Categories
ಸಿನಿ ಸುದ್ದಿ

ದಿಗಂತ್ ಖಾತೆಯಲ್ಲಿ ಹಣವಿಲ್ಲ; ಕ್ಷಮಿಸಿ ಇದು ದೂದ್ ಪೇಡ ಸಿನಿಮಾ- ಏಪ್ರಿಲ್ 29ಕ್ಕೆ ರಿಲೀಸ್…

ದಿಗಂತ್ ಅಭಿನಯದ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಏಪ್ರಿಲ್ 29ಕ್ಕೆ ರಿಲೀಸ್ ಆಗುತ್ತಿದೆ. ಈ ಕುರಿತು ನಿರ್ದೇಶಕ ವಿನಾಯಕ ಕೋಡ್ಸರ ಹೇಳಿದ್ದಿಷ್ಟು.

ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಹೇಳಿದ್ದೀನಿ. ಚಿತ್ರದ ಟ್ರೇಲರ್ ಹಾಗೂ ಹಾಡು ಈಗಾಗಲೇ ಜನರ ಮನಸ್ಸು ಗೆದ್ದಿದೆ. ಸಿನಿಮಾ ಕೂಡ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ನಾವು ಹೆಚ್ಚು ಹೇಳುವುದೇನು ಇಲ್ಲ. ಇದೇ 29 ರಂದು ಚಿತ್ರ ತೆರೆಗೆ ಬರುತ್ತಿದೆ. ನೀವೆಲ್ಲಾ ನೋಡಿ ಹರಸಿ ಎಂದರು ವಿನಾಯಕ ಕೋಡ್ಸರ.

ಈ ಕಥೆ ಕೇಳಿದೆ. ಇಷ್ಟವಾಯಿತು. ಹತ್ತು ವರ್ಷಗಳ ನಂತರ ನಿರ್ಮಾಣ ಮಾಡಿದ್ದೇನೆ. ಸುಮಾರು ಅರವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದರು ನಿರ್ಮಾಪಕ ಸಿಲ್ಕ್ ಮಂಜು.

ಮಧ್ಯಮ ವರ್ಗದ ಜನರ ಬಳಿ ತಿಂಗಳ ಕೊನೆಗೆ ದುಡ್ಡು ಉಳಿದಿರುವಿದಿಲ್ಲ. ಈ ವಿಷಯವಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರವಿದು. ಮಲೆನಾಡ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ. ಉತ್ತಮ ಕಥೆಯಿರುವ ಚಿತ್ರವನ್ನು ಜನ ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಚಿತ್ರತಂಡದ ಪರಿಶ್ರಮ ಚೆನ್ನಾಗಿದೆ ಎಂದರು ನಾಯಕ ದಿಗಂತ್.

ಬಹಳ ವರ್ಷಗಳ ನಂತರ ನಾನು ದಿಗಂತ್ ಒಟ್ಟಾಗಿ ಅಭಿನಯಿಸುತ್ತಿದ್ದೇವೆ. ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದ್ದೇನೆ. ಉತ್ತಮ ಸಂದೇಶವಿರುವ ಈ ಚಿತ್ರವನ್ನು ನೋಡಿ ಹರಸಿ ಎಂದರು ನಾಯಕಿ ಐಂದ್ರಿತಾ.

ಸಾಕಷ್ಟು ಬಿಗ್ ಬಜೆಟ್ ಚಿತ್ರಗಳ ನಡುವೆ ಉತ್ತಮ ಕಥೆಯುಳ್ಳ ಚಿತ್ರಗಳನ್ನು ಕನ್ನಡಿಗರು ಕೈ ಹಿಡಿಯುತ್ತಾರೆ ಎಂಬ ಭರವಸೆಯಿದೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಕಾರ್ಯಕಾರಿ ನಿರ್ಮಾಪಕ ರವೀಂದ್ರ ಜೋಶಿ.

ನಟಿ ರಜನಿ ರಾಘವನ್ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಅತಿಥಿಯಾಗಿ ಆಗಮಿಸಿದ್ದ ಲಹರಿ ವೇಲು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಪ್ರಜ್ವಲ್ ಪೈ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಂದಕಿಶೋರ್ ಅವರ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಐ ಆಮ್ ಆರ್; ಇದು ಉಪ್ಪಿ -ಆರ್ ಜಿ ವಿ ಸಿನಿಮಾ; ಟೈಟಲ್ ಬಿಡುಗಡೆ ಮಾಡಿ ಶುಭ ಕೋರಿದ ಕಿಚ್ಚ…

ಸಿನಿರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು ರಾಮ್ ಗೋಪಾಲ್ ವರ್ಮ ಮತ್ತು ಉಪೇಂದ್ರ. ಇವರಿಬ್ಬರ ಕಾಂಬಿನೇಶನಲ್ಲಿ “I AM R” ಸಿನಿಮಾ ಬರುತ್ತಿದೆ ‌. ರಾಮ್ ಗೋಪಾಲ್ ವರ್ಮ ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ.

ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಕಿಚ್ಚ ಸುದೀಪ ಮುಖ್ಯ ಅತಿಥಿಯಾಗಿ ಆಗಮಿಸಿ ಶೀರ್ಷಿಕೆ ಬಿಡುಗಡೆ ಮಾಡಿದರು.

ಶೀರ್ಷಿಕೆ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ, ನನಗೆ ಈ ಸಮಾರಂಭಕ್ಕೆ ಬಂದ ಮೇಲೆ ಒಂಥರಾ ಅನಿಸುತ್ತಿದೆ. ನಾನು ಏಕೆ ಈ ಸಿ‌‌ನಿಮಾದಲ್ಲಿ ಇಲ್ಲ ಅಂತ? ಏಕೆಂದರೆ, ನಾನು ನಾಯಕನಾಗಲು ಉಪೇಂದ್ರ ಅವರೆ ಕಾರಣ. ನಿರ್ದೇಶಕನಾಗಬೇಕೆಂದಿದ್ದ ನನಗೆ ನಾಯಕನಾಗಲು ಪ್ರೇರೇಪಿಸಿದೇ ಅವರು. ಇನ್ನೂ ನನ್ನ ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ನನ್ನ ಸಿನಿಪಯಣ ಆರಂಭಿಸಿದ್ದು ಆರ್ ಜಿ ವಿ ಅವರು. ಇವರಿಬ್ಬರ ಜೋಡಿಯಲ್ಲಿ ಉತ್ತಮ ಚಿತ್ರ ಬರವುದು ಖಂಡಿತ. ನಿರ್ಮಾಪಕ ರಾಜ್ ಯಜಮಾನ್ ಅವರನ್ನು
ಬಹಳ ದಿನಗಳಿಂದ ಬಲ್ಲೆ. ಇಲ್ಲಿಗೆ ಬಂದು ಅವರ ಇತಿಹಾಸ ತಿಳಿದು ಇನ್ನೂ ಸಂತೋಷವಾಯಿತು. R ಎಂದರೆ ಏನು ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್, R ಎಂದರೆ ರಿಯಲ್ ಸ್ಟಾರ್. R ಎಂದರೆ ರಾಮ್ ಗೋಪಾಲ್ ವರ್ಮ ಅಂತ ಇರಬೇಕು. ಹಿಂದೆ ಮೂರು R ಬಂದಾಗ ಯಾರು ಕೇಳಲಿಲ್ಲ. ಈಗ ಒಂದು R ಬಗ್ಗೆ ಎಷ್ಟು ಕೇಳುತ್ತಿದ್ದಿರಾ? ನೋಡಿ ಎಂದು ಹೇಳಿದರು.

ಉಪೇಂದ್ರ ಅವರು ಈಗಾಗಲೇ ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಹೆಸರು ಮಾಡಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತಿದೆ. ‍R ಎಂದರೆ ಏನು? ಎಂಬುದನ್ನು ಈಗಲೇ ಹೇಳುವುದಿಲ್ಲ. ಟ್ರೇಲರ್ ಬಿಡುಗಡೆ ಸಮಯದಲ್ಲಿ ಹೇಳುತ್ತೇನೆ. ಒಟ್ಟಿನಲ್ಲಿ ನಮ್ಮಿಬ್ಬರಿಂದ ಉತ್ತಮ ಚಿತ್ರ ಬರಲಿದೆ ಎಂದ ರಾಮ ಗೋಪಾಲ್ ವರ್ಮ, ದೇಶಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿರುವ “ಕೆ ಜಿ ಎಫ್ 2” ಚಿತ್ರತಂಡಕ್ಕೆ ಶುಭ ಕೋರಿದರು.

ನಾನು ಆರ್ ಜಿ ವಿ ಅವರ “ಶಿವ” ಸಿನಿಮಾ ನೋಡಿ, “ಓಂ” ಚಿತ್ರ‌ ಮಾಡಬೇಕೋ? ಬೇಡವೋ? ಎಂದು ಯೋಚಿಸಿದ್ದೆ. ಅಂತಹ ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿರುವವರು ಆರ್ ಜಿ ವಿ ಸರ್ ಅವರ ಜೊತೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ.‌ ನೈಜಘಟನೆ ಆಧಾರಿತ ಚಿತ್ರವಿದು.‌


ಅವರು ಹೇಳಿದಂತೆ ಉತ್ತಮ ಚಿತ್ರ ಆಗಿ ಹೊರಹೊಮ್ಮುವ ವಿಶ್ವಾಸವಿದೆ. ಟೈಟಲ್ ರಿಲೀಸ್ ಮಾಡಿಕೊಟ್ಟ ಸುದೀಪ ಅವರಿಗೆ ‌ಧಾನ್ಯವಾದ. ಇನ್ನೂ ನಿರ್ಮಾಪಕ ರಾಜ್ ಅವರ ಬಗ್ಗೆ ಹೇಳಬೇಕಾದರೆ, ಇವರು ನನ್ನ ಜೊತೆ ನಟಿಸಿದ್ದಾರೆ. “ಉಪೇಂದ್ರ” ಚಿತ್ರದಲ್ಲಿ ನಾಯಕಿ ದಾಮಿನಿ‌‌ ಅವರ ಲವರ್ ಪಾತ್ರದಲ್ಲಿ ‌ಕಾಣಿಸಿಕೊಂಡಿದ್ದರು ಎಂದು ಉಪೇಂದ್ರ ನೆನಪಿಸಿಕೊಂಡರು.

ಇಂದು ನನ್ನ ಹುಟ್ಟುಹಬ್ಬ. ಈ ಮೂರು ದಿಗ್ಗಜರು ಸೇರಿ ನನ್ನ‌ ನಿರ್ಮಾಣದ ಚಿತ್ರಕ್ಕೆ ಚಾಲನೆ ನೀಡಿರುವುದಕ್ಕೆ ತುಂಬಾ ಸಂತಸಗೊಂಡಿದ್ದೇನೆ. ಕಿಚ್ಚ ಸುದೀಪ, ಉಪೇಂದ್ರ ಹಾಗೂ ಆರ್ ಜಿ ವಿ ಅವರಿಗೆ ಅನಂತ ವಂದನೆ ಎಂದರು ನಿರ್ಮಾಪಕ ರಾಜ್ ಯಜಮಾನ್.

ನಿರ್ಮಾಪಕ ರಾಜ್ ಯಜಮಾನ್ ಕುಟುಂಬದವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ. ಇವರ ತಂದೆ ಹಾಗೂ ಅಜ್ಜಿಯವರು ರಾಜಕುಮಾರ್ ಅಭಿನಯದ
“ಭಲೇರಾಜ”, ” ಪ್ರೇಮದ ಕಾಣಿಕೆ”, “ಸಾಕ್ಷಾತ್ಕಾರ” ದಂತಹ ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿದವರು.

Categories
ಸಿನಿ ಸುದ್ದಿ

ಹೋಟೆಲ್ ಅಶೋಕದಲ್ಲಿ ಹಾರಾಡಿದ ಗಾಳಿಪಟ! ಎಕ್ಸಾಂ ಸಾಂಗ್ ರಿಲೀಸ್ ಮಾಡಿ ಬೀಗಿದ ಚಿತ್ರತಂಡ…

ವರ್ಷಗಳು ಹೇಗೆ ಕಳೆಯುತ್ತಿದೆಯೋ? ಗೊತ್ತಾಗುತ್ತಿಲ್ಲ. ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಬಂದಿದ್ದ “ಗಾಳಿಪಟ” ಬಂದು ಹದಿನಾಲ್ಕು ವರ್ಷಗಳೇ ಕಳೆದಿದೆ. ಈಗ ಅದರ ಭಾಗ 2 ತೆರೆಗೆ ಬರಲು ಸಿದ್ದವಾಗಿದೆ.

ಈ ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದಿರುವ ಪರೀಕ್ಷೆ ಕುರಿತಾದ ಗೀತೆಯೊಂದು ಬಿಡುಗಡೆಯಾಗಿದೆ. “ಗಾಳಿಪಟ 2” ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು.

“ಗಾಳಿಪಟ 2” ಆರಂಭವಾಗಿದ್ದೆ ಒಂದು ಸೋಜಿಗ. ನನಗೆ ಯೋಗರಾಜ್ ಭಟ್ ಅವರೇನು ಪರಿಚಯವಿರಲಿಲ್ಲ. ನಾನು
ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಅಮ್ಮನವರೊಂದಿಗೆ ತಿರುಪತಿಯಿಂದ ದರ್ಶನ ಮುಗಿಸಿ ಬರಬೇಕಾದರೆ ಸುಧಾ ಅಮ್ಮ ಅವರಿಗೆ ಯೋಗರಾಜ್ ಸರ್ ಫೋನ್ ಮಾಡಿದ್ದರು.‌‌ ನಂತರ ಸುಧಾ ಅಮ್ಮ ಅವರು ನನಗೆ ಯೋಗರಾಜ್ ಭಟ್ “ಗಾಳಿಪಟ 2” ಚಿತ್ರದ ಕಥೆ ಸಿದ್ದಮಾಡಿಕೊಂಡಿದ್ದಾರೆ. ನೀವು ಸಾಧ್ಯವಾದರೆ ನಿರ್ಮಾಣ ಮಾಡಿ ಎಂದರು. ಅಮ್ಮನ ಮಾತಿಗೆ ಎಂದು ನಾನು ಆಗಲ್ಲ ಎಂದಿಲ್ಲ. ಸರಿ ಅಂದೆ. ನಂತರ “ಗಾಳಿಪಟ 2” ಆರಂಭವಾಯಿತು. ಇನ್ನೂ ಪರೀಕ್ಷೆ ಬಗ್ಗೆ ಹೇಳಬೇಕೆಂದರೆ ನಾನು ಈಗಾಗಲೇ ನಾಲ್ಕು ಪರೀಕ್ಷೆಯಲ್ಲಿ ಫೇಲ್ ಆಗಿದ್ದೀನಿ. ಐದನೇ ಪರೀಕ್ಷೆ ಬರೆದಿದ್ದೇನೆ. ನೀವೆಲ್ಲಾ ಸೇರಿ ಪಾಸ್ ಮಾಡಿಸಿ ಅಂದರು ನಿರ್ಮಾಪಕ ರಮೇಶ್ ರೆಡ್ಡಿ.

ಯೋಗರಾಜ್ ಭಟ್ ಅವರ ಕನಸು ನನಸಾಗಲು ಸುಧಾಮೂರ್ತಿ ಅವರು ಕಾರಣ. ಭಟ್ ಅವರಿಗೆ ಸುಧಾಮೂರ್ತಿ ಗಾಡ್ ಮದರ್ ಅಂದರೆ ತಪ್ಪಾಗಲಾರದು. “ಗಾಳಿಪಟ” ದಲ್ಲೂ ನಟಿಸಿದ್ದೆ. ಈಗ ಇದರಲ್ಲೂ ನಟಿಸಿದ್ದೇನೆ. ಉತ್ತಮ ಚಿತ್ರ ಒಳ್ಳೆಯದಾಗಲಿ ಎಂದರು ಹಿರಿಯ ನಟ ಅನಂತನಾಗ್.

ಹೌದು ಅನಂತ್ ಸರ್ ಹೇಳಿದ ಹಾಗೆ, ಸುಧಾಮೂರ್ತಿ ಅವರು ನನ್ನ ಗಾಡ್ ಮದರ್ . ಅವರಿಂದಲೇ ರಮೇಶ್ ರೆಡ್ಡಿ ಅವರ ಪರಿಚಯವಾಗಿದ್ದು, “ಗಾಳಿಪಟ 2” ಪ್ರಾರಂಭವಾಗಿದ್ದು. ಇನ್ನೂ ಈ ಚಿತ್ರದ ಬಗ್ಗೆ ಹೇಳಬೇಕೆಂದರೆ ಈಗ ಎಲ್ಲಾ ಕಾರ್ಯ ಪೂರ್ಣವಾಗಿ, ಬಿಡುಗಡೆಗೆ ಸಿದ್ದವಾಗಿದೆ. ಈಗ ಪರೀಕ್ಷೆ ಹಾಡನ್ನು ಬಿಡುಗಡೆ ಮಾಡಿದ್ದೀವಿ. ಬಿಡುಗಡೆಯಾದ ಸ್ವಲ್ಪ ಹೊತ್ತಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ. ಇನ್ನೂ “ಗಾಳಿಪಟ” ದಲ್ಲಿದ್ದ ಗಣೇಶ್, ದಿಗಂತ್, ಅನಂತ್ ನಾಗ್, ಸುಧಾ ಬೆಳವಾಡಿ, ರಂಗಾಯಣ ರಘು, ಪದ್ಮಜಾರಾವ್ ಭಾಗ 2 ರಲ್ಲೂ ಇದ್ದಾರೆ. ಮಿತ್ರ ಪವನ್ ಕುಮಾರ್ ಇದರಲ್ಲಿ ಅಭಿನಯಿಸಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ಕೇರಳ ಮೂಲದ ಸಂಯುಕ್ತ, ರಂಗಾಯ ರಘು ಸುಧಾ ಬೆಳವಾಡಿ, ಪದ್ಮಜಾರಾವ್,
ಬುಲೆಟ್ ಪ್ರಕಾಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಮ್ಮ ಚಿತ್ರದ ಅಂದವನ್ನು ಹೆಚ್ಚಿಸಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಸೊಗಸಾಗಿದೆ. ಇಡೀ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ “ಗಾಳಿಪಟ ೨” ಚೆನ್ನಾಗಿ ಮೂಡಿಬಂದಿದೆ. ಇನ್ನು ಮುಂದೆ ನಿಮ್ಮ ಹಾಗೂ ಪ್ರೇಕ್ಷಕರ ಪ್ರೋತ್ಸಾಹ ಮುಖ್ಯ ಎಂದರು ಯೋಗರಾಜ್ ಭಟ್.

“ಗಾಳಿಪಟ” ಎಂದರೆ ನನಗೆ ಎಮೋಷನ್. ಯೋಗರಾಜ್ ಸರ್ ಕಥೆ ಹೇಳಿದಾಗ, ಸಾಕಷ್ಟು ಕುತೂಹಲ ಹುಟ್ಟಿಸಿತು.‌ ಅನಂತ್ ಸರ್ ಜೊತೆ ನಟಿಸುವುದೇ ಒಂದು ಖುಷಿ. ಕುದುರೆಮುಖದ ಕಾಲೇಜ್ ಸೆಟ್ ನಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಜನರೊಂದಿಗೆ ನಟಿಸಿದ್ದು, ಈಗಲೂ ಮರೆಯುವ ಹಾಗಿಲ್ಲ.‌ ರಂಗಾಯಣ ರಘು ಸರ್ ಅದರಲ್ಲೂ, ಇದರಲ್ಲೂ ನನಗೆ ಅಪ್ಪ.‌ ದಿಗಂತ್, ಪವನ್, ಶರ್ಮಿಳಾ, ವೈಭವಿ, ನಿಶ್ವಿಕಾ ಎಲ್ಲರ ಅಭಿನಯವೂ ಚೆಂದ. ‌ನಮ್ಮ “ಗಾಳಿಪಟ” ಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಗಣೇಶ್.

“ಗಾಳಿಪಟ” ನನಗೆ ಮರೆಯಲಾಗದ್ದ ಚಿತ್ರ. ಅಲ್ಲಿಂದಲೇ ನನ್ನ ವೃತ್ತಿ ಜೀವನ ಶುರುವಾಗಿದು. ಯೋಗರಾಜ್ ಸರ್ ನನಗೆ ಅಪ್ಪ, ಚಿಕ್ಕಪ್ಪ, ಮಿತ್ರ ಇತ್ಯಾದಿ.
ಅವರ ಸಹಕಾರ ಅಪಾರ. “ಗಾಳಿಪಟ ೨” ಕೂಡ ಚೆನ್ನಾಗಿದೆ ಎಂದರು ದಿಗಂತ್.

ಪವನ್ ಕುಮಾರ್ ಸಹ “ಗಾಳಿಪಟ ೨ ” ಬಗ್ಗೆ ಅನುಭವ ಹಂಚಿಕೊಂಡರು. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಪದ್ಮಜಾರಾವ್, ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ಹಾಗೂ ಸಾಹಿತಿ ಜಯಂತ ಕಾಯ್ಕಿಣಿ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಮೇ 13ಕ್ಕೆ ಮನೋರಂಜನೆ! ಕ್ರೇಜಿ ಪುತ್ರನ ಸಿನಿಮಾ ಪ್ರಾರಂಭ…

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ “ಪ್ರಾರಂಭ” ಚಿತ್ರ ಮೇ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೀರ್ತಿ ಕಲ್ಕೇರಿ ಈ ಚಿತ್ರದ ನಾಯಕಿ.

ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಮನುರಂಜನ್ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಯನ್ನು ಮನು ಕಲ್ಯಾಡಿ ಅವರೆ ಬರೆದಿದ್ದಾರೆ.

ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಗದೀಶ್ ಕಲ್ಯಾಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿ ವಡ್ಡೇರಹಳ್ಳಿ ಈ ಚಿತ್ರದ ಸಹ ನಿರ್ಮಾಪಕು. ಪ್ರಜ್ವಲ್ ಪೈ ಸಂಗೀತ ನಿರ್ದೇಶನ, ಸುರೇಶ್ ಬಾಬು ಛಾಯಾಗ್ರಹಣ, ವಿಜಯ್ ಸಂಕಲನ ಹಾಗೂ ಥ್ರಿಲ್ಲರ್ ‌ಮಂಜು, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಹೊಯ್ಸಳ ಚಿತ್ರಕ್ಕೆ ಪೂಜೆ; ಕೆಆರ್ ಜಿ ಸ್ಟುಡಿಯೋಸ್ ಚಿತ್ರಕ್ಕೆ ಡಾಲಿ ಧನಂಜಯ್ ಹೀರೋ…

ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ನ ಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿರುವ “ಹೊಯ್ಸಳ” ಚಿತ್ರಕ್ಕೆ ಮುಹೂರ್ತ ನಡೆದಿದೆ.

ಮೊದಲ ಸನ್ನಿವೇಶಕ್ಕೆ ಮಂಜುನಾಥ್ “ಕ್ಲಾಪ್” ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ “ಕ್ಯಾಮೆರಾ” ಚಾಲನೆ ಮಾಡಿದರು. ನಿರ್ದೇಶಕರಾದ ಸಂತೋಷ್ ಆನಂದರಾಮ್, ಡಾ.ಸೂರಿ, ಯಶವಂತ್, ಡಾ. ರಮೇಶ್ ಮುಖ್ಯ ಇದ್ದರು.

ವಿಜಯ್ ಎನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ 75 ದಿನಗಳ ಚಿತ್ರೀಕರಣ ನಡೆಯಲಿದೆ.

ಅಜನೀಶ್ ಲೋಕನಾಥ್ ಸಂಗೀತ ಇರುವ ಈ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್. ಸಂಖನ, ಮಾಸ್ತಿ ಅವರ ಮಾತು,ಚಂಪಕದಾಮ ಬಾಬು ಹಾಗೂ ಕುಮಾರ್ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

“ಬಡವ ರಾಸ್ಕಲ್” ನಂತರ ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಜೋಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

Love…ಲಿ’ ಮೂಡ್ ನಲ್ಲಿ ಆಂಗ್ರಿ ಯಂಗ್ ಮ್ಯಾನ್ ಹೊಸ ಸಿನಿಮಾಗೆ ವಸಿಷ್ಠ ಸಿಂಹ ಹೀರೋ…

ಕಣ್ಣಲ್ಲೇ ನಟಿಸುವ ನಾಯಕ.. ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ತಮ್ಮ ಅಮೋಘ ನಟನೆಯಿಂದ ಚಿತ್ರರಸಿಕರನ್ನು ರಂಜಿಸ್ತಿರುವ ವಸಿಷ್ಠ ನಾಯಕ ನಟನಾಗಿಯೂ, ಖಳನಾಯಕನಾಗಿಯೂ ಬೆಳ್ಳಿಪರದೆಯ ಮೇಲೆ ದಿಬ್ಬಣ ಹೋಗ್ತಿದ್ದಾರೆ. ಸದ್ಯ ವಸಿಷ್ಠ ನಾಯಕ ನಟನಾಗಿ ಬಣ್ಣ ಹಚ್ಚಿರುವ ಕಾಲಚಕ್ರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಜೊತೆಗೆ ಚಿಟ್ಟೆ ತಲ್ವಾರ್ ಪೇಟೆ ಸಿನಿಮಾದಲ್ಲಿ ಹೀರೋ ಆಗಿ ನಟಿಸ್ತಿದ್ದಾರೆ. ಈಗ ವಸಿಷ್ಠ ಮತ್ತೊಂದು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಲು ಸಜ್ಜಾಗಿದ್ದಾರೆ.

Love…ಲಿ’ ಎಂದ ಚಿಟ್ಟೆ

ವಸಿಷ್ಠ ಹೀರೋ ಆಗಿ ನಟಿಸ್ತಿರುವ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ ‘Love…ಲಿ’ ಎಂಬ ಬ್ಯೂಟಿಫುಲ್ ಟೈಟಲ್ ಇಡಲಾಗಿದ್ದು, ಇವತ್ತು ಬೆಂಗಳೂರಿನ ಸರ್ಕಲ್ ಮಾರಮ್ಮ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿದೆ. ಮುಹೂರ್ತ ಮುಗಿಸಿರುವ ಚಿತ್ರತಂಡ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಬೈಕ್ ಮೇಲೆ ಕುಳಿತು.. ಧಮ್ ಹೊಡೆಯುತ್ತಾ, ಸಖತ್ ಸ್ಟೈಲೀಶ್ ಲುಕ್ ನಲ್ಲಿ ಚಿಟ್ಟಿ ಮಿಂಚಿದ್ದಾರೆ.

‘Love…ಲಿ’ ಕಮರ್ಷಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೋಮ್ಯಾನ್ಸ್-ಲವ್ ಸ್ಟೋರಿ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಕಳೆದ ಎಂಟು ವರ್ಷಗಳಿಂದ ವಸಿಷ್ಠ ಸಿಂಹ ಜೊತೆಯಲಿ ಇರುವ ಹಾಗೂ ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ‘Love…ಲಿ’ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಮೇ 4 ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸದ್ಯದಲ್ಲಿ ಉಳಿದ ಕಲಾಬಳಗವನ್ನು ಚಿತ್ರತಂಡ ಪರಿಚಯಿಸಲಿದೆ.

ಅಂದಹಾಗೇ ವಸಿಷ್ಠ ಸಿಂಹ ಖಾತೆಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳಿವೆ. ಹೆಡ್ ಬುಷ್, ಸಿಂಬಾ, ಓದೆಲಾ ರೈಲ್ವೇ ಸ್ಟೇಷನ್ ಸಿನಿಮಾ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ವಸಿಷ್ಠ ಬ್ಯುಸಿಯಾಗಿದ್ದಾರೆ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್ ಮೂಲಕ ಬರಲಿದೆ ಹೊಸ ಚಿತ್ರ; ಸುಧಾ ಕೊಂಗರ ನಿರ್ದೇಶನದ ಸಿನಿಮಾ…

‘ಹೊಂಬಾಳೆ ಫಿಲಂಸ್’ ಈಗ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಈ ಸಂಸ್ಥೆಯ ನಿರ್ಮಾಣದ “ಕೆ ಜಿ ಎಫ್ 2” ವಿಶ್ವದೆಲ್ಲೆಡೆ ಯಶಸ್ಸಿನ ಜಯಭೇರಿ ಬಾರಿಸುತ್ತಿದೆ. ಗಳಿಕೆಯಲ್ಲೂ ಮೇಲುಗೈ ಸಾಧಿಸಿದೆ.
ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಾಹಸಕ್ಕೆ ಜನ ಬಹುಪರಾಕ್ ಹೇಳುತ್ತಿದ್ದಾರೆ. ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ನಿರ್ಮಾಣ ಮಾಡಿರುವ ಈ ಸಂಸ್ಥೆಯಿಂದ ಅನೇಕ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈಗ ಮತ್ತೊಂದು ಹೊಸ ಚಿತ್ರದ ಘೋಷಣೆಯಾಗಿದೆ.

ವಿಶೇಷ ಏನೆಂದರೆ, ಈ ಬಾರಿ ‘ಹೊಂಬಾಳೆ ಫಿಲಂಸ್’ ಗೆ ಸಿನಿಮಾ ಮಾಡುವ ಅವಕಾಶ ಪಡೆದಿರುವುದು ಸುಧಾ ಕೊಂಗರ. ಈ ಮಹಿಳೆ ಮೂಲತಃ ಆಂಧ್ರ ಪ್ರದೇಶದವರು. ತಮಿಳು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಅಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸೂರ್ಯ ನಟನೆಯ ‘ಸೂರರೈ ಪೋಟ್ರು’ ಚಿತ್ರವನ್ನು ನಿರ್ದೇಶಿಸುವ ಮೂಲಕ ಸುಧಾ ಕೊಂಗರ ಎಲ್ಲರ ಮನ ಸೆಳೆದಿದ್ದಾರೆ. ಈಗ ಸುಧಾ ಕೊಂಗರ ಮತ್ತು ‘ಹೊಂಬಾಳೆ ಫಿಲಂಸ್ ಸಂಸ್ಥೆ ಕೈ ಜೋಡಿಸಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿದೆ.

ಗುರುವಾರದಂದು ಈ ಹೊಸಚಿತ್ರ ನಿರ್ಮಾಣದ ಹೊಸ ಸುದ್ದಿಯನ್ನು ಹೊಂಬಾಳೆ ಫಿಲಂಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಚ್ಚರಿ ಎಂದರೆ, ಈ ಬಾರಿ ಸತ್ಯ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲು ‘ಹೊಂಬಾಳೆ ಫಿಲಂಸ್’ ಸಂಸ್ಥೆ ಮುಂದಾಗಿದೆ. ‘ಕೆಲವು ನೈಜ ಕಥೆಗಳನ್ನು ಹೇಳಲೇ ಬೇಕು. ಸುಧಾ ಕೊಂಗರ ಅವರ ಜೊತೆ ನಮ್ಮ ಹೊಸ ಸಿನಿಮಾ ಘೋಷಣೆ ಮಾಡಲು ಹೆಮ್ಮೆ ಆಗುತ್ತಿದೆ’ ಎಂದು ಪೋಸ್ಟ್ ಮಾಡಲಾಗಿದೆ.

ಸುಧಾ ಕೊಂಗರ ಅವರು ನಿರ್ದೇಶನ ಮಾಡಿದ್ದ ‘ಸೂರರೈ ಪೋಟ್ರು’ ಚಿತ್ರ ಕೂಡ ಸತ್ಯ ಘಟನೆ ಆಧಾರಿತ ಚಿತ್ರ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥನ್ ಅವರ ಜೀವನದ ಕಥೆಯನ್ನು ಇಟ್ಟುಕೊಂಡು ಸುಧಾ ಅವರು ಸಿನಿಮಾ ಮಾಡಿದ್ದರು. ಆ ಸಿನಿಮಾದಲ್ಲಿ ಸೂರ್ಯ ಹೀರೋ ಆಗಿ ನಟಿಸಿದ್ದರು.

‘ಹೊಂಬಾಳೆ ಫಿಲಂಸ್ ಮೂಲಕ ಈಗಾಗಲೇ ಅನೇಕ ಸಿನಿಮಾಗಳ ಸಿದ್ಧವಾಗುತ್ತಿವೆ. ಪ್ರಭಾಸ್ ನಟನೆಯ ‘ಸಲಾರ್’, ಶ್ರೀಮುರಳಿ ಅಭಿನಯದ ‘ಬಘೀರ’, ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರಾ’, ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಈಗ ಸುಧಾ ಕೊಂಗರ ನಿರ್ದೇಶನದ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ಈ ಚಿತ್ರದ ಶೀರ್ಷಿಕೆ, ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.

Categories
ಸಿನಿ ಸುದ್ದಿ

ಸದ್ದು ಮಾಡಿದ ಮೇಲೊಬ್ಬ ಮಾಯಾವಿ! ಸಂಚಾರಿಯ ಹೊಸ ಸಂಚಾರ: ಟ್ರೇಲರ್ ಗೆ ಭರಪೂರ ಮೆಚ್ಚುಗೆ…

ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರ “ಮೇಲೊಬ್ಬ ಮಾಯಾವಿ”. ಚಿತ್ರದ ಟ್ರೇಲರ್ ಅನ್ನು ನಟ ಶ್ರೀನಗರ ಕಿಟ್ಟಿ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ವಿಜಯ್ ಅವರ ನೆನಪಲ್ಲೇ ಕಾರ್ಯಕ್ರಮ ನಡೆದದ್ದು ವಿಶೇಷ.

ನಾನು ಕೂಡ ಪತ್ರಕರ್ತನಾಗಿ ಹಲವು ಚಿತ್ರಗಳ ವಿಮರ್ಶೆ ಮಾಡಿದ್ದೀನಿ. ಆದರೆ ಅದೇ ಬೇರೆ. ನಿರ್ದೇಶನ ಮಾಡುವುದೇ ಬೇರೆ. ನಿರ್ದೇಶನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಇನ್ನೂ ಈ ಚಿತ್ರದ ಬಗ್ಗೆ ಹೇಳುವುದಾದರೆ, ಪಶ್ಚಿಮ ಘಟ್ಟಗಳಲ್ಲಿ ನಡೆಯುವ
ಹರಳು ಮಾಫಿಯಾದ ಕುರಿತಾದ ಸಿನಿಮಾ. ಇದರಲ್ಲಿ ಮೂರು ಪ್ರಮುಖ ಪಾತ್ರಗಳಿವೆ. ಸಕ್ಕರೆ,‌ ಇರುವೆ ಹಾಗೂ ಸುಲೇಮಾನ್.
ಸಕ್ಕರೆ ಪಾತ್ರದಲ್ಲಿ ಅನನ್ಯ ಶೆಟ್ಟಿ, ಇರುವೆಯ ಪಾತ್ರದಲ್ಲಿ ಸಂಚಾರಿ ವಿಜಯ್ ಹಾಗೂ ಸುಲೇಮಾನ್ ಪಾತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್ ಅಭಿನಯಿಸಿದ್ದಾರೆ. ಒಬ್ಬರಿಗಿಂತ ಒಬ್ಬರ ಅಭಿನಯ ಅದ್ಭುತ. ಇನ್ನು ಟ್ರೇಲರ್ ಬಿಡುಗಡೆ ಮಾಡಲು ಶ್ರೀನಗರ ಕಿಟ್ಟಿ ಬಂದಿದ್ದಾರೆ . ಅವರಿಗೆ ತುಂಬು ಹೃದಯದ ಧನ್ಯವಾದ. ಇದೇ ಇಪ್ಪತ್ತೊಂಬತ್ತರಂದು ರಿಲೀಸ್ ಆಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ನವೀನ್ ಕೃಷ್ಣ,

ಸಂಚಾರಿ ವಿಜಯ್ ಹಾಗೂ ತಮ್ಮ ಸ್ನೇಹದ ಬಗ್ಗೆ ಹೇಳುತ್ತಾ ಮಾತು ಆರಂಭಿಸಿದ ನಟ ಚಕ್ರವರ್ತಿ ಚಂದ್ರಚೂಡ್, ಸಿನಿಮಾ ಆರಂಭವಾದ ಬಗ್ಗೆ ಮಾಧ್ಯಮದ ಮುಂದೆ ಬಿಡಿಸಿಟ್ಟರು. ತಾವು, ನಿರ್ದೇಶಕರು, ನಿರ್ಮಾಪಕರು ಹಾಗೂ ಸಂಚಾರಿ ವಿಜಯ್ ಚಿತ್ರೀಕರಣ ಸಮಯದಲ್ಲಿ ಮಾಡಿದ ಕೆಲಸಗಳನ್ನು ಚಂದ್ರಚೂಡ್ ಮೆಲಕು ಹಾಕಿದರು. ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಬಗ್ಗೆ ಕೂಡ ಮಾಹಿತಿ ನೀಡಿದ ಚಕ್ರವರ್ತಿ ಚಂದ್ರಚೂಡ್, ಚಿತ್ರದ ಟ್ರೇಲರ್ ವೀಕ್ಷಿಸಿ ಮೆಚ್ಚುಗೆಯ ಮಾತುಗಳಾಡಿ, ಚಿತ್ರತಂಡಕ್ಕೆ ಬೆನ್ನು ತಟ್ಟಿರುವ ಕಿಚ್ಚ ಸುದೀಪ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು.

ನಿರ್ಮಾಪಕ ಭರತ್ ಕುಮಾರ್, ಚಿತ್ರ ಸಾಗಿ ಬಂದ ಬಗ್ಗೆ ಹೇಳುತ್ತಾ ಭಾವುಕರಾದರು.

ಆಡಿಷನ್ ಮೂಲಕ ಆಯ್ಕೆಯಾದ ಬಗ್ಗೆ ಹೇಳಿದ ನಾಯಕಿ ಅನನ್ಯ ಶೆಟ್ಟಿ, ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಹಾಗೂ ಉತ್ತಮ ಹಾಡು ಕೊಟ್ಟಿರುವ ಎಲ್. ಎನ್. ಶಾಸ್ತ್ರಿ ಅವರಿಗೆ ಧನ್ಯವಾದ ತಿಳಿಸಿದರು.

ದಕ್ಷಿಣ ಕನ್ನಡ ಎಲ್ಲದಕ್ಕೂ ಪ್ರಸಿದ್ದಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿದೆ. ಕಲಾರಂಗಕ್ಕೆ ಸಾಕಷ್ಟು ಕಲಾವಿದರನ್ನು ನೀಡಿದೆ. ಆದರೆ ಯಾರಿಗೂ ತಿಳಿಯದ ಹಾಗೆ ಅಲ್ಲಿ ಹರಳು ದಂಧೆ ಸಹ ನಡೆಯುತ್ತದೆ. ಇದೇ ವಿಷಯವಿಟ್ಟುಕೊಂಡು ಈ ಚಿತ್ರ ನಿರ್ಮಾಣವಾಗಿದೆ. ನನ್ನ ಪಾತ್ರ ಸಹ ಚೆನ್ನಾಗಿದೆ. ಗೆಳೆಯ ಶ್ರೀನಗರ ಕಿಟ್ಟಿ ಸಮಾರಂಭಕ್ಕೆ ಬಂದಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟ ಕೃಷ್ಣಮೂರ್ತಿ ಕವತ್ತಾರ್.

ಇದು ನನ್ನ ಪತಿ ಎಲ್ ಎನ್ ಶಾಸ್ತ್ರಿ ಸಂಗೀತ ಸಂಯೋಜಿಸಿದ ಕೊನೆಯ ಚಿತ್ರ. ಕಾಕತಾಳೀಯವೆಂಬಂತೆ ಈ ಚಿತ್ರದ ಹಾಡೊಂದರಲ್ಲಿ ಬರುವ ಸಾಲಿನಂತೆ, ನಮ್ಮ ಯಜಮಾನರ ಜೀವನ ಸಹ ಅಂತ್ಯವಾಯಿತು. ಆದರೆ ಅವರ ಆಸೆಗಳನ್ನು ಅವರ ಹೆಂಡತಿಯಾಗಿ ನಾನು ಪೂರ್ಣ ಮಾಡುತ್ತೇನೆ ಎಂದ ಸುಮಾ ಶಾಸ್ತ್ರಿಯವರು, ಈ ಚಿತ್ರದಲ್ಲಿ ಸಂಚಾರಿ ವಿಜಯ್ ಹಳ್ಳ ತೋಡುವ ದೃಶ್ಯ ಕಂಡು ಕಣ್ಣೀರಾದರು‌.

ಖ್ಯಾತ ಸಾಹಿತಿ ಚಿ.ಉದಯ್ ಶಂಕರ್ ಅವರ “ದೇವನೊಬ್ಬನಿರುವ” ಹಾಡಿನ ಸಾಲಿನೊಂದಿಗೆ ಮಾತು ಆರಂಭಿಸಿದ ಶ್ರೀನಗರ ಕಿಟ್ಟಿ , ಹರಳು ದಂಧೆಯಂತಹ ವಿಷಯವನ್ನು ತೆರೆಗೆ ತರಲು ಧೈರ್ಯ ಮಾಡಿರುವ ನಿರ್ಮಾಪಕ, ನಿರ್ದೇಶಕರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ನನ್ನ ಗುರುಗಳಾದ ಕವತ್ತಾರ್ ಅವರನ್ನು ಕಂಡು ತುಂಬಾ ಸಂತೋಷವಾಗಿದೆ. ಬಹುಕಾಲದ ಗೆಳೆಯ ಚಕ್ರವರ್ತಿ ಚಂದ್ರಚೂಡ್ ಈ ಚಿತ್ರದಲ್ಲಿ ತೊಡಗಿಕೊಂಡಿರುವುದು ಮತ್ತಷ್ಟು ಖುಷಿಯಾಗಿದೆ ಎಂದು ಶ್ರೀನಗರ ಕಿಟ್ಟಿ ಹೇಳಿದರು.

ಬಿ.ನವೀನ್ ಕೃಷ್ಣ ನಿರ್ದೇಶನದ ಮೇಲೊಬ್ಬ ಮಾಯಾವಿ’ ಸಿನಿಮಾವನ್ನು,ಶ್ರೀ ಕಟೀಲ್ ಸಿನಿಮಾಸ್ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ನಿರ್ಮಾಣ ಮಾಡಿದ್ದಾರೆ.

ಎಲ್.ಎನ್.ಶಾಸ್ತ್ರೀಯವರ ಸಂಗೀತವಿದ್ದು, ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿ ನೀಡಿದ್ದಾರೆ.
ಕೆ.ಗಿರೀಶ್ ಕುಮಾರ್ ಸಂಕಲನ ಮಾಡಿದ್ದಾರೆ. ದೀಪಿತ್ ಬಿ ಜೈ ರತ್ನಾಕರ್ ಛಾಯಾಗ್ರಾಹಕರಾಗಿ ದುಡಿದಿರುವ `ಮೇಲೊಬ್ಬ ಮಾಯಾವಿ’ಗೆ ರಾಮು ಅವರ ನೃತ್ಯ ಸಂಯೋಜನೆಯಿದೆ.

ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಬೆನಕ ನಂಜಪ್ಪ, ಎಮ್.ಕೆ.ಮಠ, ನವೀನ್ ಕುಮಾರ್, ಆರ್.ವೆಂಕಟ್ ರಾಜು ಲಕ್ಷ್ಮಿ ಅರ್ಪಣ್, ಮುಖೇಶ್ , ಡಾ.ಮನೋನ್ಮಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಶೋಕಿವಾಲಗೆ ಕನ್ನಡ ನಿರ್ದೇಶಕರ ಸಾಥ್!

ಅಜಯ್ ರಾವ್ ಅವರ “ಶೋಕಿವಾಲ” ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಈ ಹಾಡಿನ ವಿಶೇಷತೆ ಏನೆಂದರೆ ನಾಯಕ ಅಜಯ್ ರಾವ್ ಅವರೊಂದಿಗೆ ಕನ್ನಡ‌ದ ನಿರ್ದೇಶಕರಾದ ರವಿ ಬಸ್ರೂರ್, ನಂದಕಿಶೋರ್, ಹರಿ ಸಂತೋಷ್, ಶಶಾಂಕ್, ವಿ.ನಾಗೇಂದ್ರ ಪ್ರಸಾದ್ ಹೆಜ್ಜೆ ಹಾಕಿದ್ದಾರೆ. ಎಲ್ಲಾ ದಿಗ್ಗಜರ ಸಮಾಗಮದಲ್ಲಿ ಮೂಡಿಬಂದಿರುವ ಈ ಹಾಡು ಜನಮನಸೂರೆಗೊಂಡು, ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದು, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

ಈ ಹಾಡಿನಲ್ಲಿ ನಟಿಸಿರುವ ನಿರ್ದೇಶಕರೇ ಈ ಹಾಡನ್ನು ರೀಲಿಸ್ ಮಾಡಿದ್ದು ವಿಶೇಷ,
ವಿ.ನಾಗೇಂದ್ರಪ್ರಸಾದ್, ನಂದಕಿಶೋರ್, ಹರಿ ಸಂತೋಷ್, ಚೇತನ್ ಕುಮಾರ್, ಮಹೇಶ್ ಕುಮಾರ್ ಅವರು ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
5 ಜನ ನಿರ್ದೇಶಕರನ್ನು ಚಿತ್ರ ತಂಡದಿಂದ ಆತ್ಮೀಯವಾಗಿ ಸನ್ಮಾನಿಸಿದ್ದು ಮತ್ತೊಂದು ವಿಶೇಷ.

ಏಪ್ರಿಲ್ 29 ರಂದು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ. ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾವಾಗಿದೆ. ಎಲ್ಲರು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಚಂದ್ರಶೇಖರ್.

“ಜಾಕಿ” ನಿರ್ದೇಶನದ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ನವೀನ್ ಕುಮಾರ್ ಈ ಚಿತ್ರದ ಛಾಯಾಗ್ರಹಕರು.

ಅಜಯ್ ರಾವ್ ಅವರಿಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಅರುಣ ಬಾಲರಾಜ್, ತಬಲಾ ನಾಣಿ, ಪ್ರಮೋದ್ ಶೆಟ್ಟಿ, ಗಿರಿ, ನಾಗರಾಜ ಮೂರ್ತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಕಾಣೆಯಾದವರ ಬಗ್ಗೆ ಪ್ರಕಟಣೆ ಟ್ರೇಲರ್ ಬಂತು! ಡಾಲಿ-ದುನಿಯಾ ಶುಭ ಹಾರೈಕೆ…

ಕನ್ನಡಿಗರು ಉತ್ತಮಕಥೆಯುಳ್ಳ ಚಿತ್ರಗಳನ್ನು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹದೊಂದು ವಿಶಿಷ್ಟ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ “ಕಾಣೆಯಾದವರ ಬಗ್ಗೆ ಪ್ರಕಟಣೆ” ಚಿತ್ರದ ಟ್ರೇಲರ್ ಇದೀಗ ಹೊರಬಂದಿದೆ

ದುನಿಯಾ ‌ವಿಜಯ್ ಹಾಗೂ‌ ಡಾಲಿ ಧನಂಜಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ರಂಗಾಯಣ ರಘು, ರವಿಶಂಕರ್ ಹಾಗೂ ತಬಲನಾಣಿ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ.

ಮುಸುಕು ಧರಿಸಿದ ಮೂರು ಪ್ರಮುಖ ಪಾತ್ರಧಾರಿಗಳನ್ನು, ಪೊಲೀಸ್ ಪಾತ್ರಧಾರಿ ವೇದಿಕೆಗೆ ಕರೆತರುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ನಾನು ಹಾಗೂ ನಿರ್ದೇಶಕ ಅನಿಲ್ ಹಲವು ವರ್ಷಗಳ ಸ್ನೇಹಿತರು. ಆಗ ನಾವು ಕಳೆದ ದಿನಗಳು ಸುಂದರ. ಆಗಿನಿಂದ ಅನಿಲ್ ಗೆ ಬರವಣಿಗೆಯಲ್ಲಿ ಆಸಕ್ತಿ. ಮುಂದೆ ಆತನ ಸಂಭಾಷಣೆಯಲ್ಲಿ ಉತ್ತಮ ಚಿತ್ರಗಳು ಬಂದಿದೆ. ನಿರ್ದೇಶಕನಾಗೂ ಆತ ಚಿರಪರಿಚಿತ ಈಗ ತೀರ ಅಪರೂಪವೆಂಬ ಕಥಾವಸ್ತು ಆಯ್ಕೆಮಾಡಿಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ರಂಗಾಯಣ ರಘು, ರವಿಶಂಕರ್, ತಬಲನಾಣಿ ಹಾಗೂ ಚಿಕ್ಕಣ್ಣ ಅವರಂತಹ ಉತ್ತಮ ಕಲಾವಿದರ ಅಭಿನಯದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಒಳ್ಳೆಯದಾಗಲಿ. ನಾನು ಸಹ ಮೊದಲ ದಿನ ಈ ಚಿತ್ರ ನೋಡುತ್ತೇನೆ ಎಂದರು ದುನಿಯಾ ವಿಜಯ್.

ಒಬ್ಬ‌ ನಾಯಕ ಎರಡೂವರೆ ಗಂಟೆಗಳ ಕಾಲ ಒಬ್ಬನೇ ತೆರೆಯ ಮೆಲೆ ಕಾಣಲು ಸಾಧ್ಯವಿಲ್ಲ. ನಾಯಕನಿಗೆ ಇಲ್ಲಿರುವ ಅದ್ಭುತ ಕಲಾವಿದರ ಸಹಕಾರಬೇಕು. ನಮ್ಮ ಚಿತ್ರದಲ್ಲಿ ರಘು ಅಣ್ಣ ಮಾಡಿರುವ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಕಲಾವಿದರ ಸಂಗಮದಲ್ಲಿ ಮೂಡಿಬಂದಿರುವ ಈ ಚಿತ್ರ ನೋಡಲು ನಾನು ಕಾತುರಾನಾಗಿದ್ದೀನಿ ಎಂದರು ಡಾಲಿ ಧನಂಜಯ.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದುನಿಯಾ ವಿಜಯ್ ಹಾಗೂ ಡಾಲಿ ಅವರಿಗೆ ಧನ್ಯವಾದ. ವಿಜಯ್ ಅವರೊಂದಿಗೆ ಕಳೆದ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಆಗಿನಿಂದಲೂ ತನ್ನ ಹತ್ತಿರದವರನ್ನು ಬೆಳೆಸುವ ಗುಣ ವಿಜಿ ಅವರದು. ಇನ್ನೂ ಚಿತ್ರದ ಬಗ್ಗೆ ಹೇಳುವುದಾದರೆ ಇದೊಂದು ವಿಭಿನ್ನ ಕಥಾವಸ್ತು.
ರಂಗಾಯಣ ರಘು, ರವಿಶಂಕರ್, ತಬಲ ನಾಣಿ, ಚಿಕ್ಕಣ್ಣ, ತಿಲಕ್, ಆಶಿಕಾ ರಂಗನಾಥ್ ಮುಂತಾದ ಕಲಾವಿದರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ನನ್ನ ಅಣ್ಣ ಜಿತೇಂದ್ರ ಮಂಜುನಾಥ್ ನಮ್ಮ ಚಿತ್ರಕ್ಕೆ ಹಣ ಹೂಡಿದ್ದಾರೆ. ಈ ಚಿತ್ರಕ್ಕೆ ನನ್ನ ಸ್ನೇಹಿತರ ಸಹಕಾರ ಅಪಾರ. ಈಗ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಮೇನಲ್ಲಿ ಚಿತ್ರ ತೆರೆಗೆ ತರುತ್ತೇವೆ ಎಂದರು ನಿರ್ದೇಶಕ ಅನಿಲ್ ಕುಮಾರ್.

ನಮ್ಮನ್ನು ಹಾರೈಸಲು ಬಂದಿರುವ ವಿಜಿ ಹಾಗೂ ಡಾಲಿ ಅವರಿಗೆ ಧನ್ಯವಾದ. ಕನ್ನಡದಲ್ಲಿ ಕಾಲಕಾಲಕ್ಕೆ ತಕ್ಕ ಹಾಗೆ ಉತ್ತಮ ಕಥಾವಸ್ತುವುಳ್ಳ ಚಿತ್ರಗಳು ಬರುತ್ತದೆ. ಕನ್ನಡಿಗ ಉತ್ತಮ ಕಥೆಯುಳ್ಳ ಚಿತ್ರಕ್ಕೆ ಜೈ ಎನ್ನುತ್ತಾನೆ. ಅನಿಲ್ ಕುಮಾರ್ ಸಹ ಉತ್ತಮ ಕಥೆಯುಳ್ಳ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರ ಗೆಲ್ಲುವ ಭರವಸೆಯಿದೆ ಎಂದರು ರಂಗಾಯಣ ರಘು.

ನಾಯಕ, ನಾಯಕಿ ಅಂತ ಇಲ್ಲದೇ, ಕಥೆಯನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ “ಕಾಣೆಯಾದವರ ಬಗ್ಗೆ ಪ್ರಕಟಣೆ”. ಇಂತಹ ಪ್ರಯತ್ನ ‌ಮಾಡಿರುವ ಅನಿಲ್ ಕುಮಾರ್ ಅವರಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು ರವಿಶಂಕರ್.

ಉತ್ತಮ ಕಥೆ ಆಯ್ಕೆ ಮಾಡಿಕೊಂಡಿರುವ ನಿರ್ಮಾಪಕ , ನಿರ್ದೇಶಕರಿಗೆ ಅಭಿನಂದನೆ. ಕಲಾವಿದನಿಗೆ ತಾನು ಮಾಡಿದ್ದ ಪಾತ್ರಗಳಲ್ಲಿ ಕೆಲವು ಪಾತ್ರಗಳು ಮನಸ್ಸಿಗೆ ಹತ್ತಿರವಾಗುತ್ತದೆ. ಅಂತಹ ಪಾತ್ರದಲ್ಲಿ ನನಗೆ ಈ ಚಿತ್ರದ ಪಾತ್ರ ಕೂಡ ಒಂದು ಎಂದರು ತಬಲಾ ನಾಣಿ.

ಇದು ಮಾಮೂಲಿ ಚಿತ್ರಗಳಂತೆ ಅಲ್ಲ. ಚಿತ್ರಗಳಲ್ಲಿ ಅಭಿನಯಿಸುವ ವಿಲನ್ ಗಳು ಹಾಗೂ ಕಾಮಿಡಿಯನ್ಸ್ ಗಳ ಸಮಾಗಮದಲ್ಲಿ ಮೂಡಿಬಂದಿರುವ ಚಿತ್ರವಿದು. ಈ ಚಿತ್ರದಲ್ಲಿ ಕಥೆಯೇ ನಾಯಕ. ಇಂತಹ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಚಿಕ್ಕಣ್ಣ.

ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಿಲಕ್, ಕೆ ಜಿ ಎಫ್ ೨ ಚಿತ್ರದಲ್ಲಿ ನಟಿಸಿರುವ ವಿಜಯ್ ಹಾಗೂ ನಿರ್ಮಾಪಕ ಜಿತೇಂದ್ರ ಮಂಜುನಾಥ್ ಸಹ ಚಿತ್ರದ ಬಗ್ಗೆ ಮಾತನಾಡಿದರು.

ನಾಯಕ ಧೀರನ್ ರಾಮಕುಮಾರ್, ಕೆ.ಜಿ.ಎಫ್ ಖ್ಯಾತಿಯ ಗರುಡ ರಾಮ್, ಪೊಲೀಸ್ ಅಧಿಕಾರಿ ಯಶವಂತ್ ಹಾಗೂ ನಿರ್ಮಾಪಕ, ನಿರ್ದೇಶಕ ಡಾ||ಸೂರಿ ” ಕಾಣೆಯಾದವರ ಬಗ್ಗೆ ಪ್ರಕಟಣೆ” ಚಿತ್ರಕ್ಕೆ ಶುಭ ಹಾರೈಸಿದರು.

error: Content is protected !!