Categories
ಸಿನಿ ಸುದ್ದಿ

ದುನಿಯಾ ವಿಜಯ್ ಈಗ ಭೀಮ! ಸಲಗ ಬಳಿಕ ಮತ್ತೆ ನಿರ್ದೇಶನ

“ಸಲಗ” ಚಿತ್ರದ ಮೂಲಕ ಜನಮನ ಗೆದ್ದಿರುವ ದುನಿಯಾ ವಿಜಯ್, ತಮ್ಮ ನಿರ್ದೇಶನದ ಎರಡನೇ ಚಿತ್ರಕ್ಕೆ ಅಣಿಯಾಗಿದ್ದಾರೆ. ನೈಜಘಟನೆ ಆಧಾರಿತ ಕಥೆಯನ್ನು ಸಿದ್ದ ಮಾಡಿಕೊಂಡಿದ್ದಾರೆ.
ಈ ಚಿತ್ರಕ್ಕೆ “ಭೀಮ” ಎಂದು ಹೆಸರಿಡಲಾಗಿದೆ. ದುನಿಯಾ ವಿಜಯ್ ಈ ಚಿತ್ರದಲ್ಲಿ ನಿರ್ದೇಶನದೊಂದಿಗೆ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ.

ಕರುನಾಡ ಚಕ್ರವರ್ತಿ ಶಿವ
ರಾಜಕುಮಾರ್ ಅಭಿನಯದ “ಭೈರಾಗಿ” ಚಿತ್ರವನ್ನು ನಿರ್ಮಿಸುತ್ತಿರುವ ಕೃಷ್ಣ ಸಾರ್ಥಕ್ ಈ ಚಿತ್ರ‌ ನಿರ್ಮಾಣ ಮಾಡುತ್ತಿದ್ದಾರೆ. “ಸಲಗ” ಚಿತ್ರದ ವಿತರಕ ಜಗದೀಶ್ ಗೌಡ ಅವರು ಸಹ ಕೃಷ್ಣ ಸಾರ್ಥಕ್ ಅವರೊಂದಿಗೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

“ಟಗರು” ಖ್ಯಾತಿಯ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನಕಾರರಾಗಿ ಕಾರ್ಯ‌ ನಿರ್ವಹಿಸಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ.

ಮಹಾಶಿವರಾತ್ರಿಯ ಶುಭದಿನದಂದು “ಭೀಮ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Categories
ಸಿನಿ ಸುದ್ದಿ

ಅಪ್ಪು ಜೊತೆಗಿನ ಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಪುತ್ರ: ಕಿರೀಟಿ ಬಣ್ಣದ ಲೋಕಕ್ಕೆ ಎಂಟ್ರಿ…

ಅಪ್ಪು ಅಂದ್ರೆ ಅಪ್ಪುಗೆ, ಪ್ರೀತಿ, ಸ್ನೇಹ.. ಆತ್ಮೀಯತೆ.. ಸ್ಟಾರ್ ಅನ್ನುವ ಹಮ್ಮು ಬಿಮ್ಮು ಇಲ್ಲದೇ ಎಲ್ಲರೊಳಗೆ ಒಬ್ಬರಾಗಿ ಬೆರೆಯುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರೊಟ್ಟಿಗೆ ಒಡನಾಟ ಹೊಂದಿದ್ದವರು. ಅದೇ ರೀತಿ ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬಕ್ಕೂ ಅಪ್ಪುಗೆ ಕುಟುಂಬಕ್ಕೂ ಒಂದೊಳ್ಳೆ ಅವಿನಾಭಾವ ಸಂಬಂಧವಿತ್ತು. ಈಗ ಅಪ್ಪು ಆಶೀರ್ವಾದೊಂದಿಗೆ ಕಿರೀಟಿ ಬಣ್ಣದ ಲೋಕಕ್ಕೆ ಅಡಿ ಇಡಲು ಸಜ್ಜಾಗಿದ್ದಾರೆ. ಒಂದಷ್ಟು ತಯಾರಿ ಮಾಡಿಕೊಂಡು ದೊಡ್ಡ ತಾರಾಬಳಗ, ತಾಂತ್ರಿಕ ಬಳಗದೊಂದಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿರುವ ಕಿರೀಟಿ, ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಅಪ್ಪು ಸರಳತೆ ಕೊಂಡಾಡಿದ ಕಿರೀಟಿ!

ಅಪ್ಪು ಅಂದ್ರೆ ಕಿರೀಟಿಗೆ ಅಚ್ಚುಮೆಚ್ಚು. ಪ್ರೀತಿಯ ಹುಚ್ಚು. ಬಾಲ್ಯದಲ್ಲೊಮ್ಮೆ ಕಿರೀಟಿ ಅಪ್ಪು ಭೇಟಿಯಾದ ಕ್ಷಣ ಹಾಗೂ ಜಾಕಿ ರಿಲೀಸ್ ಸಂದರ್ಭದಲ್ಲಿ ಭೇಟಿಯಾದ ಎರಡು ಘಟನೆಗಳನ್ನು ನೆನಪಿಸಿಕೊಂಡು ಒಂದು ಭಾವನಾತ್ಮಕ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಅಪ್ಪು ಸರಳತೆ.. ವಿನಯತೆ, ನಮತ್ರೆ.. ಆತ್ಮೀಯತೆ ಎಲ್ಲವನ್ನು ಅದ್ಭುತ ಬರವಣೆಗೆ ಮೂಲಕ ಕಿರೀಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಿರೀಟಿ ಪೋಸ್ಟ್

ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸ 10 ವರ್ಷಗಳದ್ದು . ಆದರೂ ಆ ನೆನಪುಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 2010ರಲ್ಲಿ ಜಾಕಿ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ನಾನು ಅಪ್ಪು ಸರ್ ಅವರನ್ನು ಮೊದಲ ಸಲ ಭೇಟಿಯಾದೆ. ಅವರ ಡ್ಯಾನ್ಸ್, ಆ್ಯಕ್ಷನ್, ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಚ್ಚರಿಗೊಂಡಿದ್ದೆ. ಆದರೆ, ಅವರು ಆಫ್ ಸ್ಕ್ರೀನ್ ನಲ್ಲಿದ್ದ ರೀತಿ ಮನಸಿಗೆ ಹತ್ತಿರವಾಯಿತು.

ನಾವು ಥಿಯೇಟರ್‌ನಿಂದ ನನ್ನ ಮನೆಗೆ ಹೋಗುತ್ತಿದ್ದಾಗ, ಮಳೆ ಬೀಳುತ್ತಿತ್ತು ಆಗ ಅವರೇ ಕರೆದು ಮಾತಾಡಿಸಿದರು. ನೃತ್ಯದ ಬಗ್ಗೆ ಮತ್ತು ಅವರ ಆಕ್ಷನ್ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಅದು ಕನಸಿನಲ್ಲಿಯೂ ಊಹಿಸಲಾಗದ ಸಂಗತಿ. ಅದು ಪುನೀತ್ ಸರ್ ಅವರಿಂದ ಮಾತ್ರ ಸಾಧ್ಯ. ಆ ದಿನ ನಾನು ಸರಳತೆಯ ಮೌಲ್ಯವನ್ನು ಅರಿತೆ. ಇದು ಅಪ್ಪು ಸರ್ ಅವರಿಂದ ನಾನು ಅತ್ಯಮೂಲ್ಯವಾದ ಪಾಠ.

ಜಗತ್ತಿಗೆ ನನ್ನನ್ನು ಪರಿಚಯಿಸಿಕೊಳ್ಳಲು ಕೇವಲ ಒಂದು ದಿನ ಬಾಕಿ. ಇದೆಲ್ಲಾ ಶುರುವಾಗಿದ್ದು ಪುನೀತ್ ರಾಜ್‌ಕುಮಾರ್ ಸರ್ ಅವರಿಂದ. ಸ್ಫೂರ್ತಿ, ಮಾದರಿ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಜೀವನದ ಮಾರ್ಗದರ್ಶಿ ಅವರು. “ನಿಮ್ಮ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ ಸರ್”. ನನ್ನ ಮೇಲಿನ ನಿಮ್ಮ ನಂಬಿಕೆಯೆ ರಕ್ಷಾಕವಚ. ನಾನು ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನೀವು ಮತ್ತು ನಮ್ಮ ಜನತೆ ಯಾವಾಗಲೂ ಹೆಮ್ಮೆಪಡುವಂತೆ ಮಾಡಲು ಸದಾ ಶ್ರಮಿಸುತ್ತೇನೆ.

ಕಿರೀಟಿ ಹೀಗೆ ಅಪ್ಪು ಒಟ್ಟಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು, ತಮ್ಮ ಮುಂದಿನ ಸಿನಿಮಾ ಹಾದಿಗೆ ಜೊತೆಯಾಗಿ ಇರಬೇಕೆಂದು ಕೇಳಿಕೊಂಡಿದ್ದಾರೆ. ಅಪ್ಪು ಆರ್ಶೀವಾದದೊಂದಿಗೆ ಹೊಸ ಸಿನಿಮಾಗೆ ಕಿರೀಟಿ ಮುನ್ನುಡಿ ಬರೆಯುತ್ತಿದ್ದು, ನಾಳೆ (ಮಾರ್ಚ್ 4) ಅದ್ಧೂರಿಯಾಗಿ ಕಿರೀಟಿ ಬೊಚ್ಚಲ ಚಿತ್ರ ಸೆಟ್ಟೇರುತ್ತಿದೆ. ರಾಜಮೌಳಿಯ ಬಲದೊಂದಿಗೆ ರವಿಚಂದ್ರನ್ ನಂತಹ ದಿಗ್ಗಜ ತಾರೆಯರ ಸಾಥ್ ನೊಂದಿಗೆ ಕಿರೀಟಿ ಮೊದಲ ಸಿನಿಮಾ ಮುಹೂರ್ತ ನೆರವೇರಲಿದೆ.

Categories
ಸಿನಿ ಸುದ್ದಿ

ಅಪೂರ್ವ ನಿರ್ದೇಶನ! ಕನ್ನಡಕ್ಕೆ ಮತ್ತೊಬ್ಬ ನಿರ್ದೇಶಕಿ ಬಂದ್ರು…

ಅಪೂರ್ವ, ವಿಕ್ಟರಿ, ಕೃಷ್ಣ ಟಾಕೀಸ್ ಖ್ಯಾತಿಯ ನಟಿ ಅಪೂರ್ವ ಈಗ ನಿರ್ದೇಶಕಿಯಾಗಿದ್ದಾರೆ.
ಕನ್ನಡ ಚಿತ್ರರಂಗದ ನಿರ್ದೇಶಕಿಯರ ಸಾಲಿಗೆ ಮತ್ತೊಂದು ಯುವ ನಿರ್ದೇಶಕಿ ಸೇರ್ಪಡೆಯಾದಂತಾಗಿದೆ.


“ಓ ನನ್ನ ಚೇತನ ” ಸ್ಮಾರ್ಟ್ ಪೋನ್ ಜೀವನ ಅನ್ನೊ ಅಡಿ ಬರಹವಿರೋ ಈ ಚಿತ್ರವನ್ನ ಅಪೂರ್ವ, ಇಂದಿನ ಮಕ್ಕಳು ಹಾಗೂ ಸ್ಮಾರ್ಟ್ ಪೋನ್ ವಿಚಾರವನ್ನಿಟ್ಟುಕೊಂಡು ಚಿತ್ರವನ್ನ ನಿರ್ದೇಶಿಸಿದ್ದಾರೆ. ಅಪೂರ್ವ ಚೊಚ್ಚಲ ನಿರ್ದೆಶನದ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ.

ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಓ‌ ನನ್ನ ಚೇತನ ಆಯ್ಕೆಯಾಗಿದ್ದು, ಮಾರ್ಚ್ 9 ರಂದು 3:15ಕ್ಕೆ ಒರಾಯನ್ ಮಾಲ್ ಪಿವಿಆರ್ ನಲ್ಲಿ ಪ್ರದರ್ಶನವಾಗಲಿದೆ.

ಓ ನನ್ನ ಚೇತನ ಚಿತ್ರಕ್ಕೆ ನಿರ್ದೇಶಕ ಹರಿಸಂತು ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಗುರುಪ್ರಶಾಂತ್ ರೈ ಛಾಯಾಗ್ರಹಣವಿದೆ. ಪ್ರದೀಪ್ ವರ್ಮಾ ಸಂಗೀತ, ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.
ಎಸ್ ಅಂಡ್ ಎಸ್ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ದೀಪಕ್,ಸಾಯಿ ಅಶೋಕ್,ಹರೀಶ್,ಪ್ರಶಾಂತ್ ನಿರ್ಮಾಣ ಮಾಡಿದ್ದಾರೆ.

ಮಾಸ್ಟರ್ ಪ್ರತೀಕ್, ಬೇಬಿ ಡಿಂಪನಾ, ಮಾಸ್ಟರ್ ಶೌರ್ಯ, ಮಾಸ್ಟರ್ ಹರ್ಷ ಮುಖ್ಯಭೂಮಿಕೆಯಲ್ಲಿರೋ
ಓ ನನ್ನ ಚೇತನ ಚಿತ್ರವನ್ನ, ಎಲ್ಲಾ ಬಗೆಯ ರಂಜನೀಯ ಅಂಶಗಳೊಂದಿಗೆ ಕರ್ಮಷಿಯಲ್ ಚೌಕಟ್ಟಿನಲ್ಲೇ ಮಾಡಲಾಗಿದೆ. ಇದೀಗ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಸದ್ಯದಲ್ಲೇ ಟ್ರೈಲರ್ ನ ರಿಲೀಸ್ ಮಾಡಲಿದೆ.

Categories
ಸಿನಿ ಸುದ್ದಿ

ಕಿಚ್ಚನ ಮತ್ತೊಂದು ಹೊಸ ದಾಖೆಲೆ!‌ ವಿಕ್ರಾಂತ್‌ ರೋಣ ಪಾತ್ರಕ್ಕೆ ಇಂಗ್ಲಿಷ್‌ನಲ್ಲಿ ಡಬ್ ಮಾಡಿದ ಸುದೀಪ್

ಕನ್ನಡ ಚಿತ್ರರಂಗದಲ್ಲಿ ಮತ್ತೆ ಕಲರವ ಶುರುವಾಗಿದೆ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಂಡು, ಪುನಃ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದುಕೊಳ್ಳುವಲ್ಲಿ ರೆಡಿಯಾಗಿದೆ. ಹೌದು, ಈಗಾಗಲೇ ಕನ್ನಡ ಸಿನಿಮಾ ಪ್ರಪಂಚದಲ್ಲೂ ಮಿನುಗತೊಡಗಿದೆ. ಈಗಾಗಲೇ ಅದಕ್ಕೆ ಸಾಕ್ಷಿಯಾಗಿ ‘ಕೆಜಿಎಫ್’ ಇದೆ. ಈಗ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಸಾಕ್ಷಿಯಾಗುತ್ತಿದೆ. ಹೌದು, ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಈಗ ಮತ್ತೊಂದು ದಾಪುಗಾಲು ಇಟ್ಟಿದೆ. ಈ ಚಿತ್ರ ಇಂಗ್ಲೀಷ್ ಭಾಷೆಗೂ ಡಬ್ ಆಗಿದ್ದು, ವಿಶ್ವದ ಪ್ರಮುಖ ನಗರಗಳಲ್ಲಿ ಇಂಗ್ಲೀಷ್ ಅವತರಣಿಕೆಯಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ.‌

‘ವಿಕ್ರಾಂತ್ ರೋಣ’ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತಿದೆ. ಈಗ ಅದು ವಿಶ್ವಮಟ್ಟದ ಸಿನಿಮಾ ಕೂಡ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಮಾತ್ರವಲ್ಲ, ಇದೀಗ ಇಂಗ್ಲೀಷ್ ಭಾಷೆಯಲ್ಲಿಯೂ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಲಿದೆ ಎಂಬುದು ವಿಶೇಷ. ಅಂದಹಾಗೆ, ಇಂಗ್ಲೀಷ್ ಭಾಷೆಯಲ್ಲಿ ಸ್ವತಃ ಸುದೀಪ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಕನ್ನಡದ ನಟರೊಬ್ಬರು ಕಮರ್ಷಿಯಲ್ ಸಿನಿಮಾಕ್ಕೆ ಇಂಗ್ಲೀಷ್‌ನಲ್ಲಿ ಡಬ್ ಮಾಡಿರುವುದು ಇದೇ ಮೊದಲು. ಹಾಗಾಗಿ ಇದೊಂದು ದಾಖಲೆಯೇ ಹೀಗೆ ಕಮರ್ಷಿಯಲ್ ಸಿನಿಮಾ ಒಂದರ ಪಾತ್ರಕ್ಕಾಗಿ ಪೂರ್ಣ ಇಂಗ್ಲೀಷ್‌ನಲ್ಲಿ ಡಬ್ ಮಾಡಿದ ಭಾರತೀಯ ಕಲಾವಿದರು ಬಹಳ ವಿರಳ. ಈ ವಿರಳ ಕಲಾವಿದರ ಪಟ್ಟಿಗೆ ಈಗ ಸುದೀಪ್ ಸಹ ಸೇರಿಕೊಂಡಿದ್ದಾರೆ.

ಸುದೀಪ್ ಅವರು ‘ವಿಕ್ರಾಂತ್ ರೋಣ’ ಸಿನಿಮಾಕ್ಕಾಗಿ ಇಂಗ್ಲೀಷ್‌ನಲ್ಲಿ ಡಬ್ಬಿಂಗ್ ಮಾಡುತ್ತಿರುವ ವಿಡಿಯೋ ಒಂದನ್ನು ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸಿನಿಮಾದ ಒಂದು ಸಣ್ಣ ತುಣುಕನ್ನು ಸಹ ವಿಡಿಯೋದಲ್ಲಿ ಸೇರಿಸಿದ್ದಾರೆ. ಸುದೀಪ್ ಕಂಠದಲ್ಲಿ ಕನ್ನಡ ಮಾತ್ರವಲ್ಲ ಇಂಗ್ಲೀಷ್ ಡೈಲಾಗ್ ಸಖತ್‌ ಖಡಕ್‌ ಆಗಿದೆ. ‘ವಿಕ್ರಾಂತ್ ರೋಣ’ ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದಲೂ ಸಿನಿಮಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಟೀಸರ್ ಕೂಡ ದುಬೈನ ಬುರ್ಜ್‌ ಖಲೀಫಾದ ಮೇಲೆ ಬಿಡುಗಡೆ ಮಾಡಲಾಗಿತ್ತು. ಕನ್ನಡದ ಮಟ್ಟಿದೆ ಇದೊಂದು ದಾಖಲೆಯಾಗಿ ಉಳಿದಿದೆ. ವಿಕ್ರಾಂತ್ ರೋಣ’ ಆಕ್ಷನ್ ಥ್ರಿಲ್ಲರ್ ಸಿನಿಮಾ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ರವಿಶಂಕರ್, ನೀತಾ ಅಶೋಕ್, ಶ್ರದ್ಧಾ ಶ್ರೀನಾಥ್ ಇತರರು ಇದ್ದಾರೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಹೈಲೈಟ್‌ ಆಗಿದ್ದಾರೆ. ಜಾಕ್ ಮಂಜು ನಿರ್ಮಾಣವಿದೆ.

Categories
ಸಿನಿ ಸುದ್ದಿ

ಕೆಜಿಎಫ್‌ ಚಾಪ್ಟರ್‌ 2 ಟ್ರೇಲರ್‌ ರಿಲೀಸ್‌ ಡೇಟ್‌ ಫಿಕ್ಸ್;‌ ಮಾರ್ಚ್‌ 27ಕ್ಕೆ ಯಶ್‌ ಫ್ಯಾನ್ಸ್‌ಗೆ ಹಬ್ಬ!

ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2’ ಚಿತ್ರವನ್ನು ನಮ್ಮ ದೇಶವಷ್ಟೇ ಅಲ್ಲ, ಇಡೀ ವಿಶ್ವವೇ ಎದುರು ನೋಡುತ್ತಿದೆ. ಹೌದು, ‘ಕೆಜಿಎಫ್ ಚಾಪ್ಟರ್ 1’ ಎಲ್ಲಾ ಭಾಷೆಗಳಲ್ಲೂ ಹಿಟ್‌ ಆಗಿತ್ತು. ದೇಶವೇ ಒಂದೊಮ್ಮೆ ಇತ್ತ ತಿರುಗಿ ನೋಡಿತ್ತು. ಈಗ ‘ಕೆಜಿಎಫ್ 2’ ಹವಾ ಎಬ್ಬಿಸಿದೆ. ಸಿನಿಮಾ ಬಿಡುಗಡೆಗೆ ಸಾಕಷ್ಟು ಸಮಯವಿದ್ದರೂ, ಚಿತ್ರತಂಡ ಮಾತ್ರ ಟ್ರೇಲರ್‌ ರಿಲೀಸ್‌ ಮಾಡುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ. ಈಗ ‘ಕೆಜಿಎಫ್ 2’ ಚಿತ್ರದ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.


ಕೆಜಿಎಫ್ 2′ ಟ್ರೇಲರ್ ಮಾರ್ಚ್ 27ರ ಸಂಜೆ 6.40ಕ್ಕೆ ರಿಲೀಸ್ ಆಗಲಿದೆ ಎಂದು ಹೊಂಬಾಳೆ ಫಿಲಂಸ್‌ ಅನೌನ್ಸ್‌ ಮಾಡಿದೆ. ಈ ಮೂಲಕ ಟ್ರೇಲರ್‌ಗಾಗಿ ಎದುರು ನೋಡುತ್ತಿದ್ದವರ ಮೊಗದಲ್ಲಿ ಖುಷಿ ಇದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಟ್ರೇಲರ್ ಅಭಿಮಾನಿಗಳ ಕೈ ಸೇರಲಿದೆ. ಇಲ್ಲಿಯವರೆಗೂ ಟ್ರೇಲರ್ ಯಾವಾಗ ಎಂದು ಯೋಚಿಸುತ್ತಿದ್ದ ಫ್ಯಾನ್ಸ್‌ ಗೆ ಖುಷಿಯೋ ಖುಷಿ. ಸದ್ಯ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಟ್ರೇಲರ್‌ ಹೇಗಿರಲಿದೆ ಎಂಬ ಪ್ರಶ್ನೆಗಳು ಶುರುವಾಗಿವೆ. ಅದರಲ್ಲೂ ಚಿತ್ರದ ಪೋಸ್ಟರ್‌ ರಿಲೀಸ್‌ ಆದ ಕ್ಷಣದಿಂದಲೇ ಟ್ರೇಲರ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆ ಟ್ರೇಲರ್‌ನಲ್ಲಿ ಯಾವೆಲ್ಲ ಪಾತ್ರಗಳು ಇರಲಿವೆ ಎಂಬ ಕುತೂಹಲವೂ ಇದೆ. ಹೊಂಬಾಳೆ ಫಿಲಂಸ್‌ ಈಗ ಟ್ರೇಲರ್‌ ಬಿಡುಗಡೆ ಮಾಡುವುದನ್ನು ಸ್ಪಷ್ಟಪಡಿಸಿದೆ. ಕೊನೆಗೂ ‘ಕೆಜಿಎಫ್ 2’ ಟ್ರೇಲರ್ ಡೇಟ್ ರಿವೀಲ್ ಮಾಡುವ ಮೂಲಕ ಅಭಿಮಾನಿಗಳಲ್ಲಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದೆ.

ಅದೇನೆ ಇರಲಿ, ಕೊನೆಗೂ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಹೊಂಬಾಳೆ ಫಿಲಂಸ್‌ ತನ್ನ ಹೊಂಬಾಳೆ ಯುಟ್ಯೂಬ್ ಚಾನೆಲ್​ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದೆ.

ರಾಕಿಂಗ್ ಸ್ಟಾರ್​ ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ಮೊದಲ ಭಾಗ ಈಗಾಗಲೇ ಹೊಸ ಇತಿಹಾಸವನ್ನೇ ಬರೆದಿದೆ. ಇದೀಗ ಅದರ ಮುಂದುವರಿದ ಭಾಗದ ಮೇಲಿನ ಕುತೂಹಲಕ್ಕೂ ದಿನಗಣನೆ ಶುರುವಾಗಿದ್ದು, ಏ. 14ರಂದು ವಿಶ್ವದಾದ್ಯಂತ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷವೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದೂಡಲ್ಪಟ್ಟಿತ್ತು. ಇದೀಗ ಅದೆಲ್ಲದಕ್ಕೂ ಉತ್ತರ ಎಂಬಂತೆ ಸಿನಿಮಾ ಕಳೆದ ಸಲ ಘೋಷಿಸಿದ ದಿನದಂದೇ ತೆರೆಗೆ ಬರುತ್ತಿದೆ. ಹೊಂಬಾಳೆ ಸಿನಿಮಾ ಸಂಸ್ಥೆಯ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಎರಡನೇ ಭಾಗದಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರಿ ಸ್ಟಾರ್ ಕಲಾವಿದರ ದಂಡೇ ಇದೆ.

Categories
ಸಿನಿ ಸುದ್ದಿ

ಬೆಟ್ಟದ ದಾರಿ ತುಳಿದ ಮಕ್ಕಳು! ನೀರಿನ ಸಮಸ್ಯೆ ಪರಿಹರಿಸೋ ಕಥೆ ಇದು…

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮಕ್ಕಳ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ “ಬೆಟ್ಟದ ದಾರಿ” ಸಿನಿಮಾ ಕೂಡ ಒಂದು. ಬೆಟ್ಟದ ದಾರಿ ಅಂದಾಕ್ಷಣ ಥಟ್ಟನೆ ನೆನಪಾಗೋದೇ ಪುನೀತ್‌ ರಾಜಕುಮಾರ್‌ ಅವರು ನಟಿಸಿದ ಅದ್ಭುತ ಸಿನಿಮಾ ಬೆಟ್ಟದ ಹೂವು. ಹಾಗಂತ ಆ ಸಿನಿಮಾಗೆ ಈ ಚಿತ್ರವನ್ನು ಹೋಲಿಸುತ್ತಿಲ್ಲ. ಅದು ಬೆಟ್ಟದ ಹೂವು, ಇದು ಬೆಟ್ಟದ ದಾರಿ

ಇದೊಂದು ಉತ್ತರ ಕರ್ನಾಟಕ ಭಾಗದ ಕಥೆ. ಅದರಲ್ಲೂ ಅಲ್ಲಿನ ಜನರ ಬದುಕು ಬವಣೆ ಕುರಿತು ಹೇಳ ಹೊರಟಿರುವ ಕಥೆ. ಅದು ಬರಗಾಲದ ಪ್ರದೇಶ. ಆ ಭಾಗದ ಬಹುತೇಕ ಗ್ರಾಮಗಳಲ್ಲಿ ಬರಗಾಲವೇ ಹೆಚ್ಚು. ಜನರು ಕುಡಿಯಲೂ ನೀರು ಇಲ್ಲದೆ ಪರಿತಪಿಸುತ್ತಲೇ ಇದ್ದಾರೆ. ಅದಕ್ಕೆ ಪರಿಹಾರ ಅನ್ನೋದು ಗಗನ ಕುಸು. ಈ ಚಿತ್ರದ ಕಥೆ ಕೂಡ ಅದೇ ರೀತಿ ಇದೆ.

ಹೌದು, ಇಂಥದ್ದೊಂದು ಸಾಮಾಜಿಕ ಸಮಸ್ಯೆ ಇರುವಂತಹ ಕಥೆ ಇಟ್ಟುಕೊಂಡು ಮಕ್ಕಳ ಮೇಲೊಂದು ಸಿನಿಮಾ ಮಾಡಿರೋದು ನಿರ್ದೇಶಕ ಮಾ.ಚಂದ್ರು. ಈ ಹಿಂದೆ “ಬಂಗಾರಿ” ಸಿನಿಮಾ ಮಾಡಿದ್ದ ಮಾ.ಚಂದ್ರು ಆ ಬಳಿಕ “ನಡುಗಲ್ಲು” ಮತ್ತು “ಶಿವನಪಾದ” ಸಿನಿಮಾ ಮಾಡಿದ್ದಾರೆ. ಈಗ ಅವರ ನಿರ್ದೇಶನದ “ಬೆಟ್ಟದ ದಾರಿ” ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್‌ ೪ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ. ಇನ್ನು, ಈ ಚಿತ್ರ ಹೀರಾಲಾಲ್‌ ಮೂವೀಸ್‌ ಬ್ಯಾನರ್‌ನಲ್ಲಿ ತಯಾರಾಗಿದೆ. ಚಂದ್ರಕಲಾ ಟಿ.ಆರ್‌ ಹಾಗು ಮಂಜುನಾಥ ಹೆಚ್.ನಾಯಕ್‌ ಚಿತ್ರದ ನಿರ್ಮಾಪಕರು.

ತಮ್ಮ ಸಿನಿಮಾ ಕುರಿತು ಹೇಳುವ ನಿರ್ದೇಶಕರು, “ಇದೊಂದು ಮಕ್ಕಳ ಸಿನಿಮಾ. ಅದರಲ್ಲೂ ಸಾಹಸಮಯ ಕಥೆ ಇಲ್ಲಿದೆ. ಉತ್ತರ ಕರ್ನಾಟಕ ಭಾಗದ ಕಥೆ ಇಲ್ಲಿದೆ. ಒಂದು ಕುಗ್ರಾಮ. ಅಲ್ಲಿ ನೀರಿಲ್ಲದೆ ಜನ ಮತ್ತು ಜಾನುವಾರುಗಳು ಪರಿತಪಿಸುತ್ತವೆ. ನೀರಿಗಾಗಿ ಸಾಕಷ್ಟು ಹೋರಾಟ ನಡೆಸಿದರೂ ಅಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ. ನೀರಿಲ್ಲದೆಯೇ ಎಷ್ಟೋ ಸಾವು ನೋವುಗಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲೇ ಆ ಊರಿನ ಒಂದಷ್ಟು ಮಕ್ಕಳು ಒಗ್ಗೂಡಿ, ತನ್ನೂರಿಗೆ ಹೇಗಾದರೂ ಸರಿ ನೀರಿನ ಸಮಸ್ಯೆ ಪರಿಹರಿಸಬೇಕು ಅಂತ ಯೋಚಿಸುತ್ತಾರೆ.

ರಾಜಕಾರಣಿಗಳು, ಅಧಿಕಾರಿಗಳು ಯೋಚಿಸದೆ ನಿರ್ಲಕ್ಷಿಸುತ್ತಿರುವಾಗ, ಓದಿ, ಆಡಿ ನಲಿಯಬೇಕಾದ ಮಕ್ಕಳು ತನ್ನೂರಿನ ನೀರಿನ ಸಮಸ್ಯೆ ಪರಿಹರಿಸಬೇಕೆಂಬ ನಿಟ್ಟಿನಲ್ಲಿ ಹೋರಾಟಕ್ಕೆ ಸಜ್ಜಾಗುತ್ತಾರೆ. ಹೊಳೆಯ ನೀರನ್ನು ಊರಿಗೆ ತರಬೇಕು ಅಂತ ಹೋರಾಡಿದರೂ ಸಾಧ್ಯವಾಗುವುದಿಲ್ಲ. ಆದರೆ, ಒಂದು ವಿಶೇಷ ಸ್ಥಳದಿಂದ ನೀರು ಜಿನುಗುತ್ತದೆ. ಅದು ಕಡಿದಾದ ಬೆಟ್ಟದ ಮೇಲೆ. ಆ ಕಲ್ಲು ಮುಳ್ಳು ಹಾದಿಯಲ್ಲೇ ಸಾಗುವ ಒಂದಷ್ಟು ಮಕ್ಕಳು ತನ್ನೂರಿಗೆ ಅಲ್ಲಿಂದ ನೀರು ತರಲು ಮುಂದಾಗುತ್ತಾರೆ. ಅವರ ಹೋರಾಟ ಈಡೇರುತ್ತೋ ಇಲ್ಲವೋ ಅನ್ನೋದು ಚಿತ್ರದ ಕಥೆ.

ಸಿನಿಮಾದಲ್ಲಿ ನಿಶಾಂತ್‌ ಟಿ.ರಾಥೋಡ್‌ ಬಾಲನಟರಾಗಿ ನಟಿಸಿದ್ದು, ಇಡೀ ಚಿತ್ರದ ಮುಖ್ಯ ಆಕರ್ಷಣೆ ನಿಶಾಂತ್‌ ಟಿ.ರಾಥೋಡ್‌. ಉಳಿದಂತೆ ಚಿತ್ರದಲ್ಲಿ ಲಕ್ಷ್ಮೀ ಶ್ರೀ, ರಂಗನಾಥ್‌, ವಿಘ್ನೇಶ್‌ ಭರಮಸಾಗರ, ಅಲೋಕ್‌, ಶಾಶ್ವತಿ, ಪ್ರತೀಕ್ಷಾ, ಆಕಾಶ್‌ ಸೇರಿದಂತೆ ಹಲವು ಮಕ್ಕಳು ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಮಾ.ಚಂದ್ರು ಅವರೇ ಕಥೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ನಂದಕುಮಾರ್‌ ಕ್ಯಾಮೆರಾ ಹಿಡಿದರೆ, ಅರ್ಜುನ್‌ ಕಿಟ್ಟು ಸಂಕಲನ‌ವಿದೆ. ವೀರ್ ಸಮರ್ಥ್‌ ಅವರು ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನಾಗೇಂದ್ರ ಪ್ರಸಾದ್‌, ಕೆ.ಕಲ್ಯಾಣ್‌, ವಿಜಯ್‌ ಭರಮಸಾಗರ ಅವರ ಗೀತ ಸಾಹಿತ್ಯ ಚಿತ್ರಕ್ಕಿದೆ. ಇನ್ನು, ವಾಸುಕಿ ವೈಭವ್‌, ಸಂಗೀತ ರವೀಂದ್ರನಾಥ್‌, ಗೋವಿಂದ ಕರ್ನೂಲ್‌ ಇತರರು ಹಾಡಿದ್ದಾರೆ.

ಚಿತ್ರದ ಮತ್ತೊಂದು ಆಕರ್ಷಣೆ ಅಂದರೆ, ಹಿರಿಯ ಕಲಾವಿದ ರಮೇಶ್‌ ಭಟ್‌, ಉಮೇಶ್‌, ಮನ್‌ದೀಪ್‌ ರಾಯ್‌, ಮೈಸೂರು ಮಲ್ಲೇಶ್‌, ಮಂಜುಳಾ ರೆಡ್ಡಿ, ರಿಚ್ಚ, ನಾಗೇಶ್‌ ಆರ್‌ ಇತರರು ನಟಿಸಿದ್ದಾರೆ. ಬಹುತೇಕ ಚಿತ್ರದ ಚಿತ್ರೀಕರಣ ವಿಜಾಪುರ ಸುತ್ತಮುತ್ತಲ ತಾಣಗಳಲ್ಲಿ ನಡೆದಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಹಾಡುಗಳು ಕೂಡ ಮೆಚ್ಚುಗೆ ಪಡೆದಿವೆ. ರಾಜ್ಯಾದ್ಯಂತ ಈ ಚಿತ್ರ ಮಾರ್ಚ್‌ ೪ ರಂದು ತೆರೆಗೆ ಬರುತ್ತಿದ್ದು, ಮಕ್ಕಳ ಚಿತ್ರವಾಗಿದ್ದರಿಂದ ವಿಶೇಷವಾಗಿ ಮಕ್ಕಳೊಂದಿಗೆ ಪೋಷಕರೂ ಕೂಡ ನೋಡಬಹುದಾದ ಚಿತ್ರವಿದು ಎಂಬುದು ಚಿತ್ರತಂಡದ ಹೇಳಿಕೆ.

ಚಿತ್ರದ ನಿರ್ಮಾಪಕರಾದ ಚಂದ್ರಕಲಾ ಟಿ.ಆರ್.‌ ಮತ್ತು ಮಂಜುನಾಥ ಹೆಚ್.ನಾಯಕ್‌ ಅವರಿಗೆ ಇದು ಎರಡನೇ ಸಿನಿಮಾ ಈ ಹಿಂದೆ ಕೂಡ ಅವರು “ಮೂಕ ಹಕ್ಕಿ” ಎಂಬ ಒಳ್ಳೆಯ ಚಿತ್ರ ನಿರ್ಮಿಸಿದ್ದರು. ಅದಾದ ಬಳಿಕ ಅವರು, ಸಾಮಾಜಿಕ ಪರಿಣಾಮ ಬೀರುವಂತಹ ಕಥೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ. ಸಿನಿಮಾಗೆ ಏನೇನು ಬೇಕು ಎಲ್ಲವನ್ನೂ ಪೂರೈಸಿ, ಒಂದೊಳ್ಳೆಯ ಸಿನಿಮಾ ಆಗೋಕೆ ಕಾರಣರಾಗಿದ್ದಾರೆ ಅನ್ನೋದು ನಿರ್ದೇಶಕ ಮಾ.ಚಂದ್ರು ಅವರ ಮಾತು.

ಇನ್ನು, ಮಕ್ಕಳು ಚಿತ್ರೀಕರಣ ವೇಳೆ ಸಾಕಷ್ಟು ಶ್ರಮಿಸಿದ್ದಾರೆ. ಬಿಸಿಲು ನಡುವೆಯೇ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ಕೆಲಸ ಮಾಡಿದ್ದಾರೆ. ಅವರೆಲ್ಲರ ಸಹಕಾರ ಮತ್ತು ನಿರ್ಮಾಪಕರ ಪ್ರೋತ್ಸಾಹದಿಂದ “ಬೆಟ್ಟದ ದಾರಿ” ನಿರೀಕ್ಷೆ ಮೀಡಿ ಮೂಡಿಬಂದಿದೆ. ಒಟ್ಟಾರೆ ಇದು ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳಿ ಹೇಗೆಲ್ಲಾ ಅಭಿವೃದ್ಧಿ ಕಾಣದೆ ಸೊರಗುತ್ತದೆ ಅನ್ನುವುದನ್ನು ಹೇಳುತ್ತದೆ. ಅಲ್ಲದೆ, ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಅನ್ನುವುದಕ್ಕೆ ಈ ಚಿತ್ರ ಸಾಕ್ಷಿ ಎನ್ನುತ್ತಾರೆ ನಿರ್ದೇಶಕರು.

Categories
ಸಿನಿ ಸುದ್ದಿ

ಎಲ್ಲೋ ಬೋರ್ಡ್ ಕ್ಯಾಬ್‌ ಚಾಲಕರಿಗೆ ಕಿಚ್ಚ ಸಾಥ್! ಪ್ರದೀಪ್‌ ನಟನೆಯ ಈ ಚಿತ್ರ ಈ ವಾರ ತೆರೆಗೆ

ಟ್ಯಾಕ್ಸಿ ಚಾಲಕರೆಲ್ಲ ಕೆಟ್ಟವರಲ್ಲ, ಅವ‌ರಲ್ಲೂ ಮಾನವೀಯತೆ ಇರುತ್ತದೆ ಎಂಬ ಉತ್ತಮ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಎಲ್ಲೋ ಬೋರ್ಡ್. ಚಿತ್ರ ಈ ವಾರ (ಮಾರ್ಚ್‌ 4) ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ‌ ನಡೆಯಿತು. ತ್ರಿಲೋಕ್ ರೆಡ್ಡಿ ಅವರ ನಿರ್ದೇಶನವಿರುವ ಈ ಚಿತ್ರದಲ್ಲಿ ಪ್ರದೀಪ್ ಟ್ಯಾಕ್ಸಿ ಚಾಲಕನ ಪಾತ್ರ ನಿರ್ವಹಿಸಿದ್ದಾರೆ.

ನಟ ಕಿಚ್ಚ ಸುದೀಪ್ ಆ ಕಾರ್ಯಕ್ರಮದ ಹೈಲೈಟ್.‌ ಅಂದು ಅವರು ಹೇಳಿದ್ದಿಷ್ಟು. “ಪ್ರದೀಪ್ ನಮ್ಮ‌ಮನೆ ಮಗನಿದ್ದಂತೆ. ಅವನು ಶಿವರಾಂ ಅಳಿಯನಾಗಿದ್ದರೂ ಅವನನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಕೂಡ ಈ ಸಿನಿಮಾ ನೋಡಿದೆ. ಚೆನ್ನಾಗಿದೆ. ಒಂದೊಳ್ಳೆಯ ಮೆಸೇಜ್ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಕ್ಯಾಬ್ ಡ್ರೈವರ್ ಗಳಿಗೆ ಗೌರವ ಕೊಟ್ಟಿದ್ದಾರೆ. ನಾವು ಮಾಡಿದ ಚಿತ್ರವನ್ನು ಯಾರಿಗಾದರೂ ತೋರಿಸುವಾಗ ಸ್ವಲ್ಪ ಮುಜುಗರವಿರುತ್ತದೆ.‌ ಇಲ್ಲಿ ನಿರ್ದೇಶಕರಿಗಿರುವ ಆತಂಕ ಕಂಡು ‌ನನ್ನ ಹಳೇ ಸಿನಿಮಾಗಳು ನೆನಪಾದವು ಎಂದು ಹೇಳಿದರು.


ನಾಯಕ ಪ್ರದೀಪ್, “ಈ ರೀತಿಯ ಪಾತ್ರ ಸಿಕ್ಕಿದ್ದು ನನ್ನ ಪುಣ್ಯ. ಎಂಟೈರ್ ಕರ್ನಾಟಕ ಸುತ್ತಿ‌ಚಾಲಕರನ್ನೆಲ್ಲ‌ ಮಾತಾಡಿಸಿ ಬಂದಿದ್ದೇವೆ. ಎಲ್ಲಾ ಕಡೆ ನಮಗೆ ತುಂಬಾ ಗೌರವ ನೀಡಿ ಸಪೋರ್ಟ್ ಮಾಡಿದರು.‌ ನಮ್ಮ ಬಗ್ಗೆ ಗೌರವ ತರುವಂಥ ಸಿನಿಮಾ ಮಾಡಿದ್ದೀರಿ. ನಾವೆಲ್ಲ ಸಿನಿಮಾ ನೋಡಲು ಕಾಯುತ್ತಿದ್ದೇವೆ ಎಂದರು ನಮ್ಮ ಸಿನಿಮಾ ಇಷ್ಟೊಂದು ಪ್ರಭಾವ ಬೀರಿದ್ದು ಕಂಡು ಖುಷಿಯಾಯ್ತು ಎಂದು ಹೇಳಿದರು.

ನಿರ್ದೇಶಕ ತ್ರಿಲೋಕ್, ಆಟೋರಾಜ ಎಂದರೆ ಶಂಕರ್ ನಾಗ್ ಹೇಗೆ ನೆನಪಾಗ್ತಾರೋ ಹಾಗೇ ಎಲ್ಲೋಬೋರ್ಡ್ ಅಂದ್ರೆ ಪ್ರದೀಪ್ ನೆನಪಾಗುವಂತೆ ಸಿನಿಮಾ ಮೂಡಿಬಂದಿದೆ. ಈ ಚಿತ್ರ ಆರಂಭಿಸಿದಾಗಿನಿಂದಲೂ ಸುದೀಪ್ ಬೆಂಬಲವಾಗಿ ನಿಂತಿದ್ದಾರೆ. ಹಿಂದೆ ಟೀಸರ್, ಟ್ರೇಲರ್ ರಿಲೀಸ್ ಮಾಡಿದ್ದರು. ಈಗ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.


ಎಲ್ಲೋ ಬೋರ್ಡ್ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಾಲಕರಿಗೆ ಸ್ಪೂರ್ತಿ ನೀಡುವ ಹಾಡೊಂದನ್ನು ಹಾಡಿದ್ದಾರೆ. ಟಾಕ್ಸಿ ಚಾಲಕರೆಲ್ಲ ಕೆಟ್ಟವರಾಗಿರುವುದಿಲ್ಲ, ಅವರಲ್ಲಿ ಒಳ್ಳೆಯವರೂ ಇರುತ್ತಾರೆ. ಅವರಿಂದಲೂ ಸಮಾಜ ಸುಧಾರಣೆ ಸಾಧ್ಯ ಎನ್ನುವ ವಿಭಿನ್ನ ಕಥಾಹಂದರ ಇರುವ ಈ ಚಿತ್ರದಲ್ಲಿ ಅಹಲ್ಯಾ ಸುರೇಶ್ ಹಾಗೂ ಸ್ನೇಹಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಂಟೇಜ್ ಫಿಲಂಸ್ ಮೂಲಕ‌ ನವೀನ್ ಗೌಡ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Categories
ಸಿನಿ ಸುದ್ದಿ

ನೋಡೋರಿಗೆ ಮೈಸೂರು ರೆಡಿ! ಈ ವಾರ ಬಿಡುಗಡೆ

ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಾಸುದೇವ ರೆಡ್ಡಿ ನಿರ್ಮಿಸಿ, ನಿರ್ದೇಶಿಸಿರುವ “ಮೈಸೂರು” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಚಿತ್ರದ ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಮೂಲತಃ ಒರಿಸ್ಸಾದವರಾದ ಸಂವಿತ್ ಈ ಚಿತ್ರದ ನಾಯಕ. ಪೂಜಾ ನಾಯಕಿ. ಜೂ.ನರಸಿಂಹರಾಜು, ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಇತರರು ಚಿತ್ರದಲ್ಲಿದ್ದಾರೆ.

ಎಸ್ ಆರ್ ಕಂಬೈನ್ಸ್ ಲಾಂಛನದಲ್ಲಿ ವಾಸುದೇವ ರೆಡ್ಡಿ ಅವರೆ ಈ ಚಿತ್ರ ನಿರ್ಮಾಣವನ್ನು ಮಾಡಿದ್ದಾರೆ. ಜಗದೀಶ್ (ಜೆ.ಕೆ), ಆರ್.ಅಪ್ಪಾಜಿ(ಕೊಡವತ್ತಿ) ಈ ಚಿತ್ರದ ಸಹ‌ ನಿರ್ಮಾಪಕರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ಈ ಚಿತ್ರ ತಯಾರಾಗಿದೆ.

ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ನೀಡಿದ್ದಾರೆ.

ಕೃಷ್ಣ ಮಳವಳ್ಳಿ ಸಂಭಾಷಣೆ ಬರೆದಿದ್ದಾರೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣ, ಸಿದ್ದು ಭಗತ್ ಸಂಕಲನ ಹಾಗೂ ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಸೀತಮ್ಮನ ಮಗನಿಗೆ ಗುರು ಬಲ! ಯತಿರಾಜ್‌ ಚಿತ್ರದ ಹಾಡಿಗೆ ದೇಶಪಾಂಡೆ ಸಾಥ್

ಕಲಾವಿದ ಯತಿರಾಜ್ ನಿರ್ದೇಶಿಸಿ, ನಟಿಸಿರುವ “ಸೀತಮ್ಮನ ಮಗ” ಚಿತ್ರದ ಹಾಡುಗಳು ಹೊರಬಂದಿವೆ. ನಿರ್ದೇಶಕ ಕಮ್ ನಿರ್ಮಾಪಕ ಗುರು ದೇಶಪಾಂಡೆ ಸಾಂಗ್‌ ರಿಲೀಸ್‌ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕೆಂಪೇಗೌಡ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲೇ ಈ ಚಿತ್ರ ನಿರ್ಮಾಣವಾಗಬೇಕಿತ್ತು. ಕಿಚ್ಚ ಸುದೀಪ್ ಅವರು ಸಹ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು. ಆದರೆ, ಕಾರಣಾಂತರದಿಂದ ಅದು ಆಗಲಿಲ್ಲ. ಈಗ ಕಾಲ ಕೂಡಿ ಬಂದಿದೆ. ನನ್ನ ಸ್ನೇಹಿತರೊಬ್ಬರ ಮೂಲಕ ಪರಿಚಿತರಾದ, ಉಪಾಧ್ಯಾಯರಾಗಿರುವ ಮಂಜುನಾಥ್ ನಾಯಕ್, ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ
ಚಿತ್ರದ ಚಿತ್ರೀಕರಣವನ್ನು ಚಿತ್ರದುರ್ಗದ ಬಳಿಯ ಪಂಡರಹಳ್ಳಿಯಲ್ಲಿ ಮಾಡಿದ್ದೇವೆ. ಸದ್ಯ ಸಂಗೀತ ನಿರ್ದೇಶಕ ವಿನು ಮನಸು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.

ಸದ್ಯದಲ್ಲೇ ನಮ್ಮ ಚಿತ್ರ ತೆರೆಗೆ ಬರಲು ಸಿದ್ದವಾಗಲಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ತಂತ್ರಜ್ಞರ ಕೈ ಚಳಕವೂ ಚೆನ್ನಾಗಿದೆ. ಎರಡು ಹಾಡುಗಳನ್ನು ಮಾನಸ ಹೊಳ್ಳ ಹಾಗೂ ಮೆಹಬೂಬ್ ಸಾಬ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇಸ್ಮು ಮ್ಯೂಸಿಕ್ ಮೂಲಕ ಈ ಹಾಡುಗಳು ಬಿಡುಗಡೆಯಾಗಿದೆ ಎಂದು ನಿರ್ದೇಶಕ ಯತಿರಾಜ್ ಸಿನಿಮಾ ಕುರಿತು ವಿವರಣೆ ನೀಡಿದರು.

ಮಕ್ಕಳ ಸಿನಿಮಾ ಮಾಡಬೇಕೆಂಬುದು ನನ್ನ ಬಹು ದಿನಗಳ ಕನಸು. ಅದರಲ್ಲೂ ನಮ್ಮ ಪಂಡರಹಳ್ಳಿಯಲ್ಲೇ ಚಿತ್ರೀಕರಣ ಮಾಡಬೇಕೆಂಬ ಆಸೆಯಿತ್ತು. ಬಹಳ ವರ್ಷಗಳ ನಂತರ ನನ್ನ ಆಸೆ ಈಡೇರಿದೆ. ನಾನು ಸಿನಿಮಾ ಆರಂಭಿಸುವುದಾಗಿ ಹೇಳಿದಾಗ ಸಾಕಷ್ಟು ಜನ ನಿರ್ದೇಶಕರು ಫೋನ್ ಮಾಡಿದ್ದರು. ಆದರೆ ನಾನು ಯತಿರಾಜ್ ಅವರಿಗೆ ಸಿನಿಮಾ ಮಾಡಲು ಹೇಳಿದೆ. ಯತಿರಾಜ್ ಬಿಟ್ಟರೆ ಯಾರಿಂದಲೂ ಇಷ್ಟು ಚೆನ್ನಾಗಿ ಚಿತ್ರ ನಿರ್ದೇಶನ ಮಾಡಲು ಆಗುತ್ತಿರಲಿಲ್ಲವೇನೋ? ಎಂಬುದು ನನ್ನ ಅನಿಸಿಕೆ ಎಂದರು ನಿರ್ಮಾಪಕ ಮಂಜುನಾಥ್ ನಾಯಕ್.

ಸಹ ನಿರ್ಮಾಪಕ ಸುಮಿತ್ ನಾಯಕ್, ಮುಪ್ಪಣ್ಣ ಗೌಡ್ರು, ಸಂಗೀತ ನಿರ್ದೇಶಕ ವಿನು ಮನಸು, ಇಸ್ಮು ಮ್ಯೂಸಿಕ್ ನ ಇಸ್ಮಾಯಿಲ್, ಸೀತಮ್ಮನ ಪಾತ್ರಧಾರಿ ಚೈತ್ರ ಶ್ರೀನಿವಾಸ್, ಸೀತಮ್ಮನ ಮಗನಾಗಿ ಅಭಿನಯಿಸಿರುವ ಚರಣ್ ಕಾಸಾಲ ಹಾಗೂ ನಟಿ ಸೋನು ಸಾಗರ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಮೇಡ್ ಇನ್ ಚೈನಾ ಮಾರ್ಚ್ 11ಕ್ಕೆ ರಿಲೀಸ್

ನಾಗಭೂಷಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್‌ ನಟನೆಯ ಮೇಡ್ ಇನ್ ಚೈನಾ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈಗಾಗಲೇ ಟೀಸರ್ ಮೂಲಕ‌ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ.

ಈ ಮೊದಲು ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ ‘ಮೇಡ್​ ಇನ್​ ಚೈನಾ’ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್​ ತೊಟ್ಟಿದ್ದಾರೆ. ಜೊತೆಗೆ ಚಿತ್ರಕ್ಕೆ ಛಾಯಾಗ್ರಹಣ, ವಿಎಫ್​ಎಕ್ಸ್​, ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಕನ್ನಡದ ಮೊದಲ ವರ್ಚುವಲ್ ಸಿನಿಮಾ ಇದಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಪತಿಯು ವಿದೇಶದಲ್ಲಿ ಲಾಕ್ ಆಗುತ್ತಾನೆ. ಹೆಂಡತಿ ಭಾರತದಲ್ಲಿರುತ್ತಾಳೆ. ಇವರ ನಡುವೆ ನಡೆಯುವ ಕಥೆಯೇ ‘ಮೇಡ್ ಇನ್ ಚೈನಾ’.

ಮೇಡ್‌ ಇನ್‌ ಚೈನಾ ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಎನ್.ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ನಡಿ‌ ಈ ಸಿನಿಮಾವನ್ನು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಪ್ರಸ್ತುತಪಡಿಸುತ್ತಿದ್ದಾರೆ.

error: Content is protected !!