Categories
ಸಿನಿ ಸುದ್ದಿ

ದಿಗಂತ್‌ ಹುಟ್ಟುಹಬ್ಬದ ಶುಭಾಶಯಗಳು; ಡಿ.31ಕ್ಕೆ ರಾಜ್ಯಾದ್ಯಂತ ಬಿಡುಗಡೆ

ದಿಗಂತ್‌ ಅಭಿನಯದ “ಹುಟ್ಟು ಹಬ್ಬದ ಶುಭಾಶಯಗಳು” ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಡಿಸೆಂಬರ್‌ 31ರಂದು ರಿಲೀಸ್‌ ಆಗುತ್ತಿದೆ. ಈ ಚಿತ್ರಕ್ಕೆ ಕ್ರಿಸ್ಟಲ್ ಪಾರ್ಕ್‌ ಸಿನಿಮಾಸ್ ಬ್ಯಾನರ್‌ ನಲ್ಲಿ ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್ ನಿರ್ಮಾಣ ಮಾಡಿದ್ದಾರೆ.

ನಾಗರಾಜ್ ನಿರ್ದೇಶನದ ಈ ಚಿತ್ರಕ್ಕೆ ದಿಗಂತ್ ಅವರಿಗೆ ನಾಯಕಿಯಾಗಿ ಕವಿತಾ ಗೌಡ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಚೇತನ್ ಗಂಧರ್ವ, ಮಡೆನೂರು ಮನು, ಶರಣ್ಯ ಶೆಟ್ಟಿ, ಸೂರಜ್, ಸೂರ್ಯ ಮುಂತಾದವರು ನಟಿಸಿದ್ದಾರೆ.

ಪ್ರಸನ್ನ ಕಥೆ, ಚಿತ್ರಕಥೆ ಬರೆದಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಆನಂದ್ ರಾಜ್ ವಿಕ್ರಂ ಹಿನ್ನೆಲೆ ಸಂಗೀತ, ಅಭಿಲಾಶ್ ಕಲತ್ತಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸರಾಫ್ ಅವರ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಪುನೀತ್ – ಯಶ್ವಂತ್‌ ನಮನ ;‌ ಡಿ.30ರ ಸಂಜೆ ನೃತ್ಯ ಸಂಗೀತ ಸಮ್ಮಿಲನ-

ಕನ್ನಡದ ಚಿತ್ರರಂಗಕ್ಕೆ ಪುನೀತ್‌ ನಿಧನ ಬರಸಿಡಿಲು ಬಡಿದಂತಾಗಿದ್ದು ನಿಜ. ಇಂದಿಗೂ ಅವರಿಲ್ಲ ಅನ್ನುವ ಭಾವನೆ ಯಾರಲ್ಲೂ ಇಲ್ಲ. ಅಂತಹ ನಟನ ಬಗ್ಗೆ ಗುಣಗಾನ ಮಾಡದವರಿಲ್ಲ. ಅವರ ನೆನಪಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆ ಸಾಲಿಗೆ ಈಗ ಅವರ ಸ್ಮರಣಾರ್ಥ “ನೃತ್ಯ ಸಂಗೀತ ಸಮ್ಮಿಲನ” ಕಾರ್ಯಕ್ರಮ ಆಯೋಜಿಸಲಾಗಿದೆ. ಹೌದು, ವೈಕೆ ಕ್ರಿಯೇಷನ್ಸ್‌ ಮೂಲಕ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದೆ ಕೋವಿಡ್‌ನಿಂದ ಮೃತಪಟ್ಟ ಯಶವಂತ್‌ ಕುಮಾರ್‌ ಅವರ ನೆನಪಿಗೂ ಈ ಅಪರೂಪದ ಕಾರ್ಯಕ್ರಮ ನಡೆಯುತ್ತಿದ್ದು, ಅವರ ಕುಟುಂಬದ ಸಹಾಯಾರ್ಥ ನಡೆಸಲಾಗುತ್ತಿದೆ. ಅಂದಹಾಗೆ, ಡಿಸೆಂಬರ್‌ ೩೦ರಂದು ಸಂಜೆ ೪ ಗಂಟೆಗೆ ಗಾಂಧಿನಗರದ ಗುಬ್ಬಿ ರಂಗಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.


ಅಂದು ಶಾಸಕ ಭೈರತಿ ಸುರೇಶ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅವರೊಂದಿಗೆ ಮಹೇಂದ್ರ ಮನೋತ್‌, ರೇಖಾ ಎಸ್.ರಾವ್‌, ಹರೀಶ್‌ ಕುಮಾರ್‌, ಶಾಂತಾ ಕೃಷ್ಣಮೂರ್ತಿ, ಗಂಡಸಿ ಸದಾನಂದಸ್ವಾಮಿ ನಟ ಬಾಲರಾಜ್, ನಿರ್ಮಾಪಕರಾದ ಡಾ.ಕೃಷ್ಣ, ಕೆ.ಕೃಷ್ಣಮೂರ್ತಿ ಸೇರಿದಂತೆ ಇನ್ನೂ ಅನೇಕ ಚಿತ್ರರಂಗದ ಗಣ್ಯರು, ಸಮಾಜ ಸೇವಕರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ.


ಅಂದಹಾಗೆ, ಬದುಕಿನ ಬಗ್ಗೆ ನೂರೆಂಟು ಕನಸು ಹೊತ್ತಿದ್ದ ಯುವ ಉತ್ಸಾಹಿ ಫೋಟೋಗ್ರಾಫರ್‌, ರ್ಯಾಪರ್, ವಿಡಿಯೋ ಎಡಿಟರ್, ಡ್ಯಾನ್ಸರ್, ಲಿರಿಕ್ ರೈಟರ್, ಶಾರ್ಟ್ ಫಿಲ್ಮ್ ಡೈರೆಕ್ಟರ್ ಯಶವಂತ್‌ಕುಮಾರ್‌ ಅವರು ಕೋವಿಡ್‌ನಿಂದಾಗಿ ನಿಧನರಾದರು. ಅವರೀಗ ನೆನಪು ಮಾತ್ರ. ಅವರ ಆಕಾಲಿಕ ಮರಣ ಅವರ ಕುಟುಂಬವನ್ನು ಮಾತ್ರವಲ್ಲ ಆತನ ಅದೆಷ್ಟೋ ಮಂದಿ ಸ್ನೇಹಿತರನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ. ಅದರಲ್ಲೂ ಮಗನನ್ನು ಅತೀವ ಪ್ರೀತಿಯಿಂದ ಸಾಕಿ ಸಲಹಿದ್ದ ಅವರ ತಾಯಿ ಇಂದಿಗೂ ದುಃಖದಲ್ಲಿದ್ದಾರೆ. ಯುವ ಊತ್ಸಾಹಿ ಪ್ರತಿಭಾವಂತ ಹುಡುಗ ಯಶವಂತ್‌ ಕುಮಾರ್, ಕನ್ನಡ ಚಿತ್ರರಂಗದ ಪೋಷಕ ನಟಿ ರಾಣಿ ಅವರ ಪುತ್ರ.‌

ತಾಯಿ ಕಲಾ ಜಗತ್ತಿನಲ್ಲಿದ್ದಾರೆಂಬ ಸೆಳೆತದಿಂದ ಚಿಕ್ಕ ವಯಸ್ಸಿನಲ್ಲಿಯೇ ವಿಡಿಯೋ ಎಡಿಟಿಂಗ್‌ ಹಾಗೂ ಫೋಟೋಗ್ರಫಿ ಕಲಿತು, ತನ್ನ ಕಾಲ ಮೇಲೆ ತಾನು ನಿಲ್ಲಲು ಹೊರಟಿದ್ದ ಯುವ ಪ್ರತಿಭೆ. ಸಾಕಷ್ಟು ಮಂದಿ ಮಾಡೆಲಿಂಗ್‌ ಬೆಡಗಿಯರ ಫೋಟೋಗಳನ್ನು ಕ್ಕಿಕ್ಕಿಸಿದ್ದು ಯಶವಂತ್‌ ಫೋಟೋಗ್ರಫಿಯ ವಿಶೇಷವೇ ಹೌದು. ಡಿಜೆಯಾಗಿಯೂ ಗುರುತಿಸಿಕೊಂಡಿದ್ದ ಯಶವಂತ್‌, ಸಾಕು ನಾಯಿಗಳ ಮೇಲೆ ಅತೀವ ಪ್ರೀತಿ ಹೊಂದಿದ್ದರು. ವಿದೇಶದ ದುಬಾರಿ ನಾಯಿಗಳನ್ನು ತರಿಸಿ, ಅವುಗಳನ್ನು ಅಷ್ಟೇ ಮುತುವರ್ಜಿಯಿಂದ ಸಾಕುತ್ತಿದ್ದ ಆತನ ಶ್ವಾನ ಪ್ರೀತಿ ಬಣ್ಣಿಸಲಾಗದು. ಮನುಷ್ಯರಷ್ಟೇ ತನ್ನ ಸಾಕು ನಾಯಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ವಿಧಿಯಾಟ ಆತನನ್ನು ಬಹುಬೇಗ ಸೆಳೆದುಕೊಂಡು ಬಿಟ್ಟಿತು.

ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಯಶವಂತ್, ತುಂಬಾ ಮೃದು ಸ್ವಭಾವದ ಹುಡುಗ. ಸದಾ ಏನಾದರೊಂದು ಹೊಸತನ್ನು ಮಾಡುವ ಹಂಬಲ ಅವನಲ್ಲಿತ್ತು. ಜೀವನದಲ್ಲಿ ಸಾಧಿಸಿ ಮುಂದೆ ಬರಬೇಕು ಎಂದು ಹಗಲಿರುಳು ಎಲ್ಲಾ ವಿಭಾಗಗಳಲ್ಲೂ ದುಡಿಯುತ್ತಿದ್ದ ಯಶವಂತ್, ಸಿನಿಲಹರಿ ಕಚೇರಿಯಲ್ಲಿ ವಿಡಿಯೋ ಎಡಿಟರ್ ಆಗಿಯೂ ಕೆಲಸ ಮಾಡುತ್ತಿದ್ದರು. ಸದಾ ಉತ್ಸಾಹದಲ್ಲಿರುತ್ತಿದ್ದ ಯಶವಂತ್ ದೈಹಿಕವಾಗಿ ಇಲ್ಲ. ಆದರೆ ಮಾನಸಿಕವಾಗಿ ಅವರು ಜೊತೆಗಿದ್ದಾರೆ.

ಅಪ್ಪು ಅವರೂ ಸದಾ ನೆನಪಲ್ಲಿರುವ ಜೀವ. ಹಾಗಾಗಿ, ಅವರ ನಟಿ ರಾಣಿ ಅವರು ತಮ್ಮ ಪುತ್ರನ ನೆನಪಿಗಾಗಿ, ಅಪ್ಪು ಅವರ ಮೇಲಿರುವ ಅಭಿಮಾನಕ್ಕಾಗಿಯೇ, ಈ ನೃತ್ಯ ಸಂಗೀತ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದ್ದಾರೆ. ಅಂದು ಸಿನಿರಂಗದ ಕಲಾವಿದರು, ತಾಂತ್ರಿಕ ವರ್ಗದವರು ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ಬಿ.ಎಲ್. ವೇಣು ಕಾದಂಬರಿ ಚಿತ್ರಕ್ಕೆ ಪ್ರಶಸ್ತಿ; ‌ದನಗಳು ಸಿನಿಮಾಗೆ ಫಿಲ್ಮಾಹಾಲಿಕ್‌ ಚಿತ್ರೋತ್ಸವದಲ್ಲಿ ಜ್ಯೂರಿ ಅವಾರ್ಡ್…

ಕೆಲವು ಸಿನಿಮಾಗಳು ಬಿಡುಗಡೆ ನಂತರ ಸುದ್ದಿಯಾಗುತ್ತವೆ. ಇನ್ನೂ ಕೆಲವು ಸಿನಿಮಾಗಳು ಬಿಡುಗಡೆಗೂ ಮೊದಲೇ ಜೋರು ಸುದ್ದಿಯಾಗುತ್ತವೆ. ಆ ಸಾಲಿಗೆ “ದನಗಳು” ಸಿನಿಮಾ ಇದೀಗ ಬಂದಿರುವ ಸುದ್ದಿಯಲ್ಲಿದೆ. ಹೌದು, ಈ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅದಕ್ಕೂ ಮೊದಲು ಒಂದು ಸಂಭ್ರಮದ ಸುದ್ದಿಯೆಂದರೆ, ಈ ಚಿತ್ರಕ್ಕೆ ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆ ನಡೆಸಿದ ಎರಡನೇ ವರ್ಷದ ಸಿನಿಮಾಂತರಂಗ ಚಿತ್ರೋತ್ಸವದಲ್ಲಿ ಜ್ಯೂರಿ ಅವಾರ್ಡ್‌ ಪಡೆದುಕೊಂಡಿದೆ. ಸಹಜವಾಗಿಯೇ ಚಿತ್ರತಂಡದಲ್ಲಿ ಸಂಭ್ರಮ ಮನೆಮಾಡಿದೆ

ಫಿಲ್ಮಾಹಾಲಿಕ್‌ ಫೌಂಡೇಶನ್‌ ಸಂಸ್ಥೆ ಚಿತ್ರೋತ್ಸವದ ಜೊತೆಯಲ್ಲಿ ಪಬ್ಲಿಕ್‌ ಐ ಸೋಶಿಯಲ್‌ ಇಂಪ್ಯಾಕ್ಟ್‌ ಅವಾರ್ಡ್ಸ್‌ ಕೂಡ ನೀಡಿದ್ದು ವಿಶೇಷ. ಸುಮಾರು 60ಕ್ಕೂ ಹೆಚ್ಚು ಚಿತ್ರಗಳು ಈ ಚಿತ್ರೋತ್ಸವದಲ್ಲಿ ಭಾಗವಹಿಸಿ, ಪ್ರದರ್ಶನಗೊಂಡಿದ್ದವು. ಆ ಪೈಕಿ “ದನಗಳು” ಸಿನಿಮಾ ಕೂಡ ಪಾಲ್ಗೊಂಡಿತ್ತು. ವಿಶೇಷವಾಗಿ ಈ ಚಿತ್ರಕ್ಕೆ ಜ್ಯೂರಿ ಅವಾರ್ಡ್‌ ಸಿಕ್ಕಿದ್ದು, ಚಿತ್ರೋತ್ಸವದಲ್ಲಿ ನೋಡುಗರ ಪ್ರಶಂಸೆಯನ್ನೂ ಪಡೆದುಕೊಂಡಿದೆ.
ಅಂದಹಾಗೆ, ಇದು ಕಾದಂಬರಿ ಆಧಾರಿತ ಸಿನಿಮಾ. ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳಿಗೇನು ಕೊರತೆ ಇಲ್ಲ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಕಾಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೂ ಇವೆ. ಒಂದಷ್ಟು ಸಿನಿಮಾಗಳು ಸದ್ದು ಮಾಡಿದ್ದೂ ಇದೆ. ಈಗ ಆ ಸಾಲಿಗೆ “ದನಗಳು’ ಎಂಬ ಚಿತ್ರವೂ ಸೇರಿದೆ ಅನ್ನೋದು ವಿಶೇಷ.

“ದನಗಳು” ಕಥೆಗಾರ ಡಾ.ಬಿ.ಎಲ್‌.ವೇಣು ಅವರ ಕಾದಂಬರಿ ಆಧರಿಸಿದ ಚಿತ್ರ. ಈ ಚಿತ್ರಕ್ಕೆ ಬಾಲಾಜಿ ಪೋಳ್‌ ನಿರ್ದೇಶನ ಮಾಡಿದ್ದು, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಅದಕ್ಕೂ ಮುನ್ನ, ಫಿಲ್ಮಾಹಾಲಿಕ್‌ ಫೌಂಡೇಶನ್‌ ಸಂಸ್ಥೆ ನಡೆಸುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಜ್ಯೂರಿ ಅವಾರ್ಡ್‌ ಪಡೆದುಕೊಂಡಿದೆ. ಇನ್ನು, ಈ ಚಿತ್ರದ ಮೂಲಕ ಮಧು ಮಂದಗೆರೆ ಹೀರೋ ಆಗಿದ್ದಾರೆ. ಮಧು ಮಂದಗೆರೆ ಈಗಾಗಲೇ ಕಳೆದ ಒಂದುವರೆ ದಶಕಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾರಂಗದಲ್ಲಿದ್ದಾರೆ. ಕನ್ನಡದ ಬಹುತೇಕ ಸ್ಟಾರ್‌ ನಟರ ಜೊತೆ ನಟಿಸಿದ್ದಾರೆ. ಈಗಿನ ಯುವ ನಟರೊಂದಿಗೂ ನಟಿಸುತ್ತಿದ್ದಾರೆ. ಇದುವರೆಗೆ ಸುಮಾರು ೮೦ಕ್ಕೂ ಚಿತ್ರಗಳಲ್ಲಿ ನಟಿಸಿರುವ ಮಧು ಅವರಿಗೆ “ಧನಗಳು” ಸಿನಿಮಾ ತುಂಬಾನೇ ವಿಶೇಷವಾದದ್ದು. ಇಂಥದ್ದೊಂದು ಯಶಸ್ಸು ಸಿಕ್ಕ ಸಿನಿಮಾದಲ್ಲಿ ಮಧು ನಟಿಸಿದ್ದಾರೆ ಅನ್ನುವುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ಅವರು.

ಈ ಚಿತ್ರದಲ್ಲಿ ಮಧು ಮಂದಗೆರೆ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅವರು ಈವರೆಗೆ ನಟಿಸಿರುವ 75 ಸಿನಿಮಾಗಳ ಪೈಕಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟು ಮಸ್ತಾದ ದೇಹ ಅವರನ್ನು ಪೊಲೀಸ್‌ ಅಧಿಕಾರಿ ಪಾತ್ರ ಹುಡುಕಿ ಬರುವಂತಾಗಿದೆ.”ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, ಆ ಚಿತ್ರ ನನಗೊಂದು ಹೊಸ ಬದುಕು ಕಟ್ಟಿಕೊಡುತ್ತದೆ ಎಂಬ ವಿಶ್ವಾಸ ಮಧು ಮಂದಗೆರೆ ಅವರದು.


ಇನ್ನು, “ದನಗಳು” ಚಿತ್ರದ ಶೀರ್ಷಿಕೆ ಹೇಳುವಂತೆ, ಇದು ಕಲಾತ್ಮಕ ಚಿತ್ರ. ನೈಜ ಘಟನೆಯೊಂದನ್ನು ಲೇಖಕರು ಕಾದಂಬರಿಗೆ ಅಳವಡಿಸಿದ್ದು, ಅದನ್ನು ನೈಜವಾಗಿಯೇ ಚಿತ್ರೀಕರಿಸಿರುವ ಖುಷಿ ಚಿತ್ರ ನಿರ್ದೇಶಕರದ್ದು. “ದನಗಳು” ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ರಾತ್ರಿ ವೇಳೆಯಲ್ಲಿ ದನ, ಹಸುಗಳನ್ನು ವಾಹನಗಳಲ್ಲಿ ಸಾಗಿಸುವ ಮೂಲಕ ಅವುಗಳನ್ನು ಕಸಾಯಿ ಖಾನೆಗೆ ತಳ್ಳುವ ಗುಂಪಿನ ಕಥೆ ಹೈಲೈಟ್‌. ಆ ದುಷ್ಟ ಗುಂಪನ್ನು ಹಿಡಿದು, ಬಗ್ಗು ಬಡಿಯುವ ಪೊಲೀಸ್‌ ಅಧಿಕಾರಿ, ರೈತರ ಗೋವುಗಳನ್ನು ರಕ್ಷಣೆ ಮಾಡಿ ರೈತರಿಗೆ ಒಪ್ಪಿಸುವ ಕಥೆ ಇಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಕೆ.ಆರ್‌.ಪೇಟೆ, ಕಿಕ್ಕೇರಿ, ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ನಡೆದಿದೆ.

ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರತಂಡ, ನೋಡುಗರಿಗೆ ಇಷ್ಟವಾಗಲಿದೆ ಎನ್ನುತ್ತದೆ. ಚಿತ್ರದಲ್ಲಿ ಮಧು ಮಂದಗೆರೆ ಅವರಿಗೆ ನಟಿ ಸಂಗೀತಾ ಜೋಡಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ವಿವನ್‌ ಕೃಷ್ಣ, ಅಶೋಕ್‌ ಜಂಬೆ, ಸಂಪತ್‌, ಪ್ರಿಯಾ, ಚಂದ್ರು, ಹರಿಚರಣ ತಿಲಕ್‌, ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶ್ವನಾಥ್‌ ಛಾಯಾಗ್ರಹಣವಿದೆ. ಸ್ವಾಮಿ ಅವರ ಸಂಕಲನವಿದೆ. ಅರವ್‌ ರಿಶಿಕ್‌ ಸಂಗೀತವಿದೆ.

ಇತ್ತೀಚೆಗೆ ನಡೆದ ಚಿತ್ರೋತ್ಸವದಲ್ಲಿ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್, ಭಾರತ ಸಾರಥಿ ಹಾಗೂ ಶ್ರೀ ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಸಹಭಾಗಿತ್ವ ಹೊಂದಿದ್ದವು.

ಅಂದಿನ ಚಿತ್ರೋತ್ಸವದಲ್ಲಿ ಡಾ.ದೊಡ್ಡ ರಂಗೆ ಗೌಡ, ಸಂಗೀತ ನಿರ್ದೇಶಕ ವಿ.ಮನೋಹರ್‌, ಹೆಚ್.ಆರ್. ದಿಲೀಪ್ ಹಾಗು ಫಿಲ್ಮಾಹಾಲಿಕ್‌ ಫೌಂಡೇಶನ್‌ ಸಂಸ್ಥೆಯ ಪದಾಧಿಕಾರಿಗಳು ಚಿತ್ರೋತ್ಸವದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Categories
ಸಿನಿ ಸುದ್ದಿ

ಡಿಸೆಂಬರ್ 24 ಹಾಡುಗಳ ಸಂಭ್ರಮ!

ಗಾಂಧಿನಗರದಲ್ಲಿ ದಿನ ಕಳೆದಂತೆ ಹೊಸಬರ ಹೊಸತನದ ಚಿತ್ರಗಳು ಬರುತ್ತಿವೆ. ಆ ಸಾಲಿಗೆ ಡಿಸೆಂಬರ್ 24 ಕೂಡ ಸೇರಿದೆ. ಇದೊಂದು ಹಾರರ್, ಥ್ರಿಲ್ಲರ್, ಕಥಾನಕ ಹೊಂದಿರುವ ಚಿತ್ರ. ಇತ್ತೀಚೆಗೆ ಮೋಷನ್ ಪೋಸ್ಟರ್ ಹಾಗೂ ಆಡಿಯೋ ಬಿಡುಗಡೆಯಾಗಿದೆ

ಎಂಜಿ ಎನ್ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿರುವ ಡಿಸೆಂಬರ್ 24 ಚಿತ್ರಕ್ಕೆ ದೇವು ಹಾಸನ್ ಮೊದಲ ಬಾರಿಗೆ ನಿರ್ಮಾಪಕರಾಗುತ್ತಿದ್ದಾರೆ. ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆ ಆಧರಿಸಿ ಅವರು ನಿರ್ಮಾಣ ಮಾಡಿರುವ ಚಿತ್ರವಿದು. ಇದು ಹಾರರ್, ಥ್ರಿಲ್ಲರ್, ಕಥಾನಕ ಹೊಂದಿದ್ದು, ಮೋಷನ್ ಪೋಸ್ಟರ್ ಹಾಗು ಹಾಡುಗಳನ್ನು ಹೊರತರಲಾಗಿದೆ. ಶ್ರೀನಗರ ಕಿಟ್ಟಿ ತಂಡಕ್ಕೆ ಶುಭಕೋರಿದ್ದಾರೆ.

ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕಥೆ , ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಹುಲಿಯೂರು ದುರ್ಗ ಹಾಗೂ ದಾಂಡೇಲಿ ಸುತ್ತಮುತ್ತ ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು ಪ್ರವೀಣ್ ನಿಕೇತನ್ ಹಾಗೂ ವಿಶಾಲ್ ಆಲಾಪ್ ಸಂಗೀತ ನೀಡಿದ್ದಾರೆ. ನಾಗೇಂದ್ರಪ್ರಸಾದ್, ವಿಶಾಲ್ ಆಲಾಪ್ ಹಾಗೂ ಗೀತಾ ಆನಂದ್ ಪಟೇಲ್ ಸಾಹಿತ್ಯ ಬರೆದಿದ್ದಾರೆ. ಮೋಷನ್ ಪೋಸ್ಟರ್ ಬಿಡುಗಡೆ ‌ಮಾಡಿದ ಶ್ರೀನಗರ ಕಿಟ್ಟಿ, ‘ ಹೊಸಬರು ಚಿತ್ರ ಮಾಡಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದರು.

ಚಿತ್ರದಲ್ಲಿ ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ, ಸಾಗರ್, ‌ ಭೂಮಿಕಾ ರಮೇಶ್, ಮಿಲನಾ ರಮೇಶ್, ದಿವ್ಯ ಆಚಾರ್ ನಟಿಸಿದ್ದು, ಆನಂದ್ ಪಟೇಲ್ ಹುಲಿಕಟ್ಟೆ ಪಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿಲ್ ಗೌಡ ಖಳನಾಯಕನಾಗಿ ನಟಿಸಿದ್ದಾರೆ. ಎಂ.ಜಿ.ಎನ್. ಪ್ರೊಡಕ್ಷನ್ ಲಾಂಛನದಲ್ಲಿ ದೇವು ಹಾಸನ್, ಮಂಜು. ಡಿ. ಟಿ,ವಿ.ಬೆಟ್ಟೇಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.


ಉಸಿರಾಟದ ತೊಂದರೆಯಿಂದ ಮರಣ ಹೊಂದುತ್ತಿರುವ ಮಕ್ಕಳನ್ನು ರಕ್ಷಿಸಲು ಮೆಡಿಕಲ್ ರೀಸರ್ಚ್ ಗೆಂದು ಕಾಡಿಗೆ ತೆರಳುವ ಏಳು ಜನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಲ್ಲಿ ಎದುರಾದ ಸಮಸ್ಯೆಗಳು, ತೊಂದರೆಗಳ ಹಿನ್ನೆಲೆ ಏನು. ಅದರ ಹಿಂದೆ ಯಾರ್ಯಾರಿದ್ದಾರೆ ಎನ್ನುವುದೇ ಡಿಸೆಂಬರ್ 24 ಚಿತ್ರದ ಕಥೆ. 2015ರಿಂದ 2019ರೊಳಗೆ ನಡೆದ ಕೆಲ ನೈಜ ಘಟನೆಗಳನ್ನಿಟ್ಟುಕೊಂಡು ಮಾಡಿಕೊಂಡಿರುವಂತಹ ಚಿತ್ರ ಇದಾಗಿದ್ದು, ಪಕ್ಕಾ ಫ್ಯಾಮಿಲಿ ಲವ್, ಫ್ರೆಂಡ್ಷಿಪ್, ಹಾರರ್, ಥ್ರಿಲ್ ಅಂಶಗಳಿವೆ. ಆರ್ಯಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮಿಗಳು ಹಾಗೂ
ಬಾಮಾ ಹರೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿಡಿಯೋಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ರೈಡರ್ ಎಂಬ ಭರ್ಜರಿ ಪ್ಯಾಕೇಜ್ ಸಿನಿಮಾ!

ಚಿತ್ರ ವಿಮರ್ಶೆ

ನಿರ್ದೇಶನ ವಿಜಯ್ ಕುಮಾರ್ ಕೊಂಡ
ನಿರ್ಮಾಣ : ಸುನೀಲ್ ಗೌಡ, ಲಹರಿ ಸಂಸ್ಥೆ
ತಾರಾಗಣ; ನಿಖಿಲ್ ಕುಮಾರ್, ಕಶ್ಮೀರಾ, ದತ್ತಣ್ಣ, ಅಚ್ಯುತಕುಮಾರ್, ಚಿಕ್ಕಣ್ಣ, ಗರುಡ ರಾಮ್, ರಾಜೇಶ್ ನಟರಂಗ ಇತರರು

ಒಂದು ಸಿನಿಮಾ ಅಂದರೆ ಹೇಗಿರಬೇಕು? ಮೊದಲಿಗೆ ಒಂದೊಳ್ಳೆಯ ಕಥೆ ಇರಬೇಕು. ಅಲ್ಲಿ ಚಿತ್ರಕಥೆಯೇ ಹೈಲೈಟ್ ಆಗಿರಬೇಕು. ಒಂದೇ ವರ್ಗಕ್ಕೆ ಸೀಮೀತವಾಗಿರಬಾರದು. ಅಲ್ಲಿ ಪ್ರೀತಿ, ಪ್ರೇಮ, ಗೆಳೆತನ, ಸೆಂಟಿಮೆಂಟ್, ಬಾಂಧವ್ಯ, ಹಾಸ್ಯ ಹೀಗೆ ಎಲ್ಲದರ ಪಾಕವಿರಬೇಕು. ಅಂಥದ್ದೊಂದು ರುಚಿಯಾದ ಹೂರಣದ ಸವಿಯಿರುವ ಸಿನಿಮಾಗಳ ಸಾಲಿಗೆ ನಿಖಿಲ್ ಕುಮಾರ್ ಅಭಿನಯದ ‘ರೈಡರ್’ ಸಿನಿಮಾದಲ್ಲಿದೆ.

ಹೌದು, ಈ ವಾರ ತರೆಗೆ ಅಪ್ಪಳಿಸಿರುವ ‘ರೈಡರ್’ ಅಪ್ಪಟ ಪ್ರೇಮಕಥೆಯೊಂದಿಗೆ
ಭರ್ಜರಿ ಆ್ಯಕ್ಷನ್ ಇರುವ ಮಜಭೂತಾದ ಚಿತ್ರವಾಗಿ ಹೊರಹೊಮ್ಮಿದೆ.

ಇದೊಂದು ಲವ್ ಸ್ಟೋರಿ, ಸೆಂಟಿಮೆಂಟ್, ಎಮೋಶನ್‌ಸ್‌, ಕಾಮಿಡಿ, ಭರ್ಜರಿ ಆ್ಯಕ್ಷನ್ ಜೊತೆಗೆ ನೆನಪಿಸೋ ಹಾಡುಗಳು ಚಿತ್ರದ ವೇಗಕ್ಕೆ ಅಡ್ಡಿಯಾಗಿಲ್ಲ.
ಇನ್ನು, ಸಿನಿಮಾ ಕಥೆ, ಚಿತ್ರಕಥೆಯಲ್ಲಷ್ಟೇ ಅಲ್ಲ ಎಲ್ಲದರಲ್ಲೂ ಶ್ರೀಮಂತಿಕೆ ಇದೆ. ಅದರಲ್ಕೂ ಅದ್ಧೂರಿ ಮೇಕಿಂಗ್ ‌ಖುಷಿ ಕೊಡುತ್ತದೆ. ಇದು ಔಟ್ ಆ್ಯಂಡ್ ಔಟ್ ಮಾಸ್ ಎಲಿಮೆಂಟ್ಸ್ ಇರುವ ಸಿನಿಮಾ ಆಗಿರುವುದರಿಂದ ಮಾಸ್ ಆಡಿಯನ್ಸ್ ಗೆ ರುಚಿಸಲಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದು ರೈಡರ್ ಒನ್ ಲೈನ್..
ಒಂದು ಅನಾಥಾಶ್ರಮದಲ್ಲಿ ಭೆಟಿಯಾಗುವ ಕಿಟ್ಟಿ ಮತ್ತು ಚಿನ್ನು ಆ ಬಳಿಕ ಘಟನೆಯೊಂದರಲ್ಲಿ ಅವರಿಬ್ಬರೂ ಬೇರೆಯಾಗುತ್ತಾರೆ. ಮತ್ತೆ ಅವರಿಬ್ಬರೂ ದೊಡ್ಡವರಾದ ನಂತರ ಒಬ್ಬರನ್ನೊಬ್ಬರು ಹುಡುಕಿಕೊಂಡು ಹೊರಡುತ್ತಾರೆ. ಅವರಿಬ್ಬರ ಪ್ರೀತಿಯ ಹುಡುಕಾಟ, ಒಂದಷ್ಟು ತಳಮಳದ ಸುತ್ತ ಸಾಗುವ ಕಥೆಯಲ್ಲಿ ರೋಚಕತೆ ಇದೆ, ಕುತೂಹಲವೂ ಇದೆ. ಹಾಗಾದರೆ, ಕೊನೆಗೆ ಕಿಟ್ಟಿ ಮತ್ತು ಚಿನ್ನು ಇಬ್ಬರೂ ಸಿಗ್ತಾರ, ಒಂದಾಗ್ತಾರ ಅನ್ನುವ ಕುತೂಹಲ ನಿಮಗಿದ್ದರೆ ಒಮ್ಮೆ ರೈಡರ್ ಜೊತೆ ಹಾಗೊಂದು ರೈಡ್ ಮಾಡಿಬರಬಹುದು.

ಚಿತ್ರ ನೋಡುವರಿಗೆ ಇಲ್ಲಿ ಮೋಸ ಇಲ್ಲ ಎಂಬ ಗ್ಯಾರಂಟಿ ಕೊಡಬಹುದು. ಕೊಟ್ಟ ಕಾಸಿಗೆ ಭರಪೂರ ಮನರಂಜನೆಗಂತೂ ಧೋಕ ಆಗಲ್ಲ. ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರಿಗೊಂದು ಸ್ಪಷ್ಟತೆ ಇದೆ. ಈಗಿ ಯೂಥ್ಸ್ ಮನಸಲ್ಲಿಟ್ಟುಕೊಂಡು, ಫ್ಯಾನ್ಸ್ ಅನ್ನೂ ಗಮನದಲ್ಲಿಟ್ಟಕೊಂಡು ಮಜ ಎನಿಸೋ ಚಿತ್ರ ಕಟ್ಟಿಕೊಟ್ಟಿದ್ದಾರೆ.

ನಟನೆ ವಿಷಯಕ್ಕೆ ಬಂದರೆ.
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಎಷ್ಟು ಗಟ್ಟಿತನವಿದೆಯೋ ಪಾತ್ರದಲ್ಲೂ ಅಷ್ಟೇ ಗಟ್ಟಿತನ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಸಾರ್ಥಕ.

ನಟ ನಿಖಿಲ್ ಕುಮಾರ್ ಇಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಮತ್ತೆ ಅವರಿಲ್ಲಿ ಪಕ್ಜಾ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾಾರೆ. ಒಂದು ಮನೆಗೆ ಒಳ್ಳೆಯ ಮಗನಾಗಿ, ಗೆಳೆಯನಾಗಿ, ಹುಡುಕಾಟದ ಲವರ್ ಬಾಯ್ ಆಗಿ ನಿಖಿಲ್ ಗಮನಸೆಳೆಯುವುದರ ತಮ್ಮ ಪಾತ್ರವನ್ನು ಅಚ್ಚುಕಟ್ಟಾಾಗಿ ಕಟ್ಟಿಕೊಟ್ಟಿದ್ದಾರೆ.
ಇನ್ನು, ಭರ್ಜರಿ ಆ್ಯಕ್ಷನ್, ಡ್ಯಾಾನ್ಸ್‌ ಮತ್ತು ತಮ್ಮ ಹೊಸತನದ ಮ್ಯಾನರಿಸಂ ಮೂಲಕ ತಾವು ಮಾಸ್ ಹೀರೋ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ನಾಯಕಿ ಕಶ್ಮೀರಾ ಕೂಡ ಇಲ್ಲಿ ಅಕರ್ಷಿಸುತ್ತಾರೆ. ತಮ್ಮ ಬ್ಯೂಟಿ ಮತ್ತು ನಟನೆ ಈ ಎರಡರಿಂದಲೂ ಇಷ್ಟವಾಗುತ್ತಾರೆ. ಉಳಿದಂತೆ ಹಿರಿಯ ನಟ ದತ್ತಣ್ಣ, ಅಚ್ಯುತ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ರಾಜೇಶ್ ನಟರಂಗ, ಶೋಭರಾಜ್, ಗರುಡ ರಾಮ್ ಹೀಗೆ ಇನ್ನೂ ಅನೇಕ ಕಲಾವಿದರ ದಂಡು ತೆರೆಯ ಮೇಲೆ ಮೋಡಿ ಮಾಡಿದೆ.

ರೈಡರ್ ತಾಂತ್ರಿಕವಾಗಿ ಹೊಸತನದಿಂದ ಕೂಡಿದೆ. ಚಿತ್ರದ ಮೇಕಿಂಗ್ ನೋಡಿದವರಿಗೆ ನಿರ್ಮಾಪಕರ ಸಿನಿಮಾ ಪ್ರೀತಿ ಎಂಥದ್ದು ಅನ್ನೋದು ಗೊತ್ತಾಗುತ್ತೆ. ಭರ್ಜರಿಯಾಗಿ ಸಿನಿಮಾ ಕಥೆ ಡಿಮ್ಯಾಂಡ್ ಮಾಡಿದ್ದನ್ನು ಚಾಚೂ ತಪ್ಪದೆ ಮಾಡಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಹಾಡುಗಳು ಗುನುಗುವಂತಿವೆ.
ನೃತ್ಯ ನಿರ್ದೇಶಕ ಭೂಷಣ್ ಹಾಗೂ ಸಾಹಸ ನಿರ್ದೇಶಕ ಚೇತನ್ ಅವರ ಕೆಲಸ ಇಲ್ಲಿ ಗಮನಸೆಳೆಯುತ್ತದೆ.
ಒಟ್ಟಾರೆ ಇದು ಎಲ್ಲ ಮನರಂಜನಾತ್ಮಕ ಅಂಶಗಳನ್ನು ಹೊತ್ತು ಬಂದ ರೈಡರ್.

Categories
ಸಿನಿ ಸುದ್ದಿ

ಹಿರಿಯ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ…

ಹಿರಿಯ ನಿರ್ದೇಶಕರಾದ ಕೆ.ವಿ ರಾಜು ಇನ್ನಿಲ್ಲ. ಅವರ ಸಿನಿಮಾಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ನೇರ ನುಡಿ, ನಿಷ್ಟುರ ವ್ಯಕ್ತಿತ್ವದವರಾಗಿದ್ದ ಅವರು, ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದ್ದರು. ಇದು ಅವರ ಒಡನಾಡಿಗಳಿಗೆ ಗೊತ್ತು.

ನಿರ್ದೇಶಕ ಕೆ.ವಿ ರಾಜು
ಅವರು ಚಿತ್ರರಂಗದಲ್ಲಿ ನಿರ್ದೇಶಕ, ಬರಹಗಾರ ಮತ್ತು ಚಿತ್ರಕಥೆಗಾರರಾಗಿ ಗುರುತಿಸಿಕೊಂಡಿದ್ದರು. ಖ್ಯಾತ ನಿರ್ದೇಶಕ ಕೆವಿ ಜಯರಾಮ್ ಅವರ ಸಹೋದರರಾಗಿದ್ದ ಕೆವಿ ರಾಜು, 1982 ರಲ್ಲಿ ‘ಬಾಡದ ಹೂ’ ಚಿತ್ರದಲ್ಲಿ ತಮ್ಮ ಸಹೋದರನಿಗೆ ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. 1984 ರ ‘ಒಲವೇ ಬದುಕು’ ಮೂಲಕ ಅವರು ಬರಹಗಾರ ಹಾಗೂ ನಿರ್ದೇಶಕನಾಗಿ ಚಿತ್ರರಂಗದಲ್ಲಿ ನೆಲೆಕಂಡರು. ನಂತರದ ಕೆಲವೇ ವರ್ಷಗಳಲ್ಲಿ ಚಿತ್ರರಂಗದಲ್ಲಿ ಅದ್ಭುತ ಸಿನಿಮಾಗಳ ನಿರ್ದೇಶಕರಾಗಿ ಜನಮೆಚ್ಚುಗೆ ಪಡೆದರು.

ಅವರ ಸಿನಿಮಾ ವಿವರ; ಸಂಗ್ರಾಮ (1987), ಬಂಧ ಮುಕ್ತ (1987), ಯುದ್ಧಕಾಂಡ (1989), ಬೆಳ್ಳಿ ಮೋಡಗಳು, ಬೆಳ್ಳಿ ಕಾಲುಂಗುರ, ಮುಂತಾದ ಚಿತ್ರಗಳ ಮೂಲಕ ಅವರು ಬ್ಲಾಕ್ ಬಸ್ಟರ್ ನಿರ್ದೇಶಕ ಎಂದು ಗುರುತಿಸಿಕೊಂಡಿದ್ದರು.

1991ರಲ್ಲಿ ‘ಇಂದ್ರಜಿತ್’ ಚಿತ್ರದ ಮೂಲಕ ಬಾಲಿವುಡ್​ಗೂ ಕೆವಿ ರಾಜು ಪ್ರವೇಶಿಸಿದ್ದರು. ಅಮಿತಾಭ್ ಬಚ್ಚನ್ ಹಾಗೂ ಜಯಪ್ರದಾ ಆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ಮತ್ತೆರಡು ಹಿಂದಿ ಚಿತ್ರಗಳಿಗೂ ಅವರ ನಿರ್ದೇಶನವಿತ್ತು. ಹುಲಿಯಾ ಮರೆಯಲಾರದ ಸಿನಿಮಾಗಳಲ್ಲೊಂದು.

Categories
ಸಿನಿ ಸುದ್ದಿ

ಅರ್ಜುನ್ ಗೌಡ ಬರ್ತಾನೆ ಗುರು; ಡಿಸೆಂಬರ್ 31 ಪ್ರಜ್ವಲ್ ಅಬ್ಬರ!

ನಿರ್ಮಾಪಕ ರಾಮು ಅವರು ನಿರ್ಮಿಸಿರುವ ಕೊನೆಯ ಚಿತ್ರ “ಅರ್ಜುನ್ ಗೌಡ”.ಈಗ ತೆರೆಗೆ ಬರಲು ಸಜ್ಜಾಗಿದೆ. ರಾಮು ಅವರು ಈಗ ಇಲ್ಲ. ಆದರೆ, ಅವರ ಅದ್ಬುತ ಸಿನಿಮಾಗಳು ನಮ್ಮೊಂದಿಗಿವೆ.

ಪ್ರಜ್ವಲ್ ಚಿತ್ರದ ಹೀರೋ. ಈ ಬಗ್ಗೆ ಅವರು ಹೇಳಿದ್ದಿಷ್ಟು. ‘ ಅಂಕಲ್, ಕೇವಲ ನಿರ್ಮಾಪಕರಷ್ಟೇ ಅಲ್ಲ. ನಮ್ಮ ಕುಟುಂಬದ ಸದಸ್ಯರ ರೀತಿ ಇದ್ದರು. ನಮ್ಮ ತಂದೆಯವರ ಜೊತೆ ನಾನು ಚಿಕ್ಕವನಾಗಿದಾಗ ಅವರ‌ ನಿರ್ಮಾಣದ ಚಿತ್ರಗಳ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ನಾನು ಸಹ “ಗುಲಾಮ” ಚಿತ್ರದಿಂದ ಆರಂಭಿಸಿ ಅವರ ನಿರ್ಮಾಣದ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. “ಅರ್ಜುನ್ ಗೌಡ” ಆದ ಮೇಲೆ ಮತ್ತೊಂದು ಚಿತ್ರ ಆರಂಭಿಸೋಣ ಎಂದು ಹೇಳಿದ್ದರು.‌ ಅವರ ಸಾವಿನ ನೋವು ನಮ್ಮಗೆಲ್ಲಾ ತುಂಬಾ ಇದೆ. ಇದರ ನಡುವೆ ನಮ್ಮ ಚಿತ್ರ ಇದೇ ಡಿಸೆಂಬರ್ ‌31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆಕ್ಷನ್ ಚಿತ್ರಗಳ ನಿರ್ಮಾಣಕ್ಕೆ ಹೆಸರಾದ‌ ರಾಮು ಫಿಲಂಸ್ ಮೂಲಕ ‌ನಿರ್ಮಾಣವಾಗಿರುವ ಈ ಚಿತ್ರದಲ್ಲೂ ಭರ್ಜರಿ ಆಕ್ಷನ್ ಸನ್ನಿವೇಶಗಳಿವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಪ್ರಜ್ವಲ್ ದೇವರಾಜ್.

ಚಿತ್ರದಲ್ಲಿ ಜಾಹ್ನವಿ ಎಂಬ ಪಾತ್ರ ನನ್ನದು. ನಾಯಕನಿಗೆ ಉತ್ತಮ ಗೆಳತಿ. ಆತನನ್ನು ತುಂಬಾ ಪ್ರೀತಿಸುವ ಯುವತಿ.‌ ಪ್ರೀತಿ ಮೂಡಿದ ನಂತರ ಏನಾಗುತ್ತದೆ ಎಂಬುದು ಚಿತ್ರದ ಕಥಾವಸ್ತು. ‌ಚಿತ್ರ ಬಿಡುಗಡೆಗೆ ನಾನು ಕಾತುರದಲ್ಲಿದ್ದೇನೆ ಎಂದರು ನಾಯಕಿ ಪ್ರಿಯಾಂಕ ತಿಮ್ಮೇಶ್.

ರಾಮು ಫಿಲಂಸ್ ನಿರ್ಮಾಣದ 39 ನೇ ಸಿನಿಮಾ “ಅರ್ಜುನ್ ಗೌಡ”. ಇದೊಂದು ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ಆಕ್ಷನ್, ರೊಮ್ಯಾಂಟಿಕ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಚಿತ್ರದಲ್ಲಿ ಮನಸೂರೆಗೊಳ್ಳುವ ಸಾಹಸ ಸನ್ನಿವೇಶಗಳಿದೆ. “ಅರ್ಜುನ್ ಗೌಡ” ನೇರ ಸ್ವಭಾವದ ವ್ಯಕ್ತಿ. ಸಮಾಜದಲ್ಲಿನ ಕೆಲವು ತೊಡಕುಗಳನ್ನು ಸರಿಪಡಿಸಲು ಹೋರಾಡಲು ಸದಾ ಸಿದ್ದವಿರುವಾತ.

ಬರೀ ಮನೋರಂಜನೆ ಅಷ್ಟೇ ಅಲ್ಲ. ಈ ಚಿತ್ರದಲ್ಲಿ ಯುವಜನತೆಗೆ ಒಂದು ಒಳ್ಳೆಯ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಧರ್ಮವಿಶ್ ಸಂಗೀತ ನೀಡಿರುವ ಹಾಡುಗಳು ತುಂಬಾ ಚೆನ್ನಾಗಿದೆ.‌ ರಾಜ್ಯಾದ್ಯಂತ ಸುಮಾರು ‌ಇನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಶುಭ ಹಾರೈಕೆಯಿರಲಿ ಎಂದರು ನಿರ್ದೆಶಕ ಶಂಕರ್.

ಛಾಯಾಗ್ರಹಕ ಜೈ ಆನಂದ್, ರಾಮು ಫಿಲಂಸ್ ಕಡೆಯಿಂದ ಹನುಮಂತು ಹಾಗೂ ಸಂಕಲನಕಾರ ಅರ್ಜುನ್ ಕಿಟ್ಟು ಇದ್ದರು.

Categories
ಸಿನಿ ಸುದ್ದಿ

ಡಿಸೆಂಬರ್ 25ಕ್ಕೆ ಸಿನಿಮಾ ಅಂತರಂಗ ಚಿತ್ರೋತ್ಸವ ಪ್ರಶಸ್ತಿ ಪ್ರದಾನ; ಗಾಂಧಿಭವನದಲ್ಲಿ ವರ್ಣರಂಜಿತ ಸಮಾರಂಭ…

ಫಿಲ್ಮಾಲಿಕ್ ಫೌಂಡೇಶನ್ ಸಂಸ್ಥೆಯ ಎರಡನೇ ವರ್ಷದ ಸಿನಿಮಾ ಅಂತರಂಗ ಚಲನಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ ಆಯೋಜಿಸಿರುವುದು ಗೊತ್ತೇ ಇದೆ. ಡಿಸೆಂಬರ್ 25ರಂದು ಗಾಂಧಿ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್, ಭಾರತ ಸಾರಥಿ ಹಾಗೂ ಶ್ರೀ ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಸಹ ಪ್ರಾಯೋಜಕರಾಗಿದ್ದಾರೆ. ಐ ಕ್ಯಾಚ್ ಮೀಡಿಯಾ, ಸಿನಿ ಲಹರಿ, ಚಿತ್ತಾರ, ನಮ್ಮ ಸೂಪರ್ ಸ್ಟಾರ್ಸ್, ಎಂಎಂಎಂ ಮೀಡಿಯಾ, ಬಿ ಸಿನಿಮಾಸ್, ಸುರ್ವೇ ನ್ಯೂಸ್ ಹಾಗೂ ಪತ್ರಿಕೆ, ಸಿರಿ ಟಿವಿ, ಮಯೂರಿ ಸ್ಟುಡಿಯೋ, ಸ್ಟಾರ್ ಕನ್ನಡ, ಕನ್ನಡ ಫಿಲ್ಮೋಲಜಿ, ಫಿಲಂ ಗಪ್ಪ, ಪೂವರಿ, ಲೈವ್ ಬೆಂಗಳೂರು ಕನ್ನಡ, ಮಫ್ತಿ ನ್ಯೂಸ್, ಜಸ್ಟ್4u ಇನ್ಫೋಟೇನ್ಮೆಂಟ್, ರಿಯಲ್ ಟೈಮ್ಸ್, ಕೆ ಬಿಟ್ಸ್ ಮಾಧ್ಯಮಗಳು ಮೀಡಿಯಾ ಪಾರ್ಟ್ನರ್ ಆಗಿದ್ದು, ಮಾರುತಿ ಮೆಡಿಕಲ್ಸ್ ಕೂಡ ಸಾಥ್ ನೀಡಿದೆ.


ಅಂದು ಪದ್ಮಶ್ರೀ ಡಾ. ದೊಡ್ಡ ರಂಗೆ ಗೌಡ, ಭಾಸ್ಕರ್ ರಾವ್, ಡಾ. ರಾಮಲಿಂಗ ವೆಂಕಟ ರೆಡ್ಡಿ, ಸುನೀಲ್ ಪುರಾಣಿಕ್, ಗಂಡಸಿ ಸದಾನಂದ ಸ್ವಾಮಿ, ಡಾ. ಅಂಬರೀಶ್ ಜಿ., ಹೆಚ್. ಆರ್. ದಿಲೀಪ್ ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು, ಸಿನಿಮಾ ರಂಗದ ದಿಗ್ಗಜರು ರಂಗಭೂಮಿ ಕಲಾವಿದರು ಇರಲಿದ್ದಾರೆ. ಸಿನಿಮಾ ಅಂತರಂಗ ಚಲನಚಿತ್ರೋತ್ಸವದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಅಂದು 10ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ನಂತರ ಮಧ್ಯಾಹ್ನ 3:30ರವರೆಗೆ ಚಲನಚಿತ್ರ ಪ್ರದರ್ಶನವಿದೆ.
ಆ ಬಳಿಕ ಚಲನಚಿತ್ರ ನಿರ್ಮಾಣ ಕಾರ್ಯಾಗಾರ ಮತ್ತು ಚಲನಚಿತ್ರ ನಿರ್ಮಾಣ ಬಗ್ಗೆ ಚರ್ಚೆ ನಡೆಯಲಿದೆ.
ಸಂಜೆ 5ಕ್ಕೆ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ವಿಜಯಲಕ್ಷ್ಮಿ ಸತ್ಯಮೂರ್ತಿ ಬರೆದ ವ್ಯೂಹರೆ ಕಾದಂಬರಿ ಬಿಡುಗಡೆಯಾಗಲಿದೆ. ಪದ್ಮಶ್ರೀ ಡಾ. ದೊಡ್ಡ ರಂಗೆ ಗೌಡ ಅವರು ಬಿಡುಗಡೆ ಮಾಡಲಿದ್ದು, ನಂತರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Categories
ಸಿನಿ ಸುದ್ದಿ

ಪ್ರೇಮಿಗಳ ದಿನಕ್ಕೆ ಪ್ರೇಮ್ ಸಿನಿಮಾ: ಪ್ರೇಮಂ ಪೂಜ್ಯಂ ಭಾಗ 2 ಶುರುವಾಗಲಿದೆ…

ನೆನಪಿರಲಿ ಪ್ರೇಮ್ ಅಭಿನಯದ ಸಿನಿಮಾ ಎಂದರೆ ಕಾಲೇಜ್ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು, ಅವರು ಆರಂಭದಿಂದಲೂ ಯೂಥ್‌ಬೇಸ್ ಲವ್‌ಸ್ಟೋರಿಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ಬಿಡುಗಡೆಯಾದ ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂನಲ್ಲೂ ಸಹ ಅವರು ಮೆಡಿಕಲ್ ಸ್ಟೂಡೆಂಟ್ ಆಗಿ ಕಾಣಿಸಿಕೊಂಡು ಯುವ ಪ್ರೇಮಿಗಳ ಫೇವರೇಟ್ ಹೀರೋ ಆಗಿದ್ದಾರೆ. ಈ ಚಿತ್ರ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳನ್ನೇ ಆಕರ್ಷಿಸುತ್ತಿದೆ. ಡಾ.ಬಿ.ಎಸ್. ರಾಘವೇಂದ್ರ ಅವರ ನಿರ್ದೇಶನದ ಪ್ರೇಮಂ ಪೂಜ್ಯಂ ಚಿತ್ರ ಬಿಡುಗಡೆಯಾದ ಕಡೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರ 50ನೇ ದಿನದತ್ತ ಸಾಗುತ್ತಿದೆ. ನೂರನೇ ದಿನದತ್ತ ದಾಪುಗಾಲು ಹಾಕಿದೆ. ಚಿತ್ರವನ್ನು ವೀಕ್ಷಿಸಿದ ತಮಿಳು, ತೆಲುಗು ನಿರ್ಮಾಪಕರಿಂದ ರೀಮೇಕ್ ಹಕ್ಕಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಅಲ್ಲದೆ ಓಟಿಟಿಯಿಂದಲೂ ಉತ್ತಮ ಆಫರ್ ಬರುತ್ತಿದ್ದು, ನಿರ್ಮಾಪಕರು ಸದ್ಯ ಯಾವುದನ್ನೂ ಒಪ್ಪಿಕೊಳ್ಳದೆ ಚಿತ್ರವು ನೂರು ದಿನಗಳ ಪ್ರದರ್ಶನವಾದ ನಂತರ ಬೇರೆ ಭಾಷೆಗೆ ಕೊಡಬೇಕೆಂಬ ನಿರ್ಧಾರ ಮಾಡಿದ್ದಾರೆ.

ಇದರ ಜೊತೆಗೆ ಈಗಾಗಲೇ ನಿರ್ದೇಶಕ ಡಾ.ಬಿ.ಎಸ್. ರಾಘವೇಂದ್ರ ಅವರು ಚಿತ್ರದ ಮುಂದುವರಿದ ಭಾಗವಾಗಿ ಪ್ರೇಮಂ ಪೂಜ್ಯಂನ ಸೀಕ್ವೇಲ್ ಮಾಡಲು ಮುಂದಾಗಿದ್ದು, ಈಗಾಗಲೇ ಇದಕ್ಕೆ ಚಿತ್ರಕಥೆಯನ್ನೂ ಸಹ ರೆಡಿ ಮಾಡಿಕೊಂಡಿದ್ದಾರೆ. ಮುಂದಿನ ಭಾಗದಲ್ಲಿ ಒಂದಷ್ಟು ಕುತೂಹಲಕರ ಕಥೆಯನ್ನು ಬಿಚ್ಚಿಡಲು ನಿರ್ಧರಿಸಿದ್ದಾರೆ.

ಪ್ರೇಮಿಗಳ ದಿನವಾದ 2022ರ ಫೆಬ್ರವರಿ 14ರಂದು ಪೇಮಂ ಪೂಜ್ಯಂ ಚಿತ್ರದ 2ನೇ ಭಾಗಕ್ಕೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ಕಲಾವಿದ, ತಂತ್ರಜ್ಞರೇ ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ.
ನಾಯಕನ ಪ್ರೀತಿಯ ಕಥೆಯ ವಿವಿಧ ಮಜಲುಗಳನ್ನು ಹೇಳುವ ಕಥೆಯಿರುವ ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾರೇ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜ್ಯನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶವಿದೆ, ಡಾ.ರಕ್ಷಿತ್ ಕದಂಬಾಡಿ, ಡಾ. ರಾಜಕುಮಾರ್ ಜಾನಕಿರಾಮನ್, ಮನೋಜ್‌ ಕೃಷ್ಣನ್ ಹಾಗು ರಾಘವೇಂದ್ರ ಎಸ್. ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಡಾ.ಮಾಧವಕಿರಣ ಕಾರ್ಯಕಾರಿ ನಿರ್ಮಾಪಕರು.

Categories
ಸಿನಿ ಸುದ್ದಿ

ಕನ್ನಡ ಧ್ವಜ ಸುಟ್ಟು,ರಾಯಣ್ಣ ಪ್ರತಿಮೆ ಭಗ್ನ ಗೊಳಿಸಿದ ಪುಂಡರ ವಿರುದ್ಧ ನಟ ಶ್ರೀಮುರಳಿ ಆಕ್ರೋಶ!

ಕರುನಾಡಲ್ಲಿ ಎಂಇಎಸ್ ಪುಂಡಾಟಿಕೆ ಹೆಚ್ಚಾಗಿದೆ. ಕನ್ನಡ ಧ್ವಜ ಸುಟ್ಟು ಹಾಕಿ, ಸಂಗೊಳ್ಳಿ ರಾಯಣ್ಣ ಅವರಪ್ರತಿಮೆ ಭಗ್ನಗೊಳಿಸಲಾಗಿದೆ. ಇಡೀ ಕರುನಾಡೇ ಬೆಳಗಾವಿ ಕಡೆ ಧಾವಿಸಿದೆ. ಕನ್ನಡ ನೆಲದಲ್ಲಿದ್ದು, ಬದುಕು ಕಟ್ಟಿಕೊಂಡವರೆ ಇಂತಹ ಕೃತ್ಯ ಎಸಗಿದ್ದಾರೆ. ಅಂತಹವರನ್ನು ಶಿಕ್ಷಿಸಬೇಕು ಅಂತ ಕನ್ನಡಿಗರೇ ಧ್ವನಿ ಎತ್ತಿದ್ದಾರೆ.


ಚಿತ್ರರಂಗವೇ ಈಗ ಆ ವಿರುದ್ಧ ಎದ್ದು ನಿಂತಿದೆ. ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.


‘ಗಡಿಭಾಗ ಕನ್ನಡಿಗರ ಜೊತೆ ಸದಾ ನಾವಿದ್ದೇವೆ. ಕನ್ನಡ ಧ್ವಜ ಸುಟ್ಟು ಕನ್ನಡಿಗರ ಮನಸ್ಸು ಕೆರಳಿಸಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಮಾಡಿ ಅಕ್ರೋಶದ ಜ್ವಾಲೆಗೆ ಕಾರಣರಾಗಿದ್ದಾರೆ. ಇದು ಹೇಯ ಕೃತ್ಯ. ಕುರುನಾಡಲ್ಲೇ ಇದ್ದು ನಮ್ಮ ನೆಲ, ಜಲದಿಂದಲೇ ಬೆಳೆದು ಕನ್ನಡಿಗರನ್ನು ಕೆಣಕ್ಕಿದ್ದು ಕಿಚ್ಚು ಹೆಚ್ಚಿಸಿದೆ. ಅಂತಹವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

error: Content is protected !!