ಚಿತ್ರ: ವೀರ ಚಂದ್ರಹಾಸ
ಪರಿಶ್ರಮ: ರವಿ ಬಸ್ರೂರು ಮತ್ತು ತಂಡ
ತಾರಾಗಣ: ಶಿಥಿಲ್ ಶೆಟ್ಟಿ ಐರ್ ಬೈಲ್, ಪ್ರಸನ್ನ ಶೆಟ್ಟಿಗಾರ್, ಮಂದಾರ್ತಿ, ನಾಗಶ್ರೀ, ಉದಯ್ ಕಡಬಾಳ್, ಶಿವರಾಜಕುಮಾರ್, ನವೀನ್ ಶೆಟ್ಟಿ ಇತರರು.
ಯಕ್ಷಗಾನದ ವೇಷಭೂಷಣವೇ ಚಂದ. ಅದರಲ್ಲೂ ಕರಾವಳಿ ಭಾಗದಲ್ಲಿ ಮಾತ್ರ ಕಂಡುಬರುವ ಯಕ್ಷಗಾನದ ಕಲೆ ಎಲ್ಲೆಡೆಯೂ ವಿಸ್ತಾರವಾಗಬೇಕು ಎಂಬ ಉದ್ದೇಶದಿಂದ ರವಿ ಬಸ್ರೂರು ಮತ್ತು ತಂಡ ಒಳ್ಳೆಯ ಕಥೆಯನ್ನು ತೆರೆಮೇಲೆ ಅನಾವರಣಗೊಳಿಸಿದೆ.
ಇಂತಹ ಅಪರೂಪದ ಪ್ರಯತ್ನ ಮೆಚ್ಚಲೇಬೇಕು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಬರುವ ಹಾಡಲ್ಲಿ ಯಕ್ಷಗಾನದ ಕುಣಿತ ಬಳಸಲಾಗುತ್ತಿತ್ತು. ಕರಾವಳಿ ಭಾಗದಲ್ಲಿ ನಿರಂತರವಾಗಿ ಯಕ್ಷಗಾನದ ಪ್ರಸಂಗಗಳು ನಡೆಯುತ್ತವೆ. ಆದರೆ ಮೊದಲ ಸಲ ತೆರೆಗೆ ಯಕ್ಷಗಾನ ಮೂಲಕ ಜೈಮಿನಿ ಭಾರತದ ಒಂದು ಭಾಗವಾದ ವೀರ ಚಂದ್ರಹಾಸ ಕಥೆಯನ್ನು ತರಲಾಗಿದೆ. ಯಕ್ಷಗಾನಕ್ಕೆ ಸಿನಿಮಾ ಸ್ಪರ್ಶ ನೀಡಿರುವುದು ಖುಷಿಯ ಸಂಗತಿ.

ಇಂತಹ ಪ್ರಯೋಗ ಅಪರೂಪ. ಇತಿಹಾಸದ ಕಥೆಯನ್ನು ತೆರೆಗೆ ತರುವುದು ಸುಲಭವಲ್ಲ. ರವಿ ಬಸ್ರೂರು ಮತ್ತು ತಂಡ ಆ ನಿಟ್ಟಿನಲ್ಲಿ ಒಳ್ಳೆಯ ಪ್ರಯತ್ನ ಮಾಡಿದೆ. ಇದು ನಿಜಕ್ಕೂ ದಾಖಲೆಯಾಗಿ ಉಳಿಯಬಲ್ಲ ಚಿತ್ರ.
ಇದು ಪೌರಾಣಿಕ ಕಥೆ ಇರುವಂತಹ ರೂಪಕ. ಅದನ್ನು ಸಿನಿಮಾಗೆ ಅಳವಡಿಸಿರುವ ರವಿ ಬಸ್ರೂರು ಅವರ ಜಾಣತನ ಮತ್ತು ಪರಿಶ್ರಮ ಮೆಚ್ಚಬೇಕು.
ಅಂದಹಾಗೆ ಕಥೆ ಬಗ್ಗೆ ಹೇಳುವುದಾದರೆ, ಅನಾಥ ಬಾಲಕನೊಬ್ಬ ಹೇಗೆ ವೀರ ಚಂದ್ರಹಾಸನಾಗಿ ಬೆಳೆಯುತ್ತಾನೆ. ನಂತರ ಅವನ ಶೌರ್ಯದ ಕಥೆ ಹೇಗೆಲ್ಲಾ ಇರುತ್ತೆ ಅನ್ನೋದೇ ಕಥೆ. ಅದನ್ನು ಅಷ್ಟೇ ರೋಚಕವಾಗಿ ಚಿತ್ರಿಸಲಾಗಿದೆ.
ಒಂದು ಕಥೆಗೆ ಹೊಸ ರೂಪ ಕೊಟ್ಟು, ತದೇಕಚಿತ್ತದಿಂದ ನೋಡುವಂತೆ ಮಾಡಿರುವ ರವಿ ಬಸ್ರೂರು ತಂಡದ ಕೆಲಸ ಒಪ್ಪಬೇಕು.

ಇಲ್ಲಿ ಹೆಚ್ಚಾಗಿ ವಿಎಫ್ ಎಕ್ಸ್ , ಗ್ರಾಫಿಕ್ಸ್ ಬಳಸಲಾಗಿದೆ. ಅದೇ ಸಿನಿಮಾದ ಅಂದವನ್ನು ಹೆಚ್ಚಿಸಿದೆ. ಕಥೆಯಲ್ಲಿ ಬರುವ ರಾಜರ ಸಂಸ್ಥಾನಗಳನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಇದೊಂದು ರೀತಿ ಹೊಸ ಪ್ರಪಂಚಕ್ಕೆ ಕರೆದೊಯ್ಯುವ ಪ್ರಯತ್ನ ಮಾಡಲಾಗಿದೆ. ಬಹುತೇಕ ಗ್ರಾಫಿಕ್ಸ್ ಜೊತೆ ಅಲ್ಲಲ್ಲಿ ಸೆಟ್ ಹಾಕಿ ಹಿಸ ಕಲ್ಪನೆಯ ಲೋಕವನ್ನೇ ಸೃಷ್ಟಿಸಲಾಗಿದೆ.
ಇನ್ನು ಸಿನಿಮಾದ ಮೊದಲರ್ಧ ನಿಧಾನವಾಗಿ ಸಾಗುತ್ತೆ.ದ್ವಿತಿಯಾರ್ಧ ಬೇರೆ ಆಯಾಮ ಪಡೆದುಕೊಳ್ಳುತ್ತೆ. ಸಿನಿಮಾದ ವೇಗಕ್ಕೆ ಚಿತ್ರಕಥೆ ಮುಖ್ಯವೆನಿಸಿದೆ. ಇನ್ನು ಸಂಗೀತ ಸಿನಿಮಾದ ಜೀವಾಳ. ಅದೇ ಈ ಸಿನಿಮಾದ ಶಕ್ತಿ ಎನ್ನಬಹುದು. ಇನ್ನು ನಿರೂಪಣೆ ಕೂಡ ನೋಡಿಸಿಕೊಂಡು ಹೋಗುವಂತೆ ಮಾಡುವ ಮೂಲಕ ಸುಂದರ ಇತಿಹಾಸವನ್ನು ಕಟ್ಟಿಕೊಡಲಾಗಿದೆ.
ಇಡೀ ಸಿನಿಮಾ ಯಕ್ಷಗಾನದ ವೇಷಭೂಷಣದಲ್ಲಿ ಸೊಗಸಾಗಿ ಮೂಡಿಬಂದಿದೆ. ಅದ್ಭುತ ಕಲಾವಿದರ ದನಿಯಲ್ಲಿ ಬರುವ ಪದ್ಯಗಳು ಸಿನಿಮಾದ ರೋಚಕತೆಗೆ ಸಾಕ್ಷಿ. ಚಿತ್ರಕಥೆಗೂ ಆ ದನಿಯ ಹಾಡುಗಳು ವೇಗ ಹೆಚ್ಚಿಸಿವೆ.
ಮುಖ್ಯವಾಗಿ ಕಾಳಿಂಗ ನಾವಡ ಅವರ ದನಿ ಕೂಡ ಪದ್ಯವೊಂದರಲ್ಲಿದೆ. ಅದನ್ನೂ ಇಲ್ಲಿ ಬಳಸುವ ಮೂಲಕ ಗೌರವಿಸಲಾಗಿದೆ. ಯಕ್ಷಗಾನ ಅಂದರೆ ಹೆಚ್ಚು ಕುಣಿತ. ಅದಕ್ಕೆ ಇಲ್ಲಿ ಅಷ್ಟಾಗಿ ಜಾಗವಿಲ್ಲ. ಕಥೆ ಹೆಚ್ಚು ಕುತೂಹಲ ಕೆರಳಿಸುತ್ತಾ ಹೋಗುತ್ತೆ.
ಯಕ್ಷಗಾನದ ಕುಣಿತ ಇಲ್ಲವೆಂಬ ಸಣ್ಣ ಬೇಸರ ಬಿಟ್ಟರೆ ಬೇರೆ ಯಾವ ದೋಷವೂ ಇಲ್ಲಿಲ್ಲ.

ಚಂದ್ರಹಾಸ ಮತ್ತು ವಿಷಯೆ ಅವರ ಮದುವೆ ಪ್ರಸಂಗ ಕೊಂಚ ಬೋರು ಎನಿಸುತ್ತೆ. ಉಳಿದಂತೆ ಸಿನಿಮಾ ಕಥೆ ಹೊಸತನ್ನೇ ಸೃಷ್ಟಿಸಿದೆ.
ಮುಖ್ಯವಾಗಿ ಇಲ್ಲಿ ಸಂಭಾಷಣೆ ಹೈಲೆಟ್. ರವೀಂದ್ರ ದೇವಾಡಿಗ ಹಾಗು ಶ್ರೀಧರ ಅವರ ಹಾಸ್ಯ ಮಾತುಗಳ ಬರಹ ನಗೆ ಬುಗ್ಗೆ ಎಬ್ಬಿಸುತ್ತವೆ.
ಕಿರಣ್ ಕುಮಾರ ಅವರ ಕ್ಯಾಮರಾ ಕೈಚಳಕ ಕೆಲಸ ಮಾಡಿದೆ. ಕಲಾ ನಿರ್ದೇಶಕ ಪ್ರಭು ಬಡಿಗೇರ್ ಕೆಲಸ ಗಮನ ಸೆಳೆಯುತ್ತೆ.
ಇನ್ನು ಇಲ್ಲಿ ಮುಖ್ಯವಾಗಿ ಗಮನ ಸೆಳೆದಿದ್ದು ಏನೆಂದರೆ ಎ ಐ ತಂತ್ರಜ್ಞಾನ. ಆ ಮೂಲಕ ಯಕ್ಷಗಾನ ವೇಷದಲ್ಲಿ ಪುನೀತ್ ರಾಜಕುಮಾರ್ ದೃಶ್ಯ ಸೊಗಸಾಗಿದೆ. ಸಿಂಗನಲ್ಲೂರು ಸಂಸ್ಥಾನದ ರಾಜನಾಗಿ ರಾಜಕುಮಾರ್ ಅವರನ್ನು ಸೃಷ್ಟಿಸಿರುವುದು ವಿಶೇಷ ಎನಿಸುತ್ತೆ.
ಸಿಂಗನಲ್ಲೂರು ಸಂಸ್ಥಾನದ ನಾಡ ಚಕ್ರವರ್ತಿ ಶಿವಪುಟ್ಟಸ್ವಾಮಿ ಪಾತ್ರದಲ್ಲಿ ಶಿವರಾಜಕುಮಾರ್ ಕೂಡ ಇಷ್ಟವಾಗುತ್ತಾರೆ. ದುಷ್ಟಬುದ್ಧಿ ಪಾತ್ರದ ಮೂಲಕ ಪ್ರಸನ್ನ ಶೆಟ್ಟಿಗಾರ್ ಗಮನ ಸೆಳೆಯುತ್ತಾರೆ. ಚಂದ್ರಹಾಸನಾಗಿ ಶಿಥಿಲ್ ಶೆಟ್ಟಿ ಚಪ್ಪಾಳೆ ಗಿಟ್ಟಿಸುತ್ತಾರೆ. ಉಳಿದಂತೆ ಇಲ್ಲಿನ ಕ್ಲೈಮ್ಯಾಕ್ಸ್ ನಲ್ಲಿ ಸಮುದ್ರ ಸೇನನಾಗಿ ಚಂದನ್ ಶೆಟ್ಟಿ, ಗರುಡಾಕ್ಷನಾಗಿ ಗರುಡರಾಮ್ ಪಾತ್ರಗಳೂ ಬರುತ್ತವೆ. ಈ ಕಥೆ ಮುಂದಿನ ಭಾಗಕ್ಕೂ ವಿಸ್ತರಿಸಲಾಗಿದೆ.
ಕೊನೆ ಮಾತು: ಇಂತಹ ಪ್ರಯೋಗದ ಸಿನಿಮಾಗೆ ಮೆಚ್ಚುಗೆ ಕೊಡಬೇಕು. ದಾಖಲೆಯಾಗಿ ಉಳಿಯುವಂತಹ ಪ್ರಯತ್ನ ಹೆಚ್ಚಾಗಬೇಕೆಂಬುದು ಸಿನಿಮಾ ನೋಡಿ ಹೊರಬಂದವರ ಮಾತು.