ಚಿತ್ರ ವಿಮರ್ಶೆ: ವಿಭ
ಚಿತ್ರ; ಮಾರ್ನಮಿ
ನಿರ್ದೇಶನ: ರಿಶಿತ್ ಶೆಟ್ಟಿ
ನಿರ್ಮಾಣ: ಶಿಲ್ಪ ನಿಶಾಂತ್
ತಾರಾಗಣ: ರಿತ್ವಿಕ್, ಚೈತ್ರಾ ಆಚಾರ್, ಸೋನುಗೌಡ, ಪ್ರಕಾಶ್ ತುಮ್ಮಿನಾಡ್, ಸುಮನ್, ಜ್ಯೋತೀಶ್ ಶೆಟ್ಟಿ, ಸ್ವರಾಜ್ ಶೆಟ್ಟಿ ಇತರರು.
‘ ನನ್ನ ಮದ್ವೆ ಆಗಿ ಆಯ್ತಾ… ನಾನ್ ನಿಮ್ಮ ಜೊತೆ ಮತ್ತು ನಿಮ್ಮ ಎಲ್ಲ ಕನಸಿನ ಜೊತೆ ಇರ್ತೀನಿ..’
ಈ ಡೈಲಾಗ್ ಬರುವ ಹೊತ್ತಿಗೆ ಅವನ ಹಿಂದೆ ಅವಳು ಸುತ್ತುತ್ತಿರುತ್ತಾಳೆ. ಅವನಿಗೂ ಆಕೆಯ ಮೇಲೆ ಲವ್ ಆಗಿರುತ್ತೆ. ಅದರ ಹಿಂದೆ ಸಾಕಷ್ಟು ಘಟನೆ ನಡೆದು ಹೋಗಿರುತ್ತೆ. ಆ ಘಟನೆಯಲ್ಲಿ ಒಂದಷ್ಟು ತಿರುವುಗಳಿವೆ. ಆ ಟ್ವಿಸ್ಟು ಏನು ಅನ್ನುವ ಕುತೂಹಲ ಇದ್ದರೆ, ಒಮ್ಮೆ ‘ಮಾರ್ನಮಿ’ ಜಾತ್ರೆ ನೋಡಿ ಬರಬಹುದು.
ಇದನ್ನು ಲವ್ ಸ್ಟೋರಿ ಅನ್ನಬೇಕಾ? ಸೆಂಟಿಮೆಂಟ್ ಕಥೆ ಅನ್ನಬೇಕಾ? ರಿವೇಂಜ್ ಸ್ಟೋರಿ ಅಂತ ಹೇಳಬೇಕಾ? ಪ್ರೆಂಡ್ ಶಿಪ್ ಕಥೆ ಅಂದುಕೊಳ್ಳಬೇಕಾ ಒಟ್ಟಾರೆ ಈ ಎಲ್ಲಾ ಅಂಶಗಳ ಜೊತೆಗೊಂದು ಮೀನಿಂಗ್ ಫುಲ್ ಸ್ಟೋರಿ ಇಲ್ಲಿದೆ. ಎಮೋಷನಲ್ ಜರ್ನಿಯ ನೋಟವಿದೆ. ಆ ಕಾರಣಕ್ಕೆ ಸಿನಿಮಾ ರುಚಿಸುತ್ತೆ. ಹಾಗಂತ ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗಲ್ಲ. ಇಲ್ಲೂ ಒಂದಷ್ಟು ಏರಿಳಿತಗಳಿವೆ. ಅವೆಲ್ಲವನ್ನು ಅಡ್ಜೆಸ್ಟ್ ಮಾಡಿಕೊಂಡು ನೋಡಿದರೆ ಕನ್ನಡಕ್ಕೆ ಒಂದು ಹೊಸಬಗೆಯ ಚಿತ್ರ ಅನ್ನಬಹುದು.

ಮೊದಲರ್ಧ ಸಿನಿಮಾದ ವೇಗ ಗೊತ್ತಾಗುವುದಿಲ್ಲ. ಅಲ್ಲಿ ಕಥೆ ಕುತೂಹಲದ ಜೊತೆ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಕಥೆ ಲ್ಯಾಗ್ ಅನಿಸುತ್ತೆ. ಕೆಲವು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ವಿನಾಕಾರಣ ಬೇಡದ ಅಂಶಗಳು ಇವೆ. ಅದನ್ನು ಗಮನಿಸಿದ್ದರೆ ಇನ್ನಷ್ಟು ಸ್ವೀಟ್ ಸಿನಿಮಾ ಎನಿಸಿಕೊಳ್ಳುತ್ತಿತ್ತು. ಆದರೆ, ನಿರ್ದೇಶಕರು ಎಲ್ಲವನ್ನೂ ಪರಿಪೂರ್ಣವಾಗಿ ಹೇಳುವ ಧಾವಂತದಲ್ಲಿ ಹೆಚ್ಚು ಸಮಯವನ್ನು ತೆಗೆದುಕೊಂಡಿದ್ದಾರೆ. ಅಷ್ಟೇ ವಿಷಯವನ್ನು ಕಡಿಮೆ ಅವಧಿಯಲ್ಲೂ ಅರ್ಥ ಮಾಡಿಸಬಹುದಿತ್ತು. ಉಳಿದಂತೆ ಸಿನಿಮಾ ಕರಾವಳಿಯ ಸೊಬಗು ಮತ್ತು ಸೊಗಡನ್ನು ಹೊಂದಿದೆ. ಮಂಗಳೂರು ಸೀಮೆಯ ಭಾಷೆ ಖುಷಿ ಕೊಡುತ್ತೆ. ಜೊತೆಗೆ ಕಟ್ಟಿಕೊಟ್ಟಿರುವ ಪರಿಸರ ಸಿನಿಮಾದ ಅಂದ ಹೆಚ್ಚಿಸಿದೆ.
ಮೇಕಿಂಗ್ ವಿಷಯಕ್ಕೆ ಬಂದರೆ, ಅಚ್ಚುಕಟ್ಟಾಗಿದೆ. ಎಲ್ಲೂ ವೈಭವೀಕರಿಸಿಲ್ಲ. ಅಲ್ಲಿನ ಆಚಾರ ವಿಚಾರ, ಭಾಗದ ಕಲ್ಚರ್ ಎಲ್ಲವನ್ನೂ ಅರ್ಥಪೂರ್ಣಗೊಳಿಸಿದೆ. ವಿಶೇಷ ಅಂದರೆ ಇಲ್ಲಿ ಬಹುತೇಕ ಕರಾವಳಿ ಭಾಗದ ಸ್ಥಳೀಯ ಕಲಾವಿದರ ಸ್ಪರ್ಶ ಚಿತ್ರಕ್ಕೊಂದು ಮೆರಗು ಎನ್ನಬಹುದು.
ಇನ್ನು, ಸಿನಿಮಾದ ಅವಧಿ ತುಸು ಹೆಚ್ಚಾಯ್ತು ಅನ್ನುವುದು ಬಿಟ್ಟರೆ, ಉಳಿದಂತೆ ಇದೊಂದು ಭಾವನಾತ್ಮಕ ಚಿತ್ರ. ತಾಯಿ ಮಗನ ಸೆಂಟಿಮೆಂಟ್, ಗಂಡ ಹೆಂಡತಿಯ ಬಾಂಧವ್ಯ, ನಂಬಿಕೆ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಆ ಕಾರಣಕ್ಕೆ ಸಿನಿಮಾ ರುಚಿಸುತ್ತೆ.

ಕಥೆ ಏನು?
ಅವನಿಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅವಳಿಗೆ ಮಗನೇ ಪ್ರಪಂಚ. ಮಗ ಖಾಯಿಲೆ ಬಿದ್ದಾಗ, ಅಮ್ಮ ದೇವಿಗೆ ಹರಕೆ ಹೊತ್ತು, ಮಗ ಹುಷಾರಾದರೆ ಮಗನ ಕೈಲಿ ಹುಲಿವೇಷ ಹಾಕಿಸಿ ಕುಣಿಸಿ ಹರಕೆ ತೀರಿಸಿತ್ತೇನೆ ಅಂತಾಳೆ. ಅದರಂತೆ ಹರಕೆ ತೀರುತ್ತೆ. ಅತ್ತ ಅಮ್ಮನೂ ಭಯಾನಕ ಖಾಯಿಲೆಗೆ ಬಿದ್ದಾಗ, ಅಮ್ಮ ಹುಷಾರಾದರೆ, ಹುಲಿ ವೇಷ ಹಾಕಿ ಕುಣಿದು ಹರಕೆ ತೀರಿಸುವುದಾಗಿ ಹೇಳುತ್ತಾನೆ. ಅಲ್ಲಿ ಅವನ ಹರಕೆ ಫಲಿಸುತ್ತಾ ಅನ್ನೋದು ಸಸ್ಪೆನ್ಸ್.
ಈ ಮಧ್ಯೆ ಪ್ರೀತಿ. ಆ ಪ್ರೀತಿ ಪಡೆದ ಮೇಲೆ ಆಗುವ ನೋವು. ಒಂದಷ್ಟು ಕೆಟ್ಟ ವ್ಯಕ್ತಿತ್ವದ ಜೊತೆಗಿನ ಗುದ್ದಾಟ. ಇವೆಲ್ಲದರ ಜೊತೆ ದ್ವೇಷಗುಣ ಹೆಚ್ಚಾಗಿ ಭೀಕರ ಘಟನೆಗೆ ಕೆಲ ಸನ್ನಿವೇಶ ಸಾಕ್ಷಿಯಾಗುತ್ತೆ. ಅದೇ ಸಿನಿಮಾದ ತಿರುವು. ಕ್ಲೈಮ್ಯಾಕ್ಸ್ ಸಿನಿಮಾದ ವಿಶೇಷತೆ ಹೊಂದಿದೆ. ಇಡೀ ಸಿನಿಮಾದಲ್ಲಿ ಆವರಿಸಿರೋದು ನಾಯಕ, ನಾಯಕಿಯ ವಿಶೇಷ ಪಾತ್ರ. ಅದು ಹೇಗೆ ವರ್ಕೌಟ್ ಆಗಿದೆ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು.
ಇಲ್ಲಿ ಮಾರ್ನಮಿಗೆ ಹುಲಿ ವೇಷ ಹಾಕಿ ಹರಕೆ ತೀರಿಸುವ ದೃಶ್ಯ ವೈಭವ ಚೆನ್ನಾಗಿದೆ. ನೈಜತೆಗೆ ಹತ್ತಿರವಾಗುವ ದೃಶ್ಯಗಳು ಇಲ್ಲಿವೆ. ಒಂದು ಪ್ರಾಂತ್ಯದಲ್ಲಿ ಸ್ಥಳೀಯವಾಗಿ ನಡೆಯುವ ಕೆಲ ಘಟನೆಗಳು ಮನಸ್ಸಿಗೆ ಎಷ್ಟೊಂದು ಘಾಸಿ ಮಾಡುತ್ತವೆ ಎನ್ನುವುದಕ್ಕೆ
ಮಾರ್ನಮಿ ಕಥೆ ಸಾಕ್ಷಿ. ಆ ಕಾರಣಕ್ಕೆ ಸಿನಿಮಾವನ್ನು ನೋಡಬಹುದು.
ಯಾರು ಹೇಗೆ?
ರಿತ್ವಿಕ್ ಇಡೀ ಚಿತ್ರ ಆವರಿಸಿದ್ದಾರೆ. ಅಷ್ಟೇ ಅಲ್ಲ, ಒಬ್ಬ ಮುಗ್ಧ ಹುಡುಗನಾಗಿ, ತಂಟೆಗೆ ಬಂದವರನ್ನು ಹಿಗ್ಗಾಮುಗ್ಗ ಚಚ್ಚುವ ಯುವಕನಾಗಿ, ಪ್ರೇಮಿಯಾಗಿ, ತಾಯಿಹೆ ಒಳ್ಳೇ ಮಗನಾಗಿ, ಗೆಳೆಯನಾಗಿ, ಗಂಡನಾಗಿ ಗಮನ ಸೆಳೆದಿದ್ದಾರೆ. ಫೈಟ್ ಸೀನ್ ನಲ್ಲಿ ಶಿಳ್ಳೆ ಗಿಟ್ಟಿಸುತ್ತಾರೆ. ನಟನೆಯಲ್ಲೂ ಹಿಂದೆ ಬಿದ್ದಿಲ್ಲ. ಬಾಡಿ ಲಾಂಗ್ವೇಜ್, ಡೈಲಾಗ್ ಡಿಲವರಿ ಮೂಲಕ ಇಷ್ಟ ಆಗುತ್ತಾರೆ.
ಚೈತ್ರಾ ಆಚಾರ್, ಪಾತ್ರವನ್ನು ಜೀವಿಸಿದ್ದಾರೆ. ಸೋನುಗೌಡ ಅಮ್ಮನಾಗಿ ಗಮನ ಸೆಳೆಯುತ್ತಾರೆ. ಪ್ರಕಾಶ್ ತುಮ್ಮಿನಾಡ್ ಇಲ್ಲಿ ಗಂಭೀರ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ. ಸುಮನ್, ಜ್ಯೋತೀಶ್ ಶೆಟ್ಟಿ, ಸ್ವರಾಜ್ ಶೆಟ್ಟಿ ಇತರರು ಪಾತ್ರಗಳಿಗೆ ಮೋಸ ಮಾಡಿಲ್ಲ.
ಚರಣ್ ರಾಜ್ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತ ಪೂರಕವಾಗಿದೆ.
ಶಿವಸೇನ ಕ್ಯಾಮರಾ ಕೈ ಚಳಕ ಮಾರ್ನಮಿಯ ಅಂದ ಹೆಚ್ಚಿಸಿದೆ.




