ಕಳೆದ ನಲವತ್ತು ವರ್ಷಗಳಿಂದ ಪೋಷಕ ಕಲಾವಿದರಾಗಿ ಪ್ರಸನ್ನಕುಮಾರ್(ಜಂಗ್ಲಿ ಪ್ರಸನ್ನ) ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ. ನೂರಾರು ಚಿತ್ರಗಳಲ್ಲಿ ನಟಿಸಿ ನಟನಾಗಿ ಜನಪ್ರಿಯರಾಗಿರುವ ಪ್ರಸನ್ನ ಕುಮಾರ್ “ರಣಹದ್ದು” ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.ಇವರೆ ಚಿತ್ರದ ನಿರ್ಮಾಪಕರು ಕೂಡ. ಪ್ರಸನ್ನಕುಮಾರ್ ಅವರ ಮಕ್ಕಳಾದ ಶಶಾಂಕ್ ಹಾಗೂ ಸೂರಜ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಒಬ್ಬ ಮಗ ನಾಯಕನಾಗಿ, ಮತ್ತೊಬ್ಬ ಮಗ ಖಳನಾಯಕನಾಗಿ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ.
![](https://cinilahari.in/wp-content/uploads/2024/05/IMG_20240510_120738-1024x580.jpg)
ಇತ್ತೀಚಿಗೆ ಈ ಚಿತ್ರದ ಹಾಡುಗಳು ಹಾಗು ಟೀಸರ್ ಸಿರಿಮ್ಯೂಸಿಕ್ ಮೂಲಕ ಬಿಡುಗಡೆಯಾಯಿತು. ಡಾ||ರಾಜಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಎ.ಚಿನ್ನೇಗೌಡ, ಎಸ್ ಎ ಗೋವಿಂದರಾಜು, ಎಸ್ ಎ ಶ್ರೀನಿವಾಸ್ ಅವರು ಟೀಸರ್ ಅನಾವರಣಗೊಳಿಸಿದರು. ಖ್ಯಾತ ನಟ ಶರಣ್ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.
![](https://cinilahari.in/wp-content/uploads/2024/05/IMG_20240510_120640-1024x529.jpg)
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ ಆರ್ ಕೆ ವಿಶ್ವನಾಥ್, ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಪ್ರಸನ್ನ ಕುಮಾರ್(ಜಂಗ್ಲಿ ಪ್ರಸನ್ನ) ಅವರ ಒಡನಾಟವನ್ನು ನೆನಪಿಸಿಕೊಂಡು ಚಿತ್ರಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
![](https://cinilahari.in/wp-content/uploads/2024/05/IMG_20240510_120651-1024x533.jpg)
ಮೊದಲು ಮಾತನಾಡಿದ ನಿರ್ಮಾಪಕ, ನಿರ್ದೇಶಕ ಪ್ರಸನ್ನಕುಮಾರ್, ಕಳೆದ ನಲವತ್ತು ವರ್ಷಗಳಿಂದ ಕನ್ನಡ ಚಿತ್ರರಂಗ ನನಗೆ ಅನ್ನ ಹಾಕುತ್ತಿದೆ. ಅದಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರ ಋಣಿ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ನನ್ನ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಆ ಸಮಯದಲ್ಲಿ ತುಂಬಾ ಯೋಚನೆ ಮಾಡುತ್ತಿದೆ. ಸ್ವಲ್ಪ ದಿನಗಳ ನಂತರ ಚಿತ್ರವೊಂದನ್ನು ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡಬೇಕೆಂದು ಆಸೆಯಾಯಿತು. ಆ ಆಸೆಯನ್ನು ಮಕ್ಕಳ ಬಳಿ ಹೇಳಿಕೊಂಡೆ. ನನ್ನ ಆಸೆಗೆ ಮಕ್ಕಳು ಆಸರೆಯಾದರು.
![](https://cinilahari.in/wp-content/uploads/2024/05/IMG_20240510_120724-1024x514.jpg)
ಈ ಚಿತ್ರದಲ್ಲಿ ನಟಿಸುವ ಮೂಲಕ ನನ್ನ ಇಬ್ಬರು ಮಕ್ಕಳು ಚಿತ್ರರಂಗ ಪ್ರವೇಶಿಸಿದ್ದಾರೆ. ಅನೇಕ ಜನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಣವಿಲ್ಲದ ಮನುಷ್ಯನನ್ನು ಸಮಾಜ ಹೇಗೆ ನೋಡುತ್ತದೆ ಎಂಬುದೆ ಚಿತ್ರದ ಕಥಾ ಸಾರಾಂಶ. ಅಷ್ಟೇ ಅಲ್ಲದೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತದಲ್ಲಿದೆ. ಇಂದಿನ ಸಮಾರಂಭಕ್ಕೆ ನಮ್ಮ ಆಹ್ವಾನವನ್ನು ಮನಿಸಿ ಬಂದಿರುವ ಎಲ್ಲಾ ಗಣ್ಯರಿಗೂ ತುಂಬು ಹೃದಯದ ಧನ್ಯವಾದ ಎಂದರು.
![](https://cinilahari.in/wp-content/uploads/2024/05/IMG_20240510_120702-963x1024.jpg)
ತಮ್ಮ ಪಾತ್ರದ ಬಗ್ಗೆ ಶಶಾಂಕ್, ಸೂರಜ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಾಲ್ಕು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಸಿಂಗರ್ ಶ್ರೀನಿವಾಸ್ ತಿಳಿಸಿದರು.