ತಮ್ಮ ಸತ್ಯ ಹೆಗಡೆ ಸ್ಟುಡಿಯೋಸ್ ಮೂಲಕ ಪ್ರತಿಭಾವಂತ ಯುವ ಪ್ರತಿಭೆಗಳ ಸಮಾಗಮದಲ್ಲಿ ತಯಾರಾದ ಕಿರುಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಕಿರುಚಿತ್ರ ನಿರ್ಮಾಣ ಮಾಡುವವರನ್ನು ಪ್ರೋತ್ಸಾಹಿಸುತ್ತಿದ್ದಾರೆ ಸತ್ಯ ಹೆಗಡೆ.
ಇತ್ತೀಚೆಗೆ ವಿನಯ್ ಶಾಸ್ತ್ರಿ ಅವರ ನಿರ್ದೇಶನದಲ್ಲಿ ಮಂಜುನಾಥ್ ಹೆಗಡೆ ಹಾಗೂ ಅರಣಾ ಬಾಲರಾಜ್ ಅಭಿನಯಿಸಿರುವ “ಕಾಲ”. ನಾಟಕ ಕಂಪನಿಗಳ ವಾಸ್ತವ ತಿಳಿಸುವ , ಅಭಿಷೇಕ್ ಕಾಸರಗೋಡು ನಿರ್ದೇಶನದ ” ನಾಟಕದ್ ಕಂಪನಿ” ಹಾಗೂ ಆಹಾರ ಪೂರೈಕೆ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಹೆಣ್ಣು ಮಗಳೊಬ್ಬಳ ಕಥೆಯನ್ನಾಧರಿಸಿದ, ಪ್ರಶಾಂತ್ ಗೌಡ ನಿರ್ದೇಶನದಲ್ಲಿ ರಮ್ಯಕೃಷ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಲಾಸ್ಟ್ ಆರ್ಡರ್” ಕಿರುಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಒಂದೊಂದು ಕಿರುಚಿತ್ರ ಕೂಡ ಬಹಳ ಅದ್ಭುತವಾಗಿದ್ದವು. ಸ್ವಲ್ಪ ಸಮಯದಲ್ಲೇ ದೊಡ್ಡ ವಿಷಯ ಹೇಳುವ ಕೆಲಸ ಮಾಡಿದ್ದಾರೆ ಈ ಕಿರುಚಿತ್ರಗಳ ನಿರ್ದೇಶಕರು. ಅಷ್ಟೇ ಚೆನ್ನಾಗಿ ಕಲಾವಿದರು ಅಭಿನಯಿಸಿದ್ದಾರೆ.
ಸಾಹಿತಿ ಜಯಂತ ಕಾಯ್ಕಿಣಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕರಾದ ಕೆ.ಮಂಜು, ಉದಯ್ ಕೆ ಮೆಹ್ತ, ನಿರ್ದೇಶಕ ಗಿರಿರಾಜ್ ಸೇರಿದಂತೆ ಮುಂತಾದ ಗಣ್ಯರು ಈ ಕಿರುಚಿತ್ರಗಳನ್ನು ವೀಕ್ಷಿಸಿ ಕಿರುಚಿತ್ರ ತಂಡವನ್ನು ಹಾಗೂ ಅವರಿಗೆ ಪ್ರೋತ್ಸಾಹ ನೀಡಿತ್ತಿರುವ ಸತ್ಯ ಹೆಗಡೆಯವರನ್ನು ಅಭಿನಂದಿಸಿದರು.
ಕಾರ್ಮಿಕರ ದಿನಾಚರಣೆ ಅಂಗವಾಗಿ ಚಿತ್ರರಂಗದಲ್ಲಿ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರಿಗೆ ಸತ್ಯ ಹೆಗಡೆ ಈ ಸಂದರ್ಭದಲ್ಲಿ ಸನ್ಮಾನಿಸಿದರು.
ಈಗ ಮೊದಲಿನಂತಿಲ್ಲ. ಕಲಾಸಕ್ತರು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಕಷ್ಟು ವೇದಿಕೆಗಳಿವೆ. ಅಂತಹ ಪ್ರತಿಭಾ ಪ್ರದರ್ಶನಕ್ಕೆ ಮತ್ತೊಂದು ಉತ್ತಮ ವೇದಿಕೆ “ಟಾಕೀಸ್” ಆಪ್. ಇತ್ತೀಚೆಗೆ “ಟಾಕೀಸ್” ಆಪ್ ಗೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಚಾಲನೆ ನೀಡಿದರು.
ಕಟ್ಟಡ ನಿರ್ಮಾಣದಿಂದ ಹಿಡಿದು, ಸಿನಿಮಾ ನಿರ್ಮಾಣದ ತನಕ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸ್ವಯಂಪ್ರಭ ಸಂಸ್ಥೆ ಈ ಉಪಯುಕ್ತ “ಟಾಕೀಸ್” ಆಪ್ ಬಿಡುಗಡೆ ಮಾಡಿದೆ. ಕನ್ನಡಿಗರಿಂದ ಕನ್ನಡಿಗರಿಗಾಗಿ ಎಂಬ ವಾಕ್ಯದ ಮೂಲಕ ಈ ಆಪ್ ಕಾರ್ಯ ನಿರ್ವಹಿಸಲಿದೆ. ಮೂಲತಃ ಉದ್ಯಮಿಯಾಗಿರುವ ರತ್ನಾಕರ್ ಕಾಮತ್ ಈ ಸಂಸ್ಥೆಯ ಮುಖ್ಯಸ್ಥರು. ಈ ಹಿಂದೆ ವಿಜಯ ರಾಘವೇಂದ್ರ ಅಭಿನಯದ “ಮಾಲ್ಗುಡಿ ಡೇಸ್” ಚಿತ್ರವನ್ನು ನಿರ್ಮಾಣ ಮಾಡಿದ್ದರು.
ಸುಮಾರು 200 ಜನರ ಪರಿಶ್ರಮ, 700 ಕ್ಕೂ ಅಧಿಕ ತಂತ್ರಜ್ಞರು ಹಾಗೂ 1200 ಕ್ಕೂ ಮೀರಿದ ಕಲಾವಿದರು ಈ “ಟಾಕೀಸ್” ನ ವಿವಿಧ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ.
ವೆಬ್ ಸೀರೀಸ್, ಧಾರಾವಾಹಿ, ಕಿರುಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಚಲನಚಿತ್ರಗಳನ್ನು “ಟಾಕೀಸ್” ಮೂಲಕ ತಾವು ವೀಕ್ಷಿಸಬಹುದು. ಇದಕ್ಕೆ ತಗಲುವ ವೆಚ್ಚ ಒಂದು ವರ್ಷಕ್ಕೆ ಕೇವಲ 365 ರೂಪಾಯಿ ಮಾತ್ರ. ದಿನಕ್ಕೆ ಒಂದು ರೂಪಾಯಿಯ ಹಾಗೆ. ಬೇರೆ ಯಾವುದೇ ವೆಚ್ಚ ಇದಕ್ಕೆ ಇರುವುದಿಲ್ಲ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಮನೋರಂಜನೆ ನೀಡುವ ಯೋಜನೆ “ಟಾಕೀಸ್” ತಂಡದ್ದು.
ಈ ಸಂಸ್ಥೆಯ ಬೆಳವಣಿಗೆ ಕಂಡು ಖುಷಿಯಾಗುತ್ತಿದೆ. ಅಪ್ಪಾಜಿ ಹೇಳುತ್ತಿದ್ದರು. ಕೆಲಸ ಕೊಟ್ಟವರು ಅನ್ನದಾತರು ಅಂತ. ರತ್ನಾಕರ್ ಅವರನ್ನು ನೋಡಿದರೆ ಹಾಗೆ ಅನಿಸುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇನ್ನೂ “ಟಾಕೀಸ್” ಬಗ್ಗೆ ಹೇಳಬೇಕಾದರೆ, ಟೆಕ್ನಾಲಜಿ ಬದಲಾದ ಹಾಗೆ ನಾವು ಬದಲಾಗಬೇಕು. ನಾನು ಈ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದ್ದೇನೆ. ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ವೆಬ್ ಸೀರೀಸ್ ನೋಡಿದ್ದೀನಿ. ನನ್ನ ಮಗಳು ನಿರ್ಮಿಸಿರುವ ವೆಬ್ ಸೀರೀಸ್ ಸಹ ಸದ್ಯದಲ್ಲೇ ಇದೇ “ಟಾಕೀಸ್” ನಲ್ಲಿ ಬರಲಿದೆ. ಮುಂದೆ ನಾನು ಕೂಡ ಒಂದು ವೆಬ್ ಸೀರೀಸ್ ನಿರ್ಮಿಸಿ, ನಟಿಸಲಿದ್ದೇನೆ. “ಟಾಕೀಸ್” ತಂಡಕ್ಕೆ ಒಳ್ಳೆಯದಾಗಲಿ ಎಂದರು ಶಿವರಾಜಕುಮಾರ್.
ನಟ ಹರೀಶ್ ರಾಜ್ ಸಹ “ಟಾಕೀಸ್” ತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
“ಟಾಕೀಸ್” ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರೋಗ್ರಾಮಿಂಗ್ ಹೆಡ್ ಸೂರಜ್ ಬೋಳಾರ್ ನೀಡಿದರು. ಹೇಗೆ ಬಳಸಬೇಕೆಂಬ ವಿವರಣೆಯನ್ನು ನಟಿ ರಂಜನಿ ರಾಘವನ್ ವಿಡಿಯೋ ಮೂಲಕ ವಿವರಿಸಿದರು.
ಸ್ವಯಂಪ್ರಭ ಸಂಸ್ಥೆಯ ರುವಾರಿಗಳು ಹಾಗೂ ಈ ಆಪ್ ನ ಸ್ಥಾಪಕರೂ ಆದ ರತ್ನಾಕರ್ ಕಾಮತ್, ಲಕ್ಷ್ಮೀ ರತ್ನಾಕರ್ ಕಾಮತ್ ಹಾಗೂ ಗಣೇಶ್ ರತ್ನಾಕರ್ ಕಾಮತ್ ಇದ್ದರು.
ಕನ್ನಡ ಚಿತ್ರರಂಗದಲ್ಲಿ ಈಗ ಉತ್ತಮ ಬೆಳವಣಿಗೆ. ಕೇವಲ ಬೆರಳೆಣಿಕೆಯಷ್ಟಿದ್ದ ನಿರ್ದೇಶಕಿಯರ ಸಂಖ್ಯೆ ಈಗ ಹೆಚ್ಚುತ್ತಿದೆ. ಸಾಕಷ್ಟು ಜನ ಮಹಿಳೆಯರು ನಿರ್ದೇಶನದತ್ತ ಒಲವು ತೋರುತ್ತಿದ್ದಾರೆ.
“ನಿರ್ಮುಕ್ತ” ಚಿತ್ರವನ್ನು ರಮ್ಯ ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಸಹ ಇವರೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ರೂಪಸ್ವಾಮಿ ಅವರೊಡಗೂಡಿ ನಿರ್ಮಾಣವನ್ನು ಮಾಡಿದ್ದಾರೆ.
ಇತ್ತೀಚೆಗೆ ಸಂಸದೆ ಸುಮಲತಾ ಅಂಬರೀಶ್ ಅವರು ಸಾಂಗ್ ಮತ್ತು ಟೀಸರ್ ರಿಲೀಸದಮಾಡಿ ಶುಭ ಕೋರಿದರು. ಅಭಿಷೇಕ್ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.
ಈ ಚಿತ್ರದ ನಾಯಕನ ಹೆಸರು ಕೂಡ ಅಭಿಷೇಕ್. ಇವರು ರೆಬಲ್ ಸ್ಟಾರ್ ಅಂಬರೀಶ್ ಅವರ ತಂಗಿ ರಂಜನಿ ಅವರ ಪುತ್ರ. ನವ್ಯ ಪೂಜಾರಿ ಈ ಚಿತ್ರದ ನಾಯಕಿ.
ಇದು ನಮ್ಮ ಕುಟುಂಬದ ಸಮಾರಂಭ. ಏನು ಮಾತನಾಡಬೇಕೋ ತಿಳಿಯುತ್ತಿಲ್ಲ. ಅಂಬರೀಶ್ ಅವರ ತಾತಾ ಚೌಡಯ್ಯ ಅವರದು ಸಂಗೀತ ಕ್ಷೇತ್ರದಲ್ಲಿ ಅವರದೇ ಹೆಸರು. ನಂತರ ಅಂಬರೀಶ್ ಸಿನಿಮಾದಲ್ಲಿ ಹೆಸರು ಮಾಡಿದರು. ಆನಂತರ ನಮ್ಮ ಅಭಿಷೇಕ್. ಈಗ ಈ ಅಭಿಷೇಕ್. ಸಂತೋಷವಾಗುತ್ತಿದೆ ಎಲ್ಲರನ್ನು ನೋಡಿ. ಅಭಿಷೇಕ್ ಸಿ.ಕೆ ಸಹ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಲಿ ಎಂದರು ಸುಮಲತಾ ಅಂಬರೀಶ್.
ಟೀಸರ್ ನೋಡಿದೆ. ಚೆನ್ನಾಗಿದೆ. ಅಭಿಷೇಕ್ ಸಿ.ಕೆ ನನ್ನ ಬ್ರದರ್. ಅವರಿಗೆ ಶುಭವಾಗಲಿ ಎಂದು ಅಭಿಷೇಕ್ ಅಂಬರೀಶ್ ಹಾರೈಸಿದರು.
ಚಿತ್ರತಂಡಕ್ಕೆ ಶುಭಕೋರಿದ ರಾಕ್ ಲೈನ್ ವೆಂಕಟೇಶ್, ಅಂಬರೀಶ್ ಅವರನ್ನು ನೆನೆದು ಭಾವುಕರಾದರು.
ಮೂಲತಃ ವೈದ್ಯರಾಗಿರುವ ಡಾ.ರೂಪಸ್ವಾಮಿ ನಿರ್ಮಾಣದ ಬಗ್ಗೆ ಮಾತನಾಡುತ್ತಾ, ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.
ಇದೊಂದು ಮೆಡಿಕಲ್ ಕಾಲೇಜ್ ನಲ್ಲಿ ನಡೆಯುವ ಕಥೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದೆ. ನಾನು ನಿರ್ದೇಶನ ಮಾಡಲು ಸಹಕಾರ ನೀಡಿದವರು ನನ್ನ ಪತಿ ಶ್ರೀನಿವಾಸ್. ಬಂದಿರುವ ಗಣ್ಯರಿಗೆ , ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕಿ ರಮ್ಯ ಶ್ರೀನಿವಾಸ್.
ಹಾಡು ಬರೆದಿರುವ ಸ್ವಾಮಿ ಹಾಗೂ ಸಂಗೀತ ನೀಡಿರುವ ಸಾಮ್ರಾಟ್ “ನಿರ್ಮುಕ್ತ” ಚತ್ರದ ಬಗ್ಗೆ ಮಾತನಾಡಿದರು.
ಅಪ್ಪ ನನಗೊಂದು ಡೌಟು, ಅಮ್ಮನಿಗೇನಾದ್ರೂ ಬೇರೆ ಕನೆಕ್ಷನ್ ಇದೆಯಾ ಅಂತ…! ಕೆಲವು ಹೆಂಗಸರಿಗೆ ಜೀವನದಲ್ಲಿ ಇಂತಹ ಸುಖಗಳೇ ದೊಡ್ಡದಾಗಿ ಕಾಣ್ತವೆ. ಇದ್ರಲ್ಲಿ ನಿಮ್ಮದೇನೂ ತಪ್ಪಿಲ್ಲ ಬಿಡಿ… ಕೆಲವರಿಗೆ ಹೆಂಡ್ತೀರು ವರವಾಗಿ ಸಿಕ್ಕಿದ್ರೆ, ಕೆಲವರಿಗೆ ಶಾಪ ಆಗ್ತಾರೆ…
ಇದು “ಪುರುಷೋತ್ತಮ” ಚಿತ್ರದ ಟ್ರೇಲರ್ ಒಳಗಿರುವ ಡೈಲಾಗ್. ಇಡೀ ಟ್ರೇಲರ್ ಗಮನಿಸಿದರೆ, ಅಲ್ಲೊಂದು ಮೋಸ, ವಂಚನೆಯ ಅಂಶಗಳು ಕಾಣಸಿಗುತ್ತವೆ. ಅಷ್ಟೇ ಅಲ್ಲ, ನಂಬಿಕೆ ದ್ರೋಹ ಮೇಲಿನ ಕಥೆ ಇರಬಹುದೇನೋ ಎಂಬ ಪ್ರಶ್ನೆಯೂ ಕಾಡುತ್ತದೆ. ಎಲ್ಲದರ ಜೊತೆಯಲ್ಲಿ ಅದೊಂದು ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿಗೆ ಆಗುತ್ತಿರುವ ಮೋಸವೂ ಗೊತ್ತಾಗುತ್ತೆ. ಅದೇನೆ ಇರಲಿ, ಜಿಮ್ ರವಿ ನಿರ್ಮಿಸಿ ಮೊದಲ ಸಲ ಈ ಚಿತ್ರದಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೇಲರ್ ಈಗಾಗಲೇ ಜೋರಾಗಿಯೇ ಸದ್ದು ಮಾಡಿದೆ.
ಅಷ್ಟೇ ಅಲ್ಲ, ಟ್ರೇಲರ್ ನೋಡಿದವರಿಂದ ಒಳ್ಳೆಯ ಪ್ರತಿಕ್ರಿಯೆಗಳೂ ಸಿಕ್ಕಿವೆ. ಇಲ್ಲಿಯವರೆಗೂ ಸಿನಿಲೋಕದಲ್ಲಿ ಸಕ್ಸಸ್ ಜರ್ನಿ ಮಾಡಿರುವ ಜಿಮ್ ರವಿ ಅಭಿನಯದ ಈ ಚಿತ್ರ ಮೇ 6ರಂದು ತೆರೆಗೆ ಬರಲಿದೆ. ತೆರೆಗೆ ಬರುವ ಮೊದಲೇ ಚಿತ್ರ ಸಾಕಷ್ಟು ಸುದ್ದಿಯಾಗಿದೆ. ಚಿತ್ರದ ಪೋಸ್ಟರ್ ಮೂಲಕವೇ ಒಂದಷ್ಟು ಕುತೂಹಲ ಕೆರಳಿಸಿದ್ದ “ಪುರುಷೋತ್ತಮ” ಆ ಬಳಿಕ ಒಳ್ಳೆಯ ಹಾಡುಗಳು ಕೂಡ ಗಮನಸೆಳೆದಿದ್ದವು. ಈಗ ಟ್ರೇಲರ್ಗೂ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಗುತ್ತಿದೆ. ಈಗ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಸಿನಿಮಾ ಕೂಡ ನೋಡುಗರ ಮನ ಗೆಲ್ಲುತ್ತದೆ ಅನ್ನೋದು ಚಿತ್ರತಂಡದ ಮಾತು.
ಜಿಮ್ ರವಿ ಈವರೆಗೆ ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಯ ನೂರಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇಷ್ಟು ವರ್ಷಗಳ ಕಾಲ ಬಣ್ಣದ ಬದುಕಲ್ಲಿ ಮಿಂದೆದ್ದ ಅವರು, ಅದೇ ಅನುಭವದ ಮೇಲೆ ಹೀರೋ ಆಗಿ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. “ಪುರುಷೋತ್ತಮ” ಮೇ. 6 ತೆರೆಗೆ ಬರಲು ಸಜ್ಜಾಗಿದೆ. ಇದೊಂದು ಹೊಸ ಕಥಾಹಂದರ ಹೊಂದಿರುವ ಸಿನಿಮಾ. ಅದರಲ್ಲೂ ಕೌಟುಂಬಿಕ ಚಿತ್ರ. ಜಿಮ್ ರವಿ ರವರು ಕಥೆಯನ್ನು ಮೆಚ್ಚಿ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ ಅಂದರೆ, ಆ ಚಿತ್ರದ ಕಥೆ ಇಲ್ಲಿ ನಂಬಿಕೆ ಉಳಿಸಿಕೊಂಡಿದೆ ಎಂದರ್ಥ. ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಮನರಂಜನೆ ಕೊಡುವುದು ನಿರ್ಮಾಪಕ ರವಿ ಅವರ ಉದ್ದೇಶ. ಹಾಗಾಗಿ ಅವರಿಗೆ ಈ ಚಿತ್ರದ ಮೇಲೆ ವಿಶ್ವಾಸವುದೆ, ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ, ಸಿನಿಮಾಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಅವರು ನೀಡುವ ಮೂಲಕ ಸದಭಿರುಚಿಯ ಸಿನಿಮಾ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು, ಈ ಚಿತ್ರಕ್ಕೆ “ದಿಲ್ದಾರ, ‘ನಾನು ನಮ್ಮುಡ್ಗಿ ಖರ್ಚ್ಗೊಂದು ಮಾಫಿಯಾ, ಸಿನಿಮಾಗಳನ್ನು ನಿರ್ದೇಶಿಸಿದ್ದ ಎಸ್.ವಿ. ಅಮರನಾಥ್ ಅವರು “ಪುರುಷೋತ್ತಮ” ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಜಿಮ್ ರವಿ ಅವರಿಗೆ ಅಪೂರ್ವ ಸಿನಿಮಾ ನಾಯಕಿ ಅಪೂರ್ವ ಇಲ್ಲೂ ನಾಯಕಿಯಾಗಿದ್ದಾರೆ. ನಿವೇದಿತಾ ಇದ್ದಾರೆ. ಅವರೂ ಸಹ ಡ್ರಾಮಾ ಆರ್ಟಿಸ್ಟ್ ವರ್ಸಟೈಲ್ ಆಕ್ಟಿಂಗ್ ಸ್ಕಿಲ್ಸ್ ಮತ್ತು ಡ್ಯಾನ್ಸರ್. ಪುರುಷೋತ್ತಮ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಟ್ರೇಲರ್ ಕೂಡ ಸದ್ದು ಮಾಡಿದೆ. ಈ ಸಿನಿಮಾಗೆ ಶ್ರೀಧರ್ ವಿ ಸಂಭ್ರಮ್ ಸಂಗೀತವಿದೆ. ಅದೇನೆ ಇರಲಿ, ಒಂದೊಳ್ಳೆಯ ಕಥಾ ಹಂದರ ಹೊಂದಿರುವ “ಪುರುಷೋತ್ತಮ” ಎಲ್ಲಾ ವರ್ಗಕ್ಕೂ ಇಷ್ಟ ಅಗುವ ಚಿತ್ರ. ಜಿಮ್ ರವಿ ಅವರ ಕನಸಿನ ಈ ಚಿತ್ರ ಎಲ್ಲರ ಮನ ಗೆಲ್ಲಲಿ ಅನ್ನೋದೆ ಆಶಯ.
ಧನ್ವೀರ್ ಗೌಡ ನಟನೆಯ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೀಗ ವಾಮನ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಧನ್ವೀರ್ ಗೆ ನಾಯಕಿ ಯಾರ್ ಇರ್ತಾರೆ ಅನ್ನೋ ಕುತೂಹಲದ ಪ್ರಶ್ನೆಗೀಗ ಚಿತ್ರತಂಡ ಉತ್ತರ ನೀಡಿದೆ.
ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಾಮನ ಸಿನಿಮಾಗೆ ತುಳುನಾಡ ಕುವರಿ ರಚನಾ ರೈ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ತುಳು ಸಿನಿಮಾವೊಂದರಲ್ಲಿ ನಟಿಸಿದ್ದ ರಚನಾಗೆ ಇದು ಮೊದಲ ಕನ್ನಡ ಸಿನಿಮಾ.
ತಮ್ಮ ಪಾತ್ರದ ಬಗ್ಗೆ ಹೆಚ್ಚೇನೂ ಗುಟ್ಟು ಬಿಟ್ಟು ಕೊಡದ ರಚನಾ, ಬಬ್ಲಿ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸುವುದಾಗಿ ಹೇಳಿಕೊಂಡಿದ್ದಾರೆ. ಬ್ಯಾಡ್ಮಿಂಟನ್ ಫ್ಲೈಯರ್ ಆಗಿರುವ ಈ ತುಳುನಾಡ ಚೆಲುವೆ, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರತಿ ಕೂಡ.
ಸದ್ಯ ವಾಮನ ಸಿನಿಮಾದಲ್ಲಿ ಧನ್ವೀರ್ ಗೆ ನಾಯಕಿಯಾಗಿ ನಟಿಸ್ತಿರುವ ರಚನಾ ರೈ, ಈಗಾಗಲೇ ಎರಡನೇ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ.
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ನಡಿ ಮೂಡಿ ಬರುತ್ತಿರುವ ಮಾಸ್ ಆಕ್ಷನ್ ಎಂಟರ್ಟೇನರ್ ವಾಮನ ಸಿನಿಮಾಗೆ ಚೇತನ್ ಕುಮಾರ್ ಬಂಡವಾಳ ಹೂಡಿದ್ದು, ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸಂಭಾಷಣಾಗಾರನಾಗಿ ಕಾರ್ಯನಿರ್ವಹಿಸಿದ್ದ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಕಿರುಚಿತ್ರ ನಿರ್ದೇಶನ ಉತ್ತಮ ವೇದಿಕೆ. ಬೆಳ್ಳಿತೆರೆ ಮೇಲೆ ದೊಡ್ಡ ಚಿತ್ರಗಳನ್ನು ನಿರ್ದೇಶಿಸುವ ಆಸೆ ಹೊತ್ತ ಉತ್ಸಾಹಿ ಯುವಕರು, ತಮ್ಮ ಮೊದಲ ಪ್ರಯತ್ನವಾಗಿ ಕಿರುಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಮೂಲತಃ ರಂಗಭೂಮಿ ಕಲಾವಿದ, ಅಭಿನಯ ತರಂಗ ಹಾಗೂ ವಿಜಯನಗರ ಬಿಂಬದಲ್ಲಿ ನಾಟಕಗಳಲ್ಲಿ ಅಭಿನಯ. ಆನಂತರ ಆಲ್ ಓಕೆ ಸೇರಿದಂತೆ ಕನ್ನಡದ ಸುಪ್ರಸಿದ್ಧ ರ್ಯಾಪರ್ಸ್ಲ್ಬ ಆಲ್ಬಂ ಸಾಂಗ್ ಗಳಿಗೆ ಛಾಯಾಗ್ರಹಣ ಹಾಗೂ ಸಂಕಲನ ಮಾಡಿರುವ ಆಕಾಶ್ ಜೋಶಿ ಈಗ “ಅಂತರ್ ಕಲಹ” ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ.
ಇದೊಂದು ಸೈಕಾಲಿಜಿಕಲ್ ಥ್ರಿಲ್ಲರ್. ಪ್ರತಿಯೊಬ್ಬ ಮನುಷ್ಯನ ಒಳಗೂ “ಅಂತರ್ ಕಲಹ” ಇರುತ್ತದೆ. ಅದನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಏನಾಗುತ್ತದೆ ಎಂಬುದನ್ನು ಈ ಕಿರುಚಿತ್ರದ ಮೂಲಕ ಹೇಳ ಹೊರಟಿದ್ದೇನೆ. ನಮ್ಮ ತಂಡಕ್ಕೆ ಸಿನಿಮಾ ಮಾಡುವ ಆಸೆಯಿದೆ. ಅದಕ್ಕೆ ಇದು ಮೊದಲ ಹೆಜ್ಜೆ. ನಾನೇ ಕಥೆ ಬರೆದು, ಛಾಯಾಗ್ರಹಣ ಹಾಗೂ ಸಂಕಲನದೊಂದಿಗೆ ನಿರ್ದೇಶನ ಮಾಡಿದ್ದೇನೆ. ಸುನಿಲ್ ಬಿ.ಟಿ ಹಾಗೂ ಪ್ರಿಯಾಂಕ ಜೋಶಿ ನಿರ್ಮಾಣ ಮಾಡಿದ್ದಾರೆ. ಸುನಿಲ್ ಬಿ.ಟಿ, ಅರುಣ್ ಸಾಗರ್, ರಾಣಾ, ಅನ್ನಪೂರ್ಣ, ಆರ್ತಿ ಪಡುಬಿದ್ರಿ ಅಭಿನಯಿಸಿದ್ದಾರೆ. ಆದಷ್ಟು ಬೇಗ ಜನಪ್ರಿಯ ಓಟಿಟಿಯಲ್ಲಿ ಈ ಕಿರು ಚಿತ್ರ ಬಿಡುಗಡೆಯಾಗಲಿದೆ ಎಂದರು ಆಕಾಶ್ ಜೋಶಿ.
ನನಗೆ ನನ್ನ ಗುರುಗಳಾದ ಬಿ.ವಿ.ಕಾರಂತರು ಹೇಳುತ್ತಿದ್ದರು. ಹೊಸಬರಿಗೆ ನಿನ್ನ ಕೈಲಾದ ಸಹಾಯ ಮಾಡು ಎಂದು. ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಈ ತಂಡದವರು ಬಂದು ಈ ರೀತಿಯ ಪಾತ್ರ ಇದೆ ನೀವು ಬಂದು ಮಾಡಿ ಎಂದಾಗ ಆಯ್ತು ಎಂದೆ. ಈ ಉತ್ಸಾಹಿ ಯುವ ತಂಡಕ್ಕೆ ಶುಭವಾಗಲಿ ಎಂದರು ಅರುಣ್ ಸಾಗರ್.
ಹಿರಿಯ ನಟ ದೊಡ್ಡಣ್ಣ ಸಹ ಕಿರುಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಆಲ್ ಓಕೆ, ನಿರಂಜನ್ ದೇಶಪಾಂಡೆ, ರಘು ಗೌಡ, ಶಮಂತ್ (ಬ್ರೋ ಗೌಡ), ರೋಹಿತ್ ಭಾನುಪ್ರಕಾಶ್, ಸಾಗರ್ ಪುರಾಣಿಕ್ ಹಾಗೂ ಸಂಜಯ್ ಶರ್ಮ ಮುಖ್ಯ ಅತಿಥಿಗಳಾಗಿ ಆಗಮಿಸಿ, ಆಕಾಶ್ ಜೋಶಿ ತಂಡಕ್ಕೆ ಶುಭ ಕೋರಿದರು.
ಎರಡು ಮುಖಗಳನ್ನು ಹೊಂದಿರುವ ಮನುಷ್ಯರ ಪಾಪಗಳಿಂದ ಹುಟ್ಟಿದ ಕಥೆ “ದ್ವಿಮುಖ”. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಚಿತ್ರವಿದು ಎಂಬುದು ಚಿತ್ರತಂಡದ ಮಾತು. ಮನುಷ್ಯನ ಮನಸ್ಸಿನಲ್ಲಿರುವ “ದ್ವಿಮುಖ”ವನ್ನು ಅನಾವರಣಗೊಳಿಸಲು ಈ ಚಿತ್ರ ಇದೇ ಮೇ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹಲವಾರು ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿರುವ ಮಧು ಶ್ರೀಕಾರ್ ಅವರು “ದ್ವಿಮುಖ” ಚಿತ್ರದ ನಿರ್ದೇಶಕರು.
ನಾಯಕ ನಟನಾಗಿ ಮೊದಲ ಸಿನಿಮಾದಲ್ಲಿ ನಟಿಸಿರುವ ಪ್ರವೀಣ್ ಅಥರ್ವ, ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕಥೆ ಮತ್ತು ಚಿತ್ರ ಕಥೆಯನ್ನು ಕೂಡ ಇವರೇ ಬರೆದಿದ್ದಾರೆ. ಪ್ರತಿಯೊಬ್ಬ ಮನುಷ್ಯನಲ್ಲೂ ಎರಡು ಮುಖಗಳು ಇರುತ್ತವೆ, ಸಂದರ್ಭಕ್ಕೆ ತಕ್ಕಂತೆ ಅವುಗಳನ್ನು ಹೇಗೆ ಬಳಸುತ್ತಾರೆ ಎಂಬುದು ಕಥೆ ಹುಟ್ಟಿಕೊಳ್ಳಲು ಸ್ಪೂರ್ತಿ ಎನ್ನುತ್ತಾರೆ ನಟ – ಕಥೆಗಾರ ಪ್ರವೀಣ್ ಅಥರ್ವ.
ಪರ್ಪಲ್ ರಾಕ್ ಸ್ಟುಡಿಯೋ ಮೂಲಕ ಚಿತ್ರ ಬಿಡುಗಡೆ ಮಾಡುತ್ತಿರುವ ಗಣೇಶ್ ಪಾಪಣ್ಣ ಅವರು ಚಿತ್ರದ ಬಗ್ಗೆ ಹೇಳಿಕೊಂಡರು.
ನಾಯಕಿ ಕವಿತಾ ಗೌಡ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿ, ಚಿತ್ರ ನಿರ್ಮಾಣದ ಸಮಯದಲ್ಲಿ ಚಿತ್ರತಂಡ ಪಟ್ಟ ಶ್ರಮ ವಿವರಿಸಿದರು.
ಮತ್ತೊಬ್ಬ ನಾಯಕ ವಿಜಯ್ ಚಂದ್ರ, ಛಾಯಾಗ್ರಹಕ ಕಿಟ್ಟಿ ಕೌಶಿಕ್, ಸಹ ನಿರ್ದೇಶಕ ಮತ್ತು ಸಂಕಲನಕಾರ ಯುಧಿ ಶಂಕರ್ ಹಾಗೂ ಮಾಸ್ಟರ್ ಚಿರಂತ್ ಚಿತ್ರದ ಅನುಭವ ಹಂಚಿಕೊಂಡರು.
ರಂಗಾಯಣ ರಘು, ವಿಜಯ್ ಚೆಂಡೂರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ನಯನ, ಪ್ರವೀಣ್ ಡಿ ರಾವ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಬಕ್ಕೇಶ್ ಮತ್ತು ಕಾರ್ತಿಕ್ ಸಂಗೀತ ನಿರ್ದೇಶನ ಮತ್ತು ದೇವಿಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಅವನಿಗೆ ಲವ್ ಮಾಡಿದ ಹುಡುಗಿಯರ ಲೆಕ್ಕ ಸಿಕ್ಕಿಲ್ಲ. ಆದರೂ ಅವನನ್ನ ಒಬ್ಭ ಹುಡುಗಿಯೂ ಲವ್ ಮಾಡಲ್ಲ! ಊರಲೆಲ್ಲ ಓಡಾಡೋ ಹುಡುಗಿಯರ ಹಿಂದಿಂದೆ ಅಲೆದಾಡೋ ‘ಶೋಕಿ’ ಹುಡುಗನಿಗೆ ಒಬ್ಬ ಹುಡುಗಿ ಕಣ್ಣಿಗೆ ಬೀಳ್ತಾಳೆ. ಅವಳೇ ನನ್ ಲೈಫು ಅಂತ ಖುಷಿ ಪಡುವ ಅವನ ಲೈಫಲ್ಲಿ ಒಂದಷ್ಟು ಘಟನಾವಳಿಗಳು ನಡೆದು ಹೋಗುತ್ತವೆ. ಆ ಘಟನೆಗಳೆಲ್ಲ ಏನು ಅನ್ನೋದೇ ಶೋಕಿವಾಲನ ಹೈಲೈಟ್.
ಇದೊಂದು ಹಳ್ಳಿ ಕಥೆ. ಅದರಲ್ಲೂ ಹಳ್ಳಿ ಹೈದರಿಗೆ ಖುಷಿಪಡಿಸೋ ಸಿನಿಮಾ. ಸ್ವಲ್ಪ ಕ್ಲಾಸು,ಫುಲ್ಲು ಮಾಸು ಇರೋ ಕಥೆಯಲ್ಲಿ ನೂರೆಂಟು ಟ್ವಿಸ್ಟ್ ಗಳಿವೆ. ಇಲ್ಲಿ ಗೆಳೆತನ, ಪ್ರೀತಿ, ತಾಯಿ ಸೆಂಟಿಮೆಂಟ್, ಕಚಗುಳಿ ಇಡುವ ಹಾಸ್ಯ, ಅಲ್ಲಲ್ಲಿ ಭಾವುಕತೆ ಹೆಚ್ಚಿಸುವ ಅಂಶಗಳು ನೋಡುಹರನ್ನು ಖುಷಿಪಡಿಸುತ್ತವೆ. ಹಾಗಾಗಿ ಶೋಕಿವಾಲ ಒಬ್ಬ ಪಕ್ಕಾ ಪ್ರೀತಿವಾಲ ಅನ್ನೋದನ್ನ ಇಲ್ಲಿ ಕಾಣಬಹುದು.
ಮೊದಲರ್ಧ ಕಥೆ ಸರಾಗವಾಗಿಯೇ ಸಾಗುತ್ತೆ. ದ್ವಿತಿಯಾರ್ಧ ಅಲ್ಲಲ್ಲಿ ಗೊಂದಲಕ್ಕೀಡು ಮಾಡಿದರೂ ಆಗಾಗ ಕಾಣ ಸಿಗುವ ಹಾಡುಗಳು ಆ ಗೊಂದಲಕ್ಕೆ ತೆರೆ ಎಳೆಯುತ್ತವೆ. ಕಥೆಯಲ್ಲಿ ಹೇಳುವಂತಹ ಹೊಸತನವೇನೂ ಇಲ್ಲ. ಆದರೆ, ನಿರೂಪಣೆಯಲ್ಲೊಂದಷ್ಟು ತಾಕತ್ತು ಕಾಣಬಹುದು. ಕೆಲವು ಕಡೆ ಚಿತ್ರಕಥೆ ಧಮ್ ಕಳೆದುಕೊಂಡಿದೆ. ಇನ್ನೂ ಕೆಲವು ಕಡೆ ಗೆಳೆಯರ ಹಾಸ್ಯ ಆ ಧಮ್ ಗೆ ಹೆಗಲು ಕೊಟ್ಟಿದೆ. ಇಡೀ ಸಿನಿಮಾದಲ್ಲಿ ಎಲ್ಲವೂ ಅದ್ಧೂರಿ. ಒಂದು ಹಳ್ಳಿಯಲ್ಲಿ ನಡೆಯುವ ಚಿತ್ರಣವನ್ನು ಹಾಗೆಯೇ ಉಣಬಡಿಸುವ ಪ್ರಯತ್ನವನ್ನು ನಿರ್ದೇಶಕ ಜಾಕಿ ಮಾಡಿದ್ದಾರೆ. ಒಟ್ಟಾರೆ ಇಲ್ಲಿ ಮನರಂಜನೆ ಜೊತೆಗೊಂದು ಸಣ್ಣ ಸಂದೇಶವೂ ಇದೆ. ಉಢಾಳ ಮಗನೊಬ್ಬನ ವಿಪರೀತ ಶೋಕಿ, ಧೈರ್ಯ, ಪ್ರೀತಿ ಗೀತಿ ಇತ್ಯಾದಿ ಸಿನಿಮಾದ ಆಕರ್ಷಣೆ.
ಕಥೆ ಬಗ್ಗೆ ಹೇಳುವುದಾದರೆ, ಅದೊಂದು ಹಳ್ಳಿ. ಅಲ್ಲೊಬ್ಬ ಶೋಕಿವಾಲ. ಹೆಸರು ಕೃಷ್ಣ. ಅವನಿಗೆ ಹುಡುಗಿಯರ ಹಿಂದೆ ಹೋಗೋ ಖಯಾಲಿ. ಅಂದರೆ ಲವ್ ಮಾಡೋ ಶೋಕಿ. ಆದರೆ ಅವನಿಗೆ ಯಾವ ಹುಡುಗಿಯೂ ಕ್ಯಾರೆ ಅನ್ನಲ್ಲ. ಅಂತಹ ಹೊತ್ತಲ್ಲೇ ಊರ ಗೌಡನ ಮಗಳೊಬ್ಬಳು ಆ ಕೃಷ್ಣನ ಕಣ್ಣಿಗೆ ಬೀಳ್ತಾಳೆ. ಅದೇ ಶೋಕಿಯಲ್ಲೇ ಅವನು ಗೌಡನ ಮಗಳನ್ನು ಒಲಿಸಿಕೊಳ್ಳೋಕೆ ನಾನಾ ರೀತಿ ಕಸರತ್ತು ಮಾಡ್ತಾನೆ. ಕೊನೆಗೆ ಆಕೆ ಅವನ ಲವ್ ಗೆ ಜೈ ಅಂತಾಳೆ. ಅವರಿಬ್ಬರು ಮದುವೆಯನ್ನೂ ಆಗ್ತಾರೆ. ಹಾಗಂತ, ಆ ಗೌಡ ತನ್ನ ಮಗಳನ್ನು ರಾತ್ರೋ ರಾತ್ರಿ ಕರೆದೊಯ್ದು ಮದುವೆ ಆಗುವ ಆ ಶೋಕಿವಾಲನನ್ನು ಸುಮ್ಮನೆ ಬಿಡ್ತಾನಾ? ಇದು ಮುಂದೆ ಸಾಗುವ ಇಂಟ್ರೆಸ್ಟಿಂಗ್ ಸ್ಟೋರಿ. ಆ ಕುತೂಹಲ ಇದ್ದರೆ, ಒಮ್ಮೆ ಶೋಕಿವಾಲನ ಶೋಕಿ ನೋಡಬಹುದು.
ಕಥೆಯಲ್ಲಿ ಒಂದಷ್ಟು ತಿರುವುಗಳಿವೆ. ಬದುಕಿನ ಪಾಠವೂ ಇದೆ. ಪ್ರೀತಿ ಸುಲಭವಲ್ಲ ಅನ್ನುವ ಸಂದೇಶವೂ ಇದೆ. ಗೆಳೆಯರ ಸಾಥ್ ಹೇಗಿರಬೇಕು ಅನ್ನುವುದನ್ನೂ ನಿರ್ದೇಶಕರಿಲ್ಲಿ ತೋರಿಸಿಕೊಟ್ಟಿದ್ದಾರೆ. ಒಟ್ಟಾರೆ ಇಲ್ಲಿ ಇನ್ನೊಂದು ವಿಷಯ ಪ್ರಸ್ತಾಪ ಮಾಡಲೇಬೇಕು ಅದು ಸಂಗೀತ ಮತ್ತು ಸಾಹಿತ್ಯ. ಹಾಡು ಹಾಗು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಶ್ರೀಧರ್ ವಿ.ಸಂಭ್ರಮ್ ಅವರ ಕೀ ಬೋರ್ಡ್ ಇಲ್ಲಿ ಸದ್ದು ಮಾಡಿದೆ. ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ಕೂಡ ಚಿತ್ರದ ಮತ್ತೊಂದು ಹೈಲೈಟ್.
ಅಜೇಯ್ ರಾವ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಶೋಕಿವಾಲನಾಗಿ ಇಷ್ಟವಾಗುತ್ತಾರೆ. ಎಂದಿಗಿಂತಲೂ ಇಲ್ಲಿ ಡ್ಯಾನ್ಸ್ ಮತ್ತು ಫೈಟ್ ನಲ್ಲಿ ಗಮನ ಸೆಳೆಯುತ್ತಾರೆ. ಸಂಜನಾ ಆನಂದ್ ಮುದ್ದಾಗಿ ಕಾಣುತ್ತಾರೆ ಬಿಟ್ಟರೆ ಡ್ಯಾನ್ಸ್ ನಲ್ಲಿ ಹಿಂದೆ ಉಳಿದಿಲ್ಲ. ನಟನೆಯಲ್ಲಿನ್ನೂ ಧಮ್ ಕಟ್ಟಬೇಕಿತ್ತು. ಉಳಿದಂತೆ ಇಲ್ಲಿ ಅರುಣ ಬಾಲರಾಜ್ ಅಮ್ಮನಾಗಿ ಇಷ್ಟ ಆಗುತ್ತಾರೆ. ಶರತ್ ಲೋಹಿತಾಶ್ವ ಅವರೂ ಸಿಕ್ಕ ಪಾತ್ರಕ್ಕೆಮೋಸ ಮಾಡಿಲ್ಲ. ನಾಗರಾಜಯ್ಯ, ಗಿರಿ, ಪ್ರಮೋದ್, ಸುಧಾಕರ್ ಎಲ್ಲರೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ನವೀನ್ ಅವರ ಕ್ಯಾಮೆರಾ ಕೈಚಳಕ ಹಳ್ಳಿಯ ಸೊಬಗನ್ನು ಹೆಚ್ಚಿಸಿದೆ.
ಈ ಹಿಂದೆ ಒನ್ ಲವ್ ಟೂ ಸ್ಟೋರಿ ಸಿನಿಮಾ ಮೂಲಕ ಕನ್ನಡ ಚಿತ್ರ ಲೋಕಕ್ಕೆ ಪರಿಚಿತರಾದ ನಿರ್ದೇಶಕ ವಸಿಷ್ಠ ಬಂಟನೂರು ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ತಯಾರಾಗಿದೆ. ಅದೇ 1975. ಕ್ರೈಮ್ ಥ್ರಿಲ್ಲರ್ ಕಥಾ ಹೂರಣ ಇರುವ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್, ಜಯ್ ಶೆಟ್ಟಿ, ಮಾನಸ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಪ್ರತಿಭಾನ್ವಿತ ತಾರಾಬಳಗವಿದೆ.
ಸ್ಪೆಷಲ್ ಹಾಡಲ್ಲಿ ಸಿಂಧು
1975 ಸಿನಿಮಾದ ಮೆಲೋಡಿ ಪಬ್ ಸಾಂಗ್ ವೊಂದರಲ್ಲಿ ಸಿಂಧೂ ಲೋಕನಾಥ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಚಿತ್ರತಂಡ ಈ ಬಗ್ಗೆ ಹೇಳಿಕೊಂಡಿದ್ದಿಷ್ಟು.
ನನ್ನ ಸಿನಿಮಾ ಜರ್ನಿಯಲ್ಲಿ ಈ ರೀತಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಿರುವುದು ವಿಶೇಷ. ಸಾಂಗ್ ತುಂಬಾ ಚೆನ್ನಾಗಿದೆ. ಈ ಸಾಂಗ್ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹೊಸಬರ ತಂಡ ಇಡೀ ಟೀಂಗೆ ಒಳ್ಳೆದಾಗಲಿ ಎಂದು ಸಿಂಧು ಲೋಕನಾಥ್ ತಮ್ಮ ಅನುಭವ ಹಂಚಿಕೊಂಡರು.
ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ವಿಷಯ ಇಲ್ಲಿದೆ. ನಿರ್ಮಾಪರು ಸಿನಿಮಾಗೆ ಕೇಳಿದೆಲ್ಲವನ್ನೂ ಕೊಟ್ಟಿದ್ದಾರೆ. ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ ಎಂಬುದು ಚಕ್ರವರ್ತಿ ಚಂದ್ರಚೂಡ್ ಮಾತು.
ಪ್ರೊಡಕ್ಷನ್ ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ದಿನೇಶ್ ರಾಜನ್ ಸಿನಿಮಾಗೆ ಬಂಡವಾಳ ಹೂಡಿದ್ದು, ಬೆಂಗಳೂರು, ಉಡುಪಿ ಸೇರಿದಂತೆ ಚಿತ್ರೀಕರಣ ನಡೆದಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿದೆ.
ಅಂತೂ ಇಂತೂ ಇಡೀ ದಕ್ಷಿಣ ಭಾರತ ಚಿತ್ರರಂಗವೇ ಇದೀಗ ಕಿಚ್ಚನಿಗೆ ಸಾಥ್ ನೀಡಿದೆ. ಹೌದು, ಕಳೆದ ಎರಡು ದಿನಗಳಿಂದ ನಟ ಸುದೀಪ್ ಹಾಗು ಅಜಯ್ ದೇವಗನ್ ಮಧ್ಯೆ ನಡೆದ ಟ್ವೀಟ್ ವಾರ್ಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮಾತ್ರವಲ್ಲ, ಈಗ ಸೌತ್ ಇಂಡಿಯಾ ಫಿಲ್ಮ್ ಸ್ಟಾರ್ಸ್ಗಳೂ ಸಾಥ್ ನೀಡುವ ಮೂಲಕ ಒಟ್ಟಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ, ರಾಮ್ ಗೋಪಾಲ್ ವರ್ಮಾ, ಸತೀಶ್ ನೀನಾಸಂ, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ನಿರ್ದೇಶಕ ಮಂಸೋರೆ ಸೇರಿದಂತೆ ಹಲವು ನಟ,ನಟಿಯರು ನಟ ಸುದೀಪ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಿಷ್ಟೇ ಅಲ್ಲ, ಅತ್ತ ರಾಜಕೀಯ ಧುರೀಣರು ಸಹ ಬೆಂಬಲ ಸೂಚಿಸುವ ಮೂಲಕ ಅಜಯ್ ದೇವಗನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಪರಭಾಷಿಗರಿಂದಲೂ ಸುದೀಪ್ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿರುವುದು ಇಡೀ ಸೌತ್ ಫಿಲ್ಮ್ ಇಂಡಸ್ಟ್ರಿ ಒಗ್ಗಟ್ಟಿನ ಮಂತ್ರ ಹೇಗಿದೆ ಅನ್ನೋದನ್ನು ತೋರಿಸುತ್ತಿದೆ…
ದೇವಗನ್ಗೆ ಚಳಿ ಬಿಡಿಸಿದ ವರ್ಮಾ…
ನಿರ್ದೇಶಕ, ರಾಮ್ ಗೋಪಾಲ್ ವರ್ಮಾ ಕೂಡ ಸುದೀಪ್ ಟ್ವೀಟ್ ಕುರಿತಂತೆ ಟ್ವೀಟ್ ಮಾಡಿದ್ದಾರೆ. ಸುದೀಪ್ ಮಾತುಗಳಿಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಅಜಯ್ ದೇವಗನ್ ಮಾತುಗಳನ್ನು ಕೊಂಚ ಖಾರವಾಗಿಯೇ ಖಂಡಿಸಿದ್ದಾರೆ. ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು, ಅದಕ್ಕೆ ಕಾರಣ, ನನಗೆ ಆ ಭಾಷೆಯ ಮೇಲಿರುವ ಗೌರವ, ನಿಮ್ಮ ಟ್ವೀಟ್ಗೆ ನಾನು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ್ದರೆ ನಿಮಗೆ ಅರ್ಥವಾಗುತ್ತಿತ್ತೆ?” ಎಂಬ ಸುದೀಪ್ರ ಟ್ವೀಟ್ ಅನ್ನು ಮೆಚ್ಚಿಕೊಂಡಿರುವ ವರ್ಮಾ, ”ಭಾಷೆಯ ವಿಷಯವನ್ನು ನಿಮ್ಮ ಈ ಪ್ರಶ್ನೆಗಿಂತಲೂ ಚೆನ್ನಾಗಿ ಯಾವುದೂ ಅರ್ಥೈಸಲು ಸಾಧ್ಯವಿಲ್ಲ. ಅಜಯ್ ದೇವಗನ್ ಅವರ ಹಿಂದಿ ಟ್ವೀಟ್ಗೆ ಕನ್ನಡದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಈಗಲಾದರು ಅರ್ಥ ಮಾಡಿಕೊಳ್ಳಲಿ ಭಾರತ ಒಂದು ಅನ್ನುವುದನ್ನು ಎಂದಿದ್ದಾರೆ ವರ್ಮಾ. ಇನ್ನು ಅಜಯ್ ದೇವಗನ್ ಮಾಡಿದ ಟ್ವೀಟ್ಗೆ ಪ್ರತಿಕ್ರಿಯಿಸಿರುವ ವರ್ಮಾ, ‘ಅಜಯ್ ಅವರನ್ನು ಬಹು ವರ್ಷಗಳಿಂದಲೂ ಬಲ್ಲೆ, ಯಾರನ್ನೂ ನೋಯಿಸುವ ಉದ್ದೇಶ ಅವರಿಗಿಲ್ಲ, ಅವರ ಟ್ವೀಟಿ ಅನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಭಾಷೆಯು ಇಂದು ಪ್ರಾದೇಶಿಕ ಗಡಿ ಹಾಗೂ ಸಂಸ್ಕೃತಿಗಳನ್ನು ಮೀರಿ ಬೆಳೆದಿದೆ. ಭಾಷೆ ಇರುವುದು ಜನರನ್ನು ಹತ್ತಿರ ತರಲೆಂದು ಒಡೆಯಲೆಂದಲ್ಲ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.
‘ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂಬ ಸುದೀಪ್ರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನೀವು ಉದ್ದೇಶಪೂರ್ವಕವಾಗಿ ಅಥವಾ ಬೇರೆ ಯಾವುದೇ ಕಾರಣಕ್ಕಾದರೂ ಈ ಟ್ವೀಟ್ ಅನ್ನು ಮಾಡಿರಬಹುದು ಆದರೆ ಈ ನಿಮ್ಮ ಹೇಳಿಕೆ ನನಗೆ ಇಷ್ಟವಾಯಿತು. ಉತ್ತರ ಮತ್ತು ದಕ್ಷಿಣ ಭಾರತ ಚಿತ್ರರಂಗಗಳ ನಡುವೆ ಯುದ್ಧದಂತಹ ಪರಿಸ್ಥಿತಿ ಇದ್ದಾಗ ಈ ರೀತಿಯ ಯುದ್ಧ ಶಮನ ಮಾಡುವ ಮನಸ್ಥಿತಿಯ ಹೇಳಿಕೆಗಳು ಅವಶ್ಯಕವಾಗಿರುತ್ತವೆ” ಎಂದಿದ್ದಾರೆ ವರ್ಮಾ. ಮತ್ತೆ ಸುದೀಪ್ಗೆ ಪ್ರತ್ಯೇಕ ಟ್ವೀಟ್ ಮಾಡಿರುವ ವರ್ಮಾ, ”ಸುದೀಪ್ ಅವರೆ, ಸತ್ಯವೆಂದರೆ ಬಾಲಿವುಡ್ ಸ್ಟಾರ್ ನಟರು ದಕ್ಷಿಣ ಭಾರತದ ಸಿನಿಮಾ ಸ್ಟಾರ್ ನಟರ ಬಗ್ಗೆ ಅಸೂಯೆ ಹೊಂದಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದ್ದಕ್ಕೆ ಅವರಿಗೆ ಉರಿ ಎದ್ದಿದೆ. ಹಿಂದಿ ಸಿನಿಮಾಗಳು ಇಂತಹ ಓಪನಿಂಗ್ ಪಡೆದುಕೊಳ್ಳಲಾರವು” ಎಂದಿರುವ ವರ್ಮಾ, ಅಂತಿಮವಾಗಿ, ”ರನ್ವೇ 34 ಸಿನಿಮಾದ ಕಲೆಕ್ಷನ್ ತೋರಿಸಲಿದೆ. ಹಿಂದಿ ವರ್ಸಸ್ ಕನ್ನಡ ಯುದ್ಧದಲ್ಲಿ ಗೆದ್ದವರ್ಯಾರು ಎಂದು. ಅಥವಾ ಅಜಯ್ ದೇವಗನ್ v/s ಸುದೀಪ್ ಯುದ್ಧದಲ್ಲಿ ಗೆದ್ದವರ್ಯಾರು ಎಂದು” ಎಂದಿದ್ದಾರೆ ವರ್ಮಾ.
ವಿವಾದ ದೊಡ್ಡ ಸುದ್ದಿ
ಅದೇನೆ ಇರಲಿ, ಸದ್ಯ ಚಿತ್ರರಂಗದಲ್ಲಿ ಹಿಂದಿ ಭಾಷೆಯ ವಿಚಾರವಗಿ ದೊಡ್ಡ ಬಿರುಗಾಳಿ ಎದ್ದಿದೆ. ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಶುರುವಾದ ವಾಗ್ವಾದ ಈಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ‘ಹಿಂದಿ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ’ ಎಂಬ ಕಿಚ್ಚನ ಹೇಳಿಕೆ. ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದ ಸುದೀಪ್ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ತಿರುಗೇಟು ನೀಡುವ ಮೂಲಕ ಭಾರೀ ಸುದ್ದಿಗೆ ಕಾರಣರಾಗಿದ್ದರು. ಇಬ್ಬರೂ ಟ್ವೀಟ್ ಮೂಲಕವೇ ಈ ವಿಚಾರದಲ್ಲಿ ವಾಗ್ವಾದಕ್ಕೆ ಇಳಿದು ಅದು ಎಲ್ಲೆಲ್ಲೋ ಮುಟ್ಟಿದೆ. ಅಜಯ್ ದೇವಗನ್ ನೀಡಿದ ಆ ಹೇಳಿಕೆ ಯಾರಿಗೂ ಸಹಿಸಲು ಸಾಧ್ಯವಾಗಿಲ್ಲ. ಕನ್ನಡಿಗರಿಗೆ ಮಾತ್ರವಲ್ಲ. ಇಡೀ ದಕ್ಷಿಣ ಭಾರತೀಯರನ್ನು ಅಜಯ್ ದೇವಗನ್ ಅವರ ಈ ಹೇಳಿಕೆ ಕೆರಳಿಸಿದೆ. ಕನ್ನಡಿಗರು, ಕನ್ನಡದ ಚಿತ್ರರಂಗದವರು ಮಾತ್ರವಲ್ಲದೆ ಸುದೀಪ್ ಪರ ದಕ್ಷಿಣ ಭಾರತೀಯರೇ ನಿಂತಿದ್ದಾರೆ.
ಸುದೀಪ್ಗೆ ಜೈ ಅಂದ ತೆಲುಗು, ತಮಿಳು ಫ್ಯಾನ್ಸ್ !
ಸುದೀಪ್ ಗೆ ಜೈ ಎನ್ನುತ್ತಿದ್ದಾರೆ ತಮಿಳು, ತೆಲುಗು ಫ್ಯಾನ್ಸ್! ಹೌದು, ಸುದೀಪ್ ಮತ್ತು ಅಜಯ್ ದೇವಗನ್ ಅವರಿಬ್ಬರ ಸರಣಿ ಟ್ವೀಟ್ ವಾರ್ನಲ್ಲಿ ಸುದೀಪ್ ಪರವಾಗಿ ಇಡೀ ಸೌತ್ ಚಿತ್ರರಂಗ ಒಂದಾಗಿದೆ. ಸೌತ್ನಲ್ಲೂ ಸ್ಟಾರ್ ವಾರ್, ಫ್ಯಾನ್ ವಾರ್ ಎಲ್ಲವೂ ಇದೆ. ಆದರೆ ಈ ವಿಚಾರದಲ್ಲಿ ಮಾತ್ರ ಎಲ್ಲವನ್ನು ಬದಿಗಿಟ್ಟು ಒಂದೇ ರೀತಿಯ ಧ್ವನಿ ಎತ್ತಿರುವುದು ನಿಜಕ್ಕೂ ವಿಶೇಷ. ತೆಲುಗು ನಟ ಮಹೇಶ್ ಬಾಬು ಅಭಿಮಾನಿಗಳು ಸುದೀಪ್ ಪರ ನಿಂತು ಕಿಚ್ಚನಿಗೆ ಜೈ ಎನ್ನುತ್ತಿದ್ದಾರೆ. ಜೂ.ಎನ್ಟಿಆರ್ ಫ್ಯಾನ್ಸ್ ಕೂಡ ಕಿಚ್ಚನಿಗೆ ಬೆಂಬಲ ಸೂಚಿಸಿದ್ದಾರೆ. ತೆಲುಗು ಮತ್ತು ತಮಿಳಿನ ಬಹುತೇಕ ಸ್ಟಾರ್ ನಟರ ಅಭಿಮಾನಿಗಳು ಬೆಂಬಲ ಸೂಚಿಸುತ್ತಿರುವುದು ಇನ್ನೊಂದು ವಿಶೇಷ. ತಮಿಳು ನಟ ವಿಜಯ್ ಮತ್ತು ಜೂ.ಎನ್ಟಿಆರ್ ಫ್ಯಾನ್ ಪೇಜ್ನಿಂದ ಕಿಚ್ಚನಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದೆ. ಈ ಮೂಲಕ ಸೌತ್ ಇಂಡಿಯಾದ ಬಹುತೇಕ ಮಂದಿ ಒಂದಾಗಿ ಮುಂದೆ ಬಂದಿದ್ದಾರೆ ಎನ್ನುವುದು ಸ್ಪಷ್ಟ.
ಅದೇನೆ ಇರಲಿ, ಈಗ ಸೌತ್ ಚಿತ್ರಗಳಿಗೆ ಬಾಲಿವುಡ್ ಹೆದರಿದೆಯಾ? ಗೊತ್ತಿಲ್ಲ. ಆದರೆ, ಈ ಟ್ವೀಟ್ ವಾರ್ ಅನ್ನು ಬಾಲಿವುಡ್ ಮಂದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. RRR, ಪುಷ್ಪ, ಕೆಜಿಎಫ್ 2 ಚಿತ್ರಗಳು ಬಾಕ್ಸಾಫೀಸ್ ಗಳಿಕೆ ಕಂಡು ಬಾಲಿವುಡ್ ನಿಜಕ್ಕೂ ಶೇಕ್ ಆಗಿದೆ. ಇನ್ನು ಸೌತ್ ಫಿಲ್ಮ್ ಇಂಡಸ್ಟ್ರಿಯಿಂದ ಸಾಕಷ್ಟು ಸ್ಟಾರ್ಸ್ ಸಿನಿಮಾಗಳ ಹಬ್ಬವಿದೆ. ಆ ಹಬ್ಬ ಕಣ್ತುಂಬಿಕೊಳ್ಳೋಕೆ ಬಾಲಿವುಡ್ ಸ್ಟಾರ್ಸ್ ಗೆ ಆಗ್ತಾ ಇಲ್ಲವೇನೋ? ಅದಕ್ಕೆ ಇಷ್ಟೆಲ್ಲಾ ಖ್ಯಾತೆ ಅಂತ ಟ್ರೋಲ್ ಮಾಡಲಾಗುತ್ತಿದೆ. ಮುಂದೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕು.