27 ಫ್ರೇಮ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಬಿ ನಾಗಬಾ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿರುವ “ಗರುಡ ಪುರಾಣ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ನವೆಂಬರ್ 3 ರಂದು ಚಿತ್ರ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು. ಟೀಸರ್ ಕೂಡ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ.
ಜನಪ್ರಿಯ “ಕಾಂತಾರ” ಸೇರಿದಂತೆ ಅನೇಕ ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯನಿರ್ವಹಿಸಿರುವ ಮಂಜುನಾಥ್ ಬಿ ನಾಗಬಾ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.
ಚಿತ್ರದ ಒಂದು ಭಾಗಕ್ಕೆ ಗರುಡ ಪುರಾಣದ ಕೆಲವು ಅಂಶಗಳು ಹೊಂದಿಕೆಯಾಗುತ್ತದೆ. ಹಾಗಾಗಿ “ಗರುಡ ಪುರಾಣ” ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ “ಗರುಡ ಪುರಾಣ” ಚಿತ್ರದ ನಾಯಕನಾಗೂ ಮಂಜುನಾಥ್ ಬಿ ನಾಗಬಾ ನಟಿಸಿದ್ದಾರೆ, ದಿಶಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. “ಭಜರಂಗಿ” ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಪುನೀತ್ ಆರ್ಯ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ರಾಕೇಶ್ ಆಚಾರ್ಯ ಸಂಗೀತ ನೀಡಿದ್ದಾರೆ. ಸುನೀಲ್ ನರಸಿಂಹಮೂರ್ತಿ “ಗರುಡ ಪುರಾಣ” ಚಿತ್ರದ ಛಾಯಾಗ್ರಾಹಕರು.
ಗುರುತೇಜ್ ಶೆಟ್ಟಿ ನಿರ್ದೇಶನದ “ರಾನಿ” ಚಿತ್ರದ ನಾಯಕ ಕಿರಣ್ ರಾಜ್ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಸುದ್ದಿಯಾಗಿದ್ದಾರೆ. ಈ ಹಿಂದೆ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ ರೋನಿ ಚಿತ್ರದ ಟೈಟಲ್ ಬಿಡುಗಡೆ ಮಾಡಿ ದಾಖಲೆ ಮಾಡಿದ್ದರು. ಈಗ ಹಿಮಾಚಲ ಪ್ರದೇಶಕ್ಕೆ ಹೋಗಿ 10 ದಿನ ಟ್ರೈನಿಂಗ್ ಪಡೆದು 8000 ಅಡಿ ಎತ್ತರದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಚಿತ್ರರಂಗದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿದ ಮೊದಲ ನಟ ಎನ್ನುವ ದಾಖಲೆ ತಮ್ಮದಾಗಿಸಿಕೊಂದ್ದಿದ್ದಾರೆ.
ಈ ವಿಷಯ ಸಾಮಾಜಿಕ ಜಾಲ ತಾಣದಲ್ಲಿ ಬಾರಿ ಸುದ್ದು ಮಾಡುತ್ತಿದೆ. ಈ ಸಾಹಸ ತರಬೇತಿಗಳು ನನ್ನ ಮುಂದಿನ ಚಿತ್ರದ ತಯಾರಿ ಎನ್ನುತಿರುವ ಕಿರಣ್ ರಾಜ್, ಮುಂದಿನ ಚಿತ್ರ ಯಾವುದು? ಎನ್ನುವ ಸುಳಿವು ಬಿಟ್ಟುಕೊಟ್ಟಿಲ್ಲ.
” ಪರಿಂದ”, “1942 ಎ ಲವ್ ಸ್ಟೋರಿ”, “ಥ್ರೀ ಇಡಿಯೆಟ್ಸ್” ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳ ನಿರ್ದೇಶಕ ವಿಧು ವಿನೋದ್ ಚೋಪ್ರಾ ನಿರ್ಮಾಣ ಹಾಗೂ ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ “12th ಫೇಲ್” ಅಕ್ಟೋಬರ್ 27 ರಂದು ಹಿಂದಿ, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಈ ಚಿತ್ರದ ವಿತರಣೆ ಹಕ್ಕನ್ನು ಹೆಸರಾಂತ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಪಡೆದುಕೊಂಡಿದೆ.
12th ಫೇಲ್ ಚಿತ್ರ ಅನುರಾಗ್ ಪಾಠಕ್ ಅವರ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಜೀವನವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
ಚಿಕ್ಕವಯಸ್ಸಿನಿಂದ ವಿಧು ವಿನೋದ್ ಚೋಪ್ರಾ ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವನು ನಾನು, ಎಂದು ಮಾತು ಆರಂಭಿಸಿದ ಕೆ.ಆರ್.ಜಿ ಸಂಸ್ಥೆಯ ಕಾರ್ತಿಕ್ ಗೌಡ ಅವರು, ಈ ಚಿತ್ರವನ್ನು ಕರ್ನಾಟಕದಾದ್ಯಂತ ನಾವು ಸುಮಾರು 100 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
ರೋಹಿತ್ ಪದಕಿ ಅವರ ಸಾರಥ್ಯದಲ್ಲಿ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ. ಕನ್ನಡದ ಹಾಡುಗಳನ್ನು ಕೇಳಿ ನಿರ್ದೇಶಕರು ಸಂತೋಷ ಪಟ್ಟಿದ್ದಾರೆ. ನಮ್ಮ ಮುಂದಿನ ಚಿತ್ರಗಳನ್ನು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ವಿಧು ವಿನೋದ್ ಚೋಪ್ರಾ ಅವರಿಗೆ ಧನ್ಯವಾದ. ಸದಭಿರುಚಿಯ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಉತ್ತಮ ಸಂದೇಶವುಳ್ಳ ಚಿತ್ರವನ್ನು ವಿತರಣೆ ಮಾಡುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಕೆ.ಆರ್.ಜಿ ಸಂಸ್ಥೆಯ ಯೋಗಿ ಜಿ ರಾಜ್ ತಿಳಿಸಿದರು.
ನಾನು ಈವರೆಗೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ವಿಧು ವಿನೋದ್ ಚೋಪ್ರಾ ಅವರು ಕರೆ ಮಾಡಿ ನೀವು ಈ ಚಿತ್ರದಲ್ಲಿ ನಟಿಸಬೇಕು ಎಂದಾಗ ತುಂಬಾ ಸಂತೋಷವಾಯಿತು. ಅಸಾಧ್ಯವನ್ನು ಸಾಧ್ಯವಾಗಿಸಿದ ಐ.ಪಿ.ಎಸ್ ಮನೋಜ್ ಕುಮಾರ್ ಶರ್ಮ ಅವರ ಜೀವನ್ನಾಧಾರಿತ ಈ ಚಿತ್ರದಲ್ಲಿ ಅಭಿನಯಿಸಿರುವುದು ನಿಜಕ್ಕೂ ಹೆಮ್ಮೆ ಎನ್ನುತ್ತಾರೆ ನಾಯಕ ವಿಕ್ರಾಂತ್ ಮಾಸ್ಸೆ.
ಮಾಡಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮೇಧಾ ಶಂಕರ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಉತ್ತಮ ಸಂದೇಶವಿರುವ ಈ ಚಿತ್ರದಲ್ಲಿ ನಟಿಸಿರುವುದು ಸಂತೋಷವಾಗಿದೆ ಎಂದು ಮೇಧಾ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅದೊಂದು ಕಾಲವಿತ್ತು..ಕಾದಂಬರಿ ಆಧಾರಿತ ಸಿನಿಮಾ ಎನ್ನುವಾಗಲೇ ಆ ಚಿತ್ರಕ್ಕೊಂದು ತೂಕ ಬಂದು ಬಿಡುತ್ತಿತ್ತು . ಅಷ್ಟೇ ಅಲ್ಲ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಂದೇಶಗಳಿರುತ್ತಿದ್ದವಲ್ಲದೆ, ಜೀವನಕ್ಕೆ ಹತ್ತಿರವಾಗಿದ್ದವು. ಈ ಮೂಲಕ ಓದುವ ಅಭ್ಯಾಸವಿಲ್ಲದವನನ್ನೂ ಕಾದಂಬರಿಗಳು ಮುಟ್ಟುತ್ತಿದ್ದವು. ಹೊಡೆಬಡಿ, ಪ್ರೀತಿಗೀತಿ ಇತ್ಯಾದಿ ವಿಚಾರಗಳು ಬಂದ ಮೇಲೆ ಕತೆಯೇ ಬೇಡ ಎನ್ನುವಂತಾಗಿದೆ. ಇಂತಹ ಕಾಲ ಘಟ್ಟದಲ್ಲಿ ಅಲ್ಲೊಂದು ಇಲ್ಲೊಂದು ಕಾದಂಬರಿ ಆಧಾರಿತ ಸಿನಿಮಾಗಳ ಬರ್ತಿವೆ. ಅಂತಹದ್ದೇ ಒಂದು ಪ್ರಯತ್ನ ಮಗ್ಗಿ ಪುಸ್ತಕ.
ಎಚ್.ಸಿ.ಹರೀಶ್ ಅವರ ಅವನಿ ಕಾದಂಬರಿ ಆಧರಿಸಿ ಮಗ್ಗಿ ಪುಸ್ತಕ ಎಂಬ ಸಿನಿಮಾವನ್ನು ದೃಶ್ಯ ರೂಪಕ್ಕಿಳಿಸಲಾಗಿದೆ. ದಸರಾ ಮಹೋತ್ಸವದ ಅಂಗವಾಗಿ ಈ ಚಿತ್ರದ ಫಸ್ಟ್ ಲುಕ್ ನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿನ್ನಾಸ್ವಾಮಿ ಫಿಲ್ಮಂ ಸಂಸ್ಥೆಯಡಿ ಚಿನ್ನಾಸ್ವಾಮಿ ಯತಿರಾಜ್ ತಮ್ಮ ಸ್ನೇಹಿತರ ಜೊತೆಗೂಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಅವನಿ ಕಾದಂಬರಿಕಾರರು ಆಗಿರುವ ಎಚ್ ಸಿ ಹರೀಶ್ ಅವರೇ ಮಗ್ಗಿ ಪುಸ್ತಕ ಸಿನಿಮಾಗೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಮಗ್ಗಿ ಪುಸ್ತಕ ಸಿನಿಮಾದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ದಡ್ಡ ಪ್ರವೀಣ ಖ್ಯಾತಿಯ ರಂಜನ್ ಸಜ್ಜು, ಶ್ರೀರಕ್ಷಾ,ಹಿರಿಯ ಕಲಾವಿದರಾದ ಮೈಸೂರು ರಮಾನಂದ, ರಂಗಾಯಣ ರಘು, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ಬಿರಾದಾರ, ಮಿಮಿಕ್ರಿ ಗೋಪಿ, ಚಂದ್ರಪ್ರಭಾ, ವಾಣಿ, ರಾನ್ವಿ ಶೇಖರ್, ಕೃಷ್ಣ ಮಹೇಶ್, ವರದ, ಶ್ರೀನಿವಾಸ್ ಗೌಡ, ಮೂಗು ಸುರೇಶ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಮೈಸೂರು, ಮಂಗಳೂರು, ಎಚ್ ಡಿ ಕೋಟೆ, ನಂಜನಗೂಡು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ನಂದಕುಮಾರ್ ಛಾಯಾಗ್ರಹಣ, ಯಶಸ್ ನಾಚಪ್ಪ ಸಂಗೀತ, ಶರಣ್ ಕುಮಾರ್ ಗಜೇಂದ್ರಗಡ, ಗುರುನಾಥ ಬೋರಗಿ ಸಾಹಿತ್ಯ, ಶಿವಕುಮಾರ್ ಎಂ.ಸಂಕಲನ, ರಸೂಲ್ ನದಾಫ್ ಕಲಾ ನಿರ್ದೇಶನ ಮಗ್ಗಿ ಪುಸ್ತಕ ಸಿನಿಮಾಕ್ಕಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
ಡಾಲಿ ಧನಂಜಯ್ ನಿರ್ಮಾಣದಲ್ಲಿ ತಯಾರಾಗಿರುವ ಗ್ರಾಮೀಣ ಸೊಗಡಿನ ಕಥೆ ಹೊಂದಿರುವ ‘ಟಗರು ಪಲ್ಯ’ ಸವಿಯೋದಿಕ್ಕೆ ದಿನಗಣನೆಯಷ್ಟೇ ಬಾಕಿ ಉಳಿದಿದೆ. ಇದೇ ಶುಕ್ರವಾರದಂದು ರಾಜ್ಯಾದ್ಯಂತ ಚಿತ್ರ ದಿಬ್ಬಣ ಹೊರಡಲಿದೆ. ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಟಗರು ಪಲ್ಯ ಸಿನಿಮಾ ಪ್ರಮೋಷನಲ್ ಹಾಡು ಬಿಡುಗಡೆಯಾಗಿದೆ.
ಸಂಬಂಜ ಅನ್ನೋದು ದೊಡ್ದು ಕನಾ ಎಂಬ ಹಾಡು ಡಾಲಿ ಪಿಕ್ಚರ್ಸ್ ನಲ್ಲಿ ಅನಾವರಣಗೊಂಡಿದೆ. ಸಂಬಂಧಗಳ ಮೌಲ್ಯ ತಿಳಿಸಿಕೊಡುವ ಹಾಡಿಗೆ ಧನಂಜಯ್ ಸಾಹಿತ್ಯ ಬರೆದಿದ್ದು, ಜೋಗಿ ಪ್ರೇಮ್ ಧ್ವನಿಯಾಗಿದ್ದು, ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಈ ಹಾಡಿನ ವಿಶೇಷ ಏನಂದರೇ ತೆರೆಹಿಂದೆ ಹಾಗೂ ತೆರೆಮೇಲೆ ಕಲಾವಿದರು, ತಂತ್ರಜ್ಞನರು ಕಾಣಿಸಿಕೊಂಡಿದ್ದಾರೆ.
ಟಗರು ಪಲ್ಯ ಚಿತ್ರವನ್ನು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿ ನಟ ಧನಂಜಯ್ ನಿರ್ಮಿಸಿದ್ದಾರೆ. ಉಮೇಶ್ ಕೃಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅಮೃತಾ ತಂದೆ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾಯಿ ಪಾತ್ರದಲ್ಲಿ ತಾರಾ ಅನುರಾಧಾ ನಟಿಸಿದ್ದಾರೆ.
ಇಕ್ಕಟ್ ಖ್ಯಾತಿಯ ನಾಗಭೂಷಣ್ ನಾಯಕನಾಗಿ ಅಭಿನಯಿಸಿದ್ದು, ಮೈಸೂರು ಆರ್ಕೆಸ್ಟ್ರಾ ಖ್ಯಾತಿಯ ಪೂರ್ಣಚಂದ್ರ, ವೈಜನಾಥ್ ಬಿರಾದಾರ್, ಚಿತ್ರಾ ಶೆಣೈ, ಶ್ರೀನಾಥ್ ವಸಿಷ್ಠ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದು ಅವರೂ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಟಗರು ಪಲ್ಯ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದು, ಸಿನಿಮಾ ನೋಡುವುದಾಗಿಯೂ ತಿಳಿಸಿದ್ದಾರೆ. ಇದೇ 27ಕ್ಕೆ ಟಗರು ಪಲ್ಯ ಥಿಯೇಟರ್ ನಲ್ಲಿ ದರ್ಶನ ಕೊಡಲಿದೆ.
ಖಳನಟ ರವಿಶಂಕರ್ ಪುತ್ರ ಈಗ ಹೀರೋ ಆಗುತ್ತಿದ್ದಾರೆ. ಅವರ ಮಗನ ಸಿನಿಮಾಗೆ ‘ಸುಬ್ರಹ್ಮಣ್ಯ’ ಎಂದು ಹೆಸರಿಡಲಾಗಿದ ಮಗನ ಸಿನಿಮಾಗೆ ಅಪ್ಪನೇ ಡೈರೆಕ್ಟರ್ ಎಂಬುದು ವಿಶೇಷ.
ಆರ್ಮುಗ ರವಿಶಂಕರ್ ಆ್ಯಕ್ಟರ್ ಮಾತ್ರವಲ್ಲ ಡೈರೆಕ್ಟರ್, ರೈಟರ್, ಸಿಂಗರ್, ವಾಯ್ಸ್ ಓವರ್ ಆರ್ಟಿಸ್ಟ್ ಕೂಡ ಹೌದು. ಸಿನಿಕರಿಯರ್ ಆರಂಭದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು. ಅನಂತರ ಒಂದೊಂದೆ ಮೆಟ್ಟಿಲುಗಳನ್ನೇರುತ್ತಾ ನಟನಾಗುವ ತಮ್ಮ ಕನಸನ್ನ ಈಡೇರಿಸಿಕೊಂಡರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ `ಕೆಂಪೇಗೌಡ’ ಸಿನಿಮಾದಲ್ಲಿ ಆಮುರ್ಗಂ ಪಾತ್ರ ಪೋಷಣೆ ಮಾಡಿ ಜನಪ್ರಿಯತೆ ಗಳಿಸಿದರು. ಅಲ್ಲಿವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಕೂಡ ಬಿಗ್ ಬ್ರೇಕ್ ಸಿಕ್ಕಿರಲಿಲ್ಲ. ಆದರೆ, ಕೆಂಪೇಗೌಡ ಸಿನಿಮಾದಿಂದ ರವಿಶಂಕರ್ ಕರಿಯರ್ರೇ ಬದಲಾಯ್ತು. ನೇಮು-ಫೇಮು-ಕ್ರೇಜು-ಕಾಸು ಹೀಗೆ ಎಲ್ಲವೂ ಕೂಡ ಒಟ್ಟೊಟ್ಟಿಗೆ ದಕ್ಕಿತು, ಬೇಡಿಕೆ ಸೃಷ್ಟಿಯಾಯ್ತು. ಈಗಲೂ ಆ ಬೇಡಿಕೆ ತಗ್ಗಿಲ್ಲ, ಸದ್ಯಕ್ಕೆ ತಗ್ಗೋದು ಇಲ್ಲ ಅನ್ನೋದಕ್ಕೆ ಅವರ ಕೈಯಲ್ಲಿರುವ ಸಿನಿಮಾಗಳೇ ಸಾಕ್ಷಿ
ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಆರ್ಮುಗ ರವಿಶಂಕರ್ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀಗೆ ಮೊದಲ ಭಾರಿ ಆ್ಯಕ್ಷನ್ ಕಟ್ ಹೇಳಿದ್ದರು. ದುರ್ಗಿ ಸಿನಿಮಾ ಡೈರೆಕ್ಷನ್ ಮಾಡುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಅವತ್ತಿಗೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ತೆಲುಗಿಗೆ ರಿಮೇಕ್ ಕೂಡ ಆಗಿತ್ತು. ರವಿಶಂಕರ್ ಗೆ ಈ ಚಿತ್ರದಿಂದ ಒಳ್ಳೆ ಹೆಸರು ಬಂದಿತ್ತು. ಆದರೆ, ಅದ್ಯಾಕೋ ಏನೋ ಗೊತ್ತಿಲ್ಲ ದುರ್ಗಿ ನಂತರ ಡೈರೆಕ್ಷನ್ ಕಡೆ ಮುಖ ಮಾಡಿರಲಿಲ್ಲ. ಇದೀಗ, 20 ವರ್ಷಗಳು ಉರುಳಿದ್ಮೇಲೆ ಮತ್ತೆ ಡೈರೆಕ್ಟರ್ ಹ್ಯಾಟ್ ತೊಡಲು ರೆಡಿಯಾಗಿದ್ದಾರೆ. ಅದು ಅವರ ಮಗನ ಸಿನಿಮಾಗೆ ಅನ್ನೋದು ವಿಶೇಷ.
ಆರ್ಮುಗ ರವಿಶಂಕರ್ ಅವರಿಗೆ ಅದ್ವೆ ಎಂಬ ಮಗನಿದ್ದಾರೆ. ವಿದೇಶದಲ್ಲಿ ನಟನಾ ತರಬೇತಿಯನ್ನು ಪಡೆದುಕೊಂಡಿದ್ದಾರೆ. ವಿದ್ಯಾಭ್ಯಾಸವೆಲ್ಲ ಮುಗಿಸಿ ವಾಪಾಸ್ ಹುಟ್ಟೂರಿಗೆ ಮರಳಿರುವ ಮಗನನ್ನು ಬಣ್ಣದ ಜಗತ್ತಿಗೆ ಪರಿಚಯಿಸಿದ್ದಾರೆ. ತಾತನಂತೆ, ಅಪ್ಪ-ಚಿಕ್ಕಪ್ಪರಂತೆ ಕಲೆ ರಕ್ತಗತವಾಗಿ ಬಂದಿರುವುದರಿಂದ ಮುಖಕ್ಕೆ ಬಣ್ಣ ಹಚ್ಚಲು ಅದ್ವೆ ಕೂಡ ಓಕೆ ಹೇಳಿದ್ದು, ಪುತ್ರನ ಚೊಚ್ಚಲ ಚಿತ್ರಕ್ಕೆ ತಾವೇ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ ನಟ ಕಂ ನಿರ್ದೇಶಕ ರವಿಶಂಕರ್.
ಇಂದು ಆಯುಧಪೂಜೆ ಅಂಗವಾಗಿ ಅದ್ವೆ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ಸುಬ್ರಹ್ಮಣ್ಯ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಪೋಸ್ಟರ್ ನಲ್ಲಿ ದೈವಿಕ ಅಂಶಗಳು ಹೈಲೆಟ್ ಆಗಿವೆ. ಪೋಸ್ಟರ್ ನಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಮತ್ತು ಅವರ ವಾಹನ ನವಿಲನ್ನು ತೋರಿಸಲಾಗಿದೆ. ನಾಯಕ ಅದ್ವೆ ಒಂದು ಕೈಯಲ್ಲಿ ಜ್ವಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ನಿಗೂಢವಾಗಿ ಕಾಣುವ ಪುಸ್ತಕವನ್ನು ಇಟ್ಟುಕೊಂಡಿದ್ದಾರೆ.
ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ರಾಜ್ ತೋಟ ಕ್ಯಾಮೆರಾ ಹಿಡಿದಿದ್ದು, ಕೆಜಿಎಫ್ ಸಲಾರ್ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ, ವಿಜಯ್ ಎಂ ಕುಮಾರ್ ಸಂಕಲನ, ಮಾಸ್ತಿ ಸಂಭಾಷಣೆ ಸುಬ್ರಹ್ಮಣ್ಯ ಸಿನಿಮಾಕ್ಕಿದೆ. ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್ ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಬಂಡವಾಳ ಹಾಕಿದ್ದು, ಪ್ರವೀಣಾ ಕಡಿಯಾಲ ಹಾಗೂ ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸುಬ್ರಹ್ಮಣ್ಯ ಸಿನಿಮಾ ತಯಾರಾಗುತ್ತಿದ್ದು, ಡಿಸೆಂಬರ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.
ಕನ್ನಡದ ಖ್ಯಾತ ಲೇಖಕ ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಇಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗಳ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ‘ಪರ್ವ’ ಕೃತಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ, ‘ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್ಗಳಲ್ಲಿ ಬರುತ್ತದೆ’ ಎಂದು ಹೇಳಿದ್ದಾರೆ.
ಪಲ್ಲವಿ ಜೋಷಿ ಮಾತನಾಡಿ, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಈ ವಿಷಯವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಭೈರಪ್ಪ ಸರ್ ಗುರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿರುವುದು ಖುಷಿ ಕೊಟ್ಟಿದೆ. ಪರ್ವ ಸಿನಿಮಾವನ್ನು 3 ಭಾಗದಲ್ಲಿ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಕಾಶ್ ಇಲ್ಲದೇ ಇದು ಆಗುತ್ತಿರಲಿಲ್ಲ’ ಎಂದರು.
ಎಸ್.ಎಲ್. ಭೈರಪ್ಪ ಮಾತನಾಡಿ, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡಲು ಬಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಅನುಭವವಿದೆ. ಇವರು ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇಂಗ್ಲೀಷ್ ನಲ್ಲಿ ಸಿನಿಮಾ ಮಾಡಬೇಕು. ನಿಜವಾದ ಮಹಾಭಾರತ ಏನೋ ಅನ್ನೋದನ್ನು ತೋರಿಸಬಹುದು. ಸಿನಿಮಾ ಮಾಡಲು ನನ್ನ ಒಪ್ಪಿಗೆ ಇದೆ. ಹಾರೈಕೆ ಇದೆ’ ಎಂದರು.
ಪರ್ವ ಕಾದಂಬರಿಯ ವಿಷಯ ಏನ್ನು ಅನ್ನುವುದು ಓದಿದವರಿಗೆ ಗೊತ್ತೇ ಇದೆ. ಮಹಾಭಾರತವನ್ನ ಆಯಾ ಪಾತ್ರಗಳ ಮೂಲಕ ಮತ್ತೊಮ್ಮೆ ಹೇಳಿರೋದೇ ಈ ಪರ್ವ ಕಾದಂಬರಿಯ ವಿಶೇಷ. ಅಂತಹ ಈ ಒಂದು ಕಾದಂಬರಿಯನ್ನ ಕ್ಲಾಸಿಕ್ ಕೃತಿ ಅಂತಲೇ ಪರಿಗಣಿಸಲಾಗುತ್ತದೆ. ಇದೀಗ ಈ ಪರ್ವ ಕಾದಂಬರಿಗೆ ವಿವೇಕ್ ಅಗ್ನಿಹೋತ್ರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಬಿಗ್ಬಾಸ್ ಜೋಡಿ ದಿವ್ಯಾ ಉರಡುಗ ಹಾಗೂ ಬೈಕ್ ರೇಸರ್ ಅರವಿಂದ್ ಕೆಪಿ. ಈಗ ಬೆಳ್ಳಿತೆರೆಯ ಮೇಲೂ ಯುವ ಪ್ರೇಮಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ಅರ್ದಂಬರ್ದ ಪ್ರೇಮಕಥೆ. ಮುಂದಿನ ತಿಂಗಳು ರಿಲೀಸ್ ಗೆ ಸಿದ್ದವಾಗಿರುವ ಈ ಚಿತ್ರದ ಹಾಡೊಂದನ್ನು ಅಭಿಮಾನಿಗಳೇ ಬಿಡುಗಡೆ ಮಾಡಿದರು. ನಿರ್ದೇಶಕರೇ ಸಾಹಿತ್ಯ ರಚಿಸಿದ ‘ಹುಚ್ಚುಮನಸಿನ ಹುಡುಗಿ’ ಎಂಬ ಹಾಡಲ್ಲಿ ನಾಯಕ, ನಾಯಕಿಯ ಮನದ ಭಾವನೆಗಳನ್ನು ತೆರೆದಿಡಲಾಗಿದೆ. ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಈ ಹಾಡಿಗೆ ಮ್ಯೂಸಿಕ್ ಕಂಪೋಜ್ ಮಾಡಿದ್ದು, ವಾಸುಕಿ ವೈಭವ್, ಪೃಥ್ವಿ ಭಟ್ ದನಿಯಾಗಿದ್ದಾರೆ.
ಈಗಾಗಲೇ ಅರ್ದಂಬರ್ದ ಪ್ರೇಮಕಥೆ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು ಸೆನ್ಸಾರ್ ಪ್ರಕ್ರಿಯೆ ನಡೆಯುತ್ತಿದೆ. ಅರವಿಂದ್ ಕೌಶಿಕ್ ನಿರ್ದೇಶನದ ನಮ್ ಏರಿಯಾಲ್ ಒಂದಿನ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಸಂಗೀತ ಸಂಯೋಜಕರಾಗಿದ್ದ ಅರ್ಜುನ್ ಜನ್ಯ ಮತ್ತೊಮ್ಮೆ ಅರವಿಂದ್ ಜೊತೆ ಸೇರಿ ಚೆಂದದ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಅರವಿಂದ್ ಕೌಶಿಕ್ ನಾನು ಈ ಕಥೆ ಶುರು ಮಾಡಿದಾಗಲೇ ನಾಯಕಿ ಪಾತ್ರಕ್ಕೆ ದಿವ್ಯ ಅವರನ್ನು ಆಯ್ಕೆ ಮಾಡಿದೆ. ಅವರನ್ನು ಒಪ್ಪಿಸಿದ ಮೇಲೆ ಅರವಿಂದ್ ಹೀರೋ ಪಾತ್ರ ಮಾಡಿದರೆ ಹೇಗೆ ಅನಿಸಿತು, ದಿವ್ಯಾ ಮೂಲಕ ಅವರನ್ನು ಕೇಳಿದಾಗ ಉತ್ತರ ಹೇಳಲು 2 ದಿನ ತಗೊಂಡರು. ಅಲ್ಲದೆ ಅರ್ಜುನ್ಜನ್ಯ ತಮ್ಮ ಬ್ಯುಸಿ ಶೆಡ್ಯೂಲ್ನಲ್ಲೂ 4 ಅದ್ಭುತವಾದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ.
ಇವತ್ತಿನ ಕಾಲದಲ್ಲಿ ಪ್ರೀತಿ ಎನ್ನುವುದು ಒಂದು ಭಾವನೆ, ನಮ್ಮ ಕನಸುಗಳ ಜೊತೆಗೇ ಬೆಳೆಯುತ್ತೆ, ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದನ್ನು ನಿಭಾಯಿಸಿಕೊಂಡು ಹೋಗೋದು ಕಷ್ಟ. ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಅದು ಬದುಕಬೇಕಾಗಿರುತ್ತೆ, ಇವತ್ತಿನ ಹಾಡು ಚಿತ್ರದ ಕಥೆಯನ್ನೇ ಹೇಳುತ್ತೆ, ಇದರ ನಂತರ ಇವರಿಬ್ಬರು ಲವ್ ಮಾಡ್ತಾರಾ ಇಲ್ವಾ ಅನ್ನೋದೇ ಕುತೂಹಲ, ಚಿತ್ರವೀಗ ಬಿಡುಗಡೆಯ ಹಂತದಲ್ಲಿದ್ದು, ಈಗ ಪ್ರಚಾರ ಶುರು ಮಾಡಿದ್ದೇವೆ, ನವೆಂಬರ್ನಲ್ಲಿ ತೆರೆಗೆ ತರೋ ಪ್ಲಾನಿದೆ ಎಂದರು.
ನಾಯಕ ಅರವಿಂದ್ ಮಾತನಾಡಿ ಅಭಿನಯ ನಿಜವಾಗಿಯೂ ಕಷ್ಟದ ಕೆಲಸವೇ. ಒಂದಷ್ಟು ದಿನ ವರ್ಕ್ಷಾಪ್ ಮಾಡಿ ನಂತರ ಬಣ್ಣ ಹಚ್ಚಿದೆ. ಆರಂಭದ 2-3 ದಿನ ಸ್ವಲ್ಪ ಕಷ್ಟವಾಗಿತ್ತು, ನಿರ್ದೇಶಕ ಅರವಿಂದ್ ಹಾಗೂ ದಿವ್ಯಾ ಇಬ್ಬರೂ ನನಗೆ ತುಂಬಾ ಹೇಳಿಕೊಟ್ಟರು. ನಾನೇನೇ ಮಾಡಿದ್ರೂ ಅದಕ್ಕೆ ನಿರ್ದೇಶಕರೇ ಕಾರಣ ಎಂದು ಹೇಳಿದರು.
ನಾಯಕಿ ದಿವ್ಯಾ ಮಾತನಾಡಿ ಈ ಹಾಡನ್ನು ಅಭಿಮಾನಿಗಳಿಗೋಸ್ಕರ ಡೆಡಿಕೇಟ್ ಮಾಡೋಣ ಎಂದು ಅವರಿಂದಲೇ ರಿಲೀಸ್ ಮಾಡಿಸಿದ್ದೇವೆ, ನನ್ನ ಪಾತ್ರದ ಬಗ್ಗೆ ಹೇಳೋದಾದ್ರೆ ಆಕೆ ಸ್ವಲ್ಪ ಮುಂಗೋಪಿಯಾದರೂ, ಮನಸು ಹೂವಿನಂಥದ್ದು, ಜನ ಅವಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲ್ಲ, ಆಕೆಗಿರುವ ರಿಯಲ್ ಲೈಫ್ ಪ್ರಾಬ್ಲಂಗಳಿಂದ ಹಾಗೆ ನಡೆದುಕೊಳ್ತಾಳೆ ಅಷ್ಟೇ ಎಂದು ತನ್ನ ಪಾತ್ರದ ಕುರಿತು ವಿವರಿಸಿದರು.
ಬಕ್ಸಾಸ್ ಮೀಡಿಯಾ, ಆರ್ಎಸಿ ವಿಷುವಲ್ಸ್ ಮತ್ತು ಲೈಟ್ಹೌಸ್ ಮೀಡಿಯಾದ ಸಹಕಾರದೊಂದಿಗೆ ಈ ಚಿತ್ರವನ್ನು ನಿರ್ಮಿಸಿದೆ. ಬಕ್ಸಸ್ ಪರವಾಗಿ ದಿವ್ಯಾ ಉತ್ತಪ್ಪ, ಲೈಟ್ ಹೌಸ್ ನ ಸಂತೋಷ್ ಉಪಸ್ಥಿತರಿದ್ದರು. ರ್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಿರಿಯನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರದ ಮೂಲಕ 25 ವರ್ಷಗಳ ನಂತರ ನಟನೆಗೆ ಮರಳಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಶಿವರಾಜ್ ಮೇಹು ಅವರ ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.
ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಘೋಸ್ಟ್’ ಅಕ್ಟೋಬರ್ 19ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ರಾಜ್ಯಾದ್ಯಂತ ಈ ಸಿನಿಮಾ ಸುಮಾರು ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ದಿನವೊಂದಕ್ಕೆ 1500ಕ್ಕೂ ಹೆಚ್ಚು ಪ್ರದರ್ಶನಗಳು ಕಾಣಲಿವೆ.
ಈ ಸಿನಿಮಾ ಮೇಲೆ ಶಿವರಾಜ್ ಕುಮಾರ್ ಸಾಕಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಏಕತಾನತೆ ಮುರಿಯಲು ಈ ಚಿತ್ರ ಮಾಡಿದ್ದಾರಂತೆ. ‘ಈ ಚಿತ್ರವನ್ನು ಅವರು ಒಪ್ಪಲು ಕಾರಣ ಸಿನಿಮಾದ ಹೊಸತನವಂತೆ. ಒಂದೇ ತರಹದ ಪಾತ್ರಗಳನ್ನು ಬಿಟ್ಟು ಬರುವ ಉದ್ದೇಶದಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಶಿವರಾಜಕುಮಾರ್ ಪತ್ರಕರ್ತರ ಮುಂದೆ ಹೇಳಿಕೊಂಡಿದ್ದಾರೆ. ಹಾಗಾಗಿಯೇ ಅವರು, ಈ ಸಿನಿಮಾದ ಕಥೆ ಕೇಳಿದ ಬಳಿಕ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ.
‘ಘೋಸ್ಟ್’ ಸಿನಿಮಾದ ಪಾತ್ರವೇ ವಿಶೇಷವಾಗಿದೆ. ಇಲ್ಲಿ ಮೂರು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದು, ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆ ಇದಾಗಿದೆ. ಖಂಡಿತ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗಲಿದೆ ಎಂಬುದು ಶಿವರಾಜಕುಮಾರ್ ಮಾತು.
ನಿರ್ದೇಶಕ ಶ್ರೀನಿ ಅವರು ಮೈಸೂರಿನ ಶಕ್ತಿಧಾಮದಲ್ಲಿ ಶಿವಣ್ಣ ಅವರಿಗೆ ಈ ಕಥೆ ಹೇಳಿದ್ದರಂತೆ. ಈ ಕಥೆ ಮಾಡಿಕೊಂಡಾಗ, ಶಿವಣ್ಣ ಅವರೇ ಈ ಸಿನಿಮಾದಲ್ಲಿ ನಟಿಸಿದರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದೆವು. ಶಿವಣ್ಣ ಕೂಡ ಕಥೆ ಕೇಳಿ ನಟಿಸಲು ಒಪ್ಪಿದರು. ಸಿನಿಮಾದ ವಿಶೇಷ ಅಂದರೆ ಶೇ. 70ರಷ್ಟು ಕಥೆ ಜೈಲಲ್ಲೇ ನಡೆಯುತ್ತದೆ. ನಿರ್ಮಾಪಕರ ಸಹಕಾರದಿಂದ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಈ ವಾರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಅನ್ನೋದು ಮತ್ತೊಂದು ವಿಶೇಷ. ಇದರ ಜೊತೆಯಲ್ಲಿ ಅಮೇರಿಕಾ, ಕೆನಡ ಸೇರಿದಂತೆ ಇತರೆ ದೇಶಗಳಲ್ಲೂ ಏಕಕಾಲಕ್ಕೆ ಬಿಡುಗಡೆ ಕಾಣಲಿದೆ ಎನ್ನುತ್ತಾರೆ ಶ್ರೀನಿ.
ನಿರ್ಮಾಪಕ ಸಂದೇಶ್ ಅವರು ಸಿನಿಮಾ ಮೇಲೆ ತುಸು ಹೆಚ್ಚೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಶಿವಣ್ಣ ಅವರು ಅದಾಗಲೇ ಏಳೆಂಟು ಚಿತ್ರಗಳಿಗೆ ಸಹಿ ಹಾಕಿದ್ದರು. ಆದರೆ, ಕಥೆ ಕೇಳಿ ನಮಗೆ ಮೊದಲ ಆದ್ಯತೆ ಕೊಟ್ಟಿದ್ದಾರೆ. ಈ ಹಿಂದೆ ನಮ್ಮ ಬ್ಯಾನರ್ ನಲ್ಕಿ ಶಿವಣ್ಣ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಎರಡೂ ಚಿತ್ರಗಳು ಕೂಡ ಗೆಲುವು ಕಂಡಿದ್ದವು. ಈ ಚಿತ್ರದ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ ಇದೆ ಎಂದರು.
ಶಿವರಾಜಕುಮಾರ್ ಜೊತೆಯಲ್ಲಿ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ವಿಜಯಲಕ್ಷ್ಮೀ ಸಿಂಗ್ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಮಹೇಂದ್ರ ಸಿಂಹ ಕ್ಯಾಮೆರಾ ಹಿಡಿದಿದ್ದಾರೆ.
ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ 30ನೇ ಸಿನಿಮಾ ಹಾಯ್ ನಾನ್ನ.. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರದ ಹಾಡು ಭಾರೀ ಸದ್ದು ಮಾಡಿತ್ತು. ಇದೀಗ ಟೀಸರ್ ಅನಾವರಣಗೊಂಡಿದೆ. ತಂದೆ ಮತ್ತು ಮಗಳ ಬಾಂಧವ್ಯದ ಜೊತೆಗೆ ಪ್ರೀತಿ ಕಥಾಹಂದರವೇ ಟೀಸರ್ ನ ಹೈಲೆಟ್.. ತಾಯಿ ಇಲ್ಲದ ಮಗಳಿಗೆ ಅಪ್ಪನೇ ಸರ್ವಸ್ವ. ಅಪ್ಪನಿಗೆ ಮಗಳ ಜೀವ. ಈ ಚೆಂದದ ಕುಟುಂಬಕ್ಕೆ ಎಂಟ್ರಿಯಾಗುವ ನಾಯಕಿ. ಆ ನಂತರ ಏನಾಗುತ್ತದೆ ಅನ್ನೋದೇ ಟೀಸರ್ ಹೈಲೆಟ್ಸ್.
ನಾನಿ ಮತ್ತು ಮೃಣಾಲ್ ಠಾಕೂರ್ ಜೋಡಿಯಾಗಿ ನಟಿಸಿದ್ದಾರೆ. ಹಾಯ್ ನಾನ್ನ ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಚಿತ್ರವಾಗಿದೆ. ಅಪ್ಪನಾಗಿ ನಾನಿ ಹಾಗೂ ಮಗಳಾಗಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ.
ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರು ‘ವೈರ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ISC ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ.
‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ಅವರು ನಿಭಾಯಿಸುತ್ತಿದ್ದಾರೆ. ಡಿಸೆಂಬರ್ 7ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.