ಸೀತಾಳ ವಂಡರ್ ಫುಲ್ ಜರ್ನಿ!

ಚಿತ್ರ ವಿಮರ್ಶೆ: ವಿಭ

ಚಿತ್ರ: ಸೀತಾ ಪಯಣ
ನಿರ್ದೇಶನ: ಅರ್ಜುನ್ ಸರ್ಜಾ
ನಿರ್ಮಾಣ: ಅರ್ಜುನ್ ಸರ್ಜಾ
ತಾರಾಗಣ: ಐಶ್ವರ್ಯ ಅರ್ಜುನ್ ಸರ್ಜಾ, ನಿರಂಜನ್ ಸುಧೀಂದ್ರ, ಪ್ರಕಾಶ್ ರೈ, ಸತ್ಯರಾಜ್, ಸುಮಿತ್ರ, ಅರ್ಜುನ್ ಸರ್ಜಾ, ಧ್ರುವ ಸರ್ಜಾ ಇತರರು.

ಏನಾದ್ರು ಹೇಳಬೇಕಾ..?
ಸಿನಿಮಾ ಶುರುವಿಗೆ ಈ
ಡೈಲಾಗ್ ಬರುತ್ತೆ. ಈ ಡೈಲಾಗ್ ಬರುವ ಹಿಂದೆ ಸಾಕಷ್ಟು ಘಟನೆಗಳು ನಡೆದು ಹೋಗಿರುತ್ತೆ. ಆ ಕಥೆಯ ಜರ್ನಿ ನಡುವಿನ ಸ್ವಾರಸ್ಯಕರ ಸಂಗತಿಗಳು ಏನು ಅಂತ ತಿಳಿಯುವ ಕುತೂಹಲವಿದ್ದರೆ, ಜಾಲಿಯಾಗಿ ಸೀತಾಪಯಣ ನೋಡಬಹುದು.

ಇದೊಂದು ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರ. ಒಂದೊಳ್ಳೆಯ ಕಥೆ ಮೂಲಕ ನೋಡುಗರ ಮನಸ್ಸು ಖುಷಿಪಡಿಸುವಲ್ಲಿ ನಿರ್ದೇಶಕ ಅರ್ಜುನ್ ಸರ್ಜಾ ಅವರು ಯಶಸ್ವಿಯಾಗಿದ್ದಾರೆ.

ಇಲ್ಲಿ ಮಧುರ ಭಾವನೆಗಳಿವೆ. ಮರೆಯಲಾರದ ಸಂಬಂಧಗಳ ಮೌಲ್ಯಗಳಿವೆ. ಅಲ್ಲಲ್ಲಿ ಕಚಗುಳಿಯ ದೃಶ್ಯಾವಳಿಗಳಿವೆ. ಆಗಾಗ ಎದೆಭಾರವೆನಿಸುವ ಸನ್ನಿವೇಶಗಳೂ ಇವೆ. ಮುಖ್ಯವಾಗಿ ಇಲ್ಲಿ ಅನಗತ್ಯ ದೃಶ್ಯವಾಗಲಿ, ಕಥೆಯಾಗಲಿ ಇಲ್ಲ. ಸ್ವಾರ್ಥ ಇರದ ಪಯಣದ ಕಥೆ ಇಲ್ಲಿದೆ. ಹಾಗಾಗಿ ಇದೊಂದು ಫೀಲ್ ಗುಡ್ ಮೂವಿ.

ನಿರ್ದೇಶಕರ ಕಥೆಯಲ್ಲಿ ಸ್ಪಷ್ಟತೆ ಇದೆ. ಮೇಕಿಂಗ್ ಕೂಡ ಕಥೆಗೆ ಪೂರಕವಾಗಿದೆ. ಏನು ಹೇಳಬೇಕು, ಎಷ್ಟು ಹೇಳಬೇಕು ಎಂಬುದರ ಅರಿವು ಇದೆ. ಆ ಕಾರಣಕ್ಕೆ ಈ ಸೀತೆಯ ಜರ್ನಿ ಇಷ್ಟವಾಗುತ್ತೆ.

ಇಲ್ಲಿ ಅಪ್ಪ ಮಗಳ ಬಾಂಧವ್ಯ ಇದೆ. ನಿಷ್ಕಲ್ಮಷ ಪ್ರೀತಿ ಇದೆ. ಕೂಡು ಕುಟುಂಬದ ಒಗ್ಗಟ್ಟಿನ ಒಲವಿದೆ. ಮುಗ್ಧತೆಯ ಭಾವ ಇದೆ. ಈ ಎಲ್ಲಾ ಕಾರಣಕ್ಕೂ ಸಿನಿಮಾ ರುಚಿಸುತ್ತೆ. ನೀಟ್ ಅಂಡ್ ಕ್ಲೀನ್ ನರೇಷನ್ ಇಲ್ಲಿರುವುದರಿಂದ ಎಲ್ಲೂ ಬೋರ್ ಅನಿಸದೆ ಸರಾಗವಾಗಿ ಸೀತಾ ಪಯಣ ನೋಡಿಸಿಕೊಂಡು ಹೋಗುತ್ತೆ.

ಮೊದಲರ್ಧ ಜರ್ನಿಯ ಸನ್ನಿವೇಶ ಎಲ್ಲೂ ಗೊಂದಲವಿಲ್ಲದೆ ಸಾಗುತ್ತೆ. ದ್ವಿತಿಯಾರ್ಧ ಸಾಕಷ್ಟು ತಿರುವುಗಳಿವೆ. ಒಂದೇ ಒಂದು ಜರ್ನಿಗೆ ಮನಸ್ಸುಗಳನ್ನು ಬೆಸೆಯುವ, ಸಂಬಂಧಗಳನ್ನು ಸೇರಿಸುವ ತಾಕತ್ತು ಇದೆ ಎಂಬುದನ್ನು ಚೆನ್ನಾಗಿ ತೋರಿಸಿದ್ದಾರೆ.

ಎಲ್ಲೋ ಒಂದು ಕಡೆ ಸಿನಿಮಾದ ಅವಧಿ ಕೊಂಚ ಹೆಚ್ಚಾಯ್ತು ಅನಿಸುತ್ತೆ. ಮಧ್ಯೆ ಬರುವ ಹಾಡು, ಫೈಟು ಅದನ್ನು ಮರೆಸುತ್ತೆ. ಉಳಿದಂತೆ ಚಿತ್ರಕಥೆಯಲ್ಲೂ ಹಿಡಿತವಿದೆ. ಪಾತ್ರ ಆಯ್ಕೆ ಕೂಡ ವೇಗ ಹೆಚ್ಚಿಸಿದೆ. ಅರ್ಜುನ್ ಸರ್ಜಾ ಅವರು ಎಲ್ಲಾ ವರ್ಗದವರೂ ನೋಡುವಂತಹ ಅಂದದ ಸಿನಿಮಾ ಕಟ್ಟಿಕೊಡುವಲ್ಲಿ ಯಶಸ್ವಿ ಎನ್ನಬಹುದು.

ಕಥೆ ಏನು?

ನಾಯಕಿ ಸೀತಾ (ಐಶ್ವರ್ಯ) ಪ್ರಾಜೆಕ್ಟ್ ವೊಂದನ್ನು ಅಟೆಂಡ್ ಮಾಡಲು ಬೆಳಗಾವಿಗೆ ತನ್ನ ಕಾರಲ್ಲಿ ಹೊರಡುತ್ತಾಳೆ. ದಾರಿ ನಡುವೆ ಅಭಿಷೇಕ್ ಕೂಡ ( ನಿರಂಜನ್) ಡ್ರಾಪ್ ಕೇಳ್ತಾನೆ. ಕಾರು ಹತ್ತಿಸಿಕೊಳ್ಳುವ ಮುನ್ನ ಅವನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಫೋಟೋ ಎಲ್ಲವನ್ನೂ ಪಡೆದು ಕೆಲ ಕಂಡೀಷನ್ಸ್ ಹಾಕಿ ಕಾರಲ್ಲಿ ಕೂರಿಸಿಕೊಳ್ಳುತ್ತಾಳೆ. ಅಲ್ಲಿಗೆ ಇಬ್ಬರ ಪಯಣ ಬೆಳಗಾವಿಯತ್ತ ಸಾಗುತ್ತೆ. ದಾರಿಯುದ್ದಕ್ಕೂ ಒಂದಷ್ಟು ಘಟನೆ ನಡೆದು ಹೋಗುತ್ತವೆ. ಒಂದಷ್ಟು ಮಾತುಕತೆ ನಂತರ ಸೀತಾಪುರ ಬಳಿ ಅವನು ಇಳಿಯುತ್ತಾನೆ. ಆಕೆ ಬೆಳಗಾವಿಗೆ ಹೋದಾಗ ಒಂದು ಘಟನೆ ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು. ಇಬ್ಬರು ಮತ್ತೆ ಒಂದಾಗ್ತಾರ? ಅವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತಾ? ಅಪ್ಪನಲ್ಲಿ ಅಮ್ಮನನ್ನೂ ಕಾಣುವ ಆಕೆ ಲೈಫಲ್ಲಿ ಏನೆಲ್ಲ ಆಗುತ್ತೆ ಅನ್ನೊದನ್ನು ರೋಚಕವಾಗಿ ತೋರಿಸಲಾಗಿದೆ. ಮುಂದೆ ಏನಾಗುತ್ತೆ ಎಂಬ ಕುತೂಹಲ ಇದ್ದರೆ ಸಿನಿಮಾ ನೋಡಿ.

ಯಾರು ಹೇಗೆ?

ಇಲ್ಲಿ ಐಶ್ವರ್ಯ ಮುದ್ದಾಗಿ ಕಾಣಿಸಿಕೊಂಡಿರುವುದರ ಜೊತೆಗೆ ಅಷ್ಟೇ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ಭಾವುಕ ಸನ್ನಿವೇಶದಲ್ಲಿ ನೋಡುಗರನ್ನೂ ಭಾವುಕತೆಗೆ ದೂಡುತ್ತಾರೆ. ಡ್ಯಾನ್ಸ್, ಬಾಡಿ ಲಾಂಗ್ವೇಜಲ್ಲಿ ಇಷ್ಟ ಆಗ್ತಾರೆ.

ನಿರಂಜನ್ ಗುರುತಿಸಿಕೊಳ್ಳೋಕೆ ಅರ್ಜುನ್ ಸರ್ಜಾ ನಿರ್ದೇಶನವೇ ಬೇಕಾಯ್ತು. ಇಲ್ಲಿ ಹಿಂದಿನ ಸಿನಿಮಾಗಿಂತಲೂ ಮಾಗಿದ್ದಾರೆ. ನಟನೆ, ಫೈಟು, ಡ್ಯಾನ್ಸ್ ನಲ್ಲಿ ಸೈ ಅನಿಸುತ್ತಾರೆ. ಸತ್ಯರಾಜ್ ಅಪ್ಪನಾಗಿ ಗಮನ ಸೆಳೆದರೆ, ಪ್ರಕಾಶ್ ರೈ ತಾತನಾಗಿ ಚಪ್ಪಾಳೆ ಗಿಟ್ಟಿಸುತ್ತಾರೆ. ಅರ್ಜುನ್ ಸರ್ಜಾ ಪಾತ್ರವೊಂದರ ಮೂಲಕ ಎಂಟ್ರಿಕೊಟ್ಟು ಶಿಳ್ಳೆ ತಗೋತ್ತಾರೆ. ಧ್ರುವ ಸರ್ಜಾ ಕೂಡ ಫೈಟ್ ಒಂದರಲ್ಲಿ ಜೈ ಭಜರಂಗಬಲಿ ಅಂತಾರೆ. ಉಳಿದಂತೆ ಬರುವ ಪಾತ್ರದಾರಿಗಳೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿವೆ. ಬಾಲಮುರುಗನ್ ಕ್ಯಾಮರಾ ಕೈಚಳಕದಲ್ಲಿ ಸೀತಾಳ ವಂಡರ್ ಫುಲ್ ಜರ್ನಿ ಇದೆ. ಅನೂಪ್ ರೂಬಿನ್ಸ್ ಸಂಗೀತದಲ್ಲಿ ಹಾಡು, ಹಿನ್ನೆಲೆ ಸಂಗೀತ ಪರವಾಗಿಲ್ಲ.

ಕೊನೆದಾಗಿ ಈ ಸಿನಿಮಾ ಬಗ್ಗೆ ಹೇಳುವುದಾದರೆ, ಇಲ್ಲಿ
ಮನುಷ್ಯತ್ವದ ಪಾಠವಿದೆ. ಪ್ರಾಣಿಗಳ ಮೇಕಿನ ಪ್ರೀತಿ, ಕಾಳಜಿ ಇದೆ. ಮನೆ ಅಂದ್ರೆ ಗೋಡೆಗಳಲ್ಲ ಸಂಬಂಧಗಳು ಎಂಬ ವ್ಯಾಖ್ಯಾನವಿದೆ.

Related Posts

error: Content is protected !!