ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಎರಡನೆ ಚಿತ್ರಕ್ಕೆ ಮಧೋಳ್ ಎಂಬ ಶೀರ್ಷಿಕೆ ಇಡಲಾಗಿದೆ. ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ಕಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್, ಕಂಪ್ಲೀಟ್ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಮುಧೋಳ್ ಎಂಬ ಟೈಟಲ್ ಕೊಟ್ಟಿದ್ದೇ ವಿ. ರವಿಚಂದ್ರನ್. ತ್ರಿವಿಕ್ರಮ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಅಡಿ ಇಟ್ಟಿದ ವಿಕ್ಕಿ ಈ ಬಾರಿ ರಾ ಹಾಗೂ ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ಬರ್ಉತ್ತಿದ್ದಾರೆ.
ಮುಧೋಳ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ವಿಕ್ರಮ್ ರವಿಚಂದ್ರನ್, ತ್ರಿವಿಕ್ರಮ ರಿಲೀಸ್ ಆಗಿದ್ದು ಜೂನ್ 24, ಅದು ಆದ್ಮೇಲೆ ಏಪ್ರಿಲ್ 26 ಅಂದ್ರೆ ಇವತ್ತು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡೋಣಾ ಅಂತಾ. ವಿಕೆಆರ್ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೆ. ನೆಕ್ಸ್ಟ್ ನಿಮ್ಮ ಫೇವರೇಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತದೆ. ಇದರ ಮಧ್ಯೆ ಕನ್ನಡ ಬರುತ್ತದೆ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನದಲ್ಲಿ ಗೆಲ್ಲುವುದು ಮುಖ್ಯವಲ್ಲ. ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದೆ. ನನ್ನ ಎರಡನೇ ಹೆಜ್ಜ. ನಿಮ್ಮ ಪ್ರೀತಿ ಹಾರೈಕೆ ಹೀಗೆ ಇರಲಿ ಎಂದರು.
ನಿರ್ದೇಶಕ ಕಾರ್ತಿಕ್ ರಾಜನ್ ಮಾತನಾಡಿ, ಮುಧೋಳ್ ಗಾಗಿ ತುಂಬಾ ಕಡೆ ಹುಡುಗಾಡಿದೆವು. ನಮ್ಮ ಮ್ಯಾನೇಜರ್ ಹತ್ತಿರ ಹೇಳಿದೆ. ತ್ಯಾಗರಾಜ್ ಎಂಬುವವರು ಆ ಶ್ವಾನ ಟ್ರೈನ್ ಮಾಡಿದ್ದಾರೆ. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಈಶ್ವರಿ ಕಂಬೈನ್ಸ್ ಅನ್ನೋದು ಲೆಗೆಸಿ. ಹೀರೋಯಿನ್ಸ್ ಗಳು ರವಿಚಂದ್ರನ್ ಸರ್ ಜೊತೆ ಕೆಲಸ ಮಾಡ್ಬೇಕು ಎಂದುಕೊಳ್ತಿದ್ರು. ಅದೇ ರೀತಿ ರೈಟರ್ಸ್ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಎಂದುಕೊಳ್ತಿದ್ರು. ಈಶ್ವರಿ ಕಂಬೈನ್ಸ್ ಅನ್ನೋದು ಪರಂಪರೆ. ಆ ಸಂಸ್ಥೆಯ ಜೊತೆ ವಿಕ್ರಮ್ ಸರ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದರು.
ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಹೆಜ್ಜೆ. ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆಕ್ಷನ್ ಚಿತ್ರಕ್ಕಿದೆ.
ತಂಡವ್ ಸ್ಟುಡಿಯೋಸ್ ಬ್ಯಾನರ್ ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡ್ತಿರುವ ಮಧೋಳ್ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀರ್ಘದಲ್ಲಿಯೇ ಮಾಹಿತಿ ನೀಡಲಿದೆ.
ಚಿತ್ರ : ರಾಘವೇಂದ್ರ ಸ್ಟೋರ್ಸ್ ನಿರ್ದೇಶಕ : ಸಂತೋಷ್ ಆನಂದರಾಮ್ ನಿರ್ಮಾಣ: ಹೊಂಬಾಳೆ ಫಿಲಂಸ್ ತಾರಾಗಣ: ಜಗ್ಗೇಶ್, ಶ್ವೇತ ಶ್ರೀವಾಸ್ತವ್, ಹೆಚ್ ಜಿ ದತ್ತಾತ್ರೇಯ, ರವಿಶಂಕರ್ ಗೌಡ, ಮಿತ್ರ, ಅಚ್ಯುತ,ರಾಘು ಶಿವಮೊಗ್ಗ ಇತರರು.
‘ಜೀವನ ಅಂದ್ರೆ ಜೊತೆಗೊಂದು ಜಡೆ ಇರಬೇಕು’…
ಈ ಡೈಲಾಗ್ ಬರುವ ಹೊತ್ತಿಗೆ ಅರ್ಧ ವಯಸ್ಸು ಕಳೆದಿರೋ ಚಿತ್ರದ ನಾಯಕ ಹಯವದನ, ಶತಾಯ ಗತಾಯ ಮದುವೆ ಆಗಲೇಬೇಕೆಂಬ ಹಠಕ್ಕೆ ಬಿದ್ದಿರುತ್ತಾನೆ. ಅವನು ಮದುವೆ ಆಗಬೇಕೆಂದು ಓಡಾಡುವ ಪ್ರಸಂಗವೇ ನೋಡುಗರಲ್ಲಿ ನಗೆ ಬುಗ್ಗೆ ಎಬ್ಬಿಸುವ ಮೂಲಕ ಆರಂಭದಿಂದ ಅಂತ್ಯದವರೆಗೂ ಅತ್ತಿತ್ತ ಅಲುಗಾಡದಂತೆ ನೋಡಿಸಿಕೊಂಡು ಹೋಗುತ್ತೆ. ಈ ಚಿತ್ರದ ವಿಶೇಷ ಅಂದರೆ ಗಟ್ಟಿ ಕಥೆ. ಅದಕ್ಕೆ ತಕ್ಕ ಚಿತ್ರಕಥೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಪಾತ್ರಗಳ ಜೋಡಣೆ ಮತ್ತು ನಿರೂಪಣೆ.
ಹೇಳಿ ಕೇಳಿ ಇದು ಜಗ್ಗೇಶ್ ಚಿತ್ರ. ಅವರ ಎಂದಿನ ಶೈಲಿಯ ಸಿನಿಮಾಗಳಿಗಿಂತಲೂ ಭಿನ್ನವಾಗಿದೆ. ಜಗ್ಗೇಶ್ ಅಂದರೇನೆ ನಗು. ಅದಕ್ಕಿಲ್ಲಿ ಯಾವುದೇ ಕೊರತೆ ಇಲ್ಲ. ಸಿನಿಮಾದುದ್ದಕ್ಕೂ ಅವರು ತಮ್ಮ ಪಾತ್ರವನ್ನು ನಿರ್ವಹಿಸಿರುವ ರೀತಿಯೇ ನೋಡುಗರನ್ನು ಗಟ್ಟಿಯಾಗಿ ಕೂರಿಸುತ್ತೆ.
ಶುರುವಿನಿಂದಲೇ ಕಚಗುಳಿ ಇಡುವ ಚಿತ್ರದಲ್ಲಿ ಒಂದಷ್ಟು ಏರಿಳಿತಗಳಿವೆ. ಅಲ್ಲಲ್ಲಿ ಸಣ್ಣ ಸಣ್ಣ ತಗ್ಗುದಿನ್ನೆಗಳೂ ಇವೆ. ಕೆಲ ಕಡೆ ಕಂಟಿನ್ಯುಟಿ ಮಿಸ್ ಆಗಿದೆ. ಅದರ ಹೊರತಾಗಿಯೂ ಸಿನಿಮಾ ನಗಾಡಿಸಿಕೊಂಡು ಹೋಗುತ್ತೆ. ಉಪ್ಪು ಹುಳಿ ಖಾರ ಹದವಾಗಿ ಬೆರೆತ ಸ್ವಾದಿಷ್ಟ ಭೋಜನದಷ್ಟೇ ಇಲ್ಲಿ ಕಾಮಿಡಿ ವರ್ಕೌಟ್ ಆಗಿದೆ. ಜಗ್ಗೇಶ್ ಅವರ ಮಾತಿನ ಲಹರಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿರುವುದೇ ಚಿತ್ರದ ಪ್ಲಸ್.
L
ಒಂದು ಚಿತ್ರಕ್ಕೆ ಬೇಕಿರೋದು ಕಥೆ ಅದಿಲ್ಲಿ ಸರಾಗ. ಸ್ವಾದಿಷ್ಟ ಭರಿತ ಅಡುಗೆಯ ಘಮಲಿನಷ್ಟೇ ಪರದೆ ಮೇಲೆ ಕಾಣುವ ಪ್ರತಿ ಪಾತ್ರಗಳೂ ಸಹ ನಗುವಿನ ಅಲೆಗೆ ಕಾರಣವಾಗುತ್ತವೆ. ನಗುವಿನೊಂದಿಗೆ ಶುರುವಾಗುವ ಸಿನಿಮಾ ಮೊದಲರ್ಧ ಮುಗಿಯೋದೇ ಗೊತ್ತಾಗಲ್ಲ. ದ್ವಿತಿಯಾರ್ಧ ಮತ್ತೊಂದು ಮಜಲಿನತ್ತ ಸಾಗುವ ಸಿನಿಮಾ, ಗಂಭೀರವಾಗಿಸುತ್ತಲೇ ಅಂತ್ಯವಾಗುತ್ತೆ. ಇಲ್ಲೊಂದು ಸೂಕ್ಷ್ಮ ಅಂಶ ನೋಡುಗರನ್ನ ಕೊಂಚ ಕಾಡದೇ ಇರದು. ಆ ಕಾಡುವ ಕಥೆ ಏನೆಂಬ ಕುತೂಹಲ ಇದ್ದರೆ, ಒಂದೊಮ್ಮೆ ರಾಘವೇಂದ್ರ ಸ್ಟೋರ್ಸ್ ರುಚಿ ಸವಿಯಬಹುದು.
ಸ್ಟೋರ್ಸ್ ಒಳಗಿನ ಪ್ಲಸ್
ಒಳ್ಳೆಯ ಕಥಾಹಂದರ, ನಿರೂಪಣೆ, ಪಾತ್ರ ಪೋಷಣೆ, ಸಂಗೀತ, ಸಾಹಿತ್ಯ, ಛಾಯಾಗ್ರಹಣ, ಸಂಕಲನ, ಕಾಸ್ಟ್ಯೂಮ್ಸ್, ಕಚಗುಳಿ ಇಡುವ ಪಂಚ್ ಡೈಲಾಗ್ಸ್.
ಸ್ಟೋರ್ಸ್ ಒಳಗಿನ ಮೈನಸ್
ಅಲ್ಲಲ್ಲಿ ಮಿಸ್ಸಾದ ಕಂಟಿನ್ಯುಟಿ, ಕೆಲವು ಕಡೆ ಬೇಡದ ದೃಶ್ಯ, ಅನಗತ್ಯ ಮಾತು, ಆಗಾಗ ಜಾಳೆನಿಸೋ ಹಿನ್ನೆಲೆ ಸಂಗೀತ.
ಸ್ಟೋರ್ಸ್ ಕಥೆ ಏನು? ನಲವತ್ತರ ಆಸುಪಾಸಿನ ನಾಯಕ ಹಯವದನನ ಮದುವೆಯ ಒದ್ದಾಟ. ತನ್ನ ತಮ್ಮನಿಗೆ ಮದ್ವೆ ಮಾಡೋ ಅಪ್ಪ ಹಿರಿಯ ಮಗ ಹಯವದನಿಗೊಂದು ಹೆಣ್ಣು ನೋಡಲಾಗದ ನಿರುತ್ಸಾಹಿ. ಹೀಗಿರುವಾಗ ಒಂದು ಹೆಣ್ಣು ಹುಡುಕಿ ಮದ್ವೆ ಮಾಡಬೇಕೆಂಬ ಹಯವದನ ಅಪ್ಪ ಹತ್ತಾರು ಹುಡುಗಿಯನ್ನು ನೋಡಿತ್ತಾನೆ. ಒಂದಲ್ಲ ಒಂದು ಕಾರಣಕ್ಕೆ ಅವೆಲ್ಲವೂ ಕ್ಯಾನ್ಸಲ್. ಆ ಹೆಣ್ಣು ನೋಡುವ ಸನ್ನಿವೇಶಗಳೇ ಸಿನಿಮಾದ ಹೈಲೆಟ್.
ತನ್ನ ಜೊತೆಗಿದ್ದವರಿಗೆಲ್ಲ ಮದ್ವೆ ಆಗುತ್ತೆ ತನಗೇಕೆ ಹೀಗೆ ಎಂಬ ಬೇಸರದಲ್ಲಿರುವಾಗಲೇ ಒಂದು ಹೆಣ್ಣು ಓಕೆ ಆಗುತ್ತೆ. ಅದಾದ ಮೇಲೆ ಅಲ್ಲೊಂದು ನಗೆಬುಗ್ಗೆ, ಲೈಸೆನ್ಸ್ ಸಿಕ್ಕರೂ ಓಡಿಸೋಕೆ ಗಾಡಿ ಸಿಗಲ್ಲ ಎಂಬ ಇಕ್ಕಟ್ಟಿನ ಪರಿಸ್ಥಿತಿಯ ಸನ್ನಿವೇಶವೇ ಹೈಲೆಟ್. ಆಮೇಲೊಂದು ಟ್ವಿಸ್ಟು ಮತ್ತು ಟೆಸ್ಟು. ಒಟ್ಟಾರೆ ಮದ್ವೆ ಪ್ರಸಂಗದೊಳು ಹತ್ತಾರು ಪರೀಕ್ಷೆಗಳು ಎದುರಾಗುತ್ತವೆ. ಕೊನೆಗೆ ಹಯವದನ ಪಾಸಾಗುತ್ತಾನೋ ಇಲ್ಲವೋ ಅನ್ನೋದು ಕಥೆ. ನಿರ್ದೇಶಕರ ಸಿನಿಮಾಗಳಲ್ಲಿ ಕಾಮನ್ ಸ್ಟೋರಿಲೈನ್ ಇದ್ದೇ ಇರುತ್ತೆ. ಅದು ಇಲ್ಲೂ ಮುಂದುವರೆದಿದೆ. ಏನು ಎಂಬುದಕ್ಕೆ ಒಮ್ಮೆ ಸಿನಿಮಾ ನೋಡಿ.
ಯಾರು ಹೇಗೆ? ಜಗ್ಗೇಶ್ ತಮ್ಮ ಸಹಜ ಅಭಿನಯ ದ ಮೂಲಕ ನೋಡುಗರ ಮನ ತಟ್ಟುತ್ತಾರೆ, ನಗಿಸುತ್ತಾರೆ ಕೂಡ. ಅಲ್ಲಲ್ಲಿ ಭಾವುಕತೆಗೂ ಕಾರಣರಾಗುತ್ತಾರೆ. ಶ್ವೇತಾ ಶ್ರೀನಿವಾಸ್ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಕೋಗಿಲೆ ಪಾತ್ರದಲ್ಲಿ ಹಾಸ್ಯ ಮಿತ್ರ ಇಲ್ಲಿ ಭರಪೂರ ರಂಜನೆ ನೀಡಿದ್ದಾರೆ. ಮೂಗನಾಗಿ ನೋಡುಗರ ಗಮನ ಸೆಳೆಯುತ್ತಾರೆ. ಹೀರೋ ಜತೆಗಾರನಾಗಿ ಮಿತ್ರ ಇಲ್ಲಿ ಹೈಲೆಟ್. ಉಳಿದಂತೆ ಮ್ಯಾಟ್ರು ಮಧು ಪಾತ್ರದಲ್ಲಿ ರವಿಶಂಕರ್ ಗೌಡ ಕೂಡ ಕಥೆಯ ಸಾಗುವಿಕೆಗೆ ಸಾಕ್ಷಿಯಾಗುತ್ತಾರೆ. ದತ್ತಣ್ಣ ತಂದೆಯಾಗಿ ಅಐ ಎನಿಸಿಕೊಂಡಿದ್ದಾರೆ.
ಆಫ್ ಸ್ಕ್ರೀನ್ ಕೆಲ್ಸ ಹೇಗೆ?
ಅಜನೀಶ್ ಲೋಕನಾಥ್ ಸಂಗೀತಕ್ಕಿನ್ನೂ ಧಮ್ ಇರಬೇಕಿತ್ತು. ಸಂತೋಷ್ ಮತ್ತು ಗೌಸ್ ಪೀರ್ ಸಾಹಿತ್ಯ ಸನ್ನಿವೇಶಕ್ಕೆ ಪೂರಕವಾಗಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣದಲ್ಲಿ ಸ್ಟೋರ್ಸ್ ಅಂದ ಹೆಚ್ಚಿದೆ.
ಕೊನೆಮಾತು: ಇಲ್ಲಿ ಅಪ್ಪ ಮಗನ ಬಾಂಧವ್ಯ, ಗಂಡ ಹೆಂಡತಿಯ ಸಾಂಗತ್ಯ, ರಕ್ತ ಸಂಬಂಧದ ಆಚೆಗೂ ಇರಬೇಕಾದ ಆಪ್ತತೆ ಆಕರ್ಷಣೆ.
ಕನ್ನಡದಲ್ಲೀಗ ಹೊಸ ಬಗೆಯ ಶೀರ್ಷಿಕೆ ಸಿನಿಮಾಗಳು ಬಹಳಷ್ಟು ಸದ್ದು ಮಾಡುತ್ತಿವೆ. ಈ ಪಟ್ಟಿಗೀಗ ಹೊಸ ಸೇರ್ಪಡೆ ಕ್ಲಾಂತ. ಈ ಹಿಂದೆ ರಂಗನ್ ಸ್ಟೈಲ್, ದಗಲು ಬಾಜಿಲು ಸೇರಿದಂತೆ ಬೇರೆ ಬಗೆಯ ಜಾನರ್ ಚಿತ್ರ ನಿರ್ದೇಶಿರುವ ವೈಭವ್ ಪ್ರಶಾಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಂದು ಕ್ಲಾಂತ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿತ್ತು. ಈ ಬಗ್ಗೆ ಚಿತ್ರತಂಡ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿತು.
ನಿರ್ದೇಶಕ ವೈಭವ್ ಪ್ರಶಾಂತ್ ಮಾತನಾಡಿ, ಇದು ನನ್ನ ನಾಲ್ಕನೇ ಸಿನಿಮಾ. ಯುವಜನತೆಗೆ ಒಳ್ಳೆ ಸಂದೇಶ ಕೊಡುವ ಚಿತ್ರವಾಗಿದ್ದು, ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ತಪ್ಪು ದಾರಿ ಇಡಬೇಡಿ ಎಂಬ ಕಂಟೆಂಟ್ ಸುತ್ತ ಸಿನಿಮಾ ಮಾಡಲಾಗುತ್ತಿದೆ. ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ ಎಂದು ತಿಳಿಸಿದರು.
ಸಂಗೀತ ಭಟ್, ನನಗೆ ಈ ಸಿನಿಮಾ ತುಂಬಾ ಸ್ಪೆಷಲ್. ತುಂಬಾ ವರ್ಷದಿಂದ ಸಿನಿಮಾದಿಂದ ದೂರ ಇದ್ದೆ. ನಾನು ಕಂಬ್ಯಾಕ್ ಮಾಡಿದಾಗ ಸೈನ್ ಮಾಡಿದ ಮೊದಲ ಚಿತ್ರವಿದು. ಟೀನೇಜ್ ಹುಡುಗಿ ದಾಟಿ ಈಗ ತಾನೇ ಕೆಲಸ ಮಾಡುವ ಪಾತ್ರ ನನ್ನದು. ಹೆಚ್ಚಾಗಿ ಕಾಡಿನಲ್ಲಿ ಶೂಟ್ ಮಾಡಲಾಗಿದ್ದು, ಒಂದೊಳ್ಳೆ ಅನುಭವ. ಇಲ್ಲಿ ನನ್ನ ಪಾತ್ರಕ್ಕೆ ಬೇಕಾದ ಫಿಟ್ನೆಸ್, ಎಕ್ಸ್ ಪ್ರೆಸ್ ಬದಲಾಯಿಸಿದ್ದೇನೆ. ಫೈಟ್ ಸೀಕ್ವೆನ್ಸ್ ಮಾಡಿದ್ದು, ಖುಷಿಕೊಟ್ಟಿದೆ ಎಂದರು.
ನಾಯಕ ವಿಘ್ನೇಶ್ ಮಾತನಾಡಿ ತುಂಬಾ ಖುಷಿಯಾಗುತ್ತಿದೆ. ಕನ್ನಡದಲ್ಲಿ ಇದು ಮೊದಲ ಸಿನೆಮಾ . ತುಳುವಿನಲ್ಲಿ ಪ್ರಶಾಂತ್ ಸರ್ ಜೊತೆ ಸಿನಿಮಾ ಮಾಡಿದ್ದೇನೆ. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರಕ್ಕೂ ನಿಮ್ಮ ಬೆಂಬಲ ಇರಲಿ ಎಂದರು.
ಕ್ಲಾಂತ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎಂ ವಿಘ್ನೇಶ್ ನಾಯಕನಾಗಿ, ಸಂಗೀತ ಭಟ್ ನಾಯಕಿಯಾಗಿ ನಟಿಸುತ್ತಿದ್ದು, ಉಳಿದಂತೆ ಶೋಭ್ ರಾಜ್, ವೀಣಾ ಸಂಗೀತ , ಕಾಮಿಡಿ ಕಿಲಾಡಿಯ ದೀಪಿಕಾ, ಪ್ರವೀಣ್ ಜೈನ್, ಯುವ ಹಾಗೂ ಸ್ವಪ್ನ, ತಿಮ್ಮಪ್ಪ ಕುಲಾಲ್ ನಟಿಸುತ್ತಿದ್ದಾರೆ. ಎಸ್ ಪಿ ಚಂದ್ರಕಾಂತ್ ಸಂಗೀತ, ಪಿಆರ್ ಸೌಂದರ್ ರಾಜ್ ಸಂಕಲನ, ಮೋಹನ್ ಲೋಕನಾಥ್ ಛಾಯಾಗ್ರಹಣ ಚಿತ್ರಕ್ಕಿದೆ.
ಸಂತೋಷ್ ನಾಯ್ಕ್, ವರಾಹ ರೂಪಂ ಖ್ಯಾತಿಯ ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಸಾಹಿತ್ಯ ಹಾಡುಗಳಿಗಿದ್ದು, ವಿನೋದ್ ಸ್ಟಂಟ್, ಮಹೇಶ್ ದೇವ್ ಸಂಭಾಷಣೆ ಸಿನಿಮಾಕ್ಕಿದೆ. ಎರಡು ಹಾಡುಗಳಿಗೆ ರಘು ಅವರ ನೃತ್ಯ ಸಂಯೋಜನೆ ಇದೆ . ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ನಡಿ ಉದಯ್ ಅಮ್ಮಣ್ಣಾಯ ಬಂಡವಾಳ ಹೂಡಿದ್ದು, ಅರುಣ್ ಗೌಡ, ಪ್ರದೀಪ್ ಗೌಡ ಸಹ ನಿರ್ಮಾಪಕರಾಗಿ ಆಗಿ ಕೆಲಸ ನಿರ್ವಹಿಸಿದ್ದಾರೆ.
ಸಾಮಾನ್ಯವಾಗಿ ಫಸ್ಟ್ ಲುಕ್ ಪೋಸ್ಟರ್ ರಾಜಕಾರಣಿಗಳು, ಹೀರೋಗಳಿಂದ ಬಿಡುಗಡೆ ಮಾಡಿಸೋದು ಕಾಮನ್. ಆದರೆ ಜೂಮ್ ಕಾಲ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವಿಭಿನ್ನವಾಗಿ ಬಿಡುಗಡೆ ಮಾಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಫಸ್ಟ್ ಲುಕ್ ಪೋಸ್ಟರ್ ಮೊದಲ ಬಾರಿಗೆ ವಿಮಾನದಲ್ಲಿ ಬಿಡುಗಡೆ ಮಾಡಿರುವ ಖ್ಯಾತಿ ಜೂಮ್ ಕಾಲ್ ಚಿತ್ರಕ್ಕೆ ಸೇರುತ್ತದೆ.
ಭೂಮಿಯಿಂದ 37000 ಅಡಿ ಎತ್ತರದಲ್ಲಿ ಮೋಡದ ಮೇಲೆ ನೀಲಿ ಆಕಾಶದಲ್ಲಿ ಚಲಿಸುತ್ತಿರುವ ವಿಮಾನದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಕ್ಷಣ ಅದ್ಭುತವಾಗಿತ್ತು ಎಂದು ಅನುಭವ ಹಂಚಿಕೊಂಡರು ನಿರ್ದೇಶಕ ಮಹೇಶ್. ಜೂಮ್ ಕಾಲ್ ಚಿತ್ರ ಕನ್ನಡದ ಮೊದಲ ಕಂಪ್ಯೂಟರ್ ಸ್ಕ್ರೀನ್ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ. ಕಂಪ್ಯೂಟರ್ ಸ್ಕ್ರೀನ್ ಹಾರರ್ ಜಾನರ್ ಸಿನಿಮಾಗಳು ಹಾಲಿವುಡ್ನಲ್ಲಿ ಬಂದಿದೆ. ಆದರೆ ಕನ್ನಡದಲ್ಲಿ ಜೂಮ್ ಕಾಲ್ ಮೊದಲ ಸಿನಿಮಾವಾಗಲಿದೆ.
ಹೊಸ ಫಾರ್ಮೆಟ್ನಲ್ಲಿ ಸಿನಿಮಾ ನೋಡಲಿರುವ ಪ್ರೇಕ್ಷಕರಿಗೆ ಖಂಡಿತವಾಗಿಯೂ ವಿಭಿನ್ನ ಅನುಭವ ಸಿಗಲಿದೆ ಎಂದು ಮಾಹಿತಿ ನೀಡಿದರು ನಿರ್ದೇಶಕ ಮಹೇಶ್. ಜೂಮ್ ಕಾಲ್ ಚಿತ್ರವು ಮೇಕಿಂಗ್ ಮತ್ತೆ ವಿಭಿನ್ನ ಪ್ರಚಾರದಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸದ್ಯಕ್ಕೆ ಜೂಮ್ ಕಾಲ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದೆ. ಜೂಮ್ ಕಾಲ್ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಜೊತೆಗೆ ಶ್ರೀವಾರಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣವನ್ನು ಸಹ ಮಹೇಶ್ ಹೆಚ್.ಎಂ ಮಾಡಿದ್ದಾರೆ. ಎಸ್. ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನವಿರುವ ಈ ಚಿತ್ರಕ್ಕೆ ವಿಜಯರಾಜ್ ಸಂಗೀತ ನೀಡಿದ್ದಾರೆ. ರೇಣುಕಾ, ಲಕ್ಷ್ಮೀ ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು ಜೂಮ್ ಕಾಲ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಶ್ರೀಲಂಕಾದ ಫಿಲಂ ಕರ್ಪೋರೇಶನ್, ಅಲ್ಲಿನ ಪ್ರವಾಸೋದ್ಯಮ ಇಲಾಖೆ, ಏಷ್ಯನ್ ಮೀಡಿಯಂ ಕಲ್ಚರಲ್ ಅಸೊಸಿಯೇಶನ್ ಮತ್ತು ಶ್ರೀಲಂಕಾದ ಭಾರತೀಯ ರಾಯಭಾರಿ ಕಛೇರಿ ಇವುಗಳ ಸಹಯೋಗದಲ್ಲಿ ಏಪ್ರಿಲ್ 27 ರಿಂದ ಮೇ 3 ರವರೆಗೆ ಶ್ರೀಲಂಕಾದಲ್ಲಿ ಅದ್ದೂರಿಯಾಗಿ ನಾಗತಿಹಳ್ಳಿ ಚಲನ ಚಿತ್ರೋತ್ಸವ, ಚಲನಚಿತ್ರ ಕಾರ್ಯಾಗಾರ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿವೆ.
ನಾಗತಿಹಳ್ಳಿ ಚಂದ್ರಶೇಖರ ಅವರ ಪ್ರಶಸ್ತಿ ಪುರಸ್ಕೃತ ಹಾಗೂ ಮಹತ್ವದ ಚಿತ್ರಗಳಾದ ಅಮೆರಿಕಾ! ಅಮೆರಿಕಾ!!, ಮಾತಾಡ್ ಮಾತಾಡ್ ಮಲ್ಲಿಗೆ, ಕೋಟ್ರೇಶಿ ಕನಸು, ಇಷ್ಟಕಾಮ್ಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕಥಾ ನಿರೂಪಣೆ, ಚಿತ್ರಕಥೆ ರಚನೆ, ಛಾಯಾಗ್ರಹಣ, ಸಂಕಲನ ಮುಂತಾದ ವಿಷಯಗಳ ಬಗ್ಗೆ ಶ್ರೀಲಂಕಾದ ಸಿನಿಮಾಸಕ್ತ ವಿದ್ಯಾರ್ಥಿಗಳೊಂದಿಗೆ ಕಾರ್ಯಾಗಾರವನ್ನು ನಾಗತಿಹಳ್ಳಿ ಚಂದ್ರಶೇಖರ ಅವರು ನಡೆಸಿಕೊಡಲಿದ್ದಾರೆ.
ಈ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಅವರೊಟ್ಟಿಗೆ ನಟ ನಿರೂಪ್ ಭಂಡಾರಿ, ನಟಿ ಕಾವ್ಯಾಶೆಟ್ಟಿ, ಛಾಯಗ್ರಾಹಕ ಎಸ್. ಕೆ. ರಾವ್, ನಿರ್ಮಾಪಕ ವೈ.ಎನ್.ಶಂಕರೇಗೌಡ ಮತ್ತು ಮಾಧ್ಯಮ ಕ್ಷೇತ್ರದ ಮದನ್ಗೌಡ, ಜಿ.ಎನ್,ಮೋಹನ್ ಭಾಗವಹಿಸಲಿದ್ದಾರೆ.
ನಟ ದರ್ಶನ್ ಕೊನೆಗೂ ಮಾಧ್ಯಮಕ್ಕೆ ತಲೆಬಾಗಿದ್ಧಾರಾ? ದರ್ಶನ್ ತಮ್ಮ ಮನದಾಳದ ಮಾತುಗಳನ್ನು ಪತ್ರದ ಮೂಲಕ ಹಂಚಿಕೊಂಡಿದ್ದಾರಾ? ಹೀಗೊಂದು ಸುದ್ದಿ ಹೊರಬಿದ್ದಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ?
ಕನ್ನಡ ಚಿತ್ರರಂಗದಲ್ಲಿ ಮಹಾನ್ ನಟರೆಲ್ಲರೂ ಛಾಪು ಮೂಡಿಸಿ ಹೋಗಿದ್ದಾರೆ.ಅಂತಹ ನಟರಲ್ಲೊ ತೂಗುದೀಪ ಶ್ರೀನಿವಾಸ್ ಕೂಡ ಒಬ್ಬರು. ಅವರ ಕುಡಿಯಾದ ನಾನು ಮಾಧ್ಯಮಕ್ಕೆ ನೋವಾಗುವಂತೆ ಮಾತಾಡಿದ್ದೇನೆ ಹಾಗಾಗಿ ವಿಷಾಧವಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಅದೇನೆ ಇರಲಿ ರಾತ್ರಿಯಿಡೀ ಸೋಶಿಯಲ್ ಮೀಡಿಯಾದಲ್ಲಿ ಈ ಪತ್ರ ಹರಿದಾಡಿ ಚರ್ಚೆಗೆ ಗ್ರಾಸವಾಗಿದ್ದಂತೂ ನಿಜ.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳು ನಿರ್ಮಾಣವಾಗಿ ತೆರೆಗೆ ಬರುತ್ತಿವೆ. ಅಂತಹ ಮತ್ತೊಂದು ಚಿತ್ರವೇ ಕಾಶಿಕಾ. ಕನ್ನಡದಲ್ಲಿ ಮೊದಲ ಬಾರಿಗೆ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿಕೊಂಡು ತಯಾರಾಗಿರುವ ಸಾರಿ (ಕರ್ಮ ರಿಟರ್ನ್ಸ್) ಚಿತ್ರದ ನಿರ್ಮಾಪಕ ನವೀನ್ ಕುಮಾರ್ ಅವರ ಮತ್ತೊಂದು ಅದ್ದೂರಿ ವೆಚ್ಚದ ಹಾಗೂ ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿರುವ, ಬಿಗ್ ಸ್ಟಾರ್ ಕಾಸ್ಟ್ ಒಳಗೊಂಡ ಚಿತ್ರ ಇದಾಗಲಿದೆ. ಸಾರಿ ನಂತರ ಕಿಸ್ ಇಂಟರ್ ನ್ಯಾಷನಲ್ (ಕೆನಡಾ) ಸಂಸ್ಥೆಯಿಂದ ಹೊರಬರುತ್ತಿರುವ ಮೂರನೆಯ ಚಿತ್ರವಿದು. ಸಾರಿ ಚಿತ್ರವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಮತ್ತೊಂದು ಚಿತ್ರವನ್ನು ಅನೌನ್ಸ್ ಮಾಡಿದೆ. ಈ ಹಿಂದೆ ಸಿದ್ದಿಸೀರೆ ಮತ್ತು ಸಾರಿ ಯಂಥ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿದ ಬ್ರಹ್ಮ ಆವರ ನಿರ್ದೇಶನದ ಮೂರನೇ ಚಿತ್ರ ಇದಾಗಿದೆ.
ಇದೊಂದು ಮಹಿಳಾ ಪ್ರದಾನ ಆಕ್ಷನ್ ಚಿತ್ರವಾಗಿದ್ದು, ನಾಯಕಿ ಕಾಶಿಯಿಂದ ಕರ್ನಾಟಕಕ್ಕೆ ಬರುತ್ತಾಳೆ. ಆಕೆ ಇಲ್ಲಿಗೆ ಏಕೆ ಬಂದಳು, ಯಾರನ್ನು ಹುಡುಕಿಕೊಂಡು ಬಂದಳು ಅನ್ನೋದೇ ಚಿತ್ರದ ಕಾನ್ಸೆಪ್ಟ್. ನಾಯಕಿಯ ಪಾತ್ರಕ್ಕೆ ಹೆಸರಾಂತ ನಟಿಯನ್ನು ಸಂಪರ್ಕಿಸಲಾಗಿದ್ದು ಮುಂದಿನ ದಿನಗಳಲ್ಲಿ ಅವರ ಹೆಸರನ್ನು ರಿವೀಲ್ ಮಾಡಲಾಗುವುದು.
ಇನ್ನು ಈ ಚಿತ್ರದ ಸಹ ನಿರ್ಮಾಪಕರಾಗಿ ಶ್ರೀವಿಜಯ್ ಹಾಗೂ ಜೈ ಕ್ರಿಪ್ಲಾನಿ ಕೈಜೋಡಿಸಿದ್ದಾರೆ. ರಾಜೀವ್ ಗಣೇಸನ್ ಅವರು ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಲಿದ್ದಾರೆ. ಸದ್ಯ ಚಿತ್ರದ ಶೀರ್ಷಿಕೆಯನ್ನಷ್ಟೇ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ನಿರ್ದೇಶಕ ಬ್ರಹ್ಮ ಅವರ ಎಲ್ಲಾ ಚಿತ್ರಗಳು ಮಹಿಳಾ ಪ್ರಧಾನ ಚಿತ್ರಗಳೇ. ಅವರ ಮೊದಲ ಸಿನಿಮಾ ಸಿದ್ದಿಸೀರೆ ಹಾಲಿವುಡ್ ನಲ್ಲಿ 9ನೇ ಸ್ಥಾನ ಹಾಗೂ ಜಪಾನ್ ಫಿಲಂ ಫೆಸ್ಟಿವಲ್ ನಲ್ಲಿ 3 ನೇ ಸ್ಥಾನದ ಪ್ರಶಸ್ತಿ ಪಡೆದಿತ್ತು.
ಸಾರಿ ಚಿತ್ರವೂ ಕೂಡ ತಾಂತ್ರಿಕತೆಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ಕಾಶಿಕಾ ಚಿತ್ರದ ತಾರಾಬಳಗದಲ್ಲಿ ಎಲ್ಲಾ ಭಾಷೆಯ ಖ್ಯಾತ ನಟನಟಿಯರೇ ಇರಲಿದ್ದಾರೆ, ಹಂತ ಹಂತವಾಗಿ ಚಿತ್ರದ ಬಗ್ಗೆ, ತಾರಾಗಣದ ಹಾಗೂ ಇತರ ತಂತ್ರಜ್ಞರ ಬಗ್ಗೆ ಮಾಹಿತಿ ತಿಳಿಸಲಾಗುವುದು ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರಾದ ಅಫ್ಜಲ್ ಅವರು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಸಿನಿಮಾ ನಾಗರಹಾವು. ಈ ಚಿತ್ರದ ರಾಮಾಚಾರಿ ಹಾಗೂ ಮಾರ್ಗರೇಟ್ ಪಾತ್ರಗಳು ಇಂದಿಗೂ ಪ್ರೇಕ್ಷಕರ ಅಚ್ಚುಮೆಚ್ಚು. ಇದೇ ಚಿತ್ರದ ಪಾತ್ರಗಳನ್ನು ಇಟ್ಕೊಂಡು ಬಂದ ರಾಮಾಚಾರಿ ಮತ್ತು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಇದೇ ನಾಗರಹಾವು ಸಿನಿಮಾದ ಪಾತ್ರಗಳ ಸ್ಫೂರ್ತಿ ಪಡೆದು ಹೊಸ ಸಿನಿಮಾವೊಂದು ಬರ್ತಿದೆ. ಆ ಚಿತ್ರಕ್ಕೆ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಎಂದು ಟೈಟಲ್ ಇಡಲಾಗಿದೆ.
ಯುವ ಪ್ರತಿಭೆ ಅಭಿಲಾಶ್ ನಾಯಕನಾಗಿ ಹಾಗೂ ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸುತ್ತಿರುವ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಚಿತ್ರದ ಮುಹೂರ್ತ ಸಮಾರಂಭವಿಂದು ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ನೆರವೇರಿತು. ನಟರಾಕ್ಷಸ ಡಾಲಿ ಧನಂಜಯ್ ಹೊಸ ತಂಡಕ್ಕೆ ಶುಭ ಹಾರೈಸಿದರು.
ಡಾಲಿ ಧನಂಜಯ್ ಮಾತನಾಡಿ,ಅಭಿ ಬಡವ ರಾಸ್ಕಲ್, ಹೊಯ್ಸಳದಲ್ಲಿ ಸಣ್ಣ ಪಾತ್ರ ಮಾಡಿದ್ದಾನೆ. ಆತ ಅಭಿಮಾನಿಯಾಗಿ ಪರಿಚಯ. ಈಗ ಹೀರೋ ಆಗುತ್ತಿದ್ದಾನೆ. ಸುಮಾರು ವರ್ಷಗಳ ಪ್ರಯತ್ನ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ನಿರ್ದೇಶಕ ಗಿರಿಧರ್ ಕುಂಬಾರ್ ಮಾತನಾಡಿ, ಈ ಚಿತ್ರದ ಮೂಲಕ ಇವತ್ತಿನ ಸಮಾಜಕ್ಕೆ ಬೇಕಿರುವ ಸಂದೇಶ ಕೊಡುತ್ತೇವೆ. ನಾಗರಹಾವು ಸಿನಿಮಾದ ಪಾತ್ರಗಳು ಲೆಜೆಂಡ್ ಪಾತ್ರಗಳು. ಅವುಗಳನ್ನು ನಾವು ಮುಟ್ಟಲಾಗುವುದಿಲ್ಲ. ಒಬ್ಬ ಸಾಮಾನ್ಯ ಹುಡುಗನಿಗೆ ಶ್ರೀಮಂತ ಹುಡುಗಿ ಸಿಕ್ಕಾಗ ಏನಾಗುತ್ತದೆ ಅನ್ನೋದೆ ಕಥೆ. ಮೇ 15ರಂದು ಶೂಟಿಂಗ್ ಶುರುವಾಗಲಿದೆ ಎಂದರು.
ನಿರ್ಮಾಪಕರಾದ ಹರೀಶ್ ಮಾತಾನಾಡಿ, ಬಹಳ ಸಂತೋಷ ಆಗಿದೆ. ಧನಂಜಯ್ ಅಣ್ಣ ಬಂದಿರುವುದು ಖುಷಿಕೊಟ್ಟಿದೆ. ಅವರು ಯುವಕರಿಗೆ ಎಷ್ಟು ಪ್ರೇರಣೆ ಕೊಡುತ್ತಾರೆ ಎಂದರೆ ನಿಜ ಬೆಲೆ ಕಟ್ಟಲು ಆಗುವುದಿಲ್ಲ. ಎಲ್ಲವೂ ಹೊಸಮುಖ. ಧನಂಜಯ್ ಅಣ್ಣ, ಸುರೇಶ್ ಅಣ್ಣ, ಅಜಯ್ ಅಣ್ಣ ಮಾರ್ಗದರ್ಶನದಲ್ಲಿ ಹೋಗುತ್ತೇವೆ. ಒಳ್ಳೆ ಯುವಕರಿದ್ದಾರೆ. ಅವರ ಭವಿಷ್ಯ ಈ ಚಿತ್ರದಲ್ಲಿದೆ. ಈ ಸಿನಿಮಾ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.
ನಟ ಅಭಿಲಾಷ್, ತುಂಬಾ ಎಮೋಷನಲ್ ಮೂಮೆಂಟ್. ಇವತ್ತು ಕಷ್ಟಪಟ್ಟು ಇಲ್ಲಿ ಕೂತಿದ್ದೇನೆ. ಇದಕ್ಕೆ ಮೂಲ ಕಾರಣ ನಿರ್ಮಾಪಕರು. ನನ್ನ ಒದ್ದಾಟಗಳನ್ನು ಬಹಳ ಹತ್ತಿರದಿದ್ದ ನೋಡಿದ್ದಾರೆ. ಇವರೇ ನನ್ನ ಅನ್ನದಾತರು. ಧನಂಜಯ್ ಅಣ್ಣ ಹೇಳಿಕೊಟ್ಟ ಮಾರ್ಗದರ್ಶನಲ್ಲಿ ನಾನು ನಡೆಯುತ್ತಿದ್ದೇವೆ. ಈಗ ಅವರು ನನ್ನ ಚಿತ್ರಕ್ಕೆ ಹಾರೈಸಿರುವುದು ಖುಷಿಕೊಟ್ಟಿದೆ ಎಂದರು.
ಸೋನಲ್ ಮೊಂಥೆರೋ, ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
ರಂಗಭೂಮಿ ಹಿನ್ನೆಲೆ ಹೊಂದಿರುವ ನಟ ಅಭಿಲಾಶ್ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ಮೂಲಕ ಹೀರೋ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಕೆಜಿಎಫ್’, ‘ಲವ್ ಮಾಕ್ಟೇಲ್’, ‘ಬಡವ ರಾಸ್ಕಲ್’, ‘ಗುರುದೇವ್ ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಅಭಿಲಾಶ್ ಗುರುತಿಸಿಕೊಂಡಿದ್ದಾರೆ. ನಾಗರಹಾವು ಸಿನಿಮಾದಲ್ಲಿ ಪಾತ್ರಗಳನ್ನು ಹೋಲುವ ರೀತಿಯ ಹೆಸರುಗಳನ್ನೇ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾದಲ್ಲಿಯೂ ಇಡಲಾಗಿದೆ. ಅಭಿಲಾಶ್ ರಾಮಾಚಾರಿ ಅಲಿಯಾಸ್ ರಾಮು ಎಂಬ ಪಾತ್ರ ಮಾಡಲಿದ್ದಾರೆ. ನಟಿ ಸೋನಲ್ ಮೊಂಥೆರೋ ಮೀರಾ ರಾಘವ್ ರಾಮ್ ಅಲಿಯಾಸ್ ಮ್ಯಾಗಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಯಶ್ ಶೆಟ್ಟಿ ಜಯಂತ್ ಅಲಿಯಾಸ್ ಜಲೀಲಾಗಿ ಕಾಣಿಸಿಕೊಳ್ಳಲಿದ್ದಾರೆ. ಅನುಭವಿ ನಟರಾದ ಅವಿನಾಶ್ ಮತ್ತು ರವಿಶಂಕರ್ ಮುಂತಾದವರು ಕೂಡ ನಟಿಸುತ್ತಿದ್ದಾರೆ.
ವನಿತಾ ಎಚ್.ಎನ್. ಅವರ ‘ನಿಹಾಂತ್ ಪ್ರೊಡಕ್ಷನ್ಸ್’ ಮೂಲಕ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಮುಹೂರ್ತ ನೆರವೇರಿದ್ದು, ಮೇ 15ರಿಂದು ಚಿತ್ರದುರ್ಗದಲ್ಲಿ ಶೂಟಿಂಗ್ ಶುರುವಾಗಲಿದೆ.
ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ವಿಡುದಲೈ’ ಕೆಲವು ದಿನಗಳ ಹಿಂದೆ ದೇಶಾದ್ಯಂತ ಬಿಡುಗಡೆಯಾಗಿ ಜನಮನ್ನಣೆ ಪಡೆಯುತ್ತಿದೆ. ಈ ಚಿತ್ರದ ವಿಶೇಷತೆಯೆಂದರೆ, ತಮಿಳಿನ ಖ್ಯಾತ ನಟರಾದ ವಿಜಯ್ ಸೇತುಪತಿ, ಸೂರಿ, ಗೌತಂ ವಾಸುದೇವ ಮೆನನ್ ಮುಂತಾದವರ ಜೊತೆಗೆ ಕನ್ನಡದ ಆ ದಿನಗಳು ಖ್ಯಾತಿಯ ಸರ್ದಾರ್ ಸತ್ಯ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು.
ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ವೇಲುಮುರುಗನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸತ್ಯ, ತಮ್ಮ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆ ದಿನಗಳು’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸತ್ಯ, ಆ ನಂತರ ‘ಸ್ಲಂ ಬಾಲ’, ‘ರಾಜಧಾನಿ’, ‘ದ್ಯಾವ್ರೇ’, ‘ಚಂಬಲ್’ ಮುಂತಾದ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗುರುತಿಸಿಕೊಂಡವರು. ಆ ನಂತರ ‘ಗುಂಡ್ರು ಗೋವಿ’ ಮೂಲಕ ಹೀರೋ ಆಗಿಯೂ ಮಿಂಚಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ತಮ್ಮದೇ ಸಾಯಿನಿರ್ಮಲ ಪ್ರೊಡಕ್ಷನ್ಸ್ ಸಂಸ್ಥೆಯಡಿ ‘ಪದ್ಮಾವತಿ’, ‘ಕನ್ನಡ ಕೋಗಿಲೆ’ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ಮಿಸಿದರು, ಈಗ ದೊಡ್ಡ ಮಟ್ಟದಲ್ಲಿ ‘ವಿಡುದಲೈ’ ನಲ್ಲಿ ನಟಿಸಿದ್ದಾರೆ.
ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ’ ಚಿತ್ರದಲ್ಲಿ ನಟಿಸುವುದಕ್ಕೆ ಮುಖ್ಯ ಕಾರಣ ನಿರ್ದೇಶಕ ಜೇಕಬ್ ವರ್ಗೀಸ್ ಎನ್ನುವ ಸತ್ಯ, ‘ನನ್ನ ಮತ್ತು ಜೇಕಬ್ ನಡುವೆ ಒಳ್ಳೆಯ ಬಾಂಧವ್ಯವಿದೆ. ಅವರ ‘ಚಂಬಲ್’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಾನು ನಟಿಸಿದ್ದೆ. ಅವರು ಮತ್ತು ವೆಟ್ರಿಮಾರನ್ ಒಳ್ಳೆಯ ಸ್ನೇಹಿತರು. ಒಮ್ಮೆ ವೆಟ್ರಿಮಾರನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರು ಒಂದು ನಿಮಿಷ ನನ್ನನ್ನು ಸೂಕ್ಷ್ಮವಾಗಿ ಗಮನಿಸಿದರು. ಅದಾಗಿ ಮೂರು ತಿಂಗಳಲ್ಲಿ ನಾನು ವಿಡುದಲೈ ಚಿತ್ರದ ಭಾಗವಾಗಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಸತ್ಯ.
ತಮಿಳು ಚಿತ್ರವೊಂದರಲ್ಲಿ ನಟಿಸಬೇಕು ಎಂಬುದು ಸತ್ಯ ಅವರ ತಂದೆ-ತಾಯಿಯ ಆಸೆಯಾಗಿತ್ತಂತೆ. ‘ನಾನು ಮೂಲತಃ ಚಾಮರಾಜನಗರದವನು. ಕನ್ನಡದ ಜೊತೆಗೆ ತಮಿಳು ಸಹ ಬರುತ್ತದೆ. ಅಷ್ಟೇ ಅಲ್ಲ, ನನಗೆ ಐದು ಭಾಷೆಗಳು ಚೆನ್ನಾಗಿ ಮಾತನಾಡುವುದಕ್ಕೆ ಬರುತ್ತದೆ. ನಾನು ನಾಯಕನಾಗಿ ನಟಿಸಿದ ‘ಗುಂಡ್ರು ಗೋವಿ’ ಅಷ್ಟೇನೂ ಯಶಸ್ವಿಯಾಗಲಿಲ್ಲ. ಎರಡನೆಯ ಚಿತ್ರ ‘ಬೀರ’ ಬಿಡುಗಡೆಯಾಗಲೇ ಇಲ್ಲ. ಆ ಚಿತ್ರಕ್ಕಾಗಿ ಮೂರು ವರ್ಷ ಕಷ್ಟಪಟ್ಟಿದ್ದೆ. ಆದರೆ, ಚಿತ್ರ ಬಿಡುಗಡೆಯಾಗದಿದ್ದರಿಂದ ನನ್ನ ಶ್ರಮವೆಲ್ಲ ವ್ಯರ್ಥವಾಯಿತು. ಈ ಮಧ್ಯೆ, ನನಗೆ ಕನ್ನಡದಲ್ಲಿ ಸರಿಯಾಗಿ ಕೆಲಸ ಸಿಗುತ್ತಿರಲಿಲ್ಲ, ಸಿಕ್ಕರೂ ದುಡ್ಡು ಸಿಗುತ್ತಿರಲಿಲ್ಲ. ಆಗ ಹೆಂಡತಿ ನಿರ್ಮಲಾ ಆಸೆಯ ಮೇರೆಗೆ ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದೆ. ಅಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡೆ.
ಎರಡ್ಮೂರು ವರ್ಷಗಳ ಕಾಲ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದೇವೆ. ಇದುವರೆಗೂ 1500 ದಿನಕ್ಕೂ ಹೆಚ್ಚು ಚಿತ್ರೀಕರಣ ಮಾಡಿರುವ ಸಂಸ್ಥೆ ನಮ್ಮದು. ನಮ್ಮ ಸಂಸ್ಥೆಯಲ್ಲಿ ನೂರಾರು ಜನ ಕೆಲಸ ಮಾಡಿದ್ದಾರೆ. ಸಾವಿರಾರು ಜನ ಊಟ ಮಾಡಿದ್ದಾರೆ. ಇದೆಲ್ಲವೂ ಖುಷಿ ಇದ್ದರೂ, ನಟನಾಗಿ ಏನಾದರೂ ಸಾಧಿಸಬೇಕು ಎಂಬ ಆಸೆ ಮಾತ್ರ ಹಾಗೆಯೇ ಹಸಿ ಹಸಿ ಯಾಗಿತ್ತು. ನನ್ನ ಪ್ರತಿಭೆ ವ್ಯರ್ಥವಾಗುತ್ತಿರುವುದನ್ನು ನೋಡಿ, ಇಲ್ಲಿ ಸಾಧ್ಯವಾಗದಿದ್ದರೆ ತಮಿಳಿಗೆ ಹೋಗು ಎಂದು ಸಲಹೆ ನೀಡಿದ್ದೇ ನನ್ನ ತಾಯಿ. ಅಲ್ಲಿಯವರೆಗೂ ಕನ್ನಡದಲ್ಲೇ ನಟಿಸುತ್ತಿದ್ದೆ. ಆ ನಂತರ ತಮಿಳಿನಲ್ಲಿ ಅವಕಾಶ ಸಿಗುತ್ತದಾ ಎಂದು ಪ್ರಯತ್ನ ಮಾಡಿದೆ. ಆಗ ವೆಟ್ರಿಮಾರನ್ ಪರಿಚಯವಾಯಿತು. ಈಗ ನನ್ನ ಮೊದಲ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ.
ಆದರೆ, ಅದನ್ನು ನೋಡಲು ನನ್ನ ತಂದೆ-ತಾಯಿ ಇಬ್ಬರೂ ಇಲ್ಲ. ವಿಡುದಲೈ ಚಿತ್ರೀಕರಣದ ಸಂದರ್ಭದಲ್ಲಿ 20 ದಿನಗಳ ಅಂತರದಲ್ಲಿ ಇಬ್ಬರೂ ನಿಧನರಾದರು. ಅವರ ಆಸೆಯೇನೋ ಈಡೇರಿಸಿದೆ. ಆದರೆ, ಅದನ್ನು ನೋಡಲು ಅವರೇ ಇಲ್ಲವಲ್ಲ ಎಂಬ ಬೇಸರವಿದೆ. ತನ್ನ ತಂದೆ ತಾಯಿ ಇಬ್ಬರನ್ನೂ ವೆಟ್ರಿಮಾರನ್ರವರಲ್ಲಿ ಕಾಣುತ್ತೇನೆ’ ಎನ್ನುತ್ತಾರೆ ಸತ್ಯ.
‘ವಿಡುದಲೈ ಚಿತ್ರಕ್ಕೆ ಸತ್ಯ ಆಯ್ಕೆಯಾದಾಗ, ಅದೊಂದು ಪೂರ್ಣಪ್ರಮಾಣವಾದ ಪಾತ್ರವಿರಬಹುದು ಎಂದು ಯೋಚಿಸಿರಲಿಲ್ಲವಂತೆ. ನಾನು ಆ ಚಿತ್ರಕ್ಕೆ ಆಯ್ಕೆಯಾದಾಗ, ಚಿಕ್ಕ ಪಾತ್ರವಿರಬಹುದು, ಮೂರ್ನಾಲ್ಕು ದಿನಗಳ ಕಾಲ ಕೆಲಸವಿರಬಹುದು ಅಂತಂದುಕೊಂಡಿದ್ದೆ. ಆದರೆ, ಆ ಚಿತ್ರದಲ್ಲಿ ನಾನು ಸುಮಾರು 120 ದಿನಗಳ ಕಾಲ ಕೆಲಸ ಮಾಡಿದ್ದೇನೆ. ನಾನು ನನ್ನ ಹಳೆಯ ನೆನಪುಗಳನ್ನೆಲ್ಲ ಬಿಟ್ಟು ಹೋಗಿದ್ದೆ. ವೆಟ್ರಿಮಾರನ್ ಏನು ಹೇಳಿದರೋ, ಅದನ್ನಷ್ಟೇ ಮಾಡಿದ್ದೇನೆ. ಅವರಿಂದ ತುಂಬಾ ಕಲಿತಿದ್ದೇನೆ. ಇಡೀ ಚಿತ್ರದಲ್ಲಿ ನನ್ನ ಪಾತ್ರವಿದೆ.
ವಿಜಯ್ ಸೇತುಪತಿ, ಸೂರಿ, ಗೌತಮ್ ಮೆನನ್, ರಾಜೀವ್ ಮೆನನ್ ಮುಂತಾದ ಪ್ರತಿಭಾವಂತ ಕಲಾವಿದರ ಜತೆಗೆ ನಟಿಸುವ ಅವಕಾಶ ಸಿಕ್ಕಿದೆ. ನನ್ನ ಕೆಲಸ ಇನ್ನೂ ಪೂರ್ತಿ ಮುಗಿದಿಲ್ಲ. ಎರಡನೆಯ ಭಾಗದಲ್ಲೂ ನನ್ನ ಪಾತ್ರ ಸಾಕಷ್ಟಿದೆ. ಈಗಾಗಲೇ ಎರಡನೆಯ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನೂ 50 ದಿನಗಳಷ್ಟು ಚಿತ್ರೀಕರಣ ಬಾಕಿ ಇದೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಾರೆ ಸತ್ಯ. ‘ವಿಡುದಲೈ’ಚಿತ್ರದಿಂದ ಕಷ್ಟಗಳ ಬಿಡುಗಡೆ ಆಯ್ತು ಎನ್ನುವ ಸತ್ಯ, ‘ನಾನು ಕಳೆದುಕೊಂಡಿದ್ದನ್ನೆಲ್ಲ ‘ವಿಡುದಲೈ’ ವಾಪಸ್ಸು ತಂದುಕೊಟ್ಟಿದೆ. ಇದಕ್ಕೂ ಮುನ್ನ ನಾನು ಕರ್ನಾಟಕಕ್ಕೆ ಮಾತ್ರ ಗೊತ್ತಿತ್ತು. ಈಗ ಆ ಚಿತ್ರದಲ್ಲಿ ತಮಿಳು ನಾಡು, ಆಂಧ್ರ ಮುಂತಾದ ಕಡೆಗಳಲ್ಲೂ ಪರಿಚಿತನಗಿದ್ದೇನೆ. ವೆಟ್ರಿಮಾರನ್ ಒಬ್ಬ ಸೂಕ್ಷ್ಮ ಸಂವೇದನೆಯ ನಿರ್ದೇಶಕ. ಅವರಿಗೆ ಜಾತಿ, ಬಣ್ಣ, ಭಾಷೆಯ ಬೇಧ-ಭಾವವಿಲ್ಲ. ಅವರು ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುತ್ತಾರೆ.
ಚಿತ್ರ ಜನರಿಗೆ ಇಷ್ಟವಾಗಿದೆಯೆಂದರೆ, ಅದಕ್ಕೆ ಕಾರಣ ಪ್ರಸ್ತುತತೆ. ಇದು ಯಾವುದೋ ಒಂದು ಪ್ರದೇಶದ ಸಮಸ್ಯೆಯಲ್ಲ. ಪ್ರತಿ ರಾಜ್ಯದಲ್ಲೂ ನಡೆದ ಮತ್ತು ನಡೆಯಬಹುದಾದ ಘಟನೆಯಾಗಿದೆ. ಹಾಗಾಗಿ, ಅದನ್ನು ಎಲ್ಲರೂ ತಮಗೆ ಹೋಲಿಸಿಕೊಂಡು ನೋಡುತ್ತಿದ್ದಾರೆ. ಇವತ್ತು ಮಾನವಕುಲಕ್ಕೆ ದೊಡ್ಡ ಅಪಾಯವಿರುವುದು ಪ್ರಕೃತಿಯಿಂದಲ್ಲ. ಇವತ್ತು ಮನುಷ್ಯನಿಗೆ ದೊಡ್ಡ ಶತ್ರುವೆಂದರೆ ಅದು ಮನುಷ್ಯನೇ. ಮನುಷ್ಯನ ದುರ್ಗುಣದಿಂದ ಇನ್ನೊಬ್ಬ ಬಲಿಯಾಗುತ್ತಿದ್ದಾನೆ. ಅವನ ತಾರತಮ್ಯದಿಂದಾಗಿ ಹಲವರಿಗೆ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ಇದೊಂದು ಶ್ರೇಷ್ಠವಾದ ಚಿತ್ರ. ಎಲ್ಲ ಕಡೆ ಮೆಚ್ಚುಗೆ ಸಿಗುತ್ತಿದೆ. ಚಿತ್ರ ನೋಡಿದ ಅನ್ಯಭಾಷಿಕರು ಸಹ ಗುರುತು ಹಿಡಿದು ಮಾತನಾಡಿಸುತ್ತಿದ್ದಾರೆ’ ಎನ್ನುತ್ತಾರೆ ಸತ್ಯ.
‘ವಿಡುದಲೈ’ ನಂತರ ಸತ್ಯ ಮೂರು ಸ್ಕ್ರಿಪ್ಟ್ ಕೇಳಿದ್ದಾರಂತೆ. ಒಂದು ಚಿತ್ರವನ್ನೂ ಸದ್ದಿಲ್ಲದೆ ಮುಗಿಸಿದ್ದಾರಂತೆ. ‘ನನ್ನ ಮೊದಲ ಪ್ರಾಶಸ್ತ್ಯ ಯಾವತ್ತೂ ಕನ್ನಡಕ್ಕೇ. ಏಕೆಂದರೆ, ನನ್ನನ್ನು ಮೊದಲು ರೂಪಿಸಿದ್ದು ಕನ್ನಡಿಗರು. ನನ್ನನ್ನು ಇವತ್ತು ಬೇರೆ ಭಾಷೆಯವರು ಗುರುತಿಸುತ್ತಾರೆ ಎಂದರೆ, ಅದಕ್ಕೆ ಕಾರಣ ಕನ್ನಡ ಮತ್ತು ಕರ್ನಾಟಕ. ಈ ಭಾಷೆಗೆ ಮತ್ತು ಮಣ್ಣಿಗೆ ನಾನು ಯಾವತ್ತೂ ಚಿರಋಣಿ. ಈಗಾಗಲೇ ಕನ್ನಡದಿಂದ ಹಲವು ಅವಕಾಶಗಳು ಬರುತ್ತಿವೆ. ಇಲ್ಲಿಂದ ಸಾಯುವವರೆಗೂ ನನಗೆ ಕೆಲಸ ಸಿಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಸತ್ಯ.
ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್ 2’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 28ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸುತ್ತಿದೆ. ಉತ್ತರ ಭಾರತದಲ್ಲಿ ಪ್ರಚಾರ ಮುಗಿಸಿರುವ ಚಿತ್ರತಂಡ, ದಕ್ಷಿಣದಲ್ಲಿ ಪ್ರಚಾರ ನಡೆಸುತ್ತಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಮೋಷನ್ ಮಾಡಿರುವ ಪಿಎಸ್-2 ಬಳಗ ಬೆಂಗಳೂರಿನಲ್ಲಿ ಪ್ರಮೋಷನ್ ಕಹಳೆ ಮೊಳಗಿಸಿದೆ. ನಟ ವಿಕ್ರಂ, ತ್ರಿಷಾ, ಕಾರ್ತಿ ಹಾಗೂ ಜಯಂರವಿ ಭಾಗಿಯಾಗಿದ್ದ ವೇಳೆ ಕನ್ನಡದ ಸಿನಿಮಾ ಹಾಗೂ ಕನ್ನಡ ಕಲಾವಿದರನ್ನು ತಮಿಳು ಸ್ಟಾರ್ಸ್ಸ್ ಹಾಡಿ ಹೊಗಳಿದ್ದಾರೆ.
ಮೊದಲಿಗೆ ಕನ್ನಡಿಗರಿಗೆ ವಂದಿಸಿ ಮಾತಾನಾಡಿದ ಜಯಂರವಿ, ಕೆಜಿಎಫ್ ಭಾರತದ ಭಾಷೆ ಗಡಿ ಮುರಿದಿದ್ದರೆ, ಕಾಂತಾರ ಧಾರ್ಮಿಕ ಗಡಿ ಮುರಿದಿದೆ. ಅದರಿಂದ ನಮಗೆ ಧಾರ್ಮಿಕ ನಂಬಿಕೆ ಹೆಚ್ಚಾಗಿದೆ. ಪ್ರಪಂಚದ ಸಿನಿಮಾ ಲೋಕದಲ್ಲಿ ಕನ್ನಡ ಇಂಡಸ್ಟ್ರಿ ಗುರುತರ ಪಾತ್ರ ವಹಿಸಿದೆ ಎಂದರು.
ವಿಕ್ರಂ ಮಾತಾನಾಡಿ, ನನಗೆ ಎಲ್ಲಾ ತರಹ ಪಾತ್ರಗಳನ್ನು ಮಾಡಲು ಇಷ್ಟ. ಆದಿತ್ಯ ಕರಿಕಾಳನ್ ಪಾತ್ರ ನನಗೆ ತೃಪ್ತಿ ಕೊಟ್ಟಿದೆ. ಪಿಎಸ್ 2 ಒಂದೊಳ್ಳೆ ಐತಿಹಾಸಿಕ ಸಿನಿಮಾ. ಪ್ರತಿಯೊಬ್ಬರು ನೋಡಲೇಬೇಕು ಎಂದರು.
ಕಾರ್ತಿ, ಪಿಎಸ್ 1 ಮತ್ತು ಪಿಎಸ್ 2 ಎರಡು ಸಿನಿಮಾಗಳು ಒಟ್ಟಿಗೆ ಚಿತ್ರೀಕರಣವಾಗಿತ್ತು. ಮೊದಲ ಭಾಗಕ್ಕೆ ನೀವು ತೋರಿಸಿದ ಪ್ರೀತಿ ಪಿಎಸ್2 ಸೀಕ್ವೆಲ್ ಮೇಲೆಯೂ ಇರಲಿ. ಹತ್ತನೇ ಶತಮಾನದ ರಾಜರು ಹಿಂದೆ ಹೇಗೆ ಬದುಕುತ್ತಿದ್ದರು ಎಂಬುವುದು ಗೊತ್ತಿಲ್ಲ. ಈ ಚಿತ್ರದಲ್ಲಿ ಅದನ್ನು ದೃಶ್ಯದ ಮೂಲಕ ಕಟ್ಟಿಕೊಡಲಾಗಿದೆ. ಪಿಎಸ್, ಪಿಎಸ್ 2 ಗೆ ತಳಹದಿಯಾಗಿದೆ ಎಂದರು.
ತ್ರಿಷಾ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡು. ಮಣಿರತ್ನಂ ಅವರ ಜೊತೆ ಕೆಲಸ ಮಾಡಿರುವುದಕ್ಕೆ ಸಂತಸ ಇದೆ ಎಂದರು.
ಇನ್ನೂ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಚನ್ನಪಟ್ಟಣ ಬೊಂಬೆ, ಚಿಕ್ಕಮಗಳೂರು ಕಾಫಿಪುಡಿ, ಧಾರವಾಡ ಪೇಡಾ, ಮೈಸೂರು ಸ್ಯಾಂಡಲ್ ಸೋಪ್ ಗಿಫ್ಟ್ ಬಾಕ್ಸ್ ನೋಡಿ ಚಿತ್ರತಂಡ ಖುಷಿಪಟ್ಟಿತು.
ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ ಆಧಾರಿಸಿದ ಸಿನಿಮಾವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಚಾಪ್ಟರ್ ಮೆಗಾ ಹಿಟ್ ಆಗಿತ್ತು. ಬಾಕ್ಸಾಫೀಸ್ನಲ್ಲಿ 500 ಕೋಟಿ ರೂ. ಲೂಟಿ ಮಾಡಿತ್ತು. ಅದೇ ಸಕ್ಸಸ್ನಲ್ಲೇ ‘ಪೊನ್ನಿಯಿನ್ ಸೆಲ್ವನ್ 2’ ಸೀಕ್ವೆಲ್ ತೆರೆಗೆ ಬರ್ತಿದೆ. ಚೋಳ ಸಾಮ್ರಾಜ್ಯದ ದೃಶ್ಯವೈಭೋಗದ ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ಕ್ಕೆ ತೆರೆಕಾಣಲಿದೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. ‘ಪೊನ್ನಿಯಿನ್ ಸೆಲ್ವನ್ -2’ ಸಿನಿಮಾದಲ್ಲಿ ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಆಗಿದೆ. ಮಣಿರತ್ನಂ ನಿರ್ದೇಶನ ಹೈಲೈಟ್ ಆದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್ ಇದೆ. ಇದೇ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರ್ತಿರುವ ಪೊನ್ನಿಯಿನ್ ಸೆಲ್ವನ್ 2 ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ಎಲ್ಲಾ ಭಾಷೆಯಲ್ಲಿಯೂ ಪ್ರೇಕ್ಷಕರ ಎದುರು ಅನಾವರಣ ಮಾಡುತ್ತಿದೆ.