ಧರ್ಮ ಕೀರ್ತಿರಾಜ್ ನಾಯಕರಾಗಿ ನಟಿಸುತ್ತಿರುವ, ಸತ್ಯಜಿತ್ ನಿರ್ಮಿಸಿ, ನಿರ್ದೇಶಿಸುತ್ತಿರುವ “ಬುಲೆಟ್” ಚಿತ್ರದ ಮುಹೂರ್ತ ಸಮಾರಂಭ ಆರ್ ಟಿ ನಗರದ ವಿನಾಯಕನ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಭೈರತಿ ಸುರೇಶ್ , ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆರಂಭ ಫಲಕ ತೋರಿದರು. ಮಹಿಮ್ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು.
ವಿನಾಯಕನ ಸನ್ನಿಧಿಯಲ್ಲಿ ಮುಹೂರ್ತ ಮಾಡಿದ್ದೇವೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಗೋವಾ, ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ನಾಯಕನಾಗಿ ಧರ್ಮ ಕೀರ್ತಿರಾಜ್ ನಟಿಸುತ್ತಿದ್ದಾರೆ. ಮುಂಬೈನ ಶ್ರೀಯಾ ಶುಕ್ಲಾ ಹಾಗೂ ಅಜಿತಾ ಜಾ ನಾಯಕಿಯರು. ಶ್ರೀಯಾ ಅವರು ಸುಶಾಂತ್ ಸಿಂಗ್ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸಿದ್ದಾರೆ. ಅಜಿತಾ ವೆಬ್ ಸೀರಿಸ್ ಗಳಲ್ಲಿ ನಟಿಸಿದ್ದಾರೆ. ಚಿತ್ರ ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಆಧರಿಸಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಸತ್ಯಜಿತ್ ಮಾಹಿತಿ ನೀಡಿದರು.
ಸತ್ಯಜಿತ್ ಅವರು ಹಿಂದಿ, ತಮಿಳಿನಲ್ಲಿ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಅವರೆ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ಅಪ್ಪ, ಮಗನ ಸೆಂಟಿಮೆಂಟ್ ಸನ್ನಿವೇಶಗಳು ಜನರಿಗೆ ಹತ್ತಿರವಾಗಲಿದೆ. ನನ್ನ ತಂದೆಯ ಪಾತ್ರದಲ್ಲಿ ಸತ್ಯಜಿತ್ ಅವರೆ ಅಭಿನಯಿಸುತ್ತಿದ್ದಾರೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ. ನಮ್ಮ ತಂಡಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಧರ್ಮ ಕೀರ್ತಿರಾಜ್.
ನಾಯಕಿಯರಾದ ಶ್ರೀಯಾ ಶುಕ್ಲ ಹಾಗೂ ಅಜಿತಾ ಜಾ ತಮ್ಮ ಪಾತ್ರ ಪರಿಚಯ ಮಾಡಿಕೊಂಡು, ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಹ ನಿರ್ದೇಶಕ , ನಟ ಇಶ್ಯಾಕ್ ಬಾಜಿ, ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ, ಸಂಗೀತ ನಿರ್ದೇಶಕ ರಾಜ್ ಭಾಸ್ಕರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಚಿತ್ರದ ಕುರಿತು ಮಾತನಾಡಿದರು.
ಲಾಕ್ ಡೌನ್ ನಲ್ಲಿ ಸೆರೆ ಹಿಡಿಯಲಾದ ಹಲವು ವಿಶೇಷತೆಗಳಿಂದ ಕೂಡಿದ ‘ದಿ ಫಿಲಂ ಮೇಕರ್’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಆರ್ಯ ಎಸ್ ರೆಡ್ಡಿ ನಿರ್ದೇಶನಲ್ಲಿ ಮೂಡಿ ಬಂದಿರುವ ಈ ಚಿತ್ರ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕೇವಲ ಒಂದೇ ಪಾತ್ರ ಇರುವ, ಒಂದೇ ಲೊಕೇಷನ್, ಮೂರು ಜನ ಟೆಕ್ನಿಶಿಯನ್ ಗಳಿಂದ ತಯಾರಾದ ಚಿತ್ರ ‘ದಿ ಫಿಲಂ ಮೇಕರ್’. ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಈ ಮೂಲಕ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಪಟ್ಟಿಗೂ ಸೇರಿದೆ. ಇದೆಲ್ಲವೂ ನಿರ್ದೇಶಕ ಆರ್ಯ ಎಸ್ ರೆಡ್ಡಿ ಕನಸು. ಅದನ್ನು ಬಹಳ ಸೃಜನಾತ್ಮಕವಾಗಿ, ಯಶಸ್ವಿಯಾಗಿ ನಿಭಾಯಿಸಿ ಬಿಡುಗಡೆಯ ಹಂತಕ್ಕೆ ತಂದಿದ್ದಾರೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ, ಸಂಕಲನ ಜೊತೆಗೆ ಛಾಯಾಗ್ರಾಹಕನಾಗಿ ಸಂಪೂರ್ಣ ಜವಾಬ್ದಾರಿ ಹೊತ್ತು ಸಿನಿಮಾ ಪೂರ್ಣ ಗೊಳಿಸಿದ್ದಾರೆ.
ಲಾಕ್ ಡೌನ್ ನಿಂದಾಗಿ ಹೊರಗಡೆ ಹೋಗುವಂತಿರಲಿಲ್ಲ. ಏನಾದ್ರು ಮಾಡಬೇಕಲ್ಲ ಎಂದಾಗ ಈ ರೀತಿ ಒಂದು ಎಕ್ಸ್ ಪಿರಿಮೆಂಟ್ ಮಾಡಲು ಪ್ಲ್ಯಾನ್ ಮಾಡಿದೆ. ಸಮಯಕ್ಕೆ ಸರಿಯಾಗಿ ಪರಿಚಿತರಾದ ನಟ ಸುನೀಲ್ ಸಿಕ್ಕರು. ಒಬ್ಬ ವ್ಯಕ್ತಿಯನ್ನಿಟ್ಟುಕೊಂಡು ಒಂದೇ ಸ್ಥಳದಲ್ಲಿ 21 ದಿನಗಳ ಕಾಲ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ. 1 ಗಂಟೆ 40 ನಿಮಿಷ ಇರುವ ಈ ಚಿತ್ರ ಹಲವು ಚಿತ್ರೋತ್ಸವದಲ್ಲಿ ತೆರೆಕಂಡು ಪ್ರಶಂಸೆ ಜೊತೆಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ನಿರ್ದೇಶಕ ಆರ್ಯ ಎಸ್ ರೆಡ್ಡಿ ತಿಳಿಸಿದ್ದಾರೆ.
ಚಿತ್ರದ ಮುಖ್ಯ ಪಾತ್ರಧಾರಿ ಸುನೀಲ್ ಗೌಡ ಮಾತನಾಡಿ, ನಾನು ರಂಗಭೂಮಿ ಕಲಾವಿದ. ಈ ಚಿತ್ರದಿಂದ ತುಂಬಾ ಕಲಿತಿದ್ದೇನೆ. ಸಿಂಗಲ್ ಕ್ಯಾರೆಕ್ಟರ್ ಪ್ಲೇ ಮಾಡೋದು ಅಷ್ಟು ಸುಲಭದ ಮಾತಲ್ಲ ಆರಂಭದಲ್ಲಿ ಕಷ್ಟ ಆಯ್ತು. ಆದ್ರೆ ನಿರ್ದೇಶಕರು ನನಗೆ ತುಂಬಾ ಸಹಕಾರ ನೀಡಿದ್ರು, ಟ್ರೈನ್ ಮಾಡಿದ್ರು. ಒಂದೊಳ್ಳೆ ಪ್ರಯತ್ನ, ಪ್ರಯೋಗವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ನಿರ್ದೇಶಕರಿಗೆ ಅವಕಾಶ ನೀಡಿದಕ್ಕೆ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದು ಸುನೀಲ್ ತಿಳಿಸಿದ್ದಾರೆ.
ನಿರ್ದೇಶಕ ಆರ್ಯ ಎಸ್ ರೆಡ್ಡಿ ಈ ಚಿತ್ರವನ್ನು ಸ್ನೇಹಿತರೊಡಗೂಡಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿಶಾಲ್ ಆಲಾಪ್ ಸಂಗೀತ ನಿರ್ದೇಶನ, ವಿಶ್ವಾಸ್ ಕೌಶಿಕ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸಾಕಷ್ಟು ವಿಶೇಷತೆ ಹೊತ್ತ ಈ ಚಿತ್ರ ನವೆಂಬರ್ 18ರಂದು ಬಿಡುಗಡೆಯಾಗುತ್ತಿದೆ. ಬಿಯಾಂಡ್ ಡ್ರೀಮ್ಸ್ ನಡಿ ನಂದಳಿಕೆ ನಿತ್ಯಾನಂದ ಪ್ರಭು ಈ ಸಿನಿಮಾದ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ.
ಕನ್ನಡ ಚಿತ್ರರಂಗವನ್ನು ಈಗ ಇಡೀ ಭಾರತೀಯ ಸಿನಿಮಾರಂಗವೇ ತಿರುಗಿ ನೋಡುವಂತಾಗಿದೆ. ಕನ್ನಡದ ಅನೇಕ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ವ್ಯಾಪಾರದ ದೃಷ್ಟಿಯಲ್ಲೂ ಕನ್ನಡದ ಸಿನಿಮಾಗಳಿಗೆ ಈಗ ಬೇಡಿಕೆ ಹೆಚ್ಚಿದೆ. ಆ ನಿಟ್ಟಿನಲ್ಲಿ ಅನೇಕ ಹೊಸಬರ ಕಂಟೆಂಟ್ ಸಿನಿಮಾಗಳು ಜೋರಾಗಿಯೇ ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಹೊಸಬರ ‘ರೆಡ್ ರಮ್’ ಸಿನಿಮಾ ಕೂಡ ಸೇರಿದೆ
ಹೌದು, ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ಫಿಲಮ್ಸ್ ಮೂಲಕ ‘ ರೆಡ್ ರಮ್’ ಚಿತ್ರಕ್ಕೆ ಪೂಜೆ ನಡೆದಿದೆ. ಅಶೋಕ್ ದೇವನಾಂಪ್ರಿಯ, ಕಿಶೋರ್ ಎ. ವಿಜಯ್ ಕುಮಾರ್ ಹಾಗೂ ಹನಿ ಚೌಧರಿ ಈ ಸುನಿಮಾದ ನಿರ್ಮಾಪಕರು. ” ರೆಡ್ ರಮ್” ಚಿತ್ರದ ವಿಶೇಷವೆಂದರೆ, ಇದರ ಮುಹೂರ್ತ ಪೂಜೆ ಉತ್ತರ ಪ್ರದೇಶದ ಮೋದಿನಗರದ ಶ್ರೀ ಸನಾತನ ಧರ್ಮ ದೇವಸ್ಥಾನದಲ್ಲಿ ನೆರವೇರಿದೆ.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮೋದಿ ನಗರದ ಶಾಸಕರಾದ ಶ್ರೀಮತಿ ಮಂಜು ಶಿವಾಚ್, ಸ್ಥಳೀಯ ಕೌನ್ಸಿಲರ್ ರಾಜಕುಮಾರಿ ಮುನ್ನಿ ಜಿ ಹಾಗೂ ಅನೇಕ ಗಣ್ಯರು ಆಗಮಿಸಿ ಕನ್ನಡ ಸಿನಿಮಾ ತಂಡಕ್ಕೆ ಶುಭಹಾರೈಸಿದ್ದಾರೆ.
‘ರೆಡ್ ರಮ್’ ಚಿತ್ರಕ್ಕೆ ಆರ್. ಪ್ರಮೋದ್ ಜೋಯಿಸ್ ನಿರ್ದೇಶಕರು. ಇದೊಂದು ಈ ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿದೆ. ಹಿಂದೆಂದೂ ಕೇಳಿರದ ಕಥಾಹಂದರ ಇಲ್ಲಿದೆ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಬಾಲಿವುಡ್ ನಟ ರಾಜ್ ವೀರ್, ಮಧುರಾ, ಅಫ್ಜಲ್ , ಶ್ರೀದತ್ತಾ, ಪ್ರಾಚಿಶರ್ಮ, ಧ್ರಿತೇಶ್ ವಿನಯ್ ಸೂರ್ಯ ಹಾಗೂ ಯತಿರಾಜ್ ಅಭಿನಯಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಕಲಾವಿದರ ಸಮಾಗಮವಿದೆ.
ಚಿತ್ರಕ್ಕೆ ಶಿವಶಂಕರ್(ಶಂಖು) ಛಾಯಾಗ್ರಹಣವಿದೆ. ಆರ್. ಚೇತನ್ ಕೃಷ್ಣ ಸಂಗೀತವಿದೆ. ಅಫ್ಜಲ್ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸಿನಿಮಾಗೆ ಮುಹೂರ್ತ ಪೂಜೆ ನಡೆದಿದ್ದು, ಸುಮಾರು 20 ದಿನಗಳ ಕಾಲ ಉತ್ತರ ಪ್ರದೇಶದ ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ಕೆಲ ಭಾಗ ಬೆಂಗಳೂರಿನಲ್ಲೂ ಚಿತ್ರೀಕರಣ ಮಾಡುವ ಯೋಜನೆ ಚಿತ್ರತಂಡಕ್ಕಿದೆ ಎಂದು ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ತಿಳಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ಅಭಿನಯಿಸಿರುವ “ತ್ರಿಬಲ್ ರೈಡಿಂಗ್” ಚಿತ್ರಕ್ಕಾಗಿ ವಿ. ನಾಗೇಂದ್ರ ಪ್ರಸಾದ್ ಅವರು ಬರೆದಿರುವ “ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್” ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸಾಯಿಕಾರ್ತಿಕ್ ಸಂಗೀತ ನೀಡಿರುವ ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಭೂಷಣ್ ನೃತ್ಯ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡು ಬಾರಿ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ನಮ್ಮ “ತ್ರಿಬಲ್ ರೈಡಿಂಗ್” ಶುರುವಾಗಿದ್ದು, ಕೊರೋನ ಸಮಯದಲ್ಲಿ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಕೂಡಲೇ ಮೈಸೂರಿನಲ್ಲಿ ಚಿತ್ರೀಕರಣ ಆರಂಭಿಸಿದೆವು. ಅದು ಆಸ್ಪತ್ರೆಯಲ್ಲಿ. ಎಲ್ಲರಲ್ಲೂ ಭಯದ ವಾತಾವರಣ. ಆ ಸಮಯದಲ್ಲಿ ಚಿತ್ರೀಕರಣ ಮಾಡಲಾಯಿತು. ದೇವರ ದಯೆಯಿಂದ ಯಾವುದೇ ತೊಂದರೆ ಆಗಲಿಲ್ಲ. ಇನ್ನೂ ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಈಗ ಮೂರನೇ ಹಾಡು ಬಿಡುಗಡೆಯಾಗಿದೆ. ಹಿಂದಿನ ಎರಡು ಹಾಡುಗಳು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಜನಪ್ರಿಯವಾಗಿದೆ. ನವೆಂಬರ್ ಹದಿನೈದರಂದು ಟ್ರೇಲರ್ ಬಿಡುಗಡೆಯಾಗಲಿದ್ದು, ಇಪ್ಪತ್ತೈದರಂದು ಚಿತ್ರ ತೆರೆಗೆ ಬರಲಿದೆ. ಇಡೀ ಚಿತ್ರತಂಡದ ಸಹಕಾರದಿಂದ “ತ್ರಿಬಲ್ ರೈಡಿಂಗ್” ಚೆನ್ನಾಗಿ ಬಂದಿದೆ. ಪ್ರೇಕ್ಷಕರಿಗೂ ಪ್ರಿಯವಾಗುವ ವಿಶ್ವಾಸವಿದೆ ಎಂದರು ನಾಯಕ ಗೋಲ್ಡನ್ ಸ್ಟಾರ್ ಗಣೇಶ್.
ಈ ಹಿಂದೆ ಬಿಡುಗಡೆಯಾಗಿರುವ ಎರಡು ಹಾಡುಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ಹಾಡು ಕೂಡ ಸುಮಧುರವಾಗಿದೆ ಎಂದು ಹಾಡಿನ ಬಗ್ಗೆ ಮಾಹಿತಿ ನೀಡಿದ್ದ ನಿರ್ದೇಶಕ ಮಹೇಶ್ ಗೌಡ, ನವೆಂಬರ್ 25 ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರು ಪ್ರೋತ್ಸಾಹ ನೀಡಿ ಎಂದರು.
ಇದೇ ತಿಂಗಳ 25 ರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಾಮ್ ಗೋಪಾಲ್ ವೈ.ಎಂ.
ಇಂದು ಬಿಡುಗಡೆಯಾಗಿರುವ ಈ ಹಾಡು ತುಂಬಾ ಚೆನ್ನಾಗಿದೆ. ಗಣೇಶ್ ಸರ್ ಚೆನ್ನಾಗಿ ನೃತ್ಯ ಮಾಡಿದ್ದಾರೆ. ಎರಡು ಜಡೆ ಒಟ್ಟಿಗೆ ಸೇರುವುದಿಲ್ಲ ಎನ್ನುತ್ತಾರೆ. ಆದರೆ ಈ ಚಿತ್ರದಲ್ಲಿ ನಾವು ಮೂವರು ನಾಯಕಿಯರು. ಇಡೀ ಚಿತ್ರ ಪೂರ್ತಿ ಖುಷಿಯಿಂದ ಕಾಲ ಕಳೆದೆವು. ನಮ್ಮ ಚಿತ್ರಕ್ಕೆ ಬೆಂಬಲ ನೀಡಿ ಎಂದರು ನಾಯಕಿ ಅದಿತಿ ಪ್ರಭುದೇವ.
ಮತ್ತಿಬ್ಬರು ನಾಯಕಿಯರಾದ ರಚನಾ ಇಂದರ್ ಹಾಗೂ ಮೇಘ ಶೆಟ್ಟಿ ಸಹ “ತ್ರಿಬಲ್ ರೈಡಿಂಗ್” ಬಗ್ಗೆ ಮಾತನಾಡಿದರು. ಛಾಯಾಗ್ರಹಕ ಜೈ ಆನಂದ್ ಹಾಗೂ ಸಂಭಾಷಣೆ ಬರೆದಿರುವ ರಾಜಶೇಖರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜ್ವಲ್ ಮತ್ತು ನಿರ್ದೇಶಕ ರಾಮ್ ನಾರಾಯಣ್ ಕಾಂಬಿನೇಷನ್ ಮೂಲಕ ರೆಡಿಯಾಗಿರುವ ಅಬ್ರಾಬರ ರಾಜ್ಯಾದ್ಯಂತ ನವೆಂಬರ್ 18ರಂದು ಬಿಡುಗಡೆಯಾಗುತ್ತಿದೆ. ಚಿತ್ರ ರಿಲೀಸ್ಗೂ ಮುನ್ನ ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಹಿರಿಯ ನಟ ದೇವರಾಜ್ ಅವರು ಚಿತ್ರದ ಟ್ರೇಲರ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಟೈಸನ್, ಕ್ರ್ಯಾಕ್ ನಂತರ ರಾಮ್ನಾರಾಯಣ್ ನಿರ್ದೇಶಿಸಿರುವ ಈ ಚಿತ್ರವನ್ನು ಸಿ. ಅಂಡ್ ಎಂ.ಮೂವೀಸ್ ಬ್ಯಾನರ್ ನಲ್ಲಿ ಬಸವರಾಜ್ ಮಂಚಯ್ಯ ಅವರು ನಿರ್ಮಿಸಿದ್ದಾರೆ. ಆ್ಯಕ್ಷನ್, ಫ್ಯಾಮಿಲಿ, ಕಾಮಿಡಿ ಎಂಟರ್ಟೈನರ್ ಕಥಾಹಂದರ ಹೊಂದಿರೋ ಈ ಚಿತ್ರದಲ್ಲಿ ಪ್ರಜ್ವಲ್ ಜೊತೆ ರಾಶಿಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಸಿನಿಮಾ ಕುರಿತು ನಿರ್ದೇಶಕ ರಾಮ್ನಾರಾಯಣ್ ಹೇಳಿದ್ದಿಷ್ಟು, ನವೆಂಬರ್ 18ಕ್ಕೆ ಅಬ್ಬರ ಬಿಡುಗಡೆಯಾಗುತ್ತಿದೆ. ಎಂಟರ್ಟೈನ್ಮೆಂಟ್ ಜೊತೆಗೆ ಆತಂಕವೂ ಇದೆ. ಈ ಸೀನ್ಗೆ, ಈ ಫೈಟ್ಗೆ, ಈ ಹಾಡಿಗೆ ಜನ ಏನೆನ್ನಬಹುದು ಎಂಬ ಕುತೂಹಲವಿದೆ. ಆದರೆ ಸಿನಿಮಾ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆಯಿದೆ. ಅಬ್ಬರ ಡೇ ಒನ್ನಿಂದ ಅಬ್ಬರವಾಗೇ ಬರುತ್ತಿದೆ. ಆರಂಭದಲ್ಲಿ ಟೈಟಲ್ನ್ನು ಎಸ್.ಗೋವಿಂದ್ ಅವರು ನಮಗೆ ಬಿಟ್ಟುಕೊಟ್ಟರು. ಅಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ಚಿತ್ರ ಬಂದಿದೆ. ಹಾಡಿನ ಸಮಯದಲ್ಲಿ ನಿಮಿಕಾಗೆ ಕಾಲು ಪೆಟ್ಟಾದರೂ ತೋರಿಸಿಕೊಳ್ಳದೆ ಅಭಿನಯಿಸಿದರು. ಚಿತ್ರದ ಟೈಟಲನ್ನು ಶಿವರಾಜ್ಕುಮಾರ್ ರಿಲೀಸ್ ಮಾಡಿದ್ದರು. ಈಗ ದೇವರಾಜ್ ಟ್ರೇಲರ್ ರಿಲೀಸ್ ಮಾಡಿದ್ದಾರೆ. ನಿರ್ಮಾಪಕರ ಹೆಸರೂ ಬಸವರಾಜ್, ಹೀಗೆ ನಮ್ಮ ಸಿನಿಮಾಗೆ ರಾಜ್ ಎನ್ನುವ ಹೆಸರು ಶಕ್ತಿಯಾಗಿ ನಿಂತಿದೆ. ರವಿಶಂಕರ್ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ, ಅವರಿಗೆ ಎರು ಶೇಡ್ಸ್ ಇದೆ. ಶೋಭರಾಜ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಅಲ್ಲದೆ ರವಿ ಬಸ್ರೂರು ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಜೆ.ಕೆ.ಗಣೇಶ್ ಕ್ಯಾಮೆರಾವರ್ಕ್ ನಿಭಾಯಿಸಿದ್ದು, ಮೂವರು ನಾಯಕಿಯರೂ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ ಎಂದರು.
ನಿರ್ಮಾಪಕ ಬಸವರಾಜ್ ಮಂಚಯ್ಯ ಮಾತನಾಡಿ, ಕೋವಿಡ್ ಆಗಷ್ಟೇ ಮುಗಿದಿತ್ತು. ಹಾಡುಗಳನ್ನು ಫಾರಿನ್ನಲ್ಲಿ ಶೂಟ್ ಮಾಡಲು ಪ್ರಜ್ವಲ್ ಒಪ್ಪಿದರು. ಎರಡು ಹಾಡುಗಳನ್ನು ಥೈಲ್ಯಾಂಡ್ನಲ್ಲೇ ಶೂಟ್ ಮಾಡಿದ್ದೇವೆ. ತೆರೆಯ ಹಿಂದೆ ನಾವಿದ್ದರೂ, ತೆರೆಯ ಮುಂದೆ ಅವರೆಲ್ಲ ಪಟ್ಟಿರುವ ಶ್ರಮವನ್ನು ಜನರೆಲ್ಲ ನೋಡುತ್ತಾರೆ. ತಂದೆ ಒಂದು ಒಂದು ತಪ್ಪು ಮಾಡುತ್ತಾನೆ, ಅದನ್ನು ಸರಿಪಡಿಸುವುಕ್ಕೆ ಹೋಗಿ ಮತ್ತೊಂದು ತಪ್ಪು ಮಾಡುತ್ತಾನೆ. ನಂತರ ಮಗ ಅದನ್ನು ಹೇಗೆ ಸರಿಪಡಿಸ್ತಾನೆ ಅನ್ನೋದೇ ಈ ಚಿತ್ರದ ಕಥೆ. ಹಾಗಾಗಿ ನಾಯಕನ ತಂದೆ ದೇವರಾಜ್ ಅವರೇ ಟ್ರೇಲರ್ ರಿಲೀಸ್ ಮಾಡಿದ್ದಾರೆ ಎಂದರು.
ದೇವರಾಜ್ ಮಾತನಾಡಿ ಟ್ರೇಲರ್ ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ. ಚಿತ್ರದ ಮೂವರು ನಾಯಕಿಯರು ಮಗನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದಾಗ ಒಬ್ಬ ತಂದೆಯಾಗಿ ನನಗೆ ತುಂಬಾ ಖುಷಿಯಾಯ್ತು. ಕನ್ನಡ ಚಿತ್ರರಂಗಕ್ಕೀಗ ಶುಕ್ರದೆಸೆ ಬಂದಿದೆ. ಇಡೀ ದೇಶ ಹೊಗಳುತ್ತಿದೆ. ರಾಮ ನಾರಾಯಣ್ ಜೊತೆ ನಾನೂ ಕೆಲಸ ಮಾಡಿದ್ದೇನೆ. ಒಬ್ಬ ಸಾಹಿತಿಯ ಕೈಲಿ ಬಂದಿರುವ ಡೈಲಾಗ್ಗಳು ತುಂಬಾ ಚೆನ್ನಾಗಿರುತ್ತೆ. ಅವರು ಆಡೋ ಮಾತಲ್ಲಿ ನಾಟಕೀಯತೆ ಕಾಣಲಿಲ್ಲ ಎಂದು ಹೇಳಿದರು.
ನಾಯಕ ಪ್ರಜ್ವಲ್ ಮಾತಾಡಿ, ಚಿತ್ರದ ರಿಲೀಸ್ ಹತ್ತಿರವಾಗ್ತಿದ್ದಂತೆ ಎಕ್ಸೈಟ್ಮೆಂಟ್ ಇರುತ್ತೆ, ಆದರೆ ಈ ಸಿನಿಮಾ ಮಾಡಿದಮೇಲೆ ನೆಮ್ಮದಿ ಕಾಣಿಸ್ತಿದೆ. ಚಿತ್ರ ಇಷ್ಟು ಚೆನ್ನಾಗಿ ಬರಲು ಇಡೀತಂಡ ಹಾಕಿದ ಎಫರ್ಟ್ ಕಾರಣ. ಚಿತ್ರದಲ್ಲಿ ನನಗೆ ಮೂರು ವಿಭಿನ್ನವಾದ ಪಾತ್ರಗಳಿದ್ದು, ೫ ರೀತಿಯಲ್ಲಿ ಕಾಣಿಸಿಕೊಳ್ಳುತ್ತೇನೆ. ಒಂದೇದಿನ ಮೂರೂ ಪಾತ್ರಗಳನ್ನು ಮಾಡಬೇಕಾಗಿತ್ತು. ಕಾಮಿಡಿ, ಎಂಟರ್ಟೈನಿಂಗ್ ಜೊತೆಗೆ ಒಂದು ರಿವೆಂಜ್ ಥಾಟ್ ಚಿತ್ರದಲ್ಲಿದೆ. ಅದು ಚಿತ್ರದ ಕೊನೇವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ನಾನು ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿರುತ್ತೇವೆ. ಆದರೆ, ಅದು ಹೋಗ್ತಾ ಹೋಗ್ತಾ ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ ಎಂದು ಹೇಳಿದರು.
ನಾಯಕಿಯರಾದ ನಿಮಿಕಾ ರತ್ನಾಕರ್, ಲೇಖಾಚಂದ್ರ ಹಾಗೂ ರಾಜಶ್ರೀ ಪೊನ್ನಪ್ಪ ಇವರೆಲ್ಲರೂ ಚಿತ್ರೀಕರಣದ ಅನುಭವಗಳು ಹಾಗೂ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.
ನಟ ರಾಜವರ್ಧನ್ ನಟಿಸುತ್ತಿರುವ ‘ಗಜರಾಮ’ ಸಿನಿಮಾ ಶೂಟಿಂಗ್ ಜೋರಾಗಿ ಸಾಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೇ ಚಿತ್ರೀಕರಣ ಆರಂಭಿಸಿದ ಚಿತ್ರತಂಡ 16 ದಿನಗಳ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಹದಿನಾರು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಮೊದಲ ಶೆಡ್ಯೂಲ್ ಮುಗಿದ್ದಿದ್ದು ಎರಡನೆ ಶೆಡ್ಯೂಲ್ ಗಾಗಿ ಲೊಕೇಶನ್ ಹುಡುಕಾಟದಲ್ಲಿದ್ದೇವೆ. ಇನ್ನು ನಲವತ್ತು ದಿನಗಳ ಶೂಟಿಂಗ್ ಬಾಕಿ ಇದೆ. ನಾನು ಏನು ಅಂದುಕೊಂಡಿದ್ದೆನೋ ಹಾಗೆಯೇ ಚಿತ್ರೀಕರಣ ನಡೆಯುತ್ತಿದೆ, ಸಿನಿಮಾವೂ ಮೂಡಿ ಬರುತ್ತಿದೆ. ಮೊದಲ ಸಿನಿಮಾ ಎಂದು ನೋಡದೇ ಹಿರಿಯ ಹಾಗೂ ಅನುಭವಿ ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ನನಗೆ ಸಹಕಾರ ನೀಡುತ್ತಾ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ನಿರ್ದೇಶಕ ಸುನೀಲ್ ಕುಮಾರ್. ವಿ. ಎ ತಿಳಿಸಿದ್ದಾರೆ.
ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಸುನೀಲ್ ಕುಮಾರ್. ವಿ. ಎ ನಿರ್ದೇಶನದ ಮೊದಲ ಸಿನಿಮಾವಿದು. ಲವ್ ಸ್ಟೋರಿ ಹಾಗೂ ಮಾಸ್ ಆಕ್ಷನ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ರಾಜವರ್ಧನ್ ಜೋಡಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣಚ್ಚ ನಟಿಸುತ್ತಿದ್ದಾರೆ.
ಶಿಷ್ಯ ದೀಪಕ್ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದು, ಖಳನಟನಾಗಿ ಪೈಲ್ವಾನ್ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ನಟಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ಗೋವಿಂದೇ ಗೌಡ ಒಳಗೊಂಡ ತಾರಾಬಳಗ ಸಿನಿಮಾದಲ್ಲಿದೆ.
ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಮನೋಮೂರ್ತಿ ಸಂಗೀತ ನಿರ್ದೇಶನ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಸಾಹಿತ್ಯದಲ್ಲಿ ಹಾಡುಗಳು ಮೂಡಿ ಬರಲಿದೆ.
ನವೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾದ ‘ಕಂಬ್ಳಿಹುಳ’ ಸಿನಿಮಾ ಪ್ರೇಕ್ಷಕ ಪ್ರಭುಗಳಿಂದ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಹೊಸಬರ ಸಿನಿಮಾವನ್ನು, ಹೊಸತನವನ್ನು ಚಿತ್ರರಸಿಕರು ಒಪ್ಪಿ ಅಪ್ಪಿಕೊಂಡಿದ್ದಾರೆ. ಮಲೆನಾಡಿನ ಪ್ರೇಮಕಥೆಯೊಂದನ್ನು ತೆರೆ ಮೇಲೆ ಸೊಗಸಾಗಿ ಕಟ್ಟಿಕೊಟ್ಟ ನವ ನಿರ್ದೇಶಕ ನವನ್ ಶ್ರೀನಿವಾಸ್ ಪ್ರರಿಶ್ರಮಕ್ಕೆ ಸ್ಯಾಂಡಲ್ ವುಡ್ ನಟ ನಟಿಯರೂ ಫಿಧಾ ಆಗಿದ್ದರು, ಎಲ್ಲರೂ ಸಿನಿಮಾ ನೋಡಲೇ ಬೇಕು ಎಂದು ಮನದುಂಬಿ ಹೊಗಳಿದ್ದರು. ಇದೀಗ ಸಿನಿಮಾ ತಂಡಕ್ಕೆ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಕೂಡ ಸಾಥ್ ನೀಡಿದ್ದು ಪ್ರೇಕ್ಷಕರಿಗೆ ಹೊಸ ಆಫರ್ ನೀಡಿದ್ದಾರೆ.
ಹೌದು, ನಿರ್ದೇಶಕ ಸಿಂಪಲ್ ಸುನಿ ‘ಕಂಬ್ಳಿಹುಳ’ ಸಿನಿಮಾ ನೋಡಿ ಫಿಧಾ ಆಗಿದ್ದಾರೆ. ಕೇವಲ ಫಿದಾ ಆಗಿಲ್ಲ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಇಡೀ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಕಂಬ್ಳಿಹುಳ ಸಿನಿಮಾ ನೋಡಿ ಬರುವವರಿಗೆ ಆಫರ್ ಕೂಡ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಸಿನಿಮಾ ಸಿಂಪಲ್ ಸುನಿ ಮನಸ್ಸಿಗೆ ಹಿಡಿಸಿದೆ, ಮನ ಸೆಳೆದಿದೆ. ಕಂಬ್ಳಿಹುಳ ಸಿನಿಮಾ ಸೆಕೆಂಡ್ ಹಾಫ್ ಮುಗಿಸಿ ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕ ಪ್ರಭುಗಳು ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಅವರು ತೆಗೆದುಕೊಂಡ ಟಿಕೆಟ್ ನ ಅರ್ಧಹಣವನ್ನು ವಾಪಾಸ್ಸು ಮಾಡುವುದಾಗಿ ಹೇಳಿದ್ದಾರೆ. ಈ ಆಫರ್ ಮುಂದಿನ ಮೂರು ದಿನಗಳು ಮಾತ್ರ ಲಭ್ಯವಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕೊಂಡಿದ್ದಾರೆ. ಸಿಂಪಲ್ ಸುನಿ ಸಿನಿಮಾ ಮೇಲೆ ತೋರಿಸಿರುವ ಪ್ರೀತಿಕಂಡು ಸಿನಿಮಾ ತಂಡ ಕೂಡ ಸಂತಸಗೊಂಡಿದೆ.
ಪ್ರೇಕ್ಷಕ ಪ್ರಭುಗಳು ಕೂಡ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ. ಈಗಾಗಲೇ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದುಕೊಳ್ಳುತ್ತಿದ್ದಾರೆ. ಸಪೋರ್ಟ್ ಕಂಬ್ಳಿಹುಳ, ನಮ್ಮ ಮಣ್ಣಿನ ಸಿನಿಮಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ. ಇದರಲ್ಲೇ ಅರ್ಥ ಮಾಡಿಕೊಳ್ಳಬೇಕು ಸಿನಿಮಾ ಅದೆಷ್ಟು ಚೆನ್ನಾಗಿದೆ ಅನ್ನೋದು. ಚಿತ್ರದ ಬಗೆಗೆ ಎಲ್ಲರೂ ತೋರಿಸುತ್ತಿರುವ ಪ್ರೀತಿ, ಸಪೋರ್ಟ್ ಕಂಡು ಸಿನಿಮಾ ತಂಡ ಕೂಡ ಸಂತಸ ವ್ಯಕ್ತಪಡಿಸಿದೆ.
ನವ ಪ್ರತಿಭೆ ನವನ್ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನ, ಶಿವ ಪ್ರಸಾದ್ ಸಂಗೀತ ನಿರ್ದೇಶನ ‘ಕಂಬ್ಳಿಹುಳ’ ಚಿತ್ರಕ್ಕಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ಕನ್ನಡ ಚಿತ್ರರಂಗದ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ಸುನೀಲ್ ಪುರಾಣಿಕ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರಾಜ್ಯ ಸರ್ಕಾರ ನವೆಂಬರ್ 5ರಂದು ಅಶೋಕ್ ಕಶ್ಯಪ್ ಅವರನ್ನು ನೇಮಿಸಿ ಆದೇಶಿಸಿತ್ತು. ಅಶೋಕ್ ಅಶ್ಯಪ್ ಅವರು ಕನ್ನಡ ಚಿತ್ರರಂಗದಲ್ಲಿ ಹಿರಿಯ ಸಿನಿಮಾಟೋಗ್ರಾಫರ್ ಆಗಿದ್ದು, ಅವರ ಶಾಪ ಚಿತ್ರದ ಛಾಯಾಗ್ರಾಹಣಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಭುವನಜ್ಯೋತಿ, ಶ್, ಕರುಣಿನಕೂಗು, ಸೂಪರ್, ಉಪ್ಪಿ2, ಕಾಫಿತೋಟ ಸೇರಿದಂತೆ ವಿವಿಧ ಚಿತ್ರಗಳಿಗೆ ಸಿನಿಮಾಟೋಗ್ರಾಫರ್ ಆಗಿ ದುಡಿದಿದ್ದಾರೆ. ಅಲ್ಲದೆ, ಚಿತ್ರ ನಿರ್ದೇಶನ ಮತ್ತು ನಟನೆಯಲ್ಲಿ ಸಹ ಅವರು ತಮ್ಮ ಪ್ರತಿಭೆಯನ್ನು ತೋರಿದ್ದಾರೆ.
ಕನ್ನಡ ಚಿತ್ರರಂಗದ ತಾಂತ್ರಿಕ ವರ್ಗದಲ್ಲಿ ದುಡಿದ ತಮ್ಮನ್ನು ಸರ್ಕಾರ ಗುರುತಿಸಿ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ಸಿನಿಮಾ ತಾಂತ್ರಿಕ ವರ್ಗಕ್ಕೆ ಖುಷಿ ತಂದಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಹಾಗೂ ಕನ್ನಡ ಚಿತ್ರರಂಗದಲ್ಲಿ ಈವರೆಗೆ ದುಡಿದು ಪಡೆದ ತಮ್ಮ ಅನುಭವವನ್ನು ಅಕಾಡೆಮಿ ಹಾಗೂ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ನಂದಿನಿ ಬಡಾವಣೆಯಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಹಿರಿಯ ನಿರ್ದೇಶಕರು ಹಾಗೂ ಅಕಾಡೆಮಿಯ ಹಿಂದಿನ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಸಿನಿಮಾಟೋಗ್ರಾಫರ್ ಬಸವರಾಜ್ ಸೇರಿದಂತೆ ಹಲವು ಗಣ್ಯರು, ಚಿತ್ರ ನಿರ್ದೇಶಕರು, ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಕೋರಿದರು.
ಸುಂದರ ದೃಶ್ಯಕಾವ್ಯ ಕಟ್ಟಿಕೊಟ್ಟಿರೋ ಬನಾರಸ್, ರುದ್ರತಾಂಡವ ಆಡ್ತಿದ್ದಾನೆ. ಈ ಸಿನಿಮಾವನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಝೈದ್ ಖಾನ್ ಜೊತೆ ವೀಕ್ಷಿಸಿದ್ದಾರೆ.
ಭಾನುವಾರ ರಾತ್ರಿ, ತಮ್ಮ ಕೆಲವು ಸಹೋದ್ಯೋಗಿಗಳ ಜೊತೆಗೆ ಮಲ್ಟಿಪ್ಲೆಕ್ಸ್ನಲ್ಲಿ ‘ಬನಾರಸ್’ ಸಿನಿಮಾವನ್ನು ಸಿದ್ದರಾಮಯ್ಯ ವೀಕ್ಷಿಸಿದ್ದಾರೆ. ಈ ಸಮಯದಲ್ಲಿ ಸಿದ್ದರಾಮಯ್ಯ ಜೊತೆಗೆ ನಟ ಝೈದ್ ಖಾನ್ ಹಾಗೂ ಚಿತ್ರತಂಡದ ಇತರ ಸದಸ್ಯರು ಸಹ ಇದ್ದರು.
ಈ ಸಿನಿಮಾದಲ್ಲಿ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ಹೀರೋ ಆಗಿ ನಟಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ‘ಮೊದಲ ಸಿನಿಮಾದಲ್ಲಿಯೇ ಅನುಭವ ಹೀರೋ ರೀತಿ ಝೈದ್ ಖಾನ್ ನಟಿಸಿದ್ದಾರೆ.
ಅವರ ಮತ್ತು ಸೋನಲ್ ಮಾಂಥೆರೋ ಜೋಡಿ ಚೆನ್ನಾಗಿದೆ. ಜಯತೀರ್ಥ ಬರೆದ ಕಥೆ ಕುತೂಹಲಕಾರಿ ಆಗಿದೆ. ಎಲ್ಲಿಯೂ ಬೋರ್ ಆಗಲ್ಲ’ ಎಂದು ಹೇಳಿರುವ ಸಿದ್ದರಾಮಯ್ಯ ಅವರು ಇದರಲ್ಲಿನ ಸಸ್ಪೆನ್ಸ್ ಅಂಶವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.
ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ “ವಿಜಯಾನಂದ”. ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನೀಡಿರುವ ಈ ಚಿತ್ರದ “ಹಾಗೆ ಆದ ಆಲಿಂಗನ” ಎಂಬ ಹಾಡು ಬಿಡುಗಡೆಯಾಗಿದೆ. ಧನಂಜಯ್ ರಂಜನ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ಕೀರ್ತನಾ ವೈದ್ಯನಾಥನ್ ಇಂಪಾಗಿ ಹಾಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿದೆ. ಮಲೆಯಾಳಂನ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್, “ಗೀತಾ ಗೋವಿಂದಂ” ಸೇರಿದಂತೆ ಮುನ್ನೂರಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
ನನ್ನ ಜೀವನಾಧಾರಿತ ಸಿನಿಮಾ ಮಾಡುವುದಾಗಿ ನಿರ್ದೇಶಕಿ ರಿಶಿಕಾ ಶರ್ಮ ಕೇಳಿದಾಗ, ಈ ಚಿಕ್ಕ ಹುಡಗಿ ಏನು ಮಾಡುತ್ತಾಳೆ? ಅನಿಸಿತು. ಆದರೆ ಈಗ, ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಿಶಿಕಾ ಬಹಳ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನನ್ನ ಮಗ ಆನಂದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನನ್ನ ಕುಟುಂಬದವರೆಲ್ಲಾ ಉದ್ಯಮಿಗಳು. ನಮ್ಮ ತಂದೆಯವರು ಸಹ. ನಾನು ಹದಿನೈದನೇ ವಯಸ್ಸಿಗೆ ಕೆಲಸ ಶುರು ಮಾಡಿದೆ. ನಮ್ಮ ತಂದೆ ಬಳಿ ಹೋಗಿ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಶುರು ಮಾಡುತ್ತೇನೆ ಅಂದಾಗ ಅವರು ಗಾಬರಿಯಾದರು. ಅಂದು ಒಂದು ಲಾರಿಯಿಂದ ಆರಂಭವಾದ ನನ್ನ ಉದ್ಯಮ, ಇಂದು ಬೃಹತಾಗಿ ಬೆಳೆದಿದೆ. ಟ್ರಾನ್ಸ್ ಪೋರ್ಟ್ ಹಾಗೂ ಮಾಧ್ಯಮ ಎರಡರಲ್ಲೂ ನಾವು ಮುಂದಿದ್ದೇವೆ. ನನ್ನ ಹಿಂದಿನ ಶಕ್ತಿ ನನ್ನ ಪತ್ನಿ ಲಲಿತಾ ಎಂದರೆ ತಪ್ಪಾಗಲಾರದು. ನನ್ನ ಮಗ ಆನಂದ ಈಗ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾನೆ.
ಮೊಮ್ಮಗ ಶಿವ ಸದ್ಯದಲ್ಲೇ ಹೊಸ ಉದ್ಯಮ ಶುರು ಮಾಡಲಿದ್ದಾನೆ. ಈ ಚಿತ್ರ ಮಾಡಬೇಕಾದರೆ ನಾನು ನಿರ್ದೇಶಕರಿಗೆ ಹೇಳಿದ್ದೆ. ನನ್ನ ಜೀವನ ಹೇಗಿತ್ತೊ ಹಾಗೆ ತೋರಿಸಬೇಕು. ಬೇರೆ ಏನು ಸೇರಿಸಬಾರದು ಅಂತ. ನಾನು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದನೋ, ನಾಯಕ ನಿಹಾಲ್ ಹಾಗೆ ಕಾಣುತ್ತಾರೆ. ಆ ಮೀಸೆ, ಬಣ್ಣ ಬಣ್ಣದ ಅಂಗಿಗಳು ಎಲ್ಲವು…. ಆ ವಯಸ್ಸಿನಲ್ಲಿ ನಾನು ಹಾಗೆ ಇದ್ದೆ. ನಾಯಕಿ ಸಿರಿ ಪ್ರಹ್ಲಾದ್ ಕೂಡ ನನ್ನ ಹೆಂಡತಿಯನ್ನೇ ಹೋಲುತ್ತಾರೆ. ಈ ಚಿತ್ರ ಯುವಕರಿಗೆ ಸ್ಪೂರ್ತಿಯಾಗಲಿ. ಡಿಸೆಂಬರ್ ಒಂಭತ್ತರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಐದು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು ವಿಜಯ ಸಂಕೇಶ್ವರ.
ಶರಣ್, ಹರ್ಷಿಕಾ ಪೂಣಚ್ಛ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರ ಸಾಗಿ ಬಂದ ಬಗ್ಗೆ ನಿರ್ದೇಶಕಿ ರಿಶಿಕಾ ಶರ್ಮ ಮಾಹಿತಿ ನೀಡಿದರು. ಹಾಡುಗಳ ಬಗ್ಗೆ ಗೋಪಿ ಸುಂದರ್, ಅಭಿನಯದ ಕುರಿತು ನಾಯಕ ನಿಹಾಲ್, ನಾಯಕಿ ಸಿರಿ ಪ್ರಹ್ಲಾದ್, ಭರತ್ ಬೋಪ್ಪಣ್ಣ, ಅರ್ಚನಾ ಕೊಟ್ಟಿಗೆ, ರಾಜೇಶ್ ನಟರಂಗ ಮಾತನಾಡಿದರು.
ಅನಂತನಾಗ್, ರವಿಚಂದ್ರನ್, ವಿನಯಾಪ್ರಸಾದ್, ಪ್ರಕಾಶ್ ಬೆಳವಾಡಿ, ರಮೇಶ್ ಭಟ್, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.