ಚಿತ್ರ ವಿಮರ್ಶೆ: ಅರುಣನ ಪ್ರೇಮ ಅಮರ!

ರೇಟಿಂಗ್: 3/5

ನಿರ್ದೇಶನ: ಪ್ರವೀಣ್ ಕುಮಾರ್ ಜಿ.
ನಿರ್ಮಾಣ: ಒಲವು ಸಿನಿಮಾ
ತಾರಾಗಣ: ಹರಿ‌ಶರ್ವಾ, ದೀಪಿಕಾ ಆರಾಧ್ಯ, ಧರ್ಮಣ್ಣ ಕಡೂರು ,ರಾಜ್ ಬಲವಾಡಿ ಇತರರು.

ಮಾಮ ಇನ್ನೊಂದ್ ಜೋಡಿ ಓಡಿಸಿದ್ರೆ, ಇಪ್ಪತೈದು ಆಗ್ತಾವೆ. ಆಮೇಲೆ ಪಾರ್ಟಿ ಮಾಡುಮ..’ ಈ ಡೈಲಾಗ್ ಬರುವ ಹೊತ್ತಿಗೆ , ಆ ಊರಿನ‌ ಪ್ರೇಮಿಗಳನ್ನು ರಾತ್ರೋ ರಾತ್ರಿ ಹೀರೋ‌ ಮತ್ತು ಆತನ ಗೆಳೆಯರೆಲ್ಲ ಊರಿಂದ ಕಳಿಸ್ತಾರೆ. ಅಲ್ಲಿಂದ ಶುರುವಾಗುವ ಕಥೆ ಕ್ಲೈಮ್ಯಾಕ್ಸ್ ವರೆಗು ಸುಮ್ಮನೆ ನೋಡಿಸಿಕೊಂಡು‌ ಹೋಗುತ್ತೆ.

ಇದು ಬಹುತೇಕ ಹೊಸಬರ ಚಿತ್ರ. ಹಾಗಾಗಿ ಒಂದಷ್ಟು‌ ಹೊಸತನವೂ ಇದೆ. ವಿಶೇಷ ಅಂದರೆ ಇಲ್ಲಿ ಯಾವುದೇ ಹೀರೋಯಿಸಂ ಇಲ್ಲ, ಕಥೆಯೇ ಹೀರೋ. ವಿನಾಕಾರಣ ಬಿಲ್ಡಪ್ಸ್ ಇಲ್ಲ. ಅನಗತ್ಯ ದೃಶ್ಯಗಳಿಲ್ಲ. ಉತ್ತರ ಕರ್ನಾಟಕ ಭಾಷೆಯ ಸೊಗಡು ಸಿನಿಮಾದ ವೇಗ ಹಚ್ಚಿಸಿದೆ.
ಒಂದೇ ಮಾತಲ್ಲಿ ಹೇಳುವುದಾದರೆ ಇದು ನಮ್ಮ ನಡುವಿನ ಕಥೆಯ ಚಿತ್ರಣ. ಗ್ರಾಮೀಣ್ಯ ಭಾಷೆಯ ಸಿನಿಮಾ ನೋಡುಗರಿಗೆ ಆಪ್ತತೆ ಎನಿಸುತ್ತೆ.

ಸಿನಿಮಾ ನೋಡುಗರಿಗೆ ಅವರ ಶಾಲಾ ದಿನಗಳು ನೆನಪಾಗುತ್ತವೆ. ಅವರ ಹಳೆಯ ಲವ್ವರ್ ಹಾಗೊಮ್ಮೆ ಕಣ್ಮುಂದೆ ಹಾದು ಹೋಗುತ್ತಾಳೆ.
ಬಹುತೇಕ ಹೊಸ ಪ್ರತಿಭೆಗಳ ಅನಾವರಣ ಈ ಸಿನಿಮಾ ಮೂಲಕ ಆಗಿದೆ.

ಮೊದಲರ್ಧ ಜಾಲಿಯಾಗಿ ಸಾಗುವ ಸಿನಿಮಾ , ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತೆ. ಭಾವುಕತೆ ಹೆಚ್ಚಿಸುತ್ತೆ. ಎದೆ ಭಾರವಾಗಿಸುತ್ತೆ. ಒಟ್ಟಾರೆ ಭಾವನೆಗಳು ಗರಿಗೆದರಿ ಮಜವೆನಿಸೋ ನೆನಪುಗಳನ್ನು ಮರುಕಳಿಸುವ ಸಿನಿಮಾ ಎನಿಸುತ್ತೆ.

ಕಥೆ ತೀರ ಹೊಸದಲ್ಲ. ಹಲವು ಸಿನಿಮಾಗಳಲ್ಲಿ ಈ ರೀತಿಯ ಎಳೆ ಬಂದಿದೆಯಾದರೂ, ಇಲ್ಲಿ ಚಿತ್ರಕಥೆಯಲ್ಲಿ ಚುರುಕುತನವಿದೆ. ಬಿಗಿ ಹಿಡಿತವಿದೆ. ಕೆಲವು ಕಡೆ ಮಾತುಗಳು, ದೃಶ್ಯಗಳು ಬೇಕಿರಲಿಲ್ಲ ಅನಿಸಿದರೂ ಮುಂದೇನಾಗುತ್ತೆ ಅನ್ನೋ ಕುತೂಹಲ ನೋಡುವಂತೆ ಮಾಡುತ್ತೆ.

ಸಿನಿಮಾದಲ್ಲಿ ಎಲ್ಲಾ ಪಾತ್ರಕ್ಕೂ ಆದ್ಯತೆ ನೀಡಲಾಗಿದೆ. ತಮಾಷೆಯ ಸಿನಿಮಾ ಅನಿಸಿದರೂ ನೋಡ ನೋಡುತ್ತಲೇ ಗಂಭೀರತೆ ಪಡೆದುಕೊಳ್ಳುತ್ತೆ.

ಸಿನಿಮಾದ ವೇಗಕ್ಕೆ ಡೈಲಾಗ್ ಗಳು ಸಾಥ್ ಕೊಟ್ಟರೆ, ಹಿನ್ನೆಲೆ‌ ಸಂಗೀತ ಕೂಡ ಮುದ ಕೊಡುತ್ತೆ. ಹೊಸಬರಲ್ಲಿ ಹೊಸತು ಇದೆ ಅನ್ನೋದಕ್ಕೆ ಈ ಸಿನಿಮಾದ ಕಂಟೆಂಟ್ ಮತ್ತು ಸಿಂಪಲ್ ಮೇಕಿಂಗ್ ಕಾರಣವಾಗುತ್ತೆ. ಒಂದು‌ ಸಿಂಪಲ್ ಕಥೆ ಹೀಗೂ ಅನಾವರಣಗೊಳ್ಳುತ್ತೆ ಅನ್ನೋದಕ್ಕೆ ಇದು ಸಾಕ್ಷಿ. ಹೊಸಬರ ಪ್ರಯತ್ನ ಇಲ್ಲಿ ಸಾರ್ಥಕ ಎನಿಸುತ್ತೆ.

ಇಲ್ಲೂ ಕೆಲವು ದೋಷಗಳಿವೆ. ಅವನ್ನು ಬದಿಗೊತ್ತಿ ಸಿನಿಮಾ ನೋಡಿದರೆ ರುಚಿಸುತ್ತೆ. ಹೊಡಿ, ಬಡಿ ಗನ್ನು‌ ,ಮಚ್ಚು ಲಾಂಗ್ ಗಳ ಮಧ್ಯೆ ಒಂದು ನೀಟ್ ಸಿನಿಮಾ ಕಟ್ಟಿಕೊಡಲಾಗಿದೆ. ಅದೇ ಸಿನಿಮಾದ ಪ್ಲಸ್.

ಇಲ್ಲಿ ಹೀರೋಗೆ ಯಾವುದೇ ಬಿಲ್ಡಪ್ ಇಲ್ಲ. ನಮ್ಮ ನಡುವಿನ ಹುಡುಗನ ಕಥೆ ಅನಿಸುತ್ತೆ. ಪ್ರತಿ ಪಾತ್ರಗಳೂ ನಮ್ಮ ಪರಿಸರದ ಪಾತ್ರಗಳು ಅನಿಸುತ್ತವೆ ಅಷ್ಟರ ಮಟ್ಟಿಗೆ ನಿರ್ದೇಶಕರ ಜಾಣತನ ಪ್ರದರ್ಶನವಾಗಿದೆ.

ಕಥೆ ಏನು?

ಅರುಣ ತನ್ನ ಶಾಲಾ ದಿನಗಳಲ್ಲಿ ಕಾವ್ಯ ಎನ್ನುವ ಒಬ್ಬ ಹುಡುಗಿಯನ್ನು ಇಷ್ಟಪಟ್ಟಿರುತ್ತಾನೆ. ಕೊನೆಗೆ ಅವನ ತಂದೆ ವರ್ಗಾವಣೆಯಾದ ಬಳಿಕ ಆ ಊರು ತೊರೆದು ಹೋಗುತ್ತಾನೆ. ಮದ್ವೆ‌ ವಯಸ್ಸಿಗೆ ಬಂದಾಗ ಮನೆಯವರು ತೋರಿಸಿದ ಯಾವ ಹುಡುಗಿಯನ್ನು ಒಪ್ಪಲ್ಲ. ಕಾರಣ ಶಾಲಾ ದಿನದಲ್ಲಿ ಇಷ್ಟ ಪಟ್ಟ ಹುಡುಗಿಯೇ ಬೇಕು ಅನ್ನೋದು. ಹಾಗಾದರೆ ಆ ಹುಡುಗಿ ಸಿಕ್ತಾಳ, ಮದ್ವೆ ಅಗ್ತಾನಾ ? ಈ ಮಧ್ಯೆ ಒಂದಷ್ಟು ಟ್ವಿಸ್ಟು. ಈ ಕುತೂಹಲ ಇದ್ದರೆ ಮಿಸ್ ಮಾಡದೆ ಒಮ್ಮೆ ಸಿನಿಮಾ ನೋಡಬಹುದು.
ಇಲ್ಲಿ ಸಾಕಷ್ಟು ತಿರುವುಗಳಿವೆ ಅವೇ ಸಿನಿಮಾದ ಮತ್ತೊಂದು ಪ್ಲಸ್ ಎನ್ನಬಹುದು.

ಯಾರು ಹೇಗೆ?

ಸಿನಿಮಾದಲ್ಲಿ ಹರಿಶರ್ವ ಗಮನ ಸೆಳೆದಿದ್ದಾರೆ. ಅಮಾಯಕ ಪಾತ್ರ ಎನಿಸಿದರೂ ತಮ್ಮೊಳಗಿನ ಭಾವುಕತೆ ಹೊರಹಾಕುವ ಮೂಲಕ ಎಲ್ಲರಿಗೂ ಇಷ್ಟ ಆಗುತ್ತಾರೆ. ಹೊಡೆದಾಟವಿರದ ಹಾರಾಟವಿರದ ಕಥೆಗೆ ಸೈ ಅಂದಿದ್ದಾರೆ. ನೀಟ್ ಅಭಿನಯದ ಮೂಲಕ ಹರಿಶರ್ವ ಇಷ್ಟ ಆಗ್ತಾರೆ. ಹರಿಶರ್ವ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸರಳವೆನಿಸಿದರೂ ಆಪ್ತ ಪಾತ್ರವಾಗಿ ಹೊರಹೊಮ್ಮಿದ್ದಾರೆ. ಕನ್ನಡದಲ್ಲಿ ಒಳ್ಳೆ ಕಥೆ ಮೂಲಕ ಬಂದರೆ ಅವರು ನೆಲೆ ಊರಬಹುದು.

ದೀಪಿಕಾ ಆರಾಧ್ಯ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಧರ್ಮಣ್ಣ ಕಡೂರು ಸಿನಿಮಾದ ಹೈಲೆಟ್. ಗೆಳೆಯನ ಪಾತ್ರದಲ್ಲಿ ಜೀವಿಸಿದ್ದಾರೆ. ಅವರಿಗೂ ಇಲ್ಲೊಂದು ಹಾಡಿದೆ, ಹುಡುಗಿಯೂ ಇದ್ದಾಳೆ. ನೈಜ ಅಭಿನಯ ಖುಷಿಕೊಡುತ್ತೆ. ರಾಜ್ ಬಲವಾಡಿ ತಂದೆಯಾಗಿ ಇಷ್ಟವಾಗುತ್ತಾರೆ. ಉಳಿದ ಹೊಸ ಪಾತ್ರಗಳು ಸಹಜವಾಗಿವೆ. ಇಲ್ಲಿ ವಿಶೇಷವಾಗಿ ಮಂಜಮ್ಮ ಜೋಗತಿ ಕಾಣಿಸಿಕೊಂಡಿದ್ದಾರೆ.

ನನ್ನ ನೆರಳಿಂದು ನನ್ನೇ ಕೇಳುತ್ತಿದೆ ನೀನು ಯಾರೆಂದು ಮತ್ತು ಬಾ ಮಗ ಬಾ ಮಗ ಹಾಡು ಗುನುಗುವಂತಿವೆ. ಕ್ಯಾಮರ ಕೈಚಳಕದಲ್ಲಿ ಇನ್ನಷ್ಟು ಹೊಳಪು ಬೇಕಿತ್ತು.

Related Posts

error: Content is protected !!