ಕುಂಟೆಬಿಲ್ಲೆ ಆಡೋಕೆ ಬಂದವರು! ಹೊಸ ಚಿತ್ರಕ್ಕೆ ಚಾಲನೆ

ಈ ಮೊದಲು ದಕ್ಷ ಯಜ್ಞ, ತರ್ಲೆ ವಿಲೇಜ್, ಋತುಮತಿ ಚಿತ್ರ ನಿರ್ದೇಶನ ಮಾಡಿದ್ದ ಸಿದ್ದೇಗೌಡ ಜಿ.ಬಿ‌.ಎಸ್. ಅವರು ಕುಂಟೆಬಿಲ್ಲೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ಯುವ ನಟ ಯದು ಮೊದಲ ಬಾರಿಗೆ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ‌. ಹತ್ತಕ್ಕೂ ಹೆಚ್ಚು ಚಿತ್ರ ಮಾಡಿರುವ ಮೇಘ ಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.


ಪೋಷಕ ಪಾತ್ರಗಳಲ್ಲಿ ಕಿಶೋರ್, ಪವಿತ್ರ ಲೋಕೇಶ್, ಶಂಕರ್ ಅಶ್ವಥ್, ಚಂದ್ರಪ್ರಭ ಮೊದಲಾದವರು ನಟಿಸಲಿದ್ದಾರೆ.
ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ಕುಂಟೆಬಿಲ್ಲೆ‌. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆ ಎಂದು ನಿರ್ದೇಶಕ ಸಿದ್ದೇಗೌಡ ತಿಳಿಸಿದರು.

ನಿರ್ಮಾಪಕ ಎಸ್.ಬಿ. ಶಿವು ಮಾತನಾಡಿ, ಜೀವಿತ ಕ್ರಿಯೇಷನ್ ನಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಯದು ಹೊಸ ಪ್ರತಿಭೆ ಆಗಿದ್ದು ಅವರನ್ನೇ ನಾಯಕರನ್ನಾಗಿ ಮಾಡಿಕೊಂಡಿದ್ದೇವೆ ಎಂದರು.

ನಿರ್ಮಾಪಕ ಕುಮಾರ್ ಗೌಡ ಮಾತನಾಡಿ,
ನಿರ್ಮಾಣ ಕ್ಷೇತ್ರ ನನಗೆ ಹೊಸದು. 30 ವರ್ಷದ ಹಿಂದೆ ನಾನೊಬ್ಬ ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಹೋಗಿದ್ದವನು‌. ಆದರೆ ಅದು ಸಾಧ್ಯವಾಗಿರಲಿಲ್ಲ‌. ಈಗ ಅದನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ರಂಗಭೂಮಿ ಕಡೆಗೆ ಆಸಕ್ತಿ ಇತ್ತು .

ಇದೀಗ ವಿದ್ಯಾಭ್ಯಾಸ ಮುಗಿಸಿ ನಟನೆ ಕಡೆಗೆ ಬರುತ್ತಿದ್ದಾನೆ. ಈಗ ನಾನೇ ಮುಂದೆ ನಿಂತು ನಿರ್ದೇಶಕ ಸಿದ್ದೇಗೌಡ ಅವರ ಗರಡಿಗೆ ಬಿಟ್ಟಿದ್ದೇವೆ. ನನ್ನ ಮಗನಿಗೆ ಹೊಂದುವಂತ ಒಳ್ಳೆಯ ಕತೆ ಇದೆ. ಸಿನಿಮಾ ಚೆನ್ನಾಗಿ ಮೂಡಿಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು‌.

ಮೇಘಶ್ರೀ ಮಾತಿಗಿಳಿದು, ಟೈಟಲ್ ನಷ್ಟೇ ಸ್ಕ್ರಿಪ್ಟ್ ಕೂಡ ಚೆನ್ನಾಗಿದೆ. ಕನ್ನಡದಲ್ಲಿ ಈ ರೀತಿಯ ಸ್ಟೋರಿ ಕೇಳಿರಲಿಲ್ಲ. ಒಳ್ಳೆಯ ತಂಡ ಸಿಕ್ಕಿದ್ದು, ನಾನು ಹಳ್ಳಿಯೊಂದರ ಶ್ರೀಮಂತ ಕುಟುಂಬದ ಹುಡುಗಿಯ ಪಾತ್ರ ಮಾಡಲಿದ್ದೇನೆ ಎಂದರು.
ನಾಯಕ ಯದು ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ‌. ಆ ನಿಟ್ಟಿನಲ್ಲಿ ಪಾತ್ರ ಮಾಡುವೆ ಎಂದರು.


ಹಿರಿಯ ನಟ ಶಂಕರ್ ಅಶ್ವಥ್ ಮಾತನಾಡಿ, ಅಕ್ಷಯ ತೃತೀಯ ದಿನದಂದು ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ‌. ಅದೇ ರೀತಿ ಈ ಚಿತ್ರಕ್ಕೂ ಒಳ್ಳೆಯದಾಗಲಿ. ನನ್ನದು ನಾಯಕಿಯ ತಂದೆ ಪಾತ್ರ‌. ಒಂದು ಗ್ರಾಮೀಣ ಆಟ ಜೀವನದಲ್ಲಿ ಎಷ್ಟು ಮುಖ್ಯ ಆಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದಾರೆ‌. ವಿಭಿನ್ನ ಮತ್ತು ಕುತೂಹಲಕಾರಿ ಚಿತ್ರ ಇದಾಗಿರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಸಂಭಾಷಣೆ ಬರೆದಿರುವ ಮಧು ಮಾತನಾಡಿ ನಾನು ಪ್ರತಿ ಸಿನಿಮಾಗೆ ಬರೆಯುವಾಗಲೂ ಹೊಸದಾಗಿಯೇ ಬರೆಯುತ್ತೇನೆ. ಈ ಚಿತ್ರದ ಕಥೆ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಸಂಭಾಷಣೆ ಬರೆದಿದ್ದೇನೆ. ಹಳ್ಳಿಯ ನೈಜ ಘಟನೆಗಳು ಇಲ್ಲಿ ಇವೆ ಎಂದು ತಿಳಿಸಿದರು.

Related Posts

error: Content is protected !!