ ಸತ್ಯ. ಅದೆಷ್ಟೋ ವರ್ಷಗಳ ಬಳಿಕ ಅತೀ ಕಡಿಮೆ ಸಂಖ್ಯೆಯಲ್ಲಿ ಬಿಡುಗಡೆ ಕಂಡ ವರ್ಷ ಇದು ಎಂಬುದನ್ನು ಗಮನಿಸಲೇಬೇಕು. ಒಂದು ಲೆಕ್ಕದ ಪ್ರಕಾರ ಈ ವರ್ಷ ಕನ್ನಡ, ತುಳು, ಕೊಂಕಣಿ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಯ ಸಿನಿಮಾಗಳು ಸೇರಿ ಸುಮಾರು ೭೬ ಚಿತ್ರಗಳು ಬಿಡುಗಡೆ ಕಂಡಿವೆ.

ಈ 2020 ವರ್ಷವನ್ನು ಸ್ಯಾಂಡಲ್‌ವುಡ್‌ ಬರಮಾಡಿಕೊಂಡಿದ್ದು, ಮಯೂರ್‌ ಪಟೇಲ್‌ ಅಭಿನಯದ “ರಾಜೀವ ಐಎಎಸ್‌” ಚಿತ್ರ. ಹಾಗೆಯೇ ಅಂತ್ಯಗೊಳಿಸಿದ್ದು, ಇಂದ್ರಜಿತ್‌ ಲಂಕೇಶ್‌ ಅವರ “ಶಕೀಲಾʼ ಸಿನಿಮಾ. ೨೦೨೦ರ ಜನವರಿಯಲ್ಲಿ ಮೂರು ಕನ್ನಡ ಸಿನಿಮಾಗಳು ಪ್ರೇಕ್ಷಕರ ಎದುರು ಬಂದಿದ್ದವು. “ರಾಜೀವ ಐಎಎಸ್”, ಹೊಸಬರ “ವೇಷಧಾರಿ”, “ಗುಡಮನ ಅವಾಂತರ” ಚಿತ್ರಗಳು ಬಿಡುಗಡೆಯಾಗಿದ್ದವು.  ತದನಂತರದಲ್ಲಿ ಬಿಡುಗಡೆಯ ಪರ್ವ ಶುರುವಾಯಿತು.

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ “ಇಂಡಿಯಾ ವರ್ಸಸ್‌ ಇಂಗ್ಲೆಂಡ್”, ಚಿರಂಜೀವಿ ಸರ್ಜಾ ಅಭಿನಯದ “ಖಾಕಿ”, “ಕಾಣದಂತೆ ಮಾಯವಾದನು”, ವಿಜಯರಾಘವೇಂದ್ರ ಅಭಿನಯದ “ಮಾಲ್ಗುಡಿ ಡೇಸ್”, ಮದರಂಗಿ ಕೃಷ್ಣ ಅವರ “ಲವ್ ಮಾಕ್ಟಲ್”, ಪ್ರಜ್ವಲ್‌ ದೇವರಾಜ್‌ ಅವರ “ಜಂಟಲ್‌ ಮನ್‌”, “ದಿಯಾ”, “ಮಾಯಾ ಬಜಾರ್”, “ಪಾಪ್‌ಕಾರ್ನ್ ಮಂಕಿ ಟೈಗರ್”, “ಶಿವಾಜಿ ಸುರತ್ಕಲ್”, “ಫ್ರೆಂಚ್ ಬಿರಿಯಾನಿ”, “ಆಕ್ಟ್ 1978”, “ಅರಿಷಡ್ವರ್ಗ” ಸೇರಿದಂತೆ ಒಂದಷ್ಟು ಸಿನಿಮಾಗಳು ಬಂದವು. ಈ ಪೈಕಿ ಕೊರೊನಾ ಸಮಸ್ಯೆಯಿಂದಾಗಿ ಒಟಿಟಿಯಲ್ಲಿ ಕನ್ನಡದ ಮೂರು ಸಿನಿಮಾಗಳು ಬಿಡುಗಡೆಯಾದದ್ದು ವಿಶೇಷ. ಪುನೀತ್‌ ರಾಜಕುಮಾರ್‌ ಬ್ಯಾನರ್‌ನಲ್ಲಿ ತಯಾರಾದ “ಲಾ”. “ಫ್ರೆಂಚ್ ಬಿರಿಯಾನಿ” ಹಾಗು “ಭೀಮಸೇನ ನಳ ಮಹಾರಾಜ” ಚಿತ್ರಗಳು ಒಟಿಟಿಯಲ್ಲಿ ರಿಲೀಸ್‌ ಆಗಿದ್ದವು.

 

Categories
ಸಿನಿ ಸುದ್ದಿ

ವಿಹಾನ ಗಾಯನ – ಎಂಜಿನಿಯರ್‌ ಹುಡುಗನ ಗಾನ ಬಜಾನ

ಮಂಡ್ಯ ಹುಡುಗನ ಮನಸ್ಸೆಲ್ಲಾ ಹಾಡು-ಪಾಡು

ಈ ಸಿನಿಮಾ ಸೆಳೆತವೇ ಹಾಗೆ. ಒಮ್ಮೆ ಇತ್ತ ಒಲವು ಮೂಡಿದರೆ ಮುಗೀತು. ಇಲ್ಲೇ ಗಟ್ಟಿನೆಲೆ ಕಾಣಬೇಕೆಂಬ ಹಂಬಲ ಸಹಜ. ಚಿತ್ರರಂಗಕ್ಕೆ ಈಗಾಗಲೇ ಎಲ್ಲಾ ಕ್ಷೇತ್ರದಿಂದಲೂ ಎಂಟ್ರಿಯಾಗಿದ್ದಾರೆ. ಡಾಕ್ಟರ್‌, ಪೊಲೀಸ್‌, ಎಂಜಿನಿಯರ್‌ ಹೀಗೆ ಹಲವು ಕ್ಷೇತ್ರಗಳಿಂದ ಬಂದವರಿದ್ದಾರೆ. ಆ ಪೈಕಿ ಕೆಲವರು ಸಾಧಿಸಿದ್ದಾರೆ. ಇನ್ನೂ ಕೆಲವರು ಸಾಧನೆಯ ಹಾದಿಯಲ್ಲಿದ್ದಾರೆ. ಅದೇ ಸಾಧಿಸಬೇಕೆಂಬ ಛಲದಲ್ಲಿ ಇಲ್ಲೊಬ್ಬ ಯುವ ಗಾಯಕ ಚಿತ್ರರಂಗವನ್ನು ಸ್ಪರ್ಶಿಸಿದ್ದಾನೆ. ಹೆಸರು ವಿಹಾನ್‌ ಆರ್ಯ. ಹಾಗಂತ ಈ ವಿಹಾನ್‌ ಆರ್ಯ ಹೀರೋ ಆಗಬೇಕು, ನಿರ್ದೇಶಕ ಆಗಬೇಕು ಅಂತ ಬಂದಿಲ್ಲ. ತಾನೊಬ್ಬ ಒಳ್ಳೆಯ ಗಾಯಕನಾಗಿ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ.

 ನಾನು ನೀನು ಇನ್ನು ಬೇರೆ ಏನು, ನಿನ ಎದೆಯ ಗೂಡಲ್ಲಿ ನನ ಜೀವಾ ಇದೆ.. ನೂರು ನೂರು ನನ ಆಸೆ ನೂರು, ನನ ಜೀವನ ಮುಂದಕೆ ಹೋಗದು ನೀನಿರದೆ,
ಮನಸ್ಸೆಲ್ಲಾ ನೀನೇ… ಮನಸ್ಸೆಲ್ಲಾ ನೀನೆ…” ಎಂಬ ಹಾಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಕ್ಕಿದೆ. ಲಕ್ಷಗಟ್ಟಲೆ ವೀಕ್ಷಣೆಯೂ ಪಡೆದಿದೆ

 

 

ಅಂದಹಾಗೆ, ವಿಹಾನ್‌ ಆರ್ಯ ಮೂಲತಃ ಎಂಜಿನಿಯರ್‌ ಅನ್ನೋದು ವಿಶೇಷ. ಅರೇ, ಎಂಜಿನಿಯರ್‌ ಗಾಯಕರಾಗಿದ್ದಾರಾ? ಈ ಪ್ರಶ್ನೆ ಎದುರಾಗೋದು ಸಹಜವೇ. ಆದರೆ, ವಿಹಾನ್‌ ಆರ್ಯ ಈಗಾಗಲೇ ಸಾಕಷ್ಟು ಹಾಡುಗಳನ್ನು ಹಾಡುವ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ ಅನ್ನೋದ್ದನ್ನೂ ಗಮನಿಸಬೇಕು. ತಮ್ಮ ಈ ಗಾಯನದ ಪಯಣ ಕುರಿತು ವಿಹಾನ್‌ ಆರ್ಯ, “ಸಿನಿ ಲಹರಿ” ಜೊತೆ ಮಾತನಾಡಿದ್ದಿಷ್ಟು.  “ನಾನು ಮಂಡ್ಯ ಜಿಲ್ಲೆಯ ಮಳವಳ್ಳಿ ಸಮೀಪವಿರುವ ಹಾಡ್ಲಿ ಎಂಬ ಊರಿನವನು. ನಾನೊಬ್ಬ ಮೆಕಾನಿಕಲ್‌ ಎಂಜಿನಿಯರ್.‌ ಬಿಇ ಓದು ಮುಗಿಸಿದ ಕೂಡಲೇ ನನಗೆ ಕೆಲಸಕ್ಕೆ ಹೋಗುವ ಆಸಕ್ತಿ ಇರಲಿಲ್ಲ. ಆದರೆ, ಹಾಡಬೇಕೆಂಬ ಆಸಕ್ತಿ ಹೆಚ್ಚಾಗಿತ್ತು. ಗಾಯನದ ಮೇಲೆ ಎಲ್ಲಿಲ್ಲದ ಪ್ರೀತಿ ಇತ್ತು. ಆ ಕಾರಣಕ್ಕೆ ನಾನು ನನ್ನ ಎಜುಕೇಷನ್‌ ಪೂರೈಸಿ, ಹಂಸಲೇಖರ ಬಳಿ ದೇಸಿ ಶಾಲೆಯಲ್ಲಿ ಸಂಗೀತ ಕಲಿತೆ. ಅವರ ಶಿಷ್ಯ ಎನಿಸಿಕೊಂಡೆ. ಈಗ ಶಿವಾನಂದ್‌ ಸಾಲಿಮಠ್‌ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದೇನೆ.

ಕಾಲೇಜು ದಿನಗಳಲ್ಲೇ ನನಗೆ ಹಾಡುವ ಹುಚ್ಚಿತ್ತು. ಆಗ ಅಭ್ಯಾಸ ಮಾಡುತ್ತಿದ್ದೆ. ಹಾಗೆ ಹಾಡುತ್ತಲೇ ವಾಯ್ಸ್‌ ಆಫ್‌ ಬೆಂಗಳೂರು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗಮನಸೆಳೆದೆ. ಅಲ್ಲಿಂದ ಹಾಡುವ ಅವಕಾಶ ಸಿಕ್ತು. ನಾನು “ವಂದನಾʼ ಚಿತ್ರಕ್ಕೆ ಹಾಡುವ ಮೂಲಕ ಗಾಯಕನಾದೆ. ಇಂಡಸ್ಟ್ರಿಗೆ ಬಂದು ಆರು ವರ್ಷಗಳಾಗಿವೆ. ಈವರೆಗೆ ಸುಮಾರು ೩೫ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದೇನೆ. ಸುಮಾರು ೩೦೦ ಚಿತ್ರಗಳಿಗೆ ಕೋರಸ್‌ ಆಗಿಯೂ ಹಾಡಿದ್ದೇನೆ. ನಾಯಕಿ, ಸರ್ವ ಮಂಗಳ ಮಾಂಗಲ್ಯ, ಮನಸ್ಸೆಲ್ಲಾ ನೀನೇ ಧಾರಾವಾಹಿಗಳಿಗೂ ಹಾಡಿದ್ದೇನೆ. ಸದ್ಯ “ಮನಸ್ಸೆಲ್ಲಾ ನೀನೇ” ಧಾರಾವಾಹಿಯ ಶೀರ್ಷಿಕೆ ಗೀತೆ ” ನಾನು ನೀನು ಇನ್ನು ಬೇರೆ ಏನು, ನಿನ ಎದೆಯ ಗೂಡಲ್ಲಿ ನನ ಜೀವಾ ಇದೆ.. ನೂರು ನೂರು ನನ ಆಸೆ ನೂರು, ನನ ಜೀವನ ಮುಂದಕೆ ಹೋಗದು ನೀನಿರದೆ,
ಮನಸ್ಸೆಲ್ಲಾ ನೀನೇ… ಮನಸ್ಸೆಲ್ಲಾ ನೀನೆ…” ಎಂಬ ಹಾಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಕ್ಕಿದೆ. ಲಕ್ಷಗಟ್ಟಲೆ ವೀಕ್ಷಣೆಯೂ ಪಡೆದಿದೆ” ಎಂಬುದು ಅವರ ಮಾತು.


ಇನ್ನು ಕನ್ನಡ ಚಿತ್ರರಂಗದ ಬಹುತೇಕ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. “ಕೃಷ್ಣ ಟಾಕೀಸ್‌”, “ಪ್ರೇಮಂ ಪೂಜ್ಯಂ”, “ಡಿಯರ್‌ ಸತ್ಯ” ಸಿನಿಮಾಗಳಿಗೆ ಹಾಡಿದ್ದುಂಟು. ನಾನು ಹಾಡಿರುವ ಸುಮಾರು ೨೦ಕ್ಕೂ ಹೆಚ್ಚು ಚಿತ್ರಗಳು ರಿಲೀಸ್‌ ಆಗಬೇಕಿದೆ. ಗಾಯನ ಕ್ಷೇತ್ರದಲ್ಲಿ ಸ್ಪರ್ಧೆ ಇದೆ. ನಾನು ಮೆಲೋಡಿ ಹೆಚ್ಚು ಹಾಡಿದ್ದೇನೆ. ನನ್ನ ವಾಯ್ಸ್‌ಗೆ ಮೆಲೋಡಿ ಹಾಡುಗಳು ಬರುತ್ತಿವೆ. ಮೊದ ಮೊದಲು ಮನೆಯಲ್ಲಿ ಅಷ್ಟೊಂದು ಉತ್ಸಾಹ ಇರಲಿಲ್ಲ. ಈಗ ಗುರುತಿಸಿಕೊಳ್ಳುತ್ತಿರುವುದರಿಂದ ಎಲ್ಲವೂ ಸುಗಮವಾಗುತ್ತಿದೆ. ನನಗೆ‌ ಸಂಗೀತ ನಿರ್ದೇಶಕ ವಿ. ಸಂಭ್ರಮ್‌ ಶ್ರೀಧರ್ ಅವರು ಗುರುವಿದ್ದಂತೆ. ಅವರ ಮಾರ್ಗದರ್ಶನದಲ್ಲೇ ಈಗ ಕೆಲಸ ಮಾಡುತ್ತಿದ್ದೇನೆ. ನನಗೆ ಸಿನಿಮಾದಲ್ಲೇ ಗುರುತಿಸಿಕೊಳ್ಳುವ ಆಸೆ ಇದೆ. ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರ್‌ಗಳಿಗೆ ಹಾಡಬೇಕು ಎಂಬುದು ನನ್ನ ಮಹಾದಾಸೆ” ಎನ್ನುತ್ತಾರೆ ವಿಹಾನ್‌ ಆರ್ಯ.

Categories
ಸಿನಿ ಸುದ್ದಿ

ತೆಲುಗಿಗೂ ಕಾಲಿಟ್ಟ ಶ್ರೀಮುರಳಿ – ಮದಗಜನ ಟಾಲಿವುಡ್ ಹೆಜ್ಜೆಗೆ ಭರ್ಜರಿ ಮೆಚ್ಚುಗೆ

ತೆಲುಗು ಟೈಟಲ್ ಪೋಸ್ಟರ್ ಗೆ ಫ್ಯಾನ್ಸ್ ಫಿದಾ

 

ಶ್ರೀಮುರಳಿ ಅಭಿನಯದ “ಮದಗಜ” ಭಾರೀ ಸದ್ದು ಮಾಡಿರೋದು ಗೊತ್ತೇ ಇದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಫಸ್ಟ್ ಲುಕ್ ಟೀಸರ್ ದಾಖಲೆ ಬರೆದಿದೆ.
ಇದೇ ಖುಷಿಯಲ್ಲಿರುವ “ಮದಗಜ” ಚಿತ್ರತಂಡ ಈಗ ಇನ್ನೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಕನ್ನಡದ ಜೊತೆಗೆ ತೆಲುಗು ಚಿತ್ರರಂಗಕ್ಕೂ “ಮದಗಜ” ಪಾದಾರ್ಪಣೆ ಮಾಡುತ್ತಿದೆ ಎಂಬುದು ಈ ಕ್ಷಣದ ಸುದ್ದಿ.

ಹೌದು, ಕನ್ನಡ “ಮದಗಜ” ಸಿನಿಮಾದ ಫಸ್ಟ್ ಲುಕ್ ಟೀಸರ್ ಮಾಡಿದ ಜೋರು ಸದ್ದಿಗೆ ಪರಭಾ಼ಷಿಗರೂ ತಿರುಗಿ ನೋಡಿದ್ದು ಸುಳ್ಳಲ್ಲ. ಈಗ ತೆಲುಗಿಗೂ “ಮದಗಜ” ಎಂಟ್ರಿಯಾಗಿದೆ ಅನ್ನೋದೇ ಸಂಭ್ರಮದ ಮಾತು.
ಕ್ರಿಸ್ಮಸ್ ಹಬ್ಬಕ್ಕೆ ತೆಲುಗು ಭಾಷೆಗೂ ಕಾಲಿಡುತ್ತಿರುವುದನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ತೆಲುಗಿನಲ್ಲಿ “ರೋರಿಂಗ್ ಮದಗಜ” ಎಂದು ನಾಮಕರಣ ಮಾಡಲಾಗಿದೆ. ಕ್ರಿಸ್ಮಸ್ ಹಬ್ಬಕ್ಕೆ ಗಿಫ್ಟ್ ಎಂಬಂತೆ ತೆಲುಗು ಟೈಟಲ್ ಪೋಸ್ಟರ್ ಹೊರ ತಂದಿರುವ ಚಿತ್ರತಂಡ, ಫ್ಯಾನ್ಸ್ ಗೊಂದು ಸರ್ಪ್ರೈಸ್ ನೀಡಿದೆ.

ಮಹೇಶ್ ಕುಮಾರ್, ನಿರ್ದೇಶಕ

ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರದ ಟೀಸರ್ ಹೊಸ ವರ್ಷ ಜನವರಿ 1ರಂದು ಬಿಡುಗಡೆಯಾಗಲಿದೆ. ಅಂದು 10.10ಕ್ಕೆ ಆನಂದ್ ಯುಟ್ಯೂಬ್ ಚಾನೆಲ್ ಮೂಲಕ ಟೀಸರ್ ಬಿಡುಗಡೆಯಾಗಲಿದ್ದು, ಶ್ರೀಮುರಳಿ ಅವರೇ ಆ ತೆಲುಗು ಟೀಸರ್ ಗೆ ವಾಯ್ಸ್ ನೀಡಿರುವುದು ಮತ್ತೊಂದು ವಿಶೇಷ.
“ಮದಗಜ” ಚಿತ್ರದ ಇನ್ನೂ ಒಂದು ವಿಶೇಷ ಕಾದಿದ್ದು, ಅದು ಜನವರಿ ಸಂಕ್ರಾಂತಿ ಹಬ್ಬದಂದು ರಿವೀಲ್ ಆಗಲಿದೆ. ಅಲ್ಲಿಗೆ ಇದೇ ಮೊದಲ ಸಲ ಶ್ರೀಮುರಳಿ ಅಭಿನಯದ ಚಿತ್ರವೊಂದು ಬೇರೆ ಭಾಷೆಯಲ್ಲೂ ತಯಾರಾಗಿ ಬಿಡುಗಡೆಯಾಗುತ್ತಿದೆ.

ಉಮಾಪತಿ, ನಿರ್ಮಾಪಕ

ಸದ್ಯಕ್ಕೆ ತೆಲುಗಿನಲ್ಲಿ ಹೊರ ಬಂದಿರುವ ಈ ಟೈಟಲ್ ಪೋಸ್ಟರ್ ಗೆ ಭರಪೂರ ಮೆಚ್ಚುಗೆ ಸಿಕ್ಕಿದೆ.
ಈಗಾಗಲೇ “ಮದಗಜ” ಮೇಲೆ ಸಾಕಷ್ಟು ನಿರೀಕ್ಷೆಯೂ ಹೆಚ್ಚಿದ್ದು, ಜೊತೆಗೆ ಭರವಸೆ ಕೂಡ.
ಚಿತ್ರದ ಮೊದಲ ಟೀಸರ್ ಗೆ ಜನರು ಕೊಟ್ಟ ದೊಡ್ಡ ಯಶಸ್ಸಿನ ಉತ್ಸಾಹದಲ್ಲೇ ಚಿತ್ರತಂಡ ಈ ಮಹತ್ವದ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ.
ಇಷ್ಟೇ ಅಲ್ಲ, “ಮದಗಜ” ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಪ್ರೈಸ್ ಕೊಡಲು ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದೆ.
ಈಗ ಎಚ್. ಎಂ.ಟಿ ಯಲ್ಲಿ ಚಿತ್ರೀಕರಣಕ್ಕೆ ತಂಡ ತಯಾರಿ ನಡೆಸಿದ್ದು, ಡಿಸೆಂಬರ್‌ 28ರಿಂದ ಶೂಟಿಂಗ್ ನಡೆಸಲಿದೆ. ಹಾಗೆ ನೋಡಿದರೆ ಕಳೆದ ಡಿಸೆಂಬರ್ 21ರಿಂದಲೇ ಚಿತ್ರೀಕರಣ ನಡೆಯಬೇಕಿತ್ತು. ಆ ದೃಶ್ಯದ ಚಿತ್ರಣಕ್ಕೆ ಬೇಕಾದ ಲೆನ್ಸ್ ಸಿಗಲಿಲ್ಲ ಎಂಬ ಕಾರಣಕ್ಕೆ ನಿರ್ದೇಶಕರು ಕಾಂಫ್ರಮೈಸ್ ಆಗದೆ ಶೂಟಿಂಗ್ ಮುಂದಕ್ಕೆ ಹಾಕಿದ್ದಾರೆ. ಆ ಲೆನ್ಸ್ ಇಂಡಿಯಾದಲ್ಲಿ ಇರದ ಕಾರಣ, ಶೂಟಿಂಗ್ ಮುಂದೆ ಹೋಗಿತ್ತು. ಡಿಸೆಂಬರ್ 28ರಿಂದ ಯಥಾ ಪ್ರಕಾರ ಶೂಟಿಂಗ್ ನಡೆಯಲಿದೆ ಎಂಬುದು ಚಿತ್ರತಂಡದ ಮಾತು.
ಸದ್ಯ ಶ್ರೀಮುರಳಿ ಈಗ ಫುಲ್ ಬಿಝಿ. “ಮದಗಜ” ಬೆನ್ನಲ್ಲೆ ಅವರು “ಬಘೀರ” ಚಿತ್ರ ಮಾಡುವ ಘೋಷಣೆ ಮಾಡಿದ್ದಾರೆ. ಅದೂ ಕೂಡ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಚಿತ್ರ.
ಡಾ.ಸೂರಿ ಆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
“ಮದಗಜ” ಚಿತ್ರಕ್ಕೆ ಆಶಿಕಾ ನಾಯಕಿ. ಮಹೇಶ್ ಕುಮಾರ್ ನಿರ್ದೇಶನವಿದೆ. ಉಮಾಪತಿ ನಿರ್ಮಾಣವಿದೆ.

Categories
ಸಿನಿ ಸುದ್ದಿ

ಯಶ್ ನಟನೆಯ ರಾಕಿ ಚಿತ್ರಕ್ಕೆ 12ರ ಸಂಭ್ರಮ- ಪೂರ್ಣ ಪ್ರಮಾಣದ ಹೀರೋ ಆಗಿದ್ದ ಸಿನಿಮಾ

ನಾಗೇಂದ್ರ ಅರಸ್ ನಿರ್ದೇಶನದ ಎರಡನೇ‌ ಚಿತ್ರ

ಕನ್ನಡ ಚಿತ್ರರಂಗದಲ್ಲೀಗ ಸ್ಟಾರ್ ನಟರ ಸಾಲಲ್ಲಿ ಎದ್ದು ಕಾಣುವ ನಟ ಯಶ್, ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿದ ಮೊದಲ ಚಿತ್ರ “ರಾಕಿ” ಚಿತ್ರಕ್ಕೆ ಈಗ ಹನ್ನೆರೆಡು ವರ್ಷದ ಸಂಭ್ರಮ.


ಯಶ್ ಅಭಿನಯದ “ರಾಕಿ” ಚಿತ್ರ ಅವರನ್ನು ಕನ್ನಡಕ್ಕೆ ಒಬ್ಬ ಪಕ್ಕಾ ನಟ ಮತ್ತು ಡ್ಯಾನ್ಸರ್ ಅನ್ನುವುದನ್ನು ಸಾಬೀತುಪಡಿಸಿತು. ಡಿಸೆಂಬರ್ 25, 2008ರಲ್ಲಿ “ರಾಕಿ” ಬಿಡುಗಡೆಯಾಗಿತ್ತು. ಇಂದಿಗೆ “ರಾಕಿ” ರಿಲೀಸ್ ಆಗಿ 12 ವರ್ಷಗಳು ಸಂದಿವೆ. ಯಶ್ ಈ ಒಂದು ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗವೇ ಗುರುತಿಸುವಂತಹ ಚಿತ್ರ ಕೊಡುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಗಟ್ಟಿ ನೆಲೆ ಕಂಡಿದ್ದಾರೆ.


ಯಶ್ ಅವರನ್ನು ಪೂರ್ಣ ಪ್ರಮಾಣದ ನಾಯಕರನ್ನಾಗಿಸಿದ ಹೆಮ್ಮೆ ನಿರ್ದೇಶಕ ನಾಗೇಂದ್ರ ಅರಸ್ ಅವರದು. “ರಾಕಿ” ನಾಗೇಂದ್ರ ಅರಸ್ ನಿರ್ದೇಶನದ ಎರಡನೇ ಸಿನಿಮಾ.

ನಾಗೇಂದ್ರ ಅರಸ್

ಕೆಲವು ಸಿನಿಮಾಗಳು ಹೀಗೆ ಸುದ್ದಿಯಾಗುತ್ತವೆ ಅನ್ನುವುದಕ್ಕೆ ಇಂತಹ ಚಿತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಹೆಸರು ಮಾಡಿದ ಹೀರೋಗಳು. ಯಶ್ ಯಶಸ್ವಿ ಚಿತ್ರಗಳ ಮೂಲಕ ನೆಲೆ ನಿಂತಿದ್ದಾರೆ. ಆ ಕಾರಣಕ್ಕೆ ಅವರ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸಿದ “ರಾಕಿ” ಹನ್ನೆರಡು ವರ್ಷಗಳಾದರೂ ಸುದ್ದಿಯಾಗುತ್ತಿದೆ.

Categories
ಸಿನಿ ಸುದ್ದಿ

ಮುಖ ಮುಚ್ಚಿಕೊಂಡು ಬೀದಿ ಬೀದಿ ತಿರುಗಿದ ಬುಲ್‌ ಬುಲ್‌ ಬೆಡಗಿ‌!

 

ವೀರಂ ಚಿತ್ರಕ್ಕಾಗಿ ತಂಡದ ಜೊತೆ ಬೀದಿಗಿಳಿದರು ಡಿಂಪಲ್‌ ರಚಿತಾ

 

ಕನ್ನಡದ ನಟಿ ರಚಿತಾರಾಮ್‌ ಮುಖಕ್ಕೆ ಕೆಂಪು ವಸ್ತ್ರ ಕಟ್ಟಿಕೊಂಡು ಬೀದಿ ಬೀದಿ ಸುತ್ತುತ್ತಿದ್ದಾರೆ! ಅರೇ, ಹೀಗಂದಾಕ್ಷಣ ಇನ್ನೇನೋ ಕಲ್ಪನೆ ಮಾಡಿಕೊಳ್ಳಬೇಡಿ.

ರಚಿತಾರಾಮ್‌ ಬೀದಿ ಸುತ್ತಿರೋದು ನಿಜ. ಹಾಗಂತ ಇನ್ನೇನೋ ಕಾರಣಕ್ಕೆ ಅವರು ಬೀದಿ ಸುತ್ತಿಲ್ಲ. ಅವರು “ವೀರಂ” ಚಿತ್ರಕಕಾಗಿ ಕಾಸ್ಟ್ಯೂಮ್‌ ಖರೀದಿಸಲು  ಗುರುವಾರ ಕಮರ್ಷಿಯಲ್‌ ಸ್ಟ್ರೀಟ್‌ ಕಡೆ ಓಡಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದರಲ್ಲಿ ಮಾತನಾಡಿರುವ ರಚಿತಾರಾಮ್‌, “ನಾವು ಕಮರ್ಷಿಯಲ್‌ ಸ್ಟ್ರೀಟ್‌ಗೆ ಬಂದಿದ್ದೇವೆ. ಇದೊಂದು ಹೊಸ ಅನುಭವ. ಯಾರೂ ಕೂಡ ಕಂಡು ಹಿಡಿಯಲು ಆಗುತ್ತಿಲ್ಲ. ಎಲ್ಲರೂ ಮಾಸ್ಕ್‌ ಹಾಕಿಕೊಂಡಿದ್ದೇವೆ. ಇಡೀ ತಂಡ ನಮ್ಮೊಂದಿಗೆ ಇದೆ. ಖದರ್‌ ಕುಮಾರ್‌ ನಿರ್ದೇಶಕರು ನಮ್ಮ ಜೊತೆ ಇದ್ದಾರೆ.

ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಓಡಾಟ ನಡೆಸಿದ ರಚಿತಾರಾಮ್‌, ತಮಗೆ ಇಷ್ಟವಾದ, ಕಾಸ್ಟ್ಯೂಮ್‌ ಖರೀದಿಸಿದ್ದಾರೆ.  ಅವರು ಸುತ್ತಿದ ವಿಡಿಯೋ ಸದ್ಯಕ್ಕೆ ಹರಿದಾಡುತ್ತಿದೆ.

 

 

Categories
ಸಿನಿ ಸುದ್ದಿ

ಕನ್ನಡ ಹುಡುಗನ ಹಿಂದಿ ವೆಬ್‌ಸೀರೀಸ್‌ – ಮೇರಿ ಪಡೋಸಾನ್‌ಗೆ ಭರಪೂರ ಮೆಚ್ಚುಗೆ

ಒಂದೇ ದಿನ ಎಪಿಸೋಡ್‌ಗೆ ದಾಖಲೆ ವೀಕ್ಷಣೆ

 

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಒಂದಷ್ಟು ನಿರೀಕ್ಷೆ ಹೆಚ್ಚಿರುವುದು ಗೊತ್ತೇ ಇದೆ. ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ ಮಾಲಿವುಡ್‌ ಕೂಡ ಈಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತಾಗಿದೆ. ಈಗಾಗಲೇ ಕನ್ನಡ ಸಿನಿಮಾಗಳು ಜೋರು ಸದ್ದು ಮಾಡಿರುವುದೇ ಪರಭಾಷಿಗರೂ ಕನ್ನಡದತ್ತ ತಿರುಗುತಿರುವುದು ಕಾರಣ. ಕನ್ನಡದ ಅನೇಕ ನಿರ್ದೇಶಕರು, ನಟ,ನಟಿಯರು ಪರಭಾಷೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಆ ಸಾಲಿಗೆ ಕನ್ನಡದ ಯುವ ನಿರ್ದೇಶಕರೊಬ್ಬರು ಬಾಲಿವುಡ್‌ನಲ್ಲಿ ಎಂಟ್ರಿಕೊಟ್ಟು, ಸೈ ಎನಿಸಿಕೊಂಡಿದ್ದಾರೆ.


ಹೌದು, ಧಾರಾವಾಡ ಮೂಲದ ಮಂಜು ನಂದನ್‌ ಈಗ ಬಾಲಿವುಡ್‌ನಲ್ಲಿ ವೆಬ್‌ಸೀರೀಸ್‌ ಮಾಡಿದ್ದಾರೆ. ಆ ಹೊಸ ವೆಬ್‌ಸೀರೀಸ್‌ಗೆ “ಮೇರಿ ಪಡೋಸಾನ್”‌ ಎಂದು ನಾಮಕರಣ ಮಾಡಲಾಗಿದೆ. ಸದ್ಯಕ್ಕೆ ಈ ವೆಬ್‌ ಸೀರೀಸ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಹತ್ತು ಎಪಿಸೋಡ್‌ಗಳ ಪೈಕಿ ಒಂದು ಎಪಿಸೋಡ್‌ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ತಮ್ಮ ನಿರ್ದೇಶನದ ಹಿಂದಿ ವೆಬ್‌ಸೀರೀಸ್‌ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಮಂಜುನಂದನ್, “ಇದೊಂದು ಲವ್‌ ಕಾಮಿಡಿ ಜಾನರ್.‌ ಈಗಿನ ವೆಬ್‌ಸೀರೀಸ್‌ಗೆ ತಕ್ಕಂತಹ ಕಥೆಯನ್ನಿಟ್ಟುಕೊಂಡು ಮಾಡಲಾಗಿದೆ. ಈ ವೆಬ್‌ಸೀರೀಸ್‌ನಲ್ಲಿ ಬಾಲಿವುಡ್‌ ಕಲಾವಿದರು ಕಾಣಿಸಿಕೊಂಡಿದ್ದಾರೆ. ಮುಸ್ಕಾನ್‌ ಶರ್ಮ, ವಿಹಾನ್‌ ಗೋಯೆಲ್‌, ಸ್ವಾತಿ ಶರ್ಮ, ಜಸ್ವೀಲ್‌ ಅರೋರ ಇತರರು ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಈ ವೆಬ್‌ಸೀರೀಸ್‌ ಕೇವಲ ಒಂದು ಎಪಿಸೋಡ್‌ ಒಂದೇ ದಿನದಲ್ಲಿ ಎರಡು ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಇನ್ನು, ವಿಹಾನ್‌ ಗೋಯೆಲ್‌ ಕಥೆಯ ಜೊತೆಗೆ ಸಂಕಲನವನ್ನೂ ಮಾಡಿದ್ದಾರೆ. ನಾನು ನಿರ್ದೇಶನದ ಜೊತೆಗೆ ಪ್ರೊಡಕ್ಷನ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಶಿವು ನವಲಿಮಠ್‌ ಮತ್ತು ಪೌಲ್‌ ಕ್ಯಾಮೆರಾ ಹಿಡಿದಿದ್ದಾರೆ.


ಈ ವೆಬ್‌ಸೀರೀಸ್‌ ನಿರ್ದೇಶಕ ಮಂಜುನಂದನ್‌ ಬಗ್ಗೆ ಹೇಳುವುದಾದರೆ, ಈ ಮೊದಲು ಹಿಂದಿಯಲ್ಲಿ ಆಲ್ಬಂ ಸಾಂಗ್‌ ಮಾಡಿದ್ದರು. ನಂತರದ ದಿನಗಳಲ್ಲಿ, ಅಲ್ಲೇ ಒಂದಷ್ಟು ಮಂದಿಯ ಪರಿಚಯವಾಗಿ, ಬಾಲಿವುಡ್‌ ಜನರ ಸಂಪರ್ಕ ಬೆಳೆಸಿಕೊಂಡು ಈ ವೆಬ್‌ಸೀರೀಸ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಈ ವೆಬ್‌ಸೀರೀಸ್‌ ಅನ್ನು, ಕನ್ನಡದಲ್ಲೂ ಮಾಡುವ ಯೋಚನೆ ನಿರ್ದೇಶಕರಿಗಿದೆ. ಅಂದಹಾಗೆ, ಈ “ಮೇರಿ ಪಡೋಸಾನ್” ವೆಬ್‌ಸೀರೀಸ್‌ ಮಹಾರಾಷ್ಟ್ರದ ಅಂಬೋಲಿಯ ರೆಸಾರ್ಟ್‌ವೊಂದರಲ್ಲಿ ಹದಿನೈದು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಇನ್ನೊಂದು ವಿಶೇಷವೆಂದರೆ, ಕಲಾವಿದರನ್ನು ಹೊರತುಪಡಿಸಿ ಈ ವೆಬ್‌ಸೀರೀಸ್‌ನಲ್ಲಿ ಬಹುತೇಕ ಕನ್ನಡಿಗರೇ ಸೇರಿ ಕೆಲಸ ಮಾಡಿರುವುದು ವಿಶೇಷ.

Categories
ಸಿನಿ ಸುದ್ದಿ

ಥಿಯೇಟರ್‌ಗೆ ಶೇ.100 ಅವಕಾಶ ಕೊಡಿ – ಸರ್ಕಾರಕ್ಕೆ ನೆನಪಿರಲಿ ಪ್ರೇಮ್‌ ಮನವಿ

ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗೆ ಇಲ್ಲದ ನಿಯಮ ಚಿತ್ರರಂಗಕ್ಕೆ ಯಾಕೆ?

ಕೊರೊನಾ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಷ್ಟೇ ಅಲ್ಲ, ಬದುಕನ್ನೇ ಕಸಿದುಕೊಂಡಿದೆ. ಅನೇಕ ಕ್ಷೇತ್ರಗಳು ನೆಲಕಚ್ಚಿದ್ದು ಉಂಟು. ಸರ್ಕಾರ ಕೆಲವು ಉದ್ಯಮ ನಡೆಸಲು ಅವಕಾಶ ಕೊಟ್ಟರೆ, ಇನ್ನೂ ಕೆಲವು ಉದ್ಯಮಗಳಿಗೆ ನಿಯಮ ಸೂಚನೆ ನೀಡಿ ಅವಕಾಶ ಕೊಟ್ಟಿದೆ. ಅದರಲ್ಲಿ ಚಿತ್ರರಂಗವೂ ಒಂದು. ಎಲ್ಲಾ ಉದ್ಯಮಕ್ಕೂ ಸರ್ಕಾರ ದುಡಿಮೆಗೆ ಅವಕಾಶ ಕಲ್ಪಿಸಿದೆ. ಆದರೆ, ಚಿತ್ರರಂಗಕ್ಕೆ ಮಾತ್ರ ಶೇ.೫೦ರಷ್ಟು ಅವಕಾಶ ಕಲ್ಪಿಸಿದೆ. ಸ್ಟಾರ್‌ ಸಿನಿಮಾಗಳನ್ನು ಹೊರತುಪಡಿಸಿದರೆ ಚಿತ್ರಮಂದಿರಗಳು ಶೇ.೬೦, ೫೦ ಮಾತ್ರ ಭರ್ತಿ ಆಗುತ್ತವೆ. ಈಗ ಶೇ.೫೦ಕ್ಕೆ ಮಾತ್ರ ಅನುಮತಿ ಕೊಡಲಾಗಿದೆ.

ಸ್ಟಾರ್‌ ಸಿನಿಮಾ ರಿಲೀಸ್‌ ಆದರೂ, ಶೇ.೫೦ರಷ್ಟು ಮಾತ್ರ ಅವಕಾಶ. ಹೀಗಾಗಿ ದೊಡ್ಡ ಬಜೆಟ್‌ನ ಸಿನಿಮಾಗಳು ಬಿಡುಗಡೆ ಮಾಡಲು ಹಿಂಜರಿಯುತ್ತಿವೆ. ಕೋಟಿಗಟ್ಟಲೆ ಬಂಡವಾಳ ಹೂಡಿ, ಈಗ ರಿಲೀಸ್‌ ಮಾಡಿಬಿಟ್ಟರೆ, ಶೇ.೫೦ರಷ್ಟು ಜನ ಬರಲು ಅವಕಾಶವಿದೆ. ಇನ್ನರ್ಧ ನಿರ್ಮಾಪಕರಿಗೂ ನಷ್ಟ. ಥಿಯೇಟರ್‌ ಮಾಲೀಕರಿಗೂ ಸಮಸ್ಯೆ. ಹೀಗಾಗಿ, ಶೇ.೧೦೦ ರಷ್ಟು ಅನುಮತಿ ಕೊಟ್ಟಾಗಲಷ್ಟೇ ಸ್ಟಾರ್‌ ಸಿನಿಮಾಗಳು ರಿಲೀಸ್‌ ಆಗುತ್ತವೆ. ಉಳಿದಂತೆ ಸಣ್ಣ ಬಜೆಟ್‌ನ ಸಿನಿಮಾಗಳು, ಹೊಸಬರ ಚಿತ್ರಗಳು ಕೂಡ ಥಿಯೇಟರ್‌ ಕಡೆ ಮುಖ ಮಾಡುತ್ತವೆ.

ಈ ನಿಟ್ಟಿನಲ್ಲಿ ನಟ ನೆನಪಿರಲಿ ಪ್ರೇಮ್‌ ಕೂಡ ಸರ್ಕಾರಕ್ಕೆ ಒಂದಷ್ಟು ಮನವಿ ಮಾಡಿದ್ದಾರೆ. “ಸರ್ಕಾರ ಶೇ.೫೦ರಷ್ಟು ಮಾತ್ರ ಚಿತ್ರಮಂದಿರಕ್ಕೆ ಅನುಮತಿ ನೀಡಿದೆ. ಹೀಗಾಗಿ ಮನರಂಜನೆ ಕ್ಷೇತ್ರ ಮಂಕಾಗಿದೆ. ಬೇರೆ ಉದ್ಯಮಗಳಿಗೆ ಪೂರ್ಣ ಅನುಮತಿ ನೀಡಲಾಗಿದೆ. ಆದರೆ, ಚಿತ್ರರಂಗಕ್ಕೆ ಆ ಅವಕಾಶವಿಲ್ಲ. ಬಾರ್‌, ಪಬ್‌, ರೆಸ್ಟೋರೆಂಟ್‌, ಹೋಟೆಲ್‌ಗಳಿಗೆ ಇಲ್ಲಿದ ನಿಯಮ ಚಿತ್ರರಂಗಕ್ಕೆ ಯಾಕೆ? ಈ ಫಿಫ್ಟಿ ಎಂಬ ಕಾನ್ಸೆಪ್ಟ್‌ನಿಂದ ಚಿತ್ರರಂಗ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಸರ್ಕಾರ ಶೇ.೧೦೦ರಷ್ಟು ಅನುಮತಿ ಕೊಟ್ಟರೆ, ಚಿತ್ರರಂಗ ಖಂಡಿತವಾಗಲೂ ಮೊದಲಿನಿಂತೆ ಎದ್ದು ನಿಲ್ಲುತ್ತದೆ. ಹಾಗಾಗಿ, ಇತ್ತ ಗಮನಿಸುವ ಮೂಲಕ ಚಿತ್ರೋದ್ಯಮದ ಕಡೆಯೂ ಒಲವು ತೋರಬೇಕು ಎಂದು ನೆನಪಿರಲಿ ಪ್ರೇಮ್‌ ಮನವಿ ಮಾಡಿದ್ದಾರೆ.


ಪ್ರೇಮ್‌ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಪ್ರೇಮ್‌ ಅವರಿಗೂ ಈ ಚಿತ್ರ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಅವರೇ ಹೇಳುವಂತೆ, ಅದೊಂದು ಹೊಸ “ಗೀತಾಂಜಲಿ” ಅನ್ನುತ್ತಾರೆ. “ಪ್ರೇಮಂ ಪೂಜ್ಯಂ” ಕಾಯಾ ವಾಚಾ ಮನಸ ಮಾಡಿರುವ ಚಿತ್ರ. ಸದ್ಯಕ್ಕೆ ಚೆನೈನಲ್ಲಿ ಎಸ್‌ಎಫ್‌ಎಕ್ಸ್‌ ಕೆಲಸ ನಡೆಯುತ್ತಿದೆ. ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇರುವುದಾಗಿ ಹೇಳುವ ಪ್ರೇಮ್‌ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಕೊರೊನಾ ಹಾವಳಿ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾದ ಬಳಿಕ ಹೊಸ ಘೋಷಣೆ ಮಾಡುವ ಉತ್ಸಾಹದಲ್ಲೂ ಇದ್ದಾರೆ.

error: Content is protected !!