ನಟಿ ಹರ್ಷಿಕಾ ಪೂಣಚ್ಚ ಸದಾ ಸುದ್ದಿಯಲ್ಲಿರೋ ಬೆಡಗಿ. ಅವರು ಸಿನಿಮಾಗಳ ಮೇಲೆಸಿನಿಮಾ ಮಾಡುತ್ತಲೇ ಸಾಕಷ್ಟು ಬಿಝಿ ನಟಿ ಎನಿಸಿಕೊಂಡಿದ್ದಾರೆ. ಅದರಲ್ಲೂ ಅವರು ಸೋಷಿಯಲ್ ಮೀಡಿಯಾದಲ್ಲಂತೂ ಸದಾ ಸಕ್ರಿಯ. ಈಗ ಇಲ್ಲಿ ಅವರ ಬಗೆಗಿನ ಹೊಸ ಸುದ್ದಿಯೆಂದರೆ, ಅವರ ಹೊಸ ಲುಕ್.
ಹೌದು ಹರ್ಷಿಕಾ ಪೂಣಚ್ಚ ಸದಾ ಲವಲವಿಕೆ ಹುಡುಗಿ. ನಗುಮೊಗದಲ್ಲೇ ಏನಾದರೊಂದು ಸುದ್ದಿಯಲ್ಲೇ ಇರುತ್ತಾರೆ. ಒಂದಷ್ಟು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಸುದ್ದಿಯಾದರೆ,
ಇನ್ನೊಂದಡೆ, ಕಲರ್ ಫುಲ್ ಕಾಸ್ಟ್ಯೂಮ್ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಅಂಥದ್ದೊಂದು ಸುದ್ದಿಗೆ ಮೊನ್ನೆ ಬೆಂಗಳೂರಲ್ಲಿ ನಡೆದ ಫಿಲ್ಮ್ ಫೇರ್ ಅವಾರ್ಡ್ ಸಾಕ್ಷಿಯಾಯಿತು.
ಹರ್ಷಿಕಾ ಪೂಣಚ್ಚ ಸದಾ ಒಂದಿಲ್ಲೊಂದು ವಿಶೇಷ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಾರೆ. ಹಾಗಾಗಿ ಅವರು ಫಿಲ್ಮ್ ಫೇರ್ ಅವಾರ್ಡ್ ವೇಳೆ ಮತ್ತೊಂದು ಹೊಸ ಲುಕ್ನಲ್ಲಿ ಪ್ರತ್ಯಕ್ಷರಾಗಿದ್ದರು.
ತಿಳಿ ನೀಲಿ ಬಣ್ಣದ ವಿಶೇಷ ವಿನ್ಯಾಸದ ಶಾರ್ಟ್ ಡ್ರೆಸ್ನಲ್ಲಿ ಕಾಣಿಸಿಕೊಂಡು ಮಿರಿ ಮಿರಿ ಮಿಂಚಿದ್ದಾರೆ. ಕೂದಲಿಗೂ ಹರಳಿನ ಸಿಂಗಾರ ಮಾಡಿಕೊಂಡು ಪಡ್ಡೆ ಹುಡುಗರನ್ನು ಖುಷಿಪಡಿಸಿದ್ದಾರೆ.
ಆ ಬ್ಯೂಟಿಫುಲ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹರ್ಷಿಕಾ ಹಂಚಿಕೊಂಡಿದ್ದು ಸಾಕಷ್ಟು ಕಾಮೆಂಟ್ಸ್ ಬಂದಿದೆ. ಅಂದಹಾಗೆ. ಲಕ್ಷ್ಮೀ ಕೃಷ್ಣ ಅವರ ಡ್ರೆಸ್ ವಿನ್ಯಾಸ ಮಾಡಿದರೆ, ಅಚ್ಚು ಫೋಟೋ ಕ್ಲಿಕ್ಕಿಸಿದ್ದಾರೆ.
ಕಳೆದವರ್ಷ “ಕನ್ನಡ್ ಗೊತ್ತಿಲ್ಲ” ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಮಯೂರ ರಾಘವೇಂದ್ರ ನಿರ್ದೇಶನದ, ಅನಂತ ಕೃಷ್ಣ ನಿರ್ಮಾಣದ, ಪೃಥ್ವಿ ಅಂಬರ್ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ “ಅಬ ಜಬ ದಬ” ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇನ್ನು ಹತ್ತು ದಿನಗಳ ಚಿತ್ರೀಕರಣವಾದರೆ ಚಿತ್ರೀಕರಣ ಮುಕ್ತಾಯವಾಗಲಿದೆ.
“ಕನ್ನಡ್ ಗೊತ್ತಿಲ್ಲ” ಚಿತ್ರದ ನಂತರ ನಾನು ರಚಿತಾ ರಾಮ್ ಅವರಿಗೊಂದು ಸಿನಿಮಾ ಮಾಡಬೇಕಿತ್ತು. ಅದು ದೊಡ್ಡ ಬಜೆಟ್ ನ ಚಿತ್ರವಾಗಿರುವುದರಿಂದ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಈ ಔಟ್ ಎಂಡ್ ಔಟ್ ಕಾಮಿಡಿಯಿರುವ ಈ ಚಿತ್ರದ ಕಥೆ ಸಿದ್ದಾವಾಯಿತು. ಕಥೆಗೆ ಒಳ್ಳೆಯ ಟೈಟಲ್ ಬೇಕಿತ್ತು. ಮನೆಯಲ್ಲಿ ನನ್ನ ಅಣ್ಣ, ಅವಳ ಮಗಳಿಗೆ ಅದೇನು ಹೇಳುತ್ತಾಳೊ.. ಗೊತ್ತೆ ಆಗಲ್ಲ “ಅಬ ಜಬ ದಬ” ಅಂತಾಳೆ ಎಂದ. ನಾನು ತಕ್ಷಣ ಈ ಶೀರ್ಷಿಕೆ ಚೆನ್ನಾಗಿದೆ ಅಂತ ಅದೇ ಇಟ್ಟಿದ್ದೀನಿ. ಆನಂತರ ಸ್ನೇಹಿತ ಅನಂತ ಕೃಷ್ಣ ನಿರ್ಮಾಣಕ್ಕೆ ಮುಂದಾದರು. ಪೃಥ್ವಿ ಅಂಬರ್ – ಅಂಕಿತ ಅಮರ್ ನಾಯಕ – ನಾಯಕಿ ಅಂತ ನಿಗದಿಯಾದರು. ಅಚ್ಯುತಕುಮಾರ್ ಕುಮಾರ್, ಸುಧಾರಾಣಿ, ಹಿರಿಯ ನಟಿ ಊರ್ವಶಿ, ಬಾಬು ಹಿರಣ್ಣಯ್ಯ, ಸಂಗೀತಾ ಭಟ್ ನಮ್ಮ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದರು. ಗಿರಿಧರ್ ದಿವಾನ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಮೀರ ಸಿಂಹ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರ ಸಹಕಾರದಿಂದ “ಅಬ ಜಬ ದಬ” ಒಳ್ಳೆಯ ಚಿತ್ರವಾಗಿ ಹೊರಹೊಮ್ಮಲಿದೆ. ನಿಮ್ಮೆಲ್ಲರ ಸಹಕಾರವಿರಲಿ ಎಂದರು ನಿರ್ದೇಶಕ ಮಯೂರ ರಾಘವೇಂದ್ರ.
ನನಗೆ ಮಯೂರ ರಾಘವೇಂದ್ರ ಕಥೆ ಇಷ್ಟವಾಯಿತು. ಇದು ಬರೀ ಕಾಮಿಡಿ ಸಿನಿಮಾ ಅಲ್ಲ. ಫ್ಯಾಂಟಸಿ ಕಾಮಿಡಿ ಸಿನಿಮಾ. ಚಿತ್ರದ ಹಾಡುಗಳು ಚೆನ್ನಾಗಿದೆ. ಊರ್ವಶಿ ಅವರಂತಹ ಹಿರಿಯ ನಟರೊಂದಿಗೆ ನಟಿಸಿದ್ದು ಸಂತೋಷವಾಗಿದೆ. ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನನ್ನ ಪಾತ್ರ ಕೂಡ ಸುಂದರವಾಗಿದೆ ಎಂದರು ನಾಯಕ ಪೃಥ್ವಿ ಅಂಬರ್.
ಇದು ನಾನು ಬಣ್ಣ ಹಚ್ಚಿದ ಮೊದಲ ಚಿತ್ರ. ಪ್ರಿಯ ನನ್ನ ಪಾತ್ರದ ಹೆಸರು. ನಾನು ಈ ಚಿತ್ರದಲ್ಲಿ ಗಾಯಕಿ. ಎಸ್.ಪಿ.ಬಿ ಅವರ ಅಭಿಮಾನಿ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಅಂಕಿತ ಅಮರ್ ಮಾಹಿತಿ ನೀಡಿದರು.
ಮೂರು ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಸುನಂದಾ ಕಾಂಬ್ರೇಕರ್ ನನ್ನ ಪಾತ್ರದ ಹೆಸರು. ವಿಶೇಷ ಪಾತ್ರ ಅಂತ ಹೇಳಬಹುದು ಎಂದರು ನಟಿ ಸಂಗೀತಾ ಭಟ್.
ನಿರ್ಮಾಪಕ ಅನಂತ ಕೃಷ್ಣ, ಛಾಯಾಗ್ರಾಹಕ ಗಿರಿಧರ್ ದಿವಾನ್ ಹಾಗೂ ನಟ ಬಾಬು ಹಿರಣ್ಣಯ್ಯ ಚಿತ್ರದ ಕುರಿತು ಮಾತನಾಡಿದರು. ಸತೀಶ್ ರಘುನಾಥನ್ ಈ ಚಿತ್ರದ ಸಂಗೀತ ನಿರ್ದೇಶಕರು.
ಶಿವಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿವಾನಂದ್ ಎಸ್ ನೀಲಣ್ಣನವರ್ ನಿರ್ಮಿಸಿರುವ, ಶಾಹುರಾಜ್ ಶಿಂಧೆ ನಿರ್ದೇಶನದ ” ಚಾಂಪಿಯನ್ ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕ್ರೀಡಾ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ಸಚಿನ್ ಧನಪಾಲ್ ಅಭಿನಯಿಸಿದ್ದಾರೆ. ಅದಿತಿ ಪ್ರಭುದೇವ “ಚಾಂಪಿಯನ್” ಚಿತ್ರದ ನಾಯಕಿ. ಹಿರಿಯ ನಟ ದೇವರಾಜ್, ಸುಮನ್, ಪ್ರದೀಪ್ ರಾಹುತ್, ಚಿಕ್ಕಣ್ಣ, ಆದಿ ಲೋಕೇಶ್, ರಂಗಾಯಣ ರಘು, ಅವಿನಾಶ್, ಕಾಕ್ರೋಜ್ ಸುಧಿ, ಶೋಭರಾಜ್, ಅಶೋಕ್ ಶರ್ಮ, ಪ್ರಶಾಂತ್ ಸಿದ್ದಿ, ಗಿರಿ, ಮಂಡ್ಯ ರಮೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟಿ ಸನ್ನಿಲಿಯೋನ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸರವಣನ್ ನಟರಾಜನ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿರುವ “ಚಾಂಪಿಯನ್” ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
“ಚಾಂಪಿಯನ್” ಚಿತ್ರದ ಬಗ್ಗೆ ನಿರ್ದೇಶಕ ಶಾಹುರಾಜ್ ಶಿಂಧೆ ಬಹಳ ಆಸೆ ಇಟ್ಟುಕೊಂಡಿದ್ದರು. ಆದರೆ ಚಿತ್ರ ಬಿಡುಗಡೆಗೂ ಮುಂಚೆಯೇ ಶಾಹುರಾಜ್ ಶಿಂಧೆ ವಿಧಿವಶರಾಗಿರುವುದು ನಿಜಕ್ಕೂ ದುಃಖದ ಸಂಗತಿ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸುತ್ತಿರುವ, ಶ್ರೀನಿ ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ “ಘೋಸ್ಟ್” ಚಿತ್ರದ ಮುಹೂರ್ತ ಸಮಾರಂಭ ಮಿನರ್ವ ಮಿಲ್ ನಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಗೀತಾ ಶಿವರಾಜಕುಮಾರ್ ಆರಂಭ ಫಲಕ ತೋರಿದರು. ಬೃಂದಾ ಜಯರಾಂ ಕ್ಯಾಮೆರಾ ಚಾಲನೆ ಮಾಡಿದರು.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅದ್ದೂರಿ ಸೆಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಮಿನರ್ವ ಮಿಲ್ ನಲ್ಲಿ 15 ತರಹದ ಸೆಟ್ ಗಳನ್ನು ಹಾಗೂ ಮೈಸೂರಿನಲ್ಲಿ 4 ತರಹದ ಸೆಟ್ ಗಳನ್ನು ಕಲಾ ನಿರ್ದೇಶಕ ಮೋಹನ್ ಬಿ ಕೆರೆ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಮಿನರ್ವ ಮಿಲ್ ನಲ್ಲಿ ನಿರ್ಮಿಸಲಾಗಿರುವ ಜೈಲ್ ಸೆಟ್ ನಲ್ಲೇ 24 ದಿನಗಳ ಚಿತ್ರೀಕರಣ ನಡೆಯಲಿದೆ. ಈ ಅದ್ದೂರಿ ಸೆಟ್ ಗಳ ನಿರ್ಮಾಣಕ್ಕೆ ಸುಮಾರು ಮೂರು ಕೋಟಿ ವೆಚ್ಚವಾಗಿದೆಯಂತೆ.
“ಶ್ರೀನಿವಾಸ ಕಲ್ಯಾಣ”, ” ಓಲ್ಡ್ ಮಾಂಕ್” ಸೇರಿದಂತೆ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿ ನಿರ್ದೇಶನದ ಐದನೇ ಚಿತ್ರ “ಘೋಸ್ಟ್”. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ “ಘೋಸ್ಟ್ ” ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ.
ಶಿವರಾಜಕುಮಾರ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಿಜ ಜೀವನದ ಸ್ಟಾರ್ ಆಗಿ ಕಾಣಿಸಿಕೊಂಡಿರುವ ‘ಗಂಧದ ಗುಡಿ’ ಚಿತ್ರ ಬಿಡುಗಡೆಗೆ ದಿನಗಣನೆ ಶುರುವಾಗಿದೆ.
‘ಗಂಧದ ಗುಡಿ’ ಅಕ್ಟೋಬರ್ 28ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುನ್ನ ಅಕ್ಟೋಬರ್ 21ರ ಶುಕ್ರವಾರ ಚಿತ್ರದ ಫ್ರೀ ರಿಲೀಸ್ ಇವೆಂಟ್ ನಡೆಯಲಿದೆ.ಈ ಅಪರೂಪದ ಸಮಾರಂಭಕ್ಕೆ ‘ಪುನೀತ ಪರ್ವ’ ಎಂದು ಹೆಸರಿಡಲಾಗಿದೆ.
ಈ ಪುನೀತ ಪರ್ವ ಕಾರ್ಯಕ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದ್ದು, ಇದರ ಜೊತೆಗೆ ಭಾರತೀಯ ಚಿತ್ರರಂಗದ ತಾರೆಯರನ್ನು ಆಹ್ವಾನಿಸಲಾಗಿದೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮಂಗಳವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್ ಕುಮಾರ್, ಯುವ ರಾಜಕುಮಾರ್ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.
ಸೌತ್ ಇಂಡಿಯನ್ ಸ್ಟಾರ್ಸ್ ರಜನಿಕಾಂತ್, ಚಿರಂಜೀವಿ, ಸೂರ್ಯ ಸೇರಿದಂತೆ ಹಲವು ನಟರು ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಪ್ಪು ಅವರಿಗೆ ಆತ್ಮೀಯರಾದ ತಮಿಳು ಹಾಗೂ ತೆಲುಗು ಚಿತ್ರರಂಗದ ನಟರು ಆಗಮಿಸಲಿದ್ದಾರೆ.
ಕಳೆದ ವಾರ ಅಪ್ಪು ‘ಗಂಧದ ಗುಡಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ದಾಖಲೆ ವೀಕ್ಷಣೆ ಕಂಡಿದೆ.
ಪುನೀತ್ ರಾಜ್ಕುಮಾರ್ ಅರಣ್ಯದ ಪ್ರಾಣಿ ಪಕ್ಷಿಗಳ ಬಗ್ಗೆ ವಿವರಣೆ ನೀಡುವುದರ ಜೊತೆ ಒಂದಷ್ಟು ಅಪರೂಪದ ಕ್ಷಣಗಳನ್ನು ಕಳೆದಿದ್ದಾರೆ. ಸಾಗರದ ಆಳದಲ್ಲೂ ಅಪ್ಪು ಈಜಿ ಅಲ್ಲಿನ ನಿಗೂಢ ಜಗತ್ತಿನ ಬಗ್ಗೆಯೂ ಹೇಳಿದ್ದಾರೆ. ಒಟ್ಟಾರೆ ಟ್ರೇಲರ್ ಗಂಧದ ಗುಡಿ ನೋಡಲೇಬೇಕೆಂಬ ಕುತೂಹಲ ಮೂಡಿಸಿದೆ.
ಅಪ್ಪು ಅವರು ಕಣ್ಮರೆಯಾಗಿ ಒಂದು ವರ್ಷ ಆಗುತ್ತಿರುವಾಗ ಅವರ ಪುಣ್ಯ ಸ್ಮರಣೆಯ ಒಂದು ದಿನ ಮುನ್ನ, ಅಕ್ಟೋಬರ್ 28ರಂದು ‘ಗಂಧದ ಗುಡಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿಜ ಜೀವನದ ಅಪ್ಪುವಾಗಿ ಪುನೀತ್ ರಾಜ್ಕುಮಾರ್ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.
ಒಳ್ಳೆಯ ಕಥಾವಸ್ತುವುಳ್ಳ ಚಿತ್ರವನ್ನು ಚಿತ್ರರಸಿಕರು ಮೆಚ್ಚಿಕೊಳ್ಳುತ್ತಾರೆ ಎನ್ನುವುದಕ್ಕೆ “ಕಾಂತಾರ” ಚಿತ್ರದ ಯಶಸ್ಸೇ ಸಾಕ್ಷಿ.
ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮನಮುಟ್ಟುವಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಹಾಗೂ ನಿರ್ದೇಶಿಸಿರುವ ರಿಷಬ್ ಶೆಟ್ಟಿ ಅವರಿಗೆ ನಿಜಕ್ಕೂ ಅಭಿನಂದನೆ ಸಲ್ಲಬೇಕು.
ಸ್ಯಾಂಡಲ್ ವುಡ್ ನಲ್ಲಿ ಈಗ ಎಲ್ಲಿ ನೋಡಿದರೂ “ಕಾಂತಾರ” ದೆ ಮಾತು. ನಿರೀಕ್ಷೆಗೂ ಮೀರಿದ ಯಶಸ್ಸು ಕೂಡ. ಇಂತಹ ಅದ್ಭುತ ಚಿತ್ರ ಬೇರೆ ಬೇರೆ ರಾಜ್ಯಗಳಲ್ಲಿ, ಅಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಅಕ್ಟೋಬರ್ 14ರ ಶುಕ್ರವಾರ ಹಿಂದಿ ಭಾಷೆಯಲ್ಲೂ “ಕಾಂತಾರ” ಚಿತ್ರ ತೆರೆ ಕಾಣುತ್ತಿದೆ.. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2500 ಕ್ಕೂ ಅಧಿಕ ಸ್ಕೀನ್ ಗಳಲ್ಲಿ “ಕಾಂತಾರ” ಪ್ರದರ್ಶನವಾಗಲಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ “ಕೆ.ಜಿ.ಎಫ್ 2” ಬಾಲಿವುಡ್ ನಲ್ಲಿ ದಾಖಲೆ ಮಟ್ಟದ ಯಶಸ್ಸು ಗಳಿಸಿದ್ದು ಗಮನಾರ್ಹ. ಈಗ “ಕಾಂತಾರ” ಚಿತ್ರವನ್ನು ಅಧಿಕ ಸಂಖ್ಯೆಯ ಚಿತ್ರಮಂದಿಗಳಲ್ಲಿ ಬಿಡುಗಡೆ ಮಾಡುವ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡು ಹಾಗೆ ಮಾಡುತ್ತಿದ್ದಾರೆ ಕನ್ನಡದ ಹೆಮ್ಮೆಯ ನಿರ್ಮಾಪಕ ವಿಜಯ್ ಕಿರಗಂದೂರು.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡಿರುವ ಸಿ.ಆರ್. ಮನೋಹರ್ ಅವರ ನಿರ್ಮಾಣದ , ಉತ್ತಮ ಪ್ರೇಮಕಥೆಯುಳ್ಳ ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ನಿರ್ದೇಶನದ ಹಾಗು ಸ್ಪುರದ್ರೂಪಿ ನಟ ಇಶಾನ್ – ಆಶಿಕಾ ರಂಗನಾಥ್ ನಾಯಕ-ನಾಯಕಿಯಾಗಿ ನಟಿಸಿರುವ, ಬ್ಯೂಟಿಫುಲ್ ಮ್ಯೂಸಿಕಲ್ ಲವ್ ಸ್ಟೋರಿ “ರೇಮೊ” ನವೆಂಬರ್ 25 ರಂದು ಬಿಡುಗಡೆಯಾಗಲಿದೆ. ಸಿ.ಆರ್.ಗೋಪಿ ಈ ಚಿತ್ರದ ಸಹ ನಿರ್ಮಾಪಕರು.
ನಾನು ಮೊದಲ ಬಾರಿ ಇಶಾನ್ ಅವರನ್ನು ಭೇಟಿ ಮಾಡಿದ್ದು ದುಬೈನಲ್ಲಿ. ಇಷ್ಟು ಚೆನ್ನಾಗಿದ್ದಾರೆ. ಇವರನ್ನು ಹೀರೋ ಮಾಡಬೇಕು ಅಂದು ಕೊಂಡೆ. ನಂತರ “ರೇಮೊ” ಚಿತ್ರದ ಕಥೆ ಬರೆದೆ. 2019ರಲ್ಲಿ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಯಿತು. ಆನಂತರ ಹೈದರಾಬಾದ್, ಜಮ್ಮು-ಕಾಶ್ಮೀರ, ಸೌತ್ ಆಫ್ರಿಕಾ, ಸಿಂಗಾಪುರ ಮುಂತಾದ ಕಡೆ ಚಿತ್ರೀಕರಣ ನಡೆಸಲಾಯಿತು.
ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಆರು ಅದ್ಭುತ ಹಾಡುಗಳು ಈ ಚಿತ್ರದಲ್ಲಿದೆ. ಇಶಾನ್ – ಆಶಿಕಾ ರಂಗನಾಥ್ ಅವರ ಸುಂದರ ಜೋಡಿಯನ್ನು ತೆರೆ ಮೇಲೆ ನೋಡಿದವರು ಫಿದಾ ಆಗುವುದು ಖಂಡಿತಾ. ವೈದಿ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ರೇಮೊ” ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.
ಸದ್ಯದಲ್ಲೇ ಲಿರಿಕಲ್ ಸಾಂಗ್, ಒಂದು ವಿಡಿಯೋ ಸಾಂಗ್ ಮತ್ತು ಟ್ರೇಲರ್ ಬಿಡುಗಡೆ ಮಾಡುತ್ತೇವೆ. “ರೇಮೊ” ಚಿತ್ರದಲ್ಲಿ ಪರಿಶುದ್ಧ ಪ್ರೇಮಕಥೆಯೊಂದಿಗೆ ಭಾವನಾತ್ಮಕ ಸನ್ನಿವೇಶಗಳು ನೋಡುಗರ ಮನಸ್ಸಿಗೆ ಹತ್ತಿರವಾಗಲಿದೆ.
ನವೆಂಬರ್ 25 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ತೆರೆಯ ಮೇಲೆ ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ. ನೀವೆಲ್ಲರು ನೋಡಿ ಹರಿಸಿ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.
ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುವಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿರುವ “ಧೂಮಂ” ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಇದು ಹೊಂಬಾಳೆ ಫಿಲಂಸ್ ನಿರ್ಮಾಣದ ಹನ್ನೆರಡನೇ ಚಿತ್ರ. ಮಲೆಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ಬರಲಿದ್ದು, “ಲೂಸಿಯಾ” ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.
ಮಲೆಯಾಳಂನ ಹೆಸರಾಂತ ನಟ ಫಹಾದ್ ಫಾಸಿಲ್ ಹಾಗೂ ಅಪರ್ಣ ಬಾಲಮುರಳಿ(ಸೂರರೈ ಪೊಟ್ರು) ನಾಯಕ- ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಮಂಜುನಾಥ್ ಕಿರಗಂದೂರು ಆರಂಭ ಫಲಕ ತೋರಿದರು. ಶೈಲಜಾ ವಿಜಯ್ ಕಿರಗಂದೂರು ಕ್ಯಾಮೆರಾ ಚಾಲನೆ ಮಾಡಿದರು.
ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು “ಕೆ ಜಿ ಎಫ್” ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಆಗಮಿಸಿ ಶುಭ ಕೋರಿದರು. ಮುಂದಿನ ತಿಂಗಳಿನಿಂದ “ಧೂಮಂ” ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಪ್ರೀತಾ ಜಯರಾಮನ್ ಛಾಯಾಗ್ರಹಣ “ಧೂಮಂ” ಚಿತ್ರಕ್ಕಿದೆ.
ಒಂದರ ಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡುತ್ತಿರುವ ಹೊಂಬಾಳೆ ಫಿಲಂಸ್ ಹಾಗೂ ಪ್ರತಿಭಾವಂತ ನಿರ್ದೇಶಕ ಪವನ್ ಕುಮಾರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಚಿತ್ರದ ಪೋಸ್ಟರ್ ಈಗಾಗಲೇ ಕುತೂಹಲ ಹುಟ್ಟಿಸಿದೆ. “ಧೂಮಂ” ಬಗ್ಗೆ ಅಭಿಮಾನಿ ವಲಯದಲ್ಲಿ ಸಾಕಷ್ಟು ನಿರೀಕ್ಷೆಯಿದೆ.
ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಆಯೋಜಿಸಿರುವ ‘ಅಪ್ಪು ಕಪ್’ ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್ ನ ಲೋಗೋ, ಜರ್ಸಿ, ಥೀಮ್ ಸಾಂಗ್ ಲಾಂಚ್ ಉದ್ಘಾಟನಾ ಸಮಾರಂಭ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನೇರವೇರಿದೆ. ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಟಗಾರರಿಗೆ ಶುಭಾಶಯ ಕೋರಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಚಿವ ಆರ್. ಅಶೋಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗಿಯಾಗಿದ್ದರು.
ಅಪ್ಪು ಕಪ್ ಬ್ಯಾಡ್ಮಿಂಟನ್ ಬಗ್ಗೆ ಮಾತಾನಾಡಿದ ಸಚಿವ ಆರ್. ಅಶೋಕ, ಅಪ್ಪು ಕಪ್ ಬ್ಯಾಡ್ಮಿಂಟನ್ ಲೀಗ್ ಉದ್ಘಾಟನೆಯಾಗಿದೆ. ಎಲ್ಲರೂ ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ದೀರಾ. ಎಲ್ಲರೂ ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದೀರಾ. ಇದು ಪ್ರತಿಯೊಬ್ಬ ಆಟಗಾರನ ಆತ್ಮವಿಶ್ವಾಸ. ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಒಬ್ಬರೇ ಗೆಲ್ಲಲು ಆಗುವುದು. ಅಪ್ಪು ಹೆಸರಲ್ಲಿ ಮಾಡುತ್ತಿರುವ ಈ ಪಂದ್ಯಾವಳಿ ಯಶಸ್ವಿಯಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದ ಅವರು, ಅಪ್ಪು ಒಟ್ಟಿಗಿನ ಒಡನಾಟ ಬಿಚ್ಚಿಟ್ಟರು. ರಾಜ್ ಕುಮಾರ್ ಅವರಲ್ಲಿದ್ದ ಗುಣಗಳು ಅಪ್ಪುವಿನಲ್ಲಿದ್ದವು. ನವೆಂಬರ್ ತಿಂಗಳಲ್ಲಿ ಅವರಿಗೆ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಕೊಡಲಿದೆ ಎಂದರು.
ಕನ್ನಡ ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರು ಆಡುತ್ತಿರುವ ಈ ಪಂದ್ಯಾವಳಿಯಲ್ಲಿ ಜಾಕಿ ರೈಡರ್ಸ್, ರಾಜ್ ಕುಮಾರ್ ಕಿಂಗ್ಸ್, ಅರಸು ಹಂಟರ್ಸ್, ಬಿಂದಾಸ್ ಸೂಪರ್ ಸ್ಟಾರ್ಸ್, ಮಯೂರ್ ಸ್ಟ್ರೈಕರ್ಸ್, ಜೇಮ್ಸ್ ವಾರಿಯರ್, ಪವರ್ ಪೈಥಾನ್, ದೊಡ್ಮನೆ ಡ್ರ್ಯಾಗನ್ ಸೇರಿದಂತೆ ಎಂಟು ತಂಡಗಳು ಭಾಗಿಯಾಗಲಿವೆ.
ದಿಗಂತ್, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ಪ್ರಿಯಾಂಕಾ ಉಪೇಂದ್ರ, ರಾಗಿಣಿ, ಕವಿತಾ ಲಂಕೇಶ್, ಶ್ವೇತಾ ಶ್ರೀವಾಸ್ತವ್, ಮಾಸ್ಟರ್ ಆನಂದ್ ತಂಡಗಳನ್ನು ಮುನ್ನೆಡೆಸಲಿದ್ದಾರೆ. ಇದರ ಜೊತೆಗೆ ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳು ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.
ನಟ ಚೇತನ್ ಸೂರ್ಯ ತಮ್ಮದೇ ಸ್ಟೆಲ್ಲರ್ ಸ್ಟುಡಿಯೋ ಅಂಡ್ ಇವೆಂಟ್ ನಡಿ ಈ ಪಂದ್ಯಾವಳಿ ಆಯೋಜಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್ ಚೇತನ್ ಗೆ ಸಾಥ್ ಕೊಟ್ಟಿದ್ದಾರೆ. ಇದೇ ತಿಂಗಳ 21ರಿಂದ ಮೂರು ದಿನಗಳ ಕಾಲ ಅಪ್ಪು ನೆನಪಿನಲ್ಲಿ ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್ ನಡೆಯಲಿದೆ.
ಇನ್ನು ಜಾಕಿ ರೈಡರ್ಸ್ ತಂಡದ ಒಡೆತನದ ಜವಾಬ್ದಾರಿಯನ್ನು ಅಪ್ಲೆಕ್ಸ್ ಸಾಫ್ಟ್ವೇರ್ ಮಾಲೀಕರಾದ ಗಿರೀಶ್ ಕುಮಾರ್ ಹೊತ್ತುಕೊಂಡಿದ್ದರೆ, ರಾಜ್ ಕುಮಾರ್ ಕಿಂಗ್ಸ್ ತಂಡಕ್ಕೆ ನಿರ್ಮಾಪಕ ರವಿಕುಮಾರ್ ಬಿ ಮಾಲೀಕರು, ಅರಸು ಹಂಟರ್ಸ್ ಟೀಂ ನಮೋ ವೆಲ್ ನೆಸ್ ಮಾಲೀಕ ಮಹೀಂದ್ರ, ಬಿಂದಾಸ್ ಸೂಪರ್ ಸ್ಟಾರ್ಸ್ ತಂಡಕ್ಕೆ ನಿರ್ಮಾಪಕಿ ರಾಮದೇವಿ ಇದ್ದಾರೆ.
ಜೇಮ್ಸ್ ವಾರಿಯರ್ ತಂಡಕ್ಕೆ ಬ್ಯಾಡ್ಮಿಂಟನ್ ಅಕಾಡೆಮಿ ಮಾಲೀಕ ಚಂದ್ರಶೇಖರ್, ಪವರ್ ಪೈಥಾನ್ ತಂಡಕ್ಕೆ ಬಿಗ್ ಮೇಕರ್ಸ್ ಮಾಲೀಕ ಸಂತೋಷ್, ದೊಡ್ಮನೆ ಡ್ರ್ಯಾಗನ್ ತಂಡಕ್ಕೆ ನಿರ್ಮಾಪಕ ಮಂಜುನಾಥ್ ಸುಪುತ್ರ ಹರ್ಷ, ಮಯೂರ್ ಸ್ಟ್ರೈಕರ್ ತಂಡದ ಒಡೆತನವನ್ನು ಗುಬ್ಬಿ ವೀರಣ್ಣ ಮೊಮ್ಮಗ ಹಾಗೂ ಕಾರ್ನರ್ ಹೌಸ್ ಮಾಲೀಕ ಶಿವಪ್ರದೀಪ್ ಹೊತ್ತುಕೊಂಡಿದ್ದಾರೆ.
ರುದ್ರಾನಂದ ಆರ್ ಎನ್ ಹಾಗೂ ಅರುಣ್ ಕುಮಾರ್ ಎನ್ ನಿರ್ಮಾಣದ, ಶಶಿಕಾಂತ್ ಗಟ್ಟಿ ನಿರ್ದೇಶನದ, ನೈಜಘಟನೆ ಆಧಾರಿತ “ರಾಂಚಿ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ.
ನಾನು ಐ ಪಿ ಸಿ ಸೆಕ್ಷನ್ 300 ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದೆ. ಆಗ ನನಗೆ “ರಾಂಚಿ”ಯಿಂದ ಒಂದು ಕರೆ ಬರುತ್ತದೆ. ನೀವು ರೈಲ್ವೆ ಇಲಾಖೆ ಕುರಿತು ಒಂದು ಡಾಕ್ಯುಮೆಂಟರಿ ಮಾಡಿಕೊಡಬೇಕು. ರಾಂಚಿಗೆ ಬನ್ನಿ. ಅವರ ಪರಿಶುದ್ಧ ಹಿಂದಿ ಭಾಷೆ ಕೇಳಿ, ಇದು ಸರ್ಕಾರದಿಂದ ಬಂದಿರುವ ಕರೆ ಎಂದು ತಿಳಿದು ಸಂತೋಷವಾಯಿತು. ಆಮೇಲೆ ಯೋಚನೆ ಮಾಡಿದೆ. ಸರ್ಕಾರ ಇಂತಹ ವಿಷಯವನ್ನು ಟೆಂಡರ್ ಮೂಲಕ ಕರೆಯುತ್ತಾರೆ. ಇದು ಸುಳ್ಳು ಇರಬಹುದು ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಫೋನ್ ಮಾಡಿ ಈ ಬಗ್ಗೆ ಕೇಳಿದೆ. ಅವರು ಇದೆಲ್ಲಾ ಸುಳ್ಳು. ನೀವು ಇಲ್ಲಿಗೆ ಬರಬೇಡಿ ಎಂದರು. ಈ ರೀತಿ ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಈ ರೀತಿಯ ಕರೆಯಿಂದ ಮೋಸ ಹೋಗಿದ್ದಾರೆ. ಈ ವಿಷಯವನ್ನಿಟ್ಟುಕೊಂಡೆ “ರಾಂಚಿ” ಸಿನಿಮಾ ಮಾಡಿದ್ದೇವೆ.
ನಾಯಕ ಪ್ರಭು ಮುಂಡ್ಕರ್ ಕಥೆ ಕೇಳಿ ನಟಿಸಲು ಒಪ್ಪಿದರು. ರುದ್ರಾನಂದ ಹಾಗೂ ಅರುಣ್ ಕುಮಾರ್ ನಿರ್ಮಾಣಕ್ಕೆ ಮುಂದಾದರು. ನೈಜಘಟನೆ ಆಧಾರಿತ ಸಿನಿಮಾವಿದು. “ರಾಂಚಿ”ಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. 2020 ರಲ್ಲೇ ಸೆನ್ಸಾರ್ ಆಗಿತ್ತು. ಕೊರೋನ ಕಾರಣದಿಂದ ಬಿಡುಗಡೆ ವಿಳಂಬವಾಯಿತು. ಒಂದೊಳ್ಳೆ ಸಿನಿಮಾ ಮಾಡಿರುವ ಖುಷಿಯಿದೆ. ದಿವ್ಯ ಉರುಡಗ, ಟೋಟ ರಾಯ್ ಚೌಧರಿ, ಆರತಿ ನಾಯರ್, ಲಕ್ಷ್ಮಣ್ ಗೌಡ, ಸುರೇಶ್ ಹೆಬ್ಳೀಕರ್, ಉಷಾ ಭಂಡಾರಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಚಿತ್ರದ ಕುರಿತು ನಿರ್ದೇಶಕ ಶಶಿಕಾಂತ್ ಗಟ್ಟಿ ಮಾಹಿತಿ ನೀಡಿದರು.
ಕೋವಿಡ್ ನಂತರ ಜನ ಸಿನಿಮಾ ನೋಡುವ ರೀತಿ ಬದಲಾಗಿದೆ. ಜನರ ನಿರೀಕ್ಷೆ ಬೇರೆ ತರಹ ಇದೆ. ” ಕೆ.ಜಿ.ಎಫ್”, “ಚಾರ್ಲಿ”, ” ಕಾಂತಾರ” ದಂತಹ ಚಿತ್ರಗಳ ಗೆಲುವು ಇದಕ್ಕೆ ಸಾಕ್ಷಿ. ನಾನು ಸೈಂಟಿಸ್ಟ್ ಆಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆನಂತರ ಚಿತ್ರರಂಗಕ್ಕೆ ಬಂದೆ. ನಾನು “ಡಬಲ್ ಇಂಜಿನ್” ಚಿತ್ರದಲ್ಲಿ ನಟಿಸಬೇಕಾದರೆ ಶಶಿಕಾಂತ್ ಈ ಚಿತ್ರದ ಕಥೆ ಹೇಳಿದರು. ನನಗೂ ನೈಜಘಟನೆ ಆಧಾರಿತ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಆ ಸಮಯದಲ್ಲಿ ಈ ಕಥೆ ಕೇಳಿ, ನಟಿಸಲು ಒಪ್ಪಿದೆ ಎಂದರು ನಟ ಪ್ರಭು ಮುಂಡ್ಕರ್.
ಪ್ರಭು ಅವರ ಮೂಲಕ ನಿರ್ದೇಶಕ ಶಶಿಕಾಂತ್ ಗಟ್ಟಿ ಅವರ ಪರಿಚಯವಾಯಿತು. ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ಅರುಣ್ ಕುಮಾರ್ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಆರತಿ ನಾಯರ್, ಲಕ್ಷ್ಮಣ್ ಗೌಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.