ಅಕ್ಟೋಬರ್ 3ಕ್ಕೆ ಭೈರಾದೇವಿ ಅವತಾರ: ನಿರೀಕ್ಷೆ ಹುಟ್ಟಿಸಿದ ರಾಧಿಕಾ ಕುಮಾರ ಸ್ವಾಮಿ ಚಿತ್ರ

ರಾಧಿಕಾ ಕುಮಾರ ಸ್ವಾಮಿ ಅಭಿನಯದ ಭೈರಾದೇವಿ ಕುತೂಹಲ ಮೂಡಿಸಿರುವ ಸಿನಿಮಾ. ಈಗಾಗಲೇ ಟ್ರೇಲರ್ ಸಖತ್ ಸೌಂಡ್ ಮಾಡಿದೆ. ಚಿತ್ರ ಅಕ್ಟೋಬರ್ 3ಕ್ಕೆ ರಿಲೀಸ್ ಆಗಲಿದೆ.

ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗೂ ನಟಿಸಿರುವ ಬಹು ನಿರೀಕ್ಷಿತ “ಭೈರಾದೇವಿ” ಸಿನಿಮಾ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್ ಬಿಡುಗಡೆ ಆಗಿದ್ದು ಎಲ್ಲೆಡೆ ಸದ್ದು ಮಾಡಿದೆ. ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ನಿರ್ದೇಶಕ ಶ್ರೀಜೈ, ನೃತ್ಯ ನಿರ್ದೇಶಕ ಮೋಹನ್, ಸಹ ನಿರ್ಮಾಪಕರಾದ ರವಿರಾಜ್, ಯಾದವ್ ಮುಂತಾದವರು ಟ್ರೇಲರ್ ಹೊರಬಂದ ಘಳಿಗೆಗೆ ಸಾಕ್ಷಿಯಾದರು.

ಸಿನಿಮಾ ಕುರಿತು ರಾಧಿಕಾ ಕುಮಾರಸ್ವಾಮಿ ಹೇಳಿದ್ದಿಷ್ಟು. ನಿರ್ದೇಶಕ ಶ್ರೀಜೈ ನಮ್ಮ ಮನೆಗೆ ಬಂದು ಕಥೆ ಹೇಳಿದರು‌. ಕಥೆ ಇಷ್ಟಾವಾಗಿ, ಈ ಚಿತ್ರ ನಿರ್ಮಾಣಕ್ಕೆ ಹಾಗೂ ನಟಿಸಲು ಒಪ್ಪಿಕೊಂಡೆ. ಈ ಚಿತ್ರ ಆರಂಭವಾದಗಿನಿಂದ ಬಿಡುಗಡೆಯವರೆಗೂ ಸಾಕಷ್ಟು ಅಡೆತಡೆಗಳಾಗಿದೆ‌. ಹಾಗಾಗಿ ನಾನು ಚಿತ್ರದ ಬಿಡುಗಡೆ ಯೋಚನೆ ಮಾಡಿರಲಿಲ್ಲ‌. ಕಳೆದ ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸಿಕ್ಕ ಗಂಡ ಹೆಂಡತಿ ಹೇಳಿದ ಮಾತೊಂದರ ಸ್ಪೂರ್ತಿಯಿಂದ ಚಿತ್ರವನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡೋಣ ಎಂದು ನನ್ನ ಅಣ್ಣನಿಗೆ ಹೇಳಿದೆ.

ಈ ಸಂದರ್ಭದಲ್ಲಿ ಒಂದು ಮಾತು ಹೇಳುತ್ತೇನೆ. “ಭೈರಾದೇವಿ” ಚಿತ್ರ ಪ್ರೇಕ್ಷಕರಿಗೆ ಇಷ್ಟ ಆದರೆ ಇನ್ನೊಂದು ಸಿನಿಮಾ ಮಾಡುತ್ತೀನಿ. ಇಷ್ಟ ಆಗಲಿಲ್ಲ ಎಂದರೆ ಚಿತ್ರರಂಗದಿಂದ ದೂರ ಆಗಿಬಿಡುತ್ತೀನಿ. ಇದು ದೊಡ್ಡ ಯಶಸ್ಸಾಗುತ್ತದೆ ಎಂಬ ನಂಬಿಕೆ ನನಗಿದೆ. ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದು. ಈ ಚಿತ್ರದ ಸಂಪೂರ್ಣ ಕ್ರೆಡಿಟ್‍ ನಿರ್ದೇಶಕರಿಗೆ ಸಲ್ಲಬೇಕು’ ಎಂದರು.

ನಾನು ಈ ಚಿತ್ರದಲ್ಲಿ ಪೊಲೀಸ್‍ ಅಧಿಕಾರಿ. ಅರವಿಂದ್ ನನ್ನ ಪಾತ್ರದ ಹೆಸರು. ಯಾವುದೇ ತರಹದ ರೌಡಿಗಳನ್ನು ಸದ್ದೆ ಬಡೆಯುವ ಖಡಕ್ ಪೊಲೀಸ್ ಆಫೀಸರ್ ನಾನು. ಆದರೆ, ಈ ಚಿತ್ರದಲ್ಲಿ ನನ್ನಗಿರುವ ವೈರಿ ಈ ರಾಜ್ಯದವರಲ್ಲ, ಈ ದೇಶದವರಲ್ಲ, ಬದಲಿಗೆ ಈ ಲೋಕದಲ್ಲಿರುವವರೇ ಅಲ್ಲ. ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು. ಇನ್ನು ಈ ಚಿತ್ರದ ಟ್ರೇಲರ್ ನೋಡಿದಾಗ, ನನಗೆ “ಆಪ್ತಮಿತ್ರ” ಚಿತ್ರ ನೆನಪಾಯಿತು. ರಾಧಿಕಾ ಕುಮಾರಸ್ವಾಮಿ ನಿರ್ಮಾಪಕಿ ಹಾಗೂ ನಾಯಕಿಯಾಗಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಳಿ ಪಾತ್ರದಲ್ಲಂತೂ ಅವರ ಅಭಿನಯ ಮನೋಜ್ಞ. ಅವರು ಆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಗ ಅವರೊಂದಿಗೆ ಮಾತನಾಡಲಿಕ್ಕೆ ಭಯವಾಗುತ್ತಿತ್ತು ಎಂದರು ನಟ ರಮೇಶ್ ಅರವಿಂದ್.

ಈ ಚಿತ್ರ ಇಷ್ಟು ಅದ್ದೂರಿಯಾಗಿ ಬರಲು ಕಾರಣ ನಮ್ಮ‌ ನಿರ್ಮಾಪಕರು‌ ಮೊದಲು ಅವರಿಗೆ ಧನ್ಯವಾದ ಹೇಳುತ್ತೇನೆ. ಇನ್ನು, ಕಲಾವಿದರಿಗೆ ನಾನು ಬಹಳ ತೊಂದರೆ ಕೊಟ್ಟಿದ್ದೇನೆ. ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ರವಿಶಂಕರ್, ರಂಗಾಯಣ ರಘು ಹೀಗೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಂತ್ರಜ್ಞರ ಕಾರ್ಯವೈಖರಿಯೂ‌ ಅದ್ಭುತವಾಗಿದೆ ಎಂದು ನಿರ್ದೇಶಕ ಶ್ರೀಜೈ ತಿಳಿಸಿದರು.

“ಹೃದಯ ಹೃದಯ” ಚಿತ್ರ ತೆರೆಕಂಡು ಇಪ್ಪತ್ತೈದು ವರ್ಷಗಳಾಗಿದೆ. ನಾನು ಈಗ ನನ್ನ‌ ಸಿನಿ ಜರ್ನಿಯ ರಜತ ಮಹೋತ್ಸವ ಆಚರಿಸುತ್ತಿದ್ದೇನೆ. ರಮೇಶ್ ಅವರ ಜೊತೆ ಮೊದಲ ಚಿತ್ರದಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರದಲ್ಲೂ ಅವರ ಜೊತೆ ನಟಿಸಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಶ್ರೀಜೈ ಅವರ ಕಥೆಯೂ ಬಹಳ ಚೆನ್ನಾಗಿದೆ ಎಂದರು ಅನು ಪ್ರಭಾಕರ್.

Related Posts

error: Content is protected !!