Categories
ಸಿನಿ ಸುದ್ದಿ

ಗ್ರೇ ಗೇಮ್ಸ್ ಟ್ರೇಲರ್ ಬಂತು: ಇದು ವಿಜಯ ರಾಘವೇಂದ್ರ ಚಿತ್ರ- ಶ್ರೀಮುರಳಿ ಅಕ್ಕನ ಮಗ ಜೈ ಸಿನಿಮಾಗೆ ಎಂಟ್ರೆ

ಆನಂದ್ ಮುಗದ್ ನಿರ್ಮಾಣದ, ಪ್ರಶಸ್ತಿ ವಿಜೇತ “ಆಯನ” ಚಿತ್ರದ ಖ್ಯಾತಿಯ ಗಂಗಾಧರ್ ಸಾಲಿಮಠ ನಿರ್ದೇಶನದ ಹಾಗೂ “ಚಿನ್ನಾರಿ ಮುತ್ತ” ವಿಜಯ ರಾಘವೇಂದ್ರ ಪ್ರಮುಖಪಾತ್ರದಲ್ಲಿ ನಟಿಸಿರುವ “ಗ್ರೇ ಗೇಮ್ಸ್” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ‌. ಎಸ್ ಎ ಚಿನ್ನೇಗೌಡ, ಅಶ್ವಿನಿ ಪುನೀತ್ ರಾಜಕುಮಾರ್, ಶ್ರೀಮುರಳಿ, ವೀಣಾ ಮುಂತಾದ ಗಣ್ಯರು ಸೇರಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಚಿತ್ರದ ಮೂಲಕ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಅವರ ಸೋದರ ಅಳಿಯ(ಅಕ್ಕನ ಮಗ) ಜೈ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶೃತಿ ಪ್ರಕಾಶ್, ಭಾವನ ರಾವ್, ಇಶಿತಾ, ರವಿ ಭಟ್, ಅಪರ್ಣ ವಸ್ತಾರೆ, ರವಿ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರ ಮೇ ಹತ್ತರಂದು ಬಿಡುಗಡೆಯಾಗಲಿದೆ.

ಈ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ನನ್ನ ಅಣ್ಣ ರಾಘು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದಾನೆ‌. ನಾವು ಆಡಿ ಬೆಳೆಸಿದ ಅಕ್ಕನ ಮಗ ಜೈ ಕೂಡ ಈ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಶ್ರೀಮುರಳಿ ಹಾರೈಸಿದರು.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಟ್ರೇಲರ್ ನಾನು ಕೂಡ ಇಂದೆ ನೋಡಿದ್ದು. ಚೆನ್ನಾಗಿದೆ. ಈ ಸಮಯದಲ್ಲಿ ನಾನು ಪುನೀತ್ ರಾಜಕುಮಾರ್ ಹಾಗೂ ನನ್ನ ಪತ್ನಿ ಸ್ಪಂದನ ಅವರನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಅಕ್ಕನ ಮಗ ಜೈ ಕಂಡರೆ ಸ್ಪಂದನಗೆ ಬಹಳ ಪ್ರೀತಿ‌.‌ ಇಂದು ಸ್ಪಂದನ ಇದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಮೇ ಹತ್ತರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ನೀವೆಲ್ಲಾ ನೋಡಿ. ಪ್ರೋತ್ಸಾಹ ನೀಡಿ ಎಂದರು ವಿಜಯ ರಾಘವೇಂದ್ರ.

ಇದೊಂದು ಮೈಂಡ್ ಗೇಮ್ ಕುರಿತಾದ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಗಂಗಾಧರ್ ಸಾಲಿಮಠ, ಕನ್ನಡದಲ್ಲಿ ಇದು ಅಪರೂಪ ಕಥೆ ಎನ್ನಬಹುದು. ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದು ಕೊಂಡಿರುವ ಈ ಚಿತ್ರ ಮುಂದಿನವಾರ ತೆರೆಗೆ ಬರುತ್ತಿದೆ. ಈ ಚಿತ್ರ ಉತ್ತಮವಾಗಿ ಬರಲು ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಶ್ರಮವಿದೆ ಎಂದು ತಿಳಿಸಿದರು ಹಾಗೂ ಚಿತ್ರತಂಡದ ಸದಸ್ಯರನ್ನು ಪರಿಚಯಿಸಿದರು.

ಅವಕಾಶ ಕೊಟ್ಟವರಿಗೆ ಧನ್ಯವಾದ ತಿಳಿಸಿದ ನೂತನ ನಟ ಜೈ, ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಟಿಯರಾದ ಭಾವನರಾವ್, ಇಶಿತಾ ಕೂಡ “ಗ್ರೇ ಗೇಮ್ಸ್” ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಪ್ರೈಡ್ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಿದ ಕಾಂತಾರ ಸಪ್ತಮಿ ಗೌಡ

ಭಾರತೀಯ ಉದ್ಯಮ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ, ಪ್ರಶಸ್ತಿ ಕೊಡುವ ಸಲುವ ಕಾರ್ಯವನ್ನು ಪ್ರೈಡ್ ಇಂಡಿಯಾ ಅವಾರ್ಡ್’ (India Pride Award) ಮಾಡುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿಂದು‌ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನೆರವೇರಿದೆ. ಕಾಂತಾರದ ಚೆಲುವೆ ಸಪ್ತಮಿ ಗೌಡ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಮೆರಗು ನೀಡಿದರು. ಜೊತೆಗೆ ಉದ್ಯಮ ರಂಗದ ದಿಗ್ಗಜರು, ಸಾಧಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹಲವು ಸವಾಲುಗಳನ್ನು ಎದುರಿಸಿ ಉದ್ಯಮ ರಂಗದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನ ಮಾಡುವ ಕಾರ್ಯಕ್ರಮ ಅದಾಗಿತ್ತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ನಟಿ ಸಪ್ತಮಿ ಗೌಡ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಬೆಂಗಳೂರಿನಲ್ಲಿ ಇಂಡಿಯಾ ಪ್ರೈಡ್ ಅವಾರ್ಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದೊಂದು ಅದ್ಭುತ ಕಾರ್ಯಕ್ರಮ. ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ಕೊಡುವ ಈ ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ. ನಿಮ್ಮ ಪ್ರತಿ ಕೆಲಸದಲ್ಲಿ ಕುಟುಂಬದ ಬೆಂಬಲವಿದ್ದರೆ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದರು.

ವಿನಯ್ ಕುಮಾರ್ ನಾರಾಯಣಸ್ವಾಮಿ ಅವರ ಪರಿಕಲ್ಪನೆ ಈ ಪ್ರೈಡ್ ಇಂಡಿಯಾ ಅವಾರ್ಡ್. ಉದ್ಯಮ ವಲಯದಲ್ಲಿ ತಮ್ಮ ಸಾಹಸಗಳ ಮೂಲಕ ಗೆದ್ದವರು ಹಲವು ವಿಭಾಗದಲ್ಲಿದ್ದಾರೆ. ಅಂಥಹವರನ್ನು ಗುರುತಿಸಿ, ಪ್ರೋತ್ಸಾಹಿಸಿ, ಭಾರತೀಯ ಉದ್ಯಮ ರಂಗ ಹೊಸಾ ಸಾಧ್ಯತೆಗಳಿಗೆ ಒಡ್ಡಿಕೊಳ್ಳಲು ಪ್ರೇರೇಪಣೆ ನೀಡುವುದು ಈ ಪ್ರಶಸ್ತಿಯ ಮೂಲ ಉದ್ದೇಶ. ಇದೀಗ ಬೆಂಗಳೂರಿನಲ್ಲಿ ನಡೆದಿರುವ ಈ ಕಾರ್ಯಕ್ರಮದಲ್ಲಿ ಉದ್ಯಮ ರಂಗದ ಮುನ್ನೂರಕ್ಕೂ ಹೆಚ್ಚು ಮಂದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಭಾರತದ ಆರ್ಥಿಕ ಪಥವನ್ನು ಪ್ರಜ್ವಲಿಸುವಂತೆ ಮಾಡುವಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿರುವ ಅನೇಕರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ. ಆ ಆಯ್ಕೆ ಪ್ರಕ್ರಿಯೆ ಕೂಡಾ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತದೆ. ಯಾವುದೇ ಉದ್ಯಮದಲ್ಲಿನ ಹೊಸತನ, ಪ್ರಯೋಗಶೀಲತೆ, ಸಾಹಸ ಪ್ರವೃತ್ತಿಯನ್ನು ಪರಿಗಣಿಸುತ್ತಲೇ, ಗಹನವಾದ ಚರ್ಚೆ, ಹಲವಾರು ಮಾನದಂಡಗಳ ಆಧಾರದಲ್ಲಿ ಈ ಸಮಿತಿ ಪ್ರೈಡ್ ಇಂಡಿಯಾ ಅವಾರ್ಡ್ ಗೆ ಅರ್ಹರನ್ನು ಆಯ್ಕೆ ಮಾಡಿದೆ.

ಇದೇ‌ಸಂದರ್ಭದಲ್ಲಿ ಈ ಅವಾರ್ಡ್ ಈವೆಂಟಿನ ಸ್ಥಾಪಕರಾದ ವಿನಯ್ ಕುಮಾರ್ ನಾರಾಯಣಸ್ವಾಮಿ ಮನದುಂಬಿ ಮಾತಾಡಿದ್ದಾರೆ.

Categories
ಸಿನಿ ಸುದ್ದಿ

ಕಾಂಗರೂ ಎಂಬ ಆಪ್ತ ಚಿತ್ರ: ತಾಯಿ ಹೃದಯಕ್ಕಿದು ಹತ್ರ!

ಚಿತ್ರ ವಿಮರ್ಶೆ – ರೇಟಿಂಗ್ 3.5 /5

ವಿಜಯ್ ಭರಮಸಾಗರ

ನಿರ್ದೇಶನ: ಕಿಶೋರ್ ಮೇಗಳಮನೆ

ನಿರ್ಮಾಣ: ಆರೋಹಾ ಪ್ರೊಡಕ್ಷನ್ಸ್

ತಾರಾಗಣ: ಆದಿತ್ಯ, ರಂಜನಿ ರಾಘವನ್‍, ಅಶ್ವಿನ್‍ ಹಾಸನ್‍, ಶಿವಮಣಿ, ನಾಗೇಂದ್ರ ಅರಸ್‍, ಕರಿಸುಬ್ಬು ಇತರರು.

ಅದು ಚಿಕ್ಕಮಗಳೂರಿನ ರೆಸಾರ್ಟ್. ಹೆಸರು ಆ್ಯಂಟೋನಿ ಕಾಟೇಜ್‍. ಅಲ್ಲಿ ಬಂದವರಿಗೆ ಭಯಾನಕ ಅನುಭವಗಳಾಗುತ್ತವೆ. ಕೆಲ ಕಪಲ್ಸ್ ನಾಪತ್ತೆಯಾದರೆ, ಇನ್ನೂ ಕೆಲವರು ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ. ಇಷ್ಟಕ್ಕೂ ಅಲ್ಲಿ ದೆವ್ವ- ಭೂತದ ಕಾಟವಿದೆಯಾ? ಯಾರಾದರೂ ಭಯ ಬೀಳಿಸುತ್ತಿದ್ದಾರಾ? ಇದು ನೋಡುಗರಿಗೆ ಕಾಡುವ ಪ್ರಶ್ನೆ. ಈ ಕುತೂಹಲದಲ್ಲೇ ಸಾಗುವ ಕಥೆಯಲ್ಲಿ ಪೊಲೀಸ್ ಅಧಿಕಾರಿ, ಡಾಕ್ಟರ್, ಆಸ್ಪತ್ರೆ ಇತ್ಯಾದಿ ಪ್ರಮುಖ ಅಂಶಗಳು ಕಾಣುತ್ತವೆ. ಅಷ್ಟಕ್ಕೂ ಆ ಕಾಟೇಜ್ ಒಳಗೆ ನಡೆಯೋ ಘಟನೆ ಎಂಥದ್ದು? ಈ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಒಂದು ಆತ್ಮಹತ್ಯೆ, ಇನ್ನೊಂದು ನಿಗೂಢ ನಾಪತ್ತೆ ಅಂಶ ಇಟ್ಟುಕೊಂಡು ನಿರ್ದೇಶಕ ಕಿಶೋರ್ ಮೇಗಳಮನೆ ಕುತೂಹಲಭರಿತ ಕಥೆ ಕಟ್ಟಿಕೊಟ್ಟಿದ್ದಾರೆ. ಆರಂಭದಿಂದ ಅಂತ್ಯದವರೆಗೂ ಸಿನಿಮಾ‌ ನೋಡಿಸಿಕೊಂಡು ಹೋಗುತ್ತೆ. ಮೊದಲರ್ಧ ಏನೋ ಇದೆ ಎಂಬ ಸಸ್ಪೆನ್ಸ್ ಕ್ರಿಯೇಟ್ ಮಾಡುವ ಚಿತ್ರ ದ್ವಿತಿಯಾರ್ಧ ಮತ್ತೊಂದು ಟ್ವಿಸ್ಟ್ ಜೊತೆ ಥ್ರಿಲ್ಲಿಂಗ್ ಅನುಭವ ಕೊಡುತ್ತೆ. ಸಸ್ಪೆನ್ಸ್ ಸಿನಿಮಾಗಳಲ್ಲಿರಬೇಕಾದ ಕುತೂಹಲ ಹಾಗು ನೋಡುವ ಇಂಟ್ರೆಸ್ಟ್ ಇಲ್ಲೂ ಇದೆ. ಎಲ್ಲೂ ಅತ್ತಿತ್ತ ಅಲುಗಾಡದಂತೆ ನೋಡುಗರಲ್ಲಿ ಹೊಸ ಅನುಭವ ಕೊಡುವುದರಲ್ಲಿ ನಿರ್ದೇಶಕರು ಜಾಣತನ ಮೆರೆದಿದ್ದಾರೆ.

ಇಂತಹ ಸಿನಿಮಾಗಳಿಗೆ ಅವಧಿ ಮುಖ್ಯ. ಇಲ್ಲಿ ಅನಗತ್ಯ ಎನಿಸುವ ಕೆಲ ದೃಶ್ಯಗಳನ್ನು ಕತ್ತರಿಸಲು ಅವಕಾಶ ಇತ್ತು. ಅದನ್ನು ತೆಗೆದಿದ್ದರೆ ಇನ್ನಷ್ಟು ಆಪ್ತವೆನಿಸುತ್ತಿತ್ತು. ಕೆಲವು ಕಡೆ ಟ್ರಾಕ್ ತಪ್ಪಿತ್ತಲ್ಲ ಅಂದುಕೊಳ್ಳುವಷ್ಟರಲ್ಲಿ ಸಣ್ಣ ಪುಟ್ಟ ಟ್ವಿಸ್ಟ್ ಗಳು ಬ್ಯಾಲೆನ್ಸ್ ಮಾಡುತ್ತವೆ.

ಕಥೆ ಇಷ್ಟು…

ಆ ಕಾಟೇಜ್ ವೊಂದರಲ್ಲಿ ಹೋದವರೆಲ್ಲ ನಿಗೂಢವಾಗಿ ನಾಪತ್ತೆಯಾದರೆ, ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ವೇಳೆಗೆ ಬೆಂಗಳೂರಿನಲ್ಲಿರುವ ಪೊಲೀಸ್ ಅಧಿಕಾರಿ ಪೃಥ್ವಿ (ಆದಿತ್ಯ)ಗೆ ಚಿಕ್ಕಮಗಳೂರು ಪೊಲೀಸ್‍ ಠಾಣೆಗೆ ವರ್ಗಾವಣೆ ಆಗುತ್ತೆ. ಕಾರಣ ಆ ಊರಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿದ್ದು ಅದನ್ನು ತಡೆಯಲು ಆ ಠಾಣೆಗೆ ವರ್ಗವಾಗುತ್ತೆ. ಅಲ್ಲಿಗೆ ಹೋದ ಮೇಲೆ ಪೃಥ್ವಿಗೆ ಕಾಟೇಜ್ ಪ್ರಕರಣ ಗೊತ್ತಾಗುತ್ತೆ. ಅದು ದೆವ್ವದ ಸಮಸ್ಯೆಯೇ ಅಥವಾ ಯಾರ ಕೈವಾಡವಿದೆಯೇ ಎಂಬ ಪ್ರಶ್ನೆಯಲ್ಲಿ ತನಿಖೆಗೆ ಮುಂದಾಗುತ್ತಾನೆ. ಅಲ್ಲಿಂದು ಶುರುವಾಗೋದೇ ರೋಚಕತೆ.

ನಿಜಕ್ಕೂ ಈ ಕಥೆ ಎಲ್ಲಾ ವರ್ಗಕ್ಕೂ ಇಷ್ಟ ಆಗುತ್ತೆ. ಎಲ್ಲೂ ಬೋರ್ ಆಗಲ್ಲ. ಅನಗತ್ಯ ವಿಷಯವಿಲ್ಲ. ಹೊಡಿ‌ಬಡಿ ಸಿನಿಮಾಗಳೇ ಬರುವ ಮಧ್ಯೆ ಭಾವುಕತೆ ತುಂಬುವ ಈ ಚಿತ್ರ ಮನಸ್ಸಿಗೆ ಆಪ್ತವೆನಿಸುತ್ತೆ.

ಎಲ್ಲರಿಗೂ ಇಷ್ಟ ಆಗುವ ಸಂದೇಶ ಇಲ್ಲಿದೆ. ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ನೋಡುಗರಿಗೆ ಇದು ಹಾರರ್ ಫೀಲ್ ಚಿತ್ರ ಎನಿಸಿದರೂ ಒಂದೊಳ್ಳೆಯ ಅಂಶ ಇಲ್ಲಿದೆ. ನಿರೂಪಣೆ ಸಿನಿಮಾದ ಮತ್ತೊಂದು ಹೈಲೆಟ್. ಎಷ್ಟು ಬೇಕೋ ಅಷ್ಟು ಮಾತುಕತೆ ಇಲ್ಲಿದೆ. ಚಿತ್ರಕಥೆಯ ವೇಗ ಮೊದಲರ್ಧಕ್ಕಿಂತ ದ್ವಿತಿಯಾರ್ಧ ಹೆಚ್ಚಿದೆ. ಇಲ್ಲಿ ಕುಣಿತ, ಫೈಟ್ ಇಲ್ಲ. ಅಂತ್ಯದಲ್ಲಿ ಬರುವ ಒಂದೇ ಹಾಡು ಕಣ್ಣಾಲಿಗಳನ್ನ ಒದ್ದೆ ಮಾಡುತ್ತೆ.

ಯಾರು ಹೇಗೆ?

ಇಲ್ಲಿ ಆದಿತ್ಯ ಪೊಲೀಸ್ ಅಧಿಕಾರಿ ಪಾತ್ರಕ್ಕಿನ್ನೂ ಧಮ್ ಕಟ್ಟಬಹುದಿತ್ತು. ಆದರೂ ಸಿಕ್ಕ ಅವಕಾಶಕ್ಕೆ ಮೋಸ ಮಾಡಿಲ್ಲ. ರಂಜನಿ ಇಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಕರಿಸುಬ್ಬು, ಶಿವಮಣಿ, ಅಶ್ವಿನ್ ಹಾಸನ್, ನಾಗೇಂದ್ರ ಅರಸ್ ಇತರರು ಇಷ್ಟವಾಗುತ್ತಾರೆ. ಸಾಧುಕೋಕಿಲ ಅವರ ಹಿನ್ನೆಲೆ ಸಂಗೀತ ಪ್ಲಸ್ ಆಗಿದೆ. ಉದಯ್‍ ಲೀಲಾ ಅವರ ಕ್ಯಾಮೆರಾ ಕೈಚಳಕ ಮೋಡಿ ಮಾಡಿದೆ.

Categories
ಸಿನಿ ಸುದ್ದಿ

ದ ಜಡ್ಜ್ ಮೆಂಟ್ ಗೆ ಸಾಥ್ ಕೊಟ್ಟ ರಿಲಯನ್ಸ್ ಎಂಟರ್ಟೈನ್ಮೆಂಟ್: ರಿಲೀಸ್ ಜವಾಬ್ದಾರಿ ಹೊತ್ತ ಹೆಸರಾಂತ ಸಂಸ್ಥೆ



ಜಿ9 ಕಮ್ಯುನಿಕೇಷನ್ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಹಾಗೂ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಪ್ರಮುಖಪಾತ್ರದಲ್ಲಿ ನಟಿಸಿರುವ, ಅದ್ದೂರಿ ತಾರಾಬಳಗ ಹೊಂದಿರುವ “ದ ಜಡ್ಜ್ ಮೆಂಟ್” ಚಿತ್ರದ ವಿತರಣೆ ಹಕ್ಕನ್ನು ಭಾರತದ ಹೆಸರಾಂತ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಪಡೆದುಕೊಂಡಿದೆ.

ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು ಕುತೂಹಲ ಮೂಡಿಸಿದೆ. ಚಿತ್ರವನ್ನು ನೋಡುವ ಕಾತುರವನ್ನು ಹೆಚ್ಚಿಸಿದೆ.

ಇತ್ತೀಚಿಗೆ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದು ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯ ಮಾಡಿ ಕುಂಬಳಕಾಯಿ ಒಡೆಯಲಾಯಿತು. ಟೀಸರ್ ಸಹ ಬಿಡುಗಡೆಯಾಗಿದ್ದು, ಪ್ರಶಂಸೆಯ ಮಾತುಗಳು ಕೇಳಿ ಬರುತ್ತದೆ. ಮತ್ತೊಂದು ಖುಷಿಯ ವಿಚಾರವೆಂದರೆ ನಮ್ಮ ಚಿತ್ರದ ವಿತರಣೆ ಹಕ್ಕನ್ನು ಪ್ರತಿಷ್ಠಿತ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಪಡೆದುಕೊಂಡಿದೆ.

ಈ ಹೆಸರಾಂತ ಸಂಸ್ಥೆಯ ಮೂಲಕ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ವಿತರಣೆ ಅಷ್ಟೇ ಅಲ್ಲದೆ, ಮುಂದೆ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುವ ಚಿತ್ರಗಳ ನಿರ್ಮಾಣದಲ್ಲೂ ಸಹಯೋಗ ನೀಡುವುದಾಗಿ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ತಿಳಿಸಿದೆ.

ಈವರೆಗೂ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ವಿತರಣೆ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ವಿತರಣೆ ಮಾಡಿದೆ. ಆ ಪೈಕಿ ಹತ್ತೊಂಬತ್ತು ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಚಿತ್ರಗಳಾಗಿದೆ. ಇಂತಹ ಸಂಸ್ಥೆ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ. ಕೋರ್ಟ್ ಡ್ರಾಮ ಜಾನರ್ ನ ಈ ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರುವುದಾಗಿ ನಿರ್ಮಾಪಕ ಹಾಗೂ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ತಿಳಿಸಿದ್ದಾರೆ.

ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.

ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಜಾಸ್ತಿ ಪ್ರೀತಿ ಇದು ಮುಖಪುಟದ ಸ್ಫೂರ್ತಿ

ಪೂರ್ಣ ಶ್ರೀ ಎಂಟರ್‌ಪ್ರೈಸಸ್ ಮೂಲಕ ಸಿದ್ದಗೊಂಡಿರುವ ’ಜಾಸ್ತಿ ಪ್ರೀತಿ’ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದೆ. ’ಮಿಡಿದ ಹೃದಯಗಳ ಮೌನರಾಗ’ ಎಂಬ ಅಡಿಬರಹ ಚಿತ್ರಕ್ಕಿದೆ. ರಿಯಲ್ ಎಸ್ಟೇಟ್ ಉದ್ಯಮಿ ಶಿವರಾಂ ಕೊಡತಿ ಬಂಡವಾಳ ಹೂಡಿರುವುದು ಹೊಸ ಅನುಭವ. ಎಸ್‌ಆರ್‌ಕೆ ಕೃಷ್ಣಪ್ಪ ಸರ್ಜಾಪುರ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ ಅರುಣ್ ಮಾನವ್.

ನಿರ್ದೇಶಕರು ಮಾತನಾಡಿ, ಪ್ರೀತಿಯ ಅವ್ಯಕ್ತಭಾವ ಜಾಸ್ತಿಪ್ರೀತಿಯಾಗಿದೆ. ಸಿನಿಮಾ ಹುಟ್ಟಲು ಫೇಸ್‌ಬುಕ್ ಪೇಜ್ ಕಾರಣವಾಗಿದೆ. ಹೀಗೆ ಒಮ್ಮೆ ಎಫ್‌ಬಿ ನೋಡುವಾಗ ಒಂದು ಹುಡುಗಿಯ ಫೋಟೋ ನೋಡಿ ಕರುಳು ಚುರ್ ಅನಿಸಿತು. ಅದರ ಏಳೆಯನ್ನು ತೆಗೆದುಕೊಂಡು ಕಾಲ್ಪನಿಕ ಚಿತ್ರಕಥೆಯನ್ನು ಬರೆಯಲಾಯಿತು. ಎಲ್ಲಿಯೂ ನೋಡದೆ ಇರತಕ್ಕಂತ ಪ್ರೀತಿಯನ್ನು ಇದರಲ್ಲಿ ನೋಡಬಹುದು. ಒಳ್ಳೆ ಮರವಾಗಬಲ್ಲ ಜಾಸ್ತಿಪ್ರೀತಿ ಆಗಿದೆ. ಯಾವುದೇ ವ್ಯಕ್ತಿಗೆ ಸಂಬಂದಪಟ್ಟಿರುವುದಿಲ್ಲ.

ಬಂದಿರತಕ್ಕಂತ ಕಥೆಗಳು ಇರುವುದಿಲ್ಲ. ಯಾವ ದೃಶ್ಯವು ಹಿಂದಿನ ಚಿತ್ರದಲ್ಲಿ ನೋಡಿದಂತೆ ಭಾಸವಾಗುವುದಿಲ್ಲ. ವಿಭಿನ್ನ ನಿರೂಪಣೆ ಹೊಂದಿದ್ದು, ಪ್ರಾರಂಭದಿಂದ ಕೊನೆತನಕ ಊಹಿಸಲು ಕಷ್ಟವಾಗುತ್ತದೆ. ಪ್ರೀತಿಯನ್ನು ತೋರ್ಪಡಿಸಲಿಕ್ಕೆ ಆಗುವುದಿಲ್ಲವೋ, ಆಗ ಸೋತು ಹೋಗುತ್ತಾನೆ. ಅದನ್ನು ಇಲ್ಲಿ ಕಾಣಬಹುದು. ಬೆಂಗಳೂರು, ಬಂಗಾರಪೇಟೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆದಷ್ಟು ಬೇಗನೆ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ. ಮಾಧ್ಯಮದ ಸಹಕಾರ ಬೇಕೆಂದು ಕೋರಿದರು.

ಸಾಹಿತಿ, ಕವಿ, ಚಿಂತಕ, ವಿಮರ್ಶಕ ಹಾಗೂ ಚಿತ್ರ ನಿರ್ದೇಶಕ ಎಲ್.ಎನ್.ಮುಕುಂದರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇವರು ಹೇಳುವಂತೆ ಕನ್ನಡ ಸಿನಿಮಾ ಬೇರೆ ಬೇರೆ ರೀತಿಯಲ್ಲಿ ಬೆಳೆದಿದೆ. ಅನೇಕ ಚಿತ್ರಗಳು ಜಗತ್ತಿನ ಸಿನಿಮಾಗಳ ಎದುರು ಸವಾಲು ಒಡ್ಡುವಂತ ಕೆಲಸ ಮಾಡುತ್ತಿದೆ. ಅದೇ ಸಾಲಿನಲ್ಲಿ ಜಾಸ್ತಿ ಪ್ರೀತಿ ಸೇರುತ್ತದೆ. ಸಿನಿಮಾ ಎಂಬುದು ಉದ್ಯಮವಾಗಿದೆ. ನೂರಾರು ಜನರ ಪ್ರತಿಭೆ ಮತ್ತು ಪರಿಶ್ರಮ ಒಳಗೊಂಡಿದೆ. ತಮಿಳು, ಮಲೆಯಾಳಂ ಚಿತ್ರಗಳಲ್ಲಿ ಅಲ್ಲಿನ ಪ್ರಸಿದ್ದ ಕವಿಗಳು ಸಾಹಿತ್ಯ ರಚಿಸುತ್ತಾರೆ. ನಮ್ಮಲ್ಲಿ ಕಡಿಮೆ ಇದ್ದಾರೆ. ಕುಮಾರವ್ಯಾಸ ಹೆಸರಿನಲ್ಲಿ ಚಿತ್ರಪ್ರಶಸ್ತಿ ನೀಡಬೇಕು. ಅರುಣ್‌ಗೆ ಭವಿಷ್ಯವಿದೆ. ಒಳ್ಳೆಯದಾಗಲಿ ಎಂದರು.

ಇಂಟೆನ್ಸ್ ಲವ್‌ಸ್ಟೋರಿ ಏಳೆ ತುಂಬಾ ಚೆನ್ನಾಗಿ ಬಂದಿದೆ. ಸಿನಿಮಾಗೆ ಏನು ಕಮ್ಮಿ ಮಾಡಿಲ್ಲ. ಎಲ್ಲರೂ ಫ್ಯಾಶನ್‌ನಿಂದ ಮಾಡಿದ್ದಾರೆ. ಇಂದು ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಇದೆ. ಯಾರು ಸಿನಿಮಾ ನೋಡಲು ಬರುತ್ತಿಲ್ಲ. ಆದರೂ ನಿರ್ಮಾಪಕರು ಧೈರ್ಯ ಮಾಡಿ, ನಂಬಿಕೆಯಿಂದ ಹಣ ಹೂಡಿದ್ದಾರೆ. ಒಳ್ಳೆ ಅಂಶಗಳು ಇರುವುದರಿಂದ ಚಿತ್ರ ನೋಡಲು ಬರುತ್ತಾರೆಂಬ ವಿಶ್ವಾಸವಿದೆ. ನನ್ನ ಅಭಿನಯದ ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ನನಗೂ ಒಂದೆ ಕಡೆ ಬ್ರೇಕ್ ಸಿಗಬೇಕಂಬ ಹಂಬಲವಿದೆ. ಇದರಿಂದ ಸಿಗಬಹುದು. ಅದಕ್ಕಾಗಿ ಕಾಯ್ತಾ ಇದ್ದೇನೆ ಎಂಬುದು ನಾಯಕ ಧರ್ಮಕೀರ್ತಿರಾಜ್ ಮಾತು.

ಕೃಷಿ ತಪಂಡ ನಾಯಕಿ. ಮತ್ತೋಂದು ಜೋಡಿಗಳಾಗಿ ಮುರಳಿರಾಮ್-ಶೋಭರಾಣಿ. ಇವರೊಂದಿಗೆ ಬ್ಯಾಂಕ್‌ಜನಾರ್ಧನ್, ಸುಚೇಂದ್ರಪ್ರಸಾದ್, ಮೈಸೂರು ರಮಾನಂದ್, ಎಂ.ಎನ್.ಲಕ್ಷೀದೇವಿ, ಮಧುಮಂದಗೆರೆ ಮುಂತಾದವರು ನಟಿಸಿದ್ದಾರೆ. ವಿನೀತ್ ರಾಜ್ ಮೆನನ್ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸತೀಶ್.ಸಿ.ಎಸ್-ಬಿ.ಆರ್.ಮಲ್ಲಿಕಾರ್ಜುನ್, ಸಂಕಲನ ವೆಂಕಟೇಶ್.ಯುಡಿವಿ, ನೃತ್ಯ ಗೋವಿಂದ್.ವಿ.ಮಾಲೂರು, ಸಾಹಸ ಕುಂಗು ಫೂ ಚಂದ್ರು ಅವರದಾಗಿದೆ. ಜೇಂಕಾರ್ ಮ್ಯೂಸಿಕ್ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

Categories
ಸಿನಿ ಸುದ್ದಿ

ಹೊಸಬರ ಕನ್ನಡ ಮಾಧ್ಯಮಕ್ಕೆ ದೊಡ್ಡ ರಂಗೇಗೌಡರ ಸಾಥ್: ರಿಲೀಸ್ ಆಯ್ತು ಮೋಷನ್ ಪೋಸ್ಟರ್

ಕಲ್ಕಿ ಪ್ರೊಡಕ್ಷನ್ ನಡಿ ವೆಂಕಟೇಶ್.ಎಸ್ ನಿರ್ಮಾಣ ಮಾಡುತ್ತಿರುವ ಕನ್ನಡ ಮಾಧ್ಯಮ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದರು.

ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ಎಲ್ಲಿ ಕನ್ನಡ ಅಲ್ಲಿ ದೊಡ್ಡ ರಂಗೇಗೌಡರು. ಆದ್ದರಿಂದ ಕನ್ನಡದ ಯಾವುದೇ ಕಾರ್ಯವಿರಲಿ, ಸಮಾರಂಭವಿರಲಿ. ಗೀತೆ ಪ್ರಸ್ತುತಿ ಅಲ್ಲಿ ನಾನು ಪಾಲ್ಗೊಳ್ಳಲು ಮುಖ್ಯ ಕಾರಣ ಕನ್ನಡವೇ ನನ್ನ ಉಸಿರು, ಕನ್ನಡವೇ ನನ್ನ ಬದುಕು, ಕನ್ನಡವೇ ನನ್ನ ಹೆಸರು, ಕನ್ನಡವೇ ನನ್ನ ಬೆಳಕು ಕೂಡ. ವಿಧಾನಸೌಧದಲ್ಲಿ ಮೊದಲ ಕನ್ನಡ ಬಳಕೆ ಪ್ರಾರಂಭವಾಗಬೇಕು. ಎಷ್ಟೋ ಅಧಿಕಾರಿಗಳು ಕನ್ನಡವನ್ನು ಬಳಸುವುದಿಲ್ಲ. ನಾನು ಆಶಾವಾದಿ. ನನ್ನಲ್ಲಿ ಆಶಾ ಕಿರಣವಿದೆ. ಕನ್ನಡ ಇಂದಲ್ಲ ನಾಳೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಕನ್ನಡ ನಮ್ಮೆಲ್ಲರ ಚೈತ್ಯನವಾಗಲಿ. ಉಸಿರಾಗಲಿ.. ಕನ್ನಡ ಮಾಧ್ಯಮ ಸಿನಿಮಾದಲ್ಲಿ ಈ ಎಲ್ಲಾ ಅಂಶಗಳನ್ನು ಅಳವಡಿಸುವಂತಾಗಲಿ. ಸಮಗ್ರವಾದ ಕನ್ನಡ ಸಮಸ್ಯೆಗಳ ಕೈಪಿಡಿ ತರ ಚಿತ್ರ ಇರಲಿ ಎಂದು ಹೇಳಿದರು.

ನಿರ್ದೇಶಕ ಅಖಿಲ್ ಪುತ್ತೂರು ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಎರಡು ಹಾಡುಗಳಿವೆ. ಜನಗಳಿಗೆ ಗೊತ್ತಿಲ್ಲದ ಒಂದಷ್ಟು ವಿಷಯಗಳನ್ನು ಕನ್ನಡ ಮಾಧ್ಯಮ ಚಿತ್ರದಲ್ಲಿ ತಿಳಿಸುತ್ತೇವೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತೇನೆ. ನಾನು ಯೋಧನಾಗಿ ಪಾತ್ರ ಮಾಡುತ್ತಿದ್ದೇನೆ ಎಂದರು.

ಕನ್ನಡ ಮಾಧ್ಯಮ ಸಿನಿಮಾಗೆ ಅಖಿಲ್ ಪುತ್ತೂರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದಹಾಗೇ ಅಖಿಲ್ ಅವರಿಗಿದು ನಿರ್ದೇಶಕನಾಗಿ ಮೊದಲ ಪ್ರಯತ್ನ. ಸವಾದ್ ಮಂಗಳೂರು ಕಥೆ ಚಿತ್ರಕಥೆ ಹಾಗೂ ಸಂಭಾಷಣೆ –ಬರೆಯುವುದರ ಜೊತೆ ಛಾಯಾಗ್ರಹಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಟೈಟಲ್ ಹೇಳುವಂತೆ ಕನ್ನಡ ಮಾಧ್ಯಮಗಳು ಪ್ರಾಮುಖ್ಯತೆಯನ್ನು ತಿಳಿಸುವ ಈ ಚಿತ್ರದಲ್ಲಿ ದೊಡ್ಡರಂಗೇಗೌಡ, ನಾಗೇಂದ್ರ ಅರಸ್ , ವಾಣಿ, ಅಖಿಲ್ , ಜಾಹ್ನವಿ , ಚಿನ್ಮಯ್ , ಶಿವಮೊಗ್ಗ ರಾಮಣ್ಣ , ಪ್ರದೀಪ್ ಕುಮಾರ್ ನಟಿಸುತ್ತಿದ್ದಾರೆ.

ಸಿ.ವಿಶಾಲ್ ಕೃಷ್ಣ ಕನ್ನಡ ಮಾಧ್ಯಮ ಸಿನಿಮಾಗೆ ಸಂಗೀತ ಒದಗಿಸುತ್ತಿದ್ದು, ಕೃಷ್ಣ ಸಂಕಲನ ಚಿತ್ರಕ್ಕೆ ಇರಲಿದೆ. ಮುಂದಿನ ತಿಂಗಳ 7ರಿಂದ ಶೂಟಿಂಗ್ ಶುರುವಾಗ್ತಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಧೀರೇನ್ ರಾಮ್ ಕುಮಾರ್ ಇನ್ನುಂದೆ ಧೀರೇನ್ ಆರ್ ರಾಜ್ ಕುಮಾರ್

ಧೀರೇನ್ ರಾಮ್ ಕುಮಾರ್ ಅವರನ್ನು ಧೀರೇನ್ ಆರ್ ರಾಜ್ ಕುಮಾರ್ ಆಗಿ ಕೆ.ಆರ್.ಜಿ.ಸ್ಟುಡಿಯೋಸ್ ಮರುಪರಿಚಯಿಸಿದೆ. ಧೀರೇನ್ ಅವರ ಹುಟ್ಟುಹಬ್ಬದ ಅಂಗವಾಗಿ ಒಂದು ಹೊಸ ಚಿತ್ರವನ್ನೂ ಕೂಡ ಕೆ.ಆರ್.ಜಿ ಘೋಷಿಸಿದೆ. ಚಿತ್ರದ ಕುರಿತು ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಿದೆ.

ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಹೊಂದಿರುವ ಕೆ.ಆರ್.ಜಿ ಸಂಸ್ಥೆ, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. “ರತ್ನನ್ ಪ್ರಪಂಚ” ಮೂಲಕ ರೋಹಿತ್ ಪದಕಿ, “ಪೌಡರ್” ಚಿತ್ರದ ಮೂಲಕ ಜನಾರ್ದನ್ ಚಿಕ್ಕಣ್ಣ, “ಗುರುದೇವ್ ಹೊಯ್ಸಳ” ಚಿತ್ರದ ಮೂಲಕ ವಿಜಯ್ ನಾಗೇಂದ್ರ ಮುಂತಾದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕೆ.ಆರ್.ಜಿ.ಗೆ ಇದ್ದು, ಈ‌ ರೀತಿ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಕನ್ನಡ ಚಿತ್ರರಂಗವನ್ನು ಬಹು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಸಂಸ್ಥೆ ಹೊಂದಿದೆ.

ಪ್ರಸ್ತುತವಾಗಿ ಬಹು ನಿರೀಕ್ಷಿತ “ಉತ್ತರಕಾಂಡ” ಚಿತ್ರ ಸೆಟ್ಟೇರಿದ್ದು, “ಪೌಡರ್” ಚಿತ್ರದ ಡಬ್ಬಿಂಗ್ ಕಾರ್ಯ ಬಿರುಸಿನಿಂದ ಸಾಗುತ್ತಿದೆ.

Categories
ಸಿನಿ ಸುದ್ದಿ

ನನ್ನ ಹಾಗು ಚಂದ್ರು ಬಗ್ಗೆ ಯಾವ ಮೀಡಿಯಾ ಏನೂ ಮಾಡಕ್ಕಾಗಲ್ಲ: ಸೋಶಿಯಲ್ ಮೀಡಿಯಾ ವಿರುದ್ಧ ಶಿವಣ್ಣ ಗರಂ

ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಶಿವರಾಜಕುಮಾರ್ ಅವರು ನಿರ್ದೇಶಕ ಆರ್. ಚಂದ್ರು ಕುರಿತು ನೆಗೆಟಿವ್ ಆಗಿ ಮಾತಾಡಿದ್ದಾರೆ ಎಂದು ಎಡಿಟ್ ಮಾಡಿದ ವೀಡಿಯೋವೊಂದು ಹರಿದಾಡಿತ್ತು. ಅಷ್ಟೇ ಅಲ್ಲದೆ, ಆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆ ಬಗ್ಗೆ ಈಗ ಸ್ವತಃ ಶಿವರಾಜಕುಮಾರ್ ಅವರೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ

ಹೌದು, ಹಾಗೆ ಮಾತಾಡಿದ್ದ ವೀಡಿಯೋವೊಂದರ ಕುರಿತು ಎಲ್ಕೆಡೆ ಮಾತುಗಳು ಕೇಳಿಬಂದಿದ್ದವು. ಆದರೆ ಆರ್.ಚಂದ್ರು ಮತ್ತು ಶಿವರಾಜಕುಮಾರ್ ಅವರ ಸಂಬಂಧ ಹೇಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಇತ್ತೀಚೆಗೆ ನಡೆದ ಫಾದರ್ ಚಿತ್ರದ ಮುಹೂರ್ತ ವೇಳೆ ಶಿವರಾಜಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಬಿಸಿ ಮುಟ್ಟಿಸಿದ್ದಾರೆ.

‘ಸೋಷಿಯಲ್‍ ಮೀಡಿಯಾ ಎನ್ನುವುದು ಆಟ ಸಾಮಾನಿನಂತಾಗಿದೆ. ಆ ಸಮಯದಲ್ಲಿ ನಾವಿದ್ದ ಕಾಲಘಟ್ಟ ಚೆನ್ನಾಗಿತ್ತು. ನಾವೆಲ್ಲರೂ ಆಗ ಪುಣ್ಯ ಮಾಡಿದ್ದೆವು. ಏನೇ ಇರಲಿ ಒಳ್ಳೆಯದಕ್ಕೆ ಸೋಷಿಯಲ್‍ ಮೀಡಿಯಾ ಬಳಸಿಕೊಳ್ಳವೇಕೆ ಹೊರತು ಕೆಟ್ಟದ್ದಕ್ಕಲ್ಲ.
ಏನಾದರೂ ಮಾತಾಡಿದರೆ ನಿಮಗೇನು ಸಮಸ್ಯೆ? ಸುಮ್ಮನೆ ಸೀನ್‍ ಕ್ರಿಯೇಟ್‍ ಮಾಡಬಾರದು. ಅದು ತಪ್ಪು. ಒಂದು ದಿನ ಖಂಡಿತಾ ಕಾಲ ಬರುತ್ತೆ. ದೇವರು ಬಿಡಲ್ಲ. ಆಗ ನಿಜಕ್ಕೂ ಕಷ್ಟ ಆಗತ್ತೆ. ಏನಾದರೂ ಮಾತಾಡಿದರೆ ಆ ಮಾತನ್ನು ತಿರುಚುವ ವೀಡಿಯೋಗಳು ವೈರಲ್ ಆಗುತ್ತವೆ. ಇದು ಸರಿಯಲ್ಲ ಎಂದು ಶಿವಣ್ಣ ಬೇಸರ ಹೊರಹಾಕಿದ್ದಾರೆ.

‘’ಕಬ್ಜ’ ಚಿತ್ರದ ಬಳಿಕ ಒಂದು ವೀಡಿಯೋ ವೈರಲ್‍ ಆಯ್ತು. ಸೋಷಿಯಲ್‍ ಮೀಡಿಯಾ ಮಂದಿ ಒಳ್ಳೆಯದನ್ನು ಮಾಡಿ. ಯಾವುದನ್ನೂ ಕೆಟ್ಟದ್ದು ಮಾಡಬೇಡಿ. ನೀವೇನೇ ಮಾಡಿದರೂ, ನಮ್ಮ ಸಂಬಂಧ ಹಾಳಾಗಲ್ಲ. ನನ್ನ ಮತ್ತು ಚಂದ್ರು ಅವರ ಬಾಂಧವ್ಯ ಯಾವಾಗಲೂ ಚೆನ್ನಾಗಿರುತ್ತದೆ. ನಾನೇನೇ ಹೇಳಿದರೂ ಚಂದ್ರು ಅವರನ್ನು ಕೇಳುತ್ತೇನೆ. ನಿಮಗ್ಯಾಕೆ ಕೇಳಲಿ? ದಯವಿಟ್ಟು ಆ ತರಹ ಕೆಲಸ ಮಾಡಬೇಡಿ. ಒಳ್ಳೆಯ ಕೆಲಸ ಮಾಡಿ. ಎಥಿಕ್ಸ್ ಇಟ್ಟುಕೊಳ್ಳಿ.

ಇಷ್ಟ ಬಂದ ಹಾಗೆ ಏನು ಬೇಕಾದರೂ ಹಾಕಿಕೊಳ್ಳಬಹುದು ಎನ್ನುವುದು ತಪ್ಪು ಎಂದ ಅವರು, ‘ನಿಮಗೆ ತಮಾಷೆ ಎನಿಸಬಹುದು. ನಿಮ್ಮನೆ ಒಲೆ ಉರಿಯೋಕೆ ಇನ್ನೊಬ್ಬರ ಮನೆಯ ಒಲೆ ಆರಿಸುವ ಕೆಲಸ ಮಾಡಬೇಡಿ. ಮೀಡಿಯಾ ನಮ್ಮನ್ನು ಏನೂ ಮಾಡಕ್ಕಾಗಲ್ಲ ಎಂದರು.

Categories
ಸಿನಿ ಸುದ್ದಿ

ಫಾದರ್ ಸಿನಿಮಾಗೆ ಚಾಲನೆ ಕೊಟ್ಟ ಶಿವಣ್ಣ ದಂಪತಿ: ಇದು ಆರ್ ಸಿ ಸ್ಟುಡಿಯೋಸ್ ಪ್ಯಾನ್ ಇಂಡಿಯಾ ಚಿತ್ರ

ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕೆಲವು ದಿನಗಳ ಹಿಂದೆ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ‌ ಸಂಸ್ಥೆ ಆರಂಭಿಸುವುದರ ಮೂಲಕ ಐದು ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆ ಪೈಕಿ ಮೊದಲ ಚಿತ್ರವಾಗಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ “ಫಾದರ್” ಚಿತ್ರ ನಿರ್ಮಾಣವಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಆರಂಭ ಫಲಕ ತೋರುವುದರ ಮೂಲಕ “ಫಾದರ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು.ರಾಜಕೀಯ ಮುಖಂಡ ಎಚ್.ಎಂ.ರೇವಣ್ಣ, ಶಾಸಕ ಪ್ರದೀಪ್ ಈಶ್ವರ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಬಹದ್ದೂರ್ ಚೇತನ್ ಕುಮಾರ್, ಮಂಜುನಾಥ್, ಮಮತ ದೇವರಾಜ್, ಮಂಜುನಾಥ್ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಆರ್ ಚಂದ್ರು ನನ್ನ ಆತ್ಮೀಯರು. ಸಿನಿಮಾವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಆರ್ ಸಿ ಸ್ಟುಡಿಯೋಸ್ ಮೂಲಕ ಮೊದಲ ಚಿತ್ರವಾಗಿ ” ಫಾದರ್” ಚಿತ್ರ ಆರಂಭಿಸಿದ್ದಾರೆ. ಚಂದ್ರು ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಶಿವರಾಜಕುಮಾರ್ ಹಾರೈಸಿದರು.

ನನ್ನ “ಚಾರ್ ಮಿನಾರ್” ಚಿತ್ರ ಆರಂಭವಾದಗಿನಿಂದ ಹಿಡಿದು ಈವರೆಗೂ ನನಗೆ ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್ ಅವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಚುನಾವಣೆ ಸಮಯ. ಆದರೂ ಇಂದು ಇಲ್ಲಿಗೆ ಆಗಮಿಸಿ, ನಮ್ಮ “ಫಾದರ್” ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಅವರಿಗೆ ಹಾಗೂ ಆಗಮಿಸಿರುವ ಎಲ್ಲಾ ಗಣ್ಯರಿಗೂ ಧನ್ಯವಾದ ತಿಳಿಸುತ್ತೇನೆ. ಕೆಲವು ದಿನಗಳ ಮುಂಚೆ ನಮ್ಮ ಆರ್ ಸಿ ಸ್ಟುಡಿಯೋಸ್ ಸಂಸ್ಥೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು.

ಈ ಸಂಸ್ಥೆಯಿಂದ ಒಂದು ವರ್ಷದಲ್ಲಿ ಐದು ಸಿನಿಮಾಗಳನ್ನು ನಿರ್ಮಿಸುವುದಾಗಿ ಹೇಳಿದ್ದೆ. ಅದರ ಮೊದಲ ಹೆಜ್ಜೆಯಾಗಿ ಇಂದು “ಫಾದರ್” ಚಿತ್ರ ಆರಂಭವಾಗಿದೆ. ಶಿವಣ್ಣ ಅವರ “ಭೈರಾಗಿ” ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರಾಜ್ ಮೋಹನ್ ಈ ಚಿತ್ರದ ನಿರ್ದೇಶಕರು. ಡಾರ್ಲಿಂಗ್ ಕೃಷ್ಣ ನಾಯಕರಾಗಿ, ಅಮೃತ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪ್ರಕಾಶ್ ರೈ, ಸುನೀಲ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಂಬೈನ ಆನಂದ್ ಪಂಡಿತ್ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. “ಹನುಮಾನ್” ಚಿತ್ರದ ಖ್ಯಾತಿಯ ಹರಿ ಸಂಗೀತ ನೀಡುತ್ತಿದ್ದಾರೆ. ನಮ್ಮ “ಫಾದರ್” ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಆರ್ ಚಂದ್ರು ತಿಳಿಸಿದರು.

ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಕಥೆ ತುಂಬಾ ಚೆನ್ನಾಗಿದೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು “ಫಾದರ್” ಚಿತ್ರದಲ್ಲಿದೆ ಎಂದರು ನಿರ್ದೇಶಕ ರಾಜ್ ಮೋಹನ್.

ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಆರ್ ಚಂದ್ರು ಅವರ ಜೊತೆಗೆ ಇದು ನನ್ನ ಮೊದಲ ಚಿತ್ರ ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದರು.

ಕಥೆ ಹಾಗೂ ನನ್ನ ಪಾತ್ರ ಎರಡು ತುಂಬಾ ಚೆನ್ನಾಗಿದೆ ಎಂದರು ನಾಯಕಿ ಅಮೃತ ಅಯ್ಯಂಗಾರ್. ಸಂಗೀತ ನಿರ್ದೇಶಕ ಹರಿ ಸೇರಿದಂತೆ ಅನೇಕರು ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ದಿ ಜಡ್ಜ್ ಮೆಂಟ್ ಶೂಟಿಂಗ್ ಮುಕ್ತಾಯ: ಇದು ಕ್ರೇಜಿ ಸ್ಟಾರ್ ಚಿತ್ರ

ಜಿ9 ಕಮ್ಯುನಿಕೇಷನ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಹಾಗೂ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಪ್ರಮುಖಪಾತ್ರದಲ್ಲಿ ನಟಿಸಿರುವ “ದಿ ಜಡ್ಜ್ ಮೆಂಟ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ), ನಮ್ಮ ಚಿತ್ರದ ಚಿತ್ರೀಕರಣ ಇಂದಿಗೆ ಪೂರ್ಣವಾಗಿದೆ. ಕಾಕತಾಳೀಯ ಎಂದರೆ ನಮ್ಮ ಚಿತ್ರದ ಚಿತ್ರೀಕರಣ ಕಳೆದವರ್ಷ ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದಂದು ಆರಂಭವಾಗಿತ್ತು. ಈ ವರ್ಷ ಅವರ ಹುಟ್ಟುಹಬ್ಬದ ದಿನ ಮುಕ್ತಾಯವಾಗಿದೆ. ಚಿತ್ರ ಇಷ್ಟು ಸರಾಗವಾಗಿ ಮುಕ್ತಾಯವಾಗಲು ರವಿಚಂದ್ರನ್ ಅವರು ಸೇರಿದಂತೆ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರವೇ ಕಾರಣ.

ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರವನ್ನು ನಾನು ಸೇರಿದಂತೆ ಐವರು ನಿರ್ಮಾಪಕರು ನಿರ್ಮಿಸಿದ್ದೇವೆ. ಕೋರ್ಟ್ ರೂಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ದ ಜಡ್ಜ್ ಮೆಂಟ್” ಚಿತ್ರವನ್ನು ಮೇ ನಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ನಮ್ಮ ಚಿತ್ರ ಕಳೆದವರ್ಷ ಯಾವ ದಿನ‌ ಆರಂಭವಾಗಿತ್ತೊ, ಈ ವರ್ಷ ಅದೇ ದಿನ ಮುಕ್ತಾಯವಾಗಿದೆ. ಇಂತಹ ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಹೊಂದಿರುವ ಈ ಚಿತ್ರ ಯಾವುದೇ ತೊಂದರೆಯಿಲ್ಲದೆ ಪೂರ್ಣವಾಗಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದ ಎಂದರು ನಿರ್ಮಾಪಕರಾದ ಶರದ್ ನಾಡಗೌಡ ಹಾಗೂ ರಾಮು ರಾಯಚೂರು. ನಿರ್ಮಾಪಕರಾದ ವಿಶ್ವನಾಥ್ ಗುಪ್ತ ಹಾಗು ರಾಜಶೇಖರ ಪಾಟೀಲ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

“ದ ಜಡ್ಜ್ ಮೆಂಟ್” ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ‌. ಈ ತಂಡದವರು ಕಲಾವಿದರನ್ನು ನೋಡಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಧನ್ಯಾ ರಾಮಕುಮಾರ್ ತಿಳಿಸಿದರು.

ಈ ತಂಡಕ್ಕೆ ತಡವಾಗಿ ಬಂದು ಸೇರಿಕೊಂಡವಳು ನಾನೇ ಎಂದು ಮಾತು ಆರಂಭಿಸಿದ ನಟಿ ಮೇಘನಾ ಗಾಂವ್ಕರ್, ರವಿಚಂದ್ರನ್ ಅವರ ಜೊತೆ ನಟಿಸಿದ್ದು ನನಗೆ ಸಂತೋಷವಾಗಿದೆ. ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಆರಂಭವಾಗಿ, ಈ ವರ್ಷದ ಅವರ ಹುಟ್ಟುಹಬ್ಬದ ದಿನವೇ ಚಿತ್ರೀಕರಣ ಮುಕ್ತಾಯವಾಗಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಅಣ್ಣಾವ್ರ ಆಶೀರ್ವಾದ ನಮ್ಮ ತಂಡಕ್ಕೆ ಇದೆ ಎಂದರು.

ಡಾ|| ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು. ಗೀತರಚನೆಕಾರ ಪ್ರಮೋದ್ ಮರವಂತೆ ಹಾಗು ಚಿತ್ರದಲ್ಲಿ ನಟಿಸಿರುವ ರೇಖಾ ಕೂಡ್ಲಗಿ, ನವಿಲ ಚಿತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಹಾಗೂ ಸಂಕಲನಕಾರ ಕೆಂಪರಾಜ್ ಸೇರಿದಂತೆ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿದ್ದರು.

ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ “ದ ಜಡ್ಜ್ ಮೆಂಟ್” ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

error: Content is protected !!