ಸ್ಯಾಂಡಲ್ವುಡ್ ನಟಿ ಮಾನ್ವಿತಾ ಕಾಮತ್ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಗ್ಯಾಪ್ನ ಬಳಿಕ ಮಾನ್ವಿತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೆಂಡಸಂಪಿಗೆ ಬ್ಯೂಟಿ ಲೋಹಿತ್ ನಿರ್ದೇಶನದ ‘ಕ್ಯಾಪ್ಚರ್’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಕ್ಯಾಪ್ಟರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಪ್ರಿಯಾಂಕಾ ಮಗಳ ಪಾತ್ರದಲ್ಲಿ ಮಾನ್ವಿತಾ ನಟಿಸಲಿದ್ದಾರೆ.
ಕ್ಯಾಪ್ಚರ್ ಈಗಾಗಲೇ ಗೊತ್ತಿರುವ ಹಾಗೆ ಇದೊಂದು ಹಾರರ್ ಸಿನಿಮಾ. ಸಂಪೂರ್ಣ ಸಿನಿಮಾ ಸಿಸಿ ಟಿವಿ ಕಾನ್ಸೆಪ್ಟ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡುತ್ತಿರುವುದು ವಿಶೇಷ. ಈಗಾಗಲೇ ಪ್ರಿಯಾಂಕಾ ಉಪೇಂದ್ರ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಇದೀಗ ಮಾನ್ವಿತಾ ಕೂಡ ನಟಿಸುತ್ತಿದ್ದಾರೆ ಎನ್ನುವ ವಿಚಾರ ಕ್ಯಾಪ್ಚರ್ ಮೇಲಿನ ಕುತೂಹಲ ಹೆಚ್ಚಿಸಿದೆ. ಮಾನ್ವಿತಾ ಈ ಸಿನಿಮಾದಲ್ಲಿ ಸ್ನೇಹಾ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಹಾರರ್ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ.
ಮಾನ್ವಿತಾ ಏನಂತಾರೆ?
‘ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿದ್ದೇನೆ. ಮೊದಲ ತುಂಬಾ ಭಯವಿತ್ತು. ಆದರೆ ಪಾತ್ರ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. 15 ದಿನಗಳು ಗೋವಾದಲ್ಲಿ ಶೂಟಿಂಗ್ ಮಾಡಿದ್ವಿ, ಪ್ರಿಯಾಂಕಾ ಮೇಡಮ್ ಜೊತೆ ಕೆಲಸ ಮಾಡಿದ್ದು ತುಂಬಾ ಇಷ್ಟವಾಯಿತು. ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ತುಂಬಾ ದೃಷ್ಟಿ ಆಗಿತ್ತು ಅನಿಸುತ್ತೆ. ಜ್ವರ ಕೂಡಡ ಬಂದಿತ್ತು. ದೃಷ್ಟಿ ತೆಗಿಸಿಕೊಂಡ ಮೇಲೆ ಸರಿ ಆಯಿತು’ ಎನ್ನುತ್ತಾರೆ.
ಮಾನ್ವಿತಾ ಕೊನೆಯದಾಗಿ ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ವರ್ಷದ ಬಳಿಕ ತೆರೆಮೇಲೆ ಬರುತ್ತಿದ್ದಾರೆ. ಕ್ಯಾಪ್ಚರ್ ಸಿನಿಮಾದಲ್ಲಿ ಮಾನ್ವಿತಾ ಲುಕ್ ಹೇಗಿರಲಿದೆ ಎನ್ನುವುದು ಸದ್ಯದಲ್ಲೇ ರಿವೀಲ್ ಆಗಲಿದೆ. ಕ್ಯಾಪ್ಚರ್ ಸಿನಿಮಾಗೆ ರವಿರಾಜ್ ಅವರು ತಮ್ಮ ಶ್ರಿ ದುರ್ಗಪರಮೇಶ್ವರಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಈ ಬ್ಯಾನರ್ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಸಿನಿಮಾತಂಡ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲಿದೆ.
ನ್ಯಾಚುರಲ್ ಸ್ಟಾರ್ ನಾನಿ ಈಗ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ದಸರಾ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅವರು ಸಾಲು ಸಾಲು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ನಾನಿ 31ನೇ ಸಿನಿಮಾ ಅನೌನ್ಸ್ ಆಗಿತ್ತು. ಈ ಹಿಂದೆ ಕಾಮಿಡಿ ಕಥಾಹಂದರದ ಅಂಟೆ ಸುಂದರಾನಿಕಿ ಎಂಬ ಚಿತ್ರ ನಿರ್ದೇಶನ ಮಾಡಿದ್ದ ವಿವೇಕ್ ಆತ್ರೇಯಾ ಮತ್ತೊಮ್ಮೆ ನಾನಿ ಜೊತೆ ಕೈ ಜೋಡಿಸಿದ್ದಾರೆ.
ದಸರಾ ಹಬ್ಬದ ಅಂಗವಾಗಿ ಹೈದ್ರಾಬಾದ್ ನಲ್ಲಿ ’ಸೂರ್ಯನ ಶನಿವಾರ’ ಸಿನಿಮಾ ಸೆಟ್ಟೇರಿದೆ. ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರಕಥೆಯನ್ನು ನಿರ್ದೇಶಕರಿಗೆ ಹಸ್ತಾಂತರಿಸಿದರು. ನಿರ್ಮಾಪಕ ದಿಲ್ ರಾಜು ಕ್ಯಾಮೆರಾಗೆ ಚಾಲನೆ ನೀಡಿದ್ರೆ, ವಿವಿ ವಿನಾಯಕ್ ಕ್ಲಾಪ್ ಮಾಡಿದರು. ನಟ ಎಸ್.ಜೆ.ಸೂರ್ಯ ಸೇರಿದಂತೆ ಇಡೀ ಚಿತ್ರತಂಡ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
’ಸೂರ್ಯನ ಶನಿವಾರ’ ಪಕ್ಕ ಮಾಸ್ ಆಕ್ಷನ್ ಎಂಟರ್ ಟೈನರ್ ಚಿತ್ರವಾಗಿದ್ದು, ಈ ಸಿನಿಮಾದ ಕಥೆ ಹಾಗೂ ಪಾತ್ರಕ್ಕಾಗಿ ನಾನಿ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ. ಪ್ರಿಯಾಂಕಾ ಅರುಳ್ ಮೋಹನ್ ನಾಯಕಿಯಾಗಿದ್ದು, ತಮಿಳು ಸ್ಟಾರ್ ನಟ ಎಸ್ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಜೇಕ್ಸ್ ಬಿಜಾಯ್ ಸಂಗೀತ, ಮುರಳಿ ಜಿ ಛಾಯಾಗ್ರಹಣವಿದೆ.
’ಸೂರ್ಯನ ಶನಿವಾರ’ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ. ತ್ರಿಬಲ್ ಆರ್ ಸೇರಿದಂತೆ ಹಲವರು ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಡಿಡಿವಿ ಎಂಟರ್ ಟೈನರ್ ಬ್ಯಾನರ್ ನಡಿಯಲ್ಲಿ ದಾನಯ್ಯ ಹಾಗೂ ಕಲ್ಯಾಣ್ ದಾಸರಿ ’ಸೂರ್ಯನ ಶನಿವಾರ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಈ ಸಿನಿಮಾರಂಗವೇ ಹಾಗೆ. ಅಂದುಕೊಂಡಿದ್ದು ಆಗೋದು ಕಷ್ಟ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಜನಮನ್ನಣೆ ಪಡೆಯುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಸಿನಿಮಾರಂಗ ಮಾತ್ರ. ಇಲ್ಲೂ ಗೆಲುವು ಸುಲಭವಲ್ಲ. ಹೆಸರು ಸಿಗೋದು ಸಲೀಸಲ್ಲ. ನೂರಾರು ಸಮಸ್ಯೆ ಕಷ್ಟ -ನಷ್ಟಗಳ ನಡುವೆ ಬಣ್ಣದ ಲೋಕದಲ್ಲಿ ಮಿಂದೇಳಲೇಬೇಕು. ಇಲ್ಲಿ ಯಾರು, ಯಾವಾಗ, ಹೇಗೆ ಬೇಕಾದರೂ ಆಗಬಹುದು. ಅಂತಹ ಅನೇಕ ಉದಾಹರಣೆಗಳ ಮಧ್ಯೆ ಇಲ್ಲೊಬ್ಬ ನಿರ್ದೇಶಕ ಇದ್ದಾರೆ. ಸಿನಿಮಾದಿಂದಾಗಿ ಬೀದಿಗೆ ಬಂದಿದ್ದ, ಬದುಕೇ ಸಾಕು ಅಂತ ಸಾಯಲು ಹೊರಟಿದ್ದ ಅವರು ನಿರ್ಧರಿಸಿದ್ದು, ಇಲ್ಲೇ ಇದ್ದು ಗೆಲ್ಲಬೇಕು ಅಂತ ಹಠ ಮಾಡಿದ್ದರ ಹಿನ್ನೆಲೆ, ಈಗ ತೆಲುಗು ಸ್ಟಾರ್ ನಟಿಯನ್ನು ತಮ್ಮ ಸಿನಿಮಾಗೆ ಕರೆತರುವ ಪ್ರಯತ್ನದಲ್ಲಿದ್ದಾರೆ. ಯಾರು ಆ ನಿರ್ದೇಶಕ, ಯಾವ ನಟಿಯ ಹಿಂದೆ ಬಿದ್ದಿದ್ದಾರೆ ಅನ್ನೋ ಸ್ಟೋರಿ ಇದು…
ಆ ನಿರ್ದೇಶಕ ಎದುರಿಸಿದ ಸಮಸ್ಯೆ ಒಂದಾ ಎರಡಾ? ಬಹುಶಃ ಬೇರೆ ಯಾವುದೇ ನಿರ್ದೇಶಕನಿಗೆ ಅಂಥದ್ದೊಂದು ಸಮಸ್ಯೆ ಎದುರಾಗಿದ್ದರೆ, ಅವರ ಗತಿ ಅಷ್ಟೇ…
ಇದು ಕನ್ನಡದ ನಿರ್ದೇಶಕರೊಬ್ಬರ ಇಂಟ್ರೆಸ್ಟಿಂಗ್ ಸ್ಟೋರಿ. ಹೌದು, ಅದು ಬೇರಾರು ಅಲ್ಲ, ಅವರ ಹೆಸರು ನಮ್ ಋಷಿ. ಈ ಹೆಸರು ಕೇಳಿದಾಕ್ಷಣ ನೆನಪಾಗೋದೇ, ‘ಒಳಿತು ಮಾಡು ಮನಸ ನೀ ಇರೋದು ಮೂರು ದಿವಸ…’ ಎಂಬ ಅರ್ಥಪೂರ್ಣ ಸಾಹಿತ್ಯ ಇರುವ ಗೀತೆ. ಇಂಥದ್ದೊಂದು ಗೀತೆ ರಚಿಸಿದ ನಮ್ ಋಷಿ, ಕನ್ನಡ ಸಿನಿಮಾ ರಂಗದಲ್ಲಿ ಒಂದೆರೆಡು ಸಿನಿಮಾ ನಿರ್ದೇಶನ ಮಾಡಿದ್ದರು. ಇವರು ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ನಗುವಿಗಿಂತ ಅಳುವನ್ನು ನುಂಗಿದ್ದೇ ಹೆಚ್ಚು. ಇವೆಲ್ಲದರ ಜೊತೆ ಅವಮಾನಗಳ ಸರಮಾಲೆ ಕೂಡ ಧರಿಸಿದ್ದುಂಟು.
ಸಿನಿಮಾ ಪ್ರೀತಿ ಹೆಚ್ಚಾಗಿ ಗಳಿಸಿದ್ದಕ್ಕಿಂತ ಕಳಕೊಂಡಿದ್ದೇ ಜಾಸ್ತಿ. ಸಿನಿಮಾ ಅಂದಮೇಲೆ ಲಾಸು ಲಾಭ ಕಾಮನ್. ಒಂದರ ಮೇಲೊಂದರ ಹೊಡೆತದಿಂದ ಕುಗ್ಗಿ ಹೋದ ನಿರ್ದೇಶಕ ನಮ್ ಋಷಿ, ಮೌನ ತಾಳಿದ್ದರು. ಅಷ್ಟೇ ಅಲ್ಲ, ದೂರವೇ ಉಳಿದಿದ್ದರು. ಆದರೆ, ಒಳಗಿರುವ ಬರಹಗಾರ ಸುಮ್ಮನಿರಲಿಲ್ಲ. ‘ಮೂಳೆ ಮಾಂಸದ ದೇಹಕೆ, ಚಿನ್ನದ ಲೇಪನ ಏತಕೆ’ ಎಂಬ ಮತ್ತೊಂದು ಅರ್ಥಪೂರ್ಣ ಸಾಹಿತ್ಯ ಗೀಚಿದರು. ಎಲ್ಲೆಡೆ ಈ ಹಾಡು ವೈರಲ್ ಆಯ್ತು. ‘ ಅಪ್ಪು ಮಾಡಿದ ತಪ್ಪೇನು’ ಎಂಬ ಹಾಡೂ ಹೊರಬಂತು. ಇದರ ಜೊತೆಯಲ್ಲೇ ಸದ್ದಿಲ್ಲದೆ ‘ರಾಮ್ ರಹೀಮ್’ ಎಂಬ ಸಿನಿಮಾವೊಂದನ್ನೂ ನಿರ್ದೇಶಿಸಿದ್ದಾರೆ. ಅದೀಗ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ.
ಇಷ್ಟೆಲ್ಲಾ ಮಾಡಿದ ನಮ್ ಋಷಿ, ಸಾವಿಗೆ ಮುಂದಾಗಿದ್ದರು. ಅದಕ್ಕೆ ಕಾರಣ, ‘ಒನ್ ವೇ’ ಎಂಬ ಸಿನಿಮಾ. ಈ ಸಿನಿಮಾದಲ್ಲಿ ಋಷಿ ಕೈ ಸುಟ್ಟುಕೊಂಡರು. ಸಾಲ ಮೈ ಮೇಲೆ ಬಂತು. ಇಂಡಸ್ಟ್ರಿಯಿಂದ ದೂರ ಉಳಿದರು. ಕೈಯಲ್ಲಿ ಸಿನಿಮಾ ಇಲ್ಲ. ಇನ್ನು ಸಾಲದ ಹೊರೆ ಬೇರೆ, ಸಾವಿಗೆ ಶರಣಾಗದೆ ಗತಿ ಇಲ್ಲ ಅಂತ ಸಾಯೋಕೆ ನಿರ್ಧರಿಸಿದರು. ಅದೇ ವೇಳೆ ಹಾಡೊಂದನ್ನು ಬರೆಯುವ ಅವಕಾಶ ಬಂತು. ಆಗ ‘ ಸಾವು ಇದೆ ಅಂತ ಗೊತ್ತು ಮನುಜ ನಿನಗೇ. ಸಾವಿಗಿಂತ ದೊಡ್ಡ ನಷ್ಟ ಇಲ್ಲ ಜಗದೊಳಗೆ. ಪರಿಹಾರ ಹುಟ್ಟಿದ ಮೇಲೆ ಸಮಸ್ಯೆ ಹುಟ್ಟಿದ್ದು, ಸಮಸ್ಯೆಗೆ ಅಂಜಿ ಇಲ್ಲಿ ಯಾರು ಸಾಯಬಾರದು…’ ಎಂಬ ಸಾಲು ಬರೆದರು. ಹಾಡು ಸೊಗಸಾಗಿ ಮೂಡಿಬಂತು. ಆಗ ನಮ್ ಋಷಿ ಸಾಯುವ ನಿರ್ಧಾರ ಬದಲಿಸಿದರು. ಮತ್ತೆ ಸಿನಿಮಾ ಮಾಡಲು ಹೊರಟರು. ಆಗ ನಿರ್ಧರಿಸಿದ್ದೇ ಹೊಸ ಸಿನಿಮಾ ನಿರ್ದೇಶನ ಮಾಡೋಕೆ. ಸದ್ದಿಲ್ಲದೆ ಆ ಸಿನಿಮಾ ಮಾಡಿ ಇದೀಗ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ.
ಆ ಸಿನಿಮಾಗೆ ‘ಟೈಮ್’ ಎಂದು ನಾಮಕರಣ ಮಾಡಿದ್ದಾರೆ. ಈ ಸಿನಿಮಾಗೆ ತೆಲುಗಿನ ಸ್ಟಾರ್ ನಟಿ ತಮನ್ನಾ ಅವರನ್ನು ಕರೆತರುವ ಪ್ರಯತ್ನದಲ್ಲಿದ್ದಾರೆ ಅನ್ನೋದೇ ವಿಶೇಷ. ಈಗಾಗಲೇ ತಮನ್ನಾ ಅವರ ಮ್ಯಾನೇಜರ್ ಜೊತೆ ಚರ್ಚೆ ಕೂಡ ಮಾಡಿದ್ದಾರಂತೆ. ಈ ಮೊದಲು ಕನ್ನಡದ ನಟಿಯೊಬ್ಬರನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಲು ಹಲವಾರು ಸಲ ಫೋನ್ ಮಾಡಿದರೂ ಅವರು ಇವರ ಫೋನ್ ತೆಗೆದಿಲ್ಲ. ಅದೊಂದೇ ಕಾರಣಕ್ಕೆ ನಮ್ ಋಷಿ, ತಮನ್ನಾ ಮೊರೆ ಹೋಗಲು ನಿರ್ಧರಿಸಿ, ಅವರ ಮ್ಯಾನೇಜರ್ ಬಳಿ ಒಂದು ಸುತ್ತು ಮಾತಾಡಿದ್ದಾರೆ. ಅವರ ಸಂಭಾವನೆ ಹೆಚ್ಚು ಅಂತ ತಿಳಿದರೂ ಕೂಡ ಅವರನ್ನೇ ಟೈಮ್ ಸಿನಿಮಾಗೆ ಕರೆ ತರುವ ಹಠ ಮಾಡಿದ್ದಾರೆ.
ಇಂಡಸ್ಟ್ರಿಯಿಂದ ಮಾಯವಾಗೇ ಬಿಟ್ಟರು ಅಂದುಕೊಂಡರೆ ನಾನಿಲ್ಲೇ ಇದೀನಿ ಅಂತ ತೋರಿಸಲು ಈ ಬಾರಿ ದೊಡ್ಡಮಟ್ಟದಲ್ಲೇ ಸದ್ದು ಮಾಡೋಕೆ ಅಣಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಿರ್ದೇಶಕರುಗಳೇ ಅವರು ಬರ್ತಾರೆ, ಇವರು ಬರ್ತಾರೆ ಅಂತ ಸುದ್ದಿ ಮಾಡಿದ್ದು ಗೊತ್ತೇ ಇದೆ. ಆಮೇಲೆ ಅವರ್ಯಾರು ಬರದೆ ಸುಮ್ಮನಾದ ಉದಾಹರಣೆಗಳೂ ಸಾಕಷ್ಠಿದೆ. ಈಗ ಋಷಿ ತೆಲುಗು ಸ್ಟಾರ್ ನಟಿ ಕರೆತರುವ ಉತ್ಸಾಹದಲ್ಲಿದ್ದಾರೆ. ಅದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತೋ ಗೊತ್ತಿಲ್ಲ. ಆದರೆ, ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ?ಇಷ್ಟು ವರ್ಷಗಳ ಋಷಿ ತಪಸ್ಸು ತಮನ್ನಾ ಮೂಲಕವಾದರೂ ಈಡೇರಲಿ.
ಅದೇನೆ ಇರಲಿ, ಈ ಟೈಮ್ ಕಥೆ ಬಗ್ಗೆ ಹೇಳುವ ಅವರು, ಅದೊಂದು ಕ್ರೈಮ್ ಥ್ರಿಲ್ಲರ್ ಸ್ಟೋರಿ. ತಮನ್ನಾ ಅವರು ನಟಿಸಲು ಒಪ್ಪಿಕೊಂಡರೆ, ಅವರದು ಡಿಸಿಪಿ ಪಾತ್ರವಂತೆ. ನೈಜ ಘಟನೆಗಳ ಎಳೆ ಇಟ್ಟುಕೊಂಡು ಮಾಡುತ್ತಿರುವ ಸಿನಿಮಾದಲ್ಲಿ ಹಲವು ಕಾಡುವ ಅಂಶಗಳಿರಲಿವೆ ಎಂಬುದು ನಮ್ ಋಷಿ ಮಾತು.
ಅಂದಹಾಗೆ, ಈ ಸಿನಿಮಾಗೆ ನಮ್ ಋಷಿ ಅವರದೇ ಕಥೆ, ಚಿತ್ರಕಥೆ, ಸಂಭಾಷಣೆ ಇದೆ. ಎಸ್.ಟಿ. ಸೋಮಶೇಖರ್, ಹನುಮಂತು, ನಾರಬಂಡ, ಪಾರ್ಥಸಾರಥಿ, ರಂಗನಾಥ್ ಅವರ ನಿರ್ಮಾಣವಿದೆ. ಶಂಕರ್ ಕ್ಯಾಮೆರಾ ಹಿಡಿದರೆ, ಶ್ರೀ ಗುರು ಅವರ ಸಂಗೀತವಿದೆ. ಕುಮಾರ್ ಸಂಕಲನ ಮಾಡಿದರೆ, ಥ್ರಿಲ್ಲರ್ ಮಂಜು ಅವರ ಸಾಹಸವಿದೆ. ಈ ಸಿನಿಮಾಗೆ ಕ್ರಿಯೇಟಿವ್ ಹೆಡ್ ಆಗಿ ಜಿ. ವಸಂತ್ ಕುಮಾರ್ ಕೆಲಸ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದೆ.
27 ಫ್ರೇಮ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಬಿ ನಾಗಬಾ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿರುವ “ಗರುಡ ಪುರಾಣ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ನವೆಂಬರ್ 3 ರಂದು ಚಿತ್ರ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು. ಟೀಸರ್ ಕೂಡ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ.
ಜನಪ್ರಿಯ “ಕಾಂತಾರ” ಸೇರಿದಂತೆ ಅನೇಕ ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯನಿರ್ವಹಿಸಿರುವ ಮಂಜುನಾಥ್ ಬಿ ನಾಗಬಾ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.
ಚಿತ್ರದ ಒಂದು ಭಾಗಕ್ಕೆ ಗರುಡ ಪುರಾಣದ ಕೆಲವು ಅಂಶಗಳು ಹೊಂದಿಕೆಯಾಗುತ್ತದೆ. ಹಾಗಾಗಿ “ಗರುಡ ಪುರಾಣ” ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ “ಗರುಡ ಪುರಾಣ” ಚಿತ್ರದ ನಾಯಕನಾಗೂ ಮಂಜುನಾಥ್ ಬಿ ನಾಗಬಾ ನಟಿಸಿದ್ದಾರೆ, ದಿಶಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. “ಭಜರಂಗಿ” ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಪುನೀತ್ ಆರ್ಯ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ರಾಕೇಶ್ ಆಚಾರ್ಯ ಸಂಗೀತ ನೀಡಿದ್ದಾರೆ. ಸುನೀಲ್ ನರಸಿಂಹಮೂರ್ತಿ “ಗರುಡ ಪುರಾಣ” ಚಿತ್ರದ ಛಾಯಾಗ್ರಾಹಕರು.
ಗುರುತೇಜ್ ಶೆಟ್ಟಿ ನಿರ್ದೇಶನದ “ರಾನಿ” ಚಿತ್ರದ ನಾಯಕ ಕಿರಣ್ ರಾಜ್ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಸುದ್ದಿಯಾಗಿದ್ದಾರೆ. ಈ ಹಿಂದೆ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ ರೋನಿ ಚಿತ್ರದ ಟೈಟಲ್ ಬಿಡುಗಡೆ ಮಾಡಿ ದಾಖಲೆ ಮಾಡಿದ್ದರು. ಈಗ ಹಿಮಾಚಲ ಪ್ರದೇಶಕ್ಕೆ ಹೋಗಿ 10 ದಿನ ಟ್ರೈನಿಂಗ್ ಪಡೆದು 8000 ಅಡಿ ಎತ್ತರದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಚಿತ್ರರಂಗದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿದ ಮೊದಲ ನಟ ಎನ್ನುವ ದಾಖಲೆ ತಮ್ಮದಾಗಿಸಿಕೊಂದ್ದಿದ್ದಾರೆ.
ಈ ವಿಷಯ ಸಾಮಾಜಿಕ ಜಾಲ ತಾಣದಲ್ಲಿ ಬಾರಿ ಸುದ್ದು ಮಾಡುತ್ತಿದೆ. ಈ ಸಾಹಸ ತರಬೇತಿಗಳು ನನ್ನ ಮುಂದಿನ ಚಿತ್ರದ ತಯಾರಿ ಎನ್ನುತಿರುವ ಕಿರಣ್ ರಾಜ್, ಮುಂದಿನ ಚಿತ್ರ ಯಾವುದು? ಎನ್ನುವ ಸುಳಿವು ಬಿಟ್ಟುಕೊಟ್ಟಿಲ್ಲ.
” ಪರಿಂದ”, “1942 ಎ ಲವ್ ಸ್ಟೋರಿ”, “ಥ್ರೀ ಇಡಿಯೆಟ್ಸ್” ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳ ನಿರ್ದೇಶಕ ವಿಧು ವಿನೋದ್ ಚೋಪ್ರಾ ನಿರ್ಮಾಣ ಹಾಗೂ ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ “12th ಫೇಲ್” ಅಕ್ಟೋಬರ್ 27 ರಂದು ಹಿಂದಿ, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಈ ಚಿತ್ರದ ವಿತರಣೆ ಹಕ್ಕನ್ನು ಹೆಸರಾಂತ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಪಡೆದುಕೊಂಡಿದೆ.
12th ಫೇಲ್ ಚಿತ್ರ ಅನುರಾಗ್ ಪಾಠಕ್ ಅವರ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಜೀವನವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
ಚಿಕ್ಕವಯಸ್ಸಿನಿಂದ ವಿಧು ವಿನೋದ್ ಚೋಪ್ರಾ ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವನು ನಾನು, ಎಂದು ಮಾತು ಆರಂಭಿಸಿದ ಕೆ.ಆರ್.ಜಿ ಸಂಸ್ಥೆಯ ಕಾರ್ತಿಕ್ ಗೌಡ ಅವರು, ಈ ಚಿತ್ರವನ್ನು ಕರ್ನಾಟಕದಾದ್ಯಂತ ನಾವು ಸುಮಾರು 100 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
ರೋಹಿತ್ ಪದಕಿ ಅವರ ಸಾರಥ್ಯದಲ್ಲಿ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ. ಕನ್ನಡದ ಹಾಡುಗಳನ್ನು ಕೇಳಿ ನಿರ್ದೇಶಕರು ಸಂತೋಷ ಪಟ್ಟಿದ್ದಾರೆ. ನಮ್ಮ ಮುಂದಿನ ಚಿತ್ರಗಳನ್ನು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ವಿಧು ವಿನೋದ್ ಚೋಪ್ರಾ ಅವರಿಗೆ ಧನ್ಯವಾದ. ಸದಭಿರುಚಿಯ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಉತ್ತಮ ಸಂದೇಶವುಳ್ಳ ಚಿತ್ರವನ್ನು ವಿತರಣೆ ಮಾಡುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಕೆ.ಆರ್.ಜಿ ಸಂಸ್ಥೆಯ ಯೋಗಿ ಜಿ ರಾಜ್ ತಿಳಿಸಿದರು.
ನಾನು ಈವರೆಗೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ವಿಧು ವಿನೋದ್ ಚೋಪ್ರಾ ಅವರು ಕರೆ ಮಾಡಿ ನೀವು ಈ ಚಿತ್ರದಲ್ಲಿ ನಟಿಸಬೇಕು ಎಂದಾಗ ತುಂಬಾ ಸಂತೋಷವಾಯಿತು. ಅಸಾಧ್ಯವನ್ನು ಸಾಧ್ಯವಾಗಿಸಿದ ಐ.ಪಿ.ಎಸ್ ಮನೋಜ್ ಕುಮಾರ್ ಶರ್ಮ ಅವರ ಜೀವನ್ನಾಧಾರಿತ ಈ ಚಿತ್ರದಲ್ಲಿ ಅಭಿನಯಿಸಿರುವುದು ನಿಜಕ್ಕೂ ಹೆಮ್ಮೆ ಎನ್ನುತ್ತಾರೆ ನಾಯಕ ವಿಕ್ರಾಂತ್ ಮಾಸ್ಸೆ.
ಮಾಡಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮೇಧಾ ಶಂಕರ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಉತ್ತಮ ಸಂದೇಶವಿರುವ ಈ ಚಿತ್ರದಲ್ಲಿ ನಟಿಸಿರುವುದು ಸಂತೋಷವಾಗಿದೆ ಎಂದು ಮೇಧಾ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅದೊಂದು ಕಾಲವಿತ್ತು..ಕಾದಂಬರಿ ಆಧಾರಿತ ಸಿನಿಮಾ ಎನ್ನುವಾಗಲೇ ಆ ಚಿತ್ರಕ್ಕೊಂದು ತೂಕ ಬಂದು ಬಿಡುತ್ತಿತ್ತು . ಅಷ್ಟೇ ಅಲ್ಲ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಂದೇಶಗಳಿರುತ್ತಿದ್ದವಲ್ಲದೆ, ಜೀವನಕ್ಕೆ ಹತ್ತಿರವಾಗಿದ್ದವು. ಈ ಮೂಲಕ ಓದುವ ಅಭ್ಯಾಸವಿಲ್ಲದವನನ್ನೂ ಕಾದಂಬರಿಗಳು ಮುಟ್ಟುತ್ತಿದ್ದವು. ಹೊಡೆಬಡಿ, ಪ್ರೀತಿಗೀತಿ ಇತ್ಯಾದಿ ವಿಚಾರಗಳು ಬಂದ ಮೇಲೆ ಕತೆಯೇ ಬೇಡ ಎನ್ನುವಂತಾಗಿದೆ. ಇಂತಹ ಕಾಲ ಘಟ್ಟದಲ್ಲಿ ಅಲ್ಲೊಂದು ಇಲ್ಲೊಂದು ಕಾದಂಬರಿ ಆಧಾರಿತ ಸಿನಿಮಾಗಳ ಬರ್ತಿವೆ. ಅಂತಹದ್ದೇ ಒಂದು ಪ್ರಯತ್ನ ಮಗ್ಗಿ ಪುಸ್ತಕ.
ಎಚ್.ಸಿ.ಹರೀಶ್ ಅವರ ಅವನಿ ಕಾದಂಬರಿ ಆಧರಿಸಿ ಮಗ್ಗಿ ಪುಸ್ತಕ ಎಂಬ ಸಿನಿಮಾವನ್ನು ದೃಶ್ಯ ರೂಪಕ್ಕಿಳಿಸಲಾಗಿದೆ. ದಸರಾ ಮಹೋತ್ಸವದ ಅಂಗವಾಗಿ ಈ ಚಿತ್ರದ ಫಸ್ಟ್ ಲುಕ್ ನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿನ್ನಾಸ್ವಾಮಿ ಫಿಲ್ಮಂ ಸಂಸ್ಥೆಯಡಿ ಚಿನ್ನಾಸ್ವಾಮಿ ಯತಿರಾಜ್ ತಮ್ಮ ಸ್ನೇಹಿತರ ಜೊತೆಗೂಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಅವನಿ ಕಾದಂಬರಿಕಾರರು ಆಗಿರುವ ಎಚ್ ಸಿ ಹರೀಶ್ ಅವರೇ ಮಗ್ಗಿ ಪುಸ್ತಕ ಸಿನಿಮಾಗೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಮಗ್ಗಿ ಪುಸ್ತಕ ಸಿನಿಮಾದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ದಡ್ಡ ಪ್ರವೀಣ ಖ್ಯಾತಿಯ ರಂಜನ್ ಸಜ್ಜು, ಶ್ರೀರಕ್ಷಾ,ಹಿರಿಯ ಕಲಾವಿದರಾದ ಮೈಸೂರು ರಮಾನಂದ, ರಂಗಾಯಣ ರಘು, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ಬಿರಾದಾರ, ಮಿಮಿಕ್ರಿ ಗೋಪಿ, ಚಂದ್ರಪ್ರಭಾ, ವಾಣಿ, ರಾನ್ವಿ ಶೇಖರ್, ಕೃಷ್ಣ ಮಹೇಶ್, ವರದ, ಶ್ರೀನಿವಾಸ್ ಗೌಡ, ಮೂಗು ಸುರೇಶ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಮೈಸೂರು, ಮಂಗಳೂರು, ಎಚ್ ಡಿ ಕೋಟೆ, ನಂಜನಗೂಡು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ನಂದಕುಮಾರ್ ಛಾಯಾಗ್ರಹಣ, ಯಶಸ್ ನಾಚಪ್ಪ ಸಂಗೀತ, ಶರಣ್ ಕುಮಾರ್ ಗಜೇಂದ್ರಗಡ, ಗುರುನಾಥ ಬೋರಗಿ ಸಾಹಿತ್ಯ, ಶಿವಕುಮಾರ್ ಎಂ.ಸಂಕಲನ, ರಸೂಲ್ ನದಾಫ್ ಕಲಾ ನಿರ್ದೇಶನ ಮಗ್ಗಿ ಪುಸ್ತಕ ಸಿನಿಮಾಕ್ಕಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
ಡಾಲಿ ಧನಂಜಯ್ ನಿರ್ಮಾಣದಲ್ಲಿ ತಯಾರಾಗಿರುವ ಗ್ರಾಮೀಣ ಸೊಗಡಿನ ಕಥೆ ಹೊಂದಿರುವ ‘ಟಗರು ಪಲ್ಯ’ ಸವಿಯೋದಿಕ್ಕೆ ದಿನಗಣನೆಯಷ್ಟೇ ಬಾಕಿ ಉಳಿದಿದೆ. ಇದೇ ಶುಕ್ರವಾರದಂದು ರಾಜ್ಯಾದ್ಯಂತ ಚಿತ್ರ ದಿಬ್ಬಣ ಹೊರಡಲಿದೆ. ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಟಗರು ಪಲ್ಯ ಸಿನಿಮಾ ಪ್ರಮೋಷನಲ್ ಹಾಡು ಬಿಡುಗಡೆಯಾಗಿದೆ.
ಸಂಬಂಜ ಅನ್ನೋದು ದೊಡ್ದು ಕನಾ ಎಂಬ ಹಾಡು ಡಾಲಿ ಪಿಕ್ಚರ್ಸ್ ನಲ್ಲಿ ಅನಾವರಣಗೊಂಡಿದೆ. ಸಂಬಂಧಗಳ ಮೌಲ್ಯ ತಿಳಿಸಿಕೊಡುವ ಹಾಡಿಗೆ ಧನಂಜಯ್ ಸಾಹಿತ್ಯ ಬರೆದಿದ್ದು, ಜೋಗಿ ಪ್ರೇಮ್ ಧ್ವನಿಯಾಗಿದ್ದು, ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಈ ಹಾಡಿನ ವಿಶೇಷ ಏನಂದರೇ ತೆರೆಹಿಂದೆ ಹಾಗೂ ತೆರೆಮೇಲೆ ಕಲಾವಿದರು, ತಂತ್ರಜ್ಞನರು ಕಾಣಿಸಿಕೊಂಡಿದ್ದಾರೆ.
ಟಗರು ಪಲ್ಯ ಚಿತ್ರವನ್ನು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿ ನಟ ಧನಂಜಯ್ ನಿರ್ಮಿಸಿದ್ದಾರೆ. ಉಮೇಶ್ ಕೃಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅಮೃತಾ ತಂದೆ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾಯಿ ಪಾತ್ರದಲ್ಲಿ ತಾರಾ ಅನುರಾಧಾ ನಟಿಸಿದ್ದಾರೆ.
ಇಕ್ಕಟ್ ಖ್ಯಾತಿಯ ನಾಗಭೂಷಣ್ ನಾಯಕನಾಗಿ ಅಭಿನಯಿಸಿದ್ದು, ಮೈಸೂರು ಆರ್ಕೆಸ್ಟ್ರಾ ಖ್ಯಾತಿಯ ಪೂರ್ಣಚಂದ್ರ, ವೈಜನಾಥ್ ಬಿರಾದಾರ್, ಚಿತ್ರಾ ಶೆಣೈ, ಶ್ರೀನಾಥ್ ವಸಿಷ್ಠ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದು ಅವರೂ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಟಗರು ಪಲ್ಯ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದು, ಸಿನಿಮಾ ನೋಡುವುದಾಗಿಯೂ ತಿಳಿಸಿದ್ದಾರೆ. ಇದೇ 27ಕ್ಕೆ ಟಗರು ಪಲ್ಯ ಥಿಯೇಟರ್ ನಲ್ಲಿ ದರ್ಶನ ಕೊಡಲಿದೆ.
ಖಳನಟ ರವಿಶಂಕರ್ ಪುತ್ರ ಈಗ ಹೀರೋ ಆಗುತ್ತಿದ್ದಾರೆ. ಅವರ ಮಗನ ಸಿನಿಮಾಗೆ ‘ಸುಬ್ರಹ್ಮಣ್ಯ’ ಎಂದು ಹೆಸರಿಡಲಾಗಿದ ಮಗನ ಸಿನಿಮಾಗೆ ಅಪ್ಪನೇ ಡೈರೆಕ್ಟರ್ ಎಂಬುದು ವಿಶೇಷ.
ಆರ್ಮುಗ ರವಿಶಂಕರ್ ಆ್ಯಕ್ಟರ್ ಮಾತ್ರವಲ್ಲ ಡೈರೆಕ್ಟರ್, ರೈಟರ್, ಸಿಂಗರ್, ವಾಯ್ಸ್ ಓವರ್ ಆರ್ಟಿಸ್ಟ್ ಕೂಡ ಹೌದು. ಸಿನಿಕರಿಯರ್ ಆರಂಭದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು. ಅನಂತರ ಒಂದೊಂದೆ ಮೆಟ್ಟಿಲುಗಳನ್ನೇರುತ್ತಾ ನಟನಾಗುವ ತಮ್ಮ ಕನಸನ್ನ ಈಡೇರಿಸಿಕೊಂಡರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ `ಕೆಂಪೇಗೌಡ’ ಸಿನಿಮಾದಲ್ಲಿ ಆಮುರ್ಗಂ ಪಾತ್ರ ಪೋಷಣೆ ಮಾಡಿ ಜನಪ್ರಿಯತೆ ಗಳಿಸಿದರು. ಅಲ್ಲಿವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಕೂಡ ಬಿಗ್ ಬ್ರೇಕ್ ಸಿಕ್ಕಿರಲಿಲ್ಲ. ಆದರೆ, ಕೆಂಪೇಗೌಡ ಸಿನಿಮಾದಿಂದ ರವಿಶಂಕರ್ ಕರಿಯರ್ರೇ ಬದಲಾಯ್ತು. ನೇಮು-ಫೇಮು-ಕ್ರೇಜು-ಕಾಸು ಹೀಗೆ ಎಲ್ಲವೂ ಕೂಡ ಒಟ್ಟೊಟ್ಟಿಗೆ ದಕ್ಕಿತು, ಬೇಡಿಕೆ ಸೃಷ್ಟಿಯಾಯ್ತು. ಈಗಲೂ ಆ ಬೇಡಿಕೆ ತಗ್ಗಿಲ್ಲ, ಸದ್ಯಕ್ಕೆ ತಗ್ಗೋದು ಇಲ್ಲ ಅನ್ನೋದಕ್ಕೆ ಅವರ ಕೈಯಲ್ಲಿರುವ ಸಿನಿಮಾಗಳೇ ಸಾಕ್ಷಿ
ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಆರ್ಮುಗ ರವಿಶಂಕರ್ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀಗೆ ಮೊದಲ ಭಾರಿ ಆ್ಯಕ್ಷನ್ ಕಟ್ ಹೇಳಿದ್ದರು. ದುರ್ಗಿ ಸಿನಿಮಾ ಡೈರೆಕ್ಷನ್ ಮಾಡುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಅವತ್ತಿಗೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ತೆಲುಗಿಗೆ ರಿಮೇಕ್ ಕೂಡ ಆಗಿತ್ತು. ರವಿಶಂಕರ್ ಗೆ ಈ ಚಿತ್ರದಿಂದ ಒಳ್ಳೆ ಹೆಸರು ಬಂದಿತ್ತು. ಆದರೆ, ಅದ್ಯಾಕೋ ಏನೋ ಗೊತ್ತಿಲ್ಲ ದುರ್ಗಿ ನಂತರ ಡೈರೆಕ್ಷನ್ ಕಡೆ ಮುಖ ಮಾಡಿರಲಿಲ್ಲ. ಇದೀಗ, 20 ವರ್ಷಗಳು ಉರುಳಿದ್ಮೇಲೆ ಮತ್ತೆ ಡೈರೆಕ್ಟರ್ ಹ್ಯಾಟ್ ತೊಡಲು ರೆಡಿಯಾಗಿದ್ದಾರೆ. ಅದು ಅವರ ಮಗನ ಸಿನಿಮಾಗೆ ಅನ್ನೋದು ವಿಶೇಷ.
ಆರ್ಮುಗ ರವಿಶಂಕರ್ ಅವರಿಗೆ ಅದ್ವೆ ಎಂಬ ಮಗನಿದ್ದಾರೆ. ವಿದೇಶದಲ್ಲಿ ನಟನಾ ತರಬೇತಿಯನ್ನು ಪಡೆದುಕೊಂಡಿದ್ದಾರೆ. ವಿದ್ಯಾಭ್ಯಾಸವೆಲ್ಲ ಮುಗಿಸಿ ವಾಪಾಸ್ ಹುಟ್ಟೂರಿಗೆ ಮರಳಿರುವ ಮಗನನ್ನು ಬಣ್ಣದ ಜಗತ್ತಿಗೆ ಪರಿಚಯಿಸಿದ್ದಾರೆ. ತಾತನಂತೆ, ಅಪ್ಪ-ಚಿಕ್ಕಪ್ಪರಂತೆ ಕಲೆ ರಕ್ತಗತವಾಗಿ ಬಂದಿರುವುದರಿಂದ ಮುಖಕ್ಕೆ ಬಣ್ಣ ಹಚ್ಚಲು ಅದ್ವೆ ಕೂಡ ಓಕೆ ಹೇಳಿದ್ದು, ಪುತ್ರನ ಚೊಚ್ಚಲ ಚಿತ್ರಕ್ಕೆ ತಾವೇ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ ನಟ ಕಂ ನಿರ್ದೇಶಕ ರವಿಶಂಕರ್.
ಇಂದು ಆಯುಧಪೂಜೆ ಅಂಗವಾಗಿ ಅದ್ವೆ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ಸುಬ್ರಹ್ಮಣ್ಯ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಪೋಸ್ಟರ್ ನಲ್ಲಿ ದೈವಿಕ ಅಂಶಗಳು ಹೈಲೆಟ್ ಆಗಿವೆ. ಪೋಸ್ಟರ್ ನಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಮತ್ತು ಅವರ ವಾಹನ ನವಿಲನ್ನು ತೋರಿಸಲಾಗಿದೆ. ನಾಯಕ ಅದ್ವೆ ಒಂದು ಕೈಯಲ್ಲಿ ಜ್ವಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ನಿಗೂಢವಾಗಿ ಕಾಣುವ ಪುಸ್ತಕವನ್ನು ಇಟ್ಟುಕೊಂಡಿದ್ದಾರೆ.
ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ರಾಜ್ ತೋಟ ಕ್ಯಾಮೆರಾ ಹಿಡಿದಿದ್ದು, ಕೆಜಿಎಫ್ ಸಲಾರ್ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ, ವಿಜಯ್ ಎಂ ಕುಮಾರ್ ಸಂಕಲನ, ಮಾಸ್ತಿ ಸಂಭಾಷಣೆ ಸುಬ್ರಹ್ಮಣ್ಯ ಸಿನಿಮಾಕ್ಕಿದೆ. ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್ ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಬಂಡವಾಳ ಹಾಕಿದ್ದು, ಪ್ರವೀಣಾ ಕಡಿಯಾಲ ಹಾಗೂ ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸುಬ್ರಹ್ಮಣ್ಯ ಸಿನಿಮಾ ತಯಾರಾಗುತ್ತಿದ್ದು, ಡಿಸೆಂಬರ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.
ಕನ್ನಡದ ಖ್ಯಾತ ಲೇಖಕ ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಇಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗಳ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ‘ಪರ್ವ’ ಕೃತಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ, ‘ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್ಗಳಲ್ಲಿ ಬರುತ್ತದೆ’ ಎಂದು ಹೇಳಿದ್ದಾರೆ.
ಪಲ್ಲವಿ ಜೋಷಿ ಮಾತನಾಡಿ, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಈ ವಿಷಯವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಭೈರಪ್ಪ ಸರ್ ಗುರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿರುವುದು ಖುಷಿ ಕೊಟ್ಟಿದೆ. ಪರ್ವ ಸಿನಿಮಾವನ್ನು 3 ಭಾಗದಲ್ಲಿ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಕಾಶ್ ಇಲ್ಲದೇ ಇದು ಆಗುತ್ತಿರಲಿಲ್ಲ’ ಎಂದರು.
ಎಸ್.ಎಲ್. ಭೈರಪ್ಪ ಮಾತನಾಡಿ, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡಲು ಬಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಅನುಭವವಿದೆ. ಇವರು ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇಂಗ್ಲೀಷ್ ನಲ್ಲಿ ಸಿನಿಮಾ ಮಾಡಬೇಕು. ನಿಜವಾದ ಮಹಾಭಾರತ ಏನೋ ಅನ್ನೋದನ್ನು ತೋರಿಸಬಹುದು. ಸಿನಿಮಾ ಮಾಡಲು ನನ್ನ ಒಪ್ಪಿಗೆ ಇದೆ. ಹಾರೈಕೆ ಇದೆ’ ಎಂದರು.
ಪರ್ವ ಕಾದಂಬರಿಯ ವಿಷಯ ಏನ್ನು ಅನ್ನುವುದು ಓದಿದವರಿಗೆ ಗೊತ್ತೇ ಇದೆ. ಮಹಾಭಾರತವನ್ನ ಆಯಾ ಪಾತ್ರಗಳ ಮೂಲಕ ಮತ್ತೊಮ್ಮೆ ಹೇಳಿರೋದೇ ಈ ಪರ್ವ ಕಾದಂಬರಿಯ ವಿಶೇಷ. ಅಂತಹ ಈ ಒಂದು ಕಾದಂಬರಿಯನ್ನ ಕ್ಲಾಸಿಕ್ ಕೃತಿ ಅಂತಲೇ ಪರಿಗಣಿಸಲಾಗುತ್ತದೆ. ಇದೀಗ ಈ ಪರ್ವ ಕಾದಂಬರಿಗೆ ವಿವೇಕ್ ಅಗ್ನಿಹೋತ್ರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.